Wednesday, January 13, 2010

ಪರಿಸರ ಸಂರಕ್ಷಣೆಯ ಮಾರ್ದನಿ - ಪರಿಸರದ ಮರುದನಿಗಳು


ಪರಿಸರದ ಬಗ್ಗೆ ಅದೆಷ್ಟೊ ಕಥೆ ಕಾದಂಬರಿ ಲೇಖನ ಮಾಲೆಗಳನ್ನು ಓದುತ್ತಿದ್ದೆನಾದರೂ ಸಂಪೂರ್ಣವಾಗಿ ನಮ್ಮ ಪರಿಸರ ಜಾಗ್ರತಿಯ ಬಗ್ಗೆ, ಬದಲಾಗುತ್ತಿರುವ ಪರಿಸರದ ಬಗ್ಗೆ ಮಾರ್ದನಿಸುತ್ತಿರುವ ಎಚ್ಚರಿಕೆಯ ಫಂಟಾ ಘೋಷಗಳನ್ನು ತಿಳಿದುಕೊಳ್ಳುತ್ತಾ, ನಮ್ಮ ಒಳಗೂ ಒಬ್ಬ ಪರಿಸರ ಪ್ರೇಮಿ ಹುಟ್ಟಿಕೊಳ್ಳುತ್ತಾ, ಅದರ ಸಂರಕ್ಷಣೆಯ ಬಗ್ಗೆ ಕಿಂಚಿತ್ತು ಅಲೋಚನೆಯನ್ನು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಈ ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆಗಳು ನನ್ನನ್ನು ಬಹಳವಾಗಿ ಆಕರ್ಷಿಸಿದ್ದವು, ಮಾತ್ರವಲ್ಲ ಅವರ ಕಥೆಗಳಲ್ಲಿರುವ ನೈಜ್ಯ ಚಿತ್ರಣ, ಪರಿಸರದ ಕಾಳಜಿ, ಪರಿಸರದಲ್ಲಿ ಒಂದಾಗಿ ಹೋಗುವ ಪಾತ್ರ ಚಿತ್ರಣಗಳು ಕಣ್ಣ ಮುಂದೆ ನೈಜತೆಯೆಂಬಂತೆ ದೃಗೋಚರಿಸುತ್ತದೆ. ಪಾತ್ರಗಳ ನೋವು, ಹತಾಶೆಗಳು ಕೊನೆಗೆ ನಮ್ಮಲ್ಲೇ ಉಳಿದು ಬದುಕಿನ ಇಡೀ ಹತಾಶೆಯನ್ನು ಬಿಚ್ಚಿಟ್ಟು ತಲೆಯೊಳಗೆ ಕೊರೆಯುತ್ತಲೇ ಇರುತ್ತವೆ."

ಹೇಗೆ ಪರಿಸರವನ್ನು, ಪರಿಸರದ ಸುತ್ತಾ ನಡೆಯುವ ಮಾನವ ನಿರ್ಮಿತ ವ್ಯವಸ್ಥೆಯೊಳಗೆ ಅದು ನಾಶವಾಗುತ್ತ ಒಂದೊಮ್ಮೆ ‘ಇಲ್ಲ’ವಾಗುವ ಮತ್ತು ‘ಇದ್ದವೆಂಬ’ ಅಂತೆ ಕಂತೆಗಳ ನಡುವೆ ಸುದ್ದಿಯಾಗಬಹುದಾದ ಈ ಪರಿಸರದ ಕಥೆಗಳನ್ನು ಹುಡುಕುತ್ತಿರುವಾಗ ಲೇಖಕ ‘ಶಶಿಧರ ವಿಶ್ವಾಮಿತ್ರ’ ಅವರ ‘ಪರಿಸರದ ಮರುದನಿಗಳು’ ನನ್ನ ಕಣ್ಣಿಗೆ ಬಿತ್ತು. ಕೇವಲ ಕಥೆಯಾಗಿ ಉಳಿಯದೆ ಪರಿಸರ ಜಾಗೃತಿಯ ಅಭಿಯಾನ ರೂಪಿಸುವಲ್ಲಿ ಒಂದು ಪ್ರಯತ್ನವಾಗಬಲ್ಲ ಈ ಸಂಕಲನದಲ್ಲಿ ಸುಮಾರು 8 ಕಥೆಗಳು ಹಾಗೂ 2 ನಿಳ್ಗತೆಗಳು ಇವೆ.

ಪ್ರಾಣಿ, ಪಕ್ಷಿ ಸಂಕುಲದ ಅವನತಿ ಮಾನವ ನಿರ್ಮಿತ ಸಮಾಜದಲ್ಲಿ ಹೇಗೆ ಸಂಭವಿಸುತ್ತದೆಯೆನ್ನುವುದನ್ನು ಇಲ್ಲಿಯ ಕಥೆಗಳು ಸ್ಪಷ್ಟವಾಗಿ ತಿಳಿಸುತ್ತವೆ. ಗುಬ್ಬಚ್ಚಿಯಂತಹ ಹಕ್ಕಿಗಳು ಮೊಬೈಲ್ ಹೊರಸೂಸುವ ವಿಕಿರಣಗಳಿಗೆ ಸಿಲುಕಿ ಮತ್ತು ಮಾದ್ಯಮಗಳ ಭರಾಟೆಯಲ್ಲಿ ಅಪರೂಪವಾಗಿರುವಂತಹ ಸನ್ನಿವೇಶಗಳಂತೆ ಇಲ್ಲಿಯ ಕಥೆಗಳಲ್ಲಿ ನರಿ, ಹಾವು, ಗೀಜಗ, ಕಾಗೆ, ಚಿರತೆಗಳ ಸಂತತಿ ಹೇಗೆ ಅಳಿಯುತ್ತದೆ ಎನ್ನುವುದನ್ನು ಮನ ಮುಟ್ಟುವ ರೀತಿಯಲ್ಲಿ ನಿರೂಪಿಸಲಾಗಿದೆ.

ಮೇಲ್ನೋಟಕ್ಕೆ ಇಲ್ಲಿಯ ಕಥೆಗಳು ಮಕ್ಕಳ ಕಥೆಗಳಂತೆ ಕಂಡರೂ ಅದರಲ್ಲಿರುವ ಕಾಳಜಿ ಮಹತ್ವವಾದವು. ಪ್ರತಿಯೊಂದು ಪ್ರಾಣಿ ಪಕ್ಷಿಯ ಸ್ವಾತಂತ್ರ್ಯಕ್ಕೆ ಮನುಷ್ಯ ಹೇಗೆ ಅಡ್ಡಗಾಲಾಗುತ್ತಾನೆ ಮತ್ತು ಅವುಗಳನ್ನು ಯಾವ ರೀತಿಯಲ್ಲಿ ತನ್ನ ಸ್ವಾರ್ಥಕ್ಕಾಗಿ ನಡೆಸಿಕೊಳ್ಳುತ್ತಾನೆ ಎನ್ನುವುದನ್ನು ಅಧ್ಯಯನ ಮಾಡಿ ಬರೆದಂತೆ ಬಹಳ ಸುಂದರವಾಗಿ ಲೇಖಕರು ಬರೆದಿದ್ದಾರೆ.

ಕೇವಲ ಪ್ರಾಣಿ, ಪಕ್ಷಿ, ಜೀವ ಜಂತುಗಳ ಬಗ್ಗೆ ಮಾತ್ರವಲ್ಲ ಪರಿಸರ ಪ್ರಜ್ಞೆಯಲ್ಲಿ ಮೂಡುವ ಕಾಡು, ನದಿ, ಹಳ್ಳ, ತೊರೆ,ಜಲಪಾತ, ಸಸ್ಯರಾಶಿ, ಸಕಲ ಜೀವ ಸಂಕುಲಗಳ ಬಗ್ಗೆ ಪ್ರೀತಿ ಹುಟ್ಟಿಸುವ ವಿವರಗಳು, ನಾವೇ ಆ ಪರಿಸರದಲ್ಲಿದ್ದೇವೆ ಅನ್ನುವ ಭ್ರಮೆಯನ್ನು ಹುಟ್ಟಿಸುತ್ತದೆ.

‘ಕಡೆಯ ಚಿರತೆ’ ನೀಳ್ಗತೆಯಲ್ಲಿ ಒಂದು ಪಾತ್ರ. ಬೇಟೆಗಾರ ಮಾತ್ರ ಅಲ್ಲ ಬೇಟೆಗಾರರ ಗುರುವೂ ಆಗಿದ್ದೂ ಈಗ ಪರಿಸರದ ಸತ್ಯತೆ ತಿಳಿದ ಆತನ ಮಾತುಗಳು ನಮ್ಮಲ್ಲೂ ಒಂದಷ್ಟು ಪರಿಸರ ಪ್ರಜ್ಞೆಯನ್ನು ಹುಟ್ಟಿಸುತ್ತದೆ.

“ಕಾಡು ಎಂದರೇನು? ಮರಗಿಡಬಳ್ಳಿಗಳೇ? ಹುಲಿ, ಜಿಂಕೆ, ಸಿಂಹ ಇತ್ಯಾದಿ ಮೃಗಗಳೇ? ಮಲೆಗಳೇ? ಇಷ್ಟು ಮಾತ್ರ ಅಲ್ಲ ಎಂದು ನನ್ನ ಅನುಭವ ಸಾರುತ್ತಿದೆ. ಕಾಡೆಂದರೆ ವಾಸ್ತವವಾಗಿ ಮೈ ಬೀಸಿ ಹರಡಿರುವ ಬೆಟ್ಟ, ಗುಡ್ಡ, ಕಣಿವೆ, ಮೈದಾನಗಳಲ್ಲಿ, ತನ್ನಂತೆ ಮೈದಳೆದಿರುವ ಶಾಂತಿಯಲ್ಲಿ, ಮರ, ಗಿಡ, ಪ್ರಾಣಿಗಳು ಸ್ವೇಚ್ಛೆಯಿಂದ ಬಾಳುವ ಬಾಳು ಎನಿಸುತ್ತದೆ. ಹರ್ಷವನ್ನು ಬೀರುವ ಹರಿದ್ವನಗಳಲ್ಲಿ ನಡುರಾತ್ರಿ ಮಿಟುಕುವ ನಕ್ಷತ್ರಗಳ ಮಂದ ಬೆಳಕಿನಲ್ಲಿ ಆಕಾಶ ಹೊದ್ದು ಮಲಗಿರುವ ಕಾಡಿನ ಒಕ್ಕಡೆ ನೀವು ಮಿಸುಕದೆ ಹಾಯ ಕೂತರೆ, ಈಗ ನಾನು ಹೇಳುತ್ತಿರುವ ಶಾಂತಿಯ ಅರ್ಥವೇನು? ಬಾಳಿನ ಸಂಭ್ರಮಕ್ಕೆ ಶಾಂತಿ ಏಕೆ ಬೇಕು? ಎಂದು ಗೊತ್ತಾಗುತ್ತದೆ”

ಈ ಮೇಲಿನ ವಾಕ್ಯಗಳೇ ನಮ್ಮನ್ನು ಪರಿಸರ ಸಂಬಂಧಿ ಪ್ರದೇಶದೊಳಗೆ ಕರೆದೊಯ್ಯುವ ಅತೀತಾತೀತ ಶಕ್ತಿಯೆನಿಸುವುದರಿಂದಲೇ ಪರಿಸರದ ಮೇಲೆ ವ್ಯಾಮೋಹ ಹುಟ್ಟಿಸುತ್ತದೆ.

ಇಲ್ಲಿಯ ಬಹುತೇಕ ಕತೆಗಳು ದುರಂತದಲ್ಲಿಯೇ ಮುಗಿಯುವುದು, ತಿಳಿದೇ ತಿಳಿಯದೆಯೊ ಮನುಷ್ಯನ ಪ್ರಗತಿಯೆಂಬ ಸ್ವಾರ್ಥದಲ್ಲಿಯೇ ನಲುಗಿ ಹೋಗುವ ಜೀವಿಗಳ ದುರಂತಮಯ ಬದುಕು ಸ್ಪಷ್ಟವಾಗಿ ಚಿತ್ರಿತವಾಗಿದೆ. ತಾನು ತನ್ನ ಪರಿಸರವೆಂಬ ಅಭಿಮಾನ, ತನ್ನಂತೆಯೇ ಇತರ ಜೀವ ಜಂತುಗಳು ಬದುಕಲು ಅವಕಾಶ ಕಲ್ಪಿಸಬೇಕೆನ್ನುವ ಪ್ರಜ್ನೆ ಇರುವುದಾದರೆ ಅದೆಷ್ಟೊ ವ್ಯೆವಿದ್ಯಮಯ ಜೀವ ಜಂತನ್ನು ವಿನಾಶದಂಚಿನಿಂದ ತಪ್ಪಿಸಬಹುದು.

ಈ ಪರಿಸರ ಕಥಾ ಸಂಪದದ ನರಿಗಳು, ಗೌಜುಗಗಳ ಅಂಕ, ಗೃಧ್ರಸಂಸಾರ, ದಿಕ್ಕೆಟ್ಟ ಗಜಗಣ, ರೆಕ್ಕೆಮುರುಕ, ಅರಗಿಣಿಗಳ ಪ್ರಸಂಗ, ಮುಸವಗಳ ಜೋಡಿ, ಕಾಡುಬೆಕ್ಕಿನ ಮರಿ ಮತ್ತು ಒಂದಾನೆಯಿತ್ತು ಕಥೆಗಳೆಲ್ಲಾ ಮುಂದಿನ ಪೀಳಿಗೆಗೆ ಒಂದು ಅದ್ಭುತ ಕಥನಕವಾದರೂ ಹೆಚ್ಚಲ್ಲ. ಕಲುಷಿತವಾಗುತ್ತಿರುವ ಪರಿಸರ, ನಶಿಸುತ್ತಿರುವ ಜೀವ ಸಂಕುಲಗಳು ಇಂತಹ ಕಥನಕಗಳಲ್ಲಿಯೇ ಸಿಗುವ ದಿನ ದೂರವಿರಲಾರದು!

ಕಡೆಯ ಚಿರತೆ, ನೀಳ್ಗತೆಯ ಚಿರತೆಗಳ ಅವಸಾನ ಇವತ್ತು ಮಾಯವಾಗಿ ಕೇವಲ ಪ್ರಾಣಿ ಸಂಗ್ರಹಾಲಯದಲ್ಲಿ ನೋಡುವ ಮತ್ತು ಅಳಿವಿನಂಚಿನಲ್ಲಿರುವ ಹುಲಿ ಸಂತತಿಯ ಹಾಗೆ ಚಿರತೆಯ ಸಂತತಿಯೂ ಅಳಿಯುವಲ್ಲಿ ಸಂಶಯವಿಲ್ಲವೆನ್ನುವುದನ್ನು ಬಿಂಬಿಸುತ್ತದೆ. ಈ ಸಂಕಲನದ ಇನ್ನೊಂದು ನೀಳ್ಗತೆ ‘ಕಾಡೊಂದಿತ್ತಲ್ಲ’ ಕಣ್ಣ ಮುಂದೆ ಪ್ರಕೃತಿಯ ಸಮೃದ್ಧ ಚಿತ್ರವನ್ನು, ಕಾಡಿನ ವೈಭವನ್ನೂ ತೆರೆದಿಡುತ್ತದೆ.

ಇಂತಹ ಪರಿಸರದ ಮರುದನಿಗಳು ಸ್ವಲ್ಪ ಮಟ್ಟಿಗಾದರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೆಚ್ಚಿಸಿದರೆ ಅದೇ ಕಾಡು, ಅದೇ ಜೀವ ಸಂಕುಲಗಳು ಉಳಿದಾವೇನೊ?

ಈ ಪುಸ್ತಕವನ್ನು ಭಾಗ್ಯಲಕ್ಷ್ಮಿ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿದ್ದಾರೆ. ಇದರ ಬೆಲೆ ಕೇವಲ 150 ರೂಪಾಯಿಗಳು.

No comments: