Saturday, February 27, 2010

ಖಾಸನೀಸರ ಕಥೆಗಳು


ಖಾಸನೀಸರ ಕಥೆಗಳು: ಸ್ವಾರಸ್ಯಕರ, ಕುತೂಹಲ ಮತ್ತು ಕೆಲವೊಂದು ಜೀವನ ಮೌಲ್ಯಗಳನ್ನು ತಿಳಿಸುವ ಅಪರೂಪದ ಕಥಾ ಗುಚ್ಛ. ಇಲ್ಲಿಯ ಐದು ಕಥೆಗಳು ಸರ್ವೆ ಸಾಮಾನ್ಯ ನೀಳ್ಗತೆಗಳೆ. ಪುಟಗಳ ಪರಿಮಿತಿಯಿಲ್ಲದೆ ಬೆಳೆದ ಈ ಕಥೆಗಳು ಎಲ್ಲೂ ಬೋರ್ ಹೊಡೆಸುವುದಿಲ್ಲ. ಬದಲಾಗಿ ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಇಲ್ಲಿಯ ‘ಅಪಘಾತ’ ಕಥೆಯ ರಾಮನಾಥ, ‘ಹೀಗೂ ಇರಬಹುದು’ ಕಥೆಯ ಲಕ್ಷ್ಮಣ, ‘ತಬ್ಬಲಿಗಳು’ ಕಥೆಯ ತಂದೆ, ತಾಯಿ, ತಮ್ಮ ಮತ್ತು ತಂಗಿ ಪಾತ್ರಗಳು, ‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯ ವಾಸು ಮತ್ತು ‘ಮೋನಾಲೀಸಾ’ ಕಥೆಯ ಪೆರ್ರೂಗಿ ಪಾತ್ರಗಳು ಕಥೆಗಳಿಗೆ ಜೀವಂತಿಕೆ ತುಂಬಿವೆ.

‘ಅಪಘಾತ’ ಕಥೆಯ ನಾಯಕ ಸಾವಿಗೆ ಅರ್ಥವಿಲ್ಲದ ಮುಂಬೈನ ಜೀವನದಲ್ಲಿ ಸ್ವಾಲಂಬಿಯಾಗಿ ಬದುಕುತ್ತಿರುವವನು ವಕೀಲ ರಾಮನಾಥ. ಒಮ್ಮೆ ತನ್ನ ಬಾಲ್ಯದ ನೆನಪುಗಳಲ್ಲಿ ಸೋತು ಹೋದ ನಿರ್ವೀಣ್ಯ ಮನೋಸ್ಥಿತಿಯಲ್ಲಿದ್ದಾಗಲೇ ಅತೀ ಶುಭ್ರ ಪಾರದರ್ಶಕ ಬಟ್ಟೆ ಧರಿಸಿದ್ದ ಯುವತಿಯನ್ನು ನೋಡುತ್ತಾನೆ. ಅವಳೂ ಪರಿಚಿತಳಂತೆ ನಗು ಬೀರುತ್ತಾಳೆ. ಮಾತ್ರವಲ್ಲ ಕಾಮುಕ ದೃಷ್ಟಿಯಿಂದ ಅವನನ್ನು ಸೆಳೆಯಲು ಪ್ರಯತ್ನಿಸುತ್ತಾಳೆ. ಅದೇ ಯುವತಿ ರೈಲಿನಲ್ಲಿಯು ಎದುರಾಗುತ್ತಾಳೆ. ಆಗ ಆ ಕಂಪಾರ್ಟ್ ಮೆಂಟ್ನಲ್ಲಿ ಅವರಿಬ್ಬರೇ ಇರುತ್ತಾರೆ. ತನ್ನ ತೆಕ್ಕೆಗೆ ಬೀಳದ ವ್ಯಕ್ತಿಯೊಬ್ಬನಿದ್ದಾನೆ ಅನ್ನುವ ಅಸಹನೀಯ ವಿಚಾರ ಅವಳ ಮನಸ್ಸನ್ನು ಕೆಡಿಸುತ್ತದೆ. ಅವಳು ಅವನನ್ನು ಇಕ್ಕಟಿಗೆ ಸಿಲುಕಿಸಿ ಅವರ ಹಣವನ್ನು ದೋಚುವ ಪ್ರಯತ್ನ ಮಾಡುತ್ತಾಳೆ. ಅದಕ್ಕೆಲ್ಲಾ ಜಗ್ಗದ ರಾಮನಾಥನಿಗೆ, ‘ತನ್ನನ್ನು ಬಲಾತ್ಕರಿಸಲು ಬಂದ’ನೆನ್ನುವ ಆರೋಪವನ್ನು ಹೊರಿಸಿ ಪೊಲೀಸರಿಗೂ ತಿಳಿಸುತ್ತಾಳೆ. ಆದರೆ ಇದರಿಂದ ವಿಚಲಿತನಾಗದ ಆತ ತಾನು ನಿರಪರಾಧಿ ಅನ್ನುವುದಕ್ಕೆ ಸಾಕ್ಷಿಯೆನ್ನುವಂತೆ ಎಲ್ಲರ ಸಮಕ್ಷಮದಲ್ಲಿ ತನ್ನ ಕೋಟನ್ನು ತೆಗೆಯುತ್ತಾನೆ. ಆತನಿಗೆ ಎರಡು ಕೈಗಳಿರುವುದಿಲ್ಲ. ಹಾಗಿರುವಾಗ ಬಲಾತ್ಕರಿಸುವ ಪ್ರಮೆಯವಿದೆಯೇ?

ಸಾಮಾಜಿಕ ನಿಯಮ- ನಿರ್ಬಂಧಗಳ ಮೂಲಕ ಹೆಣ್ಣು ಗಂದಿನ ಸಂಬಂಧ ವಿಷಯಕವಾದ ತೊಡಕುಗಳು ತಲೆದೋರುತ್ತವೆ. ‘ಹೀಗೂ ಇರಬಹುದು’ ಕಥೆಯಲ್ಲಿ ಇಳಿವಯಸ್ಸಿನಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ನಾಯಕರು, ಕಚ್ಚೆ ಸಡಿಲು ಅಚ್ಚಂಭಟ್ಟರ ಸಹವಾಸದಿಂದ ಅಂಭಕ್ಕನನ್ನು ಮದುವೆಯಾಗುತ್ತಾರೆ. ವಾರನ್ನಕ್ಕೆ ಬರುವ ಪುರೋಹಿತರ ಹುಡುಗ ಶ್ಯಾಮ ಅವರ ಮನೆಯಲ್ಲಿಯೇ ಒಬ್ಬನಾಗುತ್ತಾನೆ. ನಾಯಕರ ಹಿರಿ ಮಗ ರಾಮಣ್ಣ ಅಮೆರಿಕಾದಲ್ಲಿದ್ದು ಅಲ್ಲಿಯೆ ಸಂಸಾರಸ್ಥನಾಗುತ್ತಾನೆ. ಕಿರಿಯವನು ಲಕ್ಷ್ಮಣ ವೃತ್ತಿಯಲ್ಲಿ ವಕೀಲ. ಇದು ಇಷ್ಟು ಫ್ಲ್ಯಾಷ್ ಬ್ಯಾಕ್. ಕಥೆ ಆರಂಭವಾಗುವುದು ತನ್ನ ತಂದೆಯ ಸಾವಿನ ತಂತಿಯನ್ನು ಲಕ್ಷ್ಮಣ ಪಡೆದುಕೂಳ್ಳುವಲ್ಲಿಂದ. ನಾಯಕರಂತ ವ್ಯಕ್ತಿಗೆ ಈ ರೀತಿಯ ಸಾವು ಅಸಹನೀಯವೆಂದು ತಿಳಿದ ಮೇಲೆ ಲಕ್ಷ್ಮಣ ಆ ಸಾವಿನ ಹಿನ್ನಲೆಯನ್ನು ಹಿಡುಕೊಂಡು ಹೋಗುತ್ತಾನೆ. ಅವರದ್ದು ಆತ್ಮಹತ್ಯೆ ಹೌದು! ಕಾರಣ ಶ್ಯಾಮ ಹಾಗು ಅವರ ಎರಡನೆ ಹೆಂಡತಿ ಅಂಭಕ್ಕನಿಗೆ ಅನೈತಿಕ ಸಂಬಂಧವಿರುವುದು ತಿಳಿಯುತ್ತದೆ. ಅದಕ್ಕಾಗಿಯೇ ಶ್ಯಾಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಥೆಯ ತಿರುವು ಪಡೆಯುವುದು ಅಂಭಕ್ಕ ಬಸುರಿ ಅನ್ನುವ ವಿಷಯದಲ್ಲಿ. ಲಕ್ಷ್ಮಣ ವೈದ್ಯರನ್ನು ಭೇಟಿಯಾಗಿ ತನ್ನ ತಂದೆ ತನ್ನ ತಾಯಿ ಹೆರಲು ಅಸಮರ್ಥಳೆಂದು ತಿಳಿದಾಗ ಮಕ್ಕಳಾಗದಂತೆ ಅಪರೇಷನ್ ಮಾಡಿಕೊಂಡಿರುತ್ತಾರೆ. ಹಾಗೆ ಅಂಭಕ್ಕನ ಬಸುರಿಗೆ ಕಾರಣ ತಿಳಿಯುತ್ತದೆ. ಹಾಗೆ ಲಕ್ಷ್ಮಣನಿಗೆ ತನ್ನ ತಂದೆಯ ಸಾವಿನ ಹಿನ್ನಲೆಯೂ ತಿಳಿಯುತ್ತದೆ.

ವಿಭಿನ್ನ ಕಥಾವಸ್ತು ಮತ್ತು ನಿರೂಪಣೆಯಿರುವ ಕಥೆ ‘ತಬ್ಬಲಿಗಳು’ ಇಲ್ಲಿಯ ಪಾತ್ರಗಳು ತಂದೆ, ತಾಯಿ. ತಮ್ಮ, ತಂಗಿ ಮತ್ತು ಸೊಸೆ. ಮನೆಯ ಚುಕ್ಕಾಣಿ ಹಿಡಿದ ತಾಯಿ ಬಾಯಿ ಬಡಕಿ. ಅವಳ ಮಾತಿಗೆ ಯಾರ ದನಿಯೂ ನಿಲ್ಲಲಾರದು. ಸೊಸೆಯನ್ನು ನೆಮ್ಮದಿಯಿಂದ ಇರಗೊಡದವಳು. ಆದರೆ ಸೊಸೆ ಧೈರ್ಯವಂತೆ. ಅತ್ತೆ ಸಾಯುತ್ತೇನೆಂದಾಗ ಧೈರ್ಯವಾಗಿ ‘ಸಾಯುವವರು ಯಾರೂ ತಾನು ಸಾಯುತ್ತೇನೆ ಎಂದು ಹೇಳುವುದಿಲ್ಲ. ಸಾಯುವುದಕ್ಕೂ ಧೈರ್ಯವಿರಬೇಕು’ ಅನ್ನುವವಳು. ಅವಳೇ ಮುಂದೊಂದು ದಿನ ರೈಲಿನ ಗಾಲಿಗಳಿಗೆ ತಲೆಯೊಡ್ಡುತ್ತಾಳೆ. ತಂಗಿಗೆ ಹುಚ್ಚು ಕಾಯಿಲೆ ಹಿಡಿದಾಗ ತನ್ನ ಸೊಸೆಯೇ ಸತ್ತು ಪೀಡಿಸುತ್ತಾಳೆ ಎಂದು ಊರೀಡಿ ಹೇಳಿಕೊಳ್ಳುವ ಹೆಂಗಸು ತಾಯಿ. ತಮ್ಮನ ಹೆಂಡತಿ ಸತ್ತ ಮೇಲೆ ಅವನು ಮಲ್ಲಿಗೆ ಹೂವುಗಳ ಪರಿಮಳದ ಹಿಂದೆ ಮುಖ ಹೊರಳಿಸಿದವನು. ತಂಗಿಗೆ ಹಿಡಿದ ಕಾಯಿಲೆ ಗುಣವಾಗಲೆಂದು ಮಂತ್ರಾಲಯಕ್ಕೆ ಬರುವ ಕುಟುಂಬದ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಲೋಚಿಸುತ್ತಾ ದೂರವಾಗ ಬಯಸುತ್ತಾರೆ. ಇಲ್ಲಿ ಕುಟುಂಬದ ಜವಬ್ದಾರಿಯನ್ನು ಹೊರಲಾರದ ತಂದೆ, ಮಡದಿಯನ್ನು ಕಳೆದುಕೊಂಡ ಹದಿಹರೆಯದ ವಿಧುರ ತಮ್ಮ, ಹುಚ್ಚು ಹಿಡಿದ ತಂಗಿ ವಟವಟಿಸುತ್ತಾ ಸಂಸಾರ ನಡೆಸುವ ತಾಯಿ. ಕೊನೆಗೂ ರಥೋತ್ಸವದ ದಿನ ಅವರೆಲ್ಲಾ ಬೇರೆಬೇರೆಯಾಗಿ ತಬ್ಬಲಿಗಳಾಗುತ್ತಾರೆ. ಕಥೆಯನ್ನು ನಿರೂಪಿಸಿದ ಶೈಲಿ ನಾನಾ ರೀತಿಯಿಂದ ಚಿಂತನೆಗೆ ಹಚ್ಚುತ್ತದೆ.

‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯಲ್ಲಿ ವಾಸು ತನ್ನ ತಾಯಿಯ ಕೋರಿಕೆಯಂತೆ ಕಕ್ಕ ಸತ್ಯಬೋಧನನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಒಂದು ರಾತ್ರಿಯಲ್ಲಿ ಪಾಪದ ಬೀಜ ಬಿತ್ತಿದ ಕಕ್ಕ ಒಳ್ಳೆಯವನೆ. ಅಂಬಕ್ಕನೇ ಆತನನ್ನು ಅಡ್ಡ ದಾರಿಗೆ ಎಳೆದರೂ ತನ್ನ ತಪ್ಪು ಇಲ್ಲದಿದ್ದರೂ ಸತ್ಯವನ್ನು ದನಿ ಏರಿಸಿ ಹೇಳದೆ ಮನೆ ಬಿಟ್ಟು ಹೋಗುತ್ತಾನೆ. ಅವನು ಮರಳಿ ಬಾರದಿದ್ದರೆ ಆ ಮನೆಯಲ್ಲಿ ತಮಗೆ ಅಸ್ಥಿತ್ವವೇ ಇಲ್ಲ, ಅದಕ್ಕಾಗಿ ಆಕಾಶ ಭೂಮಿ ಒಂದಾದರೂ ಸರಿಯೇ ಅವನನ್ನು ಹುಡುಕಿಕೊಂಡು ಬರುವಂತೆ ಒತ್ತಾಯಿಸುತ್ತಾಳೆ ವಾಸುವಿನ ತಾಯಿ. ಆದರೆ ಅದು ಅಲ್ಲಾಉದ್ದೀನನ ಅದ್ಭುತ ದೀಪವನ್ನು ಅರಸಿ ಹೊರಟಂತೆ ಆಗುತ್ತದೆ. ಕಥೆ ಅಪೂರ್ಣವೆನಿಸಿದರೂ ಅದನ್ನು ನಾನಾ ಕೋನಗಳಿಂದ ಆಲೋಚಿಸಲು ಓದುಗನಿಗೆ ಬಿಟ್ಟಿರುವುದು ಕಥೆಯ ಪ್ಲಸ್ ಪಾಯಿಂಟ್.

ವಾಸ್ತವದ ಎಳೆಯಿಂದನ್ನು ಹಿಡಿದು ಬರೆದ ಕಥೆ ‘ಮೋನಾ ಲೀಸಾ’. ಇಲ್ಲಿ ಪುನರ್ಜನ್ಮದ ಅನುಭಾವಾತೀತ ಸತ್ಯವನ್ನು ಪ್ರತಿಪಾದಿಸುವ ಹಿನ್ನಲೆಯಿದ್ದರೂ ಕೋರ್ಟು 400 ವರ್ಷಗಳ ಹಿಂದಿನ ಮೋನಾ ಲೀಸಾ ಹಾಗು ತಾನು ಉಪಚರಿಸಿದ ಮೆಟಿಲ್ಡಾಳ ನಡುವಿನ ಸಾಮ್ಯತೆಯನ್ನು ನಿರಾಕರಿಸಿ, ಮೋನಾಲೀಸಾ ಕಲಾಕೃತಿಯನ್ನು ಕದ್ದೊಯ್ದ ಆರೋಪದಲ್ಲಿ ಪೆರ್ರೂಗಿಯನ್ನು ಬಂಧಿಸುತ್ತದೆ. ತನ್ನ ಪ್ರೇಯಸಿಯನ್ನು ಮೋನಾಲೀಸಾಳಿಗೆ ಹೋಲಿಸುತ್ತ ಭಾವನೆಗಳನ್ನು ನವಿರಾಗಿ ಚಿತ್ರಿಸುತ್ತಾ ಪುನರ್ಜನ್ಮವನ್ನು ಕೆದಕುತ್ತ ಸಾಗುತ್ತದೆ ಕಥೆ.

ಸೃಜನಶೀಲತೆಯ, ಚಿಂತನಾ ವೈಖರಿಯಿರುವ ಖಾಸನೀಸರ ಕಥೆಗಳನ್ನು ಒಮ್ಮೆಯಾದರೂ ಓದಲೇಬೇಕು.

Read more!

Friday, February 26, 2010

ವಿವೇಕ ಶಾನಭಾಗ ಅವರ ಆಯ್ದ ಕಥೆಗಳು


ಸರಳವಾದ ಶೈಲಿಯಲ್ಲಿ ಮನಮುಟ್ಟುವಂತೆ ಬರೆಯುವ ವಿವೇಕ ಶಾನಭಾಗ ಅವರ ಕಥೆಗಳನ್ನು ಓದಿಯೇ ಆಸ್ವಾದಿಸಬೇಕು. ಇಲ್ಲಿಯ ಹೆಚ್ಚಿನ ಕತೆಗಳಲ್ಲಿ ಉತ್ತರ ಕನ್ನಡದ ಪಾತ್ರ ಚಿತ್ರಣಗಳಿವೆ. ಕೆ.ವಿ. ಸುಬ್ಬಣ್ಣ ಅವರ ನೆನಪಿನ ‘ಮೊದಲ ಓದು’ ಪುಸ್ತಕ ಮಾಲಿಕೆಯಲ್ಲಿ ಹೊರ ಬಂದಿರುವ ವಿವೇಕರ ಆಯ್ದ ಕಥೆಗಳ ಸಂಗ್ರಹಯೋಗ್ಯ ಕೃತಿ ಇದು.

ಕಂತು ನೀಳ್ಗತೆ ಸೇರಿದಂತೆ ಏಳು ಕಥೆಗಳಿರುವ ಈ ಕೃತಿಯ ಇತರ ಕಥೆಗಳು ಲಂಗರು, ಅಂತ:ಪಟ, ಹುಲಿ ಸವಾರಿ, ಸಶೇಷ, ಮತ್ತೊಬ್ಬನ ಸಂಸಾರ ಮತ್ತು ಶರವಣ ಸರ್ವಿಸಸ್."

ಲಂಗರು ಕಥೆಯಲ್ಲಿ ಮಚವೆಯ ಪ್ರಾಮುಖ್ಯತೆ ಕಡಿಮೆಯಾದಂತೆ ರಘುವೀರನ ಜೀವನವೂ ಹದಗೆಡುವಾಗ ಊರಿನವರ ದೃಷ್ಟಿಯಲ್ಲಿ ಭೋಳೇ ಸ್ವಭಾವದವನು ಅನಿಸಿಕೊಳ್ಳಬೇಕಾಗುತ್ತದೆ. ಆದರೆ ಆತ ಮುಗ್ಧ, ಎಲ್ಲರಿಂದಲೂ ಪಕ್ಕನೆ ಮೋಸಕ್ಕೆ ಒಳಗಾಗುವವ ಮತ್ತು ಸಂಬಂಧಗಳಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸದ ಉದಾರ ಮನಸ್ಸಿನವ. ಹಾಗಾಗಿಯೇ ಅವನು ಅಣ್ಣ ಅನಂತನಿಂದಲೂ ಮೋಸಕ್ಕೊಳಗಾಗಿ ಆಸ್ತಿಯ ಪಾಲಾಗಿ ಮಚವೆಯನ್ನು ಪಡೆದವನು. ಇದು ಅವನ ಮಡದಿಯ ಆರೋಪವೂ ಹೌದು. ಓದಿನಲ್ಲಿ ಅನಂತನಿಗಿಂತಲು ಜಾಣ. ಆದರೆ ವ್ಯವಹಾರದಲ್ಲಿ ಅಣ್ಣನ ಸೂತ್ರವಿರುವಾಗ ಅದರ ಒಳಗುಟ್ಟುಗಳನ್ನು ಅರಿಯುವಲ್ಲಿ ವಿಫಲನಾದವನು. ಮಚವೆಯ ಏರಿಳಿತದಲ್ಲಿ ಅಲೌಕಿಕದ ಬೆನ್ನು ಹಿಡಿದವನಿಗೆ ಶರಾವತಿ ನದಿಗೆ ಸೇತುವೆಯಾದಾಗ ಮಚವೆಯ ಪ್ರಾಮುಖ್ಯತೆ ಹೋಗಿ, ಒಂದು ಅಸ್ಥಿಪಂಜರವಾಗುವ ಸ್ಥಿತಿಯಂತೆ, ಮಡದಿಯ ಆಸ್ತಿಯ ಬೇಡಿಕೆಯಲ್ಲಿ ಮೌನವಾಗುತ್ತಾನೆ.

ಲಂಗರು ಕಥೆಯ ರಘುವೀರನಂತೆ ಅಂತ:ಪಟ ಕಥೆಯ ಮಹಾದೇವ. ಆತ ಕೆಲಸ ಮಾಡುತ್ತಿದ್ದ ಬಟ್ಟೆಯ ಮಿಲ್ಲು ಮುಚ್ಚಿದ ಬಳಿಕ ದರ್ಜಿಯ ಕೆಲಸಕ್ಕೆ ಬರುತ್ತಾನೆ. ಅಲ್ಲಿ ರಾಮಣ್ಣನಿಂದ ಎಲ್ಲವನ್ನೂ ಕಲಿತುಕೊಳ್ಳುತ್ತಾನಾದರೂ ಅಳತೆ ತೆಗೆಯುವ ಕೆಲಸ ಮಾತ್ರ ಕಲಿಯಲು ಅವಕಾಶವಿರುವುದಿಲ್ಲ. ಮದುವೆಯ ಅನಂತರ ಜೀವನ ಸುಸೂತ್ರವಾಗಿ ನಡೆದು, ಮಾವನ ಆಸ್ತಿಗೂ ಭಾದ್ಯಸ್ಥನಾಗುತ್ತಾನೆ. ಹೊಸ ಬದುಕಿಗೆ ಹೊಂದಿಕೊಳ್ಳುವಾಗ ರಾಗಿಣಿಯ ಪರಿಚಯವಾಗುತ್ತದೆ. ಗಂಡನಿಂದ ದೂರವಿರುವ ಅವಳು ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಾಳೆ. ಅವಳ ಸಾನಿಧ್ಯ, ತನ್ನ ಸಂಬಂಧ ನೂನ್ಯತೆಯ ಹೊಳೆಯದಿದ್ದ ಮನಸಿನಲ್ಲಿ ಹೊಸ ಪುಳಕ ಹುಟ್ಟಿಸುತ್ತದೆ. ಈ ಸಂಬಂಧ ಕಾಮಾತಿರೇಕ ತಲುಪಿ, ಈ ದೇಹಗಳ ಮೂಲಕ ಹೊಸ ದಾರಿಯನ್ನು ಹುಡುಕುತ್ತಿದ್ದೇನೆ ಅನಿಸುತ್ತದೆ. ಆದರೆ ಅವಳ ನಿರ್ಧಾರವನ್ನು ಕೇಳಿ ಅಸಾಧ್ಯದ ನಿರ್ಣಯ ನೀಡುತ್ತಾನೆ.

‘ಕಂತು’ ಗ್ರಹಣಕ್ಕೆ ಸಂಬಂಧಿಸಿದ ಒಂದು ಅತ್ಯುತ್ತಮ ಕಥೆ. ಮಾವಿನೂರಿನಲ್ಲಿ ಪೂರ್ಣ ಗ್ರಹಣ ಗೋಚರಿಸುವುದೆನ್ನುವಾಗ ದೇಶ ವಿದೇಶದಿಂದ ಜನರು ಅಲ್ಲಿಗೆ ಬರುತ್ತಾರೆ. ಸದಾನಂದ ಮಾಸ್ತರರಿಗೆ ಗ್ರಹಣದ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಊರವರಿಗೆ ತಿಳಿಸುವ ಧ್ಯೇಯವಿದ್ದರೂ, ಎಷ್ಟೇ ಸರಳವಾಗಿ ವಿವರಿಸ ಹೋದರೂ ಮತ್ತಷ್ಟು ಕಗ್ಗಂಟಾಗಿ ಆ ವಿವರಗಳು ತಮ್ಮನ್ನೇ ಸುತ್ತಿಕೊಂಡಂತಾಗುತ್ತದೆ. ಗ್ರಹಣದ ಸಂಗತಿ ನಡೆಯುತ್ತಿರುವಾಗಲೇ ಆ ಊರು ಮುಳುಗಡೆಯಾಗುವಾಗ ದೇವಸ್ಥಾನದ ಜವಾಬ್ದಾರಿಯಿರುವ ಗಂಗಾಧರ ನಿಧಿಯನ್ನು ಹುಡುಕಿ ಲಾಭಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಮಾತ್ರವಲ್ಲ ಊರಿನ ಜನರೆಲ್ಲಾ ತಮ್ಮ ತಮ್ಮ ಮುಳುಗಡೆಯಾಗಲಿರುವ ಮನೆಗಳನ್ನು ಗ್ರಹಣ ವೀಕ್ಷಿಸಲು ಬರುವವರಿಗೆ ಬಾಡಿಗೆಗೆ ನೀಡಿ ಹಣ ಗಳಿಸುವ ತಂತ್ರ ಹೂಡುತ್ತಾರೆ. ಜಗನ್ನಾಥ ಮತ್ತು ಆತನ ಅಣ್ಣನ ಮಗ ಪಾಂಡುರಂಗ ಕೂಡ ಇದರಿಂದ ಹೊರತಾಗಿರುವುದಿಲ್ಲ. ಊರಿನವರಿಗೆ ಹಣದ ಅಮಲು ಹತ್ತಿಸಿ ಅವರ ಮನ ಓಲೈಸುವ ಸರಕಾರ ಆ ಜನರ ಮುಗ್ಧತೆಯ ಪ್ರತಿಬಿಂಬದಂತೆ ಕಾಣುತ್ತದೆ.

ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ಚಿತ್ರಿಸುವ ಕಥೆ ‘ಹುಲಿ ಸವಾರಿ’. ಮಾನವೀಯ ಮೌಲ್ಯಗಳೆಲ್ಲಾ ವ್ಯವಹಾರಿಕವಾಗಿ ಮನುಷ್ಯನ ಸ್ಥಿರತೆಯನ್ನು ವಿಭಿನ್ನವಾಗಿ ತಿಳಿಸುತ್ತದೆ.

ಆರ್ಥಿಕ ಉದಾರಿಕರಣದ ಇನ್ನೊಂದು ಉತ್ತಮ ಕಥೆ ‘ಸಶೇಷ’. ನಂಬಿಯಾರ್ ಮಧ್ಯಮವರ್ಗದಿಂದ ಬಂದರೂ ಓದಿ ಒಳ್ಳೆಯ ಕೆಲಸ ಹಿಡಿದು ದುಬೈಗೆ ತೆರಳಿ ಡಾಲರ್ಗಳಲ್ಲಿ ಸಂಬಳ ಎಣಿಸುತ್ತಾನೆ. ಆದರೆ ಆತ ಒಂದು ಸಾಲದ ಸಮಸ್ಯೆಯಲ್ಲಿ ಬೀಳುತ್ತಾನೆ. ಆ ಸಾಲ ಎಷ್ಟೆಂದರೆ ‘ಹನ್ನೆರಡು ರೂಪಾಯಿಗಳು’. ತನ್ನ ಅಜ್ಜನಿಂದ ಬಂದ ಖರ್ಚುವೆಚ್ಚಗಳನ್ನು ಬರೆದಿಡುವ ಅಭ್ಯಾಸ, ಈ ಸಮಸ್ಯೆಯನ್ನು ಎತ್ತಿ ಹಿಡಿಯುತ್ತದೆ. ಈ ಅಭ್ಯಾಸ ನಾವು ಗಳಿಕೆಯ ಮಿತಿಯಲ್ಲಿದ್ದೇವೆ ಮತ್ತು ವ್ಯಯಿಸಿದ್ದು ಸಕಾರಣಕ್ಕಾಗಿ ಅನ್ನುವ ಉದ್ದೇಶದಿಂದಾಗಿ ಮಾತ್ರ ಅನ್ನುವುದಕ್ಕಾಗಿ. ಕೊನೆಗೂ ಗೆಳೆಯನ ಮಾತಿನಂತೆ ಖರ್ಚು ಬರೆಯುವುದನ್ನು ನಿಲ್ಲಿಸಿದ ನಂಬಿಯಾರ್ ದಂಪತಿಗಳಿಗೆ ಏನೋ ನಿಯಮ ಮುರಿದ ಅಳುಕು ಇರುತ್ತದೆ.

ಒಂದೇ ಹೆಸರಿನ ಇಬ್ಬರು ಹುಡುಗರ ತಂದೆಯ ಹೆಸರೂ ಒಂದೇ ಮತ್ತು ಅವರಿಬ್ಬರ ಇನಿಶಿಯಲ್ ಕೂಡ ಒಂದೇ! ಆ ಹುಡುಗರನ್ನು ಗುರುತಿಸಬಹುದಾದ ಒಂದೇ ಒಂದು ವ್ಯತ್ಯಾಸವೆಂದರೆ ಒಬ್ಬ ಆರ್ಟ್ಸ್ ಮತ್ತೊಬ್ಬ ಸಾಯನ್ಸ್ ವಿದ್ಯಾರ್ಥಿ. ಸೆಲ್ಸ್ ಮನ್ ಜಾನಕೀರಾಮನಿಗೆ ಎರಡು ಸಂಸಾರವಿದೆಯೆನ್ನುವುದು ಊರಿನ ತುಂಬಾ ಬಿರುಗಾಳಿಯಂತೆ ಹರಡಿದ ಸುದ್ದಿ. ಕೊನೆಗೂ ಓದುಗನಿಗೆ ನಿರ್ಧರಿಸಲು ಬಿಟ್ಟಂತೆ ‘ಮತ್ತೊಬ್ಬನ ಸಂಸಾರ’ ಕಥೆ ಕೊನೆಗೊಳ್ಳುವುದರಿಂದ ‘ಹೌದೋ? ಅಲ್ಲವೋ?’ ಅನ್ನುವುದು ಕಾಡುತ್ತಲೇ ಇರುತ್ತದೆ.

ಈ ಪುಸ್ತಕದ ಇನ್ನೊಂದು ಅತ್ಯುತ್ತಮ ಕಥೆ ‘ಶರವಣ ಸರ್ವಿಸಸ್’ ವೇಗದ ಬದುಕಿನಲ್ಲಿ ಎಲ್ಲವನ್ನೂ ಮನೆಯ ಬಾಗಿಲಿನವರೆಗೆ ತಲುಪಿಸುವುದನ್ನು ನಿರೀಕ್ಷಿಸುವ ಜನರ ದಿನನಿತ್ಯದ ಜಂಜಾಟವನ್ನು ಬಿಚ್ಚಿಡುತ್ತದೆ ಈ ಕಥೆ. ವ್ಯವಹಾರದ ಬೆನ್ನು ಹಿಡಿದ ಮೇಲೆ ಶರವಣನಿಗೆ ಸಂಸಾರದಿಂದ ದೂರವಾಗುವ ಸನ್ನಿವೇಶದಲ್ಲಿ ಎಲ್ಲವನ್ನೂ ಕಳೆದುಕೊಂಡ ಭಾವನೆ ಎದುರಾಗುತ್ತದೆ. ಆದರೂ ವ್ಯವಹಾರವನ್ನು ಬಿಡಲಾರದ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಈ ಕಥೆಯ ಪ್ಲಸ್ ಪಾಯಿಂಟ್ ಶರವಣನ ಫ್ಲ್ಯಾಷ್ಬ್ಯಾಕ್ ಆತನ ಮಾತಿನಿಂದಲೇ ಹೇಳಿಸುವ ತಂತ್ರ. ಇದು ಹೊಸತನವೂ ಹೌದು ಮತ್ತು ಕಥೆಗೆ ಮೆರುಗನ್ನೂ ನೀಡಿರುವುದು ಸತ್ಯ. ಹಾಗಾಗಿ ಈ ಕಥೆ ಬಹಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.

ಈ ಕೃತಿಯ ಏಳು ಕಥೆಗಳೂ ಕನ್ನಡ ಸಾಹಿತ್ಯವನ್ನು ಪ್ರವೇಶಿಸುವವರಿಗೆ ಅಪೂರ್ವ ಕೊಡುಗೆಯೆಂದರೆ ತಪ್ಪಾಗಲಾರದು. ಇಲ್ಲಿಯ ಕಥೆಗಳನ್ನು ಓದಿಯೇ ಆನಂದಿಸಬೇಕು.

Read more!

Monday, February 22, 2010

ಬಾಳಾಸಾಹೇಬ ಲೋಕಾಪುರ ಅವರ ‘ನೀಲಗಂಗಾ’ - ಒಂದು ಪ್ರೇಮ ಕಥೆ


‘ಉಧೊ! ಉಧೊ!’, ‘ಬಿಸಿಲುಪುರ’ ಮತ್ತು ‘ಹುತ್ತ’ ಕಾದಂಬರಿಗಳ ಮೂಲಕ ಚಿರಪರಿಚಿತರಾಗಿರುವ ಬಾಳಾಸಾಹೇಬ ಲೋಕಾಪುರ ಅವರ ಇನ್ನೊಂದು ಕೃತಿ ‘ನೀಲಗಂಗಾ’. ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮಾದ ಲಹರಿಯೂ ಹೌದು.

ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ. ಆಡು ಭಾಷೆಯ ಸೊಗಸು ಆಡುವುದಕ್ಕಿಂತಲೂ, ಓದುವುದರಲ್ಲಿಯೇ ಹೆಚ್ಚು ಆಪ್ತವೆನಿಸುತ್ತದೆ. ಪಂಚಯ್ಯ, ನೀಲಗಂಗಾ ಮತ್ತು ಸ್ವರೂಪರಾಣಿ ಪಾತ್ರಗಳ ಮೂಲಕ ಸ್ವಗತವಲ್ಲದೆ ಆಯಾಯ ಪಾತ್ರ ಚಿತ್ರಣದ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ."

ತುತ್ತು ಕೂಳಿಗೂ ಗತಿಯಿಲ್ಲದ ಬಡ ಹುಡುಗ ಪಂಚಯ್ಯ. ಮನೆಯವರ ಅನಾಧಾರದಲ್ಲಿ ಅನಾಥನಾಗಿ ಆಶ್ರಮ ಸೇರಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಕವಿ ಹೃದಯದ ಆತ ಪ್ರಬುದ್ದನಾಗಿ ಬೆಳೆದು ಸಾರಸ್ವತ ಲೋಕದ ‘ಮೃತ್ಯುಂಜಯ’ ಆಗಿ ಕಾಲೇಜ್ನಲ್ಲಿ ಪ್ರೊಫೆಸರೂ ಆಗುತ್ತಾನೆ.

ನೀಲಗಂಗಾ, ವೇದಮೂರ್ತಿ ‘ಮಲ್ಲಯ್ಯ’ನವರ ಮಗಳು. ಹೆಡೆದವ್ವನ ಪ್ರೀತಿಯಿಂದ ವಂಚಿತಳಾದ ಅವಳಿಗೆ ಹೆತ್ತಬ್ಬೆಯ ಪ್ರೀತಿಯ ಜೊತೆಗೆ ಜವಾಬ್ದಾರಿಯ ತಂದೆಯಾಗಿ ಅವೆರಡು ತಾವೇ ಆಗಿ ಅವಳನ್ನು ಬೆಳೆಸುತ್ತಾರೆ ಮಲ್ಲಯ್ಯ. ಕೊರ್ಯಾಣ ಹಿಡಿದು ಬದುಕುವ ಅವರ ಮನೆ ಬಡತನದ, ಬಟ್ಟಾ ಬಯಲಿನಂತೆ ಬಾಗಿಲುಗಳಿಲ್ಲದ ತೆರೆದ ಜಾಗ. ಹೀಗೆ ಬಡತನದಲ್ಲಿಯೇ ಬೆಳೆಯುತ್ತಾ ಕೃಷ್ಣೆಯಷ್ಟೆ ಮುಗ್ಧಳಾಗಿರುವ ನೀಲಗಂಗಾಳಿಗೆ ಓದಿ, ಪ್ರೊಫೆಸರ್ ಆಗಿರುವ ಪಂಚಯ್ಯನ ಮೇಲೆ ಹೇಳಿಕೊಳ್ಳಲಾರದಷ್ಟು ಪ್ರೀತಿ. ಅವನು ಮಾತನಾಡದಿದ್ದರೆ ಏನೋ ಕಳೆದುಕೊಳ್ಳುವ ತಳಮಳ. ಅಂತೊಂದು ಕಾತುರದ ದಿನ ಕೃಷ್ಣೆಯ ಬಳಿ ಅವನ ಭೇಟಿಯಾದಾಗ ಮಾತನಾಡಿದರೂ, ನಿರ್ಲಕ್ಷಿತನಂತೆ ಮೌನೊದೊಳಗೆ ನುಸುಳಿ ಹೋದ ಪಂಚಯ್ಯ ಮಲ್ಲಯ್ಯನವರು ಇಲ್ಲದ ಸಮಯದಲ್ಲಿ ನೀಲಗಂಗಾಳನ್ನು ಹುಡುಕಿಕೊಂಡು ಬರುತ್ತಾನೆ. ಹದಿಹರೆಯದ ಕನಸುಗಳ ಬೆಚ್ಚನೆಯ ಮುಸುಕೊಳಗೆ ಅರಿಯದೆ ನೀಲಗಂಗಾಳ ಕತ್ತಲ ಬದುಕಿಗೆ ನಾಂದಿ ಹಾಡುತ್ತಾನೆ.

ನೀಲಗಂಗಾಳ ಬದಲಾದ ಭಾವಕ್ಕೆ ಕಾರಣ ತಿಳಿದ ಮಲ್ಲಯ್ಯ ‘ಎಲ್ಲಾ ಶಿವನಿಚ್ಛೆ’ಯೆನ್ನುವ ದೈವ ಭಕ್ತ. ಮಗಳಿಗಾದ ಅನ್ಯಾಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದರೂ, ಅವರುಗಳ ಅಸಹಾಯಕತೆ, ಗೌಡರ ವಿಳಂಬ ನಿರ್ಧಾರ, ಕೊನೆಗೂ ಕೆಟ್ಟ ಸುದ್ದಿಯಾಗಿಯೇ ಎದುರಾಗುತ್ತದೆ. ಪಂಚಯ್ಯನನ್ನು ಹುಡುಕಿಕೊಂಡು ಬರುವಾಗ ಅವನು ಸ್ವರೂಪರಾಣಿಯೆನ್ನುವ ಅವನ ಅಭಿಮಾನಿಯಾದ ವೈದ್ಯೆಯ ಜೊತೆಗೆ ಮದುವೆಯಾಗಿ ಹನಿಮೂನಿಗೆ ಹೊರಟಿರುವುದು ತಿಳಿಯುತ್ತದೆ. ಇದರಿಂದ ನೊಂದ ಮಲ್ಲಯ್ಯ ಊರಿನವರಿಂದಲೂ ನಿಂದೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿ ನೀಲಗಂಗಾಳನ್ನು ನಿರ್ಗತಿಕಳನ್ನಾಗಿಸುತ್ತಾನೆ.

ಮುಂದೆ ಗಂಡು ಕೂಸಿಗೆ ಜನ್ಮವಿತ್ತ ನೀಲಗಂಗಾ ಎಲ್ಲದರಲ್ಲಿಯೂ ನಿರಾಸಕ್ತಳಾಗಿ, ಇನ್ನೊಂದೆಡೆ ತನ್ನ ತಂದೆಯ ಸಾವಿಗೆ ಕಾರಣನಾದೆನಲ್ಲಾವೆನ್ನುವ ದು:ಖ ಅವಳನ್ನು ಅಂತರ್ಮುಖಿಯನ್ನಾಗಿಸುತ್ತದೆ. ಬದುಕಿನಲ್ಲಿ ಸತ್ವವನ್ನೇ ಕಳೆದುಕೊಂಡ ಅವಳು ಅನ್ನಕ್ಕೂ ತಾತ್ವರ ಪಡುತ್ತಾಳೆ. ಕೊನೆಗೆ ತನ್ನ ಮೇಲೆ ಅನುಕಂಪ ತೋರಿದ ನಾಗವ್ವನೇ ಅವಳನ್ನು ನಿಂದಿಸುತ್ತಾಳೆ. ಆದರೆ ಹಸಿದ ಒಡಲಿನ ಜೊತೆಗೆ ಎಳೆ ಕೂಸಿನ ಮಮತೆ ಅವರ ಮುಂದೆ ಕೈಯೊಡ್ಡುತ್ತದೆ. ಅಲ್ಲಿ ನಾಗವ್ವನಿಂದ ಅವಮಾನಿತಳಾದ ಅವಳು ಹೆಣ್ಣು ಮಕ್ಕಳಿಗೆ ಕೊರ್ಯಣದ ಹಕ್ಕು ಇಲ್ಲದಿದ್ದರೂ ತನ್ನ ಗಂಡುಮಗುವಿಗೆ ಆ ಹಕ್ಕಿದೆಯೆಂದು ಹೊರಟಾಗ ನಾಗಮ್ಮ, ‘... ಈ ಜೋಳಿಗೆ ಐತಲ್ಲಾ ಅದು ಭಿಕ್ಷಾ ಬೇಡು ವಸ್ತು ಅಲ್ಲ. ಅದು ಶಿವನ ಸಂಕೇತ... ನಿನಗಾ ಧರ್ಮ ಸೂಕ್ಷ್ಮ ಕಲಿಸಿಕೊಡಬೇಕಾಗಿಲ್ಲ’ ಅನ್ನುವಾಗ ಸತ್ಯದ ಅರಿವಾಗಿ ಹಿಂದಕ್ಕೆ ಬರುತ್ತಾಳೆ ನೀಲಗಂಗಾ.

ಕವಿ ಹೃದಯದ ಪಂಚಯ್ಯನನ್ನು ಭೇಟಿಯಾಗಿ ತನ್ನ ತಾಯಿಯ ಮಾತನ್ನೂ ಮೀರಿ ಮದುವೆಯಾದ ಸ್ವರೂಪರಾಣಿ, ಓದುಗರನ್ನು ಭ್ರಾಮಾಲೋಕಕ್ಕೆ ಕರೆದೊಯುವ ಕವಿ, ವಾಸ್ತವದ ಬಗ್ಗೆ ಸ್ಪಷ್ಟವಾಗಿ ಮತ್ತು ನಿಷ್ಟುರವಾಗಿ ತನ್ನ ಮಡದಿಗೆ ಹೇಳುವಾಗ ತಾನು ಭಾವಿಸಿದೆಲ್ಲಾ ಸುಳ್ಳೇ ಅನಿಸುತ್ತದೆ ಅವಳಿಗೆ. ಅವಳನ್ನು ನಿರಾಶೆ ಆವರಿಸಿ, ಅವನ ಮೇಲೆ ಬೇಸರ ಮೂಡಿದರೂ, ಅದು ಪ್ರೀತಿಯ ಉನ್ಮಿಲಿತವೆನಿಸುತ್ತದೆ. ಅವನ ಬಗ್ಗೆ ವ್ಯತಿರೀಕ್ತವಾದ ಭಾವನೆಯೊಂದು ಉದಯಿಸುತ್ತದೆ. ಆದರೂ ಅವಳ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ.

ಒಮ್ಮೆ ಪಂಚಯ್ಯ ತನ್ನ ಮುಖ್ಯ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೊರಟಾಗ ಆತ ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾನೆ ಅನ್ನುವ ಸಂಶಯ ಸ್ವರೂಪರಾಣಿಗೆ ಮೂಡುತ್ತದೆ. ಅವನು ಬೆಂಗಳೂರಿಗೆ ಹೊರಟ ಮೇಲೆ ತಾನು ಉತ್ತರಭಾರತದ ಪ್ರವಾಸ ಕೈಗೊಂಡು ಅವನಿಗೆ ವಿಸ್ಮಯ ಮೂಡಿಸುವ ಹವಣಿಕೆಯಲ್ಲಿರುತ್ತಾಳೆ.

ಆದರೆ ಕಥೆ ತಿರುವು ಪಡೆಯುವುದು ಅಲ್ಲಿಯೆ. ಪಂಚಯ್ಯನ ಊರಿನವನೇ ಆದ ವಿದ್ಯಾರ್ಥಿಯೊಬ್ಬ ನೀಲಗಂಗಾಳಿಗೆ ಪಂಚಯ್ಯನಿಂದ ಆದ ಅನ್ಯಾಯವನ್ನು ಸ್ವರೂಪರಾಣಿಗೆ ತಿಳಿಸುತ್ತಾನೆ. ತಾನು ಕೈ ಹಿಡಿದಾತನ ಬಣ್ಣ ಬದಲಾದಾಗ ಹತಾಶಳಾದರೂ ತನ್ನ ಕಾರಿನಲ್ಲಿಯೇ ಪಂಚಯ್ಯನ ಊರಿಗೆ ಬರುತ್ತಾಳೆ. ನೀಲಗಂಗಾಳಿಗಾದ ಅನ್ಯಾಯವನ್ನು ತಿಳಿದು ಅವಳ ಇಚ್ಛೆಯಂತೆಯೇ ತನ್ನ ಜೊತೆಗೆ ಕರೆದುಕೊಂಡು ಬರುತ್ತಾಳೆ.

ಇತ್ತ ಪಂಚಯ್ಯ ಬೆಂಗಳೂರಿನಿಂದ ಮರಳಿದವನು ಸ್ವರೂಪರಾಣಿ ತನ್ನ ಊರಿಗೆ ಹೊರಟಿರುವುದು ತಿಳಿದು ಅವನು ಹುಡುಕಿಕೊಂಡು ಅಲ್ಲಿಗೆ ಬರುವಾಗ ಅವನ ತಾಯಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತದೆ. ಆತನ ಅಕ್ಕ ನಾಗವ್ವ ತಮ್ಮನಿಂದ ನೀಲಗಂಗಾಳಿಗಾದ ಮೋಸವನ್ನು ಕೇಳಿ ಸಿಟ್ಟಾಗುತ್ತಾಳೆ. ಆದರೂ ಅವಳಿಗೆ ಆತ ನಿರ್ದೋಶಿಯೆನ್ನುವುದು ಬೇಕು. ಆದರೆ ಪಂಚಯ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಾಗವ್ವ ನಿಷ್ಠುರವಾಗಿ ಮಾತನಾಡಿ ಒಂದು ಅಮಾಯಕ ಹೆಣ್ಣಿಗಾದ ನೋವನ್ನು ಪ್ರತಿಭಟಿಸುತ್ತಾಳೆ. ಪಂಚಯ್ಯ ಅಲ್ಲಿ ಸ್ವರೂಪರಾಣಿ ಮತ್ತು ನೀಲಗಂಗಾಳನ್ನು ಕಾಣದೆ ಹುಡುಕುತ್ತ ಬರುವಾಗ ಅವನಿಗೆ ಒಮ್ಮೆ ಸ್ವರೂಪರಾಣಿ ಹೇಳಿದ ಮಾತುಗಳು ನೆನಪಾಗಿ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಅವಳನ್ನು ಭೇಟಿಯಾದರೂ ಸ್ವರೂಪರಾಣಿಯ ದೃಢ ನಿರ್ಧಾರದ ಮುಂದೆ ತಲೆ ತಗ್ಗಿಸುತ್ತಾನೆ. ಆಕೆಯೇ ನೀಲಗಂಗಾಳ ಜೊತೆಗೆ ಊರಿಗೆ ಹೋಗು ಅನ್ನುತ್ತಾಳೆ. ಪಂಚಯ್ಯ ಕ್ಷಮಾಪಣೆ ಕೇಳಿಕೊಂಡು ಮಗುವಿನ ಜೊತೆಗೆ ನೀಲಗಂಗಾಳನ್ನು ಕರೆದುಕೊಂಡು ಊರಿಗೆ ಹಿಂತಿರುಗುತ್ತಾನೆ.

ಹೀಗೆ ಕಥೆ ಮುಗಿದರೂ ಆ ಕಥಾಭಾಷೆಯ ಸವಿ ಕೃತಿಯನ್ನು ಮಗದೊಮ್ಮೆ ಓದುವಂತೆ ಪ್ರೇರೇಪಿಸುತ್ತದೆ. ಅದೇ ಲಹರಿ, ಪದಗಳ ಸಿಹಿಯನ್ನು ಅಸ್ವಾದಿಸುವ ಮನಸ್ಸು ತನ್ನಿಂದ ತಾನೆ ಖುಷಿಪಡುತ್ತದೆ. ಈ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ರೂಪ ಪ್ರಕಾಶನ, 2406, 2407/ ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ, ಮೈಸೂರು - 570 004.

Read more!

Tuesday, January 26, 2010

ಭೃಂಗದ ಬೆನ್ನೇರಿ... ಕಲ್ಪನಾವಿಲಾಸ - ‘ಮದಾಂ ಬೊವಾರಿ’


ಪ್ರೆಂಚ್ ಕಾದಂಬರಿಗಾರ ಗುಸ್ತಾವ್ ಫ್ಲಾಬೇರ್ನ ಜನಪ್ರಿಯ ಕಾದಂಬರಿ ‘ಮದಾಂ ಬೊವಾರಿ’. ಮಧ್ಯಮ ವರ್ಗದ ಹೆಣ್ಣೊಬ್ಬಳು ಆಸೆ ಆಕಾಂಕ್ಷೆಗಳನ್ನು ಹೊತ್ತು, ಸಾಮಾನ್ಯ ವ್ಯಕ್ತಿತ್ವದವನನ್ನು ಮದುವೆಯಾಗಿ ತನ್ನ ಕನಸುಗಳಿಗೆ ತೆರೆ ಹಾಕಿಕೊಳ್ಳುತ್ತಾಳೆ. ಆದರೆ ಅವಳ ಬದುಕು ಅಲ್ಲಿಗೆ ಅಂತ್ಯವಾಗುವುದಿಲ್ಲ. ತಾನು ಕಂಡ ಕನಸಿನಂತೆ ಬದುಕು ರೂಪಿಸಬೇಕೆನ್ನುವಾಗ ಪ್ರೇಮಿಯೊಬ್ಬನ ತೆಕ್ಕೆಗೆ ಜಾರುತ್ತಾಳಾದರೂ ಅದೆಲ್ಲಾ ಕ್ಷಣಿಕ ಮತ್ತು ಸ್ವಾರ್ಥವೇ ತುಂಬಿರುವ ಜನರಿಗೆ ಸುಖದ ಮಹಲು. ಅವರ ಸಾಂಗತ್ಯದಲ್ಲಿ ತನ್ನ ಆಸೆಗಳೆಲ್ಲಾ ಕೈಗೂಡದೆನ್ನುವ ನಿರಾಶೆ ಕಾಡುತ್ತಲೇ ಇರುತ್ತದೆ. ಹೀಗೆ ಭೃಂಗದ ಬೆನ್ನೇರಿ ಕಲ್ಪನಾವಿಲಾಸದಲ್ಲಿ ತೇಲುವ ಬೊವಾರಿಗೆ ಕನಸುಗಳೇ ಬದುಕಾಗುತ್ತವೆ. ಕಂಡ ಕನಸುಗಳೆಲ್ಲಾ ಬರೀ ಭ್ರಮೆಯೆನಿಸುತ್ತದೆ. ವಾಸ್ತವದ ಅರಿವಾಗುವ ಹೊತ್ತಿಗೆ ಬದುಕು ಇಷ್ಟೇನಾ? ಅನ್ನುವ ಕಟು ಸತ್ಯ, ಉನ್ಮಾದದಿಂದ ಎತ್ತಿ ನೆಲಕ್ಕೆ ಅಪ್ಪಳಿಸುತ್ತದೆ."

ಈ ಕಾದಂಬರಿಯ ಮುಖ್ಯ ಪಾತ್ರ ಬೊವಾರಿಯಾದರೂ ಕಾದಂಬರಿ ಆರಂಭವಾಗುವುದು ಚಾರ್ಲ್ಸ್ ಬೊವಾರಿ ಎಂಬ ಹುಡುಗನಿಂದ. ಕುಡುಕ ಮತ್ತು ಜವಾಬ್ದಾರಿಗಳಿಲ್ಲದ ತಂದೆಯ ಮಗನಾದರೂ, ಮಗನ ಉನ್ನತಿಗಾಗಿ ಹಪಹಪಿಸುವ ತಾಯಿಯ ಕನಸಿನಂತೆ ಉನ್ನತ ಶಿಕ್ಷಣ ಪಡೆದ ಚಾರ್ಲ್ಸ್ ವೃತ್ತಿಯಲ್ಲಿ ವೈದ್ಯನಾಗುತ್ತಾನೆ.

ಹೀಗೆ ತನ್ನ ವೃತ್ತಿಯಲ್ಲಿ ಹೆಸರುಗಳಿಸಿಕೊಂಡ ಚಾರ್ಲ್ಸಗೆ ಲೊಬರ್ಟೊದ ಹೊಲಮನೆಯ ಮಾಲೀಕ ರುವೊಲ್ಟ್ಗೆ ಚಿಕಿತ್ಸೆ ನೀಡುವ ಸಂದರ್ಭ ಎದುರಾಗುತ್ತದೆ. ಆತನ ಮಗಳು ಎಮ್ಮಳ ಉಪಚಾರಿಕೆ ಪ್ರೇಮಕ್ಕೆ ತಿರುಗಿ, ವೈದ್ಯನ ಹೆಂಡತಿಯಾಗಿ ಕನಸುಗಳ ಮೂಟೆಯನ್ನೇ ಹೊತ್ತುಕೊಂಡು ‘ಮೆದಾಂ ಬೊವಾರಿ’ಯಾಗಿ ಬರುತ್ತಾಳೆ.

ಚಾರ್ಲ್ಸ್ನಿಗೆ ತನ್ನ ವೃತ್ತಿಯಿಂದಾಗಿ ಶ್ರೀಮಂತರ ಪಾರ್ಟಿಗಳಲ್ಲಿ ಭಾಗವಹಿಸುವ ಅವಕಾಶ ದೊರಕುತ್ತದೆ. ಆತ ತಾನು ಅತೀಯಾಗಿ ಪ್ರೀತಿಸುವ ಎಮ್ಮಳ ಜೊತೆಗೆ ಆಹ್ವಾನಗಳಿಗೆ ಹೋಗುತ್ತಾನಾದರೂ, ಅವಳು ಅವನನ್ನು ಮತ್ತು ಅವನ ಅಭಿರುಚಿಗಳನ್ನು ನಿಂದಿಸುತ್ತಾಳೆ. ಆತ ತನ್ನ ವೃತ್ತಿಗೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಅನ್ನುವ ನೋವು ಅವಳನ್ನು ಕಾಡುತ್ತಲೇ ಇರುತ್ತದೆ. ಅದೇ ಮುಂದೆ ಗಂಡನ ವೃತ್ತಿಯನ್ನು ವ್ಯವಹಾರದ ಮಟ್ಟಕ್ಕೆ ಇಳಿಸಿ, ರೋಗಿಗಳಿಂದ ಬಾಕಿ ಇರುವ ಹಣವನ್ನು ವಸೂಲಿ ಮಾಡಿಕೊಂಡು, ಐಶರಾಮದ ಜೀವನಕ್ಕೆ ನಾಂದಿ ಹಾಡುತ್ತಾಳೆ. ಆ ಸಮಯದಲ್ಲಿ ಅವಳು ತುಂಬು ಗರ್ಭಿಣಿ.

ಚಾರ್ಲ್ಸ್ ತನ್ನ ವೃತ್ತಿಯನ್ನು ಯಾನ್ಪಿಲ್ ಪಟ್ಟಣಕ್ಕೆ ಸ್ಥಳಾಂತರಿಸುತ್ತಾನೆ. ಅಲ್ಲಿ ಒಮ್ಮೆ ಬೊವಾರಿ ದಂಪತಿಗಳನ್ನು ಪಾರ್ಟಿಗೆ ಆಹ್ವಾನಿಸುತ್ತಾನೆ ಒಮೇ. ಆ ಪಾರ್ಟಿಯಲ್ಲಿ ಎಮ್ಮ ಬೊವಾರಿಗೆ ಲಿಯಾನ್ ದುಪ್ವಿ ಎಂಬ ಯುವಕನ ಪರಿಚಯವಾಗುತ್ತದೆ. ಶ್ರೀಮಂತಿಕೆಯ ಕನಸು ಕಾಣುತ್ತಿದ್ದ ಎಮ್ಮಳಿಗೆ ಆತನ ಸಾಂಗತ್ಯ, ಹಾವಭಾವ, ಮಾತು, ಮೌನಗಳು ತುಂಬಾ ಇಷ್ಟವಾಗುತ್ತವೆ. ಅವಳಿಗೆ ತಾನು ಮದುವೆಯಾದ ಹೆಣ್ಣು ಅನ್ನುವ ಮಾನಸಿಕ ಪರಿಧಿಯಿದ್ದರೂ ಅದನ್ನು ಮೀರಿ ಕನಸುಗಳ ನಾಗಲೋಟ ಸಾಗುತ್ತದೆ. ಎಮ್ಮಳ ಪ್ರೀತಿಗೆ ಲಿಯಾನ್ ಕೂಡ ಬಿದ್ದಿರುತ್ತಾನೆ. ಅವಳ ಬಗೆಗಿರುವ ತನ್ನ ಪ್ರೀತಿಯನ್ನು ತೆರೆದಿಡುವ ಹಂಬಲವಿದ್ದರೂ ತೋರಿಸಿಕೊಳ್ಳಲಾರದೆ ಅಸಹಾಯಕನಾಗುತ್ತಾನೆ.

ಎತನ್ಮಧ್ಯೆ ಎಮ್ಮ ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಆ ಮಗು ಅವಳಿಗೆ ಕುರೂಪಿಯಾಗಿ ಕಾಣುತ್ತದೆ. ತನ್ನ ಸೌಂದರ್ಯದ ಎದುರು ಮಗುವನ್ನು ದೂರ ತಳ್ಳುವ ನಿರ್ಧಯಿ ತಾಯಿಯಾಗುತ್ತಾಳೆ. ತನಗೆ ಇದುವರೆಗೂ ಇದ್ದೇ ಇರುವ ನಿಸ್ಸಾಯಕತೆಗೆ ಅವಳಲ್ಲಿ ಗಂಡು ಮಗುವೇ ಬೇಕೆನ್ನುವ ಹಂಬಲ. ಗಂಡಾದರೆ ದೇಶಾಂತರಗಳ ಮತ್ತು ಎಲ್ಲಾ ಭಾವನೆಗಳ ಶೋಧಕ್ಕೂ ಕೈ ಹಾಕಬಲ್ಲನೆಂಬ ಆಶಯವಿರುತ್ತದೆ. ಆದರೆ ಹೆಣ್ಣು ಹೆಜ್ಜೆ ಹೆಜ್ಜೆಗೂ ಹಿಮ್ಮೆಟ್ಟಬೇಕು. ದೈಹಿಕ ದುರ್ಬಲತೆ, ಕಾನೂನಿಗನುಗುಣವಾಗಿ ಅಧೀನತೆ, ಸಂಪ್ರದಾಯಿಕ ನಿರ್ಬಂಧ ಇವೆಲ್ಲದರ ಬಂಧಿಯಾಗಿಯೇ ಉಳಿಯಬೇಕಾದಿತ್ತೆನ್ನುವ ಭಯವೂ ಇರುತ್ತದೆ.

ಹಾಗೆ ಸುಖದ ಬೆನ್ನು ಹತ್ತಿ ಹೊರಟ ಅವಳಿಗೆ ಲಿಯಾನ್ ಆತ್ಮೀಯನಾಗುತ್ತಾನೆ. ಚಾರ್ಲ್ಸನಲ್ಲಿಲ್ಲದ ಗುಣಗಳನ್ನು, ಬಯಕೆಗಳನ್ನು ಲಿಯಾನ್ ತನ್ನ ಪ್ರೇಮಿ ಎಂಬ ಭ್ರಮೆಯಲ್ಲಿ ಕಂಡುಕೊಳ್ಳುತ್ತಾಳೆ. ಅವನಿಗೆ ಉಡುಗೊರೆಗಳನ್ನು ನೀಡುತ್ತಾಳೆ. ಆದರೂ ತನ್ನ ಉದ್ದುದ್ದ ಭಾವನೆಗಳನ್ನು ಅದುಮಿಟ್ಟು ಸಚ್ಚರಿತ್ರಳೆಂದುಕೊಳ್ಳುವ ಹೆಮ್ಮೆಯೂ ಅವಳೀಗೆ ಬೇಕು. ಹೀಗೆ ತನ್ನ ಗಂಡನನ್ನು ಮಗುವನು ನಿರ್ಲಕ್ಷಿಸಿದ ಅವಳು ಲಿಯಾನ್ನಂತೆಯೇ ಮೂವತ್ತು ವರ್ಷ ವಯಸ್ಸಾದರೂ, ಮದುವೆಯಿಲ್ಲದ ಒಳ್ಳೆಯ ವರಮಾನವಿರುವ, ಗಟ್ಟಿ ಹೃದಯದ, ಚತುರ ಮನುಷ್ಯ ರುದೊಲ್ಪ್ನ ತೆಕ್ಕೆಗೆ ಜಾರುತ್ತಾಳೆ. ಹಸಿದ ರುದೊಲ್ಪ್ಗೆ ಹೆಣ್ಣೆಂದರೆ ಮೋಜು ಮಾತ್ರ. ಅದನ್ನು ತಿಳಿಯದ ಎಮ್ಮ ಅವನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅವನ ಸುಖದ ರುಚಿಕೊಂಡ ಅವಳು ಅವನಿಲ್ಲದೆ ಬದುಕೇ ಇಲ್ಲವೆನ್ನುವವರೆಗೂ ಬರುತ್ತಾಳೆ. ಆದರೆ ರುದೊಲ್ಫ್ ಹೆಣ್ಣಿಗ. ನಿಂತ ನೀರಾಗಲಾರ. ಎಮ್ಮಳನ್ನು ದೂರವಿಡುತ್ತಾನೆ. ಇದನ್ನು ಅರಿತ ಎಮ್ಮ ತಾನು ಆವನಿಗೆ ಒಲಿದುದ್ದಕ್ಕಾಗಿ ಪಶ್ಚಾತ್ತಾಪವಿದೆಯೇ ಅಥವಾ ಅವನನ್ನು ಇನ್ನಷ್ಟು ಪ್ರೀತಿಸಬೇಕೆ ಎಂಬ ಜಿಜ್ನಾಸೆಗೆ ಬೀಳುತ್ತಾಳೆ. ಪ್ರೇಮ, ಪ್ರಣಯ ಎನ್ನುವ ಸರಳ ಪ್ರಮೇಯದಲ್ಲಿ ಗೊಂದಲವೆಲ್ಲ ಏಕೆ? ಅನ್ನುವ ರೂದೊಲ್ಫ್ ಕೇವಲ ಅವಳನ್ನು ಒಲಿಸಿಕೊಳ್ಳಲು ಪತ್ರ ಬರೆದಿದ್ದ ಮತ್ತು ಅದು ಹೃದಯದಿಂದ ಅಲ್ಲ. ಸತ್ಯದ ಅರಿವಾಗಿ ಅವಳಲ್ಲಿಯ ಕಾವು, ಕನಸುಗಳೆಲ್ಲಾ ಮುರಿದು ಬಿದ್ದು ಹತಾಶಳಾಗುತ್ತಾಳೆ.

ಎಮ್ಮ ಮತ್ತೆ ಭ್ರಂಗದ ಬೆನ್ನೇರಿ ಸಾಗುತ್ತಾಳೆ. ಲಿಯಾನ್ ಅವಳಿಗಾಗಿ ಕಾದಿರುತ್ತಾನೆ. ತನ್ನ ಬಾಲ್ಯದ ನೆನಪುಗಳನ್ನು ಕೆದಕಿಕೊಂಡು ತಾನು ಕಟ್ಟಿದ ಗೋಪುರವನ್ನು ಇನ್ನಷ್ಟು ಜೀವಂತವಾಗಿಸುತ್ತಾಳೆ. ‘ನಿನ್ನ ಎಲ್ಲಾ ಪ್ರೇಮಿಗಳನ್ನು ತೊರೆದು ನನ್ನಲಿಯೇ ಅನುರಕ್ತನಾಗು’ ಎಂದು ಲಿಯಾನ್ನನ್ನು ಕಾಡುತ್ತಾಳೆ. ಅವಳಿಂದ ಸುಖ ಉಂಡ ಲಿಯಾನ್ ಕೊನೆಗೂ ನಮ್ಮಿಬ್ಬರ ಸಂಬಂಧ ಬಿರುಕು ಬಿಡುವಂತೆ ಏನಾದರೊಂದು ಘಟಿಸಬಾರೆದೆ? ಎಂದು ಹಲುಬುತ್ತಾನೆ.

ಎಮ್ಮ ಪ್ರತಿ ಗುರುವಾರವೂ ಲಿಯಾನ್ಗಾಗಿ ಹೋಟೇಲ್ನಲ್ಲಿ ಉಳಿದು ಅವನಿಂದ ಸುಖ ಅನುಭವಿಸುತ್ತಾಳಾದರೂ ತನ್ನ ಖರ್ಚಿನಿಂದಲೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಸಾಲ ಪತ್ರಗಳ ಮೊರೆ ಹೋದವಳು ಸಾಲದ ಹೊರೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಸಾಲದ ಮೇಲೆ ಸಾಲ ಏರಿ ಜೀವನ ಪರ್ಯಂತ ಅದು ಮುಗಿಯುವುದಿಲ್ಲ ಅನ್ನುವ ಹೊತ್ತಿಗೆ ಮನೆಯ ಸಾಮಾನುಗಳೆಲ್ಲಾ ಹರಾಜಗುವ ಸ್ಥಿತಿ ತಲುಪುತ್ತದೆ. ತನ್ನ ಇಬ್ಬರೂ ಪ್ರೇಮಿಗಳ ನಡುವೆ ಹಾದರ ನಡೆಸಿದ ಅವಳು ಹಣಕ್ಕಾಗಿವರ ಮುಂದೆ ಕೈ ಚಾಚುತ್ತಾಳೆ.

‘ಪ್ರೇಮದ ಮೇಲೆ ಬೀಸುವ ಶೀತ ಮಾರುತಗಳಲ್ಲಿ ಅತಿ ಶೀತಲ ಕೊರತೆ ಬರುವುದೆಂದರೆ ಹಣ ಬೇಡಿದಾಗ. ಅದು ಬೇರನ್ನು ಕಿತ್ತೆಸೆಯುತ್ತದೆ’ ಅನ್ನುವ ಸತ್ಯ ಗೋಚರಿಸುತ್ತದೆ.

ಮರೀಚಿಕೆಯ ಬೆನ್ನು ಹಿಡಿದವಳು ಕೊನೆಗೆ ಬದುಕು ಇಷ್ಟೆ ಅನ್ನುವ ಅತೃಪ್ತಿಯಲ್ಲಿ ವಿಷ ಸೇವಿಸಿ ಬದುಕಿಗೆ ವಿದಾಯ ಹೇಳುತ್ತಾಳೆ. ಆ ಸಮಯದಲ್ಲಿ ಚಾರ್ಲ್ಸ್ನೇ ಎಲ್ಲವೂ ಆಗಿ, ತನ್ನ ಹೆತ್ತ ಕುಡಿಯನ್ನು ನೋಡಲು ಇಚ್ಛೆ ಪಡುತ್ತಾಳೆ. ಅವಳು ಉಳಿಸಿದ ಸಾಲದ ಶೂಲದಲ್ಲಿ ಸಿಲುಕಿ ಅವನೂ ಸಾಯುತ್ತಾನೆ. ಮುಂದೆ ಮಗಳು ಬರ್ಥ ಅಜ್ಜಿಯ ಊರಿಗೆ ಹೋದರೂ, ಒಂದು ಜವಳಿ ಕಾರ್ಖಾನೆಯಲ್ಲಿ ಕೂಲಿ ಹೆಣ್ಣಾಗಿ ಕೆಲಸ ಮಾಡುತ್ತಾಳೆ.

ಕಾದಂಬರಿಯ ಪೂರ್ವಾರ್ಧ ನಿಧಾನಗತಿಯಲ್ಲಿ ಸಾಗಿದರೂ ಉತ್ತರಾರ್ಧ ಲವಲವಿಕೆಯಂದ ಮತ್ತು ಕಾವ್ಯಾತ್ಮಕವಾಗಿ, ಸುಂದರ ಪದಗಳ ಜೋಡಣೆಯಿಂದ ಹೆಚ್ಚು ಕುತೂಹಲಕರವಾದ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ.

‘ಮದಾಂ ಬೊವಾರಿ’ ಒಮ್ಮೆ ಓದಲೇ ಬೇಕಾದ ಕೃತಿ. ಇದನ್ನು ಅನುವಾದಿಸಿದ ವಿ. ನಾಗರಾಜ ರಾವ್ ಅವರ ಪ್ರಯತ್ನವನ್ನು ಹೊಗಳಲೇಬೇಕು. ಈ ಪುಸ್ತಕವನ್ನು ಪ್ರಕಟಿಸುವವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು - 2

Read more!

Saturday, January 23, 2010

ಸಮಾಜಕ್ಕೆ ಹಿಡಿದ ‘ಕನ್ನಡಿ’


ಈ ಹಿಂದೆ ‘ಯಾನ’ ಕಥಾಸಂಕಲನದ ಮೂಲಕ ಹೊಸ ಕಥೆಗಳನ್ನು ಸೃಷ್ಟಿಸಿದ ಸೃಜನಶೀಲ ಕಥೆಗಾರ ಪ್ರೇಮಶೇಖರರ ಮತ್ತೊಂದು ಕಥಾಸಂಕಲನ ‘ಕನ್ನಡಿ’. ಪತ್ತೆದಾರಿ, ಫ್ಯಾಂಟಸಿಯ ಮೂಲಕ ಕಥೆಯನ್ನು ನಿರೂಪಿಸುವ ಅವರು ಕನ್ನಡಿಯಲ್ಲಿ ತೀರ ಹೊಸತೆನ್ನಬಹುದಾದ ಮತ್ತು ಸಮಾಜದ ಎಲ್ಲಾ ಸ್ತರಗಳ ಕಗ್ಗಂಟು, ವ್ಯಭಿಚಾರ, ಮೋಸ ಮುಂತಾದವುಗಳಿಗೆ ‘ಕನ್ನಡಿ’ ಹಿಡಿದಿರುವುದು ಅವರ ಸಾಹಿತ್ಯ ಕೃಷಿಯ ಒಳ್ಳೆಯ ಪ್ರಯತ್ನವಾಗಿದೆ.

‘ಕನ್ನಡಿ’ ಕಥಾಸಂಕಲನದಲ್ಲಿ ಹತ್ತು ಕಥೆಗಳಿದ್ದು ಒಂದೊಂದು ಕಥೆಯು ಸಮಾಜದ ಆಗುಹೋಗುಗಳನ್ನು ಕೂಲಂಕಷವಾಗಿ ಬಿಚ್ಚಿಡುತ್ತ ಹೋಗುತ್ತವೆ."


‘ಕನ್ನಡಿ’ ಕಥೆಯಲ್ಲಿ ಅನಿವಾರ್ಯ ಕಾರಣಗಳಿಗೆ ಕಸಾಯಿಖಾನೆಯನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿ, ಅಲ್ಲಿ ಕುರಿಗಳನ್ನು ಕಡಿಯುವ ವಿಧಾನದ ಬಗ್ಗೆ ಆಕ್ಷೇಪವೆತ್ತುವ ನಾಯಕ ಹೃದಯತಹ ಕಟುಕನಲ್ಲ. ಅವುಗಳನ್ನು ಮಾಂಸಕ್ಕಾಗಿ ಸಾಯಿಸುವ ರೀತಿಯಲ್ಲಿ ಅವುಗಳು ಪಡುವ ಯಾತನೆಯನ್ನು ಗಮನಿಸಿ, ಒಂದೆ ಏಟಿಗೆ ಸಾಯಿಸಲು ಸೂಚಿಸುತ್ತಾನೆ. ಆದರೆ ಒಂದೇ ಏಟಿಗೆ ಅವುಗಳನ್ನು ಸಾಯಿಸುವುದರಿಂದ ಅನುಭವಿಸುವ ನೋವು ಹೆಚ್ಚು ಅನ್ನುವುದನ್ನು ಲೇಖಕರು ವೈಜ್ಞಾನಿಕ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುವುದು ಮನಸ್ಸಿಗೆ ಸಮಾಧಾನ ನೀಡುತ್ತದೆ. ಕಥೆ ಓದಿ ಮುಗಿಸಿದರೂ ಕಸಾಯಿಖಾನೆಯ ರೌದ್ರತೆ ಓದುಗನನ್ನು ಕಾಡುತ್ತಲೇ ಇರುತ್ತದೆ.

ಅಲೆಮಾರಿಗಳ ಬದುಕು ಮತ್ತು ಇಂದಿನ ಸಾಮಾಜಿಕ ಸಮಸ್ಯೆಯಾದ ‘ಭಯೋತ್ಪಾದನೆಯ ಭೀತಿಯನ್ನು ಬಿಂಬಿಸುವ ಕಥೆ ‘ಗಾಯ’. ಮನೆಯ ಎದುರು ಬಂದ ಅಲೆಮಾರಿಗಳ ದಿಂಡು ಖಾಲಿ ಜಾಗದಲ್ಲಿ ಪಿರಮಿಡ್ಡಿನಂತೆ ಮನೆಯನ್ನು ನಿರ್ಮಿಸಿ ಊಹಾ ಪೋಹಗಳಿಗೆ ಎಡೆಯಾಗುವುದು ಚೆನ್ನಾಗಿ ನಿರೂಪಿತವಾಗಿದೆ. ಅಪರಿಚಿತರ ಬಗ್ಗೆ ಅನುಮಾನ ಪಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ನೆರೆಕರೆಯವರೆಲ್ಲಾ ಒಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಥೆಯ ಉತ್ತರಾರ್ಧ ಪ್ಯಾಂಟಸಿಯಲ್ಲಿ ಕೊನೆಯಾಗುವುದು ತುಸು ಗೊಂದಲವೆನಿಸಿದರೂ ಒಳ್ಳೆಯ ಕಥೆ ‘ಗಾಯ’

‘ಸೆಕ್ಯೂಲಿರಿಸಂ’ ಅನ್ನು ವಿಢಂಬನಾತ್ಮಕವಾಗಿ ನಿರೂಪಿಸುವ ಹಾಗೂ ಸರಕಾರ ಮತ್ತು ಧಾರ್ಮಿಕ ಬಂಡುಕೋರರ ನಡುವಿನ ಕದನವಿರಾಮದ ನಂತರದ ಏಳಿಗೆಯ ಕಥೆ ‘ಮುಖಾಮುಖಿ’. ರಾಜಕೀಯದ ಅಧಿಕಾರವಿರುವಾಗ ಜನಪ್ರತಿನಿಧಿಗಳು ಪ್ರಜೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಮನೋಜ್ಞವಾಗಿ ತೆರೆದಿಡುವ ಕಥೆಯಿದು. ‘ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು’ ಕಥೆಯಲ್ಲಿ ಅಭಿವೃದ್ಧಿಯಿಂದ ಕೆಡುಕಾಗಿ ಮತ್ತೆ ಅಭಿವೃದ್ಧಿಯನ್ನೇ ಬಯಸದ ಜನ, ವಿಚಾರವಾದಿ ಸಂಘಟನೆಯ ಎದುರು ನಿಲ್ಲುತ್ತಾರೆ. ಈ ಕಥೆ ಅಭಿವೃದ್ಧಿಯ ಹೆಸರಲ್ಲಿ ನಡೆಯುವ ಆಧ್ವಾನಗಳನ್ನು ಚಿತ್ರಿಸುತ್ತದೆ.
ಸಮಾಜದಲ್ಲಿ ಏನನ್ನು ಬಯಸದ ಮತ್ತು ತನ್ನಷ್ಟಕ್ಕೆ ತಾನಿರುವ ವ್ಯಕ್ತಿ ನಾಗಲಿಂಗಂನ ಹೊಸ ಸಂಬಂಧದ ಕಥೆಯಾಗಿ ಮೂಡಿರುವ ಕಥೆ ‘ಅರ್ಥ’. ಪ್ರೊ. ಸಂಗೊಟೈಯವರ ಮಾತಿನಂತೆ ಅವನನ್ನು ವಿಚಾರಿಸುವ ಕಥಾನಾಯಕನಿಗೆ ಮಾತಾಡಲು ಅವಕಾಶ ನೀಡದ ನಾಗಲಿಂಗಂ ತನ್ನ ಹೆಂಡತಿಯ ಸಾವಿಗೆ ಪರೋಕ್ಷವಾಗಿ ಕಾರಣನಾಗುತ್ತಾನೆ. ಮುಂದೆ ಅವನು ಅರೆಸ್ಟ್ ಆಗಿ ಬಿಡುಗಡೆಯಾದರೂ ತನ್ನ ಹೆಂಡತಿಯನ್ನು ಕೊಲೆ ಮಾಡದೆ ಅವಳಾಗಿಯೇ ದೂರವಾಗುವಂತೆ ಮಾಡಿದ ಅವನ ಚಾಣಾಕ್ಷ ಬುದ್ಧಿಗೆ ಬೆರಗಾಗುತ್ತಾನೆ ನಿರೂಪಕ. ಮಗಳ ಸಾವಿನ ಬಗ್ಗೆ ದೂರು ಕೊಟ್ಟ ಅತ್ತೆಯೇ ದೂರನ್ನು ವಾಪಾಸು ತೆಗೆದುಕೊಂಡು ಕೇಸ್ ಅಲ್ಲಿಗೆ ಮುಚ್ಚಿ ಹೋಗುತ್ತದೆ.

ಬಾಲ್ಯ ಸಖ್ಯದ ಇತಿಮಿತಿಗಳಿಗೊಂದು ಪರಿಶುದ್ಧ ಮನಸುಗಳೆರಡರ ವ್ಯಾಪ್ತಿಯೊಳಗೆ ಸುಂದರವಾಗಿ ಕಟ್ಟಿದ ಕಥೆ ‘ಈ ಕಥೆಗಳಿಗೇಕೆ ಆದಿ ಅಂತ್ಯಗಳಿಲ್ಲ?’ ಏನೋ ನಿರೀಕ್ಷಿಸುವ ಹೊತ್ತಿಗೆ ಏನೂ ನಡೆಯದೆ; ಏನೊ ಆಗದೆನ್ನುವಾಗ ಏನೋ ಘಟಿಸಿ, ನಾವೇ ಆ ಪಾತ್ರಗಳಾಗಿ ಹೋಗುವಷ್ಟು ಮನಸ್ಸನ್ನು ಆವರಿಸುವ ಕಥೆಯಿದು. ಇದೇ ಸಂಕಲನದ ಪ್ಲಸ್ ಪಾಯಿಂಟ್ ಆಗಿರುವ ಈ ಕಥೆ ನಮ್ಮದಲ್ಲದ ಹಾದಿಯಲ್ಲಿ ಬಹುದೂರ ನೆನಪಾಗಿ ಸಾಗುವ ಕಥೆ.

ಈ ಸಂಕಲನದ ಇನ್ನೊಂದು ಉತ್ತಮ ಕಥೆ ‘ಕ್ರೌರ್ಯ’ ಅಸಹಾಯಕ ಮಹಿಳೆಯೊಬ್ಬಳನ್ನು ಅಮಾನುಷವಾಗಿ ಬಳಸಿಕೊಳ್ಳುವ ನೀತಿ ಗೆಟ್ಟ ಯುವಕರು, ಸಮಾಜ ಎತ್ತ ಸಾಗಿದೆ ಅನ್ನುವುದನ್ನು ತಿಳಿಸಿದರೆ, ಇಂತಹ ಅವಮಾನವೀಯ ಸ್ಥಿತಿಯಲ್ಲಿ ದೂರ ನಿಂತು ಪೌರುಷ ತೋರುವ ಇನ್ನೊಬ್ಬ ಯುವಕ, ತನ್ನ ಹೊಟ್ಟೆ ತುಂಬಿಸುವ ವಾಹನವನ್ನೇ ಬಿಟ್ಟು ಓಡುವ ಡ್ರೈವರ್ ಮತ್ತು ಇಡೀ ಪರಿಸ್ಥಿತಿಯನ್ನು ಪ್ರತಿಭಟಿಸುವ ವಯಸ್ಕನ ಪಾತ್ರ ಚಿತ್ರಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಆ ಕೃತ್ಯದ ಬಗ್ಗೆ ಡಿಟೈಲ್ಡ್ ರೀಪೋರ್ಟ್ ತಯಾರಿಸುವುದಕ್ಕೆ ಮಹಿಳೆಯ ಅಸಹಾಯಕ ಪರಿಸ್ಥಿತಿಯ ಚಿತ್ರಗಳನ್ನು ತೆಗೆಯಲು ಮುಂದಾಗುತ್ತಾನೆ ಯುವಕ. ಅಂತಹ ಪರಿಸ್ಥಿತಿಯಲ್ಲಿ ವೃದ್ಧನ ಮಾತುಗಳು ಮತ್ತು ಸಾಂತ್ವನ ಆ ಮಹಿಳೆಗೆ ಮಾತ್ರವಲ್ಲ ಓದುಗನಿಗೂ ‘ಕೊನೆಗೂ ಸಹಾಯಕ್ಕೆ ಒಬ್ಬನಿದ್ದಾನಲ್ಲಾ?’ ಅನ್ನುವ ಸಮಾಧಾನವನ್ನು ನೀಡುತ್ತದೆ.

ಫ್ಯಾಂಟಿಸಿಯ ಲೋಕಕ್ಕೆ ಎಳೆದೊಯ್ಯುವ ‘ಉಗಮ’ ಮತ್ತು ‘ಹುತ್ತ್ತ’ ಕಥೆಯಲ್ಲಿ ಬರುವ ಪ್ರೊಪೆಸರ್ ಮತ್ತು ಬಾಲ್ಕನಿಯ ಒಂಟಿತನದ ಭಾವೊದ್ವೇಗವನ್ನು ಬಹಳ ಹಾಸ್ಯಮಯವಾಗಿ ನಿರೂಪಿಸುವ ಕಥೆ. ಮುಖದಲ್ಲೊಂದಿಷ್ಟು ಮಂದಹಾಸವನ್ನು ಮೂಡಿಸಬಲ್ಲ ಕಥೆ ಇದು.

ಹಾಸ್ಯದಿಂದ ಆರಂಭವಾಗಿ ಬದುಕಿನ ಕಹಿ ಸತ್ಯವನ್ನು ಬಿಚ್ಚಿಡುವ ಕಥೆ ‘ಮೂಡಲ ಸೀಮೆಯ ಮುಸ್ಸಂಜೆ ಸೊಲ್ಲು’ ತನ್ನ ಸ್ವಂತ ಅಕ್ಕನೆಂದು ಭ್ರಮಿಸಿದವನು ಆಕೆ ತನ್ನ ತಾಯಿಯೆನ್ನುವ ನಿಗೂಢತೆಯನ್ನು ಬಿಚ್ಚಿಡುವಾಗಿನ ಆನಂದ ಕೇವಲ ಹುಡುಗನದಲ್ಲ, ಓದುಗರದ್ದೂ.

ಪ್ರೇಮಶೇಖರ ಅವರ ‘ಕನ್ನಡಿ’ ಓದುಗರನ್ನು ಪ್ರತಿಫಲಿಸುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕವನ್ನು ಹೊರತಂದಿರುವವರು ‘ವಿಸ್ಮಯ ಪ್ರಕಾಶನ’ ‘ಮೌನ’ 366, ನವಿಲು ರಸ್ತೆ, ಎ-ಬಿ ಬ್ಲಾಕ್, ಕುವೆಂಪುನಗರ, ಮೈಸೂರು - 570 023 ಇವರು.

Read more!

Wednesday, January 13, 2010

ಪರಿಸರ ಸಂರಕ್ಷಣೆಯ ಮಾರ್ದನಿ - ಪರಿಸರದ ಮರುದನಿಗಳು


ಪರಿಸರದ ಬಗ್ಗೆ ಅದೆಷ್ಟೊ ಕಥೆ ಕಾದಂಬರಿ ಲೇಖನ ಮಾಲೆಗಳನ್ನು ಓದುತ್ತಿದ್ದೆನಾದರೂ ಸಂಪೂರ್ಣವಾಗಿ ನಮ್ಮ ಪರಿಸರ ಜಾಗ್ರತಿಯ ಬಗ್ಗೆ, ಬದಲಾಗುತ್ತಿರುವ ಪರಿಸರದ ಬಗ್ಗೆ ಮಾರ್ದನಿಸುತ್ತಿರುವ ಎಚ್ಚರಿಕೆಯ ಫಂಟಾ ಘೋಷಗಳನ್ನು ತಿಳಿದುಕೊಳ್ಳುತ್ತಾ, ನಮ್ಮ ಒಳಗೂ ಒಬ್ಬ ಪರಿಸರ ಪ್ರೇಮಿ ಹುಟ್ಟಿಕೊಳ್ಳುತ್ತಾ, ಅದರ ಸಂರಕ್ಷಣೆಯ ಬಗ್ಗೆ ಕಿಂಚಿತ್ತು ಅಲೋಚನೆಯನ್ನು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಈ ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆಗಳು ನನ್ನನ್ನು ಬಹಳವಾಗಿ ಆಕರ್ಷಿಸಿದ್ದವು, ಮಾತ್ರವಲ್ಲ ಅವರ ಕಥೆಗಳಲ್ಲಿರುವ ನೈಜ್ಯ ಚಿತ್ರಣ, ಪರಿಸರದ ಕಾಳಜಿ, ಪರಿಸರದಲ್ಲಿ ಒಂದಾಗಿ ಹೋಗುವ ಪಾತ್ರ ಚಿತ್ರಣಗಳು ಕಣ್ಣ ಮುಂದೆ ನೈಜತೆಯೆಂಬಂತೆ ದೃಗೋಚರಿಸುತ್ತದೆ. ಪಾತ್ರಗಳ ನೋವು, ಹತಾಶೆಗಳು ಕೊನೆಗೆ ನಮ್ಮಲ್ಲೇ ಉಳಿದು ಬದುಕಿನ ಇಡೀ ಹತಾಶೆಯನ್ನು ಬಿಚ್ಚಿಟ್ಟು ತಲೆಯೊಳಗೆ ಕೊರೆಯುತ್ತಲೇ ಇರುತ್ತವೆ."

ಹೇಗೆ ಪರಿಸರವನ್ನು, ಪರಿಸರದ ಸುತ್ತಾ ನಡೆಯುವ ಮಾನವ ನಿರ್ಮಿತ ವ್ಯವಸ್ಥೆಯೊಳಗೆ ಅದು ನಾಶವಾಗುತ್ತ ಒಂದೊಮ್ಮೆ ‘ಇಲ್ಲ’ವಾಗುವ ಮತ್ತು ‘ಇದ್ದವೆಂಬ’ ಅಂತೆ ಕಂತೆಗಳ ನಡುವೆ ಸುದ್ದಿಯಾಗಬಹುದಾದ ಈ ಪರಿಸರದ ಕಥೆಗಳನ್ನು ಹುಡುಕುತ್ತಿರುವಾಗ ಲೇಖಕ ‘ಶಶಿಧರ ವಿಶ್ವಾಮಿತ್ರ’ ಅವರ ‘ಪರಿಸರದ ಮರುದನಿಗಳು’ ನನ್ನ ಕಣ್ಣಿಗೆ ಬಿತ್ತು. ಕೇವಲ ಕಥೆಯಾಗಿ ಉಳಿಯದೆ ಪರಿಸರ ಜಾಗೃತಿಯ ಅಭಿಯಾನ ರೂಪಿಸುವಲ್ಲಿ ಒಂದು ಪ್ರಯತ್ನವಾಗಬಲ್ಲ ಈ ಸಂಕಲನದಲ್ಲಿ ಸುಮಾರು 8 ಕಥೆಗಳು ಹಾಗೂ 2 ನಿಳ್ಗತೆಗಳು ಇವೆ.

ಪ್ರಾಣಿ, ಪಕ್ಷಿ ಸಂಕುಲದ ಅವನತಿ ಮಾನವ ನಿರ್ಮಿತ ಸಮಾಜದಲ್ಲಿ ಹೇಗೆ ಸಂಭವಿಸುತ್ತದೆಯೆನ್ನುವುದನ್ನು ಇಲ್ಲಿಯ ಕಥೆಗಳು ಸ್ಪಷ್ಟವಾಗಿ ತಿಳಿಸುತ್ತವೆ. ಗುಬ್ಬಚ್ಚಿಯಂತಹ ಹಕ್ಕಿಗಳು ಮೊಬೈಲ್ ಹೊರಸೂಸುವ ವಿಕಿರಣಗಳಿಗೆ ಸಿಲುಕಿ ಮತ್ತು ಮಾದ್ಯಮಗಳ ಭರಾಟೆಯಲ್ಲಿ ಅಪರೂಪವಾಗಿರುವಂತಹ ಸನ್ನಿವೇಶಗಳಂತೆ ಇಲ್ಲಿಯ ಕಥೆಗಳಲ್ಲಿ ನರಿ, ಹಾವು, ಗೀಜಗ, ಕಾಗೆ, ಚಿರತೆಗಳ ಸಂತತಿ ಹೇಗೆ ಅಳಿಯುತ್ತದೆ ಎನ್ನುವುದನ್ನು ಮನ ಮುಟ್ಟುವ ರೀತಿಯಲ್ಲಿ ನಿರೂಪಿಸಲಾಗಿದೆ.

ಮೇಲ್ನೋಟಕ್ಕೆ ಇಲ್ಲಿಯ ಕಥೆಗಳು ಮಕ್ಕಳ ಕಥೆಗಳಂತೆ ಕಂಡರೂ ಅದರಲ್ಲಿರುವ ಕಾಳಜಿ ಮಹತ್ವವಾದವು. ಪ್ರತಿಯೊಂದು ಪ್ರಾಣಿ ಪಕ್ಷಿಯ ಸ್ವಾತಂತ್ರ್ಯಕ್ಕೆ ಮನುಷ್ಯ ಹೇಗೆ ಅಡ್ಡಗಾಲಾಗುತ್ತಾನೆ ಮತ್ತು ಅವುಗಳನ್ನು ಯಾವ ರೀತಿಯಲ್ಲಿ ತನ್ನ ಸ್ವಾರ್ಥಕ್ಕಾಗಿ ನಡೆಸಿಕೊಳ್ಳುತ್ತಾನೆ ಎನ್ನುವುದನ್ನು ಅಧ್ಯಯನ ಮಾಡಿ ಬರೆದಂತೆ ಬಹಳ ಸುಂದರವಾಗಿ ಲೇಖಕರು ಬರೆದಿದ್ದಾರೆ.

ಕೇವಲ ಪ್ರಾಣಿ, ಪಕ್ಷಿ, ಜೀವ ಜಂತುಗಳ ಬಗ್ಗೆ ಮಾತ್ರವಲ್ಲ ಪರಿಸರ ಪ್ರಜ್ಞೆಯಲ್ಲಿ ಮೂಡುವ ಕಾಡು, ನದಿ, ಹಳ್ಳ, ತೊರೆ,ಜಲಪಾತ, ಸಸ್ಯರಾಶಿ, ಸಕಲ ಜೀವ ಸಂಕುಲಗಳ ಬಗ್ಗೆ ಪ್ರೀತಿ ಹುಟ್ಟಿಸುವ ವಿವರಗಳು, ನಾವೇ ಆ ಪರಿಸರದಲ್ಲಿದ್ದೇವೆ ಅನ್ನುವ ಭ್ರಮೆಯನ್ನು ಹುಟ್ಟಿಸುತ್ತದೆ.

‘ಕಡೆಯ ಚಿರತೆ’ ನೀಳ್ಗತೆಯಲ್ಲಿ ಒಂದು ಪಾತ್ರ. ಬೇಟೆಗಾರ ಮಾತ್ರ ಅಲ್ಲ ಬೇಟೆಗಾರರ ಗುರುವೂ ಆಗಿದ್ದೂ ಈಗ ಪರಿಸರದ ಸತ್ಯತೆ ತಿಳಿದ ಆತನ ಮಾತುಗಳು ನಮ್ಮಲ್ಲೂ ಒಂದಷ್ಟು ಪರಿಸರ ಪ್ರಜ್ಞೆಯನ್ನು ಹುಟ್ಟಿಸುತ್ತದೆ.

“ಕಾಡು ಎಂದರೇನು? ಮರಗಿಡಬಳ್ಳಿಗಳೇ? ಹುಲಿ, ಜಿಂಕೆ, ಸಿಂಹ ಇತ್ಯಾದಿ ಮೃಗಗಳೇ? ಮಲೆಗಳೇ? ಇಷ್ಟು ಮಾತ್ರ ಅಲ್ಲ ಎಂದು ನನ್ನ ಅನುಭವ ಸಾರುತ್ತಿದೆ. ಕಾಡೆಂದರೆ ವಾಸ್ತವವಾಗಿ ಮೈ ಬೀಸಿ ಹರಡಿರುವ ಬೆಟ್ಟ, ಗುಡ್ಡ, ಕಣಿವೆ, ಮೈದಾನಗಳಲ್ಲಿ, ತನ್ನಂತೆ ಮೈದಳೆದಿರುವ ಶಾಂತಿಯಲ್ಲಿ, ಮರ, ಗಿಡ, ಪ್ರಾಣಿಗಳು ಸ್ವೇಚ್ಛೆಯಿಂದ ಬಾಳುವ ಬಾಳು ಎನಿಸುತ್ತದೆ. ಹರ್ಷವನ್ನು ಬೀರುವ ಹರಿದ್ವನಗಳಲ್ಲಿ ನಡುರಾತ್ರಿ ಮಿಟುಕುವ ನಕ್ಷತ್ರಗಳ ಮಂದ ಬೆಳಕಿನಲ್ಲಿ ಆಕಾಶ ಹೊದ್ದು ಮಲಗಿರುವ ಕಾಡಿನ ಒಕ್ಕಡೆ ನೀವು ಮಿಸುಕದೆ ಹಾಯ ಕೂತರೆ, ಈಗ ನಾನು ಹೇಳುತ್ತಿರುವ ಶಾಂತಿಯ ಅರ್ಥವೇನು? ಬಾಳಿನ ಸಂಭ್ರಮಕ್ಕೆ ಶಾಂತಿ ಏಕೆ ಬೇಕು? ಎಂದು ಗೊತ್ತಾಗುತ್ತದೆ”

ಈ ಮೇಲಿನ ವಾಕ್ಯಗಳೇ ನಮ್ಮನ್ನು ಪರಿಸರ ಸಂಬಂಧಿ ಪ್ರದೇಶದೊಳಗೆ ಕರೆದೊಯ್ಯುವ ಅತೀತಾತೀತ ಶಕ್ತಿಯೆನಿಸುವುದರಿಂದಲೇ ಪರಿಸರದ ಮೇಲೆ ವ್ಯಾಮೋಹ ಹುಟ್ಟಿಸುತ್ತದೆ.

ಇಲ್ಲಿಯ ಬಹುತೇಕ ಕತೆಗಳು ದುರಂತದಲ್ಲಿಯೇ ಮುಗಿಯುವುದು, ತಿಳಿದೇ ತಿಳಿಯದೆಯೊ ಮನುಷ್ಯನ ಪ್ರಗತಿಯೆಂಬ ಸ್ವಾರ್ಥದಲ್ಲಿಯೇ ನಲುಗಿ ಹೋಗುವ ಜೀವಿಗಳ ದುರಂತಮಯ ಬದುಕು ಸ್ಪಷ್ಟವಾಗಿ ಚಿತ್ರಿತವಾಗಿದೆ. ತಾನು ತನ್ನ ಪರಿಸರವೆಂಬ ಅಭಿಮಾನ, ತನ್ನಂತೆಯೇ ಇತರ ಜೀವ ಜಂತುಗಳು ಬದುಕಲು ಅವಕಾಶ ಕಲ್ಪಿಸಬೇಕೆನ್ನುವ ಪ್ರಜ್ನೆ ಇರುವುದಾದರೆ ಅದೆಷ್ಟೊ ವ್ಯೆವಿದ್ಯಮಯ ಜೀವ ಜಂತನ್ನು ವಿನಾಶದಂಚಿನಿಂದ ತಪ್ಪಿಸಬಹುದು.

ಈ ಪರಿಸರ ಕಥಾ ಸಂಪದದ ನರಿಗಳು, ಗೌಜುಗಗಳ ಅಂಕ, ಗೃಧ್ರಸಂಸಾರ, ದಿಕ್ಕೆಟ್ಟ ಗಜಗಣ, ರೆಕ್ಕೆಮುರುಕ, ಅರಗಿಣಿಗಳ ಪ್ರಸಂಗ, ಮುಸವಗಳ ಜೋಡಿ, ಕಾಡುಬೆಕ್ಕಿನ ಮರಿ ಮತ್ತು ಒಂದಾನೆಯಿತ್ತು ಕಥೆಗಳೆಲ್ಲಾ ಮುಂದಿನ ಪೀಳಿಗೆಗೆ ಒಂದು ಅದ್ಭುತ ಕಥನಕವಾದರೂ ಹೆಚ್ಚಲ್ಲ. ಕಲುಷಿತವಾಗುತ್ತಿರುವ ಪರಿಸರ, ನಶಿಸುತ್ತಿರುವ ಜೀವ ಸಂಕುಲಗಳು ಇಂತಹ ಕಥನಕಗಳಲ್ಲಿಯೇ ಸಿಗುವ ದಿನ ದೂರವಿರಲಾರದು!

ಕಡೆಯ ಚಿರತೆ, ನೀಳ್ಗತೆಯ ಚಿರತೆಗಳ ಅವಸಾನ ಇವತ್ತು ಮಾಯವಾಗಿ ಕೇವಲ ಪ್ರಾಣಿ ಸಂಗ್ರಹಾಲಯದಲ್ಲಿ ನೋಡುವ ಮತ್ತು ಅಳಿವಿನಂಚಿನಲ್ಲಿರುವ ಹುಲಿ ಸಂತತಿಯ ಹಾಗೆ ಚಿರತೆಯ ಸಂತತಿಯೂ ಅಳಿಯುವಲ್ಲಿ ಸಂಶಯವಿಲ್ಲವೆನ್ನುವುದನ್ನು ಬಿಂಬಿಸುತ್ತದೆ. ಈ ಸಂಕಲನದ ಇನ್ನೊಂದು ನೀಳ್ಗತೆ ‘ಕಾಡೊಂದಿತ್ತಲ್ಲ’ ಕಣ್ಣ ಮುಂದೆ ಪ್ರಕೃತಿಯ ಸಮೃದ್ಧ ಚಿತ್ರವನ್ನು, ಕಾಡಿನ ವೈಭವನ್ನೂ ತೆರೆದಿಡುತ್ತದೆ.

ಇಂತಹ ಪರಿಸರದ ಮರುದನಿಗಳು ಸ್ವಲ್ಪ ಮಟ್ಟಿಗಾದರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೆಚ್ಚಿಸಿದರೆ ಅದೇ ಕಾಡು, ಅದೇ ಜೀವ ಸಂಕುಲಗಳು ಉಳಿದಾವೇನೊ?

ಈ ಪುಸ್ತಕವನ್ನು ಭಾಗ್ಯಲಕ್ಷ್ಮಿ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿದ್ದಾರೆ. ಇದರ ಬೆಲೆ ಕೇವಲ 150 ರೂಪಾಯಿಗಳು.

Read more!

Friday, December 18, 2009

ಬಣ್ಣದ ಚಿಟ್ಟೆಯ ರಂಗಿನ ಬದುಕಲ್ಲ ಈ ‘ಪ್ಯಾಪಿಲಾನ್’.


‘ಪ್ಯಾಪಿಲಾನ್’ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆಯವರ ಸಂಗ್ರಹಾನುವಾದದ ಕಾದಂಬರಿ. ಈ ಬೃಹತ್ ಕಾದಂಬರಿಯ ಮೂಲ ಲೇಖಕ ಹೆನ್ರಿ ಛಾರೇರೆ. ಈ ಕಾದಂಬರಿ ಎರಡು ಭಾಗಗಳಲ್ಲಿ ಪ್ರಕಟಗೊಂಡಿದೆ. ಇದೊಂದು ಸಾಹಸದ ಕಥೆಯಾದರೂ ಖೈದಿಯೊಬ್ಬನ ಪಲಾಯ್ನ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರೆಂಚ್ ಸರಕಾರದ ದುರವಸ್ಥೆ, ನ್ಯಾಯಾಂಗ ಮತ್ತು ನ್ಯಾಯಾಂಗ ವಿತರಣೆಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ.

ಇಲ್ಲಿ ಭೂಗತ ಜಗತ್ತಿನ ಅನಾವರಣವಿದ್ದರೂ ಅಪರಾಧಿಯಲ್ಲದ ಮನುಷ್ಯನೊಬ್ಬ ಸ್ವತಂತ್ರನಾಗಲು ಹೋರಾಡುವ ಮೈ ರೋಮಾಂಚನಗೊಳಿಸುವ ಸಾಹಸದ ಕಥೆಯೂ ಅಹುದು."

‘ಪ್ಯಾಪಿಲಾನ್’ ಅಂದರೆ ‘ಚಿಟ್ಟೆ’ (ತೆಳು ನೀಲಿ ರೆಕ್ಕೆಗಳ ಮೇಲೆ ಪುಟ್ಟ ಗೆರೆಗಳಿರುವ ಚಿಟ್ಟೆ) ಎಂಬ ಅರ್ಥವಿದ್ದರೂ ಇಲ್ಲಿಯ ನಿರಪರಾಧಿ ಖೈದಿ ಪ್ಯಾಪಿಯ ಬದುಕು ಚಿಟ್ಟೆಯಷ್ಟು ಸುಂದರ ಮತ್ತು ಸ್ವೇಚ್ಛೆಯಿಂದ ಕೂಡಿಲ್ಲ. ಹಲವು ಬಾರಿ ಬಂಧಿಖಾನೆಯಿಂದ ತಪ್ಪಿಸಿಕೊಂಡರೂ ಮತ್ತೆ ಮತ್ತೆ ಅಂತಹುದೇ ಕಾರಾಗೃಹಗಳಲ್ಲಿ ಕರಾಳ ದಿನಗಳನ್ನು ಕಳೆಯಬೇಕಾಗುತ್ತದೆ. ಯಾವುದೇ ಅಪರಾಧವೆಸಗದ ವ್ಯಕ್ತಿಯನ್ನು ಪೊಲೀಸರು, ಲಾಯರುಗಳು ಸೇರಿ ನಿಷ್ಕಾರುಣವಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತೆ ಮಾಡಿ ಅವನನ್ನು ಕತ್ತಲ ಕಾರಾಗೃಹವಿರುವ ದ್ವೀಪಕ್ಕೆ ಗಡಿಪಾರು ಮಾಡುತ್ತಾರೆ. ಭೂಮಿಯ ಮೇಲಿನ ನರಕವಾಗಿರುವ ಆ ದ್ವೀಪದಲ್ಲಿ ಎಲ್ಲರೂ ಅಧಿಕಾರಿಗಳೇ. ಯಾವ ಜನ್ಮದ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಅಲ್ಲಿ ಅಧಿಕಾರಿಗಳಾಗಿ ನಿಯುಕ್ತಿಯಾಗಿದ್ದಾರೋ, ಅಂತಹವರ ಕೈಯಲ್ಲಿ ಸಿಲುಕಿ ಬದುಕೇ ಮುಗಿಯಿತೇನೋ ಅನ್ನುವ ಹೊತ್ತಿಗೆ ಹೊಸ ಹೊಸ ಸಾಹಸಗಳನ್ನು ಮಾಡಲು ಮುಂದಾಗುತ್ತಾನೆ ಪ್ಯಾಪಿ. ಸಮಾನತೆ, ನ್ಯಾಯ, ಸ್ವಾತಂತ್ರ್ಯಕ್ಕೆ ಹೆಸರಾದ ಪ್ರೆಂಚ್ ಸರಕಾರದಲ್ಲಿಯೇ ಈ ರೀತಿಯ ಅವ್ಯವಸ್ಥೆಯನ್ನು ಕಣ್ಣ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ ಈ ಕಾದಂಬರಿ.

ಪ್ಯಾಪಿ ಕಾರಾಗೃಹ ಸೇರಿದ ಬಳಿಕ ಅಲ್ಲಿಯ ಖೈದಿಗಳ ಜೊತೆಗೆ ಸೇರಿ ಹಲವು ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ ಕ್ರೂರ ಕಾನೂನು ವ್ಯವಸ್ಥೆ ಮತ್ತು ಪೊಲೀಸರ ಎದುರು ತನ್ನ ಸಾಹಸಗಳೆಲ್ಲಾ ನಿರರ್ಥಕವಾಗುತ್ತದೆ. ಆದರೆ ಸೇಡು ತೀರಿಸಿಕೊಳ್ಳಲು ಕಾದಿರುವ ಪ್ಯಾಪಿ ಅಲ್ಲಿಯ ಅಧಿಕಾರಿಗಳ ಮನಗೆದ್ದು ಅಲ್ಪಾವಧಿಯ ಶಿಕ್ಷೆಯನ್ನು ಮುಗಿಸಿ ಬಿಡುಗಡೆಯಾಗುವ ಸಂದರ್ಭಗಳಿದ್ದರೂ ಅವೆಲ್ಲವನ್ನೂ ದಿಕ್ಕರಿಸಿ ಎಲ್ಲಾ ಕಡೆಯಲ್ಲೂ ಸೋಲುಣ್ಣುತ್ತಾನೆ. ಅವನ ಮನದಲ್ಲಿ ಕುದಿಯುತ್ತಿರುವ ಸೇಡು ಅವನನ್ನು ಮಹಾಪರಾಧಿಯೊಬ್ಬ ಅನುಭವಿಸಬೇಕಾದ ಎಲ್ಲಾ ಶಿಕ್ಷೆಗಳಿಗೂ ಗುರಿಯಾಗಿಸುತ್ತದೆ. ಸೇಡು ತೀರಿಸಿಕೊಳ್ಳುವ ಆತುರ ಅವನಲ್ಲಿ ಅಷ್ಟೊಂದು ಮಡುಗಟ್ಟಿರುತ್ತದೆ.

ಗಯಾನ ದ್ವೀಪದ ಜೈಲುಗಳಿಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳುವುದು ಸುಲಭವೆಂದು ತಿಳಿದ ಪ್ಯಾಪಿಗೆ ಆತನ ಸಹಖೈದಿ ಅಲ್ಲಿಯ ನರಕಸದೃಶ ಜೈಲುಗಳು, ಮಾರಕ ರೋಗಗಳಿಗೆ ತುತ್ತಾಗಿ ಸಾಯುವ ಖೈದಿಗಳ ಅವಸ್ಥೆಯನ್ನು ತಿಳಿಸುತ್ತಾನೆ. ಹಠ ಬಿಡದ ಪ್ಯಾಪಿ ಗಯಾನ ಜೈಲು ಸೇರಿ ಅಲ್ಲಿಂದ ತಪ್ಪಿಸಿಕೊಂಡು ಅಲ್ಲಿಯ ಜನರ ಜೊತೆಗೆ ಸೇರಿ ಸಂಸಾರವೆನ್ನುವ ಕೂಪದಲ್ಲಿ ಬೀಳುತ್ತಾನೆ. ಲಾಲಿ ಮತ್ತು ಅವಳ ಸಹೋದರಿ ಲೋರಿಯಾ ಎಂಬ ಕನ್ಯೆಯರನ್ನು ಮದುವೆಯಾಗಿ ಸುಖಮಯವಾದ ಸಂಸಾರ ನಡೆಸಬಹುದಾಗಿದ್ದರೂ ಅವನೊಳಗಿದ್ದ ಸೇಡು ಭುಗಿಲೆದ್ದು ತನ್ನ ಸಾಹಸ ಯಾತ್ರೆಯನ್ನು ಮುಂದುವರಿಸುವಂತೆ ಪ್ರೇರೇಪಿಸುತ್ತದೆ.

ಜೈಲಿನಲ್ಲಿರುವ ಖೈದಿಗಳು ದ್ವೀಪದಲ್ಲಿಯೂ ಅಪರಾಧವೆಸಗಿದರೆ ಅಥವಾ ಪಲಾಯನಕ್ಕೆ ಪ್ರಯತ್ನಿಸಿದರೆ ಅಂತಹವರನ್ನು ಏಕಾಂತ ಶಿಕ್ಷೆ ವಿಧಿಸಿ ಅವರನ್ನು ಒಳ್ಳೆಯವರಾಗಲು ಅವಕಾಶ ಕೊಡದೆ, ನಿಷ್ಪ್ರಯೋಜಕರನ್ನಾಗಿಸಿ ಅಲ್ಲಿಯೇ ಸಾಯುವಂತೆ ಮಾಡುವುದೇ ಕ್ರೂರ ಶಿಕ್ಷೆ. ಕತ್ತಲೆಯ ಬಂಧಿಖಾನೆಯಲ್ಲಿ ಕೈ ತೂರುವುದಕ್ಕೆ ಮಾತ್ರ ಇರುವ ಕಿಂಡಿಯ ಬೆಳಕಿನಲ್ಲಿ ಅರೆ ಜೀವವಾಗಿ, ಉಸಿರಾಟಕ್ಕೂ ಹಪಹಪಿಸುವ ಆ ರೌದ್ರ, ಭೀಕರ ಬದುಕಿನಲ್ಲೂ ಪ್ಯಾಪಿಗೆ ಉಳಿದಿರುವುದು ತನ್ನನ್ನು ಅನಗತ್ಯ ಅಪರಾಧಿಯನ್ನಾಗಿಸಿದವರ ಮೇಲಿನ ದ್ವೇಷವೊಂದೇ. ಅಂತಹ ಕೂಪದಲ್ಲಿ ಖೈದಿ ಬದುಕುಳಿಯುವುದೇ ಆಶ್ಚರ್ಯ. ಆದರೂ ಪ್ಯಾಪಿ ಛಲಗಾರ ಅಲ್ಲಿಂದಲೂ ತಪ್ಪಿಸಿಕೊಳ್ಳುತ್ತಾನೆ.

ಸಲಿಂಗಕಾಮ, ಜೈಲರ್ಗಳ ಮನಗೆಲ್ಲಲು ಹಣವನ್ನು ಸಣ್ಣ ಟಾರ್ಚುಗಳಲ್ಲಿರಿಸಿ ಗುದದೊಳಗೆ ಅದನ್ನು ಇಟ್ಟುಕೊಳ್ಳುವುದು, ಸಿಗರೇಟು, ಕುಡಿತಕ್ಕಾಗಿ ಹಪಹಪಿಸುವುದು, ಜೈಲಿನಲ್ಲಿ ನೀಡುವ ಕೆಲಸಗಳನ್ನು ಮಾಡಲು ನಿಶಕ್ತರಾಗಿ ಕ್ರೂರ ಶಿಕ್ಷೆಗೆ ಗುರಿಯಾಗುವುದು ಮನುಷ್ಯ ಜಾತಿಗೆ ಬೇಡವಾದ ಕಷ್ಟ ಕೋಟಲೆಗಳು. ಆದರೆ ಧೈರ್ಯಗೆಡದೆ ಪ್ಯಾಪಿ ತಾನು ಸೇಡು ತೀರಿಸಿಯೇ ಕೊಳ್ಳುತ್ತೇನೆ ಅನ್ನುತ್ತಾ ಹದಿಮೂರು ವರ್ಷಗಳನ್ನು ಜೈಲಿನಲ್ಲಿಯೇ ಕಳೆಯುತ್ತಾನೆ.

ಒಬ್ಬ ಸಹಖೈದಿಯ ಕೊಲೆಯಾದಾಗ ಖೈದಿಗಳ ಬದುಕು ನಾಯಿಪಾಡಿಗಿಂತಲೂ ಕಡೆಯೇ? ಸರಕಾರಕ್ಕೆ ಅದನ್ನು ಸರಿಮಾಡಲು ಸಾಧ್ಯವಿಲ್ಲವೇ? ಅನ್ನುವ ಪ್ರಶ್ನೆಯೊಂದಿಗೆ ‘ಪ್ಯಾಪಿಲಾನ್’ನ ಮೊದಲ ಭಾಗ ಮುಗಿಯುತ್ತದೆ. ಇಲ್ಲಿ ಖೈದಿಯೊಬ್ಬನ ಸಾಹಸಯಾತ್ರೆ ಮಾತ್ರವಲ್ಲ, ರೋಮಾಂಚನಗೊಳಿಸಬಲ್ಲ ಸಾವು- ಬದುಕು- ಹೋರಾಟ-ಸೇಡಿನ ಜ್ವಾಲೆಯೂ

Read more!

Sunday, December 6, 2009

ಋಣ


ಆಕಾಶವೇ ತೂತಾದಂತೆ ಒಂದೆ ಸಮನೆ ಸುರಿಯುತ್ತಿದ್ದ ಕುಂಭದ್ರೋಣ ಮಳೆಗೆ, ಚಳಿಯೆನ್ನದೆ ಬೇಗನೆ ಎದ್ದ ಸಾವಿತ್ರಿಗೆ ದಳಿಯ ಬಾಗಿಲು ತೆರೆದು ಹೊರಗಿನ ದೀಪ ಹಾಕುವಾಗ, ಅಂಗಳದಲ್ಲಿ ನಿಂತಿದ್ದ ನೀರನ್ನು ಕಂಡು ಹೆದರಿಕೆಯಾಯಿತು.
“ಓ ದೇವರೆ! ಇದೆಂತ ಹೀಗೆ, ಅಂಗಳದಲ್ಲಿ ಈ ನಮುನೆ ನೀರು ನಿಂತಿದೆ?” ತನ್ನಷ್ಟಕ್ಕೆ ಹೇಳಿಕೊಂಡಳಾದರೂ, ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿಕೊಂಡು ಬಂದ ಸುಬ್ರಾಯ ಭಟ್ಟರಿಗೆ ಮಾತ್ರ ಆಶ್ಚರ್ಯವಾದಂತೆ ಇರಲಿಲ್ಲ. ಅವರು ಮಡದಿಯ ಬಳಿ ನಿಂತು ಹೊರಗೆ ನೋಡಿದರು.

“ಮೂರು ದಿವಸದಿಂದ ಹೀಗೆ ಮಳೆ ಸುರಿಯುತ್ತಿದ್ದರೆ ಅಂಗಳದಲ್ಲಿಯಲ್ಲ ಮನೆಯ ಒಳಗೂ ನೀರು ಬರುವುದು ಖಂಡಿತ” ಹಾಗಂದ ಗಂಡನತ್ತ ತಿರುಗಿದ ಸಾವಿತ್ರಿ, “ನೀವು ಎಂತದು ಹೇಳುವುದು? ನಾವು ಮನೆ ಕಟ್ಟಿ ನಾಲಕ್ಕು ವರ್ಷವಾಯಿತಲ್ಲ. ಇಷ್ಟರವರೆಗೆ ಹೀಗಾದದ್ದಿಲ್ಲ. ಅಥವಾ ಹೀಗೆ ಮಳೆ ಬಂದಿಲ್ಲವ ಹೇಗೆ?” ಆತಂಕದಿಂದ ನುಡಿದಾಗ ಸುಬ್ರಾಯ ಹಿಂದಕ್ಕೆ ಸರಿದು, “ಮಳೆ ಬಂದಿಲ್ಲವಾ? ಇದಕ್ಕಿಂತಲೂ ಹೆಚ್ಚೇ ಮಳೆ ಸುರಿದಿತ್ತು. ಆದರೆ ಈ ತರ ನೀರು ಅಂಗಳದಲ್ಲಿ ನಿಂತದ್ದಿಲ್ಲ” ಅಂದ.

“ನಾನೂ ಅದನ್ನೇ ಹೇಳಿದ್ದು. ಹೀಗೆ ಮಳೆಯ ನೀರು ನಿಂತರೆ ತೆಂಗಿನ ಗಿಡಗಳು, ಅಡಿಕೆ ಗಿಡಗಳು ಏನಾಗಬೇಡ? ಇಷ್ಟು ನೀರು ಎಲ್ಲಿಂದ ಬರುವುದಪ್ಪಾ ಇದು? ನಮ್ಮನ್ನು ಲಗಾಡಿ ತೆಗೆಯುವುದಕ್ಕೆ ಬರುವುದಾ?” ಗಂಡನಿಗೆ ಹೇಳುತ್ತಾ ಸೀರೆಯ ತುದಿಯನ್ನು ಸೊಂಟಕ್ಕೆ ಸೇರಿಸಿ, ಅಂಗಳಕ್ಕೆ ಇಳಿದಳು.

ಸರಿಯಾಗಿ ಮೊಣಗಂಟಿನವರೆಗೂ ನೀರಿತ್ತು. ಹೆದರಿ ಹಿಂದಕ್ಕೆ ಬಂದ ಅವಳು ಗಂಡನನ್ನು ಕರೆದು, “ಅಲ್ಲೇ ಮಂಚದ ಪಕ್ಕದಲ್ಲಿ ಕೊರಂಬು ಇದೆ; ಕೊಡಿ” ಅಂದಳು. ಸುಬ್ರಾಯ ಕೊರಂಬನ್ನು ತೆಗೆದು ಮೆಟ್ಟಿಲಿನ ಬಳಿ ಇಟ್ಟ. ಅವಳು ಅದನ್ನು ತಲೆಗೆ ಇಟ್ಟುಕೊಂಡು ಬಚ್ಚಲಿನ ಒಲೆಗೆ ಬೆಂಕಿ ಹಾಕಲು ಬಂದಳು. ಅವಳ ಆತಂಕವೊಂದೇ, ನಾಲ್ಕು ವರ್ಷದ ತೆಂಗಿನ ಗಿಡಗಳು ನೀರು ನಿಂತು ಹಾಳಾದರೆ ಏನು ಮಾಡುವುದು? ಅವುಗಳನ್ನು ನೆಡಲು ಅಷ್ಟು ಖರ್ಚು ಮಾಡಿಯೂ ಏನೂ ಉಪಯೋಗವಾಗುವುದಿಲ್ಲವಲ್ಲಾ ಅನ್ನುವ ನೋವು. "

ಒಂದು ಕಡೆಗೆ ಮನೆಯ ಗೋಡೆ ಏರುತ್ತಿದ್ದಂತೆ ಗಂಡನಿಗೆ ಹೇಳಿ, ಅವರಿವರ ಬಳಿ ಇಪ್ಪತ್ತು ತೆಂಗಿನ ಗಿಡ, ಹದಿನಾಲ್ಕು ಕಂಗಿನ ಗಿಡಗಳನ್ನು ತಂದು ನೆಟ್ಟಿದ್ದು ಸುಮ್ಮನೆಯಲ್ಲ. ದೂರಾಲೋಚನೆಯಿರುವ ಕಷ್ಟ ಸಹಿಷ್ಣು ಜೀವಿ ಅವಳು. ಆಗ ಬಾವಿಯೂ ಇರಲಿಲ್ಲ. ಹಾಗಂತ ಸುಮ್ಮನಿದ್ದರೆ ನೆಟ್ಟ ಗಿಡಗಳು ಏನಾಗಬೇಡ? ಅನ್ನುತ್ತಾ ಎರಡು ಗದ್ದೆ ಇಳಿದು, ಮೂರು ಪುಣಿಯನ್ನು ದಾಟಿ, ಮಲ್ಲ ಸೋಜಾರ ಹಳ್ಳದಿಂದ ನೀರು ಹೊತ್ತು ಹಾಕಿದ್ದೆ ಅವುಗಳು ತಲೆಯೆತ್ತುವುದಕ್ಕೆ ಕಾರಣವಾಗಿದ್ದು. ಇದು ನಾಲ್ಕು ವರ್ಷಗಳ ಕೆಳಗಿನ ಮಾತು. ಇನ್ನೆರಡು ವರ್ಷ ಕಳೆದರೆ ಒಂದೆರಡು ತೆಂಗಿನ ಮರಗಳಲ್ಲಿಯೂ ಫಲ ಶುರುವಾಗಬಹುದು. ಈಗ ಈ ರೀತಿ ನೀರು ನಿಂತರೆ, ಕಾಂಡ ಕೊಳೆತು ಹೋದರೆ; ಎಲ್ಲಾ ಗೋವಿಂದಾ.

ಒಲೆಗೆ ಬೆಂಕಿ ಹಿಡಿದಾಗ ಒಂದೆರಡು ಕೊತ್ತಳಿಗೆಯನ್ನು ತುರುಕಿ, ಹೊರಗೆ ಬರುವಾಗ ಮಳೆಯಿಂದಾಗಿ ಸರಿ ಬೆಳಕಾಗದಿದ್ದರೂ, ಅತ್ತಿತ್ತ ಹೋಗುವುದಕ್ಕೆ ಏನೂ ತೊಂದರೆಯಿರಲಿಲ್ಲ. ಅಲ್ಲೇ ಪಕ್ಕದಲ್ಲಿಟ್ಟಿದ್ದ ಕೊರಂಬನ್ನು ತಲೆಗೇರಿಸಿ ಅಂಗಳಕ್ಕೆ ಇಳಿದ ಸಾವಿತ್ರಿ, ಗದ್ದೆಯ ಪುಣಿಯನ್ನು ಹಿಡಿದು ಹೊರಟಳು.

ಹಿಂದಕ್ಕೆ ಮೂರು ಕೊಯ್ಲು, ಮನೆಯ ಮುಂದೆ ನಾಲ್ಕು ಕೊಯ್ಲು ಗದ್ದೆ. ಎಡಕ್ಕೆ ತೆಂಗಿನ ತೋಟ, ಬಲಕ್ಕೆ ಬಾಳೆ ಮತ್ತು ಕಂಗಿನ ತೋಟ, ಮನೆಯ ಎದುರಿಗೆ ಬಾವಿ. ಆದ್ದರಿಂದ ಒಂದು ಗದ್ದೆಯ ಪುಣಿಯನ್ನು ಹಿಡಿದು ಹೊರಟರೆ ಅದು ಮತ್ತೆ ಬಂದು ಸೇರುವುದು ಬಾವಿಕಟ್ಟೆಯ ಬಳಿಗೆ.

ತೆಂಗಿನ ತೋಟದಿಂದ ಕೆಳಗೆ ದೊಡ್ಡ ಜರೆ. ಅದರ ಕೆಳಗಿರುವುದು ಸಾಂತಕ್ಕನ ಮಜಲು ಗದ್ದೆ. ತೋಟದಲ್ಲಿ ನೀರು ತುಂಬಿ ಜರೆಯಿಂದ ನೀರು ಜಲಪಾತದಂತೆ ದುಮುಕುತ್ತಿತ್ತು.

‘ಇದೆಂತ, ಬೆಟ್ಟುಗದ್ದೆಗಳಲ್ಲಿ ಈ ತರ ನೀರು? ನೆರೆ ಬಂದರೆ ಬೈಲು ಗದ್ದೆಗಳಿಗೆ ನೆರೆ ಬರುವುದಿತ್ತೇ ಹೊರತು ಹೀಗೆ ಬೆಟ್ಟು ಗದ್ದೆಗಳಿಗಲ್ಲ. ಈ ತರ ನೀರು ಜರೆಯಲ್ಲಿ ಇಳಿದರೆ ಪುಣಿ ಕಡಿದು, ಜರೆ ಜರಿದು ಹೋಗುವುದಿಲ್ಲವೆ?’ ಎಂದು ಚಿಂತಿಸುತ್ತಾ ನೀರು ಹೋಗುವುದಕ್ಕೆ ಬೇರೆ ದಾರಿಯಿದೆಯೇ ಎಂದು ನೋಡುತ್ತಾ ನಡೆಯುತ್ತಿದ್ದಳು.

ಅವಳು ಹಿಂಬದಿಯ ಗದ್ದೆಯತ್ತ ಬರುವಾಗ ಕಾಡಿನ ಒಡ್ಡದ ನೀರು ಗುದ್ದಳಿಸಿ ಬರುತ್ತಿರುವುದು ಕಾಣಿಸಿತು. ಊರಿಗೆ ಬಂದು ನಾಲ್ಕು ವರ್ಷವಾದರೂ ಆ ತರಹ ನೀರು ಹರಿಯುವುದನ್ನು ಇಲ್ಲಿಯವರೆಗೆ ನೋಡಿಯೇ ಇರಲಿಲ್ಲ. ಆಗ, ಆಸ್ತಿ ತೆಗೆದುಕೊಂಡ ನಂತರ ಬೆಟ್ಟು ಗದ್ದೆಯಲ್ಲಿಯೇ ಮನೆ ಮಾಡಿ ನಿಂತದ್ದು ದೊಡ್ಡ ಸಾಹಸ. ಅಕ್ಕ ಪಕ್ಕದ ಮನೆಯವರೆಲ್ಲಾ ಏನೋ ಹೇಳಿ ಹೆದರಿಸಿದ್ದಿದೆ. ಕಾಡಿನ ಪಕ್ಕದಲ್ಲಿಯೇ ಇರುವ ಆ ಬೆಟ್ಟು ಗದ್ದೆಯಲ್ಲಿ ಹುಲಿ ಕೂಡ ತಿರುಗಾಡುತ್ತದೆಯಂತೆ. ಆದರೆ ಈಗ ಹುಲಿ ಎಲ್ಲಿ? ಅನ್ನುವ ಧೈರ್ಯದಿಂದ ಅಲ್ಲಿಯೇ ಮನೆ ಕಟ್ಟಿದ್ದಾಯಿತು. ಅದಲ್ಲದೆ ಆ ಗದ್ದೆಯ ಪಕ್ಕದಲ್ಲಿಯೇ ಬೈಕಾಡ್ತಿ ಭೂತದ ಬನವಿರುವುದರಿಂದ ದೈವ ಏನೂ ಮಾಡಲಿಕ್ಕಿಲ್ಲ ಅನ್ನುವ ನಂಬಿಕೆಯೂ ಇತ್ತು.

ಆದರೆ ಈಗ ಅದೇ ನೇರಕ್ಕೆ ಹಿಂದೆ ಪುರುಷರ ಮನೆ, ಮುಂದಕ್ಕೆ ನೀಲಕ್ಕನ ಮನೆ ಎದ್ದಿದೆ. ಹಾಗಾಗಿ ಕಾಡಿನ ನೀರು ಇಳಿಯುತ್ತಿದ್ದ ತೋಡಿಗೆ ಅಲ್ಲಲ್ಲಿ ಅಡೆತಡೆಯಿರಬೇಕು ಅಂದುಕೊಂಡು ತೋಡಿನ ಬದಿಗೆ ನಡೆದು ಹೋದಳು.

ಕಾಡಿನ ಒಡ್ಡ ನೀರಿಗಾಗಿ ಒಂದು ಕಾಲದಲ್ಲಿ ಜಗಳವಾಗುತ್ತಿತ್ತಂತೆ. ಸುಗ್ಗಿಯ ಬೆಳೆಗೆ ಒಡ್ಡ ನೀರು ಇಲ್ಲದಿದ್ದರೆ ಗದ್ದೆಗಳೆಲ್ಲಾ ಒಣಗಬೇಕಾಗುತ್ತಿತ್ತು. ಒಡ್ಡ ನೀರಿನ ತೋಡು ಅವರಿಗೆ ಇವರಿಗೆ ಎಂದು ಅಲ್ಲಲ್ಲಿ ಬಾಯಿ ತೆರೆದು ಗದ್ದೆಗಳಿಗೆ ನೀರು ಹೋಗುವಂತಾಗಿತ್ತು. ಈಗ, ಮಳೆಗಾಲಕ್ಕೆ ಆ ನೀರು ಯಾರಿಗೂ ಬೇಡ. ಎಲ್ಲರೂ ಅವರವರು ತೆಗೆದ ಕಡಿಯನ್ನು ಮುಚ್ಚಿದ್ದೆ ನೀರೆಲ್ಲಾ ಹೀಗೆ ಬೆಟ್ಟುಗದ್ದೆಗಳಿಗೆ ಇಳಿದು ಅಂಗಳ, ತೋಟವೆಲ್ಲಾ ನೀರಲ್ಲಿ ಮುಳುಗಿರುವುದು.

ಸಾವಿತ್ರಿ ಮನೆಗೆ ಬಂದವಳೇ, ಗಂಡನಿಗೆ ಹೇಳಿ, ಕೊಟ್ರೆ(ಹಾರೆ) ತೆಗೆದುಕೊಂಡು ಹೋಗಿ ಒಡ್ಡ ನೀರಿನ ತಡೆಗಳನ್ನು ತೆರೆದು ಸಾಂತಕ್ಕನ ಗದ್ದೆಗೂ, ಹಿಂದೆ ಪುರುಷರ ಗದ್ದೆಗೂ ನೀರು ಬಿಟ್ಟು ಬಂದಳು.

ಮಳೆ ಸುರಿಯುತ್ತಿದ್ದರೂ ಸುಮಾರು ಮಧ್ಯಾಹ್ನದ ಹೊತ್ತಿಗೆ ಅಂಗಳದ ನೀರು ಇಳಿದು ಹೋಯಿತು. ಸುಬ್ರಾಯರು ಹೊರಗೆ ಬಂದಾಗ ಆಶ್ಚರ್ಯವಾಯಿತು.

“ನೋಡೆ, ನೀರೆಲ್ಲಾ ಇಳಿದು ಹೋಗಿದೆ” ಮಡದಿಯನ್ನು ಕರೆದು ಅಂದರು.

“ಒಡ್ಡ ನೀರು ಎಲ್ಲಾ ಕಡೆಗೂ ಸರಿಯಾಗಿ ಹೋಗುವ ಹಾಗೆ ಮಾಡಿದೆ. ಅವರಿಗೆ ಇನ್ನೊಬ್ಬರ ಮೇಲೆ ಕನಿಕರ ಊಂಟಾ? ಸುಮ್ಮನ್ನೆ ನಮ್ಮನ್ನು ಹಾಳಾಗಬೇಕೂಂತ ಮಾಡುವುದಲ್ಲವಾ? ನೋಡುವಾ, ನಮಗೆ ದೇವರಿದ್ದಾನೆ” ಅಂದು ನೆರೆಕರೆಯವರ ಬಗ್ಗೆ ಅಸಮಾಧಾನದಿಂದ ನುಡಿದರು.

ನೆರೆಕರೆಯವರೆಲ್ಲಾ ಏನಾದರೂ ಬೇಕಾದರೆ ಸಹಾಯ ಕೇಳಿಕೊಂಡು ಸಾವಿತ್ರಿಯ ಬಳಿ ಬರುತ್ತಿದ್ದರು. ತನ್ನ ಬಳಿ ಸಾಕಷ್ಟು ಇಲ್ಲದಿದ್ದರೂ ಕೈಯೆತ್ತಿ ಕೊಡುವ ಅನ್ನಪೂರ್ಣೆ ಅವಳು. ಗಂಡ ಆ ವಿಷಯದಲ್ಲಿ ಅಸಮಾಧಾನ ತೋರಿಸಿದರೆ, “ಎಂತದು ನೀವು. ಪಾಪ ಅವರಿಗೆ ಸರಿಯಾಗಿ ಮೂರು ಹೊತ್ತು ತಿನ್ನುವುದಕ್ಕೆ ಉಂಟೋ, ಇಲ್ಲವೋ? ಸಣ್ಣ ಸಣ್ಣ ಮಕ್ಕಳಿರುವ ಹೆಂಗಸಲ್ಲವಾ? ಹೊಟ್ಟೆ ತುಂಬಾ ತಿನ್ನಲಿ” ಎಂದು ಅವನನ್ನು ಸಾಂತ್ವನಿಸುತ್ತಿದ್ದಳು.

ಇದೇ ಈ ಸಾಂತಕ್ಕನಿಗೆ ಸೌಖ್ಯವಿಲ್ಲದಾಗ ಹಾಲು, ಮೊಸರು, ಮಜ್ಜಿಗೆಂತ ಅವಳ ಮಗ ಈಸ್ವರ ಬಂದು ಕೇಳುವಾಗ ಕೊಟ್ಟಿದ್ದಳು. ಆದರೆ ಈಗ ಒಡ್ದ ನೀರಿಗೆ ತಡೆ ಹಾಕಿ, ಎಲ್ಲಾ ನೀರು ತನ್ನ ಮನೆಯತ್ತ ಹರಿಯಬಿಟ್ಟಿದು ಮಾತ್ರ ನ್ಯಾಯವಲ್ಲ ಅಂದುಕೊಂಡಳು.

ಮರುದಿನ ಎದ್ದಾಗ ಮತ್ತೆ ಅಂಗಳದಲ್ಲಿ ನೀರು ಮೊಣಗಂಟಿನವರೆಗೂ ನಿಂತಿತ್ತು.

“ಇಲ್ಲ, ಅವರು ನಮ್ಮನ್ನು ಬದುಕುವುದಕ್ಕೆ ಬಿಡುವುದಿಲ್ಲ. ಗದ್ದೆಯ ಕೆಸರೆಲ್ಲಾ ಸಾಂತಕ್ಕನ ಗದ್ದೆಗೆ ಹೋಗಿಯಾಯಿತು. ಇನ್ನು ನೇಜಿ ಕೂಡ ಎದ್ದು ಹೋದರೆ ಈ ವರ್ಷ ಅಂಗಡಿಯಿಂದಲೇ ಐದು ಮುಡಿ ಅಕ್ಕಿ ತೆಗೆದುಕೊಳ್ಳಬೇಕು” ಎಂದು ತನ್ನ ಮನಸ್ಸಿನಲ್ಲಿದ್ದ ನೋವನ್ನು ಗಂಡನಿಗೆ ಹೇಳುವಾಗ ಅವಳ ಕಣ್ಣಿನಲ್ಲಿ ನೀರು ಇಳಿಯಿತು.

“ನೀನೆಂತ ಮಾರಾಯ್ತಿ, ಹೀಗೆ ಬೆಳಿಗೆದ್ದು ಕಣ್ಣೀರು ಹಾಕುವುದು? ಅವರು ಮತ್ತೆ ಕಟ್ಟ ಹಾಕಿ ಬಂದರೂಂತ ಕಾಣ್ತದೆ. ಇರಲಿ ಮಾಡಿಕೊಳ್ಳಲಿ. ನೀನೆ ಹೇಳಿದ್ದಲ್ಲವಾ; ದೇವರಿದ್ದಾನೆ ನಮಗೆ” ಎಂದು ಮಡದಿಯನ್ನು ಸಮಾಧಾನಿಸಿದರಾದರೂ ಅವರಿಗೂ ನೆರೆಕರೆಯವರ ಮೇಲೆ ಬೇಸರವಾಯಿತು.

“ಹೌದು, ನೀವು ಎಷ್ಟು ಸುಲಭದಲ್ಲಿ ಹೇಳುತ್ತೀರಿ. ನಾವು ಅದಕ್ಕೆ ಪಟ್ಟ ಶ್ರಮ ಗೊತ್ತುಂಟಲ್ಲಾ? ಈಗಿನ ಕಾಲದಲ್ಲಿ ಗದ್ದೆಗಳನ್ನು ಇನ್ನೊಬ್ಬರಿಂದ ಉಳುಸುವುದು, ಆಳುಗಳನ್ನು ಹುಡುಕುವುದು ಎಷ್ಟು ಕಷ್ಟಾಂತ ಗೊತ್ತಿಲ್ಲವ ನಿಮಗೆ? ಅವರೆಲ್ಲಾ ಹೀಗೆ ಹೊಟ್ಟೆ ಉರಿಸಿದ್ರೆ ನಾವೆಂತ ಮಾಡುವುದು ಹೇಳಿ?” ಅವಳು ಸೀರೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡು, “ಯಾವುದಕ್ಕೂ ನಾನು ಸಾಂತಕ್ಕನನ್ನು ಮಾತನಾಡಿಸಿಯೇ ಬರುತ್ತೇನೆ” ಎಂದು ಅಂಗಳಕ್ಕೆ ಇಳಿದಳು.

ಹೊರಗೆ ಸುರಿಯುವ ಮಳೆಗೆ ಮನೆಯ ಹೆಬ್ಬಾಗಿಲಿನಲ್ಲಿಯೇ ನಿಂತು ಮೂಗಿನ ಸಿಂಬಳವನ್ನು ತೆಗೆದು ಕೈಯನ್ನು ಒದರಿದ ಸಾಂತಕ್ಕನಿಗೆ ಸಾವಿತ್ರಿ ಬಂದಿದ್ದು ತಿಳಿಯಲಿಲ್ಲ. ಅವಳ ಕೈಯಿಂದ ಹಾರಿದ ಸಿಂಬಳ ಸಾವಿತ್ರಿಯ ಕೊರಂಬಿನ ಮೇಲೆ ಬಿದ್ದು ಕೆಳಗೆ ಇಳಿಯಿತು. ಸಾವಿತ್ರಿಯನ್ನು ಕಂಡೊಡನೆ ಸಾಂತಕ್ಕ ಕೈಯನ್ನು ಒರೆಸುತ್ತಾ ಒಳಗೆ ನಡೆದಳು. ಸಾವಿತ್ರಿ ಕೊರಂಬನ್ನು ತೆಗೆದು ಕೆಳಗಿಟ್ಟು, “ಸಾಂತಕ್ಕ” ಎಂದು ಕರೆದಳು. ಸಾಂತಕ್ಕ ಅವಳನ್ನು ಕಂಡೇ ಇಲ್ಲವೆನ್ನುವಂತೆ ಹೊರಗೆ ಬರುತ್ತಾ, “ಏನು ಅಮ್ಮೋರೆ, ಈ ಮಳೆಗೆ ಹೀಗೆ ಬಂದಿರಲ್ಲಾ?” ಎಂದು ಆಶ್ಚರ್ಯ ತೋರಿಸುತ್ತಾ ಪಕ್ಕದಲ್ಲಿದ್ದ, ಪಸೆಗೆ ಬೂಸ್ಟ್ ಬಂದಿದ್ದ ಮರದ ಕುರ್ಚಿಯನ್ನು ಒರೆಸುತ್ತಾ ಅವಳ ಕಡೆಗೆ ಇಟ್ಟು, “ಬನ್ನಿ ಒಳಗೆ” ಎಂದು ಆಹ್ವಾನಿಸಿದಳು.

ಸಾವಿತ್ರಿ ಹೊರಗೆ ನಿಂತು, “ಸಾಂತಕ್ಕ, ಇದು ಎಂತ ನೀವು? ನಮ್ಮನ್ನು ಬದುಕಲು ಬಿಡುವುದಿಲ್ಲವಾ, ಹೇಗೆ?” ಎಂದು ಕೇಳಲು, ಸಾಂತಕ್ಕ, “ಯಾಕೆ ಹಾಗನ್ನುತ್ತೀರಿ? ನಾನೇನು ಮಾಡಿದೆ?” ಎಂದು ಬೆರಗಿನಿಂದ ಕೇಳಿದಳು. ಸಾವಿತ್ರಿ ಒದ್ದೆ ಕಾಲುಗಳನ್ನು ಕಾಲು ಒರೆಸಲು ಹಾಕಿದ ಗೋಣಿಯ ಚೀಲಕ್ಕೆ ತಿಕ್ಕುತ್ತಾ ಒಳಗೆ ಬಂದು, “ನೋಡಿ, ಆ ಕಾಡಿನ ಒಡ್ಡ ನೀರು ಎಲ್ಲಾ ನಮ್ಮ ತೋಟಕ್ಕೆ ಬಂದು, ತೋಟದಲ್ಲಿ ಮಾತ್ರ ಅಲ್ಲ, ಇಡೀ ಅಂಗಳ, ಗದ್ದೆಯಲ್ಲೆಲ್ಲಾ ಬೊಳ್ಳ ಬಂದ ಹಾಗೆ ಆಗಿದೆ. ಹೀಗೆ ನೀರು ನಿಂತ್ರೆ ತೆಂಗಿನ ಗಿಡಗಳೆಲ್ಲಾ ಏನಾಗಬೇಡ? ಆ ನಿಮ್ಮ ಗದ್ದೆಯ ಪಕ್ಕದ ಪುಣಿಯ ಬರೆಯುಂಟಲ್ಲಾ ಅದು ಜರಿದು ಬಿದ್ರೆ ಏನು ಮಾಡುವುದು?” ಎಂದು ಹೇಳುತ್ತಾ ಕಣ್ಣೀರನ್ನು ಒರೆಸಿಕೊಂಡಳು. ಸಾಂತಕ್ಕನಿಗೆ ಏನನಿಸಿತೋ ಅವಳು, “ಅಲ್ಲಾ, ಅಲ್ಲಿ ಹಿಂದೆ ಪುರುಷರ ಮನೆಯವರು ಅವರ ಗದ್ದೆಗೆ ನೀರು ಬರದ ಹಾಗೆ ಕಟ್ಟ ಹಾಕಿದ್ದಾರೆ. ಕಾಡಿನಿಂದ ಗುದ್ದಳಿಸಿ ಬರುವ ನೀರು ನಮ್ಮ ಗದ್ದೆಗಲ್ಲವಾ ಬರುವುದು? ಆ ನಮನಿ ನೀರು ಬಂದ್ರೆ ಮೊನ್ನೆ ನೆಟ್ಟ ನೇಜಿಯೆಲ್ಲಾ ಹಾಳಾಗುವುದಿಲ್ಲವಾ?”

ಅವರ ಮಾತು ಕೇಳಿ ಸಾವಿತ್ರಿಗೆ ಕೋಪವೂ ಬಂತು. ಅವಳು, “ಹಾಗಾದ್ರೆ ನಿಮ್ಮ ಗದ್ದೆಯ ನೇಜು ಹಾಳಾಗುತ್ತದೆಯಲ್ಲವಾ? ನಮ್ಮ ಗದ್ದೆ, ತೋಟ ಹಾಳಾದ್ರೂ ಪರವಾಗಿಲ್ಲ, ನಿಮ್ಮದು ಏನೂ ಆಗಬಾರದಲ್ಲಾ. ಇರಲಿ, ದೇವರು ನೋಡಿಕೊಳ್ಳಲಿ. ನಾನು ಇನ್ನು ಮಾತನಾಡುವುದಕ್ಕೆ ಬರುವುದಿಲ್ಲ” ಎಂದು ಹೊರಗೆ ಬಂದವಳೇ ಕೊರಂಬು ಹಿಡಿದು ಆ ಮಳೆಯಲ್ಲಿಯೂ ಬಿರಬಿರನೆ ನಡೆದು ಮನೆಗೆ ಬಂದಳು. ಅವಳ ಗಂಡ ಹೊರಗೆ ಮಳೆಯ ನೀರನ್ನೇ ನೋಡುತ್ತಾ ನಿಂತಿದ್ದ.

“ಏನಂತೆ, ಅವರು ಕಟ್ಟ ಹಾಕಿದ್ದಾರಂತೆಯ?” ಆತ ಕೇಳುವಾಗ ಸಾವಿತ್ರಿ, “ಅವರವರದ್ದು ಆದ್ರೆ ಮುಗಿಯಿತು. ಉಳಿದವರ ಚಿಂತೆ ಅವರಿಗೆಂತದು. ಅವರ ಗದ್ದೆಯ ಪೈರು ಹಾಳಾಗುತ್ತದೆಯಂತೆ. ಅವರ ಹಾಗೆ ನಾವೂ ಕಷ್ಟದಿಂದ ನೆಟ್ಟದ್ದಲ್ವಾ? ಯಾಕೆ ಹೀಗೆ ಮಾಡ್ತಾರಾ?” ಎಂದು ನಿಟ್ಟುಸಿರು ಚೆಲ್ಲಿದವಳೇ ಕೊರಂಬನ್ನು ಮೆಟ್ಟಿಲಿನ ಮೇಲೆ ಇಟ್ಟು ಒಳಗೆ ಬಂದಳು.


ಹೀಗೆ ಆವತ್ತು ಕೂಡ ಕುಂಭದ್ರೋಣ ಮಳೆ ಸುರಿದ ನೆನಪು. ಸುಬ್ರಾಯನ ಅಣ್ಣ ದೇವರಾಯ ಭಟ್ಟ ಕಡಾಖಂಡಿತವಾಗಿ ಮಾತು ತೆಗೆಯದೆ ಇರುತ್ತಿದ್ದರೆ ಇನ್ನೂ ಆ ಹಿರಿಯರ ಮನೆಯಲ್ಲಿ ಜೀತದಾಳಿನಂತೆ ದುಡಿಯುವ ಕರ್ಮ ಸುಬ್ರಾಯನಿಗೂ, ಅವನ ಹೆಂಡತಿ ಸಾವಿತ್ರಿಗೂ ತಪ್ಪುತ್ತಿರಲಿಲ್ಲ.

“ಅವರು ಹೇಳಿದರಲ್ಲ, ಇನ್ನು ನಾವು ಇಲ್ಲಿ ನಿಂತರೆ ಮರ್ಯಾದೆ ಉಂಟಾ? ಹೋಗುವ ಎಲ್ಲಿಯಾದರೂ ಬೇಡಿಯಾದರೂ ತಿನ್ನುವ” ಸಾವಿತ್ರಿಯ ಮಾತಿಗೆ ಸುಬ್ರಾಯನಿಗೆ ರೇಗಿತಾದರೂ ಅವಳು ಹೇಳುವುದರಲ್ಲಿ ಸುಳ್ಳಿಲ್ಲವಾದ್ದರಿಂದ, “ನೀನು ಹೀಗೆ ಅವಸರ ಮಾಡಿದರೆ ಹೇಗೆ? ಅಣ್ಣ ಏನೋ ಕೋಪದಿಂದ ಒಂದು ಮಾತು ಅಂದ. ಅದಕ್ಕೆ ಬಾವಿಗೆ ಹಾರಿದರೆ ಆದೀತಾ? ಸ್ವಲ್ಪ ಸಮಯ ಹೋಗಲಿ, ನಾವು ಬೇರೆ ಮನೆ ಮಾಡೋಣ” ಅಂದ ಅವನ ಮಾತು ಸಾವಿತ್ರಿಗೆ ರುಚಿಸಲಿಲ್ಲ. ದಿನಾ ಬೆಳಗಾದರೆ ದನದ ಸೆಗಣಿ ತೆಗೆಯುವುದರಿಂದ ಹಿಡಿದು, ಅವುಗಳ ಹಾಲು ಕರೆದು, ಕಷಾಯ ಮಾಡಿ ತುಂಬಿದ ಮನೆಯಲ್ಲಿರುವ ಎಲ್ಲರಿಗೂ ರುಚಿ ರುಚಿಯಾಗಿ ಮಾಡಿ ಹಾಕುವವರೆಗೆ ಎಲ್ಲಾ ಕೆಲಸಗಳ ಹೊರೆ ಅವಳ ಮೇಲಿತ್ತು. ಕೆಲಸದ ಹೊರೆಯಿಂದಾಗಿ ಕೈಯ ಉಗುರುಗಳ ನಡುವೆ ತುಂಬಿರುವ ಕೊಳಕನ್ನೂ ಶುಚಿಗೊಳಿಸುವಷ್ಟು ಪುರುಸೊತ್ತು ಸಾವಿತ್ರಿಗಿರುತ್ತಿರಲಿಲ್ಲ. ಜೊತೆಗೆ ಅವಳ ಓರಗಿತ್ತಿ ರೋಹಿಣಿಯದ್ದು ಒಂದೇ ಹುಕುಂಗಳು. ‘ಆ ಕೆಲಸ ಆಗ್ಲಿಲ್ಲ, ಈ ಕೆಲಸ ಆಗಿಲ್ಲ; ಅದೆಲ್ಲಾ ಮಾಡೋದು ಯಾರು?’

“ಹೌದು, ಅವರು ಬಾಯಿಗೆ ಬಂದ ಹಾಗೆ ಮಾತನಾಡಲಿ, ನಾವು ಅದನ್ನು ಕೇಳಿಕೊಂಡು ಸುಮ್ಮನಿರುವುದಾ? ಅವರೀಗ ಏನದಂರು, ನಿಮ್ಮ ಕೈಯಲ್ಲಿ ಆಗುವುದಿಲ್ಲವೆಂದದ್ದಲ್ವಾ? ಅವರು ನಿಮ್ಮನ್ನು ಅಷ್ಟೊಂದು ತುಚ್ಛವಾಗಿ ಮಾತನಾಡಿದ್ರೆ ನಾನು ಸುಮ್ಮನಿರುತ್ತೇನಾ? ಇನ್ನು ಮುಂದೆ ನಾನು ಈ ಮನೆಯಲ್ಲಿ ಕೆಲಸ ಮಾಡುವುದಿಲ್ಲ. ಅವರಿಗೆ ಎಲ್ಲಾ ಗೊತ್ತಾಗಲಿ. ನೀವು ಮೊದಲು ಎಲ್ಲಾದರೂ ಸ್ವಲ್ಪ ಜಾಗ ತೆಗೆದು ಹಾಕಿ. ಜೋಪಡಿಯಾದರೂ ಆದೀತು ಕಟ್ಟಿ ಕುಳಿತುಕೊಳ್ಳುವ. ಆದರೆ ಈ ರೀತಿ ಅವರ ಮಾತುಗಳನ್ನು ಕೇಳುವುದು ಬೇಡ” ಎಂದು ಸಾವಿತ್ರಿ ಗಂಡನನ್ನು ಕೇಳಿದಳಾದರೂ, ಮನೆಯನ್ನು ಬಿಟ್ಟು ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸ್ವತ: ಸುಬ್ರಾಯನ ತಾಯಿಯೇ ಬೊಳ್ಳದಲ್ಲಿ ಕೊಚ್ಚಿ ಹೋಗುವ ಮೊದಲ ದಿವಸ ಅವನನ್ನು ಕರೆದು, “ನಿನ್ನ ಅತ್ತಿಗೆ ರೋಹಿಣಿ ಸಾಮಾನ್ಯದ ಹೆಣ್ಣಲ್ಲ. ನೋಡು ನೀನು ಹೀಗೆ ಮೂಕ ಪಶುವಿನ ಹಾಗೆ ಸುಮ್ಮನಿದ್ದರೆ ನಿನ್ನ ಹೆಂಡತಿಯನ್ನು ದುಡಿಸಿಯೇ ತಿನ್ನುತ್ತಾಳೆ. ನಿನಗೂ ಸಂತಾನಾಂತ ನಾಲಕ್ಕು ಮಕ್ಕಳಿದ್ದಾರಲ್ಲಾ? ಅವರನ್ನು ನೀನು ಸಾಕುವುದು ಬೇಡವಾ? ಇಲ್ಲೇ ಗುಡ್ಡದಲ್ಲಿ ಮನೆ ಕಟ್ಟಿ ಕುಳಿತು ಬಿಡು. ಎಲ್ಲಾ ನಾನಿರುವಾಗಲೇ ಆಗಲಿ. ಮತ್ತೆ ದೇವರಾಯ ಕೂಡ ನಿನ್ನ ಮೂಸುವುದಿಲ್ಲ. ಅವನು ದಿಲ್ದಾರ್ ಮನುಷ್ಯ” ಹೇಳಿದ್ದೇ ಮರುದಿವಸ ಎಲ್ಲಿಂದ ಬಂದಿತ್ತೋ ಮಳೆ. ತೋಡಿನಲ್ಲಿ ಹೋಗುತ್ತಿದ್ದ ತೆಂಗಿನ ಕಾಯಿ ಹಿಡಿಯುವುದಕ್ಕೆ ಗದ್ದೆಯ ಬುಡಕ್ಕೆ ಇಳಿದ ಹೆಳೆ, ಅವನ ತಾಯಿಯನ್ನೇ ನೆರೆ ಎಳೆದುಕೊಂಡು ಹೋಗಿತ್ತು. ಅಂದಿಗೆ ಆ ಮನೆಯಲ್ಲಿ ಸುಬ್ರಾಯನ ಸಂಸಾರವನ್ನು ವಹಿಸಿ ಮಾತನಾಡುವವರೆ ಇಲ್ಲವಾಯಿತು. ಸಣ್ಣ ಮಕ್ಕಳನ್ನು ಹಿಡಿದುಕೊಂಡು ಎಲ್ಲಿಗೆ ಹೋಗುವುದು? ಎಂದುಕೊಂಡು ಅವನು ಅಣ್ಣನ ಬೈಗುಳ, ಅತ್ತಿಗೆಯ ಕೊಂಕು ಮಾತುಗಳನ್ನು ಸಹಿಸಿಕೊಂಡು ಕಾಲ ಕಳೆಯುತ್ತಿದ್ದ.

ಆದರೆ ಈಗ ಅದು ಸಾಧ್ಯವಿಲ್ಲವೆನಿಸಿತು. ಸಾವಿತ್ರಿಯದ್ದೂ ಮೊಂಡು ಹಠ. ಎಲ್ಲಿಗೆ ಹೋಗುವುದು? ಯಾರನ್ನು ಕೇಳುವುದು? ಕೈಯಲ್ಲಿ ಅಲ್ಪಸ್ವಲ್ಪ ದುಡ್ಡು ಬಿಟ್ಟರೆ, ಮನೆ ಕಟ್ಟಿ ಕುಳಿತುಕೊಳ್ಳುವಷ್ಟು ಇಲ್ಲ.

“ಸಾವಿತ್ರಿ, ನಾವು ಈ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಜೋಪಡಿಯಲ್ಲಿ ಬದುಕುವುದಕ್ಕೆ ಸಾಧ್ಯ ಉಂಟಾ? ಅವುಗಳಿಗೊಂದು ಸರಿಯಾದ ಬಟ್ಟೆ, ಬರೆ ಉಂಟಾ? ಈಗಲಾದರೆ ಏನೋ ಅಣ್ಣಯ್ಯ, ಅತ್ತಿಗೆ ಅಲ್ಪಸ್ವಲ್ಪ ಕೊಡ್ತಾರೆ. ಇನ್ನು ಮುಂದೆ ಅದನ್ನೆಲ್ಲಾ ನಾವೇ ಮಾಡಿಕೊಂಡು ಹೋಗಬೇಡ್ವಾ?” ತನ್ನ ಸಂಕಟವನ್ನು ತೆರೆದಿಟ್ಟ ಸುಬ್ರಾಯ ಸಣ್ಣ ಮಕ್ಕಳಂತೆ ಅತ್ತೇ ಬಿಟ್ಟ. ಸಾವಿತ್ರಿಗೆ ಅದನ್ನು ಸಹಿಸಲಿಕ್ಕೆ ಆಗಲಿಲ್ಲ.
“ನೀವೆಂತ ಸಣ್ಣ ಮಕ್ಕಳ ಹಾಗೆ ಅಳುವುದು? ನಮ್ಮ ಅಸಹಾಯಕತೆಗೆ ನಾನು ಅಳಬೇಕು. ಅಳಬೇಕಾದವಳೇ ಧೈರ್ಯದಿಂದ ಇದ್ದೇನೆ. ನೀವು ಅಳುವುದು ಸಲ್ಲ. ಸಾಧ್ಯವುಂಟಾ? ನೀವು ಶಾನುಭೋಗರ ಮನೆಗೆ ಹೋಗಿ ಬನ್ನಿ. ಅವರದ್ದು ಕೆಲವು ಗದ್ದೆಗಳನ್ನು ಮಾರುವುದಕ್ಕೆ ಉಂಟಂತ್ತಲ್ವಾ? ಹಾಗಂತ ಉಳುವುದಕ್ಕೆ ಬರುತ್ತಾನಲ್ಲ ಜಯರಾಮ, ಅವನೇ ಅಂದಿದ್ದ” ಎಂದು ಗಂಡನನ್ನು ಸಮಾಧಾನ ಪಡಿಸಿದ ಸಾವಿತ್ರಿ ಮಾಡಲಾರೆನೆಂದ ಮನೆ ಕೆಲಸಗಳನ್ನು ಮಾಡುವುದಕ್ಕೆ ಹೊರಟಳು.
ರಾತ್ರಿ ಹೊತ್ತು ಚಿಮಣಿ ದೀಪದಲ್ಲಿ ಕುಳಿತು ಹೂಬತ್ತಿ ಹೆಣೆಯುತ್ತಿದ್ದ ಸಾವಿತ್ರಿಯ ಬಳಿ ಬಂದ ಸುಬ್ರಾಯ, “ನೀನು ಹೇಳುವುದು ಸರಿ, ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ನಮ್ಮತ್ರ ಎಲ್ಲಿದೆ? ಸುಮ್ಮನೆ ದಾರಿಯಲ್ಲಿ ಬಿದ್ದು ಸಾಯುವುದಾ?” ಅಂದ ಅವನನ್ನು ನೋಡಿ, ತನ್ನ ಓರಗಿತ್ತಿ ಮತ್ತು ಭಾವನ ಕಿವಿಗೆ ಬೀಳದಂತೆ ಅತ್ತಿತ್ತ ನೋಡಿ ಮೆಲು ದನಿಯಲ್ಲಿ, “ನಿಮ್ಮತ್ರ ಸ್ವಲ್ಪ ಉಂಟಲ್ಲಾ? ನನ್ನತ್ರ ಸ್ವಲ್ಪ ಡಬ್ಬಿಯಲ್ಲಿ ಹಾಕಿಟ್ಟದ್ದು ಉಂಟು. ಉಳಿದದ್ದನ್ನ ತಿಂಗಳಿಗೆ ಇಂತಿಷ್ಟೂಂತ ಕೊಡುವ ಆಗಲಿಕ್ಕಿಲ್ಲವಾ?” ಎಂದು ಗಂಡನಿಗೆ ಹೇಳಿ ಅವನಲ್ಲಿ ಧೈರ್ಯ ತುಂಬಿಸಿದಳು.

ಒಂದು ಒಳ್ಳೆಯ ದಿನ ನೋಡಿ ಸುಬ್ರಾಯ, ಶಾನುಭೋಗರ ಮನೆಗೆ ಬಂದ. ಶಾನುಭೋಗರು ಉದ್ದನೆಯ ಆರಾಮ ಕುರ್ಚಿಯಲ್ಲಿ ಕುಳಿತು ಯಾವುದೋ ಹಳೇಯ ಕಾದಂಬರಿಯನ್ನು ಓದುತ್ತಿದ್ದರು. ಸುಬ್ರಾಯ ಅಳುಕುತ್ತಲೇ ಅವರ ಅಂಗಳಕ್ಕೆ ಕಾಲಿಡುವಾಗ ಅವರ ಮಗ ಸತ್ಯವಂತ ಹೊರಗೆ ಬಂದ. ಸುಬ್ರಾಯನನ್ನು ಕಾಣುತ್ತಲೇ, “ಬನ್ನಿ, ಹೀಗೆ ಬಂದಿರೇನು?” ಎಂದು ಕೇಳಿದ.

“ಹೌದು, ಶಾನುಭೋಗರಲ್ಲಿ ಮಾತನಾಡುವುದಿದೆ. ಅವರು ಇದ್ದಾರೇನು?” ಅವರು ಒಳಗಿರುವುದನ್ನು ಗಮನಿಸಿದವನು ಕೇಳುವಾಗ, ಸತ್ಯವಂತ, “ಹೌದು, ಬನ್ನಿ” ಎಂದು ಅವನನ್ನು ಕರೆದು ಜಗುಲಿಯತ್ತ ಕೈ ತೋರಿಸಿದ.
ಬಿಳಿಯ ದೋತರದಲ್ಲಿ ಕಚ್ಚೆ ಬಿಗಿದು, ಕರಿಯ ಕೋಟನ್ನು ಹಾಕಿಕೊಂಡು ಓದುತ್ತಿದ್ದ ಶಾನುಭೋಗರು ಎಲ್ಲಿಗೋ ಹೊರಟಿರುವಂತೆ ಕಂಡರು. ಸುಬ್ರಾಯನನ್ನು ನೋಡುತ್ತಲೇ ಕೈಯಲ್ಲಿದ್ದ ಪುಸ್ತಕಕ್ಕೆ ಒಂದು ಗುರುತು ಇಟ್ಟು, ಅದನ್ನು ಮೇಜಿನ ಮೇಲೆ ಎಸೆದರು.

“ಯಾರು ಇದು?” ಅಂದು, ಮಗ ಸತ್ಯವಂತನನ್ನು ಕರೆದು, “ಸತ್ಯಾ, ಬಂದವರಿಗೆ ನೀರು ಕೇಳಿದಿಯಾ?” ಅಂದರು. ಸುಬ್ರಾಯ ಅಳುಕುತ್ತಲೇ ನಿಂತಿರುವಾಗ ಸತ್ಯವಂತ, “ನೀರು ತರುತ್ತೇನೆ” ಎಂದು ಒಳಗೆ ಹೋದಾಗ ಅವರು ಸುಬ್ರಾಯನತ್ತ ತಿರುಗಿ, “ಹೇಳಿ, ತಾವು ಯಾರು?” ಅಂದರು.

ಸುಬ್ರಾಯ ತನ್ನ ಪರಿಚಯ ಹೇಳಿಕೊಂಡ ಬಳಿಕ, “ಹೋ... ಹೋ... ಗೊತ್ತಾಯಿತು ಬಿಡಿ. ನೀವು ನಮ್ಮ ದೇವರಾಯನ ತಮ್ಮನಲ್ಲವೆ? ಸಾವಿತ್ರಿ ನಿಮ್ಮ ಮಡದಿಯಲ್ಲವೆ? ಹೇಗಿದ್ದಾಳೆ ಅವಳು?” ಎಂದು ಅವರು ತನ್ನ ಮಡದಿಯನ್ನು ಕುರಿತು ಕೇಳುವಾಗ ಸುಬ್ರಾಯನಿಗೆ ಎದೆ ಧಸಕ್ಕೆಂದಿತು.

ಶಾನುಭೋಗರ ವಿಷಯ ತಿಳಿಯದವನೇನಲ್ಲ. ಮೈಯಲ್ಲಿ ಸುಕ್ಕುಗಳು ಮೂಡಿದ್ದರೂ ತನಗಿನ್ನೂ ಮೂವತ್ತಾರು ಅನ್ನುವ ವ್ಯಕ್ತಿ. ಊರಿನ ಎಲ್ಲಾ ಮನೆಯ ಹೆಂಗಸರ ಹೆಸರು ಅವರ ನಾಲಿಗೆಯ ತುದಿಯಲ್ಲಿತ್ತು. ಎಲ್ಲೇ ಸಮಾರಂಭಗಳಾಗಲಿ ಅವರಿಗೆ ಕಾಣುತ್ತಿದ್ದುದು, ಪಟ್ಟೆ ಸೀರೆಯುಟ್ಟು ಅತ್ತಿತ್ತ ಹೋಗುವ ಹೆಂಗಸರು. ಅವರನ್ನು ಕೈಯಲ್ಲಿ ಹಿಡಿದು ನಿಲ್ಲಿಸಿ ಮಾತನಾಡುವುದು ಅವರ ಜಾಯಮಾನ. ಕೆಲವರಿಗೆ ಅದು ಆಗದಿದ್ದರೂ ಹಿರಿಯರು ಅನ್ನುವ ಗೌರವದಿಂದ ನಿಂತು ಮಾತನಾಡುತ್ತಿದ್ದರು. ಯಾರಾದರೂ ಸ್ವಲ್ಪ ಹೆಚ್ಚಿಗೆ ನಡೆದುಕೊಂಡರೆ, “ಇವತ್ತು ಮನೆಯ ಕಡೆಗೆ ಬರುತ್ತೇನೆ” ಅನ್ನುವ ಅಸಾಮಿ. ಅಂತವರ ಬಾಯಿಯಿಂದ ಈ ರೀತಿಯ ಮಾತು ಬಂದಾಗ ಅವನಿಗೆ ಹೆದರಿಕೆಯಾಯಿತು. ಅವನು ಮೆಲ್ಲನೆ, “ತಾವು ಗದ್ದೆಗಳನ್ನು ಮಾರುವುದು ಇದೆಯಂತೆ” ಅಂದು ಅವರ ಮುಖವನ್ನು ನೋಡಿದ. ಅವರ ಮುಖ ಬದಲಾಯಿತು.

“ಹಾಗಂತ ಯಾರಂದರು ನಿನಗೆ?” ದರ್ಪದಿಂದ ಅವರು ಕೇಳುವಾಗ ಸುಬ್ರಾಯ ಉಚ್ಚೆ ಹೊಯ್ಯುವುದೊಂದೇ ಬಾಕಿಯಾಗಿತ್ತು. ಅದಲ್ಲದೆ ಸಾವಿತ್ರಿಯ ಮೇಲೆ ಕೋಪವೂ ಬಂತು.

“ಅದು... ಅದು... ಸಾವಿತ್ರಿನೇ ಹೇಳಿದ್ದು” ಎಂದು ಅವನು ಅಳುಕುತ್ತಲೇ ಹೇಳುವಾಗ ಆರಾಮ ಕುರ್ಚಿಯಿಂದ ಎದ್ದು ಅವನಿಗೆ ಎದುರಾಗಿ ಮರದ ಕುರ್ಚಿಯಲ್ಲಿ ಕುಳಿತವರೇ ಸೊಗಸಾಗಿ ನಕ್ಕರು.

“ಸಾವಿತ್ರಿಗೆ ಎಲ್ಲಾ ವಿಷಯ ಗೊತ್ತಾಗುತ್ತದೆ ಅನ್ನು. ಅವಳು ಹೇಳಿದ್ದು ಸರಿ. ನೀನು ಅವಳ ಕೂಡಿಕೊಂಡೇ ಬರಬಹುದಿತ್ತಲ್ಲಾ? ಒಬ್ಬನೆ ಬಂದದ್ದು ಯಾಕೆ?” ಎಂದು ಅವರು ಹೇಳುವಾಗ ಸುಬ್ರಾಯನಿಗೆ ಉಗುಳು ನುಂಗುವಂತಾಯಿತು. ‘ಛೆ, ಇಂತಹ ಕಚ್ಚೆ ಹರುಕ ವ್ಯಕ್ತಿಯ ಬಳಿ ಕ್ರಯವಿಕ್ರಯದ ಮಾತನಾಡುವುದಕ್ಕೆ ಬಂದ್ದದ್ದು ತಪ್ಪಾಯಿತು’ ಅಂದುಕೊಂಡ.

“ಸರಿ, ನಿನ್ನತ್ರ ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ಉಂಟಾ ಮಾರಾಯಾ? ಅಲ್ಲ, ನಿನ್ನ ಅಣ್ಣ ದೇವರಾಯ ನಿನಗೆ ಪಾಲು ಕೊಡುವುದಿಲ್ಲಾಂತ ಹೇಳಿದ್ದಾನಾ, ಹೇಗೆ?” ಎಂದು ಅವರು ಪ್ರಶ್ನಿಸಲು ಸುಬ್ರಾಯನಿಗೆ ಏನು ಹೇಳುವುದೆಂದು ತೋಚಲಿಲ್ಲ. ಅವನು ತಲೆ ತಗ್ಗಿಸಿಕೊಂಡು, “ಅಣ್ಣಯ್ಯನೇ ಮನೆ ಬಿಟ್ಟು ಹೋಗು ಅಂದ. ಆಸ್ತಿ ಕೇಳಿದರೆ ಇಲ್ಲ ಅನ್ನುತ್ತಾನೆ. ಅದಕ್ಕೆ ಏನಾದರೂ ಮಾಡಿ ಸ್ವಲ್ಪ ಜಾಗ ತೆಗೆದುಕೊಳ್ಳುವುದೆಂದು ಬಂದೆ” ಅಂದಾಗ ಅವರು ಗಹಗಹಿಸಿ ನಕ್ಕರು.

“ಅಂತೂ ಒಂದು ನಿರ್ಧಾರಕ್ಕೆ ಬಂದೇ ಇಲ್ಲಿಗೆ ಬಂದಿದ್ದೀಯಾ ಅನ್ನು. ಸರಿ” ಎಂದು ಅವನತ್ತ ಬಾಗಿ ಮೆಲ್ಲನೆ ಗುಟ್ಟಿನಲ್ಲಿ, “ಎಷ್ಟು ಹಣ ಉಂಟನಾ ನಿನ್ನತ್ರ? ಹೇಗೆ ಹಣ ಹೊಂದಿಸ್ತೀಯಾ? ಸಾವಿತ್ರಿ ಏನಾದರೂ...” ಅಂದವರೇ ಮೈ ಕುಲುಕಿಸಿ ನಕ್ಕರು. ಸುಬ್ರಾಯನ ಮೈ ಉರಿದು ಹೋಯಿತು. ‘ಎಂತದು, ಇವರು ಈ ರೀತಿ ಮಾತನಾಡುವುದು. ಸಾವಿತ್ರಿ ಹೇಳಿದ ಹಾಗೆ ನಾನು ಪಾಪದವನೂಂತ ಈ ರೀತಿ ಮಾತನಾಡುತ್ತಾರಾ ಹೇಗೆ?’ ಎಂದು ಯೋಚಿಸಿದ ಸುಬ್ರಾಯ, “ಶಾನುಭೋಗರೆ, ಕೈಯಲ್ಲಿ ಹಣ ಇರುವುದರಿಂದಲೇ ಇಲ್ಲಿಗೆ ಬಂದಿದ್ದೇನೆ. ತಾವು ದಯವಿಟ್ಟು ದೊಡ್ಡ ಮನಸ್ಸು ಮಾಡಿ ಒಂದೆರಡು ಗದ್ದೆಗಳನ್ನು ಕೊಟ್ಟರೆ ಉಪಕಾರವಾದೀತು” ಎಂದು ಧೈರ್ಯ ತಂದುಕೊಂಡು ನುಡಿದ. ಶಾನುಭೋಗರ ಮುಖ ವಿವರ್ಣವಾಯಿತು. ಏನೋ ಆಲೋಚಿಸಿದವರು ಒಮ್ಮೆಲೆ ಗಂಭೀರವಾಗಿ ಕುಳಿತರು.

“ನೋಡು, ಸಾವಿತ್ರಿ ಹೇಳಿದ್ದಾಳೆಂದ ಮೇಲೆ ಮುಗಿಯಿತು. ಎರಡು ಗದ್ದೆ ನಾನು ಮಾರುತ್ತೇನೆ. ಹಣದ ಜೊತೆಗೆ ಬಂದರೆ ಎಲ್ಲಾ ಇತ್ಯರ್ಥ ಮಾಡಿ ಬಿಡುವ. ಈಗ ಹೋಗು. ಸತ್ಯಾ, ನೀರು ಎಲ್ಲಿಟ್ಟೆ? ನೋಡು ಅವನು ಹೊರಡುತ್ತಾನೆ. ನೀರು ಕೊಡು” ಅಂದಾಗ ಸತ್ಯವಂತ ಕಂಚಿನ ತಂಬಿಗೆಯಲ್ಲಿ ನೀರು ತಂದು ಅವನ ಕೈಯಲ್ಲಿಟ್ಟ. ಸುಬ್ರಾಯ ನೀರು ಕುಡಿದು ಜಾಗ ಖಾಲಿ ಮಾಡಿದ.

ಸುಬ್ರಾಯ ಮನೆಗೆ ಬಂದವನೇ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ಸಾವಿತ್ರಿಯ ಮುಂದೆ ಹೇಳಿದ. ಅವಳಿಗಾದರು ಶಾನುಭೋಗರು ಒಪ್ಪಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿತ್ತು.

ಅವಳು ಒಂದು ದಿನ ತನ್ನ ಬಳಿಯಿದ್ದ ಸ್ವಲ್ಪ ಹಣ, ಗಂಡನ ಬಳಿಯಿದ್ದ ಹಣವನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ಸುಬ್ರಾಯನ ಜೊತೆಗೆ ಶಾನುಭೋಗರ ಮನೆಗೆ ಬರುವಾಗ ಅವರು ಕುರ್ಚಿಯಿಂದ ಎದ್ದು ಬಂದು ಅವರನ್ನು ಸ್ವಾಗತಿಸಿದರು. ಮನೆಯಲ್ಲಿ ಮಗ ಇಲ್ಲದಿರುವುದು ಅವರಿಗೆ ಅನುಕೂಲವೇ ಆಗಿತ್ತು.

“ಬಾ ಸಾವಿತ್ರಿ ಬಾ... ತುಂಬಾ ಸೊರಗಿ ಹೋಗಿರೋ ಹಾಗಿದೆ. ನಿನ್ನ ಓರಗಿತ್ತಿಯ ಕಾಟ ಅತಿಯಾಯಿತು ಅಂತ ಕಾಣುತ್ತದೆ. ಇರಲಿ ಬಿಡು, ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದೀಯಾ. ನಿನಗೆ ಎಂತಹ ಗದ್ದೆ ಬೇಕು ಹೇಳು? ನಿನಗೆ ಬಡಗು ಮನೆ ಗೊತ್ತಲ್ಲಾ? ಅವರ ಮನೆಯ ಹತ್ತಿರ ಎರಡು ಒಳ್ಳೆಯ ಗದ್ದೆಗಳಿವೆ. ಅದನ್ನು ಕೊಡುತ್ತೇನೆ. ಅದೂ ನಿನಗೆ ಕಡಿಮೆಯ ಬೆಲೆಯಲ್ಲಿಯೇ ಕೊಡುತ್ತೇನೆ” ಅಂದವರು ಇಬ್ಬರಿಗೂ ಕುಳಿತುಕೊಳ್ಳಲು ಸೂಚಿಸಿದರು. ಅವರಿಬ್ಬರೂ ಮರದ ಬೆಂಚಿನಲ್ಲಿ ಕುಳಿತು ಸುಧಾರಿಸುವಾಗ ಮನೆ ಕೆಲಸದ ಹೆಂಗಸು ಉದ್ದನೆಯ ಲೋಟದಲ್ಲಿ ಶರಬತ್ತು ತಂದು ಅವರಿಬ್ಬರ ಕೈಯಲ್ಲಿಟ್ಟರು.

ಶರಬತ್ತು ಕುಡಿದ ಬಳಿಕ ಶಾನುಭೋಗರು ಹೊರಟು ಬಂದವರೇ, “ಬನ್ನಿ, ಆ ಜಾಗ ತೋರಿಸುತ್ತೇನೆ” ಎಂದು ಅವರನ್ನು ಕರೆದುಕೊಂಡು ಬಡಗು ಮನೆಯತ್ತ ಬಂದರು. ಎರಡು ಗದ್ದೆಗಳನ್ನು ತೋರಿಸಿ, “ಒಟ್ಟು ಹತ್ತು ಕೊಯ್ಲು ಗದ್ದೆಗಳಿವು” ಎಂದು ತಮ್ಮ ಗದ್ದೆಯನ್ನು ತೋರಿಸಿದರು. ಸುತ್ತಮುತ್ತಲು ಮನೆಗಳಿಲ್ಲದಿದ್ದರೂ ಸಾವಿತ್ರಿಗೆ ಗದ್ದೆಗಳು ಹಿಡಿಸಿದವು. ಪಕ್ಕದಲ್ಲಿ ಕಾಡು, ಗದ್ದೆಯ ಬದಿಗೆ ಭೂತದ ಬನವು ಇತ್ತು. ಜೊತೆಗೆ ಎತ್ತರ ಎತ್ತರದ ತೇಗದ ಮರಗಳು ಇದ್ದವು. ಮನೆ ಕಟ್ಟಿಸುವುದಿದ್ದರೆ ಬೇಕಾದ ಮರಗಳು ಇರುವುದರಿಂದ ಕಣ್ಣು ಮುಚ್ಚಿಯೇ ಸಾವಿತ್ರಿ ಒಪ್ಪಿಕೊಂಡಳು.

“ಹೇಗಿದೆ ಜಾಗ? ಹಿಡಿಸಿತಾ...?” ಶಾನುಭೋಗರು ಸಾವಿತ್ರಿಯನ್ನು ಕೇಳುವಾಗ ಅವಳು, “ತುಂಬಾ ಚೆನ್ನಾಗಿದೆ. ನಮಗಂತೂ ಹಿಡಿಸಿದೆ” ಎಂದು ಆ ವಿಷಯವನ್ನು ಮುಗಿಸುವಂತೆ ಹೇಳಿದಳು.

ಅಂತೂ ಕೈಯಲ್ಲಿದ್ದ ಹಣವನ್ನು ಕೊಟ್ಟು, ಉಳಿದ ಹಣವನ್ನು ಹೊಂದಿಸಿ, ಒಂದೆರಡು ವಾರದಲ್ಲಿ ಹತ್ತು ಕೊಯ್ಲಿನ ಎರಡು ಗದ್ದೆಗಳು ಸುಬ್ರಾಯ ಹೆಸರಿಗೆ ಮಾಡಿಯಾಗಿತ್ತು.

ಸ್ವತ: ಶಾನುಭೋಗರೇ ಅವರನ್ನು ಕರೆದುಕೊಂಡು ಗದ್ದೆಯನ್ನು ಅದಕ್ಕೆ ಸಂಬಂಧಪಟ್ಟ ಕ್ರಯಪತ್ರಗಳನ್ನು ಅವರ ಕೈಯಲ್ಲಿಟ್ಟು, “ಉತ್ತರೋತ್ತರ ಅಭಿವೃದ್ಧಿಯಾಗಲಿ. ಈ ಜಾಗದ ದೈವ ಕೂಡ ನಿಮಗೆ ಒಳ್ಳೆಯದನ್ನು ಮಾಡಲಿ” ಎಂದವರೆ ತಮ್ಮ ಕರಿಯ ಕೋಟನ್ನು ಅಗಲಕ್ಕೆ ಬಿಡಿಸಿ, ಮರದ ಬೊಡ್ಡೆಯ ಬಳಿ ಕುಳಿತರು.

ಸಾವಿತ್ರಿಗೆ ಆಶ್ಚರ್ಯವಾಯಿತು. ಅವರು ಕುಳಿತಿದ್ದಕ್ಕೆ ಅಲ್ಲ. ಬದಲಾಗಿ ಅವಳು ಮನೆ ಕಟ್ಟಲು ಮರಗಳನ್ನು ಯಾವಾಗ ನೋಡಿದ್ದಳೋ ಆ ತೇಗದ ಮರಗಳು ಒಂದು ವಾರದಲ್ಲಿ ಮಾಯವಾಗಿದ್ದವು!

“ಅಲ್ಲಾ, ಇಲ್ಲಿದ್ದ ಅಷ್ಟು ದೊಡ್ಡ ತೇಗದ ಮರಗಳು ಏನಾದವು?” ಎಂದು ಅವಳು ಶಾನುಭೋಗರನ್ನು ಕೇಳುವಾಗ ಅವರು ಕುಳಿತಲ್ಲಿಂದಲೇ, “ಎಲ್ಲಿ... ಎಲ್ಲಿ...? ಇಲ್ಲಿ ಮರಗಳೇ ಇರಲಿಲ್ಲವಲ್ಲ” ಎಂದು ಮರದ ಬೊಡ್ಡೆ ಕಾಣದಂತೆ ಮತ್ತೊಮ್ಮೆ ತಮ್ಮ ಕೋಟನ್ನು ಸರಿಪಡಿಸಿಕೊಂಡು ಕುಳಿತರು. ಹೀಗೆ ಕಣ್ಣೆದುರೇ ಮಾಯವಾದ ಮರಗಳನ್ನು ನೆನೆದು ಅವಳಿಗೆ ಸಂಕಟವಾಯಿತು. ಏನಿಲ್ಲವೆಂದರೂ ಎರಡು ಮನೆ ಕಟ್ಟುವಷ್ಟು ಮರಗಳಿದ್ದವು. ಕತ್ತಲೆಯವರೆಗೂ ಅಲ್ಲೇ ಕುಳಿತಿದ್ದ ಅವರು ಹೊರಟ ಬಳಿಕ ಸಾವಿತ್ರಿ ಗಂಡನಿಗೆ, “ಆಯ್ತಲ್ಲಾ ಇನ್ನು ಮುಂದೆ ಗುಡಿಸಲೋ, ಅರಮನೆಯೋ ಇಲ್ಲೇ ಇರೋಣ” ಅಂದಳು.

ಕೂಡಲೇ ಸಾಲ ಸೋಲ ಮಾಡಿ ಮನೆಯನ್ನು ಕಟ್ಟಿ ಮುಗಿಸುವುದೆಂದು ನಿರ್ಧರಿಸಿ ಆಗಿತ್ತು.

ದೇವರಾಯ ಮನೆಗೆ ಬಂದವನೇ ತಮ್ಮನನ್ನು ಕರೆದು, “ಏನು, ನೀನು ಶಾನುಭೋಗರ ಮನೆಗೆ ಹೋಗಿದ್ದೀಯಂತೆ. ನ್ಯಾಯ ಕೇಳುವುದಕ್ಕಾ? ನಿನಗೆ ನಾನು ಆಸ್ತಿ ಕೊಡುವುದಿಲ್ಲವೆಂದು ಹೋದದ್ದಾ? ನಿನಗೆ ಊರಿನವರೆ ಮುಖ್ಯವಾದರೆ ನಾನು ಆಸ್ತಿ ಕೊಡುವುದೇ ಇಲ್ಲ. ಶಾನುಭೋಗರಲ್ಲ, ಪಟೇಲರಾದರೂ ಬರಲಿ” ಎಂದು ಸಿಟ್ಟು ಕಾರಿಕೊಂಡಾಗ ಸಾವಿತ್ರಿ ಕೆಲಸ ನಿಲ್ಲಿಸಿ ಹೊರಗೆ ಬಂದವಳೇ, “ನಾವು ಹೋಗಿದ್ದು ನ್ಯಾಯ ಕೇಳುವುದಕ್ಕಲ್ಲ. ಬಡಗು ಮನೆಯ ಹತ್ತಿರದ ಗದ್ದೆಗಳನ್ನು ಮಾರುತ್ತಾರೆಂತ ಹೇಳಿದ್ರು. ಅದನ್ನು ತೆಗೆದುಕೊಳ್ಳುವುದಕ್ಕೆ ಹೋಗಿದ್ದೆವು” ಅನ್ನುವಾಗ ದೇವರಾಯ ಸಾವಿತ್ರಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ.

“ಅಂದ್ರೆ, ಮನೆ ಬಿಟ್ಟು ಹೋಗುವ ನಿರ್ಧಾರವಾ? ಇಲ್ಲಿ ಉಣ್ಣುವುದಕ್ಕೆ, ತಿನ್ನುವುದಕ್ಕೆ ಏನು ಕಡಿಮೆಯಿತ್ತು? ಹೋಗಿ, ಹಾಳಾಗಿ ಹೋಗಿ. ನಿಮಗೆ ಬುದ್ಧಿ ಬರಲಿ” ಎಂದು ಕಾಲು ಜಾಡಿಸಿ ಎದ್ದ ದೇವರಾಯ, ತಮ್ಮನ ಕಡೆಗೆ ಕೆಂಡದಂತ ನೋಟ ಬೀರಿದ. ಸುಬ್ರಾಯನ ಕೈ, ಕಾಲುಗಳು ನಡುಗಿದವು. ಅವನು ಸಾವಿತ್ರಿಯತ್ತ ನೋಡುವಾಗ ರೋಹಿಣಿ ಹೊರಗೆ ಬಂದವಳೇ, “ಅಂತು ನೀನು ಗಟ್ಟಿಗತ್ತಿಂತ ತೋರಿಸಿದಿ. ಅಲ್ಲಿ ಹೋಗಿ ದುಡಿಯುವಾಗ ನಿನಗೆ ತಿಳಿಯುತ್ತದೆ” ಎಂದು ಹೂಂಕರಿಸಿ ಹೋದಾಗ ಸಾವಿತ್ರಿಗೂ ನಡುಕ ಶುರುವಾಯಿತು. ‘ಅವರೆಲ್ಲ ಹೆದರಿಸುತ್ತಿದ್ದಾರಾ? ಅಥವಾ ಬೇರೆ ಹೋಗಿ ಸಂಸಾರ ಮಾಡುವುದಕ್ಕೆ ಆಗುವುದಿಲ್ಲವೆಂದು ಬುದ್ಧಿ ಹೇಳುತ್ತಿದ್ದಾರ?’ ಎಂದು ತಿಳಿಯಲಿಲ್ಲ.

ಕೊನೆಗೂ ಧೈರ್ಯದಿಂದ ಗದ್ದೆಯ ನಡುವೆ ಮಾಡು ಬಗ್ಗಿಸಿ ಕುಳಿತಿದ್ದಾಯಿತು. ಪಕ್ಕಕ್ಕೆ ತೋಟಗಳು, ಹಿಂದೆ ಮುಂದೆ ಭತ್ತದ ಗದ್ದೆಗಳನ್ನು ಬಿಟ್ಟು, ಮನೆಯ ಎದುರಿಗೆ ಒಂದು ಬಾವಿ ತೋಡಿ, ಸಂಸಾರ ಹೂಡಿದ್ದಾಯಿತು. ಕೈಲಾಗದ ಕೆಲಸವೆಂದು ಸುಮ್ಮನೆ ಕುಳಿತಿರದೆ, ಅವರಿವರ ಮನೆಯ ನಾಟಿ, ಕೊಯ್ಲು ಕೆಲಸಕ್ಕೂ ಹೋಗಿ ಬರುತ್ತಿದ್ದ ಸಾವಿತ್ರಿ ಮತ್ತು ಸುಬ್ರಾಯರ ಬದುಕು ಅಂತು ಒಂದು ಅರ್ಥ ಪಡೆದುಕೊಂಡು ನೆಮ್ಮದಿಯಿಂದ ಇರುವಂತಾಗಿತ್ತು.

ಆದರೆ ಈಗ ಎಂದೂ ಇಲ್ಲದ ಹೊಸ ಸಮಸ್ಯೆಯೊಂದು ಉದ್ಭವಿಸಿದ್ದು ಆತಂಕಕ್ಕೆ ಕಾರಣವಾಗಿತ್ತು. ಗದ್ದೆಯ ನಡುವಿನ ಮನೆ ಬೇರೆ. ಮಳೆ ನೀರು ನಿಂತರೆ ಕೇಳುವುದಕ್ಕೆ ಉಂಟಾ? ಪಂಚಾಂಗದೊಳಗೆ ನೀರು ಹೋದರೆ ಹೇಗೆ? ರಾತ್ರಿ ಹಗಲು ನಿದ್ದೆಯಿಲ್ಲದೆ ತೊಳಲಾಡುವಂತಾಯಿತು. ಮಳೆ ಬೇರೆ ನಿಲ್ಲುವ ಸೂಚನೆಯಿಲ್ಲ.ಆಕಾಶವೇ ತೂತಾಗಿದೆಯೋ ಏನೋ? ಹೀಗೆ ದಿನಗಳು ಕಳೆಯುತ್ತಿದ್ದವು.

ಸಾವಿತ್ರಿ ಅಕ್ಕಿ ಆರಿಸಿ, ಕುದಿಯುವ ನೀರಿಗೆ ಹಾಕಿ ಹೊರಗೆ ಬರುವಷ್ಟರಲ್ಲಿ ಸಾಂತಕ್ಕ ಓಡಿಕೊಂಡು ಬರುತ್ತಿರುವುದು ಕಾಣಿಸಿತು. ಅವಳು ಹೊರಕ್ಕೆ ಇಣುಕುವಾಗ ಸುಬ್ರಾಯ ಅವಸರವಸರವಾಗಿ ಒಳಗೆ ಬಂದು, “ಇಕ್ಕಳೆ, ನಿಂಗೆ ವಿಷಯ ಗೊತ್ತುಂಟಾ? ಅವ ಸಾಂತಕ್ಕನ ಮಗ ಈಸ್ವರ ನೆರೆಯಲ್ಲಿ ಮೀನು ಹಿಡಿಯುವುದಕ್ಕೆ ಹೋಗಿದ್ದಂತೆ. ಅವನು ಬೊಳ್ಳದಲ್ಲಿ ಬಿದ್ದಿದ್ದಾನೆಂತ ಹೇಳ್ತಿದ್ದಾರೆ” ಅನ್ನುವಾಗ ಸಾವಿತ್ರಿಗೆ ಜೀವವೇ ಕೈಯಲ್ಲಿ ಬಂದಂತಾಯಿತು. ಎಷ್ಟೆಂದರೂ ಕಷ್ಟಕ್ಕಾಗುವವಳು ಅವಳು. ಗಂಡನಿಗೆ ಒಲೆಯನ್ನು ನೋಡಿಕೊಳ್ಳಲು ಹೇಳಿ ಹಿರಿಯ ಮಗನನ್ನು ಕರೆದುಕೊಂಡು ನೆರೆಯ ಕಡೆಗೆ ಧಾವಿಸಿದಳು. ಆಗಲೆ ರಾಮ, ಗೋವಿಂದ, ಚೀಂಕ್ರ ಎಲ್ಲಾ ಸೇರಿದ್ದರೂ ಸುಳಿಯಿರುವ ಬೊಳ್ಳಕ್ಕೆ ಇಳಿಯುವ ಸಾಹಸ ಯಾರೂ ಮಾಡಿರಲಿಲ್ಲ. ಸಾವಿತ್ರಿ ಅತ್ತಿತ್ತ ನೋಡಿ ಮೆಲ್ಲನೆ ಗದ್ದೆಯ ನೀರಿನಲ್ಲಿ ಇಳಿದು ಈಜುತ್ತಾ ಸಾಗುವಾಗ ಈಸ್ವರ ಕೇದಗೆಯ ಬನದಲ್ಲಿ ಸಿಕ್ಕಿ ಬಿದ್ದಿರುವುದು ಕಾಣಿಸಿತು. ಅವಳು ಈಸ್ವರನನ್ನು ಹಿಡಿದು ಮೇಲಕ್ಕೆ ಎಳೆದುಕೊಂಡು ಬರುವಾಗ ನಿಂತಿದ್ದ ಗಂಡಸರ ಮುಖ ನಾಚಿಕೆಯಿಂದ ತಗ್ಗಿತು.

“ಅಮ್ಮೋರೆ, ನನ್ನ ಮಗನ ಪ್ರಾಣ ಉಳಿಸಿದಿರಿ. ನಿಮ್ಮ ಋಣ ಹೇಗೆ ತೀರಿಸುವುದು?” ಅನ್ನುತ್ತಾ ಸಾಂತಕ್ಕ ಅವಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಳು. “ಸಾಂತಕ್ಕ , ಇದೆಲ್ಲಾ ಎಂತ? ನೆರೆ ಕರೆಯೆಂದರೆ ಇಷ್ಟು ಮಾಡದಿದ್ದರೆ ಹೇಗೆ?” ಅಂದು ಜನರಿಂದ ಬಿಡಿಸಿಕೊಂಡು ಮನೆಗೆ ಬರುವಾಗ ಹಿಂದಿನ ಮನೆಯವರು ನಿಂತಿದ್ದರು. ಅವರು ಸಾವಿತ್ರಿಗೆ ಕೈ ಮುಗಿದು, “ತಾಯಿ, ನಮ್ಮಿಂದ ದೊಡ್ಡ ತಪ್ಪಾಗಿದೆ. ದಯವಿಟ್ಟು ಮನ್ನಿಸಬೇಕು” ಅಂದಾಗ ಅವನ ಮಾತು ಅರ್ಥವಾಗಲಿಲ್ಲ. ಅವಳು ಅವರನ್ನೇ ನೋಡುತ್ತಿರಬೇಕಾದರೆ ಅವನು, “ಕಾಡಿನ ಒಡ್ಡ ನೀರಿಗೆ ಕಟ್ಟ ಹಾಕಿದ್ದೇ ಈಗ ನಮ್ಮ ದೊಡ್ಡ ಬರೆ ಜರಿದು ಬಿತ್ತು. ಇದ್ದ ಬೆಳೆಯೆಲ್ಲಾ ಮಣ್ಣು ಬಿದ್ದು ಹಾಳಾಯಿತು” ಅನ್ನುವಾಗ ಅವಳು, “ನೋಡಿ, ನಮ್ಮ ಸಂಕಟ ಯಾರ ಹತ್ತಿರ ಹೇಳುವುದು? ಮನೆಯ ಪಂಚಾಂಗಕ್ಕೂ ನೀರು ಹೋಗಿ ಮನೆಯೇ ಕುಸಿಯುವ ಪರಿಸ್ಥಿತಿಯಾಗಿದೆ. ಕಂಗು, ತೆಂಗೆಲ್ಲಾ ಹಾಳಾದ ಹಾಗೆ. ನೀವು ಅರ್ಥ ಮಾಡಿಕೊಳ್ಳಲಿಲ್ಲ. ಸಾಂತಕ್ಕನಿಗೂ ಅರ್ಥವಾಗಲಿಲ್ಲ. ಇರಲಿ ದೇವರುಂಟು” ಅಂದು ನಿಟ್ಟುಸಿರಿಟ್ಟಾಗ ಏನೋ ಭಾರೀ ಸದ್ದಾಯಿತು. ಅವಳು ಹೊರಗೆ ಧಾವಿಸಿ ಬರುವಷ್ಟರಲ್ಲಿ ಮನೆಯ ಒಂದು ಗೋಡೆ ಕುಸಿದು ಬಿತ್ತು. ಸುಬ್ರಾಯ ತಲೆ ಚಚ್ಚಿಕೊಂಡು ಅತ್ತರೆ ಅವಳು, “ಎಂತ ಇದು ನೀವು? ಮನೆ ಬಿದ್ದಿಲ್ಲವಲ್ಲಾ, ಅದಕ್ಕೆ ಸಮಾಧಾನ ಪಡಬೇಕು” ಎಂದು ಮಕ್ಕಳನ್ನು ಕರೆದು ಅತ್ತ ಹೋಗದಂತೆ ಹೇಳಿದಳು.

ಅಲ್ಲೇ ನಿಂತಿದ್ದ ಹಿಂದಿನ ಮನೆಯ ಗಂಡಸು, “ಅಮ್ಮೋರೆ, ನಿಮ್ಮ ಮನೆಯನ್ನು ಸರಿಮಾಡಿಕೊಡುವ ಕೆಲಸ ನಾನು ಮಾಡುತೇನೆ. ನೀವು ನಮಗೆ ಮನೆ ಕಟ್ಟುವುದಕ್ಕೆ ಜಾಗ ಬಿಟ್ಟುಕೊಟ್ಟಿದ್ದೀರಿ. ನಿಮ್ಮ ಋಣವನ್ನು ತಿರಿಸಿದ ಹಾಗಾಗುತ್ತದೆ” ಅಂದಾಗ ಸಾವಿತ್ರಿಗೆ ಆಶ್ಚರ್ಯವಾಯಿತು. ಆಗ ಆ ಗಂಡಸೆ, “ನಾವು ಮನೆ ಕಟ್ಟಿ ಕುಳಿತಿರುವ ಜಾಗ ಉಂಟಲ್ಲಾ ಅದು ನಿಮ್ಮದಂತೆ. ನಾವು ಪಂಚಾಯತಿಯಲ್ಲಿ ವಿಚಾರಿಸಿದಾಗ ಗೊತ್ತಾಯಿತು. ನಿಮ್ಮ ಹತ್ತು ಕೊಯ್ಲು ಜಾಗದ್ದೇ ಒಂದು ಭಾಗ ಅದು” ಅಂದಾಗ ಅವಳಿಗೆ ಏನು ಹೇಳಬೇಂದೇ ತಿಳಿಯದಾಯಿತು. ಶ್ಯಾನುಬೋಗರು ಕೂಡ ಅದನ್ನು ಹೇಳದಿರುವುದು ಅವಳಿಗೆ ಆಶ್ಚರ್ಯವಾಗಿತ್ತು.

“ಆಗಲಿ, ಯಾರೂ ಯಾರ ಋಣದಲ್ಲಿ ಬೀಳುವುದು ಬೇಡ” ಅಂದವಳೆ ಅವರನ್ನು ಕಳುಹಿಸಿ ಮಕ್ಕಳಿಗೆ ಊಟಕ್ಕೆ ತಯಾರಿ ಮಾಡಿದಳು.

Read more!

Tuesday, December 1, 2009

‘ಇಂಗ್ಲಿಷ್ ಮಂಗ’ ಸುಲಲಿತ ಕಥೆಗಳ ಸಂಕಲನ


ಸಲೀಸಾಗಿ ಓದಿಸಿಕೊಂಡು ಹೋಗುವುದು ಕಥೆಯ ಮುಖ್ಯ ಲಕ್ಷಣ. ಶಾಂತರಾಮ ಸೋಮಯಾಜಿ ಅವರ ‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿರುವ ಕಥೆಗಳಿಗೆ ಅಂತಹ ಲಕ್ಷಣವಿರುವುದರಿಂದ ಓದುಗನಿಗೆ ಅವುಗಳು ಆಪ್ತವೆನಿಸುತ್ತವೆ. ಬಹಳ ಸರಳವಾದ ಶೈಲಿ, ಭಾಷೆಯ ಮಿತವಾದ ಬಳಕೆಯಿಂದಾಗಿ ಇಲ್ಲಿನ ಕಥೆಗಳು ಇಷ್ಟವಾಗುತ್ತವೆ. ಎಲ್ಲಾ ಕಥೆಗಳಲ್ಲಿಯೂ ದಕ್ಷಿಣ ಕನ್ನಡ ಮತ್ತು ಉಡುಪಿಯ ಪರಿಸರದಲ್ಲಿರುವ ಸನ್ನಿವೇಶ, ಆಡು ಭಾಷೆಯ ಬಳಕೆ ಸುಂದರವಾಗಿ ಚಿತ್ರಿತವಾಗಿದೆ.
‘ಕಥಾ ಸೃಷ್ಟಿ ನನಗೆ ಅತ್ಯಂತ ಆನಂದ ಕೊಡುವ ಚಟ. ನನ್ನ ಪಾಲಿಗೆ ಅದೊಂದು ಅಡ್ವೆಂಚರ್. ಚಾಲೆಂಜ್ನೊಟ್ಟಿಗೆ ಅಗಾಧ ಸಂತೋಷ ತೃಪ್ತಿ ತಂದುಕೊಡುವ ಗೀಳು’ ಇದು ಲೇಖಕರ ಮಾತು. ಈ ಮಾತಿನಲ್ಲಿ ಅತಿಶೋಯಕ್ತಿ ಇರಲಾರದು. ಇಲ್ಲಿನ ಎಲ್ಲಾ ಕಥೆಗಳಲ್ಲಿಯೂ ವಿಭಿನ್ನ ಶೈಲಿಯನ್ನು ಬಳಸಿಕೊಂಡಿರುವುದು ಲೇಖಕನ ಜಾಣ್ಮೆಯನ್ನು ಮತ್ತು ಕಥೆ ಬರೆಯುವಲ್ಲಿರುವ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ.
‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿ ಒಟ್ಟು 21 ಕಥೆಗಳಿದ್ದು ಪ್ರತಿಯೊಂದು ಕಥೆಯೂ ಸರಳ, ಸುಂದರವಾಗಿ ಮೂಡಿ ಬಂದಿದೆ. ಗುಜ್ಜೆಗಟ್ಟಿ, ಮನಸ್ಸಿನ ಧರ್ಮ, ಅದೃಷ್ಟದ ಅನ್ನ, ಸ್ವಲ್ಪ ಸ್ವಲ್ಪ, ಇಂಗ್ಲಿಷ್ ಮಂಗ, ಮಠದ ತೋಡು, ಸೀರೆಯ ಜಾತಿ ಕಥೆಗಳು ಹೆಚ್ಚು ಆಪ್ತವೆನಿಸುತ್ತವೆ. ಎಲ್ಲಾ ಕಥೆಗಳು ತಿಳಿ ಹಾಸ್ಯದೊಡೆ ಇದ್ದರೂ, ಕೆಲವೊಂದು ಕಡೆ ಗಂಭೀರ ಸಮಸ್ಯೆಯನ್ನು ಎದುರಿಸುತ್ತಾ, ಕಥೆಗೆ ತಿರುವನ್ನು ನೀಡುತ್ತಾ, ಮತ್ತದೆ ಸುಲಲಿತವಾದ ಉತ್ತರವನ್ನು ಹೇಳುತ್ತಾ ಮುಂದೆ ಸಾಗುತ್ತದೆ."
‘ಗುಜ್ಜೆಗಟ್ಟಿ’ಯಲ್ಲಿ ಸಾವಿನ ಬಗ್ಗೆಗಿರುವ ಮತ್ತು ಸತ್ತ ನಂತರದ ಸ್ವಗತ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಯಾವತ್ತೊ ಒಮ್ಮೆ ಕಂಡ ರುಚಿಯನ್ನು ಮೆಲುಕು ಹಾಕುತ್ತಾ ಆ ವಸ್ತುವಿಗಾಗಿ ಪರದಾಡಿ, ಕೊನೆಗೂ ಅದರಿಂದ ತೃಪ್ತಿ ಪಡುವುದು ಮನುಷ್ಯನ ಸಹಜ ಗುಣ. ಅದರಂತೆ ಇಲ್ಲಿಯ ಕಥಾನಾಯಕ ದೇವಣ್ಣ ಪೆಲ್ಯರು ಒಂದು ಹಲಸಿನ (ಗುಜ್ಜೆ) ಹಣ್ಣಿಗಾಗಿ ಊರೂರು ಅಲೆಯ ಬೇಕಾಗುವ ಪ್ರಸಂಗ ಎದುರಾಗುತ್ತದೆ.
ಧರ್ಮ ಮತ್ತು ಮನುಷ್ಯನ ಮನಸಿನ ಕುರಿತು ಬರೆದಿರುವ ಕಥೆ ‘ಮನಸ್ಸಿನ ಧರ್ಮ’. ಜಾತೀಯತೆಯ ಪ್ರಶ್ನೆ ಎದುರಾದಾಗ ಅದಕ್ಕೆ ಬಹಳ ಜಾಣ್ಮೆಯಿಂದ ಉತ್ತರ ನೀಡುತ್ತಾ ಸಾಗುವ ಈ ಕಥೆಯು “ಅವನಿಗೆ ಹೇಳಿದೆ, ನೋಡಪ್ಪ ನಾನು ಯುನಿವರ್ಸಿಟಿಯಲ್ಲಿ 36 ವರ್ಷ ಪಾಠ ಮಾಡಿದವನು. ಯಾವುದೇ ಜಾತಿ, ಧರ್ಮ, ಗಂಡು ಹೆಣ್ಣು ಭೇಧ ಭಾವ ಇಲ್ದೆ ಕಲಿಸಿದ್ದೇನೆ. ವಿಧ್ಯಾರ್ಥಿ ಹಿಂದೂ ಆಗಿರ್ಲಿ ಮುಸ್ಲಿಂ ಆಗಿರ್ಲಿ ಕ್ರಿಶ್ಚಿಯನ್ ಆಗಿರ್ಲಿ ಯಾರೇ ಆಗರ್ಲಿ ಎಲ್ರಿಗೂ ಒಂದೇ ಪಾಠ ಮಾಡ್ತಾ ಇದ್ದವ್ನು ಹಾಗಿದ್ದೇರೆ ಅನ್ಯಧರ್ಮಿಯರ ಮೇಲೆ ನನ್ನಲ್ಲಿ ದ್ವೇಷ ಹೇಗೆ ಸಾಧ್ಯ?” ಮನುಷ್ಯನ ಒಳ್ಳೆಯತನವನ್ನು ಗುರುತಿಸಿಕೊಳ್ಳುವುದಕ್ಕೆ ಇದಕ್ಕಿಂತ ಮಿಗಿಲಾದ ಮಾತುಗಳು ಬೇಕಾಗಿಲ್ಲ.
ಶ್ರೀಮಂತಿಕೆಯ ವೈಭವವನು ನವಿರಾಗಿ ಚಿತ್ರಿಸುತ್ತಾ ಅಲ್ಲೂ ಇರುವ ನೋವನ್ನು ಹತಾಶೆಗಳನ್ನು ತೆರೆದಿಡುವ ಕಥೆ ‘ಅದೃಷ್ಟದ ಅನ್ನ’ ಹೆಣ್ಣಿನ ನೋವು ತನಗೆ ತೆಗೆದುಕೊಳ್ಳಲು ಇರುವ ‘ಚಾಯ್ಸ್’ ನಲ್ಲಿ ಗೊಂದಲಗಳನ್ನು ಹೇಳುತ್ತಾ ಸುಖಾಂತ್ಯದಲ್ಲಿ ಕೊನೆಗೊಳ್ಳುವ ಕಥೆ ‘ಒಳ್ಳೆಯವಳು’
ಮನುಷ್ಯನ ಚಹರೆ ಮತ್ತು ಹವ್ಯಾಸಗಳ ಬಗ್ಗೆ ಹೇಳುತ್ತಾ ಸಾಗುವ ಕಥೆ ‘ಸ್ವಲ್ಪ ಸ್ವಲ್ಪ’ ಉಳಿದ ಎಲ್ಲಾ ಕಥೆಗಳಿಗಿಂತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಓದುಗನನ್ನು ಬಾಲ್ಯಕ್ಕೆ ಕರೆದುಕೊಂಡು ಹೋಗಿ ಹಿಂದಿನ ದಿನಗಳನ್ನು ಕೆದಕಿಬಿಡುತ್ತದೆ. ವಾಸ್ತವಿಕತೆಯಿಂದ ಪ್ಯಾಂಟಿಸಿಯತ್ತ ಜಾರುವ ಕಥೆ ‘ಇಂಗ್ಲಿಷ್ ಮಂಗ’. ಈಗಿನ ಪೀಳಿಗೆಯಾಂತ್ರಿಕ ಬದುಕು ಮತ್ತು ಹೊರಗಿನ ಆಕರ್ಷಣೆಗೆ ತಪ್ಪು ಹೆಜ್ಜೆಗಳನ್ನು ಇಡುವುದನ್ನು ಇಲ್ಲಿ ನವಿರಾಗಿ ನಿರೂಪಿಸಿದ್ದಾರೆ. ಅದೇ ಕೊನೆಗೆ ಆಪ್ತವೆನಿಸಬಹುದಾದ ಸಂದಿಗ್ದತೆ. ಇವೆಲ್ಲಾವನ್ನೂ ‘ಇಂಗ್ಲಿಷ್ ಮಂಗ’ ದ ಜೊತೆಗೆ ಸೇರಿಸಿ ಬರೆದಿರುವ ಉತ್ತಮ ಕಥೆ.
‘ಮಠದ ತೋಡು’ ಕಥೆಯಲ್ಲಿ ಜಾಗ ತೆಗೆದುಕೊಂಡು ಮನೆ ಕಟ್ಟಿಸಿಯೂ ವಾಸವಾಗಲಾರದೆ ಪರವೂರಿಗೆ ಹಿಂತಿರುಗುವ ಸಂಸಾರದ ಕಥೆಯಾದರೆ, ಅಲ್ಲಿ ನಡೆಯುವ ಕುಟಿಲತೆ, ಮೋಸ, ಕೊಲೆಗೆ ಹೇತುವಾಗುವ ವಿಷಯಗಳು ಮಠದ ತೋಡಿನ ಹಾಗೇ ಕೊಳಕಾಗಿ ಹರಿಯುತ್ತಿರುತ್ತದೆ. ಜಾತೀಯತೆಯೆನ್ನುವ ನೀರೀಗ ‘ಹಂದಿಯ ಮೈಯಂತೆ ಕಪ್ಪಾಗಿದೆ.... ಕೊಳೆತ ಮೀನಿನಂತೆ ನಾರುತ್ತಿದೆ. ಒಂದಲ್ಲ ನೂರು ಹೆಣ್ಣು ಮಕ್ಕಳನ್ನು ಮುಳುಗಿಸಿ ಕೊಂದರೂ ಆ ಹೆಣಗಳು, ಮನುಷ್ಯರ ಕಣ್ಣಿಗೆ ಕಾಣಿಸದಷ್ಟು ಕೊಳಕಾಗಿದೆ ಆ ತೊಡಿನ ನೀರು’ ಅನ್ನುವ ಕಥೆಯ ಕೊನೆಯ ವಾಕ್ಯಗಳು ಅಸ್ವಸ್ಥ್ಯ ಸಮಾಜದ ಚಿತ್ರಣವನ್ನು ತೆರೆದಿಡುತ್ತದೆ’
‘ಸೀರೆಯ ಜಾತಿ’ ಮಕ್ಕಳ ಮುಗ್ಧತೆ ಮತ್ತು ಹಿರಿಯಲ್ಲಿರುವ ಜನಾಂಗೀಯಾ ತಾರತಮ್ಯಗಳ ತುಲನೆಯ ಒಂದು ಒಳ್ಳೆಯ ಕಥೆ. ಮಕ್ಕಳಾಗಿರುವಾಗ ಜಾತಿ, ದ್ವೇಷಗಳ ಪ್ರಶ್ನೆಯೇ ಇರುವುದಿಲ್ಲ. ಅದನ್ನು ಕ್ರಮೇಣ ಹಿರಿಯರಿಂದಾಗಿ ಕಲಿತುಕೊಳ್ಳುವ ಮಕ್ಕಳ ಮುಗ್ಧತೆಯನ್ನು ತೆರೆದಿಡುತ್ತದೆ ಈ ಕಥೆ.
ಫ್ಯಾಂಟಸಿಯಂತೆ ಮೂಡಿ ಬಂದಿರುವ ಈಜುವಿದ್ಯೆ; ಪರೀಕ್ಷೆಯ ಆತಂಕ ಸೋಲಿನ ನಡುವೆ ಸಾಕುಪ್ರಾಣಿಯ ಕಡೆಗಿರುವ ಕಾಳಜಿ, ಸ್ನೇಹದ ಕಥೆ ‘ಪರೀಕ್ಷೆ’
‘ಇನಿಯನಿಗೊಂದು ಪತ್ರ’ ವಿರಹಿಯೊಬ್ಬಳ ಅಂತರಂಗದ ತುಮುಲಗಳನ್ನು ಬಿಚ್ಚಿಟ್ಟು ಪರಿಧಿಯಳೊಗೆ ಬೇಯುತ್ತಾ ಬದುಕುವ ಹೆಣ್ಣಿನ ಚಿತ್ರಣ.
‘ಚೇರಂಟೆ’ ಇಂದಿನ ದಿನಗಳಲ್ಲಿ ನಡೆಯುವ ಮೋಸ ವಂಚನೆಯ ಬಗ್ಗೆಯಿದ್ದು ನಾವು ಯಾರನ್ನು ನಂಬಿ ಬಿಡುತ್ತೇವೊ ಅವರಿಂದಲೆ ಮೋಸ ಹೋಗುವ ಸ್ಥಿತಿ ಎದುರಾಗುವ ಕಥೆ.
‘ಗೊಂಬೆಯಾಟ’ ಪ್ರೀತಿ, ಸ್ನೇಹ, ಗೌರವವಿರದ ಬದುಕಿಗೆ ರೋಸಿ ಹೋದ ಅಸಹಾಯಕ ಹೆಣ್ಣಿನ ದನಿಯಾದರೆ, ಪವಾಡ ಸ್ವಾಮೀಜಿಯ ಕಥೆ ‘ಪವಾಡಪುರುಷರು’, ‘ಅಜ್ಜಿ ಮತ್ತು ಬೆಕ್ಕು’, ‘ಚಿಕ್ಕಪ್ಪ’, ‘ಅಕ್ಷರಾಭ್ಯಾಸ’, ‘ಮೀನಾಳ ಗುಟ್ಟು’, ‘ಮಹಾಬಾಲಯ’, ‘ಗುಪ್ತ ಪ್ರತಿಭೆ’ ಮತ್ತು ‘ಪ್ರೀತಿಯಿಂದ’ ಓದಿಸಿಕೊಂಡು ಹೋಗುವ ಇತರ ಕಥೆಗಳು.
ಇತ್ತೀಚಿಗೆ ಪುಟಗಳ ಮಿತಿಗೆ ಇಳಿದಿರುವ ಕಥೆಗಳ ಅವಸ್ಥೆಯಿಂದ ಹೊರಗೆ ಬಂದು ಹುಡುಕಾಡಿದರೆ ‘ಇಂಗ್ಲಿಷ್ ಮಂಗ’ ದಂತಹ ಒಳ್ಳೆಯ ಕಥಾಸಂಕಲನಗಳು ದೊರೆಕಬಹುದು. ಈ ಕೃತಿಯನ್ನು ಹೊರತಂದವರು ಹೇಮಂತ ಸಾಹಿತ್ಯ, ಬೆಂಗಳೂರು ಇವರು.

Read more!

Friday, November 27, 2009

ಶಾಪ


3 ದಿನಗಳಿಂದಲೂ ಒಂದೇ ತೆರನಾಗಿ ಬೀಳುವ ಮಳೆಯನ್ನೂ ಲೆಕ್ಕಿಸದೆ ಜಾನಕಿ ಕೊರಂಬು ತಲೆಗೇರಿಸಿ, ಮೊಣಗಂಟಿನವರೆಗೂ ಸೀರೆಯನ್ನು ಮೇಲಕ್ಕೆತ್ತಿ, ಲೋಟ ಹಿಡಿದ ಕೈಗಳನ್ನು ಚಳಿಗೆ ಎದೆಯ ಒಳಗಿರಿಸಿಕೊಂಡು ವೆಂಕಟ ಭಟ್ಟರ ಜಾರುವ ಅಂಗಳಕ್ಕೆ ಕಾಲಿಟ್ಟಾಗ ಮುಸ್ಸಂಜೆಯ ಹೊತ್ತು ಹಲಸಿನ ಹಪ್ಪಳ ಮೆಲ್ಲುತ್ತಿದ್ದ ಭಟ್ಟರಿಗೆ ಆಶ್ಚರ್ಯವಾಯಿತು. ತಮ್ಮ ಪಕ್ಕದಲ್ಲಿಯೆ ಕುಳಿತು ಕರಿದ ತೆಳುವಾದ ಹಪ್ಪಳಗಳನ್ನು ಆರಿಸುತ್ತಿದ್ದ ಮಗನಿಗೆ ಹೇಳಿದರು.
"ಮಾಣಿ, ಹೋಗು ಆ ಕೆಳಗಿನ ಮನೆಯ ಹೆಂಗಸು ಬಂದಿದೆ. ಚಳಿಗೆ ನಡುಗುತ್ತಾ ನಿಂತಿದೆ. ಅದಕ್ಕೆ ಕೇಳಿ ತೆಗೆದುಕೊಳ್ಳುವುದಕ್ಕೆ ಹೊತ್ತು ಗೊತ್ತು ಇಲ್ಲ. ಬಾಗಿಲು ತೆಗಿ" ಭಟ್ಟರ ಮಗ ರಮಣ ಆರಿಸಿದ ಹಪ್ಪಳವನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಮಳೆಗೆ ಗಚ್ಚನೆ ಮುಚ್ಚಿದ ಬಾಗಿಲಿನ ಚಿಲಕ ತೆಗೆದು ಎಳೆದ.


ಚಳಿಗೆ ನಡುಗುತ್ತಿದ್ದ ಹೆಂಗಸು, " ಮಾಣಿ, ಅಮ್ಮ ಮನೆಯಲ್ಲಿ ಇಲ್ವಾ?" ಅಂದಾಗ ರಮಣ, "ಇದ್ದಾರೆ" ಅನ್ನುತ್ತಾ ಇಡೀ ಹಪ್ಪಳಕ್ಕೆ ಬಾಯಿ ಹಚ್ಚಿದ.
ಒಳಗೆ ಬಂದು ಗೋಡೆಗೆ ಒರೆಸಿಕೊಂಡಂತೆ ಕುಕ್ಕರುಗಾಲಿನಲ್ಲಿ ಕುಳಿತ ಹೆಂಗಸು, ಹಪ್ಪಳ ಕರಿದ ತೆಂಗಿನೆಣ್ಣೆಯ ಪರಿಮಳ ಮೂಗಿಗೆ ನಾಟುತ್ತಲೇ, ಅಡುಗೆ ಮನೆಯತ್ತ ಮುಖ ಹೊರಳಿಸಿತು.
"ಏನು ಜಾನಕಮ್ಮ, ಈ ಹೊತ್ತಿನಲ್ಲಿ? ಮಳೆಗೆ ತಲೆ ಹೊರಗೆ ಹಾಕುವುದು ಬೇಡ ಅನ್ನುವಷ್ಟು ಬೇಜಾರು. ಮೈ, ಕೈಯೆಲ್ಲಾ ಒದ್ದೆ ಮಾಡಿಕೊಂಡು ಬಂದಿದ್ದೀರಲ್ಲಾ, ಏನು ಕಥೆ?" ಹಪ್ಪಳದ ತಟ್ಟೆಯನ್ನು ಮಗನ ಕಡೆಗೆ ನೂಕಿ ಕುಳಿತಿದ್ದ ಹೆಂಗಸನ್ನು ಕೇಳಿದರು ಭಟ್ಟರು.
"ಭಟ್ರೆ, ಒಲೆ ಉರಿಸೋದೆ ಕಷ್ಟ ಆಗಿದೆ. ಒಟ್ಟು ಮಾಡಿಟ್ಟ ಕಟ್ಟಿಗೆಗೆ ಪಸೆ ಬಂದಿದೆ. ಗಂಜಿಯೇನೋ ಬೇಯಿಸಿ ಬಂದೆ. ಪದಾರ್ಥ ಮಾಡೋದಿಕ್ಕೆ ಸಾಧ್ಯವಿಲ್ಲ. ಸ್ವಲ್ಪ ಮಜ್ಜಿಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು"
ಭಟ್ಟರಿಗೂ ಹೆಂಗಸಿನ ಮೇಲೆ ಕನಿಕರ ಬಂತು. ತಮ್ಮ ಮಡದಿ ವನಜಾಕ್ಷಿಯನ್ನು ಕರೆದರು."
"ಇಕಳ್ಳೇ... ಅವರಿಗೆ ಮಜ್ಜಿಗೆ ಬೇಕಂತೆ, ಕೊಡು"
ಅಡುಗೆ ಮನೆಯಲ್ಲಿ ಎಣ್ಣೆಯ ಬಾಣಲೆಯನ್ನು ಒಲೆಯಿಂದ ಕೆಳಗಿರಿಸಿ, ತೂಗು ಬಲೆಯಿಂದ ಮಜ್ಜಿಗೆಯ ಪಾತ್ರೆ ತೆಗೆದು, ಲೋಟಕ್ಕೆ ಸುರುವಿ, ಒಂದು ಹಸಿ ಮೆಣಸಿನ ಕಾಯಿಯನ್ನು ಅದಕ್ಕೆ ಹಾಕಿ ಹೊರಗೆ ಬಂದ ವನಜಾಕ್ಷಿ, ಜೊತೆಗೆ ಒಂದು ಕರಿದ ಹಪ್ಪಳವನ್ನು ಜಾನಕಿಯ ಕೈಯಲ್ಲಿಟ್ಟು ಅವರ ಲೋಟಕ್ಕೆ ಮಜ್ಜಿಗೆಯನ್ನು ಸುರಿದರು. ಹಪ್ಪಳವನ್ನು ಮುರಿದ ಹೆಂಗಸು, "ಅಕ್ಕೋರೆ, ಏನಾದರೂ ವಿಶೇಷ ಉಂಟಾ?" ಅಂದಾಗ ವನಜಾಕ್ಷಿಗೆ ನಗು ಬಂತು.
"ಮಳೆಗಾಲದಲ್ಲಿ ಏನು ವಿಶೇಷ ಜಾನಕಮ್ಮ?"
"ಅಲ್ಲ, ನಾನು ಅದು ಕೇಳಿದಲ್ಲ"
"ಮತ್ತೆಂತ ವಿಶೇಷ? ಮದುವೆಯಾಗಿ ಹತ್ತು ವರ್ಷವಾಯಿತು. ಮಗನಿಗೆ ಎಂಟು ವರ್ಷವಾಯಿತು. ಇನ್ನೆಂತಹ ವಿಶೇಷ?" ನಕ್ಕು ನುಡಿದ ವನಜಾಕ್ಷಿ0ು ಮಾತಿನಲ್ಲಿ ನೋವಿನ ಎಳೆಯಿರುವುದನ್ನು ಗುರುತಿಸಿದ ಹೆಂಗಸು, "ಏನೇ ಹೇಳಿ... ನಾಲ್ಕೈದು ಹೆಣ್ಣು ಮಕ್ಕಳು ಓಡಾಡಿಕೊಂಡಿದ್ದ ಮನೆ ಇದು. ನಿಮಗೂ ಒಂದು ಹೆಣ್ಣು ಸಂತಾನ ಇದ್ದಿದ್ರೆ ಚೆನ್ನಾಗಿರ್ತಿತ್ತು" ಅಂದಾಗ ಅವರ ಮುಖ ಸಂಪೂರ್ಣ ಬಾಡಿದಂತಾಯಿತು.
ವೆಂಕಟ ಭಟ್ಟರಿಗೆ ಹೆಂಗಸಿನ ಮಾತು ಕೇಳಿ, " ಈ ಹೆಂಗಸಿನ ಬುದ್ಧಿಯೆ ಇಷ್ಟಾ?" ಅಂದುಕೊಂಡರು.
ವನಜಾಕ್ಷಿಯ ನೋವಿಗೆ ಒಂದಷ್ಟು ತುಪ್ಪ ಸುರಿದು, ಕೊರಂಬು ಹಿಡಿದು ನಡು ಬಾಗಿಸುತ್ತಾ ಅಂಗಳಕ್ಕೆ ಕಾಲಿಟ್ಟಿತು ಹೆಂಗಸು. ವನಜಾಕ್ಷಿ ಬಾಗಿಲು ಸರಿಸಿ, ಚಿಲಕ ಸೇರಿಸಿ ಹಿಂತಿರುಗಿದರು.
"ಅಲ್ವೇ, ಆ ಹೆಂಗಸಿಗೆಂತ ಅಧಿಕ ಪ್ರಸಂಗ? ನಮ್ಮ ಮನೆಯ ವಿಚಾರಕ್ಕೆ ಮೂಗು ತೂರಿಸೋದಕ್ಕೆ ಅದಕ್ಕೇನಿದೆ ಹಕ್ಕು?"
ವೆಂಕಟ ಭಟ್ಟರ ಮಾತು ವನಜಾಕ್ಷಿಗೆ ಸರಿ ಕಾಣಲಿಲ್ಲ.
"ಅವರು ಹೇಳಿದ್ರಲ್ಲಿ ತಪ್ಪೇನಿದೆ? ಈ ಮನೆಯಲ್ಲಿ ನಿಮ್ಮ ಅಕ್ಕಂದಿರು, ತಂಗೀಂತ ನಾಲ್ಕೈದು ಜನ ಇರ್ಲಿಲ್ವಾ? ನಮಗೂ ಒಂದು ಹೆಣ್ಣು ಮಗು ಆಗ್ಲೀಂತ ಆಸೆಯಿಂದ ಹೇಳಿತು. ಅದಕ್ಕೇನಂತೆ?"
"ನಿನಗೆ ಗೊತ್ತೇ ಇದೆ ಇವಳೆ... ನಮ್ಮ ಮನೆ ಹೆಣ್ಣು ಮಕ್ಕಳು ಯಾರು ಸುಖದಲ್ಲಿದ್ದಾರೆ ಹೇಳು? ಎಲ್ಲರೂ ಹೊಕ್ಕ ಮನೆಯಲ್ಲಿ ಕಷ್ಟ ಕಷ್ಟ ಕಷ್ಟವೆ. ಒಂದು ಸೀರೆ ಬೇಕಿದ್ರೂ ಅವು ನಮ್ಮತ್ರ ಬಂದು ಸಂಕೋಚದಿಂದ ಕೇಳ್ತಾವೆ"
"ಅದಕ್ಕೆ ಏನಂತೆ? ನಾವು ಈಗ ನೆಮ್ಮದಿಯಿಂದ ಇಲ್ವಾ? ನಮಗೊಂದು ಹೆಣ್ಣು ಮಗುವಾದ್ರೆ ಅದನ್ನು ಸಾಕುವಷ್ಟು ನಮ್ಮಲ್ಲಿ ಇಲ್ವಾ?"
"ನಮತ್ರ ಈಗ ಬೇಕಾದಷ್ಟು ಇದೆ. ಇಲ್ಲಾಂತ ನಾನು ಹೇಳೋದಿಲ್ಲ. ಆದರೆ ನಮ್ಮ ಸಂತಾನಕ್ಕೆ ಶಾಪ ಇದೇಂತ ನನ್ನ ಅನಿಸಿಕೆ"
"ಏನು ಶಾಪರೀ? ಇದ್ದ ಬದ್ದ ಉಳುಮೆಯ ಗದ್ದೆಯನ್ನೆಲ್ಲಾ ನಿಮ್ಮಪ್ಪ ಒಕ್ಕಲಿಗನಿಗೆ ಮಾಡಿದ್ರು. ಅವನು ಖುಷಿಯಲ್ಲಿಯೆ ಇದ್ದಾನೆ. ಒಂದು ಚೂರು ಯಾರ ಆಸ್ತಿಗೂ, ವಸ್ತುವಿಗೂ ಅತ್ತೆ, ಮಾವ ಆಸೆ ಪಟ್ಟವರಲ್ಲ. ಇದ್ದಷ್ಟು ಕೈಯೆತ್ತಿ ಕೊಟ್ಟಿದ್ದಾರೆ. ಹಾಗಿರುವಾಗ ನಮಗೆ ಶಾಪ ಯಾರ್ದೂಂತ?"
"ನೋಡು, ನಿನಗೆ ಅರ್ಥವಾಗ್ತದ ಇಲ್ವಾಂತ ನನಗೆ ಗೊತ್ತಿಲ್ಲ. ನನ್ನ ಅಣ್ಣಂದಿರಿಗಾಗಲಿ, ತಮ್ಮನಿಗಾಗಲಿ ಹೆಣ್ಣು ಸಂತಾನ ಉಂಟಾ? ನನ್ನ ಅಪ್ಪ, ಅಮ್ಮನಿಗೆ ತಮ್ಮ ಹೆಣ್ಣು ಮಕ್ಕಳ ಕಣ್ಣೀರು ನೋಡಿ, ಮುಂದಿನ ಸಂತಾನಕ್ಕೆ ಹೆಣ್ಣು ಆಗೋದೇ ಬೇಡಾಂತ ಅಂದುಕೊಂಡಿರಬಹುದಲ್ವಾ?"
"ಹಾಗೆ ನೋಡಿದ್ರೆ ನಿಮ್ಮ ಅಕ್ಕಂದಿರಿಗೆ, ತಂಗಿಗೆ ಹೆಣ್ಣು ಸಂತಾನವಿಲ್ವಾ? ನೀವ್ಯಾಕೆ ಹಿರಿಯರ ಶಾಪವಿದೇಂತ ಹೇಳ್ತೀರಾ?"
"ಅವರು ಕೊಟ್ಟು ಹೋದವರು. ಗಂಡು ಮಕ್ಕಳಿಗೆ ಮಾತ್ರ ಹೆಣ್ಣು ಸಂತಾನ ಬೇಡಾಂತ ಅವರ ಮನಸ್ಸಿನಲ್ಲಿದ್ದಿರಬಹುದು"
ಗಂಡನ ಮಾತು ವನಜಾಕ್ಷಿಗೆ ಹಿಡಿಸಲಿಲ್ಲ. ತಮ್ಮ ಸ್ವಂತ ಮಕ್ಕಳಿಗೆ ಯಾರಾದರೂ ಶಾಪ ಕೊಡುತ್ತಾರೆಯೆ? ಅನ್ನುವುದು ಅವಳಿಗೆ ರುಚಿಸದ ಮಾತಾಗಿತ್ತು.
ವೆಂಕಟ ಭಟ್ಟರಿಗೆ ಮಾತ್ರ ತಲೆಯಲ್ಲಿ ಅದು ಅಡರಿ ಹೋಗಿತ್ತು. ಹೆಂಡತಿಯ ಹಾಗೆ ಆತನಿಗೂ ಹೆಣ್ಣು ಮಗು ಬೇಕೆನ್ನುವ ಆಸೆಯಿದ್ದರೂ ಮನಸ್ಸಿನಲ್ಲಿ ಅದೇ ವಿಷಯ ಗಟ್ಟಿಯಾಗಿ ಕುಳಿತಿತ್ತು. ಇಲ್ಲವಾದರೆ ಮಡದಿ, ರಮಣ ಹುಟ್ಟಿದ ನಂತರ 3 ಬಾರಿ ಗರ್ಭಿಣಿಯಾದರೂ, ಎರಡು ಸಲ ಗಂಡು ಮಗು ಬೇಡವೆಂದು ಗರ್ಭ ತೆಗೆಸಿದ್ದಾಯಿತು. ಮೂರನೆ ಬಾರಿ ಗರ್ಭ ಹೋದಾಗ ಅದೆಷ್ಟು ಬೇಸರವಾಗಿತ್ತು. ನಂತರ ಗರ್ಭ ನಿಂತೇ ಇಲ್ಲವೇಕೆ?
"ನೀನು ಏನೆ ಹೇಳು ಆ ಹೆಂಗಸು ಸರಿಯಿಲ್ಲ. ನಮ್ಮ ಮನೆಯ ವಿಷಯಗಳನ್ನೆಲ್ಲಾ ಇನ್ನೊಂದು ಮನೆಗೆ ಹೇಳಿ ಹಿಂದಿನಿಂದ ನಗಾಡುತ್ತೆ ಅಷ್ಟೆ. ಇಲ್ಲಾಂದ್ರೆ ಎದುರು ಮನೆಯ ಶಾಂತಕ್ಕ ನಮ್ಮ ಜೊತೆಗೆ ಜಗಳ ಕಾಯೋಕಿತ್ತಾ? ಮೂರು ಹೊತ್ತು ಗದ್ದೆ ಕೆಲಸ ಮಾಡಿಕೊಂಡು ನಾವು ಕೊಡ್ತಿದ್ದ ಊಟ ತಿಂದುಕೊಂಡು ಒಳ್ಳೆಯ ರೀತಿಯಲ್ಲಿ ಇರಲಿಲ್ವಾ?"
"ಅದಕ್ಕೆಂತ ಮಾಡೋದು? ಅವರ ಮಗ ಬೊಂಬಾಯಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ತಾಯಿಯನ್ನು ಕೆಲಸಕ್ಕೆ ಹೋಗುವುದು ಬೇಡ ಅಂದಿದ್ದಾನೆ. ಅವರು ಕೆಲಸ ನಿಲ್ಲಿಸಿದ್ದಾರೆ. ಆ ಹೆಂಗಸು ಬರ್ಲಿಲ್ಲಾಂತ ನಮ್ಮ ಮನೆ ಕೆಲಸ ನಿಂತಿದಾ? ನಾವು ಮಾಡಿಕೊಂಡು ಹೋಗ್ತಾ ಇಲ್ವಾ?"
"ನೀನು ಗದ್ದೆಗೆ ಇಳಿಯುವ ಹಾಗಾಗಿದ್ದು ಅದೇ ಹೆಂಗಸಿನಿಂದ ಅಲ್ವಾ? ಈ ಜಾನಕಮ್ಮ ಆ ಹೆಂಗಸಿಗೆ ಏನೋ ಕಿವಿಯೂದಿದೆ. ಅದಕ್ಕೆ ಆ ಹೆಂಗಸು ಇದ್ದಕ್ಕಿದ್ದಂತೆ ಜಗಳ ಮಾಡ್ಕೊಂಡು ಕೆಲಸ ಬಿಡ್ತು ನೋಡು"
"ನಾನು ನಿಮಗೆ ಹೇಳ್ತಾ ಇಲ್ವಾ... ಈ ಜಾಗ ಮಾರಿ ಎಲ್ಲಾದ್ರೂ ಪಟ್ಟಣದ ಕಡೆಗೆ ಹೋಗೋಣಾಂತ. ನೀವು ಕೇಳ್ತಾ ಇಲ್ಲ. ನಮ್ಮ ಮಣ್ಣಿನ ಋಣ ಇಲ್ಲೆ ಇದೆ. ಇದ್ದದನ್ನು ನಾವೆ ಮಾಡ್ಕೊಂಡು ಹೋಗುವುದು ಚೆಂದ ಅಲ್ವಾ?"
"ಈ ಜಾಗನ ಬಿಟ್ಟು ಹೋಗುವುದು ಕಷ್ಟಾಂತ ನಿನಗೆ ಗೊತ್ತಿಲ್ವಾ? ನನ್ನ ಅಪ್ಪಯ್ಯ ಎಷ್ಟು ಕಷ್ಟ ಪಟ್ಟು ಈ ಜಾಗಾನ ತೆಗೆದುಕೊಂಡಿದ್ದಾರೇಂತ ನಿನಗೆ ಗೊತ್ತಿಲ್ವಾ? ಅಂತದ್ರಲ್ಲಿ ಮಾರುವ ಮಾತುಂಟಾ ಅಥವಾ ನಾವು ಅದನ್ನು ಯೋಚಿಸುವುದೂ ತಪ್ಪಲ್ವಾ?"
ಮಾತು ಮುಂದುವರಿಸಲು ಇಚ್ಛಿಸದೆ ವನಜಾಕ್ಷಿ ತಟ್ಟೆ, ಲೋಟಗಳನ್ನು ಎತ್ತಿಕೊಂಡು ಅಡುಗೆ ಕೋಣೆಯೊಳಗೆ ನಡೆದರು.

***
ಎಪ್ಪತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿಯಾದಾಗ ಶ್ರೀನಿವಾಸರಿಗೆ ತಾವು ಮಧುರೈ0ುಲ್ಲಿ ನಡೆಸುತ್ತಿದ್ದ ಹೊಟೇಲು ಹೆಚ್ಚು ಸಮಯ ಮುಂದುವರಿಯಲಾರದೆನಿಸಿತು. ತಮ್ಮನ್ನೇ ನಂಬಿರುವ ತಮ್ಮಂದಿರಾದ ಗಿರೀಶ ಮತ್ತು ಜಗನ್ನಾಥರನ್ನು ಕರೆದು ತಮ್ಮ ಸಮಸ್ಯೆಯನ್ನು ಮುಂದಿಟ್ಟರು.

"ಇನ್ನು ಈ ಪುಢಾರಿಗಳ ಉಪಟಳದಿಂದ ಹೊಟೇಲು ಮುಂದುವರಿಸಿಕೊಂಡು ಹೋಗುವುದು ತುಂಬಾ ಕಷ್ಟ. ಅವರುಗಳು ದಿನಕ್ಕೊಂದು ತಗಾದೆ ತೆಗೆದು, ಹಫ್ತಾ ವಸೂಲಿಗೂ ಮುಂದಾಗುತ್ತಿದ್ದಾರೆ. ನಾವು ಮರ್ಯಾದೆಯಿಂದ ಬಾಳುವುದು ಕಷ್ಟವೇ. ಇನ್ನು ಮುಂದೆ ಏನು ಮಾಡುವುದು? ನೀವೂ ಯೋಚಿಸಿ... ಒಂದು ನಿರ್ಧಾರಕ್ಕೆ ಬರೋಣ"
ಶ್ರೀನಿವಾಸರ ಹಾಗೇ ಗಿರೀಶ ಹಾಗೂ ಜಗನ್ನಾಥರಿಗೂ ಎಂಟು ಹತ್ತು ಮಕ್ಕಳು. ಇದ್ದಕ್ಕಿದಂತೆ ಹೊಟೇಲು ಮುಚ್ಚಿ, ಸಂಸಾರವನ್ನು ನಡು ಬೀದಿಯಲ್ಲಿ ನಿಲ್ಲಿಸುವ ಪರಿಸ್ಥಿತಿ ಎದುರಾದರೆ? ಎಂಬ ಆತಂಕ ತಮ್ಮಂದಿರಿಬ್ಬರಲ್ಲು ಮೂಡಿತು. ಅವರೊಂದು ನಿರ್ಧಾರಕ್ಕೆ ಬಂದು, "ಅಣ್ಣಾ, ಕಷ್ಟನೋ ಸುಖನೋ ನಮ್ಮ ಜೀವನ ಇಲ್ಲೇ ಸಾಗಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಾಗ, ಶ್ರೀನಿವಾಸರಿಗೆ ನಿಜವಾಗಿಯೂ ಇರುಸು ಮುರಿಸಿನ ಪರಿಸ್ಥಿತಿಯಾಯಿತು. ಎಲ್ಲಾ ಜವಾಬ್ದಾರಿಯನ್ನು ತಾವೇ ಹೊತ್ತು ಕೊಂಡು ಹೇಗೋ ಹೊಟೇಲನ್ನು ನಡೆಸಿಕೊಂಡು ಹೋಗಿದ್ದರು. ಅವರಿಗಂತೂ ಮುಂದುವರಿಸುವ ಯೋಚನೆಯಿಲ್ಲ. ತಮ್ಮಂದಿರಿಬ್ಬರಿಗೆ ಜವಾಬ್ದಾರಿಯನ್ನು ಬಿಟ್ಟು ಹೊಗುವ ನಿರ್ಧಾರ ಕೈಗೊಂಡರು.
"ನಾನು ನಿರ್ಧಾರ ತೆಗೆದುಕೊಂಡಾಯಿತು. ಇನ್ನು ಕಷ್ಟನೋ ಸುಖನೋ ನಾನು ಊರಿಗೆ ಹೋಗಿ ಸೆಟಲ್ ಆಗಿ ಬಿಡ್ತೀನಿ. ಹೊಟೇಲನ್ನು ನೀವು ನಿಭಾಯಿಸಿಕೊಂಡು ಹೋಗ್ತೀರೀಂತ ನನಗೆ ಧೈರ್ಯ ಇದೆ"
ಶ್ರೀನಿವಾಸನ ಮಾತುಗಳನ್ನು ಕೇಳಿ ತಮ್ಮಂದಿರೇನು ಹೌಹಾರಲಿಲ್ಲ. ಸಂತೋಷದಿಂದ ಒಪ್ಪಿಕೊಂಡರು.
"ನನ್ನ ಪಾಲಿನ ಹಣವನ್ನು ನಾನು ಹಿಂತೆಗೆ0ುಬಹುದಲ್ಲಾ?" ಶ್ರೀನಿವಾಸರು ಸಂಕೋಚದಿಂದ ಕೇಳುವಾಗ ತಮ್ಮಂದಿರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
"ಎಲ್ಲ ಹಣ ನೀನು ತೆಗೆದುಕೊಂಡು ಹೋದರೆ ನಮಗೆ ನಿಭಾಯಿಸಲು ಕಷ್ಟವಾಗುತ್ತದೆ. ಹೇಗೂ ನೀನು ಇಲ್ಲಿಗೆ ನಮ್ಮನ್ನು ನೋಡೋದಿಕ್ಕೆ ಬರುತ್ತಿಯಲ್ಲಾ. ಆಗ ಸ್ವಲ್ಪ ಸ್ವಲ್ಪವೇ ಹಣ ಹೊಂದಿಸಿ ಕೊಡುತ್ತೇವೆ" ಎಂದು ಹೇಳುವಾಗ ಒಪ್ಪಿಕೊಳ್ಳವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.
ಅಂತೂ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಜೊತೆಗೆ ಕೈ ಹಿಡಿದವಳನ್ನು ಕರೆದುಕೊಂಡು ಮೂರು ದಿನ ರೈಲಿನ ಪ್ರಯಾಣ ಜೊತೆಗೆ ಒಂದು ದಿನ ಬಸ್ಸಿನಲ್ಲಿ ಪ್ರಯಾಣ ಮುಗಿಸಿ, ಊರಿಗೆ ಬರುವಾಗ ಅಣ್ಣ ಅನಂತರಾಮ ಬಹಳ ಸಂತೋಷದಿಂದಲೇ ಸ್ವಾಗತಿಸಿದ್ದ. ಅನಂತರಾಮನಿಗೂ ಹತ್ತು ಜನ ಮಕ್ಕಳು. ಜೊತೆಗೆ ಶ್ರೀನಿವಾಸನ ಎಂಟು ಮಕ್ಕಳು ಮನೆಯಲ್ಲಿ ನಿತ್ಯ ಗಲಾಟೆಯೆ. ಶ್ರೀನಿವಾಸನ ಮಕ್ಕಳಿಗೆ ಕನ್ನಡ, ತುಳು ಭಾಷೆ ಅಷ್ಟಾಗಿ ಬರುತ್ತಿರಲಿಲ್ಲವಾದುದರಿಂದ ಅವುಗಳು ತಮಿಳಿನಲ್ಲಿಯೆ ಏನೇನೋ ಅಂದುಕೊಂಡು ಸುಮ್ಮನಾಗುತ್ತಿದ್ದವು.

ಒಂದು ದಿನ ರಾತ್ರಿ ಒಂದು ಸಣ್ಣ ವಿಷಯದ ಕಿಡಿ ದೊಡ್ಡ ಜ್ವಾಲೆಯಾಗಿ ಹೋಯಿತು. ಶ್ರೀನಿವಾಸನ ದೊಡ್ಡ ಮಗ ತನ್ನ ದೊಡ್ಡಪ್ಪ ಅನಂತರಾಮನ ಎದುರಿಗೆ ಕುರ್ಚಿಯ ಮೇಲೆ, `ಕಾಲಿನ ಮೇಲೆ ಕಾಲು ಹಾಕಿ ಕುಳಿತ' ಅನ್ನುವುದು ಅನಂತರಾಮನಿಗೆ ಆ ಹುಡುಗ `ಮರ್ಯಾದೆ' ಕೊಡಲಿಲ್ಲ ಅನ್ನುವ ಮಟ್ಟಿಗೆ ಬಂದು ನಿಂತಿತು. ರಾತ್ರಿ ಅಂಗಡಿ ಮುಗಿಸಿ ಬಂದ ಶ್ರೀನಿವಾಸನನ್ನು ಊಟ ಮಾಡಲು ಬಿಡದೆ ಜಗಳ ಕಾಯ್ದರು ಅನಂತರಾಮ.
"ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಯಾವುದನ್ನೂ ಹೇಳಿಕೊಡಲಿಲ್ಲ. ದೊಡ್ಡವರು ಅನ್ನುವ ಗೌರವವೇ ನಿನ್ನ ಮಕ್ಕಳಿಗೆ ಇಲ್ಲ"
ಶ್ರೀನಿವಾಸನಿಗೆ ಹಸಿದ ಹೊಟ್ಟೆ ಒಂದು ಕಡೆಯಾದರೆ, ಇನ್ನೊಂದು ಕಡೆ ಅಣ್ಣ ಹೇಳಿದ ಮಾತುಗಳು, ತನ್ನ ಹಿರಿಯ ಮಗನ ಮೇಲೆ ಕೋಪ ಉಕ್ಕಿ ಬರುವಂತೆ ಮಾಡಿತು. ಮಗನನ್ನು ಕರೆದು ಕೆನ್ನೆಗೆ ನಾಲಕ್ಕು ಬಾರಿಸಿ, ಅಗ್ರಜನ ಕಾಲು ಹಿಡಿಸಿದ.
ಶ್ರೀನಿವಾಸನ ಹೆಂಡತಿ ನಳಿನಾಕ್ಷಿಗೆ ಈ ರೀತಿ ತನ್ನ ಹಿರಿಯ ಮಗ ಸುಮ್ಮನೆ ಪೆಟ್ಟು ತಿಂದದ್ದು ಅವಳ ಕಣ್ಣುಗಳಲ್ಲಿ ನೀರು ತರಿಸಿತು.
ರಾತ್ರಿ ಗಂಡ ಹತ್ತಿರ ಬಂದಾಗ, "ರೀ, ಎಷ್ಟು ದಿನಾಂತ ಈ ಮನೆಯಲ್ಲಿ ಜೀವ ತೇಯೋದು? ನಮ್ಮ ಮಕ್ಕಳಿಗಂತೂ ಉಸಿರು ಕಟ್ಟೋ ಹಾಗಾಗಿದೆ. ಕೂತರೆ ತಪ್ಪು, ನಿಂತರೆ ತಪ್ಪು. ನಿಮ್ಮ ಅಣ್ಣನ ಮಕ್ಕಳು ಉಂಡಾಡಿ ಗುಂಡರ ತರಹ ಅಲೆದಾಡಿಕೊಂಡು ಬರ್ತಾರೆ. ನಮ್ಮ ಮಕ್ಕಳು ಅಡುಗೆ ಕೆಲಸದಿಂದ ಹಿಡಿದು ಗದ್ದೆ ಕೆಲಸ ಮಾಡುವವರೆಗೂ ಸಹಾಯ ಮಾಡ್ಬೇಕು. ನಮ್ಮ ಮಕ್ಕಳು ಬೆಳೆದಿರುವುದೆಲ್ಲಾ ಪಟ್ಟಣದಲ್ಲಿ. ಈ ಹಳ್ಳಿಯ ರೀತಿ, ರೀವಾಜು ಅವುಗಳಿಗೆಲ್ಲಾ ಹೇಗೆ ಗೊತ್ತಾಬೇಕು, ಹೇಳಿ? ಇವತ್ತು ಇಷ್ಟು ಸಣ್ಣ ವಿಷಯಕ್ಕೆ ಹೇಗೆ ಹಾರಾಡಿದ್ರು ನೋಡಿದ್ರಾ?" ಅಂದಾಗ
ಹೆಂಡತಿಯ ಮಾತಿಗೆ ತೆಪ್ಪಗೆ ಮುಸುಕೆಳೆದು ಮಲಗಿದ ಶ್ರೀನಿವಾಸನಿಗೆ ಮುಸುಕಿನ ಒಳಗಿಂದಲೇ ಚಿಂತೆ ಕಾಡಿತು. ಇದೇ ರೀತಿ ಮುಂದುವರಿದರೆ, ಒಂದಲ್ಲ ಒಂದು ದಿನ ಅಗ್ರಜ `ಮನೆ ಬಿಟ್ಟು ಹೋಗು' ಅಂದರೆ ಇಷ್ಟು ದೊಡ್ಡ ಸಂಸಾರವನ್ನು ಹಿಡಿದುಕೊಂಡು ಹೋಗುವುದು ಎಲ್ಲಿಗೆ?
ಕೊನೆಗೆ ಹೊರಳಾಡಿ ಹೊರಳಾಡಿ ಒಂದು ನಿರ್ಧಾರಕ್ಕೆ ಬಂದ. ಹೇಗೂ ತನ್ನ ಪಾಲಿನ ಹಣ ತಮ್ಮಂದಿರಿಂದ ಬರುವುದಿದೆ. ಮಧುರೈಗೆ ಹೋಗಿ ಆ ಹಣ ಹಿಡಿದುಕೊಂಡು ಬಂದು ಊರಿನಲ್ಲಿಯೆ ಸ್ವಲ್ಪ ಆಸ್ತಿಯನ್ನು ತೆಗೆದುಕೊಂಡು ಸಣ್ಣ ಮನೆ ಕಟ್ಟಿಕೊಂಡು ಸಂಸಾರ ಹೂಡುವುದು. ನಳಿನಾಕ್ಷಿಗೆ ತನ್ನ ನಿರ್ಧಾರವನ್ನು ತಿಳಿಸಿದ. ಆಕೆಗೆ ಸುತಾರಾಂ ಇಷ್ಟವಿಲ್ಲ.
"ನಮ್ಮ ಮಕ್ಕಳು ಸಿಟಿಯಲ್ಲಿ ಬೆಳೆದವರು. ಪಟ್ಟಣದಲ್ಲಿಯೆ ಒಂದು ಸಣ್ಣ ಮನೆಯನ್ನು ನೋಡಿ. ನೀವೂ ಅಲ್ಲಿ ಸಣ್ಣ ಮಟ್ಟದಲ್ಲಿ ಹೊಟೇಲೋ, ಅಂಗಡಿಯೋ ಇಟ್ಟುಕೊಂಡರೆ ಮನೆ ಖರ್ಚು ನಡೆಯುತ್ತದಲ್ಲಾ?"
"ಪಟ್ಟಣದ ಬದುಕು ಅಷ್ಟು ಸುಲಭ ಅಲ್ಲ. ಪಟ್ಟಣ ಬೆಳೆದ ಹಾಗೇ ನಮ್ಮ ಆದಾಯನೂ ಬೆಳೆಯುವ ಹಾಗಿದ್ದರೆ ಸರಿ, ಇಲ್ಲದಿದ್ದರೆ ಈ ಮಕ್ಕಳನ್ನು ಕಟ್ಟಿಕೊಂಡು ಸಂಸಾರ ನಡೆಸುವುದು ಹೇಗೆ? ಮೊದಲು ಅಣ್ಣನ ಬಳಿ ಮಾತನಾಡುತ್ತೇನೆ. ಅವನು ಏನು ಹೇಳುತ್ತಾನೋ ಹಾಗೆ ಮಾಡೋಣ" ಅಂದಾಗ ನಳಿನಾಕ್ಷಿಗೆ ಮಾತನಾಡುವಂತೆ ಇರಲಿಲ್ಲ. ಅಣ್ಣನ ಮಾತೇ ವೇದವಾಕ್ಯ ಎಂದು ತಿಳಿದ ಶ್ರೀನಿವಾಸನಿಗೆ ಅಣ್ಣನಿಂದಲೇ ಮಾತು ಬಂದಾಗ ಅಧೀರನಾದ.
"ಶ್ರೀನಿವಾಸ, ನಮ್ಮ ಸಂಸಾರಗಳು ದೊಡ್ಡ ಸಂಸಾರಗಳು. ಹಿರಿಯರ ಮನೇಂತ ಇಷ್ಟು ದಿನ ನಿನ್ನನ್ನು ಇಲ್ಲಿ ಇರೂಂತ ಹೇಳಿದೆ. ನನಗೂ ಬೇಸಾಯದಿಂದ ಏನೂ ಸಿಗ್ತಾ ಇಲ್ಲ. ನೀನು ಖರ್ಚಿಗೆ ಕೊಡುವುದು ಕೂಡ ಏನೂ ಸಾಲುವುದಿಲ್ಲ. ಹಿರಿಯರ ಆಸ್ತಿ ಬೇಡಾಂತ ಹೇಳಿ ನೀವುಗಳು ನನ್ನ ಹೆಸರಿಗೆ ಬರೆದು ಕೊಟ್ಟಿದ್ದೀರಿ. ಆದರಿಂದ ನೀನು ಇಲ್ಲೇ ಎಲ್ಲಾದರೂ ಆಸ್ತಿ ಖರೀದಿಸುವುದು ಒಳ್ಳೆಯದು. ಸುಮ್ಮನೆ ನಾವು ನಾವು ಜಗಳ ಮಾಡಿಕೊಂಡು ನಿಷ್ಠುರ ಆಗುವುದಕ್ಕಿಂತ ಮೊದಲೇ ನೀನು ಬೇರೆ ವ್ಯವಸ್ಥೆ ಮಾಡಿಕೋ"
ಅಗ್ರಜನ ಮಾತು ಕೇಳಿದ ನಂತರ ಆ ಮನೆಯಲ್ಲಿ ನಿಂತರೆ ಮರ್ಯಾದೆಯಿಲ್ಲವೆನಿಸಿತು. ಸ್ವಂತ ಅಣ್ಣನ ಮಕ್ಕಳೇ ಹೀಯಾಳಿಸುವಾಗ ಶ್ರೀನಿವಾಸನಿಗೆ ದು:ಖವೇ ಬರುತ್ತಿತ್ತು.
"ಅಣ್ಣಯ್ಯ , ಒಂದೆರಡು ತಿಂಗಳು ಅವಕಾಶ ಕೊಡು. ಎಲ್ಲಾದರೂ ಇದೇ ಊರಿನಲ್ಲಿ ಆಸ್ತಿ ತೆಗೆದುಕೊಂಡು ಸಣ್ಣ ಮನೆ ಕಟ್ಟಿ ಕುಳಿತುಕೊಳ್ಳುತ್ತೇನೆ. ಅಲ್ಲಿಯವರೆಗೆ..."
ಮುಂದೆ ಮಾತನಾಡಲಾರದೆ ಗಂಟಲುಬ್ಬಿ ಬಂತು.
"ಸರಿ, ನಮ್ಮ ಶ್ಯಾನುಭೋಗರದ್ದೆ ಜಾಗ ಮಾರಾಟಕ್ಕಿದೆ. ನೀನು ದುಡ್ಡಿನ ವ್ಯವಸ್ಥೆಯನ್ನು ಮಾಡು. ಮುಂದೆ ನೋಡೋಣ" ಅನ್ನುವಾಗಲಷ್ಟೆ ಶ್ರೀನಿವಾಸನ ಮನಸ್ಸಿಗೆ ನೆಮ್ಮದಿಯೆನಿಸಿದ್ದು.
ಅಂಗಡಿಗೆ ಒಂದು ವಾರ ಬಾಗಿಲು ಹಾಕಿ ಮಧುರೈಗೆ ಹೊರಟ ಶ್ರೀನಿವಾಸ. ತಮ್ಮಂದಿರು ಆಪ್ಯಾಯತೆಯಿಂದ ಬರ ಮಾಡಿಕೊಳ್ಳುತ್ತಾರೆನ್ನುವ ನಿರೀಕ್ಷೆ ಹುಸಿಯಾಯಿತು. ಅಣ್ಣ ಬಂದಿರುವ ವಿಷಯ ಅವರಿಗೆ ಸ್ಪಷ್ಟವಾಗಿತ್ತು. ಅದಕ್ಕಾಗಿಯೇ ಇಬ್ಬರೂ ಮುಖ ಗಂಟಿಕ್ಕಿದಂತೆ ಇದ್ದರು. ಶ್ರೀನಿವಾಸ ಕೇಳಿಯೇ ಬಿಟ್ಟ.
"ನಾನೀಗ ತಾಪತ್ರಯದಲ್ಲಿದ್ದೇನೆ. ನನ್ನ ಪಾಲಿನ ಹಣ ನೀವು ಈಗ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬೀಳುವ ಸ್ಥಿತಿ" ಪೀಠಿಕೆ ಹಾಕುವಾಗ ಹಿರಿಯ ತಮ್ಮ ಗಿರೀಶ ಒಮ್ಮೆಗೆ ಬಿ.ಪಿ. ಏರಿಸಿಕೊಂಡವರಂತೆ ಶ್ರೀನಿವಾಸನ ಎದುರು ಬಂದು ನಿಂತ.
"ಯಾವುದು ನಿನ್ನ ಹಣ? ನಾವು ಯಾಕೆ ಕೊಡಬೇಕು? ನಮಗೆ ಸಂಸಾರ ಇಲ್ವಾ? ನೀನು ಬಿಟ್ಟು ಹೋದ ನಂತರ ವ್ಯಾಪಾರ ಅಷ್ಟಕಷ್ಟೆ. ನಮಗೂ ಇಲ್ಲಿ ನೆಮ್ಮದಿಯಿಲ್ಲ. ನಾವು ಬಿಟ್ಟು ಬಿಡ್ತಾ ಇದ್ದೇವೆ"
ಗಿರೀಶನ ಮಾತುಗಳನ್ನು ಕೇಳಿ ಶ್ರೀನಿವಾಸನಿಗೆ ಆಕಾಶ ತಲೆಯೆ ಮೇಲೆ ಬಿದ್ದ ಹಾಗಾಯಿತು. ಅದರೂ ಎದೆಗುಂದದೆ ಹೇಳಿದ.
"ನೀವು, ಕೊಟ್ಟ ಮಾತಿಗೆ ತಪ್ತಾ ಇದ್ದೀರಿ. ನಾನು ಹೇಳಿದ್ನಲ್ಲಾ ನೀವುಗಳು ಹಣ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬರುತ್ತದೆ. ದಯವಿಟ್ಟು ಇಲ್ಲ ಅನ್ಬೇಡಿ" ತಮ್ಮಂದಿರಿಗೆ ಕೈ ಮುಗಿದು ಕೇಳುವ ಸ್ಥಿತಿ ಬಂದಾಗ ಮನಸಿನಲ್ಲಿ ನೋವು ಮಡುಗಟ್ಟಿತು.
ಜಗನ್ನಾಥ ಒಳಗೆ ಹೋದವನೇ ಸಿಹಿತಿಂಡಿ ಕತ್ತರಿಸುವ ಚೂರಿಯನ್ನು ತಂದು ಶ್ರೀನಿವಾಸನ ಮುಂದೆ ನಿಂತ.
"ಏನು ನಿನ್ನ ಹಣ ಬಾಕಿಯಿರೋದು? ಏನೂ ಮಾತನಾಡದೆ ಬಂದ ಹಾಗೆ ಹಿಂದೆ ಹೋಗು. ಇಲ್ಲಾಂದ್ರೆ ನೀನು ಇಲ್ಲಿಗೆ ಬಂದೇ ಇಲ್ಲಾಂತ ಮಾಡ್ತೀನಿ"
ಕಿರಿಯ ತಮ್ಮನೂ ಮಿತಿಮೀರಿ ವರ್ತಿಸಿದಾಗ ಶ್ರೀನಿವಾಸ ಭೂಮಿಗಿಳಿದು ಹೋದ. ಹಣವಿಲ್ಲದೆ ಬರಿಗೈಯಲ್ಲಿ ಹೋದರೆ ಆಗುವ ಹೋಗುವ ವಿಚಾರವಲ್ಲವೆಂದು ತಿಳಿಯಿತು.
ತಾನೇ ಮುಂದೆ ತಂದ ತಮ್ಮಂದಿರು ತಿರುಗಿ ನಿಂತಾಗ ಅಸಹಾಯಕನಂತೆ ಕೈ ಚೆಲ್ಲಿ ಕುಳಿತ.
"ನಾನು ನಿಮ್ಮ ಜೊತೆಗೆ ಜಗಳ ಕಾಯುವುದಕ್ಕೆ ಬಂದಿಲ್ಲ. ನನ್ನ ಹಣ ಕೇಳೊದಿಕ್ಕೆ ಬಂದೆ. ನೀವು ಕೊಡದಿದ್ರೆ ಬೇಡ. ನೀವುಗಳು ಚೆನ್ನಾಗಿರಿ. ಆದರೆ ನಾನು ಬರಿಗೈಯಲ್ಲಿ ಊರಿಗೆ ಹೋದರೆ ಅಣ್ಣನಿಗೂ ನನ್ನ ಮೇಲೆ ಕೋಪ ಬರುತ್ತೆ. ನನಗೆ ಸಾಲದ ರೂಪದಲ್ಲಿ ಒಂದು ಐವತ್ತು ಸಾವಿರ ಹಣ ಕೊಟ್ರೆ... ನಿಮ್ಮ ಕಷ್ಟ ಕಾಲದಲ್ಲಿ ಹಿಂದಿರುಗಿಸ್ತೇನೆ" ಎಂದು ತಮ್ಮಂದಿರನ್ನು ಕೇಳುವಾಗ ಜಗನ್ನಾಥ, ಗಿರೀಶನ ಕಡೆಗೆ ಕಣ್ಣು ಮಿಟುಕಿಸಿದ.
ಗಿರೀಶ ಒಳಗೆ ಗೋದ್ರೇಜ್ನಿಂದ ಐವತ್ತು ಸಾವಿರ ಎಣಿಸಿ, "ಇದು ಜಗನ್ನಾಥನ ಹಣ. ನೀನು ವಾಪಸು ಕೊಡುವಾಗ ಅವನಿಗೆ ಕೊಟ್ಟು ಬಿಡು" ಹಣವನ್ನು ಶ್ರೀನಿವಾಸನ ಕೈಯಲ್ಲಿಟ್ಟಾಗ ಶ್ರೀನಿವಾಸನಿಗೆ ಪರ್ವತ ಸಿಕ್ಕಷ್ಟು ಸಂತಸವಾಯಿತು. ತಮ್ಮಂದಿರ ಮನೆಗೂ ಹೋಗದೆ ನೇರವಾಗಿ ರೈಲು ಹಿಡಿದು ಊರು ತಲುಪಿದ.
ಹೆಂಡತಿಯ ಮಾತು ಕೇಳದೆ ಅವಳನ್ನು ಸಮಾಧನಿಸಿದ.
"ನೋಡು, ಪಟ್ಟಣದ ಬದುಕು ನಮಗೆ ಕಷ್ಟ. ಇಲ್ಲೆ ಶ್ಯಾನುಭೋಗರ ಆಸ್ತಿ ಮಾರೋದಿದೆಯಂತೆ. ಒಳ್ಳೊಳ್ಳೆಯ ಉಳುಮೆಯ ಗದ್ದೆಗಳು. ಆಸ್ತಿ ತೆಗೆದು ಹಾಕಿದರೆ ಮುಂದೆ ಮಕ್ಕಳಿಗೆ ಅನುಕೂಲವಾಗಬಹುದು. ನಾನು ಅಣ್ಣನ ಜೊತೆಗೆ ಹೋಗಿ ನೋಡಿಕೊಂಡು ಬರುತ್ತೇನೆ"
"ಅಲ್ಲ, ಈ ಹಳ್ಳಿಯಲ್ಲಿ ಉಳುಮೆಯ ಆಸ್ತಿ ತೆಗೆದು ಹಾಕಿದ್ರೆ, ನಮ್ಮ ಮಕ್ಕಳು ಏನು ಮಾಡಬೇಕು? ಅವುಗಳಿಗೆ ಗದ್ದೆಯ ಕೆಲಸ ಮಾಡಿ ಗೊತ್ತುಂಟಾ?"
"ನಮಗೆ ಬದುಕ ಬೇಕಾದ್ರೆ ನಮ್ಮ ಮಕ್ಕಳು ಗದ್ದೆಯ ಕೆಲಸ ಅಲ್ಲ... ಯಾವ ಕೆಲಸವನ್ನಾದ್ರೂ ಕಲಿಬೇಕು. ಮತ್ತೆ ಅವರಿಗೂ ಅಭ್ಯಾಸವಾಗುತ್ತದೆ"
ಶ್ರೀನಿವಾಸ ನಳಿನಾಕ್ಷಿಯ ಬಾಯಿ ಮುಚ್ಚಿಸಿದ. ಮರುದಿನ ಅಗ್ರಜನನ್ನು ಕರೆದುಕೊಂಡು ಶ್ಯಾನುಭೋಗರ ಬಳಿ ಮಾತನಾಡಲು ಹೋದ.
ಶ್ಯಾನುಭೋಗರು ಮೊದಲೆ ತಮ್ಮ ಜಾಗ ಮಾರಾಟ ಮಾಡುವುದೆಂದು ನಿರ್ಧರಿಸಿದ್ದರಿಂದ ಉಟ್ಟ ಬಟ್ಟೆಯಲ್ಲಿಯೆ ಗದ್ದೆಗಳನ್ನು ತೋರಿಸಲು ಹೊರಟರು. ಶ್ರೀನಿವಾಸನಿಗೆ ಗದ್ದೆಗಳೆಲ್ಲ ಹಿಡಿಸಿದವು. ಐವತ್ತು ಸಾವಿರಕ್ಕೆ ಎಲ್ಲವೂ ಇತ್ಯರ್ಥವಾಗಿ ಶ್ರೀನಿವಾಸ ಆ ಆಸ್ತಿಯ ಒಡೆಯನಾದ. ಆತ ಮಾಡಿದ ದೊಡ್ಡ ತಪ್ಪೆಂದರೆ ಗೇಣಿಯನ್ನು ಮುಂದುವರಿಸಿಕೊಂಡು ಬಂದಿದ್ದು. ಮನೆ ಕಟ್ಟಿ ಸಂಸಾರವನ್ನು ನೋಡಿಕೊಳ್ಳುವ ಹೊತ್ತಿಗೆ `ಉಳುವವನೆ ಹೊಲದೊಡೆಯ' ಕಾನೂನು ಬಂದಾಗ ಕಷ್ಟದಲ್ಲಿ ತೆಗೆದುಕೊಂಡ ಆಸ್ತಿಯೂ ಕೈ ಬಿಟ್ಟು ಹೋಯಿತು. ಮದುವೆಗೆ ತಯಾರಾಗಿ ನಿಂತ ಹೆಣ್ಣು ಮಕ್ಕಳಿಗೆ ಅದು ಹೇಗೋ ನಳಿನಾಕ್ಷಿ ಮಾಡಿಟ್ಟ ಚಿನ್ನವನ್ನು ಮಾರಿ ಮದುವೆ ಮಾಡಿಸಿದ. ಆ ಹೊತ್ತಿಗೆ ಹಿರಿಯ ಮಗ ಕೆಲಸಕ್ಕೆ ಸೇರಿದ್ದರಿಂದ ಅಷ್ಟಿಷ್ಟು ಮನೆ ಖರ್ಚು ನಡೆಯುತ್ತಿತ್ತು. ಹುಡುಗಿಯರು ಮದುವೆಯಾಗಿ ಹೋದರೂ ಅವರಿಗೆ ನೆಮ್ಮದಿಯಿರಲಿಲ್ಲ. ಹಿರಿ ಮಗಳು ಉಪಾಸನ ಬಡತನದಲ್ಲಿಯೆ ಸಂಸಾರ ಹೂಡುವಂತಾದರೆ, ಎರಡನೆಯ ಮಗಳು ಆರಾಧನ ಮದುವೆಯಾಗಿ ಆರು ತಿಂಗಳಿನಲ್ಲೇ ತವರು ಸೇರುವಂತಾಯಿತು. ಮೂರನೆಯ ಮಗಳು ಅರ್ಚನಾಳ ಗಂಡ ಸ್ಫುರದ್ರೂಪಿ ಯುವಕ. ಸ್ವಲ್ಪ ಹೆಣ್ಣುಗಳ ಜೊತೆಗೆ ಮಾತುಕತೆ ನಡೆದಾಗ ಸಂಶಯ ಹೊಂದಿದ ಅರ್ಚನಾಳಿಗೆ ದಿನ ಅವನ ಜೊತೆಗೆ ಜಗಳ ಕಾಯುವುದೆ ಆಯಿತು. ನಾಲ್ಕನೆಯವಳು ಪೂಜಾ. ಅವಳ ಗಂಡನ ಕೈ ಯಾವಾಗಲೂ ತೂತೆ. ಹಾಗಾಗಿ ಹೆಣ್ಣು ಮಕ್ಕಳ ಗೋಳಿನ ಪತ್ರ ಬಂದಾಗಲೆಲ್ಲಾ ಶ್ರೀನಿವಾಸ ಹೈರಾಣಗುತ್ತಿದ್ದ. ನಳಿನಾಕ್ಷಿಗಂತೂ ಕಣ್ಣೀರು ತಪ್ಪಿದಲ್ಲ. ಕೊನೆಗೆ ಆತ ಹಾಸಿಗೆ ಹಿಡಿದ. ಹಾಸಿಗೆ ಹಿಡಿದ ಎರಡು ವಾರಗಳಲ್ಲಿಯೆ ಆತನ ಸಂಸಾರದ ಗಾಲಿ ಕಳಚಿಕೊಂಡಿತು. ಇನ್ನೆರಡು ವರ್ಷಕ್ಕೆ ನಳಿನಾಕ್ಷಿ ಕೂಡ ಗಂಡನ ಕಡೆಗೆ ನಡೆದದ್ದಾಯಿತು. ಆ ಮನೆಯಲ್ಲಿ ನೆಮ್ಮದಿ ಅಳಿಸಿತು. ಹಿರಿಯ ಮಗ ದೂರವಿದ್ದುದರಿಂದ ಎರಡನೆಯ ಮಗ ಉಳಿದ ಆಸ್ತಿಯ ಜವಾಬ್ದಾರಿಯನ್ನು ಹೊರುವಂತಾಯಿತು.
***
ಹಳೆಯ ನೆನಪುಗಳೆಲ್ಲಾ ಕೆದಕಿ ಆ ರಾತ್ರಿಯಿಡಿ ನಿದ್ದೆ, ವೆಂಕಟಭಟ್ಟನಿಂದ ದೂರವೇ ಉಳಿಯಿತು. ಅಪ್ಪ ಇಷ್ಟು ಕಷ್ಟ ಬಿಟ್ಟು ಮಾಡಿನ ಆಸ್ತಿಯನ್ನು ಮಾರುವ ಮಾತು ಮುಂದೆ ಈ ಮನೆಯಲ್ಲಿ ಬರಬಾರದೆಂಬ ನಿರ್ಧಾರವನ್ನು ತೆಗೆದುಕೊಂಡ. ವನಜಾಕ್ಷಿ ಪಕ್ಕಕ್ಕೆ ಬಂದು ಮಲಗಿದರೂ ಗೋಚರವಾಗಲಿಲ್ಲ. ತದೇಕ ದೃಷ್ಟಿಯಿಂದ ಸೂರನ್ನೇ ದಿಟ್ಟಿಸುತ್ತಾ ಮಲಗಿದ.
"ರೀ" ವನಜಾಕ್ಷಿಗೂ ನಿದ್ದೆ ಸುಳಿಯದೆ ಗಂಡನನ್ನು ಕರೆದಳು.
"ಏನಾಗ್ಬೇಕು?"
"ಅಲ್ಲ... ನೀವಂದ್ರಿ... ನಮ್ಗೆ ಹೆಣ್ಣು ಸಂತಾನ ಅಗೊದು ಬೇಡಾಂತ ನಿಮ್ಮ ತಂದೆ-ತಾಯಿಯ ಶಾಪ ಇದೇಂತ, ಇದು ಸತ್ಯಾನಾ? ಯಾರಾದ್ರೂ ತಮ್ಮ ಸ್ವಂತ ಮಕ್ಕಳಿಗೆ ಆ ರೀತಿ ಶಾಪ ಕೊಡ್ತಾರಾ?"
"ನಾನು ಆಗ್ಲೆ ಹೇಳಿದ್ನಲ್ಲಾ... ನಮ್ಮ ಮನೆ ಹೆಣ್ಣುಗಳ ಕಷ್ಟ ನೋಡಿ ಹಾಗೆ ಅಂದಿರಬಹುದೂಂತ ಹೇಳಿದೆ. ಹಾಗೇ ಇನ್ನೂ ತಿಳಿದುಕೊಳ್ಳುವ ಇಚ್ಛೆ ಇದ್ರೆ ನಾಳೆ ರಾಮ ಜೋಯಿಸರತ್ರ ಹೋಗಿ ಬರೋಣ"
ಗಂಡನ ಮಾತಿನಲ್ಲಿ ವ್ಯಂಗ್ಯವಿದ್ದುದನ್ನು ಗುರುತಿಸಿದ ವನಜಾಕ್ಷಿಗೆ ಮಾತನಾಡಲಾಗದೆ ವಿರುದ್ಧ ದಿಕ್ಕಿಗೆ ಹೊರಳಿ ಮಲಗಿದಳು. ಆದರೆ ಮನಸ್ಸು ತಡೆಯಲಾರದೆ ಮಗ್ಗುಲು ಬದಲಿಸದೆ ಕೇಳಿದಳು.
"ನಮಗೆ ಹೆಣ್ಣು ಮಗು ಆಗೋದಿಲ್ವಾ?"
"ಪದೇ ಪದೇ ಅದನ್ನು ಕೇಳಬೇಡ. ಹೆಣ್ಣು ಮಗು ಆಗದಿದ್ರೆ ದತ್ತು ತೆಗೆದುಕೊಳ್ಳೋಣ. ಈಗ ಸುಮ್ನೆ ಮಲಗು"
"ಹಾಗಂತೀರಾ? ಅದು ನಮ್ಮ ಮಗು ಆಗೊದಿಲ್ವಲ್ಲಾ?"
"ಮನಸ್ಸು ಉದಾರವಾಗಿರಲಿ. 0ಾರದ್ದಾದರೇನು, ಜವಾಬ್ದಾರಿ ನಾವು ತೆಗೆದುಕೊಂಡ ನಂತರ ಅದು ನಮ್ಮದೆ ಮಗು ತಾನೆ?"
"ಹಾಗಾ?"
ಗಂಡನ ಮಾತುಗಳನ್ನು ಮೆಲುಕು ಹಾಕಿಕೊಂಡು ವನಜಾಕ್ಷಿ ಹಾಗೆ ನಿದ್ರೆಗೆ ಜಾರಿದರೆ, ವೆಂಕಟ ಭಟ್ಟರಿಗೂ ಏನೋ ತೃಪ್ತಿಯೆನಿಸಿ ಹಾಗೆ ಕಣ್ಣು ಮುಚ್ಚಿ ನಿದ್ದೆಗೆ ಇಳಿದರು.
****

Read more!

Wednesday, November 25, 2009

ಭೂತದ ಕೋಳಿ (ಮಯೂರದಲ್ಲಿ ಪ್ರಕಟವಾದ ಕಥೆ)


ಬೆಳಿಗ್ಗೆ ಬೇಗನೆ ಎದ್ದು ಬಚ್ಚಲು ಮನೆಯ ಒಲೆಗೆ ಬೆಂಕಿ ಹಾಕಿ, ಒಂದಷ್ಟು ಕೊತ್ತಳಿಗೆಗಳನ್ನು ಒಳಗೆ ತಳ್ಳಿ ಎದ್ದ ಕೇಶವ ಭಟ್ಟರು ಬೈರಾಸನ್ನು ಹೆಗಲಿಗೆ ಸೇರಿಸಿ ಗದ್ದೆಯ ಪುಣಿಯನ್ನು ಹಿಡಿದು ಹೊರಟರು. ಭತ್ತದ ತೆನೆಗಳು ಪಾಯಕಟ್ಟಿ, ಹಸಿರಿನಿಂದ ಬಂಗಾರದ ಬಣ್ಣಕ್ಕೆ ತಿರುಗಿದ್ದವು. ಇನ್ನೊಂದೆರಡು ದಿನ ನೀರು ಹಾಕಿದರೆ ಸಾಕು. ಹೇಗೂ ಹದಿನೈದು ದಿನಗಳೊಳಗೆ ಕೊಯ್ಲು ಆರಂಭಿಸುವುದೇ ಎಂದು ನಿರ್ಧರಿಸಿದವರು, ಪಂಪಿನ ನೀರನ್ನು ಗದ್ದೆಗೆ ತಿರುಗಿಸಿ ಹೆಗಲಿನ ವಸ್ತ್ರದಿಂದ ಕೈ ಒರೆಸಿಕೊಂಡರು.


ಎಲ್ಲಿದ್ದವೋ, ಸೈನಿಕರ ಪಡೆಯಂತೆ ಓಡಿ ಬಂದ ಹತ್ತು ಹದಿನೈದು ಕೋಳಿಗಳು ಹಠಾತ್ತನೆ ದಾಳಿ ಮಾಡುವಂತೆ ಭಟ್ಟರು ನೋಡುತ್ತಿದ್ದಂತೆ ಮಾಗಿದ ತೆನೆಗಳನ್ನು ಕುಕ್ಕಿ, ನುಂಗುತ್ತಿದ್ದವು. ತುಂಬಿದ್ದ ತೆನೆಯ ಅಷ್ಟೇ ಕಾಳುಗಳು ಗದ್ದೆಯನ್ನೂ ಸೇರುತ್ತಿದ್ದವು. ಅವರು ಹೆಗಲಿನ ಬೈರಾಸು ತೆಗೆದು, `ಹೌ.. ಹೌ... ಅಂದರೂ, `ಕೊಕ್ಕೋ.. ಕ್ಕೋ ಎಂದು ಸದ್ದು ಹೊರಡಿಸಿ ತಮ್ಮವರನ್ನೆಲ್ಲ ಎಚ್ಚರಿಸಿದವೆ ಹೊರತು, ರೆಕ್ಕೆ ಬಿಚ್ಚದೆ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿದವು.

ಭಟ್ಟರು ನೇರವಾಗಿ ಮನೆಗೆ ಬಂದವರೇ, ಇಕ್ಕಳ್ಳೇ, ಅಲ್ಲಿ ಒಂದು ದೊಡ್ಡ ಸೈನ್ಯವೇ ಬಂದಿದೆ. ಪೈರೆಲ್ಲಾ ಹಾಳಾಗುತ್ತೆ. ಮಕ್ಕಳಿಗೆ ಹೇಳು ಆ ಗದ್ದೆಯತ್ರ ಕುಳಿತುಕೊಂಡು ಓದಲಿ. ಅವುಗಳನ್ನು ಕಾಯುವುದಕ್ಕೂ ಆಯ್ತು, ಓದುವುದಕ್ಕೂ ಆಯ್ತಲ್ಲ ಅಂದರು.
ಬೆಳಗ್ಗಿನ ಉಪಹಾರ ಮುಗಿಸದೆ ಮಕ್ಕಳು ಪುಸ್ತಕ ಕೈಯಲ್ಲಿ ಹಿಡಿಯುವುದಿಲ್ಲವೆಂದು ಮೀನಾಕ್ಷಮ್ಮನಿಗೆ ಗೊತ್ತು. ದೋಸೆ ಹೊಯ್ಯುತ್ತಿದ್ದವರು ಗಂಡನಿಗೆ, ನೀವು ಪೂಜೆ ಮಾಡಿ ಹೊರಡಿ. ನಾನೇ ನೋಡಿಕೊಳ್ತೇನೆ. ಅವರಿಗೆಲ್ಲಾ ನಮ್ಮ ಮೇಲೆ ಎಂತದ್ದೋ ಹಠ. ಇಲ್ಲಾಂದ್ರೆ ಇಷ್ಟು ಬೇಗನೆ ಆ ಕೋಳಿಗಳನ್ನೆಲ್ಲಾ ಬಿಡೋದಾ? ಅವುಗಳಿಗೆ ನಾಲ್ಕು ಕಾಳು ಹಾಕುವ ಗತಿಯಿಲ್ಲದವರು ಸಾಕುವುದು ಯಾಕೆ? ಆ ಸೇಸಕ್ಕನಿಗೆ ನಾನೇ ಹೇಳಿ ಬರ್ತೇನೆ. ಎಂತದು ಇದು ಇಲ್ಲಾಂದ್ರೆ? ಹೇಳಿದವರೇ ಕಟ್ಟಿಗೆಯ ಒಲೆಯ ಉರಿಯನ್ನು ಕಡಿಮೆ ಮಾಡಿ ತಮ್ಮ ಹಿರಿ ಮಗಳನ್ನು ಕರೆದರು."

ಸಾವಿತ್ರಿ, ಇಲ್ಲಿ ಬಾ. ದೋಸೆ ಕಲ್ಲು ಕಾಯ್ತು. ಒಂದೆರಡು ದೋಸೆ ಹಾಕು. ಆ ಕೋಳಿಗಳನ್ನು ಓಡಿಸಿ ಬರ್ತೇನೆ ಅಂಗಳಕ್ಕಿಳಿದು ಕೈಯಲ್ಲಿ ಒಂದೆರಡು ಮಣ್ಣಿನ ಹೆಂಟೆಗಳನ್ನು ಹಿಡಿದು ನಿಧಾನವಾಗಿ ಗದ್ದೆಯತ್ತ ನಡೆದರು. ಒಮ್ಮೆ ತಲೆಯೆತ್ತಿ ಸದ್ದು ಆಲಿಸಿದ ಕೋಳಿಗಳು, `ಕ್ಕೊಕ್ಕೋ ಅಂದವು. ಗಂಡ ಹೇಳಿದ್ದು ಸುಳ್ಳಲ್ಲ. ಒಂದು, ಎರಡಾ? ಹತ್ತು ಹದಿನೈದು ಕೋಳಿಗಳು. ಗದ್ದೆಯ ನೇರಕ್ಕೆ ನಿಂತು ಮಣ್ಣಿನ ಹೆಂಟೆಗಳನ್ನು ಒಂದರ ಹಿಂದೆ ಒಂದರಂತೆ ಬಿಸಾಡಿದರೆ ತಪ್ಪಿಸಿಕೊಂಡು ತಮಗೆ ಹಾರಲು ಗೊತ್ತಿದೆ ಎಂದು ಎತ್ತರಕ್ಕೆ ಹಾರಿ, `ಕೊಕ್ಕೊಕ್ಕೋ ಅನ್ನುವ ದೊಡ್ಡ ಗದ್ದಲವನ್ನೆಬ್ಬಿಸಿ ಕೆಳಗಿನ ಮನೆಯತ್ತ ಹಾರಿದವು.
ಕೆಳಗೆ ಸೇಸಕ್ಕ, ಗಿರಿಜಕ್ಕ, ಪದ್ರಸನ ಮನೆಗಳು. ಎಲ್ಲರ ಮನೆಯಲ್ಲಿಯೂ ಕೋಳಿಗಳು. ಗಿರಿಜಕ್ಕ ಶಿಸ್ತಿನಲ್ಲಿ ಕೋಳಿಗಳನ್ನು ಕುತ್ತರಿಯೊಳಗೆ ಹಾಕಿಟ್ಟರೆ, ಪದ್ರಸ ಒಂದು ಕೋಳಿಯೂ ಅಂಗಳ ಬಿಟ್ಟು ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದ.

ಆದರೆ ಸೇಸಕ್ಕ ಹಾಗಲ್ಲ. ಅವರ ಮನೆಯಲ್ಲಿ ಬೇಕಾದಷ್ಟಿದ್ದರೂ ಇನ್ನೊಬ್ಬರದಕ್ಕೆ ಆಸೆ ಪಡುವವರು. ಐದು ಗಂಟೆಗೆ ಎದ್ದರೇ ಮೊದಲು ಕೋಳಿಗಳನ್ನು ಬಿಡುವ ಕೆಲಸ ಅವರದ್ದು. ತಮಗೆ ಎಲ್ಲಿ ಆಹಾರ ಸಿಗುತ್ತದೆಯೆಂದು ಅವುಗಳಿಗೂ ಗೊತ್ತು. ನೇರವಾಗಿ ಬರುವುದೇ ಭಟ್ಟರ ಗದ್ದೆಗಳಿಗೆ.
ಕೋಳಿಗಳ ಆರ್ಭಟ ಕೇಳಿ ಮಡಲಿನ ತಟ್ಟಿಯಿಂದ ಹೊರಗೆ ಇಣುಕು ಹಾಕಿದ ಸೇಸಕ್ಕ, ಭಟ್ಟರ ಹೆಂಗಸು, ಮೀನಾಕ್ಷಮ್ಮನನ್ನು ನೋಡುತ್ತಲ್ಲೇ ಹೊರಗೆ ಧಾವಿಸಿ ಬಂದರು. ಎಂತದ್ದು ಇದು? ನಿಮ್ಮ ಜಾತಿಯೆಂತದ್ದು? ನೀವು ಕೋಳಿಗಳನ್ನು ಕೊಲ್ಲುತ್ತೀರಾ? ಪಾಪ... ಪಾಪ ತಟ್ಟುತ್ತದೆ ನಿಮಗೆ ಅಂದದ್ದೇ ಮೀನಾಕ್ಷಿಯವರಿಗೆ ಸಿಟ್ಟು ಬಂತು. ನೀವು ಎಂತದ್ದು ಮಾತನಾಡುವುದು? ನೀವು ಮಾಡಿದ್ದು ಸರಿಯಾ? ಬೆಳಿಗ್ಗೆದ್ದು ಕೋಳಿಗಳನ್ನು ನಮ್ಮ ಗದ್ದೆಗೆ ಮೇಯಲ್ಲಿಕ್ಕೆ ಬಿಡುವುದಾ? ನಿಮಗೆ ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲವಾ? ನಾವೇನು ಅವುಗಳನ್ನು ನಿಮ್ಮ ಗದ್ದೆಗೆ ಬಿಟ್ಟಿದೇವಾ? ಅವುಗಳಿಗೇನು ಗೊತ್ತು? ನೀವು ಹಾಗೆ ಕಲ್ಲು ಬಿಸಾಡಿದರೆ ಅವು ಸಾಯುವುದಿಲ್ಲವಾ?

ಅಷ್ಟು ನಿಮಗೆ ಕಾಳಜಿಯಿದ್ದರೆ ನಿಮ್ಮ ಕೋಳಿಗಳನ್ನು ನೀವೇ ನೋಡಿಕೊಳ್ಳಿ. ಇಲ್ಲಿಗೆ ಎಂತಕ್ಕೆ ಬಿಡುವುದು? ಎಂದು ಹೇಳುತ್ತಲೇ ಮನೆಗೆ ಬಂದರು ಮೀನಾಕ್ಷಮ್ಮ. ಸೇಸಕ್ಕ ಇನ್ನೂ ಗೊಣಗುತ್ತಿರುವುದು ಕೇಳಿಸುತ್ತಿತ್ತು.
ಮೀನಾಕ್ಷಿಯವರು ಕೈ ತೊಳೆದುಕೊಂಡು ಬಂದು ಮಗಳನ್ನು ಎಬ್ಬಿಸಿ ದೋಸೆ ಹೊಯ್ಯಲು ತಾವೇ ಕುಳಿತರು. ಅಷ್ಟರಲ್ಲಿ ಕೇಶವ ಭಟ್ಟರು ಕೂಡ ಪೂಜೆ ಮುಗಿಸಿ ಅಂಗಡಿಗೆ ಹೊರಡಲು ಅನುವಾದರು. ಆ ಹೆಂಗಸೆಂತ ಬೊಬ್ಬೆ ಹಾಕಿದ್ದು? ಬೆಳಗ್ಗೆದ್ದು ಅವುಗಳತ್ರ ಎಂತ ಮಾತಡ್ಲಿಕ್ಕೆ ಹೋಗಿದ್ದು? ಭಟ್ಟರ ಮಾತು ಕೇಳಿ ಮೀನಾಕ್ಷಿಗೆ ರೇಗಿತು.ನೀವೇ ಹೇಳಿದ್ದಲ್ಲ. ಅಲ್ಲಿ ಒಂದು ದೊಡ್ಡ ಪಡೆಯೇ ಇತ್ತು. ಕಲ್ಲು ಬಿಸಾಡಿದ್ದಕ್ಕೆ ಆ ಹೆಂಗಸು ಒದರ್ತು. ಇನ್ನು ಬರ್ಲಿ ಕೊಂದೇ ಹಾಕ್ತೇನೆ ಅಂದಾಗ ಭಟ್ಟರಿಗೆ ಹೆದರಿಕೆಯಾಯಿತು.ಎಂತದು ನೀನು ಹೇಳುವುದು? ಇನ್ನು ಅದೊಂದು ಅಪವಾದ ನಮಗೆ ಬೇಡ. ಅವತ್ತು ಆ ಪದ್ರಾಸ ಮಾಡಿದ್ದು ಗೊತ್ತುಂಟಲ್ಲಾ? ನಮ್ಮನ್ನು ಅವರು ನೆಮ್ಮದಿಯಿಂದ ಬದುಕುವುದಕ್ಕೆ ಬಿಡುವುದಿಲ್ಲ. ಆದ್ರೂ ಇಂತದಕ್ಕೆಲ್ಲಾ ಹೋಗುವುದು ಬೇಡ. ಆದಷ್ಟು ನೋಡಿಕೊಳ್ಳುವ. ಅವುಗಳ ಪಾಲು ಅವುಗಳಿಗೆ ಹೋಗ್ಲಿ ಎಂದು ಮಡದಿಯನ್ನು ಸಮಾಧಾನಿಸಲು ಪ್ರಯತ್ನಿಸಿದರು.


ಆ ಪದ್ರಾಸ ಅಷ್ಟು ಗಲಾಟೆ ಮಾಡಿದ್ರೂ ಈಗ ಸರಿಯಾಗಿಲ್ವಾ? ನೋಡುವಾ... ಈಗ ಅವನ ಕೋಳಿಗಳು ಬರ್ತಾವಾ? ನಾವು ಬ್ರಾಹ್ಮಣರೆಂದರೆ ಅವರಿಗೆಲ್ಲಾ ತಾತ್ಸಾರ. ನಾವು ಯಾರ ತಂಟೆಗೆ ಹೋಗದಿದ್ದರೂ ಸುಮ್ಮನೆ ನಮ್ಮ ಕಾಲು ಏಳಿತಾರೆ. ಇವರೆಲ್ಲಾ ಯಾಕೆ ಮಾತಾಡಿ ಮನಸ್ಸು ನೋಯಿಸ್ತಾರೋ? ಮೀನಾಕ್ಷಿಯ ಮಾತು ಕೇಳಿ ಭಟ್ಟರಿಗೂ ಬೇಸರವೆನಿಸಿತು. ಊರಿಗೆ ಬಂದಾಗಿನಿಂದ ಒಬ್ಬರಲ್ಲ ಒಬ್ಬರು ಹಠ ಹಿಡಿದು ಜಗಳ ಕಾಯುತ್ತಿದ್ದರು. ನೆರೆಕರೆಯೇ ದೊಡ್ಡ ಹೊರೆಯಂತಾಗಿತ್ತು.

ಚುಚ್ಚಿ ಮಾತನಾಡುವವರೂ ಎಲ್ಲೆಲ್ಲಿಯೂ ಇದ್ದಾರೆ. ಅದು ಅವರವರ ಸಣ್ಣತನ. ನಾಲ್ಕು ದೊಡ್ಡ ಜನರ ಸಂಪರ್ಕದಲ್ಲಿರುವ ಒಬ್ಬ ಸಾಮಾನ್ಯ ವ್ಯಕ್ತಿ ತಾನೇ ದೊಡ್ಡ ಮನುಷ್ಯ ಅಂದುಕೊಳ್ಳುತ್ತಾ, ಇತರರನ್ನು ಹಂಗಿಸುತ್ತ, ಬೆನ್ನಿಗೆ ಇರಿಯುತ್ತಲೇ ಇರುತ್ತಾನೆ. ತನಗಿಲ್ಲದ ಸುಖ, ಸಂತೋಷಗಳನ್ನು ಬೇರೆಯವರಲ್ಲಿ ಕಂಡು, ಅನಗತ್ಯವೆನಿಸಿದರೂ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಕೆಟ್ಟದಾಗಿ ನೋಡುತ್ತಾನೆ. ಒಂದಲ್ಲಾ ಒಂದು ದಿನ ಅಂತಹವರೂ ಕೆಳಗೆ ಬೀಳುತ್ತಾರೆಯೇ ಅಂದುಕೊಂಡ ಭಟ್ಟರು ಪದ್ರಾಸ ಆ ದಿನ ಮಾಡಿದ್ದನ್ನು ನೆನೆಸಿಕೊಂಡರು.


ಮನೆ ಕಟ್ಟಿದ ನಂತರ ಮೊದಲ ಬಾರಿಗೆ ಗದ್ದೆ ನೆಟ್ಟಿದ್ದು. ಆ ವರ್ಷವೇ ಪದ್ರಸನ ದೊಡ್ಡ ಹುಂಜ ಗದ್ದೆಯನ್ನು ದಾಟಿ ಭಟ್ಟರ ಅಂಗಳದವರೆಗೂ ಬಂದಿತ್ತು. ಆ ದಿನ ಸರೀ ಬಿಸಿಲು ಇದ್ದದ್ದಕ್ಕೆ ಮೀನಾಕ್ಷಮ್ಮ ರಾಗಿಯ ಸೆಂಡಿಗೆ ಹಾಕಿದ್ದರು. ಸೆಂಡಿಗೆ ಹರಡಿದ್ದ ಬಟ್ಟೆಯ ಮೇಲೆ ರಾಜಾರೋಷವಾಗಿ ಓಡಾಡಿತ್ತು ಅದು. ಕಾಗೆಗಳ ಉಪದ್ರಕ್ಕೆ ಹೆದರಿದ್ದ ಅವರಿಗೆ ಈ ರೀತಿಯಾಗಿ ಕೋಳಿ ಸೆಂಡಿಗೆಯ ಮೇಲೆ ಓಡಾಡುತ್ತದೆಯೆನ್ನುವ ಅಲೋಚನೆಯೇ ಇರಲಿಲ್ಲ. ಪಕ್ಕದಲ್ಲಿಯೇ ಕಾಡು ಇದ್ದದ್ದರಿಂದ ಅವರು ಅದು ಕಾಡು ಕೋಳಿಯೇ ಬಂದಿದೆಯೆಂದು ಮಕ್ಕಳನ್ನು ಕರೆದು ತೋರಿಸಿದರು. ಮಕ್ಕಳು ಅದನ್ನು ನೋಡುವ ಕುತೂಹಲದಿಂದ ಹೊರಗೆ ಬರುವಾಗ ಅದು ಒಂದಷ್ಟು ಕಡೆಗೆ ಇಶ್ಶಿ ಕೂಡ ಮಾಡಿತ್ತು. ಸೆಂಡಿಗೆಯ ಬಣ್ಣಕ್ಕು ಅದಕ್ಕೂ ಪರಕ್ಕೇ ಇರಲಿಲ್ಲ. ಮಕ್ಕಳು ಕರೆದು ಹೇಳುವಾಗ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದವರೇ ಅದನ್ನು ಅಟ್ಟಿಸಿಕೊಂಡು ಹೋದರು.

ಅದು ಕಾಡಿನ ಕಡೆಗೆ ಓಡುವುದು ಬಿಟ್ಟು ಕೆಳಗಿನ ಮನೆಯತ್ತ ಓಡಿತು. `ಅಯ್ಯೋ ದೇವರೇ! ಇದು ಕಾಡು ಕೋಳಿ ಅಲ್ವಾ? ಮನುಷ್ಯ ಸಾಕಿದ ಕೋಳಿ ಈ ತರ ಇನ್ನೊಬ್ಬರ ಮನೆಗೆ ಹೋಗಿ ಉಪದ್ರ ಮಾಡ್ತದ? ಅಂದವರೇ ಅದು ಯಾರ ಕೋಳಿ ಎಂದು ತಿಳಿಯುವ ಕುತೂಹಲಕ್ಕೆ ಅಲ್ಲಿಯೇ ನಿಂತಿದ್ದ ಪದ್ರಸನ ಮಗನನ್ನು ಕೇಳಿದರು. `ನಮ್ಮ ಕೋಳಿ ಅಂದ ಅವನನ್ನು ಕರೆದು ಹೇಳಿದರು. ನೋಡು, ಮನೆಯಲ್ಲಿ ಹೇಳು... ಕೋಳಿ ಸೆಂಡಿಗೆಯ ಮೇಲೆಲ್ಲ ಇಶ್ಶಿ ಮಾಡಿದೇಂತ. ಇನ್ನು ಇತ್ತ ಕಡೆ ಬಂದ್ರೆ ಕಲ್ಲು ಬಿಸಾಡ್ತೇನೆ

ಪದ್ರಸನ ಮಗ ಹಾಗೇ ಹೋಗಿ ಮನೆಯಲ್ಲಿ ಹೇಳಿರಬೇಕು. ಒಂದೆರಡು ದಿನ ಆ ಹುಂಜ ಕಾಣಿಸಲೇ ಇಲ್ಲ. ಆದರೆ ಮರು ದಿನ ದನದ ಹಟ್ಟಿಯಲ್ಲಿ ಇಟ್ಟಿದ್ದ ಅಕ್ಕಚ್ಚಿಯ ಪಾತ್ರೆಯ ಮೇಲೆ ನಿಂತು ಇಶ್ಶಿ ಮಾಡಿದನ್ನು ಕಣ್ಣಾರೆ ನೋಡಿದ ಮೀನಾಕ್ಷಿಯವರಿಗೆ ರೇಗಿತು. ಮಾತಾಡದೆ ಮೆಲ್ಲ ಬಂದವರೇ ಅದು ಎತ್ತ ಕಡೆಗೆ ಹಾರಿ ಹೋಗುತ್ತದೆಯೆಂದು ತಿಳಿದು ಅತ್ತ ಅಡ್ಡ ನಿಂತು ತೂರಿ ಒಂದು ಕಲ್ಲನ್ನು ಒಗೆದರು. ಕೋಳಿ ಕಂಗಾಲಾಗಿ `ಕೊಕ್ಕೊಕ್ಕೋ ಕೂಗುತ್ತಾ ಕಾಡಿನತ್ತ ಹಾರಿತ್ತು. ಸುಮಾರು ಸಮಯದವರೆಗೂ ಕಾಡಿನ ಮರದ ಮೇಲೆ ಕುಳಿತು ಕೂಗುತ್ತಿದ್ದುದು ಕೇಳುತ್ತಿತ್ತು. ಸಂಜೆಯ ಹೊತ್ತಿಗೆಲ್ಲ ಕೂಗು ನಿಂತಿತ್ತು. ಆದರೆ ಪದ್ರಸನ ಮನೆಯಲ್ಲಿ `ಬೋ... ಬೋ... ಎಂದು ಕೋಳಿಯನ್ನು ಕರೆಯುವ ಕೂಗು ಮಾತ್ರ ಕೇಳುತ್ತಲೇ ಇತ್ತು. ಹೊರಗೆ ಮುಸ್ಸಂಜೆಯ ಹೊತ್ತು ತುಳಸಿಕಟ್ಟೆಗೆ ದೀಪ ಇಡಲು ಬಂದಿದ್ದ ಮೀನಾಕ್ಷಿಯವರಿಗೆ ಅದನ್ನು ಕೇಳಿ ಆತಂಕವಾಯಿತು.

`ಕಾಡಿನಾಚೆ ಹೋದ ಕೋಳಿ ಮನೆಗೆ ಬರಲಿಲ್ಲವಾ? ನಾನೇ ಅದನ್ನು ಓಡಿಸಿದ್ದಲ್ವಾ? ಅಲ್ಲಿ ನರಿ ಗಿರಿಯೇನಾದರೂ ಹಿಡಿಯಿತಾ, ಹೇಗೆ? ಪದ್ರಸನ ಮನೆಯಲ್ಲಿ ನಡೆಯುತ್ತಿರುವ ಆತಂಕದ ದೃಶ್ಯ ಅವರ ಕಣ್ಣ ಮುಂದೆ ಸುಳಿಯುತ್ತಲೇ ಬೆದರಿದರು. ಮನಸ್ಸು ತಡೆಯಲಾರದೆ ಮಗನನ್ನು ಕಳುಹಿಸಿ, `ನಿಮ್ಮ ಕೋಳಿ ಕಾಡಿನ ಹತ್ತಿರ ಕೂಗ್ತಾ ಇತ್ತೂಂತ ಹೇಳು ಅಂದರು. ಮಗ ಪಟ್ಟಾಬಿ ಹಾಗೇ ಪದ್ರಸನ ಮನೆಗೆ ಬಂದು ಹೇಳುವಾಗ ಮತ್ತೂ ಒಂದು ಮಾತು ಹೇಳಿದ್ದ. `ಅಮ್ಮನೇ ಅದನ್ನು ಕಾಡಿಗೆ ಓಡಿಸಿದ್ದು ಅಂತ. ಪದ್ರಾಸ ರಾತ್ರಿಗೆ ಕುಡಿದು ಬಂದವನು ಹುಂಜ ಕಾಣದ್ದಕ್ಕೆ ಏನೇನೋ ಬಯ್ಯುತ್ತಿದ್ದದ್ದು ಕೇಳಿಸುತ್ತಿತ್ತು.
ಮರು ದಿವಸ ಕಾಡಿನ ಬದುವಿನ ಹತ್ತಿರ ಕೋಳಿ ಸತ್ತು ಬಿದ್ದಿದ್ದು ನೋಡಿ, ಪದ್ರಾಸ ಮೀನಾಕ್ಷಿಯಮ್ಮನನ್ನು ಸೇರಿ ಬೈಯ್ಯುತ್ತಿದ್ದ. ಅವರು ಮಕ್ಕಳನ್ನು ಹೊರಗೆ ಹೋಗದ ಹಾಗೇ ನೋಡಿಕೊಂಡರು. ಆದರೂ ಭಯ ಅವರಿಂದ ದೂರವಾಗಲಿಲ್ಲ. ಮಧ್ಯಾಹ್ನದ ಹೊತ್ತು ಕೇಶವ ಭಟ್ಟರು ಅಂಗಡಿಯಿಂದ ಬರುವಾಗ ಪದ್ರಾಸ ಹಡೆ ಮಾತುಗಳನ್ನು ಒದರುತ್ತಾ ಸತ್ತ ಕೋಳಿಯನ್ನು ತಂದು ಭಟ್ಟರ ಮನೆಯಂಗಳಕ್ಕೆ ಬಿಸಾಡಿದ. ಗಿರಿಜಕ್ಕನ ಮನೆಯವರು, ಸೇಸಕ್ಕನ ಮನೆಯವರೆಲ್ಲಾ ಇದನ್ನು ನಾಟಕದಂತೆ ನೋಡುತ್ತಾ ನಿಂತಿದ್ದರು.


ಕಟ್ಟದ ಕೋಳಿ ಅದು. ನಾಲ್ಕೈದು ಬಾರಿಯಾದರೂ ಗೆಲ್ಲುತ್ತಿತ್ತು. ಅದನ್ನೇ ಸಾಯಿಸಿದ್ರಲ್ಲ. ನೀವೇ ತಿನ್ನಿ ಅಂದು ಹಿಡಿ ಶಾಪ ಹಾಕಿ ಹೋದ ಪದ್ರಾಸ. ಮೀನಾಕ್ಷಿಯವರಿಗೆ ಅಳುವೇ ಬಂತು. ಗಂಡ ತಲೆ ತಗ್ಗಿಸಿಕೊಂಡೇ ಒಳಗೆ ಬರುವಾಗ ಅವರಿಗೆ ದು:ಖ ತಡೆಯಲಾಗಲಿಲ್ಲ. ಇಂತದನ್ನೆಲ್ಲಾ ಕೇಳಬೇಕಾಯಿತಲ್ಲ? ಎಂದು ವ್ಯಥೆ ಪಟ್ಟರು. ನಾನು ಹೇಳಿಲ್ವಾ ನಿನಗೆ, ನಮಗೆ ಎಂತಕ್ಕೆ ಬೇಕಿತ್ತು? ನೀನು ಕೊಂದಿಯಾ ಅದನ್ನಾ? ಭಟ್ಟರು ಶಂತವಾಗಿಯೇ ಕೇಳಿದಾಗ ಮೀನಾಕ್ಷಿಯಾವರು ಕಣ್ಣೀರನ್ನು ಒರೆಸಿಕೊಂಡು, ಅಕ್ಕಚ್ಚಿ ಪಾತ್ರೆ ಮೇಲೆ ಕುಳಿತು ಗಲೀಜು ಮಾಡಿತು. ಅದನ್ನು ಇನ್ನು ದನಗಳಿಗೆ ಇಡುವುದಕ್ಕಾಗುತ್ತಾ? ಅದಕ್ಕೆ ಕಾಡಿನತ್ತ ಓಡಿಸಿದೆ. ನಾನೇನು ಅದನ್ನು ಸಾಯಿಸ್ಲಿಲ್ಲ. ಬೇಕಾದ್ರೆ ಮಕ್ಕಳನ್ನು ಕೇಳಿ ಅಂದರು. ಭಟ್ಟರಿಗೆ ಉಭಯಸಂಕಟವಾಯಿತು. ಕೋಳಿಯನ್ನು ಸಾಯಿಸದಿದ್ದರೂ ಸಾಯಿಸಿದ ಆರೋಪ ಹೊತ್ತುಕೊಳ್ಳಬೇಕಾಯಿತಲ್ಲ ಎಂದು ವ್ಯಥೆಪಟ್ಟರು. ಇನ್ನು ಪದ್ರಾಸನನ್ನು ಸಮಾಧಾನ ಮಾಡಿ ಅದನ್ನು ತೆಗೆದುಕೊಂಡು ಹೋಗು ಅನ್ನುವಂತೆ ಇರಲಿಲ್ಲ. ಗಿರಿಜಕ್ಕನ ಮಗನನ್ನು ಕರೆದು ಅದನ್ನು ತೋಟದಲ್ಲಿ ಹುಗಿದು ಹಾಕುವಂತೆ ಹೇಳಿದರು. ಆದರೆ ಪದ್ರಾಸನಿಗೆ ಹೆದರಿದ ಗಿರಿಜಕ್ಕ ಮಗನಿಂದ ಅಂತಹ ಕೆಲಸವನ್ನು ಮಾಡದಂತೆ ತಾಕೀತು ಮಾಡಿದರು.

ಇನ್ನು ತಾನೇ ಅದನ್ನು ಇತ್ಯರ್ಥ ಮಾಡುವುದೆಂದು ಹಾರೆ ಹಿಡಿದುಕೊಂಡು ತೋಟಕ್ಕೆ ಹೊರಟಾಗ ಪದ್ರಾಸನ ಹೆಂಡತಿ ಜಲಜ ತೋಟದ ಬಳಿ ನಿಂತಿರುವುದು ಕಾಣಿಸಿತು. ಭಟ್ರೆ, ನಮ್ಮದು ತಪ್ಪಾಯಿತು. ಅವರೇನೋ ಬೇಸರದಿಂದ ಹೇಳಿದ್ರು, ಕ್ಷಮಿಸಿ ಅಂದವಳೇ ಅವರ ಅಂಗಳದಲ್ಲಿದ್ದ ಕೋಳಿಯನ್ನು ಎತ್ತಿಕೊಂಡು ಬರುವಂತೆ ಮಗನನ್ನು ಕಳುಹಿಸಿದಳು. ಭಟ್ಟರು ಮಾತಾಡದೆ ಸುಮ್ಮನೆ ತಲೆಯಲುಗಿಸಿ ಬಂದ ಹಾಗೆ ಹಿಂದಕ್ಕೆ ನಡೆದರು. ಅದೇ ದಿನ ಸಂಜೆ ಹೊತ್ತು ಸೇಸಕ್ಕನ ಕೋಳಿಯನ್ನು ನರಿಯೊಂದು ಹಿಡಿದುಕೊಂಡು ಹೋಗಿದ್ದನ್ನು ಎಲ್ಲರೂ ಕಣ್ಣಾರೆ ಕಂಡ ಬಳಿಕ ಪದ್ರಾಸನ ಕೋಳಿಯನ್ನು ಕೂಡ ನರಿಯೇ ನುಂಗಿದ್ದು ಎಂದು ತಿಳಿಯಿತು. ಬಳಿಕ ಪದ್ರಾಸನ ಕೋಳಿಗಳು ಎಂದೂ ಅವನ ಅಂಗಳವನ್ನು ದಾಟಿ ಹೋಗಿದ್ದಿಲ್ಲ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಭಟ್ಟರ ಹೆಂಡತಿಯ ಬಳಿ ಬಂದು ಕ್ಷಮಾಪಣೆ ಕೂಡ ಕೇಳಿ ಹೋಗಿದ್ದ.

ಆದರೂ ಮೀನಾಕ್ಷಿಯವರಿಗೆ ನೆರೆಕರೆಯೆಂದರೆ ಹೆದರಿಕೆಯೇ. ಈಗ ಸೇಸಕ್ಕನ ಕೋಳಿಗಳ ಉಪಟಳ. ಮತ್ತೊಮ್ಮೆ ಹಿಂದಿನದರ ಹಾಗೇ ಆದರೆ ಎಂಬ ಆತಂಕವಿದ್ದರೂ ಅವರನ್ನು ಕರೆದು ನಾಲ್ಕು ಮಾತು ಹೇಳುವುದೇ ಸರಿಯೆನಿಸಿತು. ಮೀನಾಕ್ಷಿಯವರಿಗೆ ಮೊದಲಿನ ಹೆದರಿಕೆ ಇರಲಿಲ್ಲ. ಅವರು ಒಂದೆರಡು ದಿನ ನೋಡಿದರು. ಹೇಳಿ ಕಳುಹಿಸಿದರೂ ಕೂಡ ಕೋಳಿಗಳ ಪಡೆ ಬರುವುದು ನಿಲ್ಲಲಿಲ್ಲ. ಸ್ವತ: ತಾವೇ ಸೇಸಕ್ಕನನ್ನು ಹುಡುಕಿಕೊಂಡು ಬಂದರು. ಬಸಳೆ ಗಿಡದ ಬಳಿ ಸಂಜೆಯ ಹೊತ್ತಿಗೆ ಮೀನು ಮೂರುತ್ತಿದ್ದ ಸೇಸಕ್ಕ ಬ್ರಾಹ್ಮಣರ ಹೆಂಗಸು ಬಂದದ್ದನ್ನು ನೋಡಿ ಮೀನನ್ನು ಹಾಗೆ ಬಿಟ್ಟು ಎದ್ದು ನಿಂತರು.
ಮುಸ್ಸಂಜೆ ಹೊತ್ತಿನಲ್ಲಿ ಏನು ಈ ಕಡೆ? ಎಂದು ಕೇಳುವಾಗ ಮೀನಾಕ್ಷಿಯವರು ನೇರವಾಗಿ ಮಾತಿಗೆ ಇಳಿದರು.

ಎಂತ ಸೇಸಕ್ಕ ನೀವು? ನಿಮ್ಮ ಕೋಳಿಗಳು ಬಂದು ಗದ್ದೆ ಹಾಳು ಮಾಡುವುದು ನಿಮಗೆ ಗೊತ್ತುಂಟು. ಆದರೂ ನೀವು ನಮ್ಮ ಗದ್ದೆಗೆ ಅವುಗಳನ್ನು ಅಟ್ಟುತ್ತಿದ್ದೀರಿ. ನಾವು ಎಂತದು ಮಾಡುವುದು ಹೇಳಿ. ಇರುವ ಎರಡು ಕೊಯ್ಲು ಗದ್ದೆಯಲ್ಲಿ ಆಗುವುದೇ ಮೂರು ಮುಡಿ ಅಕ್ಕಿ. ಅದೂ ಹೀಗಾದರೆ ಹೇಗೆ? ಎಂದು ಶಾಂತರಾಗಿಯೇ ನುಡಿದರಾದರೂ ಸೇಸಕ್ಕನಿಗೆ ಸರಿ ಕಾಣಲಿಲ್ಲ.
ನಾವೇನು ಮಾಡಬೇಕು. ಅವುಗಳು ಬಿಟ್ಟ ಕೂಡಲೇ ನಿಮ್ಮ ಗದ್ದೆಗೆ ಬರುತ್ತವಾ? ಇಡೀ ದಿನ ಅವುಗಳನ್ನು ಕಟ್ಟಿಹಾಕುವುದು ನಮಗೂ ಕಷ್ಟವೇ. ಇನ್ನೊಂದೆರಡು ದಿನ, ಎಲ್ಲವನ್ನು ಸಾಟೇ ಮಾಡಿಯಾಗಿದೆ ಎಂದು ಮತ್ತೆ ತಮ್ಮ ಕೆಲಸವನ್ನು ಮುಂದುವರಿಸಿದರು. ಮೀನಾಕ್ಷಿಯವರಿಗೆ ಅಲ್ಲಿ ನಿಲ್ಲಲಾಗದೆ ಹೊರಟು ಬಂದರು. ಸೇಸಿಯಕ್ಕ ಕೋಳಿಗಳ ಬಗ್ಗೆ ಗಮನ ಹರಿಸಲೇ ಇಲ್ಲ. ಅವುಗಳು ಮಾಮೂಲು ಅನ್ನುವಂತೆ ಭಟ್ಟರ ಗದ್ದೆಯನ್ನು ಅರ್ಧಕರ್ಧ ಖಾಲಿ ಮಾಡಿದ್ದವು. ಭಟ್ಟರೂ ಜಗಳಕ್ಕೆ ನಿಲ್ಲಲಿಲ್ಲ. ಅದಲ್ಲದೆ ಹೆಂಡತಿಗೂ ಅವುಗಳ ತಂಟೆಗೆ ಹೋಗದಂತೆ ತಾಕೀತುಮಾಡಿದ್ದರು.
ಎರಡು ದಿನವಲ್ಲ ಎರಡು ವಾರಗಳಾದರೂ ಕೋಳಿಗಳನ್ನು ಸಾಟೆ ಮಾಡಿದವನು ತೆಗೆದುಕೊಂಡು ಹೋಗಲು ಬರಲೇ ಇಲ್ಲ. ಇನ್ನು ಅವುಗಳ ಉಪದ್ರ ತಡೆಯುವುದು ಸಾಧ್ಯವಿಲ್ಲವೆಂದು ತಿಳಿದ ಅನಂತರ ತಮ್ಮ ದೂರದ ಸಂಬಂಧಿ ವಾದಿರಾಜ ಭಟ್ಟರ ಮುಂದೆ ಎಲ್ಲವನ್ನೂ ಹೇಳಿಕೊಂಡರು ಕೇಶವ ಭಟ್ಟರು. ವಾದಿರಾಜಣ್ಣ ಒಂದು ಉಪಾಯ ಸೂಚಿಸಿದರು. ಆದರೆ ಭಟ್ಟರಿಗೆ ಅದರಿಂದ `ಅಪರಾಧಿ ಸ್ಥಾನದಲ್ಲಿ ನಿಂತರೇ? ಅನ್ನುವ ಅನುಮಾನ ಕಾಡಿತು.
ವಾದಿರಾಜಣ್ಣ, ನೀವೇನೋ ಸುಲಭದಲ್ಲಿ ಹೇಳಿದ್ರಿ. ಆದ್ರೆ ಅವುಗಳಿಗೆ ವಿಷ ಇಟ್ಟು ಸಾಯಿಸಿ, ಅದನ್ನು ಅವರ ಮನೆಯವರು ತಿಂದು ನಾನು ಆ ಪಾಪ ಕಟ್ಟಿಕೊಳ್ಳಬೇಕಾ? ಅದು ಸಾಧ್ಯವಿಲ್ಲ... ಬೇರೆ ಏನಾದರೂ ಪರಿಹಾರವಿದ್ದರೆ ತಿಳಿಸಿ ಎಂದ ಕೇಶವ ಭಟ್ಟರ ಮಾತನ್ನು ಕೇಳಿ ವಾದಿರಾಜರು ನಕ್ಕರು.
ನೀನು ಅವರಿವರ ಬಗ್ಗೆ ಅಷ್ಟು ಆಲೋಚಿಸುವುದು ಯಾಕೆ? ಈಗ ನಿನ್ನ ಹೆಂಡ್ತಿ ಅಷ್ಟು ಚೆಂದದಲ್ಲಿ ಅವರಿಗೆ ಹೇಳಿದ್ದಲ್ವಾ? ಅವರು ಏನಾದರೂ ಅದಕ್ಕೆ ಮರ್ಯಾದೆ ಕೊಟ್ರಾ? ಮತ್ತೆ ನೀನ್ಯಾಕೆ ಯೋಚಿಸ್ತೀಯಾ? ಎಂದು ಅವರಿಗೆ ಕೇಳಿದರು. ಆದರೂ ಕೇಶವ ಭಟ್ಟರಿಗೆ ಅದೆಲ್ಲ ಸರಿಯಲ್ಲವೆನಿಸಿತು. ವಾದಿರಾಜಣ್ಣ ಕೂಡ ಆಲೋಚನೆಗೆ ಬಿದ್ದರು.


ನೋಡು, ನಮ್ಮ ಟೈಗರನ್ನೇ ತೆಗೆದುಕೊಂಡು ಹೋಗು ಎಂದ ಅವರ ಮಾತು ಕೇಳಿ ಭಟ್ಟರಿಗೆ ಅದೇ ಸರಿಯಾದ ಪರಿಹಾರವೆಂದು ತಿಳಿಯಿತು. ವಾದಿರಾಜಣ್ಣನ ಮನೆಯ ನಾಯಿಯೆಂದರೆ ಎಲ್ಲರಿಗೂ ಹೆದರಿಕೆಯೆ. ಯಾರಾದರೂ ಅಪರಿಚಿರು ಬಂದರೆ ಎದೆಯ ಮೇಲೆ ಎರಡು ಕಾಲುಗಳನ್ನು ಇಟ್ಟು ನಿಲ್ಲುತ್ತಿದ್ದ ಅದರ ಗಂಭೀರ ಮುಖ, ಎಂತಹ ಎದೆಗಾರಿಕೆಯವರನ್ನೂ ಕ್ಷಣ ಹೊತ್ತು ಅಲ್ಲೋಲ್ಲ ಕಲ್ಲೋಲ ಮಾಡುತ್ತಿತ್ತು.
ಸರಿಯಾಗಿ ಹೇಳಿದೆ ನೋಡು. ಆದರೆ ಅದನ್ನು ತೆಗೆದುಕೊಂಡು ಹೋಗುವುದು ದೊಡ್ಡ ಸಮಸ್ಯೆಯೆ

ನೀನು ಅದಕ್ಕೆ ಯೋಚಿಸುವುದು ಬೇಡ. ನನ್ನ ಸ್ಕೂಟರಿನಲ್ಲಿಯೇ ಅದನ್ನು ನಿನ್ನ ಮನೆಗೆ ತಲುಪಿಸುತ್ತೇನೆ ಅಂದವರೇ ಎರಡೇ ದಿನದಲ್ಲಿ ಅಷ್ಟು ದೊಡ್ಡ ನಾಯಿಯನ್ನು ತಾವೇ ಕೇಶವ ಭಟ್ಟರ ಮನೆಗೆ ತಂದು ಕಟ್ಟಿದರು. ಮೀನಾಕ್ಷಿಯವರಿಗೆ ಅದರ ಹತ್ತಿರ ಹೋಗುವುದಕ್ಕೂ ಹೆದರಿಕೆಯಾಗುತ್ತಿತ್ತು. ಆದರೆ ಕೇಶವ ಭಟ್ಟರನ್ನು ನೋಡಿದ ಕೂಡಲೇ ಬಾಲ ಆಲ್ಲಾಡಿಸುತ್ತಾ ಇತ್ತು. ಅವರೂ ಅರೆ ಬರೆ ಧೈರ್ಯದಿಂದ `ಟೈಗರ್ ಅನ್ನುತ್ತಾ ಅದನ್ನು ಸಮಾಧಾನಿಸಿ ಅದರ ವಿಶ್ವಾಸವನ್ನು ಗೆದ್ದರು. ತದ ನಂತರ ರಾತ್ರಿಯ ಹೊತ್ತು ಅದನ್ನು ತಿರುಗಾಡಾಲು ಬಿಡುತ್ತಿದ್ದರು. ಬೆಳಗಾಗುತ್ತಲೇ ಅದನ್ನು ಕಟ್ಟುತ್ತಿದ್ದರು. ಈ ರೀತಿಯ ಒಪ್ಪಂದಕ್ಕೆ ಅದು ಒಗ್ಗಿಕೊಂಡಿತು.
`ಟೈಗರ್ ಅಂದರೆ ಸಾಕು ತಲೆಯೆತ್ತಿ ಗುರಾಯಿಸಿ ನೋಡುತ್ತಿದ್ದ ನಾಯಿಯನ್ನು ಕಂಡರೆ ಯಾರಾದರೂ ಒಮ್ಮೆ ಹೆದರಲೇ ಬೇಕು. ಅದು ಬೊಗಳಿತೆಂದರೆ ಊರಿನ ನಾಲ್ಕು ಮನೆಗಳಿಗೂ ಕೇಳುವ ಹಾಗೆ ಇತ್ತು. ಭಟ್ಟರು ಬೆಳಿಗ್ಗೆ ಎದ್ದ ಕೂಡಲೇ ಅದನ್ನು ಕರೆದು ಕಟ್ಟುತ್ತಿದ್ದರು. ಆ ದಿನ ಅವರು ಕರೆಯುವಾಗಲೂ ಅದು ಬರಲಿಲ್ಲ. `ಎಲ್ಲಿ ಹೋದ ಇವ? ಅಂದುಕೊಂಡು ತೋಟದ ಕಡೆಗೆ ಬರುವಾಗ ತಾಳೆಯ ಮರದ ಕೆಳಗೆ ಸುಮ್ಮನೆ ಕುಳಿತಿತ್ತು. `ಎಂತಾಯ್ತು ಇವನಿಗೆ? ಯಾರಾದರೂ ವಿಷವೇನಾದರೂ ಹಾಕಿದರಾ ಹೇಗೆ? ಸುಮ್ಮನೆ ಮಲಗಿದ್ದಾನಲ್ಲ? ಅನ್ನುತ್ತಾ ಅದರ ಹತ್ತಿರ ಬಂದು `ಟೈಗರ್ ಅಂದರು. ಅವರ ಕರೆಗೆ ವಿಧೇಯತೆಯಿಂದ `ಕುಯ್ಯುಂ ಕುಯ್ಯುಂ ರಾಗ ಹೊರಡಿಸಿ ತಲೆಯನ್ನು ಮುಂದಕ್ಕೆ ಚಾಚಿ ಮಲಗಿತು. ಭಟ್ಟರಿಗೆ ಇನ್ನಷ್ಟು ಆತಂಕವಾಯಿತು. `ಎಂತದು ಇದು, ಇವನ ವರ್ತನೆ? ಅಂದುಕೊಂಡು ಹತ್ತಿರ ಹೋಗಿ `ಬಾರೋ ಮನೆಗೆ ಅಂದು ಮೆಲ್ಲನೆ ಕೋಲಿನಿಂದ ಬೆನ್ನಿನ ಮೇಲೆ ಮೆಲ್ಲನೆ ಬಾರಿಸಿದರು. ಅವರ ಪೆಟ್ಟಿಗೆ ಹೆದರಿದ ಅದು ಚಂಗನೆ ಎದ್ದು ಹತ್ತಿರದಲ್ಲಿದ್ದ ತನ್ನ ಬೇಟೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು ಮನೆಯತ್ತ ಓಡಿತು.
`ಎಲಾ! ಇವನಾ? ಇದೆಂತ ಗ್ರಾಚಾರ? ಅವನು ಬಾಯಿಯಲ್ಲಿ ಎಂತ ಹಿಡಿದುಕೊಂಡು ಹೋದದ್ದು? ಅನ್ನುತ್ತಾ ಅದರ ಹೆಸರನ್ನು ಕೂಗುತ್ತಾ ಅದರ ಹಿಂದೆ ಓಡಿದರು. ಅವರು ಕರೆಯುವಾಗ ಅದು ಅಷ್ಟೇ ವೇಗದಿಂದ ಹಿಂದಕ್ಕೆ ಬಂದು ಬಾಯಿಯಲ್ಲಿದ್ದದ್ದನ್ನು ಅವರಿಗೆ ತೋರಿಸುವಂತೆ ನಿಂತಿತು. ಭಟ್ಟರಿಗೆ ತಲೆ ಸುತ್ತು ಬಂದು ಬೀಳುವುದೊಂದೇ ಬಾಕಿ. `ಇವ ಎಂತ ಕೆಲಸ ಮಾಡಿದ ಅಂದುಕೊಂಡು ಕೋಲಿನಿಂದ ರಪ್ಪನೆ ಬಾರಿಸಿ ಅವನನ್ನು ಸರಪಣಿಯತ್ತ ಓಡಿಸಿದರು. ಬಿದ್ದ ಪೆಟ್ಟಿನ ನೋವಿಗೆ ಬಾಯಿಯಲ್ಲಿದ ಕೋಳಿಯನ್ನು ಬಿಟ್ಟು ತನ್ನ ಸ್ಥಾನದಲ್ಲಿ ಹೋಗಿ ನಿಂತಿತು. ದಡದಡನೆ ಬಂದವರು ಅದನ್ನು ಕಟ್ಟಿ ಹಾಕಿ, ಮತ್ತೆರಡು ಪೆಟ್ಟು ಬಿಗಿದರು. `ಕುಯ್ಯೋಂ ಕುಯ್ಯೋಂ ಅನ್ನುತ್ತಾ ಮುದುರಿ ಕುಳಿತಿತು.

`ಛೆ! ಎಂತ ಕೆಲಸ ಆಗೋಯ್ತು? ಅಂದುಕೊಂಡು ಮೀನಾಕ್ಷಿಯನ್ನು ಕರೆದರು. ಅವರು ಗಂಡನ ಕೂಗಿಗೆ ದಿಗಿಲುಗೊಂಡು ಹೊರಗೆ ಬರುವಾಗ ಅಂಗಳದಲ್ಲಿದ್ದ ಸತ್ತ ಕೋಳಿಯನ್ನು ಕಂಡು ಬೆದರಿದರು. ಇದೆಂತ ಕಥೆ? ಅವನನ್ನು ಬಿಟ್ಟದ್ದು ತಪ್ಪಾಯ್ತು ನಾಯಿಯ ಕೆಲಸವನ್ನು ಕಂಡು ಹಾಗೇ ಹೇಳಿದಾಗ ಭಟ್ಟರಿಗೂ ಹಾಗೇ ಅನಿಸಿತು. ಆದರೆ ಯಾವತ್ತೂ ಇಲ್ಲದ್ದು ಇವತ್ತೇ ಹೀಗಾಗಾಬೇಕೆ? ಇರಲಿ ಅಂದುಕೊಂಡು ಮಡದಿಯ ಮುಖ ನೋಡಿದರು.
ಯಾರಿಗೂ ಹೇಳೋದು ಬೇಡ. ಅದನ್ನು ಕಾಡಿನ ಹತ್ತಿರ ಹೂತು ಹಾಕಿ ಬಿಡಿ ಎಂದು ಗಂಡನಿಗೆ ಬಿಟ್ಟಿ ಸಲಹೆ ಮಾಡಿದರು. ಇನ್ನು ಇದನ್ನು ನೋಡಿ ಸೇಸಕ್ಕ ದೊಡ್ಡ ರಾದ್ಧಾಂತ ಮಾಡುವುದು ಬೇಡವೆಂದು ಮಗನನ್ನು ಕರೆದು ಹಾರೆಯಿಂದ ಅದನ್ನು ಬುಟ್ಟಿಯಲ್ಲಿ ಹಾಕಿ, ಕಾಡಿನತ್ತ ನಡೆದರು. ಅಲ್ಲಿ ಸ್ವಲ್ಪ ಮಣ್ಣು ತೆಗೆದು ಅದನ್ನು ಮುಚ್ಚಿ ಹಾಕಿದರು. ಆದರೆ ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರುವುದೆಂದು ಅವರಿಗೆ ತಿಳಿದಿತ್ತು. ಅದಕ್ಕೆ ತಕ್ಕಂತೆ ನರಿಯೋ ನಾಯಿಯೋ ಹೂತು ಹಾಕಿದ್ದ ಕೋಳಿಯನ್ನು ಮೇಲಕ್ಕೆ ಹಾಕಿದ್ದವು. ಬಿಜಕ್ರೆ ತರಲೆಂದು ಕಾಡಿಗೆ ಹೋಗಿದ್ದ ಸೇಸಕ್ಕನ ಕಣ್ಣಿಗೆ ಅದು ಬೀಳಬೇಕೆ? ಮೂರು ದಿನದಿಂದ ಕಾಣೆಯಾಗಿದ್ದ ತನ್ನ ಮೊಟ್ಟೆ ಇಟ್ಟ ಹೆಂಟೆ ಕಾಣೆಯಾಗಿದ್ದಕ್ಕೆ ನರಿಗೆ ಶಾಪ ಹಾಕಿದ್ದರು. ಮೊಟ್ಟೆಗಳೂ ಕಲ್ಲಾಗಿ ಹೋಗಿದ್ದವು. ಆದರೆ ಆ ಕೋಳಿ ಮಣ್ಣಿನಿಂದ ಮೇಲೆ ಬಂದಿರುವಾಗ ಅವರಿಗೆ ಅನುಮಾನವಾಯಿತು.

ಬಿಜಕ್ರೆಯ ತೊಟ್ಟೆಯನ್ನು ಹಾಗೆ ಅಲ್ಲೇ ಬಿಸಾಡಿ ಬಂದವರು. ಮೀನಾಕ್ಷಮ್ಮನಿಗೆ ಶಾಪ ಹಾಕುತ್ತಲೇ ಬಂದರು. ಆ ಸತ್ಯವನ್ನು ಮುಚ್ಚಿ ಹಾಕಲು ಗೊತ್ತಿಲ್ಲದ ಮೀನಾಕ್ಷಮ್ಮ ನಡೆದುದ್ದನ್ನು ಹೇಳಿಯೇ ಬಿಟ್ಟರು. ನಾಯಿಯಿಂದ ಅದನ್ನು ಹಿಡಿಸಿದ್ದು ನೀವೇ ಅನ್ನುವ ಆರೋಪದ ಜೊತೆಗೆ ಕೆಟ್ಟ ಬೈಗುಳನ್ನೂ ಕೇಳಬೇಕಾಗಿದ್ದು ಅವರ ಹಣೆಬರಹವಾಯಿತು. ಆವತ್ತು ಸಂಜೆ ಕೋಳಿ ಸಾಟೆಯ ಪುಟ್ಟನಿಗೆ ಎಂಟು ಕೋಳಿಗಳನ್ನು ಮಾರಿದಲ್ಲದೆ ಉಳಿದ ಮೂರು ಕೋಳಿಗಳನ್ನು ಭೂತಕ್ಕೆ ಬಿಟ್ಟರು. ಆ ವಿಷಯ ಗೊತ್ತಾಗಿದ್ದು ಅವರ ಮಗನಿಂದಲೇ. ಅವನು ಭಟ್ಟರ ಮಗ ಪಟ್ಟಾಬಿಯ ಜೊತೆಗೆ ಶಾಲೆಗೆ ಹೋಗುವಾಗ ಹೇಳಿದನಂತೆ.
ಇನ್ನು ನೀವು ಕೋಳಿಗಳನ್ನು ಏನೂ ಮಾಡುವ ಹಾಗಿಲ್ಲ. ಅದನ್ನೆಲ್ಲಾ ಅಮ್ಮ ಭೂತಕ್ಕೆ ಬಿಟ್ಟಿದ್ದಾರೆ

ಅದನ್ನು ಕೇಳಿದ ಭಟ್ಟರ ಮಗ ಮನೆಗೆ ಬಂದು ಹೇಳಿದ ಮೇಲೆ ಮೀನಾಕ್ಷಿಗೂ ಹೆದರಿಕೆಯಾಗಿತ್ತು. ಅವರು ಗಂಡನನ್ನು ಕರೆದು, ನೋಡಿ, ಇನ್ನು ಊರಿನ ಕೋಲ ಮುಗಿಯುವ ತನಕ ನಾಯಿಯನ್ನು ಬಿಡುವುದು ಬೇಡ. ಅವರು ಕೋಳಿಗಳನ್ನು ಭೂತಕ್ಕೆ ಬಿಟ್ಟಿದ್ದಾರಂತೆ ಎಂದು ಎಚ್ಚರಿಕೆಯ ಮಾತು ಹೇಳಿದರು. ಕೇಶವ ಭಟ್ಟರಿಗೂ ಆತಂಕವಾಗದಿರಲಿಲ್ಲ. ನಾಯಿಯನ್ನು ಕಟ್ಟಿಯೇ ಹಾಕಿದರು. ಅದು ಮಲಗಿದಲ್ಲಿಯೇ ಒಂದು... ಎರಡು... ಮಾಡುವುದನ್ನು ರೂಢಿ ಮಾಡಿಕೊಂಡಿತು. ಇದರಿಂದಾಗಿ ಅದರ ಚಾಕರಿಯೇ ಒಂದು ದೊಡ್ಡ ಹೊರೆಯಾದಾಗ ಅದನ್ನು ವಾಪಾಸು ವಾದಿರಾಜಣ್ಣನಿಗೆ ಕೊಟ್ಟು ಬರುವುದೆಂದು ನಿರ್ಧರಿಸಿದರು. ವಾದಿರಾಜಣ್ಣನ ಒಪ್ಪಿಗೆ ದೊರೆತ ನಂತರ ಒಂದು ದಿನ ರಿಕ್ಷಾದಲ್ಲಿ ಹಾಕಿಕೊಂಡು ಆದನ್ನು ಬಿಟ್ಟು ಬಂದರು.

ಕೋಳಿಗಳನ್ನು ಭೂತಕ್ಕೆ ಬಿಟ್ಟರೂ ಅವುಗಳ ಉಪದ್ರ ನಿಲ್ಲಲಿಲ್ಲ. ಗದ್ದೆಗೆ ಬರುವುದು, ತೋಟದಲ್ಲೆಲ್ಲಾ ಜಾಲಾಡಿಸುವುದು, ಮಣ್ಣನ್ನು ಕಾಲಿನಿಂದ ಎಳೆದು ಹಾಕುವುದು, ಅಂಗಳದಲ್ಲೆಲ್ಲಾ ಹಿಕ್ಕೆ ಹಾಕುವುದು, ಬೈ ಹುಲ್ಲಿನ ಮೇಲೆ ಹಾರಿ ಕುಳಿತುಕೊಳ್ಳುವುದು. ಹೀಗೆ ಉದ್ದಕ್ಕೆ ಅವುಗಳ ಉಪದ್ರ ನಡೆಯುತ್ತಲೇ ಇತ್ತು. ಸೇಸಕ್ಕನ ಮನೆಯವರಿಗಿಂತಲೂ ಅವುಗಳ ಮೇಲೆ ಭಟ್ಟರ ಮನೆಯವರಿಗೆ `ಭೂತಕ್ಕೆ ಬಿಟ್ಟ ಕೋಳಿ ಅನ್ನುವ ಗೌರವವಿತ್ತು. ಅವುಗಳ ಉಪಟಳವನ್ನು ತಡೆದುಕೊಂಡು ಸುಮ್ಮನಾದರು. ಸೇಸಕ್ಕನಿಗೂ ಆತಂಕ ತಪ್ಪಿತು. ಅವರು ಪದೇ ಪದೇ ಭಟ್ಟರ ಮಕ್ಕಳು ಸಿಕ್ಕಿದಾಗಲೆಲ್ಲಾ `ಕೋಳಿಗಳಿಗೆ ಕಲ್ಲು ಬಿಸಾಡ ಬೇಡಿ. ಭೂತಕ್ಕೆ ಬಿಟ್ಟಿದೆ ಅನ್ನೋರು.

ಹೀಗೆ ಭೂತಕ್ಕೆ ಬಿಟ್ಟ ಕೋಳಿಗಳು ಭಟ್ಟರ ಮನೆಯಲ್ಲೆಲ್ಲಾ ಓಡಾಡಿಕೊಂಡು ಸೊಕ್ಕಿ ಹೋದವು. ಭಟ್ಟರಿಗೆ ಧರ್ಮ ಸಂಕಟ. ಒಮ್ಮೆ ಅವರ ಮನೆಗೆ ಸಂಬಂಧಿಕರು ಯಾರೋ ಬಂದವರು, ಏನು, ನೀವೂ ಕೋಳಿಗಳನ್ನು ಸಾಕಿದ್ದೀರಾ? ಅಂದಾಗ ಭಟ್ಟರಿಗೆ ನಾಚಿಕೆಯಾಯಿತು. ಅವರು ಪರಿಸ್ಥಿತಿಯನ್ನು ವಿವರಿಸಿ ಹೇಳಿದ ನಂತರ ಅವರೆಲ್ಲಾ ನಕ್ಕರು. ಭಟ್ಟರು ಈ ಅವಮಾನವನ್ನು ನುಂಗಿಕೊಂಡಿದ್ದರು. ಇದ್ದಕ್ಕಿದ್ದಂತೆ ಕೋಳಿಗಳು ಬರುವುದು ನಿಂತಿತು. ಭಟ್ಟರಿಗೂ ಅವರ ಮನೆಯವರಿಗೂ ಆಶ್ಚರ್ಯ! ಊರಿನ ಕೋಲಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಭೂತಕ್ಕೆ ಬಿಟ್ಟ ಕೋಳಿಗಳೆಲ್ಲಾ ಎಲ್ಲಿ ಹೋದವು? ಸೇಸಕ್ಕನಿಗೆ ಬುದ್ಧಿ ಬಂದಿರಬೇಕು. ಅವುಗಳನ್ನು ಗೂಡಿನಲ್ಲಿ ಹಾಕಿ ಸಾಕುತ್ತಿದ್ದಾರೇನೋ? ಅಂದುಕೊಂಡು ನೆಮ್ಮದಿಯ ನಿಡುಸುಯ್ದರು.

ಆದರೆ ಹಾಗಾಗಲಿಲ್ಲ. ಎರಡು ದಿವಸ ಕಾಣಿಸದ ಕೋಳಿಗಳು ಗದ್ದೆಯ ನಡುವೆ ಓಡಾಡುತ್ತಿದ್ದದ್ದು ಕಾಣಿಸಿತು ಭಟ್ಟರಿಗೆ. `ಎಲಾ ಶಿವನೇ! ಈ ಕೋಳಿಗಳಿಗೂ ಕಳ್ಳ ಬುದ್ಧಿ ಗೊತ್ತುಂಟಾ? ಹೀಗೆ ಯಾರಿಗೂ ಗೊತ್ತಾಗದ ಹಾಗೆ ಗದ್ದೆಯ ನಡುವೆ ಬಂದು ತೆನೆಯನ್ನು ಹಾಳು ಮಾಡುವುದಾ? ಅಂದುಕೊಂಡವರೇ ಒಂದು ಕಲ್ಲನ್ನು ತೆಗೆದು ಬಿಸಾಡಿದರು. ಕಲ್ಲು ಕೋಳಿಯ ಕಾಲಿಗೆ ನಾಟಿರಬೇಕು. ಕೂಗುತ್ತಾ ಎತ್ತರಕ್ಕೆ ಹಾರಿದ ಕೋಳಿ ಗದ್ದೆಯ ಬದಿಗೆ ಬಂದು ಬಿದ್ದು ಒದ್ದಾಡಿತು. ಭಟ್ಟರ ಎದೆ ಝಲ್ಲೆಂದಿತು. `ಇನ್ನೆಂತ ಮಾಡುವುದು? ಎಂದು ತಲೆಗೆ ಕೈ ಹಚ್ಚಿದರು. ಹೊರಗೆ ಬಂದ ಮಡದಿಗೆ ನೀರು ತರುವಂತೆ ಹೇಳಿದರು. ಮೀನಾಕ್ಷಮ್ಮ ನೀರು ತಂದು ಅವರ ಕೈಯಲ್ಲಿ ಕೊಟ್ಟರು. ಕೈಗೆ ನೀರು ಆಪೋಷನ ಮಾಡಿಕೊಂಡು ಕೋಳಿಯ ಮೇಲೆ ಹಾಕಿದರು. ಕೋಳಿ ಸತ್ತೆನೋ, ಬದುಕಿದೆನೋ ಎಂದು ಓಡಿತು. ಅವರು ನಿರುಮ್ಮಳರಾದರು.

ಎಂತದು ನೀವು, ಅದು ಭೂತದ ಕೋಳಿಯಲ್ವಾ? ಅದಕ್ಕೆ ನೀವು ಕಲ್ಲು ಬಿಸಾಡಿದ್ದಾ? ಅದು ಸತ್ತಿದ್ರೆ ನಾವು ಎಂತದು ಮಾಡ್ಬೇಕಿತ್ತು? ಅನ್ನುತ್ತಾ ಭಟ್ಟರ ತಲೆ ಕೊರೆದರು. ಭಟ್ಟರು ಮಾತಾಡದೆ ನೀರಿನ ಪಾತ್ರೆಯನ್ನು ತೆಗೆದುಕೊಂಡು ಮನೆಯತ್ತ ನಡೆದರು.
ಅವರು ಮನೆಯ ಒಳಗೆ ಕಾಲಿಟ್ಟಿದ್ದರಷ್ಟೇ ಸೇಸಕ್ಕನ ಗಂಟಲು `ಟೈಂ ಟೈಂ ಅನ್ನುವುದು ಕೇಳಿಸಿತು. ಭೂತಕ್ಕೆ ಬಿಟ್ಟ ಕೋಳಿಯ ಕಾಲು ಮುರಿದದ್ದೆ ಅದಕ್ಕೆ ಕಾರಣವೆನ್ನುವುದು ತಿಳಿಯಿತು. ಮಾತಿಗೆ ಮಾತು ಬೆಳೆದರೆ ದೊಡ್ಡ ಜಗಳವೇ ಆಗುತ್ತದೆಯೆಂದು ಅವರಿಗೆ ಗೊತ್ತು.
ಕಾಲ ಹಾಗೇ ನಿಲ್ಲುತ್ತದಾ? ಭಟ್ಟರು ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬಂದಾಗ ಸುಮಾರು ಎಂಟು ಗಂಟೆಯ ಸಮಯ. ಮನೆಯ ಒಳಗೆ ಕಾಲಿಟ್ಟಿದ್ದರಷ್ಟೆ ಕೋಳಿಗಳು ಒಂದೇ ಸಮನೆ `ಕೊಕ್ಕೊಕ್ಕೋ ಎಂದು ಕೂಗುವುದು ಕೇಳಿಸಿತು. ಇಷ್ಟು ಹೊತ್ತಿಗೆ ಕಾಡು ಬೆಕ್ಕೋ, ನರಿಯೋ, ಇಲ್ಲ ಕತ್ತೆಕಿರುಬನೋ ಬಂದಿರಬೇಕೆಂದುಕೊಂಡರು. ಭೂತದ ಕೋಳಿಗಳನ್ನು ಅವು ಏನು ಮಾಡಲಾರವು ಅನ್ನುವ ಮುಗ್ಧತೆ ಭಟ್ಟರ ಮನೆಯವರಿಗೆ.
ಬೆಳಿಗ್ಗೆ ಸೇಸಕ್ಕನ ಮಗ ಸ್ಟೀಲ್ನ ಚೆಂಬು ಹಿಡಿದುಕೊಂಡು ಭಟ್ಟರ ಮನೆಗೆ ಬಂದ. ದೇವರಿಗೆ ಹೂವು ಕೊಯ್ಯುತ್ತಿದ್ದ ಭಟ್ಟರು `ಏನು? ಅಂದರು.
ಹಾಲು ಕೊಡ್ಬೇಕಂತೆ, ಬೊಂಬಾಯಿಯಿಂದ ಅಕ್ಕ, ಭಾವ ಬಂದಿದ್ದಾರೆ ಅಂದ.
ಭಟ್ಟರು ಮಡದಿಯನ್ನು ಕರೆದು ಹಾಲು ಕೊಡುವಂತೆ ಹೇಳಿದವರೆ ಹುಡುಗನ ಬಳಿ, ಅಲ್ಲನಾ, ನಿನ್ನೆ ರಾತ್ರಿ ನಿಮ್ಮ ಕೋಳಿಗಳು ಯಾಕೆ ಹಾಗೆ ಕೂಗಿಕೊಂಡದ್ದಾ? ಅಂದರು.
ಹುಡುಗ ನಗುತ್ತಾ ನಿಂತಿದ್ದ. ಅವನ ವರ್ತನೆ ವಿಚಿತ್ರವಾಗಿತ್ತು.
ನಿಮ್ಮ ಕೋಳಿಯಲ್ವಾ? ಭಟ್ಟರು ಅನುಮಾನದಿಂದ ಮತ್ತೊಮ್ಮೆ ಪ್ರಶ್ನಿಸುವಾಗ ಅವನು ನಗುತ್ತಲೇ, ಅದು ನಿನ್ನೆ ಅಕ್ಕನವರು ಬಂದಿದ್ರಲ್ಲಾ ಅದಕ್ಕೆ... ಅಂದ.
ಅಲ್ಲನಾ, ಅದು ಭೂತಕ್ಕೆ ಬಿಟ್ಟ ಕೋಳಿಯಲ್ವಾ? ಹಾಗೂ ಮಾಡ್ತಾರಾ? ಆಶ್ಚರ್ಯದಿಂದ ಭಟ್ಟರು ಕೇಳುವಾಗ ಅವನು, ಭೂತಕ್ಕೆ ನಾಳೆ ಫಾರಂನಿಂದ ಕೋಳಿಗಳನ್ನು ತರ್ತಾರೆ ಅಂದು ಮೀನಾಕ್ಷಮ್ಮ ಹಾಕಿದ ಹಾಲನ್ನು ತೆಗೆದುಕೊಂಡು ಹೊರಟ. ಮೀನಾಕ್ಷಮ್ಮನಿಗೂ ಆಶ್ಚರ್ಯ.
ಹಾಗೆ ಭೂತಕ್ಕೆ ಬಿಟ್ಟ ಕೋಳಿಯನ್ನು ತಿಂದವರನ್ನು ಸುಮ್ಮನೆ ಬಿಡ್ತದಾ ಅದು? ಮುಗ್ಧತೆಯಿಂದ ಪ್ರಶ್ನಿಸಿದವರನ್ನು ನೋಡಿ ಭಟ್ಟರು ಕೂಡ ಅಷ್ಟೆ ಮುಗ್ಧತೆಯಿಂದ `ಏನೋ, ಗೊತ್ತಿಲ್ಲ ಅನ್ನುವಂತೆ ಕೈ ತಿರುಚಿದರು.

Read more!

Tuesday, November 24, 2009

ಮರದ ಪೆಟ್ಟಿಗೆ


(ಕರ್ಮವೀರದಲ್ಲಿ ಪ್ರಕಟವಾದ ಪತ್ತೇದಾರಿ ಕಥೆ)

ಮರಳ ದಿಣ್ಣೆ ಏರಿ ಮೊಣಕಾಲ ಮೇಲೆ ಗಲ್ಲವಿಟ್ಟು ಸೂರ್ಯ ಮುಳುಗುವವರೆಗು ಕುಳಿತು ಸಮುದ್ರದ ಅಲೆಗಳನ್ನು ನೋಡುತ್ತಿದ್ದಳು ಗಾಜು ಕಣ್ಣಿನ ಚೆಲುವೆ ನಿನಾದ. ಸೂರ್ಯ ಕೆಂಪು ತಟ್ಟೆಯಾಗಿ ಮುಳುಗಿದಾಗ ಸುತ್ತಲೂ ಕತ್ತಲಾವರಿಸಿತು. ಸಮುದ್ರದ ಬೋರ್ಗರೆತದ ಸದ್ದು ಜೋರಾಗುತ್ತಿದ್ದಂತೆ ಅವಳ ಆಲೋಚನೆಗಳೆಲ್ಲಾ ಕಡಿಮೆಯಾದಂತಾಯಿತು. ಅಲೆಗಳನ್ನೇ ನೋಡುತ್ತಾ ಕುಳಿತಿದ್ದವಳನ್ನು ಎಚ್ಚರಿಸಿದ್ದು ಯಾವುದೋ ಅಪರಿಚಿತ ದನಿ!
"ಎಕ್ಸ್ ಕ್ಯೂಸ್ ಮಿ" ವ್ಯಕ್ತಿ ಧ್ವನಿಯಲ್ಲಿ ಮೃದುತ್ವ ಬೆರೆಸಿ ಕೇಳಿದ. ಅಪರಿಚಿತ ದನಿ ಕೇಳಿ ಬೆಚ್ಚಿ ತಲೆ ಎತ್ತಿದಳು ನಿನಾದ. ಅವಳನ್ನು ನೋಡಿ ಮುಗುಳ್ನಕ್ಕ. ಎದ್ದು ನಿಂತು ಸೀರೆಗೆ ಅಂಟಿಕೊಂಡಿದ್ದ ಮರಳನ್ನು ಕೊಡವಿಕೊಂಡಳು.
"ನೀವು ನನಗೆ ಸಹಾಯ ಮಾಡ ಬಲ್ಲಿರಿ?" ಬೇಡಿಕೆಯ ಸ್ವರದಲ್ಲಿ ಕೇಳಿದ ಅಪರಿಚಿತ ಯುವಕ! ಮುಖ ಅಸ್ಪಷ್ಟವಾಗಿ ಕಂಡಿತು. ಯುವಕ ಸಹಾಯ ಹಸ್ತ ಕೇಳುತ್ತಿದ್ದಾನೆ. ಅಪರಿಚಿತನನ್ನು ಅಳೆಯುವಂತೆ ನೋಡಿದಳು."
"ಇಲ್ಲೆ ಅರ್ಧ ಫರ್ಲಾಂಗ್ ದೂರದಲ್ಲಿ ನನ್ನ ಯಾಂತ್ರಿಕ ದೋಣಿ ಲಂಗರು ಹಾಕಿದೆ. ಅದರಿಂದ ವಸ್ತುವನ್ನು ಇಳಿಸಬೇಕಿದೆ. ಇಲ್ಲಿ ಸಹಾಯಕ್ಕೆ ಬೇರೆ ಯಾರು ಕಾಣಿಸ್ತಿಲ್ಲ. ನೀವು ಸಹಾಯ ಮಾಡಬಲ್ಲಿರೀಂತ ಭಾವಿಸ್ತೀನಿ" ಅವಳ ಮೌನವನ್ನು ಅರ್ಥೈಸಿಕೊಂಡಂತೆ ಹೇಳಿದ.
ಅವನು ಹೇಳುವುದು ಸರಿ. ಇಲ್ಲಿ ಬೇರಾವ ವ್ಯಕ್ತಿಯೂ ಕಾಣುತ್ತಿಲ್ಲ. ಸಹಾಯ ಮಾಡುವುದರಲ್ಲಿ ತಪ್ಪೇನಿದೆ. ಯುವಕ ಸಭ್ಯನಂತೆ ಕಾಣುತ್ತಿದ್ದಾನೆ.
"ಸರಿ" ಮರಳ ದಂಡೆಯ ಮೇಲೆ ಹೆಜ್ಜೆ ಮೂಡಿಸುತ್ತಾ ಅವನನ್ನು ಅನುಸರಿಸಿದಳು.
ಲಂಗರು ಹಾಕಿದ ದೋಣಿಯ ಪತಾಕೆ ಗಾಳಿಗೆ ತಟಪಟನೆ ಹಾರಾಡುತ್ತಿತ್ತು. ಅದೊಂದು ಯಾಂತ್ರಿಕ ದೋಣಿ. ಅವಳನ್ನು ಕೆಳಗೆ ನಿಲ್ಲುವಂತೆ ಹೇಳಿ, ಜಿಗಿದು ಯಾಂತ್ರಿಕ ದೋಣಿಯನ್ನೇರಿದ. ಉದ್ದನೆಯ ಎರಡು ಸ್ಲೈಡಿಂಗ್ ಗಳನ್ನು ಒಂದರ ಪಕ್ಕದಲ್ಲೊಂದು ಜೋಡಿಸಿ ದೋಣಿಗೆ ಓರೆಯಾಗಿ ನಿಲ್ಲಿಸಿದ. ಆರಡಿ ಉದ್ದನೆಯ ಮರದ ಪೆಟ್ಟಿಗೆಯನ್ನು ಸ್ಲೈಡಿಂಗ್ ನ ಪಕ್ಕಕ್ಕಿಟ್ಟು ಮೆಲ್ಲನೆ ಜಾರಿಸಿದ.
"ನಿಧಾನವಾಗಿ ಹಿಡಿಯಿರಿ." ಅವಳನ್ನು ಎಚ್ಚರಿಸಿದ. ಮರದ ಪೆಟ್ಟಿಗೆಯ ಇನ್ನೊಂದು ಬದಿಯ ಹಿಡಿಯನ್ನು ಹಿಡಿದು ಮರಳ ದಂಡೆಯ ಮೇಲೆ ಜಾರಿಸಿದಳು. ಆತ ದೋಣಿಯಿಂದ ಇಳಿದು ಪೆಟ್ಟಿಗೆಯನ್ನು ಎಳೆದು, ಸ್ಲೈಡಿಂಗ್ ಗಳನ್ನು ದೋಣಿಯೊಳಗೆ ತೂರಿಸಿದ.
"ಇದು ಪರ್ಸಿಯನ್ ದೋಣಿ ನನ್ನ ಗೆಳೆಯನದ್ದು. ಎರಡು ದಿವಸ ಇಲ್ಲೆ ಲಂಗರು ಹಾಕಿರುತ್ತೆ" ಅನಗತ್ಯ ವಿಚಾರವನ್ನು ಹೇಳುತ್ತಿದ್ದಾನೆ ಯುವಕ.
"ದಯವಿಟ್ಟು ನಿಲ್ಲಿ. ಇಲ್ಲೆ ದಂಡೆಯ ಅಂಚಿಗೆ ನನ್ನ ಕಾರು ನಿಂತಿದೆ. ನೀವು ಏನು ತಿಳ್ಕೊಳಾಂದ್ರೆ ಇದನ್ನು ಅಲ್ಲಿಯವರೆಗೆ ತಲುಪಿಸಲು....." ಹೆಜ್ಜೆ ಮುಂದಿಟ್ಟವಳನ್ನು ಕೇಳಿಕೊಂಡ.
"ಸರಿ"
ಉದ್ದನೆಯ ಪೆಟ್ಟಿಗೆಯ ಹಿಡಿಯನ್ನು ಹಿಡಿದಳು. ಇನ್ನೊಂದು ತುದಿಯಿಂದ ಆತ ಹಿಡಿದ. ಹೆಣ ಭಾರದ ಮರದ ಪೆಟ್ಟಿಗೆ! ಕೈಯ ಬೆರಳುಗಳು ಕಿತ್ತು ಬರುವಂತೆ ನೋಯುತ್ತಿದ್ದವು. ಕಾರಿನ ಬಳಿ ಬರುವಾಗ ಸುಸ್ತಾದಳು ಗಾಜು ಕಣ್ಣಿನ ಚೆಲುವೆ.
ಹಳೇ ಕಾಲದ ಕಾರಿನ ಡಿಕ್ಕಿಯನ್ನು ತೆರೆದು ಪೆಟ್ಟಿಗೆಯನ್ನು ಅದರಲ್ಲಿಟ್ಟ ಯುವಕ. ಕಾರಿನ ಒಳ ತೂರಿ, ದೀಪ ಬೆಳಗಿಸಿದ. ನೋಯುತ್ತಿದ್ದ ಕೈ ಬೆರಳುಗಳನ್ನು ಒರೆಸಿಕೊಂಡಳು ನಿನಾದ.
"ತುಂಬಾ ಉಪಕಾರವಾಯ್ತು. ನನ್ನಿಂದ ಸಹಾಯ ಬೇಕಿದ್ದಲ್ಲಿ ತಿಳಿಸಿ" ಕಡು ನೀಲಿ ಬಣ್ಣದ ಜೀನ್ಸು, ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ ಮುಗುಳ್ನಗುತ್ತಾ ಹೇಳಿದ. ಪರ್ಸಿನಿಂದ ವಿಸಿಟಿಂಗ್ ಕಾರ್ಡ ನೀಡಿದ. ಕೈ ಮುಗಿಯುವ ಸೌಜನ್ಯ ತೋರಿಸಿದಳು ನಿನಾದ. ಆತ ಯಂತ್ರಕ್ಕೆ ಚಾಲನೆ ನೀಡಿದ. ಕಾರು ಕಪ್ಪು ಹೊಗೆಯುಗುಳುತ್ತಾ ಮುಂದಕ್ಕೋಡಿತು. ನಿಧಾನವಾಗಿ ಹೆಜ್ಜೆಯಿಡುತ್ತಾ ರಸ್ತೆಯಂಚಿನಲ್ಲೆ ಸಾಗಿದಳು.
ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದವಳು ಏಕಾಏಕಿ ವರ್ಗವಾಗಿ ಹಳ್ಳಿಗೆ ಬಂದಿದ್ದಳು. ಅಪರಿಚಿತ ಊರು! ನಿಲ್ಲಲು ಬಾಡಿಗೆ ಮನೆ ಕೂಡ ದೊರೆತಿರಲಿಲ್ಲ. ಊರಿನ ಶ್ರೀಮಂತ ಚಿನ್ನದ ವ್ಯಾಪಾರಿ ಪನ್ನಲಾಲ್ ಮಡದಿ ಚಾಂದಿನಿ ಬಾಯಿಯ ಮಾತಿಗೆ ಒಂದು ಸಣ್ಣಗಿನ ಕೋಣೆಯನ್ನು ನೀಡಿದ್ದ. ಸ್ಟೌವ್, ಪಾತ್ರೆಗಳು, ಪುಸ್ತಕಗಳನ್ನು ಜೋಡಿಸಿದ ನಂತರ ಉಳಿದಿದ್ದು ಚಾಪೆ ಹಾಸುವಷ್ಟು ಜಾಗ ಮಾತ್ರ! ಮನಸ್ಸಿಗೆ ಬೇಸರವಾದಾಗ ಚಾಂದಿನಿ ಬಾಯಿಯ ಜೊತೆ ತಾಸು ಗಟ್ಟಲೆ ಮಾತನಾಡಿ ಸಮಯ ಕಳೆಯುತ್ತಿದ್ದಳು. ಅದರೆ ಪನ್ನಲಾಲ್ ಸಂಸಾರ ಸಮೇತ ಗುಜರಾತಿಗೆ ಹೋಗಿದ್ದ. ಮನಸ್ಸಿನ ಬೇಸರ ಕಳೆಯಲು ಸಮುದ್ರ ದಂಡೆಗೆ ಬಂದಳೆಂದರೆ ಕತ್ತಲಾವರಿಸಿದ ನಂತರವೇ ಹಿಂತಿರುಗುತ್ತಿದ್ದಳು.
ಚಂದಿರನ ಮಂದ ಬೆಳಕು ರಸ್ತೆಯಂಚಿನ ಮರಗಳ ಮರೆಯಿಂದ ತೂರಿ ರಸ್ತೆಯ ಮೇಲೆ ನೆರಳು ಬೆಳಕನ್ನು ಚಿತ್ರಿಸಿತ್ತು. ಕೈಯಲ್ಲಿದ್ದ ಪೇಪರನ್ನು ಸುತ್ತಿ ಹೆಬ್ಬೆರಳಿನಿಂದ ಟಕ್ಕನೆ ಮೇಲೆ ಹಾರಿಸಿದಳು. ಅದು ಹಾರಿ ಎಲ್ಲೋ ಬಿದ್ದಿತು. ತಟ್ಟನೆ ನೆನಪಾಯಿತು. ಅದು ಮರಳ ದಂಡೆಯಲ್ಲಿ ಯುವಕ ನೀಡಿದ್ದ ವಿಸಿಟಿಂಗ್ ಕಾರ್ಡ್. ಹೋಗಲಿ ಅದರಿಂದ ತನಗೇನು ಲಾಭ? ಯಾರೋ ಅಪರಿಚಿತ ಸಹಾಯ ಯಾಚಿಸಿದ. ಸಹಾಯ ಮಾಡಿದ್ದಾಯಿತು. ನಡಿಗೆ ವೇಗ ಹೆಚ್ಚಿಸಿ ಕೋಣೆಗೆ ಬಂದಾಗ ಏಕಾಂತ ಅವಳನ್ನು ಕಾಡಿತು. ರೇಡಿಯೋಗೆ ಚಾಲನೆ ಕೊಟ್ಟು ಕಾರ್ಯಕ್ರಮಗಳನ್ನು ಅಲಿಸುತ್ತಿದ್ದಳು. ಹಳ್ಳಿಗೆ ಕತ್ತಲಾಗುವುದು ಬೇಗ! ರಾತ್ರಿಯ ಊಟ ಮುಗಿಸಿ, ಚಾಪೆ ಹಾಸಿಕೊಂಡಳು. ಕ್ಯಾಂಡಲಿನ ಬೆಳಕಿನಲ್ಲಿ ಯಾವುದೋ ಪುಸ್ತಕವನ್ನು ಬಿಡಿಸಿ ಬೋರಲಾಗಿ ಮಲಗಿ ಓದುತ್ತಿದ್ದಳು. ನಿದ್ದೆ ದೂರವಾಗಿತ್ತು. ಪನ್ನಾಲಾಲ್ ನ ಸಂಸಾರ ಬರಲು ಇನ್ನು ಎರಡು ವಾರವಿದೆ. ಅಲ್ಲಿಯವರೆಗೆ ತಾನು ಒಬ್ಬಂಟಿ! ಮನದಲ್ಲಿ ಯಾವುದೋ ಆತಂಕ ತುಂಬಿತ್ತು.
ಕಣ್ಣು ಸೆಳೆಯುತ್ತಿದೆಯೆಂದಾಗ ಬಾಗಿಲಿನ ಚಿಲಕ ಭದ್ರ ಪಡಿಸಿ ಕ್ಯಾಂಡಲ್ ಆರಿಸಿದಳು. ಸೊಳ್ಳೆಗಳ ಕಾಟ ತಪ್ಪಿದಲ್ಲ. ಹೊರಗೆ ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಚಂದಿರನ ಬೆಳಕನ್ನು ನೋಡಿ ಬೊಗಳುತ್ತಿರಬಹುದು.
ಅಲ್ಲ! ಯಾರನ್ನೋ ಅಟ್ಟಿಸಿಕೊಂಡು ಹೋಗುವಂತೆ ಬೊಗಳುತ್ತಿವೆ! ಅಂದರೆ ಯಾರೋ ಕಳ್ಳ ಬಂದಿರಬಹುದು! ಏನೇನೋ ಆಲೋಚನೆಗಳು ಅವಳ ನಿದ್ದೆಯನ್ನು ದೂರಗೊಳಿಸಿದವು. ಎದೆ ಬಡಿತ ತೀವ್ರವಾಯಿತು. ಯಾರೋ ಅಂಗಳದಲ್ಲಿ ಓಡಾಡುವ ಸದ್ದು! ದಿಗ್ಗನೆ ಎದ್ದು ಕುಳಿತಳು. ಟಕ ಟಕ ಬೂಟುಗಾಲಿನ ಸದ್ದು! ಪನ್ನಾಲಾಲ್ ಆಗಿರಲಾರದು! ಆತನ ಸಂಸಾರ ಬರಲು ಇನ್ನೂ ಎರಡು ವಾರಗಳಿವೆ. ಅವನ ಕೆಲಸಾದಾಳುಗಳಿರಬೇಕು! ಚಿನ್ನದ ವ್ಯಾಪಾರಿಯ ಮನೆಗೆ ಕನ್ನ ಹಾಕುವಷ್ಟು ಕೀಳು ದರ್ಜೆಯ ವ್ಯಕ್ತಿಗಳಲ್ಲ. ಚಿತ್ತ ಸಮಾಧಾನಕ್ಕೆ ಎದ್ದು ಬಂದು ಕಿಟಿಕಿಯ ಬಳಿ ಮುಖ ತೂರಿಸಿದಳು. ಆಸ್ಪಷ್ಟ ಅಕೃತಿ! ಬೆಳದಿಂಗಳಿದ್ದರೂ ಸರಿಯಾಗಿ ಕಾಣಲಾರದು. ಗಿಡಗಳ ಮರೆಯಿಂದ ಅವಳ ಕೋಣೆಯ ಕಡೆ ನಡೆದು ಬರುತ್ತಿದ್ದ. ಕಳ್ಳತನದ ಹೆಜ್ಜೆಯಿಂದ ಬರುತ್ತಿಲ್ಲ! ಸರ ಸರನೆ ನಡೆದುಕೊಂಡು ಬರುತ್ತಿದ್ದಾನೆ! ಅವಳಿಗೆ ಸ್ಪಷ್ಟವಾಗಿ ಗೋಚರಿಸಿದ! ಪರದೆ ಬಿಟ್ಟು ಬಾಗಿಲಿನ ಬಳಿ ಬಂದು ಬೆದರಿಕೆಯಿಂದ ನಿಂತಳು.
ಸಂಜೆ ಮರಳ ದಂಡೆಯ ಮೇಲೆ ಕಾಣಿಸಿಕೊಂಡ ವ್ಯಕ್ತಿ! ಕಡು ನೀಲಿ ಪ್ಯಾಂಟ್ ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ! ಇಲ್ಲಿಗೆ ತನ್ನನ್ನು ಹುಡುಕಿಕೊಂಡು ಬಂದಿರಬಹುದು! ಇಲ್ಲ ಅಗಿರಲಾರದು. ತಾನು ಇಲ್ಲಿರುವೆನೆಂದು ಅವನಿಗೆ ತಿಳಿದಿಲ್ಲ. ಹೆಣ ಭಾರದ ಮರದ ಪೆಟ್ಟಿಗೆಯನ್ನು ದೋಣಿಯಿಂದ ಇಳಿಸಿ ಕಾರಿನಲ್ಲಿ ಇಡಲು ಸಹಕರಿಸಿದ್ದಳು. ಆತ ಕಾರನ್ನು ಚಲಾಯಿಸಿಕೊಂಡು ಹೋಗಿದ್ದ. ಮತ್ತೆ ಇಲ್ಲಿ ಹೇಗೆ ಕಾಣಿಸಿಕೊಂಡಿದ್ದಾನೆ?
ಬೂಟುಗಾಲಿನ ಸದ್ದು ನಿಂತಿತು. ಸಮಾಧಾನದ ಉಸಿರೆಳೆದುಕೊಂಡಳು. ಅಂದರೆ ಆ ವ್ಯಕ್ತಿ ಎತ್ತಲೋ ಸರಿದು ಹೋಗಿರಬೇಕು. ಬಾಗಿಲಿನ ಬಳಿಯಿಂದ ಇತ್ತ ಸರಿದವಳಿಗೆ ಕೇಳಿಸಿದ ಸದ್ದಿಗೆ ಬೆಚ್ಚಿ ಬಿದ್ದಳು!
ಬಾಗಿಲಿನ ಮೇಲೆ ನಯವಾಗಿ ಬೆರಳುಗಳಿಂದ ಕುಟ್ಟುವ ಸದ್ದು!
ಆ ವ್ಯಕ್ತಿ ತಾನೆಣಿಸಿದಂತೆ ಸರಿದು ಹೋದುದ್ದಲ್ಲ! ಬಾಗಿಲಿನ ಬಳಿ ನಿಂತು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ! ನಿಶಬ್ದವಾಗಿ ನಿಂತೇ ಇದ್ದಳು.
ಮತ್ತೊಮ್ಮೆ ಬಾಗಿಲಿನ ಮೇಲೆ ಬಡಿದ. ಬಾಗಿಲು ತೆರೆಯದಿದ್ದರೆ ಖಂಡಿತವಾಗಿಯು ಬಾಗಿಲು ಮುರಿದು ಒಳಗೆ ಬರುವ ಯೋಚನೆ ಇರಬಹುದು. ಬಾಗಿಲ ಬಳಿ ಧೈರ್ಯ ಮಾಡಿ ಬಂದಳು. ಹೇಗೂ ಆತ ಪರಿಚಿತ ವ್ಯಕ್ತಿ. ಸಂಜೆಯ ಹೊತ್ತು ಅವನಿಗೆ ಸಹಾಯ ಮಾಡಿದ್ದಾಗಿದೆ. ತನಗೇನು ಮಾಡಲಾರ. ಭಂಡ ಧೈರ್ಯದಿಂದ ಬಾಗಿಲಿನ ಚಿಲಕ ತೆಗೆಯಬೇಕೆನ್ನುವಷ್ಟರಲ್ಲಿ ಮತ್ತೆ ಜೋರಾಗಿ ಬಾಗಿಲು ಕಿತ್ತು ಬರುವಂತೆ ಬಡಿದ!
ತಟಕ್ಕನೆ ಚಿಲಕ ಜಾರಿಸಿದಳು. ಕ್ಯಾಂಡಲ್ ಉರಿಸಿ ದೀಪ ಬೆಳಗಿಸಿದಳು. ಅವಳನ್ನು ಕಂಡು ಸಣ್ಣಗೆ ಉದ್ಗಾರ ತೆಗೆದ.
"ಓಹೋ ನೀವು, ಮತ್ತೆ ನಿಮ್ಮನ್ನು ಕಾಣ್ತೀನೀಂತ ಅಂದುಕೊಂಡಿರಲಿಲ್ಲ" ಅವಳು ಬಾಗಿಲಿಗೆ ಅಡ್ಡವಾಗಿ ನಿಂತಿದ್ದಾಗ ಸರಿದು ಒಳ ಬಂದ. ಅವಳಿಗೆ ಧೈರ್ಯ ಬಂದಿತ್ತಾದರು ತಾನು ಒಬ್ಬಂಟಿಯಾಗಿರುವಾಗ ಬಂದನೆಂದರೆ! ಏನಾದರೂ ಸಂಚು ಹೂಡಿರಬಹುದು!
"ಕ್ಷಮಿಸಿ ನಿಮ್ಮ ನಿದ್ದೇನ ಹಾಳು ಮಾಡ್ದೆ. ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗಬೇಕಿದೆ" ಮತ್ತೆ ಸಹಾಯ ಹಸ್ತ ಯಾಚಿಸುತ್ತಿದ್ದಾನೆ. ಈಗಾಗಲೆ ಎರಡು ಬಾರಿ ಸಹಾಯ ಮಾಡಿದ್ದಾಯಿತು.
"ಏನದು?" ಕಣ್ಣು ಕಿರಿದುಗೊಳಿಸಿ ಕೇಳಿದಳು ಗಾಜು ಕಣ್ಣಿನ ಚೆಲುವೆ.
"ನನ್ನ ಹೆಸರು ಅನುಪ್ರೀತ್. ಗುಜರಾತಿನಿಂದ ಹುಚ್ಚು ಸಾಹಸ ಮಾಡ್ಕೊಂಡು ಇಲ್ಲಿಯವರೆಗೆ ಬಂದಿದ್ದೀನಿ. ಆದ್ರೆ ನನಗೆ ಬೇಕಾಗಿರೋ ವ್ಯಕ್ತಿ ಊರಿನಲಿಲ್ಲ. ಆತ ಎಲ್ಲೋ ದೂರದೂರಿಗೆ ಹೋಗಿದ್ದಾನಂತೆ. ಮರದ ಪೆಟ್ಟಿಗೆಯನ್ನು ಮರಳಿಸಿ ಹೋಗಲು ಬಂದಿದ್ದೀನಿ. ದಯವಿಟ್ಟು ಇಲ್ಲ ಅನ್ಬೇಡಿ. ಒಂದೆರಡು ದಿವಸದ ಮಟ್ಟಿಗೆ ಆ ಪೆಟ್ಟಿಗೆ ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಉಪಕಾರ ಮಾಡಿದ ಹಾಗೆ"
"ಇಲ್ಲ ಸಾಧ್ಯವಿಲ್ಲ ಅನುಪ್ರೀತ್. ಇಲ್ಲಿ ಸರಿಯಾಗಿ ಕೈ ಕಾಲು ಬಿಟ್ಟು ಮಲಗುವಷ್ಟು ಜಾಗವಿಲ್ಲ. ಪೆಟ್ಟಿಗೆ ಇಟ್ಟರೆ ಕಷ್ಟ. ಅದೂ ಅಲ್ದೆ ಇದು ನನ್ನ ಮನೆಯಲ್ಲ. ನಾನು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೀನಿ. ನಾನು ಬಾಡಿಗೆಗೆ ಪಡೆದಿರೋ ಅಗ್ಗದ ಕೋಣೆ ಇದು. ನಿಮ್ಮ ಪೆಟ್ಟಿಗೆಗೆ ಭದ್ರತೆ ಕೂಡ ಇರಲಾರದು" ನಯವಾಗಿ ನಿರಾಕರಿಸಿದಳು ನಿನಾದ.
"ಭದ್ರತೆಯ ಮಾತು ಬೇಕಾಗಿಲ್ಲ. ನೀವು ಹೊರಗೆ ಹೋಗುವಾಗ ಬಾಗಿಲು ಮುಚ್ಚಿ ಹೋಗುವಿರಲ್ಲವೆ? ಎರಡು ದಿನ ನಿಮ್ಮಲ್ಲಿರಲಿ. ನಾನು ಮರಳುವ ಮೊದಲು ಇಲ್ಲಿಂದ ಅದನ್ನು ಸಾಗಿಸ್ತೀನಿ" ಮತ್ತೆ ಗೋಗರೆದ.
ಯುವಕ ಸಭ್ಯನಂತೆ ಕಾಣುತ್ತಾನೆ! ಹೇಗೂ ಪನ್ನಾಲಾಲ್ ಕೂಡ ಊರಲಿಲ್ಲ. ತನ್ನ ಕೋಣೆಗೆ ಬರುವವರು ಯಾರು ಇಲ್ಲ. ಇರಲಿ ಚಾಪೆ ನೆಲದಲ್ಲಿ ಹಾಸಿ ಮಲಗುವ ಬದಲು ಪೆಟ್ಟಿಗೆ ಮೇಲೆ ಹಾಸಿ ಮಲಗಬಹುದು.
"ಸರಿ, ಅದರೆ ಎರಡು ದಿನದೊಳಗೆ ಮರಳಿ ತೆಗೆದುಕೊಂಡು ಹೋಗಬೇಕು"
ಅವಳ ಒಪ್ಪಿಗೆ ತಿಳಿದು ದಂತ ಪಂಕ್ತಿ ಕಾಣುವಂತೆ ತುಟಿಯಗಲಿಸಿದ. ಅವನ ಮುಖವನ್ನೊಮ್ಮೆ ದಿಟ್ಟಿಸಿದಳು. ತುಂಬಾ ಸುಂದರ ಯುವಕನೆನಿಸಿತು.
"ಬನ್ನಿ ಪೆಟ್ಟಿಗೆ ಇಲ್ಲೆ ಗಿಡಗಳ ಮರೆಯಲ್ಲಿದೆ. ನೀವು ಕೈ ಚಾಚಿದರೆ ಸುಲಭದಲ್ಲಿ ತರಬಹುದು"
ಅವನನ್ನು ಹಿಂಬಾಲಿಸಿ ಗಿಡಗಳ ಬಳಿ ಬಂದಳು. ಪೆಟ್ಟಿಗೆಯನ್ನು ಅವಳ ಕೋಣೆಗೆ ತಂದರು.
"ಉಪಕಾರವಾಯ್ತು ಮಿಸ್..." ಹೆಸರು ತಿಳಿಯದೆ ಮಾತು ನಿಲ್ಲಿಸಿದ.
"ನಿನಾದ"
"ನಿನಾದ... ನಿಮ್ಮ ಉಪಕಾರಾನ ಯಾವತ್ತು ಮರೆಯಲಾರೆ" ಮತ್ತೊಮ್ಮೆ ವಂದಿಸಿ ಬಿರಬಿರನೆ ನಡೆದು ಕತ್ತಲಲ್ಲಿ ಮಾಯವಾದ.
ಬಾಗಿಲು ಮುಚ್ಚಿ ಚಿಲಕ ಸಿಕ್ಕಿಸಿದಳು. ಮರದ ಪೆಟ್ಟಿಗೆಯ ಮೇಲೆ ಚಾಪೆ ಹಾಸಿ ಮಲಗಿದಳು. ನಿದ್ದೆ ಯಾವಾಗ ಅವರಿಸಿತೋ ತಿಳಿಯಲಿಲ್ಲ. ಕೈ ಸೆಳೆಯುತ್ತಿತ್ತು. ನೋವಿನಿಂದ ಹೊರಳಿ ಮಲಗಿದವಳಿಗೆ ತಟ್ಟನೆ ಎಚ್ಚರವಾಯಿತು. ಕಣ್ಣು ಬಿಟ್ಟಾಗ ಸೂರ್ಯನ ಕಿರಣ ಕಿಟಿಕಿಯ ಪರದೆಯನ್ನು ತೂರಿ ಒಳ ಬಂದಿತ್ತು. ಮುಂಜಾನೆಯ ಜಡ ಆವರಿಸಿದ್ದರೂ ಕೆಲಸ ಅನಿವಾರ್ಯ. ಮುಖ ತೊಳೆದು ಬಂದವಳಿಗೆ ಯಾವುದೋ ಕೆಟ್ಟ ವಾಸನೆ ಬಂದಂತಾಗಿ ಹೊಟ್ಟೆ ತೊಳೆಸಿದಂತಾಯಿತು. ಮೂಗಿಗೆ ಕೈ ಹಿಡಿದು ಸುತ್ತಲೂ ದೃಷ್ಟಿಸಿದಳು. ಯಾವುದೋ ಅಸಹ್ಯ ವಾಸನೆ! ಇಲಿಯೋ ಹೆಗ್ಗಣವೋ ಸತ್ತಿರಬಹುದೆಂದು ಪುಸ್ತಕದ ರಾಶಿಯನ್ನು ತೆಗೆದು ನೋಡಿದಳು.
ಇಲ್ಲ!
ತಟ್ಟನೆ ನೆನಪಾಗಿದ್ದು ಆರು ಅಡಿ ಉದ್ದದ ಮರದ ಪೆಟ್ಟಿಗೆ! ಅದರೊಳಗೆ ಕೊಳೆತು ನಾರುವ ವಸ್ತು!!?? ಕುತೂಹಲದಿಂದ ಅದರ ಬಳಿ ಬಂದವಳಿಗೆ ಬವಳಿ ಬಂದಂತಾಯಿತು. ಮೂಗಿಗೆ ಸೆರಗು ಹಿಡಿದು ನಿಂತಳು.
ಪೆಟ್ಟಿಗೆಗೆ ಚಿಲಕ ಮಾತ್ರ ಸಿಕ್ಕಿಸಿದೆ! ಬೀಗ ಜಡಿದಿರಲಿಲ್ಲ!
‘ಯಾವುದೋ ವ್ಯಕ್ತಿಗೆ ತಲುಪಿಸುವುದಿದೆ, ಆ ವ್ಯಕ್ತಿ ಊರಲ್ಲಿಲ್ಲ’ ಅನುಪ್ರೀತ್ ಹೇಳಿದ್ದ. ಯಾವುದೋ ಸಮಸ್ಯೆಯಲ್ಲಿ ತನ್ನನ್ನು ಸಿಲುಕಿಸಿದ್ದಾನೆ ಚೆಲುವ. ಚಿಲಕ ಸರಿಸಿ ಪ್ರಯಾಸದಿಂದ ಬಾಗಿಲು ತೆರೆದಳು. ಕಿಟಾರನೆ ಕಿರುಚಿ ಬಿಕ್ಕಳಿಸಿದಳು.
ಕಣ್ಣುಗಳನ್ನು ತೆರೆದು, ಬಾಯಿ ಅಗಲಿಸಿ ವಿಕಾರ ರೂಪದಲ್ಲಿ ಮಲಗಿದ್ದ ಹೆಂಗಸಿನ ದೇಹ!
ಆ ಮುಖವನ್ನು ಎಲ್ಲೋ ನೋಡಿದ ನೆನಪು!
ತನ್ನೆಣಿಕೆ ಸುಳ್ಳಲ್ಲ! ಚಾಂದಿನಿ ಬಾಯಿ!
ಪನ್ನಲಾಲ್ ನ ಮಡದಿ! ತನಗೆ ಬಾಡಿಗೆ ಮನೆಯನ್ನು ಕೊಡುವ ಸೌಜನ್ಯ ತೋರಿಸಿದೋಳು.
ಪನ್ನಲಾಲ್ ಸಂಸಾರ ಸಮೇತ ರೈಲಿನಲ್ಲಿ ಗುಜರಾತಿಗೆ ತೆರೆಳಿದ್ದಾನೆ. ಅನುಪ್ರೀತ್ ರೈಲಿನಲ್ಲಿ ಒಡವೆ ಹಣಕ್ಕಾಗಿ ಅವಳನ್ನು ಕೊಂದು ಯಾಂತ್ರಿಕ ದೋಣಿಯಲ್ಲಿ ಹೆಣವನ್ನು ಸಾಗಿಸಿದ್ದಾನೆ! ತಾನೀಗ ಸಮಸ್ಯೆಯಲ್ಲಿ ಸಿಕ್ಕಿಬಿದ್ದದಂತಾಗಿದೆ. ಏನೋ ನೆನಪಾಗಿ ರೂಮಿಗೆ ಬೀಗ ಜಡಿದು ಹಾರು ನಡಿಗೆಯಲ್ಲಿ ಸಮುದ್ರದ ದಂಡೆಯ ಬಳಿ ಬಂದಳು. ಅನುಪ್ರೀತ್ ಎಲ್ಲೂ ಹೋಗಿರಲಾರ. ಲಂಗರು ಹಾಕಿ ನಿಂತಿರೋ ದೋಣಿಯಲ್ಲಿ ತಂಗಿರಬಹುದು. ಅಲ್ಲಿ ಬಂದವಳಿಗೆ ನಿರಾಶೆ ಕಾದಿತ್ತು.
ಅಂದರೆ ಅನುಪ್ರೀತ್ ತನ್ನನ್ನು ಇಕ್ಕಟಿನಲ್ಲಿ ಸಿಲುಕಿಸಿ ಪರಾರಿಯಾಗಿದ್ದಾನೆ! ದು:ಖ ಉಮ್ಮಳಿಸಿ ಬಂತು. ಇನ್ನು ಪೋಲಿಸ್ನೋರ ವಿಚಾರಣೆ... ಕೋರ್ಟು ಕಛೇರಿ ಅಲೆದಾಟ... ಸಣ್ಣಗೆ ನಡುಕ ಅರಂಭವಾಯಿತು.
ಒಂದು ವಾರ ಕಳೆದಿರಬಹುದು......
ಪೋಲಿಸ್ ಠಾಣೆಗೆ ಅಲೆದು ಸುಸ್ತಾಗಿದ್ದಳು. ಕೇಳುವ ನೂರಾರು ಪ್ರಶ್ನೆಗಳಿಗೆ ಉತ್ತರಿಸಿ ರೋಸಿ ಹೋಗಿತ್ತು. ಇಂದು ಕೊಲೆಗಾರ ಯಾರೆಂದು ನಿರ್ಧರಿಸಲಾಗುತ್ತದೆ!!? ನಡೆದ ಘಟನೆಯನ್ನೆಲ್ಲಾ ಮುಚ್ಚು ಮರೆಯಿಲ್ಲದೆ ಎಸ್. ಐ. ಭಾರಾಧ್ವಜ್ ಗೆ ತಿಳಿಸಿದ್ದಾಳೆ. ಬಸ್ಸು ಇಳಿದು ಭಾರವಾದ ಹೆಜ್ಜೆಯಿಡುತ್ತಾ ಠಾಣೆಯ ಮೆಟ್ಟಲೇರಿ ಬಂದಳು. ನಗು ಮುಖದಲ್ಲೆ ಎಸ್. ಐ. ಸ್ವಾಗತಿಸಿದರು. ಅವಳಿಗೆ ಆತಂಕವಾಗಿತ್ತು. ಅವರು ತೋರಿಸಿದ ಬೆಂಚಲ್ಲಿ ಕುಳಿತು ಅದರ ಅಂಚನ್ನು ಗಟ್ಟಿಯಾಗಿ ಹಿಡಿದುಕೊಂಡು ಹೃದಯ ಬಡಿತದ ತೀವ್ರತೆಯನ್ನು ನಿಯಂತ್ರಿಸಲೆತ್ನಿಸುತ್ತಿದ್ದಳು.
"ಮಿಸ್ ನಿನಾದ" ಬಾರಧ್ವಜ್ ನ ಕರೆಗೆ ಬೆಚ್ಚಿ ಬಿದ್ದಳು.
"ಕೊಲೆಗಾರ ಸಿಕ್ಕಿ ಬಿದ್ದಿದ್ದಾನೆ"
ಕೊಲೆಗಾರ ಮತ್ತಾರು ಅಲ್ಲ, ಹುಚ್ಚು ಸಾಹಸ ಮಾಡಿ ಗುಜರಾತಿನಿಂದ ಬಂದ ಸುಂದರ ಯುವಕ ಅನುಪ್ರೀತ್! ಚಾಂದಿನಿ ಬಾಯಿಯನ್ನು ಕೊಲೆ ಮಾಡಿ ಒಡವೆಗಳನ್ನು ಅಪಹರಿಸಿದ್ದು ಹುಚ್ಚು ಸಾಹಸ!
ಬಾರಧ್ವಜ್ ಮುಂದುವರಿಸುತಿದ್ದರು, "...ಕೊಲೆಗಾರನಿಗೂ ಚಾಂದಿನಿ ಬಾಯಿಗೂ ಅಗಿಂದಾಗೆ ಜಗಳವಾಗ್ತಾ ಇತ್ತು"
ಅನುಪ್ರೀತ್ ಚಾಂದಿನಿ ಬಾಯಿಗೆ ಪರಿಚಿತ!
"...ಚಾಂದಿನಿ ಬಾಯಿ ಅವನಿಗೆ ಚಿನ್ನದ ವ್ಯಾಪರ ಮಾಡಲು ಪ್ರಚೋದಿಸಿದ್ಲು. ಅದಕ್ಕಾಗೆ ತನ್ನ ಅಣ್ಣನಿಂದ ಸಹಾಯ ಪಡೆದ್ಲು. ಅದ್ರೆ ಕೊಲೆಗಾರ ಅವಳಿಗೆ ದ್ರೋಹ ಮಾಡ್ದ. ಲಕ್ಷಗಟ್ಟಲೆ ಬಾಕಿ ಇರೋ ಹಣಾನ ಕೊಡಲು ನಿರಾಕರಿಸಿದ. ಚಾಂದಿನಿ ಬಾಯಿ ಮೋಸ ಮಾಡಿದಕ್ಕಾಗಿ ಅವನನ್ನು ಕಾನೂನಿನ ಕೈಗೆ ಒಪ್ಪಿಸುವುದಾಗಿ ಬೆದರಿಸಿದ್ಲು. ಕೊಲೆಗಾರ ಶಾಂತನಾದ. ಗುಜರಾತಿಗೆ ಮರಳಿದ ನಂತರ ಬಾಕಿ ಹಣವನ್ನು ಕೊಡುವುದಾಗಿ ಭರವಸೆ ನೀಡಿದ. ಇಬ್ಬರೂ ರೈಲಿನಲ್ಲಿ ಗುಜರಾತಿಗೆ ಹೊರಟರು. ಆತ ಮೊದಲೆ ನಿರ್ಧರಿಸಿದಂತೆ ಅವಳನ್ನು ರೈಲಿನಲ್ಲಿ ಮುಗಿಸ್ದ!"
ಪನ್ನಾಲಾಲ್ ಮತ್ತು ಚಾಂದಿನಿ ಬಾಯಿಯನ್ನು ಕೊಲೆಗಾರ ಅನುಸರಿಸಿ ಹೋಗಿದ್ದಾನೆ. ಪನ್ನಾಲಾಲ್ ಇಲ್ಲದ ಸಮಯ ನೋಡಿ ಚಾಂದಿನಿ ಬಾಯಿಯನ್ನು ಮುಗಿಸಿದ್ದಾನೆ!
"...ಕೊಲೆಗಾರ ಅವಳನ್ನು ಹೊಡೆದು ಸಾಯಿಸಿದ್ದಲ್ಲ. ಅವಳಿಗೆ ಕಾಫಿಯಲ್ಲಿ ವಿಷ ಬೆರೆಸಿ ನೀಡ್ದ. ಅವಳು ಹೊತ್ತಲ್ಲದ ಹೊತ್ತಲ್ಲಿ ಕಾಫಿ ಕುಡಿಯೋದಿಕ್ಕೆ ನಿರಾಕರಿಸಿದ್ಲು. ಆತ ಅವಳನ್ನು ಜಬರ್ದಸ್ತಿಯಿಂದ ಕುಡಿಯುವಂತೆ ಪ್ರಯತ್ನಿಸ್ದ. ಬೋಗಿಯಲ್ಲಿ ಆಗ ಅವರಿಬ್ಬರೆ ಇದ್ದಿದ್ದು! ಬೇರೆ ದಾರಿ ಕಾಣದೆ ಅವಳು ಕಿರುಚಿಕೊಂಡು ಓಡಿ ಬರೋದಕ್ಕೆ ಪ್ರಯತ್ನಿಸಿದ್ಲು. ಅತ ಕಾಲು ಅಡ್ಡ ಹಿಡಿದು ಅವಳನ್ನು ಬೀಳಿಸಿದ. ಅವಳ ತಲೆ ಬಲವಾಗಿ ಬೋಗಿಯ ಕಿಟಕಿಗೆ ಬಡಿಯಿತು. ಉಸಿರು ನಿಂತು ಹೋಯಿತು. ಗುಜರಾತಿನಲ್ಲಿ ರೈಲು ನಿಲ್ಲುತ್ತಲೆ ಕೆಳಗಿಳಿದ. ಅವಳ ಹೆಣವನ್ನು ಸಾಗಿಸೋದಕ್ಕೆ ಯಾರಾದರು ಸಹಾಯಕ್ಕೆ ಬರಬಹುದೆಂದುಕೊಂಡ. ಯಾರು ಕಾಣಲಿಲ್ಲ. ಇನ್ನೇನು ರೈಲು ಮುಂದೆ ಹೊರಡಬೇಕೆನ್ನುವಾಗ ಒಳಗೆ ಹಾರಿ ಬಂದ. ಚಾಂದಿನಿ ಬಾಯಿಯ ಹೆಣ ಕಾಣೆಯಾಗಿತ್ತು"
"ಕಾಣೆಯಾಗಿತ್ತು!!" ಆಶ್ಚರ್ಯ ವ್ಯಕ್ತ ಪಡಿಸಿದಳು ನಿನಾದ.
"ಹೆಣ ಕಾಣೆಯಾದುದಲ್ಲ. ಹೆಣವನ್ನು ಸಾಗಿಸ್ದೋನು ಅನುಪ್ರೀತ್"
"ಅಂದ್ರೆ... ಕೊಲೆಗಾರ ಅನುಪ್ರೀತ್...." ಅವಳ ಮಾತು ಮುಗಿಯುವ ಮೊದಲೆ ಎಸ್. ಐ. ಮುಗುಳ್ನಕ್ಕು "ಅಲ್ಲ" ಅಂದರು. ನಿನಾದಳಿಗೆ ಆಶ್ಚರ್ಯವಾಯಿತು.
"ಅನುಪ್ರೀತ್ ರೈಲ್ವೆಯಲ್ಲಿ ಠಾಣಾಧಿಕಾರಿ. ಕೊಲೆ ಮಾಡ್ದೋನು ಅನುಪ್ರೀತ್ ಅಲ್ಲ. ಪನ್ನಾಲಾಲ್"
"ಪನ್ನಾಲಾಲ್!!!" ಉದ್ಗರಿಸಿದಳು.
"ಹೌದು. ಕಂಪಾರ್ಟ್ ಮೆಂಟಿನಲ್ಲಿ ಗಲಾಟೆ ಅದಾಗ ಯಾರೋ ಅದನ್ನು ನೋಡಿ ಪೋಲಿಸರಿಗೆ ತಿಳಿಸಿದರು. ಅನುಪ್ರೀತ್ ಅಲ್ಲಿಗೆ ಬಂದಾಗ ಪನ್ನಲಾಲ್ ಕಾಣೆಯಾಗಿದ್ದ"
"ಹಾಗಾದ್ರೆ ಅನುಪ್ರೀತ್ ಹೆಣವನ್ನೇಕೆ ಇಲ್ಲಿ ತಂದಿದ್ದು?" ಅವಳ ಬಾಲಿಶವಾದ ಪ್ರಶ್ನೆಗೆ ಬಾರಧ್ವಜಿಗೆ ನಗು ಬಂತು.
"ಎರಡು ದಿನವಾದ್ರೂ ಪನ್ನಾಲಾಲ್ ನ ಪತ್ತೆಯಾಗದಾಗ ತಿಳಿದು ಬಂದ ವಿಷಯ, ಆತ ಯಾವುದೋ ಯಾಂತ್ರಿಕ ದೋಣಿ ಹಿಡಿದು ದಕ್ಷಿಣಕ್ಕೆ ಹೊರಟನೆಂದು. ಹಾಗೆ ಅನುಪ್ರೀತ್ ಹುಚ್ಚು ಸಾಹಸ ಮಾಡ್ಕೊಂಡು ಹೆಣ ಸಮೇತ ಇಲ್ಲಿಗೆ ಬಂದ. ಪನ್ನಾಲಾಲ್ ನ ಮನೆಯಲ್ಲಿ ಯಾರೋ ಇರುವ ಸುದ್ದಿ ತಿಳಿದು ಇಲ್ಲಿಗೆ ಬಂದ. ಅದ್ರೆ ಅಲ್ಲಿದ್ದಿದ್ದು ನೀನು. ನಿನಗೇನಾದರೂ ಸುಳಿವು ತಿಳಿದಿರಬಹುದೆಂದು ಅನುಪ್ರೀತ್ ನಿನ್ನಲ್ಲಿಗೆ ಬಂದ. ಅದೇ ಸಮಯಕ್ಕೆ ಪನ್ನಾಲಾಲ್ ಒಂದು ಅಗ್ಗದ ವಸತಿ ಗೃಹದಲ್ಲಿ ಸಿಕ್ಕಿ ಬಿದ್ದಿದ್ದ. ಕೊಲೆ ಮಾಡ್ದೋನು ತಾನೇಂತ ಒಪ್ಕೊಂಡ"
ಅಗಲೇ ವಾಹನವೊಂದು ಬಂದು ನಿಂತಿತು. ಕತ್ತು ಹೊರಳಿಸಿದಳು ನಿನಾದ.
ಕಡು ನೀಲಿ ಜೀನ್ಸ್, ತಿಳಿ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ಮೆಟ್ಟಲೇರಿ ಬರುತ್ತಿದ್ದ ಅನುಪ್ರೀತ್....
"ಏನೂ, ಟೀಚರ್ ಶಾಲೆಯಲ್ಲಿ ಪಾಠ ಮಾಡೋದು ಬಿಟ್ಟು ಠಾಣೆಯಲ್ಲಿ ಪಾಠ ಮಾಡಲು ಬಂದಿದ್ದಾರೆಯೆ?" ಅಣಕು ಮಾತಿನಲ್ಲಿ ಕೇಳಿದ.
"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದ್ರೆ..... ಠಾಣೆಯಲ್ಲಿರುವವರಿಗೆ ಪಾಠ ಕಲಿಸ್ಬೇಕಲ್ಲ"
ಅನುಪ್ರೀತ್, ಬಾರಧ್ವಜ್ ಇಬ್ಬರೂ ಅವಳ ಮಾತಿಗೆ ಗೊಳ್ಳನೆ ನಕ್ಕರು.
"ಕ್ಷಮಿಸಿ ನಿನಾದ..." ಅಂದು ಕೈ ಜೋಡಿಸುವ ಸೌಜನ್ಯ ತೋರಿಸಿದ ಅನುಪ್ರೀತ್.
****

Read more!