Saturday, February 27, 2010

ಖಾಸನೀಸರ ಕಥೆಗಳು


ಖಾಸನೀಸರ ಕಥೆಗಳು: ಸ್ವಾರಸ್ಯಕರ, ಕುತೂಹಲ ಮತ್ತು ಕೆಲವೊಂದು ಜೀವನ ಮೌಲ್ಯಗಳನ್ನು ತಿಳಿಸುವ ಅಪರೂಪದ ಕಥಾ ಗುಚ್ಛ. ಇಲ್ಲಿಯ ಐದು ಕಥೆಗಳು ಸರ್ವೆ ಸಾಮಾನ್ಯ ನೀಳ್ಗತೆಗಳೆ. ಪುಟಗಳ ಪರಿಮಿತಿಯಿಲ್ಲದೆ ಬೆಳೆದ ಈ ಕಥೆಗಳು ಎಲ್ಲೂ ಬೋರ್ ಹೊಡೆಸುವುದಿಲ್ಲ. ಬದಲಾಗಿ ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಇಲ್ಲಿಯ ‘ಅಪಘಾತ’ ಕಥೆಯ ರಾಮನಾಥ, ‘ಹೀಗೂ ಇರಬಹುದು’ ಕಥೆಯ ಲಕ್ಷ್ಮಣ, ‘ತಬ್ಬಲಿಗಳು’ ಕಥೆಯ ತಂದೆ, ತಾಯಿ, ತಮ್ಮ ಮತ್ತು ತಂಗಿ ಪಾತ್ರಗಳು, ‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯ ವಾಸು ಮತ್ತು ‘ಮೋನಾಲೀಸಾ’ ಕಥೆಯ ಪೆರ್ರೂಗಿ ಪಾತ್ರಗಳು ಕಥೆಗಳಿಗೆ ಜೀವಂತಿಕೆ ತುಂಬಿವೆ.

‘ಅಪಘಾತ’ ಕಥೆಯ ನಾಯಕ ಸಾವಿಗೆ ಅರ್ಥವಿಲ್ಲದ ಮುಂಬೈನ ಜೀವನದಲ್ಲಿ ಸ್ವಾಲಂಬಿಯಾಗಿ ಬದುಕುತ್ತಿರುವವನು ವಕೀಲ ರಾಮನಾಥ. ಒಮ್ಮೆ ತನ್ನ ಬಾಲ್ಯದ ನೆನಪುಗಳಲ್ಲಿ ಸೋತು ಹೋದ ನಿರ್ವೀಣ್ಯ ಮನೋಸ್ಥಿತಿಯಲ್ಲಿದ್ದಾಗಲೇ ಅತೀ ಶುಭ್ರ ಪಾರದರ್ಶಕ ಬಟ್ಟೆ ಧರಿಸಿದ್ದ ಯುವತಿಯನ್ನು ನೋಡುತ್ತಾನೆ. ಅವಳೂ ಪರಿಚಿತಳಂತೆ ನಗು ಬೀರುತ್ತಾಳೆ. ಮಾತ್ರವಲ್ಲ ಕಾಮುಕ ದೃಷ್ಟಿಯಿಂದ ಅವನನ್ನು ಸೆಳೆಯಲು ಪ್ರಯತ್ನಿಸುತ್ತಾಳೆ. ಅದೇ ಯುವತಿ ರೈಲಿನಲ್ಲಿಯು ಎದುರಾಗುತ್ತಾಳೆ. ಆಗ ಆ ಕಂಪಾರ್ಟ್ ಮೆಂಟ್ನಲ್ಲಿ ಅವರಿಬ್ಬರೇ ಇರುತ್ತಾರೆ. ತನ್ನ ತೆಕ್ಕೆಗೆ ಬೀಳದ ವ್ಯಕ್ತಿಯೊಬ್ಬನಿದ್ದಾನೆ ಅನ್ನುವ ಅಸಹನೀಯ ವಿಚಾರ ಅವಳ ಮನಸ್ಸನ್ನು ಕೆಡಿಸುತ್ತದೆ. ಅವಳು ಅವನನ್ನು ಇಕ್ಕಟಿಗೆ ಸಿಲುಕಿಸಿ ಅವರ ಹಣವನ್ನು ದೋಚುವ ಪ್ರಯತ್ನ ಮಾಡುತ್ತಾಳೆ. ಅದಕ್ಕೆಲ್ಲಾ ಜಗ್ಗದ ರಾಮನಾಥನಿಗೆ, ‘ತನ್ನನ್ನು ಬಲಾತ್ಕರಿಸಲು ಬಂದ’ನೆನ್ನುವ ಆರೋಪವನ್ನು ಹೊರಿಸಿ ಪೊಲೀಸರಿಗೂ ತಿಳಿಸುತ್ತಾಳೆ. ಆದರೆ ಇದರಿಂದ ವಿಚಲಿತನಾಗದ ಆತ ತಾನು ನಿರಪರಾಧಿ ಅನ್ನುವುದಕ್ಕೆ ಸಾಕ್ಷಿಯೆನ್ನುವಂತೆ ಎಲ್ಲರ ಸಮಕ್ಷಮದಲ್ಲಿ ತನ್ನ ಕೋಟನ್ನು ತೆಗೆಯುತ್ತಾನೆ. ಆತನಿಗೆ ಎರಡು ಕೈಗಳಿರುವುದಿಲ್ಲ. ಹಾಗಿರುವಾಗ ಬಲಾತ್ಕರಿಸುವ ಪ್ರಮೆಯವಿದೆಯೇ?

ಸಾಮಾಜಿಕ ನಿಯಮ- ನಿರ್ಬಂಧಗಳ ಮೂಲಕ ಹೆಣ್ಣು ಗಂದಿನ ಸಂಬಂಧ ವಿಷಯಕವಾದ ತೊಡಕುಗಳು ತಲೆದೋರುತ್ತವೆ. ‘ಹೀಗೂ ಇರಬಹುದು’ ಕಥೆಯಲ್ಲಿ ಇಳಿವಯಸ್ಸಿನಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ನಾಯಕರು, ಕಚ್ಚೆ ಸಡಿಲು ಅಚ್ಚಂಭಟ್ಟರ ಸಹವಾಸದಿಂದ ಅಂಭಕ್ಕನನ್ನು ಮದುವೆಯಾಗುತ್ತಾರೆ. ವಾರನ್ನಕ್ಕೆ ಬರುವ ಪುರೋಹಿತರ ಹುಡುಗ ಶ್ಯಾಮ ಅವರ ಮನೆಯಲ್ಲಿಯೇ ಒಬ್ಬನಾಗುತ್ತಾನೆ. ನಾಯಕರ ಹಿರಿ ಮಗ ರಾಮಣ್ಣ ಅಮೆರಿಕಾದಲ್ಲಿದ್ದು ಅಲ್ಲಿಯೆ ಸಂಸಾರಸ್ಥನಾಗುತ್ತಾನೆ. ಕಿರಿಯವನು ಲಕ್ಷ್ಮಣ ವೃತ್ತಿಯಲ್ಲಿ ವಕೀಲ. ಇದು ಇಷ್ಟು ಫ್ಲ್ಯಾಷ್ ಬ್ಯಾಕ್. ಕಥೆ ಆರಂಭವಾಗುವುದು ತನ್ನ ತಂದೆಯ ಸಾವಿನ ತಂತಿಯನ್ನು ಲಕ್ಷ್ಮಣ ಪಡೆದುಕೂಳ್ಳುವಲ್ಲಿಂದ. ನಾಯಕರಂತ ವ್ಯಕ್ತಿಗೆ ಈ ರೀತಿಯ ಸಾವು ಅಸಹನೀಯವೆಂದು ತಿಳಿದ ಮೇಲೆ ಲಕ್ಷ್ಮಣ ಆ ಸಾವಿನ ಹಿನ್ನಲೆಯನ್ನು ಹಿಡುಕೊಂಡು ಹೋಗುತ್ತಾನೆ. ಅವರದ್ದು ಆತ್ಮಹತ್ಯೆ ಹೌದು! ಕಾರಣ ಶ್ಯಾಮ ಹಾಗು ಅವರ ಎರಡನೆ ಹೆಂಡತಿ ಅಂಭಕ್ಕನಿಗೆ ಅನೈತಿಕ ಸಂಬಂಧವಿರುವುದು ತಿಳಿಯುತ್ತದೆ. ಅದಕ್ಕಾಗಿಯೇ ಶ್ಯಾಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಥೆಯ ತಿರುವು ಪಡೆಯುವುದು ಅಂಭಕ್ಕ ಬಸುರಿ ಅನ್ನುವ ವಿಷಯದಲ್ಲಿ. ಲಕ್ಷ್ಮಣ ವೈದ್ಯರನ್ನು ಭೇಟಿಯಾಗಿ ತನ್ನ ತಂದೆ ತನ್ನ ತಾಯಿ ಹೆರಲು ಅಸಮರ್ಥಳೆಂದು ತಿಳಿದಾಗ ಮಕ್ಕಳಾಗದಂತೆ ಅಪರೇಷನ್ ಮಾಡಿಕೊಂಡಿರುತ್ತಾರೆ. ಹಾಗೆ ಅಂಭಕ್ಕನ ಬಸುರಿಗೆ ಕಾರಣ ತಿಳಿಯುತ್ತದೆ. ಹಾಗೆ ಲಕ್ಷ್ಮಣನಿಗೆ ತನ್ನ ತಂದೆಯ ಸಾವಿನ ಹಿನ್ನಲೆಯೂ ತಿಳಿಯುತ್ತದೆ.

ವಿಭಿನ್ನ ಕಥಾವಸ್ತು ಮತ್ತು ನಿರೂಪಣೆಯಿರುವ ಕಥೆ ‘ತಬ್ಬಲಿಗಳು’ ಇಲ್ಲಿಯ ಪಾತ್ರಗಳು ತಂದೆ, ತಾಯಿ. ತಮ್ಮ, ತಂಗಿ ಮತ್ತು ಸೊಸೆ. ಮನೆಯ ಚುಕ್ಕಾಣಿ ಹಿಡಿದ ತಾಯಿ ಬಾಯಿ ಬಡಕಿ. ಅವಳ ಮಾತಿಗೆ ಯಾರ ದನಿಯೂ ನಿಲ್ಲಲಾರದು. ಸೊಸೆಯನ್ನು ನೆಮ್ಮದಿಯಿಂದ ಇರಗೊಡದವಳು. ಆದರೆ ಸೊಸೆ ಧೈರ್ಯವಂತೆ. ಅತ್ತೆ ಸಾಯುತ್ತೇನೆಂದಾಗ ಧೈರ್ಯವಾಗಿ ‘ಸಾಯುವವರು ಯಾರೂ ತಾನು ಸಾಯುತ್ತೇನೆ ಎಂದು ಹೇಳುವುದಿಲ್ಲ. ಸಾಯುವುದಕ್ಕೂ ಧೈರ್ಯವಿರಬೇಕು’ ಅನ್ನುವವಳು. ಅವಳೇ ಮುಂದೊಂದು ದಿನ ರೈಲಿನ ಗಾಲಿಗಳಿಗೆ ತಲೆಯೊಡ್ಡುತ್ತಾಳೆ. ತಂಗಿಗೆ ಹುಚ್ಚು ಕಾಯಿಲೆ ಹಿಡಿದಾಗ ತನ್ನ ಸೊಸೆಯೇ ಸತ್ತು ಪೀಡಿಸುತ್ತಾಳೆ ಎಂದು ಊರೀಡಿ ಹೇಳಿಕೊಳ್ಳುವ ಹೆಂಗಸು ತಾಯಿ. ತಮ್ಮನ ಹೆಂಡತಿ ಸತ್ತ ಮೇಲೆ ಅವನು ಮಲ್ಲಿಗೆ ಹೂವುಗಳ ಪರಿಮಳದ ಹಿಂದೆ ಮುಖ ಹೊರಳಿಸಿದವನು. ತಂಗಿಗೆ ಹಿಡಿದ ಕಾಯಿಲೆ ಗುಣವಾಗಲೆಂದು ಮಂತ್ರಾಲಯಕ್ಕೆ ಬರುವ ಕುಟುಂಬದ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಲೋಚಿಸುತ್ತಾ ದೂರವಾಗ ಬಯಸುತ್ತಾರೆ. ಇಲ್ಲಿ ಕುಟುಂಬದ ಜವಬ್ದಾರಿಯನ್ನು ಹೊರಲಾರದ ತಂದೆ, ಮಡದಿಯನ್ನು ಕಳೆದುಕೊಂಡ ಹದಿಹರೆಯದ ವಿಧುರ ತಮ್ಮ, ಹುಚ್ಚು ಹಿಡಿದ ತಂಗಿ ವಟವಟಿಸುತ್ತಾ ಸಂಸಾರ ನಡೆಸುವ ತಾಯಿ. ಕೊನೆಗೂ ರಥೋತ್ಸವದ ದಿನ ಅವರೆಲ್ಲಾ ಬೇರೆಬೇರೆಯಾಗಿ ತಬ್ಬಲಿಗಳಾಗುತ್ತಾರೆ. ಕಥೆಯನ್ನು ನಿರೂಪಿಸಿದ ಶೈಲಿ ನಾನಾ ರೀತಿಯಿಂದ ಚಿಂತನೆಗೆ ಹಚ್ಚುತ್ತದೆ.

‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯಲ್ಲಿ ವಾಸು ತನ್ನ ತಾಯಿಯ ಕೋರಿಕೆಯಂತೆ ಕಕ್ಕ ಸತ್ಯಬೋಧನನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಒಂದು ರಾತ್ರಿಯಲ್ಲಿ ಪಾಪದ ಬೀಜ ಬಿತ್ತಿದ ಕಕ್ಕ ಒಳ್ಳೆಯವನೆ. ಅಂಬಕ್ಕನೇ ಆತನನ್ನು ಅಡ್ಡ ದಾರಿಗೆ ಎಳೆದರೂ ತನ್ನ ತಪ್ಪು ಇಲ್ಲದಿದ್ದರೂ ಸತ್ಯವನ್ನು ದನಿ ಏರಿಸಿ ಹೇಳದೆ ಮನೆ ಬಿಟ್ಟು ಹೋಗುತ್ತಾನೆ. ಅವನು ಮರಳಿ ಬಾರದಿದ್ದರೆ ಆ ಮನೆಯಲ್ಲಿ ತಮಗೆ ಅಸ್ಥಿತ್ವವೇ ಇಲ್ಲ, ಅದಕ್ಕಾಗಿ ಆಕಾಶ ಭೂಮಿ ಒಂದಾದರೂ ಸರಿಯೇ ಅವನನ್ನು ಹುಡುಕಿಕೊಂಡು ಬರುವಂತೆ ಒತ್ತಾಯಿಸುತ್ತಾಳೆ ವಾಸುವಿನ ತಾಯಿ. ಆದರೆ ಅದು ಅಲ್ಲಾಉದ್ದೀನನ ಅದ್ಭುತ ದೀಪವನ್ನು ಅರಸಿ ಹೊರಟಂತೆ ಆಗುತ್ತದೆ. ಕಥೆ ಅಪೂರ್ಣವೆನಿಸಿದರೂ ಅದನ್ನು ನಾನಾ ಕೋನಗಳಿಂದ ಆಲೋಚಿಸಲು ಓದುಗನಿಗೆ ಬಿಟ್ಟಿರುವುದು ಕಥೆಯ ಪ್ಲಸ್ ಪಾಯಿಂಟ್.

ವಾಸ್ತವದ ಎಳೆಯಿಂದನ್ನು ಹಿಡಿದು ಬರೆದ ಕಥೆ ‘ಮೋನಾ ಲೀಸಾ’. ಇಲ್ಲಿ ಪುನರ್ಜನ್ಮದ ಅನುಭಾವಾತೀತ ಸತ್ಯವನ್ನು ಪ್ರತಿಪಾದಿಸುವ ಹಿನ್ನಲೆಯಿದ್ದರೂ ಕೋರ್ಟು 400 ವರ್ಷಗಳ ಹಿಂದಿನ ಮೋನಾ ಲೀಸಾ ಹಾಗು ತಾನು ಉಪಚರಿಸಿದ ಮೆಟಿಲ್ಡಾಳ ನಡುವಿನ ಸಾಮ್ಯತೆಯನ್ನು ನಿರಾಕರಿಸಿ, ಮೋನಾಲೀಸಾ ಕಲಾಕೃತಿಯನ್ನು ಕದ್ದೊಯ್ದ ಆರೋಪದಲ್ಲಿ ಪೆರ್ರೂಗಿಯನ್ನು ಬಂಧಿಸುತ್ತದೆ. ತನ್ನ ಪ್ರೇಯಸಿಯನ್ನು ಮೋನಾಲೀಸಾಳಿಗೆ ಹೋಲಿಸುತ್ತ ಭಾವನೆಗಳನ್ನು ನವಿರಾಗಿ ಚಿತ್ರಿಸುತ್ತಾ ಪುನರ್ಜನ್ಮವನ್ನು ಕೆದಕುತ್ತ ಸಾಗುತ್ತದೆ ಕಥೆ.

ಸೃಜನಶೀಲತೆಯ, ಚಿಂತನಾ ವೈಖರಿಯಿರುವ ಖಾಸನೀಸರ ಕಥೆಗಳನ್ನು ಒಮ್ಮೆಯಾದರೂ ಓದಲೇಬೇಕು.

No comments: