Sunday, April 17, 2011

ಸಾಂಸ್ಕೃತಿಕ ಸ್ಥಾನ ಪಲ್ಲಟದ ‘ತಿಲ್ಲಾನ’


ಪ್ರಾದೇಶಿಕ ಕಥನ ಪರಂಪರೆಗೆ ಅದರದೇ ಆದ ಮಹತ್ವವಿದೆ. ಆಯಾ ಪ್ರದೇಶದ ಸಾಂಸ್ಕೃತಿಕ, ಪರಂಪರಾತ್ಮಕ ಆಗುಹೋಗುಗಳನ್ನು ಸವಿವರವಾಗಿ ದಾಖಲಿಸುವ ಕಥನ ಶೈಲಿ ಆಯಾಯ ಪರಿಸರದಲ್ಲಿ ಬೆಳೆದು ಬಂದ ಲೇಖಕರ ಸಂಶೋಧನಾತ್ಮಕ ಅಭ್ಯಾಸವನ್ನು ಆದರಿಸಿದೆ. ಅವಿಭಾಜಿತ ದಕ್ಷಿಣಕನ್ನಡ ತುಳುನಾಡಿನ ಅನೇಕ ಸಾಂಸ್ಕೃತಿಕ ಮತ್ತು ಸಾಹಿತ್ಯಕ ರೋಚಕತೆಯನ್ನು ಪಡೆದಿರುವ ಪ್ರದೇಶ. ಇಲ್ಲಿಯ ಪ್ರತೀಯೊಂದು ಸಂಸ್ಕೃತಿಗೂ ಅದರದೇ ಆದ ವೈಶಿಷ್ಟ್ಯತೆಯಿದೆ. ಈ ವೈಶಿಷ್ಟ್ಯವೇ ಇಂದಿಗೂ ಈ ಪ್ರದೇಶದ ಜನರ ನಂಬಿಕೆ, ಆಶಾಭಾವನೆ, ಭಯ ಭಕ್ತಿಯ ಮತ್ತು ಮುಂದುವರೆಸಿಕೊಂಡು ಬಂದಿರುವ ಜೀವನ ಕ್ರಮವನ್ನು ಒಂದು ಸಿದ್ಧ ಮಾದರಿಯಾಗಿ ರೂಪಿಸಿಕೊಂಡು ಬಂದಿರುವುದು ಆಶ್ಚರ್ಯವೇನಲ್ಲ.

‘ತಿಲ್ಲಾನ’ ಕಾದಂಬರಿಯ ಹೆಸರೇ ಆಕರ್ಷಕ ಮತ್ತು ಇಂಪು. ಪ್ರಭಾಕರ ನೀರ್ಮಾರ್ಗ ಅವರ ನಾಲ್ಕನೆಯ ಕೃತಿಯಾದ ಇದು ದಕ್ಷಿಣಕನ್ನಡದ ಸಾಂಸ್ಕೃತಿಕ ಪರಂಪರೆಯೊಂದಿಗಿನ ತಲ್ಲಣವನ್ನು ಮತ್ತು ಮಾರ್ಪಾಡಾಗುತ್ತಿರುವ ಅನಾದಿಕಾಲದ ಆಚರಣೆಗಳನ್ನು ಅಳಿವಿನಂಚಿಗೆ ಸಾಗಿಸುತ್ತೇವೇನೋ ಅನ್ನುವ ಆತಂಕದೊಂದಿಗೆ ಬರೆದಿರುವಂತೆ ಮಾತ್ರವಲ್ಲ, ಸಮಾಜದಲ್ಲಿಯ ಅಂಧಾನುಕರಣೆಯ ‘ವಿಶ್ವವ್ಯಾಪಿ ಪರಿವರ್ತನಾ ಪಿಡುಗು’ ಹಬ್ಬುತ್ತಲೇ ಎಲ್ಲವನ್ನೂ ಸ್ವ್ಯಾಪ್ ಮಾಡಿಕೊಂಡು ಬಿಡುತ್ತದೆಯೆನ್ನುವುದಕ್ಕೆ ಉದಾಹರಣೆಯಂತೆ ಕಾಣುತ್ತದೆ.

ಈ ಕೃತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಅಪೂರ್ವ ಸಂಸ್ಕೃತಿಯಾದ ಭೂತಾರಾಧನೆಯ ಮತ್ತು ಭೂತ ಕಟ್ಟುವವರ ಬಗ್ಗೆ ಸವಿವರವಾದ ವಿಷಯಗಳನ್ನು ದಾಖಲಿಸಲಾಗಿದೆ. ಭೂತಾರಾಧನೆಯೆ ಬದುಕಿನ ಅವಿಭಾಜ್ಯ ಅಂಗವಾಗಿ ಇಂದಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಎಷ್ಟೋ ಕುಟುಂಬಗಳ ಆಂತರಿಕ ತುಮುಲ, ಒಳಗೊಳಗೆ ನಡೆಯುವ ರಾಜಕೀಯ, ವಿಶ್ವವ್ಯಾಪಿಗೆ ತೆರೆದುಕೊಳ್ಳುವಾಗಿನ ಭಯ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾರದ ಅಸಹಾಯಕತೆ ಇವೆಲ್ಲವನ್ನೂ ಕಾದಂಬರಿ ಬಹಳ ಮಾರ್ಮಿಕವಾಗಿ ತೆರೆದಿಡುತ್ತದೆ. ಸಂಸ್ಕೃತಿಯ ಸೊಗಡು, ಪಾಡ್ದನ, ಅರದಾಲ, ನರ್ತನಗಳ ಮೂಲಕ ಸಮಷ್ಟಿ ಕಲೆಯೆನಿಸಿದ ‘ಭೂತಾರಾಧನೆ’ ಇಂದಿಗೂ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ನೆಲೆಸಿದೆಯೆಂದರೆ ಅತಿಶಯೋಕ್ತಿಯಲ್ಲ. ಈ ರೀತಿಯ ಒಂದು ಪ್ರದೇಶದ ಕಲೆಯನ್ನು ಕಾದಂಬರಿಯಾಗಿಸುವಾಗ ಅನೇಕ ವಾಸ್ತವ ಸಂಗತಿಗಳನ್ನು ಕಲೆಹಾಕಬೇಕಾಗಿರುವ ಅವಶ್ಯಕತೆ ಲೇಖಕನಿಗಿದೆ. ಈ ಕಾದಂಬರಿಯಲ್ಲಿ ಆ ರೀತಿಯ ಸಂಶೋಧನಾತ್ಮಕ ರಚನೆ ಎದ್ದು ಕಾಣುತ್ತದೆ.

ಜಾಗತೀಕರಣದ ರಣಕಹಳೆ ಹಳ್ಳಿಯನ್ನೂ ಕಬಳಿಸಿ, ಅಲ್ಲಿಯ ಸಂಸ್ಕೃತಿಯನ್ನು ವಿನಾಶದ ಅಂಚಿಗೆ ಅಥವಾ ಆಧುನಿಕತೆಗೆ ಪರಿವರ್ತಿಸಿ ಮೂಲ ಧಾತುವನ್ನೇ ಬದಲಿಸುವುದು ಸರ್ವೇಸಾಮಾನ್ಯ. ಅಂತಹ ಒಂದು ಕುಸಂಸ್ಕೃತಿಗೆ ಬಲಿಯಾಗುವ ತುಳುನಾಡಿನ ಭೂತಾರಾಧನೆಯನ್ನು ಆಧಾರವಾಗಿಟ್ಟುಕೊಂಡು, ಭೂತ ಕಟ್ಟುವವರ ಜೀವನವನ್ನು ತೆರೆದಿಡುವ ಕಾದಂಬರಿಯ ಮುಖ್ಯ ವಾಹಿನಿಯಲ್ಲಿ ಹಿರಿಯನಂತಹ ಆದರ್ಶ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುತ್ತಾನೆ. ಒಳಗೊಳಗೆ ನಡೆಯುವ ರಾಜಕೀಯದಂತಹ ದೊಂಬರಾಟದಲ್ಲಿ ಗುರುವ ಮತ್ತು ಜೋಯಿಸರಂತಹ ವ್ಯಕ್ತಿಗಳೇ ಸಾಂಸ್ಕೃತಿಕ ನೆಲೆಯನ್ನು ಗುರಿತಪ್ಪಿಸುವ ಕಾರ್ಯಕ್ಕೂ ಇಳಿಯುತ್ತಾರೆ. ಒಟ್ಟಿನಲ್ಲಿ ತನಗೆ ಪರಂಪರಾಗತವಾಗಿ ಬಂದಿರುವ ಭೂತಕಟ್ಟುವ ಕಾಯಕವನ್ನು ತನ್ನ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಹಿರಿಯನಂತಹ ವ್ಯಕ್ತಿಯ ಆಸೆ. ಆದರೆ ಆಧುನಿಕತೆಗೆ ತಕ್ಕಂತೆ ಜೀವನ ಶೈಲಿಯನ್ನು ಒಪ್ಪಿಕೊಳ್ಳುವಾಗ ಆಗುವ ಬದಲಾವಣೆಗಳನ್ನು ಸ್ವೀಕರಿಸುತ್ತಾ ಸಮಸ್ಯೆಗಳತ್ತ ಮುಖ ಮಾಡುವುದು ಇಲ್ಲಿಯ ಮುಖ್ಯ ತಲ್ಲಣ. ಮಕ್ಕಳಿಬ್ಬರೂ ಪೇಟೆಯ ಬದುಕನ್ನು ನೆಚ್ಚಿಕೊಂಡು ಹಿರಿಯನ ಆಸೆಗಳಿಗೆ ತಣ್ಣೀರೆರೆಚಿ ಅಲ್ಲೂ ತಮ್ಮನ್ನು ಗುರುತಿಸಿಕೊಳ್ಳದೆ ಹೋಗುವುದು ಅಡ್ಡ ದಾರಿ ಹಿಡಿದವರಿಗೆ ತಕ್ಕುದಾದ ಶಾಸ್ತಿಯೆನ್ನುವಂತೆ ಕಾಣುತ್ತದೆ. ಇತ್ತ ಮಗಳನ್ನು ಕೂಡ ವಿದ್ಯಾವಂತಳನ್ನಾಗಿಸಿದ ಹಿರಿಯ ಅವನ ವಿರೋಧವಾಗಿ ಅವಳು ಬೇರೆ ಜಾತಿಯವನೊಬ್ಬನನ್ನು ಮದುವೆಯಾಗುತ್ತೇನೆನ್ನುವುದು ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿ ತೋರಿ ಅವನು ವಿರೋಧ ವ್ಯಕ್ತಪಡಿಸುತ್ತಾನೆ. ತನ್ನ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ಅಂಗರನೆನ್ನುವ ಒಬ್ಬ ತನ್ನದೇ ಜಾತಿಯ ಹುಡುಗನನ್ನು ಕರೆಸಿಕೊಂಡು ತನ್ನ ವೃತ್ತಿಯ ಸಮಸ್ತವನ್ನು ಅವನಿಗೆ ಧಾರೆಯೆರೆಯುತ್ತಾನೆ. ಹಾಗೆಯೇ ಮಗಳನ್ನು ಅವನಿಗೆ ಕೊಟ್ಟು ತನ್ನ ಪರಂಪರೆಯೊಂದನ್ನು ಅಳಿಯನಾಗುವವನ ಮೂಲಕ ಮುಂದುವರೆಸಿಕೊಂಡು ಹೋಗಲು ಬಯಸುತ್ತಾನೆ. ಆದರೆ ಮಗಳು ಕಲಿತು ಪ್ರೀತಿಯೆನ್ನುವ ಕೂಪಕ್ಕೆ ಬಿದ್ದಿರುತ್ತಾಳೆ. ಕೊನೆಗೂ ಹಿರಿಯನ ಆಸೆಗಳು ಕೈಗೂಡುವುದೇ ಇಲ್ಲ. ಇದು ಗಟ್ಟಿ ಕಥಾಹಂದರವಾದರೆ ಕೆಲವೊಂದು ಕಡೆ ಘಟನೆಗಳು, ವಿಷಯಗಳು ಪುನರಾವರ್ತನೆಯಾಗಿರುವುದು ಓದುಗನನ್ನು ತಾಳ್ಮೆ ತಪ್ಪಿಸುತ್ತವೆ. ಕೆಲವೊಮ್ಮೆ ಪುಟಭರ್ತಿಗಾಗಿ ಬರೆದವೇನೋ ಅನ್ನುವ ಸಂಗತಿಗಳು ಇವೆ.

ಅರ್ಧದವರೆಗೂ ಕಾದಂಬರಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವುದಲ್ಲದೆ ಮಾಹಿತಿಪೂರ್ಣವಾಗಿದೆ. ಆದರೆ ಬಳಿಕ ಇಲ್ಲಿ ಕೆಲವೊಂದು ವ್ಯತಿರೀಕ್ತಗಳು ಕಾದಂಬರಿಯನ್ನು ಸ್ವೀಕರಿಸುವಲ್ಲಿ ತೊಡಕಾಗಿದೆ. ಉದಾಹರಣೆಗೆ ಹಿರಿಯನ ಮಗಳು ಚೋಮಿಲಿ, ಪೇಟೆ ಹೈದ ಕೃಷ್ಣ ಆಲಿಯಾಸ್ ಕಿಟ್ಟಿಯ ಕಣ್ಣಿಗೆ ಬೀಳುತ್ತಲೇ ಶ್ಯಾಮಿಲಿಯಾಗುವುದು ಒಂದು ರೀತಿಯ ಅಸಂಗತವೆನಿಸುತ್ತದೆ. ಚೋಮಿಲಿಯೆನ್ನುವ ಹೆಸರೇ ಇದ್ದಿದ್ದರೆ ಕೃಷ್ಣನಿಗೆ ಪ್ರೀತಿ ಉಂಟಾಗುತ್ತಿರಲಿಲ್ಲವೇನೋ! ಚೋಮಿಲಿಯನ್ನು ಒಪ್ಪಿಕೊಂಡ ಓದುಗನಿಗೆ ಇದೊಂದು ಕೃತಕ ಬೆಳವಣಿಗೆ ಅನಿಸದಿರದು. ಇನ್ನು ಎರಡನೆಯದಾಗಿ ಕೆಲವೊಂದು ಪಾತ್ರಗಳು ಧುತ್ತನೆ ಪ್ರತ್ಯಕ್ಷವಾಗಿ ಅನಗತ್ಯ ಅವುಗಳ ಬಗ್ಗೆ ಕಥೆಯಿಂದ ಹೊರಗೆ ಬೆಳವಣಿಗೆಯನ್ನು ಪಡೆದು ಕಾದಂಬರಿಯ ಓದಿಗೆ ಅಡ್ಡಿಯೆನಿಸುತ್ತವೆ. ಇಲ್ಲೂ ಲೇಖಕರು ಅನಗತ್ಯ ವಿಚಾರಗಳನ್ನು ಆ ಪಾತ್ರಗಳ ಮೂಲಕ ಓದಿಸುತ್ತಾರೆಂದು ಓದುಗನಿಗೆ ಅನಿಸುತ್ತದೆ. ಉದಾಹರಣೆಗೆ ಕೃಷ್ಣನ ಪಾತ್ರ. ಆತ ಪೋಲಿಯಾಗಿದ್ದು ತನ್ನ ಶ್ರೀಮಂತಿಕೆಯಿಂದಲೇ ವಿದ್ಯೆ ಗಳಿಸಿಕೊಂಡವನು. ಚೋಮಿಲಿ (ಶ್ಯಾಮಿಲಿ)ಯನ್ನು ನೋಡುತ್ತಲೇ ಅವನು ಅವಳನ್ನು ಅಪಾರ್ಥಮಾಡಿಕೊಂಡು ಸುಖ ಪಡಬೇಕೆಂದುಕೊಂಡವನು. ಆದರೆ ಅನಿರೀಕ್ಷಿತವೆನ್ನುವಂತೆ ಅವಳನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಕಥೆ ಜಾಳುಜಾಳಾದಂತೆ ಭಾಸವಾಗುತ್ತದೆ.

ಇಂತಹ ಆಭಾಸಗಳ ನಡುವೆಯೂ ‘ತಿಲ್ಲಾನ’ ಕಾದಂಬರಿ ಪ್ರಾದೇಶಿಕ ಸೊಗಡನ್ನು ನಿರೂಪಿಸುತ್ತಾ ಬೆಳವಣಿಗೆ ಪಡೆಯುವುದು ಒಂದು ರೀತಿಯಲ್ಲಿ ಒಂದು ಪ್ರದೇಶದ ಸಾಂಸ್ಕೃತಿಕ ಚಟುವಟಿಕೆಯ ಬಗ್ಗೆ ಮಾಹಿತಿ ಒದಗಿಸಿದಂತೆ ಮತ್ತು ಅಲ್ಲಿಯ ಸೊಬಗನ್ನು ತಿಳಿಸಿಕೊಡುವಂತೆ ಕಾಣಿಸುತ್ತದೆ. ಒಂದು ಪ್ರಾದೇಶಿಕ ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾದರೂ ಇಂತಹ ಕೃತಿಗಳನ್ನು ಓದಲೇಬೇಕು.

Read more!

Thursday, April 14, 2011

ಶೂದ್ರ ತಪಸ್ವಿ - ಕುವೆಂಪು ನಾಟಕ


ಕುವೆಂಪು ಅವರ ಸಾಹಿತ್ಯ ಸೃಷ್ಟಿ ಗಟ್ಟಿನೆಲೆ ಪಡೆದದ್ದೇ ಅವರ ನಾಟಕಗಳಿಂದಾಗಿ. ಅವರು ಒಟ್ಟು 14 ನಾಟಕಗಳನ್ನು ಬರೆದಿದ್ದಾರೆ. ಸೃಜನಶೀಲ ಪ್ರತಿಭೆ ಕಾವ್ಯಕ್ಕಿಂತಲೂ ಹೆಚ್ಚಾಗಿ ನಾಟಕದಲ್ಲಿಯೇ ಕಾಣಿಸಿಕೊಳ್ಳುತ್ತದೆ ಎಂಬುವುದಕ್ಕೆ ಕುವೆಂಪುರವರೇ ಸಾಕ್ಷಿಯಾಗಿದ್ದಾರೆ.

ಕುವೆಂಪು ಅವರು ಕನ್ನಡಕ್ಕೆ ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ಮತ್ತು ಬಲಿದಾನ ಎಂಬ ಮೂರು ಮಹತ್ವದ ನಾಟಕಗಳನ್ನು ಕೊಟ್ಟಿದ್ದಾರೆ. ಮಾನವೀಯ ಅಂತ:ಕರಣದ ವೈಚಾರಿಕ ನಿಲುವು ಈ ನಾಟಕಗಳ ಪ್ರಧಾನ ಅಂಶ. ಪ್ರಧಾನ ಸಂಸ್ಕೃತಿಯ ಧಾರೆಗೆ ಪ್ರತಿಕ್ರಿಯೆಯಾಗಿ ಪರ್ಯಾಯ ಸಂಸ್ಕೃತಿ ನಿರ್ಮಾಣಗೊಂಡಿರುವ ವಿಧಾನ ಇಲ್ಲಿನ ಮುಖ್ಯ ಬೆಳವಣಿಗೆ.

ಶೂದ್ರ ತಪಸ್ವಿ ನಾಟಕದಲ್ಲಿ ಪ್ರತಿಭಟನಾತ್ಮಕ ನೆಲೆ ಸ್ಪಷ್ಟವಾಗಿ ರೂಪುಗೊಂಡಿದೆ. ಹೊಸ ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ವಿದ್ಯಮಾನಗಳಿಗೆ ಹೋಲಿಸಿ ನೋಡುವ ಕ್ರಮವನ್ನು ಕುವೆಂಪು ಇಲ್ಲಿ ಎತ್ತಿ ಹಿಡಿದಿದ್ದಾರೆ. ‘ಶೂದ್ರ ತಪಸ್ವಿ’ ಎಂಬ ಹೆಸರೇ ಒಂದು ಸಮರ್ಥ ಪ್ರತಿಮೆಯಾಗಿ ಕಾಣುತ್ತದೆ. ಅದಲ್ಲದೆ, ಈ ಶೀರ್ಷಿಕೆಯೇ ಬಹು ಬಗೆಯ ಅರ್ಥಗಳನ್ನು ಹೊರಡಿಸುತ್ತದೆ. ‘ಶೂದ್ರ’ ಹಾಗೂ ‘ತಪಸ್ವಿ’ ಎಂಬ ಸ್ಥಾಪಿತ ಪದಗಳ ವಿರುದ್ಧಾರ್ಥಕಗಳನ್ನು ಬುಡಮೇಲು ಮಾಡಿ ಹೊಸ ಬಗೆಯ ಅರ್ಥವನ್ನು ಹೊರಡಿಸಲು ಇವು ಪ್ರಯತ್ನಿಸುತ್ತವೆ. ಈ ಅರ್ಥ ‘ರಾಮ’ ಅಥವಾ ‘ಧರ್ಮಶ್ರದ್ಧೆ’ಯನ್ನು ಸಂಪೂರ್ಣವಾಗಿ ತ್ಯಜಿಸಿದ ಸೃಜನಶೀಲ ದೃಷ್ಟಿಯೂ ಆಗಿರಬಹುದೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದಕ್ಕಾಗಿ ನಾವು ಕುವೆಂಪು ಅವರ ಬದುಕು ಮತ್ತು ಕೃತಿಗಳನ್ನು ಅವುಗಳ ಬಾಹುಳ್ಯದಲ್ಲಿಯೇ ಕಾಣಬೇಕಾಗಿರುವ ಅನಿವಾರ್ಯತೆಯಿದೆ.

ಈ ನಾಟಕ ‘ಸೆಕ್ಯುಲಾರಿಸಂ’ಗೆ ತುತ್ತಾಗಿದ್ದುದು ಮಾತ್ರ ವಿಷಾದನೀಯ. ಸ್ವತ: ಕುವೆಂಪುರವರೆ ಮಾರ್ನುಡಿಯಲ್ಲಿ ಈ ವಿಷಾದವನ್ನು ತೋಡಿಕೊಂಡು ನಾಟಕದ ಹಿನ್ನಲೆ ಯಾವ ರೀತಿಯಲ್ಲಿ ‘ಜಾತಿಗರ್ವಾಂಧತೆ’ಯನ್ನು ಮೀರಿ ನಿಂತಿದೆಯೆನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಕುವೆಂಪು ಅವರ ಹುಡುಕಾಟದ ವಸ್ತುಗಳೆಲ್ಲ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನಾಧರಿಸಿದ್ದು. ಇಂತಹ ಮಹಾನ್ ಕೃತಿಗಳು ಮೌಲ್ಯ ಸಂಘರ್ಷಗಳು, ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧಗಳು ಮತ್ತು ಮುಖ್ಯವಾಗಿ ಪುರೋಹಿತಶಾಹಿಯ ನಿಯಂತ್ರಣಗಳನ್ನೆಲ್ಲಾ ಮನುಷ್ಯನ ಬದುಕಿಗೆ ಅನಿವಾರ್ಯವೆಂಬತೆ ರೂಪುಗೊಂಡಿರುವುದು ಅಚ್ಚರಿಯ ವಿಷಯ.

ಪ್ರಸ್ತುತ ‘ಶೂದ್ರ ತಪಸ್ವಿ’ ನಾಟಕವು ವಾಲ್ಮೀಕಿ ರಾಮಾಯಣದ ‘ಉತ್ತರ ಕಾಂಡ’ದಿಂದ ಆಯ್ಕೆಗೊಂಡಿರುವಂತದ್ದು. ಇಲ್ಲಿನ ‘ಶಂಬೂಕ ಪ್ರಸಂಗ’ವನ್ನು ನಾಟಕದಲ್ಲಿ ಸಮಕಾಲಿನ ಸಮಸ್ಯೆಯೊಂದರ ಮರುಸೃಷ್ಟಿಯೆನ್ನುವಂತೆ ಬದಲಾಯಿಸಿ ಸಮಾಜಮುಖಿ ಸಮಸ್ಯೆಯನ್ನು ಸರಳೀಕರಿಸಿದ್ದಾರೆ. ಇದರಿಂದಾಗಿ ಸಮಕಾಲೀನ ಸಮಸ್ಯೆಯೊಂದಕ್ಕೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಿದ್ದಾರೆಂದರೆ ಸುಳ್ಳಲ್ಲ.

ಶೂದ್ರ ತಪಸ್ವಿಯಲ್ಲಿ ಮೂರು ದೃಶ್ಯಗಳಿವೆ. ಮೊದಲ ದೃಶ್ಯದಲ್ಲಿ ಶಂಬೂಕ ಋಷಿಯ ಆಶ್ರಮಕ್ಕೆ ಕಾವಲು ನಿಂತ ವೃಕ್ಷ ಭೈರವ ಮತ್ತು ಮೃತ್ಯು ದೇವತೆಯ ಮುಖಾಮುಖಿಯ ಚಿತ್ರಣವಿದೆ. ಎರಡನೆ ದೃಶ್ಯ ಅಯೋಧ್ಯೆಯಲ್ಲಿ ನಡೆಯುವ ಪ್ರಸಂಗ. ಇಲ್ಲಿ ಬ್ರಾಹ್ಮಣನೋರ್ವ ಅಳುತ್ತಾ ತನ್ನ ಮಗನ ದಾರುಣ ಸಾವು ರಾಮರಾಜ್ಯದಲ್ಲಿ ಸೋಜಿಗವನ್ನು, ವಿಷಾದವನ್ನು ಮತ್ತು ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎನ್ನುವ ಸಂಕಟದಲ್ಲಿ ಹೇಳುತ್ತಾನೆ. ರಾಮ ಈ ಮಾತನ್ನು ಕೇಳಿ ಬ್ರಾಹ್ಮಣನ ಜೊತೆಗೆ ಮಾತಿಗಿಳಿಯುತ್ತಾನೆ. ಆಗ ಶೂದ್ರನೊಬ್ಬ ತಪ್ಪಸಿಗೆ ಕುಳಿತಿರುವುದೇ ಅಧರ್ಮಕ್ಕೆ ಕಾರಣವಾಗಿದೆ, ಹಾಗಾಗಿಯೆ ತನ್ನ ಮಗನ ದಾರುಣ ಸಾವು ಸಂಭವಿಸಿದೆ ಎಂದು ಆರೋಪಿಸುತ್ತಾನೆ.

ಮೂಲ ರಾಮಾಯಣದ ಕಥೆಯಲ್ಲಿ ಇಂತಹ ವಿಷಯವನ್ನು ಕೇಳಿ ತಕ್ಷಣ ರಾಮ ಮಂತ್ರಿ ಮಂಡಲದ ಸಭೆಯನ್ನು ಕರೆಯುತ್ತಾನೆ. ಬ್ರಾಹ್ಮಣನ ಅತ್ಯಾರೋಪದ ದೂರಿನ ಬಗ್ಗೆ ಸಭೆಯಲ್ಲಿ ವಿಚಾರಿಸುತ್ತಾನೆ. ಆಗ ನಾರದರಿಂದ ಶೂದ್ರನೊಬ್ಬನ ತಪ್ಪಸಿನ ಬಗ್ಗೆ ತಿಳಿಯುತ್ತದೆ. ರಾಮ ಶೂದ್ರ ತಪಸ್ವಿಯನ್ನು ಹುಡುಕುತ್ತಾ ಹೋಗುತ್ತಾನೆ. ಅಲ್ಲಿ ಶಂಬೂಕನೆನ್ನುವ ಶೂದ್ರನು ತಪಸ್ಸಿಗೆ ಕುಳಿತಿರುವುದು ತಿಳಿಯುತ್ತದೆ. ಅವನನ್ನು ವಿಚಾರಿಸುವಾಗ ಅವನು ಶೂದ್ರನೆಂದು ತಿಳಿಯುತ್ತದೆ. ರಾಮನ ಖಡ್ಗ ಅವನ ತಲೆಯನ್ನು ಕಡಿದುರುಳಿಸುತ್ತದೆ. ಶಂಬೂಕ ಸಾಯುತ್ತಾನೆ.

ಆದರೆ ಕುವೆಂಪು ನಾಟಕದಲ್ಲಿ ಶಂಬೂಕನ ಪಾತ್ರಕ್ಕೆ ಸರಿಯಾದ ರೀತಿಯಲ್ಲಿ ಮಾನವೀಯ ನೆಲೆಯಲ್ಲಿ ನ್ಯಾಯ ಒದಗುತ್ತದೆ. ವರ್ಣಭೇದ ನೀತಿಯನ್ನು ಸಮಾಜಮುಖಿಯಾದ ಸಮಸ್ಯೆಯೊಂದಕ್ಕೆ ಪರಿಹಾರವೆಂಬಂತೆ ಬ್ರಾಹ್ಮಣ ಸಮೇತನಾಗಿ ಎಲ್ಲರೂ ಶೂದ್ರ ತಪಸ್ವಿಯನ್ನು ಒಪ್ಪಿಕೊಳ್ಳುವಂತೆ ಚಿತ್ರಿಸಿದ್ದಾರೆ. ಅದು ಶೂದ್ರ ತಪಸ್ವಿಯ ಬಳಿ ಹೋದ ಮೃತ್ಯು ಶಾಂತ ರೀತಿಯಲ್ಲಿ ಅವನಿಗೆ ವಂದಿಸಿ ಮತ್ತೆ ಬ್ರಾಹ್ಮಣನತ್ತ ತಿರುಗುತ್ತದೆ. ಆಗ ಬ್ರಾಹ್ಮಣ, ‘ಗತಿಯೇನು ಬಟ್ಟೆದೋರೆಯ್’ ಎಂದು ಕೇಳುವಾಗ ರಾಮ, ‘ನೀನು ಯಾರನ್ನು ಆವಾಜ್ಞೆಗೈದೆಯೋ, ಅವನನ್ನೇ ಕೇಳು. ಸನ್ಮತಿಯ ಸತ್ಕೃತಿಗೆ ಶಾಸ್ತ್ರದ ನೆರವು ಬೇಕಿಲ್ಲ. ಎಲ್ಲವನ್ನೂ ಯುಕ್ತಾ ಯುಕ್ತತೆಯಿಂದ ಆಲೋಚಿಸಿದರೆ ತಿಳಿಯುತ್ತದೆ’ ಅನ್ನುತ್ತಾನೆ. ಇದು ಮೂರನೆ ದೃಶ್ಯದಲ್ಲಿ ನಡೆಯುವ ಘಟನೆ.

ಇಲ್ಲಿ ಸೀತೆಯನ್ನು ಪರಿತ್ಯಜಿಸಿದ ರಾಮ, ಬ್ರಾಹ್ಮಣನ ಮಾತಿನ ನಿಂದನೆಯನ್ನು ಸಹಿಸಿಕೊಳ್ಳದೆ ಅವನ ಪರವಾಗಿ ನಿಲ್ಲುತ್ತಾನೆ. ಶಂಬೂಕ ತಪಸ್ವಿಯ ಆಶ್ರಮವಿರುವ ಕಾಡೇ ರಾಮನಿಗೆ ಸೀತೆಯಾಗಿ ಗೋಚರಿಸುತ್ತದೆ. ತುಂಬು ಬಸುರಿಯಾದ ಸೀತೆಯನ್ನು ಕಾಡಿಗಟ್ಟಿದ ಕೈ ಮತ್ತು ಶಂಬೂಕನನ್ನು ಕೊಲ್ಲಬೇಕಾದ ಬಲಗೈಗೆ ಕರುಣೆಯಿದೆಯೆ? ಎಂದು ರಾಮ ಪ್ರಶ್ನಿಸುವುದು ಭವಭೂತಿಯ ‘ಉತ್ತರ ರಾಮ ಚರಿತ’ ನಾಟಕದಲ್ಲಿ. ಇದು ಭವಭೂತಿಯ ಅಹಿಂಸಾಪರ ವಾದವಾದರೆ ಕುವೆಂಪು ನಾಟಕದಲ್ಲಿ ಸಮಕಾಲೀನ ಸಮಸ್ಯೆಗೆ ಮುಖಾಮುಖಿಯಾಗಿ ವರ್ಣತಾರತಮ್ಯವನ್ನು ಮಾಡದೆ ನ್ಯಾಯ ಒದಗುವಂತೆ ಮಾಡಲಾಗಿದೆ.

ಇಡೀ ಕೃತಿಯು ಹಳೆಗನ್ನಡದಲ್ಲಿದೆ ಮತ್ತು ಛಂದೋಬದ್ಧವಾಗಿದ್ದು ಸಶಬ್ದವಾಗಿ ಓದಿಕೊಂಡು ಪದಪದಗಳನ್ನು ಆಸ್ವಾದಿಸಬಹುದು. ಕುವೆಂಪು ಅವರು ಬಿನ್ನವಿಸಿಕೊಳ್ಳುವಂತೆ ಈ ನಾಟಕವನ್ನು ವರ್ಣಬೇಧದಡಿಯಲ್ಲಿಟ್ಟು ಓದುವ ಬದಲು ಶುದ್ಧ ಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಓದಿದರೆ ಕೃತಿಗೂ, ಕೃತಿಕಾರನಿಗೂ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳುತ್ತಾರೆ.

ಈ ನಾಟಕವು ಮಂಜುನಾಥ್ ಬಡಿಗೇರ ಅವರ ದಕ್ಷ ನಿರ್ದೇಶನದಲ್ಲಿ ‘ನಿನಾಸಂ’ ತಿರುಗಾಟದ ನಾಟಕವಾಗಿ ಯಶಸ್ವೀ ನಾಟಕಗಳಲ್ಲೊಂದಾಗಿರುವುದು ಶ್ಲಾಘನೀಯ. ಹಳೆಗನ್ನಡದಲ್ಲಿಯೇ ಸಂಭಾಷಣೆಯನ್ನು ಹೇಳುವ ಸ್ಪಷ್ಟತೆ ಜನಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿದೆ. ಪ್ರತೀಯೊಬ್ಬ ಕಲಾವಿದನು ಪಾತ್ರಕ್ಕೆ ಜೀವ ತುಂಬಿದ್ದಾನೆ. ನಾಟಕ ನೋಡುವುದಕ್ಕೂ ಓದುವುದಕ್ಕೂ ಯಾವುದೇ ಅಭಾಸ ಇಲ್ಲಿ ಕಾಣುವುದಿಲ್ಲ.

Read more!

Wednesday, April 6, 2011

ಕಂಬಾರರ - ಜೀಕೆ ಮಾಸ್ತರರ ಪ್ರಣಯ ಪ್ರಸಂಗ


ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ ಎಷ್ಟೊಂದು ಬರೆದರು ಮುಗಿಯದ ಅಗಾಧತೆ ಆ ಪದಗಳಿಗಿವೆ. ಕಾಳಿದಾಸನಿಂದ ಹಿಡಿದು ಇಲ್ಲಿಯವರೆಗೂ ಅದೇಷ್ಟೋ ಹೊಸ ಹೊಸ ವ್ಯಾಖ್ಯಾನಗಳು ಆ ಶಬ್ದಗಳನ್ನು ಅಲಂಕರಿಸಿವೆ. ಅದೇ ರೀತಿಯ ಒಂದು ಹೊಸ ಪ್ರಸಂಗ ಚಂದ್ರಶೇಖರ ಕಂಬಾರರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’. ಹೆಸರೇ ಸೂಚಿಸುವಂತೆ ಇದೊಂದು ಪ್ರೇಮ ಕಥೆಯಾದರೂ ಇಲ್ಲಿರುವ ಹೊಸತನ ಒಬ್ಬ ವಯಸ್ಸಾದ ವ್ಯಕ್ತಿ ಪ್ರೀತಿಗೆ ಸಿಲುಕುವ ಪೇಚಿನ ಪ್ರಸಂಗವಾಗಿರುವುದು. ಪ್ರೀತಿ ಹಂಚಿಕೊಳ್ಳುವುದಕ್ಕಾಗಿಯೇ ನೋವುಂಡ ಹೃದಯಗಳು ಸದಾ ಮಿಡಿಯುತ್ತಿರುತ್ತವೆಯೆನ್ನುವಂತೆ ಇಲ್ಲಿ ಮಾಸ್ತರರು ಪ್ರೀತಿಗೆ ಶರಣಾಗತರಾಗುವುದು ವಿಪರ್ಯಾಸ. ಪ್ರೀತಿಗೆ ಮಣಿಯದವರಿಲ್ಲವೆನ್ನುವುದು ಜ್ಞಾನಿಯೊಬ್ಬನ ಅನುಭವದ ಮಾತು. ಅನುಭಾವದ ನೆಲೆಯಲ್ಲಿ ಮತ್ತು ಜಂಜಡದ ಬಲೆಯಲ್ಲಿ ಮನುಷ್ಯ ಒಂದು ಹಿಡಿ ಪ್ರೀತಿಗಾಗಿ ಸದಾ ಪರಿತಪಿಸುತ್ತಾ ಇರುತ್ತಾನೆ.

ಇಲ್ಲಿ ಚಂದ್ರಶೇಖರ ಕಂಬಾರರ ಕಿರು ಕಾದಂಬರಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ದಲ್ಲಿ ಜೀಕೆ ಮಾಸ್ತರರು ಬಹಳ ಕಟ್ಟುನಿಟ್ಟಿನ ಮನುಷ್ಯ ಮತ್ತು ತಾನು ಹೇಳಿದ್ದೆ ಆಗಬೇಕು ಅನ್ನುವ ಮನಸ್ಥಿತಿಯಾತ. ಅವರ ಕಠೋರ ಶಿಸ್ತು ನಿಯಮಾವಳಿಗೆ ಮಗನನ್ನೇ ಬಲಿಕೊಡಬೇಕಾದ ಪ್ರಸಂಗ ಎದುರಾಗುತ್ತದೆ. ಮಗನ ಸಾವಿನ ಬಳಿಕ ಅವರ ಮಡದಿ ಮಾಸ್ತರರನ್ನು ಕೇರ್ ಮಾಡದ ಸ್ವಭಾವದವಳಾಗುತ್ತಾಳೆ.

ಜೀಕೆ ಮಾಸ್ತರರು ಶಾಲೆಯಲ್ಲಿಯೂ ಬಹಳ ಕಟ್ಟುನಿಟ್ಟಿನ ಮನುಷ್ಯ. ಸ್ವಲ್ಪವೂ ಅಶಿಸ್ತನ್ನು ಬಯಸದವರು. ಅವರ ಕೆಂಗಣ್ಣಿಗೆ ಗುರಿಯಾಗುವವನು ಆ ಶಾಲೆಯ ವಿದ್ಯಾರ್ಥಿ ಗಿರೆಪ್ಪ. ಜೀಕೆ ಮಾಸ್ತರರ ನಿಯತ್ತಿನ ಚೇಲ ಎನ್.ಟಿ. ಅವನು ಘಟನೆಗಳಿಗೆ ಸದಾ ಬಣ್ಣಕಟ್ಟಿ ಹೇಳುವವನು. ಅವನ ಬಾಯಿಯಲ್ಲಿ ಗಿರೆಪ್ಪನ ತುಂಟತನ ಮತ್ತು ಕೀಟಲೆಗಳು ಒಂದಲ್ಲ ಒಂದು ವಿಧದಲ್ಲಿ ಮಾಸ್ತರರನ್ನು ಕೆರಳಿಸುತ್ತಲೇ ಇರುತ್ತದೆ. ಅಂತಹ ಪೋಕರಿಗೆ ರೋಜಾಳಂತಹ ಹುಡುಗಿಯ ಜೊತೆಗೆ ಸಲುಗೆಯಿರುತ್ತದೆಯೆನ್ನುವುದು ಕೇಳಿ ಮಾಸ್ತರರ ಮೈ ಉರಿಯುತ್ತದೆ. ಅವನನ್ನು ಕರೆದು ಬುದ್ದಿವಾದ ಹೇಳಿದರೂ ಅವನು ಕೇಳಿಸದ ಒರಟು ಬುದ್ಧಿಯವನು. ಇದರಿಂದ ನೊಂದ ಮಾಸ್ತರರು ಅವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಲೇಬೇಕೆನ್ನುವ ಹಠಕ್ಕೆ ಬೀಳುತ್ತಾರೆ.

ಇಷ್ಟಕ್ಕೂ ಅವರಿಗೆ ಅಂತಹ ಪಡ್ಡೆ ಗಿರೆಪ್ಪನಿಗೆ ಗಂಟು ಬಿದ್ದ ಹುಡುಗಿ ರೋಜಾ ಯಾರು ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲ. ಅವರು ಆ ಕ್ಲಾಸಿಗೆ ಬಂದಾಗ ಅಟೆಂಡೆನ್ಸ್ ಕರೆಯುತ್ತಾ ಅವಳನ್ನು ನೋಡುತ್ತಾರೆ. ಆ ಕ್ಷಣದಲ್ಲಿ ಅವಳ ನೋಟವೂ ಮಾಸ್ತರರ ಮೇಲಿರುತ್ತದೆ. ಇದನ್ನೇ ಕಂಡು ಚಕಿತರಾದ ಮಾಸ್ತರರು ಒಳಗೊಳಗೆ ಪುಳಕಿತರಾಗುತ್ತಾ ರೋಜಾಳೆನ್ನುವ ಚೆಲುವಿಯ ಪ್ರೀತಿಗೆ ಸಿಲುಕುತ್ತಾರೆ. ಮೊದಲ ಬಾರಿಗೆ ಅವಳಿಂದ ಪ್ರೇಮ ಪತ್ರ ಪಡೆದುಕೊಂಡು ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವವರೆಗೂ ಮುಂದುವರಿಯುತ್ತದೆ ಅವರ ಪ್ರಣಯದಾಟ.

ರೋಜಾಳಿಗಾದರೂ ಮಾಸ್ತರರನ್ನು ಗೆದ್ದ ಸಂಭ್ರಮ. ಇದರಿಂದ ತನಗೆ ಬೇಕಾದ ಮಾರ್ಕ್ಸ್ಗಳು ದೊರಕಿಸಿಕೊಳ್ಳುವುದಲ್ಲದೆ, ತನ್ನ ಫ್ರೆಂಡ್ಗೂ ಒಳ್ಳೆಯ ಮಾರ್ಕ ಸಿಗುವ ಹಾಗೆ ಮಾಡುವ ಚಾಣಾಕ್ಷೆ. ಇದು ಮಾಸ್ತರರು ಹೆಂಡತಿ ಹಾಸಿಗೆ ಹಿಡಿದ ಮೇಲೆ ರೋಜಾಳನ್ನು ಮನೆಗೆ ಕರೆದಾಗ ನಡೆದ ಸಂಚು. ಇದರಿಂದ ಮಾಸ್ತರರ ಮನಸ್ಸಿನಲ್ಲಿ ರೋಜಾ ಗಟ್ಟಿಯಾಗಿ ನಿಂತು ಗಿರೆಪ್ಪನೆನ್ನುವ ಪಡ್ಡೆಯನ್ನು ಗೆದ್ದೆನೆನ್ನುವ ಖುಷಿಯಲ್ಲಿರುತ್ತಾರೆ. ಅವರಲ್ಲಿ ಬತ್ತದ ಲವಲವಿಕೆ ತುಂಬಿರುವುದು ಅವರ ವಯಸ್ಸಿಗೂ ಮೀರಿ. ಇಲ್ಲಿ ಗಿರೆಪ್ಪನಿಗೂ ಮಾಸ್ತರರಿಗೂ ಕೆಲವೊಂದು ಸ್ಪರ್ಧೆಗಳು ನಡೆದು ಕೊನೆಗೂ ಮಾಸ್ತರರೇ ಗೆದ್ದಂತೆ ಬೀಗುತ್ತಾರೆ. ಆದರೆ ಇವೆಲ್ಲಾ ರೋಜಾ ಮತ್ತು ಗಿರೆಪ್ಪ ಇಬ್ಬರೂ ಸೇರಿ ಮಾಡಿದ ನಾಟಕವೆನ್ನುವುದು ಮಾಸ್ತರರಿಗೆ ಅರಿವಾಗುವಾಗ ಅವರು ಬದುಕಿನಲ್ಲಿ ತಾನು ಕಳೆದುಕೊಂಡದ್ದೆಲ್ಲವನ್ನೂ ನೆನಪಿಸಿಕೊಂಡು ಕೊರಗುತ್ತಾ ಎಲ್ಲದರಿಂದಲು ದೂರವಾಗ ಬಯಸುತ್ತಾರೆ. ಅವರೊಳಗಿದ್ದ ಆ ಶಿಸ್ತಿನ ಮಾಸ್ತರರು ಸತ್ತು ಅವರು ಹೊಸ ವ್ಯಕ್ತಿಯಾಗಿ ಕಾಣಿಸುತ್ತಾರೆ.

ಕಾದಂಬರಿಯ ಅಂತ್ಯ ಬೇಸರವೆನಿಸಿದರೂ ಅವರು ತಮ್ಮ ಉದಾರತೆಯಿಂದ ರೋಜಾ ಹಾಗು ಗಿರೆಪ್ಪನವರನ್ನು ಕ್ಷಮಿಸಿ ಅವರ ಬದುಕಿಗೆ ಒಂದು ದಾರಿಯನ್ನು ಮಾಡಿಕೊಡುತ್ತಾರೆ.

ಒಟ್ಟಾರೆಯಾಗಿ ಒಂದು ವಿಭಿನ್ನ ಕಥಾವಸ್ತುವನ್ನೊಳಗೊಂಡ ‘... ಮಾಸ್ತರರ ಪ್ರಣಯ ಪ್ರಸಂಗ’ ಓದುಗನಲ್ಲಿ ತಣಿಯದ ಕುತೂಹಲ ಹುಟ್ಟಿಸಿ, ಅಂತ್ಯದಲ್ಲಿ ತುಟಿಯಲ್ಲಿ, ಛೆ ಛೆ ಅನ್ನುವ ಪಶ್ಚಾತ್ತಾಪದ ಸದ್ದು ಹೊರಡಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಹೆಚ್ಚಿಸಬಲ್ಲ ಒಂದು ವಿನೂತನ ಕಾದಂಬರಿಯೆಂದರೆ ತಪ್ಪಾಗಲಾರದು.

Read more!

Saturday, April 2, 2011

ಹೊತ್ತಿ ಉರಿವ ಒಡಲ ಕಾಮದ - ಕಾಡಿನ ಬೆಂಕಿ


ಕಾಡಿನ ಬೆಂಕಿ ಹೊತ್ತಿಕೊಂಡರೆ ಕಾಡು ಉಳಿಯದು; ಒಡಲಿಗೆ ಹೊತ್ತಿ ಕೊಂಡ ಕಾಮದ ಬೆಂಕಿ ಅನೂಹ್ಯವಾಗಿ ದೇಹವನ್ನು ಸುಟ್ಟು ಉಳಿಸದು.

ಖ್ಯಾತ ಕಾದಂಬರಿಕಾರ ನಾ. ಡಿಸೋಜ ಅವರ ‘ಕಾಡಿನ ಬೆಂಕಿ’ ಇದು ಎಂಬತ್ತರ ದಶಕದಲ್ಲಿ ‘ತರಂಗ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದ ಕಾದಂಬರಿ. ಮನುಷ್ಯನ ಲೈಂಗಿಕ ಸಮಸ್ಯೆಯ ಸುತ್ತಾ ಹೆಣೆದ ಕಥೆಯಾದರೂ ಇದನ್ನು ಬರೆದ ಶೈಲಿ ಬಹಳ ಸೊಗಸಾಗಿದೆ. ಕೇವಲ ಸಮಸ್ಯೆಯೊಂದರ ಮುಖಾಮುಖಿಯಾಗದೆ ನಿಧಾನವಾಗಿ ಸಮಸ್ಯೆಯನ್ನು ಬಿಚ್ಚಿಡುತ್ತಾ ಸಂಸಾರಿಕ ಮತ್ತು ಕಾಡಿನ ಶ್ರೀಮಂತಿಕೆಯನ್ನು ಕಥೆ ಹೆಣೆದುಕೊಂಡಿರುವುದು. ಇದೊಂದು ಒಂದೇ ವರ್ಗಕ್ಕೆ ಸೀಮಿತವಾದ ಕಾದಂಬರಿಯಾಗದೆ ಎಲ್ಲರೂ ಓದಬಹುದಾದ ಕೃತಿಯಾಗಿ ಮೂಡಿ ಬಂದಿರುವುದು ಹಿರಿಯ ಲೇಖಕರೊಬ್ಬರು ಇದನ್ನು ಬರೆದಿರುವುದರಿಂದ ಅನ್ನುವುದು ನನ್ನ ಅನಿಸಿಕೆ.

ಹೌದು, ನಿಜವಾಗಿಯೂ ಕಾದಂಬರಿ ಕೇವಲ ಲೈಂಗಿಕ ವಿಷಯದ ಸುತ್ತಾ ಗಿರಕಿಹೊಡೆಯದೆ, ಅರಣ್ಯ ಇಲಾಖೆಯ ಪ್ರತೀಯೊಬ್ಬ ಸಿಬ್ಬಂದಿಯ ಸಮಸ್ಯೆಗಳತ್ತ ಮತ್ತು ಅವರ ಜೀವನ ಶೈಲಿಯತ್ತ ಮುಖ ಮಾಡಿರುವುದು ಗೋಚರಿಸುತ್ತದೆ. ಕಾಡಿನ ನಡುವೆ ಬದುಕುವ ದುಸ್ತರ ಮತ್ತು ವ್ಯವಸ್ಥೆಗಳೇ ಇಲ್ಲದ ಸವಾಲಿನ ಕೆಲಸಗಳನ್ನು ಕಥೆ ವಿವರಿಸುತ್ತದೆ. ಕಾನುಮರಡಿ ಹೆಸರೇ ಸೂಚಿಸುವಂತೆ ಅರಣ್ಯ ಇಲಾಖೆಗೆ ಸೇರಿದ ಜನವಸತಿಯಿಲ್ಲದ ಪ್ರದೇಶ ಓದುಗನ ಕಣ್ಣಿನಲ್ಲಿ ಸುಂದರವಾಗಿ ಚಿತ್ರಿತವಾಗುವಂತೆ ಕಾದಂಬರಿಯನ್ನು ಬರೆಯಲಾಗಿದೆ.

ಎರಡು ಮನಸ್ಸುಗಳನ್ನು ಬೆಸೆಯುವ ಪ್ರೇಮ ಮತ್ತು ಎರಡು ದೇಹಗಳನ್ನು ಬೆಸೆಯುವ ಕಾಮ, ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಇವುಗಳಲ್ಲಿಯ ಅಸಮತೋಲನ ಸಂಸಾರದ ಮೇಲೆ ವ್ಯತಿರೀಕ್ತ ಪರಿಣಾಮ ಬೀರಬಲ್ಲದು. ಮಾತ್ರವಲ್ಲ, ಕ್ಲಿಷ್ಟಕರವಾದ ಸಮಸ್ಯೆಯನ್ನು ತಂದೊಡ್ಡಬಲ್ಲದು.

ಇಲ್ಲಿಯ ಕಥಾನಾಯಕ ರಘುರಾಮ ತುಂಬು ಸಂಸಾರದಲ್ಲಿ ಜನಿಸಿದವನು. ಅವನ ತಂದೆ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು, ದಿನನಿತ್ಯ ಮನೆಯಲ್ಲಿ ಜಗಳ, ದಬ್ಬಾಳಿಕೆ, ಬೈಗುಳಗಳು. ಇದನ್ನೆಲ್ಲಾ ಬೆರಗುಗಣ್ಣಿನಿಂದ ನೋಡುವ ಪುಟ್ಟ ಬಾಲಕ ರಘುರಾಮನಿಗೆ ಬೆಳೆದಂತೆ ಅದೇನೋ ಅಸಂಗತ ಮತ್ತು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದಕ್ಕೆ ಪೂರಕವಾಗಿ ಮನೋಹರಿ ಮಹದೇವನೆನ್ನುವವನನ್ನು ಎರಡನೆ ಮದುವೆಯಾಗಿ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಆದರೆ ಆತ ನಿಷ್ಪ್ರಯೋಕಜನೆನ್ನುವ ದೃಷ್ಟಿ ಮನೋಹರಿಯದ್ದು. ಮನೋಹರಿಯ ಮನೋಲಹರಿಯನ್ನು ಅರಿಯದ ರಘುರಾಮ ಅವಳ ಜೊತೆಗೆ ಅನೈತಿಕ ಸಂಬಂಧವನ್ನು ಬೆಳೆಸುತ್ತಾನೆ. ಇದು ಮನೋಹರಿಗೆ ವರವಾಗಿಯೂ ರಘುರಾಮನಿಗೆ ಸಮಸ್ಯೆಯೊಂದರ ಪ್ರಪಾತವಾಗಿಯೂ ತೆರೆದುಕೊಳ್ಳುತ್ತದೆ. ಇದು ರಘುರಾಮನ ಮಡದಿ ಯಶೋದೆಗೆ ತಿಳಿಯುತ್ತಲೇ ಅವಳು ಅವನಿಂದ ದೂರವಾಗುತ್ತಾಳೆ. ಆದರೆ ರಘುರಾಮ ಕೆಟ್ಟವನಲ್ಲವಾದರೂ ಅವನ ಲೈಂಗಿಕತೆಯ ಬಗ್ಗೆ ಇರುವ ಅಜ್ಞಾನ ಯಶೋದಾಳಂತಹ ಹೆಣ್ಣನ್ನು ಬಲಿತೆಗೆದುಕೊಳ್ಳುವವರೆಗೆ ಮುಂದುವರಿಯುತ್ತದೆ.

ಇಂತಹ ಮಾನಸಿಕ ವಿಕಾರಕ್ಕೆ ಸಿಲುಕಿ ನರಳುವ ಅದೆಷ್ಟೋ ಯುವಜನಾಂಗಕ್ಕೆ ಇಂದಿಗೂ ಲೈಂಗಿಕ ಅಜ್ಞಾನವಿರುವುದನ್ನು ಕಾಣುತ್ತಲೇ ಇರುತ್ತೇವೆ. ಇಂತಹ ಅಜ್ಞಾನಗಳೇ ಮುಂದೆ ವಿಪರೀತ ಸಮಸ್ಯೆಗಳನ್ನು ಸೃಷ್ಟಿಸಿ ಬದುಕು ಸಾವಾಗುವ ಪರಿಸ್ಥಿತಿ ಎದುರಾಗುವುದು ಖಚಿತ. ಪ್ರತೀಯೊಂದು ಸಮಸ್ಯೆಗೂ ಪರಿಹಾರವಿದೆ. ಹಾಗೇನೆ ಲೈಂಗಿಕ ಸಮಸ್ಯೆಗೂ ಪರಿಹಾರವಿದೆ. ಮನುಷ್ಯ ತನ್ನ ಸಂಕೋಚ ಮನೋಭಾವನೆಯನ್ನು ತೊರೆದು ಇಂತಹ ಸಮಸ್ಯೆಗಳಿಗೆ ಮನೋಚಿಕಿತ್ಸಕರ ಬಳಿ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ಮನುಷ್ಯನ ವಿಕೃತ ಕೃತ್ಯಗಳಿಗೆ ಇಂತಹ ಅಜ್ಞಾನಗಳು ಕಾರಣವಾಗಿರಬಹುದು. ‘ಲೈಫ್ ಈಸ್ ಸ್ಟ್ರೇಂಜರ್ ದ್ಯಾನ್ ಫಿಕ್ಷನ್’ ಅನ್ನುವ ಹಾಗೆ ಈ ಕೃತಿಯೂ ಕೂಡ ವಿಭಿನ್ನವಾದ ಸಮಸ್ಯೆಯೊಂದನ್ನು ಮುಂದಿಡುತ್ತದೆ. ಇದರಿಂದ ಕೆಲವರಾದರೂ ತಮ್ಮ ಸಂಕೋಚ ಮನೋಭಾವನೆಯನ್ನು ಬಿಟ್ಟು ಮುಕ್ತವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಉತ್ತಮವೆನ್ನುವುದು ಈ ಲೇಖಕರ ಉದ್ದೇಶ ಕೂಡ ಆಗಿದೆ. ಈ ಕಥೆಯತ್ತ ಗಮನಸೆಳೆದವರು ಖ್ಯಾತ ಮಾನಸಿಕ ತಜ್ಞ ದಂಪತಿಗಳಾದ ಡಾಕ್ಟರ್ ಅಶೋಕ್ ಪೈ ಮತ್ತು ಡಾಕ್ಟರ್ ರಜನಿ ಪೈಯವರು.

ಕಾಡಿನ ಬೆಂಕಿಯನ್ನು ಓದುಗರು ಮೆಚ್ಚಿಕೊಂಡಿರುವುದು ಅದರ ಶೈಲಿಗಾಗಿ. ಎಲ್ಲಿಯೂ ಸಮಸ್ಯೆಯನ್ನು ವೈಭವೀಕರಿಸದೆ ಸ್ಪುಟವಾಗಿ ಮತ್ತು ಕಲಾತ್ಮಕವಾಗಿ ಬರೆದಿರುವುದರಿಂದ ಇದು ಮುಜುಗರವಿಲ್ಲದೆ ಓದುವುದಕ್ಕೆ ಸಹಾಯವಾಗಿದೆ. ಇಂತಹ ವಿಶಿಷ್ಟ ಕಾದಂಬರಿಯನ್ನು ಕೇವಲ ಓದುವ ಖುಷಿಗಾಗಿ ಓದದೆ, ಸಮಸ್ಯೆಯತ್ತ ಮುಖ ಮಾಡಿರುವ ರಘುರಾಮನಂತಹ ವ್ಯಕ್ತಿಗಳ ಅಜ್ಞಾನವನ್ನು ತೊಡೆಯುವಂತಾದರೆ ಓದು ಸಾರ್ಥಕವಾದಿತು.

ಇಂತಹ ಕೃತಿಯನ್ನು ರಚಿಸಿದ ಲೇಖಕ ನಾ. ಡಿಸೋಜ ಅವರಿಗೆ ಮತ್ತು ಇದನ್ನು ಬರೆಯುವಂತೆ ಪ್ರೇರೇಪಿಸಿದ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ಕೃತಜ್ಞತೆಯನ್ನು ಹೇಳಬೇಕು. ಈ ಕೃತಿ ಈಗ ಎರಡನೆ ಮುದ್ರಣವಾಗಿ ಪ್ರಕಟವಾಗಿದೆ.

Read more!

Sunday, March 20, 2011

ಪಿ. ಲಂಕೇಶ್ ಅವರ ‘ಅಕ್ಕ’


ಅಕ್ಕ ದೇವೀರಿಗೆ ಮೈಮೇಲೆ ಪ್ರೀತಿ ಬಂತೆಂದ್ರೆ ಅವ್ವನ ಹಾಗೆ ಎದೆಗೆ ತಬ್ಬ್ಕೊಂಡು ಮುತ್ತಿಡ್ತಾಳೆ; ಸಿಟ್ಟು ಬಂದ್ರೆ ಲಾತನೂ ಕೊಡ್ತಾಳೆ. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ನನ್ನಕ್ಕ ನಾಲ್ಕು ದಿನದಿಂದ ಎಲ್ಲಿಗೆ ಹೋದ್ಲೋ?... ಇದು ಕ್ಯಾತ ಉರುಫ್ ಕೃಷ್ಣನ ಅಳಲು. ದಾರಿ ಹೋಕ ನೋಡುವ, ಚಿಂತಿಸುವ, ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ರೆ ಅವನಿಗೆ ಒಂದಲ್ಲ ಒಂದು ದಿನ ಈ ಕ್ಯಾತ ಅಥವಾ ಕೃಷ್ಣ ಸಿಕ್ಕೇ ಸಿಗುತ್ತಾನೆ. ಈ ಕ್ಯಾತನ ಹಟ್ಟಿ, ಅವನ ಅಕ್ಕ, ಅವರಿಬ್ಬರನ್ನು ಸುತ್ತುವರಿದ ರಾಜಕೀಯ - ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತೆ. ಕ್ಯಾತ ಕಂಡದ್ದನ್ನು ಹೇಳುವ ಈ ಪುಟ್ಟ ಕಾದಂಬರಿ ನಿಜಕ್ಕೂ ರಾಜಕೀಯ ಕಾದಂಬರಿ. ಇದು ಬೆನ್ನುಡಿಯಲ್ಲಿ ಲಂಕೇಶ್ ಅವರ ಮಾತುಗಳು. ಅರಿಕೆಯಲ್ಲಿಯೂ ಪುಟ್ಟ ಹುಡುಗನ ಮಾತಿನಲ್ಲಿಯೇ ಕಥೆಯನ್ನು ಸಿದ್ಧಪಡಿಸಿರುವುದಾಗಿ ಲಂಕೇಶ್ ಹೇಳಿಕೊಳ್ಳುತ್ತಾರೆ. ಹಾಗಾಗಿ ಇಡೀ ಕಾದಂಬರಿಯಲ್ಲಿ ಕ್ಯಾತನ ಶೈಲಿಯ ಅಲ್ಪಪ್ರಾಣ, ಮಹಾಪ್ರಾಣದ ಮಿಶ್ರಣ, ಸಕಾರ ಶಕಾರ ಷಕಾರದ ಅನಿಶ್ಚಯತೆಯನ್ನು ಹಾಗೆ ಇಟ್ಟುಕೊಂಡಿರುವುದು ಕಾದಂಬರಿಯ ವಿಶಿಷ್ಟತೆಯಾಗಿದೆ.

ನಿಷ್ಠುರವಾಗಿ ರಾಜಕೀಯದ ಬಗ್ಗೆ, ವ್ಯಕ್ತಿಗಳ ಬಗ್ಗೆ ಬರೆಯುತ್ತಿದ್ದ ಲಂಕೇಶ್ ಅವರ ವಿಶಿಷ್ಟ ಶೈಲಿಯ, ದೇಸಿ ಸೊಗಡಿನ, ಸ್ಲಂ ಏರಿಯಾದ ಹೀರೋನೊಬ್ಬನ ಭಾಷೆಯಲ್ಲಿಯೇ ಕಾದಂಬರಿಯಾಗಿಸುವ ‘ಅಕ್ಕ’ ರಾಜಕೀಯ ಮತ್ತು ಸಿನಿಮಾ ಜಗತ್ತಿನ ಗಬ್ಬು ನಾತವನ್ನು ಸ್ಲಂ ಏರಿಯಾದ ನಾತಕ್ಕಿಂತಲೂ ಕಟುವಾಗಿ ಹೊರಗೆಳೆಯುವ ಚಿತ್ರಣವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಕೇವಲ ಕ್ಯಾತ ಮಾತ್ರವಲ್ಲ, ಅಲ್ಲಿಯ ಪರಿಸರದ ನೂರಾರು ಕ್ಯಾತರುಗಳ ಅನಾಥ ಪ್ರಜ್ಞೆ, ಹಸಿವು, ಅಸಹಾಯಕತೆ, ನೋವು, ಅನಿವಾರ್ಯತೆಗಳನ್ನು ಮತ್ತು ಸಂಭಾವಿತರ ಬದುಕಿನ ಇನ್ನೊಂದು ಮುಖವನ್ನು ತೆರೆದಿಡುವ ಈ ಕಥನಕದ ನಿರೂಪಣಾ ಶೈಲಿಯಾಗಲಿ, ಬಳಸಿದ ಭಾಷೆಯಾಗಲಿ ಎಲ್ಲೂ ದೋಷವೆನಿಸದೆ ಸ್ವತಂತ್ರವಾಗಿ ಓದಿಸಿಕೊಂಡು ಹೋಗುವುದಲ್ಲದೆ; ಬದುಕಿಲ್ಲದೆ ಬದುಕುವವರ ಬವಣೆಗಳನ್ನು ಮನಮುಟ್ಟುವಂತೆ ದಾಖಲಿಸಿದೆ.

ಈ ಕಾದಂಬರಿಯಲ್ಲಿ ಕ್ಯಾತ, ‘ಅಕ್ಕ’ ದೇವೀರಿಯ ಬಗ್ಗೆ ಹೇಳುತ್ತಾ ತಾನು ಬೆಳೆದು ಬಂದ ಪರಿಸರ; ಅಲ್ಲಿಯ ಅಸಹಾಯಕತೆ, ಇನ್ನೊಬ್ಬರಿಗೆ ಬಲಿಯಾಗುವ ಅನಿವಾರ್ಯತೆ ಎಲ್ಲವನ್ನೂ ಸಹಿಸಿಕೊಂಡು ಮುಂದೊಂದು ದಿನ ಒಳ್ಳೆಯದಾಗಬಹುದೆನ್ನುವ ಆಶಾದಾಯಕ ನಿಲುವನ್ನು ಹೊಂದಿರುವವ.

ಬಾಲ್ಯದ ದಿನಗಳಲ್ಲಿ ದೇವೀರಿಯ ಕಾರ್ಯವೈಖರಿಗಳು ಏನೆಂದು ಅರಿಯದ ಕ್ಯಾತನಿಗೆ ತಾನು ವಯಸ್ಸಿಗೆ ಬಂದಾಗ ಅವಲೋಕನ ನಡೆಸಿದಾಗ ಅವಳು ಯಾವ ಒತ್ತಡಕ್ಕೆ ಸಿಲುಕಿ ಎಂತಹ ಕೆಲಸಕ್ಕೆ ಇಳಿದಿದ್ದಾಳೆನ್ನುವುದು ಅರಿವಾಗುತ್ತಲೇ ಅವಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದರಲ್ಲಿಯೂ ಅವನಿಗೆ ‘ಅಕ್ಕ’ನ ಮೇಲೆ ಪ್ರೀತಿಯೇ ಇದೆ. ಸ್ಲಂ ಏರಿಯಾದಲ್ಲಿ ಬೆಳೆದು ಜೀವನ ಹೋರಾಟದ ಅನಿವಾರ್ಯತೆಯಲ್ಲಿ ದಾರಿ ತಪ್ಪಿಸುವ ಮತ್ತು ಅಡ್ಡ ದಾರಿ ಹಿಡಿಯುವುದಕ್ಕೆ ಪ್ರೇರೇಪಿಸುವ ಕ್ಷುದ್ರ ಶಕ್ತಿಗಳ ನಡುವೆ ಬದುಕಿನ ದಾರಿಯೆನೆಂದು ತಿಳಿಯದೆ ಅದನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಆ ಗಬ್ಬು ನಾತ, ಸೊಳ್ಳೆಗಳು, ರೋಗಗಳು, ವಾಸನೆಗಳಲ್ಲಿಯೇ ಬದುಕು ಸುಖಮಯವಾಗಿರುವುದು ಅಲ್ಲಿಯ ಜನರಿಗೆ.

ದೇವೀರಿ ಕೊಳಕು ದಂಧೆಯಲ್ಲಿ ಸಿಲುಕಿಕೊಂಡಿದ್ದರೂ ಅವಳು ಸಬಲೆ, ಯಾರನ್ನಾದರೂ ಎದುರಿಸಬಲ್ಲ ಧೀರೆ ಅನ್ನುವ ಅಭಿಮಾನದ ಜೊತೆಗೆ ಅವಳು ಲಕ್ಷಣವಾಗಿ ಆಫೀಸಿನಲ್ಲೋ, ಇನ್ಯಾವುದೋ ಕಚೇರಿಯಲ್ಲೋ ದುಡಿದು ಬರುವವಳು ಅಥವಾ ಗಾರೆ ಕೆಲಸಕ್ಕೆ ಹೋಗಿ ಸುಸ್ತಾಗಿ ಬರುವವಳೆನ್ನುವ ಕ್ಯಾತನ ತಿಳುವಳಿಕೆ ಬುಡಮೇಲಾಗುವುದು ಅವನನ್ನು ಸಿಂಗಾರ ಸೆಟ್ಟಿಯ ಮನೆ ಕೆಲಸಕ್ಕೆ ಹಚ್ಚಿ, ರಮಿಸಿ ಅವಳು ಅಟೋ ಹತ್ತಿ ಹೋದ ಬಳಿಕ. ಅದೇ ಕೊನೆಯ ದಿನ, ಮತ್ತೆಂದೂ ಅವನು ಅಕ್ಕನನ್ನು ನೋಡಲಿಲ್ಲ. ಅವಳು ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ಯಾರ ಮನೆಯಲ್ಲಿರುವಳೋ? ಯಾರ ಜೊತೆಗಿರುವಳೋ? ಒಂದೂ ಕ್ಯಾತನಿಗೆ ತಿಳಿದಿಲ್ಲ. ಆದರೆ ಅಕ್ಕನ ಬಗ್ಗೆ ಯೋಚಿಸುತ್ತಲೇ ಇದ್ದಾನೆ.

ಈ ಕಾದಂಬರಿಯಲ್ಲಿ ದೇವೀರಿಯನ್ನು ಕ್ಯಾತನ ಕಣ್ಣಿನಿಂದ ನೋಡುವುದರ ಜೊತೆಗೆ ಅವಳ ಪರಿಸ್ಥಿತಿಯನ್ನು ಅರಿಯಬೇಕಾಗಿರುವುದು ಮುಖ್ಯ. ತಾಯಿ ತಂದೆಯನ್ನು ಕಳೆದುಕೊಂಡ ಬಳಿಕ ತಂದೆಯ ಹೂವಿನ ಅಂಗಡಿಯೂ ಮುಚ್ಚಿ ನಿರ್ಗತಿಕ ಸ್ಥಿತಿ ತಲುಪುವ ಹೊತ್ತಿಗೆ ರಾಮಪ್ಪನವರ ಸಹಾಯದಿಂದ ನರಸಿಂಹ ಮೇಸ್ತ್ರಿಯ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಬದುಕುತ್ತಿರುವಾಗಲೇ ಪದೇ ಪದೇ ಅವಳ ಮನೆಗೆ ಬರುವ ನಾಗ್ರಾಜ ಮತ್ತು ಖಡವಾ ಅವಳ ಬಾಡಿಗಾರ್ಡುಗಳಂತೆ ಕಂಡರೂ, ಅವರೂ ಕೂಡ ದೇವೀರಿಯನ್ನು ಶೋಷಣೆಗೆ ತಳ್ಳುವವರೆ. ಶೋಷಣೆಯ ವಿರುದ್ಧ ದನಿ ಎತ್ತುವ ದೇವೀರಿ ಪರಿಸ್ಥಿತಿಯ ಕೈಗೊಂಬೆಯಾಗಿ ಬೇಡದ ಬದುಕನ್ನು ನೆಚ್ಚಿಕೊಳ್ಳಲೇಬೇಕಾಗುತ್ತದೆ.

ತಟಕ್ಕನೆ ಮನೆ ಕೆಲಸಗಳನ್ನು ಮುಗಿಸಿ ಅಲಂಕರಿಸಿಕೊಂಡು ಎಲ್ಲೋ ಮರೆಯಾಗುವ ಅವಳ ವೃತ್ತಿ ಏನು ಅನ್ನುವುದು ಓದುಗನನ್ನು ಕಾಡುವುದಾದರೂ ಅಲ್ಲಿ ಅವಳ ಹತಾಶೆ, ಸಿಟ್ಟು, ಕೋಪದ ಪ್ರದರ್ಶನವಾಗುವುದು ಕ್ಯಾತನ ಮೇಲೆ. ಅಕ್ಕ ಮುದ್ದಿಸುವುದರ ಜೊತೆಗೆ ಗುದ್ದು ಕೊಡುತ್ತಾಳಾದರೂ ಅವಳ ದಯನೀಯ ಸ್ಥಿತಿಗೆ ಮರುಗುವ ಎಳೆ ಮನಸ್ಸು, ಮುಗ್ಧತೆಯಿಂದ ರಾತ್ರಿ ಮಲಗುವಾಗ ಅವಳ ಬೆಚ್ಚಗಿನ ದೇಹದವನ್ನು ಅಪ್ಪಿಕೊಂಡು ಅವ್ವನ ನೆನಪು ಕಾಡುತ್ತಾ ಮತ್ತದೇ ಮುಗ್ಧತೆಯ ಪ್ರಶ್ನೆಗಳನ್ನು ಕೇಳುವಾಗಲೂ ಎಂತಹ ಕಲ್ಲು ಹೃದಯ ಕೂಡ ಕರಗಬೇಕು. ಇಲ್ಲಿ ರಾಜಕೀಯದ ದುರ್ನಾತಕ್ಕಿಂತಲೂ ಅಸಹಾಯಕ ಜನರ ಕೂಗು ಮಾರ್ದನಿಸುವುದನ್ನು ಗುರುತಿಸಬಹುದು. ರಾಜಕೀಯ ವ್ಯಕ್ತಿಗಳ ಸ್ವಾರ್ಥ ಮತ್ತು ಸ್ಲಂ ಜನರ ಬದುಕಿನ ಅಸಹಾಯಕ ಕೂಗು ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡದು.

ದೇವೀರಿಯ ಆ ಸ್ಥಿತಿಗೆ ರಾಜಕೀಯ ವ್ಯಕ್ತಿಗಳೇ ಕಾರಣವೆನ್ನುವುದು ಸ್ಪಷ್ಟವಾಗುತ್ತದೆ. ನಿಜವಾಗಿಯೂ ದೇವೀರಿಗೆ ತಾನೊಬ್ಬ ನಟಿಯಾಗಬೇಕೆನ್ನುವ ಬಯಕೆಯಿರುತ್ತದೆ. ಆದರೆ ಅವಳು ನಟನೆಗೆ ಇಳಿದರೆ ತಮಗೆ ದಕ್ಕುವುದಿಲ್ಲವೆಂದು ತಿಳಿದು ರಾಮಪ್ಪನೆಂಬ ಪುಢಾರಿ ನಾಗ್ರಾಜ ಮತ್ತು ಖಡವಾರನ್ನು ಅವಳ ಕಾವಲಿಗೆ ಬಿಡುತ್ತಾರೆ. ಅದೇ ರೀತಿ ನರಸಿಂಹ ಮೇಸ್ತ್ರಿಯೂ ಅವಳನ್ನು ದುರುಪಯೋಗ ಪಡಿಸಿಕೊಂಡವ. ಇಂತಹ ವ್ಯಕ್ತಿಗಳ ನಡುವೆ ಅವಳು ಬೆಳೆದು ಕೆಲವೊಮ್ಮೆ ಪ್ರತಿಭಟಿಸುವುದನ್ನು ಕಲಿತುಕೊಂಡವಳು.

ಕ್ಯಾತನಿಗೆ ಅಕ್ಕನ ಮೇಲೆ ಸಿಟ್ಟಿದ್ದರೂ ಅವನಿಗೆ ಖುಷಿ ಕೊಡುವ ಸಂಗತಿಗಳೆಂದರೆ ಸಿನಿಮಾದಲ್ಲಿ ನಟಿಸುವ ಪದ್ದಿ ಮತ್ತು ಆಕೆಯ ಆತ್ಮೀಯತೆ ಹಾಗೂ ಸುಧೀರನ ಗೆಳೆತನ. ಸುಧೀರ ತನಗಿಂತಲೂ ಸುಸ್ಥಿತಿಯಲ್ಲಿರುವವನು ಹಾಗೆಯೇ ಪದ್ದಿ ಸದಾ ಸಿನಿಮಾ ಮಂದಿಯೊಂದಿಗೆ ಬೆರೆಯುತ್ತಾ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವವಳು.

ಒಮ್ಮೆ ರಾಮಪ್ಪನ ಮನೆಗೆ ಹೋಗಿ ಬಾಡಿಗೆ ವಿಷಯ ಮಾತನಾಡಬೇಕಾದ ಕ್ಯಾತ, ದೇವೀರಿ ಹೇಳಿದರೂ ಅಲ್ಲಿ ಹೋಗದೆ ಹೋಗಿದ್ದೇನೆಂದು ಸುಳ್ಳು ಹೇಳುತ್ತಾನೆ. ದೇವೀರಿಗೆ ಅವನು ಸುಳ್ಳು ಹೇಳುವುದು ಮನದಟ್ಟಾಗಿರುತ್ತದೆ. ಅವನನ್ನು ಚೆನ್ನಾಗಿ ಹೊಡೆದು ಬಡಿದು ಮಾಡುವಷ್ಟರಲ್ಲಿ ರಂಗಜೆಟ್ಟಿ ಅವನನ್ನು ಬಿಡಿಸಿಕೊಂಡು ಹೋಗುತ್ತಾನೆ. ಇಷ್ಟಾದರೂ ರಾತ್ರಿ ಹೊತ್ತು ಅನಾಥ ಹುಡುಗ ಕ್ಯಾತ ಓದುವ ನೆಪದಲ್ಲಿ ಪುಸ್ತಕವನ್ನು ಹಿಡಿದುಕೊಂಡು ಕುಳಿತಿರಬೇಕಾದರೆ ದೇವೀರಿ ಶಾಂತವಾದ ದನಿಯಿಂದ ಅವನನ್ನು ಮಲಗುವಂತೆ ಹೇಳುತ್ತಾಳೆ. ಕ್ಯಾತನಿಗೆ ಅಚ್ಚರಿ ಆ ಸಮಯದಲ್ಲಿ ಅವನಾಡುವ ಮಾತುಗಳು ಯಾರನ್ನಾದರೂ ಭಾವುಕನನ್ನಾಗಿ ಮಾಡದಿರದು.

‘ದೇವೀರಿ ದುಪ್ಪಟಿ ಎಳೆದುಕೊಂಡು ಮಲಗಲು ರೆಡಿಯಾದಳು. ಕ್ಯಾತ ಪಾಟಿನ ಚೀಲ ಎಳೆದುಕೊಂಡ. ದೇವೀರಿ ಸುಮ್ಮನೆ ಇದ್ದಳು. ಆದ್ರೂ ಯಾಕೋ ಆಕೆ ಮನಸ್ಸಿನಾಗೆ ಅಳ್ತಿದ್ದಂಗಿತ್ತು. ದೇವೀರಿ ದೀಪ ಆರಿಸಿದಳು. ಸುತ್ತ ಕತ್ತಲು ಸಾರ್. ಬೇಜಾನ್ ಕತ್ತಲು. ಎಲ್ಲೂ ಒಂದು ಚೂರು ಗದ್ಲ ಇಲ್ಲ. ದೇವೀರಿ ಕ್ಯಾತನ್ನ ಮಗುವನ್ನು ಎತ್ತಿಕಂಡಂಗೆ ಉಸೇವಕ್ಕೆ ಎತ್ತಿಕೊಂಡು ಪಕ್ಕಕ್ಕೆ ಮಲಗಿಸಿಕೊಂಡಳು. ಹಂಗೇ ಬರ್ತಿದ್ದ ನಿದ್ರೆ ಹೊಂಟೋಯ್ತು ಸಾರ್, ನಮ್ಮವ್ವ ನನ್ನ ಮಲಗಿಸಿಕಂಡಂಗೆ ಸೊಂಟದ ಸುತ್ತ ಕೈ ಹಾಕಿ ಎಳಕೊಂಡು ಎದೆಗೆ ಅಪ್ಪಿಕೊಂಡ್ಳು ದೇವೀರಿ. ಬೆಚ್ಚಗೆ. ಎಷ್ಟು ಬೆಚ್ಚಗೆ, ಮೆತ್ತಗಿದ್ಲು ದೇವೀರಿ. ನಂಗೆ ತಡಿಯಾಕಾಗ್ದಷ್ಟು ಅಳು ಬಂತು. ಅತ್ತರೆ ಮತ್ತೆ ದೊಡ್ಡ ಗಲಾಟೆ ಆಗ್ತದೆ ಅಂತ ತಡಕಂಡೆ. ಆದರೆ ದೇವೀರಿ ಅಳಾಕೆ ಶುರುಮಾಡಿದ್ಲು ಸಾರ್.’ ಇಡೀ ಪ್ಯಾರಾದಲ್ಲಿ ದೇವೀರಿಯ ನೋವು ಓದುಗನನ್ನು ತಟ್ಟುವುದಲ್ಲದೆ ಒಬ್ಬ ಅಸಹಾಯಕ ಹುಡುಗನ ಮುಗ್ಧತೆಯನ್ನು ಬಿಚ್ಚಿಟ್ಟು ಭಾವುಕರನ್ನಾಗಿಸುತ್ತದೆ. ಇಂತಹ ಎರಡು ಮೂರು ಪ್ರಸಂಗಗಳು ಕಾದಂಬರಿಯಲ್ಲಿ ಬರುತ್ತವಾದರೂ ಅಲ್ಲಿಯೇ ಕ್ಯಾತನ ಪ್ರವೇಶವಾಗುತ್ತಲೆ ನಮ್ಮನ್ನು ವಾಸ್ತವಕ್ಕೆ ತರುತ್ತದೆ.

ಇಂತಹ ಅಪರೂಪದ ಕಾದಂಬರಿಯನ್ನು ಓದುವಾಗ ಸ್ಲಂ ಜನರ ಆಶಾದಾಯಕ ನಿರೀಕ್ಷೆಯನ್ನು ನೆನಪಿಸುವ ಘಟನೆ ನೆನಪಾಗುತ್ತದೆ. ಯಾರೇ ಆಗಲಿ ಕ್ಯಾಮರಾ ಹಿಡಿದುಕೊಂಡು ಸ್ಲಂ ಏರಿಯಾದಲ್ಲಿ ನಡೆದರೆ ಸಾಕು ಅವನು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಇತ್ತೀಚೆಗೆ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ ಗೆಳೆಯನೊಬ್ಬ ಹೇಳಿದ ಮಾತುಗಳು ನೆನಪಾಗುತ್ತವೆ. ಅವನು ಸುಮ್ಮನೆ ಸ್ಲಂ ಏರಿಯಾದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾಗ ಅಲ್ಲಿಯ ಮಹಿಳೆಯರೆಲ್ಲ ಸೇರಿ ಅವನು ಪತ್ರಿಕೆಯವನೆಂದು ತಿಳಿದು, ‘ಸಾರ್ ಇಲ್ಲಿ ನಮಗೆ ಮೂಲಭೂತ ಸೌಕರ್ಯಗಳೇ ಇಲ್ಲ ಸಾರ್, ನಮ್ಮ ಗುಡುಸ್ಲು ನೋಡಿ ಸಾರ್. ನೀವೇನಾದರೂ ಪೇಪರ್ನಲ್ಲಿ ಹಾಕಿಸಿಬಿಟ್ರೆ ನಮ್ಮ ಬಗ್ಗೆ ಯಾರಿಗಾದ್ರೂ ಕನಿಕರ ಮೂಡಬಹುದು, ಸಾರ್’ ಅಂತ ಅಲವತ್ತುಕೊಂಡರಂತೆ. ಈ ರೀತಿಯ ನಿರ್ಲಕ್ಷಕ್ಕೊಳಗಾಗಿರುವ ಅದೆಷ್ಟೋ ಏರಿಯಾಗಳಲ್ಲಿ ಕ್ಯಾತನಂತಹ ಮುಗ್ಧ ಹುಡುಗರು, ದೇವೀರಿಯಂತಹ ಶೋಷಣೆಗೊಳಗಾದ ಹೆಣ್ಣುಗಳು ಇದ್ದಾರೋ. ಆದರೆ ಅವರ ಬವಣೆಗಳು ಅವರಿಗೆ...

ಈ ನಿಟ್ಟಿನಲ್ಲಿ ಲಂಕೇಶ್ ಅವರು ‘ಅಕ್ಕ’ ಕಾದಂಬರಿಯಲ್ಲಿ ರಾಜಕೀಯ ಹುನ್ನಾರವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಬಹಳ ಸಮಯದ ಬಳಿಕ ಒಂದು ಒಳ್ಳೆಯ ಮತ್ತು ನೂತನ ಶೈಲಿಯ ಕಾದಂಬರಿಯನ್ನು ಓದಿದ ಅನುಭವವಾಯಿತು. ಅನಾಥಾಶ್ರಮದ ಉಸಿರುಕಟ್ಟಿಸುವ ವಾತಾವರಣವನ್ನು ನಿರಾಕರಿಸುತ್ತಲೇ, ತನ್ನ ಹಟ್ಟಿಯ ನಾತವನ್ನು ನೆನಪಿಸಿಕೊಳ್ಳುವ ಕ್ಯಾತ ಈಗಲೂ ಕಾಡುತ್ತಲೇ ಇರುತ್ತಾನೆ. ಯಾರಿಗೂ, ಕೊನೆಗೆ ಕ್ಯಾತನಿಗೂ ಹೇಳದೆ ರಿಕ್ಷಾ ಏರಿದ ದೇವೀರಿ ಎಲ್ಲಿಯೋ ನೋವು ಅನುಭವಿಸುತ್ತಿದ್ದಾಳೆ ಅನಿಸುತ್ತದೆ. ‘ಅಕ್ಕ’ ಓದಲೇಬೇಕಾದ ಒಂದು ಒಳ್ಳೆಯ ಕಾದಂಬರಿ.

Read more!

Wednesday, March 16, 2011

ಸುನಂದಾ ಪ್ರಕಾಶ ಕಡಮೆ ಅವರ ‘ಗಾಂಧಿ ಚಿತ್ರದ ನೋಟು’


ಸುನಂದಾ ಪ್ರಕಾಶ ಕಡಮೆಯವರ ‘ಗಾಂಧಿ ಚಿತ್ರದ ನೋಟು’ ಕಥಾ ಸಂಕಲನದ ಬಹುತೇಕ ಕಥೆಗಳು ಕಥನಗಾರಿಕೆಯ ಸೃಜನಶೀಲತೆಯನ್ನು ಅನಾವರಣಗೊಳಿಸುತ್ತವೆ. ಇಲ್ಲಿಯ ಒಂದೊಂದು ಕಥೆಯು ಒಂದೊಂದು ಮುಖಿಯಾಗಿದ್ದು; ಬದುಕಿನಲ್ಲಿ ಕಳೆದುಕೊಳ್ಳುವ ತಲ್ಲಣಗಳನ್ನು ಬಹಳ ಮನೋಜ್ಞವಾಗಿ ಬಿಂಬಿಸುತ್ತವೆ. ಎಲ್ಲವೂ ಇದ್ದು ಎಲ್ಲೋ ಒಂದು ಕಡೆ ಏನೂ ಇಲ್ಲದೆ ಹೋಗುವ ಸಂದರ್ಭಗಳಲ್ಲಿ ಸಂಬಂಧಗಳು, ಸಮಸ್ಯೆಗಳು ಎದುರಾಗುವ ಮತ್ತು ಸೋಲದೆ ಪರಿಹಾರವನ್ನು ಕಾಣುವ ಪಾತ್ರಗಳು ಇಲ್ಲಿಯ ಕಥೆಗಳಲ್ಲಿ ಎದ್ದು ಕಾಣುತ್ತದೆ.

‘ಸುನಂದಾ ಅವರ ಕಥೆಗಳ ಶಕ್ತಿ ಇರುವುದು ಅವುಗಳ ನಿರೂಪಣೆಯಲ್ಲಿರುವ ನಿಸ್ಪ್ರಹತೆಯಲ್ಲಿ’ ಇದು ಮುನ್ನುಡಿಯಲ್ಲಿ ವಿವೇಕ ಶಾನಭಾಗ ಅವರ ಮಾತು. ಇದು ಸತ್ಯ. ಪಾತ್ರಗಳ ಸ್ವಚ್ಛಂದ ಚಿತ್ರಣ ಕಳೆದು ಹೋದ ಬದುಕಿನ ತುಣುಕುಗಳಾಗಿ ಮತ್ತು ನಮ್ಮ ಸುತ್ತ ಮುತ್ತಲಲ್ಲಿಯೇ ಆಗಿ ಹೋದಷ್ಟು ಆಪ್ತವಾಗುತ್ತಾ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ಸುನಂದಾರವರ ಕಥೆಗಳಲ್ಲಿಯ ಇನ್ನೊಂದು ವಿಶೇಷತೆಯೆಂದರೆ ಎಲ್ಲೂ ಎಲ್ಲವನ್ನೂ ಬಿಚ್ಚಿಡದೆ ಕೆಲವನ್ನು ಓದುಗರಿಗಾಗಿ ಉಳಿಸಿ ಬಿಡುವ ಸೂಕ್ಷ್ಮತೆಗಳು ಹಲವು. ಇವು ಓದುಗನ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲವು ಮತು ಚಿಂತನೆಗೆ ಹಚ್ಚಬಲ್ಲವು. ಆದ್ದರಿಂದಾಗಿಯೇ ಲೇಖಕಿ ಇಲ್ಲಿ ವಿಭಿನ್ನರಾಗಿ ಉಳಿಯುತ್ತಾರೆ.

ಈ ಸಂಕಲನದ ಕಥೆಗಳೆಲ್ಲವೂ ಎಲ್ಲೋ ಘಟಿಸಿದಷ್ಟು ವಾಸ್ತವತೆಯನ್ನು ಬಿಂಬಿಸಿದರೂ ಬಹುತೇಕ ಕಥೆಗಳಲ್ಲಿ ಒಪ್ಪಿಕೊಳ್ಳಬಹುದಾದ ನೈಜತೆಗಳು ಕಥೆಯನ್ನು ಕಥೆಯಾಗಿಯೇ ಉಳಿಸದೆ ಬೇರೊಂದು ದೃಷ್ಟಿಕೋನದಲ್ಲಿ ಮರುವಿಶ್ಲೇಷಣೆಗೆ ಒಳಪಡಿಸುತ್ತವೆ.

ಇಡೀ ಸಂಕಲನದಲ್ಲಿ ಬಹುವಾಗಿ ಕಾಡುವ ಕಥೆ ‘ತಂಕಿ’. ಮೌನವಾಗಿ ನೋವುಗಳನ್ನೆಲ್ಲಾ ತನ್ನೊಳಗೆಬಚ್ಚಿಟ್ಟುಕೊಂಡು ವಿಷಾದದೆಡೆಗೆ ನಡೆಯುವ ತಂಕಿಯ ಅಕ್ಕ ಒಂದು ಜೀವಂತ ಗೊಂಬೆ ಮಾತ್ರ. ಅವಳ ಭಾವನೆಗಳು, ಆಕಾಂಕ್ಷೆಗಳನ್ನು ಹತ್ತಿಕ್ಕಿಕೊಂಡು ತನ್ನ ಸುತ್ತ ಒಂದು ಅವ್ಯಕ್ತ ಬಲೆಯನ್ನು ನೇಯ್ದು ನಾಳೆಗಳಿಲ್ಲದ ಬದುಕಿನಲ್ಲಿ, ಬದುಕನ್ನು ಸವೆಸುವುದು ಒಂದು ಮೂಕ ರೋಧನವಾಗುಳಿಯುತ್ತದೆ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆಯೆನ್ನುವಂತೆ ವಾಸಿಯಾಗದ ಕಾಯಿಲೆಗೆ ತುತ್ತಾಗುವ ಶಂಕರ (ತಂಕಿ) ತನ್ನ ಬದುಕಿನ ಕೊನೆ ತಿಳಿದಿದ್ದರೂ ಲವಲವಿಕೆಯಿಂದ ಬದುಕುವವನು. ಅಕ್ಕನ ಹತಾಶೆ, ಅಮ್ಮನ ಕನಿಕರವನ್ನು ಉಣ್ಣುತ್ತಲೇ ನಿಜವನ್ನು ಮರೆತು ಬದುಕುವವನು.

‘ಪತ್ರೊಡೆ’ ಕಥೆಯಲ್ಲಿ ಸಾಂಪ್ರದಾಯಿಕ ಎಳೆಯೊಂದನ್ನು ಮತ್ತು ರೀತಿರಿವಾಜುಗಳನ್ನು ತಿಳಿಸುತ್ತಾ ಸತ್ತ ನಂತರದ ಸೂಕ್ಷ್ಮ ಸಂಬಂಧವೊಂದನ್ನು ಕಾಣಿಸುತ್ತಾ, ಅಲ್ಲಿರುವ ಪ್ರೀತಿ, ದ್ವೇಷಗಳನ್ನು ತಿಳಿಸುತ್ತಾಸಾಗುವ ಕಥೆಯಲ್ಲಿ ತನ್ನಾಸೆಗಳನ್ನು ಪೂರೈಸಿಕೊಳ್ಳುವ ಯಮುನಜ್ಜಿಯ ಪಾತ್ರ ಎರಡು ತಲೆಮಾರುಗಳ ನಡುವಿನ ಒಂದು ಕೊಂಡಿಯಂತೆ ತೋರಿದರೆ ಹೆಚ್ಚಲ್ಲ.

ಸಂಸಾರದ ಜಂಜಡಗಳನ್ನು ಪರಿಣಾಮಕಾರಿಯಾಗಿ ಗುರುತಿಸಿಕೊಂಡು ನರೆದಿರುವ ಕಥೆ ‘ಚಿನ್ನಿದಾಂಡು’. ಎಲ್ಲರೊಂದಿಗಿದ್ದು ಪರಕೀಯವಾಗಿ ಉಳಿದು ಹೋಗುವ ಒಂದು ಸಂಬಂಧ; ಕಣ್ಣಂಚಿನಲ್ಲಿಯೇ ಆಸೆಗಳನ್ನು ಕಟ್ಟಿಕೊಂಡು ಅಲ್ಲಿರಲಾರದೆ ಎಲ್ಲೂ ಹೋಗಲಾರದ ಸಂದಿಗ್ಧತೆಯಲ್ಲಿ ತೊಳಲಾಡಿ ಕೊನೆಗೂ ಒಂದು ರೀತಿಯಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡು ಆವಜ್ಞೆಗೆ ಒಳಗಾಗಿಯೇ ನಿಂತು ಬಿಡುತ್ತದೆ.

ಹೊಸ ಬಗೆಯ ನಿರೂಪಣೆಯ ಕಥನ ‘ಚೌಕ ಮತ್ತು ಗೋಲ’. ಯಾವುದು ಹೇಗಿದ್ದರೆ ಒಳ್ಳೆಯದು ಮತ್ತು ಹೇಗಿರಬಾರದೆನ್ನುವ ಎರಡು ಸೂಕ್ಷ್ಮಗಳನ್ನು ಬರೀಯ ಎರಡು ಆಕೃತಿಗಳಲ್ಲಿ ಬಿಂಬಿಸುವ ಕಥೆಯಲ್ಲಿ ಹೊಸತನವಿದೆ. ಇಲ್ಲಿಯ ಹುಡುಕಾಟವಿರುವುದು ಚೌಕ ಮತ್ತು ಗೋಲಗಳೂ ಯಾವುವು ಅನ್ನುವಂತದ್ದು. ಇದೇ ರೀತಿಯಲ್ಲಿ ‘ಕೋಲು ಸಂಪಿಗೆ ಮರ’; ‘ಅಪ್ಪಿ’; ‘ಕಾಯದೊಳಗಣ ಆತ್ಮ’ ಕಥೆಗಳು ಕೂಡ ನಾವಿನ್ಯ ಶೈಲಿಯನ್ನು ಹೊಂದಿವೆ.

‘ಹೀಗೆ ಕಥೆಯೆಂಬ ಒಂದು ಕಥೆಯು ನನ್ನನ್ನೇ ನಡುಗಿಸಿ, ಆಕಾಶಕ್ಕೆ ತಳ್ಳಿ, ಹಾಗೆ ಏಕಾಂಗಿಯಾಗಿ ಆ ಒಮ್ದು ದಡಕ್ಕೆ ಒಯ್ದು ನಿಲ್ಲಿಸುವ ಮೊದಲು ನಾನು ಈ ಕಥೆ ಕಟ್ಟುವ ದುಶ್ಚಟದಿಂದ ಹೊರಬರಬೇಕು’ ಇದು ‘ಕೋಲು ಸಂಪಿಗೆ ಮರ’ದ ಸಾಲುಗಳು. ಅವ್ಯಕ್ತವಾದ ಬದುಕಿನ ಕ್ಷಣಗಳನ್ನು ವಿಭಿನ್ನ ಶೈಲಿಯಲ್ಲಿ ಬರೆದ ಕಥೆ ಇದು. ಆಧುನಿಕ ಜೀವನ ಶೈಲಿಯಲ್ಲಿ ಬರಡಾಗುವ ಬಸಿರ ತುಣುಕುಗಳ ಅವ್ಯವಸ್ಥೆಯನ್ನು ಮತ್ತು ತಪ್ಪಿಸಿಕೊಳ್ಳಲಾಗದ ಅನಿವಾರ್ಯತೆಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಒಂದು ಮುಗ್ಧ ಹುಡುಗಿಯ ಪಾತ್ರ ಚಿತ್ರಣದ ಮೂಲಕ ತೆರೆದಿಡುವ ಕಥೆಯೆ ‘ಅಪ್ಪಿ’. ಆಂತರಿಕ ತುಮುಲಗಳನ್ನು ಪರಾಮರ್ಶಿಸುವ ಕಥೆ, ‘ಕಾಯದೊಳಗಣ ಆತ್ಮ’ ಕೇವಲ ಒಂದು ರೀತಿಯ ವ್ಯಾಕುಲತೆ ಮಾತ್ರವಲ್ಲ ಬದುಕಿನಲ್ಲಿ ಆಗು ಹೋಗುಗಳನ್ನು ಕೂಡ ಉದಾತ್ತವಾಗಿ ಚಿತ್ರಿಸಿದೆ.

ಮಾನವ ಸಂಬಂಧಗಳು ನೈಜ್ಯ ಅಂತ:ಕರಣದ ಮೂಲಕ ಭಾವನಾತ್ಮಕ ಸಂಬಂಧಗಳನ್ನು ಬೆಸೆದುಕೊಂಡು ಬದುಕುತ್ತಿರುತ್ತವೆ. ಅಂತಹ ಸಂಬಂಧದೊಳಗೆ ತನ್ನ ತಾಯಿಯನ್ನು ಹುಡುಕುವ ಮಗಳೊಬ್ಬಳಿಗೆ ತಾನೇ ತಾಯಿಯಾಗಿ ಉಳಿಯುವ ಮಲತಾಯಿಯ ಅಂತ:ಕರಣ ಮತ್ತು ಮಗಳ ಭಾವದೀಪ್ತಿ, ‘ನಿನ್ನದೊಂದು ನೋಟ ಬೇಕು’ ಕಥೆಯಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಹಳದಿ ಸೀರೆಯುಟ್ಟ ತಾಯಿಯಂದಿರೆಲ್ಲಾ ತನ್ನ ಅಮ್ಮನ ಹಾಗೆ ಕಾಣುವ ಚಿನ್ನುಗೆ ಕೊನೆಗೂ ಹಳದಿಸೀರೆಯುಟ್ಟ ಮಲತಾಯಿ ಕೂಡ ಅಮ್ಮನಂತೆ ಕಾಣುವುದು ಈ ಕಥೆಯ ತಾಂತ್ರಿಕತೆಯೂ ಹೌದು. ಇಂತಹುದೇ ಇನ್ನೊಂದು ಹುಡುಕಾಟದ ಕಥೆ, ‘ನನ್ನ ಪೊರೆವ ತೊಟ್ಟಿಲು’. ಬಾಲ್ಯದ ನೆನಪುಗಳನ್ನು ಬೆಚ್ಚಗೆ ಬಿಚ್ಚಿಡುವ ‘ಮಳೆ ಹೊಯ್ದು ನಿಂತ ಕ್ಷಣ’ ಕಥೆಯಲ್ಲಿ ಹೆಣ್ಣೊಬ್ಬಳು ಬದುಕಿನಲ್ಲಿ ಜವಾಬ್ದಾರಿಗಳ ಹೊರೆಯನ್ನು ಹೊತ್ತು ಏಗಬೇಕಾದ ಅನಿವಾರ್ಯತೆಯನ್ನು ಹೇಳುತ್ತಾ, ಸಮಾಜದಲ್ಲಿ ಗಂಡು-ಹೆಣ್ಣಿನ ಪಾತ್ರ, ಜವಾಬ್ದಾರಿಗಳ ಬಗೆಯೂ ತಿಳಿಸುತ್ತದೆ.

ಜೇಡವನ್ನು ಉಪಮೆಯವಾಗಿಟ್ಟುಕೊಂಡು ರಚಿಸಿರುವ ಕಥೆ ‘ಜೇಡ ಬಲೆ ನೇಯುತಿದೆ’. ಇದು ಗಂಡ ಹೆಂಡಿರ ಸಂಬಂಧದ ಕಥೆಯಾದರೂ ಹೊರ ಜಗತ್ತಿನೊಂದಿಗೆ ವ್ಯವಹರಿಸುವ ಗಂಡು ಮತ್ತು ಒಳಜಗತ್ತಿನಲ್ಲಿ ಬದುಕು ಸವೆಸುವ ಹೆಣ್ಣಿನ ಸಂಬಂಧವನ್ನು ಬಿಚ್ಚಿಡುವ ಕಥೆ. ಮಿತ್ರಕ್ಕನ ಪಾತ್ರ ಚಿತ್ರಣ ಮನಸ್ಸಿನಲ್ಲಿ ಉಳಿದು ಬಿಡುತ್ತದೆ.

‘ಜರಿಯಂಚಿನ ಫ್ರಾಕು’ ಕಥೆಯಲ್ಲಿ ಶ್ರಮಜೀವಿಯೊಬ್ಬನ ಹೋರಾಟದ ದನಿಯಿದೆ. ತನ್ನ ಶ್ರಮದಿಂದ ಮೇಲೆ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳುವ ಹೊತ್ತಿಗೆ ಸಾಮಾಜಿಕ ವ್ಯವಸ್ಥೆಯೊಳಗೆ ನಲುಗಿ ತನಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯತೆಯಲ್ಲಿ ಬಂದ ಕೆಲಸವನ್ನು ಒಪ್ಪಿಕೊಳ್ಳುತ್ತಾ, ತನ್ನ ಮಗಳಿಗಾಗಿ ಹೊಲಿಯಲು ತಂದ ಜರಿ ಮಾತ್ರ ಹಾಗೆಯೇ ಉಳಿದು ನೋವುಣಿಸುತ್ತದೆ. ನಗರದ ಅಭಿವೃದ್ಧಿಯಲ್ಲಿ ಬದುಕು (ಹೊಲಿಗೆ ಮೆಷಿನ್ನು) ಕಳೆದುಕೊಳ್ಳುವ ವಾಸ್ತವ ಚಿತ್ರಣವನ್ನು ನಿರೂಪಿಸುತ್ತದೆ.

ಈ ಸಂಕಲನದ ಕೊನೆಯ ಕಥೆ ‘ಗಾಂಧಿ ಚಿತ್ರದ ನೋಟು’; ಎಷ್ಟೇ ಪ್ರಾಮಾಣಿಕ ವ್ಯಕ್ತಿಯಾದರೂ ಹಣದ ವಿಷಯದಲ್ಲಿ ಎಂತಹವನ ಮನಸ್ಸನ್ನೂ ಕೂಡ ಒಮ್ಮೆ ಸ್ವಾರ್ಥಿಯನ್ನಾಗಿಸುತ್ತದೆ. ಹಾಗೆ ಸ್ವಾರ್ಥದಿಂದ ಎಗರಿಸಿದ ಹಣವನ್ನು ಹಿಂತಿರುಗಿಸುವ ಕೆಲಸದಾಕೆಯ ಪ್ರಾಮಾಣಿಕತೆಯು ಅವಳನ್ನು ತುಚ್ಛಿಕರಿಸಿ ‘ಕ್ಷಮೆ’ ನೀಡದೆ ಆರೋಪದ ಹಣೆಪಟ್ಟಿಯನ್ನು ಕಟ್ಟುತ್ತದೆ. ಇಲ್ಲಿ ಅಸಹಾಯಕ ಪಾತ್ರಗಳು ಕೆಲಸದಾಕೆಯ ಮೇಲೆ ಕನಿಕರ ತೋರಿಸುತ್ತವಾದರೂ ವ್ಯಂಗ್ಯದ ದನಿಯೊಂದು ಸದಾ ಅವಳನ್ನು ಕುಕ್ಕುತ್ತಲೇ ಇರುತ್ತದೆ.

ಸುನಂದಾರವರು ತಮ್ಮ ಕಥಾ ಪಾತ್ರಗಳ ಮೂಲಕ ಬದುಕಿನ ಸೂಕ್ಷ್ಮತೆಯನ್ನು ಮನಮುಟ್ಟುವಂತೆ ಬರೆದಿರುವುದು ಶ್ಲಾಘನೀಯ. ಇಲ್ಲಿಯ ಕಥನಗಳನ್ನು ಒಮ್ಮೆಯಾದರೂ ಓದಿಯೇ ಆಸ್ವಾದಿಸಬೇಕು.

Read more!

Thursday, March 3, 2011

ಕೊರೆಲ್


ವಿಶ್ವವಿಖ್ಯಾತ ಬಂಗಾಲಿ ಕಾದಂಬರಿಕಾರ ಶರಚ್ಚಂದ್ರ ಚಟರ್ಜಿ (ಶರತ್ ಚಂದ್ರ ಚಟ್ಟೋಪಾಧ್ಯಾಯ) ಯವರ ಕಾದಂಬರಿ ‘ಕೊರೆಲ್’ ಸರಳ, ಸುಂದರ ಕಥಾವಸ್ತುವುಳ್ಳ ಕೃತಿ. ಕೊರೆಲ್ ಲಂಡನ್ ಸಮೀಪದ ಒಂದು ಊರಿನ ಹೆಸರು. ಈ ಕಾದಂಬರಿಯ ಕಾಲ, ಆಗಿನ್ನೂ ಬರ್ಮಾ ಬ್ರಿಟಿಷರ ಸಂಸ್ಥಾನಕ್ಕೆ ಒಳಪಟ್ಟಿರಲಿಲ್ಲ. ಆ ಸಮಯದಲ್ಲಿ ನಡೆಯುವ ಒಂದು ಘಟನೆಯೇ ಇಲ್ಲಿ ಮುಖ್ಯ ಕಥನಕ. ಎರಡು ಕುಟುಂಬಗಳ ಎರಡನೆ ತಲೆಮಾರಿನಲ್ಲಿಯ ರಾಗ-ದ್ವೇಷದಂತೆ ಕಂಡರೂ ಆ ಕುಟುಂಬಗಳ ಸಂಘರ್ಷ, ಕಲಹಗಳು ಇಲ್ಲಿ ಮುಖ್ಯವಾಗಿರುವುದಿಲ್ಲ."

ಇಲ್ಲಿ ಇಬ್ಬರು ನಿವೃತ್ತ ಸೈನಿಕರು ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಅಟ್ಟಲಿಕೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಅವರಿಬ್ಬರೂ ಸಂಸಾರಸ್ಥರಾಗಿದ್ದು, ಸುಂದರ ಜೀವನ ಅವರದ್ದು. ಒಬ್ಬನಿಗೆ ಲಿವೋ ಅನ್ನುವ ಒಂದು ಗಂಡು ಮಗು, ಮತ್ತೊಬ್ಬನಿಗೆ ಮೇರಿ ಅನ್ನುವ ಹೆಣ್ಣು ಮಗುವಿರುತ್ತದೆ. ಲಿವೋನ ತಾಯಿ ಅಸ್ವಸ್ಥದಿಂದ ಮರಣಿಸಿದ ಬಳಿಕ ಆತನನ್ನು ಮೇರಿಯ ತಾಯಿಯು ಬಹಳ ಕಾಳಜಿಯಿಂದ ಬೆಳೆಸುತ್ತಾಳೆ. ಪತ್ನಿ ವಿಯೋಗದಿಂದ ಲಿವೋನ ತಂದೆ ಜೂಜಾಟಕ್ಕೆ ಇಳಿದು ಆಸ್ತಿಯನ್ನೆಲ್ಲಾ ಕಳೆದುಕೊಂಡು ಕೊನೆಗೆ ಮನೆಯನ್ನು ಮೇರಿಯ ತಂದೆಯ ಬಳಿ ಅಡವಿಡುತ್ತಾನೆ. ಹುಟ್ಟಿನಿಂದ ಬಡವನಲ್ಲವಾದರೂ ಲಿವೋ ಬಡತನಕ್ಕೆ ಸಿಲುಕುತ್ತಾನೆ. ಆತ ಸ್ವಾಭಿಮಾನಿ. ತಂದೆಯ ಸಾಲದ ಹೊರೆಯಿದ್ದರೂ ಅದನ್ನು ತೀರಿಸಬೇಕೆನ್ನುವ ದೃಢ ನಿರ್ಧಾರವಿರುವವನು.

ಬದುಕು ಒಂದೇ ತೆರನಾಗಿರುವುದಿಲ್ಲ. ಕಾಲಕ್ರಮೇಣ ಲಿವೋನಂತೆಯೇ ಮೇರಿಯೂ ಕೂಡ ತಂದೆ- ತಾಯಿಯರನ್ನು ಕಳೆದುಕೊಂಡು ಅನಾಥಳಾಗುತ್ತಾಳೆ. ಲಿವೋ ಅವಳನ್ನು ಸಾಂತ್ವನಿಸುತ್ತಾನೆ.

ಆದರೆ ಲಿವೋನಿಗೆ ತಾನೊಬ್ಬ ಸಾಲಗಾರ; ತನ್ನ ಜೀವಿತದಲ್ಲಿ ಮೇರಿಯ ಸಾಲವನ್ನು ತೀರಿಸಿ ಋಣಮುಕ್ತನಾಗಬೇಕೆಂದು ಬಯಸುತ್ತಾನೆ. ಮೇರಿಯಾದರೂ ಶ್ರೀಮಂತಿಕೆಯಿಂದ ಮತ್ತು ಚೆಲುವಿನಿಂದ ರಾರಾಜಿಸುತ್ತಿರುತ್ತಾಳೆ. ಲಿವೋನೊಳಗಿರುವ ಕೀಳರಿಮೆಯೋ ಅಥವಾ ತಾಳ್ಮೆಯೋ ಅವನನ್ನು ಮೇರಿಯಿಂದ ದೂರವಿರುವಂತೆ ಮಾಡುತ್ತದೆ. ಮೇರಿಯಾದರೂ ಸ್ವತಂತ್ರಳು ಮತ್ತು ಅವಳಿಗೆ ಬೇಕಾದ ರೀತಿಯಲ್ಲಿ ಬದುಕುವವಳು. ಬರವಣಿಗೆಯ ಹುಚ್ಚು ಬೆಳೆಸಿಕೊಂಡ ಲಿವೋಗೆ ಅವಳ ಸ್ವಾತಂತ್ರ್ಯ ಮತ್ತು ಸ್ವಚಂದದ ಬದುಕು ಎಲ್ಲೋ ದಾರಿ ತಪ್ಪುತ್ತಿದೆಯೆಂದು ತಿಳಿಯುತ್ತದೆ. ಮೇರಿ ಒಮ್ಮೆ ಮಿತಿಮೀರಿ ಕುಡಿದು ಗೆಳೆಯರ ಜೊತೆಗೆ ಪಿಯಾನೋ ನುಡಿಸುತ್ತಾ ಇಡೀ ರಾತ್ರಿ ಕಳೆಯುವಾಗ ಲಿವೋ ಅವಳಿಗೆ ಬುದ್ಧಿಮಾತು ಹೇಳುತ್ತಾನೆ.

ಸುಖದ ದಾರಿಯನ್ನು ಸವೆಸಿಕೊಂಡ ಮೇರಿಗಾದರೂ ಲಿವೋನ ಬುದ್ಧಿವಾದ ಹೊರೆಯೆನಿಸಿ ಅವನನ್ನು ಅವಮಾನಿಸಿ, ತಿರಸ್ಕರಿಸುತ್ತಾಳೆ. ಅದಲ್ಲದೆ, ಒಳಗೊಳಗೆ ದ್ವೇಷದ ಕಿಚ್ಚನ್ನು ಹೊತ್ತಿಸಿಕೊಳ್ಳುತ್ತಾಳೆ. ಅವಳ ಉದ್ದೇಶವೇನಿದೆಯೆಂದರೆ ಹೇಗಾದರೂ ಸರಿಯೇ ಲಿವೋ ಅವಳಿಂದ ಅವಮಾನಿತನಾಗಬೇಕೆಂದು ಕಾಯುತ್ತಿರುತ್ತಾಳೆ.

ಲಿವೋ ಬಹಳ ತಾಳ್ಮೆಯ ಮತ್ತು ಸಹನಾಶೀಲ ವ್ಯಕ್ತಿತ್ವದವನು. ಮೇರಿಯ ಅಪಾರ್ಥವನ್ನು ಅರ್ಥೈಸಿಕೊಂಡು ಅವಳ ಮನೆಗೆ ಬಂದು ಹೋಗುವವರ ಗದ್ದಲಗಳನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಅವಳಿಗೆ ಬುದ್ಧಿವಾದ ಹೇಳುವುದು ಕೂಡ ನಿಶ್ಪ್ರಯೋಜಕವೆಂದು ತಿಳಿಯುತ್ತಾನೆ. ಆದರೆ ಅವಳು ಮರುದಿನ ಲಿವೋನ ಮನೆಗೆ ಬಂದು ಅವನನ್ನು ಕರೆಯುತ್ತಾಳೆ. ಲಿವೋ ಅವಳು ಕುಡಿದು ನಶೆ ಏರಿಸಿಕೊಂಡಿರುವುದನ್ನು ಗಮನಿಸಿ, ಕುಡಿಯುವುದನ್ನು ಕಡಿಮೆ ಮಾಡಬೇಕೆಂದು ಅವಳನ್ನು ಕೇಳುತ್ತಾನೆ. ಇದರಿಂದ ಕುಪಿತಳಾದ ಮೇರಿಯು ತಾನು ಕುಡಿದಿಲ್ಲವೆಂದು ವಾದಿಸುತ್ತಾಳೆ. ಆಗ ಲಿವೋ ಅವಳನ್ನು ಸುಧಾರಿಸಿಕೊ, ಇಲ್ಲ ಮನೆಗೆ ಹೋಗು ಎಂದು ಕಾಳಜಿಯಿಂದ ಹೇಳುತ್ತಾನೆ. ಇದರಿಂದ ಅವಮಾನಿತಳಾದ ಅವಳು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಹಗೆ ಸಾಧಿಸುವಂತೆ ಹಿಂತಿರುಗುತ್ತಾಳೆ.

ಹೀಗೆ ಮುಂದೊಂದು ದಿನ ತನ್ನ ಹುಟ್ಟು ಹಬ್ಬದ ದಿನದಂದು ಒಬ್ಬ ಜಾದೂಗಾರನನ್ನು ಕರೆಸಿ, ಅವನಿಂದ ಜಾದೂ ಪ್ರದರ್ಶನವನ್ನು ನಡೆಸಿಕೊಡುವಂತೆ ಕೋರುತ್ತಾಳೆ. ಆದರೆ ಆತ ಆ ದಿನ ಬರದೆ ಕೈಕೊಡುತ್ತಾನೆ. ಮೇರಿ ಅವಮಾನಿತಳಾಗಿ ಅಳುತ್ತಾಳೆ. ಈ ವಿಷಯ ತಿಳಿದ ಲಿವೋ ಅವಳ ಮನೆಗೆ ಬಂದು ಪಿಯಾನೋ ನುಡಿಸಿ ಸೇರಿದವರನ್ನು ರಂಜಿಸುತ್ತಾನೆ. ಆವರೆಗೆ ಅವಳಲ್ಲಿದ್ದ ದ್ವೇಷವೆಲ್ಲ ಕರಗಿ ಲಿವೋನನ್ನು ಅಪ್ಪಿ ಹಿಡಿದು ಅಳುತ್ತಾಳೆ. ಲಿವೋ ತನ್ನ ಸಾಲದ ಋಣದಿಂದ ಮುಕ್ತನಾಗಿದ್ದರೂ ಮೇರಿಯ ಪ್ರೀತಿಯಲ್ಲಿ ಕರಗಿ ಹೋಗುತ್ತಾನೆ. ಇದು ಕಥೆಯ ಸಂಕ್ಷಿಪ್ತ ರೂಪ.

ಈ ಕಾದಂಬರಿಯ ಕಾಲವಾಗಲಿ, ನಡೆಯುವ ಘಟನೆಯಾಗಲಿ ಈಗಿನ ಸಂದರ್ಭಕ್ಕೆ ಅಪ್ರಸ್ತುತವೆನಿಸುತ್ತದೆ. ಇಲ್ಲಿ ಕೇವಲ ಪ್ರೀತಿ, ದ್ವೇಷಗಳ ಬಗ್ಗೆ ಮಾತ್ರವಿರದೆ ಒಂದು ಅನೂಹ್ಯ ಸಂಬಂಧವನ್ನು ಬಿಚ್ಚಿಕೊಡುತ್ತದೆ. ಮೇಲ್ನೋಟಕ್ಕೆ ಕಥಾನಾಯಕ ನಾಯಕಿಯರು ನೆರೆಕರೆಯವರಾದರೂ ಅವರಲ್ಲಿ ಆ ಸಂಬಂಧಕ್ಕಿಂತಲೂ ಇಲ್ಲಿ ಅವರು ಮಾಮೂಲು ವ್ಯಕ್ತಿಗಳಾಗಿ ಗೋಚರಿಸುತ್ತಾರೆ. ಕೆಲವೇ ಕೆಲವು ಪಾತ್ರಗಳ ಮೂಲಕ ಅಭಿವ್ಯಕ್ತವಾಗುವ ಇಲ್ಲಿಯ ಪ್ರಸಂಗ ಹೆಚ್ಚು ಶ್ರಮವಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಪ್ರಯತ್ನಿಸಿದಲ್ಲಿ ಕೊರೆಲ್ ಇಂಗ್ಲೀಷ್ ಸಾಹಿತ್ಯದಲ್ಲಿರುವ ನಾಟಕಗಳಂತೆ ರಂಗಪ್ರದರ್ಶನಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ. ಇಲ್ಲಿಯ ಕಥೆಯನ್ನು ಓದುವಾಗ ಶೇಕ್ಸ್ಪಿಯರ್ನ ನಾಟಕಗಳ ನೆನಪಾಗದಿರದು. ಇಂತಹ ಅಪರೂಪದ ಕೃತಿಗಳನ್ನು ಹುಡುಕಿ ಓದುವುದರಿಂದ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಈ ಕೃತಿಯನ್ನ ಒಮ್ಮೆಯಾದರೂ ಓದಲೇಬೇಕು.

ಈ ಕೃತಿಯನ್ನು 1983 ರಲ್ಲಿ ಶ್ರೀ ಜನಾರ್ಧನ ಕುಲಕರ್ಣಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಸಮಾಜ ಪುಸ್ತಕಾಲಯ ಪ್ರಕಟಿಸಿದೆ.

Read more!

Thursday, January 27, 2011

ನೆಗೆಟಿವ್ ಪಾತ್ರಗಳ ಬೆಳವಣಿಗೆಯ ‘ಕವಲು’


ತಮ್ಮ ಇತರ ಕೃತಿಗಳಂತೆ ಎಸ್. ಎಲ್. ಬೈರಪ್ಪನವರ ‘ಕವಲು’ ಕಾದಂಬರಿ ಕೂಡ ಓದುಗರಲ್ಲಿ ಕುತೂಹಲ ಕೆರಳಿಸಿದ್ದು ಸುಳ್ಳಲ್ಲ. ಸಂಪ್ರದಾಯಸ್ಥ ಭಾರತೀಯ ಕುಟುಂಬ ವ್ಯವಸ್ಥೆ ಯಾವ ರೀತಿಯಲ್ಲಿ ಛಿದ್ರವಾಗುತ್ತಿದೆಯೆನ್ನುವುದು ಇಡೀ ಕಾದಂಬರಿಯ ಆಶಯವಾದರೆ; ಕಾನೂನಿನ ಪಾತ್ರ ಈಗಿನ ಕುಟುಂಬ ವ್ಯವಸ್ಥೆಯಲ್ಲಿ ಹೇಗೆ ದುರುಪಯೋಗವಾಗುತ್ತಿದೆಯೆನ್ನುವುದನ್ನು ಈ ಕೃತಿ ಎತ್ತಿ ಹಿಡಿದಿರುವುದು ಕೃತಿಯ ಹೆಗ್ಗಳಿಕೆಗೆ ಕಾರಣವಾಗಿದೆ.

ಹಿಂದೆಯಿದ್ದ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಶೋಷಣೆಯೇ ಇಲ್ಲಿ ‘ಮೇಲ್ ಡೋಮಿನೇಟಿಂಗ್’ ಆಗಿರುವುದು ಗಮನಾರ್ಹ. ಹೊಂದಿಕೊಳ್ಳುವ ಗುಣವನ್ನು ಪರಿತ್ಯಜಿಸಿ ಪ್ರತೀಯೊಂದನ್ನೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಾ, ಕೀಳರಿಮೆ ಬೆಳೆಸಿಕೊಂಡ ಒಂದು ವರ್ಗ, ಆ ವರ್ಗದಲ್ಲಿಯ ಮುಗ್ಧತೆಯನ್ನು ಬಳಸಿಕೊಂಡು ಸ್ವಾರ್ಥದಿಂದ ವಂಚಿಸುವ ಇನ್ನೊಂದು ವರ್ಗದ ಕ್ಲ್ಯಾಷ್ಗಳಿಗೆ ಕಾನೂನು ಯಾವ ರೀತಿ ದುರು(ಉ)ಪಯೋಗಕ್ಕೆ ಬರುವುದೆನ್ನುವುದನ್ನು ಕೂಡ ತಿಳಿಸಿಕೊಡುವ ಪ್ರಯತ್ನ ಈ ಕೃತಿಯಲ್ಲಿ ಅಭಿವ್ಯಕ್ತವಾಗಿದೆ. ಆಧುನಿಕ ಸಮಾಜದಲ್ಲಿ ಕುಟುಂಬಗಳು ರೂಪಾಂತರವಾಗುವುದನ್ನು ಮತ್ತು ಬದುಕು ಹೊಸ ಸಮಸ್ಯೆಗಳಿಗೆ ಒಡ್ಡಿಕೊಳ್ಳುವಾಗಿನ ತಲ್ಲಣಗಳನ್ನು ಕಾದಂಬರಿ ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಸುಧಾರಿತ ನ್ಯಾಯ ವ್ಯವಸ್ಥೆಯ ಉಪಯೋಗವನ್ನು ದುರುಪಯೋಗಕ್ಕೆ ಬಳಸಿಕೊಂಡು ಸಾಂಸಾರಿಕ ಜೀವನದಲ್ಲಿ ವೈರತ್ವ, ಹಗೆ ಸಾಧನೆಯಲ್ಲಿ ತೊಡಗಿಕೊಂಡು ಪಾತ್ರಗಳು ಒಂದು ರೀತಿಯಲ್ಲಿ ನೆಗಟಿವ್ ಆಗಿ ಬೆಳವಣಿಗೆ ಪಡೆದಿವೆ."

ಈ ಕಾದಂಬರಿಯಲ್ಲಿ ಜಯಕುಮಾರ- ವೈಜಂತಿಯ ಸುಂದರ ಸಂಸಾರ ವೈಜಂತಿಯ ಸಾವಿನಿಂದ ಅಲ್ಲೋಲ ಕಲ್ಲೋಲವಾಗುತ್ತದೆ. ಜಯಕುಮಾರ ತನ್ನ ಮಡದಿಯ ಸಾವಿನ ಬಳಿಕ ಮನುಷ್ಯ ಸಹಜ ಕಾಮನೆಗಳಿಗೆ ಈಡಾಗಿ ಒಂದು ರೀತಿಯ ಮನೋವ್ಯಾಕುಲತೆಗೆ ತುತ್ತಾಗುತ್ತಾನೆ. ಇಲ್ಲಿ ಈ ಎರಡೂ ಪಾತ್ರಗಳು ಆದರ್ಶ ಪಾತ್ರಗಳಾದರೆ ವೈಜಯಂತಿಯ ಪಾತ್ರ ನೇಪಥ್ಯದ ಹಿಂದಿದ್ದು ಜಯಕುಮಾರನ ಪಾತ್ರ ಮಾತ್ರ ಬೆಳವಣಿಗೆ ಹೊಂದುತ್ತದೆ. ಹಾಗಾಗಿ ಇಡೀ ಕಾದಂಬರಿಯಲ್ಲಿ ಒಳ್ಳೆಯ ಪಾತ್ರವೊಂದು ತೆರೆಮರೆಯಲ್ಲಿದ್ದು, ಬೆಳವಣಿಗೆ ಪಡೆಯದೆ ಉಳಿದ ಪಾತ್ರಗಳ ಕಣ್ಣಿನಲ್ಲಿ ಮಾತ್ರ ಕಾಣಿಸುತ್ತ ಗೌಣವಾಗಿ ಬಿಡುತ್ತದೆ. ಇಲ್ಲಿಯ ನೆಗೆಟಿವ್ ಪಾತ್ರಗಳ ವರ್ಣನೆ ‘ಸ್ತ್ರೀ ಪರ’ ಯಾ ‘ಸ್ತ್ರೀ ವಿರೋಧಿ’ ಕಾದಂಬರಿಯಂತೆ ಕಂಡರೆ ಅಚ್ಚರಿಯೇನಿಲ್ಲ.

ವಿವಾಹಪೂರ್ವ ಲೈಂಗಿಕ ಸಂಬಂಧಕ್ಕೆ ತೊಡಗುವ ಮಂಗಳೆಗೆ ಸ್ತ್ರೀ ಚಳುವಳಿಯ ರೂವಾರಿಗಳಾದ ಮಾಲಾ ಕೆರೂರು, ಚಿತ್ರಾ ಹೊಸೂರು, ಇಳಾರಂತವರು ‘ಮಾಡೆಲ್’ ಆಗಿಯೂ ಅವಳ ವೈಯಕ್ತಿಕ ಮತ್ತು ಲೈಂಗಿಕ ಸ್ವಾತಂತ್ರ್ಯಕ್ಕೆ ಧೈರ್ಯ ನೀಡುತ್ತರೆಂದರೆ ಸುಳ್ಳಲ್ಲ. ಇಲ್ಲಿ ನೈತಿಕ ಅಧ:ಪತನಕ್ಕೆ ಕುಸಿಯುವ ಪಾತ್ರಗಳು ‘ಕ್ರಾಂತಿ’ಕಾರಿಗಳಾಗಿ ಕಾಣುತ್ತವಾದರೂ ಇವೆಲ್ಲಾ ವಿಕೃತ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಒಂದು ಮಾರ್ಗ ಕಂಡುಕೊಳ್ಳುವ ಪಾತ್ರಗಳೇ ಆಗಿವೆ.

ಕಾಲೇಜು ದಿನಗಳಲ್ಲಿ ಪ್ರಭಾಕರನಿಂದ ಶೋಷಣೆಗೊಳಗಾದ ಮಂಗಳೆ ವೃತ್ತಿ ಜೀವನದಲ್ಲಿ ಜಯಕುಮಾರನಿಂದಲೂ ಲೈಂಗಿಕ ಶೋಷಣೆಗೊಳಗಾದರೂ ಪ್ರಭಾಕರನನ್ನು ಮರೆತು ಜಯಕುಮಾರನನ್ನು ಒಪ್ಪಿಕೊಳ್ಳುವುದು ಕೇವಲ ಅವನ ಆಸ್ತಿಯನ್ನು ಅನುಭವಿಸುವುದಕ್ಕಾಗಿ ಮಾತ್ರ. ಇದು ಸ್ಪಷ್ಟವಾಗುವುದು ತನ್ನ ಗಂಡ ಜಯಕುಮಾರನ ವಿರುದ್ಧವೇ ಕಾನೂನಿನ ಮೊರೆ ಹೊಕ್ಕು ಲೈಂಗಿಕ ತೃಷೆಗಾಗಿ ಮತ್ತೆ ಪ್ರಭಾಕರನನ್ನು ಬಯಸುವಲ್ಲಿ. ಹರೆಯಕ್ಕೆ ಬಂದ ಬುದ್ಧಿ ಮಾಂದ್ಯ ಮಗಳು ಪುಟ್ಟಕ್ಕನನ್ನು ಅನುಕಂಪದ ದೃಷ್ಟಿಯಿಂದಲೋ, ಮಮಕಾರದಿಂದಲೋ, ವಾತ್ಸಲ್ಯದಿಂದಲೋ ಮುದ್ದಿಸುವ ಜಯಕುಮಾರನನ್ನು ಅರ್ಥೈಸಿಕೊಳ್ಳದ ಮಂಗಳೆ ಅವನಲ್ಲಿ ಎಲ್ಲವೂ ದೋಷಗಳೇ ಇವೆಯೆಂದುಕೊಳ್ಳುತ್ತಾಳೆ. ಇದು ಮಾನವೀಯ ಅಂತ:ಕರಣವಿಲ್ಲದ ಅವಳ ಮನಸ್ಥಿತಿ ಮಾತ್ರ.

ಕಾದಂಬರಿಯ ಕೊನೆಯಲ್ಲಿ ನಚಿಕೇತ ಪುಟ್ಟಕ್ಕನನ್ನು ಮದುವೆಯಾಗಿ ಆದರ್ಶವಂತನೆನಿಸಿಕೊಂಡರೂ ಒಂದು ರೀತಿಯಲ್ಲಿ ಅವನು ಈ ಹಿಂದೆ ಎರಡು ಮದುವೆಯಾಗಿ ನಲುಗಿದವನು. ಒಟ್ಟು ವ್ಯವಸ್ಥೆಯ ಒತ್ತಡದಿಂದ ಹೊರಗೆ ಬರುವಲ್ಲಿ ಅವನಿಗೆ ಜಯಕುಮಾರನ ತಾಯಿ ಅಂದರೆ ಅವನ ಅಜ್ಜಿ ಮತು ದ್ಯಾವಕ್ಕ ,ಪುಟ್ಟಕ್ಕನ ಮದುವೆಯ ಪ್ರಸ್ತಾಪ ಮಾಡುತ್ತಾ ಸಹಾಯವಾಗುತ್ತಾರೆ.

ಆಧುನಿಕತೆಯನ್ನು ಒಗ್ಗಿಸಿಕೊಂಡ ಇಳಾಲಾಗಲಿ, ಮಂಗಳೆಯಾಗಲಿ ಏನನ್ನೂ ಪಡೆದುಕೊಳ್ಳದೆ ಹತಾಶರಾಗುತ್ತಾರೆ. ಕಾನೂನಿನ ಮೊರೆ ಹೊಕ್ಕರೆ ಅದು ಅವರನ್ನೇ ಶಿಕ್ಷಾರ್ಹರೆಂದು ಬೆಟ್ಟು ಮಾಡಿ ತೋರಿಸುವ ಸನ್ನಿವೇಶವೇ ಎದುರಾಗುತ್ತದೆ. ಹೀಗೆ ಆಧುನಿಕ ಸಮಾಜ ವ್ಯವಸ್ಥೆಯಲ್ಲಿ ಕಾನೂನು ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ಮತ್ತು ಅದು ಯಾವ ರೀತಿ ದುರುಪಯೋಗವಾಗುತ್ತದೆಯೆನ್ನುವುದು ಇಡೀ ಕಾದಂಬರಿಯಲ್ಲಿ ಅಡಕವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಕಾನೂನನ್ನು ತಿಳಿದುಕೊಳ್ಳುವುದಕ್ಕಾದರೂ ಒಮ್ಮೆ ಈ ಕಾದಂಬರಿಯನ್ನು ಓದಲೇಬೇಕು.

Read more!

Saturday, January 15, 2011

ಮಂಜುಳಾ, ಶಂಕರ್ ನಾಗ್ ಅಭಿನಯದ ‘ಸೀತಾ ರಾಮು’


ನಮ್ಮೂರು ಬೆಳ್ಳೆಯ ಪಕ್ಕದ ಊರು ಕುಂಜಾರುಗಿರಿ. ಅದನ್ನು ದುರ್ಗಾ ಬೆಟ್ಟವೆಂದು ಕೂಡ ಕರೆಯುತ್ತಾರೆ. ಕುಂಜರ ಅಂದರೆ ಆನೆ. ಮುಂಭಾಗದಿಂದ ಆನೆಯ ಹಾಗೆ ಕಾಣುವ ಗಿರಿಗೆ `ಕುಂಜಾರುಗಿರಿ' ಎಂಬ ಹೆಸರು ಬಂದಿದೆ ಅನ್ನುವ ಪ್ರತೀತಿ ಇದೆ.

ಅದು ಆಚಾರ್ಯ ಮಧ್ವರ ಜನ್ಮಸ್ಥಳವಾದ ಪಾಜಕಾಕ್ಷೇತ್ರದಿಂದ ಒಂದುವರೆ ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಎರಡು ಗುಹೆಗಳಿದ್ದು ಅವುಗಳಲ್ಲಿ ಒಂದು ಗುಹೆ ಕುಂಜಾರುಗಿರಿ ಬೆಟ್ಟದ ಪಶ್ಚಿಮದ ದಿಕ್ಕಿಗಿರುವ ಪರಶುರಾಮ ಕ್ಷೇತ್ರದ ಗರ್ಭ ಗುಡಿಯಲ್ಲಿ ಹೊರಗೆ ಬರುತ್ತದೆಯೆಂದು ಬಹಳ ವರ್ಷಗಳ ಹಿಂದೆಯೆ ರಾಮಕೃಷ್ಣ ಭಟ್ಟರೆನ್ನುವ ಸಾಹಸಿಯೊಬ್ಬರು ಪತ್ತೆ ಹಚ್ಚಿದ್ದಾರೆಂದು ನಮಗೆ ಗೊತ್ತಿತ್ತು. ಆದರೆ ಈ ಗುಹೆ ಪ್ರವೇಶ ಧ್ವಾರದಲ್ಲಿ ತೆವಳಿಕೊಂಡು ಹೋಗುವ ಹಾಗೆ ಇದ್ದು, ಮುಂದೆ ನೇರವಾಗಿ ನಿಂತು ನಡೆಯಬಹುದಾದಷ್ಟು ಅಗಲವಾಗಿದೆಯಂತೆ. ನಿರಂತರ ಬಾವಲಿಗಳ ಹಾರಾಟದಿಂದ ಅಲ್ಲಿ ನಿಲ್ಲುವುದು ಕೂಡ ಅಸಾಧ್ಯವೆನ್ನುವ ಹಾಗಿದೆ. ಅದಲ್ಲದೆ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಈ ಕುಂಜಾರುಬೆಟ್ಟವನ್ನು ಏರಿ ವಿಹಂಗಮ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಬೆಟ್ಟಕ್ಕೆ ನಾಲ್ಕು ಕಡೆಯಿಂದಲೂ ದಾರಿಯಿದ್ದು. ಪೂರ್ವದಲ್ಲಿ ದೊಡ್ಡ ಪಾದೆಯನ್ನು ಏರಿ ಬರಬೇಕು. ಅಲ್ಲಿಂದ ಮೇಲೇರಿ ಬರುವಾಗ ಆಳವಾದ ಕಣಿವೆಯಂತಹ ನೋಟವನ್ನು ನೋಡುವಾಗ ಒಂದು ರೀತಿಯ ಪುಳಕವಾಗುತ್ತದೆ. ಪಶ್ಚಿಮಕ್ಕೆ ನಾಲ್ಕುನೂರು ಮೆಟ್ಟಿಲುಗಳು, ದಕ್ಷಿಣ ಭಾಗದಲ್ಲಿ ಕಡಿದಾದ ಮೆಟ್ಟಿಲುಗಳು ಮತ್ತು ಉತ್ತರ ಭಾಗದಲ್ಲಿ ಮಣ್ಣಿನ ಮೆಟ್ಟಿಲುಗಳಿವೆ. ಅಲ್ಲಿ ಒಂದಲ್ಲಾ ಒಂದು ಸಿನೆಮಾದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ."

ನಾವು ಹೈಸ್ಕೂಲ್ಗೆ ಹೋಗಬೇಕಾದರೆ ಒಂದೋ ಇನ್ನಂಜೆ ಅಥವಾ ಮೂಡುಬೆಳ್ಳೆಗೆ ಹೋಗಬೇಕಿತ್ತು. ಮೂಡುಬೆಳ್ಳೆಗೆ ನಮ್ಮೂರಿನಿಂದ ಸೇತುವೆ ಸಂಪರ್ಕವಿಲ್ಲದಿದ್ದರಿಂದ ಮಳೆಗಾಲಕ್ಕೆ ನೆರೆ ಬಂದು ನಮ್ಮೂರ ನದಿ, ಪಾಪನಾಶಿನಿಯನ್ನು ದಾಟುವುದು ಅಸಾಧ್ಯ. ತರಗತಿಗೆ ಬಂಕ್ ಹೊಡಯಲೇಬೇಕು. ದೋಣಿಯ ಪ್ರಯಾಣವಿದ್ದರೂ ನೆರೆಗೆ ಅಸಾಧ್ಯ. ನಮ್ಮೂರಿನ ನೆರೆಯೆಂದರೆ ಬೆಟ್ಟು ಗದ್ದೆಯವರೆಗೂ ನೀರು ಏರುವುದುಂಟು ಮತ್ತು ಒಂದು ವಾರವಾದರೂ ನೆರೆಯ ನೀರು ಇಳಿಯುವುದಿಲ್ಲ. ಎಲ್ಲಿ ನೋಡಿದರೂ ಕಾಡಿನ ನೀರು ಗುದ್ದಳಿಸಿ ಕೆಸರು ನೀರಿನಿಂದ ಕೂಡಿದ ಅಲೆಗಳ ಮತ್ತು ನೀರಿನ ಪ್ರವಾಹದ ನೆರೆ ಅದು. ಹಾಗಾಗಿ ನಾವು ಇನ್ನಂಜೆ ಹೈಸ್ಕೂಲನ್ನು ಸೇರುವುದು ಅನಿವಾರ್ಯವಾಗಿತ್ತು. ಅಲ್ಲಿಗೆ ಬಸ್ಸಿನ ವ್ಯವಸ್ಥೆಯಾಗಲಿ ಇನ್ಯಾವುದೇ ವಾಹನಗಳ ವ್ಯವಸ್ಥೆಯೂ ಇರಲಿಲ್ಲ. ನಡಿಗೆಯಿಂದಲೆ ನಾಲ್ಕೈದು ಮೈಲು ನಡೆದು ಹೋಗಬೆಕು.

ಶಾಲೆಗೆ ಹೋಗುವ ದಾರಿಯಲ್ಲಿ ಅಂದರೆ ಕುಂಜಾರುಗಿರಿಯ ಪಕ್ಕದಲ್ಲಿಯೆ ದೊಡ್ಡ ಪಾದೆಯನ್ನು ಇಳಿಯಬೇಕಿತ್ತು. ಆ ಪಾದೆಗೆ `ನಿನ್ನಿ ಪಾದೆ' ಎಂದು ಹೆಸರು. ನಿನ್ನಿ ಅಂದರೆ ತುಳುವಿನಲ್ಲಿ ಎದುರು ಮಾತನಾಡುವುದು ಎಂಬ ಅರ್ಥವಿದೆ. ಈ ಪಾದೆಯ ಕೆಳಗೆ ನಿಂತು ಮಾತನಾಡಿದರೆ ಅದು ಎರಡು ಬಾರಿ ಪ್ರತಿಧ್ವನಿಸುತ್ತದೆ. ಅದಕ್ಕಾಗಿ ನಿನ್ನಿಪಾದೆಯೆಂದು ಹೆಸರು ಬಂದಿರಬಹುದು. ಈ ಪಾದೆಯನ್ನು ಏರಬೇಕಾದರೆ ಒಂದು ಕಟ್ಟು ಕಡ್ಲೆಕಾಯಿ ಬೇಕೆನ್ನುವುದು ಆಗಿನ ಹುಡುಗರ ಜೋಕು. ಈಗ ಕಲ್ಲು ಗಣಿಗಾರಿಕೆಯಿಂದ ಬಂಡೆ ಕರಗಿದೆ. ಆಗಿನ ಅದರ ಭವ್ಯತೆ ಈಗ ಇಲ್ಲ!
ಕುಂಜಾರುಗಿರಿ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರವಂತೂ ತುಂಬಾ ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ಅಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯೂ ಅಷ್ಟೆ. ಎಲ್ಲೆಂದಿಲೋ ದೇವರ ದರ್ಶನ ಮಾಡುವುದಕ್ಕೆ ಬರುತ್ತಾರೆ. ಆಗ ಒಂದು ದೊಡ್ಡ ಜಾತ್ರೆಯೆ ಅಲ್ಲಿ ನೆರೆಯುವುದುಂಟು. ಕೆಲವೊಮ್ಮೆ ಐದು ಶುಕ್ರವಾರಗಳು ಇನ್ನು ಕೆಲವೊಮ್ಮೆ ನಾಲ್ಕು ಶುಕ್ರವಾರಗಳು ಬರುವುದಿದೆ. ಐದು ಶುಕ್ರವಾರವಾದರೆ ಹೆಣ್ಣು ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ಕೈತುಂಬಾ ಬಣ್ಣ ಬಣ್ಣ ಗಾಜಿನ ಬಳೆಗಳನ್ನಿಟ್ಟು, ಬಗೆಬಗೆಯ ಬಿಂದಿ, ಅಲಂಕಾರಿಕ ವಸ್ತುಗಳನ್ನು ಕೊಂಡು ಸಂಭ್ರಮಿಸುವುದಲ್ಲದೆ, ಮಂಡಕ್ಕಿ(ಕುರ್ಲರಿ), ಸಕ್ಕರೆ ಕಡ್ಡಿ ಮಿಠಾಯಿ, ಐಸ್ಕ್ಯಾಂಡಿಗಳನ್ನು ತೆಗೆದುಕೊಂಡು ಬಂಡೆಯ ಒಂದು ಕಡೆಗೆ ಮರದ ನೆರಳಿನ ಅಡಿಯಲ್ಲಿ ಕುಳಿತು ತಿನ್ನುವುದು ಕೂಡ ಒಂದು ರೀತಿಯ ಮಜಾ ಅನಿಸುತ್ತಿತ್ತು. ಈ ಮಜಾವನ್ನು ಅನುಭವಿಸುವುದಕ್ಕಾಗಿಯೆ ಕೆಲವರು ಬರುವುದುಂಟು.

ಶ್ರಾವಣ ಶುಕ್ರವಾರಕ್ಕೆ ದುರ್ಗಾ ದೇವಿಗೆ ಕರಿಯ ಬಳೆ (ಕರಿಯ ಕಾಜಿ) ಹೇರಳವಾಗಿ ಹರಕೆಯ ರೂಪದಲ್ಲಿ ಹಾಕುವುದುಂಟು. ಸಂಜೆಯ ಹೊತ್ತು ಹೆಣ್ಮಕ್ಕಳೆಲ್ಲ ಶಾಲೆ ಮುಗಿಸಿ ಬಳೆಗಳ ಆಸೆಗೆ ದೇವಸ್ಥಾನಕ್ಕೆ ಹೋಗಿ ಮುಜುಗರ ಪಟ್ಟುಕೊಂಡು ಬಳೆಗಾಗಿ ಕಾಯುವುದು ಇದೆ. ಅಲ್ಲಿ ಒಂದು ಕಡೆ ಹರಕೆಗೆ ಬಂದ ಬಳೆಗಳನ್ನು ರಾಶಿ ಹಾಕಿಡುತ್ತಿದ್ದರು. ದೇವಸ್ಥಾನದ ಆಡಳಿತದವರ ಅಥವಾ ಅರ್ಚಕರ ಅನುಮತಿಯ ಮೇರೆಗೆ ಹೆಣ್ಮಕ್ಕಳೆಲ್ಲ ಅವರವರ ಕೈಯಳತೆಗೆ ಸರಿಯಾದ ಬಳೆಗಳನ್ನು ಆರಿಸಿಕೊಂಡು ಕೈತುಂಬಾ ಕರಿಯ ಬಳೆಗಳನ್ನು ಹಾಕಿಕೊಂಡು ಸಂತೋಷಪಡುವುದು ಸಾಮಾನ್ಯ ಸಂಗತಿಯಲ್ಲ. ಯಾಕೆಂದರೆ ಒಂದೆಡೆ ದೇವರ ಬಳೆ ಅನ್ನುವ ಭಕ್ತಿಭಾವ ಇನ್ನೊಂದೆಡೆ ದುಡ್ಡು ಕೊಟ್ಟರೂ ಕೈ ತುಂಬಾ ಬಳೆ ಇಡುವುದಕ್ಕೆ ಸಾಧ್ಯವಾಗದ ಆಗಿನ ಬಡತನ.
ಒಮ್ಮೆ ಹೆಣ್ಮಕ್ಕಳೆಲ್ಲಾ ಹಾಗೆ ಬಳೆ ತರುವುದಕ್ಕೆ ಅಲ್ಲಿಗೆ ಹೋದಾಗ ಅಲ್ಲೇನೋ ಪರವೂರಿನಜನ ಮಹಜರು ನಡೆಸುವಂತೆ ಸುತ್ತೆಲ್ಲಾ ನಿಂತು ಏನೋ ಎಲ್ಲಾ ಮಾತಾಡಿಕೊಳ್ಳುತ್ತಿದ್ದರಂತೆ. ಆಗ ಬಳೆ ತರುವುದಕ್ಕೆ ಹೋಗಿದ್ದ ಆ ಹುಡುಗಿಯರ ಗುಂಪಿನಲ್ಲಿ ನನ್ನಕ್ಕ ಕೂಡ ಇದ್ದರು. ಅಲ್ಲಿಯ ಅರ್ಚಕರು ಅಲ್ಲಿಗೆ ಮಂಜುಳಾ (ಶಂಕರ್ನಾಗ್ ಆಗ ಅಷ್ಟು ಜನಪ್ರಿಯರಾಗಿರಲಿಲ್ಲ!) ಬರುವ ಸುದ್ದಿ ತಿಳಿಸಿದರು. ಅಕ್ಕ ವಿಷಯ ತಿಳಿದು ಮನೆಗೆ ಬಂದು, ನಾಳೆ ಕುಂಜಾರಿಗೆ ಚಿತ್ರ ನಟಿ ಮಂಜುಳಾ ಬರ್ತಾರಂತೆ ಅಂದಿದ್ದೆ. ಮನೆಯಲ್ಲಿ ಅದರ ವಿಷಯವೆ ಮಾತುಕತೆಯಾಗುತ್ತಿತ್ತು. ಸಿನಿಮಾದವರು ಸುಮ್ಮನೆ ಬರ್ತಾರೆಯೆ? ಎಲ್ಲೋ ಶೂಟಿಂಗ್ ಇರಬಹುದು ಅಂತ ಅಮ್ಮ ಊಹಿಸಿದ್ರೆ, ಹೈಸ್ಕೂಲ್ಗೆ ಹೋಗ್ತಿದ್ದ ಅಣ್ಣ, ನಾಳೆ ಶಂಕರ್ನಾಗ್ ಮಂಜುಳಾ ಕುಂಜಾರುಗಿರಿಗೆ ಶೂಟಿಂಗ್ಗೆ ಬರ್ತಾರಂತೆ ಅಂದಿದ್ದೆ ಅದು ಅಪ್ಪನ ಕಿವಿಗೆ ಬಿದ್ದು, ಅಯ್ಯೋ ಮಾರಾಯ! ಇನ್ನು ಶಾಲೆ ಬಂಕ್ ಹಾಕ್ಲಿಕ್ಕೆ ಊಂಟಾ? ಅಂದಾಗ ಅವನು ಬಾಯಿಮುಚ್ಚಿ ಕುಳಿತ. ನಮ್ಮ ಅಪ್ಪ ಆಗ ಮಧುರೈಯಲ್ಲಿದ್ದ ಹೊಟೇಲನ್ನು ಮುಚ್ಚಿ ಊರಿಗೆ ಬಂದು ಎರಡು ಮೂರು ವರ್ಷಗಳಾಗಿರಬಹುದು. ಅಣ್ಣ ಮತ್ತು ಅಕ್ಕಂದಿರ ಎಜುಕೇಶನ್ ಅಲ್ಲಿಯೆ ಆಗಿದ್ದರಿಂದ ಇಲ್ಲಿ ಕನ್ನಡ ಮಾಧ್ಯಮ ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ನಮ್ಮಣ್ಣನಿಗೆ ಲಾಂಗ್ವೇಜ್ ಪ್ರಾಬ್ಲಂ ಇದ್ದುದ್ದರಿಂದ ಅವನಿಗೆ ಶಾಲೆಗೆ ಹೋಗುವುದೆಂದರೆ ಅಷ್ಟಕಷ್ಟೆ. ಅದಲ್ಲದೆ ಶಾಲೆಗೆ ನಾಲ್ಕು ಮೈಲು ಬರಿ ಗಾಲಿನಲ್ಲಿ ನಡೆದುಕೊಂಡು ಹೋಗಿಬರಬೇಕಾದ ಪರಿಸ್ಥಿತಿ. ಹೋಗಿ ಬರಬೇಕಾದ ಸಂಕಟ ಒಂದೆಡೆ; ಕನ್ನಡ ಬರುವುದಿಲ್ಲವೆಂದು ಪೆಟ್ಟು ತಿನ್ನಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಅದಕ್ಕಾಗಿ ಅವನು ಶಾಲೆಗೆ ಹೊರಟರೂ ಗುಡ್ಡದಲ್ಲೋ, ಇನ್ನೆಲ್ಲೋ ಕುಳಿತು ಸಂಜೆ ಆರು ಏಳು ಗಂಟೆಗೆಲ್ಲಾ ಮನೆಗೆ ಬರುತ್ತಿದ್ದ. ಹಾಗಾಗಿ ಅವನು ಶಾಲೆಗೆ ಹೋಗುವುದಿಲ್ಲವೆಂದರೆ ಅಪ್ಪನ ಬೈಗುಳ, ಹೊಡೆತವಿದ್ದೇ ಇರುತ್ತಿತ್ತು.
ಅವನು ಅಪ್ಪನ ಹೆದರಿಕೆಯಿಂದ ಸುಮ್ಮನಾದರೂ ಅಕ್ಕ ಸುಮ್ಮಿನಿರದೆ, ಮಂಜುಳಾ ಬರುವುದಾದರೆ ನಾವು ನೋಡಲೆಬೇಕು ಎಂದು ಹಠ ಮಾಡಿದಾಗ ಅಮ್ಮ ಗದರಿಸಿ ಸುಮ್ಮನಾಗಿಸಿದರು. ಆದರೂ ಮರುದಿನ ಆ ದಾರಿಯಿಂದ ಶಾಲೆಗೆ ಹೋದಾಗ ಅಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿರುದನ್ನು ನೋಡಿ ಹುಡುಗಿಯರೆಲ್ಲಾ ಶಾಲೆಗೆ ಬಂಕ್ ಹೊಡೆದು ಅಲ್ಲಿ ಹಾಜರ್!
ಮಂಜುಳಾರನ್ನು ನೋಡುವ ಉತ್ಸಾಹದಿಂದ ಅಲ್ಲಿ ಹೋದಾಗ ಆಕೆ ದೂರದಲ್ಲಿ ನೀಲಿ ಜರತಾರಿ ಸೀರೆಯುಟ್ಟು ವಧುವಿನಂತೆ ಅಲಂಕಾರ ಮಾಡಿಕೊಂಡು ಒಂದು ಚೇರ್ನಲ್ಲಿ ಕುಳಿತು ಮೇಕಪ್ ಸರಿ ಮಾಡುತ್ತಿದ್ದರಂತೆ. ಇನ್ನೊಂದೆಡೆ ಶಂಕರ್ನಾಗ್ಗೆ ನಿರ್ದೇಶಕರು ದೇವಸ್ಥಾನದ ಮೆಟ್ಟಿಲಿನ ಬಳಿ ನಿಂತು ಸನ್ನಿವೇಶವನ್ನು ವಿವರಿಸುತ್ತಿದ್ದರಂತೆ. ಮಂಜುಳಾರನ್ನು ಹತ್ತಿರದಿಂದ ನೋಡುವ ಆಸೆಯಿಂದ ಅಲ್ಲಿಗೆ ಹೋದರೂ ಜನ ಮುತ್ತಿಗೆ ಹಾಕಿದ್ದರಿಂದ ನೋಡಲಾಗದೆ ಬೆಟ್ಟದ ಕೆಳಗೆ ನಿಂತು, ಇಣುಕಿ ಇಣುಕಿ ಶೂಟಿಂಗ್ ನೋಡುತ್ತಾ ನಿಂತರಂತೆ.

ಎರಡು ಹಾಡಿನ ಸನ್ನಿವೇಶಗಳು ಮತ್ತು ಕೆಲವೊಂದು ದೃಶ್ಯಗಳನ್ನು ಕುಂಜಾರುಗಿರಿಯ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿತ್ತು. ಅದರಲ್ಲೂ ಚಿತ್ರದಲ್ಲಿ ಸೀತಾ ಮದುವೆಯ ಕನಸು ಕಾಣುತ್ತಾ ಇರುವಾಗ ರಾಮುವನ್ನು ರೌಡಿಗಳು ಸಾಯಿಸಿದ ಮೇಲೆ ಅವಳ ತಂದೆಯೂ ಆಘಾತದಿಂದ ಸಾಯುತ್ತಾರೆ. ಅವಳು ಮತಿಭ್ರಮಣೆಗೊಂಡು ಹಾಡುವ ಸಂದರ್ಭ `ಬಂದೇ ಬರುತ್ತಾನೆ' ಹಾಡು. ಈ ಚಿತ್ರದ ಜನಪ್ರಿಯ ಹಾಡುಗಳಲ್ಲೊಂದಾದ ಇದು ಮಂಜುಳಾರವರಿಗೆ ಹೆಸರು ತಂದುಕೊಟ್ಟ ಹಾಡು ಕೂಡ ಹೌದು.

ಬಂದೇ ಬರುತ್ತಾನೆ ರಾಮ ಬಂದೇ ಬರುತ್ತಾನೆ
ಬಂದ ಒಡನೆಯೆ ಸೀತೆಯ ಕಂಡು ರಾಣಿ ಅನುತ್ತಾನೆ...

ತಾಳಿಯ ತರುತ್ತಾನೆ ರಾಮ ಚಿನ್ನದ ಬಳೆಗಳ ತರುತ್ತಾನೆ
ಮದುವೆಯಾಗಿ ತನ್ನರಮನೆಗೆ ಬಾರೆ ಅನುತ್ತಾನೆ...

ಹಾಡು ಹೇಳುತಾನೆ ರಾಮ ಪ್ರೀತಿಯ ಮಾತನಾಡುತಾನೆ
ಯಾರು ಇಲ್ಲ, ಬಾ ಚಿನ್ನ ಎಂದು ಸವಿ ಮುತ್ತನು ಕೊಡುತ್ತಾನೆ...

ಅರ್ಧದಷ್ಟು ಈ ಹಾಡಿನ ಚಿತ್ರೀಕರಣವಾಗಿರುವುದು ಕುಂಜಾರುಗಿರಿ ದೇವಸ್ಥಾನದ ಮುಂಭಾಗದಲ್ಲಿ. ಇದೇ ಚಿತ್ರದ ಇನ್ನೊಂದು ಜನಪ್ರಿಯ ಹಾಡು `ಹೂವಿನ ಸೊಗಸು ನನಗಾಗಿ ಆ ಹೂವೇ ನಿನ್ನ ಪೂಜೆಗಾಗಿ' ಹಾಡಿನ ಕೊನೆಯ ಸಾಲುಗಳು,

ಹೂವಿನ ಸೊಗಸು ನನಗಾಗಿ, ಆ ಹೂವೇ ನಿನ್ನ ಪೂಜೆಗಾಗಿ
ಹೂವಿನ ಸೊಗಸು ನಿನಗಾಗಿ, ಈ ಹೂವಿನ ಮೊಗವು ನನಗಾಗಿ

ಸನಿಹಕೆ ಬರುತಿರೆ, ಬಯಕೆಯು ಕುಣಿದಿರೆ
ಚೆಲುವನೆ ನಾ ತಾಳೆನು
ಬಳಸಲು ತೋಳಲಿ, ಕೆಣಕಲು ಮಾತಲಿ
ಚೆಲುವನೆ ನಾ ಸೋತೆನು

ಈ ಮನಸು ಮನಸು ಬೆರೆತು ಹೋದ ಮೇಲೆ
ನಾಚಿಕೆ ಮಾತೇಕೆ ಹೇಳೆ?

ಮಂಜುಳಾ ಮತ್ತು ಶಂಕರ್ನಾಗ್ರವರ ಈ ಡ್ಯೂಯೆಟ್ ಹಾಡನ್ನು ಮರೆಯಲು ಸಾಧ್ಯವೆ? ಚೆಲುವನ ಪ್ರೀತಿಗೆ ಕರಗುವ ರಾಗರಂಜಿತ ಕದಪುಗಳ ಹುಡುಗಿಯ ಅಂತರಂಗದ ಸವಿ ಮಾತುಗಳು ಹಾಡಾಗಿ ಇಲ್ಲಿ ಹೊರ ಹೊಮ್ಮಿದೆ. ಹಿನ್ನಲೆಯ ಹಸಿರು ಗಿರಿ, ಗಿರಿಯತ್ತ ಚಾಚಿದ ಮೆಟ್ಟಿಲುಗಳು, ಬಂಡೆಯ ಸಾನಿಧ್ಯದ ಸೊಬಗು ಹಾಡಿಗೆ ಮೆರಗು ನೀಡಿರುವುದರಲ್ಲಿ ಸಂದೇಹವಿಲ್ಲ.

ವಿ ಸೋಮಶೇಖರ್ ನಿರ್ದೇಶನದ ಈ ಚಿತ್ರದ ಇನ್ನೊಂದು ಹಾಡು `ಈ ರೂಪವೇ... ನನ್ನಿ ಬಾಳಿನ ನಂದಾದೀಪವು, ಇದು ನೂರಾರು ಜನುಮದ ಅನುಬಂಧವು ತಂದ ಆನಂದವು' ಸನ್ನಿವೇಶದಲ್ಲಿ ರಾಮು (ಶಂಕರ್ನಾಗ್) ಸತ್ತ ಆನಂತರ ಅವನ ಮೆದುಳನ್ನು ಸೀತಾ(ಮಂಜುಳಾ)ಳಿಗೆ ಬದಲಾಯಿಸಿ ಆತನ ನೆನಪುಗಳು ಸೀತಾಳಲ್ಲಿ ಜಾಗೃತವಾಗಿ ಹಿಂದೆ ತಾನು ಸೀತಾಳನ್ನು ದೇವಸ್ಥಾನದಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸುತ್ತಾ ಸಾಗುವ ಹಿನ್ನಲೆಯ ಹಾಡು ಇದು.

ಬ್ಯಾಂಕ್ ಉದ್ಯೋಗಿಯಾಗಿದ ಶಂಕರ್ ನಾಗ್ ಗೆ ರಂಗಭೂಮಿಯಲ್ಲಿದ್ದಷ್ಟು ಆಸಕ್ತಿ ಸಿನಿಮಾಗಳಲ್ಲಿ ಇರಲಿಲ್ಲ. ಅದರಲ್ಲೂ ಕಮರ್ಷಿಯಲ್ ಸಿನಿಮಾಗಳೆಂದರೆ ನಿರಾಕರಿಸುತ್ತಿದ್ದುದೇ ಹೆಚ್ಚು. ಹಾಗೆಯೆ ಈ ಚಿತ್ರ ಕೂಡ ನಾಯಕಿ ಪ್ರಧಾನವಾಗಿದ್ದರಿಂದ ಚಿತ್ರವನ್ನು ನಿರಾಕರಿಸಿದ್ದರಂತೆ. ಕೊನೆಗೆ ನಿರ್ಮಾಪಕ ಅಬ್ಬಯ್ಯ ನಾಯ್ಡುರವರ ಒತ್ತಾಯದ ಮೇರೆಗೆ ಅಭಿನಯಿಸಿದ್ದರಂತೆ. ಈ ಚಿತ್ರದಲ್ಲಿ ಅವರ ಪಾತ್ರವನ್ನು ಮರೆಯುವಂತಿಲ್ಲ. ಮೆದುಳು ಬದಲಾವಣೆಯಿಂದ ಸತ್ತ ವ್ಯಕ್ತಿಯಲ್ಲಿರುವ ರಹಸ್ಯವನ್ನು ತಿಳಿದುಕೊಂಡು ರೌಡಿಗಳನ್ನು ಸೆದೆಬಡಿಯುವ ರಿವೇಂಜ್ ಮಾದರಿಯ ಚಿತ್ರವಿದು. ಮಂಜುಳಾ ತನ್ನ ಪ್ರಿಯಕರ ಸತ್ತ ಮೇಲೆ ನೀಡಿದ ಮತಿಭ್ರಮಣೆಯ ಸನ್ನಿವೇಶವಂತೂ ಮರೆಯಲು ಅಸಾಧ್ಯ. ಇಂತಹ ನೆನಪುಗಳನ್ನು ಮರೆಯುವಂತೆ ಇಲ್ಲ. ಈ ಚಿತ್ರ 1979 ರಲ್ಲಿ ಬಿಡುಗಡೆ ಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ.
ಮತ್ತೆ ಮುಂದಿನ ಕಂತಿನಲ್ಲಿ ಇನ್ನಷ್ಟು!

ಚಿತ್ರ ಕೃಪೆ: ಈ ಕನಸು. ಕಾಂ

Read more!

Wednesday, January 12, 2011

ವ್ಯವಹಾರ ಜಗತ್ತಿನ ‘ಮಾಯಾ ಕಿನ್ನರಿ’ಯೇ?!


ಜೋಗಿಯವರ ಕಾದಂಬರಿಯೆಂದರೆ ಅದೇನೋ ಆಕರ್ಷಣೆಯಿದೆ. ಅವು ತಿಳಿಸುವ ಕುತೂಹಲಕರ ಸಂಗತಿಗಾಗಿಯೋ, ಇಲ್ಲ ನಾವು ಕಂಡು ಕೇಳಿರುವ ಪರಿಸರದ ಸುತ್ತ ಮುತ್ತ ನಡೆಯುವುದಕ್ಕೋ? ಕಾಡಿನ ನಿಗೂಢ ರಹಸ್ಯ, ಪ್ರಕೃತಿಯ ಒಡನಾಟದ ಜೊತೆಗಿನ ಓಡಾಟ, ಹಳ್ಳಿಯ ಜೀವನ, ಕನಸು, ಮುಗಿಲು, ಬೆಟ್ಟ, ಚಾರಣ ಮುಂತಾದವುಗಳು ಬಿಚ್ಚಿಕೊಳ್ಳುವ ರೀತಿ ಅಪೂರ್ವಾಗಿರುತ್ತವೆ. ಆದರೆ ಅದೇ ಗುಂಗಿನಲ್ಲಿ ‘ಮಾಯಾ ಕಿನ್ನರಿ’ ಕಗೆತ್ತಿಕೊಂಡರೆ ಆ ರೀತಿಯ ಕಾಡಿನ ರಹಸ್ಯವಾಗಲಿ, ಕುತೂಹಲವಾಗಲಿ ಇಲ್ಲ. ಇಲ್ಲಿ ಕಟ್ಟಿಕೊಟ್ಟಿರುವ ರಹಸ್ಯ, ಕುತೂಹಲಗಳೆಲ್ಲಾ ವ್ಯವಹಾರಿಕ ಜಗತ್ತು, ರಾತ್ರಿ ಹಗಲೆನ್ನದೆ ಕಣ್ತೆರೆದು ಮಲಗಿರುವ ನಗರಜೀವನ, ಮಾನವ ಸಹಜ ಭಾವನೆಗಳೊಂದಿಗೆ ದೈನಂದಿನ ಬದುಕಿನ ಗುದ್ದಾಟ, ಮೋಸ, ವಂಚನೆ, ಸುಲಿಗೆ, ಯಾಂತ್ರಿಕತೆ, ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ, ಬದುಕು ಇಷ್ಟೇ ಆಗಿ ಹೋಗುವ ಭಯ. ಇವೆಲ್ಲವನ್ನೂ ‘ಮಾಯಾ ಕಿನ್ನರಿ’ ಅನಾವರಣಗೊಳಿಸುತ್ತಾಳೆ. ನಗರ ಜೀವನವೇ ಮಾಯಾಕಿನ್ನರಿಯಾಗಿ ಮೈದಳೆದು ನಿಶ್ಶಬ್ದವಾಗಿ ಆವರಿಸಿ ಬಿಡುತ್ತಾಳೆ."

ಕಾದಂಬರಿಯ ನಾಯಕಿ ಶೋಭಾರಾಣಿಗೆ ಭಿಕ್ಷುಕರೆಂದರೆ ಭಯ. ನಗರ ಜೀವನದಲ್ಲಿ ಇದು ಸಹಜ. ಇಲ್ಲಿ ಯಾರು ಯಾರ ಮೇಲೆ ನಂಬಿಕೆಯಿಡಬೇಕೋ, ಎಲ್ಲಾ ಗೊಂದಲ. ನೆರೆಮನೆಯವರ ಪರಿಚಯವಿಲ್ಲದೆ ಮನೆಯೆಂಬ ಜಗತ್ತೊಳಗೆ ಉಳಿದುಕೊಳ್ಳುವ ಅನಿವಾರ್ಯತೆ. ಭಿಕ್ಷುಕರ ಬಗ್ಗೆ ಭಯವಿದ್ದರೂ ಅವರ ಮೇಲೆ ಅನುಕಂಪ, ಕಾಳಜಿ ಶೋಭಾರಾಣಿಗೆ. ಏನಾದರಾಗಲಿ ಕೈಯೆತ್ತಿ ದಾನ ಮಾಡಿದರೇನೆ ಅವಳಿಗೆ ಸಮಾಧಾನ, ಇಲ್ಲದಿದ್ದರೆ ಪರಿತಾಪ. ಭಿಕ್ಷುಕ ಅವನ ಪಾಡಿಗೆ ಅವನಿದ್ದರೂ ಅವಳಿಗೆ ಆತಂಕ, ಹತಾಶೆ, ನಿರಾಶೆ. ಹಾಗೆಯೇ ಅವಳಿಗೊಂದು ವೀಕ್ನೆಸ್, ಮೊಬೈಲ್ ಕೂಗಿದರೆ ಸಾಕು ಅದನ್ನು ಆದರಿಸುವುದು. ಪರಿಚಯವಿರಲಿ, ಇಲ್ಲದಿರಲಿ ಕಾಲ್ ಅಟೆಂಡ್ ಮಾಡಿದರೇನೆ ಸಮಾಧಾನ.

ವ್ಯವಹಾರಿಕ ಜಗತ್ತು ಯಾವ ಯಾವ ರೂಪದಲ್ಲಿಯೋ ಮನುಷ್ಯನನ್ನು ತನ್ನತ್ತ ಸೆಳೆಯುವಂತೆ ಶೋಭಾರಾಣಿಯ ಗಂಡ ನರಹರಿಯನ್ನೂ ಕೂಡ ಅಪ್ಪಿಕೊಳ್ಳುತ್ತದೆ. ಅವನು ಸ್ವಂತ ಪ್ರೊಡಕ್ಷನ್ ಸಂಸ್ಥೆಯನ್ನು ಹುಟ್ಟು ಹಾಕಿದರೂ ಅವನ ವ್ಯವಹಾರಗಳು ನಿರೀಕ್ಷೆಯನ್ನೂ ಮೀರಿ ಹೊರಗೂ ಚಾಚುತ್ತದೆ. ಅಲ್ಲಿಯ ವಾತಾವರಣ, ನೀತಿ, ನಿಯಮ ಅವನನ್ನು ಸೆಳೆಯುತ್ತದೆ. ಅವನು ಯಾಂತ್ರಿಕ ಬದುಕಿಗೆ ಹೊರಳಿದರೂ ಶೋಭಾರಾಣಿಗೆ ಅವನ ಮೇಲೆ ಅಗಾಧ ಪ್ರೀತಿ. ಅವನ ಅತೀ ಆರೈಕೆಯಲ್ಲಿ ಮನೆಯೇ ಜಗತ್ತಾದರೂ ಖುಷಿಪಡುತ್ತಿರುತ್ತಾಳೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಲೆ ಅವಳಿಗಿದೆ. ಮುಂಜಾನೆದ್ದು ಮುಂಬಾಗಿಲಿಗೆ ರಂಗೋಲಿ ಬರೆದು ಸಂಭ್ರಮಿಸುವ ಕಿನ್ನರಿ ಅವಳು.

ಆದರೂ ಎಲ್ಲೋ, ಏನೋ ಹಾದಿ ತಪ್ಪುವ ಆತಂಕ ಅವಳಿಗೆ. ನಗರ ಬದುಕಿನ ರೀತಿಯಲ್ಲಿಯೂ ಆಸೆಗಳ ಮೂಟೆಕಟ್ಟಿಕೊಂಡು ಒಂದು ಅದ್ಭುತ ಪ್ರೀತಿಯನ್ನು ಕಾಣುತ್ತಾಳೆ. ಆ ಪ್ರೀತಿಯೆ ಒಂದು ಸುವಾಸನೆಯಾಗಿ ಅವಳ ಮನೆಯೆಂಬ ಜಗತ್ತಿನಲ್ಲಿ ಪಸರಿಸುತ್ತಿರುತ್ತದೆ. ಈ ಸುವಾಸನೆಯೆ ಒಂದು ಪಾತ್ರವಾಗಿ ಕಾದಂಬರಿಯ ಉದ್ದಕ್ಕೂ ಹರಡುತ್ತದೆ. ಇದು ಜೀವನ್ಮುಖಿ ಪ್ರೀತಿಯಾಗಿ ಓದುಗನನ್ನು ಕುತೂಹಲಕ್ಕೆ ಕೊಂಡೊಯ್ಯುತ್ತದೆ.

ನರಹರಿ ಹೊರ ಜಗತ್ತಿಗೆ ತನ್ನನ್ನು ತಾನು ಎಕ್ಸ್ಪೋಸ್ ಮಾಡಿಕೊಂಡು ಹಣಗಳಿಸುವ ದಾರಿಯನ್ನು ಹಿಡಿಯುತ್ತಾನೆ. ತಾನು ತೊಡಗಿಸಿಕೊಂಡಿರುವ ವ್ಯವಹಾರ ದೀರ್ಘ ಅವಧಿಯಲ್ಲಿ ಹೆಚ್ಚು ಲಾಭದಾಯಕವಲ್ಲವೆಂದು ಗೊತ್ತು. ಆದರೆ ಅವನ ವ್ಯವಹಾರ ಚತುರತೆಯಲ್ಲಿ ಯಶಸ್ಸು ಸಾಧಿಸುತ್ತಾ, ಅವನಿಗೆ ತಿಳಿದಿರುವ ಮತ್ತು ತಿಳಿಯದಿರುವ ಲೋಕಕ್ಕೆ ನಿಧಾನವಾಗಿ ಇಳಿಯುತ್ತಾನೆ. ಅದು ಅವನ ಮತ್ತು ಮುಂಬೈಯ ಕಂಪನಿಯ ಒಡಂಬಡಿಕೆಯಾಗಿ ಅವನನ್ನು ಹತಾಶೆಗ ಇಳಿಯುವಂತೆ ಮಾಡುತ್ತದೆ. ನಯವಂಚನೆಯ ಜಾಲಕ್ಕೆ ಸಿಕ್ಕು ಚಡಪಡಿಸಿ ಅದರಿಂದ ಹೊರಗೆ ಬರುವಾಗ ಬದುಕು ಬಹಳಷ್ಟು ಅರ್ಥವಾಗಿರುತ್ತದೆ. ನಗರ ಬದುಕಿನ ಅನೂಹ್ಯ ತೆರೆ ಸರಿಯುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ದೃಶ್ಯ ಮಾಧ್ಯಮದ ಬಗ್ಗೆ ಲೇಖಕ ತಿಳಿಸಿಕೊಡುವ ಕರಾಳ ಸತ್ಯಗಳು.

ಕೊನೆಗೂ ನರಹರಿಗೆ ಹೊರ ಜಗತ್ತು ಒಂದು ಭ್ರಮೆಯಾಗಿ ತನ್ನ ಮನೆ, ಮನದನ್ನೆಯೇ ಹೆಚ್ಚಾಗಿ ಕೊನೆಪಕ್ಷ ಪ್ರೀತಿಸುವ, ಅವಳ ಅಭೀಷ್ಟಗಳನ್ನು ಉತ್ತೇಜಿಸುವ, ಅವಳದೇ ಜಗತ್ತಿನಲ್ಲಿ ವಿಹರಿಸುವ ದೊಡ್ಡ ನಿರ್ಧಾರ ಮಾಡುತ್ತಾನೆ. ಏನೆಲ್ಲಾ ಅವನು ತಳ್ಳಿರುತ್ತಾನೋ ಅವೆಲ್ಲವನ್ನೂ ನೆಚ್ಚಿಕೊಳ್ಳುತ್ತಾನೆ. ಹೊರ ಮತ್ತು ಒಳ ಜಗತ್ತಿನ ಸೂಕ್ಷ್ಮಗಳನ್ನು ಶೋಭಾರಾಣಿ ಮತ್ತು ನರಹರಿಯ ಮೂಲಕ ತಿಳಿಸುವ ಜಾಣ್ಮೆ ಲೇಖಕರದ್ದು. ಇಲ್ಲಿಯ ಸಮಸ್ತವನ್ನು ತಿಳಿಸುವ ಕಿನ್ನರಿ, ‘ಯಾರಿಲ್ಲಿಗೆ ಬಂದರು ಕಳೆದಿರುಳು! ಏ ಗಾಳೀ...’ ಎಂದು ಬೆರಗಾಗಿ ಕೇಳುತ್ತಾಳೆ.

ಹೀಗೆ ಸುಖಾಂತದಲ್ಲಿ ಕಾದಂಬರಿ ಕೊನೆಯಾಗುತ್ತದೆಯೆನ್ನುವ ಓದುಗನ ಭ್ರಮೆಗೆ ಲೇಖಕ ತಡೆಯೊಡ್ಡಿ ನರಹರಿ ಮತ್ತೊಮ್ಮೆ ವ್ಯವಹಾರದತ್ತ ಹೊರಳುವುದನ್ನು ಅವನ ಮಾತುಗಳಲ್ಲಿಯೇ ಸ್ಪಷ್ಟಪಡಿಸುತ್ತಾನೆ. ಇದೇ ವ್ಯವಹಾರ ಜಗತ್ತಿನ ‘ಮಾಯಾ ಕಿನ್ನರಿ’ಯೇ?!

ಈ ಪುಸ್ತಕವನ್ನು ಅಂಕಿತ ಪುಸ್ತಕ, ಬೆಂಗಳೂರು ಪ್ರಕಟಿಸಿದೆ. ಮುಖಪುಟ ರಘು ಅಪಾರ ಅವರದ್ದು. ಪುಸ್ತಕದ ವಿನ್ಯಾಸ ಆಕರ್ಷಕವಾಗಿದೆ. ಇದರ ಬೆಲೆ ಕೇವಲ ಎಪ್ಪತ್ತು ರೂಪಾಯಿಗಳು ಮಾತ್ರ.

Read more!

Saturday, January 8, 2011

ಗಿರಿಕನ್ಯೆಯ ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’


ನನಗಾಗ ಶಾಲೆಯ ಮೆಟ್ಟಿಲು ಹತ್ತುವ ವಯಸ್ಸು. ನಮ್ಮದು ಕುಗ್ರಾಮವೆಂದರೆ ಕುಗ್ರಾಮ. ಆದರೆ ಹಸಿರು ವನರಾಶಿಯಿಂದ ಸದಾ ಕಂಗೊಳಿಸುವ ಸೌಂದರ್ಯವಂತೆ ಆ ಊರು. ಆಗಿನ್ನೂ ಸಂಪರ್ಕ ಸಾಧನಗಳಾವುದು ಇರಲಿಲ್ಲವಾಗಿ ಜನರಿಗೆ ಕಾಲ್ನಡಿಗೆಯೆ ಗತಿ. ಊರು ಅನ್ನುವುದಕ್ಕೆ ಒಂದು ರಸ್ತೆ, ನೆಪಮಾತ್ರಕ್ಕೆ! ಹೊಂಡ, ಕಲ್ಲುಗಳ ಪಾದಾಚಾರಿಗೂ ನಡೆಯುವುದಕ್ಕೂ ಕಷ್ಟವಾದ ದಾರಿ ಅದು. ಆ ದಾರಿಯಲ್ಲಿ ಶ್ರೀ ಮಂಜುನಾಥ ಮೋಟಾರ್ ಸರ್ವೀಸ್ (smms) ಕಂಪನಿಯ ಉದ್ದ ಮೂತಿಯ ಒಂದೇ ಒಂದು ಬಸ್ಸು ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಹಾಗಂತ ಯಾರೂ ಆ ಬಸ್ಸಿಗೆ ಕಾಯುವುದು ಇಲ್ಲ. ಬಸ್ಸು ಬಂದರೆ ಉಡುಪಿಗೋ ಶಿರ್ವಕ್ಕೊ ಹೋದಾರು. ಆಗಿನ ಕಾಲಕ್ಕೆ ಅದರ ಅನಿವಾರ್ಯತೆ ಇರಲಿಲ್ಲ ಅನ್ನುವಷ್ಟರ ಮಟ್ಟಿಗೆ.

ಅಂತಹ ನಮ್ಮ ಕಾಡುಗುಡ್ಡ ಹಳ್ಳಿಗೆ ಒಂದು ದಿನ ವಿಚಿತ್ರ ವಾಹನದಲ್ಲಿ ಸಿಟಿಯ ಜನರ ದಿಂಡು ಬಂದು ಬಿಟ್ಟಿತು. ನಮಗೆಲ್ಲಾ ಆಶ್ಚರ್ಯ. ಅವರ ವೇಷಭೂಷಣ, ಸ್ಟೈಲು, ಮಾತುಕತೆ ಎಲ್ಲಾ ಎಲ್ಲಾ ವಿಚಿತ್ರ ಅನಿಸಿಬಿಟ್ಟಿತು."

ಊರಿಗೆ ಏನಾದರೊಂದು ಹೊಸ ವಾಹನ ಬಂದ್ರೆ ಅದು ಮಕ್ಕಳನ್ನು ಕದ್ದೊಯ್ಯುವ ‘ಕಳ್ಳರ ವಾಹನ’ ಅಂತಲೆ ಊರವರ ಅಭಿಪ್ರಾಯ. ಊರಿನ ಪ್ರಮುಖರು ಬಂದ ವಾಹನವನ್ನು ನಿಲ್ಲಿಸಿ, ವಿಚಾರಿಸಿ ವ್ಯಕ್ತಿಗಳ ಬಗೆ ತಿಳಿದುಕೊಂಡ ಬಳಿಕವೆ, ‘ಇಂತವರು ಊರಿಗೆ ಬಂದಿದ್ರು’ ಅನ್ನುವ ಗಾಬು ಊರಿಗೆ ಹರಡುತ್ತಿತ್ತು.

ಹಳ್ಳಿಯಲ್ಲಿ ಮನೆಗಳೆಂದರೆ ಎರಡು ಮೂರು ಫರ್ಲಾಂಗ್ಗಳಿಗೆ ಒಂದು ಮನೆ. ತೊಡಮೆ, ತೋಡು, ಕಾಲುಸಂಕ, ವಳಚ್ಚಿಲ್, ಗುಡ್ಡ, ಕಾಡುಗಳನ್ನು ದಾಟಿ ಮನೆಯನ್ನು ತಲುಪಬೇಕಾದ ಪರಿಸ್ಥಿತಿ. ಕಾಲು ದಾರಿ ಬಿಟ್ಟರೆ ಊರಿಗೆ ರಸ್ತೆಯೆಂದರೆ ಸುಭಾಸ್ನಗರದಿಂದ ಬಂಟಕಲ್ ಕ್ರಾಸ್ ರೋಡ್ವರೆಗಿನ ಒಂದು ಮಣ್ಣಿನ ರಸ್ತೆಯಷ್ಟೆ. ಊರಿನವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅಭಿವೃದ್ಧಿಯೆಂದರೆ ಅದು ಅಪಾಯಗಳಿಗೆ ಆಹ್ವಾನವೆಂದೆ ತಿಳಿದಿದ್ದರು ಅನ್ಸುತ್ತೆ. ಅದಕ್ಕಾಗಿ ರಸ್ತೆಯಾಗಲಿ, ಸರಿಯಾದ ದಾರಿಯನ್ನಾಗಲಿ ಮಾಡುವುದಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಅವರ ಜಾಗೆಯನ್ನೂ ಬಿಟ್ಟು ಕೊಡುತ್ತಿರಲಿಲ್ಲ. ಇವತ್ತಿನ ಹಾಗೆ ಪಂಚಾಯತುಗಳು ಆಗಿನ್ನೂ ಬೆಳೆದಿರಲಿಲ್ಲ. ಇದ್ದರೂ ಅಭಿವೃದ್ಧಿಗೆ ಅವಕಾಶವನ್ನು ನೀಡುತ್ತಿರಲಿಲ್ಲ.

ಅಂತಹ ನಮ್ಮ ಹಳ್ಳಿಗೆ ಇನ್ನೊಂದು ಹೆಸರು ಬೊಲ್ಲೆ (ಬೆಳ್ಳೆ ಹೆಸರಿನ ತುಳು ಉಚ್ಛಾರ). ಊರಿನ ಪೂರ್ವದಿಂದ ಉತ್ತರ ದಿಕ್ಕಿನವರೆಗೂ ಪಾಪನಾಶಿನಿ ನದಿ ಹರಿಯುವುದರಿಂದ ಕೃಷಿ ಪ್ರಧಾನವಾದ ಊರು ನಮ್ಮದು. ಭತ್ತದ ಬೆಳೆ ಮತ್ತು ತೆಂಗಿನಬೆಳೆಗಳನ್ನು ಬಿಟ್ಟರೆ ಉಳಿದಂತೆ ಸೊಪ್ಪು ತರಕಾರಿಯನ್ನು ಬೆಳೆಯುವುದು ಸರ್ವೇ ಸಾಮಾನ್ಯ. ಆ ನದಿಯ ಹತ್ತಿರದಲ್ಲಿ ಅಂದರೆ ಉತ್ತರ ದಿಕ್ಕಿಗೆ ಬೊಲ್ಲೆದಂಗಡಿ. ಅದು ಊರಿನ ಒಂದೇ ಒಂದು ಗೌಡ ಸಾರಸ್ವತ ಬ್ರಾಹ್ಮಣರ ಮನೆ. ದಿನಸಿ ಸಾಮಾನಿಗೆ ಮಾತ್ರವಲ್ಲ ಮೊದಲು ಅಕ್ಕಿ ಮಿಲ್ಲು ಬಂದಂದು ಅಲ್ಲಿಯೆ. ಹಾಗಾಗಿ ಅದು ಒಂದು ಮೂಲೆಯಲ್ಲಿದ್ದರೂ ಜನರಿಗೆ ಅದನ್ನು ಹುಡುಕಿಕೊಂಡು ಹೋಗುವ ಅನಿವಾರ್ಯತೆ. ಅಲ್ಲಿ ಭತ್ತದ ಕೃಷಿ ಮತ್ತು ಕಬ್ಬನ್ನು ಬೆಳೆಯುವುದು ಗೊತ್ತಿತ್ತು.

ಬ್ರಹ್ಮಾವರದ ಕಬ್ಬಿನ ಕಾರ್ಖಾನೆ ಪ್ರಾರಂಭವಾಗುವವರೆಗೂ ಅಲ್ಲಿ ಆಲೆಮನೆಯಿತ್ತು. ಊರಿನ ಸೆಲ್ಫ್ ಮೆಕ್ಯಾನಿಕ್ ಎಂದೇ ಖ್ಯಾತರಾದ ಸೀನಪ್ಪ ಭಟ್ಟರು ಆಲೆಮನೆಯ ರೂವಾರಿ. ಕಬ್ಬು ಮಾಗುವ ಸಮಯಕ್ಕೆ ಅವರು ದೊಡ್ಡ ಕೊಪ್ಪರಿಗೆ ಮತ್ತು ಡಿಸೆಲ್ ಪಂಪ್ ತಂದು ಕಬ್ಬನ್ನು ಕ್ರಶ್ ಮಾಡಿ ಅದರ ಹಾಲನ್ನು ಕೊಪ್ಪರಿಗೆಗೆ ಸುರಿದು ಬೆಲ್ಲ ತಯಾರಿಸುವುದು ಈಗಲೂ ನಮಗೆ ನೆನಪಿದೆ. ಎರಡು ಮೂರು ದಿನಗಳವರೆಗೂ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕೊತ ಕೊತಾಂತ ಕುದಿಯುವುದು ಗೊತ್ತು. ನಾವು ಮಧ್ಯಾಹ್ನದ ಹೊತ್ತಿಗೆ ಶಾಲೆಯಲ್ಲಿ ಬುತ್ತಿ ಊಟ ಮುಗಿಸಿ ಬೆಲ್ಲದ ಆಸೆಗಾಗಿ ಅಲ್ಲಿಗೆ ಓಡುವುದಿತ್ತು. ಬಿಸಿ ಬಿಸಿ ಬೆಲ್ಲವನ್ನು ದೊಡ್ಡ ಎಲೆಗೆ ಹಾಕಿ ಅವರು ನಮಗೆ ಕೊಟ್ಟು, ‘ಎಲ್ಲರೂ ಹಂಚಿ ತಿನ್ನಿ ಅನ್ನೋರು’.

ಅಂತಹ ಅಲೆಮನೆಯಿರುವ ಮನೆಗೆ ಪರವೂರಿನಿಂದ ಬಂದ ನಾಲ್ಕೈದು ವಾಹನಗಳು ಹೋದದ್ದು ನಮಗೆ ತಿಳಿಯಿತು. ಊರಿಗೆ ವಾಹನ ಬಂದರೆ ಕೇಳಬೇಕೆ? ಒಬ್ಬರ ಕಿವಿಯಿಂದ ಒಬ್ಬರಿಗೆ ವಿಷಯ ತಲುಪಿತು. ಹೆಂಗಸರು ಮಕ್ಕಳು ಮುದುಕರೆನ್ನದೆ ಅಲ್ಲಿಗೆ ಹೊರಟರೆ ಅಲ್ಲಿ ಊರೆ ಜಾತ್ರೆ ಸೇರಿದಂತೆ ಕಾಣುತ್ತಿತ್ತು.

ನಮಗೂ ಕುತೂಹಲ; ಅವರಂತೆ, ಇವರಂತೆ ಅನ್ನುವ ಗಾಬು. ಅಕ್ಕ, ಅಣ್ಣನ ಜೊತೆಗೆ ನಾವು ಹೋದೆವು. ಅರ್ಧ ದಾರಿಯಲ್ಲಿ ಅಮ್ಮ ನಮ್ಮನ್ನು ಗದರಿಸಿ ಹೋಗದಂತೆ ತಡೆದರು. ಹಾಗೂ ಹೀಗೂ ಅಣ್ಣನವರೆಲ್ಲಾ ಅಮ್ಮನ ಕಣ್ಣು ತಪ್ಪಿಸಿಕೊಂಡು ಓಡಿದರು.

“ಅಲ್ಲಿ ಆಗ್ತಾ ಇರೋದು ಸಿನಿಮಾ ಶೂಟಿಂಗ್. ಅದನ್ನೆಲ್ಲಾ ಏನು ನೋಡುವುದು ನೀವು ಸಣ್ಣ ಮಕ್ಕಳು, ಸುಮ್ನೆ ಮನೆಗೆ ಬರ್ತೀರಾ ಇಲ್ವಾ?” ಅಂದ್ರು. ಆಗ ಅವರ ಮಾತನ್ನು ಮೀರಿ ನಡೆಯುವ ಧೈರ್ಯವಿರಲಿಲ್ಲ. ಮನೆಗೆ ವಾಪಾಸಾದೆವು. ಆದರೆ ನಮ್ಮ ನೆರೆಮನೆಯ ಹುಡುಗ ಹುಡುಗಿಯರೆಲ್ಲಾ ಹೋದವರ ಬಾಯಿಯಲ್ಲಿ ಡಾ. ರಾಜಕುಮಾರ್ ಮತ್ತು ಜಯಮಾಲರ ಬಗ್ಗೆ ಮಾತುಗಳು.

ಕೊನೆಗೆ ನನ್ನ ಎರಡನೆ ಅಣ್ಣ ಹೈಸ್ಕೂಲ್ ಓದುತ್ತಿದ್ದ ಅವನು ರಾತ್ರಿ ಮನೆಗೆ ಬಂದವನೆ ಎಲ್ಲವನ್ನೂ ನಮಗೆ ವರದಿ ಒಪ್ಪಿಸಿದ. ಶೂಟಿಂಗ್ ನೋಡದಿದ್ದರು ಆ ಸನ್ನಿವೇಶವನ್ನು ಚಿತ್ರಿಸಿಕೊಂಡೆವು.

ಬೊಲ್ಲೆದಂಗಡಿಯ ಸುತ್ತಮುತ್ತ ಬೈಲು ಗದ್ದೆಯಾಗಿರುವುದರಿಂದ ಭತ್ತದ ಪಚ್ಚ ಪೈರಿನ ತೋರಣ ಮತ್ತೊಂದೆಡೆ ಕಬ್ಬಿನ ತೋಟ. ಅಷ್ಟಿದ್ದರೆ ಕೇಳಬೇಕೆ? ಎಂತಹ ಸಿನಿಮಾ ಮಂದಿಯೂ ಆ ದೃಶ್ಯಕ್ಕೆ ಮಾರುಹೋಗದಿರಲಾರರು.

ಅಂತಹ ಪ್ರಕೃತಿಯ ನಡುವೆ ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’ ಅನ್ನುವ ಯುಗಳ ಗೀತೆಯ ಚಿತ್ರೀಕರಣ. ಪಾಪನಾಶಿನಿ ನದಿಯ ‘ಕರಿಯದ ಬಾಕಿಲ್’ ನಿಂದ ಉದ್ದನೆಯ ಎತ್ತರದ ಕಟ್ಟಪುಣಿಯ ಇಕ್ಕೆಲಗಳಲ್ಲಿ ಭತ್ತದ ಹಸಿರು ಅಲ್ಲಿಂದ ಮುಂದುವರೆದು ದೊಡ್ಡ ಗೊಬ್ಬರದ ಗುಂಡಿಯಿರುವ ಗದ್ದೆಯವರೆಗೂ ಚಿತ್ರೀಕರಣ. ಸಾದಾರಣವಾಗಿ ಆ ಹಾಡಿನ ಕೊನೆಯ ಅರ್ಧ ಭಾಗ ಚಿತ್ರೀಕರಣವಾಗಿರುವುದು ನಮ್ಮೂರಿನಲ್ಲೆ.

ಚಿತ್ರೀಕರಣವೆಂದರೆ ಕನಿಷ್ಟಪಕ್ಷ ಒಂದೆರಡು ದಿನವಾದರೂ ಇರುತ್ತಾರೆಂದು ತಿಳಿದಿದ್ದ ನಮಗೆ ನಿರಾಶೆ. ಮರುದಿನ ಹೇಗೂ ಅಮ್ಮನನ್ನು ಒಪ್ಪಿಸಿ ನಾವು ಅಲ್ಲಿಗೆ ಹೋದರೆ ಅಲ್ಲಿ ಮೂಕ ಸಾಕ್ಷಿಯಂತೆ ನಿಂತಿದ್ದು ಬರೀ ಹಸಿರು ಭತ್ತದ ಪೈರಿನ ಗದ್ದೆಗಳು, ಪಾಪನಾಶಿನಿ ನದಿ, ದೊಡ್ಡ ಕಟ್ಟಪುಣಿ, ತೆಂಗಿನ ಮರದ ಸಾಲುಗಳು, ದೇವಸ್ಥಾನದ ಪ್ರಾಂಗಣ, ನಗಾರಿ ಕೋಣೆ, ನೀಲಗಿರಿ ಮರಗಳು... ಅಣ್ಣ ಮತ್ತು ಅವನ ಫ್ರೆಂಡ್ಸೆಲ್ಲಾ ಸೇರಿ, ‘ಓ ಇಲ್ಲಿಂದ ಜಯಮಾಲ ನೃತ್ಯ ಮಾಡ್ತಾ ಬರ್ತಾ ಇದ್ರು. ಅಣ್ಣಾವ್ರು ಆ ಕಡೆಯಿಂದ ಬರ್ತಾ ಇದ್ರು. ಅಲ್ಲಿಯೆ ಭತ್ತದ ತೆನೆಗಳನ್ನು ಕಲಶೆಯ ನಡುವೆ ಇಟ್ಟು ನೃತ್ಯ ಮಾಡ್ತಾ ಇದ್ದಿದ್ದು, ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವ ಮೆಟ್ಟಿಲುಗಳ ದೃಶ್ಯ ತೆಗೆದದ್ದು. ಅಲ್ಲಿ ಅವರೆಲ್ಲಾ ಮೇಕಪ್ ಮಾಡ್ತಾ ಇದ್ರು. ಇಲ್ಲಿ ನಾವೆಲ್ಲಾ ನಿಂತು ನೋಡ್ತಾ ಇದ್ದೆವು. ಕ್ಯಾಮರಾ ನಿಧಾನಕ್ಕೆ ನಮ್ಮತ್ತ ತಿರುಗಿದ್ದು. ಪಿಕ್ಚರ್ ರಿಲೀಸ್ ಆದ ಕೂಡ್ಲೆ ನಾನು ಮೊದಲು ನೋಡ್ಬೇಕು. ನಮ್ಮ ಊರಿನ ಯಾರ್ಯಾರೆಲ್ಲಾ ಅದರೊಳಗೆ ಇದ್ದಾರೆಂತ ಕಾಣ್ಬೇಕು’ ಅಂತ ಉದ್ದಕ್ಕೆ ಹೇಳುತ್ತಿದ್ದರೆ ನಮಗೆ ಎಂತದೋ ಪುಳಕ.

ದೊರೆ-ಭಗವಾನ್ ನಿರ್ಧೇಶನದ ‘ಗಿರಿಕನ್ಯೆ’ಯ ಆ ಹಾಡು ಇಂದಿಗೂ ಜನಪ್ರಿಯ. ನಮ್ಮ ಮಣ್ಣಿನ, ಊರಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಾ ಸಾಗಿದ್ದ ಹಾಡಿನ ಸಾಲುಗಳನ್ನು ಕೇಳುವಾಗ ಅಲ್ಲಿಯ ದೃಶ್ಯಗಳದ್ದೇ ಕಾರುಬಾರು ಕಣ್ಣುಗಳಲ್ಲಿ.

ನೆಲವ ನಂಬಿ ಬಾಳೋರು ನಾವುಗಳೆಲ್ಲಾ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲಾ
ಹಸಿರೆ ಉಸಿರು ನಮಗೆಲ್ಲಾ

ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೆ ಹೊನ್ನು ನಮಗೆಲ್ಲಾ

ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ

ಎಂತಹ ಅದ್ಭುತವಾದ ಹಾಡು! ಅದಕ್ಕೆ ಪೂರಕವಾದ ಪಚ್ಚ ಪೈರಿನ ಗದ್ದೆಗಳು. ಸಮುದ್ರ ಮಟ್ಟಕ್ಕಿಂತಲೂ ಎತ್ತರದಲ್ಲಿರುವ ಕುಂಜಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ಅಲ್ಲಿಂದ ನಿಂತು ಸುತ್ತಾ ನೋಡಿದರೆ ಪೂರ್ವದಲ್ಲಿ ಕುದುರೆಮುಖದ ಬೆಟ್ಟದ ಸಾಲುಗಳು, ಪಶ್ಚಿಮದಲ್ಲಿ ಸುರತ್ಕಲ್ನ ದೀಪಸ್ತಂಭದವರೆಗೂ ಕಾಣುವ ಸಮುದ್ರ, ಉತ್ತರಕ್ಕೆ ಮಣಿಪಾಲ, ದಕ್ಷಿಣಕ್ಕೆ ಹಸಿರು ತುಂಬಿದ ಬೆಟ್ಟಗಳು. ಒಂದೊಂದೆ ದೃಶ್ಯಗಳು ಪರದೆಯ ಮೇಲೆ ಮೂಡಿ ಬರುವಾಗ ಇದು ನನ್ನೂರು, ಇದು ದೇವಸ್ಥಾನದ ಮುಂಭಾಗ, ಇದು ನಗಾರಿ ಕೋಣೆ, ದೇವಸ್ಥಾನದ ಎದುರಿನ ಮೆಟ್ಟಿಲುಗಳು. ಹೀಗೆ ಈಗಲೂ ಆ ಹಾಡು ಬರುವಾಗ ನಾವು ಹೇಳುವುದುಂಟು ಹಳೆಯ ನೆನಪುಗಳನ್ನು ಕೆದಕುತ್ತಾ...

1977 ರಲ್ಲಿ ಚಿತ್ರ ಬಿಡುಗಡೆ ಕಂಡಿತು. ಆಗ ಚಿಕ್ಕಮಕ್ಕಳಿಗೆ ಸಿನಿಮಾ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದಕ್ಕೆ ಮನೆಯಲ್ಲಿ ಅವಕಾಶವಿರಲಿಲ್ಲ. ಸುಮಾರು ಮೂವತ್ತು ವರ್ಷಗಳ ಬಳಿಕ ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಆ ನೆನಪುಗಳು ನನ್ನನ್ನು ಇಲ್ಲಿ ಬಿಚ್ಚಿಡಲು ಅನುವು ಮಾಡಿಕೊಟ್ಟಿದೆ.

ಡಾ. ರಾಜ್ಕುಮಾರ್ ನಮ್ಮ ಊರಿಗೆ ಬಂದಿದ್ರು. ಡಾ. ಜಯಮಾಲ ಬಂದಿದ್ರು. ನೆನೆಸಿಕೊಂಡ್ರೆ ಈಗ್ಲೂ ಖುಷಿಯಾಗುತ್ತೆ. ಕೇವಲ ಸಿನಿಮಾ ಮಂದಿಯನ್ನು ಹೆಚ್ಚಾಗಿ ಈಗಲೂ ಟಿವಿ. ಸಿನೆಮಾಗಳಲ್ಲಿ ಮಾತ್ರ ನೋಡಿರ್ತೀವಿ. ಅವರನ್ನು ನೇರವಾಗಿ ನೋಡುವುದಕ್ಕೂ ದೃಶ್ಯಗಳಲ್ಲಿ ನೋಡುವುದಕ್ಕೂ ವ್ಯತ್ಯಾಸವಿರುತ್ತೆ, ಅಲ್ವಾ...?


ಚಿತ್ರ ಕೃಪೆ: ಈಕನಸು.ಕಾಂ

Read more!

Tuesday, December 28, 2010

ಮುಗಿಲತ್ತ ಹಾರುವ ‘ಕ್ರೌಂಚ ಪಕ್ಷಿಗಳು’


ಕ್ರೌಂಚ ಪಕ್ಷಿಗಳು - ಒಂದು ಸತ್ತು, ಇನ್ನೊಂದು ಬದುಕಿರದಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲವೇನೋ? ಹೌದಲ್ಲ, ವಾಲ್ಮೀಕಿಗೆ ಪರಿತಾಪ ಉಂಟಾದದ್ದೇ ಒಂದು ಹಕ್ಕಿಯ ಸಾವಿನಿಂದ ಮತ್ತು ಇನ್ನೊಂದರ ಒದ್ದಾಟದಿಂದ. ಇದು ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಕಥಾಸಂಕಲದಿಂದ. ಕ್ರೌಂಚ ಪಕ್ಷಿಗಳು ಎಂಬುದು ಈ ಸಂಕಲನದ ಒಂದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನ ಕ್ರಮದ ಒಂದು ಆದಿ ಪ್ರತಿಮೆ - ಇದು ಬೆನ್ನುಡಿಯ ಬರಹ.

ವೈದೇಹಿಯವರ ಕಥೆಗಳನ್ನು ಓದುವಾಗ ಏನೋ ಒಂದು ಆತ್ಮೀಯತೆ. ಇಲ್ಲಿಯ ಪಾತ್ರಗಳೆಲ್ಲಾ ನಮ್ಮ ನಡುವೆ ಇದ್ದು, ಮುಗ್ಧತೆಯಿಂದ ಮುಕ್ತವಾಗಿ ಬೆರೆಯುವಂತಹ ಗುಣಗಳಿರುವವುಗಳು ಅನಿಸುತ್ತದೆ. ಈ ಪಾತ್ರಗಳನ್ನು ಬೆಳೆಸುತ್ತಾ ಬೆಳೆಸುತ್ತಾ ಲೇಖಕಿ ಬಹಳಷ್ಟು ಭಾವುಕರಾಗಿ ಬಿಡುತ್ತಾರೆ. ಒಂದೊಂದು ಪಾತ್ರ ಚಿತ್ರಣವೂ ಧೈರ್ಯದಿಂದ ತಮ್ಮ ಇಂಗಿತವನ್ನು ತೆರೆದಿಡುತ್ತಾ ಮುಗುಳ್ನಗುತ್ತಿರುವಂತೆ ಕಾಣುತ್ತವೆ. ಹಾಗೆಯೆ ಕೆಲವೊಂದು ನಿಗೂಢತೆಗಳನ್ನು ಪಾತ್ರಗಳು ಬಿಟ್ಟುಕೊಡುವುದೇ ಇಲ್ಲ. ಇದು ಸ್ವತ: ಲೇಖಕಿಗೆ ಆ ಪಾತ್ರಗಳ ಬಗೆಯಿರುವ ಪ್ರೀತಿಯನ್ನು ತೋರಿಸುತ್ತದೆ."

‘ಕ್ರೌಂಚ ಪಕ್ಷಿಗಳು’ ಕಥಾಸಂಕಲನದ ಹತ್ತು ಕಥೆಗಳು ವಿಭಿನ್ನವಾದರೂ ಎಲ್ಲಾ ಕಥೆಗಳಲ್ಲಿಯೂ ಒಂದು ಸಾಮ್ಯತೆಯಿದೆ. ಅದು ಮುಗ್ಧ ಮಹಿಳೆಯರ ಅಂತರಂಗದ ತಲ್ಲಣಗಳು. ಕಥೆಗಳೆಲ್ಲಾ ಮಹಿಳಾ ಕೇಂದ್ರಿಕೃತವೆನಿಸಿದರೂ ಆ ಪಾತ್ರಗಳು ಇರುವುದು ಹಾಗೆ; ಇದ್ದು ಬಿಡಲಿ. ನಿಮಗೇನು? ಅನ್ನುವಷ್ಟು ಸ್ಪಷ್ಟ ನಿಲುವುಗಳಿವೆ ಅವುಗಳಲ್ಲಿ. ‘ದಾಳಿ’ ಕಥೆಯ ಅವಮಾನಿತಳಾದರೂ ಮೆಲು ನಗುವ ಯುವತಿ; ‘ನಟಿ’ಯ ರತ್ನೆ; ‘ಸಬಿತಾ’ ಕಥೆಯ ಸಬಿತಾ; ‘ಮಾತು ಸೋತ ಕ್ಷಣ’ದ ವಯಸ್ಸಾದ ವ್ಯಕ್ತಿ; ‘ಮನೆಯವರೆಗಿನ ಹಾದಿ’ಯ ರಾಮಣ್ಣ; ‘ಪ್ರಶ್ನೆ’ಯ ಭುವಿ; ‘ಒಗಟು’ ಕಥೆಯ ಶುಭಾಂಟಿ; ‘ಅವರವರ ಭಾವಕ್ಕೆ’ ಕಥೆಯ ಸಮಿತಾ; ‘ತೆರೆದ ಪುಟಗಳು’ ಕಥೆಯ ರಾಜತ್ತೆ; ‘ಕ್ರೌಂಚ ಪಕ್ಷಿಗಳು’ ಕಥೆಯ ಲಕ್ಷ್ಮಮ್ಮ... ಎಲ್ಲರೂ ತಾವು ಇದ್ದ ಹಾಗೆ ಇದ್ದು ಬಿಡುವವರು. ಹಾಗಂದ್ರೆ ಹಾಗೆ; ಹೀಗಂದ್ರೆ ಹೀಗೆ, ನಿಮಗೇನು? ಅನ್ನುವ ಹಾಗೆ. ಇಲ್ಲಿಯ ಇಷ್ಟು ಕಥೆಗಳು ಬಹಳ ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತವೆ.

ಒಬ್ಬ ಸಾಮಾನ್ಯನಿಗೆ ತಾಳ್ಮೆ ಎಷ್ಟಿರಬಹುದೆನ್ನುವುದಕ್ಕೆ ‘ದಾಳಿ’ ಕಥೆಯ ಮುಗುಳ್ನಗುವಿನ ಹುಡುಗಿಯೇ ಸಾಕ್ಷಿ. ತುಂಬಿ ತುಳುಕುವ ಬಸ್ಸಿನಲ್ಲಿ ‘ಸೀಟ್ ಇಲ್ಲವಲ್ಲ’ ಅಂತ ಆ ಹುಡುಗಿ ಹೇಳಿದ್ದೆ ಕಂಡಕ್ಟರ್ ಅವಳನ್ನು ಹೀನಾಯಮಾನವಾಗಿ ಬೈಯುತ್ತಾನೆ. ಅವನ ಅತಿರೇಕದ ಮಾತುಗಳನ್ನು ಕೇಳಿದರೆ ಉಳಿದವರು ಸಿಟ್ಟಾದರೂ ಅವಳದ್ದು ಮಾತ್ರ ಅದೇ ಮುಗುಳ್ನಗು. ಕೊನೆಗೂ ಅವಳು ನಿಗೂಢವಾಗಿಯೇ ಇರುತ್ತಾಳೆ. ಇದೇ ರೀತಿ ‘ಒಗಟು’ ಕಥೆಯ ಶುಭಾಂಟಿ. ಅಪರೂಪಕ್ಕೆ ಊರಿಗೆ ಬರುವ ಶುಭಾಂಟಿ ಒಂದು ಒಗಟಾಗಿ ಮಧ್ಯಾಹ್ನದ ಹೊತ್ತು ಎಲ್ಲೋ ಒಬ್ಬಳೇ ಟ್ಯಾಕ್ಸಿ ಮಾಡಿಕೊಂಡು ಹೋಗಿ ಬರುತ್ತಾಳೆ. ಅವಳು ಹೋದದ್ದಾದರು ಎಲ್ಲಿಗೆ? ಏನು ಮಾಡಿದಳು? ಇಷ್ಟು ದಿನ ಇಲ್ಲದ ಅವಳ ಈ ವರ್ತನೆಗೆ ಕಾರಣವೇನು? ಎಲ್ಲವೂ ನಿಗೂಢ! ಇಲ್ಲಿ ಅಷ್ಟೇ ಮುಖ್ಯವಾಗಿ ಕಾಣುವುದು ಒಬ್ಬ ಹೆಣ್ಣಿನ ಸ್ವಾತಂತ್ರ್ಯದ ಪ್ರಶ್ನೆ. ಅವಳ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಅಥವಾ ಸಂಶಯಿಸುವ ಹಕ್ಕು ಯಾರಿಗೂ ಇಲ್ಲವೆನ್ನುವುದನ್ನು ಪರೋಕ್ಷವಾಗಿ ಸಾರುವ ಕಥೆಯಿದು.

‘ನಟಿ’ ಕಥೆಯ ರತ್ನೆ ಮತ್ತು ‘ಸಬಿತಾ’ ಕಥೆಯ ಸಬಿತಾ ಇಬ್ಬರೂ ಲವಲವಿಕೆಯ ಜೀವಿಗಳು. ರತ್ನೆ ಬದುಕಿನಲ್ಲಿ ಸೋತು ಗೆಲುವಿನ ದಾರಿ ಕಂಡುಕೊಂಡವಳು. ಇನ್ನೊಬ್ಬರನ್ನು ನಗಿಸುತ್ತಾ ದಿನ ಕಳೆಯುವವಳು. ಸಬಿತಾ ಬದುಕಿಗಾಗಿ ಹೋರಾಡುತ್ತಾ ದುರ್ಗಮಗಳನ್ನು ದೂರುವವಳು. ನಟಿ ಕಥೆಯ ರತ್ನೆ ದುರಂತ ನಾಯಕಿಯಾದಳೆ? ಸಬಿತಾ ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿರುವಳೆ? ಪ್ರಶ್ನೆಗಳು ಊಹನೆಗೆ ಹಚ್ಚುತ್ತವೆ. ‘ಮಾತು ಸೋತ ಕ್ಷಣ’ದಲ್ಲಿ ಮೌನದೊಳಡಗಿದ ಮೌನದ ನಿಗೂಢತೆಯೆ, ಏನೆನ್ನುವುದು ಕೊನೆಗೂ ತಿಳಿಯುವುದಿಲ್ಲ. ಇದು ಕೂಡ ಓದುಗರಿಗೆ ಬಿಟ್ಟ ವಿಚಾರವಾಗಿಯೆ ಉಳಿಯುತ್ತದೆ.

‘ಮನೆಯವರೆಗಿನ ಹಾದಿ’ ಕಥೆಯಲ್ಲಿ ಮನುಷ್ಯ ತನ್ನ ಸ್ವಾರ್ಥವಿಲ್ಲದೆ ಏನನ್ನೂ ಮಾಡಲಾರನ್ನೆನ್ನುವುದು ಸಾಬೀತಾಗುತ್ತದೆ. ‘ಪ್ರಶ್ನೆ’ ಇಬ್ಬರು ಧೈರ್ಯದ ಹುಡುಗಿಯರ ವಯೋಸಹಜವಾದ ಛಾಲೆಂಜ್ ಒಂದು ಪ್ರಶ್ನೆಯಾಗಿಯೇ ನಿಲ್ಲುವ ಕಥೆ. ಭುವಿ ಭಾಷಣಕಾರನನ್ನು ಮೆಚ್ಚಿ ಅವನ ಜೊತೆಗೆ ಒಂದು ರಾತ್ರಿ ಕಳೆಯುವ ಇಚ್ಛೆಯಿರುವವಳು. ಕೊನೆಗೂ ಅದೇ ಪ್ರಶ್ನೆಯನ್ನು ಬರೆದು ಅವನಿಗೆ ಕಳುಹಿದರೆ ಅವನ ಆಹ್ವಾನವನ್ನು ತಿರಸ್ಕರಿಸುತ್ತಾಳೆ. ಆದರೆ ಅವಳ ಗೆಳತಿ ಅನು ಧೈರ್ಯದಿಂದ ಅವನ ಜೊತೆಗೆ ಹೊರಡುತ್ತಾಳೆ. ಅವಳು ಅತಿಥಿಯ ಜೊತೆಗೆ ಹೋದದ್ದೆಲ್ಲಿಗೆ? ಮನೆಗೆ? ರೂಮಿಗೆ? ಎಲ್ಲಿಗೆ ಬಿಡಿಸಿ ಕೇಳುವ ಧೈರ್ಯವಾಗದೆ ಮೆಲ್ಲನೆ ಮೆಟ್ಟಿಲಿಳಿದಳು ಭುವಿ.

ಬಾಡಿಗೆಗೆ ಕೊಡುವ ಮನೆಯಲ್ಲಿ ದೇವರ ಕೋಣೆ ಬೇಕೆ, ಬೇಡವೆ? ಅನ್ನುವ ನಿರ್ಧಾರದೊಂದಿಗೆ ಆರಂಭವಾಗುವ ಕಥೆ ಅಲ್ಲಿಗೆ ಬರುವ ಬಾಡಿಗೆದಾರರಿಗೆ ದೇವರ ಕೋಣೆಯ ಅವಶ್ಯಕತೆಯೇನೆನ್ನುವುದನ್ನು ತಿಳಿಸುತ್ತದೆ, ಕಥೆ ‘ಅವರವರ ಭಾವಕ್ಕೆ’. ಭಾವನಾತ್ಮಕವಾಗಿ ಬಿಡಿಸಿಕೊಳ್ಳುವ ಕಥೆ ಸಮಿತಾಳ ಕೊರಗಿನಿಂದ ಮುಗಿಯುತ್ತದೆ. ರಾಜತ್ತೆಯಂತಹ ಧೈರ್ಯದ ಹೆಂಗಸಿನ ಸುತ್ತಾ ಹೆಣೆದ ಕಥೆ ‘ತೆರೆಯದ ಪುಟಗಳು’. ಕೆಲವೊಂದು ವಿಷಯಗಳನ್ನು ಇನ್ನೊಬ್ಬನ ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ. ಹಾಗೆಯೇ ರಾಜತ್ತೆಯ ಕಥೆ.

ಈ ಸಂಕಲನದ ಕೊನೆಯ ಕಥೆ ‘ಕ್ರೌಂಚ ಪಕ್ಷಿಗಳು’, ಒಂದು ಸತ್ತು ಇನ್ನೊಂದು ಬದುಕಿದ ಉಳಿದ ಪಕ್ಷಿಯ ಕಥೆಯಂತೆಯೂ ಕಾಣುತ್ತದೆ. ಸತ್ತ ಪಕ್ಷಿ ಯಾರು? ಬದುಕಿದ ಪಕ್ಷಿಯ ಒದ್ದಾಟವೇನೆನ್ನುವುದನ್ನು ನಯವಾಗಿ ಈ ಕಥೆ ಲಕ್ಷ್ಮಮ್ಮನ ಪಾತ್ರದ ಮೂಲಕ ತೆರೆದಿಡುತ್ತದೆ. ಮನುಷ್ಯ ಮನುಷ್ಯನಾಗಿರೋದು ಸಾಮಾನ್ಯ ಸ್ಥಿತಿಯಲ್ಲಿ ಮಾತ್ರ. ಸಿದ್ಧಾಂತ, ತತ್ವ, ರೀತಿ, ನೀತಿಗಳ ಬುಡ ತುಸುವೇ ಅಲ್ಲಾಡಿದರೂ ಮೊದಲು ಬಲಿಯಾಗೋದು ಮಹಿಳೆ. ಅವಳ ದೇಹ, ಅವಳ ಮನಸ್ಸು ಮತ್ತು ಅವಳ ಬದುಕು. ಹಾಗೆ ಬಲಿಯಾದ ಪಕ್ಷಿ ಲಕ್ಷ್ಮಮ್ಮ. ಆಶ್ನಾರ್ಣ ಭಟ್ಟರ ವ್ಯಕ್ತಿತ್ವವನ್ನು ತೆರೆದಿಡುವ ಲಕ್ಷ್ಮಮ್ಮ ಹೇಗೆ ಬಲಿಯಾದರೆನ್ನುವುದನ್ನು ತಿಳಿಸುತ್ತಾರೆ.

ಇಲ್ಲಿ ಬಳಸಿಕೊಂಡಿರುವ ಭಾಷೆಯಷ್ಟೆ ಕಥೆಯ ವಸ್ತುಗಳು ವಿಭಿನ್ನ ಮತ್ತು ಚಿಂತನೆಗೆ ಹಚ್ಚುವಂತಹವುಗಳು. ವೈದೇಹಿಯವರ ಕಥೆಗಳನ್ನು ಓದಿಕೊಂಡಷ್ಟು ಹೊಸ ಹೊಸ ವಿಚಾರಗಳು ನಮ್ಮನ್ನು ಕಾಡುತ್ತಿರುತ್ತವೆ. ಹಾಗಾಗಿ ‘ಕ್ರೌಂಚ ಪಕ್ಷಿಗಳು’ ಒಂದು ದೊಡ್ಡ ಓದುಗವರ್ಗವನ್ನೇ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

Read more!

Sunday, December 19, 2010

ಅನಂತಮೂರ್ತಿ ಅವರ ಕೃತಿ ‘ಸಂಸ್ಕಾರ’


ಯು. ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಓದುತ್ತಲೇ ಓದುಗನನ್ನು ಬೆರಗುಗೊಳಿಸುವ ಕಾದಂಬರಿ. ಯಾವುದು ಸಂಸ್ಕಾರ? ಅದನ್ನು ಡ್ರ್ಯಾಸ್ಟಿಕ್ ಆಗಿ ಅನುಸರಿಸು ಅಂದವರು ಯಾರು? ತೋರಿಕೆಗಾಗಿ ಮಾತ್ರ ಈ ಸಂಸ್ಕಾರಗಳು ಬೇಕೆ? ಪ್ರಾಂಜಲ ಮನಸ್ಸಿನಿಂದ ಸಂಸ್ಕಾರಗಳನ್ನು ನಡೆಸಿಕೊಂಡು ಬಂದವರು ಯಾರು? ಹೌದಲ್ಲವೇ, ಇಷ್ಟೊಂದು ಅಸಂಗತ ಅನಿಸಬಹುದಾದ ಪ್ರಶ್ನೆಗಳು ನಮ್ಮನ್ನು ಕೊರೆಯುತ್ತವೆ. ಇದಕ್ಕೆಲ್ಲಾ ಉತ್ತರವಾಗಿ ನಿಲ್ಲಬಹುದಾದ ಒಂದು ಪಾತ್ರ ಮಾತ್ರ ಪ್ರಾಣೇಶಾಚಾರ್ಯರು!"

ತಟ್ಟನೆ ಕಣ್ಣೆದುರು ನಿಲ್ಲುವ ಪ್ರಾಣೇಶಾಚಾರ್ಯರು, ರೋಗಿಷ್ಟೆ ಮಡದಿಯನ್ನು ಉಪಚರಿಸುತ್ತಾ, ಸಂಸ್ಕಾರಗಳನ್ನು ಪಾಲಿಸಿಕೊಂಡು ಬಂದವರು. ಅದರಿಂದಾಗಿಯೆ ಬಹಳ ಸಂಯಮದಿಂದ ಜೀವಿಸುವ ಅವರಿಗೆ ಬದುಕು ಹದವಾಗಿರುವುದು ತಾನು ಪಾಲಿಸಿಕೊಂಡು ಬರುತ್ತಿರುವ ಸಂಯಮದಿಂದ ಎಂದು ತೃಪ್ತಿ ಪಟ್ಟುಕೊಂಡವರು. ಆದರೆ ನಾರಣಪ್ಪ ಸಂಸ್ಕಾರಗಳನ್ನು ಮಾಡಿಕೊಂಡು ಬರಬೇಕಾಗಿದ್ದ ಜಾತಿಯವನಾಗಿದ್ದು, ಅವೆಲ್ಲವನ್ನೂ ತ್ಯಜಿಸಿ ತನ್ನ ಸಾವಿನ ಆನಂತರ ದೊಡ್ಡ ಸಮಸ್ಯೆಯಾಗಿ ಅಗ್ರಹಾರದವರಿಗೆಲ್ಲಾ ಕಾಡುತ್ತಿರುತ್ತಾನೆ. ಒಂದು ರೀತಿಯಲ್ಲಿ ಜಾತಿಯಿಂದ ಬಹಿಷ್ಕಾರಕ್ಕೆ ಒಳಗಾಗದೆ ಜಾತಿಯ ಸಂಸ್ಕಾರಗಳನ್ನು ಬಿಟ್ಟವನ ಶವಸಂಸ್ಕಾರಕ್ಕೆ ಅಗ್ರಹಾರದ ಯಾವೊಬ್ಬನೂ ಮುಂದಾಗುವುದಿಲ್ಲ. ಲಕ್ಷಣಾಚಾರ್ಯರಾಗಲಿ, ಗರುಡಾಚಾರ್ಯರಾಗಲಿ ಕಾಯುವುದು ಪ್ರಾಣೇಶಾಚಾರ್ಯರ ಉತ್ತರಕ್ಕಾಗಿ. ಪ್ರಾಣೇಶಾಚಾರ್ಯರಾದರೂ ಗ್ರಂಥಗಳನ್ನು, ತಾಳೆಗರಿಯ ಓಲೆಗಳನ್ನು ತಿರುಚಿ ಹಾಕಿದರೂ ಕೊನೆಗೆ ದೇವರ ಮೊರೆ ಹೊಕ್ಕರೂ ಸಮಸ್ಯೆಯಾಗಿ ಕಾಡುವ ನಾರಣಪ್ಪನ ಶವಸಂಸ್ಕಾರ ಮಾಡುವ ಯಾವ ಪರಿಹಾರ ಕ್ರಮಗಳು ಸಿಗುವುದಿಲ್ಲ. ಇದರಿಂದ ಅಂತರ್ಮುಖಿಯಾಗುತ್ತಾರೆ.

ಸಂಸ್ಕಾರ ಕಾಣದ ನಾರಣಪ್ಪನ ಶವ ಅಗ್ರಹಾರದ ತುಂಬೆಲ್ಲಾ ಗಬ್ಬು ನಾತ ಬಿರುತ್ತಿದ್ದರೂ ಎಲ್ಲರೂ ತಮ್ಮ ತಮ್ಮ ಹಠ ಸಾಧನೆಯಲ್ಲಿಯೇ ಇದ್ದು ಬಿಡುತ್ತಾರೆ. ಶವಸಂಸ್ಕಾರವಾಗಬೇಕಾದರೂ ತಮ್ಮ ಲಾಭ ಗಳಿಕೆಯ ದೃಷ್ಟಿಯಿಂದ ಯೋಚಿಸುತ್ತಾರಲ್ಲದೆ ಅಗ್ರಹಾರದಲ್ಲಿರುವವನ ಶವ ಸಂಸ್ಕಾರವನ್ನು ಮಾಡಲು ಮುಂದಾಗುವುದಿಲ್ಲ. ಅವರವರ ಸ್ವಾರ್ಥದಿಂದ ಗುರುಗಳಾದ ಪ್ರಾಣೇಶಾಚಾರ್ಯರನ್ನು ಒಪ್ಪಿಸುವುದಕ್ಕೆ ಹಾತೊರೆದರೂ ಅವರ ಮಾತನ್ನು ಮೀರದವರು ಅಗ್ರಹಾರದ ಮಂದಿ. ಗುರುಗಳಿಗಾದರೂ ಅವರ ಜೀವನವೇ ಡೋಲಾಯಮಾನ ಸ್ಥಿತಿಯಲ್ಲಿರುತ್ತದೆ. ನಾರಣಪ್ಪನ ಶವಸಂಸ್ಕಾರದ ಬಗ್ಗೆ ಯಾವೊಂದು ನಿರ್ಧಾರವನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಪರಿಹಾರದ ಹುಡುಕಾಟದಲ್ಲಿಯೆ ದಿನ ಕಳೆಯುತ್ತಾ ಹದ್ದುಗಳು ಹಾರಡುವಲ್ಲಿಯವರೆಗೆ ಮುಂದುವರಿಯುತ್ತದೆ ಅಲ್ಲಿಯ ಪರಿಸ್ಥಿತಿ. ಅಗ್ರಹಾರದ ಜನರ ನಿರೀಕ್ಷೆ ಗುರುಗಳಿಂದ ಬರಬಹುದಾದ ಶವದ ಇತ್ಯರ್ಥದ ಬಗ್ಗೆ. ಅವರ ನಿರ್ಧಾರದ ವಿಳಂಬದಲ್ಲಿ ಅಗ್ರಹಾರದ ಮಂದಿ ಉಪವಾಸ ಬೀಳುವುದು ಅನಿವಾರ್ಯವಾದಾಗ ಅವರೆಲ್ಲಾ ಸೇರಿ ಊರಿನ ಹೊರಗೆ ಹಸಿವೆಯನ್ನು ನೀಗಿಕೊಳ್ಳುವ ದಾರಿಯನ್ನು ಹುಡುಕುತ್ತಾರೆ.

ಚಂದ್ರಿಯೆನ್ನುವ ಸೂಳೆಯ ಜೊತೆಗೆ ಮಧು ಮಾಂಸದ ರುಚಿಗೆ ಅಂಟಿಕೊಂಡ ನಾರಣಪ್ಪನನ್ನು ಜಾತಿಯಿಂದ ಬಹಿಷ್ಕಾರ ಹಾಕದಿರುವುದೇ ತೊಡಕಾಗಿ ಆತನ ಹೆಣ ಅನಾಥವಾಗುತ್ತದೆ. ಆಗ ಅಗ್ರಹಾರದ ತುಂಬೆಲ್ಲಾ ಸ್ವೇಚ್ಛೆಯಿಂದ ಓಡಾಡುವ ಇಲಿಗಳು ಪ್ಲೇಗ್ ಅನ್ನೋ ಮಹಾಮಾರಿಯನ್ನು ಊರಿಡೀ ಹಬ್ಬಿಸುವುದನ್ನು ಯಾವೊಬ್ಬನ ಅರಿವಿಗೂ ಬಾರದು. ನಾರಣಪ್ಪನ ಸಾವಿಗೂ ಅದೇ ಮಹಾಮಾರಿಯೇ ಕಾರಣವಾದರೂ ಆತ ಚಂದ್ರಿಯ ಬಂಧನದಲ್ಲಿದ್ದುದರಿಂದ ಜಾತೀವಾದವೇ ಮೇಲೆ ನಿಂತು ಅವನ ಸಂಸ್ಕಾರಕ್ಕೂ ತಡೆಯಾಗುತ್ತದೆ.

ಇಲ್ಲಿ ಚಂದ್ರಿ ಅಗ್ರಹಾರದ ಜನರಿಗಿಂತ ಕೆಳವರ್ಗದವಳಾದರೂ ಅವಳಿಗೆ ನಾರಣಪ್ಪನ ಶವ ಸಂಸ್ಕಾರ ಮಾಡಬೇಕೆನ್ನುವ ಮಾನವೀಯತೆ ಇದೆ. ಆದರೆ ನಾರಣಪ್ಪನ ಜಾತಿಯಲ್ಲಿಯೇ ಹುಟ್ಟಿದ ಯಾವನಿಗೂ ಆ ಮಾನವೀಯತೆ ಇಲ್ಲದಿರುವುದು ಖೇದನೀಯ. ಚಂದ್ರಿಯಾದರೂ ತನ್ನಲ್ಲಿರುವ ಚಿನ್ನವನ್ನು ಕೊಟ್ಟು ನಾರಣಪ್ಪನ ಶವಸಂಸ್ಕಾರ ಮುಗಿಸಿ ಋಣಮುಕ್ತಳಾಗಬೇಕೆನ್ನುವ ನಿರ್ಧಾರವಿದ್ದವಳು, ಚಿನ್ನವನ್ನೆಲ್ಲಾ ಪ್ರಾಣೇಶಾಚಾರ್ಯರ ಕೈಯಲ್ಲಿಡುತ್ತಾಳೆ. ಆದರೆ ಮನೆಗೆ ಹಿಂತಿರುಗುವಾಗ ಕೊಳೆತು ನಾರುವ ಶವದ ಭೀಕರತೆಗೆ ಬೆದರಿ ರಾತ್ರೋ ರಾತ್ರಿ ಶೇಷಪ್ಪನಲ್ಲಿ ವಿನಂತಿಸಿಕೊಂಡ ಅವಳು ಅವನ ನಿರಾಕರಣೆಯಿಂದ ಮೀನಿನ ವ್ಯಾಪಾರಿ ಮಹ್ಮದ್ ಬ್ಯಾರಿಯ ಕೈಯಲ್ಲಿ ಶವವನ್ನು ಬೂದಿ ಮಾಡಿಸಿ ತನ್ನೂರಿಗೆ ಮರಳುತ್ತಾಳೆ.

ಒಮ್ಮೆ ಚಂದ್ರಿಯ ಸ್ಪರ್ಶದಿಂದ ಪುಲಕಿತರಾದ ಪ್ರಾಣೇಶಾಚಾರ್ಯರು ಅವನ ಸಾನಿಧ್ಯ ಸುಖವನ್ನು ಅನುಭವಿಸುವ ಮನಸ್ಸಾಗಿ ಬಹಳಷ್ಟು ಚಿಂತಿತರಾಗಿರುವಾಗಲೆ ಅವರ ರೋಗಿಷ್ಟ ಮಡದಿ ಸಾವನ್ನಪ್ಪುತ್ತಾಳೆ. ಅವಳ ಸಂಸ್ಕಾರ ಮುಗಿಸಿ ಕಾಲು ಕೊಂಡೊಯ್ದಲ್ಲಿ ನಡೆಯುವುದೆಂದು ಅಗ್ರಹಾರವನ್ನು ಬಿಡುತ್ತಾರೆ. ಅವರ ಮನಸ್ಸೆಲ್ಲಾ ಚಂದ್ರಿಯೇ ತುಂಬಿರುತ್ತಾಳೆ. ಅವಳಿಂದ ಪಡೆದ ಸುಖದ ಮೆಲುಕಿನಲ್ಲಿ ದೂರ ಸವೆಸುತ್ತಿರಲು ಪುಟ್ಟನ ಜೊತೆಯಾಗುತ್ತದೆ. ಅವರಲ್ಲಿರುವ ಅವ್ಯಕ್ತ ಭೀತಿ ತನ್ನ ಪರಿಚಯವೇನಾದರೂ ಆಗಿ, ತನ್ನ ಸುಳಿವು ದೊರೆತರೆ? ಅನ್ನುವುದರಲ್ಲಿಯೂ ಪುಟ್ಟ ಆಹ್ವಾನಗಳನ್ನೆಲ್ಲಾ ನಿರಾಕರಿಸುತ್ತಾ, ಸ್ವೀಕರಿಸುತ್ತಾ ಮುನ್ನಡೆದವರಿಗೆ ಒಂದು ರೀತಿಯ ತಲ್ಲಣವಿರುತ್ತದೆ. ಆದರೂ ಅವರ ತುಡಿತವಿರುವುದು ಚಂದ್ರಿಯನ್ನು ಸೇರುವಲ್ಲಿ. ತಮ್ಮ ಅಸ್ತಿತ್ವವನ್ನೇ ಮರೆ ಮಾಚಿಕೊಂಡು ಸಂಸ್ಕಾರ ಬಂಧವನ್ನು ಕಳಚಿ ಕೊನೆಗೆ ದೇವಸ್ಥಾನದ ಊಟಕ್ಕೆ ಕುಳಿತಾಗ ಅವರ ಗುರುತು ಹಿಡಿದ ವ್ಯಕ್ತಿಯೊಬ್ಬ ಅವರನ್ನು ಪ್ರಶ್ನಿಸಿ ಆತಂಕಕೆಡೆ ಮಾಡುತ್ತಾನೆ. ಅವರು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಕಾಣದ ದಾರಿ ಹಿಡಿದಾಗ ಮತ್ತೆ ಪುಟ್ಟ ಎದುರಾಗುತ್ತಾನೆ. ಅವರನ್ನು ಗಾಡಿ ಹತ್ತಿಸುತ್ತಾನೆ. ಅವರು ನಿರಾಕರಿಸಿದರೂ ಗಾಡಿ ಏರಲೇ ಬೇಕಾದ ಪರಿಸ್ಥಿತಿ. ಮತ್ತೆ?

ಈಗ ಆಕಾಶದಲ್ಲಿ ನಕ್ಷತ್ರಗಳು, ಗೆರೆ ಚಂದ್ರ. ದಿಟ್ಟಗೆ ನಿಂತ ಸಪ್ತರ್ಷಿ ಮಂಡಳ. ಇದ್ದಕ್ಕಿದ್ದಂತೆ ಚಂಡೆಯ ಶಬ್ದ. ಅಲ್ಲೊಂದು ಇಲ್ಲೊಂದು ಕೊಳ್ಳಿಯ ಬೆಂಕಿ. ಗುಡ್ಡ ಹತ್ತುವ ಎತ್ತಿನ ಉಸಿರು. ಕೊರಳಿನ ಗೆಜ್ಜೆ. ನಾಲ್ಕೈದು ಗಂಟೆಗಳ ಪ್ರಯಾಣ. ಮತ್ತೆ?

ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು.

ಇಷ್ಟಾದರೂ ಈ ಕಾದಂಬರಿಯನ್ನು ಓದಿಯೆ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳಲೇಬೇಕಿರುವ ಅನಿವಾರ್ಯತೆ ಓದುಗನಿಗಿದೆ.

Read more!

Monday, November 29, 2010

ನಾಗತಿಹಳ್ಳಿ ಚಂದ್ರಶೇಖರ ಅವರ ‘ವಲಸೆ...’


ಮೇಷ್ಟ್ರ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಓದುವುದೆ ಒಂದು ಚೇತೋಹಾರಿ ಅನುಭವ. ಅವರ ‘ಬಾ ನಲ್ಲೆ ಮಧುಚಂದ್ರಕ್ಕೆ’ ಕಾದಂಬರಿ, ಅಮೆರಿಕಾ! ಅಮೆರಿಕಾ!! ಪ್ರವಾಸಕಥನ ಮತ್ತು ನನ್ನ ಪ್ರೀತಿಯ ಹುಡುಗಿಗೆ ಕಥಾಸಂಕಲನ ಯುವ ಮನಸುಗಳನ್ನು ಸಾಹಿತ್ಯದತ್ತ ಆಕರ್ಷಿಸಿದೆಯೆಂದರೆ ಹೆಚ್ಚಲ್ಲ. ಸದಾ ವಸ್ತುಸ್ಥಿತಿಯ ನಿಚ್ಚಳವಾದ ಅನಾವರಣ, ತಿಳಿ ಹಾಸ್ಯದ ಶೈಲಿಯ ಮಾತುಗಳು, ಒಂದಷ್ಟು ಮುದನೀಡುವ ಸನ್ನಿವೇಶಗಳು ಅವರ ಸಾಹಿತ್ಯದ ಕೃಷಿಯಲ್ಲಿ ಎದ್ದು ಕಾಣುವ ಸಂಗತಿಗಳು.

‘ವಲಸೆ ಹಕ್ಕಿಯ ಹಾಡು’ ಅವರ ಹೊಸ ಕೃತಿಯೇನಲ್ಲ. ಅದು ಅವರು ಎಂಬತ್ತರ ದಶಕದಲ್ಲಿ ಬರೆದ ಕಾದಂಬರಿ. ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಜೀವನವನ್ನ ಕಟ್ಟಿಕೊಡುವ ಶೈಲಿ ತುಂಬಾ ಆಪ್ತವೆನಿಸುತ್ತದೆ. ತಿಳಿ ಹಾಸ್ಯದೊಂದಿಗೆ ಆರಂಭವಾಗುವ ಕಾದಂಬರಿಯಲ್ಲಿ ಚಿಕ್ಕಮಾಳಿಗೆ ಕೊಪ್ಪಲು (ಸಿ.ಎಂ.ಕೊಪ್ಪಲು) ಅನ್ನುವ ಹಳ್ಳಿಯ ಚಿತ್ರಣವನ್ನು, ಅಲ್ಲಿಯ ಜನಜೀವನವನ್ನೂ ತೆರೆಯುತ್ತಾ ಕಾದಂಬರಿ ಓದುಗನನ್ನು ಸೆಳೆದುಕೊಳ್ಳುತ್ತದೆ. ಪಂಡ್ರಿಯೆನ್ನುವ ಮುಗ್ಧ ಹುಡುಗ, ಹುಟ್ಟು ಹೋರಾಟಗಾರನಲ್ಲದಿದ್ದರೂ ಪ್ರಾಮಾಣಿಕವಾಗಿ ಆ ಹಳ್ಳಿಯ ಬಗ್ಗೆ ಕಾಳಜಿವಹಿಸುವ ಕೆಂಚೇಗೌಡರು, ಪ್ರೀತಿ ತೋರಿದರೂ ಪರಿಸ್ಥಿತಿಯೊಂದಿಗೆ ರಾಜಿ ಮಡಿಕೊಳ್ಳದ ಸಿಡುಕು ಸ್ವಭಾವದ ಗೌಡರ ಮಡದಿ ಹೊಂಬಾಳಮ್ಮ, ಸ್ವತಂತ್ರವಾಗಿ ತಿರುಗಾಡಿಕೊಂಡು ಪಡ್ಡೆಯೆಂದು ಗುರುತಿಸಿಕೊಳ್ಳುವ ಗೌಡರ ಮಗ ಸ್ವತಂತ್ರ ಹೀಗೆ ನಾನಾ ಬಗೆಯ ಪಾತ್ರಗಳು ಈ ಕಾದಂಬರಿಯ ಬೆಳವಣಿಗೆಗೆಯಲ್ಲಿ ಜೀವ ಪಡೆದುಕೊಳ್ಳುತ್ತವೆ."

ಡ್ರಿಲ್ ಮಾಸ್ಟ್ರು ಯಲ್ಲಯ್ಯ ಪಂಡ್ರಿಗೆ ಸ್ವಾತಂತ್ರ್ಯ ದಿನಾಚರಣೆಯ ವಂದನಾರ್ಪಣೆಯ ಜವಾಬ್ದಾರಿಯನ್ನು ಕೊಟ್ಟ ಮೇಲೆ ಹೃಸ್ವ ಮತ್ತು ದೀರ್ಘಗಳ ವ್ಯತ್ಯಾಸ ತಿಳಿಯದ ಅವನು ಅದನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಉರು ಹೊಡೆದು ರಾತ್ರಿ ನಿದ್ದೆಯಲ್ಲಿಯೂ ಮಗ ಕನಸಿನಲ್ಲಿ ವಂದನಾರ್ಪಣೆಯೆನ್ನುವುದನ್ನು ಕನವರಿಸುವಾಗ ಅವನ ತಾಯಿ ಭವಾನಿ ಇದು ‘ಒಂದ’ಕ್ಕೆ ಸಂಬಂಧಿಸಿರಬಹುದೆಂದು ಊಹಿಸಿ, “ಎದ್ದು ಹೋಗಿ ಒಂದ ಮಾಡಿ ಬಂದು ಬಿದ್ಕೊ” ಎಂದು ಗದರಿಸಿವ ಸನ್ನಿವೇಶವಂತು ನಗೆಗಡಲಲ್ಲಿ ಮುಳುಗಿಸುತ್ತದೆ. ಇಂತಹ ಮುಗ್ಧತೆಯಿರುವ ಹಳ್ಳಿಯಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಪ್ರಚುರಪಡಿಸುವ ಗೌಡರಿಗೆ ಮಾತ್ರ ಮಗ ಸ್ವತಂತ್ರನಿಂದ ನೆಮ್ಮದಿಯಿರುವುದಿಲ್ಲ. ಸದಾ ಕುಡಿದು, ಗಲಾಟೆ ಮಾಡಿಕೊಂಡು ಬಂದು ಮನೆಯಲ್ಲಿ ತಾಯಿಯ ಮಾತಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು; ಮಾತ್ರವಲ್ಲ, ಗೌಡರ ನೆಮ್ಮದಿಯನ್ನು ಕದಿಯುತ್ತಾನೆ. ಅವನೊಂದು ದೊಡ್ಡ ಹೊರೆಯಾಗಿ ಸದಾ ಅವರನ್ನು ಕಾಡುತ್ತಲೇ ಇರುತ್ತಾನೆ.

ಇಷ್ಟಾದರೂ ಗೌಡರ ಸ್ವಾತಂತ್ರ್ಯ ಸೇವೆ ನಿಲ್ಲುವುದಿಲ್ಲ. ಅವರು ಶಾಲೆಯ, ಊರಿನ ಅಭಿವೃದ್ಧಿಗೆ ತೊಡಗುತ್ತಾರೆ. ಮನೆಯಲ್ಲಿ ಸದಾ ಹಾಲುಹೊಳೆಯೆ ಹರಿಯುತ್ತಿರುತ್ತದೆ. ಅವರ ಉದಾರಗುಣ ಹೊಂಬಾಳಮ್ಮನಿಗೆ ಸರಿಕಾಣದು. ಸದಾ ದುಮುಗುಟ್ಟುತ್ತಾ ಮೌನದ ತೆಕ್ಕೆಗೆ ಜಾರುವ ಅವರು ಒಮ್ಮೆಯೂ ಗೌಡರ ಬಳಿ ಪ್ರೀತಿಯಿಂದ ಮಾತನಾಡಿದಿಲ್ಲ. ಆದರೂ ಗೌಡರ ಮನೆಯೆ ನ್ಯಾಯದ ಕಟ್ಟೆಯಾಗಿರುವುದರಿಂದ ಅವರು ಹೇಳಿದ್ದೆ ನ್ಯಾಯವಾಗಿ ಊರವರಿಗೆಲ್ಲಾ ಅವರ ಮೇಲೆ ಗೌರವ, ಪ್ರೀತಿ ಎಲ್ಲವೂ.

ಇಂತಿರುವ ಗೌಡರು ದೇಶದಲ್ಲೆಲ್ಲಾ ಸ್ವಾತಂತ್ರ್ಯದ ಬಿರುಗಾಳಿ ಬೀಸುತ್ತಿರುವಾಗ ದೇಶಸೇವೆಗಾಗಿ ಅಲ್ಲದಿದ್ದರೂ ಗೆಳೆಯನೊಬ್ಬನನ್ನು ಹುಡುಕುತ್ತಾ ದೇಶ ಸುತ್ತಾಡುವುದಕ್ಕೆ ಹೋಗಿ ವಿಭಜನೆಯಾಗದ ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಕ್ಕಿಕೊಂಡು, ಅಲ್ಲಿ ತಾವು ಗಳಿಸಿಕೊಂಡ ಗೆಳೆಯನ ಮೂಲಕ ತಾನು ಹುಡುಕುತ್ತಿರುವ ವ್ಯಕ್ತಿಯ ಮಗನೆ ಆತನೆಂದು ತಿಳಿದು ಸಂತೋಷಪಡುತ್ತಾರೆ. ಆದರೆ ಗೌಡರ ತಂದೆಯಂತೆಯೆ ಆ ವ್ಯಕ್ತಿಯೂ ಎಲ್ಲಿ ಹೋದ? ಏನಾದನೆನ್ನುವುದು ಮಗನಿಗೂ ಗೊತ್ತಿರುವುದಿಲ್ಲ. ಹೀಗೆ ಅವರ ಹಿನ್ನಲೆಯನ್ನು ಕೆದಕುವ ಕಾದಂಬರಿ ಮತ್ತೆ ಓಟ ಪಡೆಯುವುದು ಕೆಂಚೇಗೌಡರ ಮಗನ ಮರು ಪ್ರವೇಶದಿಂದ. ಅವನು ತಂದೆಯ ಆಸ್ತಿಯನ್ನು ತನಗೆ ಕೊಡಬೇಕೆಂದು ಗಲಾಟೆಯೆಬ್ಬಿಸಿ ಮನೆಯನ್ನು ರಣರಂಗ ಮಾಡುತ್ತಾನೆ. ಗೌಡರಿಗಾದರೂ ಅವನಿಗೆ ಆಸ್ತಿ ಬರೆದುಕೊಟ್ಟರೆ ತಮಗೆ ಉಳಿಯುವುದು ಚಿಪ್ಪು ಮಾತ್ರವೆಂದು ತಿಳಿದಿರುವುದರಿಂದ ಆ ವಿಷಯವನ್ನು ಮುಂದಕ್ಕೆ ದೂಡುತ್ತಾರೆ. ಆದರೆ ಬಂದಾಗಲೆಲ್ಲ ಅವನು ಗಲಾಟೆಯೆಬ್ಬಿಸುತ್ತಲೇ ಇರುತ್ತಾನೆ.

ಒಮ್ಮೆ ಆ ಊರಿಗೆ ಪ್ರಪಂಚ ಅಲೆದಾಟಕ್ಕೆ ಬಂದಿರುವ ಪ್ರೆಂಚ್ ಮಹಿಳೆ ವುಲ್ಫ್ಗಂಗ್ಳು ಭೇಟಿಕೊಟ್ಟು ಗೌಡರ ಮನೆಯಲ್ಲಿಯೆ ಉಳಿಯುತ್ತಾಳೆ. ಅವಳಿಗೆ ಸಿ.ಎಂ.ಕೊಪ್ಪಲು ಹಳ್ಳಿ ತುಂಬಾ ಇಷ್ಟವಾಗಿರುತ್ತದೆ. ಅಲ್ಲಿಯ ಸಂಸ್ಕೃತಿ, ಜನರ ನಡೆ ನುಡಿಗಳನ್ನು ಮೆಚ್ಚಿ, ಅವಳನ್ನು ಬೆರಗಿನಿಂದ ನೋಡುವ ಹಳ್ಳಿಯ ಜನರ ಪ್ರೀತಿಪಾತ್ರಳಾಗುತ್ತಾಳೆ. ಗೌಡರಿಗೆ ತಮ್ಮ ಮನಸ್ಸಿನಲ್ಲಿರುವ ಖಿನ್ನತೆಯನ್ನು ಬಿಚ್ಚಿಕೊಳ್ಳುವ ಸಂದರ್ಭ ಬಂದಾಗ ಅವರು ತಮ್ಮ ಮಗನಿಂದಾದ ನೋವನ್ನೆಲ್ಲಾ ಹೇಳಿಕೊಂಡು ಹಗುರಾಗುತ್ತಾರೆ. ಅವಳ ಸಾಂತ್ವನದಲ್ಲಿ ಒಬ್ಬ ತಾಯಿ, ಒಬ್ಬ ಸ್ನೇಹಿತೆಯ ಆದರ್ಶವನ್ನು ಕಾಣುತ್ತಾರೆ. ಅವಳ ಮಾತಿನಂತೆ ತಮ್ಮ ಎಲ್ಲಾ ಆಸ್ತಿಯನ್ನು ಮಗನಿಗೆ ಬರೆದು ತಾವು ಮಡದಿಯ ಜೊತೆಗೆ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಉಳಿಯುತ್ತಾರೆ.

ಸ್ವತಂತ್ರ ತನ್ನ ದುಷ್ಟ ಗುಣಗಳನ್ನೆ ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಶಾಸಕನಾಗುತ್ತಾನೆ. ಅವನು ಕಾಟಾಚಾರಕ್ಕಾದರೂ ತಂದೆ-ತಾಯಿಯನ್ನು ತಂದಿರಿಸಿಕೊಳ್ಳಬೇಕೆಂದುಕೊಂಡರೂ ಸ್ವಾಭಿಮಾನಿಯಾದ ಕೆಂಚೇಗೌಡರು ಒಲ್ಲೆನೆನ್ನುತ್ತಾರೆ. ಏತನ್ಮಧ್ಯೆ ಹೊಂಬಾಳಮ್ಮ ಜಗದ ಋಣ ತೀರಿಸಿಕೊಂಡಿರುತ್ತಾಳೆ. ಈ ಆಘಾತ ಗೌಡರನ್ನು ಭೀಕರವಾದ ಪರಿಸ್ಥಿತಿಗೆ ತಳ್ಳುತ್ತದೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ತಾತ್ವರ ಪಡುತ್ತಾರೆ. ಆಗ ಅವರ ಸಹಾಯಕ್ಕೆ ಬರುವುದು ಅವರ ಇಂಗ್ಲಿಷ್ ಮಾತ್ರ. ಹಾಗಾಗಿ ಅವರು ಭದ್ರಾವತಿಯಂತಹ ಊರನ್ನು ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ತಾನೇ ಸಲಹಿ ಸಾಕಿದ ಹುಡುಗ ಪಂಡ್ರಿಯ ಮಾತುಗಳಿಂದ ಭೂಮಿಗೆ ಇಳಿದ ಅವರಿಗೆ, ತನ್ನ ಬೆನ್ನ ಹಿಂದೆ ಕರಾಳ ವಾಸ್ತವ ಲೋಕವೊಂದಿದೆ. ಅದು ಸಾವಿಗಿಂತ ಭೀಕರ ಮತ್ತು ನಿರ್ಧಯಿ. ಪ್ರತಿ ಮನುಷ್ಯ ಇಂಥದ್ದೊಂದು ಭೀಕರ ಅವಸ್ಥೆಯನ್ನು ಬೆನ್ನ ಹಿಂದೆ ಹೊತ್ತು ತಿರುಗುತ್ತಾನೆ. ಅದರ ಅರಿವಿದ್ದೂ ನಿರ್ಲಕ್ಷ್ಯದಿಂದ ನಡೆಯುವವ ಜಾಣನೆನ್ನುವ ಅರಿವಾಗುತ್ತದೆ. ಅವರು ಆರಿಸಿಕೊಂಡ ದಾರಿಯೇನು ಸುಗಮವಾಗಿರುವುದಿಲ್ಲ. ಬಹದ್ದೂರು ಷಾನ ಗಜಲುಗಳಲ್ಲಿಯ ಸತ್ಯವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಕೊನೆಗೆ ಅಲ್ಲಿಯೂ ಅವರಿಗೆ ಸೋಲು ಎದುರಾಗುತ್ತದೆ.

ರೋಗಗ್ರಸ್ತನಾಗಿ ಅವರು ಮರಳಿ ಸಿ.ಎಂ.ಕೊಪ್ಪಲು ಹಳ್ಳಿಗೆ ಬರುತ್ತಾರೆ. ಅಲ್ಲಿ ಒಂದು ರೀತಿಯ ಮತಿಭ್ರಾಂತಿಗೆ ಒಳಗಾಗಿ ಹೇಗೇಗೋ ನಡೆದುಕೊಳ್ಳುತ್ತಾರೆ. ಇದನ್ನು ಕಂಡ ಮಗ ಸ್ವತಂತ್ರ ತನ್ನ ಮರ್ಯಾದೆಯ ಪ್ರಶ್ನೆಯೆಂದು ತಿಳಿದು ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾನೆ. ಅಲ್ಲಿಂದ ಹಿಂತಿರುಗಿದ ಅವರು ಏನೂ ಅಲ್ಲದ, ಯಾರಿಗೂ ಬೇಡವಾದ ಒಂದು ಮೌನಿಯಾಗಿ ಮಾತ್ರ ಪರಿಚಯವಾಗುತ್ತಾರೆ. ಹೀಗೆ ಕಾದಂಬರಿ ಅಂತ್ಯವಾಗುತ್ತದೆ. ಮೊದಲೆ ಹೇಳಿದಂತೆ ಮೇಷ್ಟ್ರ ಕಾದಂಬರಿ ನಮ್ಮನ್ನು ಕಾಡುತ್ತಲೆ ಇರುತ್ತದೆ. ಕೆಂಚೇಗೌಡರ ಪಾತ್ರವಂತು ಆದರ್ಶಪ್ರಾಯವಾಗಿ ಮೂಡಿಬಂದಿದೆಯೆಂದರೆ ಅಚರಿಯೇನಿಲ್ಲ.

ಈ ಕೃತಿಯನ್ನು ‘ಅಭಿವ್ಯಕ್ತಿ’ ಒಂದು ಸಾಂಸ್ಕೃತಿಕ ವೇದಿಕೆ, ನಂ. 166, 28ನೇ ಅಡ್ಡ ರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070, ಫೋನ್ : 080-26715235 ಇವರು ಪ್ರಕಟಿಸಿದ್ದಾರೆ.

Read more!

Friday, November 26, 2010

ಉತ್ಕೃಷ್ಟ ರಚನೆಯ ‘ಜಾಲ’


ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅವ್ಯವಸ್ಥೆಯ ವಿಡಂಬನಾತ್ಮಕ ರಚನೆಯ ‘ಜಾಲ’ ಕಾದಂಬರಿ ಇಂಗ್ಲಿಷ್ ಕಾದಂಬರಿಯನ್ನು ಓದುತ್ತಿರುವಂತೆ ಭಾಸವಾದರೆ ಸುಳ್ಳಲ್ಲ. ಈ ರೀತಿಯ ರಚನೆ ಒಬ್ಬ ಸಾಮಾನ್ಯ ಲೇಖಕನಿಗೆ ಅಸಾಧ್ಯ. ಎಷ್ಟೊಂದು ವಿಷಯಗಳನ್ನು ಸೂಕ್ಷ್ಮವಾಗಿ, ಬಹಳ ನಾಜೂಕಾಗಿ, ವಿಡಂಬನೆಯ ಶೈಲಿಯಲ್ಲಿ ಕಾದಂಬರಿಕಾರ ನಾರಾಯಣ ಮಾಳ್ಕೋಡ್ ಕಟ್ಟಿಕೊಡುತ್ತಾರೆ. ಕಾದಂಬರಿಯಲ್ಲಿ ಬರುವ ರಾಜಕೀಯ ಅವ್ಯವಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಕಾಣಸಿಗದಿದ್ದರೂ ಅದು ಎಲ್ಲೋ ಒಂದು ಕಡೆ ನಡೆಯುತ್ತಿರುವಂತೆ ನಮಗೆ ಅನಿಸುತ್ತದೆ.

ಇಲ್ಲಿಯ ಪಾತ್ರಗಳೆಲ್ಲವೂ ಮೆಚ್ಯೂರ್ಡ್ ಪಾತ್ರಗಳು. ಏನನ್ನೋ ಹೇಳುತ್ತಾ ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಬಹಳ ಚೆನ್ನಾಗಿ ಅರಗಿಸಿಕೊಂಡಿರುವಂತೆ ಮಾತುಗಳ ಮೂಲಕ ವಸ್ತು ಸ್ಥಿತಿಯನ್ನು ಬಿಚ್ಚಿಡುತ್ತಾ ಹೋಗುತ್ತವೆ ಇಲ್ಲಿಯ ಪಾತ್ರಗಳೆಲ್ಲ. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲ; ಅವಳು ರಾಜಕೀಯದ ಏರು ಪೇರುಗಳನ್ನು ಅರಿತವಳು ಅನ್ನುವಂತೆ ಇಲ್ಲಿಯ ಸಣ್ಣ ಪುಟ್ಟ ಪಾತ್ರಗಳು ಕೂಡ ಬಹಳ ಸೊಗಸಾಗಿ ಮಾತನಾಡುತ್ತವೆ. ಒಂದಕ್ಕಿಂತ ಒಂದು ಪಾತ್ರಗಳ ಮಾತುಗಳು ಅಸಂಗತವೆನಿಸಿದರೂ ಅವುಗಳ ಒಳಗಿರುವ ನಿಗೂಢತೆ ಬಹಳ ಸುಲಭವಾಗಿ ಓದುಗನನ್ನು ತಲುಪುತ್ತದೆ. ಈ ರೀತಿಯ ಅಸಂಗತ ಮಾತುಗಳನ್ನೇ ಪೋಣಿಸಿ ಸಾಮಾಜಿಕ, ರಾಜಕೀಯದ ಅಭದ್ರತೆಯನ್ನು ಜಾಲಾಡಿಸುವ ರಚನೆ ಇಷ್ಟವಾಗುತ್ತದೆ. ಇಲ್ಲಿ ಒಂದು ಸನ್ನಿವೇಶಕ್ಕೆ ಇನ್ನೊಂದನ್ನು ಬೆಸೆಯುವ ಮಾತಿನ ಮಂಟಪ ಕಾದಂಬರಿಕಾರನ ಕೈಯಲ್ಲಿ ಲೀಲಾಜಾಲವಾಗಿ ಮೂಡಿಬಂದಿದೆ."

ವ್ಯಕ್ತಿ ಮತ್ತು ಪರಿಸ್ಥಿತಿಯ ಸಂಬಂಧಗಳು, ರಾಜಕೀಯ ಬಿಕ್ಕಟ್ಟುಗಳು, ವಿದ್ರೋಹಗಳು, ವಿಕಲ್ಪಗಳು ಇವೆಲ್ಲವೂ ಈ ಕಾದಂಬರಿಯಲ್ಲಿ ಆಟವಾಡುತ್ತಾ ಪಾತ್ರಗಳೆಲ್ಲವೂ ಒಂದನ್ನು ಇನ್ನೊಂದು ಮುಷ್ಟಿಯಲ್ಲಿ ಹಿಡಿದುಕೊಂಡಿರುವಂತೆ ಭಾಸವಾದರೂ ಇಲ್ಲಿ ವಾಸ್ತವದ ಕರಿ ನೆರಳು ಕಾಣಿಸುತ್ತದೆ. ದಿನಬೆಳಗಾದರೆ ನಡೆಯುವ ವಿದ್ಯಮಾನಗಳು ಇಲ್ಲಿ ಈಗಲೆ ನಡೆಯುತ್ತಿರುವಂತೆ ಬಿಂಬಿತವಾಗಿವೆ.

ಮಾದರಿ ಪಟ್ಟಣವಾಗಿ ರೂಪುಗೊಂಡಿರುವ ಹೊಸಪಟ್ಟಣದ ರಚನೆ ಮತ್ತು ಕಲ್ಪನೆಯೆ ವಿಚಿತ್ರವಾದ್ದುದು. ಒಂದು ವೃತ್ತಾಕಾರದಲ್ಲಿರುವ ಪಟ್ಟಣದಲ್ಲಿ ಅರವಿಂದ ಹೆಗಡೆಯೆನ್ನುವ ಪೂಜಾರಿ, ದಾಸಪ್ಪನೆನ್ನುವ ಏಕಸಾಮ್ಯವಿಚಾರಧಾರೆಯ ರಾಜಕೀಯ ವ್ಯಕ್ತಿ; ಹೊರನೋಟಕ್ಕೆ ಇಬ್ಬರೂ ಬೇರೆಬೇರೆಯದಾಗಿ ಕಂಡರೂ ಇಬ್ಬರಲ್ಲು ಒಂದು ರೀತಿಯ ಸಾಮ್ಯತೆ ಇದೆ. ಜನರನ್ನ ತನ್ನತ್ತ ಒಲಿಸಿಕೊಳ್ಳುವ ಸಾಫ್ಟ್ ಕಾರ್ನರ್ ಅರವಿಂದನದ್ದಾದರೆ, ಜನರನ್ನು ತನ್ನ ಶಕ್ತಿ, ವಾಕ್ಚಾತುರ್ಯ, ಬೆದರಿಕೆಯ ಮೂಲಕ ಆಕ್ರಮಿಸಿಕೊಳ್ಳುವ ವ್ಯಕ್ತಿ ದಾಸಪ್ಪ. ಹಿಟ್ಲರಿಜಂ ಕೂಡ ಇಲ್ಲಿ ಎದ್ದು ಕಾಣುತ್ತದೆ.

ಕಥೆ ಆರಂಭವಾಗುವುದು ಶಹನಾಯಿ ವಾದಕ ವೆಂಕಪ್ಪ ಭಂಡಾರಿಯ ಕೊಲೆಯಿಂದ. ಇಲ್ಲಿ ಕೊಲೆ ಮಾಡಿದವರು ಯಾರು? ಪಶುವಿನಷ್ಟು ಸಾಧುವಾದ ವೆಂಕಪ್ಪನನ್ನು ಯಾಕೆ ಕೊಲೆ ಮಾಡಿದರು? ಇವೆಲ್ಲಾ ಕ್ಷುಲ್ಲಕವಾಗಿ ಕೇವಲ ಆ ಕೊಲೆಯಿಂದ ಉದ್ಭವಿಸಿದ ಬಿಕ್ಕಟ್ಟುಗಳನ್ನು ಮಾತ್ರ ಜಾಲಾಡುತ್ತಾ ಸಾಗುತ್ತದೆ ಕಥೆ. ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುವ ರಚನೆಯಲ್ಲವಾದರೂ ಸಮಾಜದಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ತುಡಿತ ಓದುಗನನ್ನು ಬಿಟ್ಟುಕೊಡುವುದಿಲ್ಲ. ಇಲ್ಲಿಯ ಸಂಭಾಷಣೆಗಳೆಲ್ಲವೂ ಹಲವಾರು ವಿಷಯಗಳನ್ನು ಪ್ರಸ್ತುತಪಡಿಸುತ್ತವೆ.

ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಒಬ್ಬ ತಾಯಿಯ ಮಾತು ಹೇಗಿದೆಯೆಂದರೆ - ‘ಸದ್ಯದಲ್ಲೇ ಎದುರಾಗಲಿರುವ ಚುನಾವಣೆಯಲ್ಲಿ ನಾನು ಮತ ಚಲಾಯಿಸಬಹುದು ಎನಿಸುತ್ತದೆ’ ಈ ಮಾತುಗಳು ಇಲ್ಲಿ ರಾಜಕೀಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಆರೋಗ್ಯ ಸುಧಾರಿಸಿದೆ. ಎದ್ದು ಓಡಾಡಬಲ್ಲೆ ಅನ್ನುತ್ತಿದ್ದಳೆನೋ... ಇದು ಲೇಖಕನ ಪ್ರಬುದ್ಧತೆಯ ಲಕ್ಷಣವೂ ಹೌದು ಅನಿಸಿದರೆ ತಪ್ಪಲ್ಲ.

ಸುಬ್ಬಯ್ಯನ ಕ್ಷೌರದ ಅಂಗಡಿ ರಾಜಕೀಯದ ವಿಶ್ಲೇಷಣೆಯ ಅಡ್ಡೆಯಿದ್ದಂತೆ. ಅಲ್ಲಿ ನಡೆಯುವ ಮಾತುಕತೆಗಳು ಇನ್ನೆಲ್ಲಿಯೂ ಕೇಳಿಸಲಾರವು. ಇವತ್ತಿನ ರಾಜಕೀಯದ ಬಿಕ್ಕಟ್ಟನ್ನು ಪ್ರಸ್ತುತಪಡಿಸುವ, ‘ಆಡಳಿತ ಬದಲಾಗುತ್ತದೆ, ಸರ್ಕಾರ ಬದಲಾಗುತ್ತದೆ. ಆದರೆ ಜನರ ಸ್ಥಿತಿ ಮಾತ್ರ ಒಂದೇ ರೀತಿಯಲ್ಲಿರುತ್ತದೆ’ ಅನ್ನುವ ಮಾತು ಅಕ್ಷರಶ: ಸತ್ಯವಾದದ್ದು. ಕಾದಂಬರಿಯ ಉದ್ದಕ್ಕೂ ಇಂತಹ ವಿವೇಚನೆಯುಳ್ಳ ಮಾತುಗಳು ಬರುತ್ತಿರುತ್ತವೆ.

ಇಲ್ಲಿ ಬರುವ ಸ್ತ್ರೀ ಪಾತ್ರಗಳು ಕೂಡ ಬಹಳ ದೃಢವಾದ ಹಂಬಲವುಳ್ಳ ಪಾತ್ರಗಳು. ಗಾಯತ್ರಿ, ಸೀತಾ, ಮಾಧವಿ, ಭಾಗ್ಯ, ಸರಸ್ವತಿ, ಮೀನಾ, ಮಾಲಿನಿ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾದರೂ ಅದರಲ್ಲಿಯೆ ಕೊರಗುವುದಿಲ್ಲ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವಂತಹವುಗಳು. ಈ ಪಾತ್ರಗಳನ್ನು ಕೀಳಾಗಿ ಬಿಂಬಿಸಲು ಗೋಡೆಗೆ ಅಂಟುವ ಪೋಸ್ಟರ್ಗಳ ಬಗ್ಗೆ ಹೆದರಿಕೆಯಿದ್ದರೂ ಅದನ್ನು ವಿಚಾರಿಸುವಷ್ಟು ಮತ್ತು ಅಪವಾದವನ್ನು ಹತ್ತಿರಕ್ಕೆ ಎಳೆದುಕೊಳ್ಳುವಲ್ಲಿ ತಡೆಯುವ ಗಟ್ಟಿಗಿತ್ತಿಯರು ಇಲ್ಲಿಯ ಸ್ತ್ರೀಯರು.

ಕೆಲವೊಂದು ಕಟು ವಾಸ್ತವಿಕ ಸತ್ಯಗಳು ಕೂಡ ಇಲ್ಲಿ ಅನಾವರಣಗೊಂಡಿದೆ. ಉದಾಹರಣೆಗೆ ‘ಎಲ್ಲರೂ ತಮಗೆ ತಾವೇ ದೊಡ್ಡವರೆಂದುಕೊಂಡು ಬಿಡುತ್ತಾರೆ. ಒಂದು ಕೆಲಸ ಹೋದರೆ ಮತ್ತೊಂದು ಕೆಲಸ ಸಿಗುತ್ತದೆ ಎಂಬ ಧೋರಣೆ ಅವರದು. ಆದರೆ ಈ ಧೋರಣೆ ಇರುವವರು ಎಲ್ಲಿಯೂ ನೆಲೆ ಕಂಡುಕೊಳ್ಳುವುದಿಲ್ಲ. ಕೋತಿಗಳಂತೆ ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಜಿಗಿಯುತ್ತಲೇ ಇರುತ್ತಾರೆ. ಜೀವನದಲ್ಲಿ ಸೆಟಲ್ ಎಂಬ ಪ್ರಶ್ನೆಯೇ ಬರುವುದಿಲ್ಲ’ ಇದು ವಾಸ್ತವಿಕವಾಗಿ ಒಪ್ಪಿಕೊಳ್ಳಬೇಕಾದ ಮಾತು. ಈ ಮಾತುಗಳನ್ನು ಓದುವಾಗ ಶ್ರೀಕೃಷ್ಣ ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರ’ ನೆನಪಾಗದಿರದು.

ರಾಜಕಾರಣಿ, ಪೂಜಾರಿ, ಡಾಕ್ಟರ್, ನ್ಯಾಯಮೂರ್ತಿ ಹೀಗೆ ಒಂದೊಂದು ರೀತಿಯ ಪಾತ್ರಗಳ ಮೂಲಕ ವಾಸ್ತವತೆಯ ಅವಲಕ್ಷಣಗಳನ್ನು ಕಟುವಾಗಿ ಟೀಕಿಸುವಂತಹ ಸ್ಥಿತಿ ಇಲ್ಲಿ ಚಿತ್ರಿತವಾಗಿದೆ. ಇಂತಹ ಗಂಭೀರ ಚಿಂತನೆಗೆ ಒಳಪಡಿಸುವ ಕಾದಂಬರಿಯನ್ನು ಓದಲೇಬೇಕು. ಈ ಕೃತಿಯನ್ನು ಸುಮುಖ ಪ್ರಕಾಶನ, ಮಾಗಡಿ ರಸ್ತೆ, ಟೋಲ್ಗೇಟ್, ವಿದ್ಯಾರಣ್ಯನಗರ, ಬೆಂಗಳೂರು - 23, ದೂರವಾಣಿ ಸಂಖ್ಯೆ ೦೮೦- 23118585 ಇವರು ಪ್ರಕಟಿಸಿದ್ದಾರೆ.

Read more!