Friday, April 13, 2012

ಹಚ್ಚಿಟ್ಟ ಹಣತೆಯ ಬೆಳಕಿನೆಡೆಗೆ


ಕವಿತೆಗಳಿಗೆ ಬಹಳ ದೊಡ್ಡದಾದ ಒಂದು ಕ್ಯಾನ್‌ವಸ್ ಇರುವುದರಿಂದ ಅವುಗಳನ್ನು ವಾಚಿಸುವಾಗ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯದಾದ ಅರ್ಥವನ್ನು ಕೊಡುತ್ತವೆ. ಒಂದು ಕವಿತೆಯನ್ನು ಆಯ್ದುಕೊಂಡರೆ ಅವುಗಳ ಒಳ ಹೂರಣ ಒಂದು ನೀಳ್ಗತೆಯೋ ಅಥವಾ
ಮಹಾನ್ ಕಾದಂಬರಿಯೋ ಆಗಬಲ್ಲುದು. ಹಾಗಾಗಿ ಕವಿತೆಗಳಿಗೆ ಚೌಕಟ್ಟನ್ನು ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವು ತೆರೆದಿಡುವ ಅರ್ಥವ್ಯಾಪ್ತಿ ವಿಸೃತವಾದದ್ದು. ಇವುಗಳ ಜೊತೆಗೆನೆ ಕವಿತೆ ಸ್ಫುರಿಸುವ ಮಾದುರ್ಯತೆ ಓದುಗನ ಮನದಾಳಕ್ಕೆ ಇಳಿದು ಅಲ್ಲಿಯೇ ರಿಂಗಣಿಸಿ ಇನ್ನಷ್ಟು ಭಾವಲೋಕಕ್ಕೊಯ್ಯುವ ಧೀಮಂತಿಕೆ ಕೂಡ ಕವಿತೆಗಳಿಗಿವೆ. ಹಾಗಾಗಿ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಲಿ ಕರೆಯಿತು' ಕೆ. ಎಸ್. ನರಸಿಂಹಸ್ವಾಮಿ ಅವರ `ಸಿರಿಗೆರೆಯ ನೀರಿನಲಿ ಅರಳು ತಾವರೆಯಲಿ' ಎಚ್. ಎಸ್. ಶಿವಪ್ರಕಾಶರ `ನನ್ನ ಚಲ್ಲಾಟದ ಮಲ್ಲಿಗೆ ತೋಟದ ಹಕ್ಕಿ ಈ ನಿಮಿಷಕೆ ಹಾರಿ ಬಂತು' ಕವಿತೆಗಳಾಗಲಿ, ಕುವೆಂಪುರವರ ಕವಿತೆಗಳಾಗಲಿ ಇಂದಿಗೂ ಕೂಡ ನಮಗೆ ಶ್ರೇಷ್ಠವೆನಿಸುತ್ತವೆ. ಈ ಕವಿತೆಗಳ ಮರು ಓದು ಮತ್ತು ಹೊಸ ಪೀಳಿಗೆಯ ಓದು ಮುಖ್ಯವಾಗುತ್ತಲೇ ಅವುಗಳಲ್ಲಿಯೂ ನವ್ಯೋತ್ತರದ ಕವಿತೆಗಳು ಹುಟ್ಟು ಹಾಕುವ ಬೆರಗು ಪ್ರಸ್ತುತ ಮುಖ್ಯವೆನಿಸುತ್ತದೆ. ಅಂತಹ ಹೊಸ ಪೀಳಿಗೆಯ ಕವಿತೆಗಳಲ್ಲಿ ಧನಂಜಯ ಕುಂಬ್ಳೆ ಅವರ `ಹಣತೆ ಹಾಡು' ಕೂಡ ಗುರುತಿಸಿಕೊಳ್ಳುತ್ತದೆ.

ಧನಂಜಯ ಕುಂಬ್ಳೆಯವರ ಈ ಕವನ ಸಂಕಲನ ಎರಡು ರೀತಿಯಲ್ಲಿ ಬಹಳ ಮುಖ್ಯವೆನಿಸುತ್ತದೆ. ಒಂದು ೨೦೧೧ ರ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಅನ್ನುವುದಕ್ಕೆ, ಮತ್ತೊಂದು ಇದು ಗಡಿನಾಡಿನ ಕನ್ನಡಿಗನೊಬ್ಬನ ಕವಿತೆಗಳೆನ್ನುವುದಕ್ಕೆ. ಅದಲ್ಲದೆ `ಹಣತೆ ಹಾಡು' ನವಿರಾದ ಕಾವ್ಯಗಳ ಗುಚ್ಛ ಮತ್ತು ಕೆಎಸ್‌ಎನ್ ಅವರ ಕವನಗಳನ್ನು ನೆನಪಿಸುವ ಪ್ರೇಮಕಾವ್ಯದಿಂದ ಹಿಡಿದು ದೇಶಪ್ರೇಮವನ್ನು ಸೂಸುವ ಕವನಗಳವರೆಗೂ ಇವು ಕಂಪ ಬೀರುತ್ತವೆ.

ಪ್ರೀತಿ, ಪ್ರೇಮ ಭಾಷ್ಯೆಗಳಿಗೆ ಹೇಗೆ ಅಂತ್ಯವೆನ್ನುವುದಿಲ್ಲವೋ ಹಾಗೆಯೇ ಕಾವ್ಯದ ಪರಿಭಾಷೆಯಲ್ಲಿ ಬಳೆಕೆಯಾಗುವ ಕೊಳಲು, ಗಿರಿಕಂದರದಂತಹ ಪದಗಳು ಮತ್ತೆ ಮತ್ತೆ ಉದಯಿಸಿ ಜೀವನ್ಮುಖಿ ಉಲ್ಲಾಸವನ್ನ ಪ್ರಸ್ತುತಪಡಿಸುವುದರಿಂದ ಇಲ್ಲಿಯ ನಾಲ್ಕು ಕವಿತೆಗಳಲ್ಲಿ ಬರುವ ಕೊಳಲು, ಒಂದೊಂದು ಕವಿತೆಯಲ್ಲೂ ಬೇರೆಯದೇ ಆದ ಮಾದುರ್ಯತೆಯನ್ನು ಹೊರಡಿಸುತ್ತದೆ. ಕನ್ನಡದ ಕಾವ್ಯ ಪದಗಳಿಗೆ `ಔಟ್ ಡೇಟೆಡ್' ಅನ್ನುವಂತದ್ದು ಇಲ್ಲ. ಇದು ಗದ್ಯ ಪ್ರಕಾರದಲ್ಲಿ ಬಳಸಬಹುದಾದ ಪದವಾದರೂ ಕಾವ್ಯದಲ್ಲಿ ಎಷ್ಟು ಕವಿಗಳು ಬರೆದರೂ ಬತ್ತದ ಚಿಲುಮೆಯ ಪದಗಳೇ ಪ್ರೀತಿ, ಪ್ರೇಮ, ಕೊಳಲು, ಕೊರಳು... ಇವು ಸವಕಲಾಗಿ ಕಾಣುವುದು ಪ್ರೀತಿ ಕಳೆದುಕೊಂಡ ಮನಸ್ಸುಗಳಲ್ಲಿ ಮಾತ್ರ! ಹಾಗಾಗಿ ಮೈಸೂರು ಮಲ್ಲಿಗೆಯ ಕವಿತೆಗಳಲ್ಲಿ ಕಂಪಿರುವಂತೆ ಹಣತೆಯಲ್ಲಿ ಆರಲಾರದ ಬೆಳಕು ಪಸರಿಸಿರುವುದನ್ನು ಕಾಣಬಹುದು.

ಈ ಸಂಕಲನದ ಎಲ್ಲಾ ಕವಿತೆಗಳು ಗುನುಗುನಿಸುವಂತಿದೆ. ಭಾವದೀಪ್ತಿಯ ಈ ಕವಿತೆಗಳೆಲ್ಲವೂ ಗಾಯನವಾಗಿಯೂ ಮಾಧುರ್ಯ ತುಂಬಬಲ್ಲವು. ಹಾಗಾಗಿ ಇಲ್ಲಿ ಬರುವ ಕೊಳಲು ಕವಿತೆಯ `ಚೈತನ್ಯ ತುಂಬಿದ ಕೊಳಲು'; ಮೊನಾಲಿಸಾದ `ಡಾವೆನ್ಸಿ ಕುಂಚದ ಎಳೆಯ ಜೀವ ತಂತು'; ದಿವ್ಯಾರ್ಪಣೆಯ `ಬಳುಕು ಸೊಗಸಿನ ತಂಪು ಗಾಳಿಯಲಿ'; ಜೀವಚೀಲದ ಬೇರು ಕವಿತೆಯ `ಮೊಗ್ಗು ಚಿಗುರಾಗಿ ಎಲೆ ಹಸುರಾಗಿ'; ಒಂಟಿ ಮನಸು ಅರಳುವ ಸಮಯದ `ಸುರಿವ ಪರಿಮಳಕೆ ಮುಖವೊಡ್ಡಿ ನಿಂತಾಗ'; ಶಿಲ್ಪದ `ತನ್ಮತೆಯ ಪೆಟ್ಟಿಗುದುರುವ ಶಬ್ದಕ್ಕೂ ಅರ್ಥವಿದೆ ಲಯವಿದೆ ಪ್ರಾಸವಿದೆ'; `ಕಾಡಿದ ಕೊಳಲು'ವಿನ `ಅರಳಿದ ಹೂಗಳ ಮಡಿಲಲಿ ಕುಳಿತು ಕಂಪಿನ ನೀರನು'; `ಕನಸ ಹಕ್ಕಿಗಳು ಹಾಡುತಿವೆ'ಯ `ಜೇನನು ಹೀರಲು ಹಾರುವ ದುಂಬಿ ಹೂವಿನ ಕರೆಗೆ'; `ಸ್ಪಂದನ'ದ `ಕರೆಯ ಕಂಪಿನಲಿ ಕರಗಿ ನೀನಾಗಬಲ್ಲೆ'; `ಹಣತೆಯ ಹಾಡು'ವಿನ `ಹೃದಯ ಹೃದಯಗಳ ತಳದಲ್ಲಿ ಕನಸಿಹುದು' ಈ ಕವಿತೆಗಳಲ್ಲಾ ತೆರೆದಿಡುವಂತಹುದು ಜೀವನ್ಮುಖಿಯ ಆಶಯಗಳನ್ನ, ಪ್ರೀತಿ ಪ್ರೇಮಗಳನ್ನ. ಇವೆಲ್ಲವೂ ಪಲುಕು ಪಲುಕು ಒಲವನ್ನ ಮಿಡಿಯುವಂತದ್ದು. ಬದುಕು ಇಲ್ಲವೆಂದುಕೊಂಡು ನೆನಪು ಕಾಡುವಾಗ ತ್ಯಾಗದ ಬೆಲೆ ಅರಿತು ಮನಸ್ಸು ಮಿಡಿದು ಅರ್ಪಣೆಯ ಭಾವವನ್ನುದಯಿಸುವ `ಪ್ರತಿಧ್ವನಿ' ತನ್ನ ತಾನು ಸುರುಟಿಕೊಳ್ಳುತ್ತಾ ಬದುಕನ್ನೂ ಸುರುಟಿಕೊಳ್ಳುವ ಸ್ವಾಭಿಮಾನದ `ಬೀಡಿ ಕಟ್ಟುವ ಹುಡುಗಿಗೆ' ಯಾರಿಗೂ ಬೇಡವಾದ ಅಬ್ಬಲಿಗೆ ಅಮೂರ್ತತೆಯ ವಿಷಬಟ್ಟಲು, ಗೊತ್ತಿದ್ದು ಗೊತ್ತಿಲ್ಲದೆ ಮಾಡಿದ `ಮೊದಲ ಪಾಪ' ನಿಶ್ಯಬ್ದದ ರೌದ್ರತೆಯ ನಡುವೆಯೂ, ದೇಶಭಿಮಾನದ ಕಾರ್ಗಿಲ್ ಗೆಳೆಯನಿಗೆ...
`ಹೇ ಗೆಳೆಯ ನಿನಗಿದೋ ನಮ್ಮ ಹೂವ ತೊಡುಗೆ
ಹೂಗಳಿಗೆ ಪರಿಮಳ ಅದು ನಿನ್ನ ಕೊಡುಗೆ'
ಹೀಗೆ ಇಲ್ಲಿಯ ಎಲ್ಲಾ ಕವನಗಳಲ್ಲಿಯೂ ಒಂದು ಆಸೆ, ಅದಕ್ಕೆ ವ್ಯತಿರೀಕ್ತವಾಗಿ ನಿರಾಸೆ ಮತ್ತೆ ನಿರಾಸೆಯನ್ನು ಮೆಟ್ಟಿ ನಿಲ್ಲುವ ಮತ್ತೊಂದು ಆಶಾಭಾವನೆಯಿರುವುದು ಕವಿಯ ಕನಸುಗಳು.

`ಗೊತ್ತೇನ್ರಿ ನಿಮಗ' ಕವಿತೆಯ ರಾಜನ ಮುಗ್ಧತೆ `ನಾನು' ಕವಿತೆಯ `ಧನು'ವಿನ ಮುಗ್ಧತೆ ಕಾವ್ಯದೋದುಗನ ತುಟಿಯನ್ನು ಬಿರಿಯುವ ಕವಿತೆಗಳು. ಹಾಗಾಗಿ ಈ ಸಂಕಲನದ ಕವಿತೆಗಳಲ್ಲಿ ನವರಸಗಳು ತುಂಬಿರುವುದರಿಂದಲೇ ಒಂದು ಸುಂದರವಾದ ಕಾವ್ಯಾನಂದವನ್ನು ಇವು ಹರಿಯಬಿಡುತ್ತವೆ.
ಇದು ಧನಂಜಯ ಕುಂಬ್ಳೆಯವರ ಮೂರನೆಯ ಕವನ ಸಂಕಲನವೂ ಹೌದು. ವೈದೇಹಿಯವರ ಮುನ್ನುಡಿಯಿರುವ ಈ ಕವನಸಂಕಲನ ಓದುಗರ ಪ್ರೀತಿಯನ್ನು ಗಳಿಸುವುದರಲ್ಲಿ ಎರಡು ಮಾತಿಲ್ಲ.

Read more!

Thursday, March 15, 2012

ಹಕ್ಕಿ ಚೆಲ್ಲಿದ ಬೀಜದ ಮೊಳಕೆ


`ಹಕ್ಕಿ ಚೆಲ್ಲಿದ ಬೀಜ' ಶೀರ್ಷಿಕೆಯೆ ಅಮೂರ್ತತೆಯನ್ನು ಸೂಚಿಸುವ ಸಿ ಎನ್ ರಾಮಚಂದ್ರ ಅವರ ಮೂರನೆಯ ಕಥಾಸಂಕಲನ. ಹಕ್ಕಿ ಎಲ್ಲಿ ಬೇಕಾದರೂ ಬೀಜವನ್ನು ಚೆಲ್ಲಬಹುದು. ಇದು ಅಮೂರ್ತತೆ. ಆದರೆ ಆ ಬೀಜ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದು ಅದು ಟಿಸಿಲೊಡೆಯುವಲ್ಲಿಂದ. ಆ ಪ್ರಕ್ರಿಯೆ ನೆಲದ ಮೇಲೆಯೇ ಆಗಬೇಕೆಂದೇನಿಲ್ಲ. ಮರದ ಮೇಲೂ ಬೀಜ ಮೊಳಕೆಯೊಡೆಯಬಹುದು. ಇದು ಅದ್ಭುತವೂ ಅಲ್ಲ, ಅಗೋಚರವೂ ಅಲ್ಲ. ಎಲ್ಲಿ ಮೊಳಕೆಯೊಡೆಯುವುದಕ್ಕೆ ಅವಕಾಶವಿದೆಯೋ ಅಲ್ಲಿಯೇ ಗಿಡವಾಗಬಹುದು. ಆದರೆ ಅದರ ಮೂಲವನ್ನು ಶೋಧಿಸುವುದು ಬಹಳ ಕಷ್ಟ. ಅದು ಯಾವ ಮರದ ಬೀಜ? ಆ ಬೀಜ ಅಲ್ಲಿಯೇ ಗಿಡವಾಗಿ ಬೆಳೆಯುವುದೆ? ಆ ಬೀಜಕ್ಕೆ ಆಸರೆಯಾಗುವ ಮರ ಕೊನೆಯವರೆಗೂ ಗಿಡವನ್ನು ತಾಳಿಕೊಳ್ಳುವುದೆ? ಇದು ಅಸ್ಪಷ್ಟ. ಹಾಗೆಯೇ ಇಲ್ಲಿಯ ಕಥೆಗಳ ಸೆಕ್ಯೂಲರಿಸಂ. ಹುಟ್ಟುವುದು ಎಲ್ಲಿಯೋ ಬೆಳೆಯುವುದು ಇನ್ನೆಲ್ಲಿಯೋ? ಆದರೆ ಅವೆರಡರ ನಡುವೆ ಹುಟ್ಟಿಕೊಳ್ಳುವ ಕುತೂಹಲವೇ ಹುಡುಕಾಟವಾಗಿ ಇಲ್ಲಿಯ ಕಥೆಗಳಲ್ಲಿ ಗೋಚರಿಸುತ್ತದೆ. ಅದು ಕಳೆದುಕೊಂಡ ಸಂಬಂಧಗಳ ಹುಡುಕಾಟವಿರಬಹುದು, ಬಾಲ್ಯದ ಹುಡುಕಾಟವಿರಬಹುದು. ಒಟ್ಟು ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೋರಾಟ ಸಾಧಾರಣ ಎಲ್ಲಾ ಕಥೆಗಳಲ್ಲಿಯು ಕಾಣಸಿಗುತ್ತದೆ.
ಕಥೆಗಳನ್ನು ಓದುತ್ತಲೇ ಎಲ್ಲೋ ಕೈ ಬಿಟ್ಟು ಹೋಗುವಂತಹ ತವಕಗಳು ಇಲ್ಲಿಯ ಪಾತ್ರಗಳಲ್ಲಿ ಕಾಣುತ್ತಾವಾದರೂ, ಪಾತ್ರಗಳಲ್ಲಿ ಜಾತೀಯತೆಯನ್ನು ಗುರುತಿಸಿಕೊಂಡು ಜಾತ್ಯಾತೀತವನ್ನು ಮೀರುವ ಪ್ರಯತ್ನ ಇಲ್ಲಿಯದಾಗಿದೆ. ಹಾಗಾಗಿ ರಾಬರ್ಟ್ ಪದ್ಮರಾಜನಾಗಲಿ, ಭಾರತಿಪುತ್ರನ್, ಇಳಾಪೈ ಪಾತ್ರಗಳಿಗೆಲ್ಲಾ ಜಾತೀಯತೆ ಮುಖ್ಯವೆನಿಸುವುದಿಲ್ಲ. ಇವು ಬದುಕನ್ನು ಕಟ್ಟಿಕೊಳ್ಳುವಲ್ಲಿ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ತುಡಿತಕ್ಕೊಳಗಾಗುತ್ತಲೇ ಇರುತ್ತವೆ.
`ಹಕ್ಕಿ ಚೆಲ್ಲಿದ ಬೀಜ', `ಧೀಯೋಯನ' ಕಥೆಗಳನ್ನು ಓದುವಾಗ ಜನಪ್ರಿಯ ಶೈಲಿಯ ಒಂದು ಅಂಚಿನಲ್ಲಿ ನಿರೂಪಣೆ ಸಾಗುತ್ತದಾದರೂ, ಅವಕ್ಕಿಂತಲೂ ಮಿಗಿಲಾಗಿ ಅವುಗಳಲ್ಲಿ `ಸಂಥಿಂಗ್' ಇದೆ ಅನಿಸದಿರದು. ಧೀಯೋಯೊನ ಕಥೆಯ ಹುಡುಕಾಟದಲ್ಲಿ ಕೊನೆಗೆ ಸಿಗುವುದು ನಿರಾಶೆಯಾದರೂ ಆ ನಿರಾಶೆಯೆನ್ನುವುದು ಸಾವಿನವರೆಗೂ ಕಾಡುವ ಮತ್ತು ಅನ್ಯ ದಾರಿಯಲ್ಲಿ ಸಾಗಿದ ಪರಿಗೆ ಶಾಪವೇನೋ ಅನ್ನುವ ರೀತಿಯಲ್ಲಿ ಭಾರತಿಯನ್ನು ಅಂತರ್ಮುಖಿಯನ್ನಾಗಿಸುವ ಹಾಗಿದೆ. ಅವಳ ಪ್ರೀತಿಯ ಸಾಕ್ಷ್ಯವೊಂದು ಶೋಚನೀಯ ಸ್ಥಿತಿಯಲ್ಲಿರುವುದು ಎಂತಹ ಓದುಗನ ಮನಸ್ಸನ್ನಾದರೂ ಸ್ವಲ್ಪ ಮಟ್ಟಿಗೆ ಅಲ್ಲಾಡಿಸಿ ಬಿಡುತ್ತದೆ. ಹಾಗೆಯೇ ಈ ಕಥೆ ಗಂಭೀರವಾಗಿ ಓದಿಸಿಕೊಳ್ಳುತ್ತಲೇ ತಟ್ಟನೆ ಸಿನಿಮೀಯತೆಗೆ ವಾಲುವುದರಿಂದ ಕೊಂಚ ಇತರೆ ಕಥೆಗಳ ಜೊತೆಗೆ ತುಲನಾತ್ಮಕವಾಗಿ ನೋಡುವುದಕ್ಕೆ ಅಸಾಧ್ಯವೆನಿಸುತ್ತದೆ. ಈ ಕಥೆಯಲ್ಲಿ ಭಾರತಿ ಅವಳ ಕ್ಲಾಸ್‌ಮೇಟ್ ಉನ್ನತ ಸ್ಥಾನದಲ್ಲಿರುವ ಶಂಕರನ ಕ್ವಾರ್ಟಸ್‌ಗೆ ಅವನ ಅನುಮತಿಯಿಲ್ಲದೆ ಬಂದು ಅವನನ್ನೇ ಅತಿಥಿಯ ರೂಪದಲ್ಲಿ ಕ್ಯಾರ್ ತೆಗೆದುಕೊಳ್ಳುವುದು. ಇದು ತೀರ ಸಿನಿಮೀಯವಾಗಿ ತೋರುತ್ತದೆ. ಆದರೂ ಇದೊಂದು ನೀಳ್ಗತೆಯಾಗಿ ಮತ್ತು ಕಥನ ಶೈಲಿಯಲ್ಲಿ ವಿಭಿನ್ನತೆಯಿರುವುದರಿಂದ ಕಥೆಯ ಉತ್ತರಾರ್ಧ ಪರಿಣಾಮಕಾರಿಯಾಗಿ ಮೂಡಿಬಂದಿರುವುದರಿಂದ ಮಗುವಿನಂತಹ ಮಗನ ಪಾತ್ರ ಓದುಗನ ಮನದಲ್ಲಿಯೇ ಉಳಿದು ಬಿಡುತ್ತದೆ.
ಸಿ ಎನ್ ರಾಮಚಂದ್ರ ಅವರ ಕಥೆಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಕಥೆಯ ಬೆಳೆಯುತ್ತಾ ಹೋದ ಹಾಗೆ ಕಥೆಯಲ್ಲಿ ಯಾವುದು ಮುಖ್ಯ ಅನಿಸುವುದಿಲ್ಲವೋ, ಅದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿ `ನಿಕ್ಷೇಪ' ಕಥೆ ತುಸು ವಿಭಿನ್ನವಾಗಿ ನಿಲ್ಲುತ್ತದೆ. ಇದಕ್ಕೆ ಆ ಕಥೆ ನಡೆಯುವ ಕಾಲಘಟ್ಟವೂ ಕಾರಣವಾಗಿರಬಹುದು. ಇಲ್ಲಿಯೂ ಮನುಷ್ಯ ಸದಾ ತನ್ನ ನಿಕ್ಷೇಪವನ್ನು ಕಂಡುಕೊಳ್ಳುವಲ್ಲಿ ಮಾತ್ರ ತೊಡಗಿರುತ್ತಾನೆಯೆನ್ನುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಗೊಡ್ಡಾರ್ಡ್‌ನ ಹೆಸರು ಪ್ರತೀ ವಾಕ್ಯದಲ್ಲಿಯೂ ಪುನರಾವರ್ತೆನೆಯಾಗಿ ಇಂಗ್ಲೀಷ್ ಕಥಾ ಶೈಲಿಯನ್ನು ನೆನಪಿಸುತ್ತದೆ.
ಅತಂತ್ರವಾಗಿ ಬಿಡುವ ಮನುಷ್ಯನೊಬ್ಬನ ಚಿತ್ರಣವನ್ನ ನೀಡುವ `ಸಮಾಧಿಯ ಮೇಲೊಂದು ಹೂವು' ಸಂಬಂಧವಿರದ ವ್ಯಕ್ತಿಯೊಬ್ಬನಿಗೆ ಜವಾಬ್ದಾರಿಯನ್ನು ಹೊರುವ ಕಾಯಕದ ನಡುವೆ ಎಲ್ಲವನ್ನೂ ಕಳೆದುಕೊಳ್ಳುವ ನಿರಾಳತೆಯಾದರೆ, `ಮೊತ್ತ' ಲಘು ದಾಟಿಯಲ್ಲಿ ಸಾಗುವ ಗಂಭೀರ ವಾಸ್ತವದ ಚಿತ್ರಣವಾಗಿದೆ. ರಾಮಚಂದ್ರ ಅವರ ಕಥೆಗಳ್ಳಲ್ಲಿಯ ಪಾತ್ರಗಳೆಲ್ಲವೂ ವಾಸ್ತವದಲ್ಲಿ ಕಾಣಸಿಗುವ ಪಾತ್ರಗಳಂತೆ ಕಂಡರೂ ಇಲ್ಲಿ ಕಥೆಗಾರ ಆ ಪಾತ್ರಗಳ ಒಳಕ್ಕಿಳಿದು ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸುವಲ್ಲಿ ಸಫಲತೆಯನ್ನು ಸಾಧಿಸಿದ್ದಾರೆ. ಹಾಗಾಗಿಯೇ `ಹುತ್ತಗಟ್ಟಿತು ಚಿತ್ತ'ದ ನಾಗವೇಣಿಯಾಗಲಿ, `ಇಳೆ ನಿಮ್ಮ ಧ್ಯಾನ' ಕಥೆಯ ಇಳಾಭಟ್ ಪಾತ್ರವಾಗಲಿ ಮನೋಜ್ಞವಾಗಿ ಮೂಡಿ ಬರುವುದಕ್ಕೆ ಸಾಧ್ಯವಾಗಿದೆ. ಹೆಣ್ಣಿನ ಒಳ ಮನಸ್ಸು, ಆಕೆಯ ಅಸಹಾಯಕತೆ, ಹತಾಶೆ, ಸೇಡು, ಸೆಡವುಗಳನ್ನ ಬಹಳ ಮಾರ್ಮಿಕವಾಗಿ ಚಿತ್ರಿಸಿರುವುದರಿಂದ ಕಥೆಗಳು ಮೆಲುಕು ಹಾಕುವಂತಿದೆ.
ಕೆಲವೊಮ್ಮೆ ಸಿನಿಮಾಗಳಲ್ಲಿ ಹಾಡುಗಳು ಕಥೆಯ ಬೆಳವಣಿಗೆಗೆ ಪೂರಕವಾದಂತೆ ಈ ಸಂಕಲನದ ಕೆಲವು ಕಥೆಗಳಲ್ಲಿ ಬಳಸಿದ ಉಪಮೆಗಳು ಕಥೆಯ ಮುಂದುವರಿದ ಭಾಗದಂತೆ ಕಾಣುತ್ತವೆ. ಇದು ಕಥನ ಶೈಲಿಯ ತಂತ್ರವಾಗಿ ಬಹಳ ಪರಿಣಾಮಕಾರಿಯಾಗಿದೆ. ಉದಾಹರಣೆಗೆ `ಧೀಯೋಯೊನ' ಕಥೆಯ ಭಾರತಿ ಉಲ್ಲಾಳದಲ್ಲಿದ್ದಾಗಿನ ನೆನಪುಗಳನ್ನು ಮಾಡಿಕೊಂಡು, ಈ ಕಡಲಲ್ಲಿ ಅದೆಷ್ಟು ಉಬ್ಬರ... ಅದೆಷ್ಟು ಇಳಿತ... ನೇತ್ರಾವತಿಯಲ್ಲಿ ಅದೆಷ್ಟು ಬಾರಿ ನೆರೆ... ಧಾರಾಕಾರ ಮಳೆ... ಅನ್ನುವ ಮಾತುಗಳು ಅವಳ ಬದುಕಿನೊಂದಿಗಿನ ಹೋಲಿಕೆ. ಈ ಸಾಲುಗಳು ಅಲ್ಲಿಯ ಆಗಿನ ಖುಷಿಯನ್ನ ನಿರೂಪಿಸುತ್ತವೆ.
`ಆತನನ್ನು ಕೊಂಡಾಡಿರಿ' ಮತ್ತು `ಏನಿದೇನು ಪ್ರಭುವೇ...?' ಕಥೆಗಳು ಅಧ್ಯಾತ್ಮದತ್ತ ಹೊರಳುವ ಕಥೆಗಳಾಗಿ ಕಾಣುತ್ತವೆ. `ಏನಿದೇನು ಪ್ರಭುವೇ...?' ಕಥೆಯಲ್ಲಿ ಬದುಕು ಸುಳ್ಳು ಸತ್ಯಗಳ ಪ್ರಪಂಚವನ್ನು ಮಲ್ಲಪ್ಪನಿಗೆ ತೋರಿಸುತ್ತದೆ. ಇದೂ ವಾಸ್ತವದಲ್ಲಿ ನಡೆಯುವ ಘಟನೆಯೇ ಅನ್ನುವ ಹಾಗಿದೆ.
ಆದ್ದರಿಂದ `ಹಕ್ಕಿ ಚೆಲ್ಲಿದ ಬೀಜ' ಓದಿ ಖುಷಿಪಡಬಹುದಾದಂತಹ ಕಥೆಗಳ ಸಂಕಲನ. ಈ ಕೃತಿಗೆ ಎಸ್. ಆರ್ ವಿಜಯಶಂಕರ್ ಅವರ ಮುನ್ನುಡಿಯಿದೆ.

Read more!

Thursday, March 8, 2012

ವೇದವತಿ ನದಿಯಲ್ಲ, ನದಿಯೇ!


ಇತ್ತೀಚೆಗೆ ಬಿಡುಗಡೆಗೊಂಡ ಒಂದು ಅಪರೂಪದ ಕೃತಿ ಡಾ| ಎಚ್. ಎಸ್. ವೆಂಕಟೇಶ ಮೂರ್ತಿಯವರ `ವೇದವತಿ ನದಿಯಲ್ಲ'. ಈ ಕೃತಿ ಎರಡು ವಿಭಿನ್ನ ನೆಲೆಗಳಲ್ಲಿ ಅಪರೂಪದ ಕೃತಿಯಾಗಿ ಕಾಣಿಸುತ್ತದೆ. ಒಂದನೆ ಕಾರಣ ಇದು ಮೂವತ್ತು ವರ್ಷಗಳ ಹಿಂದೆ ಬರೆದಿರುವುದು ಮತ್ತು ಇತ್ತೀಚೆಗೆ ಯಾವ ಮಾರ್ಪಾಟಿಲ್ಲದೆ ಪ್ರಕಟವಾಗಿರುವಂತದ್ದು. ಇನ್ನೊಂದು ಕಾರಣ ಕವಿತೆಗಳಲ್ಲಿಯೇ ಎಲ್ಲವನ್ನೂ ಹೇಳಿಬಿಡುವ ಕವಿಯೊಬ್ಬನ ಕಾದಂಬರಿಯೆನ್ನುವ ಕುತೂಹಲಕ್ಕೆ. ಹಾಗಾಗಿ ಈ ಕೃತಿಯನ್ನು ಓದುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇದನ್ನು ಬರೆದ ಕಾಲಘಟ್ಟ. ಅಂದರೆ ಮೂವತ್ತು ವರ್ಷಗಳ ಹಿಂದಿನ ಜೀವನ ಶೈಲಿಯನ್ನ ಗಮನದಲ್ಲಿಟ್ಟುಕೊಂಡು ಓದಬೇಕಾಗುತ್ತದೆ. ಇದು ಮೂವತ್ತು ವರ್ಷಗಳ ಹಿಂದೆಯೆ ಬರೆದ ಕೃತಿಯೆನ್ನುವುದನ್ನು ಎಚ್.ಎಸ್.ವಿ ಅವರು `ಲೇಖಕರ ಮಾತು' ವಿನಲ್ಲಿಯೂ ಹೇಳಿಕೊಂಡಿದ್ದಾರೆ.
ನದಿ ಹರಿಯುವ ಭಾವದ ಹಂಗಿನ ಜೊತೆಗೆ ಸಾಗುವ ಕೃತಿ `ವೇದವತಿ ನದಿಯಲ್ಲ'. ವೇದವತಿ ನದಿಯೇ, ಈ ಕೃತಿಯ ನಾಯಕಿಯಾಗಿ ಕಾಣಿಸುವ ರಂಗಲಕ್ಷ್ಮೀ ನದಿಯಂತೆ ಯಾರಿಂದಲೂ ಯಾವ ಪ್ರತಿಫಲಾಭೀಷ್ಟಗಳನ್ನು ಎದುರು ನೋಡದೆ ಮತ್ತು ಎದುರಾಗುವ ಅಡೆತಡೆ, ತಿರುವುಗಳನ್ನು ದಿಟ್ಟವಾಗಿ ನುಗ್ಗಿ, ಗಮ್ಯವೆನಿಸುವ ಸಾಗರವನ್ನು ತಲುಪುವವಳು. ಇದು ಕಾದಂಬರಿಯ ಚೌಕಟ್ಟು. ಆದರೆ ಈ ಕಾದಂಬರಿಗೆ ಬಳಸಿಕೊಂಡ ಕ್ಯಾನ್‌ವಾಸ್ ಒಂದು ಮಹತ್ವದ ಕಾದಂಬರಿಯಾಗಿಸುವ ಹಾಗಿದ್ದರೂ ಪಾತ್ರ ಪೋಷಣೆ ಮತ್ತು ಸನ್ನಿವೇಶಗಳಿಗೆ ನಿರ್ಬಂಧ ಹಾಕಿಕೊಂಡಿರುವುದರಿಂದ ಕೃತಿ ಸೊರಗಿದಂತೆ ಕಾಣುತ್ತದೆ. ಹಾಗಂತ ರಂಗಪ್ಪ ಮತ್ತು ಅವನ ಮಗಳು ರಂಗಲಕ್ಷ್ಮೀಯ ಪಾತ್ರಗಳು ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಸ್ವಲ್ಪ ಮಟ್ಟಿಗಾದರೂ ಕೃತಿಗೆ ನ್ಯಾಯ ಒದಗಿಸಿಕೊಡುತ್ತವೆ.
ಇಲ್ಲಿ ಕ್ಲಿಕ್ಕಾಗುವ ಪಾತ್ರಗಳು ರಂಗಲಕ್ಷ್ಮೀ ಮತ್ತು ರಂಗಪ್ಪ. ರಂಗಪ್ಪ ಆಗಿನ ಪರಿಸ್ಥಿತಿಗೆ ಹೆಣ್ಣು ಸಂಪ್ರದಾಯವನ್ನು ಮುರಿದರೆ ಸಮಾಜದಲ್ಲಿ ಆತನ ಸ್ಥಾನಮಾನಕ್ಕೆ ಕುಂದಾಗಬಹುದೆನ್ನುವ ಧೋರಣೆಯಿಂದ ರಂಗಲಕ್ಷ್ಮೀಗೆ ಮರುಮದುವೆಯನ್ನು ನಿರಾಕರಿಸುತ್ತಾನೆ. ಆದರೆ ಆತ ಕಾಕತಾಳಿಯವೆಂಬಂತೆ ಒಬ್ಬ ಹೆಂಡತಿಯ ಕಾಲಾ ನಂತರ ಇನ್ನೊಬ್ಬಳನ್ನು ಹೀಗೆ ಮೂರು ಮದುವೆಯಾಗುತ್ತಾನೆ. ಇಲ್ಲಿ ಮಗಳ ವೈಧವ್ಯದ ಬದುಕು ಅವನಿಗೆ ಏನೂ ಅನಿಸುವುದಿಲ್ಲ. ಹಾಗಂತ ಅವನು ಕೆಟ್ಟವನಾಗಿ ಉಳಿಯುವುದು ಓದುಗನ ಮನಸ್ಸಿನಲ್ಲಿ ಮಾತ್ರ.
ಈ ಎರಡು ಪಾತ್ರಗಳು ಸತ್ವ ಕಳೆದುಕೊಳ್ಳುವಂತದ್ದು ಕಾದಂಬರಿಯ ಉತ್ತರಾರ್ಧದಲ್ಲಿ. ಇಲ್ಲಿ ಸಿನಿಮೀಯ ಬದಲಾವಣೆಯೊಂದಿಗೆ ಕಾದಂಬರಿ ಓಡುತ್ತದೆ.
ನದಿ ಸಾಗರ ಸೇರುವುದಕ್ಕೂ, ಸಾಗರದ ಉಬ್ಬರವಿಳಿತಗಳೂ ಕಾರಣವಾಗುತ್ತವೆ. ಇಲ್ಲಿ ರಂಗಲಕ್ಷ್ಮೀ ಚಿದಂಬರನನ್ನು ಸೇರಲು ಆಕೆಯ ಮಗು ಪಾರ್ವತಿಯ ಅಸೌಖ್ಯ ಒಂದು ಹೆಳೆಯಾದರೂ ಚಿದಂಬರನನ್ನು ಒಪ್ಪಿಕೊಳ್ಳುವಲ್ಲಿ ಯಾವ ತಡೆಯೂ ಎದುರಾಗುವುದಿಲ್ಲ. ಇಲ್ಲಿ ಬಹಳಷ್ಟು ಗಮನಸೆಳೆಯುವ ಸನ್ನಿವೇಶ ಮಗಳ ಆರೈಕೆಯಲ್ಲಿ ಚಿದಂಬರನ ಮನೆಯಲ್ಲಿಯೇ ಉಳಿಯುವ ರಂಗಲಕ್ಷ್ಮೀಯನ್ನು ಕರೆದುಕೊಂಡು ಹೋಗುವುದಾಗಿ ಅವಳ ತಂದೆ ರಂಗಪ್ಪ ಪತ್ರ ಬರೆಯುತ್ತಾನೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಚಿದಂಬರನಿಗೆ ಅವಕಾಶ ಕೊಡದೆ ಅವಳು ಪರೋಕ್ಷವಾಗಿ ತಾನೆ ಉತ್ತರಿಸುವುದಾಗಿ ತಿಳಿಸುತ್ತಾಳೆ. ಕಾದಂಬರಿಯ ಅಂತ್ಯದಲ್ಲಿ ಅವಳು ಚಿದಂಬರನ ಮನೆಯಲ್ಲಿ ಅಸ್ತವ್ಯಸ್ತವಾದ ಹಾಸಿಗೆಯನ್ನು ಸರಿಪಡಿಸುವ ದೃಶ್ಯ. ಕಾದಂಬರಿ ಇಲ್ಲಿಗೆ ಮುಗಿಯುತ್ತಿದ್ದರೆ ಓದುಗನ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತಿತ್ತೇನೋ. ರಂಗಲಕ್ಷ್ಮೀಯ ಈ ಅಚಲ ನಿರ್ಧಾರ ಸಾಮಾಜಿಕ ಕಟ್ಟುಪಾಡಿನಿಂದ ಹೊರಗೆ ಬರುವಂತೆ ಮೂಡಿರುವುದರಿಂದ ಕೃತಿಗೆ ಹೆಚ್ಚಿನ ತೂಕ ಬಂದಿದೆಯೆನ್ನಲಡ್ಡಿಯಿಲ್ಲ.
ಕಾದಂಬರಿಯ ಕೆಲವು ಮುಖ್ಯ ಪಾತ್ರಗಳಾದ ಶಂಕರ, ಗೌಡ, ಚಿದಂಬರ ಇವರೆಲ್ಲಾ ಹಾಗೆ ಬಂದು ಹೀಗೆ ಹೋಗುವ ನಾಟಕದ ಪಾತ್ರಗಳಾಗಿ ಗೋಚರಿಸುತ್ತಾರೆ. ಈ ಯಾವ ಪಾತ್ರಗಳು ಬೆಳವಣಿಗೆ ಕಾಣುವುದೇ ಇಲ್ಲ. ಅದರಂತೆಯೇ ಇಲ್ಲಿಯ ಇನ್ನೊಂದು ಮುಖ್ಯ ನಾಟಕೀಯ ಬೆಳವಣಿಗೆಯಾಗಿ ಪ್ರತೀ ಬಾರಿಯೂ ಮಲ್ಲಪ್ಪನ ಹೆಂಡತಿಯರು ಸಾಯುವಾಗ ಧುತ್ತನೆ ಅವನಿಗೆ ಇನ್ನೊಂದು ಸಂಬಂಧ ತಯಾರಾಗಿರುವುದು ಕಾಣುತ್ತೇವೆ. ಇವುಗಳೆಲ್ಲಾ ಪುಟ ವ್ಯಾಪ್ತಿಯಲ್ಲಿ ರಚಿಸಿದಂತೆ ಕಾಣಿಸುತ್ತದೆ.
ರಂಗಲಕ್ಷ್ಮೀ ಆಧುನಿಕ ಮಹಿಳೆಯ ಹಾಗೆ ದಿಟ್ಟ ನಿಲುವಿನ ಹೆಣ್ಣು ಅನ್ನುವುದನ್ನು ಮೂವತ್ತು ವರ್ಷಗಳ ಹಿಂದೆಯೇ ಬೆಳೆಸಿರುವುದು ಗಮನಾರ್ಹ. ಆಗಿನ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಚಿದಂಬರನನ್ನು ಒಪ್ಪಿಕೊಳ್ಳುವ ಅವಳ ಧೈರ್ಯ ಕಾದಂಬರಿಯನ್ನು ಸುಖಾಂತದಲ್ಲಿ ಮುಗಿಸುವುದಕ್ಕಿಂತಲೂ ಓದುಗನಿಗೆ ಬೆರಗನ್ನು ನೀಡುತ್ತದೆ. ಚಿದಂಬರನ ಬಗ್ಗೆ ಅವಳಿಗಿರುವ ಒಲವನ್ನು ನೇರವಾಗಿ ಎಲ್ಲೂ ಹೇಳದೆ ಅಚಾನಕ್ಕಾಗಿ ಅವನನ್ನು ಅಪ್ಪಿಕೊಳ್ಳುವ ಸಂದರ್ಭದಲ್ಲಿ ಮೌನವೇ ಓದುಗನಿಗೆ ಎಲ್ಲವನ್ನೂ ಹೇಳಿಬಿಡುವಂತೆ ತೋರುತ್ತದೆ.
ಆಧುನಿಕತೆಯ ಸೋಂಕಿಲ್ಲದ ಹಳ್ಳಿಯ ಚಿತ್ರಣ, ಬದುಕಿನ ರೀತಿ, ಹಳ್ಳಿಗರ ಸ್ವಾಭಿಮಾನ, ಮೂಲ ಸೌಕರ್ಯಗಳಿಲ್ಲದ ವ್ಯವಸ್ಥೆ, ದ್ವೇಷ ಸಾಧನೆ, ಎಲ್ಲೂ ಮಿತಿ ಮೀರದೆ ಮತ್ತು ವ್ಯತಿರೀಕ್ತಗಳೆನಿಸದೆ ಕಾದಂಬರಿಯನ್ನು ಆಸ್ವಾದಿಸುವಂತೆ ಮಾಡುತ್ತದೆ.
ಎಚ್. ಎಸ್. ವಿ ಅವರ ಕಾವ್ಯಗಳ ಮಾದುರ್ಯತೆಯ ಹಾಗೆಯೇ ಈ ಕೃತಿಯೂ ಒಂದು ಕ್ಲಾಸಿಕಲ್ ವರ್ಕ ಆಗಿ ಮೂಡಿಬಂದಿರುವುದರಿಂದ ಒಮ್ಮೆಯಾದರೂ ಓದಬೇಕೆನಿಸುತ್ತದೆ. ಈ ಕೃತಿಗೆ ಎನ್. ಎಸ್. ಶ್ರೀಧರಮೂರ್ತಿಯವರ ಮುನ್ನುಡಿ ಮತ್ತು ಜೋಗಿಯವರ ಬೆನ್ನುಡಿಯಿದೆ.

Read more!

Sunday, February 12, 2012

ಹಲವು ರಂಗಗಳ ‘ವೇಷ’


ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕೃತಿಗಳನ್ನು ರಚಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಪ್ರಭಾಕರ ನೀರ್‌ಮಾರ್ಗ ಅವರ ಹದಿನೇಳನೆಯ ಕೃತಿ ‘ವೇಷ’. ದಕ್ಷಿಣ ಕನ್ನಡದ ಸಾಂಸ್ಕೃತಿಕ, ಸಾಮಾಜಿಕ ಜನಜೀವನವನ್ನ ಬಹಳ ಮಾರ್ಮಿಕವಾಗಿ ಚಿತ್ರಿಸುವ ಇವರ ಕೃತಿಗಳಲ್ಲಿ ದಾಯಿತ್ವ, ತಿಲ್ಲಾನ, ಧೀಂಗಿಣ, ಮಂಗಳೂರು ಕ್ರಾಂತಿ, ಶಿಶಿರ, ಪ್ರತಿಶೋಧ, ಜಾತ್ರೆ ಮತ್ತು ತಂಬಿಲಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಾದೇಶಿಕ ಹಿನ್ನಲೆಯಲ್ಲಿಯೇ ಮೂಡಿಬಂದವುಗಳು. ಆದರೆ ‘ವೇಷ’ ಕಾದಂಬರಿ ಇವುಗಳ ನಡುವೆ ತುಸು ವಿಭಿನ್ನವಾಗಿ ರಚಿಸಿದ ಕಾದಂಬರಿಯಂತೆ ಕಂಡರೂ, ಇಲ್ಲಿಯ ಪಾತ್ರಗಳಿಗೆ ಯಾವುದೇ ಪ್ರಾಮುಖ್ಯತೆಯಿಲ್ಲದೆ ಕೇವಲ ಬಣ್ಣದ ‘ವೇಷ’ ಮತ್ತು ಬದುಕಿನ ವೇಷದ ಸುತ್ತಾ ಕಥೆ ಹೆಣೆದುಕೊಂಡಿದೆಯೇನೋ ಅನಿಸುತ್ತದೆ.

ಕಥೆಯ ಆರಂಭದಲ್ಲಿ ನವರಾತ್ರಿಯ ಸಮಯದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ವೇಷದ ಬಗ್ಗೆ ‘ಎಪಿಲೋಗ್’ನ ಹಾಗೆ ಪ್ರಸ್ತಾಪಿಸುತ್ತಾ ದಕ್ಷಿಣ ಕನ್ನಡದಲ್ಲಿ ನವರಾತ್ರಿಯಲ್ಲಿ ಕಾಣಿಸುವ ವೇಷಗಳ ಬಗ್ಗೆ ವಿವರಗಳನ್ನು ನೀಡುತ್ತಾ ಕೃತಿಕಾರರು ಕಥೆಯೊಳಗೆ ಇಳಿಯುತ್ತಾರೆ. ಇಲ್ಲಿ ಆ ಬಣ್ಣದ ವೇಷಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವ ಓದುಗನ ನಿರೀಕ್ಷೆಯನ್ನು ಹುಸಿಯಾಗಿಸುತ್ತಾ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಉಳಿದ ಬಣ್ಣದ ಲೋಕಗಳಾದ ಯಕ್ಷಗಾನ, ನಾಟಕರಂಗಗಳಿಗೂ ಪಾತ್ರಗಳ ಮೂಲಕ ಇಳಿಯುತ್ತಾ ಹೊಸದೇನೋ ಹೇಳುತ್ತಾ ಕಥೆ ಸಾಗುತ್ತದೆ. ಇಲ್ಲಿ ಮಾರ್ನಮಿಯ ಹುಲಿವೇಷದ ವಿವರಣೆಗಳನ್ನು ಬಿಟ್ಟರೆ ಮತ್ತೆಲ್ಲವೂ ನಾಟಕ ಮತ್ತು ಯಕ್ಷಗಾನದ ಬಗೆಯೇ ಹೆಚ್ಚು ಒತ್ತುಕೊಟ್ಟು ಬರೆದಂತೆ ಕಾಣಿಸುತ್ತದೆ. ‘ಧೀಂಗಿಣ’ ಯಕ್ಷಗಾನದ ಒಳಹೊರಗನ್ನು ತಿಳಿಸುವ ಸಮಾಜಮುಖಿಯಾದ ಕಾದಂಬರಿಯಾದರೂ ಅಲ್ಲಿ ನೀರ್‌ಮಾರ್ಗ ಅವರ ‘ಪೇಪರ್ ವರ್ಕ್’ ಎದ್ದು ಕಾಣಿಸುತ್ತದೆ. ‘ತಿಲ್ಲಾನ’ ಕಾದಂಬರಿಯಲ್ಲಿ ಭೂತದಕೋಲದ ವಿವರಗಳಿರುವಂತೆ ‘ವೇಷ’ದಲ್ಲಿಯೂ ಅಂತಹುದೊಂದನ್ನು ಹುಡುಕಿದರೆ ಸಿಗಲಾರದೆನ್ನುವುದು ನನ್ನ ಅನಿಸಿಕೆ. ಹಾಗಂತ ಕಾದಂಬರಿ ಏನನ್ನೂ ಹೇಳದೆ ಸುಮ್ಮನಿರುವುದಿಲ್ಲ.

‘ವೇಷ’ ಕಾದಂಬರಿಯ ಪ್ಲಸ್ ಪಾಯಿಂಟ್ ಇಲ್ಲಿ ಚಿತ್ರಿತವಾಗಿರುವ ನಾಲ್ವರು ಯುವಕರ ಚಿತ್ರಣ. ಸೆಲೂನಿನ ವೆಂಕಣ್ಣ, ಹೊಟೇಲ್‌ನ ಕೆಲಸ ಮಾಡಿಕೊಂಡಿರುವ ಗಿರಿಯಪ್ಪ, ಟೈಲರ್ ವೃತ್ತಿಯ ರಮೇಶ, ವೆಂಕಪ್ಪನಿಗೆ ಪ್ರತಿಸ್ಪರ್ಧಿಯಂತಿದ್ದ ಶಾಮಣ್ಣ ಇವರೆಲ್ಲ ಯೌವನ ಸಹಜವಾದ ಕನಸುಗಳನ್ನು ಕಾಣುತ್ತಾ ತಂದೆ, ತಾಯಿ, ಹಿರಿಯರನ್ನು ಮೀರಿ ತಮ್ಮ ತಮ್ಮ ಅಭಿಲಾಷೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತವರು. ಇವರೆಲ್ಲರ ಗುರಿಯೂ ಸಂಸ್ಕೃತಿಯತ್ತ ಚಾಚಿರುವುದು, ಕಳಚಬಹುದಾದ ಒಂದು ಕೊಂಡಿಯನ್ನು ಮತ್ತೆ ಬೆಸೆಯುವಲ್ಲಿ ಅಥವಾ ಅದನ್ನು ಮುಂದುವರಿಸಿಕೊಂಡು ಹೋಗಬಹುದಾದ ಪಾತ್ರಗಳಾಗಿ ಬಹು ಮುಖ್ಯವೆನಿಸುತ್ತವೆ. ಇಂದಿನ ರಾಕೇಟ್ ಯುಗದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ದೂರೀಕರಿಸುತ್ತಾ ಹೊಸ ಸಂಸ್ಕೃತಿಯ ಹುಡುಕಾಟದಲ್ಲಿ ಕಳೆದು ಹೋಗುತ್ತಿರುವ ವೆಂಕಣ್ಣ, ಗಿರಿಯಪ್ಪ, ಶಾಮ ಮತ್ತು ರಮೇಶರು ಅಳಿಯುತ್ತಿರುವ ಸಂಸ್ಕೃತಿಯ ಅವಿಭಾಜ್ಯ ಅಂಗದಂತಿರುವ ಯಕ್ಷಗಾನ, ನಾಟಕಗತ್ತ ಹೊರಳುತ್ತಾ, ಆ ಸಾಂಸ್ಕೃತಿಯ ಮುಂದಿನ ಪೀಳಿಗೆಯವರಂತೆ ಕಾಣುತ್ತಾರೆಂದರೆ ಅತಿಶಯವಲ್ಲ. ‘ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು’ ಅನ್ನುವಂತೆ ಹಳೆಯದನ್ನು ಬಿಡದೆ ಹೊಸ ಪೀಳಿಗೆ ಅಂತಹ ಸಂಸ್ಕೃತಿಯನ್ನು ಮುಂದುವರೆಸಿಕೊಂಡರೆ ಆ ಸಂಸ್ಕೃತಿಯನ್ನು ಸಂಗ್ರಹಾಲದಲ್ಲಿಯ ವಸ್ತುಗಳಂತೆ ನೋಡಬೇಕಾಗಿಲ್ಲ ಅಥವಾ ದಾಖಲೆಗಳಿಂದ ನೋಡಿ ತಿಳಿದುಕೊಳ್ಳುವ ಅನಿವಾರ್ಯತೆಯೂ ಬರಲಾರದು.

ಆದರೆ ಈ ಕೃತಿಯಲ್ಲಿ ಹಿರಿಯರು ಯಾರೂ ಯುವಕರ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಎಲ್ಲರೂ ಅವರ ಆಸೆ, ಆಕಾಂಕ್ಷೆಗಳಿಗೆ ಅಡ್ಡಿಯಾಗುವವರೆ. ಮಕ್ಕಳು ಹೊಸ ದಾರಿ ಹಿಡಿದರೆ ಸಂಸ್ಕೃತಿಯ ನಾಶವಾಗುವುದು ಹೌದಾದರೂ ಅಲ್ಲಿ ಹೊಸ ಸಂಸ್ಕೃತಿಯೊಂದು ಯಾಕೆ ಹುಟ್ಟಿಕೊಳ್ಳಬಾರದು? ಸಮಾಜಮುಖಿಯಾದರೆ ಎಲ್ಲರೂ ಕೆಟ್ಟು ಹೋಗುತ್ತಾರೆನ್ನುವ ಆತಂಕ ಪೋಷಕರಲ್ಲಿದ್ದರೂ, ತಾವು ಬಣ್ಣದ ಬದುಕನ್ನು ಕಂಡು ಆನಂದ ಪಡುವವರೆ. ಇಲ್ಲಿ ಮನೆಯವರ ವಿರೋಧವಿದ್ದರೂ ಯುವಕರೇನೂ ಸುಮ್ಮನಿರುವುದಿಲ್ಲ, ತಮ್ಮ ಸದಭಿರುಚಿಗೆ ತಕ್ಕಂತೆ ಅವರು ಬಣ್ಣದ ಬದುಕಿನತ್ತ ಮುಖ ಮಾಡುತ್ತಾರೆ. ಆದರೆ ಬಣ್ಣದ ಬದುಕು ಅವರನ್ನು ನಿರಾಕರಿಸುವುದಿಲ್ಲ. ಆದರೆ ಈ ಕೃತಿಯಲ್ಲಿ ಈ ನಾಲ್ಕು ಪಾತ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸೊರಗುತ್ತವೆ. ಸಮಾಜಮುಖಿಯಾದ ಯಾವ ಕಳಕಳಿಯೂ ಇಲ್ಲಿರದಿದ್ದರೂ ಸಾಂಸ್ಕೃತಿಕ ತಲ್ಲಣ ಮಾತ್ರ ಲೇಖಕನಲ್ಲಿ ಜಾಗೃತವಾಗಿರುವುದನ್ನು ಕಾಣುತ್ತೇವೆ. ಇದೇ ಜಾಗೃತಿ ಪಾತ್ರಗಳಲ್ಲಿಯೇ ಮೂಡಿ ಬರುತ್ತಿದ್ದರೆ ‘ವೇಷ’ ಇನ್ನಷ್ಟು ವಿಜೃಂಭಣೆಯಿಂದ ಕೂಡಿರುತ್ತಿತ್ತು.

ಸ್ತ್ರೀ ಪಾತ್ರಗಳಿಗೆ ಇಲ್ಲಿ ಪ್ರಾಮುಖ್ಯತೆ ಇಲ್ಲವೆನಿಸಿದರೂ ಇಲ್ಲಿ ಬರುವ ಶೈಲಶ್ರೀಯ ಪಾತ್ರ ಮಾತ್ರಾ ಮೆಚ್ಚುವಂತೆ ಇದೆ. ಸಿನಿಮಾದಂತಹ ಬಣ್ಣದ ಲೋಕಕ್ಕೆ ಇಳಿದರೂ ತನ್ನನ್ನು ತಾನು ಎಕ್ಸ್‌ಪೋಸ್ ಮಾಡಿಕೊಳ್ಳುವಲ್ಲಿ ಅವಳದ್ದು ಗಟ್ಟಿ ನಿರ್ಧಾರ. ಆ ಬಣ್ಣದಲೋಕದಲ್ಲಿದ್ದರೂ ರಂಗಭೂಮಿ ಕೈ ಬೀಸಿ ಕರೆದಾಗ ನಾಟಕದಲ್ಲಿ ಪಾತ್ರ ಮಾಡಲು ಒಪ್ಪಿಕೊಳ್ಳುವ ಅವಳ ಪಾತ್ರ ಒಂದು ನೈಜ್ಯ ಕಲಾವಿದೆಯೊಬ್ಬಳಿಗಿರುವ ಕಾಳಜಿಯನ್ನು ತೋರಿಸುತ್ತದೆ. ಇದು ಇಂದಿನ ಯುವ ಪೀಳಿಗೆಯ ನಟಿಯರಿಗೆ ರೋಲ್ ಮಾಡೆಲ್ ಆಗಿರುವುದು ಮೆಚ್ಚತಕ್ಕದ್ದು. ಇನ್ನುಳಿದಂತೆ ಇಲ್ಲಿ ಬರುವ ರಾಜೀವಿಯಾಗಲಿ, ಶ್ರೀಜಾಳಾಗಲಿ, ಕಾಮಿನಿಯಾಗಲಿ ಗಟ್ಟಿ ಪಾತ್ರಗಳಾಗಿ ಉಳಿಯುವುದಿಲ್ಲ. ವೆಂಕಣ್ಣನಂತಹ ಯುವಕ ಹೀರೋನೆನಿಸಿಕೊಂಡರೂ ಎರಡು ಪ್ರೇಮ ಪ್ರಕರಣಗಳಲ್ಲಿಯೂ ಸೋಲುಣ್ಣುವವನು. ಆದರೂ ಕೊನೆಯಲ್ಲಿ ಆದರ್ಶತೆಯನ್ನು ತೋರಿಸುವ ಅವನು ವಿವಾಹಬಂಧನಕ್ಕೆ ಸಿಲುಕುವುದು ‘ವೇಷ’ದ ನಾಟಕೀಯ ತಿರುವು ಆಗಿಬಿಡುತ್ತದೆ.

ಈ ಕಾದಂಬರಿಯಲ್ಲಿ ಗಮನಿಸಬಹುದಾದ ಮತ್ತೊಂದು ಮುಖ್ಯ ಅಂಶವೆಂದರೆ ಈ ಯುವಕರು ಪ್ರೀತಿಯಲ್ಲಿ ಬಿದ್ದರೂ ಯಾರೊಬ್ಬನೂ ಅದರಲ್ಲಿ ಗೆಲುವು ಕಾಣದಿರುವುದು ಕಾದಂಬರಿ ನಾಟಕೀಯತೆಯಿಂದ ಹೊರಗೆ ಬಂದಂತೆ ಕಾಣಿಸುತ್ತದೆ. ಇದು ಸಮಾಜದಲ್ಲಿ ಸಾಮಾನ್ಯವಾಗಿ ನಡೆಯುವ ಘಟನೆಗಳೆ. ಪ್ರೀತಿಸಿದ ಮೇಲೆ ಪರ‍್ಯವಸಾನ ಮದುವೆಯಲ್ಲೇ ಮುಗಿಯಬೇಕೆಂದೇನಿಲ್ಲವಲ್ಲ! ಗಿರಿಯಪ್ಪನನ್ನು ಹೊರತು ಪಡಿಸಿ ಮತ್ತೆಲ್ಲವೂ ಸೋಲುವ ಪ್ರೀತಿಗಳೆ ಇಲ್ಲಿ ಕಾಣಿಸುತ್ತವೆ.

ಕಾದಂಬರಿ ಮೊದಲಿನಿಂದ ಕೊನೆಯ ತನಕವೂ ಲವಲವಿಕೆಯಿಂದ ಓದಿಸಿಕೊಂಡು ಹೋಗುವುದಲ್ಲದೆ ಪ್ರಾದೇಶಿಕ ಭಾಷೆಯಿಂದಾಗಿ ಆಪ್ತವೆನಿಸುತ್ತದೆ. ಇಲ್ಲಿ ಪ್ರಯೋಗಿಸಿದ ಪ್ರಾದೇಶಿಕ ಪದಗಳ ಅನಿವಾರ್ಯತೆ ಕಥೆಗಿಲ್ಲವಾದರೂ ಕನ್ನಡಕ್ಕೆ ಅವುಗಳನ್ನು ಪರಿಚಯಿಸಿಕೊಟ್ಟಿರುವುದು ಶ್ಲಾಘನೀಯ. ಇಲ್ಲಿಯ ಕಥಾಹಂದರವು ಮೂರು ವಿಭಿನ್ನ ಕೋನಗಳಲ್ಲಿ ಹೊರಟು ಒಂದಕ್ಕೊಂದು ಕೊಂಡಿಯಿಲ್ಲದಂತಾಗಿ ಮೂರು ಭಾಗಗಳಲ್ಲಿ ಕಥೆಯನ್ನು ಓದಿದ ಅನುಭವವಾಗುತ್ತದೆ. ಎಲ್ಲಾ ಪಾತ್ರಗಳೂ ಕಥಾವಸ್ತುವಿನ ಜೊತೆಗೆ ಬೆಸೆದ್ದಿದ್ದರೆ ಕೃತಿ ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ.

ಪ್ರಭಾಕರ ನೀರ್‌ಮಾರ್ಗ ಅವರ ಕಾದಂಬರಿಗಳ ವಸ್ತು ವೈವಿಧ್ಯತೆಯಿಂದ ಸಂಗ್ರಹಯೋಗ್ಯ ಮತ್ತು ಉಲ್ಲೇಖ ಪುಸ್ತಕವಾಗಿಯೂ ಉಪಯೋಗವಾಗಿರುವುದರಿಂದ ಒಮ್ಮೆಯಾದರೂ ಇವರ ಕೃತಿಗಳನ್ನು ಓದಲೇಬೇಕು.

Read more!

Tuesday, December 20, 2011

ಜಂಬಣ್ಣ ಅಮರಚಿಂತ ಅವರ `ಬೂಟುಗಾಲಿನ ಸದ್ದು’


ಆಜ್ ಕೆ ಇಸ್ ಇನ್ಸಾನು ಕೊ, ಯೇ ಕ್ಯಾ ಹೋಗಯಾ?
ಇಸಕಾ ಪುರಾನ ಪ್ಯಾರು ಕಹಾಪರ್ ಖೋ ಗಯಾ?
ಕೈಸಾ ಯೇ ಮನಹೂಸ್ ಘಡಿ ಹೈ
ಬಾಯಿ ಯೋಂ ಮೆ, ಜಂಗ್ಛಿಡಿ ಹೈ
ಕ ಹಿಂಪೆ ಖೂನ್, ಕಹಿಂ ಪ ಜ್ವಾಲಾ
ನಹಿಪತಾ ಕ್ಯಾ ಹೋನೇವಾಲಾ...

ಇದು ಊರ ಓಣಿಯಲ್ಲಿ ಪಕೀರನೊಬ್ಬ ದಪು ಬಡಿಯುತ್ತಾ ವಿಷಾದದಲ್ಲಿ ಹಾಡುವ ಸನ್ನಿವೇಶ. ಈ ಸನ್ನಿವೇಶ ಓದುಗನನ್ನು ಕಾಡುತ್ತಿರುವುದು ಜಂಬಣ್ಣ ಅಮರಚಿಂತ ಅವರ `ಬೂಟುಗಾಲಿನ ಸದ್ದು’ ಕಾದಂಬರಿಯಲ್ಲಿ. ಇದು ದಲಿತ ಮತ್ತು ಬಂಡಾಯ ಸಾಹಿತ್ಯದ ಮೂಲಕ ವೈಚಾರಿಕ ಬರಹಗಳನ್ನು ನೀಡುತ್ತಿರುವ ಜಂಬಣ್ಣ ಅವರ ಎರಡನೆಯ ಕಾದಂಬರಿ.

ದೇಶದ ಮಹಾನುಭಾವರು ಸ್ವಾತಂತ್ರ್ಯಕ್ಕಾಗಿ ಹೇಗೆ ಹೋರಾಟ ನಡೆಸಿದರೋ ಹಾಗೆಯೇ ಸ್ವಾತಂತ್ರ್ಯಾನಂತರ ಕೂಡ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಎದುರಾದದ್ದು ದೇಶದ ಅತೀ ದೊಡ್ಡ ದುರಂತವೆಂದರೆ ಸರಿಯೇನೋ? ನೂರು ಸಾವಿರ ಸಾವಿನ ನೆನಪಿನಲ್ಲಿ ಹಿಟ್ಲರ್ನ ಆಡಳಿತದ ದುರಂತಮಯ ಚಿತ್ರಣ ನೇಮಿಚಂದ್ರ ಅವರ `ಯಾದ್ ವಶೇಮ್’ನಲ್ಲಿ ಕಾಣುವಂತೆಯೇ `ಬೂಟುಗಾಲಿ...’ನಲ್ಲಿ ನಿಜಾಮನ ಆಡಳಿತದ ಉಳಿವಿಗಾಗಿ ಮುಗ್ಧ ಜನರ ಮಾರಣಹೋಮ ನಡೆದಿರುವುದು ಚಿತ್ರಿತವಾಗಿದೆ. ಒಂದೆಡೆ ಕಿತ್ತು ತಿನ್ನುವ ಬಡತನದ ಜೊತೆಗೆ ರಜಾಕಾರರ ಭಯದ ನೆರಳಿನಲ್ಲಿ ಬದುಕುವ ಜೀವನವಾದರೆ, ಇನ್ನೊಂದೆಡೆ ಸ್ವಾತಂತ್ರ್ಯದ ಕನಸು. ಈ ಕನಸನ್ನು ಕಟ್ಟಿಕೊಳ್ಳುವುದಕ್ಕೂ ಹೆದರುವ ಜನರಲ್ಲಿ ಕ್ರಾಂತಿಯ ಸಣ್ಣ ಕಿಡಿ ಉರಿಯುತ್ತಲೇ ಇರುತ್ತದೆ. ಆದರೆ ಅವೆಲ್ಲೂ ವ್ಯಕ್ತವಾಗದೆ ಸೋಲು ಸೋಲುಗಳ ನಡುವೆ ಕಾಣದ ಗೆಲುವಾಗಿ ಗೋಚರವಾಗುವಾಗ ಬದುಕು ಮುಗಿದಿರುವ ಸತ್ಯ ನೋವಾಗಿ ಕಾಡುತ್ತದೆ.

ಈ ಕಾದಂಬರಿಯು ಸ್ವಾತಂತ್ರ್ಯ ನಂತರದ ಭಾರತದ ಚಿತ್ರಣವನ್ನು ನೀಡುವುದರ ಜೊತೆಗೆನೆ ಭಾರತದ ಜೊತೆಗೆ ವಿಲೀನವಾಗದೆ ದಬ್ಬಾಳಿಕೆ ಮತ್ತು ರಾಜನೀತಿಯನ್ನು ಮುಂದುವರಿಸಿಕೊಂಡು ಹೋಗುವ ನಿಜಾಮನ ನಿಜ ರೂಪವನ್ನು ಪರೋಕ್ಷವಾಗಿ ಅನಾವರಣಗೊಳಿಸುತ್ತದೆ. ಕಾದಂಬರಿಯ ವಸ್ತು ಸ್ಥಿತಿ ಸ್ವಾತಂತ್ರ್ಯ ನಂತರದ್ದಾದರೂ ಇದು ನಡೆಯುವ ಕಾಲಘಟ್ಟ 1947 ರಿಂದ 1952 ರವೆಗಿನದ್ದು. ಅಂದರೆ ಆ ಕಾಲಘಟ್ಟದ ಅಂತ್ಯದಲ್ಲಿ ನಿಜಾಮನ ಆಡಳಿತ ಕೊನೆಗೊಂಡು ಕೊನೆಗೂ ಭಾರತದೊಂದಿಗೆ ವಿಲೀನವಾದ ಸಮಯ. ನಿಜಾಮನ ಆಡಳಿತ ಮುಂದುವರೆದರೆ ತಮ್ಮಿಚ್ಛೆಯಂತೆ ಬದುಕಬಹುದೆನ್ನುವ ಕುರುಡು ನಂಬಿಕೆಯನ್ನು ಕಟ್ಟಿಕೊಂಡ ರಜಾಕಾರರು, ನಿಜಾಮನ ಆಳ್ವಿಕೆಯನ್ನು ಬಯಸದ ಹಿಂದೂವಾಗಲಿ, ಮುಸಲ್ಮಾನರನವನಾಗಲಿ ಅಥವಾ ಕೆಂಪು ಬಾವುಟ ಕಟ್ಟುವ ಯಾವನನ್ನೇ ಆಗಲಿ ಜೀವಂತ ಬಿಡುವವರಲ್ಲ. `ಹಿಡಿ, ಕೊಲ್ಲು’ ಸೂತ್ರಗಳನ್ನು ಬದ್ಧವಾಗಿ ಪಾಲಿಸಿಕೊಂಡು ಬರುವ ರಜಾಕಾರರು ಆಡಿದ್ದೇ ಅಟ್ಟಹಾಸ; ಮೆರದದ್ದೆ ಮಂದಹಾಸ! ಅವರ ಕುಕೃತ್ಯಗಳ ಹಿನ್ನಲೆಯಲ್ಲಿ ಹಿಂದು ಮುಸಾಲ್ಮಾನರೆಂಬ ಭೇದಭಾವವಿಲ್ಲದೆ ಸೌಹಾರ್ದತೆಯಿಂದ ಬದುಕು ನಡೆಸುವ ಮುಗ್ಧ ಮನದ ಜನಸಾಮಾನ್ಯರಲ್ಲಿ ಪ್ರೀತಿ, ವಿಶ್ವಾಸ, ಸಹಾಯ, ರಕ್ಷಣೆಗಳೇ ಮೂಲ ಧ್ಯೇಯಗಳಾಗಿದ್ದವು. ಈ ಕಾದಂಬರಿಯಲ್ಲಿ ರಜಾಕಾರರ ವಿರುದ್ಧ ಹೋರಾಡಿದ ಸ್ಥಳೀಯರ ಸ್ಥಿತಿ - ಗತಿಗಳು ಮತ್ತು ಸನ್ನಿವೇಶಗಳಿವೆ. ಇದು ಸ್ವಾತಂತ್ರ್ಯ ಪೂರ್ವ ಮತ್ತು ಆನಂತರದ ಕಾಲವನ್ನು ನೆನಪಿಸಿಕೊಡುತ್ತದೆ. ಜಮೀನ್ದಾರರ ಶೋಷಣೆ, ಬದುಕಿಗಾಗಿ ತಾತ್ವರ, ಏನನ್ನೂ ಪೂರೈಸಿಕೊಳ್ಳಲಾಗದ ವಾಸ್ತವತೆ ಜನರ ಬದುಕನ್ನು ಇನ್ನಷ್ಟು ಬಡತನಕ್ಕೆ ತಳ್ಳಿ ಅವರನ್ನ ಬಲಹೀನನ್ನನ್ನಾಗಿಸುವ ದೃಶ್ಯಗಳು ಕಾದಂಬರಿಯುದ್ದಕ್ಕೂ ಕಾಣಿಸುತ್ತದೆ.

ಇಷ್ಟೆಲ್ಲವೂ ಇದ್ದು ಕಾದಂಬರಿ ಧ್ವನಿಸುವಂತದ್ದು ಚಾರಿತ್ರಿಕತೆಯನ್ನು. ಇದು ಹೈದರಾಬಾದ್ ಕರ್ನಾಟಕವನ್ನೂ ಒಳಗೊಂಡಂತೆ ದಖನ್ ಪ್ರದೇಶದ ಬಹುಭಾಗವನ್ನು ತತ್ತರಗೊಳಿಸಿದ ರಜಾಕಾರರ ಪ್ರಕರಣ ಕುರಿತು ಬರೆದ ಕಾದಂಬರಿಯಾಗಿರುವುದರಿಂದ ಚರಿತ್ರೆಯ ಅಂಶವಾಗಿಯೇ ಓದಿಸಿಕೊಳ್ಳುತ್ತದೆ. ಇತಿಹಾಸದ ಪುಟಗಳನ್ನು ತಿರುಚಿದಾಗ ಮಾನವೀಯತೆಯ ಮೌಲ್ಯಗಳು ಸತ್ವ ಕಳೆದುಕೊಂಡದನ್ನು ಕೇಳಿಸುವ ಈ ಕೃತಿಯು `ಸೆಕ್ಯುಲರಿಸಂ’ ಅನ್ನು ತೋರಿಸುತ್ತದೆ. ಇಲ್ಲಿಯ ಪ್ರಭುತ್ವದ ವಿನಾಶ ಕೇವಲ ಒಂದು ಧರ್ಮ ಅಥವಾ ಕಾಲದ ಆಡಳಿತಕ್ಕೆ ಸೀಮಿತವಾದುದ್ದಲ್ಲ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಕಾಣುವ ಪ್ರಭುತ್ವದ ಮಾದರಿಯೇ ಈ ಕಾದಂಬರಿಯಲ್ಲಿ ಚರಿತ್ರೆಯಾಗಿ ಹೊರಹೊಮ್ಮಿದೆ. `ಹಿಸ್ಟರಿ ರಿಪೀಟ್ಸ್ ಇಟ್ಸೆಲ್ಫ್’ ಅನ್ನುವ ಮಾತನ್ನು ಇಲ್ಲಿ ನಮಗೆ ಸ್ಪಷ್ಟಪಡಿಸುವುದಾದರೂ ಇದು ಬದಲಾಗದ ಪರಿಸ್ಥಿತಿಯೇನಲ್ಲ. ಬದಲಾವಣೆಯ ದಾರಿಯನ್ನು ಮತ್ತು ಪ್ರಭುತ್ವವನ್ನು ಜನಸಾಮಾನ್ಯನೇ ಸಂಘಟಕನಾಗಿ ಸರಿಪಡಿಸಬೇಕಾಗಿರುವ ಅನಿವಾರ್ಯತೆ ಎದ್ದು ಕಾಣುತ್ತದೆ. ಇದು ಕೆಲವೊಂದು ಕ್ರಾಂತಿ, ರಕ್ತಪಾತಗಳಿಗೂ ಕಾರಣವಾದರೂ ಮುಂದೊಂದು ದಿನ ಸ್ವಸ್ಥ್ಯ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.

ಕಾದಂಬರಿ ಆರಂಭವಾಗುವುದೆ `ಟಕ್ ಟಕ್ ಟಕ್’ ಬೂಟುಗಾಲಿನ ಸದ್ದಿನೊಂದಿಗೆ. ಅವರ ವಧಾಸ್ಥಾನದಂತಿರುವ ಮಕ್ತಲ್ ಪೇಟೆಯನ್ನು ಪ್ರವೇಶಿಸುವ ರಜಾಕಾರರ ದರ್ಪದ ನಡುಗೆಯೇ ಇಡೀ ಕಾದಂಬರಿಯಲ್ಲಿ ಕ್ರೌರ್ಯವನ್ನು ಕೂಲಂಕಷವಾಗಿ ಬಿಂಬಿಸುತ್ತದೆ. ಮದರಸಾಬ್ನ ಮೇಲೆ ವಿಶ್ವಾಸವಿಟ್ಟಿರುವ ರಜಾಕಾರರ ಮುಖಂಡ ಕರೀಂಖಾನ್ ಆ ಗಲ್ಲಿಯಲ್ಲಿ ಅಥವಾ ಮಕ್ತಲ್ ಪೇಟೆಯಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳನ್ನು ಅವನಿಂದ ತಿಳಿದುಕೊಳ್ಳುವವನು. ಮದರಸಾಬ್ ಮಾನವೀಯತೆಯುಳ್ಳ ಮುಸಲ್ಮಾನ. ಯಾವನಿಗೂ ಅನ್ಯಾಯವಾಗುವುದನ್ನು ಸಹಿಸದವ. ಹಿಂದುವಾಗಲಿ, ಮುಸಲ್ಮಾನನಾಗಲಿ ರಜಾಕಾರರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಅವರನ್ನು ರಕ್ಷಿಸುವವನು. ಅವನ ಮೇಲೆ ಊರಿನವರಿಗೂ ಪ್ರೀತಿ, ವಿಶ್ವಾಸ.

ಅಗಸರ ರಂಗಪ್ಪ ಮತ್ತು ಆತನ ಮಡದಿ ಮಂಗಮ್ಮ ತಮ್ಮ ಮಗ ನಲ್ಲಜೋಮನೊಡನೆ ಒಗೆದ ಬಟ್ಟೆಗಳನ್ನು ಕತ್ತೆಗಳ ಮೇಲೆ ಹೊರಿಸಿ ಬರುವಾಗ ರಜಾಕಾರರ ಸಂದೇಹಕ್ಕೆ ಗುರಿಯಾಗುತ್ತಾರೆ. ತೆಲುಗಿನವರಾದ ಅವರ ಮೇಲೆ ಕೆಂಪು ಬಾವುಟದವರೆಂದು ಮತ್ತು ಮಡಿ ಬಟ್ಟೆಯ ಗಂಟಿನ ನಡುವೆ ಬಾವುಟವಿದೆಯೆಂದು, ಅದನ್ನು ರಸ್ತೆಯಲ್ಲಿ ಕೆಡವಿ ತಡಕಾಡುತ್ತಾರೆ. ಅವರ ಪರ ವಹಿಸಿ ಮಾತಾಡುವವನು ಮದರಸಾಬ್ ಮಾತ್ರ. ರಜಾಕಾರರಿಂದ ತಪ್ಪಿಸಿಕೊಂಡು ಬಂದ ಅಗಸರ ಕುಟುಂಬಕ್ಕೆ ಮನೆಯಿಂದ ಹೊರಗೆ ಬರುವುದಕ್ಕೂ ಹೆದರಿಕೆ. ಇಲ್ಲಿ ರಜಾಕಾರರು ಮತ್ತು ಅಗಸರ ನಡುವಿನ ಮುಖಾಮುಖಿ ಅವರ ದಬ್ಬಾಳಿಕೆಯನ್ನು ಮತ್ತು ಅವರ ಎಡೆಬಿಡಂಗಿತನವನ್ನು ವ್ಯಂಗ್ಯವಾಗಿಯೂ ಚಿತ್ರಿಸುತ್ತದೆ. ಅಂದರೆ ರಜಾಕಾರರಿಗಿದ್ದ ದ್ವೇಷ ಕ್ಷುಲ್ಲಕವಾದುದೆನ್ನುವುದನ್ನು ತಿಳಿಸುತ್ತದೆ. ಇಲ್ಲಿ ಕೇವಲ ಅಗಸನೊಬ್ಬನನ್ನು ತಮ್ಮ ವೈರಿಯೆಂದುಕೊಳ್ಳುವುದು ಅವರ ಮೂರ್ಖತೆಯನ್ನು ತಿಳಿಸುತ್ತದೆ. ಯಾಕೆಂದರೆ ಅಗಸ ರಂಗಪ್ಪ ತನ್ನ ಬದುಕಿಗಾಗಿ ಪಡುವ ಕಷ್ಟ, ಅವನಿಗೆ ರಾಜಕೀಯದ ಬಗ್ಗೆ ಎಳ್ಳಷ್ಟು ತಿಳುವಳಿಕೆಯಿಲ್ಲದ್ದನ್ನು ಸೂಚಿಸುತ್ತದೆ. ಹಾಗಿರುವಾಗ ರಜಾಕಾರರು ಬ್ರೆಡ್ಡಿಗಾಗಿ ತಾತ್ವರ ಪಡುವಂತಹ ರಂಗಪ್ಪನನ್ನು ಹಿಡಿದು ಮಾಡುವುದಾದರೂ ಏನು? ಕೇವಲ ಅವನ ಪ್ರಾಣ ಹರಣ ಮಾಡಬೇಕಷ್ಟೆ!

ಬಡ್ಡಿಲೇವಾದೇವಿಯಿಂದ ಜನರನ್ನ ಶೋಷಣೆ ಮಾಡುವ ರಾಮಿ ರೆಡ್ಡಿ ಮತ್ತು ಅವನ ಚಮಚ ಪಕೀರಪ್ಪ ಮುಗ್ಧ ಜನರನ್ನು ಇನ್ನೊಂದು ರೀತಿಯಲ್ಲಿ ಆಳುತ್ತಿರುವವರು. ಆದರೆ ಅವರ ಆಟ ರಜಾಕಾರರ ಮುಂದೆ ನಡೆಯುವುದಿಲ್ಲ. ರಜಾಕಾರರ ದಾಳಿಯಾದಾಗ ಯಾವನೇ ಆಗಲಿ ಪ್ರಾಣ ರಕ್ಷಣೆಗಾಗಿ ಅವಿತುಕೊಳ್ಳಲೇಬೇಕು. ಆದರೆ ಅವರನ್ನು ಎದುರಿಸಿ ನಿಲ್ಲುವ ಕೆಲವೊಂದು ಗಟ್ಟಿ ಹೃದಯಗಳು ಇವೆ. ಅವರಲ್ಲಿ ಹುಚ್ಚು ಮುಬಾರಕ ಒಬ್ಬ. ಮುಬಾರಕ ಹುಚ್ಚನಾಗಿದ್ದರೂ ಅವನ ಬಾಯಿಯಲ್ಲಿ ದೇಶಗೀತೆಯ ಧ್ಯೇಯ ಅನುರಣಿಸುತ್ತಿರುತ್ತದೆ. ಇದೇ ವಿಷಯಕ್ಕೆ ರಜಾಕಾರರು ಅವನನ್ನು ಹಿಡಿದು ಕೊಲ್ಲುವುದಕ್ಕೆ ಮುಂದಾಗುತ್ತಾರೆ. ಆದರೆ ಮುಬಾರಕನ ತಂದೆ ಅಮೀನುಲ್ಲಾನ ಸಮಯಪ್ರಜ್ಞೆಯಿಂದ `ಬೋಲೊ ಭಾರತ್ ಮಾತಾಕಿ ಜೈ, ಗಾಂಧಿ ಮಾತ್ಮ ಕಿ ಜೈ, ವಂದೇಮಾತರಂ’ ಎಂದು ಜಯಕಾರ ಕೂಗುವ ತನ್ನ ಮಗನನ್ನು ರಜಾಕಾರರಿಂದ ರಕ್ಷಿಸಿದರೂ, ಮುಬಾರಕನು ಮರದ ಮೇಲೇರಿ ಅಲ್ಲಿಂದ ಬಿದ್ದು ಸಾಯುವುದು ಒಬ್ಬ ವೀರ ಯೋಧ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಷ್ಟೇ ಮಹತ್ವದ್ದಾಗಿ ಕಾಣುತ್ತದೆ. ಒಬ್ಬ ಹುಚ್ಚನೆಂದುಕೊಂಡವನು ಸಮಷ್ಟಿ ಪ್ರಜ್ಞೆ ಬುದ್ಧಿಯಿದ್ದವನಾರಿಗೂ ಇಲ್ಲ, ಮತ್ತು ಆ ಪುಕ್ಕಲುತನವಿರುವುದರಿಂದ ಬುದ್ಧಿಯಿರುವವನು ಹೆದರುತ್ತಲೇ ಬದುಕುವುದನ್ನು ಅಲ್ಲಿಯ ಜನ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಾರೆ. ಸಾಧು ಸ್ವಭಾವದವನಾದ ಮಾಸುಂಅಜ್ಜ ಫಕೀರನ ಮರವೇರಿ ತನಗೆ ಅರಿಯ ಭಾಷೆಯೊಂದರಿಂದ ಮಾತನಾಡುವುದು ಮತ್ತು ಹುಚ್ಚ ಮುಬಾರಕ ದೇಶಗೀತೆಯನ್ನು ಹಾಡುವುದು ವ್ಯತಿರೀಕ್ತಗಳೆನಿಸಿದರೂ ಇದು ಅಲ್ಲಿಯ ಜನರ ಹೃದಯದೊಳಗೆ ಗಟ್ಟಿಯಾಗಿ ಕುಳಿತಿರುವ ದೇಶಭಿಮಾನದ ಅಂತರ್ಗತವಾದ ಆಶಯಗಳೇನೋ ಅನಿಸುತ್ತದೆ.

ಇಷ್ಟೊಂದು ರೀತಿಯಲ್ಲಿ ನಿಜಾಮನ ದರ್ಬಾರು ಮತ್ತು ರಜಾಕಾರರ ಕಾರುಬಾರು ನಡೆಯುತ್ತಿದ್ದರೂ, ಅವರನ್ನು ಬೆಂಬಲಿಸುವ ಪೊಲೀಸರು ಮತ್ತು ಸರಕಾರದ ವ್ಯಕ್ತಿಗಳನ್ನು ಕೆರಳಿಸುವಂತಹ ಸನ್ನಿವೇಶಗಳು ಮಕ್ತಲ್ಪೇಟೆಯಲ್ಲಿ ನಡೆಯುತ್ತಲೇ ಇರುತ್ತವೆ. ರಾತ್ರೋ ರಾತ್ರಿ ಅಗಸರ ಕತ್ತೆಗಳು ಮಾಯವಾಗಿರುವುದರಿಂದ ಅದನ್ನು ಹುಡುಕಲು ರಂಗಪ್ಪ ಮತ್ತು ಅವನಂತೆ ಕತ್ತೆಗಳನ್ನು ಕಳೆದುಕೊಂಡವರು ಹೊರಡುತ್ತಾರೆ. ಆದರೆ ಅವರಿಗೆ ಆ ಕತ್ತೆಗಳು ಪೊಲೀಸ್ ಠಾಣೆಯಲ್ಲಿರುವ ಮಾಹಿತಿ ದೊರಕುತ್ತದೆ. ಮನುಷ್ಯ ಏನೇ ಅನ್ಯಾಯ ಮಾಡಿದರೂ ಸಹಿಸಿಕೊಳ್ಳುವ ಸರಕಾರಿ ಅಧಿಕಾರಿಗಳು ಕತ್ತೆಗಳನ್ನು ಬಂದಿಸಿರುವುದು ಏಕೆಂದು ತಿಳಿಯುವುದಿಲ್ಲ. ಪೊಲೀಸರೇನು ಅವುಗಳನ್ನು ಹೊತ್ತೊಯ್ಯಲು ಕತ್ತೆಗಳೇನು ಕಳ್ತನ ಮಾಡ್ಯಾವಾ? ಸೂಳೆತನ ಮಾಡ್ಯಾವ? ಅವೇನು ಇಸ್ಪೀಟ್ ಆಡ್ಯಾವ? ಅನ್ನುವ ಮುಗ್ಧ ಮಾತುಗಳು ಪರಿಸ್ಥಿತಿಯ ಕ್ಷುಲ್ಲಕತನವನ್ನು ವ್ಯಂಗ್ಯವಾಗಿ ರೂಪಿಸುತ್ತದೆ. ಆನಂತರ ಅವರಿಗೆ ಅವುಗಳ ಕೊರಳಿಗೆ ನಿಜಾಮ, ಖಾಸಿಂ ರಜ್ವಿ, ಸರಕಾರಿ ಅಧಿಕಾರಿಗಳ ವ್ಯಂಗ್ಯಚಿತ್ರಗಳನ್ನು ಹಾಕಿರುವುದರಿಂದ ಅವುಗಳನ್ನು ಠಾಣೆಗೆ ಕರೆದೊಯ್ಯಲಾಗಿದೆಯೆಂದು ತಿಳಿಯುತ್ತದೆ. ಅಲ್ಲಿಗೆ ಹೋದರೂ ಅವು ತಮ್ಮವೆಂದು ಹೇಳುವ ಧ್ವನಿ ಯಾವನಿಗೂ ಇರುವುದಿಲ್ಲ. ಹಾಗೇನಾದರೂ ಹೇಳಿದರೆ ಅವರನ್ನು ಕಂಬಿಯ ಹಿಂದೆ ಹಾಕುವುದಂತು ಖಚಿತವಾಗಿತ್ತು. ಆದರೆ ಆ ಕತ್ತೆಗಳು ರಟ್ಟಿನ ಫಲಕಗಳನ್ನು ತಿಂದು ಪುರಾವೆಯನ್ನು ಸಹಿತ ಉಳಿಸದಿರುವುದು ಅಗಸರಿಗೆ ಅನುಕೂಲವಾಗುತ್ತದೆ. ಆ ಪರಿಸ್ಥಿತಿಯಲ್ಲಿ ಅವು ತಮ್ಮದೆನ್ನುವ ನೈತಿಕ ಹಕ್ಕು ಅವರಿಗಿರುವುದಿಲ್ಲ.

ಕಾದಂಬರಿಯ ಅಂತ್ಯದಲ್ಲಿ ಮಾಯದಂತಹ ಮಳೆಯಾಗುವುದು ರಜಾಕಾರರ ದಾಳಿಯನ್ನು ಸೂಚಿಸುತ್ತಾದರೂ ಆ ದಾಳಿಯ ಹಿಂದೆಯೆ ಅಲ್ಲಿಯವರೆಗೂ ಸುಪ್ತವಾಗಿದ್ದ ಜನರ ಕ್ರಾಂತಿಯ ಕಿಡಿಯ ಹೊತ್ತಿ ಉರಿಯುತ್ತದೆ. ಅದೇ ಸಂದರ್ಭದಲ್ಲಿ ಭಾರತ ಸರಕಾರದ ಮಿಲಿಟರಿಯ ಪ್ರವೇಶವಾಗಿ ನಿಜಾಮನ ದಬ್ಬಾಳಿಕೆಯ ದರ್ಬಾರು ಕೊನೆಗೊಳ್ಳುತ್ತದೆ. ರಜಾಕಾರರ ಕಾರುಬಾರು ಕೊನೆಗೊಂಡು ಜೀವ ಭಯದಿಂದ ಅವಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರ ಜೊತೆಜೊತೆಗೇನೆ ಜಮೀನ್ದಾರಿಕೆಯ ಶೋಷಣೆಯೂ ಸಮಾಪ್ತಿಯಾಗುತ್ತದೆ.

ಹೀಗೆ ಕಾದಂಬರಿ ಕೊನೆಗೊಂಡರೂ ಓದುಗನಿಗೆ ಆ ಕಾಲದ ಘಟನೆಗಳು, ಪರಿಸ್ಥಿತಿ, ಬದುಕು, ಕಷ್ಟಗಳು, ತೊದರೆಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆಯೇ ಮನಸ್ಸಿಗೆ ತಟ್ಟಿ ಆಲೋಚನೆಗೆ ಹಚ್ಚುತ್ತದೆ. ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಕಾದಂಬರಿ ಧ್ವನಿಸುವುದರಿಂದ ಒಂದು ಗಟ್ಟಿ ಕಥಾಹಂದರದ ಕಾದಂಬರಿ ಚಾರಿತ್ರಿಕತೆಯನ್ನು ತೆರೆದಿಟ್ಟಂತೆ ಮತ್ತು ಆಗಿನ ವಾಸ್ತವವನ್ನು ತಿಳಿಸಿಕೊಡುವಂತೆ ಕಾಣುತ್ತದೆ. ಅಮರೇಶ ನುಗಡೋಣಿಯವರು ಮುನ್ನುಡಿ ನೆಪದ ಕೆಲವು ಮಾತುಗಳಲ್ಲಿ ಈ ಕೃತಿ ಆ ಸಂದರ್ಭದ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಗ್ರಹಿಸುವ ಪ್ರಯತ್ನವೆಂದು ಹೇಳುತ್ತಾರೆ. ಇದೊಂದು ಅಪರೂಪದ ಕೃತಿಯೆಂದರೆ ತಪ್ಪಲ್ಲ.

Read more!

Sunday, November 27, 2011

ಅನ್ಯ ದೇಶಗಳ ಅನನ್ಯ ಕತೆಗಳು


ಕನ್ನಡದ ‘ಮೃಗಯಾ ಸಾಹಿತಿ’ ಶ್ರೀ ಕೆದಂಬಾಡಿ ಜತ್ತಪ್ಪ ರೈಗಳು ಅನುವಾದ ಸಾಹಿತ್ಯದ ಕುರಿತು, ‘ಅನುವಾದವಾದರೇನು ಅದಕ್ಕೆ ಬೆಲೆ ಕಡಿಮೆಯೆ? ಓದಿ ನೋಡಿದರೆ ತಿಳಿದಿತು; ಎರವಲಾಗಿ ತಂದ ಕೊಡಲಿ ಕಡಿಮೆಯೇನಲ್ಲ, ಕಡಿದರೆ ಉರುಳುವುದಿಲ್ಲವೆ ದೊಡ್ಡ ಮರ’ ಎಂದು ಕಾರಂತರ ‘ಚೋಮನ ದುಡಿ’ಯ ತುಳು ಅನುವಾದದ ಅರ್ಪಣೆಯಲ್ಲಿ ಹೇಳುತ್ತಾರೆ.

ಭಾಷಾಂತರ ಸಾಹಿತ್ಯ ಅಥವಾ ಅನುವಾದ ಸಾಹಿತ್ಯಕ್ಕೆ ಅದರದೇ ಆದ ಒಂದು ಅಸ್ಮಿತೆಯಿದೆ. ಆ ಅಸ್ಮಿತೆಯಲ್ಲಿ ಆಯಾ ದೇಶದ, ಪ್ರದೇಶದ ಸಾಂಸ್ಕೃತಿಕ ಮತ್ತು ನೆಲದ ಕಂಪು ಮಿಳಿತವಾಗಿ ಓದುಗ ವರ್ಗವನ್ನು ಗಳಿಸಿಕೊಂಡಿರುವುದು ಸಹಜ. ಸಾಹಿತ್ಯ ಮತ್ತು ಸಂಸ್ಕೃತಿಗೆ ಭಾಷೆಯ ಹಂಗಿಲ್ಲ. ಹಾಗಾಗಿ ಯಾವ ಭಾಷೆಯ ಸಾಹಿತ್ಯವಾಗಲಿ ಅವು ನಿಜವಾದ ಓದುಗನೊಬ್ಬನನ್ನು ತಲುಪಬೇಕಾದರೆ ಅನುವಾದವೆನ್ನುವ ಕೊಂಡುಕೊಳ್ಳುವಿಕೆಯಲ್ಲಿ ಮರುಸೃಷ್ಟಿ ಪಡೆಯಬೇಕು. ಹೀಗೆ ಮರುಸೃಷ್ಟಿ ಪಡೆಯುತ್ತಾ ಒಂದು ದೇಶದ ಜನರನ್ನ, ಸಂಸ್ಕೃತಿಯನ್ನ, ಪರಂಪರೆಯನ್ನ, ಜೀವನಕ್ರಮವನ್ನ, ಸಂಕಟಗಳನ್ನ, ದು:ಖ ದುಮ್ಮಾನಗಳನ್ನ... ಒಟ್ಟಾಗಿ ಹೇಳುವುದಾದರೆ ಬದುಕನ್ನ ತಿಳಿದುಕೊಳ್ಳಲು ಪರಿಣಾಮಕಾರಿಯಾಗಬಲ್ಲದು. ಆದ್ದರಿಂದ ಅನುವಾದ ಸಂಸ್ಕೃತಿಗಳ ನಡುವಿನ ಮತ್ತು ವಿಭಿನ್ನ ಜನರ ನಡುವಿನ ಅಂತರಕ್ಕೊಂದು ಸೇತುವಾಗಿ ಬೆಸೆದುಕೊಳ್ಳುವುದು ಒಪ್ಪಬೇಕಾದ ವಿಷಯ. ಅನುವಾದದಲ್ಲಿ ಅನುಭಾವದ ನೆಲೆಯನ್ನು ಬಿಚ್ಚಿಡುತ್ತಾ ಮೂಲ ಕೃತಿಯ ಆಶಯವನ್ನ ತೆರೆಗೆ ಸರಿಸದೆ ಅಭಿವ್ಯಕ್ತಗೊಳಿಸುವ ಕಾರ್ಯ ಸುಲಭವೇನಲ್ಲ. ಇಲ್ಲಿ ಅನುವಾದಕ ಎರಡು ರೀತಿಯ ಎಚ್ಚರಿಕೆಗಳನ್ನು ಗಮದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಒಂದು ಮೂಲಕಥೆಯ ದಾಯಿತ್ವವನ್ನ ಉಳಿಸಿಕೊಳ್ಳಬೇಕು. ಎರಡನೆಯದಾಗಿ ಅನುವಾದವಾಗುವ ಭಾಷೆಯ ಮಣ್ಣಿನ ಸಂಸ್ಕೃತಿಯನ್ನ ತೆರೆದಿಡಬೇಕು. ಇವೆರಡನ್ನು ಎಚ್ಚರಿಕೆಯಿಂದ ಪಾಲಿಸಿದರೆ ಅನುವಾದವಾಗುವ ಕೃತಿ ಹೆಚ್ಚು ಪರಿಣಾಮಕಾರಿಯಾಗಿ ಮೂಡಬಹುದು.

ಅನುವಾದವೆಂದರೆ ಮೂಲ ಬರವಣಿಗೆಯ ಭಾಷೆ ಮತ್ತು ಸ್ವೀಕಾರ ಬರಹದ ಭಾಷೆ ಈ ಎರಡು ಭಾಷೆಗಳ ನಡುವೆ ನಡೆಯುವ ವ್ಯಾಖ್ಯಾನದ ಮರು ಸೃಷ್ಟಿ. ಹಾಗಾಗಿ ಅನುವಾದದ ಅಗತ್ಯ ಸ್ವೀಕಾರ ಭಾಷೆಯ ನಡುವೆ ನಡೆಯುವ ಬೇರೆಯದೇ ಆದ ಒಂದು ವ್ಯುತ್ಪತ್ತಿ. ‘ಎರಡು ಭಾಷೆಗೆ ಪೂರ್ತಿ ತಲೆಬಾಗಿ ಅನುವಾದ ಮಾಡಿದರೆ ಅದು ಬೆಲೆ ಪಡೆಯುವುದೆ?’ ಈ ಪ್ರಶ್ನೆಗೆ ಮೂಲ ಕೃತಿಯ ಭಾಷೆಯನ್ನು ಅದರ ಸ್ವರೂಪ ಮತ್ತು ಶಕ್ತಿಯನ್ನು ಸೂಕ್ಷ್ಮತೆಗಳ ಜೊತೆಗೆ ಪ್ರಚಾರ ಪಡಿಸಬೇಕಾದ ರೂಪವೇ ಅನುವಾದಿತ ಕೃತಿಗಳ ಗೆಲ್ಮೆಯ ಧೀಮಂತಿಕೆ. ಅನುವಾದವಾಗುವಾಗ ಆಕರ ಬರಹದ ಲೇಖಕ ಮತ್ತು ಅವನ ವ್ಯಕ್ತಿತ್ವದ ಕೃತಿಯೊಂದಿಗೆ ಅನುವಾದಿಸಬೇಕಾದ ಅಗತ್ಯವಿದೆ. ಅದರ ಜೊತೆಗೆ ಸ್ವೀಕಾರ ಭಾಷೆಯ ಪರಿಸರದ ಹಿನ್ನಲೆಯಲ್ಲಿ ಕೃತಿ ಹೊರಹೊಮ್ಮಬೇಕಾಗಿದೆ.

ಕನ್ನಡದ ಅನುವಾದ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ಲೇಖಕರಲ್ಲಿ ಒಬ್ಬರಾದ ‘ಬಿ. ಜನಾರ್ಧನ ಭಟ್’ ಅವರ ಇತ್ತೀಚೆಗೆ ಬಿಡುಗಡೆಯಾದ ಕೃತಿ ‘ಅನ್ಯ ದೇಶದ ಅನನ್ಯ ಕತೆಗಳು’. ಈ ಸಂಕಲನದಲ್ಲಿ ವಿಶ್ವದ ಬೇರೆ ಬೇರೆ ದೇಶದ ವಿಭಿನ್ನ ಕಥೆಗಳು ಬಹಳ ಪರಿಣಾಮಕಾರಿಯಾಗಿ ಅನುವಾದಿಸಲ್ಪಟ್ಟಿವೆ. ಕಥೆಯ ಮಟ್ಟಿಗೆ ವಿಭಿನ್ನವೂ, ಅಪರೂಪವೂ ಆದ ಕಥೆಗಳು ಇಲ್ಲಿರುವುದರಿಂದ ಈ ಕಥೆಗಳು ಓದುಗನನ್ನು ಸೃಷ್ಟಿಸುವುದಕ್ಕಿಂತಲೂ ಓದುಗನ ಅರಿಯುವಿಕೆಯನ್ನು ವಿಸೃತಗೊಳಿಸಬಲ್ಲವುಗಳೆಂದರೆ ತಪ್ಪಲ್ಲ. ಒಬ್ಬ ನಿಜವಾದ ಸಾಹಿತಿಗೆ ತನ್ನ ಸುತ್ತಮುತ್ತಲಲ್ಲಿ ಸಾಗುವ ಸಾಹಿತ್ಯದ ಅರಿವು ಕೂಡ ಅಗತ್ಯವಾಗಿಬೇಕಾಗಿದೆ. ಅದು ಆಧುನಿಕತೆಯದ್ದಾಗಿರಲಿ ಅಥವಾ ಶತಮಾನಗಳಾದಾಚೆಯಾಗಿರಲಿ, ಅದು ಅಪ್ರಸ್ತುತ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ‘ದೇಶಕಾಲ’ದಂತಹ ಪತ್ರಿಕೆ ಅನುವಾದ ಸಾಹಿತ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಓದುಗರಿಗೆ ಮಾಹಿತಿಯನ್ನ ತಿಳಿಸಿಕೊಡುತ್ತಿದೆ.

‘ಅನ್ಯ ದೇಶಗಳ...’ ಕೃತಿಯ ಕಥೆಗಳೆಲ್ಲವೂ ಸಂಸ್ಕೃತಿ ಮತ್ತು ದೇಸೀಯತೆಯನ್ನು ತೆರೆದಿಡುವುದಕ್ಕಿಂತಲೂ ಸಾಹಿತ್ಯದ ಶ್ರೀಮಂತಿಕೆಯನ್ನು ಬಿಚ್ಚಿಡುತ್ತವೆ. ಹೆಚ್ಚಿನ ಕಥೆಗಳು ಹದಿನೇಳು, ಹದಿನೆಂಟನೆಯ ಶತಮಾನದ ಕಥೆಗಳಾಗಿರುವುದರಿಂದ ಆಗಿನ ಬದುಕು, ಅವ್ಯವಸ್ಥೆ, ಅಸಮಾನತೆ, ಬಿರುಕು ಇವುಗಳ ಸುತ್ತಾ ಕಥನಕವು ಸಾಗುತ್ತದೆ. ಈ ಕೃತಿಯಲ್ಲಿ ಒಟ್ಟು ಹನ್ನೊಂದು ಕಥೆಗಳಿದ್ದು ಅವೆಲ್ಲವೂ ಒಂದಕ್ಕೊಂದು ವಿಭಿನ್ನವಾಗಿವೆ. ಕಥೆಗಳನ್ನು ಓದುತ್ತಲೇ ಇನ್ನೊಂದು ಜಗತ್ತಿಗೆ ನಮ್ಮನ್ನು ಕರೆದೊಯ್ಯುವಷ್ಟು ಇಲ್ಲಿಯ ಕಥಾ ಮರುಸೃಷ್ಟಿಯೂ ನಡೆದಿದೆ. ಕೆಲವೊಂದು ಕಡೆ ಮೂಲ ಭಾಷೆಯ ಶಬ್ದವನ್ನು ಉಳಿಸಿಕೊಂಡಿರುವುದು ಕಥೆಯ ಮತ್ತು ಸಾಹಿತ್ಯದ ಶ್ರೀಮಂತಿಕೆಯಂತೆ ಕಾಣುತ್ತದೆ. ಇದರಿಂದಾಗಿ ಹೆಚ್ಚು ಪರಿಣಾಮಕಾರಿಯಾಗಿ ಅದು ಓದುಗನಿಗೆ ಶಾಬ್ದಿಕ ಜ್ಞಾನವನ್ನೂ ವೃದ್ಧಿಸುವುದಕ್ಕೆ ಮತ್ತು ಇನ್ನೊಂದು ನೆಲದ ಸೊಗಡನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ ಅನ್ನುವುದು ನನ್ನ ಅನಿಸಿಕೆ.

ವಾಷಿಂಗ್‌ಟನ್ ಐರ್ವಿಂಗ್‌ನ ‘ರಿಪ್ ವ್ಯಾನ್ ವಿಂಕಲ್’ನಲ್ಲಿ ಕಾಲ ಸರಿಯುವುದರ ಬಗ್ಗೆ, ಜೀವನ ವಿಧಾನದ ಬಗ್ಗೆ ಮತ್ತು ಆಧುನಿಕ ಜೀವನದ ಹಪಹಪಿಯನ್ನ ತೋರಿಸುತ್ತದೆ. ಇದರ ಜೊತೆಗೆ ಸರ್ವವನ್ನೂ ಪಡೆಯುವ ಹಪಿಹಪಿಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುವುದು ಮಾತ್ರ ಸ್ಪುಟವಾಗುತ್ತದೆ. ವೇದವ್ಯಾಸರಿಗಿದ್ದಂತಹ ವಿಶಾಲ ದೃಷ್ಟಿ ಸ್ವಲ್ಪಮಟ್ಟಿಗೆ ಟಾಲ್ ಸ್ಟಾಯ್ ಗೆ ಇತ್ತು ಅನ್ನುವುದಕ್ಕೆ ಅವನು ಕರ್ಮಸಿದ್ಧಾಂತದ ನೆಲೆಯಲ್ಲಿ ರಚಿಸಿದ ಕಥೆ, ‘ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ಕಾಯುತ್ತಾನೆ’ ಸಾಕ್ಷಿಯಾಗಿದೆ. ನೈತಿಕ ಮೌಲ್ಯಗಳ ಬದಲಾವಣೆಯನ್ನು ಕಾಸ್ಮೋ ಹ್ಯಾಮಿಲ್ಟನ್ ‘ಚಿಕ್ಕ ಚಿನ್ನದುಂಗುರ’ ಕಥೆಯಲ್ಲಿ ತೋರಿಸಿಕೊಡುತ್ತಾನೆ. ಇದೊಂದು ಪ್ರೇಮಕಥೆಯಿನಿಸಿದರೂ ಕಥಾ ಹಂದರವು ಕುತೂಹಲಕಾರಿಯಾಗಿದೆ. ಚಾರ್ಲ್ಸ್ ಡಿಕನ್ಸ್‌ನ ಕಥೆ ‘ಸಿಗ್ನಲ್ ಮನ್’ ಮೇಲ್ನೋಟಕ್ಕೆ ಭ್ರಮೆಯೊಳಗೆ ಸಾಗುವಂತೆ ಕಂಡರೂ ಇದು ಮನುಷ್ಯ ಆಧುನಿಕತೆಯೆಡೆಗೆ ಮುಖಮಾಡುತ್ತಾ ಯಂತ್ರಗಳ ಜೊತೆಗೆ ಅನಿವಾರ್ಯವಾಗಿ ಏಗುತ್ತಾ ತನ್ನ ಬದುಕನ್ನು ಕೂಡ ಯಾಂತ್ರಿಕವಾಗಿ ನಡೆಸುತ್ತಾನೆ. ಇಂತಹ ಅನೂಹ್ಯ ಜೀವನಕ್ಕೆ ಬಲಿಯಾಗುವ ಹೃದಯಸ್ಪರ್ಶಿ ಕಥೆಯಾಗಿದೆ ಇದು ಮೂಡಿಬಂದಿದೆ.

‘ಕಪಿ ಮುಷ್ಟಿ’ ಡಬ್ಲ್ಯು ಡಬ್ಲ್ಯು ಜೇಕಬ್ಸ್ ನ ‘ದ ಮಂಕೀಸ್ ಪಾ’ ಕಥೆಯ ಅನುವಾದವಾಗಿದೆ. ಇಲ್ಲಿ ಮಾಂತ್ರಿಕ ಶಕ್ತಿಯನ್ನು ನಂಬಬಹುದಾದರೂ ಅದೇ ಕೊನೆಯಲ್ಲ. ಅದು ಮಿಥ್ಯೆಯೆನ್ನುವಂತೆ ಸಾರುವ ಕಥೆ. ಇಲ್ಲಿಯೂ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡಿರುವ ಲೇಖಕ ಮಾಂತ್ರಿಕತೆಯನ್ನು ನಿರಾಕರಿಸಿಬಿಡುತ್ತಾನೆ. ‘ಹೆಡ್ಡ ಗಿಂಪೆಲ್’ ಕಥೆಯಲ್ಲಿ ಐಸಾಕ್ ಬಾಷೆವಿಸ್ ಸಿಂಗರ್ ಯಹೂದಿಗಳ ಬದುಕಿನ ಕ್ರಮ, ನಂಬಿಕೆ ಮತ್ತು ಜೀವನದರ್ಶನಗಳನ್ನು ತೆರೆದಿಡುತ್ತಾನೆ.

ಶ್ರೇಷ್ಠ ಮನೋ ವೈಜ್ಞಾನಿಕ ಒಳನೋಟವನ್ನೊಳಗೊಂಡಿರುವ ಕಥೆ ‘ಸ್ಟೀವ್‌ಗೊಂದು ಕ್ಯಾಪು’ ಇದೊಂದು ತಂದೆ ಮತ್ತು ಮಗನ ಸಂಬಂಧದ ಕುರಿತಾದರೂ ಇಲ್ಲಿ ಮಗನ ಮನೋಭಿಲಾಷೆಯನ್ನು ಅರಿತುಕೊಳ್ಳುವ ತಂದೆ ಅವನಿಗಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾನೆ. ಇಲ್ಲಿ ವಾಸ್ತವತೆಗಿಂತಲೂ ಗಟ್ಟಿ ಭಾಂದವ್ಯವೊಂದು ಹುಟ್ಟಿಕೊಳ್ಳುತ್ತದೆ. ಸರ್ ಅರ್ಥರ್ ಕಾನನ್ ಡಾಯ್ಲ್‌ನ ‘ಮಚ್ಚೆ ಮಚ್ಚೆಯ ಪಟ್ಟಿ’ ಮತ್ತು ಅಗಾಥ ಕ್ರಿಸ್ಟಿಯ ‘ನೀಲಿ ಜೇರೇನಿಯಂ’ ಪತ್ತೇದಾರಿ ಶೈಲಿಯ ಕಥೆಯಾದರೂ ಕುತೂಹಲಕರವಾಗಿ ಮತ್ತು ಮಾಹಿತಿಪೂರ್ಣವಾಗಿ ಓದುಗರನ್ನು ಆಕರ್ಷಿಸುತ್ತವೆ. ಅರ್ಥರ್ ಇಲ್ಲಿ ಎತ್ತಿಕೊಂಡಿರುವ ವಿಷಯ ಭಾರತದಲ್ಲಿ ಕಂಡು ಬರುವ ಒಂದು ಜಾತಿಯ ಹಾವಿನ ಬಗ್ಗೆಯಾದರೂ ಅಂತಹ ಹಾವು ಭಾರತದಲ್ಲಿರಲಿಲ್ಲವೆನ್ನುವುದು ಓದುಗನಿಗೆ ತಿಳಿಯುತ್ತದೆ. ಆದರೆ ಕಥೆ ಬಹಳ ಕುತೂಹಲದಿಂದ ಉಸಿರು ಬಿಗಿ ಹಿಡಿದು ಓದುವಂತೆ ಮಾಡುತ್ತದೆ. ಹಾಗೇಯೆ ಅಗಾಥ ಕ್ರಿಸ್ಟಿಯ ಕಥೆ ‘ನೀಲಿ ಜೇರೆನಿಯಂ’ ಕೂಡ. ಸಾವಿನ ಹಿನ್ನಲೆಯನ್ನು ವೈಜ್ಞಾನಿಕ ಕಾರಣದಿಂದ ಕಂಡುಹಿಡಿಯುವ ರೀತಿ ಬೆರಗನ್ನು ಹುಟ್ಟಿಸುತ್ತದೆ. ಎಲಿಸ್ ಪಾರ್ಕರ್ ಬಟ್ಲರ್‌ನ ಪತ್ತೇದಾರಿ ಕಥೆಯಾದ ‘ಫಿಲೋ ಗಬ್‌ನ ಮಹಾನ್ ಸಾಹಸ’ ಒಂದು ರೀತಿಯ ವಿಢಂಬನಾತ್ಮವಾಗಿ ರಚಿತವಾಗಿದೆ.

ಈ ಕೃತಿಯ ಒಂದು ಅಪೂರ್ವ ಮತ್ತು ಅತ್ಯುತ್ತಮ ಕಥೆ ‘ಮೂಗು’, ನಿಕೊಲಾಯ್ ಗೊಗೊಲ್ ಬರೆದಿರುವ ಕಥೆ ಸಮಾಜದ ಢಂಬಾಚಾರವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿಯ ವೈಶಿಷ್ಟ್ಯವೆಂದರೆ ಮೂಗೇ ಒಂದು ಪಾತ್ರವಾಗಿ ಕಥೆಯ ಉದ್ದಕ್ಕೂ ಕಾಣಸಿಗುವುದು.

‘ಅನ್ಯ ದೇಶಗಳ...’ ಕಥೆಯನ್ನು ಟ್ರೇಲರ್ ತರಹ ಹೇಳುವುದಕ್ಕಿಂತಲೂ ಅವುಗಳನ್ನು ಓದಿ ಆಸ್ವಾದಿಸುವುದೇ ಒಳ್ಳೆಯದು. ಈ ಕೃತಿಯನ್ನು ಪ್ರಕಟಿಸಿದವರು ಶ್ರೀ ರಾಮ ಪ್ರಕಾಶನ, ನಂ. 893/ ಡಿ 3ನೇ ಕ್ರಾಸ್, ಪೂರ್ವ ಬಡಾವಣೆ, ನೆಹರು ನಗರ, ಮಂಡ್ಯ ಇವರು. 240 ಪುಟಗಳ ಈ ಕೃತಿಯ ಬೆಲೆ ರೂ. 125/- ಮಾತ್ರ. ಕೃತಿಗಳಿಗಾಗಿ 94811 45775 ಮೊಬೈಲ್ ಸಂಖ್ಯೆಯನ್ನು ಕೂಡ ಸಂಪರ್ಕಿಸಬಹುದು.

Read more!

Thursday, September 15, 2011

ಸ್ವಾಭಿಮಾನಿಯೊಬ್ಬನ ದಿಟ್ಟ ಪರಪಂಚ


ಅಂದಿನ ಮಲೆನಾಡಿನ ಭವ್ಯತೆಯನ್ನು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನುರು ಹೆಗ್ಗಡಿತಿ ಮತ್ತು ಇತರ ಕೃತಿಗಳಲ್ಲಿ ಯತ್ತೇಚ್ಛವಾಗಿ ಕಾಣಸಿಗುವುದಾದರೂ, ಅವರು ಕೃತಿಗಳಲ್ಲಿ ಕಟ್ಟಿಕೊಡುವ ಆ ಮಲೆನಾಡು ಈಗ ಕಾಣಸಿಗಲಾರದು. ಆದರೂ ಮಲೆನಾಡಿನ ದೃಗ್ ದಿಗಂತದ ದೃಶ್ಯ ಸಾದೃಶ ಯಾರನ್ನಾದರೂ ಸೆಳೆಯದಿರದು. ಕುವೆಂಪು ಆನಂತರದ ಬಹಳಷ್ಟು ಲೇಖಕರು ಕೂಡ `ಮೆರೆದ’ ಮಲೆನಾಡನ್ನ ಕೃತಿಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅವರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಕೃತಿಗಳಲ್ಲಿ ಬದುಕಿನ ಜೊತೆಜೊತೆಗೆನೆ ಜೀವ ಸಂಕುಲಗಳು, ಅವುಗಳ ವೈಜ್ಞಾನಿಕ ವಿಶೇಷತೆಗಳನ್ನು ಕೂಡ ನಮಗೆ ತಿಳಿಸಿಕೊಡುತ್ತಾರೆ. ಆನಂತರ ಮಲೆನಾಡಿನ ಬಗ್ಗೆ ಅದೆಷ್ಟೋ ಲೇಖಕರು ಬರೆದರೂ, ಇತ್ತೀಚೆಗೆ ಪ್ರಕಟಗೊಂಡ ಕೆಲವು ಕೃತಿಗಳಲ್ಲಿ ಗಿರಿಮನೆ ಶಾಮರಾವ್ ಅವರ `ಕಾಫಿ ನಾಡಿನ ಕಿತ್ತಳೆ’ ಮತ್ತು ಬಿಳುಮನೆ ರಾಮದಾಸ್ ಅವರ `ಮಲೆಯ ಪ್ರಬಂಧಗಳು’ ಮರೆಯಾದ ಮಲೆನಾಡಿನ ಒಳಹೊರಗನ್ನು ಪ್ರತಿಬಿಂಬಿಸಿದೆ. ಓದುಗನ ಕಣ್ಣಿನಲ್ಲಿ ಇಂದಿಗೂ ಅಂದಿನ ಮಲೆನಾಡು ಇಲ್ಲಿ ಇನ್ನೂ ಸಮೃದ್ಧವಾಗಿಯೇ ಉಳಿದಿದೆ."

ಈ ರೀತಿಯಲ್ಲಿ ಮಲೆನಾಡನ್ನು ತೊರೆದು ಬಾಲ್ಯದ ನೆನಪುಗಳನ್ನು ಜೀವಂತವಾಗಿರಿಸಿಕೊಂಡು ಆಗಿನ ಮಲೆನಾಡಿನ ಸ್ಥಿತಿಗತಿ ಮತ್ತು ಅಲ್ಲಿಯ ಬದುಕಿನ ಪುಟಗಳನ್ನು ಕಟ್ಟಿಕೊಡುವವರಲ್ಲಿ ಲಕ್ಷ್ಮಣ ಕೊಡಸೆಯವರನ್ನು ಹೆಸರಿಸಬಹುದು. `ಪಯಣ’ದಂತಹ ಕಾದಂಬರಿಯನ್ನು ಬರೆದ ಕೊಡಸೆಯವರು, `ಊರು- ಮನೆ’ಯ ಮೂಲಕ ಮಲೆನಾಡಿನ ಪರಿಸರವನ್ನು ನೆನಪಿನಲ್ಲಿ ಜಾಗೃತವಾಗಿರಿಕೊಂಡು ಲೇಖನಿಯಿಂದ ಅಕ್ಷರಕ್ಕೆ ಇಳಿಸಿದ ಪ್ರಯತ್ನ ಅವರದ್ದು. ಅವರ ಇತ್ತೀಚಿನ ಕೃತಿ `ಅಪ್ಪನ ಪರಪಂಚ’ದಲ್ಲಿಯೂ ಮಲೆನಾಡಿನ ಬದುಕು, ಜೀವಸಂಕುಲಗಳ ವೈವಿಧ್ಯ ಮತ್ತು ಆಗಿನ ಮಲೆನಾಡಿನ ಪರಿಸರವನ್ನ ಬಹಳ ಸುಂದರವಾಗಿ ಬಳಸಿಕೊಂಡಿರುವುದು ಓದುಗನಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ.

`ಅಪ್ಪನ ಪರಪಂಚ’ ಒಂದು ಕಾದಂಬರಿಯಂತೆ ಕಂಡರೂ ಅಲ್ಲಿರುವುದು ಒಂದು ವ್ಯಕ್ತಿ ಚಿತ್ರಣ ಅಥವಾ `ಜೀವನಗಾಥೆ’. ಆದರೂ, ಇದನ್ನು ಒಂದು `ನಾನ್ ಫಿಕ್ಷನ್’ ಅಂದರೆ ತಪ್ಪಾಗಲಾರದು.

ಈ ಕೃತಿಯಲ್ಲಿ ತಂದೆ ಮತ್ತು ಮಗನ ಬಾಂಧವ್ಯಕ್ಕಿಂತಲೂ, ತಂದೆ ಬದುಕಿಗಾಗಿ ಪಡುವ ಹೋರಾಟವನ್ನು `ವನ್ ಮ್ಯಾನ್ ಆರ್ಮಿ’ಯಾಗಿ ಚಿತ್ರಿಸುತ್ತಾ, ಮಗ ತಂದೆಯ `ನೆಗೆಟಿವ್’ಗಳನ್ನು ಹೇಳುವಂತೆ ಕಂಡರೂ, ಅಲ್ಲಿ ಮಗನಿಗೆ ತಂದೆಯ ಮೇಲಿರುವ ಅವ್ಯಕ್ತವಾದ ಪ್ರೀತಿಯನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಇದರ ಜೊತೆಗೆ ಆಗಿನ ಒಟ್ಟು ವ್ಯವಸ್ಥೆಯನ್ನು, ಆ ಪರಿಸರದಲ್ಲಿ ಬೆಳೆದವರ ಮುಗ್ಧತೆಯನ್ನು ಕೂಡ ಪರಪಂಚದಲ್ಲಿ ದೃಶಿಸಿರುವುದು ಕಣ್ಣಿಗೆ ಕಟ್ಟಿದ ಹಾಗೆ ಮೂಡಿ ಬಂದಿದೆ. ಅಡಿಕೆಯ ಸಿಪ್ಪೆ ಸುಲಿಯುತ್ತಲೇ ಮಕ್ಕಳ ಬಗ್ಗೆ ಅಪಾರ ಪ್ರೀತಿಯಿರುವ ತಂದೆ, ಮಕ್ಕಳ ಓದಿನ ಬಗೆಯೂ ಕಾಳಜಿವಹಿಸಿ ಬದುಕು ಬದಲಿಸಿಕೊಳ್ಳುವ ನೋವು ಮತ್ತು ಪ್ರೀತಿಯಲ್ಲಿ ಅವರ `ಭವಿಷ್ಯ’ವನ್ನು ರೂಪಿಸಿಕೊಡುವುದು ಮಕ್ಕಳ ಮೇಲಿನ ದ್ವೇಷದಿಂದಲ್ಲ, ಬರೀ ಪ್ರೀತಿಯಿಂದ ಮಾತ್ರ. ತಂದೆಯಾದವನ ಜವಾಬ್ದಾರಿ ಮತ್ತು ಅದನ್ನು ಡಿಸ್ಚಾರ್ಜ್ಗೊಳಿಸುವ ಹಾದಿ ಸುಗಮವಾದುದಲ್ಲವಾದರೂ, ಈ ಕೃತಿಯಲ್ಲಿ ಇದ್ದದ್ದರಲ್ಲೇ ಪ್ರಪಂಚವನ್ನು ಕಂಡುಕೊಳ್ಳುವ ಗಟ್ಟಿ ಮಲೆನಾಡಿಗನೊಬ್ಬನ ಹೋರಾಟವಿದೆ.

ಆಯುಷ್ಯ ಏರುತ್ತಿದ್ದಂತೆ ಹುಟ್ಟಿಕೊಳ್ಳುವ ಜೀವನ ಪ್ರೀತಿ, ಅಸಹಾಯಕತೆಯ ನಡುವೆಯೂ ಮನಸ್ಸಿಗೆ ಮೀರಿದ ಸಾಹಸದ ಕೆಲಸಗಳನ್ನು ಮಾಡಲು ಪ್ರೇರೇಪಿಸುವಂತೆ ಇಳಿವಯಸಿನಲ್ಲಿಯೂ `ನೀರಾ’ ತೆಗೆದು, ಅದನ್ನು ಗಡಿಗೆಯಲ್ಲಿ ಹೊತ್ತುಕೊಂಡು ಹೋಗುವ ಕೆಲಸ ಸಾಮಾನ್ಯವಾದುದಲ್ಲ. ಇಲ್ಲಿ ಹಠಮಾರಿತನಕ್ಕಿಂತಲೂ ಸ್ವಾಭಿಮಾನವಿದೆ. ಮಕ್ಕಳ ಮುಂದೆ ಕ್ಷುಲ್ಲಕ ವಿಷಯಕ್ಕೂ ಕೈಯೊಡ್ಡಬೇಕಾದ ಪರಿಸ್ಥಿತಿಯಲ್ಲಿ ಅದನ್ನು ನಿಬಾಯಿಸಿ ಬದುಕುವ ಹಳ್ಳಿಗನೊಬ್ಬನ ಜೀವನಗಾಥೆಯಿದೆ. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಶೆಂದಿಯನ್ನು ತೆಗೆದು, ಮಾರುವ ದೃಶ್ಯವನ್ನು ಕಾಣುತ್ತೇವೆ. ಅದೇ ದೃಶ್ಯ ಕೊಡಸೆಯವರ ಈ ಕೃತಿಯಲ್ಲಿ ಕೂಡ ಪಾತ್ರವೊಂದರ ಅವಿಭಾಜ್ಯ ಅಂಗದಂತೆ ಮೂಡಿಬಂದಿದೆ.

`ಅಪ್ಪನ ಪರಪಂಚ’ದಲ್ಲಿ, ಅಪ್ಪ ರಾಜಕೀಯವನ್ನು ಅನಿವಾರ್ಯವಾಗಿ ಪ್ರವೇಶಿಸುವುದು, ಬಿಳುಮನೆಯವರ `ಮಲೆಯ ಪ್ರಬಂಧಗಳು’ವಿನಲ್ಲಿ `ಶಾಂತವೇರಿ ಗೋಪಾಲಗೌಡರು- ನೆನಪುಗಳು’ ಪ್ರಬಂಧವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ರಾಜಕೀಯದ ನಡುವೆ ಇಳಿವಯಸ್ಸಿನಲ್ಲಿಯೂ ಸಮಾಜಸೇವೆಗೆ ಟೊಂಕಕಟ್ಟಿ ನಿಲ್ಲುವ ಉತ್ಸಾಹ ಅಪ್ಪನ ಪರಸೇವೆಯ ಪ್ರಪಂಚವಾಗಿಯು ಕಾಣಿಸುತ್ತದೆ. ಚುನಾವಣೆಯಲ್ಲಿ ಸೋತರೂ ಬತ್ತದ ಸಮಾಜಸೇವೆಯ ನಂಟು ರಿಪ್ಪನ್ ಪೇಟೆಯಲ್ಲಿರುವ ಸಮೂದಾಯ ವಿದ್ಯಾರ್ಥಿನಿಲಯದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಶಿಕ್ಷಣದ ಹಂಬಲದಲ್ಲಿರುವ ಮಕ್ಕಳ ಕಾಳಜಿಯನ್ನು ಹೊತ್ತುಕೊಂಡು ಪರಿಸ್ಥಿತಿಯನ್ನು ಎದುರಿಸುವುದು ಸುಲಭದ ಮಾತಲ್ಲವೆನ್ನುವುದು ಓದುಗನಿಗೆ ತಿಳಿಯುತ್ತದೆ.

ಇಷ್ಟೆಲ್ಲಾ ತಾಕತ್ತಿದ್ದರೂ ಮಕ್ಕಳು ಪ್ರಾಯಕ್ಕೆ ಬಂದಾಗ ಅವರಿಗೆ ಜವಾಬ್ದಾರಿಯನ್ನು ಹೊರೆಸಿ, ಬದುಕಿನ ವ್ಯಾಪ್ತಿಯನ್ನು ತೆರೆದಿಡುವ ಉದ್ದೇಶವೇ ಅವನಿಗೆ ಇದ್ದಿರಬಹುದೆಂದೆನಿಸುತ್ತದೆ. ಇಲ್ಲವಾದರೆ ಮಕ್ಕಳಿಗೆ ಆಯಾಯ ಸಂದರ್ಭದಲ್ಲಿ ಏನೇನು ಆಗಬೇಕೆಂದುಕೊಳ್ಳುತ್ತಾನೋ ಅವುಗಳ ಜೊತೆಗೆ ಅವರವರ ಜವಾಬ್ದಾರಿಯನ್ನು ಈ ಮೂಲಕ ಹೇಳುತ್ತಿರಬಹುದು. ಅಷ್ಟೇ ಅಲ್ಲದೆ, ಸರೀಕರ ಜೊತೆಗೆ `ಯಜಮಾನ’ ಅನಿಸಿಕೊಂಡವನು ಬಾಂಧವ್ಯಗಳನ್ನು ಉಳಿಸಿಕೊಂಡು ಒಬ್ಬ `ರೋಲ್ ಮಾಡೆಲ್’ ಆಗಿ ಗೋಚರಿಸಿದರೂ ಹೆಚ್ಚಲ್ಲ. ಈ ರೀತಿಯ ಗೌರವಕ್ಕೆ ಪಾತ್ರವಾಗಬೇಕಾದರೆ ಆತನ ಕಾರ್ಯವೈಖರಿ, ಆದರ್ಶಗಳು ಇತರರಿಗೆ ಮಾದರಿಯಾಗಿರಬೇಕು. ಹಾಗಿನ ವ್ಯಕ್ತಿತ್ವ ಈ ಕೃತಿಯಲ್ಲಿ ಬರುವ ಅಪ್ಪನದು. ಬೆನ್ನುಡಿಯಲ್ಲಿ ಸರ್ಜಾಶಂಕರ ಹರಳಿಮಠ ಅವರು ಹೇಳುವಂತೆ, `ಇಲ್ಲಿ ಅಪ್ಪನ ಬಗ್ಗೆ ಮಾತ್ರ ಹೇಳುತ್ತಿಲ್ಲ. ಅಪ್ಪನ ಕಾಲಘಟ್ಟವನ್ನು ನಿಷ್ಠುರವಾಗಿ ಚಿತ್ರಿಸುವ ಕೃತಿ `ಅಪ್ಪನ ಪರಪಂಚ’.

ಮಕ್ಕಳ ಮನೆಯಲ್ಲಿ ಆರಾಮವಾಗಿ ಜೀವನ ನಡೆಸಬಹುದಾದ ಅವಕಾಶಗಳಿದ್ದರೂ ಅದು ಅಸಹನೀಯವಾಗುವ ಸ್ಥಿತಿಯೇ ಒಬ್ಬನ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಅಂತಹ ಕ್ರಿಯಾಶೀಲತೆಯಿಂದಿರುವ ವ್ಯಕ್ತಿಯು ಪ್ರತೀ ಕೆಲಸದಲ್ಲಿಯೂ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾನೆ. ಹಾಗಾಗಿ ಇಲ್ಲಿಯ ಅಪ್ಪ ತನ್ನದೇ ಆದ ಒಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಾನೆ.

ಮಕ್ಕಳಿಗೆ ರೋಲ್ ಮಾಡೆಲ್ ಆಗುವ ಅಪ್ಪಂದಿರ ಬಗ್ಗೆ ಆಗಿನ ಕಾಲದಲ್ಲಿ ಏನನ್ನೂ ಗುರುತಿಸಲಾರದೆ, ಸ್ವತ: ತನಗೆ ಜವಾಬ್ದಾರಿಗಳ ಆಳದ ಅರಿವಾದಾಗ ಮಗ, ಅಪ್ಪನ ಕಾರ್ಯವೈಖರಿಯನ್ನು ಒಂದು `ಬೆರಗು’ ಅನ್ನುವಂತೆ ಇಲ್ಲಿ ಕಾಣುತ್ತಾನೆ. ಆ ಬೆರಗು ಅಸಹಾಯಕತೆಯಿಂದ ಪಾರ್ಶ್ವವಾಯು ಪೀಡಿತನಾಗಿ ಮಲಗಿದಾಗ ಕ್ರಿಯಾಶೀಲತೆಯ ಚುರುಕು ಜೀವವೊಂದನ್ನು ಆ ರೀತಿಯಲ್ಲಿ ಕಲ್ಪಿಸಿಕೊಳ್ಳುವುದಕ್ಕೂ ಬೇಸರವಾಗುತ್ತದೆ. ಮುಂದೇ ಅದು ಸಾವಿನಲ್ಲಿ ಅಂತ್ಯ ಕಂಡಾಗ ಅಪ್ಪನನ್ನು ನೋಡಲಾಗದ ಅಸಹಾಯಕತೆಯಲ್ಲಿ ಉಳಿದು ಬಿಡುವ ಮಗನ ಅಂತ:ಕರಣದ ಸೊಲ್ಲು ಮತ್ತು ಅವನ ಆಶೆಗಳೆಲ್ಲಾ ದೂರ ಮಾಡಿಕೊಂಡ ನಿರ್ಲಿಪ್ತತೆ ಯಾರ ಮನಸ್ಸನಾದರೂ ಕಲಕದಿರದು. ಇನ್ನೊಂದು ಮನಕಲಕುವ ದೃಶ್ಯ, ಮಕ್ಕಳ ಒತ್ತಾಯಕ್ಕೆ ಹಸಿರು ಬಳೆ ತೊಟ್ಟು, ಕನಕಾಂಬರ ಮುಡಿಗೇರಿಸಿ, ಹಣೆಗೆ ಕುಂಕುಮವಿಟ್ಟು ಕಾರಿನತ್ತ ಹೆಜ್ಜೆ ಹಾಕುವ ತಾಯಿಯ ಸನ್ನಿವೇಶ ಓದುಗನ ಕಣ್ಣನ್ನು ಒದ್ದೆ ಮಾಡದಿರದು.

`ಅಪ್ಪನ ಪರಪಂಚ’ ಒಬ್ಬ ಆದರ್ಶ ಪ್ರಾಯ ತಂದೆಯ ಜೀವಿತ ಮತ್ತು ಆತನ ಸ್ವಾಭಿಮಾನದ, ಶಿಸ್ತಿನ ಬದುಕು ಎಲ್ಲರಿಗೂ ಮಾದರಿಯೆಂದರೆ ಅತಿಶಯೋಕ್ತಿಯಲ್ಲ. ನಿಜವಾಗಿಯೂ ತಂದೆಯೊಬ್ಬ ಮಕ್ಕಳ ದೃಷ್ಟಿಯಲ್ಲಿ `ರಿಯಲ್ ಹೀರೋ’ ಅಂದರೂ ತಪ್ಪಲ್ಲ. ಹಾಗಾಗಿ ಲಕ್ಷ್ಮಣ ಕೊಡಸೆ ಅವರ ಈ ಕೃತಿ ಕೇವಲ ಒಂದು ಕುಟುಂಬದ ಅಥವಾ ವರ್ಗದ ಓದುಗರಿಗೆ ಮಾತ್ರ ಸೀಮಿತವಲ್ಲ. ಸಹಜ ಬದುಕಿನ ಏರಿಳಿತಗಳು ಓದುಗರಿಗೂ ಆದರ್ಶಪ್ರಾಯವೆಂದೆನಿಸಬಹುದು. ಈ ಕೃತಿಯಲ್ಲಿ ಮನೋಹರ್ ಅವರ ಮುಖಪುಟದ ಕಲೆ ಕೂಡ ಕೃತಿಯಷ್ಟೇ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

Read more!

Sunday, September 4, 2011

ಗ್ರಾಮೀಣ ಜೀವನದಲ್ಲಿ ‘ಗಾಂಧೀಜಿ’ಯರು


ನಾ. ಮೊಗಸಾಲೆಯವರು ಒಂದು ಕಡೆ ಹೇಳುತ್ತಾರೆ, ‘ಈಗಿನ ಕತೆಗಳು ಕತೆಗಳಾಗಿ ಉಳಿದಿಲ್ಲ’. ಅವರ ಅನುಭವದ ಈ ಮಾತು ನೂರಕ್ಕೆ ನೂರು ಸತ್ಯ. ಪತ್ರಿಕೆಗಳು ಇವತ್ತು ಕೇಳುತ್ತಿರುವುದು ಪೇಜ್ ಲಿಮಿಟ್‌ನ ಕತೆಗಳನ್ನು. ಇದು ಕತೆಗಾರನ ಸೃಜನಶೀಲತೆಗೆ ಸವಾಲಾದರೂ ಒಂದು ಸಣ್ಣ ಚೌಕಟ್ಟಿನೊಳಗೆ ಕತೆಯನ್ನು ಹಿಡಿದಿಡುವುದು ಸೃಜನಶೀಲತೆಯಲ್ಲ; ಬದಲಾಗಿ, ಫಿಜ್ಜಾ ಬರ್ಗರ್, ಚಾಟ್ ಐಟಂ ನಂತಹ ರುಚಿಯಿಲ್ಲದ, ಸತ್ವವಿಲ್ಲದ ಮತ್ತು ಅನಾರೋಗ್ಯಕರ ಹಳಸಲು ತಿಂಡಿಗಳಂತೆ. ಹಿಂದಿನ ತಲೆಮಾರಿನ ಕತೆಗಾರರೆಲ್ಲ ಚೌಕಟ್ಟು ಹಾಕದೆ ಕತೆಗಳನ್ನು ಬರೆದಿರುವುದು ಅವರಲ್ಲಿ ಸೃಜನಶೀಲತೆಯಿಲ್ಲದೆಯೆ? ಉದಾಹರಣೆಗೆ ರಾಘವೇಂದ್ರ ಖಾಸನೀಸರ ಕತೆಗಳನ್ನು ಕೈಗೆತ್ತಿಕೊಂಡರೆ ಅವುಗಳನ್ನು ಓದುವುದೇ ಒಂದು ಚೇತೋಹಾರಿ ಅನುಭವ. ಅವರ ಕತೆಗಳಾವುವು ಪುಟವ್ಯಾಪ್ತಿಯನ್ನು ಹಾಕಿಕೊಂಡು ಬರೆದವಲ್ಲ. ಅವುಗಳನ್ನು ನೀಳ್ಗತೆಗಳೆಂದು ಕರೆದರೂ ತಪ್ಪಲ್ಲ. ಆ ಕತೆಗಳನ್ನು ಇಂದಿಗೂ ಉಸಿರು ಬಿಗಿ ಹಿಡಿದು ಓದಿಸಿವುದು ಪುಟ ಮಿತಿಯಲ್ಲದ ಕತೆಯೆಂದೆ? ಇದು ನಾವು ಇಂದು ಕತೆಗಳ ಬಗ್ಗೆ ಮಾತನಾಡುವಾಗ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿರುವ ಪ್ರಶ್ನೆ."

ಅಂತಹ ಪುಟವ್ಯಾಪ್ತಿಗೆ ಒಗ್ಗದೆ ಬರೆದ ಕತೆಗಳ ಸಮುಚ್ಚಯ ನಾ. ಮೊಗಸಾಲೆಯವರ, ಇತ್ತೀಚೆಗೆ ಬೆಳಕುಕಂಡ ಕತೆಗಳ ಸಂಕಲನ ‘ಸೀತಾಪುರದಲ್ಲಿ ಗಾಂಧೀಜಿ’. ಇಲ್ಲಿಯ ಕತೆಗಳಲ್ಲಿ ಕೇವಲ ಗಾಂಧೀಜಿಯನ್ನು ಹುಡುಕ ಹೊರಟರೆ ಆತ ನಿಮಗೆಲ್ಲೂ ಗೋಚರಿಸುವುದಿಲ್ಲ. ಬದಲಾಗಿ ಗಾಂಧೀಜಿಯಂತಹ ಕೆಲವೊಂದು ವ್ಯಕ್ತಿತ್ವಗಳನ್ನು ಕಾಣಬಹುದೆನ್ನುವುದು ಸುಳ್ಳಲ್ಲ. ಇದನ್ನು ಮುನ್ನುಡಿಯಲ್ಲಿ ಎಸ್. ಆರ್ ವಿಜಯಶಂಕರ್ ಅವರು ಕೂಡ ಗುರುತಿಸಿದ್ದಾರೆ.

ಆರ್. ಕೆ. ನಾರಾಯಣರ ಕತೆಗಳಲ್ಲಿ ಬರುವ ‘ಮಾಲ್ಗುಡಿ’ಯಂತೆ ಮೊಗಸಾಲೆಯವರ ಕತೆಗಳಲ್ಲಿ ಕಾಣಸಿಗುವ ‘ಸೀತಾಪುರ’ ಒಂದು ಮಾದರಿ ಗ್ರಾಮದಂತೆ ನಮಗೆ ಗೋಚರವಾಗುತ್ತದೆ. ಇಲ್ಲಿಯ ಕತೆಗಳೆಲ್ಲವೂ ಸೀತಾಪುರದ ಸುತ್ತಮುತ್ತಲೂ ನಡೆಯುವ ಘಟನೆಗಳು ಮತ್ತು ಇಲ್ಲಿಯ ಕತೆಗಳನ್ನು ಓದುವಾಗ ಒಂದು ಕಾದಂಬರಿಯನ್ನು ಓದಿದ ಅನುಭವವೂ ನಮಗಾಗದಿರದು. ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಲೋಕ’ದಂತಹ ಕೃತಿಗಳನ್ನು ಓದುವಾಗ ಅದನ್ನು ನೀವು ಯಾವ ಅಧ್ಯಾಯದಿಂದ ಆರಂಭಿಸಿದರೂ ನಿಮಗೆ ದಕ್ಕುವ ಅನುಭವವು ಬೇರಯದೆ. ಹಾಗೆ ಇಲ್ಲಿಯ ಕತೆಗಳು ಕೂಡ, ಒಂದೇ ಪರಿಸರದಲ್ಲಿ ಘಟಿಸುವುದರಿಂದ ಕತೆಗಳೆಲ್ಲ ಆಪ್ತವೆನಿಸುತ್ತವೆ. ಸೀತಾಪುರ, ಕುಪ್ಪಣ್ಣ ಇಂತಹ ಪ್ರದೇಶ, ವ್ಯಕ್ತಿಗಳು ಪದೇ ಪದೇ ಎಲ್ಲಾ ಕತೆಗಳಲ್ಲಿ ಮರುಸೃಷ್ಟಿ ಪಡೆದುಕೊಳ್ಳುವುದರಿಂದ ‘ಸೀತಾಪುರದಲ್ಲಿ ಗಾಂಧೀಜಿ’ ಒಂದು ಸುಂದರ ಮತ್ತು ಸರಳ ಕಾದಂಬರಿಯಂತೆಯೂ ಕಾಣುತ್ತದೆ. ಇದಲ್ಲದೆ, ಕುಪ್ಪಣ್ಣಯ್ಯ ಪ್ರತೀಯೊಂದು ಸಮಸ್ಯೆಯಲ್ಲಿಯೂ ಮುಖಾಮುಖಿಯಾಗುತ್ತಾ ಅವನ್ನು ನಿರಾಳವಾಗಿ ಪರಿಹರಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಆದರ್ಶಪ್ರಾಯರಾಗಿ ಕಾಣಿಸುತ್ತಾರೆ.

‘ಸೀತಾಪುರದಲ್ಲಿ ಗಾಂಧೀಜಿ’, ಎಂದೋ ಒಮ್ಮೆ ಸೀತಾಪುರಕ್ಕೆ ಗಾಂಧೀಜಿ ಬಂದಿದ್ದಾರೆನ್ನುವುದಕ್ಕಿಂತ ಅವರ ಬಂದಿರುವಿಕೆಯ ಪ್ರಭಾವ ಆ ಊರಿನ ಜನರ ಮೇಲೆ ಹೇಗೆ ಆಗಿದೆ ಅನ್ನುವುದನ್ನು ಕೆಲವೊಂದು ಪಾತ್ರಗಳ ಮೂಲಕ ತಿಳಿಯುತ್ತದೆ. ಈ ಸಂಕಲನ ಗಾಂಧೀಜಿಯ ಕಾಲಕ್ಕೆ ಸೀಮಿತವಾಗದೆ ಇಂದಿನ ವಾಸ್ತವ ಚಿತ್ರಣವನ್ನ ಕಟ್ಟಿಕೊಡುವುದಲ್ಲದೆ, ಸಮಾಜಮುಖಿಯಾದ ಸಮಸ್ಯೆಗಳನ್ನು ಎತ್ತಿ ಹಿಡಿದು ಧ್ವನಿಸುತ್ತದೆ. ‘ಸುಣ್ಣ ಎದ್ದು ಹೋದ ಗೋಡೆ’ಯಲ್ಲಿ ಕನ್ನಡ ಶಾಲೆಗಳ ದುಸ್ಥಿತಿಯನ್ನು ಕತೆಯ ಮೂಲಕ ಜಾಗೃತಗೊಳಿಸುವ ಪ್ರಯತ್ನ ಮೊಗಸಾಲೆಯವರದ್ದು. ಅದೇ ರೀತಿ ವಿಮಾನ ದುರಂತದ ಚಿತ್ರಣವಿರುವ ‘ಭೂಮಿ ಮತ್ತು ಆಕಾಶ’ ಕತೆಯಲ್ಲಿ ದುರಂತದ ಜೊತೆಗೇನೇ ನಿರುದ್ಯೋಗದ ಮತ್ತು ಪ್ರತಿಭಾ ಪಲಾಯನದ ಕುರಿತು ಕತೆ ಧ್ವನಿಸುವುದನ್ನು ಗಮನಿಸಬಹುದು. ಇದು ಮೊಗಸಾಲೆಯವರಿಗಿರುವ ಸಾಮಾಜಿಕ ಕಳಕಳಿಯನ್ನು ಕೂಡ ತೋರಿಸುತ್ತದೆ.

ಇನ್ನು ಇಲ್ಲಿಯ ಕತೆಗಳ ಬಗ್ಗೆ ಹೇಳುವುದಾದರೆ ಮೊದಲ ಕತೆ, ‘ಸೀತಾಪುರದಲ್ಲಿ ಗಾಂಧೀಜಿ’ ಸಂಕಲನದ ಉಳಿದ ಕತೆಗಳಿಗೆಲ್ಲ ಮುನ್ನುಡಿಯಾಗಿಯೂ ಮತ್ತು ಸೀತಾಪುರದ ಬಹುತೇಕ ಎಲ್ಲಾ ವರ್ಣನೆಗಳನ್ನೊಳಗೊಂಡು ಓದುಗನ ಮನಸ್ಸಿನಲ್ಲಿ ಒಂದು ಅಚ್ಚಳಿಯದ ಪರಿಸರವನ್ನು ನಿರ್ಮಿಸಿ ಬಿಡುತ್ತದೆಯೆನ್ನುವುದು ನನ್ನ ಅನುಭವ. ಸೀತಾಪುರದ ರಥಬೀದಿ, ಕುಪ್ಪಣ್ಣನ ಹೊಟೇಲು, ಸಮಯ ಸಮಯಕ್ಕೆ ಓಡಾಡುವ ಬಸ್ಸು, ಕೋಮುಸೌಹಾರ್ದತೆಯ ಬಾಂಧವ್ಯ ಇವೆಲ್ಲಾ ಕೊನೆಯ ಕತೆಯನ್ನು ಓದಿದ ಬಳಿಕವೂ ಮನಸ್ಸಿನಲ್ಲಿ ಉಳಿದು ಬಿಡುತ್ತವೆ. ಈ ಕತೆಯಲ್ಲಿ ಗ್ರಾಮಸೇವಕನಾಗಿ ಬರುವ ಅಶ್ವತ್ಥನಾರಾಯಣನಿಗೆ ಕತೆ ಬರೆಯುವ ಗೀಳು. ನಾಗಪ್ಪನ ಬಗ್ಗೆ ಪತ್ರಿಕೆಯಲ್ಲಿ ಬರೆದಿರುವವನು ಅವನೇ ಅನ್ನುವ ಗುಮಾನಿಯೆದ್ದು, ಅವನ ಮೇಲೆ ಹಲ್ಲೆ ನಡೆಯುತ್ತದೆ. ಇದಕ್ಕೆ ಕುಪ್ಪಣ್ಣಯ್ಯ ಬೆನ್ನೆಲುಬಾಗಿ ನಿಂತು ಕೇಸು ಕೋರ್ಟಿನವರೆಗೂ ತಲುಪುತ್ತದೆ. ಈ ಹೋರಾಟದಲ್ಲಿ ನ್ಯಾಯ ಬೇಕಾಗಿರುತ್ತದೆ. ಕೇಸು ರಾಜಿಪಂಚಾತಿಕೆಯಲ್ಲಿ ಕೊನೆಗೊಳ್ಳುವುದು ಬೇರೆ ಪ್ರಶ್ನೆ. ಆದರೆ ಇಲ್ಲಿಯ ಹೋರಾಟ ಗಾಂಧೀಜಿಯನ್ನು ನೆನಪಿಸುತ್ತದೆ. ಹಾಗೆ ಗಾಂಧೀಜಿಯನ್ನು ನೆನಪಿಸುವ ಕೆಲವೊಂದು ಪಾತ್ರಗಳು ಇಲ್ಲಿಯ ಕತೆಗಳಲ್ಲಿ ಕಾಣಸಿಗುತ್ತದೆ.

ಈ ಸಂಕಲನದ ಇನ್ನೊಂದು ಕತೆ, ‘ನುಗ್ಗೆ ಗಿಡ’. ವಾರದ ಸಂತೆಗೆ ಹೋಗಲು ಬಸ್ಸು ತಪ್ಪಿ, ತನಗೆ ವಹಿಸಿರುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದೆ ನುಗ್ಗೆ ಕೋಡನ್ನು ಸಂತೆಯಿಂದ ತರಲಾಗದೆ ಚಡಪಡಿಸುವ ಕುಪ್ಪಣ್ಣಯ್ಯನಿಗೆ ತನಗೆ ಅದನ್ನು ತರಲು ಹೇಳಿದವರ ಮನೆಯ ಮುಂದೆಯೇ ನುಗ್ಗೆಗಿಡವಿರುವುದನ್ನು ಕಂಡು ಆಶ್ಚರ್ಯವಾಗುತ್ತದೆ. ಆದರೆ ಈ ಕತೆಯಲ್ಲಿ ದನಿಯಿರುವುದು ನಾಟಿವೈದ್ಯೆ ಪ್ರೇಮಕ್ಕ ಸರ್ಪಸುತ್ತು ಕಾಯಿಲೆಗೆ ಕೊಡುವ ಔಷಧದಲ್ಲಿ. ಉಸ್ಮಾನನ ಕಾಯಿಲೆಯನ್ನು ನೋಡಿ ಔಷಧಕೊಡಲು ಮುಂದಾದ ಆಕೆಗೆ ಕಸಾಯಿಖಾನೆಗೆ ಹೋದ ತನ್ನ ಗಡಸು ದನದ ವಿಷಯ ತಿಳಿಯುತ್ತದೆ. ಅದರಿಂದ ಒಮ್ಮೆ ಆಕೆ ಆಘಾತಕೊಳ್ಳಗಾದರೂ ಅವಳ ಅಂತ:ಕರಣದಲ್ಲಿ ಮಾನವೀಯತೆಯ ಸೆಲೆಯಿರುತ್ತದೆ. ಹೀಗೆ ಸಾಗುವ ಈ ಕತೆ ನಿಜಕ್ಕೂ ಪ್ರೇಮಕ್ಕನ ಮಾನವೀಯತೆಯನ್ನ ಎತ್ತಿಹಿಡಿಯುವುದಲ್ಲದೆ, ಸೌಹಾರ್ದತೆಯ ದನಿಯಾಗಿಯೂ ಕಾಣಿಸುತ್ತದೆ.

‘ದನಕರು’ ಕೂಡ ಇಂತಹುದೇ ಸೌಹಾರ್ದತೆಯ ಕತೆಯಾದರೂ ಒಂದು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಬರೆದ ಕತೆಯೆನಿಸುತ್ತದೆ. ಗಂಡು ಕರುಗಳನ್ನು, ಗೊಡ್ಡು ಮತ್ತು ಮುದಿ ದನಗಳನ್ನು ಸಾಕಾಲಾರದೆ ಜಬರ್ದಸ್ಥಿಯಿಂದ ಮಾರಬೇಕಾದ ಪರಿಸ್ಥಿತಿಯಲ್ಲಿ ಅವನ್ನು ಏನು ಮಾಡಬೇಕೆನ್ನುವುದು ಒಂದು ಸಮಸ್ಯೆ. ಆ ಸಮಸ್ಯೆಗಳಿಗೆ ಉತ್ತರವನ್ನು ಕಾಣುವ ಪ್ರಯತ್ನವಿದೆಯಾದರೂ ಅಲ್ಲಿಯೂ ಕೆಲವೊಂದು ನ್ಯೂನತೆಗಳಿರುವುದನ್ನು ಈ ಕತೆ ಧ್ವನಿಸುತ್ತದೆ. ಇದು ಒಟ್ಟು ಸಮಾಜದ ಪರಿಹಾರ ಕಾಣದ ಸಮಸ್ಯೆಯಂತೆಯೂ ಗೋಚರಿಸುತ್ತದೆ. ಮನುಷ್ಯ ಕೇವಲ ಲಾಭಿಯನ್ನು ಮಾತ್ರ ಚಿಂತಿಸಿದರೆ ಸಮಸ್ಯೆ ಪರಿಹಾರ ಕಾಣುವುದಿಲ್ಲವೆನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.

ಇಂದಿನ ವಾಸ್ತವ ಸಂಗತಿಯನ್ನು ತೆರೆದಿಡುವ ಕತೆ ‘ಸುಣ್ಣ ಎದ್ದು ಹೋದ ಗೋಡೆ’. ಈ ಕತೆಯಲ್ಲಿ ಅದ:ಪತನಕ್ಕೊಳಗಾಗುತ್ತಿರುವ ಕನ್ನಡ ಶಾಲೆಗಳ ಕಾಳಜಿಯಿರುವ ದುಗ್ಗಪ್ಪ ಮಾಸ್ತರರಿಗೆ ತಾವೇ ಆರಂಭಿಸಿದ ಕನ್ನಡ ಶಾಲೆಯನ್ನು ಮುಚ್ಚುವಾಗಿನ ನೋವು ಲೇಖಕನ ದನಿಯಾಗಿಯೂ ಮೂಡಿ ಬಂದಿರುವುದು ಕತೆಯ ಸಹಜತೆಗೆ ಕಾರಣವಾಗಿದೆ. ಕನ್ನಡ ಶಾಲೆಗಳಲ್ಲಿ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳಿಲ್ಲದೆ ಮುಚ್ಚಬೇಕಾದ ಅನಿವಾರ್ಯತೆ ಪ್ರಸಕ್ತ ಸಮಸ್ಯೆ. ಅದನ್ನು ಪರಿಹರಿಸಲಾರದ್ದು ಮೇಷ್ಟ್ರ ಸಾವಿನ ಸಾಂಕೇತವಷ್ಟೆ. ಅವರು ಉಳಿಸಿದ ಶಾಲೆ ಮತ್ತು ಅವರು ಕಲಿಸಿದ ವಿದ್ಯಾರ್ಥಿಗಳು ಮೇಷ್ಟ್ರನ್ನ ನೆನಪಿಸಿಕೊಳ್ಳದಿರುವುದಿಲ್ಲ. ಅಲ್ಲಿ ಕಲಿತ ವಿದ್ಯಾರ್ಥಿಗಳಿಗೆ ‘ಕನ್ನಡ ಶಾಲೆ’ ಎಂದು ಅದನ್ನು ಅಭಿಮಾನದಿಂದ ನೆನಪಿಸಿಕೊಳ್ಳುವುದು ಮರೆಯಲಾರದ್ದು. ಆದರೆ ಆಧುನಿಕ ಶಿಕ್ಷಣ ನೀತಿಗೆ ಬದಲಾಗಬೇಕಾದ ಅನಿವಾರ್ಯತೆಯೊಂದು ತಲೆಯೆತ್ತಿರುವುದರಿಂದ ಅದು ಪರಿಹಾರವಿಲ್ಲದೆ ಕೊನೆಯಾಗಬೇಕಾಗುತ್ತದೆ.

ಸುಂದರರಾಯರು ತನ್ನದ್ದಲ್ಲದ ಹಣವನ್ನು ಪ್ರಮಾಣಿಕರಾಗಿ ಪೊಲೀಸ್ ಸ್ಟೇಶನ್‌ಗೆ ಕೊಂಡೊಯ್ಯುವಾಗಲೂ ಅಲ್ಲಿ ಅದನ್ನು ತಿಮ್ಮಪ್ಪನ ಹುಂಡಿಗೆ ಹಾಕಲು ಹೇಳುತ್ತಾರೆ. ಅದನ್ನು ಹಾಗೆ ವಾಪಾಸು ತಂದು ಕುಪ್ಪಣ್ಣಯ್ಯನವರಲ್ಲಿ ಏನು ಮಾಡಬೇಕೆಂದು ಅವರು ಕೇಳಿದರೆ ಕುಪ್ಪಣ್ಣಯ್ಯ ಅದನ್ನು ಸ್ಕಾಲರ್ ಶಿಪ್‌ಗೆ ಉಪಯೋಗಿಸಿಕೊಳ್ಳುವಂತೆ ತಿಳಿಸುತ್ತಾರೆ. ಆದರೆ ಸುಂದರರಾಯರಿಗೆ ಅದು ಹೊರೆಯಾಗಿ ಕಾಣುತ್ತದೆ. ಇದು ‘ಒದ್ದೆಯಾದ ಆಕಾಶ’ ಕತೆಯ ಉತ್ತರಾರ್ಧ. ಪೂರ್ವಾರ್ಧದಲ್ಲಿ ಇದೇ ಸುಂದರರಾಯರು ಸಮುದ್ರ ತೀರದಲ್ಲಿ ತಮ್ಮೆಲ್ಲಾ ಚಿನ್ನದೊಡವೆಗಳನ್ನು ಕಳೆದುಕೊಂಡಿದ್ದರೂ ಅದು ದೇವರೇ ಮಾಡಿದನೆನ್ನುವ ನಿರಾಳತೆಯಿಂದಿರುತ್ತಾರೆ. ಆದರೆ ತಮಗೆ ಸಿಕ್ಕ ಹಣವನ್ನು ದೇವರು ಕೊಟ್ಟದ್ದೆಂದು ಅದನ್ನು ಉಪಯೋಗಿಸಿಕೊಳ್ಳುವುದಿಲ್ಲ. ಬದಲಾಗಿ ಪ್ರಾಮಾಣಿಕರಾಗಿ ಅದನ್ನು ಸ್ಟೇಶನ್‌ಗೆ ಕೊಡೊಯ್ಯುವಾಗಲೂ ಅಲ್ಲಿಯೂ ಎಂತಹ ಪ್ರಮಾಣಿಕತೆ ನೋಡಿ. ಇಲಾಖೆಯವರೂ ಅದನ್ನು ವಾಪಾಸುತೆಗೆದುಕೊಂಡು ಹೋಗಲು ತಿಳಿಸುತ್ತಾರೆ. ಈ ಕತೆಯಲ್ಲಿ ಎಲ್ಲೂ ಕ್ಲ್ಯಾಶ್‌ಗಳಾಗಲಿ, ಆಶೆಬುರುಕರಾಗಲಿ ಕಾಣಿಸಿಗುವುದಿಲ್ಲ. ಪ್ರಾಮಾಣಿಕತೆಯಿಂದ ಅದನ್ನು ಒಳ್ಳೆಯದಕ್ಕೆ ಉಪಯೋಗಿಸಲು ತಿಳಿಸುತ್ತಾರೆ. ಇಲ್ಲಿ ಸುಂದರರಾಯರಿಗೆ ಕಳೆದುಕೊಂಡ ತನ್ನ ಒಡವೆಗಳು ಹಣದ ರೂಪದಲ್ಲಿ ದೊರಕಿದವೆಂದು ಸುಮ್ಮನಿರಬಹುದಿತ್ತು. ಆದರೆ ಅವರು ಹಾಗೆ ಮಾಡದಿರುವುದರಿಂದ ಗಾಂಧೀಜಿಯನ್ನು ನೆನಪಿಸುತ್ತಾರೆ.

‘ಭೂಮಿ ಮತ್ತು ಆಕಾಶ’ ಆಧುನಿಕತೆಯ ದುರಂತ ಚಿತ್ರಣದ ಕತೆಯಾದರೂ ಕತೆ ನಡೆಯುವುದೆಲ್ಲ ಸೀತಾಪುರದ ಸುತ್ತಮುತ್ತಲ ಮನಸ್ಸುಗಳಲ್ಲಿ. ಕಥೆಯಲ್ಲಿ ಬರುವ ಗೆಂದಗಿಡಿ ಕೋಳಿಯ ಕೂಗು ಮತ್ತು ಸರಿಯಾದ ಸಮಯಕ್ಕೆ ಆಕಾಶದಲ್ಲಿ ಹಾರುವ ವಿಮಾನ, ಸೂರ‍್ಯ ಪೂರ್ವದಲ್ಲಿ ಹುಟ್ಟುವ ಹಾಗೆ ನಿಖರವಾಗಿ ನಡೆಯುವ ಪ್ರಕ್ರಿಯೆಗಳು. ಇದು ಹಳ್ಳಿಯ ಜನರ ಮುಗ್ಧತೆಯನ್ನೂ ಕೂಡ ಎತ್ತಿ ಹಿಡಿಯುವುದನ್ನು ನಾವು ಗಮನಿಸಬಹುದು. ಈ ಕತೆಯಲ್ಲಿ ವಿಮಾನ ದುರಂತದ ಬಳಿಕ ನಡೆಯುವ ವಿಶ್ಲೇಷಣೆಯೇ ಇದರ ಜೀವಾಳ. ಬದಲಾದ ಪರಿಸ್ಥಿತಿಗೆ ಮುಖ್ಯ ಕಾರಣವೇ ಭಾವನೆಗಳು. ಇದರಿಂದಾಗಿಯೇ ಮುಳಿಹುಲ್ಲಿನ ಮನೆಗಳೆಲ್ಲಾ ತಾರಸಿಯಾದುದು ಎಂಬಂತಹ ಮಾತುಗಳನ್ನು ಅಲ್ಲಗಳೆಯುವಂತಿಲ್ಲ. ಮುಂದೆ ದುರಂತದಲ್ಲಿ ಮಡಿದ ಸತೀಶ ತನ್ನ ತಮ್ಮ ದಿನೇಶನಿಗೂ ದುಬೈಯಲ್ಲಿ ಕೆಲಸಕ್ಕೆ ಅವಕಾಶ ಮಾಡಿಸಿರುವ ವಿಷಯ ಅವನ ಸಾವಿನ ಆನಂತರ ತಿಳಿಯುತ್ತದೆ. ಆದರೆ ದಿನೇಶನಿಗೆ ಅಲ್ಲಿಗೆ ಹೋಗುವ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇತ್ತ ಅಜ್ಜಿ ಹೋಗಬೇಡವೆಂದರೂ ಒಬ್ಬ ಮಗನನ್ನು ಕಳೆದುಕೊಂಡ ದು:ಖಿತ ತಂದೆ ಮಗನನ್ನು ಹೋಗು ಅನ್ನುವ ಮಾತುಗಳು ಕತೆಯಲ್ಲಿ ಬಹಳ ಪ್ರಭಾವಶಾಲಿಯಾಗಿ ಮೂಡಿದೆ. ಕತೆಯ ಅಂತ್ಯವನ್ನು ಓದುಗನೇ ಊಹಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಈ ಕತೆ ಓದುಗನಲ್ಲಿಯೇ ಉಳಿದು ಬಿಡುತ್ತದೆ. ಇಲ್ಲಿ ಕುಪ್ಪಣ್ಣಯ್ಯ ಆಕಾಶವನ್ನು ನೋಡುವಲ್ಲಿ ಅವರಿಗೆ ಸಾವಿನಲ್ಲಿರುವ ನಿರ್ಲಿಪ್ತತೆಯನ್ನು ಕೂಡ ತಿಳಿಸುತ್ತದೆಯೆನಿಸುತ್ತದೆ.

ಅಂತರ್‌ಜಾತೀಯ ವಿವಾಹ ಸಮಸ್ಯೆಯನ್ನು ಬಹಳಷ್ಟು ಮಾರ್ಮಿಕವಾಗಿ ಚಿತ್ರಿಸುವ ಕತೆ, ‘ಮಳೆಯ ನೀರು ಮತ್ತೆ ಸಮುದ್ರಕ್ಕೆ’. ಇದೊಂದು ಜಾತ್ಯಾತೀತ ರಾಷ್ಟ್ರದಲ್ಲಿ ಪ್ರತಿಯೊಬ್ಬನೂ ಎದುರಿಸಬೇಕಾಗಿರುವ ಸಮಸ್ಯೆಯೊಂದರ ಮುಖಾಮುಖಿಯನ್ನು ತೋರಿಸುತ್ತದೆ. ರಮೇಶ ತಂದೆಗೆ ವಿರುದ್ಧವಾಗಿ ರೋಸಿಯನ್ನು ಮದುವೆಯಾಗಿ ದೂರವೇ ಇದ್ದು ಬಿಡುತ್ತಾನೆ. ಅಲ್ಲಿಯವರೆಗೆ ಅವನಿಗೆ ಜಾತೀಯತೆಯೇನೂ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. ಆದರೆ ಅವರ ಮಗಳು ಬೆಳೆದು ಒಬ್ಬ ಕ್ರಿಶ್ಚಿಯನ್ ಹುಡುಗನ ಪ್ರೀತಿಯಲ್ಲಿ ಬಿದ್ದಾಗ ಅವನಿಗೆ ದೊಡ್ಡ ಸಮಸ್ಯೆಯೊಂದು ಎದುರಾಗುತ್ತದೆ. ಆದರೆ ಅವನ ತಾಯಿ ಅಂತಕ್ಕ ಅದನ್ನು ವಿರೋಧಿಸದೆ ಮೊಮ್ಮಗಳನ್ನು ಚರ್ಚ್‌ಗೆ ಕರೆದುಕೊಂಡು ಹೋಗಿ ಕ್ರಿಸ್ತನ ಆಶೀರ್ವಾದವನ್ನು ಪಡೆದುಕೊಳ್ಳಲು ಮಗನಿಗೆ ಹೇಳುತ್ತಾರೆ. ಮೇಲ್ನೋಟಕ್ಕೆ ಸರಳ ಕತೆಯೆನಿಸಿದರೂ ಅದು ಎದುರಿಸುವ ಸವಾಲು ಬಹಳ ದೊಡ್ಡದು.

ಮಗಳಿಗೆ ತನ್ನ ನಾಟಿವೈದ್ಯ ವಿದ್ಯೆಯನ್ನು ಧಾರೆಯೆರೆದು ಅವಳಿಗೆ ಮದುವೆಮಾಡಿಕೊಟ್ಟು ಸೋತ ತಂದೆಯೊಬ್ಬನ ಅಂತರಾಳದ ಮತ್ತು ಹಠಮಾರಿತನವನ್ನು ತೆರೆದಿಡುವ ನಯವಾದ ಹಾಸ್ಯದಲ್ಲಿ ಬೆಳೆಯುವ ಕತೆ ‘ಅದು ಅದೂ ಅಲ್ಲ, ಇದು ಇದೂ ಅಲ್ಲ!’. ಇದರ ಒಳಗೆ ಇನ್ನೊಂದು ಕತೆಯಾಗಿ ಡಾ. ತಿಮ್ಮಪ್ಪಯ್ಯನವರ ಘಟನೆ ಬೆಳೆಯುತ್ತದೆ. ಇದು ಫ್ಲ್ಯಾಶ್ ಬ್ಯಾಕ್‌ನಲ್ಲಿದ್ದರೂ ಎಲ್ಲೂ ಓದಿಗೆ ಅಡ್ಡಿ ಪಡಿಸದೆ ಮುಂದೆ ಸಾಗುತ್ತದೆ. ಇಲ್ಲಿಯ ಪ್ಲಸ್ ಪಾಯಿಂಟ್ ಕೋರ್ಟ್‌ನಲ್ಲಿ ನಡೆಯುವ ತೀರ್ಪಿನ ಭಾಗ ಮೆಚ್ಚುವಂತದ್ದು.

ಸಂಕಲನದ ಕೊನೆಯ ಕತೆ, ‘ಚಾರಣ’ ದಿಟ್ಟ ಮಹಿಳೆಯೊಬ್ಬಳ ಸುತ್ತಾ ಹೆಣೆದಿರುವಂತದ್ದು. ಹಳ್ಳಿಯಲ್ಲಿ ಶೋಷಣೆಗೆ ಒಳಗಾಗುತ್ತಾ ಬದುಕುವ ಅದೆಷ್ಟೋ ಹೆಣ್ಣುಗಳಿಗೆ ತುಂಬಕ್ಕೆ ಒಬ್ಬ ಮಾದರಿ ಹೆಣ್ಣಾಗಿ ನಿಲ್ಲುತ್ತಾರೆ. ಕೇವಲ ಹಳ್ಳಿಯವರಿಗಷ್ಟೇ ಅಲ್ಲ ಆಧುನಿಕ ಮಹಿಳೆಯರಿಗೂ ಆಕೆ ಮಾದರಿಯಾಗಿರುವುದರಿಂದ ತಾಹಶೀಲ್ದಾರನ ಹೆಂಡತಿ ಉಪನ್ಯಾಸಕಿ ಸರಸ್ವತಿ ಕೂಡ ಆಕೆಯ ವ್ಯಕ್ತಿತ್ವಕ್ಕೆ ಮನಸೋತು ಆಕೆಯ ಕಾಲಿಗೆರಗುತ್ತಾಳೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಡತನದ ಅನಿವಾರ‍್ಯತೆಯಿಂದ ಕಚ್ಚೆಹರುಕ ಶೀನಪ್ಪನ ಕೈಯಲ್ಲಿ ಸಿಕ್ಕಿಹಾಕಿಕೊಂಡು ಅವರನ್ನು ಎದುರಿಸುವ ದಿಟ್ಟತನ ಗಂಡಸಿನ ದೌರ್ಜನ್ಯಕ್ಕೆ ಕಡಿವಾಣವೊಡ್ಡುವುದನ್ನು ತೋರಿಸಿದರೂ, ಅದಕ್ಕಿಂತಲೂ ಬಳಿಕ ಶೀನಪ್ಪನವರ ಮೊಮ್ಮಗನೆ ತಹಶೀಲ್ದಾರನಾಗಿ ಅಲ್ಲಿಗೆ ಬರುವುದು ಓದುಗನಿಗೆ ಕುತೂಹಲವನ್ನು ಹುಟ್ಟಿಸುತ್ತದೆ.

ಇಲ್ಲಿಯ ಕತೆಗಳೆಲ್ಲ ಒಂದಕ್ಕಿಂತ ಒಂದು ಭಿನ್ನವಾಗಿದ್ದು ಅವುಗಳೆಲ್ಲಾ ಜೀವನೋತ್ಸಾಹವನ್ನು ತುಂಬಿಸುತ್ತವೆ. ಮಾತ್ರವಲ್ಲ, ಸೀತಾಪುರದ ಸನ್ನಿವೇಶಗಳೆಲ್ಲಾ ಮನಸ್ಸಿನಲ್ಲಿ ಬಹಳ ಕಾಲ ಓದುಗನಲ್ಲಿ ಉಳಿದು ಬಿಡುತ್ತದೆ. ಇದೊಂದು ಅಪರೂಪದ ಕತೆಗಳ ಸಂಕಲವಾಗಿರುವುದರಿಂದ ಸಂಗ್ರಹಯೋಗ್ಯವೂ ಆಗಿದೆ.

Read more!

Wednesday, August 31, 2011

ರಂಗಭೂಮಿಯ ಚರಿತ್ರೆ


ದೃಶ್ಯ ಮಾಧ್ಯಮಗಳು ವಿಷಯಗಳನ್ನು ಬಹಳ ಬೇಗನೆ ಜನಮಾನಸಕ್ಕೆ ತಲುಪಿಸುತ್ತವೆ ಅನ್ನುವುದು ಅಕ್ಷರಶ: ಸತ್ಯವಾದ ಮಾತು. ಸಿನಿಮಾ, ದೂರದರ್ಶನಗಳಂತು ವೀಕ್ಷಕವರ್ಗವನ್ನು ಮೋಡಿ ಮಾಡಿರುವುದು ಎಲ್ಲರೂ ಒಪ್ಪಬೇಕಾದ ವಾಸ್ತವ. ಆಯಾಯ ಕಾಲಕ್ಕೆ ಬದಲಾಗುತ್ತಿರುವ ಅಭಿರುಚಿಯನ್ನು ಅವಲಂಭಿಸಿ ಬದಲಾವಣೆಗಳನ್ನು ಮಾಧ್ಯಮಗಳು ಉಣಿಸುತ್ತಿರುವುದು ಎಲ್ಲದಕ್ಕೂ ಸಾಕ್ಷಿಯಂತಿದೆ. ದೃಶ್ಯ ಮಾಧ್ಯಮದಲ್ಲಿ ಕೇವಲ ಪ್ರತಿರೂಪಗಳನ್ನೇ ನೆಚ್ಚಿಕೊಂಡು ಖುಷಿ ಪಡುವ ವೀಕ್ಷಕನಿಗೆ ಅದೊಂದು ಕೇವಲ ಪ್ರತಿರೂಪ (ಇಮೇಜ್) ಅನ್ನುವುದು ನೆನಪಾಗುವುದೇ ಇಲ್ಲ. ಆದರೆ ಇದಕ್ಕೆ ಇಂದಿಗೂ ವ್ಯತಿರೀಕ್ತವಾಗಿರುವ ವ್ಯವಸ್ಥೆಯೆ ರಂಗಭೂಮಿ. ದೃಢವಾದ ಚಿಂತನೆ ಮತ್ತು ಚಲನಶೀಲವಾದ ಸ್ಥಿತಿಗಳ ನಡುವಿನ ನಿರೂಪಣಾ ತಂತ್ರದಿಂದಾಗಿ ವೀಕ್ಷಕವರ್ಗವನ್ನು ಹಿಡಿದಿಡುವ ಪ್ರಯತ್ನ ನಾಟಕಗಳದ್ದು. ದೃಶ್ಯಮಾಧ್ಯಮ ಮತ್ತು ರಂಗಭೂಮಿಗೆ ಭಾಷೆಯೊಂದೇ ಮುಖ್ಯ ಅನಿಸುವುದಿಲ್ಲ. ಭಾಷೆಗಿಂತಲೂ ಅಭಿನಯಕ್ಕೆ ಪ್ರಾಧಾನ್ಯತೆ ಹೆಚ್ಚು. ಇಲ್ಲಿ ಪಾತ್ರಧಾರಿ ಮತ್ತು ಪ್ರೇಕ್ಷಕರ ನಡುವೆ ಆತ್ಮೀಯ ಮತ್ತು ನೇರ ಸಂಬಂಧವಿರುವುದರಿಂದ (ಲೈವ್), ಸಂವಹನಕ್ಕೆ ಅವಕಾಶಗಳಿಗೆ. ಹಾಗಾಗಿ ಅಭಿನಯಗಾರರಿಗೆ ಪ್ರತಿಕ್ರಿಯೆ ಕೂಡಲೆ ಸಿಗುತ್ತವೆ. ಇದರಿಂದಾಗಿ ರಂಗಕಲಾವಿದರೂ ಇಂದಿಗೂ ದೃಶ್ಯ ಮಾಧ್ಯಮಗಳಿಗಿಂತ ರಂಗಭೂಮಿಯನ್ನು ಹೆಚ್ಚು ಇಷ್ಟಪಡುವುದನ್ನು ಕಾಣಬಹುದು. ಮಾತ್ರವಲ್ಲ, ಒಬ್ಬ ನಿಜವಾದ ಕಲಾವಿದ ರಂಗಭೂಮಿಯ ಅಭಿನಯವನ್ನು ಎಂದಿಗೂ ನಿರಾಕರಿಸುವುದಿಲ್ಲ.

ರಂಗಭೂಮಿಯನ್ನು ಕುರಿತು ಅದೆಷ್ಟೋ ಕೃತಿಗಳು ಬೆಳಕು ಕಂಡಿವೆಯಾದರೂ, ಕಾದಂಬರಿ ಲೋಕದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ನಾವು ಕಾಣಬಹುದು. ಅವುಗಳಲ್ಲಿ ಹೆಸರಿಸಬಹುದಾದ ಕೃತಿಗಳೆಂದರೆ ‘ನಟಸಾರ್ವಭೌಮ’; ‘ಶಾಂತಲ’; ‘ರಂಗನಾಯಕಿ’; ‘ನಟಿ’; ‘ಬಣ್ಣದ ಜಿಂಕೆ’ ಮತ್ತು ‘ಸಾಂವಿ’."

ಈ ಕೃತಿಗಳು ಚಾರಿತ್ರಿಕವಾಗಿ ಏನನ್ನೂ ಹೇಳುವುದಿಲ್ಲವಾದರೂ ರಂಗ ಕಲಾವಿದರ ಬದುಕನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಬಿಂಬಿಸಿದ ಕಾದಂಬರಿಗಳು ಇವು. ಇತ್ತೀಚೆಗೆ ಕನ್ನಡದಲ್ಲಿ ರಂಗಭೂಮಿಯ ಬಗ್ಗೆ ಆಳವಾದ ವಿಷಯಗಳನ್ನೊಳಗೊಂಡ ಅಪರೂಪದ ಕಾದಂಬರಿಯೊಂದು ಪ್ರಕಟವಾಗಿರುವುದು ಹೆಮ್ಮೆಯ ವಿಷಯ. ಅದುವೆ ಗಂಗಾಧರ ಗಾಡ್ಗೀಳರ ಮರಾಠಿ ಮೂಲ ಕಾದಂಬರಿ ‘ಗಂಧರ್ವಯುಗ’.

ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಚಂದ್ರಕಾಂತ ಪೋಕಳೆ ಅವರು ಅನುವಾದಕರ ಮಾತಿನಲ್ಲಿ, ‘ಈ ಕಾದಂಬರಿಯು ಮರಾಠಿಯಷ್ಟೇ ಕನ್ನಡದ ರಂಗಭೂಮಿಯ ದೃಷ್ಟಿಯಿಂದಲೂ ಮಹತ್ವದ್ದು’ ಅಂದಿದ್ದಾರೆ. ಇದು ಸಹಜವೂ ಹೌದು. ಯಾಕೆಂದರೆ ದೃಶ್ಯ ಮಾಧ್ಯಮ ಮತ್ತು ಸಾಹಿತ್ಯ ದೃಷ್ಟಿಯಿಂದ ಶ್ರೇಷ್ಠ ಕೃತಿಗಳಿಗೆ ಭಾಷೆಯ ಹಂಗಿಲ್ಲ. ಇವತ್ತಿಗೂ ಅನುವಾದಿತ ಕೃತಿಗಳನ್ನು ಸಾರಸ್ವತ ಲೋಕ ಸ್ವೀಕರಿಸುತ್ತಾ ನಮ್ಮ ಭಾಷೆಯ ಸಂಸ್ಕೃತಿ ಮತ್ತು ಸದಾಚಾರಗಳನ್ನು ಕೊಂಡುಕೊಳ್ಳುವಿಕೆಗೆ ಒಳಪಡಿಸಿದೆ. ಇದು ಓದುಗನೊಬ್ಬನಿಗೆ ಅಪಾರ ಜ್ಞಾನ ಭಂಡಾರವನ್ನು ಒದಗಿಸಬಲ್ಲ ಕಾರ್ಯವೂ ಆಗಿರುವುದರಿಂದ ಇವಕ್ಕೆ ತಡೆ ಇಲ್ಲವೆನ್ನುವುದು ನನ್ನ ನಂಬಿಕೆ.

ಈ ಕಾದಂಬರಿಯು ಮರಾಠಿ ರಂಗಭೂಮಿಯ ಲೋಕೊತ್ತರದ ರಂಗಚೇತನ ಬಾಲಗಂಧರ್ವ ಅವರ ಬದುಕಿನ ಕೃತಿಯಾಗಿರುವುದರಿಂದ, ಇದನ್ನು ಚಾರಿತ್ರಿಕ ಕಾದಂಬರಿಯೆಂದು ಗುರುತಿಸಿರುವುದು ಗಮನಾರ್ಹ. ಕೇವಲ ಬಾಲಗಂಧರ್ವರ ವ್ಯಕ್ತಿ ಚಿತ್ರಣ ಮಾತ್ರವಲ್ಲ ಅದರ ಜೊತೆಗೆನೆ ರಂಗಭೂಮಿಯ ಏಳುಬೀಳುಗಳನ್ನು ಅಧ್ಯಯನ ಮಾಡಿ ಬರೆದಿರುವುದರಿಂದ ಇದೊಂದು ಅಪರೂಪದ ಕೃತಿಯೆಂದರೆ ತಪ್ಪಾಗಲಾರದು. ಕೃತಿಯನ್ನು ಓದುತ್ತಿರುವಂತೆ ಜೀವನ ಚರಿತ್ರೆಯಾಗಿಯೂ ಮತ್ತು ನಾನ್ ಫಿಕ್ಷನ್ ಕೃತಿಯಂತೆಯೂ ಗುರುತಿಸಿಕೊಳ್ಳುವ ‘ಗಂಧರ್ವಯುಗ’ ಕನ್ನಡ ಮಟ್ಟಿಗಂತೂ ಹೊಸತೆನ್ನಬಹುದು.

ಈ ಕೃತಿಯನ್ನು ಚಾರಿತ್ರಿಕ ಹಿನ್ನಲೆಯಲ್ಲಿ ರಚಿಸಿರುವುದರಿಂದ ಆಗಿನ ರಂಗಭೂಮಿಯ ಕಲಾವಿದರ ಬದುಕು, ಸಾಧನೆ, ಹೋರಾಟಗಳನ್ನು ಬಹಳ ಕೂಲಂಕಷವಾಗಿ ಚಿತ್ರಿಸಲಾಗಿದೆ. ಮರಾಠಿ ರಂಗಭೂಮಿ ಇಂದಿಗೂ ತನ್ನ ಹಿಂದಿನ ಛಾಪನ್ನು ಉಳಿಸಿಕೊಂಡಿರುವುದರಿಂದ ನಾಟಕಗಳ ಶ್ರೀಮಂತಿಕೆ ಇನ್ನೂ ಅದೇ ರೀತಿಯಲ್ಲಿ ಮುಂದುವರೆದಿದೆಯೆನ್ನಬಹುದು.

ಇದೊಂದು ಅನುವಾದಿತ ಕೃತಿಯಾದರೂ ಸಾಹಿತ್ಯದಲ್ಲಿ ಅನುವಾದವೆನ್ನುವುದು ಒಂದು ಪ್ರತ್ಯಭಿಜ್ಞಾನವಿದ್ದಂತೆ. ಇದರಿಂದ ಸಾಂಸ್ಕೃತಿಕ ವಿನಿಮಯದ ಸಾಧ್ಯತೆಗಳಿಗೆ. ಹಾಗಾಗಿ ಈ ಕೃತಿಯಲ್ಲಿಯೂ ಅದು ಒಂದು ಪ್ರದೇಶದ ಸಂಸ್ಕೃತಿ, ಪರಿಸರಗಳನ್ನು ಒಳಗೊಂಡಿದ್ದರೂ ಅದರ ಒಳನೋಟವಿರುವುದು ಎಲ್ಲಾ ಕಲಾವಿದರ ಬದುಕನ್ನ ಬಿಂಬಿಸುವಂತೆಯೆ. ಪೋಕಳೆಯವರ ಪರಿಣಾಮಕಾರಿಯಾದ ಅನುವಾದವೂ ಇದಕ್ಕೆ ಪೂರಕವಾಗಿದೆ.

ಬಾಲಗಂಧರ್ವ ಮರಾಠಿ ರಂಗಭೂಮಿಯ ಶ್ರೇಷ್ಠ ಕಲಾವಿದ. ಇವರ ರಂಗಭೂಮಿಯ ಬದುಕನ್ನು ಸಮಗ್ರವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಿರುವುದಲ್ಲದೆ, ಚಾರಿತ್ರಿಕ ಒಳನೋಟವನ್ನು ವ್ಯಕ್ತಪಡಿಸುವ ಕೃತಿಯಾಗಿ, ವ್ಯಕ್ತಿಗತವಾದ ಸಂಕಟ, ಅಸಹಾಯಕತೆ, ತೊಳಲಾಟಗಳ ಮೂಲಕ ರಂಗಭೂಮಿಯ ನೇಪಥ್ಯವನ್ನ ಎತ್ತುವ ಪ್ರಯತ್ನವೂ ಇಲ್ಲಿ ನಡೆದಿದೆ. ಇದರ ಜೊತೆಗೆ ಬಾಲಗಂಧರ್ವರ ಸಮಕಾಲೀನರಾದ ಕೃಷ್ಣರಾವ, ಗಣಪತರಾವ ಬೋಡಸ, ಕೇಶವರಾವ ಭೋಸಲೆ ಮುಂತಾದ ರಂಗಕರ್ಮಿಗಳ ಜೊತೆಗೆ ಕೋಲ್ಹಟಕರ, ಗಡಕರಿಯವರಂತಹ ನಾಟಕಕಾರರ ಬದುಕನ್ನು ಕೂಡ ಸೂಕ್ಷಮವಾಗಿ ತೆರೆದಿಡುವ ಪ್ರಯತ್ನ ಇಲ್ಲಿದೆ.

ವೃತ್ತಿ ಮಾತ್ಸರ್ಯ ಅಳಿಸಲಾಗದ ಮತ್ತು ಸಹಿಸಲಾಗದ ಅನಾರೋಗ್ಯಕರ ಬೆಳವಣಿಗೆಯಿಂದಾಗಿ ಸಾಮಾನ್ಯನ ಬದುಕು ದುಸ್ತರದತ್ತ ಸಾಗುವುದು ಲೋಕರೂಢಿ. ಈ ರೀತಿಯ ಮತ್ಸರ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ, ಒಟ್ಟು ಸಾಮಾಜಿಕ ವ್ಯವಸ್ಥೆಯನ್ನು ಮೀರಿಯೂ ನಡೆಯಬಹುದು. ರಂಗಭೂಮಿ ಕೂಡ ಈ ವೃತ್ತಿ ಮಾತ್ಸರ್ಯದಿಂದ ಹೊರತಾಗಿಲ್ಲ. ಇದು ಒಂದೊಂದು ಕಡೆ ಆರೋಗ್ಯಕರವಾಗಿಯೂ ಪರಿಣಿಮಿಸುವುದಿದೆ. ಬಾಲಗಂಧರ್ವರಂತಹ ದಿಗ್ಗಜರನ್ನು ಕೂಡ ಇದು ರಂಗಭೂಮಿಗೆ ಕೊಟ್ಟಿರುವುದು ಉಲ್ಲೇಖಾರ್ಹ.

ತಿಲಕರ ವಾತ್ಸಲ್ಯ ಮತ್ತು ಪ್ರೋತ್ಸಾಹದಿಂದ ಬಲಕ ನಾರಾಯಣ ಹಾಡುಗಾರನಾಗಿ ಮತ್ತು ನಟನಾಗಿ ರಂಗಭೂಮಿಗೆ ಕಾಲಿಟ್ಟದ್ದು ಮರಾಠಿ ರಂಗಭೂಮಿಯಲ್ಲಿ ದೈತ್ಯ ಅಲೆಯೊಂದು ಆವರ್ತವಾದಂತಾಯಿತು. ಬಾಬಾ ಮಹಾರಾಜರು ನಾರಾಯಣನ ಹಾಡನ್ನು ಮೆಚ್ಚಿ ಮುಂದೆ ಅಂದಿನ ಖ್ಯಾತ ನಾಟಕ ಕಂಪನಿ ‘ಕಿರ್ಲೋಸ್ಕರ್’ಗೆ ಸೇರಿಸಿದರು. ಆ ಸಮಯದಲ್ಲಿ ಹೆಣ್ಣಿನ ಪಾತ್ರ ಮಾಡುವುದಕ್ಕೆ ಅಗತ್ಯವಾಗಿ ಒಬ್ಬ ನಟನ ಅಗತ್ಯವಿತ್ತು. ಆ ಸ್ಥಾನವನ್ನು ತುಂಬಿದವರು ನಾರಾಯಣರು. ಕ್ರಮೇಣ ಆತನ ಪ್ರಸಿದ್ಧಿ ಎಲ್ಲಿಯವರೆಗೆ ಹಬ್ಬಿತ್ತೆಂದರೆ, ಅವನ ಅಭಿನಯಕ್ಕೆ ಮನಸೋತ ರಂಗಾಸಕ್ತರೆಲ್ಲ – ತಮ್ಮ ಹೆಂಡದಿರು ಕೂಡ ಆತನ ಸ್ತ್ರೀ ಪಾತ್ರದಂತೆ ವರ್ತಿಸಬೇಕೆಂದು ಅಪೇಕ್ಷೆ ಪಡುತ್ತಿದ್ದರು.

ಒಬ್ಬ ಆಪ್ಪಟ ನಟನಾಗಿ ಗುರುತಿಸಿಕೊಂಡ ನಾರಾಯಣ ಮುಂದೆ ‘ಬಾಲಗಂಧರ್ವ’ನೆಂದೆ ಖ್ಯಾತರಾದರು. ಇದು ರಂಗಭೂಮಿಯ ಘನತೆಯನ್ನೂ ಹೆಚ್ಚಿಸಿತಾದರೂ, ಅಲ್ಲಿ ನಡೆಯುವ ವೈಷಮ್ಯ, ತೀವ್ರ ಸ್ಪರ್ಧೆ, ಮತ್ಸರದ ಬೇರುಗಳ ಜೊತೆಗೆ ಜೀಕುವುದು ಮತ್ತು ರಂಗಭೂಮಿಯ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಹೆಣಗಾಡಬೇಕಾಯಿತು. ಕೌಟುಂಬಿಕ ಬದುಕು, ಆಘಾತ, ಮಾನಸಿಕ ಹೊಡೆತಗಳನ್ನು ಎದುರಿಸುತ್ತಲೇ, ರಂಗಾಯಣದಲ್ಲಿಯೂ ಸಮತೋಲನವನ್ನು ಕಾಯ್ದುಕೊಂಡು ಬರುವ ಅನಿವಾರ್ಯತೆಯಿಂದ, ಯಾವುದಕ್ಕೂ ಕುಂದು ಬಾರದಂತೆ ಅದರ ಏಳಿಗೆಗಾಗಿ ಶ್ರಮಿಸಿದವರು ಬಾಲಗಂಧರ್ವರು. ಇದು ಅವರ ರಂಗದ ಬಗೆಗಿನ ನಿಸ್ಸೀಮ ಪ್ರೀತಿಯನ್ನು ತೋರಿಸುತ್ತದೆ. ಅವರಿಗೆ ಬೇರೆ ಜವಾಬ್ದಾರಿಗಳಿದ್ದರೂ ನಟನೆಯೇ ಮುಖ್ಯವಾಗಿತ್ತು. ಇದರಿಂದಾಗಿ ಮನೆ ಮನೆಯಲ್ಲಿ ಅವರ ಭಾವಚಿತ್ರವನ್ನು ತೂಗುಹಾಕುವಷ್ಟರ ಎತ್ತರಕ್ಕೆ ಬೆಳೆದರು.

ಮುಂದೆ ಕೆಲವೊಂದು ಬಾಲಗಂಧರ್ವರು ಅವರದಲ್ಲದ ಆಪಾದನೆಯನ್ನು ಹೊತ್ತುಕೊಂಡು ಕಂಪನಿಯನ್ನು ಬಿಟ್ಟು ಹೊರಗೆ ಬರಬೇಕಾಯಿತು. ಆನಂತರ ‘ಗಂಧರ್ವ ನಾಟಕ ಮಂಡಳಿ’ಯ ಸ್ಥಾಪನೆಯಆಗಿ ಅಲ್ಲಿಯೂ ನಾಟಕಗಳೆಲ್ಲವೂ ಜಯಭೇರಿ ಸಾಧಿಸುವಂತೆ ಮಾಡಿದರು. ಹೊಸ ಕಂಪನಿಯನ್ನು ಕಟ್ಟುವಾಗಿನ ಏಳುಬೀಳುಗಳನ್ನು ಕೂಡ ಈ ಕಾದಂಬರಿ ಸೂಕ್ಷ್ಮವಾಗಿ ತಿಳಿಸುವುದಲ್ಲದೆ, ಕಲಾವಿದರ ಬದುಕು ಮತ್ತು ಅದು ರಂಗಚಟುವಟಿಕೆಗಳಲ್ಲಿ ಹೇಗೆ ಅನ್ಯೋನ್ಯವಾಗಿರುತ್ತದೆಯೆನ್ನುವುದನ್ನು ಈ ಕಾದಂಬರಿ ಬಹಳ ಮಾರ್ಮಿಕವಾಗಿ ಚಿತ್ರಿಸಿದೆ. ಇದು ಒಂದು ಚಾರಿತ್ರಿಕ ಕೃತಿಯಾಗಿರುವುದರಿಂದಲೇ ಸಹಜತೆಯನ್ನು ಉಳಿಸಿಕೊಂಡಿದೆ.
ಬಾಲಗಂಧರ್ವರು ಮಗಳನ್ನು ಕಳೆದುಕೊಂಡರೂ ರಂಗಭೂಮಿಯಿಂದ ವಿಮುಖರಾದವರಲ್ಲ. ಅದೇ ಅವರ ಜೀವಾಳವಾಗಿತ್ತು. ಕೊನೆಗೆ ಕಂಪನಿಯನ್ನು ನಡೆಸಲಾರದೆ ಸಾಲದಲ್ಲಿ ಮುಳುಗಿದಾಗ, ಕಂಪನಿಯ ಮಾಲಕತ್ವವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ತಾವು ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನಷ್ಟೇ ವಹಿಸಿಕೊಂಡರು. ಆನಂತರ ಖರ್ಚುಗಳನ್ನು ನಿಯಂತ್ರಿಸಲಾರದೆ ಸಾಲದ ಹೊರೆಯಲ್ಲಿ ಮುಳುಗಿದರು. ಆದರೂ ಧೃತಿಗೆಡದೆ ರಂಗಭೂಮಿಯಲ್ಲಿಯೇ ಮುಂದುವರೆದರು. ರಂಗವೃತ್ತಿಯನ್ನೇ ನಂಬಿ ಬದುಕಿದ ಬಾಲಗಂಧರ್ವರು, ರಂಗಭೂಮಿಯ ಸುವರ್ಣಯುಗ’ವನ್ನು ಸ್ಥಾಪಿಸಿದರು.
ಹೀಗೆ ನಟನೊಬ್ಬನ ಏಳುಬೀಲಿನ ಜೊತೆಗೆ ರಂಗಭೂಮಿಯ ಬೆಲವಣಿಗೆ ಮತ್ತು ನಿರೂಪಣೆಗಳನ್ನು ಕಾದಂಬರಿ ದಾಖಲೆಗಳೊಂದಿಗೆ ಪುನರ್ ಸೃಷ್ಟಿಸಿರುವುದರಿಂದ, ಇಂತಹ ಚಾರಿತ್ರಿಕ ಕಾದಂಬರಿಗಳು ರಂಗಾಭ್ಯಾಸಕತರಿಗೆ ಅಧ್ಯಯನಕ್ಕೆ ಆಧಾರ ಕೃತಿಯಾಗಿಯೂ ಉಪಯೋಗವಾಗುವಂತಹುದು.
ಇದೊಂದು ಓದಿ ಪಕ್ಕಕ್ಕಿಡುವ ಕೃತಿಯಲ್ಲ. ಗಂಭೀರ ಓದುವಿಕೆಯ ಮಹತ್ವದ ಕೃತಿಯಾಗಿರುವ ಇದನ್ನು ಬೆಳದಿಂಗಳು ಪ್ರಕಾಶನ, ಬೆಳಗಾವಿ ಇವರು ಪ್ರಕಟಿಸಿದ್ದಾರೆ.


Read more!

Tuesday, August 23, 2011

ಸಲಾಂ ಟು `ಮುತ್ತೆತ್ತೂರಿನ ದರ್ಗಾ'


ಕಿದೂರು ವೇಣುಗೋಪಾಲ ಶೆಟ್ಟಿ ಅವರ ಕಥಾಸಂಕಲನ `ಮುತ್ತೆತ್ತೂರಿನ ದರ್ಗಾ’ ಒಂದು ವಿಭಿನ್ನ ಹಾಗೂ ಆಕರ್ಷಕ ಶೀರ್ಷಿಕೆಯ ಕೃತಿ. ಇಲ್ಲಿಯ ಕಥೆಗಳನ್ನು ಓದುತ್ತಲೇ ಕಥೆಗಾರನ ಪ್ರಬುದ್ಧತೆಯು ನಮಗೆ ತಿಳಿಯುತ್ತದೆ. ಪರಿಪಕ್ವವಾದ ಮತ್ತು ಗಟ್ಟಿ ಹಂದರವನ್ನು ಒಳಗೊಂಡಿರುವ ಇಲ್ಲಿಯ ಕಥೆಗಳೆಲ್ಲವೂ ವೈಯಕ್ತಿಕವಾಗಿ ಪಾತ್ರಗಳ ಆಂತರಿಕ ತುಮುಲವನ್ನು ಮತ್ತು ಸಮಾಜದ ಒಟ್ಟು ವ್ಯವಸ್ಥೆಯನ್ನು ಓದುಗರಿಗೆ ತಲುಪಿಸುತ್ತದೆ. ಇಲ್ಲಿಯ ಕಥಾ ನಿರೂಪಣಾ ಶೈಲಿ, ಪಾತ್ರಗಳ ಒಳಮನಸ್ಸನ್ನು ಬಗೆಯುವ ರೀತಿ ಎಲ್ಲವೂ ಬೇರೆಯದಾಗಿಯೆ ಇದ್ದು, ನಾವು ಸುತ್ತಮುತ್ತಲು ಕಂಡಂತಹ ಬದುಕನ್ನು ಮತ್ತೊಂದು ನೆಲೆಯಲ್ಲಿ ತೆರೆದಿಡುವುದೇ ಆಗಿದೆ. ಆದರೆ ಇಲ್ಲಿ ಯಾವ ಇಸಂಗಳಿಗೆ ಈಡಾಗದೆ, ನೇರವಾಗಿ ಮತ್ತು ಧೈರ್ಯವಾಗಿ ಕಥೆಗಳನ್ನು ಹೆಣೆದಿರುವುದು ಮೆಚ್ಚತಕ್ಕದ್ದು."

ಇಲ್ಲಿಯ ಹೆಚ್ಚಿನ ಕಥೆಗಳೆಲ್ಲವೂ ನೇರ ನಿರೂಪಣೆಯಲ್ಲಿ, ಸರಳ ಮತ್ತು ಸುಂದರವಾದ ಪ್ರಾದೇಶಿಕ ಭಾಷೆಯಲ್ಲಿ ಬಿಚ್ಚಿಡುತ್ತಾ ಓದುಗನಿಗೆ ಆಪ್ತವೆನಿಸುವಂತಹವುಗಳು. ಕಥೆ ಹೀಗೆ ಇರಬೇಕೆನ್ನುವ ಯಾವ ಕಟ್ಟುಪಾಡುಗಳಿಗೂ ಒಳಗಾಗದೆ ಬರೆದಿರುವುದರಿಂದ ಕೆಲವೊಮ್ಮೆ ಇವು ವಾಸ್ತವದಲ್ಲಿ ನಡೆದ ಮತ್ತು ನಡೆಯುತ್ತಿರುವ ಸಂಗತಿಗಳೇನೋ ಅನಿಸದಿರದು. ಕೇವಲ ವಾಸ್ತವದ ವಿಷಯವನ್ನು ಕಥೆಯಾಗಿ ಕಟ್ಟಿಕೊಡುವುದಿಲ್ಲ; ಅದರ ಜೊತೆ ಜೊತೆಗೆನೆ ಅನುಭವಗಳನ್ನು ಲೇಖಕ ಪಾತ್ರಗಳ ಮೂಲಕ ಹಂಚಿಕೊಳ್ಳುವುದರಿಂದ, ಕಾಲ್ಪನಿಕತೆಯಿಂದ ಹೊರಗೆ ಬಂದಂತಹ ಅನುಭವವಾದರೆ ಅತಿಶಯೋಕ್ತಿಯಲ್ಲ. ಕೋಮು ಸೌಹಾರ್ದತೆ, ಸಂಕಟ, ನೋವು, ಯಾತನೆಗಳ ನಡುವೆ ಬೆಳೆಯುವ ಪಾತ್ರ ಚಿತ್ರಣಗಳು ಆದರ್ಶಪ್ರಾಯವಾಗಿ ಕಾಣಿಸುತ್ತವೆ. ಕೆಲವೊಮ್ಮೆ ಒಂದು ಸ್ವಸ್ಥ ಸಮಾಜದ ಪರಿಕಲ್ಪನೆ ಕೂಡ ಈ ಸಂಕಲನದ ಕಥೆಗಳಲ್ಲಿ ಕಾಣಸಿಗುತ್ತದೆ.

ಈ ಕಥಾಸಂಕಲನದ ಮತ್ತೊಂದು ವಿಶೇಷ ಅಂಶವೆಂದರೆ ಹೆಚ್ಚಿನ ಕಥೆಗಳೆಲ್ಲಾ ಲೇಖಕನೇ `ಫಸ್ಟ್ ಪರ್ಸನ್’ ಆಗಿ ಕಥೆಯನ್ನು ಪ್ರಸೆಂಟ್ ಮಾಡುವಂತೆ ಕಂಡರೂ ಕಥೆಯ ಆಳಕ್ಕೆ ಇಳಿಯುತ್ತಲೇ ಅಲ್ಲಿಯ ಒಂದು ಪಾತ್ರವೇ ಆ ಫಸ್ಟ್ ಪರ್ಸನ್ ನಿರೂಪಣೆ ಮಾಡುವುದನ್ನು ತಿಳಿಯುತ್ತದೆ. ಇದಕ್ಕೆ ಉತ್ತಮ ಉದಾಹರಣೆಯನ್ನು ಕೊಡುವುದಿದ್ದರೆ ಮುಸಡಾ ಅನ್ನುವ ಬಣ್ಣದ ಎಲೆಗಳನ್ನು ಬಿಡುವ ಗಿಡ, ಚಿಟ್ಟೆಗಳಿಗೆ ಹೂವೆನ್ನುವ ಹಾಗೆ ಭ್ರಮೆ ಹುಟ್ಟಿಸಿ ತನ್ನತ್ತ ಆಕರ್ಷಿಸುವಂತೆ ಮಾಡುವುದಿದೆಯಲ್ಲ ಹಾಗೇನೆ ಇಲ್ಲಿಯ ಕಥೆಗಳು ಓದುಗನನ್ನು ಒಳಕ್ಕೆ ಎಳೆದುಕೊಳ್ಳುತ್ತವೆ.

ಮಾನವೀಯತೆಯ ನೆಲೆಗಟ್ಟಿನಲ್ಲಿ ರಚಿಸಿದ `ಮುಸ್ಲಿಯಾರ್’; `ನಾನು ಕೊಂದ ಅಜ್ಜಿ’; ಮುಂತಾದ ಕಥೆಗಳು ಮತ್ತು ಕೋಮು ಸೌಹಾರ್ದತೆಯನ್ನು ಬಿಂಬಿಸುವ `ಮುತ್ತೆತ್ತೂರಿನ ದರ್ಗಾ’; ನವಿರು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಡುವ `ಅಜ್ಜನ ಕೊನೆಯ ದಿನ ಕೊನೆಯಾದದ್ದು’; `ಏಕೆ ಹೀಗೆ...’; `ಅಪ್ಪಾ ಭಟ್ಟರ ಮನೆತನ’ ಮತ್ತು `ಸಿದ್ಧಾರ್ಥ’ ಕಥೆಗಳು, `ಸೋಲು’; `ಅಕ್ಟೋಪಸ್’; `ಮರೆಯ ನೆರಳಿನಲ್ಲಿ’ ಯಂತಹ ಗಂಭೀರ ಚಿಂತನೆಯ ವಸ್ತುಗಳು ಕೂಡ ಸುಲಭವಾಗಿ ಕಿದೂರರ ಲೇಖನಿಯಿಂದ ಪರಿಣಾಮಕಾರಿಯಾಗಿ ಮೂಡಿ ಬಂದಿವೆ.

ಈ ಕಥಾಸಂಕಲನದ `ಮುಸ್ಲಿಯಾರ್’, `ಅಜ್ಜನ ಕೊನೆಯ ದಿನ ಕೊನೆಯಾದದ್ದು’ ಮತ್ತು `ಮುತ್ತೆತ್ತೂರಿನ ದರ್ಗಾ’ ಕಥೆಗಳಲ್ಲಿ ಕೋಮುಸೌಹಾರ್ದತೆ ಮೂಡಿಬಂದಿರುವುದು ಒಂದು ಸ್ವಸ್ಥ ಸಮಾಜದ ಪರಿಕಲ್ಪನೆಯಲ್ಲಿ ಮಾತ್ರವಲ್ಲ, ಅವು ಸಹಜವಾಗಿ ಒಂದೊಮ್ಮೆ ನಮ್ಮ ಸುತ್ತ ಮುತ್ತಲಿದ್ದ ಸಮಾಜವೇ ಅನ್ನುವುದನ್ನು ಸಾಭೀತುಪಡಿಸುತ್ತದೆ. ಈ ಎರಡು ಕಥೆಗಳಲ್ಲಿಯೂ ವರ್ತಮಾನದ ಸಮಸ್ಯೆಗಳನ್ನು ಮುಖಾಮುಖಿಯಾಗಿಸುತ್ತಾ, ಸಹಬಾಳ್ವೆಯ ಆರೋಗ್ಯಕರ ಚಿಂತನೆಯನ್ನು ಮುಂದಿಡುತ್ತವೆ.

`ಮುಸ್ಲಿಯಾರ್’ ಕಥೆಯ ಮುಸ್ಲಿಯಾರ್, ಎಲ್ಲರಿಗೂ ಬೇಕಾದ ವ್ಯಕ್ತಿ. ಆತ ತುಂಬಾ ನಾಜೂಕಿನ ಮನುಷ್ಯ. ಅವರು ಹೊರಗೆ ಹೊರಟಾಗ ಎಂತಹ `ಹರಾಮೇ’ಯಾದರೂ ಅವರಿಗೆ ಸೊಂಟ ಬಗ್ಗಿಸಿ ನಮಸ್ಕರಿಸಲೇ ಬೇಕು. ಅಂತಹ ಮುಸ್ಲಿಯಾರರಿಗೆ ಜಾತಿ ಮತದ ಕಟ್ಟುಪಾಡುಗಳು ಇಲ್ಲವಾಗಿ ಅವರ `ಭಸ್ಮ’ದ ಮಹಿಮೆ ಎಲ್ಲರಿಗೂ ಅವಶ್ಯಕವಾಗಿತ್ತು. ಮುಸ್ಲಿಯಾರಜ್ಜ ಅದೇ ಭಾಂದವ್ಯವನ್ನು ಮುನ್ನಡೆಸಿಕೊಂಡು ಬರುತ್ತಾರಾದರೂ ಆ ನಿರೀಕ್ಷೆ ಮುಂದೆ ಅವರಿಗೆ ನಿರೀಕ್ಷೆಯಾಗಿ ಉಳಿಯುವುದಿಲ್ಲ. ತಾವೆ ಭಸ್ಮದಿಂದ ಕೆಲವೊಂದು ಮಕ್ಕಳನ್ನು ಸ್ವಸ್ಥ್ಯರನ್ನಾಗಿಸಿದವರು. ಈಗ ಅದೇ ಮಕ್ಕಳು ತಮ್ಮ ಕಣ್ಣೆದುರಿಗೆ ಬೆಳೆದು ನಿಂತು, ಪದೇ ಪದೇ ಅವರು ಮನೆಗೆ ಬರುವುದನ್ನು ಪ್ರಶ್ನಿಸುವ ರೀತಿಯಲ್ಲಿ ಅಸಹನೀಯ ನೋವನ್ನುಂಟು ಮಾಡುವಾಗ ಊರನ್ನು ತೊರೆಯುತ್ತಾರೆ. ಆದರೆ ಅವರ ಮಹತ್ವದ ಅರಿವಾಗುವುದು ಕೊನೆಯಲ್ಲಿ ಆ ವ್ಯಕ್ತಿಯ ಮಗುವಿಗೆ ಅಸೌಖ್ಯ ಕಾಡಿದಾಗ. ಹೀಗೆ ಜಾತೀಯತೆಗಿಂತ ಮಿಗಿಲಾದ ಒಂದು ಭಾಂದವ್ಯವನ್ನು ಮುಸ್ಲಿಯಾರಜ್ಜ ಉಳಿಸಿರುತ್ತಾರೆ. ಇದು ನಿಜವಾಗಿಯೂ ಇಂದಿನ ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದೆಯೆನ್ನುವುದು ಓದುಗನ ಅಭಿಪ್ರಾಯವೂ ಆಗುತ್ತದೆ.

ಇನ್ನೊಂದು ಕಥೆ `ಮುತ್ತೆತ್ತೂರಿನ ದರ್ಗಾ’. ಇಲ್ಲಿಯ ದರ್ಗಾದ ವಿಶೇಷತೆಯೆಂದರೆ ಸಮುದ್ರ ತೀರದಲ್ಲಿ ಅರಬ್ಬಿಯೊಬ್ಬನ ದೇಹದ ಒಂದು ಭಾಗವನ್ನು ಹಾಗೇ ನಿರ್ಲಕ್ಷಿಸದೆ ಅದನ್ನು ತಂದು ಹೂಳುವ ಬೆಸ್ತರಿಗೆ, ಆ ಅರಬ್ಬಿಕಾಕನೆ ಅಮೂರ್ತ ರೂಪದಲ್ಲಿ ಕಾಣಿಸಿ(ಇಲ್ಲಿ ಸೂಟೆಯ ರೂಪದಲ್ಲಿ ಕಾಣಿಸಿ) ಅವರು ತನಗಾಗಿ ನಿರ್ಮಿಸಿದ ದರ್ಗಾವನ್ನು ನೋಡಿಕೊಳ್ಳುವಂತೆ ಸೂಚಿಸುತ್ತಾನೆ. ಇಲ್ಲಿಯ ಪ್ರಾಮುಖ್ಯತೆಯಿರುವುದು ಸತ್ತ ಹೆಣವನ್ನು ಮಾನವೀಯ ಅಂತ:ಕರಣವಿರುವ ವ್ಯಕ್ತಿಗಳು ಅದಕ್ಕೊಂದು ಸಂಸ್ಕಾರವನ್ನು ಮಾಡುವುದು. ಆಗ ಜಾತೀಯತೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಅನಂತಮೂರ್ತಿಯವರ `ಸಂಸ್ಕಾರ’ದಲ್ಲಿ ಮುಸಲ್ಮಾನನೊಬ್ಬ ಹೆಣದ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತಹ ಸನ್ನಿವೇಶವೇ ಮುತ್ತೆತ್ತೂರಿನ ದರ್ಗಾ ಕಥೆಯಲ್ಲಿದೆ. ಆದರೆ ಅದನ್ನು ಕಥೆಯ ಹೈಲಟಾಗಿಸದೆ ಸರಳವಾಗಿ ಹೇಳಿ ಮುಗಿಸುವ ಲೇಖಕರಿಗೆ ಅದಕ್ಕಿಂತಲೂ ಮಿಗಿಲಾದ ಭಾವಕ್ಯತೆಯ ಬಗೆ ಹೇಳುವ ಆದರ್ಶ ಎದ್ದು ಕಾಣುತ್ತದೆ. ಇಲ್ಲಿ ವರ್ಷದ ಉರೂಸ್ ನಡೆಯುವ ಸಂದರ್ಭದಲ್ಲಿ ಅದನ್ನು ಬಿಟ್ಟುಕೊಟ್ಟು ಉಳಿದಂತೆ ಅದರ ರಕ್ಷಣೆ ಬೆಸ್ತರದ್ದು. ಇಲ್ಲಿ ಕಾಣುವ ಸಮಾಜ ಕೂಡ ಬಹಳ ಸ್ವಸ್ಥ ಸಮಾಜ. ಉರೂಸ್ ನಡೆಯುವ ಸಂದರ್ಭದಲ್ಲಿಯಂತು ಅದನ್ನು ನೋಡುವವನಿಗೂ ಎಂತಹ ಅನ್ಯೋನ್ಯತೆ ಅನಿಸದಿರದು. ಆ ಕೋಮು ಸೌಹಾರ್ದತೆಯ ದೃಶ್ಯವನ್ನು ನೋಡಲು ಬರುವ ಹಯಗ್ರೀವ ಮತ್ತು ಹನೀಫ ಇಬ್ಬರೂ ಆಪ್ತ ಸ್ನೇಹಿತರು. ಆ ದರ್ಗಾವನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಅನಾಥ, ಭಿಕ್ಷುಕನ ರೂಪದಲ್ಲಿ ಬಂದು ಅದರ ಏಳಿಗೆಯನ್ನು ನೋಡಿಕೊಳ್ಳುವಂತೆ ಊರಿನವರಿಗೆ ಭಾಸವಾದರೂ ಆತನ ಜಾತೀಯತೆಯ ಪ್ರಶ್ನೆ ಎಲ್ಲೂ ಬರುವುದಿಲ್ಲ. ಕೆಲವರಿಗೆ ಅವನು ಮುಸ್ಲಿಂನಂತೆ ಕಂಡರೂ ಇನ್ನುಳಿದವರ ದೃಷ್ಟಿಯಲ್ಲಿ ಆತ ಅರಬ್ಬಿಕಾಕನ ರಕ್ಷಣೆಗೆ ಬಂದವನೆಂದೇ ತಿಳಿಯುತ್ತಾರೆ. ಹೀಗೆ ಊರು ಅನ್ಯೋನ್ಯತೆಯಿಂದಿರುವಾಗ ಆಧುನಿಕತೆಯ ಕರಾಳ ಛಾಯೆ ಮುತ್ತೆತ್ತೂರಿಗೂ ಬಂದು ವೈಮನಸ್ಸು ಉಂಟಾಗಿ ರಕ್ತಪಾತವೂ ನಡೆಯುತ್ತದೆ. ಅದರ ಪರಿಣಾಮವಾಗಿ ಮುತ್ತೆತ್ತೂರು ಕೋಮು ಗಲಭೆಗೆ ನಾಂದಿಯಾಗುತ್ತದೆ. ಆ ಘಟನೆಯಿಂದ ತೀವ್ರ ಗಾಯಗೊಂಡ ಹಯಗ್ರೀವನನ್ನು ಹನೀಫ ಆದರಿಸಿ ಹಿಡಿಯುವುದರೊಂದಿಗೆ ಕಥೆ ಅಂತ್ಯವಾಗುತ್ತದೆ. ಹೀಗೆ ಅನ್ಯೋನ್ಯತೆ ಕೇವಲ ಜಾತೀಯತೆಯ ಮರುಸೃಷ್ಟಿ ಪಡೆದು ಇಡೀ ಸಮಾಜವನ್ನು ಹೇಗೆ ಕಂಗೆಡಿಸುತ್ತದೆಯೆನ್ನುವುದರ ಜೊತೆಗೆ ಸ್ನೇಹದ ತೀವ್ರತೆಯನ್ನು ಕೂಡ ಈ ಕಥೆ ಚೆನ್ನಾಗಿ ನಿರೂಪಿಸಿದೆ.

`ನಾನು ಕೊಂದ ಅಜ್ಜಿ’ ಬದುಕಿನ ಕೊನೆಯ ದಿನಗಳಲ್ಲಿ ಸಾಮಾನ್ಯವಾಗಿ ನರಳುವ ವಯೋವೃದ್ದೆಯ ಕಥೆಯಾದರೂ ಇಲ್ಲಿ ಗಮನಿಸಬೇಕಾಗಿರುವುದು ಎಲ್ಲವೂ ಇದ್ದು ಎಲ್ಲವನ್ನೂ ತೊರೆದ ಅಸಹಾಯಕತೆಯ ಪ್ರತಿಬಿಂಬವನ್ನು. ತನ್ನ ಕೊನೆಗಾಲದಲ್ಲಿ ತಾನು ಯಾರ ಜೊತೆಗಿರುವುದೆನ್ನುವ ದೊಡ್ಡ ಸಮಸ್ಯೆ ಎದುರಾಗಿ ಆಕೆ ತನ್ನ ಮಗನ ಸಮಾನನಾದ ನಿರೂಪಕ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ. ಆಗ ಅವಳಿಗೊಂದು ಪರಿಹಾರ ಸೂಚಿಸುವ ನಿರೂಪಕ ಕೊನೆಗೆ ಯಾವ ನಿರ್ಧಾರವನ್ನೂ ತಳೆಯಲಾರದೆ ಅವಳಿಗೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ, `ಇದ್ದದ್ದನ್ನು ಇದ್ದ ಹಾಗೆ ಎದುರಿಸುವುದೊಂದೆ ದಾರಿ’ಯೆನ್ನುತ್ತಾನೆ. ಈ ಮಾತು ಹೇಳಿದ್ದೆ ಆ ವೃದ್ದೆಗೆ ಏನನಸಿತೊ ಬದುಕನ್ನೆ ಅಂತ್ಯಗೊಳಿಸಿಕೊಳ್ಳುತ್ತಾಳೆ. ಅದನ್ನು ಕೇಳಿದ ನಿರೂಪಕನಿಗೆ ಅಪರಾಧಿ ಭಾವನೆ ಕಾಡುತ್ತದೆ. ಈ ಕಥೆಯಲ್ಲಿ ಬರುವ ಸಮಸ್ಯೆ ಇಳಿವಯಸ್ಸಿನಲ್ಲಿರುವ ಎಲ್ಲರದ್ದು. ಮಾನಸಿಕವಾಗಿ ಅಂತಹ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳುವುದು ಹೇಳಿದಷ್ಟು ಸುಲಭದ ಮಾತಲ್ಲ. ತಾನೊಂದು ಹೊರೆಯೆನ್ನುವ ಕೀಳರಿಮೆಯ ಜೊತೆಗೆ ತನ್ನನ್ನಾರು ನೋಡಿಕೊಳ್ಳುವುದಿಲ್ಲವೆನ್ನುವ ಭಯ ಇನ್ನಷ್ಟು ಮಾನಸಿಕ ಖಿನ್ನತೆಗೆ ತಳ್ಳುತ್ತದೆ. ಅದಕ್ಕಾಗಿಯೆ ರೋಗಿ ಮತ್ತು ಅಸಹಾಯಕರಿಗೆ ಧೈರ್ಯ ತುಂಬುವ `ಪ್ರೀತಿ’ ಬೇಕೇಬೇಕು. ಆ ಪ್ರೀತಿಯ ಕೊರತೆಯಲ್ಲಿಯೇ ಅಜ್ಜಿಯ ಸಾವು ಸಮಸ್ಯೆಯೊಂದಕ್ಕೆ ಪರಿಹಾರವಿಲ್ಲದೆ ಋಣಾತ್ಮಕದತ್ತ ಚಲಿಸುತ್ತದೆ.

ಪ್ರತಿಭಾವಂತ ವಿದ್ಯಾರ್ಥಿ ಪ್ರವೀಣ ಸಾಮಾಜಿಕ ಪಿಡುಗುಗಳ ವಿರುದ್ಧ ದನಿಯೆತ್ತುವ `ಅಕ್ಟೋಪಸ್’ ಕಥೆಯ ಬಿಸಿ ರಕ್ತದ ತರುಣ. ತನ್ನ ಕಾಲೇಜು ದಿನಗಳಲ್ಲಿಯೇ ಪಿಡುಗಗಳ ವಿರುದ್ಧ ಭಾಷಣಗಳನ್ನು ಮಾಡಿ ಎಲ್ಲರನ್ನೂ ಗೆದ್ದುಕೊಂಡಿದ್ದರೂ, ಮಾತಿನಿಂದ ಏನೂ ಸಾಧಿಸಲಾಗಲಿಲ್ಲವೆನ್ನುವುದನ್ನು ಅರಿತುಕೊಳ್ಳುತ್ತಾನೆ. ಅವನ ಈ ರೀತಿಯ ದನಿಗೆ ಕಾರಣವೂ ಇಲ್ಲದಲ್ಲ. ವರದಕ್ಷಿಣೆಯಂತಹ ಪಿಡುಗಿಗೆ ಅವನ ಅಕ್ಕ ಬಲಿಯಾಗಿರುತ್ತಾಳೆ. ಅದೇ ಅವನನ್ನು ಮೋಸ, ವಂಚನೆ, ಲಂಚ, ಲಲಾಸೆಗಳ ವಿರುದ್ಧವೂ ಹೋರಾಡಲು ಪ್ರಚೋದಿಸುತ್ತದೆ. ಆದರೆ ವಾಸ್ತವದಲ್ಲಿ ಅವೆಲ್ಲವೂ ಏನೂ ಆಗದೆ ಹಾಗೆ ಇದ್ದು ಬಿಡುವಂತಹವುಗಳು ಮತ್ತು ಮುಂದುವರಿಯುತ್ತಾ ಅಕ್ಟೋಪಸ್ನ ಹಾಗೆ ಬಿಗಿ ಹಿಡಿತದಲ್ಲಿರುವವುಗಳು ಅನ್ನುವ ಸತ್ಯ ಗೋಚರವಾಗುತ್ತದೆ. ಅವನ್ನು ಏನೂ ಮಾಡಲಾಗದ ಅಸಹಾಯಕತೆಯನ್ನು ಮುಂದೊಂದು ದಿನ ಅವನೂ ಅವುಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಅಂತಹ ಅಕ್ಟೋಪಸ್ನ ಬಾಹುಗಳಲ್ಲಿ ಅವನೂ ಸೇರಿಕೊಳ್ಳುವುದು ಕಥೆಯ ಅಂತ್ಯದಲ್ಲಿ ಕಾಣಬಹುದು. ನಿಜವಾಗಿಯೂ ಅದು ಅವನ ಮನಸ್ಸಿನ ವಿರುದ್ಧವಾದರೂ ಪ್ರವಾಹದ ಎದುರು ಈಜುವ ಸಾಹಸವು ಎಲ್ಲದಕ್ಕೂ ಪರಿಹಾರವಲ್ಲವೆನ್ನುವ ನಿಜವನ್ನು ತೋರಿಸುತ್ತದೆ.

`ಅಜ್ಜನ ಕೊನೆಯ ದಿನ ಕೊನೆಯಾದದ್ದು’ ಕಥೆ ಮೇಲ್ನೋಟಕ್ಕೆ ಸ್ವಲ್ಪ ನವಿರಾದ ಹಾಸ್ಯವನ್ನು ಬಿಂಬಿಸುವಂತೆ ಕಂಡರೂ ನಿರೂಪಕನಿಗೆ ಎದುರಾಗುವ ದೊಡ್ಡ ಸಮಸ್ಯೆಯ ನಡುವೆಯೂ ಅಜ್ಜನಿಗೆ ಸೀರಿಯಸ್ ಆದಾಗ ಒಂದು ಕಡೆ ಹಿಂದೂ- ಮುಸ್ಲಿಂ ಗಲಭೆ ಆರಂಭವಾಗಿ ಪ್ರೀತಿಯ ಅಜ್ಜನನ್ನು ನೋಡುವುದಕ್ಕೂ ಅಸಾಧ್ಯವಾಗುತ್ತದೆ. ಆದರೂ ಎಲ್ಲಿಂದಲೋ ರಾತ್ರಿಯ ಹೊತ್ತು ಊರು ಸೇರುವಾಗ ಇದಿರಾಗುವ ಮೊಯಿಂನಿ ಬ್ಯಾರಿಯ ಸಾಂತ್ವನ ನಿರೂಪಕನಿಗೆ ಸಮಾಧಾನ ತರುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಬಾಂಧವ್ಯವಿದೆಯಲ್ಲ ಅದು ಒಂದು ಕಡೆ ಹತ್ತಿ ಉರಿಯುವ ಜಾತೀಯತೆಯ ದಳ್ಳುರಿ, ಇನ್ನೊಂದೆಡೆ ಜಾತೀಯತೆಯನ್ನು ಮೀರಿದ ಮಾನವೀಯತೆಯ ಮತ್ತು ಬಾಂಧವ್ಯದ ನಂಟು. ಇವೆಲ್ಲವೂ `ಮುಸ್ಲಿಯಾರ್’ ಮತ್ತು `ಮುತ್ತೆತ್ತೂರಿನ ದರ್ಗಾ’ ಕಥೆಯಲ್ಲಿರುವಂತೆಯೇ ಓದುಗನನ್ನು ಬಾಂಧವ್ಯದ ನೆಲೆಯಲ್ಲಿ ಕಟ್ಟಿ ಹಾಕುತ್ತದೆ.

ಇದೇ ಕಥೆಯ ರೀತಿಯಲ್ಲಿ ಬರೆದ ಇನ್ನೆರಡು ಕಥೆಗಳು, `ಅಪ್ಪಾ ಭಟ್ಟರ ಮನೆತನ’ ಮತ್ತು `ಸಿದ್ಧಾರ್ಥ’. ಅಪ್ಪಾ ಭಟ್ಟರ ಮನೆತನ ಕಥೆಯಲ್ಲಿ `ಮಣ್ಣಲ್ಲಿ ಮುಚ್ಚಿದೆ ಎನ್ನುವುದಾದರೆ ಹೆಣ ಹೂತಲ್ಲಿಯೂ ಮನೆ ಕಟ್ಟಿ ಕುಳಿತುಕೊಳ್ಳಬಹುದಲ್ಲವೆ?’ ಅನ್ನುವ ಪಾರಕ್ಕನ ಮಾತುಗಳು; ಲೇಖಕ ಒಂದು ಪಾತ್ರದ ಅಂತರಾಳಕ್ಕೆ ಇಳಿದು ವಿಷಯಗಳನ್ನು ನಿರೂಪಿಸುವ ಕಥನ ಶೈಲಿಯನ್ನು ಎತ್ತಿ ತೋರಿಸುತ್ತದೆ. ಮತ್ತು ಈ ಸಂಕಲನದ ಎಲ್ಲಾ ಕಥೆಗಳಲ್ಲಿರುವಂತೆ ಒಂದು ಚಿತ್ರಣದಿಂದ ಇನ್ನೊಂದು ಕಥನ ಚಿತ್ರಣಕ್ಕೆ ಸ್ಕಿಪ್ ಮಾಡುವಾಗ ಓದುಗನಿಗೆ ಗೊಂದಲವಾಗದಂತೆ ಸರಾಗವಾಗಿ ಬರೆದಿರುವ ರೀತಿ ಆಪ್ತವೆನಿಸುತ್ತದೆ. ಕಥೆಯ ಕೊನೆಯಲ್ಲಿ ಮಾವಿನ ಮರಕ್ಕೆ ಬೀಳುವ ಕೊಡಲಿಯೇಟು ಪಾರಕ್ಕನ ಅಂತ್ಯವನ್ನು ಸೂಚಿಸುವ ತಂತ್ರವಾಗಿ ಬಳಸಿರುವುದನ್ನು ಕಾಣಬಹುದು. ಈ ಕಥೆಯಲ್ಲಿ ಮುದ್ರಾರಾಕ್ಷಸನ ತೊಂದರೆಯಿಂದಾಗಿ ರಮಾಕಾಂತನ ಹೆಸರು ಕೆಲವೊಂದು ಕಡೆ ರಮಾನಂದನಾಗಿಯೂ, ರಮೇಶನಾಗಿಯೂ ಓದುಗನನ್ನು ಸ್ವಲ್ಪ ಕನ್ಫ್ಯೂಸ್ಗೆ ತಳ್ಳುತ್ತದೆ.

ಇನ್ನು `ಸಿದ್ಧಾರ್ಥ’ ಕಥೆಯಲ್ಲಿ ಕಥಾನಾಯಕ ಸಿದ್ಧಾರ್ಥ ಪ್ರಕೃತಿಯ ವೈಚಿತ್ರವನ್ನು ಪರಾಮರ್ಶಿಸಿಕೊಳ್ಳುವ ಕಥೆಯಾಗಿ ಉಳಿಯದೆ, ನಿಗೂಢವೊಂದರ ನಿಗೂಢತೆಯನ್ನು ನಿಗೂಢವಾಗುಳಿಸದೆ ಒಂದು ಆಶಾಭಾವನೆಯನ್ನು ಹುಟ್ಟು ಹಾಕಿ ವಿರಮಿಸುತ್ತದೆ. ಇಲ್ಲಿ ಹೂ ಬಿಡದೆ ಉಳಿಯುವ ಬರಡು ಮಾವಿನ ಮರ ಮುಂದಿನ ವರ್ಷವಾದರೂ ಫಲ ಕೊಡಬಹುದೆ? ಅನ್ನುವ ಪ್ರಶ್ನೆಯೆ ಒಂದು ಆಶಾಭಾವನೆಯನ್ನು ಮೂಡಿಸುತ್ತದೆ. ಹಿಂದಿನ ಕಾಲದಲ್ಲಿ ರಕ್ತಾಶೋಕ ವೃಕ್ಷ ಹೂಬಿಡಲು ಕನ್ಯೆಯೊಬ್ಬಳಿಂದ ಧೋಹದ ಕಾರ್ಯವನ್ನು ಮಾಡಿಸುತ್ತಿದ್ದರಂತೆ. ಹೆಣ್ಣಿನ ಸುಕೋಮಲವಾದ ಪಾದ ಸ್ಪರ್ಶದಿಂದ ಆ ಮರ ಹೂ ಬಿಡುತ್ತಿತ್ತಂತೆ. ಅದೇ ಕಾರ್ಯ ಈ ಕಥೆಯಲ್ಲಿ ನಿಂಗಿಯ ಜೊತೆಗೆ ಸಿದ್ಧಾರ್ಥನ ಮಿಲನವೇ ಬರಡು ಮರ ಫಲವನ್ನು ಬಿಡುವಂತೆ ಮಾಡಬಹುದೇನೋ?

ಈ ಸಂಕಲನದ ಗಂಭೀರ ಚಿಂತನೆಯ ಎರಡು ಕಥೆಗಳು, `ಸೋಲು’ ಮತ್ತು `ಮರೆಯ ನೆರಳಿನಲ್ಲಿ’. ಸೋಲು ಕಥೆಯಲ್ಲಿ ಶಿಸ್ತಿನ ಸಿಪಾಯಿಯಂತಿರುವ ರಾಜಾರಾಯರ ಸುರ್ಪದಿಯಲ್ಲಿ ಬೆಳೆಯುವ ಮಕ್ಕಳಿಬ್ಬರಿಗೆ ಸ್ವಾತಂತ್ರ್ಯ ಸಿಗುವುದು ತಂದೆ ಮನೆಯಲ್ಲಿಲ್ಲದಾಗ. ಅವರೆಷ್ಟೇ ಸ್ಟ್ರಿಕ್ಟ್ ಅನಿಸಿದರೂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದೂ ಅಲ್ಲಿ ಮಕ್ಕಳನ್ನು ಶಿಸ್ತಿನಿಂದ ನೋಡಿಕೊಳ್ಳುವಲ್ಲಿ ಸೋಲುತ್ತಾರೆ. ಒಂದು ಕಡೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಮಕ್ಕಳನ್ನು ಬೆಳೆಸುವ ರೀತಿ, ಮತ್ತೊಂದೆಡೆ ಕಾಲೇಜಿನಲ್ಲಿ ಅವರ ಶಿಸ್ತನ್ನು ಮೀರಿ ನಡೆಯುವ `ಪ್ರೇಮ ಪ್ರಕರಣ’ ಅವರ ಶಿಸ್ತನ್ನು ಅಧ:ಪತನಕ್ಕಿಳಿಸುತ್ತದೆ. ಇದು ಅವರ ಬದುಕಿನಲ್ಲಾದ `ಸೋಲು’ ಮಾತ್ರವಲ್ಲ, ಆ ಪ್ರಕರಣದ ತಿರುವು ಅವರನ್ನು ತಲೆಯೆತ್ತದಂತೆ ಮಾಡುತ್ತದೆ.

`ಮರೆಯ ನೆರಳಿನಲ್ಲಿ’ ಈ ಸಂಕಲನದ ಎಲ್ಲಾ ಕಥೆಗಳನ್ನು ಮೀರಿ ನಿಲ್ಲುವ ಕಥೆ. ಒಂದನೆಯದಾಗಿ ಇದು ಒಂದು ಗಂಭೀರ ಚಿಂತನೆಯ ಹಂದರವಿರುವ ಕಥೆ. ಎರಡನೆಯದಾಗಿ ಇಲ್ಲಿ ಬಳಸಿಕೊಂಡಿರುವ `ಫ್ಲ್ಯಾಷ್ ಬ್ಯಾಕ್’ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಂತಪ್ಪ ದಿನನಿತ್ಯದ ಕಾಯಕದಲ್ಲಿ ಮುಳುಗಿರುವಾಗ ದೇವಕಿಯ ಸಾವಿನ ಸುದ್ದಿಯನ್ನು ಹೇಳುವ ಕೊಗ್ಗು, ಅವನಲ್ಲಿ ದೇವಕಿಯ `ಶಾಶ್ವತ ನಿರ್ಗಮನ’ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದ ಯೌವನದ ದಿನಗಳನ್ನು ನೆನಪಿಸುತ್ತದೆ. ಆ ನೆನಪಿನಲ್ಲಿ ದೇವಕಿಯ ಪಾತ್ರ ಹಿರಿದು. ಸಾಕು ಮಗಳಾಗಿ, ತನ್ನದಲ್ಲದ ಮನೆಯೊಂದರ ಜವಾಬ್ದಾರಿಯನ್ನು ಹೊತ್ತು ಒಂದು ಹನಿ ಪ್ರೀತಿಗಾಗಿ ಹಂಬಲಿಸಿ ಅದೂ ಫಲಿಸದೆ ಒಂಟಿಯಾಗಿಯೇ ಉಳಿದು ಹೋದ ಹೆಣ್ಣು ಮಗಳೊಬ್ಬಳ ಸಂವೇದನಾಶೀಲತೆಗಿಂತಲೂ, ಯುವಕನೊಬ್ಬನ ವಿರಹದ ದನಿಯಾಗಿ ಈ ಕಥೆ ನಿಲ್ಲುತ್ತದೆ.

ಇನ್ನುಳಿದಂತೆ `ಏಕೆ ಹೀಗೆ...?’ ಹೆಣ್ಣೊಬ್ಬಳು ಅನಿವಾರ್ಯವಾಗಿ ಒಂಟಿ ಜೀವನ ನಡೆಸಬೇಕಾದ ಸಂದರ್ಭದಲ್ಲಿ ಸಮಾಜದ ದೃಷ್ಟಿಯಲ್ಲಿ ಅವಳ ಅಂತರಂಗದ ಕಲ್ಪನೆಗಳೇನು ಅನ್ನುವುದನ್ನು ಪ್ರಕೃತಿಯ ಜೊತೆಗೆ ತುಲನೆ ಮಾಡಿ ನಿರೂಪಿಸುವ ಕಥೆ. ಆದರೆ ಈ ಕಥೆಯಲ್ಲಿ ಎಲ್ಲಿಯೂ ಹೆಣ್ಣಿನ ಪಾತ್ರ ಪರಿಧಿಯನ್ನು ಮೀರಿ ಹೋಗದಿರುವುದರಿಂದ ಕಥೆಗೆ ಎಲ್ಲೂ ಮೋಸವಾಗುವುದಿಲ್ಲ. ಪ್ರಕೃತಿ ಕಲಿಸುವ ಪಾಠದಿಂದ ಮತ್ತು ಸುತ್ತಲ ನೋಟದಿಂದ ಅವಳ ಅಂತರಂಗದ ಬಯಕೆಗಳೆಂದೂ ಹೆಡೆಯೆತ್ತುವುದಿಲ್ಲ. ಇದು ಕಥೆಯ ಪ್ಲಸ್ ಪಾಯಿಂಟ್. ಒಂದು ವೇಳೆ ಪ್ರಕೃತಿಯ ಸಹಜ ಕ್ರಿಯೆಗೆ ಅವಳು ಸ್ಪಂದಿಸಿದ್ದರೆ ಅವಳು ಅವಳದ್ದಲ್ಲದ ದಾರಿ ಹಿಡಿಯುವ ಸಾಧ್ಯತೆಯಿತ್ತು. ಆದರೆ ಅವಳ ವಿಲ್ ಪವರ್ ಅಷ್ಟೊಂದು ಗಟ್ಟಿಯಾಗಿರುವುದರಿಂದ ಎಲ್ಲವನ್ನೂ ಮತ್ತು ಎಲ್ಲರನ್ನೂ ಹಗುರವಾಗಿ ತೇಲಿಸಿ ಬಿಡುತ್ತಾಳೆ.

2005ರಲ್ಲಿ ಪ್ರಥಮ ಆವೃತಿಯಾಗಿ ಬಿಡುಗಡೆಯಾಗಿರುವ ಈ ಪುಸ್ತಕ, `ಪುಸ್ತಕ ನಿಧಿ’, ಕುಂದಾಪುರ ಇವರ ಪ್ರಕಟಣೆಯಾಗಿದೆ. ಪ್ರಿಂಟಿಂಗ್ ಟೆಕ್ನಾಲಜಿ ಸುಧಾರಿತ ಈ ಕಾಲದಲ್ಲಿ `ಮುತ್ತೆತ್ತೂರಿನ ದರ್ಗಾ’ವನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಪ್ರಕಟಿಸಬಹುದಿತ್ತು ಅನಿಸುತ್ತದೆ. ಈ ನ್ಯೂನತೆಯನ್ನು ಮರೆ ಮಾಚುವಂತೆ ಇಲ್ಲಿಯ ಕಥೆಗಳೆಲ್ಲವೂ ಸಮೃದ್ಧವಾಗಿ ಮೂಡಿ ಬಂದಿವೆ. ಕಥೆಗಳು ಹೇಗಿರಬೇಕು ಅನ್ನುವುದಕ್ಕೆ ಒಂದು ಸೀಮಿತ ಚೌಕಟ್ಟಿನಲ್ಲಿ ಬೆಳೆಯುವ ಇಲ್ಲಿಯ ಕಥೆಗಳೇ ಸಾಕ್ಷಿಯಾಗುತ್ತವೆ. ಭರವಸೆಯ ಕಥೆಗಾರರಾಗಿರುವ ಕಿದೂರು ವೇಣುಗೋಪಾಲ ಶೆಟ್ಟಿಯವರಿಂದ ಇನ್ನಷ್ಟು ಕಥೆಗಳನ್ನು ನಿರೀಕ್ಷಿಸಬಹುದು.


Read more!

Tuesday, August 9, 2011

ಕಲಾ ಮೇಳ ಮತ್ತು ಸಂಸಾರದ ಧೀಂಗಿಣ

ಕಾದಂಬರಿಗಳಿಗೆ ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರಭಾಕರ ನೀರ್ಮಾರ್ಗ ಅವರು ಎತ್ತಿದ ಕೈ. ಅವರು ಪ್ರಾದೇಶಿಕ ಹಿನ್ನಲೆಯಲ್ಲಿ ತಮ್ಮ ಕಾದಂಬರಿಗಳಿಗೆ ಕಥನ ರೂಪವನ್ನು ಕೊಡುವಲ್ಲಿ ಯಶಸ್ವಿಯಾದವರು. ಈ ಹಿಂದೆ ಅವರು ರಚಿಸಿದ `ತಿಲ್ಲಾನ’ ಕಾದಂಬರಿಯಲ್ಲಿ ಅವಿಭಾಜಿತ ದಕ್ಷಿಣ ಕನ್ನಡದ ಸಂಸ್ಕೃತಿಯ ಪ್ರತೀಕದಂತಿರುವ `ಭೂತದ ಕೋಲ’ ಮತ್ತು `ಭೂತ ಕಟ್ಟುವವರ’ ಬಗೆ ಚೆನ್ನಾಗಿ ಅಧ್ಯಯನ ಮಾಡಿ ಬರೆದಿದ್ದಾರೆ. ಅದೇ ರೀತಿ ಅವರ ಇನ್ನೊಂದು ಕೃತಿ `ಧೀಂಗಿಣ’, ದಕ್ಷಿಣ ಕನ್ನಡದ ಗಂಡು ಮೆಟ್ಟಿನಕಲೆ ಯಕ್ಷಗಾನವನ್ನ ಕೇಂದ್ರಿಕರಿಸಿ ಬರೆದಿರುವ ಕೃತಿ.


ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ ಯಕ್ಷಗಾನ ಕಲೆಯ ಬಗೆ ಆಳವಾಗಿ ಇಳಿಯದೆ, ಯಕ್ಷಗಾನ ಮೇಳವನ್ನು ಕಟ್ಟಿ ಅದನ್ನು ಒಪ್ಪಿಕೊಂಡು ಮತ್ತು ಮುಂದುವರಿಸಿಕೊಂಡು ಹೋಗುವಾಗಿನ ಸಂಕಟಗಳ ಕುರಿತಾಗಿ ಸವಿವರವಾಗಿ ಬರೆದಿರುವುದೆನ್ನುವುದು ಮುಖ್ಯ. ಪ್ರಾದೇಶಿಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಸಂಸಾರಿಕ ಜೀವನವನ್ನು ಚಿತ್ರಿಸುತ್ತಾ ಒಂದು ಕಲೆಯ ಬಗೆ ಕಾಳಜಿಯನ್ನು ಇರಿಸಿಕೊಂಡು ಬರೆದ ಶೈಲಿಯಲ್ಲಿ ಎಲ್ಲೂ ಪದಗಳ ಭಾರವಾಗಲಿ, ಉಪಮೆಯ ಹೊರೆಯಾಗಲಿ ಓದುಗನನ್ನು ಕಾಡುವುದಿಲ್ಲ. ಪ್ರಾದೇಶಿಕ ಭಾಷೆ ಎಷ್ಟು ಸುಲಲಿತವೋ ಅಷ್ಟೇ ಸರಳ ಪದಗಳ ಬಳಕೆ ಕೂಡ ಇಲ್ಲಿದೆ. ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ ಈ ಕಾದಂಬರಿಯನ್ನು ಓದುತ್ತಿರುವಾಗ ನಿಮಗೆ ಒಂದು ಪ್ರಾದೇಶಿಕ ವ್ಯವಸ್ಥೆಯನ್ನು ಅದು ಕಟ್ಟಿಕೊಡುತ್ತದೆಯೆ ಹೊರತು ಜಾತೀಯತೆಯನ್ನು ಎಲ್ಲೂ ಎತ್ತಿ ಹಿಡಿಯುವುದಿಲ್ಲ. ಅದೇ ನೀವು ಮುನ್ನುಡಿಯನ್ನು ಓದಿದ ಬಳಿಕ ಕಾದಂಬರಿಯನ್ನು ಓದಿದರೆ `ಜಾತೀಯತೆ’ ಇಲ್ಲಿ ಉದ್ಭವಿಸಿದೆಯೆನಿಸಿದರೂ ಹೆಚ್ಚಲ್ಲ. ಒಟ್ಟಾರೆಯಾಗಿ ಮುನ್ನುಡಿಯನ್ನು ಬಿಟ್ಟು ಕಾದಂಬರಿಯನ್ನು ಗಮನಿಸಿದರೆ ಒಂದು ಸಂಸಾರದ ಮತ್ತು ಒಂದು ಕಲೆಯ ಏಳುಬೀಳಿನ ಚಿತ್ರಣವನ್ನ ಈ ಕಾದಂಬರಿ ತೆರೆದಿಡುತ್ತದೆ.

ಕಾದಂಬರಿ ಆರಂಭವಾಗುವುದು ಮಾಣೂರಿನ ಚಿತ್ರಣದೊಂದಿಗೆ. ಒಂದು ಪ್ರಾದೇಶಿಕ ಕಥನಕ್ಕೆ ಪೂರಕವಾದ ಒಂದು ಹಳ್ಳಿಯ ಚಿತ್ರಣ. ಹಳ್ಳಿಯೆಂದರೆ ಹೀಗೆ ಇರಬೇಕೆನ್ನುವ ಸಿದ್ಧ ಸೂತ್ರವನ್ನು ಮುರಿದು ಅಲ್ಲಿಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಸ್ಥಿತಿಯನ್ನು ವಿವರಿಸುತ್ತಾ ಜನರ ಮುಗ್ಧತೆ ಮತ್ತು ಇನ್ನೂ ಆಧುನಿಕತೆಯ ಢಂಬಾಚಾರಗಳು ಸೋಕದಿರುವುದನ್ನು ಓದುತ್ತಾ, ಓದುಗನಿಗೆ ಒಂದು ಹೊಸ ಪರಿಸರದ ಕಲ್ಪನೆಯನ್ನು ನೀಡುತ್ತದೆ. ಕಾದಂಬರಿಯ ಮುಖ್ಯ ಅಂಶ ಕೂಡ ಇದಾಗಿದೆ. ಈಗಲೂ ಹಳ್ಳಿಯಲ್ಲಿ ಕೋಲ, ಯಕ್ಷಗಾನದಂತಹ ಸಾಂಸ್ಕೃತಿಕ ಕಲೆಗಳೆಂದರೆ ಅಲ್ಲಿಯ ಕಳೆಯೇ ವಿಭಿನ್ನವಾದದ್ದು. ಪ್ರತೀಯೊಬ್ಬ ಜನಸಾಮಾನ್ಯನು ಅದನ್ನು ಒಂದು ಹಬ್ಬದಂತೆ ಮತ್ತು ಸಂತೋಷದ ಸ್ಥಿತಿಯಂತೆ ಅನುಭವಿಸುವುದು ಅವರಲ್ಲಿ ಉಳಿದುಕೊಂಡಿರುವ ಸಾಂಸ್ಕೃತಿಕ ಆರಾಧನೆಗೆ ಸಾಕ್ಷಿಯಾಗಿದೆ. ಯಕ್ಷಗಾನವೆಂದರೆ ರಾತ್ರಿಯಿಂದ ಆರಂಭವಾಗಿ ಮುಂಜಾವಿನ ತನಕವೂ ನಡೆಯುವುದು ಪರಿಪಾಠ. ಆದರೆ ಇತ್ತೀಚೆಗೆ ಆ ಸಂಪ್ರದಾಯ ನಾಶವಾಗುತ್ತಾ ಗಂಟೆಗಳ ಸೀಮಿತಕ್ಕೆ ಪ್ರದರ್ಶನ ಬಂದು ನಿಂತಿರುವುದು ಕಲೆಯೊಂದರ ದುರಂತ. ಆದರೆ `ಧೀಂಗಿಣ’ದಲ್ಲಿ ರಾತ್ರಿಯಿಂದ ಹಗಲಾಗುವವರೆಗೂ ಯಕ್ಷಗಾನ ನಡೆಯುತ್ತದೆ. ಆ ಚೆಂಡೆ, ಮದ್ದಳೆ, ಭಾಗವತಿಕೆಯ ಮತ್ತು ಪಾತ್ರಗಳ ಗುಂಗು ಪ್ರೇಕ್ಷಕನ ತಲೆಯೊಳಗೆ ಮೊರೆಯುತ್ತಿರುವಂತೆಯೇ ಓದುಗನನ್ನೂ ಆ ಸ್ಥಿತಿಗೆ ಸೆಳೆಯುತ್ತದೆ.

ಈ ಕಾದಂಬರಿಯ ಮುಖ್ಯ ಪಾತ್ರ ಸುಬ್ಬಣ್ಣ. ಪ್ರಾದೇಶಿಕ ಪದಗಳಲ್ಲಿಯೇ ಹೇಳುವುದಾದರೆ ಸುಬ್ಬಣ್ಣನಿಗೆ ಯಕ್ಷಗಾನದಲ್ಲಿ `ಭಯಂಕರ’ ಆಸಕ್ತಿ. ಹವ್ಯಾಸಿ ಕಲಾವಿದನಾಗಿ ಆ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಮುಂದೊಂದು ದಿನ ತಾನೂ ಒಂದು ಮೇಳವನ್ನು ಕಟ್ಟಿಕೊಳ್ಳಬೇಕೆನ್ನುವ ಇರಾದೆಯಿರುವವನು. ಅವನ ಆಸಕ್ತಿಗೆ ನೀರೆರೆಯುವವನು ಬಾಲು ಅನ್ನುವ ಕಲಾವಿದ. ಇದಕ್ಕೆ ಪೂರಕವಾಗಿರುವುದು ರಾಘಣ್ಣನವರ ಬೆಂಬಲ. ಇವೆಲ್ಲವನ್ನೂ ಮನಸಿನಲ್ಲಿಯೇ ಪುನರುಚ್ಚರಿಸುತ್ತಾ, ಮುಂದೊಂದು ದಿನ ಸುಬ್ಬಣ್ಣ ಬಾಲುವಿನ ಸಹಾಯದಿಂದ ಅವನತಿಯತ್ತ ಸಾಗಿದ ಒಂದು ಮೇಳವನ್ನು ಖರೀದಿಸಿ, ಅದನ್ನು ಪೋಷಿಸುತ್ತಾನೆ. ಮಾತ್ರವಲ್ಲ, ತನ್ನಿಂದ ಸ್ಥಾಪಿಸಲ್ಪಟ್ಟ ಮಾಣೂರಿನ ಮೇಳವನ್ನು ಪ್ರಸಿದ್ಧಿಗೆ ತರುತ್ತಾನೆ.

ಕಲೆಯನ್ನು ನೆಚ್ಚಿಕೊಂಡವನು ಸಂಸಾರಿಕವಾಗಿ ಸೋಲುತ್ತಾನೆನ್ನುವುದು ಇಲ್ಲಿಯ ಕೆಲವು ಪಾತ್ರಗಳಿಂದ ಚಿತ್ರಿಸಿದ್ದರೂ, ವಾಸ್ತವ ಹಾಗಿರದೆ ಇದು ಕೇವಲ ಕಾದಂಬರಿಯ ಬೆಳವಣಿಗೆಗೆ ಒಂದು ಸೂತ್ರವನ್ನು ಬಳಸಿಕೊಂಡಂತೆ ಕಾಣುತ್ತದೆ. ಬ್ರಹ್ಮಾಚಾರಿಯಾಗಿಯೇ ಉಳಿಯುವ ಮನಸ್ಸಿನವ ಸುಬ್ಬಣ್ಣ. ಅವನ ಈ ತ್ಯಾಗ ಏನಿದೆ ಅದು ಕಲೆಯ ಆರಾಧನೆಗಾಗಿ ಅನ್ನುವುದು ಮುಖ್ಯ. ತಾನು ಊರೂರು ಅಲೆಯುವವನು ಸಂಸಾರಿಯಾದರೆ ಕಲೆಯನ್ನು ನಿರ್ಲಕ್ಷಿಸುವೆನೆನ್ನುವ ಭಯ ಅವನನ್ನು ಕಾಡುವುದೇನೋ? ಯಾರ ಒತ್ತಾಯಕ್ಕೂ ಮಣಿಯದೆ ತಾನು ನೆಚ್ಚಿಕೊಂಡ ಕಲೆಯನ್ನು ಆರಾಧನಾಭಾವದಿಂದ ಮುಂದುವರಿಸಿಕೊಂಡು ಹೋಗುತ್ತಾನೆ. ಆದರೆ ಅವನು ಒತ್ತಾಯದ ಅನಿವಾರ್ಯತೆಗೆ ಮಣಿದು ಸಂಸಾರಿಯಾಗುತ್ತಾನೆ. ಇದು ಅವನ ಅಧ:ಪತನ ಮಾತ್ರವಲ್ಲ ಅವನು ಸ್ಥಾಪಿಸಿದ ಕಲೆಯೊಂದರ ಅವನತಿಯ ಹಾದಿಯಾಗುವುದು ಕೂಡ ಒಂದು ದುರಂತ.

ಇಡೀ ಕಾದಂಬರಿಯಲ್ಲಿ ಪ್ರೀತಿ, ಪ್ರೇಮ, ರಾಗ, ದ್ವೇಷಗಳು ಕೂಡ ಹಾಸು ಹೊಕ್ಕಾಗಿ ಕಾದಂಬರಿಯನ್ನು ಬೆಳೆಯುವಂತೆ ಮಾಡುತ್ತದೆಯಾದರೂ ಅದು ಓದಿನ ಓಘಕ್ಕೆ ತಡೆಗಳಂತೆ ನಿರ್ಮಿತವಾಗಿರುವುದು ಸ್ವಲ್ಪ ಮಟ್ಟಿಗೆ ಹೌದೆನಿಸಿದರೂ ಸಂಸಾರದ ಚಿತ್ರಣದಲ್ಲಿ ಕುತೂಹಲ ಮತ್ತು ತಿರುವುಗಳನ್ನು ಇಲ್ಲಿ ಹೇಳಿರುವುದು ಇನ್ನೊಂದು ದೃಷ್ಟಿಕೋನದಿಂದ ಚಿಂತನೆಗೆ ಹಚ್ಚುತ್ತದೆ. ಇದರಿಂದಾಗಿ ಕಾದಂಬರಿ ಎರಡು ರೇಖೆಗಳಲ್ಲಿ ಸಾಗುತ್ತದೆ. ಒಂದು ಸಂಸಾರದ ಚಿತ್ರಣ; ಇನ್ನೊಂದು ಮೇಳದ ಏಳು ಬೀಳುಗಳ ಚಿತ್ರಣ. ಇವೆರಡೂ ಕೊನೆಗೆ ಒಂದೇ ರೇಖೆಗೆ ಬರುವ ಪ್ರಯತ್ನವನ್ನು ಮಾಡುತ್ತಾವಾದರೂ ದುರಂತ ಸಂಭವಿಸುತ್ತಲೇ ಕಾದಂಬರಿಯ ಅಂತ್ಯವನ್ನು ಊಹಿಸಬಹುದಾಗಿದೆ. ಆದರೆ ಕಾದಂಬರಿಯ ಕೊನೆಯ ಪುಟಗಳಲ್ಲಿ ಒಂದು ತಿರುವು ಕಾಣಿಸಿಕೊಂಡು `ಸುಖಾಂತ’ದಲ್ಲಿ ಮುಗಿಯುವುದು ಒಂದು ನಿಟ್ಟುಸಿರಿಗೆ ಸಾಧ್ಯವಾಗುತ್ತದೆ. ಅದೇ, ಸುಬ್ಬಣ್ಣ ಮತ್ತೆ ಮಾಣೂರು ಮೇಳವನ್ನು ಸುಸ್ಥಿತಿಗೆ ತರುವ ಸಂಗತಿ ಅಭಿವ್ಯಕ್ತವಾಗುವುದು ಕಾದಂಬರಿಯ ಕೊನೆಯಲ್ಲಿ, ಓದುಗನಿಗೆ ಸಮಾಧಾನವಾಗುವ ರೀತಿಯಲ್ಲಿ.

ಇನ್ನು ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳೆಲ್ಲವೂ ಒಂದು ರೀತಿಯ ತೊಳಲಾಟಗಳಲ್ಲಿ ಮುಳುಗಿರುವುದು ಕಾಣಿಸುತ್ತದೆ. ಬಾಲುವಿಗೆ ಮನಸೋತ ರಾಘಣ್ಣನ ಮಗಳು ಕಲ್ಯಾಣಿಯಾಗಲಿ, ಸುಬ್ಬಣ್ಣನನ್ನು ಮದುವೆಯಾಗುವ ಸುಗುಣಳಾಗಲಿ, ಬಾಲುವನ್ನು ಮಾನಸಿಕವಾಗಿ ಆಧಾರವೆಂದು ಬಯಸುವ ಪಾರ್ವತಿಯಾಗಲಿ, ಎಲ್ಲೂ ಒಂದು ಗಟ್ಟಿ ಪಾತ್ರವಾಗದೆ ತಮ್ಮೊಳಗೆ ನ್ಯೂನತೆಗಳನ್ನು ತುಂಬಿಕೊಂಡು ಇನ್ನೊಂದು ಪಾತ್ರವನ್ನು ಕೆಡಿಸಲು ಸೃಷ್ಟಿಯಾದಂತೆ ಕಾಣುತ್ತವೆ. ಸಾಂಸಾರಿಕ ಜಂಜಾಟಗಳಿಗೆ ಮೂಲ ಹೆಣ್ಣು ಅನ್ನುವುದನ್ನು ಇವು ಎತ್ತಿ ಹಿಡಿಯುವಂತೆ ಗೋಚರಿಸುತ್ತವೆ. ಈ ಮೂರು ಪಾತ್ರಗಳಲ್ಲಿ ಪಾರ್ವತಿಯ ಪಾತ್ರಚಿತ್ರಣ ಓದುಗನನ್ನು ಸೆಳೆದರೂ ಅವಳ ಮೇಲೆ ಅನುಕಂಪ ಮೂಡಲಿ ಅನ್ನುವ ದೃಷ್ಟಿಯಿಂದ ಚಿತ್ರಿಸದೆ, ಅವಳು ಅನಾಥೆಯಾಗಿಯೇ ಉಳಿದರೆ ಹೆಚ್ಚು ಪರಿಣಾಮಕಾರಿಯಾಬಹುದೆನ್ನುವ ಅಂಶವನ್ನೂ ಇಲ್ಲಿ ಕಾಣಬಹುದು. ಹಾಗೆಯೇ ಬಾಲುನಂತಹ ಒಬ್ಬ ಆದರ್ಶಪ್ರಾಯದ ಯುವಕ ತನ್ನನ್ನು ಮೆಚ್ಚಿ ಕೈಹಿಡಿದ ರೂಪಸಿಯಾದ ಹೆಣ್ಣು ಕಲ್ಯಾಣಿಯಿದ್ದರೂ ಪಾರ್ವತಿಯ ಅಸಹಾಯಕತೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಬಾಲುವಿನ ಬಗೆಗಿದ್ದ ಒಳ್ಳೆಯ ಭಾವನೆಯನ್ನು ನುಂಗಿ ಬಿಡುತ್ತದೆ. ಇದು ಕಲಾವಿದರಿಗೆ ಇರಬೇಕಾದ ಅರ್ಹತೆಯೋ? ಇಲ್ಲ, ಅವರ ಬಲಹೀನತೆಯೇನೋ? ಅನಿಸದಿರದು.

ಕಾದಂಬರಿಯ ಮೂಲ ತಿರುಳಿರುವುದು ಒಂದು ಕಲೆಯನ್ನು ಉಳಿಸುವಲ್ಲಿ ಏನೆಲ್ಲಾ ಕಷ್ಟಸಾಧ್ಯತೆಗಳಿವೆಯೆನ್ನುವುದನ್ನು ತಿಳಿಸುವುದೇ ಆದರೂ ಮೇಳದ ಆರ್ಥಿಕ ಸ್ಥಿತಿ, ಗತಿಗಳನ್ನೂ ಕೂಡ ತಿಳಿಸುತ್ತದೆ. ಮೇಳವನ್ನು ಕಟ್ಟಿಕೊಂಡು ಒಂದು ಕಲೆಯನ್ನು ಉಳಿಸುವುದಕ್ಕಾಗಿ ಸುಬ್ಬಣ್ಣನಂತಹ ಮಧ್ಯಮವರ್ಗದ ವ್ಯಕ್ತಿ, ರಾಘಣ್ಣ ಮತ್ತು ಬಾಲುವಿನಂತಹ ಉದಾರಿಗಳ ಸಹಾಯದಿಂದ ತನ್ನ ಹಠವನ್ನು ಸಾಧಿಸಿಯೇ ಬಿಡುತ್ತಾನೆ. ಕಲಾವಿದರಿಗೆ ಒಬ್ಬ ನೆಚ್ಚಿನ ವ್ಯವಸ್ಥಾಪಕನಾಗಿ ಕಲೆಯನ್ನು ಪೋಷಿಸುವ ದೃಷ್ಟಿಯಿಂದ ತೊಂದರೆಗಳನ್ನು ಎದುರಿಸುತ್ತಾ ಸುಸೂತ್ರವಾಗಿ ಮೇಳವನ್ನು ಮುನ್ನಡೆಸುತ್ತಾನೆ. ಆದರೆ ಅವನಲ್ಲಿರುವ ಕಲಾಸಕ್ತಿಗೆ ವ್ಯತಿರೀಕ್ತವಾಗಿ ಅವನ ಕೈ ಹಿಡಿದ ಸುಗುಣಳ ಗುಣ. ಪ್ರತೀಯೊಂದನ್ನು ಹಣದಿಂದ ಅಳೆಯುವ ಅವಳು ಕಲಾವಿದರಿಗೆ ದ್ರೋಹಬಗೆಯುವಂತೆ ನಡೆದುಕೊಳ್ಳುತ್ತಾಳೆ. ಐಶರಾಮದ ಜೀವನಕ್ಕೆ ಮಾರು ಹೋಗುವ ಅವಳು ತನಗೆ ಬೇಕಾಗಿರುವುದೆಲ್ಲವನ್ನೂ ಅನುಭವಿಸುತ್ತಾ ಸುಬ್ಬಣ್ಣನ ಬಾಳಿಗೂ ಮುಳ್ಳಾಗುತ್ತಾಳೆ. ಅದಕ್ಕೆ ಬೆನ್ನೆಲುಬಾಗಿ ಅವಳ ತಮ್ಮ ಆನಂದ ನಿಂತಿರುತ್ತಾನೆ. ಅನಗತ್ಯವಾಗಿ ಮೇಳದ ಮೇಲ್ವಿಚಾರಣೆಯಲ್ಲಿ ಮೂಗುತೂರಿಸಿ ಅಲ್ಲಿಯ ವ್ಯಸ್ಥೆಯನ್ನೇ ಕದಡುತ್ತಾನೆ. ಇದರ ಪರ್ಯವಸಾನವಾಗಿ ಕಲಾವಿದರು ಮೇಳವನ್ನು ತೊರೆಯುವುದಲ್ಲದೆ, ಮೇಳಕ್ಕೆ ಹೊಸ ಪ್ರಯೋಗವೆಂಬಂತೆ ಅಶ್ಲೀಲ ಪರಿವರ್ತನೆಗಳನ್ನು ತಂದು ಮುಳುಗಿಸುತ್ತಾನೆ.

ಮುಂದೆ ಸುಗುಣಳು ಕೂಡ ಸುಬ್ಬಣ್ಣನನ್ನು ಮೇಳದ ಕಡೆಗೆ ತಲೆ ಹಾಕದಂತೆ ಮಾಡಿ ಅವನಿಗೆ ಹುಚ್ಚನ ಪಟ್ಟವನ್ನು ಕಟ್ಟಿ ಅವನನ್ನು ಆಸ್ಪತ್ರೆಗೆ ಸೇರಿಸಿ ತಾನು ಕಂಡ ಕಂಡವರ ಜೊತೆಗೆ ಬದುಕನ್ನು ಹಂಚಿಕೊಳ್ಳುತ್ತಾಳೆ. ಆದರೆ ಕೊನೆಗೆ ಅವಳ ಗತಿಯೂ ಕೂಡ ಯಾರಿಗೂ ಬರಬಾರದ ಸ್ಥಿತಿಯಾಗಿ ಅಂತ್ಯವಾಗುವುದು ಕಥನದ ಕೊನೆಯಲ್ಲಿ.

ತಿಲ್ಲಾನ ಕಾದಂಬರಿಯ ರೀತಿಯಲ್ಲಿಯೇ ಸರಳ ಮತ್ತು ಸುಂದರವಾಗಿ ಮೂಡಿ ಬಂದಿರುವ ಧೀಂಗಿಣ ಕಾದಂಬರಿ ಕೂಡ ಪ್ರಾದೇಶಿಕತೆಯನ್ನು ಉಳಿಸಿಕೊಂಡಿರುವ ಕಾದಂಬರಿ. ಆಪ್ತವೆನಿಸುವ ಇಲ್ಲಿಯ ಚಿತ್ರಣಗಳಿಗಾದರೂ ಧೀಂಗಿಣವನ್ನು ಓದಲೇಬೇಕು.


Read more!

Sunday, April 17, 2011

ಸಾಂಸ್ಕೃತಿಕ ಸ್ಥಾನ ಪಲ್ಲಟದ ‘ತಿಲ್ಲಾನ’


ಪ್ರಾದೇಶಿಕ ಕಥನ ಪರಂಪರೆಗೆ ಅದರದೇ ಆದ ಮಹತ್ವವಿದೆ. ಆಯಾ ಪ್ರದೇಶದ ಸಾಂಸ್ಕೃತಿಕ, ಪರಂಪರಾತ್ಮಕ ಆಗುಹೋಗುಗಳನ್ನು ಸವಿವರವಾಗಿ ದಾಖಲಿಸುವ ಕಥನ ಶೈಲಿ ಆಯಾಯ ಪರಿಸರದಲ್ಲಿ ಬೆಳೆದು ಬಂದ ಲೇಖಕರ ಸಂಶೋಧನಾತ್ಮಕ ಅಭ್ಯಾಸವನ್ನು ಆದರಿಸಿದೆ. ಅವಿಭಾಜಿತ ದಕ್ಷಿಣಕನ್ನಡ ತುಳುನಾಡಿನ ಅನೇಕ ಸಾಂಸ್ಕೃತಿಕ ಮತ್ತು ಸಾಹಿತ್ಯಕ ರೋಚಕತೆಯನ್ನು ಪಡೆದಿರುವ ಪ್ರದೇಶ. ಇಲ್ಲಿಯ ಪ್ರತೀಯೊಂದು ಸಂಸ್ಕೃತಿಗೂ ಅದರದೇ ಆದ ವೈಶಿಷ್ಟ್ಯತೆಯಿದೆ. ಈ ವೈಶಿಷ್ಟ್ಯವೇ ಇಂದಿಗೂ ಈ ಪ್ರದೇಶದ ಜನರ ನಂಬಿಕೆ, ಆಶಾಭಾವನೆ, ಭಯ ಭಕ್ತಿಯ ಮತ್ತು ಮುಂದುವರೆಸಿಕೊಂಡು ಬಂದಿರುವ ಜೀವನ ಕ್ರಮವನ್ನು ಒಂದು ಸಿದ್ಧ ಮಾದರಿಯಾಗಿ ರೂಪಿಸಿಕೊಂಡು ಬಂದಿರುವುದು ಆಶ್ಚರ್ಯವೇನಲ್ಲ.

‘ತಿಲ್ಲಾನ’ ಕಾದಂಬರಿಯ ಹೆಸರೇ ಆಕರ್ಷಕ ಮತ್ತು ಇಂಪು. ಪ್ರಭಾಕರ ನೀರ್ಮಾರ್ಗ ಅವರ ನಾಲ್ಕನೆಯ ಕೃತಿಯಾದ ಇದು ದಕ್ಷಿಣಕನ್ನಡದ ಸಾಂಸ್ಕೃತಿಕ ಪರಂಪರೆಯೊಂದಿಗಿನ ತಲ್ಲಣವನ್ನು ಮತ್ತು ಮಾರ್ಪಾಡಾಗುತ್ತಿರುವ ಅನಾದಿಕಾಲದ ಆಚರಣೆಗಳನ್ನು ಅಳಿವಿನಂಚಿಗೆ ಸಾಗಿಸುತ್ತೇವೇನೋ ಅನ್ನುವ ಆತಂಕದೊಂದಿಗೆ ಬರೆದಿರುವಂತೆ ಮಾತ್ರವಲ್ಲ, ಸಮಾಜದಲ್ಲಿಯ ಅಂಧಾನುಕರಣೆಯ ‘ವಿಶ್ವವ್ಯಾಪಿ ಪರಿವರ್ತನಾ ಪಿಡುಗು’ ಹಬ್ಬುತ್ತಲೇ ಎಲ್ಲವನ್ನೂ ಸ್ವ್ಯಾಪ್ ಮಾಡಿಕೊಂಡು ಬಿಡುತ್ತದೆಯೆನ್ನುವುದಕ್ಕೆ ಉದಾಹರಣೆಯಂತೆ ಕಾಣುತ್ತದೆ.

ಈ ಕೃತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಅಪೂರ್ವ ಸಂಸ್ಕೃತಿಯಾದ ಭೂತಾರಾಧನೆಯ ಮತ್ತು ಭೂತ ಕಟ್ಟುವವರ ಬಗ್ಗೆ ಸವಿವರವಾದ ವಿಷಯಗಳನ್ನು ದಾಖಲಿಸಲಾಗಿದೆ. ಭೂತಾರಾಧನೆಯೆ ಬದುಕಿನ ಅವಿಭಾಜ್ಯ ಅಂಗವಾಗಿ ಇಂದಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಎಷ್ಟೋ ಕುಟುಂಬಗಳ ಆಂತರಿಕ ತುಮುಲ, ಒಳಗೊಳಗೆ ನಡೆಯುವ ರಾಜಕೀಯ, ವಿಶ್ವವ್ಯಾಪಿಗೆ ತೆರೆದುಕೊಳ್ಳುವಾಗಿನ ಭಯ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾರದ ಅಸಹಾಯಕತೆ ಇವೆಲ್ಲವನ್ನೂ ಕಾದಂಬರಿ ಬಹಳ ಮಾರ್ಮಿಕವಾಗಿ ತೆರೆದಿಡುತ್ತದೆ. ಸಂಸ್ಕೃತಿಯ ಸೊಗಡು, ಪಾಡ್ದನ, ಅರದಾಲ, ನರ್ತನಗಳ ಮೂಲಕ ಸಮಷ್ಟಿ ಕಲೆಯೆನಿಸಿದ ‘ಭೂತಾರಾಧನೆ’ ಇಂದಿಗೂ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ನೆಲೆಸಿದೆಯೆಂದರೆ ಅತಿಶಯೋಕ್ತಿಯಲ್ಲ. ಈ ರೀತಿಯ ಒಂದು ಪ್ರದೇಶದ ಕಲೆಯನ್ನು ಕಾದಂಬರಿಯಾಗಿಸುವಾಗ ಅನೇಕ ವಾಸ್ತವ ಸಂಗತಿಗಳನ್ನು ಕಲೆಹಾಕಬೇಕಾಗಿರುವ ಅವಶ್ಯಕತೆ ಲೇಖಕನಿಗಿದೆ. ಈ ಕಾದಂಬರಿಯಲ್ಲಿ ಆ ರೀತಿಯ ಸಂಶೋಧನಾತ್ಮಕ ರಚನೆ ಎದ್ದು ಕಾಣುತ್ತದೆ.

ಜಾಗತೀಕರಣದ ರಣಕಹಳೆ ಹಳ್ಳಿಯನ್ನೂ ಕಬಳಿಸಿ, ಅಲ್ಲಿಯ ಸಂಸ್ಕೃತಿಯನ್ನು ವಿನಾಶದ ಅಂಚಿಗೆ ಅಥವಾ ಆಧುನಿಕತೆಗೆ ಪರಿವರ್ತಿಸಿ ಮೂಲ ಧಾತುವನ್ನೇ ಬದಲಿಸುವುದು ಸರ್ವೇಸಾಮಾನ್ಯ. ಅಂತಹ ಒಂದು ಕುಸಂಸ್ಕೃತಿಗೆ ಬಲಿಯಾಗುವ ತುಳುನಾಡಿನ ಭೂತಾರಾಧನೆಯನ್ನು ಆಧಾರವಾಗಿಟ್ಟುಕೊಂಡು, ಭೂತ ಕಟ್ಟುವವರ ಜೀವನವನ್ನು ತೆರೆದಿಡುವ ಕಾದಂಬರಿಯ ಮುಖ್ಯ ವಾಹಿನಿಯಲ್ಲಿ ಹಿರಿಯನಂತಹ ಆದರ್ಶ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುತ್ತಾನೆ. ಒಳಗೊಳಗೆ ನಡೆಯುವ ರಾಜಕೀಯದಂತಹ ದೊಂಬರಾಟದಲ್ಲಿ ಗುರುವ ಮತ್ತು ಜೋಯಿಸರಂತಹ ವ್ಯಕ್ತಿಗಳೇ ಸಾಂಸ್ಕೃತಿಕ ನೆಲೆಯನ್ನು ಗುರಿತಪ್ಪಿಸುವ ಕಾರ್ಯಕ್ಕೂ ಇಳಿಯುತ್ತಾರೆ. ಒಟ್ಟಿನಲ್ಲಿ ತನಗೆ ಪರಂಪರಾಗತವಾಗಿ ಬಂದಿರುವ ಭೂತಕಟ್ಟುವ ಕಾಯಕವನ್ನು ತನ್ನ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಹಿರಿಯನಂತಹ ವ್ಯಕ್ತಿಯ ಆಸೆ. ಆದರೆ ಆಧುನಿಕತೆಗೆ ತಕ್ಕಂತೆ ಜೀವನ ಶೈಲಿಯನ್ನು ಒಪ್ಪಿಕೊಳ್ಳುವಾಗ ಆಗುವ ಬದಲಾವಣೆಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳತ್ತ ಮುಖ ಮಾಡುವುದು ಇಲ್ಲಿಯ ಮುಖ್ಯ ತಲ್ಲಣ. ಮಕ್ಕಳಿಬ್ಬರೂ ಪೇಟೆಯ ಬದುಕನ್ನು ನೆಚ್ಚಿಕೊಂಡು ಹಿರಿಯನ ಆಸೆಗಳಿಗೆ ತಣ್ಣೀರೆರೆಚಿ ಅಲ್ಲೂ ತಮ್ಮನ್ನು ಗುರುತಿಸಿಕೊಳ್ಳದೆ ಹೋಗುವುದು ಅಡ್ಡ ದಾರಿ ಹಿಡಿದವರಿಗೆ ತಕ್ಕುದಾದ ಶಾಸ್ತಿಯೆನ್ನುವಂತೆ ಕಾಣುತ್ತದೆ. ಇತ್ತ ಮಗಳನ್ನು ಕೂಡ ವಿದ್ಯಾವಂತಳನ್ನಾಗಿಸಿದ ಹಿರಿಯ ಅವನ ವಿರೋಧವಾಗಿ ಅವಳು ಬೇರೆ ಜಾತಿಯವನೊಬ್ಬನನ್ನು ಮದುವೆಯಾಗುತ್ತೇನೆನ್ನುವುದು ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿ ತೋರಿ ಅವನು ವಿರೋಧ ವ್ಯಕ್ತಪಡಿಸುತ್ತಾನೆ. ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ಅಂಗರನೆನ್ನುವ ಒಬ್ಬ ತನ್ನದೇ ಜಾತಿಯ ಹುಡುಗನನ್ನು ಕರೆಸಿಕೊಂಡು ತನ್ನ ವೃತ್ತಿಯ ಸಮಸ್ತವನ್ನು ಅವನಿಗೆ ಧಾರೆಯೆರೆಯುತ್ತಾನೆ. ಹಾಗೆಯೇ ಮಗಳನ್ನು ಅವನಿಗೆ ಕೊಟ್ಟು ತನ್ನ ಪರಂಪರೆಯೊಂದನ್ನು ಅಳಿಯನಾಗುವವನ ಮೂಲಕ ಮುಂದುವರೆಸಿಕೊಂಡು ಹೋಗಲು ಬಯಸುತ್ತಾನೆ. ಆದರೆ ಮಗಳು ಕಲಿತು ಪ್ರೀತಿಯೆನ್ನುವ ಕೂಪಕ್ಕೆ ಬಿದ್ದಿರುತ್ತಾಳೆ. ಕೊನೆಗೂ ಹಿರಿಯನ ಆಸೆಗಳು ಕೈಗೂಡುವುದೇ ಇಲ್ಲ. ಇದು ಗಟ್ಟಿ ಕಥಾಹಂದರವಾದರೆ ಕೆಲವೊಂದು ಕಡೆ ಘಟನೆಗಳು, ವಿಷಯಗಳು ಪುನರಾವರ್ತನೆಯಾಗಿರುವುದು ಓದುಗನನ್ನು ತಾಳ್ಮೆ ತಪ್ಪಿಸುತ್ತವೆ. ಕೆಲವೊಮ್ಮೆ ಪುಟಭರ್ತಿಗಾಗಿ ಬರೆದವೇನೋ ಅನ್ನುವ ಸಂಗತಿಗಳು ಇವೆ.

ಅರ್ಧದವರೆಗೂ ಕಾದಂಬರಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವುದಲ್ಲದೆ ಮಾಹಿತಿಪೂರ್ಣವಾಗಿದೆ. ಆದರೆ ಬಳಿಕ ಇಲ್ಲಿ ಕೆಲವೊಂದು ವ್ಯತಿರೀಕ್ತಗಳು ಕಾದಂಬರಿಯನ್ನು ಸ್ವೀಕರಿಸುವಲ್ಲಿ ತೊಡಕಾಗಿದೆ. ಉದಾಹರಣೆಗೆ ಹಿರಿಯನ ಮಗಳು ಚೋಮಿಲಿ, ಪೇಟೆ ಹೈದ ಕೃಷ್ಣ ಆಲಿಯಾಸ್ ಕಿಟ್ಟಿಯ ಕಣ್ಣಿಗೆ ಬೀಳುತ್ತಲೇ ಶ್ಯಾಮಿಲಿಯಾಗುವುದು ಒಂದು ರೀತಿಯ ಅಸಂಗತವೆನಿಸುತ್ತದೆ. ಚೋಮಿಲಿಯೆನ್ನುವ ಹೆಸರೇ ಇದ್ದಿದ್ದರೆ ಕೃಷ್ಣನಿಗೆ ಪ್ರೀತಿ ಉಂಟಾಗುತ್ತಿರಲಿಲ್ಲವೇನೋ! ಚೋಮಿಲಿಯನ್ನು ಒಪ್ಪಿಕೊಂಡ ಓದುಗನಿಗೆ ಇದೊಂದು ಕೃತಕ ಬೆಳವಣಿಗೆ ಅನಿಸದಿರದು. ಇನ್ನು ಎರಡನೆಯದಾಗಿ ಕೆಲವೊಂದು ಪಾತ್ರಗಳು ಧುತ್ತನೆ ಪ್ರತ್ಯಕ್ಷವಾಗಿ ಅನಗತ್ಯ ಅವುಗಳ ಬಗ್ಗೆ ಕಥೆಯಿಂದ ಹೊರಗೆ ಬೆಳವಣಿಗೆಯನ್ನು ಪಡೆದು ಕಾದಂಬರಿಯ ಓದಿಗೆ ಅಡ್ಡಿಯೆನಿಸುತ್ತವೆ. ಇಲ್ಲೂ ಲೇಖಕರು ಅನಗತ್ಯ ವಿಚಾರಗಳನ್ನು ಆ ಪಾತ್ರಗಳ ಮೂಲಕ ಓದಿಸುತ್ತಾರೆಂದು ಓದುಗನಿಗೆ ಅನಿಸುತ್ತದೆ. ಉದಾಹರಣೆಗೆ ಕೃಷ್ಣನ ಪಾತ್ರ. ಆತ ಪೋಲಿಯಾಗಿದ್ದು ತನ್ನ ಶ್ರೀಮಂತಿಕೆಯಿಂದಲೇ ವಿದ್ಯೆ ಗಳಿಸಿಕೊಂಡವನು. ಚೋಮಿಲಿ (ಶ್ಯಾಮಿಲಿ)ಯನ್ನು ನೋಡುತ್ತಲೇ ಅವನು ಅವಳನ್ನು ಅಪಾರ್ಥಮಾಡಿಕೊಂಡು ಸುಖ ಪಡಬೇಕೆಂದುಕೊಂಡವನು. ಆದರೆ ಅನಿರೀಕ್ಷಿತವೆನ್ನುವಂತೆ ಅವಳನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಕಥೆ ಜಾಳುಜಾಳಾದಂತೆ ಭಾಸವಾಗುತ್ತದೆ.

ಇಂತಹ ಆಭಾಸಗಳ ನಡುವೆಯೂ ‘ತಿಲ್ಲಾನ’ ಕಾದಂಬರಿ ಪ್ರಾದೇಶಿಕ ಸೊಗಡನ್ನು ನಿರೂಪಿಸುತ್ತಾ ಬೆಳವಣಿಗೆ ಪಡೆಯುವುದು ಒಂದು ರೀತಿಯಲ್ಲಿ ಒಂದು ಪ್ರದೇಶದ ಸಾಂಸ್ಕೃತಿಕ ಚಟುವಟಿಕೆಯ ಬಗ್ಗೆ ಮಾಹಿತಿ ಒದಗಿಸಿದಂತೆ ಮತ್ತು ಅಲ್ಲಿಯ ಸೊಬಗನ್ನು ತಿಳಿಸಿಕೊಡುವಂತೆ ಕಾಣಿಸುತ್ತದೆ. ಒಂದು ಪ್ರಾದೇಶಿಕ ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾದರೂ ಇಂತಹ ಕೃತಿಗಳನ್ನು ಓದಲೇಬೇಕು.

Read more!

Thursday, April 14, 2011

ಶೂದ್ರ ತಪಸ್ವಿ - ಕುವೆಂಪು ನಾಟಕ


ಕುವೆಂಪು ಅವರ ಸಾಹಿತ್ಯ ಸೃಷ್ಟಿ ಗಟ್ಟಿನೆಲೆ ಪಡೆದದ್ದೇ ಅವರ ನಾಟಕಗಳಿಂದಾಗಿ. ಅವರು ಒಟ್ಟು 14 ನಾಟಕಗಳನ್ನು ಬರೆದಿದ್ದಾರೆ. ಸೃಜನಶೀಲ ಪ್ರತಿಭೆ ಕಾವ್ಯಕ್ಕಿಂತಲೂ ಹೆಚ್ಚಾಗಿ ನಾಟಕದಲ್ಲಿಯೇ ಕಾಣಿಸಿಕೊಳ್ಳುತ್ತದೆ ಎಂಬುವುದಕ್ಕೆ ಕುವೆಂಪುರವರೇ ಸಾಕ್ಷಿಯಾಗಿದ್ದಾರೆ.

ಕುವೆಂಪು ಅವರು ಕನ್ನಡಕ್ಕೆ ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ಮತ್ತು ಬಲಿದಾನ ಎಂಬ ಮೂರು ಮಹತ್ವದ ನಾಟಕಗಳನ್ನು ಕೊಟ್ಟಿದ್ದಾರೆ. ಮಾನವೀಯ ಅಂತ:ಕರಣದ ವೈಚಾರಿಕ ನಿಲುವು ಈ ನಾಟಕಗಳ ಪ್ರಧಾನ ಅಂಶ. ಪ್ರಧಾನ ಸಂಸ್ಕೃತಿಯ ಧಾರೆಗೆ ಪ್ರತಿಕ್ರಿಯೆಯಾಗಿ ಪರ್ಯಾಯ ಸಂಸ್ಕೃತಿ ನಿರ್ಮಾಣಗೊಂಡಿರುವ ವಿಧಾನ ಇಲ್ಲಿನ ಮುಖ್ಯ ಬೆಳವಣಿಗೆ.

ಶೂದ್ರ ತಪಸ್ವಿ ನಾಟಕದಲ್ಲಿ ಪ್ರತಿಭಟನಾತ್ಮಕ ನೆಲೆ ಸ್ಪಷ್ಟವಾಗಿ ರೂಪುಗೊಂಡಿದೆ. ಹೊಸ ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ವಿದ್ಯಮಾನಗಳಿಗೆ ಹೋಲಿಸಿ ನೋಡುವ ಕ್ರಮವನ್ನು ಕುವೆಂಪು ಇಲ್ಲಿ ಎತ್ತಿ ಹಿಡಿದಿದ್ದಾರೆ. ‘ಶೂದ್ರ ತಪಸ್ವಿ’ ಎಂಬ ಹೆಸರೇ ಒಂದು ಸಮರ್ಥ ಪ್ರತಿಮೆಯಾಗಿ ಕಾಣುತ್ತದೆ. ಅದಲ್ಲದೆ, ಈ ಶೀರ್ಷಿಕೆಯೇ ಬಹು ಬಗೆಯ ಅರ್ಥಗಳನ್ನು ಹೊರಡಿಸುತ್ತದೆ. ‘ಶೂದ್ರ’ ಹಾಗೂ ‘ತಪಸ್ವಿ’ ಎಂಬ ಸ್ಥಾಪಿತ ಪದಗಳ ವಿರುದ್ಧಾರ್ಥಕಗಳನ್ನು ಬುಡಮೇಲು ಮಾಡಿ ಹೊಸ ಬಗೆಯ ಅರ್ಥವನ್ನು ಹೊರಡಿಸಲು ಇವು ಪ್ರಯತ್ನಿಸುತ್ತವೆ. ಈ ಅರ್ಥ ‘ರಾಮ’ ಅಥವಾ ‘ಧರ್ಮಶ್ರದ್ಧೆ’ಯನ್ನು ಸಂಪೂರ್ಣವಾಗಿ ತ್ಯಜಿಸಿದ ಸೃಜನಶೀಲ ದೃಷ್ಟಿಯೂ ಆಗಿರಬಹುದೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದಕ್ಕಾಗಿ ನಾವು ಕುವೆಂಪು ಅವರ ಬದುಕು ಮತ್ತು ಕೃತಿಗಳನ್ನು ಅವುಗಳ ಬಾಹುಳ್ಯದಲ್ಲಿಯೇ ಕಾಣಬೇಕಾಗಿರುವ ಅನಿವಾರ್ಯತೆಯಿದೆ.

ಈ ನಾಟಕ ‘ಸೆಕ್ಯುಲಾರಿಸಂ’ಗೆ ತುತ್ತಾಗಿದ್ದುದು ಮಾತ್ರ ವಿಷಾದನೀಯ. ಸ್ವತ: ಕುವೆಂಪುರವರೆ ಮಾರ್ನುಡಿಯಲ್ಲಿ ಈ ವಿಷಾದವನ್ನು ತೋಡಿಕೊಂಡು ನಾಟಕದ ಹಿನ್ನಲೆ ಯಾವ ರೀತಿಯಲ್ಲಿ ‘ಜಾತಿಗರ್ವಾಂಧತೆ’ಯನ್ನು ಮೀರಿ ನಿಂತಿದೆಯೆನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಕುವೆಂಪು ಅವರ ಹುಡುಕಾಟದ ವಸ್ತುಗಳೆಲ್ಲ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನಾಧರಿಸಿದ್ದು. ಇಂತಹ ಮಹಾನ್ ಕೃತಿಗಳು ಮೌಲ್ಯ ಸಂಘರ್ಷಗಳು, ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳು ಮತ್ತು ಮುಖ್ಯವಾಗಿ ಪುರೋಹಿತಶಾಹಿಯ ನಿಯಂತ್ರಣಗಳನ್ನೆಲ್ಲಾ ಮನುಷ್ಯನ ಬದುಕಿಗೆ ಅನಿವಾರ್ಯವೆಂಬತೆ ರೂಪುಗೊಂಡಿರುವುದು ಅಚ್ಚರಿಯ ವಿಷಯ.

ಪ್ರಸ್ತುತ ‘ಶೂದ್ರ ತಪಸ್ವಿ’ ನಾಟಕವು ವಾಲ್ಮೀಕಿ ರಾಮಾಯಣದ ‘ಉತ್ತರ ಕಾಂಡ’ದಿಂದ ಆಯ್ಕೆಗೊಂಡಿರುವಂತದ್ದು. ಇಲ್ಲಿನ ‘ಶಂಬೂಕ ಪ್ರಸಂಗ’ವನ್ನು ನಾಟಕದಲ್ಲಿ ಸಮಕಾಲಿನ ಸಮಸ್ಯೆಯೊಂದರ ಮರುಸೃಷ್ಟಿಯೆನ್ನುವಂತೆ ಬದಲಾಯಿಸಿ ಸಮಾಜಮುಖಿ ಸಮಸ್ಯೆಯನ್ನು ಸರಳೀಕರಿಸಿದ್ದಾರೆ. ಇದರಿಂದಾಗಿ ಸಮಕಾಲೀನ ಸಮಸ್ಯೆಯೊಂದಕ್ಕೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಿದ್ದಾರೆಂದರೆ ಸುಳ್ಳಲ್ಲ.

ಶೂದ್ರ ತಪಸ್ವಿಯಲ್ಲಿ ಮೂರು ದೃಶ್ಯಗಳಿವೆ. ಮೊದಲ ದೃಶ್ಯದಲ್ಲಿ ಶಂಬೂಕ ಋಷಿಯ ಆಶ್ರಮಕ್ಕೆ ಕಾವಲು ನಿಂತ ವೃಕ್ಷ ಭೈರವ ಮತ್ತು ಮೃತ್ಯು ದೇವತೆಯ ಮುಖಾಮುಖಿಯ ಚಿತ್ರಣವಿದೆ. ಎರಡನೆ ದೃಶ್ಯ ಅಯೋಧ್ಯೆಯಲ್ಲಿ ನಡೆಯುವ ಪ್ರಸಂಗ. ಇಲ್ಲಿ ಬ್ರಾಹ್ಮಣನೋರ್ವ ಅಳುತ್ತಾ ತನ್ನ ಮಗನ ದಾರುಣ ಸಾವು ರಾಮರಾಜ್ಯದಲ್ಲಿ ಸೋಜಿಗವನ್ನು, ವಿಷಾದವನ್ನು ಮತ್ತು ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎನ್ನುವ ಸಂಕಟದಲ್ಲಿ ಹೇಳುತ್ತಾನೆ. ರಾಮ ಈ ಮಾತನ್ನು ಕೇಳಿ ಬ್ರಾಹ್ಮಣನ ಜೊತೆಗೆ ಮಾತಿಗಿಳಿಯುತ್ತಾನೆ. ಆಗ ಶೂದ್ರನೊಬ್ಬ ತಪ್ಪಸಿಗೆ ಕುಳಿತಿರುವುದೇ ಅಧರ್ಮಕ್ಕೆ ಕಾರಣವಾಗಿದೆ, ಹಾಗಾಗಿಯೆ ತನ್ನ ಮಗನ ದಾರುಣ ಸಾವು ಸಂಭವಿಸಿದೆ ಎಂದು ಆರೋಪಿಸುತ್ತಾನೆ.

ಮೂಲ ರಾಮಾಯಣದ ಕಥೆಯಲ್ಲಿ ಇಂತಹ ವಿಷಯವನ್ನು ಕೇಳಿ ತಕ್ಷಣ ರಾಮ ಮಂತ್ರಿ ಮಂಡಲದ ಸಭೆಯನ್ನು ಕರೆಯುತ್ತಾನೆ. ಬ್ರಾಹ್ಮಣನ ಅತ್ಯಾರೋಪದ ದೂರಿನ ಬಗ್ಗೆ ಸಭೆಯಲ್ಲಿ ವಿಚಾರಿಸುತ್ತಾನೆ. ಆಗ ನಾರದರಿಂದ ಶೂದ್ರನೊಬ್ಬನ ತಪ್ಪಸಿನ ಬಗ್ಗೆ ತಿಳಿಯುತ್ತದೆ. ರಾಮ ಶೂದ್ರ ತಪಸ್ವಿಯನ್ನು ಹುಡುಕುತ್ತಾ ಹೋಗುತ್ತಾನೆ. ಅಲ್ಲಿ ಶಂಬೂಕನೆನ್ನುವ ಶೂದ್ರನು ತಪಸ್ಸಿಗೆ ಕುಳಿತಿರುವುದು ತಿಳಿಯುತ್ತದೆ. ಅವನನ್ನು ವಿಚಾರಿಸುವಾಗ ಅವನು ಶೂದ್ರನೆಂದು ತಿಳಿಯುತ್ತದೆ. ರಾಮನ ಖಡ್ಗ ಅವನ ತಲೆಯನ್ನು ಕಡಿದುರುಳಿಸುತ್ತದೆ. ಶಂಬೂಕ ಸಾಯುತ್ತಾನೆ.

ಆದರೆ ಕುವೆಂಪು ನಾಟಕದಲ್ಲಿ ಶಂಬೂಕನ ಪಾತ್ರಕ್ಕೆ ಸರಿಯಾದ ರೀತಿಯಲ್ಲಿ ಮಾನವೀಯ ನೆಲೆಯಲ್ಲಿ ನ್ಯಾಯ ಒದಗುತ್ತದೆ. ವರ್ಣಭೇದ ನೀತಿಯನ್ನು ಸಮಾಜಮುಖಿಯಾದ ಸಮಸ್ಯೆಯೊಂದಕ್ಕೆ ಪರಿಹಾರವೆಂಬಂತೆ ಬ್ರಾಹ್ಮಣ ಸಮೇತನಾಗಿ ಎಲ್ಲರೂ ಶೂದ್ರ ತಪಸ್ವಿಯನ್ನು ಒಪ್ಪಿಕೊಳ್ಳುವಂತೆ ಚಿತ್ರಿಸಿದ್ದಾರೆ. ಅದು ಶೂದ್ರ ತಪಸ್ವಿಯ ಬಳಿ ಹೋದ ಮೃತ್ಯು ಶಾಂತ ರೀತಿಯಲ್ಲಿ ಅವನಿಗೆ ವಂದಿಸಿ ಮತ್ತೆ ಬ್ರಾಹ್ಮಣನತ್ತ ತಿರುಗುತ್ತದೆ. ಆಗ ಬ್ರಾಹ್ಮಣ, ‘ಗತಿಯೇನು ಬಟ್ಟೆದೋರೆಯ್’ ಎಂದು ಕೇಳುವಾಗ ರಾಮ, ‘ನೀನು ಯಾರನ್ನು ಆವಾಜ್ಞೆಗೈದೆಯೋ, ಅವನನ್ನೇ ಕೇಳು. ಸನ್ಮತಿಯ ಸತ್ಕೃತಿಗೆ ಶಾಸ್ತ್ರದ ನೆರವು ಬೇಕಿಲ್ಲ. ಎಲ್ಲವನ್ನೂ ಯುಕ್ತಾ ಯುಕ್ತತೆಯಿಂದ ಆಲೋಚಿಸಿದರೆ ತಿಳಿಯುತ್ತದೆ’ ಅನ್ನುತ್ತಾನೆ. ಇದು ಮೂರನೆ ದೃಶ್ಯದಲ್ಲಿ ನಡೆಯುವ ಘಟನೆ.

ಇಲ್ಲಿ ಸೀತೆಯನ್ನು ಪರಿತ್ಯಜಿಸಿದ ರಾಮ, ಬ್ರಾಹ್ಮಣನ ಮಾತಿನ ನಿಂದನೆಯನ್ನು ಸಹಿಸಿಕೊಳ್ಳದೆ ಅವನ ಪರವಾಗಿ ನಿಲ್ಲುತ್ತಾನೆ. ಶಂಬೂಕ ತಪಸ್ವಿಯ ಆಶ್ರಮವಿರುವ ಕಾಡೇ ರಾಮನಿಗೆ ಸೀತೆಯಾಗಿ ಗೋಚರಿಸುತ್ತದೆ. ತುಂಬು ಬಸುರಿಯಾದ ಸೀತೆಯನ್ನು ಕಾಡಿಗಟ್ಟಿದ ಕೈ ಮತ್ತು ಶಂಬೂಕನನ್ನು ಕೊಲ್ಲಬೇಕಾದ ಬಲಗೈಗೆ ಕರುಣೆಯಿದೆಯೆ? ಎಂದು ರಾಮ ಪ್ರಶ್ನಿಸುವುದು ಭವಭೂತಿಯ ‘ಉತ್ತರ ರಾಮ ಚರಿತ’ ನಾಟಕದಲ್ಲಿ. ಇದು ಭವಭೂತಿಯ ಅಹಿಂಸಾಪರ ವಾದವಾದರೆ ಕುವೆಂಪು ನಾಟಕದಲ್ಲಿ ಸಮಕಾಲೀನ ಸಮಸ್ಯೆಗೆ ಮುಖಾಮುಖಿಯಾಗಿ ವರ್ಣತಾರತಮ್ಯವನ್ನು ಮಾಡದೆ ನ್ಯಾಯ ಒದಗುವಂತೆ ಮಾಡಲಾಗಿದೆ.

ಇಡೀ ಕೃತಿಯು ಹಳೆಗನ್ನಡದಲ್ಲಿದೆ ಮತ್ತು ಛಂದೋಬದ್ಧವಾಗಿದ್ದು ಸಶಬ್ದವಾಗಿ ಓದಿಕೊಂಡು ಪದಪದಗಳನ್ನು ಆಸ್ವಾದಿಸಬಹುದು. ಕುವೆಂಪು ಅವರು ಬಿನ್ನವಿಸಿಕೊಳ್ಳುವಂತೆ ಈ ನಾಟಕವನ್ನು ವರ್ಣಬೇಧದಡಿಯಲ್ಲಿಟ್ಟು ಓದುವ ಬದಲು ಶುದ್ಧ ಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಓದಿದರೆ ಕೃತಿಗೂ, ಕೃತಿಕಾರನಿಗೂ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳುತ್ತಾರೆ.

ಈ ನಾಟಕವು ಮಂಜುನಾಥ್ ಬಡಿಗೇರ ಅವರ ದಕ್ಷ ನಿರ್ದೇಶನದಲ್ಲಿ ‘ನಿನಾಸಂ’ ತಿರುಗಾಟದ ನಾಟಕವಾಗಿ ಯಶಸ್ವೀ ನಾಟಕಗಳಲ್ಲೊಂದಾಗಿರುವುದು ಶ್ಲಾಘನೀಯ. ಹಳೆಗನ್ನಡದಲ್ಲಿಯೇ ಸಂಭಾಷಣೆಯನ್ನು ಹೇಳುವ ಸ್ಪಷ್ಟತೆ ಜನಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿದೆ. ಪ್ರತೀಯೊಬ್ಬ ಕಲಾವಿದನು ಪಾತ್ರಕ್ಕೆ ಜೀವ ತುಂಬಿದ್ದಾನೆ. ನಾಟಕ ನೋಡುವುದಕ್ಕೂ ಓದುವುದಕ್ಕೂ ಯಾವುದೇ ಅಭಾಸ ಇಲ್ಲಿ ಕಾಣುವುದಿಲ್ಲ.

Read more!

Wednesday, April 6, 2011

ಕಂಬಾರರ - ಜೀಕೆ ಮಾಸ್ತರರ ಪ್ರಣಯ ಪ್ರಸಂಗ


ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ ಎಷ್ಟೊಂದು ಬರೆದರು ಮುಗಿಯದ ಅಗಾಧತೆ ಆ ಪದಗಳಿಗಿವೆ. ಕಾಳಿದಾಸನಿಂದ ಹಿಡಿದು ಇಲ್ಲಿಯವರೆಗೂ ಅದೇಷ್ಟೋ ಹೊಸ ಹೊಸ ವ್ಯಾಖ್ಯಾನಗಳು ಆ ಶಬ್ದಗಳನ್ನು ಅಲಂಕರಿಸಿವೆ. ಅದೇ ರೀತಿಯ ಒಂದು ಹೊಸ ಪ್ರಸಂಗ ಚಂದ್ರಶೇಖರ ಕಂಬಾರರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’. ಹೆಸರೇ ಸೂಚಿಸುವಂತೆ ಇದೊಂದು ಪ್ರೇಮ ಕಥೆಯಾದರೂ ಇಲ್ಲಿರುವ ಹೊಸತನ ಒಬ್ಬ ವಯಸ್ಸಾದ ವ್ಯಕ್ತಿ ಪ್ರೀತಿಗೆ ಸಿಲುಕುವ ಪೇಚಿನ ಪ್ರಸಂಗವಾಗಿರುವುದು. ಪ್ರೀತಿ ಹಂಚಿಕೊಳ್ಳುವುದಕ್ಕಾಗಿಯೇ ನೋವುಂಡ ಹೃದಯಗಳು ಸದಾ ಮಿಡಿಯುತ್ತಿರುತ್ತವೆಯೆನ್ನುವಂತೆ ಇಲ್ಲಿ ಮಾಸ್ತರರು ಪ್ರೀತಿಗೆ ಶರಣಾಗತರಾಗುವುದು ವಿಪರ್ಯಾಸ. ಪ್ರೀತಿಗೆ ಮಣಿಯದವರಿಲ್ಲವೆನ್ನುವುದು ಜ್ಞಾನಿಯೊಬ್ಬನ ಅನುಭವದ ಮಾತು. ಅನುಭಾವದ ನೆಲೆಯಲ್ಲಿ ಮತ್ತು ಜಂಜಡದ ಬಲೆಯಲ್ಲಿ ಮನುಷ್ಯ ಒಂದು ಹಿಡಿ ಪ್ರೀತಿಗಾಗಿ ಸದಾ ಪರಿತಪಿಸುತ್ತಾ ಇರುತ್ತಾನೆ.

ಇಲ್ಲಿ ಚಂದ್ರಶೇಖರ ಕಂಬಾರರ ಕಿರು ಕಾದಂಬರಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ದಲ್ಲಿ ಜೀಕೆ ಮಾಸ್ತರರು ಬಹಳ ಕಟ್ಟುನಿಟ್ಟಿನ ಮನುಷ್ಯ ಮತ್ತು ತಾನು ಹೇಳಿದ್ದೆ ಆಗಬೇಕು ಅನ್ನುವ ಮನಸ್ಥಿತಿಯಾತ. ಅವರ ಕಠೋರ ಶಿಸ್ತು ನಿಯಮಾವಳಿಗೆ ಮಗನನ್ನೇ ಬಲಿಕೊಡಬೇಕಾದ ಪ್ರಸಂಗ ಎದುರಾಗುತ್ತದೆ. ಮಗನ ಸಾವಿನ ಬಳಿಕ ಅವರ ಮಡದಿ ಮಾಸ್ತರರನ್ನು ಕೇರ್ ಮಾಡದ ಸ್ವಭಾವದವಳಾಗುತ್ತಾಳೆ.

ಜೀಕೆ ಮಾಸ್ತರರು ಶಾಲೆಯಲ್ಲಿಯೂ ಬಹಳ ಕಟ್ಟುನಿಟ್ಟಿನ ಮನುಷ್ಯ. ಸ್ವಲ್ಪವೂ ಅಶಿಸ್ತನ್ನು ಬಯಸದವರು. ಅವರ ಕೆಂಗಣ್ಣಿಗೆ ಗುರಿಯಾಗುವವನು ಆ ಶಾಲೆಯ ವಿದ್ಯಾರ್ಥಿ ಗಿರೆಪ್ಪ. ಜೀಕೆ ಮಾಸ್ತರರ ನಿಯತ್ತಿನ ಚೇಲ ಎನ್.ಟಿ. ಅವನು ಘಟನೆಗಳಿಗೆ ಸದಾ ಬಣ್ಣಕಟ್ಟಿ ಹೇಳುವವನು. ಅವನ ಬಾಯಿಯಲ್ಲಿ ಗಿರೆಪ್ಪನ ತುಂಟತನ ಮತ್ತು ಕೀಟಲೆಗಳು ಒಂದಲ್ಲ ಒಂದು ವಿಧದಲ್ಲಿ ಮಾಸ್ತರರನ್ನು ಕೆರಳಿಸುತ್ತಲೇ ಇರುತ್ತದೆ. ಅಂತಹ ಪೋಕರಿಗೆ ರೋಜಾಳಂತಹ ಹುಡುಗಿಯ ಜೊತೆಗೆ ಸಲುಗೆಯಿರುತ್ತದೆಯೆನ್ನುವುದು ಕೇಳಿ ಮಾಸ್ತರರ ಮೈ ಉರಿಯುತ್ತದೆ. ಅವನನ್ನು ಕರೆದು ಬುದ್ದಿವಾದ ಹೇಳಿದರೂ ಅವನು ಕೇಳಿಸದ ಒರಟು ಬುದ್ಧಿಯವನು. ಇದರಿಂದ ನೊಂದ ಮಾಸ್ತರರು ಅವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಲೇಬೇಕೆನ್ನುವ ಹಠಕ್ಕೆ ಬೀಳುತ್ತಾರೆ.

ಇಷ್ಟಕ್ಕೂ ಅವರಿಗೆ ಅಂತಹ ಪಡ್ಡೆ ಗಿರೆಪ್ಪನಿಗೆ ಗಂಟು ಬಿದ್ದ ಹುಡುಗಿ ರೋಜಾ ಯಾರು ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲ. ಅವರು ಆ ಕ್ಲಾಸಿಗೆ ಬಂದಾಗ ಅಟೆಂಡೆನ್ಸ್ ಕರೆಯುತ್ತಾ ಅವಳನ್ನು ನೋಡುತ್ತಾರೆ. ಆ ಕ್ಷಣದಲ್ಲಿ ಅವಳ ನೋಟವೂ ಮಾಸ್ತರರ ಮೇಲಿರುತ್ತದೆ. ಇದನ್ನೇ ಕಂಡು ಚಕಿತರಾದ ಮಾಸ್ತರರು ಒಳಗೊಳಗೆ ಪುಳಕಿತರಾಗುತ್ತಾ ರೋಜಾಳೆನ್ನುವ ಚೆಲುವಿಯ ಪ್ರೀತಿಗೆ ಸಿಲುಕುತ್ತಾರೆ. ಮೊದಲ ಬಾರಿಗೆ ಅವಳಿಂದ ಪ್ರೇಮ ಪತ್ರ ಪಡೆದುಕೊಂಡು ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವವರೆಗೂ ಮುಂದುವರಿಯುತ್ತದೆ ಅವರ ಪ್ರಣಯದಾಟ.

ರೋಜಾಳಿಗಾದರೂ ಮಾಸ್ತರರನ್ನು ಗೆದ್ದ ಸಂಭ್ರಮ. ಇದರಿಂದ ತನಗೆ ಬೇಕಾದ ಮಾರ್ಕ್ಸ್ಗಳು ದೊರಕಿಸಿಕೊಳ್ಳುವುದಲ್ಲದೆ, ತನ್ನ ಫ್ರೆಂಡ್ಗೂ ಒಳ್ಳೆಯ ಮಾರ್ಕ ಸಿಗುವ ಹಾಗೆ ಮಾಡುವ ಚಾಣಾಕ್ಷೆ. ಇದು ಮಾಸ್ತರರು ಹೆಂಡತಿ ಹಾಸಿಗೆ ಹಿಡಿದ ಮೇಲೆ ರೋಜಾಳನ್ನು ಮನೆಗೆ ಕರೆದಾಗ ನಡೆದ ಸಂಚು. ಇದರಿಂದ ಮಾಸ್ತರರ ಮನಸ್ಸಿನಲ್ಲಿ ರೋಜಾ ಗಟ್ಟಿಯಾಗಿ ನಿಂತು ಗಿರೆಪ್ಪನೆನ್ನುವ ಪಡ್ಡೆಯನ್ನು ಗೆದ್ದೆನೆನ್ನುವ ಖುಷಿಯಲ್ಲಿರುತ್ತಾರೆ. ಅವರಲ್ಲಿ ಬತ್ತದ ಲವಲವಿಕೆ ತುಂಬಿರುವುದು ಅವರ ವಯಸ್ಸಿಗೂ ಮೀರಿ. ಇಲ್ಲಿ ಗಿರೆಪ್ಪನಿಗೂ ಮಾಸ್ತರರಿಗೂ ಕೆಲವೊಂದು ಸ್ಪರ್ಧೆಗಳು ನಡೆದು ಕೊನೆಗೂ ಮಾಸ್ತರರೇ ಗೆದ್ದಂತೆ ಬೀಗುತ್ತಾರೆ. ಆದರೆ ಇವೆಲ್ಲಾ ರೋಜಾ ಮತ್ತು ಗಿರೆಪ್ಪ ಇಬ್ಬರೂ ಸೇರಿ ಮಾಡಿದ ನಾಟಕವೆನ್ನುವುದು ಮಾಸ್ತರರಿಗೆ ಅರಿವಾಗುವಾಗ ಅವರು ಬದುಕಿನಲ್ಲಿ ತಾನು ಕಳೆದುಕೊಂಡದ್ದೆಲ್ಲವನ್ನೂ ನೆನಪಿಸಿಕೊಂಡು ಕೊರಗುತ್ತಾ ಎಲ್ಲದರಿಂದಲು ದೂರವಾಗ ಬಯಸುತ್ತಾರೆ. ಅವರೊಳಗಿದ್ದ ಆ ಶಿಸ್ತಿನ ಮಾಸ್ತರರು ಸತ್ತು ಅವರು ಹೊಸ ವ್ಯಕ್ತಿಯಾಗಿ ಕಾಣಿಸುತ್ತಾರೆ.

ಕಾದಂಬರಿಯ ಅಂತ್ಯ ಬೇಸರವೆನಿಸಿದರೂ ಅವರು ತಮ್ಮ ಉದಾರತೆಯಿಂದ ರೋಜಾ ಹಾಗು ಗಿರೆಪ್ಪನವರನ್ನು ಕ್ಷಮಿಸಿ ಅವರ ಬದುಕಿಗೆ ಒಂದು ದಾರಿಯನ್ನು ಮಾಡಿಕೊಡುತ್ತಾರೆ.

ಒಟ್ಟಾರೆಯಾಗಿ ಒಂದು ವಿಭಿನ್ನ ಕಥಾವಸ್ತುವನ್ನೊಳಗೊಂಡ ‘... ಮಾಸ್ತರರ ಪ್ರಣಯ ಪ್ರಸಂಗ’ ಓದುಗನಲ್ಲಿ ತಣಿಯದ ಕುತೂಹಲ ಹುಟ್ಟಿಸಿ, ಅಂತ್ಯದಲ್ಲಿ ತುಟಿಯಲ್ಲಿ, ಛೆ ಛೆ ಅನ್ನುವ ಪಶ್ಚಾತ್ತಾಪದ ಸದ್ದು ಹೊರಡಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಹೆಚ್ಚಿಸಬಲ್ಲ ಒಂದು ವಿನೂತನ ಕಾದಂಬರಿಯೆಂದರೆ ತಪ್ಪಾಗಲಾರದು.

Read more!

Saturday, April 2, 2011

ಹೊತ್ತಿ ಉರಿವ ಒಡಲ ಕಾಮದ - ಕಾಡಿನ ಬೆಂಕಿ


ಕಾಡಿನ ಬೆಂಕಿ ಹೊತ್ತಿಕೊಂಡರೆ ಕಾಡು ಉಳಿಯದು; ಒಡಲಿಗೆ ಹೊತ್ತಿ ಕೊಂಡ ಕಾಮದ ಬೆಂಕಿ ಅನೂಹ್ಯವಾಗಿ ದೇಹವನ್ನು ಸುಟ್ಟು ಉಳಿಸದು.

ಖ್ಯಾತ ಕಾದಂಬರಿಕಾರ ನಾ. ಡಿಸೋಜ ಅವರ ‘ಕಾಡಿನ ಬೆಂಕಿ’ ಇದು ಎಂಬತ್ತರ ದಶಕದಲ್ಲಿ ‘ತರಂಗ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದ ಕಾದಂಬರಿ. ಮನುಷ್ಯನ ಲೈಂಗಿಕ ಸಮಸ್ಯೆಯ ಸುತ್ತಾ ಹೆಣೆದ ಕಥೆಯಾದರೂ ಇದನ್ನು ಬರೆದ ಶೈಲಿ ಬಹಳ ಸೊಗಸಾಗಿದೆ. ಕೇವಲ ಸಮಸ್ಯೆಯೊಂದರ ಮುಖಾಮುಖಿಯಾಗದೆ ನಿಧಾನವಾಗಿ ಸಮಸ್ಯೆಯನ್ನು ಬಿಚ್ಚಿಡುತ್ತಾ ಸಂಸಾರಿಕ ಮತ್ತು ಕಾಡಿನ ಶ್ರೀಮಂತಿಕೆಯನ್ನು ಕಥೆ ಹೆಣೆದುಕೊಂಡಿರುವುದು. ಇದೊಂದು ಒಂದೇ ವರ್ಗಕ್ಕೆ ಸೀಮಿತವಾದ ಕಾದಂಬರಿಯಾಗದೆ ಎಲ್ಲರೂ ಓದಬಹುದಾದ ಕೃತಿಯಾಗಿ ಮೂಡಿ ಬಂದಿರುವುದು ಹಿರಿಯ ಲೇಖಕರೊಬ್ಬರು ಇದನ್ನು ಬರೆದಿರುವುದರಿಂದ ಅನ್ನುವುದು ನನ್ನ ಅನಿಸಿಕೆ.

ಹೌದು, ನಿಜವಾಗಿಯೂ ಕಾದಂಬರಿ ಕೇವಲ ಲೈಂಗಿಕ ವಿಷಯದ ಸುತ್ತಾ ಗಿರಕಿಹೊಡೆಯದೆ, ಅರಣ್ಯ ಇಲಾಖೆಯ ಪ್ರತೀಯೊಬ್ಬ ಸಿಬ್ಬಂದಿಯ ಸಮಸ್ಯೆಗಳತ್ತ ಮತ್ತು ಅವರ ಜೀವನ ಶೈಲಿಯತ್ತ ಮುಖ ಮಾಡಿರುವುದು ಗೋಚರಿಸುತ್ತದೆ. ಕಾಡಿನ ನಡುವೆ ಬದುಕುವ ದುಸ್ತರ ಮತ್ತು ವ್ಯವಸ್ಥೆಗಳೇ ಇಲ್ಲದ ಸವಾಲಿನ ಕೆಲಸಗಳನ್ನು ಕಥೆ ವಿವರಿಸುತ್ತದೆ. ಕಾನುಮರಡಿ ಹೆಸರೇ ಸೂಚಿಸುವಂತೆ ಅರಣ್ಯ ಇಲಾಖೆಗೆ ಸೇರಿದ ಜನವಸತಿಯಿಲ್ಲದ ಪ್ರದೇಶ ಓದುಗನ ಕಣ್ಣಿನಲ್ಲಿ ಸುಂದರವಾಗಿ ಚಿತ್ರಿತವಾಗುವಂತೆ ಕಾದಂಬರಿಯನ್ನು ಬರೆಯಲಾಗಿದೆ.

ಎರಡು ಮನಸ್ಸುಗಳನ್ನು ಬೆಸೆಯುವ ಪ್ರೇಮ ಮತ್ತು ಎರಡು ದೇಹಗಳನ್ನು ಬೆಸೆಯುವ ಕಾಮ, ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಇವುಗಳಲ್ಲಿಯ ಅಸಮತೋಲನ ಸಂಸಾರದ ಮೇಲೆ ವ್ಯತಿರೀಕ್ತ ಪರಿಣಾಮ ಬೀರಬಲ್ಲದು. ಮಾತ್ರವಲ್ಲ, ಕ್ಲಿಷ್ಟಕರವಾದ ಸಮಸ್ಯೆಯನ್ನು ತಂದೊಡ್ಡಬಲ್ಲದು.

ಇಲ್ಲಿಯ ಕಥಾನಾಯಕ ರಘುರಾಮ ತುಂಬು ಸಂಸಾರದಲ್ಲಿ ಜನಿಸಿದವನು. ಅವನ ತಂದೆ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು, ದಿನನಿತ್ಯ ಮನೆಯಲ್ಲಿ ಜಗಳ, ದಬ್ಬಾಳಿಕೆ, ಬೈಗುಳಗಳು. ಇದನ್ನೆಲ್ಲಾ ಬೆರಗುಗಣ್ಣಿನಿಂದ ನೋಡುವ ಪುಟ್ಟ ಬಾಲಕ ರಘುರಾಮನಿಗೆ ಬೆಳೆದಂತೆ ಅದೇನೋ ಅಸಂಗತ ಮತ್ತು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದಕ್ಕೆ ಪೂರಕವಾಗಿ ಮನೋಹರಿ ಮಹದೇವನೆನ್ನುವವನನ್ನು ಎರಡನೆ ಮದುವೆಯಾಗಿ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಆದರೆ ಆತ ನಿಷ್ಪ್ರಯೋಕಜನೆನ್ನುವ ದೃಷ್ಟಿ ಮನೋಹರಿಯದ್ದು. ಮನೋಹರಿಯ ಮನೋಲಹರಿಯನ್ನು ಅರಿಯದ ರಘುರಾಮ ಅವಳ ಜೊತೆಗೆ ಅನೈತಿಕ ಸಂಬಂಧವನ್ನು ಬೆಳೆಸುತ್ತಾನೆ. ಇದು ಮನೋಹರಿಗೆ ವರವಾಗಿಯೂ ರಘುರಾಮನಿಗೆ ಸಮಸ್ಯೆಯೊಂದರ ಪ್ರಪಾತವಾಗಿಯೂ ತೆರೆದುಕೊಳ್ಳುತ್ತದೆ. ಇದು ರಘುರಾಮನ ಮಡದಿ ಯಶೋದೆಗೆ ತಿಳಿಯುತ್ತಲೇ ಅವಳು ಅವನಿಂದ ದೂರವಾಗುತ್ತಾಳೆ. ಆದರೆ ರಘುರಾಮ ಕೆಟ್ಟವನಲ್ಲವಾದರೂ ಅವನ ಲೈಂಗಿಕತೆಯ ಬಗ್ಗೆ ಇರುವ ಅಜ್ಞಾನ ಯಶೋದಾಳಂತಹ ಹೆಣ್ಣನ್ನು ಬಲಿತೆಗೆದುಕೊಳ್ಳುವವರೆಗೆ ಮುಂದುವರಿಯುತ್ತದೆ.

ಇಂತಹ ಮಾನಸಿಕ ವಿಕಾರಕ್ಕೆ ಸಿಲುಕಿ ನರಳುವ ಅದೆಷ್ಟೋ ಯುವಜನಾಂಗಕ್ಕೆ ಇಂದಿಗೂ ಲೈಂಗಿಕ ಅಜ್ಞಾನವಿರುವುದನ್ನು ಕಾಣುತ್ತಲೇ ಇರುತ್ತೇವೆ. ಇಂತಹ ಅಜ್ಞಾನಗಳೇ ಮುಂದೆ ವಿಪರೀತ ಸಮಸ್ಯೆಗಳನ್ನು ಸೃಷ್ಟಿಸಿ ಬದುಕು ಸಾವಾಗುವ ಪರಿಸ್ಥಿತಿ ಎದುರಾಗುವುದು ಖಚಿತ. ಪ್ರತೀಯೊಂದು ಸಮಸ್ಯೆಗೂ ಪರಿಹಾರವಿದೆ. ಹಾಗೇನೆ ಲೈಂಗಿಕ ಸಮಸ್ಯೆಗೂ ಪರಿಹಾರವಿದೆ. ಮನುಷ್ಯ ತನ್ನ ಸಂಕೋಚ ಮನೋಭಾವನೆಯನ್ನು ತೊರೆದು ಇಂತಹ ಸಮಸ್ಯೆಗಳಿಗೆ ಮನೋಚಿಕಿತ್ಸಕರ ಬಳಿ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ಮನುಷ್ಯನ ವಿಕೃತ ಕೃತ್ಯಗಳಿಗೆ ಇಂತಹ ಅಜ್ಞಾನಗಳು ಕಾರಣವಾಗಿರಬಹುದು. ‘ಲೈಫ್ ಈಸ್ ಸ್ಟ್ರೇಂಜರ್ ದ್ಯಾನ್ ಫಿಕ್ಷನ್’ ಅನ್ನುವ ಹಾಗೆ ಈ ಕೃತಿಯೂ ಕೂಡ ವಿಭಿನ್ನವಾದ ಸಮಸ್ಯೆಯೊಂದನ್ನು ಮುಂದಿಡುತ್ತದೆ. ಇದರಿಂದ ಕೆಲವರಾದರೂ ತಮ್ಮ ಸಂಕೋಚ ಮನೋಭಾವನೆಯನ್ನು ಬಿಟ್ಟು ಮುಕ್ತವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಉತ್ತಮವೆನ್ನುವುದು ಈ ಲೇಖಕರ ಉದ್ದೇಶ ಕೂಡ ಆಗಿದೆ. ಈ ಕಥೆಯತ್ತ ಗಮನಸೆಳೆದವರು ಖ್ಯಾತ ಮಾನಸಿಕ ತಜ್ಞ ದಂಪತಿಗಳಾದ ಡಾಕ್ಟರ್ ಅಶೋಕ್ ಪೈ ಮತ್ತು ಡಾಕ್ಟರ್ ರಜನಿ ಪೈಯವರು.

ಕಾಡಿನ ಬೆಂಕಿಯನ್ನು ಓದುಗರು ಮೆಚ್ಚಿಕೊಂಡಿರುವುದು ಅದರ ಶೈಲಿಗಾಗಿ. ಎಲ್ಲಿಯೂ ಸಮಸ್ಯೆಯನ್ನು ವೈಭವೀಕರಿಸದೆ ಸ್ಪುಟವಾಗಿ ಮತ್ತು ಕಲಾತ್ಮಕವಾಗಿ ಬರೆದಿರುವುದರಿಂದ ಇದು ಮುಜುಗರವಿಲ್ಲದೆ ಓದುವುದಕ್ಕೆ ಸಹಾಯವಾಗಿದೆ. ಇಂತಹ ವಿಶಿಷ್ಟ ಕಾದಂಬರಿಯನ್ನು ಕೇವಲ ಓದುವ ಖುಷಿಗಾಗಿ ಓದದೆ, ಸಮಸ್ಯೆಯತ್ತ ಮುಖ ಮಾಡಿರುವ ರಘುರಾಮನಂತಹ ವ್ಯಕ್ತಿಗಳ ಅಜ್ಞಾನವನ್ನು ತೊಡೆಯುವಂತಾದರೆ ಓದು ಸಾರ್ಥಕವಾದಿತು.

ಇಂತಹ ಕೃತಿಯನ್ನು ರಚಿಸಿದ ಲೇಖಕ ನಾ. ಡಿಸೋಜ ಅವರಿಗೆ ಮತ್ತು ಇದನ್ನು ಬರೆಯುವಂತೆ ಪ್ರೇರೇಪಿಸಿದ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ಕೃತಜ್ಞತೆಯನ್ನು ಹೇಳಬೇಕು. ಈ ಕೃತಿ ಈಗ ಎರಡನೆ ಮುದ್ರಣವಾಗಿ ಪ್ರಕಟವಾಗಿದೆ.

Read more!