Thursday, March 15, 2012

ಹಕ್ಕಿ ಚೆಲ್ಲಿದ ಬೀಜದ ಮೊಳಕೆ


`ಹಕ್ಕಿ ಚೆಲ್ಲಿದ ಬೀಜ' ಶೀರ್ಷಿಕೆಯೆ ಅಮೂರ್ತತೆಯನ್ನು ಸೂಚಿಸುವ ಸಿ ಎನ್ ರಾಮಚಂದ್ರ ಅವರ ಮೂರನೆಯ ಕಥಾಸಂಕಲನ. ಹಕ್ಕಿ ಎಲ್ಲಿ ಬೇಕಾದರೂ ಬೀಜವನ್ನು ಚೆಲ್ಲಬಹುದು. ಇದು ಅಮೂರ್ತತೆ. ಆದರೆ ಆ ಬೀಜ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದು ಅದು ಟಿಸಿಲೊಡೆಯುವಲ್ಲಿಂದ. ಆ ಪ್ರಕ್ರಿಯೆ ನೆಲದ ಮೇಲೆಯೇ ಆಗಬೇಕೆಂದೇನಿಲ್ಲ. ಮರದ ಮೇಲೂ ಬೀಜ ಮೊಳಕೆಯೊಡೆಯಬಹುದು. ಇದು ಅದ್ಭುತವೂ ಅಲ್ಲ, ಅಗೋಚರವೂ ಅಲ್ಲ. ಎಲ್ಲಿ ಮೊಳಕೆಯೊಡೆಯುವುದಕ್ಕೆ ಅವಕಾಶವಿದೆಯೋ ಅಲ್ಲಿಯೇ ಗಿಡವಾಗಬಹುದು. ಆದರೆ ಅದರ ಮೂಲವನ್ನು ಶೋಧಿಸುವುದು ಬಹಳ ಕಷ್ಟ. ಅದು ಯಾವ ಮರದ ಬೀಜ? ಆ ಬೀಜ ಅಲ್ಲಿಯೇ ಗಿಡವಾಗಿ ಬೆಳೆಯುವುದೆ? ಆ ಬೀಜಕ್ಕೆ ಆಸರೆಯಾಗುವ ಮರ ಕೊನೆಯವರೆಗೂ ಗಿಡವನ್ನು ತಾಳಿಕೊಳ್ಳುವುದೆ? ಇದು ಅಸ್ಪಷ್ಟ. ಹಾಗೆಯೇ ಇಲ್ಲಿಯ ಕಥೆಗಳ ಸೆಕ್ಯೂಲರಿಸಂ. ಹುಟ್ಟುವುದು ಎಲ್ಲಿಯೋ ಬೆಳೆಯುವುದು ಇನ್ನೆಲ್ಲಿಯೋ? ಆದರೆ ಅವೆರಡರ ನಡುವೆ ಹುಟ್ಟಿಕೊಳ್ಳುವ ಕುತೂಹಲವೇ ಹುಡುಕಾಟವಾಗಿ ಇಲ್ಲಿಯ ಕಥೆಗಳಲ್ಲಿ ಗೋಚರಿಸುತ್ತದೆ. ಅದು ಕಳೆದುಕೊಂಡ ಸಂಬಂಧಗಳ ಹುಡುಕಾಟವಿರಬಹುದು, ಬಾಲ್ಯದ ಹುಡುಕಾಟವಿರಬಹುದು. ಒಟ್ಟು ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೋರಾಟ ಸಾಧಾರಣ ಎಲ್ಲಾ ಕಥೆಗಳಲ್ಲಿಯು ಕಾಣಸಿಗುತ್ತದೆ.
ಕಥೆಗಳನ್ನು ಓದುತ್ತಲೇ ಎಲ್ಲೋ ಕೈ ಬಿಟ್ಟು ಹೋಗುವಂತಹ ತವಕಗಳು ಇಲ್ಲಿಯ ಪಾತ್ರಗಳಲ್ಲಿ ಕಾಣುತ್ತಾವಾದರೂ, ಪಾತ್ರಗಳಲ್ಲಿ ಜಾತೀಯತೆಯನ್ನು ಗುರುತಿಸಿಕೊಂಡು ಜಾತ್ಯಾತೀತವನ್ನು ಮೀರುವ ಪ್ರಯತ್ನ ಇಲ್ಲಿಯದಾಗಿದೆ. ಹಾಗಾಗಿ ರಾಬರ್ಟ್ ಪದ್ಮರಾಜನಾಗಲಿ, ಭಾರತಿಪುತ್ರನ್, ಇಳಾಪೈ ಪಾತ್ರಗಳಿಗೆಲ್ಲಾ ಜಾತೀಯತೆ ಮುಖ್ಯವೆನಿಸುವುದಿಲ್ಲ. ಇವು ಬದುಕನ್ನು ಕಟ್ಟಿಕೊಳ್ಳುವಲ್ಲಿ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ತುಡಿತಕ್ಕೊಳಗಾಗುತ್ತಲೇ ಇರುತ್ತವೆ.
`ಹಕ್ಕಿ ಚೆಲ್ಲಿದ ಬೀಜ', `ಧೀಯೋಯನ' ಕಥೆಗಳನ್ನು ಓದುವಾಗ ಜನಪ್ರಿಯ ಶೈಲಿಯ ಒಂದು ಅಂಚಿನಲ್ಲಿ ನಿರೂಪಣೆ ಸಾಗುತ್ತದಾದರೂ, ಅವಕ್ಕಿಂತಲೂ ಮಿಗಿಲಾಗಿ ಅವುಗಳಲ್ಲಿ `ಸಂಥಿಂಗ್' ಇದೆ ಅನಿಸದಿರದು. ಧೀಯೋಯೊನ ಕಥೆಯ ಹುಡುಕಾಟದಲ್ಲಿ ಕೊನೆಗೆ ಸಿಗುವುದು ನಿರಾಶೆಯಾದರೂ ಆ ನಿರಾಶೆಯೆನ್ನುವುದು ಸಾವಿನವರೆಗೂ ಕಾಡುವ ಮತ್ತು ಅನ್ಯ ದಾರಿಯಲ್ಲಿ ಸಾಗಿದ ಪರಿಗೆ ಶಾಪವೇನೋ ಅನ್ನುವ ರೀತಿಯಲ್ಲಿ ಭಾರತಿಯನ್ನು ಅಂತರ್ಮುಖಿಯನ್ನಾಗಿಸುವ ಹಾಗಿದೆ. ಅವಳ ಪ್ರೀತಿಯ ಸಾಕ್ಷ್ಯವೊಂದು ಶೋಚನೀಯ ಸ್ಥಿತಿಯಲ್ಲಿರುವುದು ಎಂತಹ ಓದುಗನ ಮನಸ್ಸನ್ನಾದರೂ ಸ್ವಲ್ಪ ಮಟ್ಟಿಗೆ ಅಲ್ಲಾಡಿಸಿ ಬಿಡುತ್ತದೆ. ಹಾಗೆಯೇ ಈ ಕಥೆ ಗಂಭೀರವಾಗಿ ಓದಿಸಿಕೊಳ್ಳುತ್ತಲೇ ತಟ್ಟನೆ ಸಿನಿಮೀಯತೆಗೆ ವಾಲುವುದರಿಂದ ಕೊಂಚ ಇತರೆ ಕಥೆಗಳ ಜೊತೆಗೆ ತುಲನಾತ್ಮಕವಾಗಿ ನೋಡುವುದಕ್ಕೆ ಅಸಾಧ್ಯವೆನಿಸುತ್ತದೆ. ಈ ಕಥೆಯಲ್ಲಿ ಭಾರತಿ ಅವಳ ಕ್ಲಾಸ್‌ಮೇಟ್ ಉನ್ನತ ಸ್ಥಾನದಲ್ಲಿರುವ ಶಂಕರನ ಕ್ವಾರ್ಟಸ್‌ಗೆ ಅವನ ಅನುಮತಿಯಿಲ್ಲದೆ ಬಂದು ಅವನನ್ನೇ ಅತಿಥಿಯ ರೂಪದಲ್ಲಿ ಕ್ಯಾರ್ ತೆಗೆದುಕೊಳ್ಳುವುದು. ಇದು ತೀರ ಸಿನಿಮೀಯವಾಗಿ ತೋರುತ್ತದೆ. ಆದರೂ ಇದೊಂದು ನೀಳ್ಗತೆಯಾಗಿ ಮತ್ತು ಕಥನ ಶೈಲಿಯಲ್ಲಿ ವಿಭಿನ್ನತೆಯಿರುವುದರಿಂದ ಕಥೆಯ ಉತ್ತರಾರ್ಧ ಪರಿಣಾಮಕಾರಿಯಾಗಿ ಮೂಡಿಬಂದಿರುವುದರಿಂದ ಮಗುವಿನಂತಹ ಮಗನ ಪಾತ್ರ ಓದುಗನ ಮನದಲ್ಲಿಯೇ ಉಳಿದು ಬಿಡುತ್ತದೆ.
ಸಿ ಎನ್ ರಾಮಚಂದ್ರ ಅವರ ಕಥೆಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಕಥೆಯ ಬೆಳೆಯುತ್ತಾ ಹೋದ ಹಾಗೆ ಕಥೆಯಲ್ಲಿ ಯಾವುದು ಮುಖ್ಯ ಅನಿಸುವುದಿಲ್ಲವೋ, ಅದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿ `ನಿಕ್ಷೇಪ' ಕಥೆ ತುಸು ವಿಭಿನ್ನವಾಗಿ ನಿಲ್ಲುತ್ತದೆ. ಇದಕ್ಕೆ ಆ ಕಥೆ ನಡೆಯುವ ಕಾಲಘಟ್ಟವೂ ಕಾರಣವಾಗಿರಬಹುದು. ಇಲ್ಲಿಯೂ ಮನುಷ್ಯ ಸದಾ ತನ್ನ ನಿಕ್ಷೇಪವನ್ನು ಕಂಡುಕೊಳ್ಳುವಲ್ಲಿ ಮಾತ್ರ ತೊಡಗಿರುತ್ತಾನೆಯೆನ್ನುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಗೊಡ್ಡಾರ್ಡ್‌ನ ಹೆಸರು ಪ್ರತೀ ವಾಕ್ಯದಲ್ಲಿಯೂ ಪುನರಾವರ್ತೆನೆಯಾಗಿ ಇಂಗ್ಲೀಷ್ ಕಥಾ ಶೈಲಿಯನ್ನು ನೆನಪಿಸುತ್ತದೆ.
ಅತಂತ್ರವಾಗಿ ಬಿಡುವ ಮನುಷ್ಯನೊಬ್ಬನ ಚಿತ್ರಣವನ್ನ ನೀಡುವ `ಸಮಾಧಿಯ ಮೇಲೊಂದು ಹೂವು' ಸಂಬಂಧವಿರದ ವ್ಯಕ್ತಿಯೊಬ್ಬನಿಗೆ ಜವಾಬ್ದಾರಿಯನ್ನು ಹೊರುವ ಕಾಯಕದ ನಡುವೆ ಎಲ್ಲವನ್ನೂ ಕಳೆದುಕೊಳ್ಳುವ ನಿರಾಳತೆಯಾದರೆ, `ಮೊತ್ತ' ಲಘು ದಾಟಿಯಲ್ಲಿ ಸಾಗುವ ಗಂಭೀರ ವಾಸ್ತವದ ಚಿತ್ರಣವಾಗಿದೆ. ರಾಮಚಂದ್ರ ಅವರ ಕಥೆಗಳ್ಳಲ್ಲಿಯ ಪಾತ್ರಗಳೆಲ್ಲವೂ ವಾಸ್ತವದಲ್ಲಿ ಕಾಣಸಿಗುವ ಪಾತ್ರಗಳಂತೆ ಕಂಡರೂ ಇಲ್ಲಿ ಕಥೆಗಾರ ಆ ಪಾತ್ರಗಳ ಒಳಕ್ಕಿಳಿದು ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸುವಲ್ಲಿ ಸಫಲತೆಯನ್ನು ಸಾಧಿಸಿದ್ದಾರೆ. ಹಾಗಾಗಿಯೇ `ಹುತ್ತಗಟ್ಟಿತು ಚಿತ್ತ'ದ ನಾಗವೇಣಿಯಾಗಲಿ, `ಇಳೆ ನಿಮ್ಮ ಧ್ಯಾನ' ಕಥೆಯ ಇಳಾಭಟ್ ಪಾತ್ರವಾಗಲಿ ಮನೋಜ್ಞವಾಗಿ ಮೂಡಿ ಬರುವುದಕ್ಕೆ ಸಾಧ್ಯವಾಗಿದೆ. ಹೆಣ್ಣಿನ ಒಳ ಮನಸ್ಸು, ಆಕೆಯ ಅಸಹಾಯಕತೆ, ಹತಾಶೆ, ಸೇಡು, ಸೆಡವುಗಳನ್ನ ಬಹಳ ಮಾರ್ಮಿಕವಾಗಿ ಚಿತ್ರಿಸಿರುವುದರಿಂದ ಕಥೆಗಳು ಮೆಲುಕು ಹಾಕುವಂತಿದೆ.
ಕೆಲವೊಮ್ಮೆ ಸಿನಿಮಾಗಳಲ್ಲಿ ಹಾಡುಗಳು ಕಥೆಯ ಬೆಳವಣಿಗೆಗೆ ಪೂರಕವಾದಂತೆ ಈ ಸಂಕಲನದ ಕೆಲವು ಕಥೆಗಳಲ್ಲಿ ಬಳಸಿದ ಉಪಮೆಗಳು ಕಥೆಯ ಮುಂದುವರಿದ ಭಾಗದಂತೆ ಕಾಣುತ್ತವೆ. ಇದು ಕಥನ ಶೈಲಿಯ ತಂತ್ರವಾಗಿ ಬಹಳ ಪರಿಣಾಮಕಾರಿಯಾಗಿದೆ. ಉದಾಹರಣೆಗೆ `ಧೀಯೋಯೊನ' ಕಥೆಯ ಭಾರತಿ ಉಲ್ಲಾಳದಲ್ಲಿದ್ದಾಗಿನ ನೆನಪುಗಳನ್ನು ಮಾಡಿಕೊಂಡು, ಈ ಕಡಲಲ್ಲಿ ಅದೆಷ್ಟು ಉಬ್ಬರ... ಅದೆಷ್ಟು ಇಳಿತ... ನೇತ್ರಾವತಿಯಲ್ಲಿ ಅದೆಷ್ಟು ಬಾರಿ ನೆರೆ... ಧಾರಾಕಾರ ಮಳೆ... ಅನ್ನುವ ಮಾತುಗಳು ಅವಳ ಬದುಕಿನೊಂದಿಗಿನ ಹೋಲಿಕೆ. ಈ ಸಾಲುಗಳು ಅಲ್ಲಿಯ ಆಗಿನ ಖುಷಿಯನ್ನ ನಿರೂಪಿಸುತ್ತವೆ.
`ಆತನನ್ನು ಕೊಂಡಾಡಿರಿ' ಮತ್ತು `ಏನಿದೇನು ಪ್ರಭುವೇ...?' ಕಥೆಗಳು ಅಧ್ಯಾತ್ಮದತ್ತ ಹೊರಳುವ ಕಥೆಗಳಾಗಿ ಕಾಣುತ್ತವೆ. `ಏನಿದೇನು ಪ್ರಭುವೇ...?' ಕಥೆಯಲ್ಲಿ ಬದುಕು ಸುಳ್ಳು ಸತ್ಯಗಳ ಪ್ರಪಂಚವನ್ನು ಮಲ್ಲಪ್ಪನಿಗೆ ತೋರಿಸುತ್ತದೆ. ಇದೂ ವಾಸ್ತವದಲ್ಲಿ ನಡೆಯುವ ಘಟನೆಯೇ ಅನ್ನುವ ಹಾಗಿದೆ.
ಆದ್ದರಿಂದ `ಹಕ್ಕಿ ಚೆಲ್ಲಿದ ಬೀಜ' ಓದಿ ಖುಷಿಪಡಬಹುದಾದಂತಹ ಕಥೆಗಳ ಸಂಕಲನ. ಈ ಕೃತಿಗೆ ಎಸ್. ಆರ್ ವಿಜಯಶಂಕರ್ ಅವರ ಮುನ್ನುಡಿಯಿದೆ.

No comments: