Saturday, January 23, 2010

ಸಮಾಜಕ್ಕೆ ಹಿಡಿದ ‘ಕನ್ನಡಿ’


ಈ ಹಿಂದೆ ‘ಯಾನ’ ಕಥಾಸಂಕಲನದ ಮೂಲಕ ಹೊಸ ಕಥೆಗಳನ್ನು ಸೃಷ್ಟಿಸಿದ ಸೃಜನಶೀಲ ಕಥೆಗಾರ ಪ್ರೇಮಶೇಖರರ ಮತ್ತೊಂದು ಕಥಾಸಂಕಲನ ‘ಕನ್ನಡಿ’. ಪತ್ತೆದಾರಿ, ಫ್ಯಾಂಟಸಿಯ ಮೂಲಕ ಕಥೆಯನ್ನು ನಿರೂಪಿಸುವ ಅವರು ಕನ್ನಡಿಯಲ್ಲಿ ತೀರ ಹೊಸತೆನ್ನಬಹುದಾದ ಮತ್ತು ಸಮಾಜದ ಎಲ್ಲಾ ಸ್ತರಗಳ ಕಗ್ಗಂಟು, ವ್ಯಭಿಚಾರ, ಮೋಸ ಮುಂತಾದವುಗಳಿಗೆ ‘ಕನ್ನಡಿ’ ಹಿಡಿದಿರುವುದು ಅವರ ಸಾಹಿತ್ಯ ಕೃಷಿಯ ಒಳ್ಳೆಯ ಪ್ರಯತ್ನವಾಗಿದೆ.

‘ಕನ್ನಡಿ’ ಕಥಾಸಂಕಲನದಲ್ಲಿ ಹತ್ತು ಕಥೆಗಳಿದ್ದು ಒಂದೊಂದು ಕಥೆಯು ಸಮಾಜದ ಆಗುಹೋಗುಗಳನ್ನು ಕೂಲಂಕಷವಾಗಿ ಬಿಚ್ಚಿಡುತ್ತ ಹೋಗುತ್ತವೆ."


‘ಕನ್ನಡಿ’ ಕಥೆಯಲ್ಲಿ ಅನಿವಾರ್ಯ ಕಾರಣಗಳಿಗೆ ಕಸಾಯಿಖಾನೆಯನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿ, ಅಲ್ಲಿ ಕುರಿಗಳನ್ನು ಕಡಿಯುವ ವಿಧಾನದ ಬಗ್ಗೆ ಆಕ್ಷೇಪವೆತ್ತುವ ನಾಯಕ ಹೃದಯತಹ ಕಟುಕನಲ್ಲ. ಅವುಗಳನ್ನು ಮಾಂಸಕ್ಕಾಗಿ ಸಾಯಿಸುವ ರೀತಿಯಲ್ಲಿ ಅವುಗಳು ಪಡುವ ಯಾತನೆಯನ್ನು ಗಮನಿಸಿ, ಒಂದೆ ಏಟಿಗೆ ಸಾಯಿಸಲು ಸೂಚಿಸುತ್ತಾನೆ. ಆದರೆ ಒಂದೇ ಏಟಿಗೆ ಅವುಗಳನ್ನು ಸಾಯಿಸುವುದರಿಂದ ಅನುಭವಿಸುವ ನೋವು ಹೆಚ್ಚು ಅನ್ನುವುದನ್ನು ಲೇಖಕರು ವೈಜ್ಞಾನಿಕ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುವುದು ಮನಸ್ಸಿಗೆ ಸಮಾಧಾನ ನೀಡುತ್ತದೆ. ಕಥೆ ಓದಿ ಮುಗಿಸಿದರೂ ಕಸಾಯಿಖಾನೆಯ ರೌದ್ರತೆ ಓದುಗನನ್ನು ಕಾಡುತ್ತಲೇ ಇರುತ್ತದೆ.

ಅಲೆಮಾರಿಗಳ ಬದುಕು ಮತ್ತು ಇಂದಿನ ಸಾಮಾಜಿಕ ಸಮಸ್ಯೆಯಾದ ‘ಭಯೋತ್ಪಾದನೆಯ ಭೀತಿಯನ್ನು ಬಿಂಬಿಸುವ ಕಥೆ ‘ಗಾಯ’. ಮನೆಯ ಎದುರು ಬಂದ ಅಲೆಮಾರಿಗಳ ದಿಂಡು ಖಾಲಿ ಜಾಗದಲ್ಲಿ ಪಿರಮಿಡ್ಡಿನಂತೆ ಮನೆಯನ್ನು ನಿರ್ಮಿಸಿ ಊಹಾ ಪೋಹಗಳಿಗೆ ಎಡೆಯಾಗುವುದು ಚೆನ್ನಾಗಿ ನಿರೂಪಿತವಾಗಿದೆ. ಅಪರಿಚಿತರ ಬಗ್ಗೆ ಅನುಮಾನ ಪಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ನೆರೆಕರೆಯವರೆಲ್ಲಾ ಒಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಥೆಯ ಉತ್ತರಾರ್ಧ ಪ್ಯಾಂಟಸಿಯಲ್ಲಿ ಕೊನೆಯಾಗುವುದು ತುಸು ಗೊಂದಲವೆನಿಸಿದರೂ ಒಳ್ಳೆಯ ಕಥೆ ‘ಗಾಯ’

‘ಸೆಕ್ಯೂಲಿರಿಸಂ’ ಅನ್ನು ವಿಢಂಬನಾತ್ಮಕವಾಗಿ ನಿರೂಪಿಸುವ ಹಾಗೂ ಸರಕಾರ ಮತ್ತು ಧಾರ್ಮಿಕ ಬಂಡುಕೋರರ ನಡುವಿನ ಕದನವಿರಾಮದ ನಂತರದ ಏಳಿಗೆಯ ಕಥೆ ‘ಮುಖಾಮುಖಿ’. ರಾಜಕೀಯದ ಅಧಿಕಾರವಿರುವಾಗ ಜನಪ್ರತಿನಿಧಿಗಳು ಪ್ರಜೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಮನೋಜ್ಞವಾಗಿ ತೆರೆದಿಡುವ ಕಥೆಯಿದು. ‘ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು’ ಕಥೆಯಲ್ಲಿ ಅಭಿವೃದ್ಧಿಯಿಂದ ಕೆಡುಕಾಗಿ ಮತ್ತೆ ಅಭಿವೃದ್ಧಿಯನ್ನೇ ಬಯಸದ ಜನ, ವಿಚಾರವಾದಿ ಸಂಘಟನೆಯ ಎದುರು ನಿಲ್ಲುತ್ತಾರೆ. ಈ ಕಥೆ ಅಭಿವೃದ್ಧಿಯ ಹೆಸರಲ್ಲಿ ನಡೆಯುವ ಆಧ್ವಾನಗಳನ್ನು ಚಿತ್ರಿಸುತ್ತದೆ.
ಸಮಾಜದಲ್ಲಿ ಏನನ್ನು ಬಯಸದ ಮತ್ತು ತನ್ನಷ್ಟಕ್ಕೆ ತಾನಿರುವ ವ್ಯಕ್ತಿ ನಾಗಲಿಂಗಂನ ಹೊಸ ಸಂಬಂಧದ ಕಥೆಯಾಗಿ ಮೂಡಿರುವ ಕಥೆ ‘ಅರ್ಥ’. ಪ್ರೊ. ಸಂಗೊಟೈಯವರ ಮಾತಿನಂತೆ ಅವನನ್ನು ವಿಚಾರಿಸುವ ಕಥಾನಾಯಕನಿಗೆ ಮಾತಾಡಲು ಅವಕಾಶ ನೀಡದ ನಾಗಲಿಂಗಂ ತನ್ನ ಹೆಂಡತಿಯ ಸಾವಿಗೆ ಪರೋಕ್ಷವಾಗಿ ಕಾರಣನಾಗುತ್ತಾನೆ. ಮುಂದೆ ಅವನು ಅರೆಸ್ಟ್ ಆಗಿ ಬಿಡುಗಡೆಯಾದರೂ ತನ್ನ ಹೆಂಡತಿಯನ್ನು ಕೊಲೆ ಮಾಡದೆ ಅವಳಾಗಿಯೇ ದೂರವಾಗುವಂತೆ ಮಾಡಿದ ಅವನ ಚಾಣಾಕ್ಷ ಬುದ್ಧಿಗೆ ಬೆರಗಾಗುತ್ತಾನೆ ನಿರೂಪಕ. ಮಗಳ ಸಾವಿನ ಬಗ್ಗೆ ದೂರು ಕೊಟ್ಟ ಅತ್ತೆಯೇ ದೂರನ್ನು ವಾಪಾಸು ತೆಗೆದುಕೊಂಡು ಕೇಸ್ ಅಲ್ಲಿಗೆ ಮುಚ್ಚಿ ಹೋಗುತ್ತದೆ.

ಬಾಲ್ಯ ಸಖ್ಯದ ಇತಿಮಿತಿಗಳಿಗೊಂದು ಪರಿಶುದ್ಧ ಮನಸುಗಳೆರಡರ ವ್ಯಾಪ್ತಿಯೊಳಗೆ ಸುಂದರವಾಗಿ ಕಟ್ಟಿದ ಕಥೆ ‘ಈ ಕಥೆಗಳಿಗೇಕೆ ಆದಿ ಅಂತ್ಯಗಳಿಲ್ಲ?’ ಏನೋ ನಿರೀಕ್ಷಿಸುವ ಹೊತ್ತಿಗೆ ಏನೂ ನಡೆಯದೆ; ಏನೊ ಆಗದೆನ್ನುವಾಗ ಏನೋ ಘಟಿಸಿ, ನಾವೇ ಆ ಪಾತ್ರಗಳಾಗಿ ಹೋಗುವಷ್ಟು ಮನಸ್ಸನ್ನು ಆವರಿಸುವ ಕಥೆಯಿದು. ಇದೇ ಸಂಕಲನದ ಪ್ಲಸ್ ಪಾಯಿಂಟ್ ಆಗಿರುವ ಈ ಕಥೆ ನಮ್ಮದಲ್ಲದ ಹಾದಿಯಲ್ಲಿ ಬಹುದೂರ ನೆನಪಾಗಿ ಸಾಗುವ ಕಥೆ.

ಈ ಸಂಕಲನದ ಇನ್ನೊಂದು ಉತ್ತಮ ಕಥೆ ‘ಕ್ರೌರ್ಯ’ ಅಸಹಾಯಕ ಮಹಿಳೆಯೊಬ್ಬಳನ್ನು ಅಮಾನುಷವಾಗಿ ಬಳಸಿಕೊಳ್ಳುವ ನೀತಿ ಗೆಟ್ಟ ಯುವಕರು, ಸಮಾಜ ಎತ್ತ ಸಾಗಿದೆ ಅನ್ನುವುದನ್ನು ತಿಳಿಸಿದರೆ, ಇಂತಹ ಅವಮಾನವೀಯ ಸ್ಥಿತಿಯಲ್ಲಿ ದೂರ ನಿಂತು ಪೌರುಷ ತೋರುವ ಇನ್ನೊಬ್ಬ ಯುವಕ, ತನ್ನ ಹೊಟ್ಟೆ ತುಂಬಿಸುವ ವಾಹನವನ್ನೇ ಬಿಟ್ಟು ಓಡುವ ಡ್ರೈವರ್ ಮತ್ತು ಇಡೀ ಪರಿಸ್ಥಿತಿಯನ್ನು ಪ್ರತಿಭಟಿಸುವ ವಯಸ್ಕನ ಪಾತ್ರ ಚಿತ್ರಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಆ ಕೃತ್ಯದ ಬಗ್ಗೆ ಡಿಟೈಲ್ಡ್ ರೀಪೋರ್ಟ್ ತಯಾರಿಸುವುದಕ್ಕೆ ಮಹಿಳೆಯ ಅಸಹಾಯಕ ಪರಿಸ್ಥಿತಿಯ ಚಿತ್ರಗಳನ್ನು ತೆಗೆಯಲು ಮುಂದಾಗುತ್ತಾನೆ ಯುವಕ. ಅಂತಹ ಪರಿಸ್ಥಿತಿಯಲ್ಲಿ ವೃದ್ಧನ ಮಾತುಗಳು ಮತ್ತು ಸಾಂತ್ವನ ಆ ಮಹಿಳೆಗೆ ಮಾತ್ರವಲ್ಲ ಓದುಗನಿಗೂ ‘ಕೊನೆಗೂ ಸಹಾಯಕ್ಕೆ ಒಬ್ಬನಿದ್ದಾನಲ್ಲಾ?’ ಅನ್ನುವ ಸಮಾಧಾನವನ್ನು ನೀಡುತ್ತದೆ.

ಫ್ಯಾಂಟಿಸಿಯ ಲೋಕಕ್ಕೆ ಎಳೆದೊಯ್ಯುವ ‘ಉಗಮ’ ಮತ್ತು ‘ಹುತ್ತ್ತ’ ಕಥೆಯಲ್ಲಿ ಬರುವ ಪ್ರೊಪೆಸರ್ ಮತ್ತು ಬಾಲ್ಕನಿಯ ಒಂಟಿತನದ ಭಾವೊದ್ವೇಗವನ್ನು ಬಹಳ ಹಾಸ್ಯಮಯವಾಗಿ ನಿರೂಪಿಸುವ ಕಥೆ. ಮುಖದಲ್ಲೊಂದಿಷ್ಟು ಮಂದಹಾಸವನ್ನು ಮೂಡಿಸಬಲ್ಲ ಕಥೆ ಇದು.

ಹಾಸ್ಯದಿಂದ ಆರಂಭವಾಗಿ ಬದುಕಿನ ಕಹಿ ಸತ್ಯವನ್ನು ಬಿಚ್ಚಿಡುವ ಕಥೆ ‘ಮೂಡಲ ಸೀಮೆಯ ಮುಸ್ಸಂಜೆ ಸೊಲ್ಲು’ ತನ್ನ ಸ್ವಂತ ಅಕ್ಕನೆಂದು ಭ್ರಮಿಸಿದವನು ಆಕೆ ತನ್ನ ತಾಯಿಯೆನ್ನುವ ನಿಗೂಢತೆಯನ್ನು ಬಿಚ್ಚಿಡುವಾಗಿನ ಆನಂದ ಕೇವಲ ಹುಡುಗನದಲ್ಲ, ಓದುಗರದ್ದೂ.

ಪ್ರೇಮಶೇಖರ ಅವರ ‘ಕನ್ನಡಿ’ ಓದುಗರನ್ನು ಪ್ರತಿಫಲಿಸುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕವನ್ನು ಹೊರತಂದಿರುವವರು ‘ವಿಸ್ಮಯ ಪ್ರಕಾಶನ’ ‘ಮೌನ’ 366, ನವಿಲು ರಸ್ತೆ, ಎ-ಬಿ ಬ್ಲಾಕ್, ಕುವೆಂಪುನಗರ, ಮೈಸೂರು - 570 023 ಇವರು.

No comments: