Saturday, February 14, 2009

ಬಿಳಿಕಾಗೆ (ಕಥೆ)


ಮಧ್ಯಾಹ್ನದ ಊಟ ಮುಗಿಸಿ, ಚೇರ್‍‍ನಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಸೊನಾಲಿ ಅಂತರ್ಜಾಲದ ಪುಟಗಳ ಮೇಲೆ ಕಣ್ಣಾಡಿಸಿದಳು. ಕಂಪ್ಯೂಟರ್‍‍ನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಂಡು ಸೋಜಿಗದಿಂದ ಮತ್ತೊಮ್ಮೆ ಓದಿಕೊಂಡಳು. ಅವಳ ನಿರೀಕ್ಷೆಗೂ ಮೀರಿದ ವಾಕ್ಯ ಅದು. ಕೂಡಲೆ ಪರದೆಯನ್ನು ಮುಚ್ಚಿ, ಅತ್ತಿತ್ತ ದೃಷ್ಟಿ ಹಾಯಿಸಿದಳು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದ ಮೇಲೆ ಸಮಾಧಾನವೆನಿಸಿತು. ಯಾರೋ ಕುಚೋದ್ಯಕ್ಕೆ ಕಳುಹಿಸಿದ ಇ-ಮೇಲ್ ಅದು! ಆದರೆ ಸ್ಪಷ್ಟವಾಗಿ ಬರೆದಿತ್ತು. `ಸೊನಾಲಿ, ಸಂಜೆ ಆಫೀಸು ಮುಗಿಸಿ ನೇರವಾಗಿ ಟಾರಸಿಗೆ ಬಾ. ಹೇಳಿದಷ್ಟು ಮಾಡದಿದ್ದರೆ ಪರಿಣಾಮ ನೆಟ್ಟಗಾಗಿರೋದಿಲ್ಲ' ಅದನ್ನು ನೆನೆಯುತ್ತಲೇ ಅಂಗೈ ಕೂಡ ಬೆವರಿತು.

ಈ ಹೊತ್ತಿನಲ್ಲಿ ತಾನು ಇ-ಮೇಲ್ ತೆರೆದು ನೋಡುವ ವಿಷಯ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ಮೀಸೆ ಬೋಳಿಸಿ, ಹೆಣ್ಣಿನ ವೇಷ ತೊಡಿಸಿದ ಹಾಗಿರುವ ಕಂಪ್ಯೂಟರ್‍‍ನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಹೆಣ್ಣು ವಾಸಂತಿಗೆ! ಆ ವಿಷಯದಲ್ಲಿ ತನಗಿಂತ ಬೇರೆಯವರಿಗೆ ಹೆಚ್ಚು ತಿಳಿಯಬಾರದು ಅನ್ನುವ ಸಣ್ಣ ಬುದ್ಧಿಯ ಹೆಣ್ಣು ಅವಳು. ಅಂತರ್ಜಾಲ ನೋಡುವುದೇ ದೊಡ್ಡ ಅಪರಾಧವೆಂದು, ಆ ವಿಷಯವನ್ನು ಮೇಲಧಿಕಾರಿಗೂ ತಿಳಿಸಿದ್ದಳು. ಸ್ವಂತ ಬುದ್ಧಿ ಇಲ್ಲದ ಮೇಲಧಿಕಾರಿ ವಾಸಂತಿಯ ಮಾತನ್ನು ಕೇಳಿ, ಸೋನಾಲಿಯನ್ನು ಕರೆದು ಚೆನ್ನಾಗಿ ಬೈದಿದ್ದ. ಹೆಣ್ಣು ವೇಷದ ಹೆಣ್ಣಿನಂತೆ ಹಲ್ಲು ಪ್ರದರ್ಶಿಸಿ ಅಧಿಕಾರಿಯ ಮನಸ್ಸು ಗೆಲ್ಲುತ್ತಿದ್ದರೆ ಸುಮ್ಮನಿರುತ್ತಿದ್ದನೇನೋ?ಅವಳೇ ಏಕೆ ಈ ಪತ್ರವನ್ನು ಕಳುಹಿಸಿರಬಾರದು. ಸೊನಾಲಿ ಎದ್ದು ಒಮ್ಮೆ ಅತ್ತ ನೋಡಿದಳು. ಹೊಟ್ಟೆಕಿಚ್ಚಿನ ಹೆಣ್ಣು ಅಲ್ಲಿರಲಿಲ್ಲ. ಮೇಲ್ ಕಳುಹಿಸಿದವರು ಯಾರು? ಇಷ್ಟಕ್ಕೂ ಟಾರಸಿಯ ಮೇಲೆ ಬರುವಂತೆ ತನ್ನನ್ನು ಕರೆದಿರುವುದು ಏಕೆ? ಟಾರಸಿಯ ಮೇಲೆ ಬರುವಂತೆ ಕರೆದಿರುವುದರಿಂದ ಇಲ್ಲಿಯೇ ಯಾರದೋ ಕೈವಾಡ! ಅನುಮಾನ ಬಲವಾಯಿತು. ಪ್ರತಿಯೊಂದು ಮೇಜಿನ ಮುಂದೆ ಕುಳಿತಿರುವ ವ್ಯಕ್ತಿಯ ಮೇಲೆ ಸಂಶಯದ ನೋಟ ಹರಿಸಿದಳು. ಯಾರ ಮೇಲೂ ಗಾಢವಾದ ಅನುಮಾನ ಸುಳಿಯಲಿಲ್ಲ.ತಟ್ಟನೆ ನೆನಪಾಯಿತು. ಎರಡು ದಿವಸಗಳ ಹಿಂದೆ ಹೀಗೆ ಟಾರಸಿ ಹತ್ತಿ ಹೋಗಿದ್ದನ್ನು ಯಾರೋ ಗಮನಿಸಿದ್ದಾರೆ. ಆ ಕಿಡಿಗೇಡಿಗಳದ್ದೇ ಕೆಲಸ.ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದ ವಿಷಯ ಮನಸ್ಸನ್ನೂ ಆಕರ್ಷಿಸಿತ್ತು. ಎದುರಿಗೆ ಗಗನಕ್ಕೆ ಮುಖವೆತ್ತಿ ನಿಂತಿರುವ ನಕ್ಷತ್ರ ಹೋಟೇಲು ಅದು. ಅಲ್ಲಿ ಮೂರನೇ ಅಂತಸ್ತಿನಲ್ಲಿ, ಅಂದರೆ ಆಫೀಸಿನ ಕಟ್ಟಡದ ಟಾರಸಿಯ ನೇರಕ್ಕೆ ಸಿನೆಮಾನದ ಶೂಟಿಂಗ್! ಅದು ಶುಭಾಶ್ರೀ ತಿಳಿಸಿದ ಸಂಗತಿ. ಕುತೂಹಲಕ್ಕೆ ಟಾರಸಿ ಹತ್ತಿ ಹೋದಾಗ ಕ್ಯಾಮರಾ ಮೆನ್‍ನ ಕಣ್ಣು ತನ್ನ ಮೇಲೆ ಸುಳಿದಿದ್ದರ ಅರಿವಿರಲಿಲ್ಲ. ಸಂಜೆಯ ಹೊತ್ತು ಆಫೀಸು ಮುಗಿಸಿ ಕೆಳಗಿಳಿದು ಬರುವಾಗ ಕಾದು ನಿಂತಿದ್ದ!ಸೊನಾಲಿ ಸೀರೆಯ ಸೆರಗನ್ನು ಹಾರಿಸಿಕೊಂಡು ರಸ್ತೆಗಿಳಿದಾಗ ಧುತ್ತೆಂದು ಎದುರು ಬಂದು ನಿಂತ. ತಲೆಯ ಮೇಲೆ ಮಧ್ಯಾಹ್ನ ಕಂಡಿದ್ದ ಬಿಳಿಯ ಟೊಪ್ಪಿ ಮಾಯವಾಗಿತ್ತು. ಅವನನ್ನು ಗುರುತಿಸುವುದು ಕಷ್ಟವಾಯಿತು."ಕ್ಷಮಿಸಿ, ನೇರವಾಗಿ ಹೇಳ್ತೀನಿ. ಈ ತಿಳಿ ಗುಲಾಬಿ ರಂಗಿನ ಸೀರೆಯಲ್ಲಿ ಯಾವ ನಾಯಕಿಗಿಂತಲೂ ನೀವು ಕಡಿಮೆಯಿಲ್ಲ. ನಿಮಗೆ ಸೌಂದರ್ಯ ಒಂದು ವರವಾಗಿದೆ. ಅದನ್ನು ಬಳಸಿಕೊಳ್ಳಿ" ಏಕಾಏಕಿ ಪ್ರಶಂಸೆಯ ಮಾತನಾಡಿ ಅವಳ ಚಿತ್ತವನ್ನು ಕದಡಿದ್ದ.ಸೇಲಂಗೆ ಹೋಗಿ ಬರುತ್ತೇನೆಂದ ಪ್ರಮೀಳಾ ಮಧುರೈವರೆಗೂ ಹೋಗಿ ತನಗಾಗಿ ತಂದಿದ್ದ ಗುಲಾಬಿ ರಂಗಿನ ಸೀರೆ ಅದು. ಆಫೀಸಿಗೆ ಬೇಗನೆ ಹೊರಟಿದ್ದಕ್ಕೆ ಸೀರೆಯುಟ್ಟು, ಅದಕ್ಕೊಪ್ಪುವ ಸ್ಲೀವ್ ಲೆಸ್ ಕುಪ್ಪಸ ತೊಟ್ಟು, ಅದೇ ಬಣ್ಣದ ಗುಲಾಬಿ ಹೂವನ್ನು ತುರುಬಿಗೆ ಸಿಕ್ಕಿಸಿದ್ದು, ತಾನು ಇಷ್ಟೊಂದು ಆಕರ್ಷಕವಾಗಿ ಕಾಣಲು ಸಾಧ್ಯವಾಗಿದ್ದೇ?"ಅನಗತ್ಯ ಹೊಗಳ್ತಾ ಇದ್ದೀರಿ. ಇಷ್ಟಕ್ಕೂ ನೀವು ಯಾರು?" ಅನುಮಾನದ ನೋಟ ಅವನತ್ತ ಹರಿಸಿ ಕೇಳಿದಳು. ಅವನು ತುಂಬಾ ಚೆನ್ನಾಗಿ ನಕ್ಕಿದ್ದ."ನೀವು ನನ್ನ ಗಮನಿಸಲಿಲ್ಲ ಅನ್ನಿ. ಇವತ್ತು ಮಧ್ಯಾಹ್ನ ನಿಮ್ಮನ್ನು ಟಾರಸಿಯ ಮೇಲೆ ನೋಡಿದೆ. ನನ್ನ ಕ್ಯಾಮರಾ ನಿಮ್ಮ ರೂಪವನ್ನು ಹಿಡಿದಿಟ್ಟಿದೆ. ಜೊತೆಗೆ ನನ್ನ ಕಣ್ಣೂ..." ಅವನ ಮಾತು ಉಪೇಕ್ಷೆಯೆನಿಸಿತು. ಅವಳು ಕಣ್ಣುಗಳನ್ನು ಅರಳಿಸಿ ಅಷ್ಟೇ ಮುಗ್ಧತೆಯಿಂದ ಕೇಳಿದಳು."ನೀವು... ಸಿನಿಮಾದವರು...?" ಏನನ್ನೋ ಹುಡುಕುವ ನೋಟ ಅವಳದ್ದಾಗಿತ್ತು. ಸಿನಿಮಾದವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದಳಷ್ಟೆ. ಹೀಗೆ, ನೇರವಾಗಿ ನೋಡಿರಲಿಲ್ಲ. ಅದೇ ಕುತೂಹಲ ಅವಳನ್ನು ಆ ಸುಡು ಬಿಸಿಲಿನಲ್ಲಿಯೂ ಟಾರಸಿಯ ಮೆಟ್ಟಿಲುಗಳನ್ನು ಏರುವಂತೆ ಪ್ರಚೋದಿಸಿದ್ದು."ಹೌದು" ಅವನು ಒಪ್ಪಿಕೊಂಡು ನುಡಿದ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಮುಗಿದು ಹೋಗುತ್ತದೆ ಅನ್ನುವ ಸತ್ಯವನ್ನು ಹೇಳಿದ್ದ. ಜೊತೆಗೆ ಅವಳಿಗೆ ಸಿನಿಮಾದಲ್ಲಿ ಅವಕಾಶವನ್ನು ನೀಡುವ ದೊಡ್ಡ ಮನಸ್ಸೂ ಮಾಡಿದ್ದ. ಆದರೆ ಅನಾಯಾಸವಾಗಿ ಬಂದ ಅವಕಾಶವನ್ನು ನಿರಾಕರಿಸಿದ್ದಳು. ಸಿನಿಮಾದಲ್ಲಿ ಅಭಿನಯಿಸುವುದು ಪ್ರತಿಷ್ಟೆಯ ಕೆಲಸವಲ್ಲ. ಹೀಗೆ ಆಫೀಸಿನಲ್ಲಿ ಕೆಲಸ ಮಾಡಿಕೊಂಡು ತಿಂಗಳ ಕೊನೆಗೆ ಸಂಬಳ ಎಣಿಸುವುದೇ ಸಂತೋಷದ ವಿಷಯ ಎಂದು ಚಿಂತಿಸುವ ಸಾಮಾನ್ಯ ಹುಡುಗಿಯೊಬ್ಬಳ ಅಭಿಮತದಂತೆ ಅವಳದ್ದೂ ಆಗಿತ್ತು. ಅದನ್ನು ಅವನಿಗೆ ಹೇಳಿಯೂ ಇದ್ದಳು. ಸೌಂದರ್ಯಕ್ಕೆ ಮಾರುಹೋದವನು ಭರವಸೆಯ ಮಾತುಗಳನ್ನು ಹೇಳಿ ಅವಳಿಂದ ಸಂಕ್ಷಿಪ್ತ ಪಟ್ಟಿಯನ್ನು ಪಡೆದುಕೊಂಡಿದ್ದ."ಮುಂದೆ ಅಗತ್ಯವಾಗಿಯೂ ನಿಮಗೆ ಒಳ್ಳೆಯ ಕೆಲಸವನ್ನು ಕೊಡಿಸುವೆ" ಅವನು ಭರವಸೆಯಿತ್ತಿದ್ದ.ಆದರೆ ಶೂಟಿಂಗ್ ಪ್ಯಾಕ್ ಅಪ್ ಆಗಿ ಒಂದೆರಡು ತಿಂಗಳುಗಳು ಕಳೆದರೂ ಅವನಿಂದ ಉತ್ತರವಿರಲಿಲ್ಲ. ಆತನ ವಿಷಯ ಅಪರೂಪಕ್ಕೊಮ್ಮೆ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಷ್ಟಕ್ಕೇ ಸಿನಿಮಾದವರ ಮೇಲಿದ್ದ ಅಲ್ಪಸ್ವಲ್ಪ ಒಳ್ಳೆಯ ಭಾವನೆಯೂ ಹೋಗಿತ್ತೆನ್ನುವಾಗ ಪತ್ರ ಕಳುಹಿಸಿದ್ದ.ಕುಲುಮನಾಲಿಯ ಸುಂದರ ತಾಣಗಳಲ್ಲಿ ಬಿಡುವಿಲ್ಲದ ಚಿತ್ರೀಕರಣದಿಂದಾಗಿ ಸಂಪರ್ಕವಿಟ್ಟುಕೊಳ್ಳಲು ಸಾಧ್ಯಾವಾಗಿಲ್ಲದಕ್ಕೆ ಕ್ಷಮಾಪಣೆಯನ್ನು ಕೇಳಿ ಬರೆದಿದ್ದ ಪತ್ರ ಅದು. ಜೊತೆಗೆ ಮುಂದಿನ ವಾರ ಅವಳನ್ನು ಭೇಟಿಯಾಗುವುದಕ್ಕೆ ಬರುತ್ತಿರುವುದಾಗಿ ತಿಳಿಸಿದ್ದ. ಅವಳು ಕಾದಿದ್ದೆ ಬಂತು. ಅವನು ಮತ್ತೆ ಶೆಡ್ಯೂಲ್ ಬದಲಾಗಿದೆಯೆಂದು ಪತ್ರ ಕಳುಹಿಸಿ ನಿರಾಶೆಗೊಳಿಸಿದ್ದ.ಶುಭಾಶ್ರೀ ಆ ದಿನ ಮಂಕಾಗಿದ್ದ ಸೊನಾಲಿಯನ್ನು ಆಫೀಸಿನ ಕಿಟಕಿಯ ಪಕ್ಕ ಕರೆದೊಯ್ದಿದ್ದಳು."ನೋಡಲ್ಲಿ ಬಿಳಿಕಾಗೆ" ತೋರು ಬೆರಳನ್ನು ಮುಂದಕ್ಕೆ ಹಿಡಿದು ಹೇಳಿದಳು.ಸೊನಾಲಿಗೆ ಗೆಳತಿಯ ಮಾತು ಕೇಳಿ ಆಶ್ಚರ್ಯ.ಬಿಳಿಕಾಗೆ!ಅವಳು ಕಟ್ಟಡಗಳ ಅಂಚಿಗೆಲ್ಲಾ ದೃಷ್ಟಿ ಹಾಯಿಸಿ ನೋಡಿದರೂ ಎಲ್ಲೂ ಕಾಣಿಸಲಿಲ್ಲ. ಬಿಳಿಕಾಗೆ ಇದೆಯೆಂದು ನಂಬಿದ್ದೆ ತನ್ನ ಮೂರ್ಖತನ. ಗೆಳತಿಗೆ ಬೈದು ಹಿಂದಕ್ಕೆ ಹೊರಳಿದಳು.ಶುಭಾಶ್ರೀ ಬಿಡಲಿಲ್ಲ. ಕುತೂಹಲ ತೋರಿಸುವೆನೆಂದು ಅವಳನ್ನು ಎಳೆದುಕೊಂಡು ಟಾರಸಿಯಲ್ಲಿ ನಿಲ್ಲಿಸಿದಳು. ಮೂರಂತಸ್ತಿನ ಕೆಳಗೆ ಕಿಟಕಿಯ ಪಕ್ಕ ನಿಂತು ಎತ್ತಲೋ ನೋಡುತ್ತಿತ್ತು ಬಿಳಿಕಾಗೆ! ಕಾಕ ದೃಷ್ಟಿ ಟಾರಸಿಯಲ್ಲಿ ನಿಂತಿದ್ದ ಇಬ್ಬರತ್ತಲೂ ಸುಳಿದಾಗ, ಶುಭಾಶ್ರೀ ಪಕ್ಕಕ್ಕೆ ಸರಿದರೆ, ಸೊನಾಲಿ ಪೂರ್ತಿಯಾಗಿ ಗೋಚರಿಸಿದಳು. ಏನೂ ಮಾಡಲಾಗದೆ ಹಾಗೆ ನಿಂತಿದ್ದಳು. ಬಿಳಿಕಾಗೆ ಕೈ ಎತ್ತರಿಸಿ ಸಂಜ್ಞೆ ಮಾಡಿತು.ಹಿಂದಕ್ಕೆ ಜಿಗಿದ ಸೊನಾಲಿ ಗೆಳತಿಯ ತಲೆಗೊಂದು ಮೊಟಕಿದಳು."ಮೋಸ ಮಾಡ್ದೆ ನೀನು... ಹೀಗಂತ ಗೊತ್ತಿದ್ರೆ ನಾನು ಅಲ್ಲಿಗೆ ಬರ್‍ತಾ ಇರ್‍ಲಿಲ್ಲ. ನಿನ್ನದು ಅತಿಯಾಯ್ತು" ಗೆಳತಿಯತ್ತ ಸಿಡುಕು ತೋರಿಸಿ ಕೆಳಗಿಳಿದು ಬಂದಳು.ತನ್ನ ಸೀಟ್‍ನಲ್ಲಿ ಕುಳಿತು ತಲೆಗೆ ಕೈ ಹಚ್ಚಿದಳು. ಶುಭಾಶ್ರೀಯ ತುಂಟತನಕ್ಕೆ ಯಾವ ತೊಂದರೆಯನ್ನು ಎದುರಿಸಬೇಕೋ? ತಿಳಿಯದೆ ಕಂಗಾಲಾಗಿದ್ದಳು."ಆ ಬಿಸಿಲಿಗೆ ಟಾರಸಿಯಲ್ಲಿ ನಿಲ್ಲೋದನ್ನು ಬಿಡುವುದಿಲ್ಲ ನೀವು" ನಕ್ಕು ಹೇಳಿದವನ ಮಾತಿಗೆ ಬೆಚ್ಚಿ, ಎದ್ದು ನಿಂತಳು.ಹಿತೇಶ ನಿಂತಿದ್ದ. ಸದಾ ಕ್ಯಾಮರಕ್ಕೆ ಕಣ್ಣು ಹಚ್ಚಿ, ತನ್ನನ್ನು ತಾನು ಅದರ ಜೊತೆಗೆ ಹೊಂದಿಸಿಕೊಂಡಿದ್ದ ಸಿನಿಮಾದ ವ್ಯಕ್ತಿ; ಹೀಗೆ ಏಕಾಏಕಿ ಬಂದು ನಿಲ್ಲುವನೆನ್ನುವ ನಿರೀಕ್ಷೆಯನ್ನೂ ಅವಳು ಮಾಡಿರಲಿಲ್ಲ."ತಲೆಗೆ ಕೈ ಹಚ್ಚಿಕೊಂಡಿದ್ರಿ, ತಲೆ ನೋವೆ? ಈ ಸುಡು ಬಿಸಿಲಿಗೆ ಟಾರಸಿಯ ಮೇಲೆ ನಿಂತ್ರೆ ಮತ್ತೇನು ಬರುತ್ತೆ?" ವ್ಯಂಗ್ಯವಾಗಿರಲಿಲ್ಲ ಮಾತು.ಸೊನಾಲಿಗೆ ಅವನನ್ನು ವಿಚಾರಿಸುವಷ್ಟು ಕೂಡ ವಿವೇಕವಿರಲಿಲ್ಲ. ಅವಳ ಸಹಾಯಕ್ಕೆ ಶುಭಾಶ್ರೀಯೇ ಬರಬೇಕಾಯಿತು. ನಿಂತೇ ಇದ್ದ ಅವನನ್ನು ಕುಳಿತುಕೊಳ್ಳುವಂತೆ ಹೇಳಿದ ಶುಭಾಶ್ರೀ, ಸೊನಾಲಿಯತ್ತ ತಿರುಗಿ ಕಣ್ಣು ಮಿಟುಕಿಸಿದಳು."ಸಿನಿಮಾವೆಂದ್ರೆ ಜೀವ ಬಿಡ್ತೀಯಾ. ಇವರು ಸಿನಿಮಾದವರೆ. ಸ್ಟಾರ್ ಹೋಟೇಲ್‍ನಲ್ಲಿ ಶೂಟಿಂಗ್ ಆಗ್ತಿತ್ತು ನೆನಪಿದೆಯಾ? ಅದರ ಕ್ಯಾಮರಾಮನ್ ಹಿತೇಶ್ ಅಂತ" ಅವಳು ಎದುರಿಗಿದ್ದವನನ್ನು ಪರಿಚಯಿಸುವಾಗ ಸೊನಾಲಿ ಮುಖದಲ್ಲಿ ನಗು ತಂದುಕೊಂಡಳು.ಹಿತೇಶ ಹೀಗೆ ಎರಡು ಮೂರು ಬಾರಿ ಬಂದಿದ್ದ. ಅವನ ಒಡನಾಟ ಮುಂದೆ ಪ್ರೀತಿಸುವಲ್ಲಿಯವರೆಗೂ ತಲುಪಿತು. ಪ್ರೀತಿ ಪರಾಕಾಷ್ಠೆ ತಲುಪಿದಾಗ ಹಿತೇಶ ಹೇಳ ಹೆಸರಿಲ್ಲದೆ ದೂರವಾದ. ಅವನಿಗೇನು ಒಡಕು ಕಂಡಿತೋ? ಸೊನಾಲಿಯ ಎದೆಯಲ್ಲಿಯೂ ನೋವಿನ ಬಡಿತ. ಅದಕ್ಕೆ ಬರೆಯೆಳೆಯುವಂತೆ ಬಿಳಿಕಾಗೆ ಅವಳ ಹಿಂದೆ ಬಿದ್ದಿತ್ತು.ಒಮ್ಮೆ ಮೇಲಧಿಕಾರಿ ಅವಳನ್ನು ಕರೆದು ವಿಚಾರಿಸಿದ."ಹೀಗೆ ಮಂಕಾಗಿ ಕೂತ್ರೆ ಕೆಲಸ ಸಾಗೋದಿಲ್ಲ. ಇಲ್ಲಿ ಮನಸ್ಸಿಲ್ಲದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡು" ಪದೇ ಪದೇ ಒತ್ತಾಯಿಸಿದಾಗ ಕಣ್ಣೀರಿಟ್ಟು ಕ್ಷಮೆ ಕೇಳಿ ಹೊರಗೆ ಬಂದಿದ್ದಳು. ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಅವಳನ್ನು ದಿನಾ ಗೋಳು ಹೊಯ್ಸಿಕೊಂಡ. ಸುಲಭವಾಗಿ ಯಾವುದಕ್ಕೂ ಒಪ್ಪದ ಅವಳನ್ನು ಮೇಲ್ ಮಾಡಿ ಹೆದರಿಸಿದ್ದು ಇದೆ. ಈಗ ಟಾರಸಿಗೆ ಕರೆದಿರುವುದು ಕೂಡ ಅವನೇ!? ಅನುಮಾನ ಬಲವಾಯಿತು.ಶುಭಾಶ್ರೀಯನ್ನು ಕರೆದು ಮೇಲ್‍ನ ವಿಷಯವನ್ನು ತಿಳಿಸಿದಳು. ಮೇಲ್ ಐಡಿ ಕೂಡ ಯಾರದೋ ಏನೋ? ಅವಳ ಮುಖದಲ್ಲಿಯೂ ಗೊಂದಲವಿತ್ತು. ಅದನ್ನು ನಿರಾಕರಿಸಿದಳು. ಆದರೆ ಇನ್ನೊಂದು ವಿಷಯ ಸ್ಪಷ್ಟವಾಗಿತ್ತು. ಬಿಳಿಕಾಗೆಗೆ ಪಾರಿವಾಳಗಳ ಬೆನ್ನಟ್ಟುವ ಬಲಹೀನತೆ. ಯಾವುದೋ ಪಾರಿವಾಳದ ಜೊತೆಗೆ ಸುತ್ತಾಡುವುದಕ್ಕೆ ಹೋಗಿತ್ತು ಕಾಗೆ."ಬಿಳಿಕಾಗೆ ಮೇಲೆ ನಂಗೆ ಅನುಮಾನ. ನಿನಗೆ ಮೇಲ್ ಕಳುಹಿಸಿ ಕಾಗೆ ಎಲ್ಲೋ ಹಾರಿ ಹೋಗಿದೆ. ಇವತ್ತು ಅಲ್ಲಿ ಕಾಣಿಸ್ತಿಲ್ಲ" ಕಿಟಿಕಿಯ ಪಕ್ಕಕ್ಕೆ ನಿಂತು ಉದ್ಗಾರವೆಳೆದ ಶುಭಾಶ್ರೀಯ ಮಾತಿಗೆ ಕೆಂಡ ತುಳಿದಂತಾಯಿತು. ಕಾಕ ದೃಷ್ಟಿ ತನ್ನ ಮೇಲೆ?"ಏನಾದರಾಗಲಿ ಧೈರ್ಯವಾಗಿ ಹೋಗು. ನಾನು ಬರಬೇಕೆಂದಿದ್ದೆ. ಆದರೆ ಇವತ್ತು ಸಾಧ್ಯವಿಲ್ಲ. ಸಂದೇಶ್ ನನಗಾಗಿ ಬಿಗ್ ಬಜಾರ್‍‍ನಲ್ಲಿ ಕಾಯ್ತಿರ್‍ತಾನೆ. ಬೇಕಾದಲ್ಲಿ ರಾಮಯ್ಯನನ್ನು ಕರೆದುಕೊಂಡು ಹೋಗು" ಗೆಳತಿಯ ಮಾತಿಗೆ ಬೆದರು ಕಣ್ಣುಗಳನ್ನು ಮತ್ತಷ್ಟು ತೆರೆದಳು. ವಿಷಯ ಸಂಪೂರ್ಣ ತಿಳಿಯದೆ ಸುದ್ದಿ ಹರಡುವುದು ಬೇಡವಾಗಿತ್ತು."ಬೇಡ, ನಾನೇ ನಿಭಾಯಿಸ್ತೀನಿ" ಮೊಂಡು ಧೈರ್ಯ ತಂದುಕೊಂಡು ಸಂಜೆ ಆಫೀಸು ಮುಗಿಯುತ್ತಲೇ ನಡುಗುವ ಹೆಜ್ಜೆಗಳನ್ನು ಟಾರಸಿಯ ಮೆಟ್ಟಿಲುಗಳತ್ತ ಹೊರಳಿಸಿದಳು.ಟಾರಸಿಯ ಮೇಲೆ ಬಂದಾಗ ಸಂಜೆಯ ಸೂರ್ಯ ಕೆಂಪಗೆ ಮುಖ ಮಾಡಿದ್ದ. ಗಗನಚುಂಬಿ ಕಟ್ಟಡಗಳ ನೆರಳು ಟಾರಸಿಯ ಮೇಲೆ ಬಿದ್ದಿತ್ತು. ಸುತ್ತಲೂ ದೃಷ್ಟಿ ಹಾಯಿಸಿದವಳಿಗೆ ಯಾರೂ ಕಾಣಿಸದಿದ್ದದ್ದು ಸೋಜಿಗವೆನಿಸಿತು. ಇದು ತನ್ನ ಅವಿವೇಕಿತನ. ಯಾರದೋ ಸುಳ್ಳು ಮೇಲ್ ನೋಡಿ ಇಲ್ಲಿಗೆ ಬಂದ ತಾನೆಂಥವಳು?ಹಿಂದಕ್ಕೆ ತಿರುಗಿ ಹೆಜ್ಜೆ ಎತ್ತಿಟ್ಟವಳನ್ನು ನಿಲ್ಲಿಸಿತು ಕಾಗೆಯ ಕೂಗು. ತಟ್ಟನೆ ನಿಂತು ಉಸಿರು ಬಿಗಿ ಹಿಡಿದಳು. ಕಾಲ ಬುಡದಲ್ಲಿಯೇ ಅಂಗಾತವಾಗಿ ಬಿದ್ದಿತ್ತು ಬಿಳಿಯ ಕಾಗೆ!ಅವಳ ಬಾಯಿಯಿಂದ ಚಿತ್ಕಾರ ಹೊರಟಿತು!
***
ಜನ ನಿಬಿಡ ಪ್ರದೇಶದ ಅತಿ ವಾಹನ ಸಂಚಾರದ ರಸ್ತೆಯನ್ನು ಮಿಂಚಿನ ವೇಗದಲ್ಲಿ ದಾಟಿ, ಜನಜಂಗುಳಿಯ ನಡುವೆ ಸೇರಿಕೊಂಡ ಸೊನಾಲಿಗೆ ಕೈ ಗಡಿಯಾರವನ್ನು ನೋಡುವಷ್ಟೂ ಸಮಯವಿರಲಿಲ್ಲ. ಬೆಳಗ್ಗೆ ಬೇಗನೆ ಎದ್ದು ಹೊರಟಿದ್ದರೂ ಸಮಯಕ್ಕೆ ಸರಿಯಾಗಿ ಬರದ ಬಸ್ಸು, ಅವಳಲ್ಲಿ ಆತಂಕವನ್ನು ಸೃಷ್ಟಿಸಿತು. ಇನ್ನು ಅರ್ಧ ಗಂಟೆಯಲ್ಲಿ ಗಮ್ಯ ತಲುಪುವುದು ಸಾಧ್ಯವೆ? ಅನುಮಾನ ಬಲವಾಯಿತು. ಆದರೆ ಹಿಂದೆ ಸರಿಯುವಂತೆ ಇಲ್ಲ. ಅದು ಬದುಕಿನಲ್ಲಿ ಬಹು ನಿರೀಕ್ಷೆಯಿಂದ ಮುಂದಿಟ್ಟ ದೊಡ್ಡ ಹೆಜ್ಜೆ.ಅವಳು ಸುಸಜ್ಜಿತವಾದ ಹೊಟೇಲನ್ನು ತಲುಪುವಾಗ ಮುಖದ ಮೇಲೆ ಬೆವರು ಇಳಿಯುತ್ತಿತ್ತು. ಸಂದರ್ಶನ ನಡೆಯುವ ಕೋಣೆಯನ್ನು ತಲುಪುವಾಗ ಅಲ್ಲಿ ಸಣ್ಣದೊಂದು ಸರತಿಯ ಸಾಲು ನಿಂತಿತ್ತು. ಅವಳು ಬ್ಯಾಗ್‍ನಲ್ಲಿದ್ದ ಕಾಗದ, ಪತ್ರಗಳನ್ನು ತೆಗೆದು ಸರದಿಯ ಕೊನೆಯಲ್ಲಿ ತಾನೂ ಸೇರಿಕೊಂಡಳು. ಸರದಿಯಲ್ಲಿ ನಿಂತಿರುವವರು ಯಾಕಾಗಿ ನಿಂತಿರುವರೆಂಬ ಅರಿವು ಅವಳಿಗಿರಲಿಲ್ಲ. ಮುಂದೆ ನಿಂತಿದ್ದ ಅಭ್ಯರ್ಥಿಯನ್ನು ಕೇಳಿದಳು."ಇದು ಸಂದರ್ಶನಕ್ಕಾಗಿ ಕಾದಿರೋ ಸರದಿಯಲ್ಲವೆ?"ಅವಳನ್ನು ಕೂಲಂಕಷವಾಗಿ ಗಮನಿಸಿದ ಅವನು ಮುಖ ಸಿಂಡರಿಸಿ ತಲೆಯಲುಗಿಸಿದ."ಇದು ಏರ್ ಹೊಸ್ಟೇಸ್ ಹುದ್ದೆಗೆ ಕಾದಿರೋ ಸರದಿ. ನೀವು...?" ಅವಳತ್ತ ಅನುಮಾನದ ನೋಟ ಹರಿಸಿದ. ಸೊನಾಲಿ ಭೂಮಿಗಿಳಿದು ಹೋದಳು. ತಾನು ತಪ್ಪು ಸಾಲಿನಲ್ಲಿ ಕಾದಿರುವೆ."ಕ್ಷಮಿಸಿ" ಅವಳು ಉತ್ತರಿಸದೆ ನೇರವಾಗಿ ಕೆಳಗಿಳಿದು ರಿಸೆಪ್ಷನ್‍ಗೆ ಬಂದಳು. ತನ್ನ ಸಂದರ್ಶನದ ಆಹ್ವಾನ ಪತ್ರವನ್ನು ತೋರಿಸಿದಳು. ರಿಸೆಪ್ಷನ್ ಹುಡುಗಿ ಕೈ ತೋರಿಸಿದತ್ತ ನಡೆದಳು. ಕೋಣೆ ಮುಚ್ಚಿತ್ತು. ನಯವಾಗಿ ಕೋಣೆಯ ಮೇಲೆ ಬಡಿದಾಗ ಒಳಗಿನಿಂದ ದನಿ ಕೇಳಿಸಿತು. ಮೆಲ್ಲನೆ ಬಾಗಿಲು ತೆರೆದು ಒಳಗೆ ನಡೆದಳು.ಒಮ್ಮೆಲೆ ಮುಖಕ್ಕೆ ನುಗ್ಗಿದ ಹವಾನಿಯಂತ್ರಿತ ಗಾಳಿ ಮೈಯನ್ನು ಅದುರಿಸಿತು. ಒಳಗಿರಬಹುದಾಗ ವ್ಯಕ್ತಿಗಳ ಬಗ್ಗೆ ನಿರೀಕ್ಷಿಸಿದವಳಿಗೆ ಆಶ್ಚರ್ಯ. ಒಂದು ಮಧ್ಯ ವಯಸ್ಸಿನ ಹೆಣ್ಣು, ಅವಳ ಪಕ್ಕದಲ್ಲಿ ಬಿಳಿಯ ವಸ್ತ್ರವನ್ನು ಧರಿಸಿದ್ದ ಐವತ್ತರ ಅಂಚಿನ ವ್ಯಕ್ತಿ. ನೋಡಲು ವಿಚಿತ್ರವಾದ ಬಾಹ್ಯಚಹರೆ. ನೇರಕ್ಕೆ ಚಾಚಿಕೊಂಡ ಮೂಗು. ಅವನ ಉಡುಪಿಗೂ, ಮೈ ಬಣ್ಣಕ್ಕೂ ತಾಳೆಯಾಗುತ್ತಿತ್ತು. ಅವಳು ಕೈ ಜೋಡಿಸಿದಳು. ಬಿಳಿಯ ವಸ್ತ್ರದ ವ್ಯಕ್ತಿ ಕನ್ನಡಕದ ಒಳಗಿನಿಂದ ಅವಳನ್ನು ಗಮನಿಸಿದ.ಅವಳು ಕೈಯಲ್ಲಿದ್ದ ಪತ್ರವನ್ನು ಮುಂದೆ ಹಿಡಿದಳು. ಪಕ್ಕದಲ್ಲಿ ಕುಳಿತಿದ್ದ ಮಧ್ಯವಯಸ್ಸಿನ ಹೆಣ್ಣು ಕುಳಿತುಕೊಳ್ಳುವಂತೆ ಸೂಚಿಸಿದಳು.ಆ ಹೆಣ್ಣು ಸೊನಾಲಿಯ ಅರ್ಹತಾ ಪತ್ರ, ಕಾಗದಗಳನ್ನು ಓದಿದ ಬಳಿಕ ಮೆಚ್ಚುಗೆಯಿಂದ ಅವುಗಳನ್ನು ನೇರ ಮೂಗಿನ ವ್ಯಕ್ತಿಯ ಕಡೆಗೆ ಹಿಡಿದಳು. ಅವನ ದೃಷ್ಟಿ ಸೊನಾಲಿಯಿಂದ ಸರಿಯಲಿಲ್ಲ. ಕಣ್ಣುಗಳೇ ಎಲ್ಲವನ್ನೂ ಪರಿಶೀಲಿಸಿದವು. ಸೊನಾಲಿ ಮುಜುಗರದಿಂದ ಮುದುರಿಕೊಂಡಳು."ವಯಸ್ಸೇನು?" ಅನಗತ್ಯ ಪ್ರಶ್ನೆ ಎದುರಾದಾಗ ತಡವರಿಸಿತು."ಇಪ್ಪತ್ತೊಂದು""ಕೆಲಸವನ್ನು ಮಾಡುವ ಛಲವಿದೆಯಾ?""ಹೌದು""ಸರಿ, ನಾಳೆಯಿಂದ ಬರಬಹುದು"ಸಂದರ್ಶನ ಇಷ್ಟೇನಾ? ಇದಕ್ಕೆ ಇಂತಹ ನಕ್ಷತ್ರ ಹೊಟೇಲು ಅಗತ್ಯವಿತ್ತೆ? ಎದ್ದು ಹೊರಗೆ ಬಂದಳು. ಅಷ್ಟರಲ್ಲಿ ಮಧ್ಯ ವಯಸ್ಸಿನ ಹೆಣ್ಣೂ ಹೊರಗೆ ಬಂದಳು."ನಿಲ್ಲು, ಇದು ನಿನ್ನ ನಿಯುಕ್ತಿಯ ಪತ್ರ. ಇದರಲ್ಲಿರೋ ವಿಳಾಸಕ್ಕೆ ನಾಳೆ ಬಂದು ಬಿಡು. ಇಲ್ಲಿ ಶಿಸ್ತು ಮುಖ್ಯ" ಅವಳು ಕೊಟ್ಟ ನಿಯುಕ್ತಿಯ ಪತ್ರವನ್ನು ತೆಗೆದುಕೊಂಡು ರಸ್ತೆಗಿಳಿದಳು.ಮರು ದಿನ ಆ ವಿಳಾಸಕ್ಕೆ ಬಂದಾಗ ತನ್ನಂತೆ ಹಲವು ಜನ ಅಲ್ಲಿರುವುದು ಕಂಡು ನೆಮ್ಮದಿಯೆನಿಸಿತು. ಅವರ ಜೊತೆಗೆ ಕೂಡಲೇ ಬೆರೆತು ಹೋದಳು. ಅದರಲ್ಲೂ ಶುಭಾಶ್ರೀಯ ತುಂಟತನ ಅವಳನ್ನು ಬಹುವಾಗಿ ಸೆಳೆದಿತ್ತು. ನೇರ ಮೂಗಿನ ವ್ಯಕ್ತಿಯನ್ನು ಅವಳು ಕುಚೋದ್ಯಕ್ಕೆ ಕರೆಯುತ್ತಿದ್ದುದ್ದೇ ಬಿಳಿಕಾಗೆ!ಆ ಆಫೀಸಿಗೆ ಅವಳು ಬೇಗನೆ ಹೊಂದಿಕೊಂಡಿದ್ದು ಬಿಳಿಕಾಗೆಗೆ ಸಂತೋಷ ತಂದಿತ್ತು. ಆದರೆ ಬಿಳಿಕಾಗೆಯ ದೃಷ್ಟಿ ಅವಳ ಮೇಲೆ ಹರಿದಾಗ ಸೊನಾಲಿಗೆ ತಿಳಿದಿರಲಿಲ್ಲ. ಶುಭಾಶ್ರೀಯೇ ಅವಳಿಗೆ ತಿಳಿಸಬೇಕಾಯಿತು."ನೀನು ಅದೃಷ್ಟವಂತೆ, ಕಾಕ ದೃಷ್ಟಿ ನಿನ್ನ ಮೇಲೆ ಬಿದ್ದಿದೆ. ನಿನಗೆ ಅದೃಷ್ಟದ ಬಾಗಿಲು ತೆರೆದಿದೆ. ಕಾಗೆಯನ್ನು ಅಂಗೈಯಲ್ಲಿ ಹಿಡಿದು ಆಡಿಸಿ ಬಿಡು" ಕೆಣಕುವ ಮಾತಿಗೆ ಸೊನಾಲಿ ಉರಿದು ಹೋದಳು."ನಾನು ಮರ್‍ಯಾದಸ್ಥ ಮನೆಯ ಹುಡುಗಿ. ನೀನು ಬಾಯಿಗೆ ಬಂದಂತೆ ಮಾತನಾಡಿದರೆ ಕೆಲಸ ಬಿಟ್ಟು ಬಿಡ್ತೀನಿ" ಕಣ್ಣಾಲಿಗಳು ತುಂಬಿ ಬಂದಿದ್ದವು. ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಶುಭಾಶ್ರೀ ಅವಳನ್ನು ಕರೆದುಕೊಂಡು ತೆರೆದ ಹೊಟೇಲಿಗೆ ಬಂದಳು."ಕ್ಷಮಿಸು ನನ್ನ, ನೀನು ಬುದ್ಧಿ ಬೆಳೆದಿರೋ ಹುಡುಗಿ. ಇಂತಹ ಆಫೀಸಿನಲ್ಲಿ ಕೆಲಸ ಮಾಡೋವಾಗ ಅಧಿಕಾರಿಗಳ, ಅದರಲ್ಲೂ ಮಾಲೀಕನ ಪ್ರಭಾವವಿದ್ದರೆ, ನೀನು ಬದುಕಿನಲ್ಲಿ ಬಯಸಿದ್ದನ್ನು ಪಡೆದುಕೊಳ್ಳಬಹುದು"ಗೆಳತಿ ಅಂದುಕೊಂಡವಳ ಮಾತುಗಳಿಗೆ ಕಿವಿ ಮುಚ್ಚಿಕೊಳ್ಳುವ ಸ್ಥಿತಿ. ಹೆಣ್ಣು ಇಷ್ಟು ಕೆಳ ಮಟ್ಟದಲ್ಲಿ ಯೋಚಿಸಬಲ್ಲಳೇ? ಮಾವ ಕೂಡ ಇದೇ ರೀತಿ ಹೇಳಿದ್ದ."ಸೋನು, ನಿನಗೆ ದಂತದ ಹಾಗೆ ಮೈಬಣ್ಣವಿದೆ. ಜೊತೆಗೆ ಚೆಲುವೆ. ನೀನ್ಯಾಕೆ ಸಿನಿಮಾಕ್ಕೆ ಸೇರಬಾರದು?"ಕೆನ್ನೆಗೆ ಹೊಡೆಯುವಂತೆ ಅರಚಿದ್ದಳು."ನನ್ನ ಏನೂಂತ ತಿಳ್ಕೊಂಡಿದ್ದಿಯಾ? ನನ್ನ ಸೌಂದರ್ಯಾನ ಬಿಚ್ಚಿಟ್ಟು ದುಡ್ಡು ಸಂಪಾದನೆ ಮಾಡುವ ಆಲೋಚನೆಯಾ ನಿನಗೆ?"ಹಿಂದೆ ಮುಂದೆ ಯಾರೂ ಇಲ್ಲದ ನಿರ್ಗತಿಕಳೆಂದು ಉಪೇಕ್ಷೆ ಮಾಡಿದವನನ್ನು ಚೆನ್ನಾಗಿ ಚಾಳಿಸಿದ ನಂತರ ಅಲ್ಲಿ ನಿಲ್ಲದೆ ಕೆಲಸ ಹುಡುಕಿಕೊಂಡು ಪಟ್ಟಣ ಸೇರಿದಳು. ಪಟ್ಟಣ ಸೇರಿದರೂ ಅಷ್ಟೇ. ಎಲ್ಲೆಲ್ಲೂ ಕಾಕ ದೃಷ್ಟಿಯೆ. ಕೊನೆಗೆ ಒಂದು ಕೆಲಸ ಹಿಡಿಯಬೇಕಾದರೆ ಅಲೆಯದ ರಸ್ತೆಗಳಿಲ್ಲ, ತುಳಿಯದ ಮೆಟ್ಟಿಲುಗಳಿಲ್ಲ. ಎಲ್ಲೆಲ್ಲೂ ಬಾಹ್ಯಚಹರೆ, ಅಂತಸ್ತು ಇವುಗಳದ್ದೇ ಮಾನದಂಡ. ಕೊನೆಗೆ ಉಳಿದ ದಾರಿಯೊಂದೆ ಸೌಂದರ್ಯವನ್ನು ಜಮಾಯಿಸುವುದು. ಆದರೆ ಅದೇ ಒಂದು ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆಯೆನ್ನುವ ಅರಿವಿರಲಿಲ್ಲ.
***
ಮಧ್ಯಾಹ್ನದ ಹೊತ್ತಿಗೆ ಸಬ್ ಇನ್ಸ್‍ಪೆಕ್ಟರ್ ಸನ್ನಿಧಿ ತನ್ನ ನೀಲಿ ಮೋಟಾರು ಬೈಕಿಗೆ ಸೈಡ್ ಸ್ಟಾಂಡ್ ಹಾಕಿ ನಿಲ್ಲಿಸಿ, ಮೂರು ಅಂತಸ್ತಿನ ಕಟ್ಟಡವನ್ನು ತಲೆಯೆತ್ತಿ ನೋಡಿದ. ಅವನನ್ನು ಯಾವಾಗಲೂ ಕಾಡುವ ಅನುಮಾನವೇ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಿದ್ದುದು. ಎರಡು ದಿನಗಳ ಹಿಂದೆ ಅದೇ ಕಟ್ಟಡವನ್ನು ಪ್ರವೇಶಿಸಿ ಎಲ್ಲರಿಂದಲೂ ಅಭಿಮತ ಸಂಗ್ರಹಿಸಿದ್ದ. ಅಷ್ಟಾಗಿಯೂ ಯಾವ ನಿರ್ಧಾರಕ್ಕೂ ಬರಲು ಸಾಧ್ಯವಾಗಲಿಲ್ಲ.ಮೆಟ್ಟಿಲುಗಳನ್ನು ಟಕಟಕನೆ ಏರಿ ಆಫೀಸಿನ ಬಾಗಿಲು ತೆರೆದು ನಿಂತ. ಅವನ ದೃಷ್ಟಿ ಸೊನಾಲಿಯ ಕಡೆಗೆ ಹರಿದು ಅಲ್ಲೇ ತಟಸ್ಥವಾಯಿತು. ಕೆಲಸದ ನಡುವೆ ತಲೆಯೆತ್ತಿದವಳ ನೋಟ ಪೆಡಂಭೂತದಂತೆ ಎದುರು ನಿಂತಿದ್ದ ಅಧಿಕಾರಿಯತ್ತ ಹೊರಳಿತು. ಭಯದ ಕರಿ ನೆರಳಿನ ಜೊತೆಗೆ ಒಂದು ಉದ್ಗಾರ ಬಾಯಿಯಿಂದ ಹೊರಗೆ ಬಿತ್ತು.ಅವಳ ಸ್ಥಿತಿಯನ್ನು ಕಂಡವನೇ ಅವಳ ಎದುರು ನಿಂತ. ಎದ್ದು ನಿಂತು ತಲೆ ತಗ್ಗಿಸಿದಳು. ಅವನು ಹ್ಯಾಟ್ ತೆಗೆದು ಕೈಯಲ್ಲಿದ್ದ ಬೆತ್ತದ ಜೊತೆಗೆ ಹಿಡಿದ."ನಿನ್ನ ಅಧಿಕಾರಿಯನ್ನು ನೋಡುವುದಿದೆ" ಅವಳ ಎದೆಯಲ್ಲಿ ಕುಟ್ಟುವ ನಿಶ್ಶಬ್ದ ಸದ್ದು ವೇಗ ಪಡೆದು ಸಶ್ಶಬ್ದವಾಯಿತು."ಅವರು... ಅವರು..." ಕ್ಯಾಬಿನ್‍ನತ್ತ ದೃಷ್ಟಿ ಹರಿಸಿದವಳಿಗೆ ಅಧಿಕಾರಿ ಕಾಣಿಸಲಿಲ್ಲ. ಪೊಲೀಸ್ ಅಧಿಕಾರಿ ಅವಳತ್ತ ಕ್ರೂರ ನೋಟ ಹರಿಸಿ ಮುಂದೆ ನಡೆದ. ಮಾಲೀಕನ ಆಪ್ತ ಸಲಹೆಗಾರ್ತಿ ಅಂಬಿಕಾ ಅವನನ್ನು ಎದುರುಗೊಂಡಳು."ನನಗೆ ಕೆಲವೊಂದು ಅನುಮಾನಗಳಿವೆ. ನಿಮ್ಮ ಕೈಯಲ್ಲಿ ಅದನ್ನು ಬಗೆಹರಿಸೋದಿಕ್ಕೆ ಸಾಧ್ಯನಾ?"ಸಲಹೆಗಾರ್ತಿ ಒಪ್ಪಿಗೆಯಿತ್ತು ಅವನನ್ನು ಒಳಗೆ ಕೂರಿಸಿದಳು."ಕೇಳಿ"ಅಧಿಕಾರಿ ಎದುರಿನ ಗೋಡೆಯತ್ತ ನೋಡುತ್ತಾ ಹ್ಯಾಟ್ ಮತ್ತು ಕೋಲನ್ನು ಮೇಜಿನ ಮೇಲಿರಿಸಿದ."ನಿಮ್ಮ ಮಾಲೀಕ ಅಂದರೆ ಭಗವಂತರಾಯರ ಹೆಣ ನೋಡಿದೋರು ಯಾರಂದ್ರಿ? ಅವರನ್ನು ಕರೆಸೋದು ಸಾಧ್ಯವೇ?"ಅಧಿಕಾರಿಯ ಮಾತಿಗೆ ತಲೆಯಲುಗಿಸಿ, ಬಜ಼ರ್ ಒತ್ತಿದಳು ಸಲಹೆಯ ಹೆಣ್ಣು. ಮರದ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದ ಅಟೆಂಡರ್ ರಾಮಯ್ಯ."ರಾಮಯ್ಯ, ಸಾರ್‍‍ಗೆ ಕುಡಿಯೋದಿಕ್ಕೆ ತಂಪು ಪಾನೀಯ ತಾ. ಹಾಗೇ ಸೊನಾಲಿನ ಒಳಗೆ ಕಳುಹಿಸು"ಅಧಿಕಾರಿಯ ಮುಖ ಗಂಭೀರವಾಗಿತ್ತು. ಅವನು ಮತ್ತೊಂದಷ್ಟು ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುವ ಹೊತ್ತಿಗೆ ಸೊನಾಲಿ ಬಾಗಿಲು ತೆರೆದು ಅನುಮತಿಯೊಂದಿಗೆ ಒಳಗೆ ಬಂದಳು. ಅಧಿಕಾರಿಯ ಬದಲಾಗದ ನೋಟ ಅವಳನ್ನು ಅಡಿಯಿಂದ ಮುಡಿಯವರೆಗೂ ಅಳೆಯಿತು. ಉದ್ದಕ್ಕೆ ಕೈ ತೋರಿಸಿ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ. ಅಳುಕುತ್ತಲೇ ಕುಳಿತ ಸೊನಾಲಿ ಸಲಹಾಗಾರ್ತಿಯತ್ತ ನೋಟ ಹರಿಸಿದಳು. ಅವಳ ಮುಖದಲ್ಲಿ ಗೊಂದಲದ ಛಾಯೆಯಿತ್ತು."ಆಫೀಸು ಬಿಟ್ಟು ನೇರವಾಗಿ ಮನೆ ಸೇರೋ ನೀವು ಆ ದಿನ ಸಂಜೆ ಯಾಕೆ ಟಾರಸಿ ಹತ್ತಿದ್ರಿ?" ಪೊಲೀಸ್ ಅಧಿಕಾರಿಯ ಅನಿರೀಕ್ಷಿತ ಪ್ರಶ್ನೆಗೆ ತಡವರಿಸಿತು. ಮೌನವಾಗಿಯೆ ಕುಳಿತಿದ್ದಳು."ನಿನ್ನನ್ನೇ ಪ್ರಶ್ನಿಸ್ತಿರೋದು... ಟಾರಸಿ ಹತ್ತಿ ಹೋಗುವ ಪ್ರಮೇಯವೇನಿತ್ತು?"ತುಟಿಗಳನ್ನು ಕಚ್ಚಿ ಹಿಡಿದು ಕುಳಿತವಳ ಬಿಗಿತ ಸಡಿಲವಾಯಿತು. ಮೆಲ್ಲಗೆ ತುಟಿಗಳು ಅದುರಿದವು."ಅವತ್ತು ಮಧ್ಯಾಹ್ನ ನನಗೊಂದು ಇ-ಮೇಲ್ ಬಂದಿತ್ತು....." ಕಥೆ ಮುಂದುವರಿದು ನಡೆದ ಘಟನೆಯನ್ನೆಲ್ಲಾ ಚಾಚೂ ತಪ್ಪದೆ ಅಧಿಕಾರಿಯ ಮುಂದೆ ಬಿಚ್ಚಿಟ್ಟಳು. ಅವಳು ಹೇಳಿದನ್ನೆಲ್ಲಾ ಕೇಳಿದ ಬಳಿಕ ಅಧಿಕಾರಿಯ ತುಟಿ ಅರಳಿತು."ತುಂಬಾ ಉಪಕಾರವಾಯಿತು. ನೀವಿನ್ನು ಹೋಗಬಹುದು" ಸೊನಾಲಿ ಆ ಮಾತಿಗೆ ಕಾದಿದ್ದವರಂತೆ ನಡುಗುವ ಹೆಜ್ಜೆಗಳಿಂದ ಹೊರಗೆ ಧಾವಿಸಿದಳು. ರಾಮಯ್ಯ ಜ್ಯೂಸ್‍ನ ಗ್ಲಾಸ್ ಹಿಡಿದುಕೊಂಡು ಒಳಗೆ ನಡೆದ. ಅಧಿಕಾರಿಯ ಮುಂದೆ ಹಿಡಿದ. ಅಧಿಕಾರಿ ಅದನ್ನು ತೆಗೆದುಕೊಳ್ಳುತ್ತಲೇ ಕಂಪ್ಯೂಟರ್‍‍ನ ಹೆಣ್ಣು ವಾಸಂತಿಯನ್ನು ಕರೆಯುವಂತೆ ತಿಳಿಸಿದ.ಅಧಿಕಾರಿ ಜೂಸ್ ಕುಡಿದು ಮುಗಿಸುವಷ್ಟರಲ್ಲಿ, ಗಂಡಸಿನ ಮುಖದ ಹೆಣ್ಣು, ವಾಸಂತಿ ಒಳಗೆ ಬಂದಳು. ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತು ಹಲ್ಲು ಕಿಸಿದಳು. ಸೊನಾಲಿ ಹೇಳಿದ ಕಥೆಯನ್ನು ಪುನರುಚ್ಚರಿಸಿದ ಅಧಿಕಾರಿ."ಆ ಹುಡುಗಿಗೆ ಮೇಲ್ ಕಳಿಸಿದವರು ಯಾರು ಅನ್ನುವುದು ಗೊತ್ತೆ?" ಗಂಡಸಿನ ಮುಖದ ಆ ಹೆಣ್ಣು ಆಲೋಚನೆಗೆ ಬಿದ್ದವರಂತೆ ಕುಳಿತಳು. ಕ್ಷಣದಲ್ಲಿಯೇ ಏನನ್ನೋ ಯೋಚಿಸಿ ತೋರುಬೆರಳನ್ನು ಎತ್ತಿ ಉದ್ಗರಿಸಿದಳು."ಆ ದಿನ ಸೊನಾಲಿಗೆ ಮೇಲ್ ಬಂದಿತ್ತು. ಅದು ಅದು... ಬಿಳಿಕಾಗೆ ಅನ್ನುವ ಇ-ಮೇಲ್ ಅಡ್ರೆಸ್‍ನಿಂದ""ಬಿಳಿಕಾಗೆ!" ಅಧಿಕಾರಿ ಆಶ್ಚರ್ಯದಿಂದ ಹೇಳಿಕೊಂಡ. ಸಲಹಾಗಾರ್ತಿ ಅವನ ಸಹಾಯಕ್ಕೆ ಧಾವಿಸಿದಳು."ಹೌದು, ಭಗವಂತರಾಯರನ್ನು ಜನ `ಬಿಳಿಕಾಗೆ' ಅನ್ನೋ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಆತ ಸಾಧು ಮನುಷ್ಯ. ಯಾರದೋ ಕುಹಕಕ್ಕೆ ಆ ಹೆಸರು ಬಂತು"ಬಿಳಿಕಾಗೆ ಪೊಲೀಸ್ ಅಧಿಕಾರಿಯ ತಲೆಯ ಒಳಗೆಲ್ಲಾ ಹಾರಾಡಿತು. ಅವನು ಗೊಂದಲಕ್ಕೆ ಬಿದ್ದು ವಾಸಂತಿಯನ್ನು ಹೊರಗೆ ಕಳುಹಿಸಿದ. ಸುಮಾರು ಹೊತ್ತು ಸಲಹಾಗಾರ್ತಿಯ ಜೊತೆಗೆ ಮಾತನಾಡಿ ಹೊರಗೆ ಬಂದಾಗ ಸೊನಾಲಿ ಅಲ್ಲಿರಲಿಲ್ಲ!ಅವನು ಮೆಟ್ಟಲುಗಳನ್ನು ಇಳಿದು ಕೆಳಗೆ ಬರುವಾಗ ಮೆಟ್ಟಿಲುಗಳ ಸಂಧಿಯಲ್ಲಿ ಯಾರದೋ ಪಿಸು ಮಾತುಗಳು ಕೇಳಿಸಿದವು. ಅವು ಎರಡು ಹೆಣ್ಣುಗಳ ದನಿ! ಒಂದು ಸೊನಾಲಿಯದ್ದೇ ದನಿ! ಸೊನಾಲಿ ಯಾರೊಂದಿಗೆ ಹೀಗೆ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದಾಳೆ? ಕುತೂಹಲ ಕೆರಳಿತು. ಸ್ವಲ್ಪ ಹೊತ್ತು ಮರೆಯಲ್ಲಿ ಕಾದು ನಿಂತ. ಇನ್ನೊಂದು ಹೆಣ್ಣು ಅಸ್ಪಷ್ಟವಾಗಿ ಗೋಚರಿಸಿತು. ವಾಸಂತಿ! ಅಥವಾ ಸಲಹಾಗಾರ್ತಿ!? ಇಬ್ಬರಲ್ಲಿ ಯಾರೋ ಒಬ್ಬರು!
***
ಮರುದಿನ ಅಧಿಕಾರಿ ಸ್ಟೇಶನ್‍ನಿಂದ ನೇರವಾಗಿ ಭಗವಂತರಾಯರ ಸಲಹಾಗಾರ್ತಿಯ ಮನೆಗೆ ಬಂದ. ಭಗವಂತರಾಯರ ಮಕ್ಕಳು ದೂರದ ಅಮೆರಿಕಾದಲ್ಲಿರುವ ವಿಷಯ ತಿಳಿದಿದ್ದ ಅಧಿಕಾರಿ ಆ ರೀತಿ ನಿರ್ಧಾರ ತೆಗೆದುಕೊಂಡ."ಏನಾದರೂ ಸುಳಿವು...?" ಅಂಬಿಕಾಳ ಪ್ರಶ್ನೆಗೆ ಅಧಿಕಾರಿ ನಗು ತೋರಿಸಿದ."ಹೌದು, ಭಗವಂತರಾಯರ ಆಸ್ತಿಗೆ ಬಾಧ್ಯಸ್ಥರು ಯಾರು? ಅವರ ಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಮೋಹವಿಲ್ಲ"ಸಲಹಾಗಾರ್ತಿಯ ಮುಖ ಬಿಳಿಚಿಕೊಂಡಿತು. ಅಧಿಕಾರಿ ಅದನ್ನು ಗುರುತಿಸಿಕೊಂಡ."ನಿಮಗೆ ಅವರ ಆಸ್ತಿಯ ಮೇಲೆ....?""ನೋ, ನೋ... ನಾನು ಯಾವತ್ತು ಅವರ ಆಸ್ತಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ" ಅಧಿಕಾರಿಯ ಮಾತನ್ನು ತಡೆದು ಹೇಳಿದಳು."ನಿಮ್ಮನ್ನು ಪರೀಕ್ಷಿಸ್ತಾ ಇಲ್ಲ. ಸತ್ಯ ತಿಳಿದುಕೊಳ್ಳುವುದಕ್ಕೆ ಕೇಳಿದೆ""ಇಲ್ಲ. ಖಂಡಿತವಾಗಿಯೂ ನಾನು ಅವರ ಆಸ್ತಿಗೆ ಆಸೆ ಪಟ್ಟವಳಲ್ಲ"ಅಧಿಕಾರಿ ನಕ್ಕು ನುಡಿದ."ಸರಿ, ನಿಮ್ಮ ಮಾತು ನಂಬ್ತೀನಿ. ನೀವು ಈಗಲೇ ಆಫೀಸಿಗೆ ಬಂದು ಬಿಡಿ. ಕೊಲೆಗಾರ ಅಲ್ಲಿಯೇ ಇದ್ದಾನೇಂತ ನನ್ನ ಅನುಮಾನ"ಅಧಿಕಾರಿಯ ಮಾತಿಗೆ ತಡಬಡಿಸಿ ತಯಾರಾದ ಸಲಹಾಗಾರ್ತಿ ಅಂಬಿಕಾ ಆಫೀಸಿಗೆ ಧಾವಿಸಿದಳು. ಆಫೀಸಿನಲ್ಲಿ ಅಧಿಕಾರಿ ಅವಳ ಬರುವಿಕೆಗಾಗಿ ಕಾದು ಕುಳಿತಿದ್ದ. ಎಲ್ಲಾ ಉದ್ಯೋಗಿಗಳತ್ತ ನೋಡಿದ. ನೇರವಾಗಿ ಸೊನಾಲಿಯ ಟೇಬಲ್‍ನ ಹತ್ತಿರ ನಿಂತು ಹೇಳಿದ."ಮಿಸ್ ಸೊನಾಲಿ, ಭಗವಂತರಾಯರಿಗೆ ನಿಮ್ಮ ಮೇಲೆ ಅಭಿಮಾನ, ವಿಶ್ವಾಸವಿತ್ತು. ಆ ದಿನ ನಿಮ್ಮನ್ನು ಸಂದರ್ಶನಕ್ಕೆ ಕರೆಸಿದ್ದು ಕೆಲಸ ಕೊಡಿಸುವ ಉದ್ದೇಶದಿಂದ ಅಲ್ಲ. ಬದಲಾಗಿ ತನ್ನ ಎಲ್ಲಾ ಆಸ್ತಿಗೂ ಒಬ್ಬ ನಂಬಿಕಸ್ಥ ವ್ಯಕ್ತಿಯ ಅಗತ್ಯವಿತ್ತು. ಆ ಅರ್ಹತೆ ನಿಮ್ಮಲ್ಲಿತ್ತು. ನೇರವಾಗಿ ಅದನ್ನು ನಿಮಗೆ ಹೇಳಿದ್ರೆ ನೀವು ಅದನ್ನು ನಿರಾಕರಿಸುತ್ತೀರಿ ಅನ್ನುವ ಉದ್ದೇಶದಿಂದ ಅವರ ಆಫೀಸಿನಲ್ಲಿ ಕೆಲಸ ಕೊಡಿಸಿದ್ರು. ಆದ್ರೆ ನೀವು ಅವರನ್ನು ಕೆಟ್ಟದಾಗಿ ತಿಳಿದುಕೊಂಡ್ರಿ. ನೋಡಿ, ಅವರು ತಮ್ಮ ಸಮಸ್ತ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದಿದ್ದಾರೆ. ಆದ್ರೆ ಈಗ ಅವರ ಕೊಲೆಯಾಗಿದೆ" ಸೊನಾಲಿ ತಲೆ ತಗ್ಗಿಸಿದಳು. ಅಧಿಕಾರಿಯ ಮಾತು ಆಶ್ಚರ್ಯದ ಜೊತೆಗೆ ನಾಚಿಕೆ ತರಿಸಿತು. ಹೂ ಮನಸ್ಸಿನ ಮಾಲೀಕನನ್ನು ಅಪಾರ್ಥ ಮಾಡಿಕೊಂಡಿದ್ದಳು."ಇಷ್ಟಕ್ಕೂ ಅವರ ಕೊಲೆ ಮಾಡಿದೋಳು ನಾನಲ್ಲ""ನೀವು ಕೊಲೆ ಮಾಡಿದ್ದೀರಿಂತ ನಾನು ಹೇಳ್ತಾ ಇಲ್ಲ. ಕೊಲೆ ಮಾಡಿರೋದು ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಹೊಂದಿರೋ ವ್ಯಕ್ತಿ. ಇದರಲ್ಲಿ ಸಿನಿಮಾದ ವ್ಯಕ್ತಿಯ ಪಾಲು ಇದೆ"ಸೊನಾಲಿಗೆ ಅರ್ಥವಾಗದೆ ತಲೆ ಎತ್ತಿದಳು. ಆ ಕ್ಷಣದಲ್ಲಿ ಎಲ್ಲರ ನೋಟ ಅಧಿಕಾರಿಯ ಕಡೆಗಿತ್ತು."ಬಿಳಿಕಾಗೆ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿರೋ ವ್ಯಕ್ತಿ, ಅವನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸುವುದಕ್ಕೆ ಯತ್ನಿಸಿದೆ. ಆ ದಿನ ಭಗವಂತರಾಯರು ಸ್ಟಾರ್‍ ಹೊಟೇಲ್‍ನಲ್ಲಿ ಇದ್ದಾಗ ಆ ವ್ಯಕ್ತಿ ಅವರನ್ನು ಒತ್ತಾಯಿಸಿತು. ಆದ್ರೆ ಅವರು ತಮ್ಮ ಸಮಸ್ತ ಆಸ್ತಿಗೂ ಹೊಸದಾಗಿ ನಿಯುಕ್ತರಾಗಿರೋ ನೀವೇ ಬಾಧ್ಯಸ್ಥೆ ಅಂತ ಹೇಳಿದ್ರು. ಅದೇ ಹೊತ್ತು ಆ ವ್ಯಕ್ತಿ ನಿರಾಸೆಯಿಂದ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿ, ನಿಮಗೆ ಬಿಳಿಕಾಗೆಯನ್ನು ತೋರಿಸಿತು. ನೀವು ಅದ್ಭುತ ನೋಡುವವರಂತೆ ಟಾರಸಿಗೆ ಹೋದ್ರಿ. ಆದ್ರೆ ಅಲ್ಲಿ ನಿಮ್ಮನ್ನು ನೋಡಿದ ಮಾಲೀಕ ಸಂತೋಷದಿಂದ ಕೈ ತೋರಿಸಿದ್ರು. ನೀವು ಅಪಾರ್ಥ ಮಾಡಿಕೊಂಡ್ರಿ""ಅಂದ್ರೆ... ಅಂದ್ರೆ...""ಅಂದ್ರೆ... ನಿಮ್ಮ ಗೆಳತಿ ಶುಭಾಶ್ರೀನೇ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿರುವುದು. ಅಚಾನಕ್ಕಾಗಿ ಅದರ ಒಂದು ಪ್ರತಿ ಮಾಲೀಕ ಭಗವಂತರಾಯರ ಮೇಲ್ ಐಡಿಗೂ ಹೋಗಿದೆ. ಒಂದೊಮ್ಮೆ ನಿಮ್ಮನ್ನು ಅಗಾಧವಾಗಿ ಪ್ರೀತಿಸೋ ನಾಟಕ ಮಾಡಿದ ಕ್ಯಾಮರಾ ಮೆನ್ ಹಿತೇಶನೇ ಕೊಲೆ ಮಾಡಿರೋದು. ನೆನಪಿದೆಯಾ ನಿಮಗೆ, ಆ ದಿನ ಸಂದೇಶ್‍ನನ್ನು ಭೇಟಿಯಾಗೊದಿಕ್ಕೆ ಬಿಗ್ ಬಜಾರ್‍‍ಗೆ ಹೋಗೋದಿದೆ... ಟಾರಸಿಗೆ ನೀನೇ ಹೋಗೂಂತ ಒತ್ತಾಯಿಸಿದ ನಿಮ್ಮ ಗಳತಿ, ನೇರವಾಗಿ ಹೋಗಿದ್ದು ಸ್ಟಾರ್‍ ಹೋಟೇಲ್‍ಗೆ. ಅಲ್ಲಿದ್ದ ಹಿತೇಶನನ್ನು ಭೇಟಿಯಾಗೊದಿಕ್ಕೆ. ಆ ದಿನ ಟಾರಸಿ ಹತ್ತಿದ ನಿಮ್ಮನ್ನು ಮುಗಿಸುವ ತಂತ್ರ ಹೂಡಿದ ನಿಮ್ಮ ಗೆಳತಿ, ಅಲ್ಲಿ ಭಗವಂತರಾಯರನ್ನು ನೋಡಿ ತನ್ನ ಯೋಜನೆಯೆಲ್ಲಾ ತಿಳಿದು ಹೋಯಿತೂಂತ ಅವರನ್ನೇ ಮುಗಿಸುವಂತೆ ಹಿತೇಶನಿಗೆ ಹೇಳಿದ್ಲು. ಹಾಗೆ ಸ್ಟಾರ್ ಹೊಟೇಲ್‍ನ ಮೂರನೆ ಅಂತಸ್ತಿನಿಂದ ಹಿತೇಶ ಹಾರಿಸಿದ ಗುಂಡಿಗೆ ಅವರು ಬಲಿಯಾದ್ರು"ಕಥೆ ಕೇಳಿದ ಸೊನಾಲಿಯ ಕಣ್ಣುಗಳಲ್ಲಿ ನೀರು ಇಳಿಯಿತು. ಮೆಲ್ಲಗೆ ಕಣ್ಣಿಗೆ ಸೆರಗು ಒತ್ತಿಕೊಂಡಳು. ಅವಳು ಹಿಂತಿರುಗುವಷ್ಟರಲ್ಲಿ ಅಧಿಕಾರಿ ಶುಭಾಶ್ರೀಯ ಮುಂದೆ ನಿಂತಿದ್ದ."ಅತಿಯಾಸೆ ಗತಿಗೇಡು. ನೀವು ವಿಷಯ ತಿಳಿದ ನಂತರವೂ ಮೆಟ್ಟಿಲುಗಳ ಹತ್ತಿರ ಸೊನಾಲಿಯನ್ನು ಕರೆದು ಬೆದರಿಕೆ ಹಾಕಿದ್ರಿ. ಒಂದು ವಿಷಯ ನಿಮಗಿನ್ನೂ ಗೊತ್ತಿಲ್ಲಾಂನ್ಸುತ್ತೆ. ಹಿತೇಶ ನಮ್ಮ ಸುರ್ಪದಿಯಲ್ಲಿದ್ದಾನೆ. ನೀವೂ ಜೊತೆಗೂಡಿ"ಶುಭಾಶ್ರೀ ತಲೆತಗ್ಗಿಸಿ ಅಧಿಕಾರಿಯ ಹಿಂದೆ ನಡೆದಾಗ ಅಧಿಕಾರಿ ಗೆಲುವಿನ ನಗೆಯೊಂದಿಗೆ ಆಫೀಸಿನ ಮುಂದಿನ ಬಾಧ್ಯಸ್ಥೆ, ಸೊನಾಲಿಯ ಬಳಿ ಬಂದು ಶುಭ ಹಾರೈಸಿದ.

Read more!

Saturday, February 7, 2009

ಸಾಹಸಿ ಪಯಣಿಗರ ನೂರೆಂಟು ಗಂಟುಗಳು


ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ.
ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್. ವಿದ್ಯಾರಣ್ಯರವರು.

ಈ ಬೃಹತ್ ಪುಸ್ತಕದಲ್ಲಿ ಯೂರೋಪಿನ ಲೇಖಕರು ಬರೆದಿರುವ ಮೂರು ವಿಭಿನ್ನ ರೀತಿಯ ಪ್ರಯಾಣದ ಕಾದಂಬರಿಗಳಿವೆ. ಮೂಲ ಕಾದಂಬರಿಯನ್ನು ಓದಿದಷ್ಟೇ ಆಪ್ತವೆನಿಸುವ ಇಲ್ಲಿಯ ಕಾದಂಬರಿಗಳೆಲ್ಲಾ ಬೇರೆ ಬೇರೆ ಭೌಗೋಳಿಕ ಹಿನ್ನಲೆಯಿರುವ ಜನರ, ಸಮಾಜದ, ಸಂಸ್ಕೃತಿಯ ಮತ್ತು ಅಲ್ಲಿನ ಮೌಲ್ಯಗಳನ್ನು ಎದುರಿಸುವ ಮತ್ತು ಅಲ್ಲಿ ತನ್ನ ಸರ್ವಾಧಿಕಾರ ಸಾಧಿಸಲು ಪ್ರಯತ್ನಿಸುವ ಅಧಿಕಾರ ಶಾಹಿ ವರ್ಗವನ್ನು ವಿಢಂಬನಾತ್ಮಕವಾಗಿ ತೆರೆದಿಡುವುದಲ್ಲದೆ ಮುಂದೆ ನಡೆಯಬಹುದಾದ ಸರ್ವಾಧಿಕಾರ ಧೋರಣೆಗಳನ್ನು ಸೂಕ್ಷ್ಮವಾಗಿ ಪರಿಚಯಿಸುತ್ತವೆ.
ಈ ಪುಸ್ತಕದಲ್ಲಿ ಕಾದಂಬರಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಜೋನಥಾನ್ ಸ್ವಿಫ್ಟ್‍ನ `ಗಲಿವರಾಯಣ', ಎರಡನೆ ವಿಭಾಗದಲ್ಲಿ ಡೇನಿಯಲ್ ಡೀಫೋನ `ರಾಬಿನ್‍ಸನ್ ಕ್ರುಸೋ' ಮತ್ತು ಮೂರನೆ ವಿಭಾಗದಲ್ಲಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂಪ್ರದಕ್ಷಿಣೆ' ಕಾದಂಬರಿಗಳಿವೆ.
ಗಲಿವರಾಯಣದಲ್ಲಿ ಮೂರು ಕಾದಂಬರಿಗಳಿವೆ. ನಮಗೆಲ್ಲಾ ಗೊತ್ತಿರುವ ಗಲಿವರಾಯಣದ ಕಥೆ ಲಿಲಿಪುಟ್‍ಗಳ ದೇಶದ ಕಥೆ. ಸಾಧಾರಣವಾಗಿ ಪ್ರಾಥಮಿಕ ಶಾಲೆಯಿಂದಲೇ ಈ ಕಥೆಯನ್ನು ಓದಿರುತ್ತೇವಾದರೂ ಇಡೀ ಕಥೆಯನ್ನು ಆಸ್ವಾಧಿಸಬೇಕಾದರೆ ಗಲಿವರಾಯಣದ ಮೊದಲ ಕಾದಂಬರಿ `ಲಿಲಿಪುಟ್‍ಗಳ ನಾಡಿನಲ್ಲಿ' ಅನ್ನು ಓದಲೇಬೇಕು.
ಗಲಿವರ್ ಒಬ್ಬ ವೈದ್ಯನಾಗಿ ನಾವಿಕನಾಗುವ ಕನಸು ಕಾಣುತ್ತಾನೆ. ಅವನು ಹಡಗಿನಲ್ಲಿ ವೈದ್ಯನಾಗಿಯೂ ಸೇರುತ್ತಾನೆ. ಅಲ್ಲಿಂದ ಅವನ ಸಮುದ್ರಯಾನ ಆರಂಭವಾಗುತ್ತದೆ. ಅವನ ಹಡಗು ಅಲೆಗಳ ಹೊಡೆತಕ್ಕೆ ಸಿಕ್ಕಿ ಅಪಘಾತವಾಗುತ್ತದೆ. ಅಲ್ಲಿಂದ ಬದುಕುಳಿದ ತನ್ನ ಸಹಪ್ರಯಾಣಿಕರ ಜೊತೆಗೆ ದೋಣಿಯಲ್ಲಿ ಕುಳಿತು ದಡ ತಲುಪುವ ಪ್ರಯತ್ನ ಮಾಡುತ್ತಾನೆ. ದೋಣಿ ಕೂಡ ದುರಂತಕ್ಕೀಡಾಗಿ ಅವನೊಬ್ಬನೇ ಅಪರಿಚಿತ ನಾಡಿಗೆ ಬರುತ್ತಾನೆ. ಅವನಿಗೆ ಬೆಳಿಗ್ಗೆ ಎಚ್ಚರವಾದಾಗ ಇರುವೆಯಂತ ಪುಟಾಣಿ ವೀರರು ಅವನನ್ನು ಬಂಧಿಸಿರುತ್ತಾರೆ. ಆ ಲಿಲಿಪುಟ್‍ಗಳ ಭಾಷೆ ಅರ್ಥವಾಗದೆ ಸನ್ನೆಯಲ್ಲಿ ತನ್ನ ಬಾಯಾರಿಕೆ, ಹಸಿವುಗಳನ್ನು ತಿಳಿಸುತ್ತಾನೆ. ಅವನ ಸನ್ನೆಯನ್ನು ಅರ್ಥೈಸಿಕೊಂಡು ಅವನಿಗೆ ಬೇಕಾದ ಆಹಾರ, ಪಾನೀಯಗಳನ್ನು ಒದಗಿಸುತ್ತಾರೆ. ಆ ದೇಶದ ರಾಜನ ವಿಶ್ವಾಸ ಗೆದ್ದು ಅವರಲ್ಲಿಯೇ ಒಬ್ಬನಾಗುತ್ತಾನೆ ಗಲಿವರ್. ಆದರೂ ಅಲ್ಲಿಯ ಅರಸನಿಗೆ ಗಲಿವರನ ಮೇಲೆ ಸಂಶಯವಿರುತ್ತದೆ. ಇದಕ್ಕೆ ಕಾರಣ ಆತ ಒಮ್ಮೆ ಲಿಲಿಪುಟ್ ಜನರಿಂದ ತಪ್ಪಿಸಿಕೊಂಡು ಬ್ಲೆಫೆಸ್ಕೋದ ಜನರನ್ನು ಭೇಟಿಯಾಗಿರುತ್ತಾನೆ. ಬ್ಲೆಫೆಸ್ಕೋ ಅರಸನ ವಿರೋಧಿಯಾಗಿರುವ ಲಿಲಿಪುಟ್ ಅರಸ ಮುಂದೆ ಗಲಿವರನ ಸಹಾಯದಿಂದ ಅವನನ್ನು ಎದುರಿಸಲು ಸಿದ್ಧವಾಗುತ್ತಾನೆ. ಆದರೆ ಆ ಎರಡು ದೇಶಗಳ ನಡುವೆ ಶಾಂತಿ, ಸಂಧಾನಕ್ಕೆ ನೆರವಾಗುತ್ತಾನೆ ಗಲಿವರ್. ಕೊನೆಗೆ ತನ್ನ ದೇಶಕ್ಕೆ ಹಿಂತಿರುಗಬೇಕೆನ್ನುವ ಅವನ ತುಡಿತದಂತೆ ಗಲಿವರ ಬ್ಲೆಫೆಸ್ಕೋದ ಅರಸನ ಸಹಾಯದಿಂದ ತನ್ನ ದೇಶಕ್ಕೆ ಮರಳುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಹಿರಿ ಕಿರಿಯರಿಂದ ಎಲ್ಲರಿಗೂ ಆಪ್ತವೆನಿಸುತ್ತದೆ ಈ ಕಾದಂಬರಿ.
ಗಲಿವರನ ಮುಂದಿನ ಪಯಣ ಬ್ರಾಬ್ಡಿಂಗ್‍ನ್ಯಾಗ್ ನಾಡಿನ ಪ್ರವಾಸ. ಅಲ್ಲಿ ಲಿಲಿಪುಟ್‍ಗಳ ಹಾಗೇ ಆದರೆ ವ್ಯತಿರಿಕ್ತವಾಗಿರುವ ದೈತ್ಯ ಜನರ ದರ್ಶನವಾಗುತ್ತದೆ. ಒಬ್ಬ ರೈತನ ಕೈಗೆ ಸಿಕ್ಕಿ, ಅವನ ಕೈಗೊಂಬೆಯಾಗುತ್ತಾನೆ. ಆ ರೈತ ಅವನನ್ನು ಒಬ್ಬ ಜೋಕರ್‍‍ನ ಹಾಗೆ ನಡೆಸಿಕೊಳ್ಳುತ್ತಾನೆ. ಮಾತ್ರವಲ್ಲ, ಅವನನ್ನು ಪ್ರದರ್ಶನಕ್ಕಿಟ್ಟು ಹಣಗಳಿಸುತ್ತಾನೆ. ಇದರಿಂದ ಅವನಿಗೆ ತುಂಬಾ ಬೇಸರವಾಗುತ್ತದೆ. ಬಂಧನದಿಂದ ಮುಕ್ತಿ ಹೊಂದಬೇಕೆನ್ನುವ ಅದಮ್ಯ ಬಯಕೆಯಿರುತ್ತದೆ. ಆದರೆ ಆ ರೈತ, ತನಗೆ ಅವನು ಇನ್ನು ಉಪಯೋಗವಿಲ್ಲವೆನ್ನುವ ನಿರ್ಧಾರಕ್ಕೆ ಬಂದು ಅವನನ್ನು ಆ ನಾಡಿನ ರಾಜನಿಗೆ ಮಾರುತ್ತಾನೆ. ಇವನ ಮೋಜನ್ನು ಮೆಚ್ಚಿಕೊಳ್ಳುವ ರಾಜನ ಪರಿವಾರ ಅವನೊಂದಿಗೆ ಅನ್ಯೋನ್ಯವಾಗಿರುತ್ತದೆ. ಅಲ್ಲಿಯ ಭಾಷೆಯನ್ನು ಕಲಿತು ರಾಣಿಯ ಮನಸ್ಸನ್ನೂ ಗೆದ್ದು ಅರಮನೆಯಲ್ಲಿ ಉಳಿಯುತ್ತಾನೆ. ಕೊನೆಗೆ ತಾನು ಸ್ವತಂತ್ರವಾಗಿ ಜೀವಿಸಲು ಹಾತೊರೆದು ಅಲ್ಲಿಂದ ಹೊರಗೆ ಬರುತ್ತಾನೆ. ಬಲಶಾಲಿಗಳ ಮುಂದೆ ಬಲಹೀನರ ಪಾಡನ್ನು ತೆರೆದಿಡುತ್ತದೆ ಈ ಕಾದಂಬರಿ.
ಇನ್ನು ಮೂರನೆಯ ಕಾದಂಬರಿ `ಹ್ವಿನಿಮ್ ನಾಡಿನ ಪ್ರವಾಸ'; ಬಹಳ ಕುತೂಹಲಕರವಾಗಿಯೂ, ವಿಚಿತ್ರವಾದ ಅನುಭವಕ್ಕೂ ಒದಗುವ ಕಥೆ. ಹ್ವಿನಿಮ್‍ಗಳ ನಾಡಿನಲ್ಲಿ ಮನುಷ್ಯರೇ ಇಲ್ಲ! (ಈ ಕಲ್ಪನೆಯೇ ವಿಚಿತ್ರವಾಗಿದೆ) ಬದಲಾಗಿ ಅಲ್ಲಿ ಹ್ವಿನಿಮ್ (ಕುದುರೆ)ಗಳದ್ದೇ ಕಾರುಬಾರು. ಬುದ್ಧಿಜೀವಿಗಳೆಂದು ತಮ್ಮನ್ನು ತಾವು ಗುರುತಿಸಿರುವ ಆ ಹ್ವಿನಿಮ್‍ಗಳು ಯಾಹು (ಗೋರಿಲ್ಲಗಳನ್ನು ನೆನಪಿಸುವಂತ ಪ್ರಾಣಿ) ಗಳನ್ನು ತಮ್ಮ ಅಡಿಯಾಳನ್ನಾಗಿ ಮಾಡಿಕೊಂಡಿರುತ್ತವೆ. ಆ ಯಾಹುಗಳು ಎಷ್ಟು ಗಲೀಜಾಗಿರುತ್ತವೆಯೆಂದರೆ ಯಾರೂ ಅವುಗಳ ಹತ್ತಿರ ಸುಳಿಯುವುದಿಲ್ಲ! ಇಲ್ಲಿ ಶೋಷಿತ ವರ್ಗವನ್ನು ನೆನಪಿಸುವ ಯಾಹುಗಳು ಮತ್ತು ಅಧಿಕಾರಿ ವರ್ಗದ ಹ್ವಿನಿಮ್‍ಗಳು ಅಲ್ಲಿಗೆ ಬರುವ ನಾಯಕ ಗಲಿವರನನ್ನು ವಿಚಿತ್ರವಾಗಿ ಕಾಣುತ್ತವೆ. ಯಾಹುಗಳಂತೆ ಕಾಣುವ ಅವನನ್ನು ಹ್ವಿನಿಮ್‍ಗಳು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಅವನ ಬುದ್ಧಿವಂತಿಕೆಯನ್ನು ಕಂಡು ಅವನಿಗೆ ಬೇಕಾಗುವ ಎಲ್ಲಾ ಸಹಾಯವನ್ನೂ ಮಾಡುತ್ತವೆ. ಮುಂದೆ ನಾಯಕ ಅವನು ಅಲ್ಲಿಯ ಭಾಷೆಯನ್ನು ಕಲಿತು, ಅಲ್ಲಿನ ರೀತಿ ನೀತಿಗಳನ್ನು ತನಗರಿವಿಲ್ಲದಂತೆ ತನ್ನ ಬದುಕಿನಲ್ಲೂ ಒಗ್ಗಿಸಿಕೊಂಡಿರುತ್ತಾನೆ. ಅವನ ಈ ಬದಲಾವಣೆ ಅವನಿಗೆ ಹಡಗಿನಲ್ಲಿ ಮರಳಿ ತನ್ನ ನಾಡಿಗೆ ಬರುವಾಗ ಅನುಭವಕ್ಕೆ ಬರುತ್ತದೆ.
ಈ ಮೂರು ಕಾದಂಬರಿಗಳಲ್ಲಿಯೂ ಕಾಣುವ ಸಾಮಾನ್ಯ ವಿಷಯವೆಂದರೆ ಬಲಶಾಲಿಯಾದ ಮನುಷ್ಯ ತನ್ನ ಅಧಿಕಾರದಿಂದ ಬಲಹೀನರನ್ನು ಶೋಷಣೆ ಮಾಡುತ್ತಾ ಅವರನ್ನು ತನ್ನ ಸ್ವಾಧೀನಕ್ಕೆ ಒಳಪಡಿಸುತ್ತಾನೆ. ಅಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಾನೆ.
ಡೇನಿಯಲ್ ಡೀಫೋನ ಕಾದಂಬರಿ ರಾಬಿನ್ ಕ್ರೂಸೋದಲ್ಲಿ ಪಾಶ್ಚಿಮಾತ್ಯರ ಸಾಹಸಗಾಥೆಯನ್ನು ತೆರೆದಿಡುತ್ತದೆ. ರಾಬಿನ್ ಕ್ರೂಸೋ ತನ್ನ ಅನ್ವೇಷಣಾ ಬುದ್ಧಿಯಿಂದ ತಾನು ಪ್ರಯಾಣಿಸುತ್ತಿರುವ ಹಡಗು ಅಪಘಾತವಾದಾಗ ಒಬ್ಬಂಟಿಯಾಗಿ ದ್ವೀಪಕ್ಕೆ ಬಂದು ಅಲ್ಲಿ ತನಗೆ ಬೇಕಾದ ಹಾಗೆ ಬದುಕುತ್ತಾನೆ. ಮೇಲ್ನೋಟಕ್ಕೆ ಮನುಷ್ಯನ ಏಕಮುಖವನ್ನು ಪರಿಚಯಿಸಿದರೂ ಇಲ್ಲಿ ಮನುಷ್ಯ ಹೇಗೆ ಒಂದು ಕಡೆ ನೆಲೆ ನಿಂತು ತನಗೆ ಬೇಕಿದ್ದವುಗಳನ್ನು ತನ್ನ ಸುತ್ತಮುತ್ತಲಿಂದ ಗಳಿಸಿಕೊಳ್ಳುತ್ತಾನೆ ಅನ್ನುವುದನ್ನು ಚಿತ್ರಿಸಿದೆ ಈ ಕಾದಂಬರಿ. ಮಾತ್ರವಲ್ಲ, ಅಲ್ಲಿ ಎದುರಾಗುವ ಭೌಗೋಳಿಕ ಅನಾಹುತಗಳು, ಸಮಸ್ಯೆಗಳು, ತೊಂದರೆಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಎದುರಿಸಿ ಭದ್ರವಾಗಿ ನೆಲೆಯೂರುತ್ತಾನೆನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಇನ್ನು ಮೂರನೆಯ ವಿಭಾಗದಲ್ಲಿರುವ ಕಾದಂಬರಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂ ಪ್ರದಕ್ಷಿಣೆ' ಕುತೂಹಲ ಭರಿತ ಕಾದಂಬರಿ. ಶ್ರೀಮಂತ, ಪ್ರಾಮಾಣಿಕ ಮತ್ತು ಗಂಭೀರ ವ್ಯಕ್ತಿತ್ವದ ಒಬ್ಬಂಟಿ ಫಿಲಿಯಾಸ್ ಫಾಗ್ ತನ್ನ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿ ಭೂ ಪ್ರದಕ್ಷಿಣೆ ಮಾಡಿಕೊಂಡು ಬರುವ ಕಥಾ ವಸ್ತುವಿರುವ ಈ ಕಾದಂಬರಿ ಕೊನೆಯವರೆಗೂ ಉಸಿರು ಬಿಗಿ ಹಿಡಿದು ಓದುವಂತೆ ಪ್ರೇರೆಪಿಸುತ್ತದೆ. ಆಗಿನ ಕಾಲದಲ್ಲಿ ಹಡುಗು ಮತ್ತು ರೈಲುಗಳ್ಳಲ್ಲಿಯೇ ಭೂ ಪ್ರದಕ್ಷಿಣೆ ಮಾಡುವುದೆಂದರೆ ಊಹೆಗೂ ನಿಲುಕದ ವಿಷಯ. ಫಾಗ್ ತನ್ನ ಹೊಸ ಕೆಲಸದಾಳು ಪಾಸ್ ಪರೋತನ ಜೊತೆಗೆ ಲಂಡನ್‍ನಿಂದ ತಮ್ಮ ಪ್ರಯಾಣ ಆರಂಭಿಸುತ್ತಾರೆ. ಆ ಸಮಯದಲ್ಲಿ ಲಂಡನ್‍ನ ಬ್ಯಾಂಕೊಂದರಲ್ಲಿ ದರೋಡೆಯಾಗಿರುತ್ತದೆ. ಫಾಗ್ ಭೂ ಪ್ರದಕ್ಷಿಣೆ ಹೊರಡುವುದನ್ನು ತಿಳಿದಿರುವ ಪತ್ತೇದಾರ ಫಿಕ್ಸ್, ಅಷ್ಟೊಂದು ಹಣವನ್ನು ಖರ್ಚು ಮಾಡಿಕೊಂಡು ಭೂ ಪ್ರದಕ್ಷಿಣೆ ಹೊರಟ ಫಾಗೇ ಬ್ಯಾಂಕ್‍ನ ಹಣ ಕದ್ದಿರುವ ವ್ಯಕ್ತಿಯೆಂದು ಅವರನ್ನು ಹಿಂಬಾಲಿಸಿ ಬರುತ್ತಾನೆ. ಅವರನ್ನು ಬಂಧಿಸುವಲ್ಲಿ ವಾರಂಟ್ ಬರದೆ ಪ್ರತೀ ಪ್ರಯಾಣದಲ್ಲಿಊ ವಿಳಂಭವಾಗುತ್ತದೆ. ಬ್ರಿಟಿಷರ ವಸಹಾತಿನಲ್ಲೇ ಅವರನ್ನು ಬಂಧಿಸಬೇಕೆಂದು ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ ವಾರೆಂಟ್ ಅವನ ಕೈ ಸೇರುವಲ್ಲಿ ವಿಳಂಭವಾಗಿರುತ್ತದೆ. ತಮ್ಮ ನಿಗಧಿತ ಸಮಯದಂತೆ ಪ್ರಯಾಣ ಮುಂದುವರಿಸುವಲ್ಲಿ ಫಾಗ್‍ರವರಿಗೆ ಅಡೆತಡೆಗಳಾಗುತ್ತವೆ. ಭಾರತದಲ್ಲಿ ಸತಿಗೆ ಹೋಗಬೇಕಿರುವ ಹೆಣ್ಣು ಔದಾಳನ್ನು ರಕ್ಷಿಸಲು ಹೋಗಿ ತಾವೇ ಆಪತ್ತಿನಲ್ಲಿ ಸಿಲುಕುತ್ತಾರೆ. ನಂಬಿಕಸ್ಥ ಆಳು ಪಾಸ್ ಪರೋತನ ಚಾಣಾಕ್ಷ ಬುದ್ಧಿಯಿಂದ ಪ್ರತಿಯೊಂದು ಸಂಕಂಟದಿಂದಲೂ ಪಾರಾಗುತ್ತಾರೆ. ಆಯಾ ದೇಶಗಳಿಗನುಗುಣವಾಗಿ ತಮ್ಮ ಕೈ ಗಡಿಯಾರದ ಸಮಯವನ್ನು ಬದಲಾಯಿಸುವ ಫಾಗ್ ಮತ್ತು ತಾನು ಹೊರಟಲ್ಲಿಂದ ಸಮಯವನ್ನು ಸರಿಹೊಂದಿಸದ ಪಾಸ್ ಪರೋತ, ಸತಿಯ ಹೆಣ್ಣು ಔದಾ, ಪತ್ತೇದಾರ ಫಿಕ್ಸ್ ಎಲ್ಲರೂ ತಮ್ಮ ತಮ್ಮ ಗುರಿ ತಲುಪುದನ್ನೇ ಕಾಯುತ್ತಿರುತ್ತಾರೆ. ಕೊನೆಗೂ ಬ್ರಿಟನ್ ತಲುಪುವ ಮೊದಲೇ ಪತ್ತೇದಾರ ಫಿಕ್ಸ್ ಅವರನ್ನು ಬಂಧಿಸುತ್ತಾನೆ. ಆದರೆ ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ. ಇದರಿಂದಾಗಿ ಎರಡು ದಿವಸಗಳಷ್ಟು ತಡವಾಗಿ ತಮ್ಮ ಗಮ್ಯ ತಲುಪುತ್ತಾರೆ ಫಾಗ್. ನೊಂದ ಅವರು ತನ್ನನ್ನು ನಂಬಿ ಬಂದ ಔದಾಳಿಗೂ ಏನಾದರೊಂದು ದಾರಿ ಮಾಡಿಕೊಡುವುದೆಂದು ನಿರ್ಧರಿಸುವಾಗ ಅವಳು ತನ್ನ ಮನಸ್ಸಿನಲ್ಲಿರುವುದನ್ನು ಹೇಳುತ್ತಾಳೆ. ಅವಳನ್ನು ಮದುವೆಯಾಗಲು ಮುಂದಾಗುವ ಫಾಗ್ ಮದುವೆಯ ದಿನವನ್ನು ನಿರ್ಧರಿಸಲು ಪಾಸ್ ಪರೋತನನ್ನು ಚರ್ಚಿಗೆ ಕಳುಹಿಸುತ್ತಾರೆ. ಆಗ ಶನಿವಾರದಂದು ಮದುವೆ ಸಾಧ್ಯವಿಲ್ಲವೆಂದು ಹಿಂದಕ್ಕೆ ಬರುತ್ತಾನೆ ಪಾಸ್ ಪರೋತ. ಸತ್ಯದ ಅರಿವಾಗುವುದು ಆಗ. ಸಮಯ ಬದಲಾಯಿಸದ ಪಾಸ್ ಪರೋತನ ಗಡಿಯಾರ ಸತ್ಯವನ್ನು ಬಿಚ್ಚಿಡುತ್ತದೆ. ಅವರಿಗೆ ಆಶ್ಚರ್ಯವಾಗಿ ದಿನಗಳನ್ನು ಲೆಕ್ಕ ಹಾಕುತ್ತಾರೆ. ಪಂದ್ಯ ಮುಗಿಯಲು ಇನ್ನೂ ಕೆಲವೇ ಕ್ಷಣಗಳಿದ್ದಾಗ ಫಾಗ್ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಅಲ್ಲಿಗೆ ಹೋಗುತ್ತಾರೆ. ಪಂದ್ಯದಲ್ಲಿ ಗೆದ್ದ ಅವರನ್ನು ಸ್ನೇಹಿತರೆಲ್ಲಾ ಅಭಿನಂದಿಸುತ್ತಾರೆ. ಈ ಬೃಹತ್ ಪುಸ್ತಕದ ಐದು ಕಾದಂಬರಿಗಳಲ್ಲಿಯೂ ತುಂಬಾ ಆಪ್ತವೆನಿಸುವ ಕಾದಂಬರಿ ಇದು. ಅದಕ್ಕೆ ಕಾರಣ ಫಾಗ್‍ರವರ ಪ್ರಯಾಣ ಭಾರತದ ಮೂಲಕ ನಡೆಯುವುದು ಆಗಿರಬಹುದು. ಇಲ್ಲಿನ ಭೌಗೋಳಿಕ ಹಿನ್ನಲೆ, ಪದ್ಧತಿಗಳು, ಆಚಾರ ವಿಚಾರಗಳು ಈ ಕಾದಂಬರಿಯಲ್ಲಿ ಕಾಣಸಿಗುತ್ತದೆ.
ಹೀಗೆ ಈ ಮೂರು ವಿಭಾಗಳಲ್ಲಿಯೂ ವಿಭಿನ್ನ ಕಾದಂಬರಿಗಳಿದ್ದು ಎಲ್ಲವೂ ಒಂದೊಂದು ರೀತಿಯ ಪ್ರಯಾಣದ ಅನುಭವವನ್ನು ನೀಡುತ್ತವೆ. ಇಲ್ಲಿ ಆಪ್ಯವೆನಿಸುವುದು ವಿದ್ಯಾರಣ್ಯರ ಭಾಷಾ ಹಿಡಿತ. ಮೂಲ ಕಾದಂಬರಿಯನ್ನು ಓದಿದಷ್ಟೇ ಸುಖ ಇಲ್ಲಿದೆ. ನಿಜವಾಗಿಯೂ ಕನ್ನಡಕ್ಕೆ ಈ ಕಾದಂಬರಿಗಳನ್ನು ತುರ್ಜುಮೆ ಮಾಡಿರುವ ಲೇಖಕರು ಅಭಿನಂದನಾರ್ಹರು.
ಈ ಕಾದಂಬರಿ ಚಾರುಮತಿ ಪ್ರಕಾಶನ, 12, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು - 560 050; ಫೋ.ಸಂ.94428 35553 ಇವರು ಪ್ರಕಟಿಸಿದ್ದಾರೆ. ಪುಸ್ತಕದ ಬೆಲೆ ರೂ. 280/- ಮಾತ್ರ. ಪುಟಗಳು - 552

Read more!

Saturday, January 31, 2009

ಚಿಣ್ಣರ ಲೋಕಕ್ಕೆ ಬಣ್ಣದ ಬುಗರಿ- ಬೇಬ್ಲೇಡ್


"3...2...1...LET IT RIP"ಆಧುನಿಕ ಯುಗದಲ್ಲಿ ಮಕ್ಕಳ ಮೆದುಳಿಗೆ ಕಸರತ್ತು ನೀಡಲು ಅದೆಷ್ಟೋ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಆಟಿಕೆಗಳು ಮತ್ತು ಅದರಿಂದ ಆಡುವ ಆಟಗಳು ಪುರಾತನ ಕಾಲದಲ್ಲಿಯೇ ಭಾರತದಲ್ಲಿದ್ದವೆಂದು ನಮ್ಮ ಪುರಾಣಗಳಿಂದ ತಿಳಿದು ಬರುತ್ತದೆ. ಪಗಡೆಯಾಟ, ಬಿಲ್ಲು ಬಾಣ, ಬುಗರಿಯಾಟ ಮುಂತಾದವುಗಳನ್ನು ನಾವು ಬಹಳ ಹಿಂದಿನಿಂದಲೆ ಬಲ್ಲವರಾಗಿದ್ದೇವೆ. ಇಂತಹ ಆಟಗಳು ಇಂದಿನ ಮಕ್ಕಳನ್ನೂ ಆಕರ್ಷಿಸುತ್ತಿವೆ ಎನ್ನುವುದಕ್ಕೆ ಉದಾಹರಣೆಗಳನ್ನು ನೀಡಬಹುದು. ಟಿ.ವಿ.ಯಲ್ಲಿ ರಾಮಾಯಣ ಧಾರಾವಾಹಿ ಆರಂಭವಾದಾಗ ಅದರಲ್ಲಿನ ಬಿಲ್ಲು ಬಾಣಗಳನ್ನು ನೋಡಿ ಮಕ್ಕಳು ಅಂತಹ ಆಟಿಕೆಗಳಿಗೆ ಆಕರ್ಷಿತರಾಗಿದ್ದರು.

ಟಿ.ವಿ. ಮಾಧ್ಯಮವು ಮಕ್ಕಳನ್ನು ಹೆಚ್ಚು ಆಕರ್ಷಿಸಲು ಮುಖ್ಯ ಕಾರಣ ಫ್ಯಾಂಟಸಿ ತುಂಬಿರುವ ಕಾರ್ಟೂನ್ ಚಿತ್ರಗಳು. ಟಾಮ್ ಅಂಡ್ ಜೆರಿ, ವಾಲ್ಟ್ ಡಿಸ್ನೆ, ಡೂಫಿ ಡಕ್‍ಗಳಂತಹ ಅನಿಮೆಟೆಡ್ ಕಾರ್ಟೂನ್ ಚಿತ್ರಗಳು ಬಹು ಬೇಗನೆ ಮಕ್ಕಳ ಮನಸ್ಸನ್ನು ಸೆಳೆಯುವಲ್ಲಿ ಸಫಲವಾಗಿವೆ. ಈಗ ಕಾರ್ಟೂನ್ ಲೋಕಕ್ಕೆ ಹೊಸ ಸೇರ್ಪಡೆಯೆಂದರೆ ಪೋಕೆಮಾನ್ Pokemon. ಯಾವುದೇ ಒಂದು ಪ್ರಾಣಿ ಅಥವಾ ಪಕ್ಷಿಗಳ ಪ್ರತಿರೂಪದಂತಿರುವ ಈ ಹೊಸ ತಳಿಯ ಕಾರ್ಟೂನ್‍ಗಳು ರೂಪಕ್ಕೆ ತಕ್ಕಂತೆ ಆಯಾ ಪ್ರಾಣಿ ಅಥವಾ ಪಕ್ಷಿಯ ಹೆಸರನ್ನು ಹೊಂದಿರುತ್ತವೆ. ಈ ಪೋಕೆಮಾನ್ ಕಾರ್ಟೂನ್‍ಗಳಲ್ಲಿ ನೈಜತೆ ಇರುವುದರಿಂದ ಮಕ್ಕಳು ಮನಸೋತಿರುವುದು ಸಹಜ.
ಇಂತಹ ಅನಿಮೆಟೆಡ್ ಚಿತ್ರಗಳು ಮತ್ತು ಕಾರ್ಟೂನ್‍ಗಳು ಮಕ್ಕಳನ್ನು ಹೊಸದೊಂದು ಲೋಕಕ್ಕೆ ಎಳೆದೊಯ್ಯುತ್ತವೆ. ಮಕ್ಕಳು ಕಣ್ಣು ರೆಪ್ಪೆಗಳನ್ನು ಮುಚ್ಚದೆ ಕುತೂಹಲದಿಂದ ಟಿ.ವಿ.ಯನ್ನು ನೋಡುವಂತೆ ಮಾಡುತ್ತದೆ. ಈ ಕಾರ್ಟೂನ್‍ಗಳನ್ನು ಬಿತ್ತರಿಸುವ ಚಾನೆಲ್‍ಗಳು ನಮ್ಮಲ್ಲಿ ಕಡಿಮೆಯೇನಿಲ್ಲ! ಅದರಲ್ಲೂ ಕಾರ್ಟೂನ್ ನೆಟ್‍ವರ್ಕ್ ಮಕ್ಕಳನ್ನು ಟಿ.ವಿ.ಯ ಮುಂದೆ ಮಾತ್ರವಲ್ಲ ಆಟದ ಬಯಲಿನವರೆಗೂ ಬರುವಂತೆ ಮಾಡಿದೆಯೆಂದರೆ ತಪ್ಪಾಗಲಾರದು. ಇದುವೇ ಕಾರ್ಟೂನ್ ನೆಟ್‍ವರ್ಕ್ ಮೊದಲ ಬಾರಿಗೆ ಚಿಣ್ಣರ ಲೋಕಕ್ಕೆ ಬಣ್ಣದ ಬುಗುರಿ- ಬೇಬ್ಲೇಡನ್ನು ಪರಿಚಯಿಸಿತು.
ಈ ಬೇಬ್ಲೇಡುಗಳೆಂದರೇನು?ಬೇಬ್ಲೇಡ್ ಎಂದರೆ ಬುಗರಿ. ಈ ಆಟವನ್ನು ನಿರ್ದಿಷ್ಟ ಆಟಿಕೆಯಿಂದ ಆಡುವಂತಹುದು. ಇದರಲ್ಲಿ ನಾಜೂಕಿನ (ಸೊಫೊಸ್ಟಿಕೇಟೆಡ್) ಬುಗರಿ (ಬೇಬ್ಲೇಡ್)ಗಳನ್ನು ಗನ್ ಲಾಂಚರ್‍‍ಗಳ ಮೂಲಕ ಹಾರಿಸಿ, ಬುಗರಿಯನ್ನು ತಿರುಗುವಂತೆ ಮಾಡಲಾಗುತ್ತದೆ. ಈ ಹೆಸರು ಕೇಳುವಾಗಲಂತು ನಮಗೆ ವಿಪರೀತ ಕಲ್ಪನೆ ಬರುವುದು ಸಹಜ. ಆದರೆ ಈ ಬೇಬ್ಲೇಡುಗಳು ಬುಗರಿಗಳ ಮಾದರಿಯೆ!ಕಾಲ ಬದಲಾದಂತೆಲ್ಲಾ ಹೊಸ ಹೊಸ ತಂತ್ರಜ್ಞಾನಕ್ಕೆ ಮನುಷ್ಯ ಹೊಂದಿಕೊಳ್ಳುವಂತೆಯೆ, ಈಗ ಚಿಣ್ಣರಿಗೂ ಹೊಸ ಹೊಸ ಆಟಿಕೆಗಳು ಬರುತ್ತಿವೆ. ಮರದ ಬುಗರಿಗೆ ನೂಲು ಸುತ್ತಿ, ಎಳೆದು ನೆಲದ ಮೇಲೆ ತಿರುಗುವಂತೆ ಮಾಡುವ ಬುಗರಿಯಾಟ ಮಕ್ಕಳಲ್ಲಿ ಆಸಕ್ತಿಯನ್ನು ಕಡಿಮೆ ಮಾಡಿದೆ. ಆದರೆ ಈ ಬೇಬ್ಲೇಡುಗಳು, ಕಿಕ್ ಹೊಡೆಯದೆ, ಬಟನ್ ಒತ್ತಿದ ಕೂಡಲೆ ಸ್ಟಾರ್ಟಾಗುವ ಬೈಕ್‍ಗಳಂತೆ. ಒಮ್ಮೆ ಫಿಕ್ಸ್ ಮಾಡಿ ಗನ್ ಲಾಂಚರ್‍‍ಗೆ ಸೇರಿಸಿ ಟ್ರಿಗರ್ ಒತ್ತಿದರೆ ಕೆಳಗೆ ಬಿದ್ದು ಗಿರ್ರನೆ ಸುತ್ತುತ್ತವೆ. ಈ ಬಣ್ಣದ ಬುಗರಿಗಳನ್ನು ನೋಡುವುದೇ ಒಂದು ಥ್ರಿಲ್!
ಬೇಬ್ಲೇಡ್‍ಗಳ ಮೂಲ ಇತ್ತೀಚಿನದಲ್ಲ. ಈ ಬೇಬ್ಲೇಡ್‍ಗಳು ಹದಿನೇಳನೆಯ ಶತಮಾನದಲ್ಲಿಯೆ ಚಾಲ್ತಿಯಲ್ಲಿದ್ದವು. ಆ ಕಾಲದಲ್ಲಿ ತಿರುಗುವ ಬುಗರಿಗಳನ್ನು `ಬೆಗೋಮಸ್'(Beigomas) ಎಂದು ಕರೆಯುತ್ತಿದ್ದರು. ಈ ಬೆಗೋಮಸ್‍ಗಳನ್ನು ಸಮುದ್ರದ ಸತ್ತ ಚಿಪ್ಪು ಮೀನು (Spiral Sea Shell) ಗಳ ಒಳಗೆ ಮರಳು ತುಂಬಿಸಿ ಆಡುತ್ತಿದ್ದರು. ಆಗಿನ ಕಾಲದಲ್ಲಿ ಬೆಗೋಮಸ್‍ಗಳು ಜಗದ್ವಿಖ್ಯಾತಿಯನ್ನು ಹೊಂದಿದ್ದವು. ಆದರೆ ಎರಡನೆ ಜಾಗತಿಕ ಯುದ್ಧದಿಂದ ತಲ್ಲಣಗೊಂಡ ಜನರು ಈ ಆಟದಲ್ಲಿ ಆಸಕ್ತಿಯನ್ನು ಕಳೆದುಕೊಂಡರೆನ್ನಬಹುದು.
ಈ ಬೆಗೋಮಸ್‍ಗಳು ಇತ್ತೀಚಿನ ನಾಲ್ಕೈದು ವರ್ಷಗಳ ಹಿಂದೆಯಷ್ಟೆ ಮರುಜನ್ಮ ಪಡೆದುಕೊಂಡು ಬಕುಟೆನ್ ಶೂಟ್ ಎನ್ನುವ ಹೊಸ ಹೆಸರಿನೊಂದಿಗೆ ಜನರನ್ನು ಆಕರ್ಷಿಸತೊಡಗಿದವು. ಈ ಬಕುಟೆನ್ ಶೂಟ್‍ಗಳೆ ಶಾರ್ಟ್ ಅಂಡ್ ಸ್ವೀಟಾಗಿ ಬೇಬ್ಲೇಡ್‍ಗಳೆಂದು ಕರೆಯಲ್ಪಡುತ್ತಿವೆ.
ಬೇಬ್ಲೇಡ್‍ಗಳು ಮೊದಲು ತಯಾರಾಗಿ ಜನಪ್ರಿಯಗೊಂಡಿದ್ದು ಜಪಾನ್ ದೇಶದಲ್ಲಿ. ತದ ನಂತರ ಯು.ಕೆ., ಯು.ಎಸ್.ಎ. ಮತ್ತು ಜಗತ್ತಿನ ಇತರೆ ರಾಷ್ಟ್ರಗಳಿಗೆ ಇದರ ಜನಪ್ರಿಯತೆ ವ್ಯಾಪಿಸಿತು. ಈಗ ಇದರ ಜನಪ್ರಿಯತೆ ಎಷ್ಟೆಂದರೆ ಹಳ್ಳಿಯ ಮಕ್ಕಳನ್ನು ಸೆಳೆಯುತ್ತಿದೆಯೆಂದರೆ ಆಶ್ಚರ್ಯವಿಲ್ಲ. ಇವುಗಳು ಜಗತ್ತಿನ ಮಕ್ಕಳನ್ನು ಆಕರ್ಷಿಸಿ ಪೂರ್ಣ ಪ್ರಮಾಣದ ಆಟಿಕೆ (ಆಟ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಜನಪ್ರಿಯತೆಯ ಹೆಗ್ಗಳಿಕೆ ಬೇಬ್ಲೇಡ್ 2000, V-Force ಮತ್ತು G-Revolution ಅನ್ನುವ ಮೂರು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಕಾರ್ಟೂನ್ ನೆಟ್ ವರ್ಕ‍ಗೆ ಸಲ್ಲುತ್ತದೆ. ಈ ಆಟಿಕೆಯನ್ನು ಪರಿಚಯಿಸಿದ್ದು ಮಾತ್ರವಲ್ಲ ಅದನ್ನು ಆಡುವ ರೀತಿ ಹಾಗೂ ಅದರಲ್ಲಿಯ ಹೊಸ ಹೊಸ ತಂತ್ರಜ್ಞಾನಗಳನ್ನು ಮತ್ತು ಅವಿಷ್ಕಾರಗಳನ್ನೂ ಈ ಧಾರಾವಾಹಿಗಳ ಮೂಲಕ ಕಾರ್ಟೂನ್ ನೆಟ್‍ವರ್ಕ್ ಪ್ರಸಾರ ಮಾಡುತ್ತಿದೆ.
ಈ ಬೇಬ್ಲೇಡ್‍ಗಳನ್ನು ಹೇಗೆ ಮತ್ತು ಎಲ್ಲಿ ಆಡಬಹುದು?ಸಾಮಾನ್ಯವಾಗಿ ಈ ಆಟವನ್ನು ಮಕ್ಕಳು ಮನೆಯ ಟಾರಸಿಯಲ್ಲೋ ಅಥವಾ ನಯವಾದ ನೆಲದ ಮೇಲೋ ಆಡುತ್ತಾರೆ. ಆದರೆ ಈ ಆಟವನ್ನು ಆಡಲು ನಿರ್ದಿಷ್ಟವಾದ ಸ್ಟೇಡಿಯಂ(Stadium) ಕೂಡ ಇದೆ. ಈ ಸ್ಟೇಡಿಯಂಗಳು ಬೇಬ್ಲೇಡಿಗಿಂತಲೂ ಹೆಚ್ಚು ಬೆಲೆಬಾಳುವುದರಿಂದ ಅದರ ಬದಲು, ಮೇಲ್ತಳದ (ಗುಂಡಿಯಿಲ್ಲದ) ಅಗಲ ಪಾತ್ರೆಯಲ್ಲಿಯೋ, ಟೀ ಟ್ರೇಯಲ್ಲಿಯೋ ಆಡಬಹುದು. ಬೇಬ್ಲೇಡ್‍ಗಳನ್ನು ಸ್ಟೇಡಿಯಂ (ಪೋರ್‍ಟೆಬಲ್ ಪ್ಲೇಗ್ರೌಂಡ್) ಗಳಲ್ಲಿಯೆ ಆಡಿದರೆ ಉತ್ತಮ. ಒಂದು ವೇಳೆ ಈ ಸ್ಟೇಡಿಯಂಗಳಲ್ಲಿ ಆಟ ಆಸಕ್ತಿಯನ್ನು ನೀಡದಿದ್ದರೆ, ಈ ಕೆಳಗೆ ಹೇಳಿದ ಕೆಲವು ರೀತಿಗಳಲ್ಲಿ ಆಡಬಹುದು.
೧. ಸ್ಟೇಡಿಯಂನ ಬದಲು ನಯವಾದ ನೆಲದ ಮೇಲೆ ಆಡಬಹುದು. ತುಂಬಾ ಜನರಿರುವಾಗ ಇದು ಸಶಕ್ತ ಸ್ಥಳವಾಗಿರುತ್ತದೆ. ಎಲ್ಲರೂ ನಿಂತು ಅಥವಾ ಆರಾಮವಾಗಿ ಕುಳಿತು ಆಟವನ್ನು ವೀಕ್ಷಿಸಬಹುದು.೨. ಸಣ್ಣಗಿನ ಅಂಚಿರುವ ಟೀ ಟ್ರೇ ಅಥವಾ ಮೇಲ್ತಳವಿರುವ ಅಗಲವಾದ ಪಾತ್ರೆಯಲ್ಲಿಯೂ ಇದನ್ನು ಆಡಬಹುದು.೩. ಸ್ಟೇಡಿಯಂನ ಮಧ್ಯದಲ್ಲಿರುವ ಪ್ಲಾಸ್ಟಿಕನ್ನು ಹಿಂದಕ್ಕೆ ಸರಿಸಿ (ಈ ಸೌಲಭ್ಯ ಎಲ್ಲಾ ಸ್ಟೇಡಿಯಂಗಳಲ್ಲೂ ಇಲ್ಲ) ಅದನ್ನು ಕವಚಿ ಹಾಕಿ ಅದರಲ್ಲಿಯೂ ಆಡಬಹುದು.೪. ಮಧ್ಯಮ ಗಾತ್ರದ ಅಗಲ ಬಾಯಿಯ ಪಾತ್ರೆಯಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ, ಹಿಂದಿನ ದಿನ ಫ್ರೀಜರ್‍‍ನಲ್ಲಿಟ್ಟು ಮರುದಿನ ತೆಗೆದಾಗ ನೀರು ಐಸ್ ಆಗಿರುತ್ತದೆ. ಇದರ ಮೇಲೂ ಆಡಬಹುದು.೫. ಎರಡು ಕ್ರಿಕೆಟ್ ಸ್ಟಂಪ್ (ಪೋಲ್)ಗಳನ್ನು ಸ್ವಲ್ಪ ಅಂತರದಲ್ಲಿ ನಿಲ್ಲಿಸಿ ಪೆನಲ್ಟಿ ಸ್ಪಾಟ್‍ಗಳನ್ನು ಗುರುತಿಸಿಕೊಂಡು ಮಧ್ಯೆ ಹಗುರವಾದ ಬಾಲ್‍ಗಳನ್ನು ಇಟ್ಟು ಬೇಬ್ಲೇಡ್‍ಗಳನ್ನು ಬಾಲ್‍ಗೆ ತಾಗುವಂತೆ ಮಾಡಿ ಬಾಲ್‍ಗಳು ಪೆನಲ್ಟಿ ಸ್ಪಾಟ್‍ನತ್ತ ಸಾಗುವಂತೆ ಆಡಬಹುದು. ಇದು ಬೇಬ್ಲೇಡಿನಿಂದ ಆಡಬಹುದಾದ ಆಟದ ಒಂದು ಮಾದರಿ.೬. ಬೇಬ್ಲೇಡನ್ನು ಸ್ಟೇಡಿಯಂನ ಬದಿಯಿಂದ ಹರಿಸಿ, ಬೇಬ್ಲೇಡ್ ಮಧ್ಯೆ ಬರುವವರೆಗೆ ಕಾದು, ಡಿಫೆನ್ಸ್ ಬ್ಲೇಡನ್ನು ಸ್ಟೇಡಿಯಂನಲ್ಲಿ ಕಾಯುವಂತೆ ಮಾಡಬಹುದು.೭. ಒಂದೇ ಸ್ಟೇಡಿಯಂನಲ್ಲಿ ಒಂದು ಬಾರಿಗೆ ಎರಡು ಬೇಬ್ಲೇಡ್‍ಗಳನ್ನು ಹಾರಿಸಿ, ಸ್ಪರ್ಧಾತ್ಮಕವಾಗಿಯೂ ಆಡಬಹುದು. ಈ ರೀತಿ ಆಡುವಾಗ ಮುಖವನ್ನು ನಿರ್ದಿಷ್ಟ ಅಂತರದಲ್ಲಿಟ್ಟು ಹಾರಿಸಬೇಕು. ಈ ರೀತಿ ಎರಡು ಬ್ಲೇಡ್‍ಗಳು ಒಂದು ಸ್ಟೇಡಿಯಂನಲ್ಲಿರುವಾಗ ಮುಖ ಹತ್ತಿರವಿಟ್ಟು ನೋಡುವುದಾಗಲಿ ಮಾಡಬಾರದು. ಯಾಕೆಂದರೆ ಸ್ಟೇಡಿಯಂನಲ್ಲಿ ಎರಡು ಬ್ಲೇಡುಗಳು ಸುತ್ತುವಾಗ ಒಂದಕ್ಕೊಂದು ತಾಗಿ ರಪ್ಪನೆ ಹೊರಗೆ ಜಿಗಿಯುವ ಸಾಧ್ಯತೆಗಳಿವೆ.
ಬೇಬ್ಲೇಡ್‍ಗಳನ್ನು ಖರೀದಿಸುವಾಗ ಯಾವ ಬೇಬ್ಲೇಡುಗಳು ಉತ್ತಮವೆಂದು ನಿರ್ಧರಿಸುವುದು ಕಷ್ಟ. ಸಿ.ಡಿ, ಕ್ಯಾಸೆಟ್‍ಗಳು ಪೈರೆಟ್ ಆಗುವಂತೆ ಇಲ್ಲೂ ಡೂಪ್ಲಿಕೇಟ್ ಬೇಬ್ಲೇಡ್‍ಗಳು ಲಭ್ಯ! ಇವು ಮೆಟಲ್ ಹಾಗೂ ಪ್ಲಾಸ್ಟಿಕ್ ಎರಡರಲ್ಲೂ ದೊರೆಯುತ್ತವೆ. ಒರಿಜಿನಲ್ ಬೇಬ್ಲೇಡ್‍ಗಳು ಸುಮಾರು ಇನ್ನೂರೈವತ್ತಕ್ಕಿಂತ ಮೇಲ್ಪಟ್ಟು ದರಗಳಲ್ಲಿ ದೊರೆಯುತ್ತವೆ. ಅದಲ್ಲದೆ ಐವತ್ತು ರೂಪಾಯಿಗಳಿಗೂ ದೊರೆಯುತ್ತವೆ. ಇವು ಪ್ಲಾಸ್ಟಿಕ್‍ನವುಗಳದಾಗಿದ್ದು ಆಕರ್ಷಕವಾಗಿಯೂ ಇರುತ್ತವೆ. ಇದರ ಸ್ಟೇಡಿಯಂ ಬೆಲೆ ಮುನ್ನೂರೈವತ್ತು ರೂಪಾಯಿಗಳಾಗಿರುತ್ತದೆ. ಮಕ್ಕಳು ಈ ಆಟವನ್ನು ಆಡುವಾಗ `ಬ್ಯಾಟಲ್ ಫೀಲ್ಡ್' ಎಂದೆ ಹೇಳುತ್ತಾರೆ. ಇದರ ಜನಪ್ರಿಯತೆಗೆ ಈ ಶಬ್ದವೇ ನಿದರ್ಶನ!
ಬೇಬ್ಲೇಡ್‍ಗಳ ಗುಣಮಟ್ಟವನ್ನು ಅವುಗಳ ರೇಟಿಂಗ್ ಮೇಲೆ ನಿರ್ಧರಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಡ್ರಾಗನ್ (G) rating 8.8/10, ಡ್ರಿಗರ್ V2 8.5/20, ಗೆಲನ್ ಅಟ್ಯಾಕರ್ 7.2/10, ಡ್ರಾಗನ್ V 8.4/10 ಮತ್ತು ಡ್ರಿಗರ್ F 7/10 ಡ್ರಾನ್‍ಜ಼ರ್, ಡ್ರೆಸಿಲ್‍ಗಳು ಅತ್ಯುತ್ತಮವಾದವುಗಳು.
ಬೇಬ್ಲೇಡ್‍ಗಳಲ್ಲಿ ಮುಖ್ಯವಾಗಿ ಬ್ಲೇಡ್, ಲಾಂಚರ್ (ಶೂಟರ್) ಮತ್ತು ವೈಂಡರ್ ಅನ್ನುವ ವಿವಿಧ ಭಾಗಗಳಿವೆ. ಬೇಬ್ಲೇಡ್‍ಗಳ ಬಿಡಿಬಿಡಿಯಾದ ಭಾಗಗಳಾದ ಬ್ಲೇಡ್ ಬೇಸ್, ವ್ಹೈಟ್ ಡಿಸ್ಕ್, ಅಟ್ಯಕ್ ರಿಂಗ್, ಬಿಟ್ ಚಿಪ್ ಮತ್ತು ಸ್ಪಿನ್ ಗೇರ್‍ಗಳನ್ನು. ಸೇರಿಸಿ, ಸ್ಕ್ರೂ ಹಾಕಬೇಕು. ನಂತರ ಲಾಂಚರ್ ಅಥವಾ ಶೂಟರ್‍‍ನಲ್ಲಿರುವ ಉದ್ದನೆಯ ಹುಕ್ಸ್‍ಗಳಿಗೆ ಫಿಕ್ಸ್ ಮಾಡಬೇಕು. ಲಾಂಚರ್‍‍ನ ಎರಡು ತುದಿಗಳಿಗಿರುವ ತೂತಿನ ಮೂಲಕ ನಿರ್ದಿಷ್ಟವಾದ ರೀತಿಯಲ್ಲಿ ವೈಂಡರನ್ನು ಈ ತೂತಿಗೆ ಸೇರಿಸಿ, "3-2-1 let it Rip" ಎಂದು ಹೇಳುತ್ತಾ ವೈಂಡರನ್ನು ಬಲವಾಗಿ ಎಳೆದಾಗ ಬೇಬ್ಲೇಡ್‍ಗಳು ಸ್ಟೇಡಿಯಂ ಮೇಲೆ ಬಿದ್ದು ತಿರುಗುತ್ತವೆ.
ಬೇಬ್ಲೇಡ್‍ಗಳನ್ನು ಆಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಅವುಗಳೆಂದರೆ-೧. ಈ ಬೇಬ್ಲೇಡ್‍ಗಳನ್ನು ಎಲ್ಲೆಂದರಲ್ಲಿ ಆಡಬಾರದು. ದೊರಗು ನೆಲದ ಮೇಲೆ ಅಥವಾ ಮಣ್ಣಿನ ನೆಲದ ಮೇಲೆ ಆಡಿದರೆ ಇವು ಹಾಳಾಗುತ್ತವೆ.೨. ಇವುಗಳನ್ನು ನೀರಿನಲ್ಲಿ ಆಡಬಾರದು.೩. ಅತೀ ಎತ್ತರದಿಂದ ಬೇಬ್ಲೇಡ್‍ಗಳನ್ನು ಹಾರಿಸಬರದು. ಇವು ತುಂಬಾ ನಾಜೂಕಾಗಿರುವುದರಿಂದ ಬೇಬ್ಲೇಡುಗಳು ಹಾಳಾಗಬಹುದು.೪. ಬೇಬ್ಲೇಡ್‍ಗಳನ್ನು ನೆಲಕ್ಕೆ ಉಜ್ಜಬಾರದು. ಇದರಿಂದ ತುದಿ (Top point) ತುಂಡಾಗುವ ಸಾಧ್ಯತೆಗಳಿವೆ.೫. ಒಂದು ಬೇಬ್ಲೇಡ್‍ನ ವೈಂಡರ್, ಲಾಂಚರ್‍‍ಗಳನ್ನು ಇನ್ನೊಂದು ಬೇಬ್ಲೇಡ್‍ಗೆ ಹೊಂದಿಸಬಾರದು. ಇದರಿಂದ ಲಾಂಚರ್, ಬೇಬ್ಲೇಡ್ ಹಾಗೂ ವೈಂಡರ್‍‍ಗಳು ಹಾಳಾಗುವ ಸಾಧ್ಯತೆಗಳಿವೆ.೬. ಬೇಬ್ಲೇಡನ್ನು ತಲೆಕೆಳಗೆ ಮಾಡಿ ಆಡಬಾರದು.೭. ತಮಾಷೆಗಾಗಿಯಾದರೂ ಇದನ್ನು ಇನ್ನೊಬ್ಬರ ಮೇಲೆ ಹಾರಿಸಬಾರದು. ಅದರ ಡಿಸೈಂಡ್ ತುದಿಗಳು ಶಾರ್ಪ್ ಆಗಿರುತ್ತವೆ. ಎಂಟು ವರ್ಷದ ಕೆಳಗಿನ ಮಕ್ಕಳು ಇದನ್ನು ಆಡುವಾಗ ದೊಡ್ಡವರು ಯಾರಾದರೂ ಗಮನಿಸುವುದು ಅಗತ್ಯ.
ಇವುಗಳೇನೆ ಇದ್ದರೂ ಈ ಬಣ್ಣದ ಬುಗುರಿ ಮುಂಬರುವ ದಿನಗಳಲ್ಲಿ ಜನಪ್ರಿಯ ಒಳಾಂಗಣ ಕ್ರೀಡೆಯಾಗಿ ಗುರುತಿಸುವುದು ಖಂಡಿತ. ಈಗಾಗಲೇ ಬೇಬ್ಲೇಡ್‍ಗಳ ಪಂದ್ಯಾಟಗಳು ನಡೆಯುತ್ತಿರುವುದು ಇದರ ಜನಪ್ರಿಯತೆಗೆ ಉತ್ತಮ ಉದಾಹರಣೆಯಾಗಿದೆ.

Read more!

Thursday, December 18, 2008

ಮಳೆ ಹನಿಯ ಹೂವು


(ಕನ್ನಡ ಪ್ರಭದಲ್ಲಿ ಪ್ರಕಟವಾದ ಕಥೆ)
ಎತ್ತರದ ಮರಗಳ ನೆರಳಿನಾಸರೆಯ ಹಿಡಿದು ಸಾಗಿದವಳನ್ನು ಸ್ವಾಗತಿಸಿದ್ದು ಬೆಟ್ಟಗಳ ಮರೆಯಿಂದ ಹಾದು ಹಸಿರು ಹುಲ್ಲಿನ ಮೇಲೆ ಸ್ಪಷ್ಟ ಬೆಳಕು ಚೆಲ್ಲಿದ ಮುಂಜಾವಿನ ಸೂರ್ಯನ ಹಿತವಾದ ಕಿರಣಗಳು.ತಲೆಯೆತ್ತಿ ಬೆಟ್ಟದ ತುದಿಯವರೆಗೂ ನೋಟ ಬೀರಿದ ಮುಗ್ಧ ಹುಡುಗಿ ರಶ್ಮಿ ಒಂದು ಕ್ಷಣ ಕಣ್ಣು ಮುಚ್ಚಿ ತೆರೆದಳು.ದೂರದ ಬೆಟ್ಟ ಕಾಣೋದಿಕ್ಕೆ ನುಣ್ಣಗೆ!ಇದೇ ಬೆಟ್ಟದಲ್ಲಿ ಮರೆಯಾಗಿ ಹೋಗಿದ್ದು ತನ್ನ ಕನಸು! ಮುಗ್ಧ ಹುಡುಗಿಗೆ ಅರಿವಿಲ್ಲದಂತೆ ಕಣ್ಣಂಚಿನಿಂದ ನೀರು ಇಳಿದು ಬಂತು.ಬೆಟ್ಟದ ಪಾಚಿ ಹಿಡಿದ ಬಂಡೆಗಳ ಮೇಲಿನಿಂದ ಹರಿದ ಮಳೆಯ ನೀರು ಉದ್ದಕ್ಕೂ ಕಂದು ಬಣ್ಣದ ರೇಖೆಯನ್ನು ಎಳೆದಂತೆ ಕಾಣುತ್ತಿತ್ತು. ಅಲ್ಲೊಂದು ಇಲ್ಲೊಂದು ಮೋಡಗಳು ಬೆಟ್ಟದ ಹಸಿರು ಮರಗಳನ್ನು ಮರೆಯಾಗಿಸುವಂತೆ ಅವಚಿ ಹಿಡಿದಿದ್ದವು.ಕಣ್ಣಿನಿಂದ ಇಳಿದ ನೀರಿಗೆ ಸೀರೆಯ ಸೆರಗನ್ನು ಒತ್ತಿ ಹಿಡಿದು ಬೆಟ್ಟದ ಮೇಲೆ ಒತ್ತೊತ್ತಾಗಿ ಕುಳಿತ ಮೋಡಗಳನ್ನು ನೋಡುತ್ತಿದ್ದಳು.ಇದೇ ಮೋಡಗಳು ತನ್ನ ಕನಸನ್ನು ಮುತ್ತಿಕೊಂಡು ಭಗ್ನಗೊಳಿಸಿದ್ದು!ಆ ದಿನ ರೇಡಿಯೋದ ಮುಂದೆ ಕುಳಿತಿದ್ದ ಅವಳನ್ನು ಎತ್ತಿ ಪ್ರಪಾತಕ್ಕೆ ಎಸೆದಿದ್ದು ಇದೇ ಮೋಡಗಳು."ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ......." ರಾಗವಾಗಿ ಹಾಡುತ್ತಾ, ಹೊರಗೆ ಸುರಿಯುವ ಮಳೆಗೆ ಕಿಟಕಿಯಿಂದ ಮುಖ ತೂರಿಸಿ, ನೆಲದ ಮೇಲೆ ಬಿದ್ದ ಮಳೆ ಹನಿಯ ಹೂವುಗಳನ್ನು ಎಣಿಸುತ್ತಿದ್ದಳು. ಹನಿ ಚೆಲ್ಲಿ ಹೋಗುವ ಮೋಡಗಳಿಗೆ ಎಷ್ಟೊಂದು ಶಕ್ತಿ?ನಿರಂತರವಾಗಿ ಉಲಿಯುತ್ತಿದ್ದ ರೇಡಿಯೋ ಕರ ಕರ ಸದ್ದಿನೊಂದಿಗೆ ಅವಳನ್ನು ಎಚ್ಚರಿಸಿತ್ತು.ನೆಲ ಬಿರಿದು ಹೋಗುವಂತೆ ಗುಡುಗಿನ ಆರ್ಭಟ!ರೇಡಿಯೋದಲ್ಲಿ ಬಿತ್ತರವಾದ ಅಪಶಕುನದ ವಾರ್ತೆ!ಬೆಟ್ಟದ ತುದಿಯಲ್ಲಿ ಕ್ಷಣ ಬೆಂಕಿಯುಂಡೆಯಾಗಿ ಉರಿದು ಪುಡಿ ಪುಡಿಯಾಗಿ ನೆಲ ಸೇರಿತು!ಕನಸೂ!
***

ಮರಗಳ ಮರೆಯಲ್ಲಿದ್ದ ಮರದ ಕಾಟೇಜ್‍ನ ಮುಂದಿದ್ದ ಅಟ್ಟಣಿಗೆಯನ್ನು ಏರಿ ದೂರದವರೆಗೂ ದೃಷ್ಟಿ ಹೊರಳಿಸಿದಳು ರಶ್ಮಿ. ಒತ್ತೊತ್ತಾಗಿ ಬೆಳೆದಿದ್ದ ದೈತ್ಯಾಕಾರದ ಮರಗಳ ನಡುವಿನಿಂದಲೂ ಎದುರಿಗಿದ್ದ ಬೆಟ್ಟ ಸುಂದರವಾಗಿ ಕಾಣುತ್ತಿತ್ತು. ಕಣ್ಣರಳಿಸಿ ಕುತೂಹಲದ ನೋಟ ಬೀರುತ್ತಿದ್ದವಳನ್ನು ಎಚ್ಚರಿಸಿದ್ದು ಅಟ್ಟಣಿಗೆಯ ಮೇಲಿಂದ ಇಳಿದು ಕಾಲಿನ ಬಳಿ ಸರಿದ ಕಪ್ಪಗಿನ ಹಲ್ಲಿ!ಅಟ್ಟಣಿಗೆಯ ಅಂಚನ್ನು ಹಿಡಿದ ಕೈಗಳು ಸಡಿಲಗೊಂಡು, ಸೀರೆಯ ನೆರಿಗೆಯನ್ನು ಮೇಲಕ್ಕೇರಿಸಿ ಮೆಟ್ಟಲುಗಳನ್ನು ಹಾರಿ ಕೆಳಗಿಳಿದು ಕಾಟೇಜ್‍ನ ಮುಂದೆ ಎದೆಗೆ ಕೈ ಹಚ್ಚಿ ನಿಂತು ದೀರ್ಘ ಉಸಿರು ದಬ್ಬಿದಳು.ಅಟ್ಟಣಿಗೆಯ ದಡ ದಡ ಸದ್ದಿಗೆ ಹೊರಗೆ ಬಂದಿದ್ದ ಅಡುಗೆಯ ಆಳು ನರಂಗ ಆತಂಕದ ದೃಷ್ಟಿ ಬೀರಿದ. ಅವನನ್ನು ನೋಡುತ್ತಲೇ ಮತ್ತೊಮ್ಮೆ ಕಣ್ಣು ಮುಚ್ಚಿ ನಿಟ್ಟುಸಿರಿಟ್ಟಳು."ಏನಿಲ್ಲಾ, ಕಪ್ಪು ಹಲ್ಲಿ"ನರಂಗನ ತುಟಿಗಳಲ್ಲಿ ಕಿರು ನಗು ಕಾಣಿಸಿಕೊಂಡಿತು."ಅಯ್ಯೋ, ಒಂದು ಸಣ್ಣ ಹಲ್ಲಿಗೆ ಇಷ್ಟೊಂದು ಹೆದರೋದಾ? ಅಡುಗೆ ಮನೆಯ ಗೋಡೆಯಲ್ಲೆಲ್ಲಾ ಅವುಗಳದ್ದೇ ಸಾಮ್ರ್‍ಆಜ್ಯ""ನಿನ್ನ ಅಡುಗೆ ಮನೆಯ ಹಲ್ಲಿ ಅಲ್ಲ ಅದು. ಕಪ್ಪು ಹಲ್ಲಿ""ಅಂದ್ರೆ.... ದೈತ್ಯ ಹಲ್ಲಿನಾ?""ಓಹೋ! ನಿನ್ನಲ್ಲೆಂತಾ ಮಾತು. ಹೋಗು ನಿನ್ನ ಕೆಲ್ಸ ನೀನು ನೋಡ್ಕೊ"ಕಣ್ಣಗುಡ್ಡೆಗಳು ಹೊರಗೆ ಬರುವಷ್ಟು ಅಗಲಕ್ಕೆ ಕಣ್ಣುಗಳನ್ನು ಅಗಲಗೊಳಿಸಿ ಅವಳ ಹತ್ತಿರ ಬಂದು ಮಾತು ಹೊರಳಿಸಿದ."ನಿಮಗೆ ಗೊತ್ತಿಲ್ಲಮ್ಮಾ. ನೀವು ಹಲ್ಲಿಗಳ ಬಗ್ಗೆ ಹೆದರ್ತೀರಿ... ನಿಮ್ಮ ತಂದೆಗೆ ಹುಚ್ಚು. ಅರಣ್ಯಾಧಿಕಾರಿಂತ ಇಂತಹ ಭಯ ಹುಟ್ಟಿಸೋ ಕಾಡಿನ ಮಧ್ಯೆ ಇರೋ ಕಾಟೇಜ್‍ಗೆ ಬರೋದೆ? ಈ ಕಾಡಿನಲ್ಲಿ ರಾಕ್ಷಸರೂ ಇದ್ದಾರಂತೆ. ಎದುರಿಗೆ ಕಾಣಿಸೋ ಆ ಬೆಟ್ಟವಿದ್ಯಲ್ಲಾ. ಅದರಲ್ಲಿ ಅವರಿರೋದಂತೆ. ನರ ಬಲೀಂದ್ರೆ ಅವರಿಗೆ ಪಂಚ ಪ್ರಾಣವಂತೆ""ಇದೇನು ರಾಕ್ಷಸರಿರೋ ಯುಗಾನಾ? ಹೋಗಯ್ಯಾ ನಿನ್ನ ಕೆಲ್ಸ ಮಾಡು" ಅವನ ಮಾತನ್ನು ತಳ್ಳಿ ಹಾಕುವಂತೆ ಹೇಳಿದಳಾದರೂ ರಶ್ಮಿಯ ಎದೆ ಸಣ್ಣಗೆ ಬಡಿದುಕೊಳ್ಳಲಾರಂಭಿಸಿತು.ಮರಗಳೆಡೆಯಿಂದ ಕಾಣುತ್ತಿದ್ದ ಸುಂದರ ಬೆಟ್ಟವೀಗ ಭಯ ತರಿಸುವ ರಾಕ್ಷಸನಂತೆ ಕಂಡಿತು.ಏಕಾಏಕಿ ಚದುರಿದ್ದ ಮೋಡಗಳು ಬೆಟ್ಟದ ಮೇಲೆ ಒತ್ತೊತ್ತಾಗಿ ಕುಳಿತು ಇನ್ನೇನು ಮಳೆ ಹೊಯ್ಯುವಂತೆ ಕಂಡವು. ತಟ್ಟನೆ ಕಾಟೇಜ್‍ನ ಕಡೆಗೆ ಕಾಲು ಸರಿಸಿದಳು ಹುಡುಗಿ.ಎದುರಿಗಿನ ಬೆಟ್ಟ ಸಂಪೂರ್ಣ ಮೋಡಗಳಿಂದ ಮರೆಯಾಗಿತ್ತು. ಮುಸ್ಸಂಜೆಯ ಹೊತ್ತು ಮಳೆಯ ಹನಿ ತೀವ್ರತೆ ಪಡೆದು ಧಾರಕಾರವಾಗಿ ಸುರಿಯಲಾರಂಭಿಸಿತು.ತೂಗು ಹಾಕಿದ್ದ ಲಾಂದ್ರಕ್ಕೆ ಎಣ್ಣೆ ಸೇರಿಸಿದ ಅಡುಗೆಯ ಆಳು. ರಶ್ಮಿ ಬೆಂಕಿ ಪೊಟ್ಟಣ ತಂದು ಕಡ್ಡಿ ಗೀರಿ ಲಾಂದ್ರದ ಗಾಜನ್ನು ಏರಿಸಿ ಹಚ್ಚಿದವಳು, ಬೆಂಕಿ ಕಡ್ಡಿಯ ಬಿಸಿ ಕೈಗೆ ತಾಗುತ್ತಲೇ ಕಡ್ಡಿಯನ್ನು ದೂರಕ್ಕೆಸೆದು ಗಾಜನ್ನು ಕೆಳಗಿಳಿಸಿದಳು. ನರಂಗ ಲಾಂದ್ರವನ್ನು ಛಾವಣಿಯಿಂದ ಇಳಿ ಬಿದ್ದಿದ್ದ ಕೊಕ್ಕೆಗೆ ಸೇರಿಸಿದ. ಮಳೆಯ ಜೊತೆಗಿನ ಗಾಳಿಯ ರಭಸಕ್ಕೆ ಲಾಂದ್ರದ ದೀಪ ಒಂದೇ ದಿಕ್ಕಿಗೆ ಸರಿಯಿತು."ನರಂಗ, ಮುಂಬಾಗಿಲನ್ನು ಹಾಕಿ ಬಿಡು. ಗಾಳಿ, ಮಳೆ ಜೋರಾಗಿದೆ"ನರಂಗ ಎದ್ದು ಬಾಗಿಲನ್ನು ಹಾಕಿ ಚಿಲಕ ಸರಿಸಿದ. ಗೋಡೆಗೆ ತೂಗು ಹಾಕಿದ್ದ ಗಂಟೆ ಏಳು ಬಡಿಯುತ್ತಲೇ, ರಶ್ಮಿ ಕಣ್ಣನ್ನು ಗೋಡೆಯ ಕಡೆಗೆ ಹೊರಳಿಸಿದಳು."ನರಂಗ, ಅಪ್ಪಯ್ಯ ಎಲ್ಲೋ ಈ ಮಳೆಗೆ ಸಿಕ್ಕಿ ಹಾಕಿಕೊಂಡಿರಬೇಕು"ಹೊರಗೆ ಒಂದೇ ತೆರನಾಗಿ ಸುರಿಯುವ ಮಳೆಗೆ ದೇಹ ತಂಡಿ ಹಿಡಿದಂತಾಗಿ ದಪ್ಪನೆಯ ಉಣ್ಣೆಯ ಕೋಟು ಏರಿಸಿಕೊಂಡ ನರಂಗ."ನೀವು ಹೇಳೋದು ಸರಿಯಾಗಿದೆ. ಗಾಳಿ ನಿಲ್ಲದೆ ಅವರು ಜೀಪು ಓಡಿಸೋದು ಅಸಾಧ್ಯ. ಮಳೆ ಹಿಡಿದಿರೋದು ನೋಡಿದ್ರೆ ಪಕ್ಕನೆ ಬಿಡಲಾರದೂಂತ ಅನಿಸ್ತಿದೆ"ನರಂಗ ಮಾತುಗಳಿಗೆ ಆತಂಕದ ನೋಟ ಬೀರಿದಳು.ಆಗೊಮ್ಮೆ ಈಗೊಮ್ಮೆ ಸುಳಿಯುವ ಮಿಂಚಿನ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡು ಕಿಟಕಿಯ ಬಾಗಿಲುಗಳನ್ನು ತಳ್ಳಿ ಕಾಟೇಜ್‍ನ ಎದುರಿಗೆ ದೃಷ್ಟಿ ಹಾಯಿಸಿದಳು. ಏನೊಂದು ಕಾಣಿಸದಷ್ಟು ಕಪ್ಪು ಕತ್ತಲು!ಕಾಟೇಜ್‍ನ ಮುಂದಿನ ದಾರಿಯನ್ನು ಹುಡುಕುವುದು ವ್ಯರ್ಥ ಪ್ರಯತ್ನ. ಒಂದೇ ಸಮನೆ ಸುರಿಯುವ ಮಳೆಯ ರಾಗ. ಮಿಂಚಿನ ಬೆಳಕಿನಲ್ಲಿ ದಾರಿಯನ್ನು ತುಂಬಿ ನಿಂತ ಮಳೆಯ ನೀರು ಅಸ್ಪಷ್ಟವಾಗಿ ಕಾಣುತ್ತಿತ್ತು. ತಟ್ಟನೆ ದೂರದಲ್ಲಿ ಮಿಣುಕು ದೀಪ ಕಾಣಿಸಿತು!ರಸ್ತೆಯನ್ನು ನುಗ್ಗಿದ ನೀರು, ಜೀಪು ತರೋದಕ್ಕೆ ಅಡ್ಡಿಯಾಗಿರಬೇಕು. ಅದಕ್ಕಾಗಿ ಅಪ್ಪಯ್ಯ ನಡೆದುಕೊಂಡು ಬರುತ್ತಿರಬೇಕು!"ನರಂಗ, ಅಪ್ಪಯ್ಯ ಬರುತ್ತಿರೋ ಹಾಗಿದೆ. ಇನ್ನೊಂದು ಟಾರ್ಚ್ ಹಿಡಿದು ಹೋಗು" ಕಿಟಕಿಯ ಬಾಗಿಲು ಮುಚ್ಚುತ್ತಾ ಮೂಲೆಯಲ್ಲಿ ಮುದುರಿ ಕುಳಿತಿದ್ದ ಅಡುಗೆಯಾಳನ್ನು ಕರೆದು ಹೇಳಿದಳು.ಚಳಿಗೆ ಜಡ ಹಿಡಿದಿದ್ದ ದೇಹವನ್ನು ನಿಧಾನಕ್ಕೆ ಅಲುಗಿಸಿ ಎದ್ದು ನಿಂತ ನರಂಗ.ಮರದ ಅಲಂಕಾರಿಕ ಬೀರುವಿನಲ್ಲಿದ್ದ ಉದ್ದನೆಯ ಟಾರ್ಚ್‍ನ್ನು ತೆಗೆದು ಅವನ ಕೈಗೆ ನೀಡಿದಳು.ಅಗಲಕ್ಕೆ ಬಾಯಿಯನ್ನು ತೆರೆದು ಆಕಳಿಸಿ, ಹೆಜ್ಜೆಯನ್ನು ಹೊರಳಿಸಿದ. ಎದುರಿಗಿನ ಗೋಡೆಯ ಮೊಳೆಗೆ ತೂಗಿಸಿದ್ದ ಮಳೆಯ ನಿಲುವಂಗಿಯನ್ನು ತೆಗೆದು ಧರಿಸಿಕೊಂಡ. ತಲೆಗೆ ಸೇರಿಸಿದ ಟೋಪಿಯನ್ನು ಕಿವಿಯವರೆಗೆ ಎಳೆದು, ಕಾಲಿಗೆ ಗಮ್ ಬೂಟುಗಳನ್ನು ಸೇರಿಸಿದ.ಎದುರಿಗಿನ ಬಾಗಿಲನ್ನು ತೆರೆಯುತ್ತಲೇ ನೀರಿನ ತೇವದ ಗಾಳಿ ಮುಖಕ್ಕೆ ತಟ್ಟುತ್ತಲೇ ಎರಡೆರಡು ಬಾರಿ ಸೀನು ಹಾಕಿದ. ಎಡಗೈಯಿಂದ ಮೂಗನ್ನು ಒರೆಸಿಕೊಂಡು ದಾರಿಯುದ್ದಕ್ಕೂ ನೋಟ ಹರಿಸಿದ. ರಶ್ಮಿ ಕೂಡ ಬಾಗಿಲ ಬಳಿ ನಿಂತಳು.ಸಣ್ಣಗಿನ ಬೆಳಕಿಗಾಗಿ ದೂರದವರೆಗೆ ದೃಷ್ಟಿ ಹಾಯಿಸಿದವಳಿಗೆ ಆಶ್ಚರ್ಯ!ರಸ್ತೆಯ ನೇರ ದಾರಿ ಬಿಟ್ಟು, ಬೆಳಕು ಮರಗಳ ಮಧ್ಯೆ ಕಾಣಿಸಿದಂತಾಯ್ತು. ನರಂಗ ಅದಾಗಲೇ ಕಾಟೇಜ್‍ನ ಎದುರಿಗಿನ ರಸ್ತೆಯಲ್ಲಿ ಅರ್ಧದವರೆಗೂ ಸಾಗಿದ್ದ.ಯಾವುದೋ ಆತಂಕ ಅವಳನ್ನು ಆವರಿಸಿದಂತಾಯಿತು. ಬಾಗಿಲನ್ನು ಸರಿಸಿ ಚಿಲಕ ಹಾಕಿ ಕಿಟಕಿಯಾಚೆಗೆ ಸರಿದಳು.ಗಂಟೆ ಒಂದೇ ಸಮನೇ ಓಡುತಲಿತ್ತು.ತಾನು ತಿಳಿದುಕೊಂಡಂತೆ ದೂರದಲ್ಲಿ ಕಂಡ ಬೆಳಕು ಅಪ್ಪಯ್ಯನದಾಗಿದ್ದರೆ ಇಷ್ಟರಲ್ಲಿ ಆತ ಕಾಟೇಜ್ ತಲುಪಬೇಕಿತ್ತು!ಹಾಗಲ್ಲ! ರಸ್ತೆಯುದ್ದಕ್ಕೂ ನೀರು ತುಂಬಿದೆ. ಅದನ್ನು ತಪ್ಪಿಸಿ ಮರಗಳ ಕಡೆಯಿಂದ ಅಡ್ಡ ದಾರಿ ಹಿಡಿದು ಬರುತ್ತಿರಬಹುದು.ಕಿಟಕಿಯ ಗಾಜುಗಳನ್ನು ಮುಚ್ಚಿ ಲಾಂದ್ರದ ಬೆಳಕಿನಲ್ಲಿ ಮೂಡಿದ್ದ ನೆರಳನ್ನೇ ನೋಡುತ್ತಿದ್ದಳು. ತಟ್ಟನೆ ಲಾಂದ್ರದ ಬೆಳಕಿಗೆ ಸೋತ ಕೀಟ ಅವಳ ಮುಖವನ್ನು ಮುದ್ದಿಸಿತು. ಬೆಚ್ಚಿ ಹಿಂದೆ ಸರಿದು ನಿಂತಳು.ಮತ್ತೊಮ್ಮೆ ಮುಖಕ್ಕೆ ಏನೋ ಬಡಿದಂತಾಯಿತು.ಅಲ್ಲ! ಅದು ಮುಖಕ್ಕೆ ಬಡಿದ ಕೀಟದ ಸದ್ದಲ್ಲ!ಯಾರೋ ಬಾಗಿಲ ಮೇಲೆ ಬಡಿಯುವ ಸದ್ದು!ಒಂದೇ ಉಸುರಿಗೆ ಹಾರಿ, ಬಾಗಿಲಿನ ಚಿಲಕ ಜಾರಿಸಿದಳು.ಬಾಗಿಲು ಇದ್ದಕ್ಕಿದಂತೆ ಬಲವಾಗಿ ತಳ್ಳಿ ಒಳಗೆ ಬಂದ ವ್ಯಕ್ತಿ!ರಶ್ಮಿ ಚಿಟ್ಟನೆ ಚೀರಿ ಹಿಂದಕ್ಕೆ ಹಾರಿದಳು.ಆತ ಚಿಲಕ ಸಿಕ್ಕಿಸಿ ತಲೆಗೆ ಸುತ್ತಿದ್ದ ಬಟ್ಟೆಯ ನೀರನ್ನು ಹಿಂಡಿ ಮುಖ ಒರೆಸಿಕೊಂಡು ಸುತ್ತಲೂ ಪರೀಕ್ಷಕ ನೋಟ ಬೀರಿದ.ಸುಮಾರು ಆರಡಿ ಎತ್ತರದ ಅಜಾನು ಬಾಹು ವ್ಯಕ್ತಿ! ಮೂವತ್ತರ ಆಚೆ ಈಚೆ ವಯಸ್ಸಿರಬಹುದು. ಉಟ್ಟಿದ ಬಟ್ಟೆಯೆಲ್ಲಾ ತೊಯ್ದು ತೊಪ್ಪೆಯಾಗಿ ನೀರು ಇಳಿಯುತ್ತಿತ್ತು. ಹೆಗಲಿಗೇರಿಸಿದ ನಾಡಕೋವಿಯನ್ನು ಕೆಳಗಿಳಿಸಿ ಬಟ್ಟೆಯಿಂದ ಒರೆಸಿದ."ಮನೆಯಲ್ಲಿ ಬೇರ್‍ಯಾರಿದ್ದಾರೆ?" ಗಡಸು ಕಂಠಕ್ಕೆ ಬೆದರಿ ನಿಂತವಳನ್ನು ಮತ್ತಷ್ಟು ಮೂಲೆಗೆ ಸರಿಸಿತು ಮಾತು."ನಾನು ನಿನ್ನನ್ನೇ ಕೇಳ್ತಾ ಇರೋದು. ಇಲ್ಲಿ ಬೇರ್‍ಯಾರು ಇದ್ದಾರೆ?"ಅವನ ಕಂಠ ಇನ್ನಷ್ಟು ಗಡುಸಾಯಿತು."ಯಾರು ...ಇಲ್ಲ... ಯಾರು... ಇಲ್ಲ..." ನಡುಗುವ ದನಿಯಿಂದ ಮಾತು ಹೊರಗೆ ಬಂತು.ಒದ್ದೆ ಬಟ್ಟೆಯ ಕಿಸೆಗೆ ಕೈ ತೂರಿಸಿ ಪ್ಲಾಸ್ಟಿಕ್ ಚೀಲ ತೆಗೆದ. ಒಳಗೆ ಬೆಚ್ಚಗೆ ಕುಳಿತಿದ್ದ ಸಿಗರೇಟಿನ ಪಾಕೆಟನ್ನು ಹೊರ ತೆಗೆದು ತುಟಿಗಿರಿಸಿಕೊಂಡ."ಬೆಂಕಿ ಕಡ್ಡಿ ಬೇಕು" ಮಾತಿನಲ್ಲಿ ನಯವಿರಲಿಲ್ಲ.ಸರಕ್ಕನೆ ಸರಿದು ಸ್ಟಾಂಡ್‍ನ ಮೇಲಿದ್ದ ಬೆಂಕಿ ಪೆಟ್ಟಿಗೆ ನೀಡಿದಳು. ಒಂದು ಕಡ್ಡಿಯನ್ನು ಎರಡೆರಡು ಬಾರಿ ಗೀರಿದ."ಹಾಳಾದ ಮಳೆ, ಹಾಕಿದ ಯೋಜನೆಯೆಲ್ಲಾ ಹಾಳಾಯ್ತು" ಬೆಂಕಿ ಗಡ್ಡಿ ಉರಿಯುತ್ತಲೇ ಸಿಗರೇಟಿಗೆ ಸೋಕಿಸಿ ಒಂದೆರಡು ಧಂ ಎಳೆದು ಹೊಗೆಯುಗುಳಿದ."ತಿನ್ನೊದಿಕ್ಕೆ ಏನಾದ್ರೂ ಇದೆಯಾ?" ಬಲಕೈಯ ಬೆರಳ ತುದಿಗಳನ್ನು ಒಟ್ಟು ಸೇರಿಸಿ ತುಟಿಯ ಬಳಿ ಎರಡೆರಡು ಬಾರಿ ಸರಿಸಿ ಕೇಳಿದ."ಹಾಂ.. ಇಲ್ಲ......ಇಲ್ಲ...."ಹಲ್ಲಿಯ ಹಾಗೆ ಗೋಡೆಗೆ ಅಂಟಿಕೊಂಡಂತೆ ನಿಂತಳು.ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಅಡುಗೆ ಮನೆಯೊಳಗೆ ಹೋದ. ರಶ್ಮಿ ಬಿಟ್ಟ ಕಣ್ಣು ಬಿಟ್ಟಂತೆ ನಿಂತೇ ಇದ್ದಳು.ಒಂದೊಂದೇ ಪಾತ್ರೆಯ ಮುಚ್ಚಳ ಸರಿಸಿ ನೋಡುತ್ತಿದ್ದ. ಹೂಜಿಯಲ್ಲಿ ತುಂಬಿದ್ದ ನೀರನ್ನು ಗಟಗಟನೆ ಕುಡಿದು ಹೊರಗೆ ಬಂದ."ನಂಗೆ ಸುಳ್ಳು ಹೇಳ್ತೀಯಾ?" ಒರಟಾಗಿ ಬಂದ ಮಾತಿನ ಜೊತೆಗೆ ಕೋವಿಯ ತುದಿಯನ್ನು ಅವಳ ಕುತ್ತಿಗೆಯ ಬಳಿ ಹಿಡಿದ."ನಡಿ, ಇರೋದೆಲ್ಲವನ್ನೂ ಒಂದು ತಟ್ಟೆಗೆ ಹಾಕಿ ತಾ. ಇನ್ನು ಹೆಚ್ಚು ಸಮಯ ನಾನು ಇಲ್ಲಿ ನಿಲ್ಲೋದಿಲ್ಲ" ಕೋವಿಯ ತುದಿ ಕೆಳಗಿಳಿಯುತ್ತಲೇ ಹೇಳಿದ ಮಾತುಗಳಿಗೆ ಅವಳ ಕಾಲುಗಳು ಮಿಂಚಿನ ವೇಗ ಪಡೆದುಕೊಂಡವು.ಸರಸರನೆ ನಡೆದು ದೊಡ್ಡ ಬಟ್ಟಲಿಗೆ ಒಂದಷ್ಟು ಅನ್ನ, ಸಾಂಬಾರು ಸುರಿದು ಅವನ ಮುಂದೆ ಹಿಡಿದಳು.ಕೋವಿಯನ್ನು ಹೆಗಲಿಗೇರಿಸಿ ಬಿಗಿದುಕೊಂಡ. ಅವಳ ಕೈಯಲ್ಲಿದ ತಟ್ಟೆಯನ್ನು ಎಳೆದುಕೊಂಡ. ಬಲಗೈಯನ್ನು ಪ್ಯಾಂಟ್‍ನ ಹಿಂಬದಿಗೆ ಒರೆಸಿಕೊಂಡು ಗಬಗಬನೆ ತಿನ್ನಲಾರಂಭಿಸಿದ.ಒಂದೆರಡು ನಿಮಿಷದಲ್ಲಿ ತಟ್ಟೆಯನ್ನು ಬರಿದು ಮಾಡಿ ಸರಸರನೆ ನಡೆದು ಮಳೆಯ ಸದ್ದಿನೊಂದಿಗೆ ಕರಗಿ ಹೋದ.
***
ಘಟನೆ ನಡೆದು ವಾರಗಳು ಕಳೆದರೂ ಮಂಕಾಗಿಯೇ ಇರುತ್ತಿದ್ದಳು ರಶ್ಮಿ. ಮಗಳ ಮಂಕುತನಕ್ಕೆ ಬೇರೇನೋ ಕಲ್ಪನೆ ಕೊಟ್ಟ ಅರಣ್ಯ ಅಧಿಕಾರಿ ಮಲ್ಲಯ್ಯ."ನಿನಗೇನಾಗಿದೆ ಹೇಳ್ಬಿಡು? ಹೀಗೆ ಮಂಕಾಗಿ ಕುಳಿತಿರೋದ್ರಲ್ಲಿ ಅರ್ಥವಿಲ್ಲ"ಬರೀ ಕಣ್ಣ ಗುಡ್ಡೆಗಳನ್ನು ಅಧಿಕಾರಿಯ ಕಡೆಗೆ ತಿರುಗಿಸಿ, ಮಾತನಾಡದೆ ಎದ್ದು ನಿಂತಳು. ಅಧಿಕಾರಿ ಮಗಳ ಹಿಂದೆಯೇ ಎದ್ದು ಬಂದ. ಅವಳು ಕಿಟಕಿಗೆ ಆತು ನಿಂತಳು.ಮೂವತ್ತರ ಆಚೀಚೆ ವಯಸ್ಸಿನ, ತೊಯ್ದು ತೊಪ್ಪೆಯಾಗಿದ್ದ ವ್ಯಕ್ತಿ ಕಣ್ಣೆದುರು ಬಂದು ನಿಂತಂತಾಯಿತು. ಒಂದು ಕ್ಷಣ ನರಗಳಲ್ಲಿ ಭಯ ತುಂಬಿ ಮೈ ಅಲುಗಿಸಿದಳು."ಇನ್ನೇಷ್ಟು ದಿನ ಇಲ್ಲಿರ್ಬೆಕು?" ಮಾತಿನಲ್ಲಿ ನಡುಕ ತುಂಬಿತ್ತು."ಓಹೋ! ಹೀಗಾ?... ಈ ಮಲೆನಾಡಿನ ಮಳೆಯೇ ಹೀಗೆ, ಸುರಿದ್ರೆ ವಾರಾನುಗಟ್ಲೆ ಸುರಿತಾ ಇರುತ್ತೆ. ನಾನು ಒಂದು ಕೆಲಸ ಮಾಡ್ತೀನಿ. ನಾಳೆ ಸಿಟಿಗೆ ಹೋದೋನು ವಿಶಾಲುಗೆ ಫೋನ್ ಮಾಡ್ತೀನಿ. ನೀನು ಬೆಂಗಳೂರಿಗೆ ಹೋಗ್ಬಿಡು. ಮಳೆಗಾಲ ಮುಗಿದ ನಂತರ ಬಂದ್ಬಿಡು"ತಂದೆಯ ಮಾತಿಗೆ ಆಶ್ಚರ್ಯವಾಯಿತು.ಆ ವ್ಯಕ್ತಿ ಮತ್ತೊಮ್ಮೆ ಇಲ್ಲಿಗೆ ಬರಬಹುದು. ಅವನಿಂದ ತಪ್ಪಿಸಿಕೊಳ್ಳೋದಿಕ್ಕೆ ಇರೋದು ಒಂದೇ ದಾರಿ. ತಾನು ವಿಶಾಲು ಜೊತೆಗೆ ಬೆಂಗಳೂರು ಸೇರಿ ಬಿಡಬೇಕು.ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿಯ ಬಗ್ಗೆ ಅಪ್ಪಯ್ಯನಿಗೆ ಹೇಳಿಬಿಡಬೇಕೆಂಬ ಇಚ್ಛೆ ಇದ್ದರೂ ಆ ವಿಷಯ ಅವಳಲ್ಲೇ ಉಳಿದು ಹೋಯಿತು. ಆದಷ್ಟು ಒಂಟಿಯಾಗಿರದೆ ನರಂಗನನ್ನು ಎಲ್ಲೂ ಹೋಗಗೊಡದೆ ಇದ್ದಳು.ಕಿಟಕಿಯ ಬಳಿ ನಿಂತವಳ ಕಣ್ಣುಗಳು ಯಾಂತ್ರಿಕವಾಗಿ ಬೆಟ್ಟದ ಕಡೆಗೆ ಚಲಿಸಿದವು. ಆಕಾಶದಲ್ಲಿ ಮೋಡಗಳು ತುಂಬಿದ್ದರೂ, ಮಳೆ ಸುರಿಯಲು ಮರೆತಂತಿತ್ತು.ಕಾಲಿಗೆ ಜೋಡುಗಳು ಜೊತೆಯಾಗಿ, ಒದ್ದೆ ನೆಲವನ್ನು ಸ್ಪರ್ಶಿಸಿದವು. ಎಲ್ಲೆಡೆ ಹೊಸ ಚಿಗುರುಗಳು ಪ್ರಕೃತಿಗೆ ಮೆರುಗು ತಂದಂತಿದ್ದವು. ದೂರಕ್ಕೂ ನಡೆದು ಕಳ್ಳಿ ಬೇಲಿಯ ಬಳಿ ನಿಂತಳು ಹುಡುಗಿ. ಕರ್ಕೊಟ್ಟೆಯ ಮುಳ್ಳು ಕಿತ್ತು ಕಳ್ಳಿಯ ಗಿಡಕ್ಕೆ ಚುಚ್ಚಿದಳು. ಕಣ್ಣಿನಲ್ಲಿಳಿದ ನೀರಿನಂತೆ ಕಳ್ಳಿ ಗಿಡದ ಬಿಳಿಯ ಸುನೆ ತಟತಟನೆ ನೆಲಕ್ಕೆ ಬಿಳುತ್ತಿತ್ತು. ತಟ್ಟನೆ ಒದ್ದೆ ತರಗೆಲೆಯ ಚರಪರ ಸದ್ದಿಗೆ ಹಿಂತಿರುಗಿದಳು.ಆರಡಿ ಎತ್ತರದ ಅದೇ ಅಜಾನುಬಾಹು ವ್ಯಕ್ತಿ ನಿಂತಿದ್ದ!ಭಯದಿಂದ ಎದೆಗೆ ಕೈ ಹಚ್ಚಿ ಮೆಲ್ಲ ಮೆಲ್ಲನೆ ಹಿಂದಕ್ಕೆ ಸರಿದಳು. ಆತ ಒಮ್ಮೆ ಅತ್ತಿತ್ತ ಕಣ್ಣಾಡಿಸಿದ."ನಿಂತ್ಕೋ" ಅದೇ ಗಡಸು ಕಂಠ!ಬಾಯಿಯಿಂದ `ಹಾಂ!' ಉದ್ಗಾರದೊಂದಿಗೆ ಕಾಲಿಗೆ ತಡೆ ಬಿದ್ದಿತು. ಬೆದರಿಕೆಯ ನೋಟದಿಂದ ಬಾಯಗಲಿಸಿ ಅವನನ್ನೇ ನೋಡುತ್ತಿದ್ದಳು.ಹೆಗಲಿನಲ್ಲಿ ಕೋವಿಯ ಬದಲು ಉದ್ದನೆಯ ಬಟ್ಟೆಯ ಚೀಲ ಇಳಿ ಬಿದ್ದಿತ್ತು! ಕೆನ್ನೆ, ಗಲ್ಲಗಳನ್ನು ಮರೆ ಮಾಡುವಂತೆ ಗಡ್ಡ ಬೆಳೆದಿತ್ತು. ಕಣ್ಣಿನಲ್ಲಿ ಮಾತ್ರ ಅದೇ ಚುರುಕುತನ!ಉಟ್ಟಿದ್ದ ಮುದ್ದೆ ಮುದ್ದೆಯಾದ ಬಟ್ಟೆ ಅವನಿಗೆ ಒಪ್ಪುವಂತೆ ಇತ್ತು. ಅವಳ ಕಣ್ಣುಗಳು ಮತ್ತೊಮ್ಮೆ ಅವನ ಹೆಗಲಿನ ಕಡೆಗೆ ಸರಿಯಿತು. ಗಂಟಲಿನಲ್ಲಿ ತಡೆಯಂತಿದ್ದ ಉಗುಳು ನುಂಗಿಕೊಂಡು ಯಾಂತ್ರಿಕವಾಗಿ ಬಾಯಿ ಮುಚ್ಚಿಕೊಂಡಿತು. ಆಸರೆಗಾಗಿ ಮರದ ಕೊಂಬೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು, ತನ್ನ ಭಾರವನ್ನೆಲ್ಲಾ ಅದರ ಮೇಲೆ ಹಾಕಿ ನಿಂತಳು.ಆತ ಅವಳನ್ನು ಓದಿದವರಂತೆ ತುಟಿ ಬಿರಿದು ನಕ್ಕ."ಮತ್ತೆ ನೀನು ಸಿಕ್ಕಿರೋದು ನನ್ನ ಅದೃಷ್ಟ" ಅವನ ಮಾತಿನಲ್ಲಿ ಹಿಂದಿನ ಗಡಸುತನವಿರಲಿಲ್ಲ."ನಿನ್ನ ಜೊತೆಗೆ ಬೇರ್ಯಾರಾದರೂ ಇದ್ದಾರಾ?" ತಗ್ಗಿದ ದನಿಯಲ್ಲಿ ಅತ್ತಿತ್ತ ನೋಟ ಹರಿಸಿ ಕೇಳಿದ."ಊಹುಂ..." ಕುಸಿದು ಬೀಳುವಂತಿತ್ತು ಅವಳ ಸ್ವರ."ನನಗೆ ಹಸಿವಾಗ್ತಿದೆ. ತಿನ್ನೋದಿಕ್ಕೆ ಏನಾದ್ರು ತಂದು ಕೊಡ್ತೀಯಾ?" ಅವಳು ಆಸರೆಗಾಗಿ ಹಿಡಿದಿದ್ದ ಕೊಂಬೆಯನ್ನು ಬಿಟ್ಟು ಕೈಯಲ್ಲಿ ಹಸಿರು ಎಲೆಯನ್ನು ಹಿಡಿದು ಸಣ್ಣ ಸಣ್ಣ ಚೂರುಗಳಾಗಿ ಮಾಡುತ್ತಿದ್ದಳು. ಅವನಿಂದ ತಪ್ಪಿಸಿಕೊಳ್ಳೋದಿಕ್ಕೆ ಇದೊಂದೇ ದಾರಿ!"ಏನು ಆಲೋಚಿಸ್ತಿದ್ದೀಯಾ? ನಿನ್ನ ಹೆದರಿಸೋದಿಕ್ಕೆ ನನ್ನ ಕೈಯಲ್ಲಿ ಕೋವಿಯಿಲ್ಲ. ನಾನು ಅದನ್ನ ಕೆಳಗಿಟ್ಟಿದೀನಿ. ನನಗೆ ಮೋಸ ಮಾಡ್ಬೇಡ. ಕೂಡ್ಲೆ ಬಂದು ಬಿಡು. ನೀನೇನಾದ್ರೂ ಬರದಿದ್ರೆ ನಿನ್ನ ಕಾಟೇಜ್ ಎಲ್ಲಿದೇಂತ ನನಗೆ ಗೊತ್ತು. ಅಲ್ಲಿಗೆ ಬರ್ತೀನಿ"ಆತನ ಮಾತು ಮುಗಿಯುತ್ತಿದ್ದಂತೆ ಹಾರು ನಡಿಗೆಯಲ್ಲಿ ಕಾಟೇಜ್‍ನ ಕಡೆಗೆ ಧಾವಿಸಿದಳು.ಕಾಟೇಜ್‍ಗೆ ನುಗ್ಗುತ್ತಲೇ ಬಾಗಿಲನ್ನು ತಟಕ್ಕನೆ ಮುಚ್ಚಿ ಚಿಲಕ ಸಿಕ್ಕಿಸಿ, ಬಾಗಿಲಿಗೆ ಒರಗಿ ನಿಂತಳು.ಬಾಗಿಲು ಮುಚ್ಚಿದ ಸದ್ದಿಗೆ ನರಂಗ ಹೊರಗೆ ಬಂದ."ಏನಾಯ್ತು? ಮತ್ತೆ ಕಪ್ಪು ಹಲ್ಲಿನ ನೋಡಿ ಹೆದರ್ಕೊಂಡ್ಬಿಟ್ರಾ?" ವ್ಯಂಗ್ಯ ತುಂಬಿದ ದನಿಯಲ್ಲಿ ಕೇಳಿದ.ಕಣ್ಣುಗಳನ್ನು ವಿಶಾಲಗೊಳಿಸಿ ಸಿಟ್ಟು ಪ್ರದರ್ಶಿಸಿದಳು."ನಿಂಗೆ ಎಲ್ಲವೂ ತಮಾಷೆ""ತಮಾಷೆ ಮಾಡದೆ ಇನ್ನೇನು ಮಾಡ್ಲಿ. ವಾರದ ಹಿಂದೆ ಮಿಂಚುಹುಳದ ಬೆಳಕು ಕಂಡು ಅಪ್ಪಯ್ಯ ಬಂದ್ರೂಂತ ನನ್ನ ಆ ಜಡಿ ಮಳೆಗೆ ಅಟ್ಟಿದ್ರಿ..." ಮಾತು ಮುಗಿಯುವ ಮೊದಲೇ ಗಹಗಹಿಸಿ ನಕ್ಕ."ನರಂಗ, ನಿಲ್ಸು..."ಅವಳ ಮಾತಿನ ತೀವ್ರತೆಗೆ ಹೆಗಲ ಮೇಲಿದ್ದ ಬಟ್ಟೆಯನ್ನು ಬಾಯಿಗೆ ಹಿಡಿದು ನಗು ನಿಯಂತ್ರಿಸಿಕೊಂಡ. ಅವನ ಕಣ್ಣುಗಳು ಗಂಭೀರತೆ ಪಡೆದವು."ಅಪ್ಪಯ್ಯ ಎಲ್ಲಿದ್ದಾರೆ?""ಈಗಷ್ಟೆ ಜೀಪು ತಕ್ಕಂಡು ಹೋದ್ರು"ಸೋತವರಂತೆ ಕುಸಿದು ಕುಳಿತಳು. ನರಂಗನಿಗೆ ಯಾಕೋ ಸಂಶಯ ಸುಳಿಯಿತು."ಮತ್ತೆ ಆ ರಾಕ್ಷಸನ್ನ ನೋಡಿದ್ರಾ?"ಯಾವುದೇ ಪ್ರತಿಕ್ರಿಯೆಯಿಲ್ಲದೆ ಕ್ಷಣ ಕಾಲ ಕುಳಿತಿದ್ದವಳು ಮೆಲ್ಲಗೆ ತಲೆ ಅಲುಗಿಸಿದಳು. ನರಂಗನ ಮುಖದಲ್ಲೂ ಬೆದರಿಕೆಯ ಛಾಪು ತುಂಬಿತು."ನೀನು ಅಪ್ಪಯ್ಯಂಗೆ ಆ ವಿಷಯ ಹೇಳಿದ್ದೀಯಾ? ನಾನು ನಿನಗೆ ಹೇಳ್ಬೇಡಾಂತ ತಿಳಿಸಿದ್ದೆ...""ಇಲ್ಲ... ನಾನು ಆ ವಿಷಯ ಅವರಿಗೆ ತಿಳಿಸಿಲ್ಲ"ನೆಮ್ಮದಿಯ ಉಸಿರು ದಬ್ಬಿ ಎದ್ದು ನಿಂತಳು."ನಾವು ತಪ್ಪು ಮಾಡಿದ್ವಿ. ಅವನು ಮನೆಗೆ ಬಂದು ಹೋದ ವಿಷಯ ಅಪ್ಪಯ್ಯನಿಗೆ ತಿಳಿಸಿಬೇಕಿತ್ತು. ಮತ್ತೆ ಅವನ ಭೇಟಿಯಾಗುತ್ತೇಂತ ನಾನು ಅಂದ್ಕೊಂಡಿರಲಿಲ್ಲ""ಮತ್ತೆಲ್ಲಿ ಅವನ್ನ ಕಂಡ್ರಿ?" ಕುತೂಹಲದಿಂದ ಮುಖ ಮುಂದೆ ತಂದ ನರಂಗ."ಕಳ್ಳಿಯ ಬೇಲಿಯ ಹತ್ತಿರ. ಅವನಿಗೆ ತಿನ್ನೋದಿಕ್ಕೆ ಏನಾದ್ರೂ ಬೇಕಂತೆ""ತಿನ್ನೋದಿಕ್ಕಾ? ಮಾಡಿಟ್ಟ ಆಡುಗೆ ಮಧ್ಯಾಹ್ನಕ್ಕೆ ಖಾಲಿಯಾಗಿದೆ. ರಾತ್ರಿಯ ತಯಾರಿ ಇನ್ನು ಆಗ್ಬೇಕಿದೆ. ಬೇಕಿದ್ರೆ ನಿನ್ನೆ ತಂದಿದ್ದ ಒಣ ಬ್ರೆಡ್ ಇದೆ" ನರಂಗನ ದನಿಯಲ್ಲಿ ಕಂಪನವಿತ್ತು."ನೀನೊಂದು ಕೆಲ್ಸ ಮಾಡು. ನಾನು ಕಾಟೇಜ್‍ನಲ್ಲಿರ್ತೀನಿ. ನೀನು ಆ ಬ್ರೆಡನ್ನು ಅವನಿಗೆ ಕೊಟ್ಬಿಟ್ಟು ಬಾ. ಆತ ಇನ್ನೂ ಆ ಕಳ್ಳಿಯ ಬೇಲಿ ಹತ್ರ ಕಾಯ್ತಿರಬಹುದು""ನ... ನಾ...ನು... ಇಲ್ಲ... ನೀವೇ ಹೋಗ್ಬನ್ನಿ" ನಿರಾಕರಿಸಿದ ನರಂಗ.ರಶ್ಮಿಯ ಎದೆಯೊಳಗೆ ಸಣ್ಣಗೆ ಒರೆ ಕಲ್ಲಿಗೆ ಕುಟ್ಟುವ ಹಾಗೇ ಸದ್ದು."ನೀವು ಸುಮ್ನಿರಿ. ಅವನೇನು ಮಾಡ್ತಾನೆ? ಅಲ್ಲಿಗೆ ಹೋಗೋದು ಬೇಡ" ನರಂಗ ಹೇಳುವುದರಲ್ಲಿ ಸತ್ಯವಿದೆಯೆನಿಸಿತು. ಅವನನ್ನು ಯಾಕೆ ಉಪಚರಿಸಬೇಕು?`...ನೀನು ಬರದಿದ್ರೆ ನಿನ್ನ ಕಾಟೇಜ್‍ಗೆ ಬಂದು ಬಿಡ್ತೀನಿ' ಅವನ ಮಾತುಗಳು ಎಚ್ಚರಿಸಿದವು."ನರಂಗ, ನೀನೂ ನನ್ನ ಜೊತೆಗೆ ಬಂದು ಬಿಡು. ನಾನು ಅವನಿಗೆ ತಿನ್ನೋದಿಕ್ಕೆ ಕೊಡದಿದ್ರೆ... ಆತ ಮತ್ತೆ ಇಲ್ಲಿ ಬಂದು ತೊಂದ್ರೆ ಕೊಟ್ಟಾನು"ನರಂಗ ಅಡುಗೆ ಕೋಣೆಗೆ ನುಗ್ಗಿ ಬ್ರೆಡನ್ನು ಒಂದು ಪ್ಲಾಸ್ಟಿಕ್ ಚೀಲಕ್ಕೆ ಸೇರಿಸಿ ಅಷ್ಟೇ ವೇಗದಲ್ಲಿ ಹೊರಗೆ ಬಂದ. ಯೋಚಿಸುವಷ್ಟು ಸಮಯವಿಲ್ಲ. ಎದೆ ಬಡಿತ ಏರುತ್ತಿದ್ದಂತೇ ಇಬ್ಬರೂ ಕಲ್ಲುಗಳ ಮೇಲೆ ಕಾಲೂರಿಕೊಂಡು ಕಳ್ಳಿಯ ಗಿಡದ ಬೇಲಿಯ ಬಳಿ ಬಂದು ಮರದ ಮರೆಗೆ ನಿಂತರು."ನೀನು ಮುಂದೆ ಹೋಗು. ಅದನ್ನ ಅವನಿಗೆ ಕೊಟ್ಬಿಡು"ನರಂಗ ಹೆದರುತ್ತಲೇ ಕಳ್ಳಿಯ ಬೇಲಿಯ ಬಳಿ ನಡೆದು ಸುತ್ತಲೂ ನೋಡಿದ. ಅಲ್ಲಿ ಆ ವ್ಯಕ್ತಿ ಇರಲಿಲ್ಲ!ನರಂಗ ಧೈರ್ಯ ತಂದುಕೊಂಡು ಬೇಲಿಯ ಬದಿಯಿಂದ ಕಾಲು ಸರಿಸಿದ. ಮರೆಯಲ್ಲಿ ನಿಂತಿದ್ದ ರಶ್ಮಿ ಇಣುಕಿ ನರಂಗನನ್ನೇ ಗಮನಿಸುತ್ತಿದ್ದಳು.ಏಕಾಏಕಿ ಅವಳ ಭುಜಗಳ ಮೇಲೆ ಬಲವಾದ ಕೈಗಳು ಬಿದ್ದವು!ಬೆಚ್ಚಿ ಹಿಂತಿರುಗಿದವಳು ಕಿಟಾರನೆ ಕಿರುಚಿದಳು."ಕೊಟ್ಬಿಡು... ಬೇಗ ಕೊಟ್ಬಿಡು... ನಾನು ಅದನ್ನು ತಿಂದು ದೂರ ಹೋಗ್ತೀನಿ. ಇಲ್ಲಾಂದ್ರೆ... ಅವರು ನನ್ನ ಸಾಯಿಸಿ ಬಿಡ್ತಾರೆ..."ಹಣೆಯ ಭಾಗದಿಂದ ರಕ್ತ ಸುರಿದು ಎಡ ಕಣ್ಣಿನಿಂದ ಇಳಿದು ಕೆನ್ನೆಯನ್ನೆಲ್ಲಾ ತೋಯಿಸಿತ್ತು. ಯಾರೋ ಅವನ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದಂತಿತ್ತು.ನರಂಗ ಅಲ್ಲಿಗೆ ಓಡು ನಡುಗೆಯಲ್ಲಿ ಬಂದ. ಆ ವ್ಯಕ್ತಿ ರಶ್ಮಿಯ ಹೆಗಲಿಗೆ ಮುಖವಿರಿಸಿದಂತೆ ನಿಂತಿದ್ದ! ರಶ್ಮಿ ಚೇತರಿಸಿಕೊಂಡು ಅವನನ್ನು ನಿಧಾನಕ್ಕೆ ಹಿಂದಕ್ಕೆ ಸರಿಸಿದಳು. ಆತ ಬಲಹೀನನಂತೆ ತನ್ನ ಭಾರವನ್ನೆಲ್ಲ ಅವಳ ಮೇಲೆ ಹಾಕಿದ್ದ. ಅವನ ಕಿಸೆಯಿಂದ ಕಾಗದದ ತುಂಡೊಂದು ಕೆಳಗೆ ಬಿತ್ತು."ನರಂಗ, ಹಿಡ್ಕೋ... ನಿಧಾನಕ್ಕೆ... ಕೂರಿಸ್ಬಿಡು" ರಶ್ಮಿ ಹೇಳುತ್ತಾ ಕೆಳಬಿದಿದ್ದ ಕಾಗದದ ತುಂಡನ್ನು ಎತ್ತಿಕೊಂಡಳು.ನರಂಗನ ಸಹಾಯದಿಂದ ಆತ ಕಲ್ಲು ನೆಲದ ಮೇಲೆ ಕುಳಿತ. ತೊಟ್ಟಿದ್ದ ಬಟ್ಟೆಗಳು ಚಿಂದಿಯಾಗಿ ಅಲ್ಲಲ್ಲಿ ರಕ್ತ ಒಸರುತ್ತಿದ್ದವು. ನರಂಗ ಕೈಯಲ್ಲಿದ್ದ ಬ್ರೆಡನ್ನು ಅವನಿಗೆ ನೀಡಿದ. ಹಸಿದು ಕಂಗಾಲಾಗಿದ್ದ ವ್ಯಕ್ತಿ ಗಬ ಗಬ ತಿನ್ನಲಾರಂಭಿಸಿದ. ಆತನ ಕಣ್ಣುಗಳಲ್ಲಿ ಧನ್ಯತೆಯ ಭಾವ ತುಂಬಿತ್ತು. ಚೀಲದಿಂದ ನೀರಿನ ಸೀಸೆಯನ್ನು ತೆರೆದು ಗಟಗಟನೆ ಕುಡಿದು ಸೆಟೆದು ಕುಳಿತ."ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ" ಇಬ್ಬರಿಗೂ ಕೈ ಮುಗಿದು ಚೈತನ್ಯ ತುಂಬಿದವರಂತೆ ಎದ್ದು ನಿಂತ.ಅವರು ನೋಡುತ್ತಿದ್ದಂತೆ ಕಲ್ಲು, ಮುಳ್ಳುಗಳ ಕೊರಕಲು ದಾರಿಯ ಇಳಿಜಾರಿಗೆ ನಡೆದು ಹೋದ.ಕಾಟೇಜ್‍ಗೆ ಮರಳಿದ ರಶ್ಮಿಗೆ ಅವನೊಬ್ಬ ವಿಚಿತ್ರವಾಗಿ ಕಂಡ. ಯಾವುದೋ ಮೋಸದ ಜಾಲದಲ್ಲಿ ಸಿಕ್ಕಿ ಬಿದ್ದಿರಬಹುದು! ಅಥವಾ ಯಾರದೋ ಕೈಯ ಸಾವಿನಿಂದ ತಪ್ಪಿಸಿಕೊಂಡು ಬಂದಿರಬಹುದು!"ನರಂಗ, ಈ ವಿಷಯ ಅಪ್ಪಯ್ಯನಿಗೆ ಹೇಳ್ಬೇಡ. ಹಾಗಂತ ಪ್ರಾಮಿಸ್ ಮಾಡು. ನಾನು ಹೇಗಿದ್ರೂ ಇವತ್ತು ರಾತ್ರಿಗೆ ಬೆಂಗಳೂರಿಗೆ ಹೊರಡ್ತೀನಿ" ಯಾಕೋ ಆ ಏಟು ತಿಂದಿದ್ದ ವ್ಯಕ್ತಿಯ ಬಗ್ಗೆ ಮರುಕ ಹುಟ್ಟಿತು ರಶ್ಮಿಗೆ."ನೀವು ಈ ವಿಷಯಾನ ಮುಚ್ಚಿಟ್ರೆ... ಮತ್ತೊಂದು ದಿನ ನಮಗೇ ಅಪಾಯವಾಗ್ಬಹುದು. ನಾನು ಹೇಳಿದ್ನಲ್ಲ ಈ ಬೆಟ್ಟದಲ್ಲಿ ರಾಕ್ಷಸರಿದ್ದಾರೇಂತ... ನಿಮ್ಮ ಅಪ್ಪಯ್ಯನಿಗೆ ಹೇಳಿದ್ರೆ ಏನಾದರೊಂದು ಪರಿಹಾರ ಸೂಚಿಸ್ಬಹುದು"ರಶ್ಮಿಗೇಕೋ ನರಂಗನ ಮಾತು ಹಿಡಿಸಲಿಲ್ಲ."ನರಂಗ, ನೀನು ಪ್ರಾಮಿಸ್ ಮಾಡಿದ್ದೀಯಾ. ಈ ವಿಷಯ ಯಾರಿಗೂ ತಿಳಿಸ್ಬೇಡಾ" ಅವನನ್ನು ಎಚ್ಚರಿಸುವಂತೆ ಹೇಳಿದಳು.ಪೆಟ್ಟು ತಿಂದಿದ್ದ ಅಜಾನುಬಾಹು ವ್ಯಕ್ತಿಯ ಬಗ್ಗೆ ಏನೋ ನವಿರು ಭಾವನೆ ರಶ್ಮಿಯ ಎದೆಯಲ್ಲಿ!
***
ಅಂದು ರಾತ್ರಿ ಅಪ್ಪಯ್ಯನಿಗೆ ಹೇಳಿ ಬೆಂಗಳೂರಿಗೆ ಹೊರಟು ನಿಂತಳು. ಜೀಪು ಕಾಡಿನ ಮಧ್ಯದ ಮಣ್ಣು ರಸ್ತೆಯನ್ನು ಹೆಡ್‍ಲೈಟ್‍ನ ಬೆಳಕಿನಲ್ಲಿ ಸೀಳಿಕೊಂಡು ಕುಲುಕುತ್ತಾ ಸಾಗುತ್ತಿತ್ತು.ಅರಣ್ಯ ಅಧಿಕಾರಿ ಮಲ್ಲಯ್ಯ ಮಗಳ ಕಡೆಗೊಮ್ಮೆ ದೃಷ್ಟಿ ಬೀರಿ ಜೀಪಿನ ವೇಗವನ್ನು ಹೆಚ್ಚಿಸಿದ. ರಶ್ಮಿ ಸೀಟ್‍ಗೆ ಸರಿದು ಕುಳಿತು ಎದುರಿನ ಕಬ್ಬಿಣದ ಪಟ್ಟಿಯನ್ನು ಗಟ್ಟಿಯಾಗಿ ಹಿಡಿದುಕೊಂಡಳು.ಹಣೆಗೆ ಕೈಯೊತ್ತಿಕೊಂಡಂತೆ ವ್ಯಕ್ತಿಯೊಬ್ಬ ರಪ್ಪನೆ ಜೀಪಿಗೆ ಅಡ್ಡ ನಿಂತ!ರಶ್ಮಿ ಕಣ್ಣುಗಳನ್ನು ಕಿರಿದುಗೊಳಿಸಿ ನೋಡಿದಳು. ಸಂಶಯವೇ ಇಲ್ಲ, ಕಳ್ಳಿಯ ಬೇಲಿ ಬದಿಗೆ ಕಂಡ ವ್ಯಕ್ತಿ!"ಸರ್, ಆ ಕಡೆಗೆ ಹೋಗೋದಿಕ್ಕೆ ಆಗ್ತಾ ಇಲ್ಲ. ಸೇತುವೆ ಕುಸಿದು ಬಿದ್ದಿದೆ"ಆತ ಹೇಳಿ ಅಲ್ಲಿ ನಿಲ್ಲದೆ ರಸ್ತೆಯಂಚಿನಿಂದ ಕಾಡಿನೊಳಗೆ ತೂರಿಕೊಂಡ."ಅವನ್ಯಾರು... ನಾನು ಈಗ ತಾನೇ ಸಿಟಿಯಿಂದ ಬಂದೆ" ಆಶ್ಚರ್ಯ ತೋರಿಸಿದ ಅರಣ್ಯಾಧಿಕಾರಿ.ರಶ್ಮಿಯ ತಲೆಗೇನೋ ಹೊಳೆಯಿತು."ಅಪ್ಪಯ್ಯ, ಹಿಂದಕ್ಕೆ ಹೋಗೋಣ"ಅಧಿಕಾರಿ ಮತ್ತೊಮ್ಮೆ ಮಗಳ ಕಡೆಗೆ ನೋಡಿದ. ಅವಳ ಮುಖದಲ್ಲಿ ಭೀತಿ ತುಂಬಿದಂತಿತ್ತು.ಕಾಟೇಜ್‍ಗೆ ಮರಳುವಷ್ಟರಲ್ಲಿ ಮಳೆ ಹನಿಯಲಾರಂಭಿಸಿತು. ಕೈಯಲ್ಲಿದ್ದ ಬ್ಯಾಗನ್ನು ದಡಕ್ಕನೆ ಜಗಲಿಯ ಮೇಲೆ ಎಸೆದು ನಿಂತವಳಿಗೆ ಏನೋ ಭಾರಿ ಸದ್ದು ಕೇಳಿಸಿತು.ಅಧಿಕಾರಿಯೂ ಮುಖ ಹೊರಕ್ಕೆ ತೂರಿಸಿ ನೋಡಿದ.ಸೇತುವೆಯಾಚೆಯಿಂದ ಕೇಳಿಸಿದ ಭಾರಿ ಸ್ಫೋಟ!ಅಂದರೆ ಸೇತುವೆ ಸ್ಫೋಟಗೊಂಡಿದೆ!ತಲ್ಲಣಿಸಿ ಹೋದವರಿಗೆ ಬೆಳಾಗಾಗುವವರೆಗೆ ನಿದ್ದೆ ಸುಳಿಯಲಿಲ್ಲ. ಅಧಿಕಾರಿ ಜೀಪು ಹಿಡಿದುಕೊಂಡು ಸೇತುವೆಯ ಕಡೆಗೆ ಹೊರಟ.ರಶ್ಮಿ ರೇಡಿಯೋ ಹಚ್ಚಿದಳು.ಗುಡುಗೊಂದು ಬೆಟ್ಟದ ತುದಿಯಲ್ಲಿ ಸ್ಫೋಟಿಸಿದಂತಾಯಿತು. ರೇಡಿಯೋ ಕರಕರ ಸದ್ದು ಹೊರಟಿಸಿತು. ವಾರ್ತೆ ಮಾತ್ರಾ ಮುಂದುವರಿದಿತ್ತು."ಆತ ಹೋರಾಟಗಾರನಾಗಿರಬೇಕು. ಸೇತುವೆ ಸ್ಫೋಟಗೊಂಡಿದ್ದು ಅವನಿಂದನೇ...""ನರಂಗ, ನನಗೆಲ್ಲಾ ಗೊತ್ತು. ನೋಡು ಈ ಕಾಗದ. ಅವನ ಕಿಸೆಯಿಂದ ಬಿದ್ದಿರೋದು. ಆತ ನಕ್ಸಲೇಟ್ ಆಗಿದ್ದ. ಆದ್ರೆ... ಅವರೊಳಗೆ ಮನಸ್ತಾಪ ಬಂದು ಅವರಿಂದ ಬೇರೆಯಾಗಿದ್ದ. ತಾನು ಒಳ್ಳೆ ವ್ಯಕ್ತಿ ಆಗ್ಬೇಕೂಂತ ಏನೆಲ್ಲಾ ಯೋಜನೆ ಹಾಕಿದ್ನಂತೆ. ಆದ್ರೆ... ಆ ಧೂರ್ತರು ಅವನನ್ನು ಬಿಡಲಿಲ್ಲ ಕಾಣ್ಬೇಕು. ಎಲ್ಲಿ ತಮ್ಮ ಯೋಜನೆಗಳೆಲ್ಲವನ್ನೂ ಸರಕಾರಕ್ಕೆ ತಿಳಿಸುತ್ತಾನೋ ಏನೋಂತ ಅವನನ್ನು ಮುಗಿಸ್ಲಿಕ್ಕೆ ನೋಡಿದ್ರು... ಆತ ನಾವು ನೆನ್ನೆ ರಾತ್ರಿಗೆ ಬೆಂಗಳೂರಿಗೆ ಹೊರಟಾಗ ಸೇತುವೆ ಕುಸಿದಿದೇಂತ ಸುಳ್ಳು ಹೇಳಿದ್ದ. ಅಂದ್ರೆ ಆತನಿಗೆ ಸೇತುವೆಯನ್ನು ಸ್ಫೋಟಗೊಳಿಸುವ ವಿಷಯ ತಿಳಿದಿತ್ತೂಂತ ಕಾಣ್ಸುತ್ತೆ. ನಮ್ಮನ್ನು ಸಾವಿನ ದವಡೆಯಿಂದ ಪಾರು ಮಾಡ್ದ. ಹೀ ಈಸ್ ಗ್ರೇಟ್... ಆದ್ರೆ ಆ ಧೂರ್ತರು ಅವನು ಒಳ್ಳೆಯವನಾಗೋದಿಕ್ಕೆ ಬಿಡ್ಲಿಲ್ಲ... ನನ್ನ ಕನಸುಗಳನ್ನೂ... ಅವನ್ನ ಸಾಯಿಸಿದ್ರು...." ಕುಸಿದು ಕುರ್ಚಿಯಲ್ಲಿ ಕುಳಿತು ಮೇಜಿನ ಮೇಲೆ ತಲೆಯಿರಿಸಿದಳು. ಕಣ್ಣಂಚಿನಿಂದ ನೀರಿನ ಹನಿಗಳು ಆತ ಬರೆದಿದ್ದ ಪತ್ರದ ಮೇಲೆ ಬೀಳುತ್ತಿತ್ತು....ನೆನಪಿನಾಳದಿಂದ ಹೊರ ಬಂದವಳನ್ನು ಕರಗಿದ ಮೋಡದ ಹನಿಗಳು ಸ್ವಾಗತಿಸಿದವು.

Read more!

Tuesday, December 9, 2008

ಹಸಿರು ಮಿಡತೆ


(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕಥೆ)

ಮೇಜಿನ ಮೇಲಿದ್ದ ದೀಪದ ಜೊತೆಗೆ ಆಟವಾಡುತ್ತಾ ತಟ್ಟನೆ ಏನೋ ನೆನಪಿಸಿಕೊಂಡು ಮೈ ಅದುರಿಸಿದಳು ರಚನಾ!ರಾತ್ರೋ ರಾತ್ರಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಆವರಣ ಗೋಡೆಯ ಹಿಂದಿರುವುದೇನು? ಅನ್ನುವ ಕುತೂಹಲ ಇನ್ನೂ ತಣಿದಿರಲಿಲ್ಲ! ಗೇಟ್‍ನ ಸಂಧಿಗೆ ಕಣ್ಣುಗಳನ್ನು ತೂರಿಸಿ ಹುಡುಕುವ ಪ್ರಯತ್ನ ಮಾಡುತ್ತಿದ್ದಳು.ತಾನು ಓಡಾಡಿದ ಸ್ಯಾಮ್ ಅಂಕಲ್‍ನ ಎಸ್ಟೇಟ್ ಅದು! ಕಿತ್ತಳೆ ಹಣ್ಣುಗಳನ್ನು ಕಿತ್ತು, ಸ್ಯಾಮ್ ಅಂಕಲ್‍ನ ಜೊತೆಗೆ ಎಸ್ಟೇಟ್‍ನ ಹುಲ್ಲುಗಳ ಮೇಲೆ ನಡೆದಾಡಿದ್ದಳು. ಕೈಯಲ್ಲಿ ಕೋವಿ ಹಿಡಿದುಕೊಂಡೆ ಆತ ಜೀಪನ್ನೇರುತ್ತಿದ್ದ!ಕಿತ್ತಳೆಯ ಸಿಪ್ಪೆ ಸುಲಿದು ಅದೆಷ್ಟೋ ಬಾರಿ ಅದರ ರಸವನ್ನು ಅವನ ಕಣ್ಣಿಗೆ ಹಾರಿಸಿದ್ದಳು.

"ನೀನು ಬಾರಿ ಚಾಲಾಕಿನ ಹುಡುಗಿ. ಹಸಿರು ಮಿಡತೆ ತರಹ ಚುರುಕಾಗಿದ್ದಿಯಾ. ನೀನು ಈ ಎಸ್ಟೇಟ್‍ಗೆ ಮಗಳಾಗಿ ಬರ್ತೀಯಾ? ಈ ಎಸ್ಟೇಟ್‍ಗೆ ನಿನಗಿಂತ ಒಳ್ಳೆ ವಾರ್‍ಅಸುದಾರರು ಬೇರಾರು ಸಿಗಲಿಕ್ಕಿಲ್ಲ. ನೀನೇ ಸರಿಯಾದ ಒಡತಿ" ಮಕ್ಕಳಿಲ್ಲದ ಸ್ಯಾಮ್ ಅಂಕಲ್‍ನ ಕಣ್ಣುಗಳಲ್ಲಿ ಆಸೆಯ ದೀಪವಿತ್ತು.

"ಅಂಕಲ್, ನೀವು ನನ್ನ ಛೇಡಿಸ್ತಿದ್ದೀರಾ?... ಇಷ್ಟು ದೊಡ್ಡ ಎಸ್ಟೇಟ್‍ನ ನಾನು ನಿಭಾಯಿಸಲಾರೆ. ನಿಮ್ಮ ಜೊತೆಗೆ ಸುತ್ತಾಡೋದಿಕ್ಕೆ ನಾನು ಬರ್ತೀನಿ.."ಸ್ಯಾಮ್‍ನ ಕಣ್ಣುಗಳು ಹನಿಗೂಡಿದವು.

"ವೈಶಾಲಿ ಹೋದ ನಂತರ ನನ್ನ ಆಸಕ್ತಿಯೆಲ್ಲಾ ಬಿದ್ದೋಯ್ತು. ನಿನ್ನ ತಂದೆ ಗಿರಿಯಪ್ಪನ ಕೇಳ್ದೆ. `ನನಗಿರೋಳು ಒಬ್ಳೆ ಮಗಳು. ಹೇಗಯ್ಯಾ ನಿನ್ನ ಎಸ್ಟೇಟ್‍ಗೆ ಕಳುಹಿಸ್ಲಿ?' ಅಂದು ನಿರಾಕರಿಸಿ ಬಿಟ್ಟ. ಎಸ್ಟೇಟನ್ನು ಮಾರೋದಿಕ್ಕೆ ನಂಗೆ ಇಷ್ಟವಿಲ್ಲ. ನಿನ್ನಂತಹ ಚುರುಕಿನ ಹುಡುಗಿ ನನ್ನ ಎಸ್ಟೇಟಿಗೆ ಬೇಕಿತ್ತು"

"ಅಂಕಲ್, ನಾನು ಯಾವತ್ತೂ ನಿಮ್ಮ ಜೊತೆಗಿರ್ತೀನಿ. ಆದರೆ ಎಸ್ಟೇಟ್‍ನ ವಾರಸುದಾರಿಕೆ ಬೇಡ"ಅವಳ ಮಾತಿಗೆ ಪ್ರೀತಿಯಿಂದ ಮೈದಡವಿದ್ದ...ಆಲೋಚನೆಯ ಗುಂಗಿನಲ್ಲಿರುವಾಗಲೇ ಅವಳಿಗೆ ಗೋಚರಿಸಿತ್ತು, ಗೋಡೆಯ ಮೇಲೆ ಬಿದ್ದ ನೆರಳು!

ಸಂಧಿನಿಂದ ಕಣ್ಣುಗಳನ್ನು ಹಿಂದಕ್ಕೆಳೆದುಕೊಂಡು ತನ್ನ ತಲೆಗೆ ಕುಟ್ಟಿಕೊಂಡಳು. ತನ್ನದೇ ನೆರಳನ್ನು ಕಂಡು ಹೆದರುವ ತಾನೊಬ್ಬಳು ಎಂತಹ ಧೈರ್ಯವಂತೆ!ಆದರೆ.. ಈಗ ಅವಳಿಗೆ ಸ್ಪಷ್ಟವಾಯಿತು. ಅದು ತನ್ನ ನೆರಳಲ್ಲ!ಗೋಡೆಗೆ ಹತ್ತಿರವಾಗಿರುವಾಗ ನೆರಳು ಹಾಗೇ ಬೀಳಲಾರದು! ಅಂದರೆ... ತನ್ನನ್ನು ಯಾವುದೋ ವ್ಯಕ್ತಿ ಹಿಂಬಾಲಿಸಿದ್ದ! ಇನ್ನು ಸ್ವಲ್ಪ ಸಮಯ ತಾನು ಅಲ್ಲಿರುವ ಹಾಗಿದ್ದರೆ ಆ ವ್ಯಕ್ತಿ ಗೋಚರಿಸುತ್ತಿದ್ದ! ಆದರೆ ತಾನು ಯಾರದೋ ಪಿಸು ಮಾತುಗಳನ್ನು ಕೇಳಿ ದಾಪುಗಾಲು ಹಾಕಿ ಮನೆ ಸೇರಿದ್ದೆ! ಆ ಮಾತುಗಳು ಈಗಲೂ ನೆನಪಿದೆ...

"ಆ ಹುಡುಗಿ ಇದ್ದಾಳಲ್ಲ... ಹಸಿರು ಮಿಡತೆ... ಈಗ ಇಲ್ಲಿ ಕಾಣಿಸ್ಕೊಂಡಿದ್ಲು.. ತಿರುಗಿ ನೋಡ್ತೀನಿ ಸುಯ್ಯಂತ ಹಾರಿ ಹೋದ್ಲು"ತಾನು ಗೋಡೆಯ ಸುತ್ತಲೂ ಮಾರು ದೂರ ನಡೆದಿದ್ದನ್ನು ಎಸ್ಟೇಟಿನ ಒಳಗಿದ್ದ ವ್ಯಕ್ತಿ ಗಮನಿಸಿದ್ದಾನೆ! ಇನ್ನೊಬ್ಬ ವ್ಯಕ್ತಿ ತನ್ನನ್ನು ಹಿಂಬಾಲಿಸಿದ್ದಾನೆ! ಆ ವ್ಯಕ್ತಿಯ ನೆರಳನ್ನು ತಾನು ಕಂಡಿದ್ದು!ಮೈ ಬೆವರಿತು! ಸ್ವಿಚ್ ಹಿಡಿದ ಕೈ ತರತರ ಕಂಪಿಸಿತು.ಕಣ್ಣು ಮುಚ್ಚಿಕೊಂಡು ಮತ್ತೊಮ್ಮೆ ನೆನಪಿಸಿಕೊಂಡಳು ರಚನಾ. ನೆರಳು ಗೋಡೆಯ ಮೇಲೆ ಸ್ಪಷ್ಟವಾಗಿ ಮೂಡಿತ್ತು. ಆದರೆ ಅರ್ಧದಷ್ಟು ಮಾತ್ರ!ಅಂದರೆ ವ್ಯಕ್ತಿ ದೂರದಲ್ಲಿದ್ದ!

`ಬೆಳಗ್ಗಿನ ಮತ್ತು ಸಂಜೆಯ ಸೂರ್ಯಕಿರಣಗಳು ಭೂಮಿಗೆ ವಕ್ರವಾಗಿ ಬೀಳುವುದರಿಂದ ನೆರಳು ಉದ್ದವಾಗಿ ಕಾಣುತ್ತದೆ'ಅಂದರೆ... ವ್ಯಕ್ತಿ ದೂರದಲ್ಲಿರಲಿಲ್ಲ... ತನ್ನ ಹತ್ತಿರದಲ್ಲೆ ಇದ್ದ!ಆ ವ್ಯಕ್ತಿ ತನ್ನನ್ನು ಹಿಂಬಾಲಿಸಿ ತನಗೆ ಅಪಾಯವನ್ನು ಮಾಡಲಿದ್ದಾನೆ! ದೀಪ ಆರಿಸಿ ಬಂದು ಹಾಸಿಗೆ ಸೇರಿದವಳಿಗೆ ಏನೇನೋ ವಿಚಿತ್ರ ಕನಸುಗಳು.
***

ಉದ್ದಕ್ಕೂ ಹರಡಿಕೊಂಡಿದ್ದ ಮುಳ್ಳು ಬೇಲಿಯನ್ನು ಆದರಿಸಿ ಇಬ್ಬನಿ ತುಂಬಿದ ಹುಲ್ಲು ಹಾದಿಯ ಮೇಲೆ, ಸೀರೆಯನ್ನು ಎತ್ತಿ ಹಿಡಿದು ನಡೆಯುತ್ತಿದ್ದಳು ರಚನಾ. ಗೋಡೆಯಾಚೆ ನಡೆಯುವ ವಿದ್ಯಮಾನವಿನ್ನೂ ಅಸ್ಪಷ್ಟ. ಮುಂಜಾನೆಯ ಹೊತ್ತಿಗೆ ಅಲ್ಲಿ ಯಾರೂ ಇರಲಾರೆಂಬ ಧೈರ್ಯದಿಂದ ಸಾಹಸಕ್ಕೆ ಇಳಿದಿದ್ದಳು.`ಯಾರೋ ಅಸಾಮಿ... ಎಸ್ಟೇಟನ್ನು ಮಾರ್ತೀರಾಂತ ಕೇಳ್ದ. ಇಲ್ಲಾಂದೆ.. ಬೆದರಿಸಿ.. ನೋಡ್ಕೋತಿನಿ.. ಅಂತ ಹೇಳಿ ಹೋದ. ನನಗೆ ಅಪಾಯ ತಪ್ಪಿದ್ದಲ್ಲ' ಸ್ಯಾಮ್ ಅಂಕಲ್‍ನ ಮಾತುಗಳು.ಅದೇ ತನ್ನ ಹಾಗೂ ಸ್ಯಾಮ್ ಅಂಕಲ್‍ನ ಕೊನೆಯ ಭೇಟಿ! ಸ್ಯಾಮ್ ಅಂಕಲ್ ಎಲ್ಲಿ ಹೋದ್ರು? ಏನಾದ್ರೂ? ಯಾವುದೂ ತಿಳಿದಿಲ್ಲ. ಆ ಆಗಂತುಕ ಅವರಿಗೆ ಅಪಾಯ ತಂದಿರಬಹುದು!ಗೇಟಿನ ಸಂಧಿಯಲ್ಲಿ ಒಳಗೆ ದೃಷ್ಟಿ ಹರಿಸಿದಳು. ಆವರಣದ ಗೋಡೆಯಷ್ಟು ಎತ್ತರಕ್ಕಿರುವ ಗೇಟಿನ ಬಾಗಿಲುಗಳು ಬೀಗ ಜಡಿದು ಭದ್ರವಾಗಿವೆ!ಅದಾಗಲೇ ಯಾವುದೋ ವಾಹನದ ಯಂತ್ರದ ಮೊರೆತದ ಸದ್ದು ಕೇಳಿಸಿತು! ಒಂದೆ ಉಸುರಿಗೆ ಗೇಟಿನ ಬಳಿಯಿಂದ ಹಾರಿ ಪೊದೆಯ ಹಿಂದೆ ಅವಿತು ಕುಳಿತಳು. ಇಬ್ಬನಿಯಲ್ಲಿ ತೊಳೆದ ಜೇಡರ ಬಲೆಯೊಂದು ಮುಖಕ್ಕೆ ಅಂಟಿಕೊಂಡಾಗ ಅಸಹ್ಯವೆನಿಸಿತು.ಅದೇ ಸಮಯಕ್ಕೆ ವಾಹನ ಬಂದು ನಿಂತಿತು. ಯಂತ್ರದ ಸದ್ದೂ ನಿಂತಿತು. ದಪ್ಪನೆಯ ಕುಳ್ಳಗಿನ ವ್ಯಕ್ತಿ ವಾಹನದಿಂದ ಇಳಿದು ಬೀಗ ತೆರೆದ. ಮತ್ತೆ ವಾಹನವೇರಬೇಕೆನ್ನುವಾಗ ಅವನಿಗೆ ಸಂಶಯ ಬಂದವರಂತೆ ನೋಡುತ್ತಿದ್ದ. ಗೇಟಿನ ಬಳಿಯಿಂದ ಪೊದೆಯವರೆಗೆ ದೃಷ್ಟಿ ಹಾಯಿಸಿದ. ಯಾರೋ ನಡೆದು ಕೊಂಡು ಹೋದಂತೆ ಹುಲ್ಲಿನ ಮೇಲಿನ ಇಬ್ಬನಿ ಕರಗಿತ್ತು! ಪೊದೆಯ ಬಳಿ ಹೆಜ್ಜೆ ಹಾಕಲಾರಂಭಿಸಿದ.ರಚನಾಳ ಎದೆ ಬಡಿತ ತೀವ್ರವಾಯಿತು. ತಾನೀಗ ಆತನ ಕೈಗೆ ಸಿಕ್ಕಿ ಬೀಳಲಿದ್ದೇನೆ!! ಉಸಿರು ಬಿಗಿ ಹಿಡಿದಳು.ಆತ ತಟ್ಟನೆ ನಿಂತು ಬಿಟ್ಟ. ಒಂದೆರಡು ಬಾರಿ ವಿಸಿಲ್ ಹಾಕಿದ. ಮುಖ ಹೊರಳಿಸಿದಳು ರಚನಾ. ದೂರದಲ್ಲಿ ಕಂಪೌಂಡಿನ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕಾಣಿಸಿದ! ಸಧ್ಯ ತನ್ನನ್ನು ಕುಳ್ಳಗಿನ ವ್ಯಕ್ತಿ ನೋಡಿಲ್ಲ! ಸಮಾಧಾನದ ಉಸಿರು ದಬ್ಬಿದಳು.ಆತ ಮತ್ತೆ ವಾಹನವೇರಿ ಯಂತ್ರವನ್ನು ಚಾಲನೆಗೆ ತಂದು, ಮುಂದಕ್ಕೋಡಿಸಿದ. ಮತ್ತೆ ವಾಹನ ನಿಂತ ಸದ್ದು!ತಟ್ಟನೆ ಪೊದೆಗಳಿಂದ ಹೊರಗೆ ಬಂದು ಎಸ್ಟೇಟಿನ ಒಳಗೆ ದೃಷ್ಟಿ ಹಾಯಿಸಿದಳು. ಹಳದಿ ಬಣ್ಣದ ಮರಳ ರಾಶಿ!ಗೇಟಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಲೆ ಸರಿದು ಮರೆಯಾಗಿ ನಿಂತಳು. ಇನ್ನು ಸ್ವಲ್ಪ ಹೊತ್ತು ತಾನು ಅಲ್ಲಿ ನಿಂತಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೆ! ವೇಗದ ನಡುಗೆಯಲ್ಲಿ ಮುಂದೆ ಸರಿದಳು. ಗೋಡೆಯ ಅಂಚಿಗೆ ಸರಿದು ಹೋಗುತ್ತಿದ್ದ ವ್ಯಕ್ತಿಯನ್ನು ನೋಡಿ ಅತ್ತ ಹೆಜ್ಜೆ ಸರಿಸಿದಳು. ಇವಳು ನೋಡುತ್ತಿದ್ದಂತೆಯೇ ಆತ ಇಳಿಜಾರಿಗೆ ಇಳಿದು ಮಾಯವಾದ! ಸ್ವಲ್ಪದರಲ್ಲೆ ತಪ್ಪಿದ ಅವಕಾಶ! ಆ ವ್ಯಕ್ತಿಯನ್ನು ನಿಲ್ಲಿಸಿ ಬಾಯಿ ಬಿಡಿಸುತ್ತಿದ್ದರೆ, ಎಸ್ಟೇಟಿನಲ್ಲಿ ನಡೆಯುವ ವಿಷಯವನ್ನು ತಿಳಿದುಕೊಳ್ಳಬಹುದಿತ್ತು. ಅಲ್ಲಿಂದ ಪಕ್ಕಕ್ಕೆ ಹೊರಳಿದವಳಿಗೆ ಕಂಡಿತು...!ಆವರಣದ ಗೋಡೆಗೆ ತಾಗಿಕೊಂಡಿರುವ ಸಣ್ಣಗಿನ ಮರ!ಅದನ್ನು ಹತ್ತಿದರೆ ನಿರಾಯಾಸವಾಗಿ ಗೋಡೆಯ ಮೇಲೆ ನಿಂತು ಒಳಗೆ ನೋಡಬಹುದು! ಆಲೋಚನೆ ಬರುತ್ತಲೇ ಮರ ಹತ್ತಿದಳು. ಅಲ್ಲಿಂದ ನಿಧಾನಕ್ಕೆ ಗೋಡೆಯ ಮೇಲೆ ನಿಂತವಳಿಗೆ ಬೆಳಗ್ಗಿನ ತಂಡಿಗೆ ಎರಡೆರಡು ಬಾರಿ ಸೀನು ಬಂತು. ಆಯ ತಪ್ಪಿ ಗೋಡೆಯ ಮೇಲಿನಿಂದ ದೊಪ್ಪನೆ ಕೆಳಗೆ ಬಿದ್ದಳು! ಸಣ್ಣ ಚಿತ್ಕಾರವೊಂದು ಅವಳ ಬಾಯಿಯಿಂದ ಹೊರಟಿತು. ಏನಾಯಿತೆಂದು ತಿಳಿಯುವಷ್ಟು ಸಮಯವಿಲ್ಲ. ಎದ್ದು ಸುತ್ತಲೂ ನಿರುಕಿಸಿದಳು. ಯಾರಾದರೂ ತನ್ನನ್ನು ಗಮನಿಸಿಯಾರೆಂಬ ಹೆದರಿಕೆಯಿತ್ತು.ಅನಪೇಕ್ಷಿತವಾಗಿ ಚಕ್ರವ್ಯೂಹದೊಳಗೆ ನುಗ್ಗಿದಂತಾಯಿತು. ತಟ್ಟನೆ ಯಂತ್ರದ ಮೊರೆತದ ಸದ್ದು ಕೇಳಿಸಿತು. ಹುಲ್ಲು ಮೆದೆಯಲ್ಲಿ ಬಾಗಿ ನಿಂತಳು. ತಾನು ಕಂಡ ವಾಹನ ಸರಿದು ಹೋಗುತ್ತಿರಬಹುದು! ಯಂತ್ರದ ಸದ್ದು ಅಡಗುತ್ತಲೇ ನಿಧಾನವಾಗಿ ಹೆಜ್ಜೆಗಳನ್ನು ಸರಿಸಿ ರಸ್ತೆಯಂಚಿಗೆ ಬಂದಳು. ಅಲ್ಲೆಲ್ಲಾ ತಾನು ಸ್ಯಾಮ್ ಅಂಕಲ್‌ನ ಜೊತೆಗೆ ಓಡಾಡಿದ್ದನ್ನು ನೆನಪಿಸಿಕೊಂಡಳು. ಎಸ್ಟೇಟಿನ ಮೂಲೆ ಮೂಲೆಯೂ ಅವಳಿಗೆ ಪರಿಚಿತ!ತಟ್ಟನೆ ಕಾಲುಗಳು ಸ್ಥಗಿತಗೊಂಡವು!ವಾಹನ ಇನ್ನೂ ಅಲ್ಲೇ ಇದೆ!ತಾನೆಂದುಕೊಂಡಂತೆ ಅದು ಸರಿದು ಹೋಗಿಲ್ಲ. ಹಳದಿ ಮರಳು ರಾಶಿಯ ಬಳಿ ನಿಂತಿದೆ! ರಸ್ತೆಯಂಚಿಗೆ ಒಂದೇ ಉಸುರಿಗೆ ಹಾರಿ ಮರದ ಕಡೆಗೆ ನಡೆದಳು. ಗೋಣಿ ಚೀಲದಲ್ಲಿ ಹಳದಿ ಮರಳನ್ನು ತುಂಬಿಸಿ ವಾಹನಕ್ಕೆ ಏರಿಸುತ್ತಿದ್ದರು.ಹಳದಿ ಮರಳು! ವಿಚಿತ್ರವೆನಿಸಿತು.ಎಲ್ಲಾ ಮೂಟೆಗಳನ್ನು ವಾಹನಕ್ಕೆ ತುಂಬಿಸಿಯಾದ ಬಳಿಕ, ದಪ್ಪ ಕುಳ್ಳನೆಯ ವ್ಯಕ್ತಿ ಜಿಗಿದು ವಾಹನವೇರಿ ಮತ್ತೆ ಯಂತ್ರವನ್ನು ಚಾಲನೆಗೆ ತಂದ. ವಾಹನ ಗೇಟಿನವರೆಗೂ ಸಾಗಿ ನಿಂತಿತು. ಕುಳ್ಳನೆಯ ವ್ಯಕ್ತಿ ವಾಹನದಿಂದ ಇಳಿದು ಗೇಟನ್ನು ತೆರೆದ. ಮತ್ತೆ ವಾಹನವನ್ನು ಮುಂದಕ್ಕೋಡಿಸಿದ. ಅದೇ ಸಮಯಕ್ಕೆ ಇಳಿಜಾರಿಗೆ ಇಳಿದು ಹೋದ ವ್ಯಕ್ತಿ ಕಾಣಿಸಿದ! ಮುಖ್ಯದ್ವಾರದ ಪಕ್ಕದಲ್ಲಿದ್ದ ಸಣ್ಣಗಿನ ಗೇಟನ್ನು ತೆರೆದುಕೊಂಡು ಒಳಗೆ ಬರುತ್ತಿದ್ದ!ಕಣ್ಣುಗಳನ್ನು ಕಿರಿದುಗೊಳಿಸಿ ನೋಡುತ್ತಿದ್ದಳು. ಮುಖದ ತುಂಬಾ ಗಡ್ಡ ಬೆಳೆಸಿದ್ದ ಆ ವ್ಯಕ್ತಿ ಹತ್ತಿರವಾಗುತ್ತಿದ್ದಂತೆ ಅವಳ ಬಾಯಿಯಿಂದ ಉದ್ಗಾರ ಬಂತು.ಸ್ಯಾಮ್ ಅಂಕಲ್!ಆತ ರಸ್ತೆಯಂಚಿಗೆ ನಡೆದು ಕಾಟೇಜನ್ನು ದಾಟಿ ಮುಂದಕ್ಕೆ ಹೋದ!ಮೆಲ್ಲನೆ ಅವನನ್ನು ಹಿಂಬಾಲಿಸಿ ನಡೆದಳು. ಆತ ನಡೆದು ಕಿತ್ತಳೆ ಹಣ್ಣಿನ ಮರಗಳ ನಡುವೆಯಿದ್ದ ಸಣ್ಣ ಗುಡಿಸಲನ್ನು ಸೇರ್‍ಇಕೊಂಡ.ಎಸ್ಟೇಟಿನ ಮಾಲೀಕನಿಗೆ ಗುಡಿಸಲಿನಲ್ಲೇನು ಕೆಲಸ? ಕುತೂಹಲ ತಡೆಯಲಾರದೆ ಅತ್ತಿತ್ತ ದೃಷ್ಟಿ ಹೊರಳಿಸಿ ತಟಕ್ಕನೆ ಗುಡಿಸಲಿನೊಳಗೆ ನುಗ್ಗಿದಳು.ಮಫ್ಲರನ್ನು ಬಿಚ್ಚಿ ಗೋಡೆಗಾನಿಸಿದ ಆತ , ಸದ್ದಿಗೆ ತಿರುಗಿ ನೋಡಿ ಉದ್ಗರಿಸಿದ.

"ನಿನ್ಯಾರು?"

"ಸ್ಯಾಮ್ ಅಂಕಲ್?!"

"ಅಲ್ಲ... ನಾನು ಸ್ಯಾಮ್ ಅಂಕಲ್ ಅಲ್ಲ... ನೀನು ಇಲ್ಲಿ ಬರ್ಬೇಡ..." ಆತ ಅರಚಿದಾಗ ರಚನಾ ಬೆವತು ಹೋದಳು.

"ಅಂಕಲ್, ನನ್ನ ಮಗಳೂಂತ ಕರೆದ್ರಿ... ಆ ಪ್ರೀತಿ ಎಲ್ಲಿ ಹೋಯ್ತು? ಅಂಕಲ್, ನೀವು ಏನೋ ನನ್ನಿಂದ ಮುಚ್ಚಿಡ್ತಾ ಇದ್ದೀರಿ. ಏನಿದೆಲ್ಲಾ ಎತ್ತರದ ಆವರಣ... ಹಳದಿ ಮರಳು... ಈ ಗುಡಿಸಲು...?" ಸ್ಯಾಮ್‍ನ ಕಣ್ಣುಗಳಲ್ಲಿ ನೀರು ಜಿನುಗಿತು. ನಾಲಗೆಯಿಂದ ತುಟಿಯನ್ನು ಸವರಿಕೊಂಡು ರಚನಾಳ ಕೈ ಹಿಡಿದು ಕಣ್ಣುಗಳಿಗೆ ಒತ್ತಿಕೊಂಡ.

"ಅಂಕಲ್, ಏನಿದೆಲ್ಲಾ?""ಹೇಳ್ತಿನಮ್ಮಾ, ಈ ಎಸ್ಟೇಟ್ ಈಗ ನನ್ನ ಕೈಯಲಿಲ್ಲಮ್ಮಾ. ಆ ಧೂರ್ತ ನನ್ನಿಂದ ಇದನ್ನೆಲ್ಲ ಕಿತ್ತುಕೊಂಡು ಬಿಟ್ಟ"

"ಏನು ಹೇಳ್ತ ಇದ್ದೀರಾ ಅಂಕಲ್?""ನಿಂಗಿದೆಲ್ಲಾ ಅರ್ಥವಾಗೊದಿಲ್ಲ.. " ಸ್ಯಾಮ್ ಅಂಕಲ್ ಗೋಡೆಯಾಚೆಗೆ ಮುಖ ಹೊರಳಿಸಿ ಕೈಯನ್ನು ಗೋಡೆಗೆ ಆನಿಸಿ ನಿಂತ.

"ಅಂಕಲ್, ನನ್ಗೆ ಅರ್ಥವಾಗದ ವಿಷಯಗಳು ತುಂಬಾ ಇವೆ. ಏನೂಂತ ಸರಿಯಾಗಿ ಹೇಳಿ.... ಆ ಹಳದಿ ಮರಳು... ಈ ಗುಡಿಸಲಲ್ಲಿ ನೀವು?"

"ಅದು ಹಳದಿ ಮರಳಲ್ಲ. ಅದು ರಾಸಾಯನಿಕ ಗೊಬ್ಬರ. ಆ ವ್ಯಕ್ತಿ ನನ್ನಿಂದ ಜಬರ್ದಸ್ತಿಯಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ಮಾಡ್ಕೊಂಡ. ಈ ಎಸ್ಟೇಟ್‍ನಲ್ಲಿ ಬಂಗಾರ ಬೆಳೆಸ್ತೇನೇಂತ ಅದೆಲ್ಲಿಂದಲೋ ಕೃತಕ ಗೊಬ್ಬರವನ್ನು ತಂದು ಹಾಕಿದ್ದಾನೆ. ಇಲ್ಲಿ ನಡೆಯೋ ವಿದ್ಯಮಾನಗಳು ಯಾರಿಗೂ ತಿಳಿಬಾರ್ದೂಂತ ಎತ್ತರಕ್ಕೆ ಆವರಣ ಹಾಕಿಸ್ದ. ಈಗ ನೋಡಿದ್ರೆ... ಎಸ್ಟೇಟ್‍ನ ಬೆಳೆಗಳೆಲ್ಲಾ ಸರಿಯಾದ ಆರೈಕೆಯಿಲ್ಲದೆ ಸೊರಗಿ ಹೋಗಿವೆ. ನಂಗೂ ಕಾವಲು ಹಾಕಿ ಕಾಯ್ತಾ ಇದ್ದಾನೆ. ನೀನು ನನಗೆ ಸಹಾಯ ಮಾಡಲಾರೆ...ನಾನು ಇಳಿಜಾರಿಗೆ ಹೋಗುವಾಗಲೆಲ್ಲ ನಿನ್ನ ಹುಡುಕ್ತಿದ್ದೆ""ಇಳಿಜಾರಿಗೆ ಹೋಗುವಾಗ ಯಾರೂ ನಿಮ್ಮನ್ನು ಗಮನಿಸುವುದಿಲ್ವೆ?"

"ಅಲ್ಲೂ ನನ್ನ ಹಿಂಬಾಲಿಸ್ತಾರೆ"ತಟ್ಟನೆ ಅವಳಿಗೆ ನೆನಪಾಯಿತು. ಬೆಳಗ್ಗೆ ವಾಹನ ಬಂದಿರುವ ಹೊತ್ತಲ್ಲಿ ತಾನು ಕಂಡಿದ್ದು ಸ್ಯಾಮ್ ಅಂಕಲ್‍ನನ್ನು! ಅಂದರೆ ಸ್ಯಾಮ್ ಅಂಕಲ್‍ನ ಕಾವಲುಗಾರ ತನ್ನನ್ನು ನೋಡಿದ್ದಾನೆ!ಆಗಲೆ ಕಾರಿನ ಸದ್ದು ಕೇಳಿಸಿತು. ಎಚ್ಚೆತ್ತುಕೊಂಡಳು ರಚನಾ!

"ಒಂದೇ ಒಂದು ಸಹಾಯ ಮಾಡ್ತೀಯಾ?"

"ಹೇಳಿ ಅಂಕಲ್.."

"ನನ್ನ ಇಲ್ಲಿಂದ ಕರೆದುಕೊಂಡು ಹೋಗು.."

"ಖಂಡಿತವಾಗಿಯೂ ಆದ್ರೆ ಇಲ್ಲಿಯ ಪ್ರತಿಯೊಂದು ವಿಷಯವನ್ನು ತಿಳ್ಕೊಂಡ ನಂತರ"ಕಪ್ಪು ಬಣ್ಣದ ಕಾರು ಕಾಟೇಜ್ ಬಳಿ ನಿಲ್ಲುತ್ತಲೇ ಅಂಕಲ್ ಅವಳನ್ನು ಅವಸರಿಸಿದ."ಓಡು ಇಲ್ಲಿಂದ. ಆತ ಈಗ ಈ ಕಡೆಗೆ ಬರ್ತಾನೆ"

"ಯಾರಾತ?" ಅವಳಿಗೆ ಯೋಚಿಸುವಷ್ಟು ಸಮಯ ನೀಡದೆ ಅವಳನ್ನು ದೂಡಿದ. ಅವಳು ಮರಗಳ ಮರೆಯಲ್ಲಿ ಸಾಗಿ ಸಣ್ಣ ಗೇಟಿನ ಮೂಲಕ ಹೊರಗೆ ಬಂದು ನಿಟ್ಟುಸಿರಿಟ್ಟಳು.ಎಲ್ಲವೂ ವಿಚಿತ್ರವಾಗಿ ಕಂಡಿತು. ವ್ಯಕ್ತಿ, ಸ್ಯಾಮ್ ಅಂಕಲ್‍ನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡು ಅವರನ್ನು ಮೂಲೆ ಗುಂಪು ಮಾಡಿ, ಅವರನ್ನು ಆಳುತ್ತಿದ್ದಾನೆ! ಅಂಕಲ್ ಆ ವ್ಯಕ್ತಿ ಯಾರೆಂದು ಹೇಳಲೂ ಹೆದರುತ್ತಿದ್ದಾರೆ! ನಿಧಾನಕ್ಕೆ ಹೆಜ್ಜೆ ಸರಿಸುತ್ತಿದ್ದವಳು, ಹಿಂದಿನಿಂದ ಯಾರದೋ ನಡುಗೆಯ ಸದ್ದು ಕೇಳುತ್ತಲೇ ನಡಿಗೆಯ ವೇಗವನ್ನು ಹೆಚ್ಚಿಸಿ ಮನೆಯ ಕಡೆಗೆ ಹೊರಟಳು.
***

ಮನೆಯ ಮುಂದೆ ಹಳೇ ಕಾಲದ ಕಪ್ಪು ಕಾರು ನಿಂತಿತ್ತು! ಅದನ್ನು ಕಾಣುತ್ತಲೇ ತಲೆ ಕೊಡವಿಕೊಂಡಳು. ಈ ಕಾರನ್ನು ತಾನು ನೋಡಿದ್ದು ಸ್ಯಾಮ್ ಅಂಕಲ್‍ನ ಎಸ್ಟೇಟ್‍ನಲ್ಲಿ! ಇಲ್ಲಿಗೆ ಹ್ಯಾಗೆ ಬಂತು? ವ್ಯಕ್ತಿ ತಾನು ಅಂಕಲ್ ಜೊತೆಗೆ ಮಾತನಾಡಿದ್ದನ್ನು ಗಮನಿಸಿ ತನ್ನನ್ನು ಹಿಂಬಾಲಿಸಿ ಬಂದಿದ್ದಾನೆ! ಹೆಜ್ಜೆ ಮುಂದಿರಿಸ ಹೋದವಳು ತಟ್ಟನೆ ನಿಂತಳು. ಕಾರು ಮರಳುವವರೆಗೆ ತಾನು ಮನೆಗೆ ತೆರಳಬಾರದು. ಹಿಂದೆ ಹೆಜ್ಜೆ ಹಾಕಲಿದ್ದವಳನ್ನು ತಡೆದು ನಿಲ್ಲಿಸಿದ್ದು ಕೋವಿ ಹಿಡಿದು ನಿಂತಿದ್ದ ವ್ಯಕ್ತಿ!ಅಪ್ಪಾ! ಅನಾಯಸವಾಗಿ ಅವಳ ಬಾಯಿಯಿಂದ ಉದ್ಗಾರ ಹೊರಟಿತು.

"ಹೌದಮ್ಮಾ, ನಾನೆ... ನಿನ್ನ ಅಪ್ಪ. ಸ್ಯಾಮ್ ಈಗಷ್ಟೆ ಎಸ್ಟೇಟ್‍ನಿಂದ ತಪ್ಪಿಸಿಕೊಂಡು ಬಿಟ್ಟ. ನೀನು ಅವನ ಜೊತೆಗೆ ಇದ್ದಿದ್ದನ್ನು ನಮ್ಮ ಡ್ರೈವರ್... ಅಂದರೆ ಕುಳ್ಳಗಿನ ವ್ಯಕ್ತಿ ನೋಡಿದ್ದಾನೆ. ನಿಜ ಹೇಳು ಸ್ಯಾಮ್ ಅಂಕಲ್ ಎಲ್ಲಿದ್ದಾನೆ?" ಕೋವಿಯ ತುದಿಯನ್ನು ಮಗಳ ಕಡೆಗೆ ಗುರಿಯಿಟ್ಟ ಗಿರಿಯಪ್ಪ.

"ಅಪ್ಪಾ, ನಂಗೊತ್ತಿಲ್ಲ..."

"ಸುಳ್ಳು ಹೇಳ್ಬೇಡ. ನಿನ್ನ ಅಂಕಲ್ ಎಷ್ಟೊಂದು ಔದಾರ್ಯವಂತ. ನಿನ್ನನ್ನು ಎಸ್ಟೇಟ್‍ನ ವಾರಸುದಾರಳನ್ನಾಗಿ ಮಾಡುತ್ತೇನೆಂದ. ನಾಳೆ ನೀನು ಮದುವೆಯಾಗಿ ಹೋದರೆ ಆಸ್ತಿನೂ ನಿನ್ನ ಜೊತೆಗೆ ಹೊರಟು ಹೋಗುತ್ತದೆ. ಅದಕ್ಕೆ ಇದು ನನ್ನ ಉಪಾಯ. ಮೊದಲೇ ಸ್ಮಗ್ಲಿಂಗ್ ಗುಂಪಿನೊಂದಿಗೆ ಸಂಪರ್ಕವಿರುವ ನನಗೆ... ಈಗ ಬಾಸ್ ಪಟ್ಟ. ಎಸ್ಟೇಟ್ ಈಗ ನನ್ನ ಕಾರ್ಯ ಸ್ಥಾನ" ನಗಲಾರಂಭಿಸಿದ.ರಚನಾ ಬೆದರಿದ ಹುಲ್ಲೆಯಂತೆ ತರ ತರ ಕಂಪಿಸಿದಳು. ಇದು ಅನಿರೀಕ್ಷಿತ! ತನ್ನ ತಂದೆ ಸ್ಮಗ್ಲಿಂಗ್ ಗುಂಪಿಗೆ ಸೇರಿದವರು! ಆ ಮಾತುಗಳನ್ನು ಅರಗಿಸಿಕೊಳ್ಳಲಾಗಲಿಲ್ಲ.

"ಏಯ್, ಆ ಸ್ಯಾಮ್ ಎಲ್ಲಿದ್ದಾನೆ ಹೇಳು?..." ಗಿರಿಯಪ್ಪ ಗದರಿಸಿದ.

"ಇಲ್ಲೆ ಇದ್ದೇನೆ ಗಿರಿಯಪ್ಪ... ಈ ಸ್ಯಾಮ್‍ನನ್ನು ಯಾರು ಅಷ್ಟು ಸುಲಭದಲ್ಲಿ ಮೋಸ ಮಾಡೋದಿಕ್ಕೆ ಸಾಧ್ಯವಿಲ್ಲ" ಸ್ಯಾಮ್‍ನ ಮಾತುಗಳು ಬಂದಾಗ ಗಿರಿಯಪ್ಪ ಹಿಂತಿರುಗಿದ.ಅವನ ಹಿಂದೆ ಪೊಲೀಸ್ ಅಧಿಕಾರಿ ನಿಂತು ಗಿರಿಯಪ್ಪನ ಕಡೆಗೆ ರಿವಾಲ್ವರನ್ನು ಗುರಿಯಿಟ್ಟಿದ್ದರು.

"ಗಿರಿಯಪ್ಪ ನಿನ್ನ ಆಟ ಇನ್ನು ನಡೆಯೋದಿಲ್ಲ. ನೀನು ಅವಸರದಲ್ಲಿ ಹೊರಟವನು ಮೊಬೈಲ್ ಫೋನನ್ನು ಬಿಟ್ಟು ಹೋಗಿದ್ದಿಯಾ. ಸ್ಯಾಮ್ ಅದರಿಂದ ನಮಗೆ ಫೋನ್ ಮಾಡಿ ತಿಳಿಸ್ದ. ಅದರಿಂದಾಗಿ ನಿನ್ನ ತಂಡವನ್ನು ಈಗಾಗ್ಲೆ ಹಿಡಿದಿದ್ದೇವೆ" ಅಧಿಕಾರಿಯ ಮಾತಿಗೆ ಗಿರಿಯಪ್ಪ ಅಸಹಾಯಕನಾಗಿ ಕೋವಿಯನ್ನು ಕೆಳಗೆ ಹಾಕಿದ.ಅಧಿಕಾರಿಯ ಸಹಾಯಕರು ಅವನನ್ನು ಬಂಧಿಸಿದರು.ರಚನಾಳ ಕಣ್ಣುಗಳಲ್ಲಿ ನೀರು ಹನಿಗೂಡಿತು.ಸ್ಯಾಮ್ ಅಂಕಲ್ ಅವಳ ಬಳಿ ಬಂದು ತಲೆ ನೆವರಿಸಿದ.

"ರಚನಾ ನೀನು ನನ್ನ ಮಗಳಮ್ಮಾ..." ಎಂದು ಪ್ರೀತಿಯಿಂದ ಹೇಳಿದ.

"ಹೌದಮ್ಮಾ, ಇನ್ನು ಮುಂದೆ ಎಸ್ಟೇಟಿಗೂ ನೀನೇ ವಾರಸುದಾರಳು" ಎಂದು ಅಧಿಕಾರಿ ಸ್ಯಾಮ್ ಅಂಕಲ್ ನೀಡಿದ್ದ ಪತ್ರಗಳನ್ನು ಅವಳ ಕೈಯಲ್ಲಿಟ್ಟರು. ಸ್ಯಾಮ್ ಅಂಕಲ್, ರಚನಾ ಇಬ್ಬರೂ ಅಧಿಕಾರಿಗೆ ವಂದಿಸಿ ಎಸ್ಟೇಟ್‍ಗೆ ನಡೆದರು.

Read more!

Monday, November 24, 2008

ನಾಡ ಕೋವಿ


ಸೀರೆಯ ನೆರಿಗೆಯನ್ನು ಎತ್ತಿ ಹಿಡಿದು ಎರಡೆರಡು ಮೆಟ್ಟಿಲುಗಳನ್ನು ಹಾರಿ ಬಂದು ಏದುಸಿರು ಬಿಡುತ್ತಾ ಕೋಣೆಯ ಬಾಗಿಲನ್ನು ಟಪಾರನೆ ಸರಿಸಿ ಒಳ ಬಂದಳು ಬೆದರಿದ ಹುಲ್ಲೆ ಅಲಕಾ. ಏನು ಮಾಡಬೇಕೆಂದು ತೋಚದೆ ಸ್ನಾನದ ಕೋಣೆಗೆ ನುಗ್ಗಿ ಕನ್ನಡಿ ನೋಡಿಕೊಂಡಳು. ಮೈಯೆಲ್ಲಾ ರಕ್ತ! ಉಟ್ಟ ಬಟ್ಟೆಯನ್ನು ತೋಯಿಸಿದೆ! ಹನಿ ನೀರಿಗೆ ಮೈಯೊಡ್ಡಿದಳು. ಎಷ್ಟೋ ಸಮಯದ ನಂತರ ಉದ್ವೇಗ ಕಡಿಮೆಯಾಗಿ ಮನಸ್ಸು ಸ್ಥಿಮಿತೆಗೆ ಬಂತು. ಮೈ ಒರಸಿ ಹೊರ ಬಂದಾಗ ಇನ್ನೂ ಎಚ್ಚರವಾಗಿಲ್ಲದೆ ಮಲಗೇ ಇದ್ದಳು ವೈಯಾರಿ ನಿಲೀಮಾ!"ಎಷ್ಟೇ ಹೊತ್ತು ಅದು. ಹೊತ್ತು ಗೊತ್ತು ಇಲ್ಲದ ಕೆಲಸ. ಇನ್ನು ಮುಂದೆ ನಿನ್ನ ಬಾಸಿಗೆ ಸರಿಯಾಗಿ ಹೇಳ್ಬಿಡು. ಸಂಜೆ ಆರರ ನಂತರ ಕೆಲಸ ಮಾಡೋದಿಲ್ಲಾಂತ" ವೈಯಾರಿ ನಿದ್ದೆ ಕಣ್ಣಿನಲ್ಲೆ ಹೇಳಿದಳು.
ಅಲಕಾ ಒಮ್ಮೆಲೆ ವೈಯಾರಿಯ ಮಾತಿಗೆ ಬೆಚ್ಚಿ ಬಿದ್ದು ಸಾವರಿಸಿಕೊಂಡಳು. ಏನೋ ವಸ್ತುಗಳಿಗಾಗಿ ವಾರ್ಡ್ ರೋಬ್, ಮೇಜುಗಳನ್ನು ತಡಕಾಡಿದಳು. ತೂಗು ಹಾಕಿದ ಗಾಳಿ ಚೀಲದಲ್ಲಿ ಬೇಕಿದ್ದ ವಸ್ತುಗಳು ದೊರೆತಾಗ ತಟಕ್ಕನೆ ಬಾಗಿಲು ತೆರೆದು ಹೊರ ಬಂದಳು. ವೈಯಾರಿ ನಿದ್ದೆ ಮಂಪರಿನಲ್ಲಿ ಹೊರಳಿ,"ಅಲಕಾ ಆ ವ್ಯಕ್ತಿ..." ಅಂದಳು. ಉತ್ತರವಿಲ್ಲ!ಬೆದರಿದ ಹುಲ್ಲೆ ಮೆಟ್ಟಲಿಳಿದು ಕಾರ್ ಶೆಡ್ಡಿನ ಬಳಿ ಬಂದಳು. ಶೆಡ್ಡಿನ ಬಾಗಿಲು ಕಿರ್ ಸದ್ದಿನೊಂದಿಗೆ ತೆರೆದಾಗ ಉಸಿರು ಬಿಗಿ ಹಿಡಿದು, ಗೋಡೆಗೆ ಅಂಟಿದಂತೆ ನಿಂತಳು. ಯಾರು ಇಲ್ಲದನ್ನು ಗಮನಿಸಿ ಒಳ ಸರಿದು ಬಾಗಿಲು ಸರಿಸಿದಳು. ಹಳೇ ಕಾಲದ ಫೋರ್ಡ್ ಕಾರು ಧೂಳು ತುಂಬಿ ಮಲಗಿತ್ತು. ಬಾನೆಟ್ ಮೇಲೆ ಮಲಗಿಸಿದ್ದ ವ್ಯಕ್ತಿಯ ಮೂಗಿನ ಬಳಿ ಕೈ ಹಿಡಿದಳು. ಇನ್ನೂ ಉಸಿರಾಟವಿದೆ! ತುಂಬು ತೋಳಿನ ಅಂಗಿಯ ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ನೋಡಿದಳು. ರಕ್ತ ಇನ್ನೂ ಜಿನುಗುತಿತ್ತು. ಟಾರ್ಚ್ ಬೆಳಕಿನಲ್ಲಿ ಗಾಯವನ್ನು ನೋಡಿದಳು. ಗುಂಡೇಟಿನಿಂದ ಆದ ಗಾಯ! ಸಧ್ಯ ಅಪಾಯದಿಂದ ಪಾರಾಗಿದ್ದಾನೆ. ನಿಟ್ಟುಸಿರಿಟ್ಟಳು ಅಲಕಾ. ಗಾಯವನ್ನು ಒರಸಿ ಮುಲಾಮು ಹಚ್ಚಿ ಎದೆಯ ಸುತ್ತಾ ಬಟ್ಟೆಯನ್ನು ಬಿಗಿಯಾಗಿ ಕಟ್ಟಿದಳು.ಆತ ಮೆಲ್ಲನೆ ಮುಲುಗಿದ!
"ನಾಡಕೋವಿ.....""ನಾಡ ಕೋವಿ??!!!" ಅಲಕಾ ಬೆಚ್ಚಿದಳು! ನಾಡಕೋವಿಯಿಂದ ಗುಂಡು ಹಾರಿರಬೇಕು! ಹಣೆಗೆ ಕೈ ಹಚ್ಚಿ ನೋಡಿದಳು. ಸುಡುತ್ತಿತ್ತು. ಮಾತ್ರೆಯನ್ನು ಪುಡಿಮಾಡಿ ಅವನ ಬಾಯಿಗೆ ಸುರಿದಳು. ನೋವಿನಿಂದ ಮುಖ ಕಿವುಚಿ ತಲೆ ಹೊರಳಿಸಿ ಮುಲುಗಿದ. ಗೇಟಿನ ಬಳಿ ಸದ್ದಾದಂತಾಗಿ ಕಿವಿ ನಿಮಿರಿಸಿ ಉಸಿರು ಬಿಗಿ ಹಿಡಿದಳು ಅಲಕಾ. ಬಾನೆಟ್ ಮೇಲಿದ್ದ ವ್ಯಕ್ತಿ ಕೊಸರಿಕೊಂಡ. ಅವನ ಬಾಯಿಗೆ ಕೈ ಅಡ್ಡ ಹಿಡಿದಳು. ಸದ್ದು ಮರೆಯಾದಾಗ ಶೆಡ್ಡಿನ ಬಾಗಿಲು ತೆರೆದು ಇಣುಕಿದಳು. ಯಾರು ಇಲ್ಲದನ್ನು ಗಮನಿಸಿಕೊಂಡು ದಡ ದಡನೆ ಮೆಟ್ಟಿಲೇರಿ ಹೋಗಿ ಬಾಗಿಲು ತೆರೆದು ನೋಡಿದಳು. ವೈಯಾರಿಯ ಬೆಡ್ ಖಾಲಿಯಾಗಿತ್ತು! ಅದೇ ವೇಗದಲ್ಲಿ ಕೆಳಗಿಳಿದು ಬಂದಳು. ವಾಹನವೊಂದು ಸರಿದು ಹೋದ ಸದ್ದು! ಅನುಮಾನ ಬಂದು ಶೆಡ್ಡಿನ ಬಾಗಿಲು ತೆರೆದಳು. ಬಾನೆಟ್ ಮೇಲಿದ್ದ ವ್ಯಕ್ತಿ ಮಾಯವಾಗಿದ್ದ! ಬೆದರಿದಳು ಹುಲ್ಲೆ!ವೈಯಾರಿಯ ಬಗ್ಗೆ ಅನುಮಾನ ಬಂದು ಮತ್ತೆ ದಡ ಬಡನೆ ಮೆಟ್ಟಿಲೇರಿ ಬಂದಳು. ಬಾಗಿಲು ತೆರೆದಾಗ ನಿಲೀಮಾ ಬೆಡ್ ಮೇಲೆ ಬೋರಲಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದಳು! ಹಾಗಾದರೆ ವಾಹನದಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋದವರು ಯಾರು?!! ತಲೆಗೆ ಕೈ ಹಚ್ಚಿ ಕುಳಿತಳು ಅಲಕಾ.***ಕಾಫಿ ತೋಟದ ಮಧ್ಯೆ ಹಾವಿನಂತೆ ಮಲಗಿದ್ದ ರಸ್ತೆಯಲ್ಲಿ ಜೀಪು ಓಡಿಸುತ್ತಿದ್ದ ಚೆಲುವ ಮೋಹನ ಚಂದ್ರ. ಕಬ್ಬಿಣದ ಸರಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಚೆಲುವನಿಗೇಕೋ ಮಾತ್ಸರ್ಯವಾಯಿತು. ಗಂಡನನ್ನು ಕಳೆದುಕೊಂಡ ಹದಿಹರೆಯದ ಚೆಲುವೆ. ಕೆಲಸಕ್ಕೆಂದು ಬಂದವಳು ಕೆಲಸದ ಜೊತೆಗೆ ಇದೇ ಊರಿನಲ್ಲಿ ಉಳಿದುಕೊಳ್ಳುವ ಆಸ್ಥೆ ತೋರಿಸಿದ್ದಳು. ಗಂಡನನ್ನು ಕಳೆದುಕೊಂಡವಳೆಂಬ ಅನುಕಂಪದಿಂದ ಕೆಲಸ ಕೊಡಿಸಿದ್ದ ಚೆಲುವ. ಅದೂ ತೋಟದ ಉಸ್ತುವಾರಿಕೆ. ಕೆಲವೆ ದಿನಗಳಲ್ಲಿ ಚೆಲುವನ ಮನಸ್ಸು ಗೆದ್ದವಳು. ಹುಡುಗಿಯರಿಂದ ದೂರವಿರುತ್ತಿದ್ದ ಚೆಲುವ ಮೋಹನ."ನೀವು ಕೆಲಸಕ್ಕಾಗಿ ಕೊಲ್ಕತ್ತದಿಂದ ಇಷ್ಟು ದೂರ ಬರುವ ಅಗತ್ಯವಿತ್ತೆ?""ನನ್ನ ನೋವು ಮರೆಯುವುದಕ್ಕೆ ಎಲ್ಲಿಯಾದರು ದೂರ ಹೋಗ ಬೇಕೆನಿಸಿತು" ಅವಳ ಮಾತಿನಲ್ಲಿ ದು:ಖದ ಛಾಯೆಯಿತ್ತು."ಏನದು ನಿಮ್ಮ ನೋವು?" ಬಾಯಿ ತಪ್ಪಿ ಬಂದ ಮಾತು. ತಟ್ಟನೆ ಗಾಡಿಗೆ ತಡೆ ಹಾಕಿದ."ಚಂದನ್ ನ ಕಳಕೊಂಡ ಮೇಲೆ ಅಲ್ಲಿ ಇರುವುದು ಕಷ್ಟವೆನಿಸಿತು""ಚಂದನ್ ಅಂದ್ರೆ?" ಸಂಶಯ ವ್ಯಕ್ತ ಪಡಿಸಿದ ಚೆಲುವ."ಚಂದನ್ ನನ್ನ ಗಂಡ""ಮನೆಯಲ್ಲಿ ಬೇರೆ ಯಾರು ಇರಲಿಲ್ಲವೇ""ಇದ್ರು. ಅತ್ತೆಗೆ ನಾನೆಂದ್ರೆ ಅಷ್ಟಕಷ್ಟೆ. ಯಾಕೆಂದ್ರೆ ನಾನು ಚಂದನ್ ನ ಮದುವೆಯಾಗಿದ್ದು ಅವರ ವಿರುದ್ಧವಾಗಿ""ಅಂದ್ರೆ?" ಅರ್ಥವಾಗದೆ ಕೇಳಿದ ಮೋಹನ."ಅಂದ್ರೆ ನಮ್ಮದು ಪ್ರೇಮ ವಿವಾಹ. ಚಂದನ್ ಮನೆಯಲ್ಲಿ ಎಲ್ಲರೂ ವಿರೋಧ ವ್ಯಕ್ತ ಪಡಿಸಿದ್ರು. ಆದ್ರೂ ಚಂದನ್ ನನ್ನ ಕೈ ಬಿಡಲಿಲ್ಲ. ಆದರೆ ಏನು ಮಾಡೋದು ಚಂದನ್ ನ ಉಳಿಸಿಕೊಳ್ಳುವ ಭಾಗ್ಯ ನನಗಿರಲಿಲ್ಲ""ಕ್ಷಮಿಸಿ ನಿಮ್ಮ ಮನಸ್ಸು ನೋಯಿಸಿ ಬಿಟ್ಟೆ. ಅಲಕಾ ಇಲ್ಲಿ ನಿಮಗೆ ಹೇಗನಿಸುತ್ತೆ" ಮಾತು ಬೇರೆಡೆಗೆ ತಿರುಗಿಸಿದ ಚೆಲುವ."ತುಂಬಾ ಮೆಚ್ಚಿಕೊಂಡಿರೋ ಸ್ಥಳ. ಪ್ರೀತಿ ತೋರೊ ಕೆಲಸದಾಳುಗಳು" ಮಚ್ಚುಗೆ ವ್ಯಕ್ತಪಡಿಸಿದಳು ಬೆಂಗಾಲಿ ಚೆಲುವೆ."ಕೆಲಸದಾಳುಗಳ ಬಗ್ಗೆ ಎಚ್ಚರವಿರಲಿ. ಅವರೆಲ್ಲಾ ವಿಷ ಸರ್ಪಗಳ ಹಾಗೇ""ಮೋಹನ್ ಚಂದ್ರ ಹಾಗನ್ಬೇಡಿ. ಅವರು ತೋರಿಸೊ ಪ್ರೀತಿಗೆ ನಾನು ಋಣಿ" ಗಂಟಲುಬ್ಬಿ ಬಂತು."ಸರಿ ಕಾಟೇಜ್ ಕಡೆ ಹೋಗೋಣ" ಜೀಪು ಮತ್ತೆ ಧೂಳೆಬ್ಬಿಸುತ್ತಾ ಕಾಟೇಜ್ ಕಡೆ ಸಾಗಿತು.ಪಾತಿ ಮಾಡುತ್ತಿದ್ದ ಕೆಲಸದಾಳು ಪಾಪಯ್ಯ ಜೀಪಿನಿಂದ ಇಳಿದ ಚೆಲುವೆಯನ್ನು ನೋಡಿ ಬೆರೆಗಾದ! ಮೋಹನ್ ಚಂದ್ರನಿಗೆ ಹೆಣ್ಣುಗಳೆಂದರೆ ಅಲರ್ಜಿ! ಒಂಟಿ ಜೀವನ ನಡೆಸೊ ಕಾಫಿ ತೋಟದ ಮಾಲಿಕ! ಮೊದಲ ಬಾರಿ ಹೆಣ್ಣಿನ ಜೊತೆಗೆ ಬರುತ್ತಿರುವುದು! ಕೆಲಸದಾಳಿನ ನೋಟ ಅಲಕಾಳಿಗೆ ವಿಚಿತ್ರವೆನಿಸಿತು. ಮಾಲಿಕನ ಜೊತೆ ಬಂದುದಕ್ಕಾಗಿಯೆ? ಮೋಹನ್ ಚಂದ್ರನ ಒತ್ತಾಯಕ್ಕಾಗಿ ಮೊದಲ ಬಾರಿ ಅವನ ಜೀಪಿನಲ್ಲಿ ಕಾಟೇಜಿಗೆ ಬಂದಿದ್ದಳು.ಕಾಟೇಜಿಗೆ ಬಂದಾಗ ಮೊದಲಿಗೆ ಕಂಡಿದ್ದು ಗೋಡೆಗೆ ತೂಗು ಹಾಕಿದ್ದ ನಾಡ ಕೋವಿ! ನಾಡ ಕೋವಿ ಪದ ಬಳಸಿ ನರಳಿದ್ದ ವ್ಯಕ್ತಿಯ ನೆನಪಾಯಿತು."ಮೋಹನ್ ಚಂದ್ರ ಇದೇನು?!!""ಆಟಿಕೆಯಂತು ಅಲ್ಲ..." ನಗು ತಂದು ಕೊಂಡು ಹೇಳಿದ"ತಮಾಷೆ ಬೇಡ. ನೀವು ಇದನ್ನ ಉಪಯೋಗಿಸ್ತೀರಾ?" ಅನುಮಾನ ಸುಳಿಯಿತು ಬಂಗಾಳಿ ಚೆಲುವೆಗೆ."ಯಾವಗಲಾದರೊಮ್ಮೆ. ಈಗ್ಗೆ ಎರಡು ದಿವಸಗಳಿಂದಷ್ಟೆ ನನ್ನ ಕೈಗೆ ಬಂತು""ಅಂದ್ರೆ?""ಚುನಾವಣೆ ಸಮಯದಲ್ಲಿ ಅದನ್ನ ಸರಕಾರಕ್ಕೆ ಒಪ್ಪಿಸಬೇಕು"ಚುನಾವಣೆ ಮುಗಿದು ಮೂರು ತಿಂಗಳ ನಂತರ ಹಿಂದಕ್ಕೆ ಪಡೆದುಕೊಂಡಿದ್ದಾನೆ!"ಮರಳಿ ತಂದ ನಂತರ ಅದನ್ನ ಉಪಯೋಗಿಸಿದ್ರಾ?" ಬಂಗಾಲಿ ಚೆಲುವೆಗೆ ಅನುಮಾನ ಪರಿಹಾರವಾಗಲಿಲ್ಲ."ಹೌದು. ಎಲ್ಲಾ ಶುಚಿಗೊಳಿಸಿ ಒಮ್ಮೆ ಪರೀಕ್ಷಿಸಿದೆ"ಕಾಫಿ ತೋಟದ ಮಾಲಿಕ ಸುಳ್ಳು ಹೇಳುತ್ತಿದ್ದಾನೆ. ಪರೀಕ್ಷೆಗಾಗಿ ಗುಂಡು ಹಾರಿಸಿದ್ದಲ್ಲ. ಉದ್ದೇಶ ಪೂರ್ವಕವಾಗಿ ಹಾರಿಸಿರಬೇಕು. ನನಗೇನು ತಿಳಿದಿಲ್ಲವೆಂದುಕೊಂಡಿದ್ದಾನೆ ಚೆಲುವ. ಗುಂಡೇಟು ತಗುಲಿ ಸ್ಮೃತಿ ತಪ್ಪಿದ್ದ ವ್ಯಕ್ತಿಯನ್ನು ನೆನಪಿಸಿಕೊಂಡಳು.ಗಾಜಿನ ಕಿಟಕಿಗಳನ್ನು ಸರಿಸಿದ. ಬೆಳಕು ಸಾಕಷ್ಟು ಹರಿಯಿತು. ಕಿಟಕಿಯ ಮೂಲಕ ಇಳಿಜಾರಿಗಿದ್ದ ಕಾಫಿಯ ತೋಟ ಸುಂದರವಾಗಿ ಕಾಣುತಿತ್ತು. ಅಲ್ಲಲ್ಲಿ ಕಾಫಿ ತೋಟದ ಮಧ್ಯದಲ್ಲಿ ನಿಂತ ನೀಲಗಿರಿ ಮರಗಳು. ಸುತ್ತಲೂ ಬೇಲಿಯಂತಿರುವ ಖೋ ಖೋ ಗಿಡಗಳು.ಸೀಸೆಯಲ್ಲಿದ್ದ ವಿಸ್ಕಿಯನ್ನು ಗ್ಲಾಸಿಗೆ ಸುರಿದು ಸೋಡ ಬೆರೆಸಿದ. ಐಸ್ ಕ್ಯೂಬ್ ಗಳನ್ನು ತುಂಬಿಸಿದ.
"ಅಭ್ಯಂತರವಿಲ್ಲದಿದ್ದರೆ......" ಇನ್ನೊಂದು ಗ್ಲಾಸಿಗೆ ಸುರಿದು ಅವಳಿಗೆ ನೀಡಿದ."ಕ್ಷಮಿಸಿ" ನಯವಾಗಿ ನಿರಾಕರಿಸಿದಳು ಅಲಕಾ. ಕರಿದ ಮೀನನ್ನು ತಟ್ಟೆಯಲ್ಲಿ ಜೋಡಿಸಿಟ್ಟ."ಸ್ವಲ್ಪ..." ಮತ್ತೊಮ್ಮೆ ಒತ್ತಾಯಿಸಿದ."ಕ್ಷಮಿಸಿ. ಅದರ ಅಗತ್ಯವಿಲ್ಲ. ನಿಮಗೆ ಕಂಪನಿ ಕೊಡಬೇಕೆಂದರೆ ತಣ್ಣನೆಯ ನೀರು ಸಾಕು" ಒಳಗೆ ಸರಿದ ಚೆಲುವ. ಕೈಯಲ್ಲಿ ತಂಪು ಲಘು ಪಾನೀಯ ತಂದು ಟೀಪಾಯಿ ಮೇಲಿರಿಸಿದ."ಉಪಕಾರವಾಯಿತು" ಎತ್ತಿಕೊಂಡಳು. ತಟ್ಟೆಯಲ್ಲಿ ಜೋಡಿಸಿಟ್ಟಿದ್ದ ಕರಿದ ಮೀನಿನ ಪರಿಮಳ ಅವಳನ್ನು ಸೆಳೆಯಿತು. ಕೈ ಇಕ್ಕಿದಳು ಬಂಗಾಲಿ ಚೆಲುವೆ! ಅವನ ತಲೆಯಲ್ಲಿ ಏನೋ ಹೊಳೆಯಿತು. ಕಿರು ನಕ್ಕ. ಮೀನಿನ ರುಚಿಗೆ ಬಾಯಿ ಚಪ್ಪರಿಸಿ ನಕ್ಕವನನ್ನು ತಲೆ ಎತ್ತಿ ನೋಡಿದಳು. ಇನ್ನೊಂದು ಪೆಗ್ಗು ಏರಿಸಿದವನು ಅವಳನ್ನು ನೋಡಿ ನಕ್ಕ. ಹುಬ್ಬು ಗಂಟಿಕ್ಕಿ ಅವನನ್ನು ನೋಡಿದಳು."ನನ್ನ ಊಹೆ ಸರಿಯಾಯ್ತು" ಗ್ಲಾಸನ್ನು ತುಟಿಗಳಿಗೆ ಸೋಕಿಸುತ್ತಾ ಹೇಳಿದ."ಏನು?""ಏನಿಲ್ಲ""ಮೋಹನ್ ಚಂದ್ರ ನನ್ನನ್ನು ಮರಳಿ ರೂಂಗೆ ತಲುಪಿಸುವಿರಲ್ವೆ?" ಎರಡು ಪೆಗ್ ಏರಿಸಿದವನನ್ನು ಎಚ್ಚರಿಸಿದಳು ಬಂಗಾಲಿ ಚೆಲುವೆ."ಓಹೋ ಅಲಕಾ. ನೀವು ನನ್ನನ್ನು ತಪ್ಪು ತಿಳಿಯೋದು ಬೇಡ. ನಾನು ಎಷ್ಟು ಕುಡಿದರೂ ಧೃತಿ ತಪ್ಪಲಾರೆ" ಭರವಸೆ ಕೊಟ್ಟ ಚೆಲುವ.ಯಾರೋ ಮುಲುಗಿದ ಸದ್ದು! ಏನೂ ಅರ್ಥವಾಗದೆ ಮೋಹನ್ ಚಂದ್ರನನ್ನು ನೋಡಿದಳು."ನಿಮಗೊಂದು ರಹಸ್ಯ ತಿಳಿಸುವುದಿದೆ. ಬನ್ನಿ""ರಹಸ್ಯ!!?""ಹೌದು. ಗಾಯಗೊಂಡು ಬಿದ್ದಿದ್ದ ವ್ಯಕ್ತಿ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ"ಚೆಲುವ ನಯವಾಗಿ ಸುಳ್ಳು ಹೇಳುತ್ತಿದ್ದಾನೆ. ಗುಂಡೇಟು ತಗುಲಿ ಬಿದ್ದಿದೆ ವ್ಯಕ್ತಿ. ಕಾರಿನ ಶೆಡ್ಡಿನಿಂದ ಸಾಗಿಸಿ ಇಲ್ಲಿ ತಂದಿದ್ದಾನೆ! ತನಗೇನು ಗೊತ್ತಿಲ್ಲವೆಂದು ತಿಳಿದಿದ್ದಾನೆ. ಅನುಮಾನದಿಂದಲೆ ಹಿಂಬಾಲಿಸಿದಳು. ಅದೊಂದು ಸಣ್ಣ ಕೋಣೆ. ಮಂಚದ ಮೇಲೆ ವ್ಯಕ್ತಿಯನ್ನು ಮಲಗಿಸಲಾಗಿತ್ತು! ನಿದ್ರೆಯಲ್ಲಿ ಸಣ್ಣಗೆ ಗೊರೆಕೆ ಹೊಡೆಯುತ್ತಿದ್ದ. ಹತ್ತಿರ ಸರಿದು ನೋಡಿದಳು. ಎದೆಯ ಮೇಲೆ ದೊಡ್ಡ ಬ್ಯಾಂಡೇಜ್ ಹಾಕಲಾಗಿತ್ತು. ಗುಂಡೇಟು ತಿಂದು ಬಿದ್ದಿದ್ದ ವ್ಯಕ್ತಿ! ಕಾರ್ ಶೆಡ್ಡಿನಿಂದ ಮಾಯವಾದ ವ್ಯಕ್ತಿ!ಚಂದನ್!!!!ತಲೆ ಸುತ್ತು ಬಂದವಳು ಮಂಚದ ಅಂಚನ್ನು ಗಟ್ಟಿಯಾಗಿ ಹಿಡಿದು ನಿಂತಳು."ಅಲಕಾ ಏನಾಯ್ತು?"ಸಾವರಿಸಿಕೊಂಡಳು ಬಂಗಾಲಿ ಚೆಲುವೆ."ಏನಿಲ್ಲಾ. ಹೊರಡೋಣ್ವೆ" ಆತುರ ತೋರಿಸಿದಳು. ಕುಡಿದ ನಶೆ ನಿಧಾನವಾಗಿ ಅವನನ್ನು ಆವರಿಸುತಿತ್ತು."ಸರಿ. ಹೊರಡೋಣ" ಅವಳ ಜೊತೆ ಹೆಜ್ಜೆ ಹಾಕಿದ. ಏನೋ ಅನುಮಾನ ಸುಳಿಯಿತು. ಅವಳನ್ನು ನಿಲ್ಲಿಸಿದ ಮೋಹನ್ ಚಂದ್ರ!"ಏನಾಯ್ತು? ಎರಡನೆ ಪೆಗ್ ಏರಿಸುವಾಗಲೆ ಎಚ್ಚರಿಸಿದ್ದೆ. ನಿಮ್ಮ ಸ್ಥಿತಿ ನೋಡುವಾಗ ನನ್ನನ್ನು ಕೋಣೆಗೆ ತಲುಪಿಸಲಾರಿರಿ" ಆತಂಕ ವ್ಯಕ್ತ ಪಡಿಸಿದಳು ಅಲಕಾ."ಅಲಕಾ ನಿಮಗೆ ಡ್ರೈವಿಂಗ್ ಬರುತ್ತದೆಯೇ?""ಇಲ್ಲ""ಒಹೋ! ದಯವಿಟ್ಟು ಕ್ಷಮಿಸಿ. ಈ ದಿನ ಇಲ್ಲೆ ಇದ್ದುಬಿಡಿ...." ತೊದಲಿಕೆಯ ಮಾತು."ಮೋಹನ್ ಚಂದ್ರ ನನ್ನ ಇಕ್ಕಟ್ಟಿಗೆ ಸಿಲುಕಿಸಿದ್ರಿ" ಮುಖದಲ್ಲಿ ದು:ಖದ ಛಾಯೆ ಕಂಡಿತು."ಕ್ಷಮಿಸಿ ಅಂದ್ನಲ್ಲಾ" ಕೈ ಮುಗಿದ. ಕೆಲಸದ ಆಳು ಪಾಪಯ್ಯ ಅವಳಿಗೆ ಒಂದು ಕೋಣೆ ತೋರಿಸಿದ. ಬೇರೆ ದಾರಿ ತೋರದೆ ಹಾಗೆ ಹಾಸಿಗೆಯಲ್ಲಿ ಉರುಳಿಕೊಂಡಳು. ನಡೆದ ಘಟನೆಗಳೆಲ್ಲಾ ತಲೆಯಲ್ಲಿ ಗಿರಗಿರನೆ ಸುತ್ತುತಿತ್ತು. ಯಾರಿಗು ಗೊತ್ತಾಗದಿರಲಿಯೆಂದು ಇಷ್ಟು ದೂರ ಬಂದರೆ ಚಂದನ್ ಹೇಗೆ ಪತ್ತೆ ಹಚ್ಚಿ ಇಲ್ಲಿಯವರೆಗೂ ಬಂದ? ಬಣ್ಣದ ಚಿಟ್ಟೆಗಳ ಹಿಂದೆ ಸರಿದಾಡುವ ರಸಿಕ! ಇರಲಿ ತಾನು ಚಂದನ್ ನನ್ನು ಮಾತನಾಡಿಸಿ ಇಲ್ಲಿಂದ ದೂರ ಹೋಗಬೇಕು.ಎದ್ದು ಕೋಣೆಯ ಬಾಗಿಲು ತೆರೆದಳು. ಕತ್ತು ಹೊರಳಿಸಿ ಯಾರೂ ಇಲ್ಲದನ್ನು ಗಮನಿಸಿ, ಮೆಲ್ಲನೆ ಹೆಜ್ಜೆಯಿಡುತ್ತಾ ಚಂದನ್ ಇದ್ದ ಕೋಣೆಗೆ ಬಂದಳು. ಆತ ಇನ್ನೂ ಗೊರಕೆ ಹೊಡೆಯುತ್ತಿದ್ದ. ಮೆಲ್ಲನೆ ಅವನ ಬಳಿ ಸರಿದು ಅಲುಗಿಸಿದಳು.
"ಚಂದನ್" ಮೆಲ್ಲನೆ ಹೊರಳಿದ ಆತ! ಮತ್ತೊಮ್ಮೆ ಅಲುಗಿಸಿ ಕರೆದಳು. ದೀರ್ಘ ನಿಟ್ಟುಸಿರು ಬಿಟ್ಟು ಮತ್ತೆ ಗೊರಕೆ ಹೊಡೆಯ ಹತ್ತಿದ."ಅವರಿಗೆ ತೊಂದರೆ ಕೊಡಬೇಡಿ" ಮಾತು ಬಂದಾಗ ಬೆಚ್ಚಿ ಬಾಗಿಲ ಕಡೆ ನೋಡಿದಳು. ಮೋಹನ್ ಚಂದ್ರ ನಿಂತಿದ್ದ! ತಪ್ಪಿತಸ್ಥಳಂತೆ ತಲೆ ತಗ್ಗಿಸಿದಳು. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಳು. ನಿಜ ಸಂಗತಿ ತಿಳಿಸದೆ ಉಪಾಯವಿಲ್ಲ."ಚಂದನ್" ಮಂಚದ ಅಂಚು ಹಿಡಿದು ಚೆಲುವನಿಗೆ ಹೇಳಿದಳು."ನನ್ನ ಊಹೆ ಸರಿಯಾಯ್ತು" ಆಶ್ಚರ್ಯವಾಗಿ ತಲೆಯೆತ್ತಿ ನೋಡಿದಳು. ಮುಗುಳ್ನಗುತ್ತಾ ನಿಂತಿದ್ದ. ಮುಖದಲ್ಲಿ ನಶೆಯ ಕುರುಹಿಲ್ಲ! ಚೆನ್ನಾಗಿ ನಾಟಕವಾಡಿದ್ದಾನೆ ಚೆಲುವ!"ನೀನು ಮಾತ್ಸರ್ಯ ತುಂಬಿರೋನು" ಒಮ್ಮೆಲೆ ಆರ್ಭಟಿಸಿದಳು."ರಾತ್ರಿ ಹೊತ್ತು ಕಿರುಚ ಬೇಡಿ" ಸಂಯಮ ಕಳೆದುಕೊಳ್ಳದೆ ಹೇಳಿದ. ಉಸಿರಿನ ತೀವ್ರತೆಯನ್ನು ನಿಧಾನಗೊಳಿಸಿದಳು."ಮೋಹನ್ ಚಂದ್ರ ನೀನು ಹೊಟ್ಟೆ ಕಿಚ್ಚಿನ ಮನುಷ್ಯ""ಅಲಕಾ ಸತ್ಯನಾ ಮುಚ್ಚೋದಕ್ಕೆ ಪ್ರಯತ್ನಿಸ ಬೇಡಿ. ಚಂದನ್ ಸತ್ತು ಹೋದ. ವಿಧವೆ ಅಂದುಕೊಂಡು ಕೆಲಸಕ್ಕಾಗಿ ನನ್ನಲ್ಲಿಗೆ ಬಂದ್ರಿ. ನಿಮ್ಮನ್ನು ನೋಡಿದ್ರೆ ನೀವು ಯಾವುದೋ ಶ್ರೀಮಂತ ಮನೆತನದಿಂದ ಬಂದವರು ಅನಿಸಿತು""ಅದಕ್ಕೆ ನನ್ನ ಮೇಲೆ ಕನಿಕರ ತೋರಿಸೋ ಹಾಗೆ ನಟಿಸಿ. ನನ್ನನ್ನು ಪ್ರೀತಿಸಿ ನಿಮ್ಮ ಸಂಗಾತಿಯಾಗುವಂತೆ ಪ್ರೇರೇಪಿಸಿದ್ರಿ""ಸುಳ್ಳು""ಸತ್ಯ. ಹುಡುಗಿಯರೆಂದರೆ ಮಾರು ದೂರ ಹೋಗುವ ನೀವು ನನ್ನ ಬಗ್ಗೆ ತುಂಬಾ ಆಸ್ಥೆ ತೋರಿಸಿದ್ರಿ. ಕಾರಣ ನಿಮ್ಮ ಸ್ವಾರ್ಥ!""ಇರಬಹುದು. ಆದ್ರೆ ನೀವು ವಿಧವೆ ಅಲ್ಲಾಂತ ತಿಳಿದಿದ್ದು ಚಂದನ್ ಬಂದ ನಂತರ. ಅದೂ ಅಲ್ದೆ ಅದಕ್ಕೆ ಬೇಕಾಗಿದ್ದ ಕುರುಹುಗಳೂ ನಿಮ್ಮಲ್ಲಿದ್ದವು""ಕುರುಹು!!!" ಆಶ್ಚರ್ಯ ವ್ಯಕ್ತಪಡಿಸಿದಳು."ಹೌದು. ನಿಮ್ಮ ಕೈಯಲ್ಲಿರೋ ಶಂಖ. ಅಂದ್ರೆ ಬಿಳಿ ಬಣ್ಣದ ಬಳೆಗಳು. ಬೈತಲೆಯಲ್ಲಿರುವ ಕುಂಕುಮ. ಅದು ಅಲ್ದೆ...." ಮಾತು ನಿಲ್ಲಿಸಿದ."ಮತ್ತೇನಿದೆ?" ಕಣ್ಣು ಕಿರಿದುಗೊಳಿಸಿದಳಾಕೆ."..... ಮೀನು""ಮೀನು?!""ಬೆಂಗಾಲಿ ವಿಧವೆಯರಿಗೆ ಮೀನಿನ ಪದಾರ್ಥ ನಿಷಿದ್ಧ" ಕಣ್ಣಿಗೆ ಕೈ ಹಾಕಿದಂತಿತ್ತು ಅವನ ಮಾತು. ಎಲ್ಲವೂ ಸತ್ಯ. ಬೆಂಗಾಲಿಗಳ ಬಗ್ಗೆ ತುಂಬಾ ತಿಳಿದುಕೊಂಡಿದ್ದಾನೆ. ವಿಷಾದದ ನಗೆ ತೋರಿಸಿದಳು."ಅದಕ್ಕೆ ನೀವು ಚಂದನ್ ನ ಮುಗಿಸೋ ಪ್ರಯತ್ನ ಮಾಡಿದ್ರಿ""ಚಂದನ್ ನಿಮ್ಮನ್ನು ಹುಡುಕಿಕೊಂಡು ದೂರದ ಕೊಲ್ಕತ್ತಾದಿಂದ ಬಂದ. ನೀವು ಅವನ ಕಣ್ಣಿಗೆ ಬಿದ್ರಿ. ನಿಮ್ಮನ್ನ ವಾಪಸು ಬರುವಂತೆ ಒತ್ತಾಯಿಸಿದ. ನೀವು ನಿರಾಕರಿಸಿದ್ರಿ. ಆತ ಜಗಳವಾಡಿದ. ನೀವೂ ಹಠ ಹಿಡಿದ್ರಿ. ಕೊನೆಗೆ ಬೇರೆ ದಾರಿ ಕಾಣದೆ ಅವನನ್ನು ಕೊಲ್ಲೊ ಪ್ರಯತ್ನ ಮಾಡಿದ್ರಿ""ಸುಳ್ಳು, ಶುದ್ಧ ಸುಳ್ಳು. ನೀವೆ ನಾಡ ಕೋವಿಯಿಂದ ಗುಂಡಿಕ್ಕಿ ಕೊಲ್ಲೊ ಪ್ರಯತ್ನ ಮಾಡಿದ್ರಿ""ಇಲ್ಲ""ಹೌದು, ನನ್ನ ಮೇಲಿನ ಆಸೆಯಿಂದ ಗುಂಡು ಹೊಡೆದ್ರಿ""ಅಲಕಾ, ಬಾಯಿ ಮುಚ್ಚಿ""ಸತ್ಯ ಹೇಳಿದ್ರೆ ಕೋಪ ಬರುತ್ತೆ ಅಲ್ವಾ?" ಟೀಕಿಸಿದಳು. "ಮೋಹನ್ ಚಂದ್ರ ನೀವು ಕೋವಿಯನ್ನು ಶುಚಿಗೊಳಿಸಿ ಪರೀಕ್ಷೀಸೊದಕ್ಕೆ ಗುಂಡು ಹಾರಿಸಿದ್ದು ಅಂದ್ರಿ. ಅದು ಸುಳ್ಳು. ನನ್ನ ಹಿಂಬಾಲಿ ಬಂದಿರೋನು ನನ್ನ ಗಂಡ ಅಂದ ಕೂಡಲೇ ನೀವು ಮಾತ್ಸರ್ಯ ಹೊಂದಿದ್ರಿ. ಅಪರಿಚಿತ ಸ್ಥಳ ಬೇರೆ. ಅದಕ್ಕೆ ಸಾಯಿಸೋ ಪ್ರಯತ್ನ ಮಾಡಿದ್ರಿ""ನೀವು ತಪ್ಪು ತಿಳ್ಕೊಂಡಿದ್ದೀರಿ ಅಲಕಾ. ಚಂದನ್ ನ ಕೊಲ್ಲೊ ಹಾಗಿದ್ರೆ ಇಲ್ಲಿ ತಂದು ಯಾಕೆ ಉಪಚರಿಸಬೇಕಿತ್ತು?""ಉಪಚರಿಸದೆ? ಗುಂಡೇಟು ಬಿದ್ದ ವ್ಯಕ್ತಿನಾ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದು ನಾನು. ವ್ಯಕ್ತಿ ಚಂದನ್ ಅಂತ ನನಗೆ ಗೊತ್ತಿರಲಿಲ್ಲ. ನನ್ನನ್ನು ಹಿಂಬಾಲಿಸಿದ ನೀವು ಆತನನ್ನು ಗುರುತಿಸಿ ಜೀಪಿನಿಂದ ಬಂದು ಇಲ್ಲಿಗೆ ಸಾಗಿಸಿದ್ರಿ. ಈಗ ಸಂಬಾವಿತನಂತೆ ನಾಟಕವಾಡುತ್ತಿದ್ದೀರಿ""ಇಲ್ಲ, ಅಲಕಾ ಹಾಗನ್ಬೇಡಿ""ಹಾಗಾದರೆ ಗುಂಡು ಹಾರಿಸಿರೋದು ಯಾರು?""ನಾನು" ಅಚ್ಚರಿಯಿಂದ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಪಾತಿ ಕೆಲಸದಾಳು ಪಾಪಯ್ಯ!"ನೀನು! ನಿನಗೇನು ಇದರಿಂದ ಲಾಭ?""ಧಣಿಯೋರು ಕುಡಿತದ ಚಟ ಬೆಳೆಸ್ಕೊಂಡಿದ್ರು. ನೀವು ತೋಟದ ಉಸ್ತುವಾರಿಕೆಗೆ ಬಂದ ನಂತರ ಅವರ ಕುಡಿತ ಸ್ಥಿಮಿತೆಗೆ ಬಂತು. ಅವರ ಮುಖದಲ್ಲಿ ಸಂತಸ ಮಿನುಗುತಿತ್ತು. ಆದರೆ ಅದೇ ಸಮಯಕ್ಕೆ ನಿಮ್ಮ ಸಂಬಂಧಿಂತ ಹೇಳಿಕೊಂಡು ಚಂದನ್ ಬಂದ್ರು. ಮತ್ತೆ ದಣಿಯೋರು ಮೊದಲಿನಂತಾಗುತ್ತಾರೋ ಎಂದು, ಮನೆಯಲ್ಲಿ ಯಾರು ಇಲ್ಲದಾಗ ಕೋವಿ ತೆಗೆದುಕೊಂಡು ಆ ವ್ಯಕ್ತಿಯನ್ನು ಇಳಿಜಾರಿನಲ್ಲಿ ನಿಲ್ಸಿ ಗುಂಡು ಹಾರಿಸ್ದೆ""ಅವರನ್ನೇಕೆ ಇಳಿಜಾರಿನಲ್ಲಿ ನಿಲ್ಸಿದೆ?""ಅಲಕಾನ ರೂಮ್ ತೋರಿಸೋದಕ್ಕೆ ಹೇಳಿದ್ರು. ನನ್ನ ಯೋಜನೆಯ ಸಂಶಯ ಬರದಂತೆ ಎಚ್ಚರವಹಿಸಿ ಇಳಿಜಾರಿನ ರಸ್ತೆಯಲ್ಲಿ ನಿಲ್ಲಿಸಿದೆ""ಈ ವಿಷಯಾನ ನನಗೆ ತಿಳಿಸ್ದ. ಆದ್ರೆ ಚಂದನ್ ಗಾಗಿರೋದು ಗುಂಡಿನ ಗಾಯ ಅಲ್ಲ""ಮತ್ತೆ?" ಕಣ್ಣರಳಿಸಿ ಕೇಳಿದಳು ಅಲಕಾ."ಚೂರಿಯಿಂದ ತಿವಿದ ಗಾಯ""ಚೂರಿಯಿಂದ ತಿವಿದ ಗಾಯ!!" ಅಲಕಾ ಹುಬ್ಬೇರಿಸಿದಳು."ನಾನು ನೋಡುವಾಗ ಇರಿತದ ಗಾಯದ ಹಾಗೆ ಇರಲಿಲ್ಲ. ಗುಂಡೇಟು ತಗುಲಿದಂತಿತ್ತು. ಅದೂ ಅಲ್ದೆ ಆತ ನಾಡಕೋವಿ ಅಂದಿದ್ದ.""ಅದು ಕತ್ತಲೆಯಲ್ಲಿ ಸಾಗೋದು ಅಪಾಯ. ಪೊದೆಯ ಮಧ್ಯದಲ್ಲಿ ಕಾಡು ಪ್ರಾಣಿಗಳಿರುತ್ತವೆ. ಕೋವಿ ತರುತ್ತೇನೆ ಅಂದಿದ್ದೆ. ಅದಕ್ಕೆ ಹೇಳಿರಬಹುದು" ಪಾಪಯ್ಯ ಹೇಳಿದ."ಸರಿ ಈಗ ಅರ್ಥವಾಯಿತು. ನಾನು ಜೀಪ್ ನಲ್ಲಿ ಬರುತ್ತಿರುವಾಗ ಅವಳು ಎದುರಾಗಿದ್ಲು""ಯಾರು?" ಪಾಪಯ್ಯ, ಅಲಕಾ ಇಬ್ಬರೂ ಉದ್ಗಾರವೆಳೆದರು."ಅದೇ ಬಾಬ್ ಕೂದಲಿನ ಹುಡುಗಿ. ನನ್ನ ನೋಡಿ ಕಾಫಿ ಗಿಡಗಳ ಹಿಂದೆ ಮರೆಯಾದ್ಲು. ನಾನು ನನ್ನ ಪಾಡಿಗೆ ಬಂದೆ""ಯಾರವಳು?""ಸರಿಯಾಗಿ ಹೇಳಿದ್ರಿ. ದೂರದ ಊರಿಂದ ಪ್ರಿಯತಮನನ್ನು ಹುಡುಕಿಕೊಂಡು ಬಂದಿದ್ದೀನಿ ಅಂದಿದ್ಲು. ಕೆಲಸದಾಳುಗಳ ಜೊತೆಗೆ ಜಗಳ ಕಾಯ್ತ ಇದ್ಲು" ಪಾಪಯ್ಯನೆಂದ."ದೂರದ ಊರು!" ರಸಿಕ ಚಂದನ್ ನ ಪ್ರೇಮಿ ಇರಬೇಕು!"ಹೆಸರು ಗೊತ್ತಾ?" ಏನೋ ಅಲೋಚಿಸಿ ಕೇಳಿದಳು ಅಲಕಾ."ಇಲ್ಲ. ಅವಳು ಉಳಕೊಂಡಿದ್ದು ಕಾರ್ ಶೆಡ್ಡಿನ ಬಳಿ""ಶೆಡ್ಡಿನ ಬಳಿ!!" ಉತ್ತರ ದೊರಕಿತವಳಿಗೆ. ಅವಳು ಬೇರಾರು ಅಲ್ಲ. ವೈಯಾರಿ ನಿಲೀಮಾ!!!ಚಂದನ್ ಕಾಣೆಯಾದ ದಿನ ಏನೋ ನಾಟಕವಾಡಿದ್ದಾಳೆ. ನೆನಪಿಸಿಕೊಂಡಳು ಅಲಕಾ."ಯಾರು ನಿಮಗೆ ಗೊತ್ತೆ?" ಮೋಹನ್ ಚಂದ್ರ ಆಲೋಚನೆಯಲ್ಲಿದ್ದ ಅವಳನ್ನು ಕೇಳಿದ."ಹೌದು. ಆಕೆ ನನ್ನ ರೂಂ ಮೇಟ್ ನಿಲೀಮಾ""ಸರಿ. ನಾನು, ಪಾಪಯ್ಯ ಚಂದನ್ ನ ವಿಷಯ ಹೇಳಿದ ನಂತರ ಶೆಡ್ಡ್ ಬಳಿ ಬಂದೆ""ಗಾಯವಾಗಿ ಬಿದ್ದವನನ್ನು ಶೆಡ್ಡಿಗೆ ಸಾಗಿಸಿದೋಳು ನಾನು""ಇರಬಹುದು""ನೀವು ಬಂದಿದ್ದು ಅವನನ್ನು ಕಾಟೇಜಿಗೆ ಸೇರಿಸೋದಿಕ್ಕೆ""ಹೌದು. ಆಗ ಯಾರೋ ಮೆಟ್ಟಿಲಿನ ಮರೆಯಲ್ಲಿ ನಿಂತು ನೋಡುತ್ತಿದ್ದರು""ಸರಿಯಾಗಿ ಹೇಳಿದ್ರಿ. ಅವನಿಗೆ ಪ್ರಥಮ ಚಿಕಿತ್ಸೆ ಮುಗಿಸಿ ನನ್ನ ರೂಂಗೆ ಬಂದಾಗ ನಿಲೀಮಾ ರೂಂನಲ್ಲಿ ಇರಲಿಲ್ಲ""ಕೆಲವು ಬಾರಿ ಕಾಫಿ ತೋಟದಲ್ಲೂ ಕಾಣಿಸ್ಕೊಂಡಿದ್ಲು""ಮೋಹನ್ ಚಂದ್ರ, ವಿಳಂಬ ಮಾಡೋದು ಬೇಡ. ಕೂಡ್ಲೆ ರೂಮಿಗೆ ಹೋಗೋಣ" ಆತುರ ಪಡಿಸಿದಳು ಅಲಕಾ."ಪಾಪಯ್ಯ, ನೀನು ಚಂದನ್ ಬಳಿ ಇರು. ನಾವು ನಿಲೀಮಾನ ವಿಚಾರಿಸ್ತೀವಿ"ಇಬ್ಬರೂ ರೂಮಿಗೆ ಬಂದಾಗ ರೂಮಿಗೆ ಬಾಗಿಲು ಹಾಕಲಾಗಿತ್ತು. ಅಲಕಾ ತನ್ನ ಕೀಲಿಯಿಂದ ಬಾಗಿಲು ತೆರೆದಳು. ರೂಮಿನ ಎಲ್ಲಾ ವಸ್ತುಗಳು ಅಸ್ತವ್ಯಸ್ತವಾಗಿದ್ದವು. ಅಲಕಾಳ ಟೇಬಲ್ ಮೇಲೊಂದು ಪತ್ರ! ತೆರೆದು ನೋಡಿದಳು. ಅವಳ ಮುಖದಲ್ಲಿ ಬದಲಾವಣೆ ಕಂಡಿತು."ಏನಾಯ್ತು?""ಅವಳ ಆ ವ್ಯಕ್ತಿ ಸಿಕ್ಕಿದನಂತೆ. ಆತ ಕಳೆದು ಹೋದ ಅವನ ಹೆಂಡತಿಯನ್ನು ಹುಡುಕಿಕೊಂಡು ಬಂದಿರೋದಂತೆ""ಅವನ ಕಳೆದು ಹೋದ ಹೆಂಡತಿ ಅಂದ್ರೆ ನೀವೆ ತಾನೆ? ಆ ವ್ಯಕ್ತಿ ಚಂದನ್ ತಾನೆ?""ಸರಿಯಾಗಿ ಹೇಳಿದ್ರಿ. ನಿಲೀಮಾ ಚಂದನ್ ನ ಪ್ರೇಯಸಿಯಿರಬೇಕು""ಇರಬಹುದು. ಆದ್ರೆ ಚಂದನ್ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾರೆ""ನೀವು ಹೇಗೆ ಹೇಳಿದ್ರಿ""ಅಷ್ಟು ದೂರದಿಂದ ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆಂದ್ರೆ..."ಅವಳಿಗೆ ಚಂದನ್ ಬಗ್ಗೆ ಕನಿಕರವಾಯಿತು. ಚಂದನ್ ಬಗ್ಗೆ ತಪ್ಪಾರ್ಥ ಮಾಡಿದ್ದಕ್ಕಾಗಿ ನೊಂದುಕೊಂಡಳು"ಚಂದನ್ ನಿಲೀಮಾಳನ್ನು ನಿರಾಕರಿಸಿದ್ದಕ್ಕಾಗಿ ಅವನನ್ನು ಮುಗಿಸಿದಳಂತೆ" ಪತ್ರದಲ್ಲಿದ್ದದನ್ನು ಮತ್ತೆ ಮುಂದುವರಿಸಿದಳು."ಅವಳು ತಪ್ಪಾಗಿ ತಿಳ್ಕೊಂಡಿದ್ದಾಳೆ. ಚಂದನ್ ಸಾವಿನಿಂದ ಪಾರದ ವಿಷಯ ಅವಳಿಗೆ ತಿಳಿದಿಲ್ಲ.""ಹೌದು. ಈಗ ಅವಳು ತನ್ನ ಕೆಲಸ ಮುಗಿಸಿ ಊರಿಗೆ ವಾಪಾಸಾಗಿರಬಹುದು.""ನಿಮ್ಮ ಊಹೆ ನಿಜವಾಗಿರಬಹುದು""ಮೋಹನ್ ಚಂದ್ರ ನನ್ಗೊಂದು ಸಹಾಯ ಮಾಡಬಲ್ಲಿರಾ?""ಏನದು ಕೇಳಿ?""ಚಂದನ್ ಗುಣಮುಖನಾಗುವವರೆಗೂ ನಿಮ್ಮಲಿ ನಿಲ್ಲಲು ಅನುವು ಮಾಡಿ ಕೊಡಬಲ್ಲಿರಾ?""ಅದಕ್ಕೇನಂತೆ. ನಿಮ್ಮನ್ನು ಒಂದು ಮಾಡಿದ ಪುಣ್ಯ ನನಗಿರಲಿ. ನೀವು ಬಯಸುವಿರಾದರೆ ಚಂದನ್ ಗೂ ಇಲ್ಲೆ ಒಳ್ಳೆ ಕೆಲಸ ಕೊಡಿಸ ಬಲ್ಲೆ. ಈ ಎಸ್ಟೇಟ್ ನಿಮ್ಮದೆಂದೇ ತಿಳಿಯಿರಿ""ಧನ್ಯವಾದಗಳು" ಅಲಕಾ ಕೈ ಜೋಡಿಸಿದಳು."ಬನ್ನಿ ಕಾಟೇಜಿಗೆ ಹೋಗೋಣ"
ಇಬ್ಬರನ್ನೂ ಹೊತ್ತ ಜೀಪು ಕಾಟೇಜ್ ಕಡೆ ಓಡಿತು.***

Read more!

Thursday, November 13, 2008

ಬೋಗಿ ಸಂಖ್ಯೆ ಸಾ.೪


(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಕಥೆ)ಬಾಗಿಲಿನವರೆಗೂ ಉದ್ದಕ್ಕೆ ಇದ್ದ ಸರದಿಯನ್ನು ಸೇರಿಕೊಂಡು ಬಹಳ ಪ್ರಯಾಸದಿಂದ ಕೌಂಟರ್‍‍ನ ಬಳಿ ಬರುವಾಗ ಬೆವತು ಹೋಗಿದ್ದ ಮುಖವನ್ನು ಕರ್ಚಿಪ್‍ನಿಂದ ಒರೆಸಿಕೊಂಡು ಟಿಕೇಟ್‍ಗಾಗಿ ಕೈ ತೂರಿಸಿ, ಪಡೆದುಕೊಂಡು ಹಿಂತಿರುಗಿದ ಸ್ವರಳಿಗೆ ಆತ ಮತ್ತೊಮ್ಮೆ ಕಾಣಿಸಿದ!ಅವಳ ಹಿಂದೆಯೆ ನಿಂತು ಆತ ಟಿಕೇಟು ಖರೀದಿಸಿದ್ದ! ಬಸ್ಸು ಇಳಿದು ರೈಲು ನಿಲ್ದಾಣದವರೆಗೆ ನಡೆದು ಬರುತ್ತಿರುವಾಗಲೂ ಆತ ಹಿಂಬಾಲಿಸಿಕೊಂಡೇ ಬಂದಿದ್ದ!ಅಪರಿಚಿತ ಅವಳನ್ನು ಕಂಡು ಮುಗಳ್ನಕ್ಕ. ಸ್ವರ ಹೆದರಿ ಮೆಲ್ಲಗೆ ಮೈ ಅದುರಿಸಿದಳು. ರೈಲು ಬರಲು ಇನ್ನೂ ಅರ್ಧ ಗಂಟೆಯಿತ್ತು. ಅವನಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯ. ವೇಗದ ನಡುಗೆಯಲ್ಲಿ ಪ್ಲಾಟ್‍ಫಾರಂನಲ್ಲಿ ಹೆಜ್ಜೆ ಸರಿಸುತ್ತಾ ಪುಸ್ತಕದ ಅಂಗಡಿಯ ಮುಂದೆ ನಿಂತು ಹಿಂತಿರುಗಿದಳು. ಅಪರಿಚಿತ ಕಾಣಿಸದಾದಾಗ ನಿಟ್ಟುಸಿರಿಟ್ಟು ಪುಸ್ತಕಗಳ ಕಡೆಗೆ ಗಮನ ಹರಿಸಿದಳು. ಒಂದೆರಡು ವಾರಪತ್ರಿಕೆಗಳನ್ನು ತೆಗೆದುಕೊಂಡು ಸಿಮೆಂಟ್ ಬೆಂಚಿನ ಕಡೆಗೆ ನಡೆಯುವಾಗ ಆತ ಅವಳ ಹಿಂದೆ ಮುಗುಳ್ನಗುತ್ತಾ ನಿಂತಿದ್ದ!ಒಂದು ಕ್ಷಣ ಬೆದರಿದ ಹುಡುಗಿ ಸರಸರನೆ ನಡೆದು ಬಾಗಿಲ ಕಡೆಗಿದ್ದ ರೈಲ್ವೆ ಠಾಣೆಯ ಮುಂದಿನ ಬೆಂಚಿನ ಮೇಲೆ ಕುಳಿತು ನೋಡಿದಳು. ಆತ ಕಾಣಿಸಲಿಲ್ಲ. ನೋಡೋದಿಕ್ಕೆ ಸ್ಫುರದ್ರೂಪಿ ಯುವಕ. ದುಂಡು ಮುಖದ ದಪ್ಪ ಮೀಸೆಯ ಬಿಳಿ ಚಹರೆಯ ಯುವಕ ಆಕರ್ಷಕವಾಗಿದ್ದ. ಅಂತಹ ಸುಂದರ ಯುವಕ ತನ್ನ ಹಿಂದೆ ಬಿದ್ದಿದ್ದೇಕೆ? ಸ್ವರಳಿಗೆ ತಿಳಿಯಲಿಲ್ಲ.ಆತ ಮಲೆಯಾಳಂ ಪತ್ರಿಕೆಯೊಂದನ್ನು ಹಿಡಿದುಕೊಂಡು ಘಳಿಗೆಗೊಮ್ಮೆ ಸ್ವರಳನ್ನು ಗಮನಿಸುತ್ತಿದ್ದ.ಅಲ್ಲಲ್ಲಿ ನೇತು ಹಾಕಿದ್ದ ಟಿ.ವಿ. ಯಲ್ಲಿ ಯಾವುದೋ ಕನ್ನಡದ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ರೈಲ್ವೆ ನಿಲ್ದಾಣದಲ್ಲಿ ಅಷ್ಟೊಂದು ಜನರಿರಲಿಲ್ಲ. ಇನ್ನರ್ಧ ಗಂಟೆಯಲ್ಲಿ ಶೋರ್‍‍ನೂರ್‍‍ಗೆ ಹೊರಡುವ ರೈಲು ಫ್ಲಾಟ್‍ಫಾರಂ ಅನ್ನು ತಲುಪಲಿದೆ ಎಂದು ಉದ್ಗೋಷಕಿ ಹೇಳಿದ್ದರಿಂದ ಸ್ವರ ಅಲ್ಲಿಯೇ ಕುಳಿತಿದ್ದಳು.ಇದ್ದಕ್ಕಿದ್ದಂತೆ ಟಕ್ ಟಕ್ ಸದ್ದಿನೊಂದಿಗೆ ಧ್ವನಿ ವರ್ಧಕದಲ್ಲಿ ಮಾತುಗಳು ಆರಂಭವಾದವು.
"ಪ್ರಯಾಣಿಕರ ಗಮನಕ್ಕೆ. ಮಂಗಳೂರು ಶೋರ್‍‍ನೂರ್‍ ಪ್ಯಾಸೆಂಜರ್ ಗಾಡಿ ಸಂಖ್ಯೆ ೯೮೫೬೭ ಫ್ಲಾಟ್‍ಫಾರಂ ನಂಬರ್ ಒಂದರ ಬದಲಾಗಿ ಫ್ಲಾಟ್‍ಫಾರಂ ನಂಬರ್ ನಾಲ್ಕನ್ನು ಸೇರಲಿದೆ......." ಧ್ವನಿವರ್ಧಕದಲ್ಲಿಯ ಮಾತುಗಳು ಮುಂದುವರಿಯುತ್ತಿದ್ದಂತೆ ಸ್ವರ ತಟ್ಟನೆ ಎದ್ದು, ಆತುರಾತುರವಾಗಿ ಹೆಜ್ಜೆಗಳನ್ನು ಸರಿಸಿ ಓವರ್ ಬ್ರಿಡ್ಜ್‍ನ ಕಡೆಗೆ ನಡೆದಳು. ಕೆಲವರಂತೂ ರೈಲು ಹಳಿಯನ್ನು ದಾಟುತ್ತಲೇ, ಫ್ಲಾಟ್‍ಫಾರಂ ನಾಲ್ಕನ್ನು ತಲುಪಿದ್ದರು. ಅಪರಿಚಿತ ಯುವಕ, ಸ್ವರ ವೇಗವಾಗಿ ಹೋಗುತ್ತಿದ್ದುದನ್ನು ಗಮನಿಸಿ, ತನ್ನ ಕೈಯಲ್ಲಿದ್ದ ಪತ್ರಿಕೆಯನ್ನು ಅವಸರವಸವರವಾಗಿ ಮುಚ್ಚಿದ. ಅದಾಗಲೇ ಹಿಂದಿ ಮತ್ತು ಇಂಗ್ಲೀಷ್‍ನಲ್ಲಿಯೂ ಉದ್ಗೋಷಕಿ ಹೇಳಿದ್ದರಿಂದ ಆತ ಕೂಡ ಫ್ಲಾಟ್ ಫಾರ್‍ಂ ನಾಲ್ಕರ ಕಡೆಗೆ ನಡೆದ.ಸ್ವರ ಗಡಿಯಾರದತ್ತ ದೃಷ್ಟಿ ಹೊರಳಿಸಿದಳು. ರೈಲು ಹೊರಡಲು ಇನ್ನು ಕೇವಲ ಐದು ನಿಮಿಷಗಳು ಉಳಿದಿತ್ತು. ಅವಳು ಓವರ್ ಬ್ರಿಡ್ಜ್‍ನ ಮೇಲೆ ಬಂದಾಗ, ಒಮ್ಮಿದೊಮ್ಮೆಗೆ ನೂಕು ನುಗ್ಗಲಾಗುವಷ್ಟು ಜನ ತುಂಬಿ ಹೋದರು. ಹೆಗಲಿಗೇರಿಸಿ ಕಪ್ಪು ಚರ್ಮದ ಚೀಲವನ್ನು ಇನ್ನೊಂದು ಹೆಗಲಿಗೆ ಬದಲಿಸಿ, ಸೂಟ್‍ಕೇಸ್‍ನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ನಡೆಯುವಾಗ ಮುಗ್ಗರಿಸಿದಂತಾಯಿತು."ಎಕ್ಸ್ ಕ್ಯೂಸ್ ಮಿ" ಹಿಂದಿನಿಂದ ಯುವಕನ ಧ್ವನಿ ಬರುತ್ತಲೇ ಸರಿದು ನಿಂತಳು."ನಾನು ನಿಮಗೆ ಸಹಾಯ ಮಾಡಲೇ?" ಮಲೆಯಾಳಂ ಮಿಶ್ರಿತ ಕನ್ನಡದಲ್ಲಿ ಕೇಳಿದ ಯುವಕನತ್ತ ನೋಡಿದಳು ಸ್ವರ.ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ಯುವಕ!ಸ್ವರಳ ಮುಖಕ್ಕೆ ರಕ್ತ ನುಗ್ಗಿದಂತಾಗಿ ಮೆಲ್ಲನೆ ಬೆವತು ಹೋದಳು. ಆತನತ್ತ ನೋಡದೆ ಸರಸರನೆ ಹೆಜ್ಜೆ ಹಾಕಿ ಮೆಟ್ಟಲುಗಳನ್ನು ಇಳಿದು ಫ್ಲಾಟ್‍ಫಾರಂ ನಂ.೪ನ್ನು ತಲುಪಿದಾಗ, ರೈಲುಗಾಡಿ ಶಿಳ್ಳೆ ಹೊಡೆಯುತ್ತಾ ಬಂದು ನಿಂತಿತು. ಅವಳು ಒಂದು ಕ್ಷಣ ನಿಟ್ಟುಸಿರಿಟ್ಟಳು. ಕಪ್ಪು ಚರ್ಮದ ಚೀಲಕ್ಕೆ ಕೈ ಹಾಕಿ ಟಿಕೇಟ್‍ನ್ನು ಗಮನಿಸಿದಳು.ಬೋಗಿ ಸಂಖ್ಯೆ ಸಾಮಾನ್ಯ ೪!ಅದನ್ನು ಗಮನಿಸುವ ಮೊದಲು ಹಿಂತಿರುಗಿ ನೋಡಿದಳು. ತನ್ನನ್ನು ಮಾತನಾಡಿಸಿದ್ದ ಸುಂದರ ಯುವಕ ಕಾಣಿಸಲಿಲ್ಲ. ಅವಳು ವೇಗದ ನಡುಗೆಯಲ್ಲಿ ನಡೆದು ತನ್ನ ಬೋಗಿಯ ಬಳಿ ಬಂದಳು.ರೈಲು ಹೊರಡುವ ಸೂಚನೆಯನ್ನು ನೀಡುವಂತೆ ಶಿಳ್ಳೆ ಹೊಡೆಯಿತು.ಸೂಟ್‍ಕೇಸ್‍ನ್ನು ರೈಲಿನ ಒಳಗಿಟ್ಟು, ಹತ್ತಿದವಳು ತನ್ನ ಸೀಟಿನಲ್ಲಿ ಕುಳಿತು ದೀರ್ಘ ಉಸಿರು ತೆಗೆದಳು.ಅಪರಿಚಿತ ಬಸ್ಸು ಇಳಿದು ಬಂದಾಗಿನಿಂದ ಅವಳನ್ನು ಅನುಸರಿಸಿ ಬಂದಿದ್ದು ಅವಳಿಗೆ ಭೀತಿ ತರಿಸಿತ್ತು. ಆತ ಯಾರೆಂದು ತಿಳಿಯದೆ ಕಂಗಾಲಾಗಿದ್ದಳು. ಆತ ತನ್ನನ್ನು ಹಿಂಬಾಲಿಸಿ ಬರುತ್ತಿರುವುದಾದರೂ ಏಕೆ? ಪಕ್ಕನೆ ಕುತ್ತಿಗೆಯ ಬಳಿ ತನ್ನ ಕೈ ಸರಿಸಿ ಮುಟ್ಟಿಕೊಂಡಳು. ಚಿನ್ನದ ಸರ ಹಾಗೇ ಇದೆ. ರೈಲು ಪ್ರಯಾಣದಲ್ಲಿ ಕಳ್ಳತನ ಸಾಮಾನ್ಯ. ಆದರೆ ತನ್ನ ಕತ್ತಿನಲ್ಲಿರುವುದು ಒಂದೆಳೆಯ ಚಿನ್ನದ ಸರ. ಅದಕ್ಕಾಗಿ ಆತ ತನ್ನನ್ನು ಹಿಂಬಾಲಿಸಿರಲಾರ. ನೋಡೋದಿಕ್ಕೂ ಸ್ಫುರದ್ರೂಪಿ. ಯಾವ ಹುಡುಗಿಯಾದರೂ ಸುಲಭವಾಗಿ ಅವನ ಬಲೆಗೆ ಬೀಳಬಹುದು. ತನ್ನನ್ನು ಆತನ ಬಲೆಗೆ ಬೀಳಿಸಲು ಅನುಸರಿಸಿ ಬಂದಿರಬಹುದೆ? ಸ್ವರ ಒಮ್ಮೆ ಸುತ್ತಲೂ ದೃಷ್ಟಿ ಹೊರಳಿಸಿದಳು. ಆ ಬೋಗಿಯಲ್ಲಿ ಅಷ್ಟೊಂದು ಜನರಿರಲಿಲ್ಲ. ರೈಲು ಹೊರಡುವವರೆಗೆ ಅವಳಿಗೆ ಆತಂಕವೇ ಇತ್ತು.ರೈಲು ಮತ್ತೊಮ್ಮೆ ಶಿಳ್ಳೆ ಹೊಡೆದು ನಿಧಾನಕ್ಕೆ ಚಲಿಸಲಾರಂಭಿಸಿತು. ಸ್ವರ ಸಮಾಧಾನದ ಉಸಿರು ದಬ್ಬಿದಳು. ಚೀಲದಲ್ಲಿದ್ದ ವಾರಪತ್ರಿಕೆಯೊಂದನ್ನು ತೆಗೆದು ತಿರುವಿ ಹಾಕಲಾರಂಭಿಸಿದಳು.ರೈಲು ಮೆಲ್ಲಗೆ ಕುಲುಕುತ್ತಾ ವೇಗವನ್ನು ಪಡೆಯಲಾರಂಭಿಸಿತು. ತಟ್ಟನೆ ಆತ ಅವಳ ದೃಷ್ಟಿಗೆ ಗೋಚರಿಸಿದ! ಒಂದೊಂದೇ ಬೋಗಿಯ ಕಡೆಗೆ ಕತ್ತು ಉದ್ದ ಮಾಡಿ ನೋಡುತ್ತಿದ್ದ!ಸ್ವರ ಪಕ್ಕನೆ ಮುಖಕ್ಕೆ ಪುಸ್ತಕವನ್ನು ಅಡ್ಡ ಹಿಡಿದಳು. ಅವಳಿಗರಿವಿಲ್ಲದಂತೆ ಅವಳೆದೆ ಢವ ಢವ ಬಡಿಯಲಾರಂಭಿಸಿತು. ರೈಲು ವೇಗ ಪಡೆದುಕೊಂಡಾಗಲೊಮ್ಮೆ ನೆಮ್ಮದಿಯೆನಿಸಿತು. ಮತ್ತೆ ಪುಸ್ತಕ ತೆರೆದು ಅದರಲ್ಲಿಯ ಧಾರಾವಾಹಿಯೊಂದನ್ನು ಓದಲಾರಂಭಿಸಿದಳು.ಪುಸ್ತಕ ಓದುವುದರಲ್ಲಿ ಮುಳುಗಿದ್ದವಳಿಗೆ ಹತ್ತಿರ ಬಂದು ಕುಳಿತವರನ್ನು ಕೂಡ ಗಮನಿಸಿರಲಿಲ್ಲ."ಎಕ್ಸ್ ಕ್ಯೂಸ್ ಮಿ, ಪುಸ್ತಕ ಚೆನ್ನಾಗಿದೆಯಾ?" ಅದೇ ಮಲೆಯಾಳಂ ಮಿಶ್ರಿತ ಕನ್ನಡದಲ್ಲಿ ಕೇಳಿದ ಯುವಕನತ್ತ ಮುಖ ಹೊರಳಿಸಿದಳು.ಹಿಂಬಾಲಿಸಿ ಬಂದಿದ್ದ ಅಪರಿಚಿತ ಚೆಲುವ!ಕಣ್ಣುಗಳನ್ನು ಅಗಲಕ್ಕೆ ತೆರೆದು ಬಾಯಿಗೆ ಕೈ ಅಡ್ಡ ಹಿಡಿದಳು."ಶ್! ಕಿರುಚಿಕೊಳ್ಬೇಡಿ........ ನಾನೇನು ನಿಮ್ಮನ್ನು ಮಾಡೋದಿಲ್ಲ" ತಗ್ಗಿದ ದನಿಯಲ್ಲಿ ಹೇಳಿದ.ಅವಳು ಅತ್ತಿತ್ತ ಕತ್ತು ಹೊರಳಿಸಿ ಹೆದರುತ್ತಲೇ ಕಿಟಕಿಯ ಬದಿಗೆ ಸರಿದಳು."...... ನಿಮ್ಮಿಂದ ನನಗೊಂದು ಉಪಕಾರವಾಗ್ಬೇಕು"ಹೆದರಿದ ಹುಡುಗಿ ಆಶ್ಚರ್ಯದ ನೋಟ ಬೀರಿದಳು."ನಿಮ್ಮನ್ನೆ ಕೇಳ್ತಾ ಇರೋದು, ನೀವು ಶೋರ್‍‍ನೂರ್‍‍ಗೆ ಟಿಕೇಟ್ ತೆಗೆದಿದ್ದೀರಿಂತ ಗೊತ್ತು" ಮಾತು ನಿಲ್ಲಿಸಿ ಹಿಂದೆ ತಿರುಗಿ ನೋಡಿದ.ತನ್ನ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದಾನೆ ಅಪರಿಚಿತ! ಅವನ್ಯಾಕೆ ತನ್ನನ್ನು ಹಿಂಬಾಲಿಸುತ್ತಿದ್ದಾನೆ? ಅರ್ಥವಾಗದ ಪ್ರಶ್ನೆ ತಲೆ ಕೊರೆಯುತ್ತಿತ್ತು.ಆತ ತಟ್ಟನೆ ಎದ್ದು ನಿಂತ. ಅವನ ಕಣ್ಣುಗಳಲ್ಲಿ ಅದೇನೋ ಭೀತಿ ತುಂಬಿದಂತಿತ್ತು."ಅವರು ಬರ್‍ತಿದ್ದಾರೆ..... ಮತ್ತೆ ಭೇಟಿಯಾಗ್ತೀನಿ" ತಗ್ಗಿದ ದನಿಯಲ್ಲಿ ಹೇಳಿ ಸರಸರನೆ ಮುಂದಿನ ಬೋಗಿಗೆ ನಡೆದ.ಸ್ವರ ಅವನು ಹೋದ ನಂತರ ಹಿಂದೆ ತಿರುಗಿ ನೋಡಿದಳು. ಟಿ.ಸಿ. ಟಿಕೇಟುಗಳನ್ನು ಪರಿಶೀಲಿಸುತ್ತಿದ್ದ.ಅಂದರೆ, ಅಪರಿಚಿತ ಟಿಕೇಟ್ ಇಲ್ಲದೆ ಪ್ರಯಾಣಿಸುತ್ತಿದ್ದಾನೆ? ಹಾಗಾದರೆ ಟಿಕೇಟ್ ಖರೀದಿಸುವಾಗ ತನ್ನ ಹಿಂದೆ ನಿಂತಿದ್ದೇಕೆ? ಮನಸ್ಸಿನಲ್ಲಿ ಮೂಡಿದ್ದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ಅಪರಿಚಿತ ಬಾರಿ ಖದೀಮನೆ ಇರಬೇಕು! ಇದು ತನಗೊಳ್ಳೆ ಗ್ರಹಚಾರ!ಸಣ್ಣ ಸ್ಟೇಷನ್ ಬರುತ್ತಲೇ ರೈಲು ನಿಂತಿತು. ಚಹಾ, ತಿಂಡಿ ಮಾರುವವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅತ್ತಿತ್ತ ಕೂಗು ಹಾಕಿಕೊಂಡು ಹೋಗುತ್ತಿದ್ದರು.ರೈಲು ಹೊರಡುವ ಸೂಚನೆ ನೀಡಿತು. ದಪ್ಪ ತುಟಿಯ ದಾಂಡಿಗನೊಬ್ಬ ಸ್ವರಳ ಎದುರಿಗಿನ ಸೀಟಿನಲ್ಲಿ ಕುಳಿತ. ಅವನ ನೋಟ ವಿಚಿತ್ರವಾಗಿತ್ತು! ಸ್ವರ ಅವನ ನೋಟ ಎದುರಿಸಲಾರದೆ ಪುಸ್ತಕದ ಕಡೆಗೆ ಗಮನ ಹರಿಸಿದಳು. ಪುಸ್ತಕದ ಎಡೆಯಿಂದ ಮೆಲ್ಲನೆ ದಪ್ಪ ತುಟಿಯ ವ್ಯಕ್ತಿಯತ್ತ ನೋಟ ಬೀರಿದಳು. ಆತನ ದೃಷ್ಟಿ ಸೂಟ್‍ಕೇಸ್‍ನ ಕಡೆಗಿತ್ತು. ಪುಸ್ತಕವನ್ನು ಮುಖದಿಂದ ಹೊರಳಿಸಿ ಆತನೆಡೆಗೆ ನೋಡಿದಳು.ಆತ ತೋರು ಬೆರಳು ಮುಂದೆ ತಂದು ಸೂಟ್‍ಕೇಸಿನತ್ತ ತೋರಿಸಿದ. ಅರ್ಥವಾಗದೆ ಕಾಲಿನ ಬಳಿಯಿದ್ದ ಸೂಟ್‍ಕೇಸ್‍ನ್ನು ಬಗ್ಗಿ ನೋಡಿದಳು."ಏಯ್ ಹುಡುಗಿ, ಅದು ಯಾರ್‍ದು?" ಗೊಗ್ಗರು ದನಿ ಹೊರ ಬಂತು."ನನ್ನ ..... ನನ್ನದೆ....." ದನಿಯಲ್ಲಿ ಕಂಪನವಿತ್ತು. ಸೂಟ್‍ಕೇಸ್‍ನ್ನು ಸರಿಸಿ ಕಾಲಿನ ಬಳಿ ಇರಿಸಿಕೊಂಡಳು.ಏಕಾಏಕಿ ಅವನ ದೃಷ್ಟಿ ಅವಳ ಬಳಿಯಿದ್ದ ಕಪ್ಪಗಿನ ಚರ್ಮದ ಚೀಲದ ಕಡೆಗೆ ಹೊರಳಿತು. ಆತನನ್ನು ಗಮನಿಸಿದವಳು, ಆತ ಕೇಳುವ ಮೊದಲೇ, "ಇದೂ ನನ್ನದೇ........" ಎಂದು ಅದರ ಕೈಯನ್ನು ಹೆಗಲಿಗೇರಿಸಿದಳು.ಮತ್ತೊಬ್ಬ ಎತ್ತರ ನಿಲುವಿನ ವ್ಯಕ್ತಿ ದಪ್ಪ ತುಟಿಯ ವ್ಯಕ್ತಿಯ ಬಳಿ ಕುಳಿತು ಸ್ವರಳತ್ತ ನೋಡಿದ. ಸ್ವರಳಿಗೆ ಮೂರನೆಯ ವ್ಯಕ್ತಿ ಅಲ್ಲಿರುವುದರಿಂದ ತುಸು ಧೈರ್ಯ ಬಂತು."ಏನಂತೆ ಗುರು? ಹಕ್ಕಿಗೇನು ಗೊತ್ತಿಲ್ವಂತೆಯಾ?"ಎತ್ತರ ನಿಲುವಿನ ವ್ಯಕ್ತಿ ದಾಂಡಿಗ ಗೆಳೆಯ!ತಳೆದುಕೊಂಡ ಧೈರ್ಯವೆಲ್ಲಾ ಗಾಳಿಗೆ ತೂರಿ ಹೋಯಿತು. ಇಬ್ಬರೂ ತನ್ನ ಮೇಲೆ ಆಕ್ರಮಣ ಮಾಡಲಿದ್ದಾರೆ! ಅವಳ ದೃಷ್ಟಿ ಸರಪಳಿಯ ಕಡೆಗೆ ಹರಿಯಿತು. ತನ್ನ ಮೇಲೆ ಆಕ್ರಮಣ ಮಾಡುತ್ತಲೇ ಎಷ್ಟು ವೇಗವಾಗಿ ಅದನ್ನು ಎಳೆಯಬೇಕೆಂದು ಅವಳ ಮನಸ್ಸು ಲೆಕ್ಕ ಹಾಕಿತು. ಆದರೆ......... ಅದನ್ನು ಎಳೆಯುವ ಧೈರ್ಯ ತನಗಿದೆಯ? ಸರಪಳಿ ಎಳೆದ ಕೂಡಲೇ ರೈಲು ನಿಲ್ಲುತ್ತೆ.... ಕಳ್ಳರು ಹಾರಿ ಹೋಗುತ್ತಾರೆ. ಉಳಿದವರೆಲ್ಲಾ ತನ್ನನ್ನೇ ಬೆಟ್ಟು ಮಾಡಿ ತೋರಿಸುತ್ತಾರೆ...... ಅನಗತ್ಯವಾಗಿ ತಾನು ಸರಪಳಿ ಎಳೆದೆನೆಂದು ಪೊಲೀಸರ ಆತಿಥ್ಯ ಪಡೆಯಬೇಕಾಗುತ್ತದೆ...."ಪೈರಾ, ನಾನಿನ್ನು ಕೇಳ್ಲಿಲ್ಲಾ""ಇನ್ನು ತಡ ಮಾಡೋದು ಬೇಡ. ಮುಂದಿನ ಸ್ಟೇಷನ್ ಬರುತ್ತಲೇ ಎಲ್ಲಾ ಮುಗಿಬೇಕು" ಎತ್ತರದ ವ್ಯಕ್ತಿ ಆತುರ ತೋರಿಸಿದ."ಏಯ್ ಹುಡುಗಿ, ನಿಜ ಹೇಳ್ಬಿಡು..... ಆ ಚಂದದ ಹುಡುಗ ಇಲ್ಲಿಗೆ ಬಂದಿದ್ನಾ?"ಸ್ವರಳಿಗೆ ಆಶ್ಚರ್ಯವಾಯಿತು. ಈ ಇಬ್ಬರೂ, ಅಪರಿಚಿತ ಚೆಲುವನ ಬೆನ್ನಟ್ಟಿ ಬಂದವರು? ಚೆಲುವ ತನ್ನ ಹಿಂದೆ ಬಿದ್ದಿದ್ದನ್ನು ಅವರು ಗಮನಿಸಿರಬೇಕು. ಅದಕ್ಕಾಗಿ ತನ್ನನ್ನೇ ಪ್ರಶ್ನಿಸುತ್ತಿದ್ದಾರೆ."ಗೊತ್ತಿಲ್ಲ.... ಯಾರು? ...... ನಾನು ಯಾರನ್ನು ನೋಡಿಲ್ಲ" ತಟ್ಟನೆ ನಾಲಿಗೆ ಹೊರಳಿಸಿ ಅಮಾಯಕಳಂತೆ ನುಡಿದಳು."ಏಯ್, ನಮ್ಮತ್ರ ಎಲ್ಲಾ ನಾಟ್ಕ ಮಾಡ್ಬೇಡ. ಆ ಮುದ್ದು ಕೃಷ್ಣ ಇಲ್ಲಿಗೆ ಬಂದ್ರೆ .... ನಾವ್ ಬಂದಿದ್ದು ತಿಳಿಸ್ಬೇಡ"ಇಬ್ಬರೂ ಎದ್ದು ಹೋದುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದಳು ಸ್ವರ. ತಾನೇಕೆ ಇಕ್ಕಟ್ಟಿನಲ್ಲಿ ಸಿಲುಕಿಕೊಂಡೆ? ಎದ್ದು ಬೇರೆ ಕಡೆಗೆ ಹೋಗೋಣವೆಂದರೆ ಎಲ್ಲಾ ಸೀಟಿನಲ್ಲಿಯೂ ಗಂಡಸರೇ! ಏನೋ ಒಣ ಧೈರ್ಯದಿಂದ ಅಲ್ಲೇ ಕುಳಿತುಕೊಳ್ಳುವ ನಿರ್ಧಾರ ತಳೆದಳು. ಇನ್ನು ಅವರ್‍ಯಾರು ಬರಲಾರರು. ತಲೆ ಚಿಟ್ಟು ಹಿಡಿದಂತಾಯಿತು. ಪುಸ್ತಕ ಸೀಟಿಗೆ ಎಸೆದು ತಲೆಗೆ ಕೈ ಹಚ್ಚಿಕೊಂಡಳು."ಗರಂ ಗರಂ ... ಚಾಯ್ .... ಯಾರಿಗೆ ಬೇಕು ಚಾಯ್..." ಚಹಾದ ಹುಡುಗನ ಕೂಗು ಕೇಳುತ್ತಲೇ ಪರ್ಸ್‍ನಿಂದ ಹಣ ತೆಗೆದು ತಿರುಗಿದಳು.ಬಿಳಿಯ ಪ್ಲಾಸ್ಟಿಕ್ ಕಪ್‍ನಲ್ಲಿ ಚಹಾ ಹಿಡಿದು ನಿಂತಿದ್ದ ಮುದ್ದು ಕೃಷ್ಣ!"ನೀವು ತುಂಬಾ ಚಿಂತಿತರಂತೆ ಕಾಣ್ತಾ ಇದ್ದೀರಿ. ಅದನ್ನು ಗಮನಿಸಿಯೇ ನಾನು ಚಹಾ ತಂದಿದ್ದು" ಮುಗುಳ್ನಗುತ್ತಾ ಚಹಾದ ಲೋಟ ಮುಂದೆ ಹಿಡಿದ.ಚಹಾದ ಹುಡುಗ ಬಂದನೆಂದರೆ ಚೆಲುವ!"ಬೇಡ" ನಿರಾಕರಿಸಿದವಳಿಗೆ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಚೆಲುವನ ಮೇಲೆ ಸಿಟ್ಟಿತ್ತು."ನಿರಾಕರಿಸ್ಬೇಡಿ..... ನಿಮ್ಮ ತಲೆ ಸಿಡಿತ ದೂರವಾಗಿ ನೆಮ್ಮದಿ ಅನಿಸ್ಬೋದು""ನೀವು ನನ್ನ ನೆಮ್ಮದಿಯನ್ನು ಹಾಳು ಮಾಡಿ ಬಿಟ್ರಿ" ಸಿಟ್ಟಿನಲ್ಲಿ ಬಂದ ಮಾತುಗಳಿಗೆ ಮುಗುಳ್ನಕ್ಕ."ಮೊದ್ಲು ಇದನ್ನು ಕುಡಿದು ಬಿಡಿ... ಆರಿ ಹೋಗುತ್ತೆ. ನನ್ನ ಮೇಲಿನ ಸಿಟ್ಟನ್ನು ಚಹಾದ ಮೇಲೆ ತೋರಿಸ್ಕೊಳ್ಬೇಡಿ"ಆತ ಒತ್ತಾಯಿಸುವಂತೆ ಲೋಟ ಮುಂದೆ ಹಿಡಿದಾಗ ಕೈ ಮುಂದೆ ಚಾಚಿ ನಿಧಾನಕ್ಕೆ ಚಹಾ ಹೀರಿದಳು........ ನೆಮ್ಮದಿಯೆನಿಸಿತು."ನೀವು ಶೋರ್‍‍ನೂರಿಗೆ ಹೋಗ್ತಾ ಇದ್ದೀರಿ?" ಆತನ ಪ್ರಶ್ನೆಗೆ ತಟ್ಟನೆ ಮುಖವೆತ್ತಿದಳು."ಗೊತ್ತಿದ್ದು ಪದೇ ಪದೇ ನೀವು ಅದನ್ನೇ ಕೇಳ್ತಾ ಇದ್ದೀರಿ" ಸಿಡುಕಿನಿಂದ ಬಂದ ಉತ್ತರಕ್ಕೆ ಚೆಲುವ ಉಗುಳು ನುಂಗಿಕೊಂಡ."ಗೊತ್ತಿದೆ ...... ಅದನ್ನು ದೃಢಪಡಿಸಿಕೊಳ್ಳೋದಿಕ್ಕೆ ಕೇಳಿದೆ" ತಡವರಿಸುತ್ತಾ ನಗುವಿನಿಂದಲೇ ಹೇಳಿದ.
"ನೀವ್ಯಾಕೆ ನನ್ನ ಹಿಂದೆ ಬಿದಿದ್ದೀರಾ?" ಅವಳ ಪ್ರಶ್ನೆಯಲ್ಲಿ ನೋವಿನ ಛಾಯೆಯಿತ್ತು."ನಾನೆಲ್ಲಿ ನಿಮ್ಮ ಹಿಂದೆ ಬಿದಿದ್ದೇನೆ? ನಿಮ್ಮ ಎದುರಿಗೆ ಕುಳಿತಿದ್ದೀನಿ ಅಷ್ಟೆ"ಪರಿಸ್ಥಿತಿಯನ್ನು ತಿಳಿಗೊಳಿಸಲು ತೂಗಿ ಪದಗಳನ್ನು ಬಳಸಿದ. ಅವಳಿಂದ ನಿಟ್ಟುಸಿರೊಂದು ಹೊರಟಿತು."ನೀವ್ಯಾರು? ನನ್ನಿಂದ ನಿಮಗೇನಾಗ್ಬೇಕು? ಆ ದಾಂಡಿಗರು ಬೇರೆ ನನ್ನ ಹಿಂದೆ ಬಿದ್ದಿದಾರೆ... ನಿಮ್ಮ ಬಗ್ಗೆ ಕೇಳಿದ್ರು"ಆತನ ಮುಖ ಪೇಲವವಾಯಿತು."ಅವರು ಇಲ್ಲಿಗೆ ಬಂದಿದ್ರಾ? ನಿಮ್ಮನ್ನು ವಿಚಾರಿಸಿದ್ರಾ?""ಹೌದು, ಮುದ್ದು ಕೃಷ್ಣ ಇಲ್ಲಿಗೆ ಬಂದ್ರೆ ನಾವು ಬಂದಿದ್ದು ತಿಳಿಸ್ಬೇಡ ಅಂದ್ರು" ಮಾತುಗಳನ್ನು ಹೇಳಿ ತುಟಿ ಕಚ್ಚಿಕೊಂಡಳು."ಹಾಗಂದ್ರಾ?" ಆತನ ಮುಖದಲ್ಲಿ ಭೀತಿಯ ನೆರಳು ಹಾಗೇ ಇತ್ತು."ಮುದ್ದು ಕೃಷ್ಣ, ನಾನು ನಿಮನ್ನು ಗಮನಿಸ್ತಾ ಇದ್ದೀನಿ...... ನೀವ್ಯಾಕೆ ನನ್ನ ಹಿಂದೆ ಬಿದ್ದಿದ್ರಾ?"ತಟ್ಟನೆ ಅವನ ಮುಖದಲ್ಲಿದ್ದ ಭೀತಿಯ ನಡುವೆಯೂ ನಗು ಸುಳಿಯಿತು."ನನ್ನ ಹೆಸರು ಮುದ್ದು ಕೃಷ್ಣ ಅಲ್ಲ. ಉನ್ನಿಕೃಷ್ಣನ್ ...... ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗ್ಬೇಕು?" ಮಾತಿನ ಕೊನೆಯಲ್ಲಿ ಯಾಚನೆಯ ದನಿಯಿತ್ತು."ಆಗೊಮ್ಮೆ ಇದೆ ಮಾತನ್ನು ಹೇಳಿದ್ರಿ. ಗಿಡುಗನ ತರಹ ಹಾರಿ ಹೋದ್ರಿ. ನನ್ನಿಂದ ಏನು ಉಪಕಾರವಾಗ್ಬೇಕು?"ಆಲೋಚನೆಯ ಆಳಕ್ಕಿಳಿದಂತಿತ್ತು ಮುಖ. ಅವಳ ಕತ್ತಿನ ಬಳಿಗೆ ದೃಷ್ಟಿ ಹೊರಳಿತು. ಕಣ್ಣು ಪಕ್ಕನೆ ಅವಳ ಕಾಲಿನ ಗೆಜ್ಜೆಯ ಬಳಿ ಹರಿಯಿತು. ಸ್ವರ ಅವನನ್ನೇ ಗಮನಿಸುತ್ತಿದ್ದಳು."ಚೆನ್ನಾಗಿದೆ" ಆಲೋಚನೆಯಿಂದ ಹೊರಗೆ ಬಂದವನು ಮೆಚ್ಚುಗೆಯ ಮಾತು ಹೊರಳಿಸಿದ."ಏನು ಚೆನ್ನಾಗಿದೆ? ನಿಮ್ಮ ತಲೆ..." ಅವಳು ಪಾದ ಮುಚ್ಚುವಂತೆ ಸೀರೆಯನ್ನು ಎಳೆದುಕೊಂಡು ಕುಳಿತು, "ನನ್ನಿಂದ ಉಪಕಾರವಾಗ್ಬೇಕೂಂತ ಕೇಳಿದ್ರಿ, ಏನದು?" ಕುತೂಹಲದಿಂದ ಮುಂದುವರಿಸಿದಳು."ಚೆನ್ನಾಗಿರೋದು ನಿಮ್ಮ ಮಾತು. ಗಿಡುಗ ಅಂದ್ರಿ.... ಪಾರಿವಾಳವನ್ನು ಹೇಗೆ ಹಾರಿಸ್ಕೊಂಡು ಹೋಗೋದೂಂತ ಕಾಯ್ತಾ ಇದ್ದೀನಿ"ಅವನ ಮಾತಿಗೆ ತಟ್ಟನೆ ತುಟಿ ಕಚ್ಚಿಕೊಂಡಳು. ಯುವಕ ತನ್ನ ಹಿಂದೆ ಬಿದ್ದಿದ್ದು ಅವನ ಬಲೆಯೊಳಗೆ ಬೀಳಿಸಲು!"ನೀವು ಏನೇನೋ ಮಾತಾಡಿದ್ರೆ ಕಿರುಚಿಕೊಳ್ತೀನಿ" ಎಚ್ಚರಿಕೆ ಮಾತುಗಳನ್ನು ಹೇಳಿ ಅವನನ್ನು ಇರಿಯುವಂತೆ ನೋಡಿದಳು."ಕ್ಷಮಿಸಿ ಬಿಡಿ" ಕೈಗಳೆರಡನ್ನು ಜೋಡಿಸಿದ."ದಯವಿಟ್ಟು ಶೋರ್‍‍ನೂರ್ ವರೆಗೆ ಆಸರೆ ನೀಡಿ""ಆಸರೇನಾ...? ನಾನಾ...? ಏನಿದು ಒಳ್ಳೆ ತಮಾಷೆಯಾಗಿದೆ?""ಹೌದು, ಆಸರೆ ನೀಡೀಂದೆ .... ನನಗಲ್ಲ......"ಅವನ ಮಾತಿನಲ್ಲಿ ತುಂಟತನವಿರಲಿಲ್ಲ. ಗಂಭೀರವಾಗಿಯೇ ಇದ್ದ."ಅಂದ್ರೆ?""ಅಂದ್ರೆ ಶೋರ್‍‍ನೂರ್ ಇಳಿದ ಕೂಡಲೇ ಹೇಳ್ತೀನಿ. ಅಲ್ಲಿಯವರೆಗೆ ನಾನು ನಿಮ್ಮ ಎದುರಿಗೆ ಕುಳಿತಿರ್‍ತೀನಿ""ನೀವು ಟಿಕೇಟ್ ಇಲ್ಲದೆ ಪ್ರಯಾಣಿಸ್ತಿದ್ದೀರಿ?" ಹುಬ್ಬುಗಳನ್ನು ಹತ್ತಿರ ತಂದು ಪ್ರಶ್ನಿಸಿದಳು."ಇಲ್ಲ" ಪರ್ಸಿನಿಂದ ಟಿಕೇಟ್ ತೆಗೆದು ತೋರಿಸಿದ. ಅವಳ ದೃಷ್ಟಿ ಟಿಕೇಟ್‍ನ ಮೇಲಿತ್ತು. ಬೋಗಿ ಸಂಖ್ಯೆ ಸಾಮಾನ್ಯ ನಾಲ್ಕು! ಅಂದರೆ ತನ್ನದೇ ಬೋಗಿಯಲ್ಲಿ ಟಿಕೇಟು ಖರೀದಿಸಿದ್ದಾನೆ!"ಮತ್ಯಾಕೆ ಟಿ.ಸಿ. ಬರುವಾಗ ಹಾರಿ ಹೋದ್ರಿ?""ಹಾರಿ ಹೋದ್ನಾ? ಇಲ್ಲಾ... ಇಲ್ಲೇ ಬಾಗಿಲ ಬಳಿ ನಿಂತಿದ್ದೆ" ಮುಖದಲ್ಲಿ ನಗು ತಂದುಕೊಂಡು ಹೇಳಿದ."ಉನ್ನಿಕೃಷ್ಣನ್, ಆ ದಾಂಡಿಗರೇಕೆ ನಿಮ್ಮನ್ನು ಹಿಂಬಾಲಿಸ್ಕೊಂಡು ಬಂದಿದ್ರು?""ದಾಂಡಿಗರು ನನ್ನ ಹಿಂಬಾಲಿಸಿ ಬಂದಿದ್ರಾ? ನಾನಾಗಿದ್ರೆ ನಿಮ್ಮನ್ನು ಹಿಂಬಾಲಿಸಿ ಕೊಂಡು ಬಂದಿದ್ದು ಹೌದು""ಯಾಕೆ?" ತಟ್ಟನೆ ಅವನ ಮಾತಿಗೆ ಪ್ರತಿಕ್ರಿಯಿಸಿದಳು."ಶೋರ್‍‍ನೂರ್‍‍ನಲ್ಲಿ ನನ್ನ ತಾತನಿಗೆ ಆಸ್ತಿಯಿದೆ""ಉನ್ನಿ ಕೃಷ್ಣನ್, ನೀವು ಮಾತು ಬೇರೆ ಕಡೆಗೆ ತಿರುಗಿಸ್ತೀದ್ದೀರಿ""ಇಲ್ಲ""ನೀವ್ಯಾಕೆ ನನ್ನ ಹಿಂದೆ ಬಿದ್ದೀದೀರಿ?""ಅದನ್ನೇ ಹೇಳ್ತಾ ಇದ್ದೆ. ನೀವು ತುಂಬಾ ಚೆಲುವೆ .... ನಿಮ್ಮ ಗುಂಗುರು ಕೂದಲು ನೋಡಿಯೇ ನೀವು ಮಲ್ಲು ಅಂದ್ಕೊಂಡೆ"ಅವನ ಮಾತು ಹಾದಿ ತಪ್ಪುತಿದೆಯೆನಿಸಿತು. ಮೂಗಿನ ಹೊಳ್ಳೆಗಳನ್ನು ಅರಳಿಸಿದಳು. ಆತ ನಾಲಗೆ ಕಚ್ಚಿಕೊಂಡ."ಕ್ಷಮಿಸಿ, ನೀವು ಮಲ್ಲು ತಾನೆ? ಅದಕ್ಕೆ ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದೀನಿ""ಏನೋ ವಿಚಿತ್ರವಾಗಿ ಮಾತನಾಡ್ತಾ ಇದ್ದೀರಿ. ನೇರವಾಗಿ ವಿಷಯ ಹೇಳ್ಬಿಡಿ""ನಿಮ್ಮ ಹೆಸ್ರು ಕೇಳಿಲ್ಲಾ?""ಸ್ವರ""ಬ್ಯೂಟಿಪುಲ್"ರೈಲು ಏಕಾಏಕಿ ನಿಂತಿತು.
"ಒಂದ್ನಿಮಿಷ ಇರಿ, ಬಂದೆ" ಎದ್ದು ಬಾಗಿಲ ಕಡೆಗೆ ಬಂದು ಇಣುಕಿದ.ಮತ್ತೊಮ್ಮೆ ಅತ್ತಿತ್ತ ದೃಷ್ಟಿ ಹೊರಳಿಸಿ ಅವಳ ಎದುರಿಗೆ ಬಂದು ಕುಳಿತ."ಸಿಗ್ನಲ್ ಸಿಕ್ಕಿಲ್ಲ. ಅದಕ್ಕೆ ನಿಂತು ಬಿಡ್ತು""ಮುಂದೆ ಇರೋದು ಯಾವ ಸ್ಟೇಷನ್?""ಓಹೋ.... ನಿಮಗೆ ಗೊತ್ತಾಗ್ಲಿಲ್ಲಾನ್ನಿ. ಅಂದ್ರೆ ನೀವು ಇಲ್ಲಿಗೆ ಬರೋದು ಅಪರೂಪಾನ್ನಿ""ಹೌದು, ವರ್ಷಕ್ಕೊಮ್ಮೆ ಬರೋದು" ಹೇಳಿ ತುಟಿ ಕಚ್ಚಿಕೊಂಡಳು. ಅವನ ಹತ್ತಿರ ಏನು ಖಾಸಗಿ ಮಾತು?"ಇನ್ನು ಬರೋದು ಶೋರ್‍‍ನೂರ್""ಶೋರ್‍‍ನೂರ್!" ಉದ್ಗರಿಸಿ ಪುಸ್ತಕವನ್ನು ಬ್ಯಾಗ್‍ಗೆ ಸೇರಿಸಿದಳು. ಸೂಟ್‍ಕೇಸ್‍ನ್ನು ಮುಂದಕ್ಕೆಳೆದು ಇಳಿಯಲು ತಯಾರಾದಳು.ಸಿಗ್ನಲ್ ಸಿಕ್ಕಿದಂತೆ ರೈಲು ಮೆಲ್ಲಗೆ ಚಲಿಸಲಾರಂಭಿಸಿತು.ಸ್ವರ ಬಾಗಿಲ ಬಳಿ ಬರುವಾಗ ಉನ್ನಿ ಕೃಷ್ಣನ್ ಇಳಿದು ಹೋಗಿದ್ದ!ನೆಮ್ಮದಿಯ ನಿಟ್ಟುಸಿರು ಬಿಟ್ಟವಳು, ರೈಲು ನಿಲ್ಲುತ್ತಲೇ ರೈಲ್ವೆ ಸ್ಟೇಷನ್‍ನಿಂದ ಹೊರಗೆ ಬಂದು ನಿಂತಳು.ಯಾವುದೋ ಅಟೋಗಳು ಖಾಲಿಯಾಗಿರಲಿಲ್ಲ. ಸ್ವಲ್ಪ ಮುಂದೆ ನಡೆದರೆ ಅಟೋ ಸ್ಟ್ಯಾಂಡ್ ಸಿಗಬಹುದೆಂದು ಹೆಜ್ಜೆ ಹಾಕಿದಳು.ಕಪ್ಪಗಿನ ಟಾರು ರಸ್ತೆ ಉದ್ದಕ್ಕೂ ಹರಡಿಕೊಂಡಿತ್ತು. ರೈಲ್ವೆ ಸ್ಟೇಷನ್‍ನಿಂದ ಒಂದೊಂದೆ ವಾಹನಗಳು ಹೊರಟು ಹೋಗುತ್ತಿದ್ದವು. ಸೂಟ್‍ಕೇಸು ಹಿಡಿದುಕೊಂಡು ನಡೆಯುವುದು ಪ್ರಯಾಸವೆನಿಸಿತು. ಒಂದು ಕ್ಷಣ ಸೂಟ್‍ಕೇಸ್‍ನ್ನು ಕೆಳಗಿಟ್ಟು ನಿಂತಳು."ಸ್ವರ...... ಸ್ವರ.... ಒಂದ್ನಿಮಿಷ ಇರಿ" ಉನ್ನಿಕೃಷ್ಣನ್ ಓಡಿ ಬರುತ್ತಿದ್ದ. ಏದುಸಿರು ಬಿಡುತ್ತಾ ನಿಂತ."ಏನು ಹುಡುಗೀರಿ ನೀವು. ಪಾರಿವಾಳದ ಹಾಗೇ ಹಾರಿ ಹೋಗ್ತಾ ಇದ್ದೀರಿ""ಮತ್ತಿನ್ನೇನು ಮಾಡ್ಬೇಕ್ಕಿತ್ತು?""ನಂಜೊತೆಗೆ ಬನ್ನಿ" ಅವನ ಮಾತು ಮುಗಿಯುವ ಮೊದಲೇ ಸಿಟ್ಟಿನ ನೋಟ ಬೀರಿದಳು. ಆತನ ಮುಖದಲ್ಲಿ ತುಂಟ ನಗುವಿತ್ತು. ಅವಳು ಸುತ್ತಲೂ ನೋಡಿದಳು."ನೀವೇನು ಹೆದರ್ಬೇಡಿ. ಇಲ್ಲಿಗ್ಯಾರು ಬರೋದಿಲ್ಲ. ಕಾಂಡೋಮ್ ಪ್ಯಾಕೇಟ್ ಇದೆ....." ಅವನ ಮಾತು ಮುಗಿಯುವ ಮೊದಲೇ ಭಯ ಸಿಟ್ಟಿನಿಂದ ಕಂಪಿಸುತ್ತಿದ್ದವಳ ಕೈ ಅವನ ಮುಖಕ್ಕೆ ತಟ್ಟಲಿದ್ದಾಗ ಅಟೋ ಬಂದು ನಿಂತಿತು.ಉನ್ನಿ ಕೃಷ್ಣನ್ ಹಿಂದು ಮುಂದು ನೋಡದೆ ಓಡಲಾರಂಭಿಸಿದ.ಸ್ವರ ಚೀಲಕ್ಕೆ ಕೈ ಹಾಕಿದಾಗ ಪ್ಯಾಕೇಟ್ ಸಿಕ್ಕಿತು. ಹೊರ ತೆಗೆದು ನೋಡಿದವಳಿಗೆ ಅಸಹ್ಯವೆನಿಸಿತು.ಕಾಂಡೋಮ್ ಪ್ಯಾಕೇಟ್!ಅಟೋದಿಂದ ಇಳಿದ ವ್ಯಕ್ತಿಗಳಿಬ್ಬರನ್ನೂ ಗುರುತಿಸಿದಳು. ರೈಲಿನಲ್ಲಿ ಕಂಡ ದಾಂಡಿಗರು!ಒಬ್ಬ ಕುಳ್ಳನೆಯ ದಪ್ಪ ತುಟಿಯ ಧಡಿಯಾ! ಇನ್ನೊಬ್ಬ ಎತ್ತರ ನಿಲುವಿನ ವ್ಯಕ್ತಿ!"ಹಕ್ಕಿ ನಿನ್ನ ರೇಟೆಷ್ಟು?" ಎತ್ತರ ನಿಲುವಿನ ವ್ಯಕ್ತಿ ಅವಳ ಕೈಯಲ್ಲಿದ್ದ ಪ್ಯಾಕೇಟ್‍ನ್ನು ಗಮನಿಸಿ ಕೇಳಿದ.ಸ್ವರ ಅದನ್ನು ಬೀಸಿ ಒಗೆದಳು."ಏ! ಅದೆಲ್ಲಾ ನಮಗೆ ಬೇಡ ಪೈರಾ. ಆ ಹುಡುಗ ಇವಳಿಗೆ ಏನಾದ್ರೂ ಕೊಟ್ನಾ ಕೇಳು""ಏಯ್ ಹುಡುಗಿ, ಆತ ಅಡ್ಡಾದಿಡ್ಡಿ ಓಡಿ ಹೋದ್ನಲ್ಲಾ, ನಿನಗೇನಾದ್ರೂ ಕೊಟ್ನಾ?"ಮೊದಲೇ ಬೆದರಿದವಳು ಇಲ್ಲವೆನ್ನುವಂತೆ ಗೋಣು ಆಡಿಸಿದಳು."ಆತ ಬಾರಿ ಚಾಲಾಕಿ ಹುಡುಗ. ಅವನೆಷ್ಟು ಚೆಲುವನೋ ಅಷ್ಟೇ ಬುದ್ಧಿಯೂ ಇದೆ. ಬಾ ಅವನನ್ನು ಹುಡುಕೋಣ"ಅವರಿಬ್ಬರೂ ಹೋದತ್ತಲೇ ನೋಡುತ್ತಾ ನಿಂತಳು.ಇಲ್ಲಿ ಹೆಚ್ಚು ಹೊತ್ತು ನಿಲ್ಲುವಂತಿಲ್ಲ. ಎರಡು ಹೆಜ್ಜೆ ನಡೆದಿದ್ದಳಷ್ಟೆ. ಎದುರಿಗೆ ಉನ್ನಿಕೃಷ್ಣನ್ ನಿಂತಿದ್ದ!"ಅದನ್ನ ಎಲ್ಲಿ ಹಾಕಿದ್ರಿ?" ಆತನ ಮುಖದಲ್ಲಿ ಗಾಬರಿಯಿತ್ತು.ಅವಳು ಪ್ಯಾಕೇಟ್ ಬಿದ್ದ ಕಡೆಗೊಮ್ಮೆ ನೋಡಿದಳು. ಆತ ತಟ್ಟನೆ ಹಾರಿ ಅದನ್ನು ಕೈಯಲ್ಲಿ ತೆಗೆದುಕೊಂಡ.
"ಕ್ಷಮಿಸಿ, ನೀವು ತಪ್ಪು ತಿಳ್ಕೊಂಡಿದ್ದೀರಿ. ಇದರಲ್ಲಿರೋದು ವಜ್ರದ ಬೆಂಡೋಲೆಗಳು. ಅದಕ್ಕಾಗಿಯೇ ಅವರಿಬ್ಬರೂ ನನ್ನನ್ನು ಮಂಗಳೂರಿನಿಂದ ಹಿಂಬಾಲಿಸಿಕೊಂಡು ಬಂದಿರೋದು. ಅವರಿಬ್ಬರೂ ದಾಯಾದಿಗಳು. ಅವರಿಗೆ ಈ ವಜ್ರದ ಓಲೆಗಳು ನನ್ನ ಬಳಿಯಿದೆಯೆಂದು ಗುಮಾನಿಯಿತ್ತು. ಈ ಬೆಂಡೋಲೆಗಳು ನನ್ನ ಅಜ್ಜಿಯ ಕಿವಿಯಲ್ಲಿದ್ದವುಗಳು. ತಾತನ ಆಸ್ತಿ. ಇದನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ರು. ಈ ವಿಷಯ ಗೊತ್ತಾಗಿ ಅದನ್ನು ಮಾರೋ ಪ್ರಯತ್ನ ಮಾಡಿದ್ರು. ತಾತ ಅದನ್ನು ಕೊಡ್ಲಿಲ್ಲ. ತಾತ ಅದರ ಜವಾಬ್ದಾರಿನ ನನಗೆ ವಹಿಸಿದ್ರು. ನಾನು ಅದನ್ನು ಬ್ಯಾಂಕ್ ಲಾಕರ್‍‍ನಲ್ಲಿಡೋದಿಕ್ಕೆ ತೆಗೆದಿದ್ದೆ. ಶೋರ್‍‍ನೂರ್ ನನ್ನ ತಾತನ ಮನೆ. ಅಲ್ಲಿಗೆ ಹೊರಟಿರೋ ನನ್ನ ಅವರಿಬ್ರೂ ಹಿಂಬಾಲಿಸಿದ್ರು. ಇನ್ನು ಬ್ಯಾಂಕ್‍ಗೆ ಹೋದ್ರೆ ಅವರುಗಳಿಗೆ ಸಂಶಯ ಬರುತ್ತೇಂತ ನಾನು ಮೆಡಿಕಲ್‍ನಿಂದ ಕಾಂಡೋಮ್ ತೆಗೆದುಕೊಂಡು ಆ ಪ್ಯಾಕೇಟ್‍ಲ್ಲಿ ಇದನ್ನು ಸೇರಿಸ್ದೆ. ಅವರಿಗೆ ನನ್ನ ಮೇಲೆ ಬಲವಾದ ಸಂಶಯ ಬಂದು ನನ್ನ ಹಿಂಬಾಲಿಸಿದ್ರು. ನಾನು ಓಡಿಕೊಂಡು ಬಂದು ಬಸ್ಸು ಹತ್ತಿದೆ. ನೀವು ಸಿಕ್ಕಿದ್ರಿ. ನಿಮ್ಮ ಹಿಂದೇನೆ ರೈಲ್ವೆ ಸ್ಟೇಷನ್‍ಗೆ ಬಂದು ಟಿಕೇಟ್‍ಗಾಗಿ ಸರದಿಯಲ್ಲಿ ನಿಂತಿದ್ದಾಗ ತಟ್ಟನೆ ನನಗೆ ಉಪಾಯ ಹೊಳೆಯಿತು. ಕಾಂಡೋಮ್‍ನ ಪ್ಯಾಕೇಟ್‍ನ್ನು ಮೆಲ್ಲನೆ ನಿಮ್ಮ ಕಪ್ಪು ಚರ್ಮದ ಚೀಲಕ್ಕೆ ಸೇರಿಸ್ದೆ. ಅದರಿಂದ ಅದು ಜೋಪಾನವಾಗಿ ಇಲ್ಲಿವರೆಗೂ ಬಂತು. ನಿಮಗೆ ಧ್ಯನವಾದಗಳು"ಅವಳು ಬಿಟ್ಟ ಕಣ್ಣು ಬಿಟ್ಟಂತೆ ನಿಂತಿದ್ದಳು. ವಜ್ರದ ಬೆಂಡೋಲೆಯ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ಅವಳ ಮುಖದ ಮೇಲೆ ಬಿದ್ದಾಗ ಎಚ್ಚೆತ್ತುಕೊಂಡಳು."ಸ್ವರ, ನಾನು ನಿಮಗೆ ಟ್ರೀಟ್ ಕೊಡ್ಬೇಕು ಬನ್ನಿ ನಂಜೊತೆ"ಅವನ ಮಾತಿಗೆ ಸ್ವರಳಿಗೆ ನಗು ಬಂತು. ಅವನನ್ನು ಅಪಾರ್ಥ ಮಾಡಿಕೊಂಡಿದ್ದಕ್ಕಾಗಿ ನೊಂದು ಕೊಂಡಳು."ಉನ್ನಿ ಕೃಷ್ಣನ್, ನನ್ನ ಕ್ಷಮಿಸಿ ಬಿಡಿ. ಇನ್ನೂ ನಿಮಗೆ ಅಪಾಯ ತಪ್ಪಿದ್ದಲ್ಲ""ಅದನ್ನು ನಾನು ನಿಭಾಯಿಸ್ತೀನಿ. ಪೊಲೀಸ್ ಠಾಣೆಯವರೆಗೂ ಸುದ್ದಿ ತಲುಪಿಸಿದ್ದೀನಿ"ವಜ್ರಗಳಿದ್ದ ಪ್ಯಾಕೆಟನ್ನು ಕಿಸೆಗೆ ತೂರಿಸಿಕೊಂಡ.ಪಕ್ಕದಲ್ಲಿದ್ದ ತಂಪು ಪಾನೀಯದ ಅಂಗಡಿಯ ಕಡೆಗೆ ಅವಳ ಜೊತೆಗೆ ಹೆಜ್ಜೆ ಹಾಕಿದ.

Read more!

Tuesday, November 11, 2008

ಖಂಡಿತಾ ಮನುಷ್ಯರನ್ನು ನಂಬಬಹುದು!


ಮನುಷ್ಯನ ಜೀವನದ ಪಯಣದಲ್ಲಿ ಎದುರಾಗುವ, ಎದುರಿಸುವ ನೋವು, ನಲಿವುಗಳ ಮತ್ತು ಅವುಗಳಿಗೊಂದು ಸೂಕ್ಷವಾದ ಪರಿಹಾರವನ್ನು ಕೊಡುವ ಪರಿಶುದ್ಧ ಕಥೆಗಳ ಒಂದು ಪ್ರಾಮಾಣಿಕ ಪ್ರಯತ್ನ ಬಿ. ರಮೇಶ ಭಟ್ಟರ `ಮನುಷ್ಯರನ್ನು ನಂಬಬಹುದು'. ಶಿರೋನಾಮೆಯೆ ಸೂಚಿಸುವಂತೆ ಇಲ್ಲಿಯ ಕಥೆಗಳೆಲ್ಲ ಮನುಷ್ಯ ಸಂಬಂಧಗಳ ಎಳೆಯನ್ನು ಹಿಡಿದು ಸಾಗುವಂಥವುಗಳು. ಬಹಳ ಆತ್ಮೀಯವಾಗಿ ಬಿಡುವ, ನಿನ್ನೆ ಮೊನ್ನೆಯೆಲ್ಲೋ ಕಂಡಂತೆ, ಕೇಳಿದಂತೆ, ಅವು ನಮ್ಮನ್ನು ಆವರಿಸುತ್ತವೆ. ಅಲ್ಲಿಯ ಪಾತ್ರಗಳು ನಿಜಕ್ಕೂ ಜೀವಂತ ಮತ್ತು ನಮಗೆ ಪರಿಚಿತ ಅನ್ನುವಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ. `ಯಾರನ್ನೂ ನಂಬಬಾರದು' ಅಂದುಕೊಳ್ಳುತ್ತಲೇ ನಾವು ಎಲ್ಲರನ್ನೂ ನಂಬುತ್ತೇವೆ ಮತ್ತು ನಂಬಲೇ ಬೇಕಾಗುತ್ತದೆ, ಇಲ್ಲಿಯ ಕಥೆಗಳ ಹಾಗೆ.
ಸಂಕಲನದ ಮೊದಲ ಕಥೆ `ಮನುಷ್ಯರನ್ನು ನಂಬಬಹುದು', ಒಬ್ಬ ಮನುಷ್ಯನಿಗೆ, ಒಂದು ಅಪರಿಚಿತ ಸ್ಥಳದಲ್ಲಿ ತನ್ನ ಮುಂದಿನ ಪ್ರಯಾಣಕ್ಕೆ ಅನಾನುಕೂಲವಾಗಿ ಅಲ್ಲಿ ಆತನಿಗೆ ಎದುರಾಗುವ ಪರಿಸ್ಥಿತಿಯನ್ನು ಈ ಕಥೆ ಚಿತ್ರಿಸುತ್ತದೆ. ಅಸಾಹಯಕ ಮನುಷ್ಯ ಗಮ್ಯ ತಲುಪುವಲ್ಲಿ ಅವನಿಗಿರುವ ಆತಂಕ ಮತ್ತು ಆ ಸಮಯದಲ್ಲಿ ಯಾವುದೋ ದೂರದ ಸಂಬಂಧವೊಂದನ್ನು ಹೇಳಿಕೊಂಡು ಸಹಾಯ ಯಾಚಿಸುವ ಸ್ಥಿತಿ, ಅನಾಥರಾಗುವ ಪ್ರಜ್ಞೆ, ಯಾರಾದರೂ ಸಹಾಯ ಮಾಡಿಯಾರೆಂಬ ಧನಾತ್ಮಕ ಚಿಂತನೆ, ಹಾಲಾಡಿಯ ಉಡುಪರ ಮೂಲಕ ತೆರೆದುಕೊಳ್ಳುತ್ತದೆ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಶ್ರೀನಿವಾಸ, ಸಹಾಯವನ್ನು ನಿರಾಕರಿಸುವಾಗ ಕಥಾ ನಾಯಕ, ಮನುಷ್ಯ ಮನುಷ್ಯರನ್ನು ನಂಬಲಿಕ್ಕಾಗದ ಕಾಲದಲ್ಲೂ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಮುಂದೆ ಉಡುಪರು ಅವನಿಂದ ಪಡೆದ ಎಲ್ಲಾ ಸಹಾಯವನ್ನೂ ಪದೇ ಪದೇ ನೆನಪಿಸಿಕೊಳ್ಳುವ ಮೂಲಕ ಮನುಷ್ಯ ಮನುಷ್ಯನನ್ನು ನಂಬಬಹುದು ಅನ್ನುವುದನ್ನು ದೃಢಪಡಿಸುತ್ತಾರೆ.
ನಾವು ಒಳ್ಳೆಯದು ಅಂದುಕೊಂಡು ಆರಂಭಿಸಿದರೆ ಎಲ್ಲವೂ ಒಳ್ಳೆಯದು; ಕೆಟ್ಟದಾದರೆ ಎಲ್ಲವೂ ಕೆಟ್ಟದ್ದೇ ಅನ್ನುವ ಹಾಗೆ ಮನುಷ್ಯನ ಆಂತರ್ಯದಲ್ಲಿ ಮೊಳೆತ ಒಂದು ನಿರ್ಧಾರ ಮುಂದೆ ಬದಲಾಗುವುದು ತನ್ನ ನಂಬಿಕೆಯಿಂದ ಮತ್ತು ಧನಾತ್ಮಕ ಚಿಂತನೆಯಿಂದ ಎನ್ನುವುದನ್ನು ಸಾಬೀತುಪಡಿಸುವ ಕಥೆ `ಜೋಯಿಸರ ಕುರ್ಚಿ'. ಜೋಯಿಸರಿಂದ ನಿಮಿತ್ಯ ಕೇಳಲು ಬರುವ ಜನರಿಗೆ ಅವರ ಕುರ್ಚಿಯ ಮೇಲಿರುವ ಗೌರವ ಮತ್ತು ಆ ಕುರ್ಚಿಯಲ್ಲಿ ಕುಳಿತು ಹೇಳುವವನ ಮಾತು ಎಲ್ಲವೂ ಗೌರವಕ್ಕೆ ಪಾತ್ರವಾದವುಗಳು. ದೂರದ ಊರಿನಿಂದ ಬರುವ ಹೆಂಗಸಿಗೆ, ಜೋಯಿಸರು ಮನೆಯಲ್ಲಿಲ್ಲದ ಸಮಯದಲ್ಲಿ ಕಥಾನಾಯಕನೇ ನಿಮಿತ್ಯವನ್ನು ಹೇಳುತ್ತಾನೆ. ಅವನಿಗೆ ಆ ಹೆಂಗಸಿನ ಪೂರ್ವಾಪರ ತಿಳಿದುಕೊಂಡು, ಅವನು ಹೇಳುವ ನಿಮಿತ್ಯ ಮುಂದೆ ಆ ಹೆಂಗಸಿನ ಸವತಿಯ ಮಗಳ ಬಾಳನ್ನು ಹಸನುಗೊಳಿಸುತ್ತದೆ. ಹೆಣ್ಣಿನ ಹೃದಯವಿದ್ರಾವಕ, ಕಠಿಣ ಪರಿಸ್ಥಿತಿಯನ್ನು ಜಾಣ್ಮೆಯಿಂದ ಪರಿಹರಿಸಿ, ಮುಂದೊಂದು ದಿನ ಅದೇ ಹುಡುಗಿ ಮೈಕೈ ತುಂಬಿಕೊಂಡು, ಸಾಕ್ಷಾತ್ ಲಕ್ಷ್ಮೀಯೇ ಬಂದಂತೆ ಅವನಲ್ಲಿ ತನ್ನ ಕಷ್ಟದ ದಿನಗಳು ದೂರವಾದುದನ್ನು ಹೇಳುತ್ತಾಳೆ. ಇದೊಂದು ಸಂಕಲನದ ಉತ್ತಮ ಕಥೆ ಮತ್ತು ಇದು ಓದುಗರ ಕಣ್ಣಲ್ಲಿ ಒಂದೆರಡು ಹನಿ ಹನಿಸಿದರೂ ಹೆಚ್ಚಲ್ಲ.
ಕತ್ತಲೆಯ ಕೊನೆಯಲ್ಲಿ ಬೆಳಕಿನ ರೇಖೆ ಇದ್ದೇ ಇರುತ್ತದೆಯೆನ್ನುವಂತೆ ತನ್ನ ಸಮಸ್ಯೆಗೂ ಒಂದು ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಿಂದ ಬರುವ ಕೃಷ್ಣಯ್ಯ, ತನ್ನ ಸಹಪಾಠಿ, ಪ್ರಾಣದ ಗೆಳೆಯನನ್ನು ಹುಡುಕಿಕೊಂಡು ಬರುವಾಗ ವಿಧಿ ಲಿಖಿತ ಬೇರೆಯೇ ಇರುತ್ತದೆ. ಗೆಳೆಯ ಪಾರ್ಶ್ವವಾಯು ಪೀಡಿತನಾಗಿ ಮಲಗಿದಲ್ಲಿಯೇ ಇರುವಾಗ ಅವನನ್ನು ಕೇಳಲು ಮನಸ್ಸಾಗದೆ ಹಿಂದಿರುಗಬೇಕೆನ್ನುವಾಗ ಅವರಿಬ್ಬರ ಬಾಲ್ಯದ ಘಟನೆಗಳನ್ನು ಹೇಳಲು ಅವನ ಮಕ್ಕಳೇ ಒತ್ತಾಯಿಸುತ್ತಾರೆ. ಹೀಗೆ ಸುಧಾಮನ (ಇಲ್ಲಿ ಶ್ರೀಮಂತ) ಮನೆಗೆ ಕೃಷ್ಣಯ್ಯ ಬರುವಾಗ ಬಾಲ್ಯದ ಗೆಳತನದಿಂದ ಅವನ ಬದುಕು ಮತ್ತೆ ಚಿಗುರುತ್ತದೆ. ಇದು `ಅಂಟಿನ ನೆಂಟಿನ ಕೊನೆ ಬಲ್ಲವರಾರೆ?' ಕಥೆ.
`ಕುಶಾವರ್ತ' ಒಂದು ತಪ್ಪಿನಿಂದ ಕೈ ಸೋತ ರಾಮಚಂದ್ರರು, ತಮ್ಮ ಮಡದಿಯ ಜೊತೆಗೆ ಕುಶಾವರ್ತಕ್ಕೆ ಬಂದು ಬದುಕು ಸಾಕು ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ತಾವು ಹಿಂದೊಮ್ಮೆ ಸಹಾಯ ಮಾಡಿದ್ದ ಪೇಪರ್ ಹಾಕುವ ಹುಡುಗನೇ ಅಲ್ಲಿ ಅವರನ್ನು ಕಂಡು ಆನಂದತುಂದಿಲನಾಗಿ ಅವರನ್ನು ಆದರಿಸುತ್ತಾನೆ. ಆಗ ಅವರ ಮುಖದಲ್ಲಿ ಹೊಸಕಳೆ ಜಿಗಿತು, ಬದುಕುವ ದಾರಿ ತುಂಬಾ ಇವೆ ಅನ್ನುವ ಅರಿವು ಮೂಡುತ್ತದೆ. ಹೇಗೋ ಬದುಕುತ್ತಿದ್ದ ಹುಡುಗ; ಈಗ ಇಷ್ಟು ಎತ್ತರಕ್ಕೆ ಏರಿರುವಾಗ, ತನಗೂ ಸಾಧ್ಯವಿಲ್ಲವೇ ಅನ್ನುವ ಜ್ಞಾನೋದಯವಾಗುತ್ತದೆ.
ಎರಡು ಸಂಸಾರಗಳ ಪ್ರೀತಿಧಾರೆಯ ನಡುವೆ, ವಿರಹದ ಬೇಗೆಯಲ್ಲಿ ಮಿಂದು ಮತ್ತೆ ಒಬ್ಬರಿಗೊಬ್ಬರು ಎದುರಾಗುವ ಪ್ರೇಮಿಗಳ ಸುತ್ತಾ `ಒಂದು ಪ್ರೇಮದ ಕಥೆ'. ಎಷ್ಟೋ ವರ್ಷಗಳ ಬಳಿಕ ಭೇಟಿಯಾದರೂ ತಮ್ಮ ಪ್ರೀತಿಯನ್ನು ಗೌರವದಿಂದಲೇ ಕಾಣುವ, ಆ ಪರಿಧಿಯಿಂದ ಹೊರಗೆ ಬಂದು ವಾಸ್ತವತೆಯನ್ನು ನೆಚ್ಚಿಕೊಂಡು, ಅಳುಕಿಲ್ಲದೆ, ಮುಚ್ಚುಮರೆಯಿಲ್ಲದೆ ತಿಳಿ ನಗುವಿನಿಂದಲೇ ಪರಿಸ್ಥಿತಿಯನ್ನು ಹದಗೊಳಿಸುವ ಸುಂದರ ಕಥೆ. ಕಳೆದು ಹೋದುದಕ್ಕಾಗಿ ಪರಿತಪಿಸುವುದಿಲ್ಲ. ಆದರೆ ಓದುಗನ ಮನಸ್ಸಿನಲ್ಲಿ ಆ ಭಾವನೆಯನ್ನು ಬಲವಾಗಿ ನಾಟುವಂತೆ ನಿರೂಪಿಸಿರುವ ಇದೊಂದು ಅಪರೂಪದ ಕಥೆ.
ಮನೆಯಲ್ಲಿರುವ ಮುದುಕಿಯರಿಬ್ಬರ ಮನಸ್ಸಮಾಧಾನಕ್ಕಾಗಿ ಮಗನನ್ನು ಕಳೆದುಕೊಂಡ ಸೊಮಯಾಜಿಗಳು ದೆಹಲಿಗೆ ಹೊರಟು, ಅಲ್ಲಿ ತಮ್ಮ ಕೆಲಸ ಕೈಗೂಡದೆ ನಿರಾಶರಾಗಿ ಹಿಂತಿರುಗುತ್ತಾರೆ. ಆ ಸಮಯದಲ್ಲಿ ರೈಲಿನಲ್ಲಿ ತನ್ನ ಬದುಕಿಗೆ ಅಂತ್ಯ ಬರೆಯಲು ಹೊರಟ ಕೈಗೂಸಿರುವ ಹೆಣ್ಣನ್ನು ತಡೆದು, ಆಕೆಯ ಕಥೆ ಕೇಳಿ ಸಹಾಯಕ್ಕೆ ಮುಂದಾಗುತ್ತಾರೆ. ಹಣದ ದಾಹದಲ್ಲಿ ಮುಳುಗಿದ ತನ್ನ ಗಂಡನಿಂದ ಹೊರಬರಲಾಗದ ಹೆಣ್ಣು, ಆತ್ಮಹತ್ಯೆಗೆ ಮುಂದಾಗುತ್ತಾಳೆ. ಇದನ್ನೆಲ್ಲಾ ತಿಳಿದುಕೊಂಡ ಸೊಮಯಾಜಿಯಾವರು ಆ ಮುತೈದೆ ಹೆಣ್ಣನ್ನು, ಮುದಿ ಜೀವಿಗಳ ನೆಮ್ಮದಿಗಾಗಿ ವಿಧವೆ ಸೊಸೆಯಾಗಿ ಬರುವಂತೆ ಕೇಳುವ `ಏನೋ ತೀಡಲು ಏನೋ ತಾಗೀತು' ಮನಕಲಕುವ ಕಥೆಯಾಗಿದೆ.
`ಒಂದು ಪ್ರೇಮದ ಕಥೆ'ಯಂತೆಯೆ ಕಾಲಘಟ್ಟದಲ್ಲಿ ಹುದುಗಿ ಹೋಗುವ ಪ್ರೀತಿಯ ಸಂಘರ್ಷಕ್ಕೆ, ಅಸಹಾಯಕತೆಗೆ ಬದುಕನ್ನೇ ಪಣತೊಟ್ಟು ಸುಗಮ ದಾರಿಯನ್ನು ಕಂಡುಕೊಳ್ಳುವ ನಾಯಕ ಮುಂದೊಂದು ದಿನ ತಾನು ಪ್ರೀತಿಸಿದ ಹೆಣ್ಣು ಎದುರಾದಾಗ ಅನೂಹ್ಯವಾದ ಬೆಳಕು ಆಕೆಯ ಕಣ್ಣುಗಳಲ್ಲಿ ಬೆಳಗುತ್ತದೆ. ಆ ಬೆಳಕಿನಲ್ಲಿ ಸಾವಿರ ಅರ್ಥಗಳು ಕಂಡರೂ, ತನ್ನ ಉದ್ವೇಗವನ್ನು ತಡೆದುಕೊಳ್ಳುವ ನಾಯಕ ತಾನು ಎತ್ತರಕ್ಕೆ ಏರಿದ ಕಾರಣಗಳನ್ನು ಬಿಚ್ಚಿಡುವ ಕಥೆ `ಸಮಾಗಮ'.
ತಾನು ಮದುವೆಯಾಗುವುದು ಎರಡನೆ ಸಂಬಂಧವೆಂದು ತಿಳಿದೂ, ಕೈ ಹಿಡಿಯುವವನ ಬಗ್ಗೆಯೂ ತಿಳಿದ ಪಾರ್ವತಿ, ಅವನ ಮನಸ್ಸಿನೊಳಗೆ ಉಳಿದು ಹೋದ ನೋವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಮುಂದೊಂದು ದಿನ ಅವನ ಕೊರಗನ್ನು ತಿಳಿದುಕೊಂಡು ಅದಕ್ಕೆ ಕಾರಣವನ್ನೂ ತಿಳಿದುಕೊಳ್ಳಲು ಹಂಬಲಿಸುತ್ತಾಳೆ. ಸತ್ಯ ಬೇರೆಯೇ ಇರುತ್ತದೆ. ಅವಳು ತಿಳಿದುಕೊಂಡಂತೆ ಗೆಳಯನ ಜೊತೆಗೆ ಓಡಿ ಹೋದ ಮೊದಲ ಹೆಂಡತಿಯನ್ನು ನೆನೆಯದೆ ಅವಳಿಂದ ತನ್ನ ರಕ್ತ ಹಂಚಿಕೊಂಡ ಮಗುವನ್ನು ನೆನೆದು ವೇದನೆಪಡುತ್ತಾನೆ. ಪಾರ್ವತಿಗೆ ಸತ್ಯದ ಅರಿವಾಗಿ ಮನಸ್ಸಿನೊಳಗೆ ಅಡಗಿದ, ಎಲ್ಲೂ ತೋರಗೊಡದ ಮಾತ್ಸರ್ಯ ಕರಗಿ ಜೀವನೋತ್ಸಾಹ ಮೂಡುತ್ತದೆ `ಮರದೊಳಡಗಿದ ಬೆಂಕಿ'ಯ ಹಾಗೆ. ನಂಬಿಕೆಗೆ ಅರ್ಹನಾದ, ಒಂದು ಕಾಲದಲ್ಲಿ ಎಲ್ಲರಿಂದಲೂ ಅಯೋಗ್ಯ ಅನಿಸಿಕೊಂಡವನು ಪ್ರತೀಕಾರ ತಿರಿಸಿಕೊಳ್ಳಲು ಬರುತ್ತಾನಾದರೂ, ಅಂತಹ ಸನ್ನಿವೇಶವನ್ನು ಸೃಷ್ಟಿಸಿಕೊಂಡರೂ, ತನ್ನ ಸೇಡಿನ ವಿಷಯವನ್ನು ತಾನು ಪ್ರೀತಿಸಿದ ಹುಡುಗಿಯ ಜೊತೆಗೆ ಹೇಳಿಕೊಳ್ಳುತ್ತಾನೆ. ಅವನ ಸೇಡನ್ನು ಅರಿಯದ ಅವಳು ಬೆದರುತ್ತಾಳೆ. ಕೆಟ್ಟವನಲ್ಲದಿದ್ದರೂ, ಅಂತಹ ಹಣೆಪಟ್ಟಿಯನ್ನು ಕಟ್ಟಿಕೊಂಡು ಬದುಕಿನಲ್ಲಿ ಸ್ಥಾನ ಮಾನ ಪಡೆದುಕೊಂಡಾಗ ದೂರಿದ ಜನರೇ ಆದರಿಸುತ್ತಾರೆ. ನೋವುಗಳಿದ್ದರೂ ಸೇಡು ತೀರಿಸಿಕೊಳ್ಳುವ ತುಡಿತವಿದ್ದರೂ ಕೊನೆಗೆ ತನ್ನ ಮನುಷ್ಯತ್ವವನ್ನು ತೋರಿಸುವ ಸುಂದರ ಕಥೆ `ಕೆಂಡ ತುಳಿದವನು'.
`ಅಸಂಬದ್ಧ' ಕಥೆಯಲ್ಲಿ ತಾನು ಬಯಸಿದ ಪ್ರೀತಿಗಾಗಿ ಹಂಬಲಿಸಿ, ಆ ಪ್ರೀತಿ ಮುಂದೆ ಅನಾವರಣಗೊಂಡರೂ ತನ್ನ ನಿರ್ಲಕ್ಷ್ಯದಿಂದ ಶರ್ಮಿಳೆಗೆ ಅದು ದಕ್ಕದೆ ಹೋಗುತ್ತದೆ. ಸಮಾಜದ ಕಟ್ಟು ಕಟ್ಟಳೆಗಳೆಂಬ ಬಂಧನದೊಳಗೆ ಸಿಲುಕಿ, ಸ್ವತಂತ್ರವಾಗಿ ಬದುಕಲು ಹವಣಿಸುವ, ಬದುಕಲಾರದೆ ಚಡಪಡಿಸುವ ಹೆಣ್ಣಿನ ಸುತ್ತಾ ಹೆಣೆದ `ಚಾಚು ಕೈಗಳ ದಾಟು'. ತನ್ನ ಅಂತರಂಗದಲ್ಲಿ ಭುಗಿಲೆದ್ದ ಭಾವನೆಗಳನ್ನು ಪ್ರಶ್ನಿಸುತ್ತಾ, ಉತ್ತರ ಹುಡುಕುತ್ತಾ, ತಾನು ಪ್ರೀತಿಸಿದ ಹುಡುಗನ ಮುಂದೆ ಹೇಳುವ ಕಥೆ.ತಾಯಿಯಾಗಲಿ ಅಥವಾ ಸಂಗಾತಿಯಾಗಲಿ; ಒಂದು ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಂಡಿರುವ ಮಗ, ಆತ ತೆಗೆದುಕೊಂಡ ನಿರ್ಧಾರಗಳು ಸಮಾಜಕ್ಕೆ ವಿರುದ್ಧವಾದರೂ, ಅದೆಲ್ಲವನ್ನೂ ಅರ್ಥಮಾಡಿಕೊಂಡು ಹೊಸ ಕ್ರಾಂತಿಗೆ ನಾಂದಿಹಾಡುವ ತಾಯಿಯೊಬ್ಬಳ ಅಂತರಂಗದಲ್ಲಿ ಅಡಗಿದ `ಅಪೂರ್ವ ರಾಗಗಳು' ಕಥೆಯಾಗಿ ಮೂಡಿವೆ.
ಈ ಸಂಕಲನದ ಒಂದು ಅಪರೂಪದ ಮತ್ತು ಅತ್ಯುತ್ತಮ ಕಥೆ `ನಿಗೂಢ'. ವಿಭಿನ್ನ ಕಥಾಹಂದರವಿರುವ ಈ ಕಥೆ ಅನೇಕ ಕೌತುಕಗಳನ್ನು ತಿಳಿಸುತ್ತಾ, ಹೊಸತನ್ನು ಬಿಚ್ಚಿಡುತ್ತಾ, ಏನೋ ಇದೆ ಅನ್ನುವಾಗ `ನಿಗೂಢ'ವನ್ನು ಅನಾವರಣಗೊಳಿಸುತ್ತದೆ. ಮದುವೆಯಾಗಿ ಎರಡೇ ದಿನಕ್ಕೆ ವಿಧವೆಯಾಗುವ ನಾಯಕಿ, ತನ್ನನ್ನು ಅಗಾಧವಾಗಿ ಪ್ರೀತಿಸಿದ ನಾಯಕನ ಜೊತೆಗೆ ತನ್ನ ಗಂಡನ ಸಾವಿನ ಹಿಂದಿರುವ ನಿಗೂಢತೆಯನ್ನು ತಿಳಿಸುತ್ತಾಳೆ. ಅವಳು ಹೇಳಿದ ಸತ್ಯ ವಾಸ್ತವತೆಗೆ ಹಿಡಿದ ಕನ್ನಡಿಯಂತೆ ಇದೆ. ಮುಂದೇನೋ ಇದೆ ಅನ್ನುವ ಕುತೂಹಲವಿರುವ ಈ ಕಥೆಯನ್ನು ಓದಿಯೇ ತಿಳಿಯಬೇಕು.
ನಾಯಕ ತನ್ನ ಪ್ರೀತಿಯನ್ನು ತೆರೆದಿಟ್ಟರೂ, ಒಂದೊಮ್ಮೆ ಅವನಿಂದ ಸಾಂತ್ವನ ಬಯಸಿದ ಹೆಣ್ಣು ಕೊನೆಗೆ ಅವನ ಬಡತನವನ್ನು ಎತ್ತಿ ತೋರಿಸಿ ಅವನನ್ನು ನಿರಾಕರಿಸುವ ಕಥೆ `ಹೇಳದೇ ಉಳಿದದ್ದು'. `ಮತ್ತೆ ಬಾರದೆ ಶ್ರಾವಣ'ದಲ್ಲಿ ಎಷ್ಟೋ ವರ್ಷಗಳಿಂದ ಮುರಿದು ಬಿದ್ದಿದ್ದ ತನ್ನ ಗಂಡನೊಂದಿಗಿನ ಸಂಬಂಧ ಮತ್ತೆ ಚಿಗುರಿಕೊಳ್ಳುವ ಹೆಣ್ಣಿನ ಬಾಳಿನ ಚಿತ್ರಣವಿದೆ.
`ಸುಮ್ಮನೆ' ಕಥೆ ಬರೀ ಸುಮ್ಮನೆಯಲ್ಲ. ಆಳವಾದ ಅರ್ಥವಿರುವ ಒಂದು ಅತ್ಯುತ್ತಮ ಕಥೆ. ಒಂದೊಮ್ಮೆ ತಾನು ವಾಸವಾಗಿದ್ದ ಮನೆಯ ಉನ್ನತಿಯನ್ನು ಕಂಡು ಸಂತೋಷ ಪಡುವ ಮುದಿ ಜೀವದ ಸಂತೃಪ್ತ ಮಾತುಗಳ ಹಂದರವಿರುವ ಕಥೆಯಿದು. ಸಣ್ಣ ಕಥೆಯಾದರೂ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಓದುಗರಲ್ಲಿ ಅನುಕಂಪವನ್ನು ಹುಟ್ಟಿಸುತ್ತದೆ.
ಶಾಂತರಾಮ ಸೋಮಯಾಜಿಯವರ ಹುಮ್ಮಸ್ಸಿನ ಮುನ್ನುಡಿ ಮತ್ತು ವಸುಧೇಂದ್ರ ಅವರ ತೂಕದ ಬೆನ್ನುಡಿಯಿರುವ ಈ ಪುಸ್ತಕಕ್ಕೆ ಅಪಾರ ಅವರ ಆಕರ್ಷಕ ಮುಖಪುಟವಿದೆ.
ಈ ಪುಸ್ತಕವನ್ನು ಸುಹಾಸಂ, `ವಾಗ್ದೇವಿ', ಹಯಗ್ರೀವ ನಗರ, ಉಡುಪಿ ಇವರು ಪ್ರಕಟಿಸಿದ್ದಾರೆ. ಬೆಲೆ ರೂ. ೬೦/-

Read more!

Tuesday, November 4, 2008

ಐವತ್ತನೆ ಕಥೆ


ರಾತ್ರಿಯ ನೀರವತೆಯನ್ನೂ ಮೀರಿ ಕೇಳುವ ಸಮುದ್ರದ ಬೋರ್ಗರೆತದ ಸದ್ದು, ಟಾರಸಿಯ ಮೇಲೆ ಕುಳಿರ್ಗಾಳಿಗೆ ಮೈ ಚೆಲ್ಲಿ ಕುಳಿತಿದ್ದವನನ್ನು ಎತ್ತಿ ಒಗೆದಂತಾಯಿತು. ಗೋಧಿ ಹಿಟ್ಟಿನ ಬಣ್ಣದ ಮರಳ ದಂಡೆಯ ಮೇಲೆ ಕಣ್ಣುಗಳು ಏಕಾಏಕಿ ಸರಿದಾಡಿ ಗಾಳಿಮರದ ತೋಪಿನ ಕಡೆಗೆ ಅಚಲವಾಗಿ ನಿಂತಿತು.ಕುರ್ಚಿಯ ಅಂಚಿಗೆ ಹಿಡಿದಿದ್ದ ಅಟ್ಟೆಯ ಜೊತೆಗಿದ್ದ ಕಾಗದಗಳು ಹಾರಿ ಟಾರಸಿಯ ಮೇಲೆ ಬಿದ್ದಾಗ, ಪೆನ್ನು ಜೇಬಿಗೆ ಸೇರಿಸಿ ಎದ್ದ. ಖಾಲಿ ಹಾಳೆಗಳು ಗಾಳಿಯ ಜೊತೆಗೆ ಬೆರೆತು ಅಣಕಿಸಿದಂತಾಯಿತು.ಮುಂಬೈನ ಕಪ್ಪು ಮರಳ ತೀರ, ಕಲುಷಿತ ನೀರಿನ ಸಮುದ್ರ, ಬರೆಯುವ ಉತ್ಸಾಹವನ್ನು ಜರ್ರನೆ ಇಳಿಸಿತ್ತು. ಬಂಡೆಯ ಮೇಲೆ ಕುಳಿತು ನೀರಿಗೆ ಕಾಲು ಇಳಿಸಿದ್ದ ತನುಹಾ ಚೀರಿದ್ದಳು."ನನ್ನಂತ ಒಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳದ ನೀನು ಒಂದಲ್ಲ ಒಂದು ದಿನ ಯಾರಿಗೂ ಗೊತ್ತಾಗದ ಹಾಗೆ ಸತ್ತು ಹೋಗ್ತೀಯಾ. ಆಗ ನಿಂಗಾಗಿ ಅಳೋರು ಯಾರು ಇರೋದಿಲ್ಲ ಸಮೀರ. ಬರಿ... ಇಡೀ ದಿನ ಬರಿತಾನೆ ಇರು... ನಿನ್ನ ಕಥೆ"ಎಲ್ಲಿಂದಲೋ ಹಾರಿ ಬಂದ ದೈತ್ಯ ಅಲೆಯೊಂದು ಬಂಡೆಯ ಮೇಲಿದ್ದವಳನ್ನು ಸೆಳೆದೊಯ್ದಿತ್ತು!"ಆ ಕಥೆಗಾರನ ಜೊತೆಗೆ ಸುತ್ತಾಡ್ತಾ ಇದ್ಲು. ಅವಳ ಸಾವು ಅಸಹಜಾಂತ್ಲೆ ಬರ್ದು ಬಿಡಿ"ಪತ್ರಿಕೆಯ ಪ್ರತಿನಿಧಿಗಳ ಮುಂದೆ ತೋಡಿಕೊಂಡಿದ್ದ ತನುಹಾಳ ಚಿಕ್ಕಪ್ಪ ಬಿಷನ್‍ಲಾಲ್.ನೆನಪುಗಳನ್ನು ಕೊಡವಿ ಕೆಳಗೆ ಬಿದ್ದ ಹಾಳೆಗಳನ್ನೆಲ್ಲಾ ಜೋಡಿಸಿ ಅಟ್ಟೆಯ ಕ್ಲಿಪ್‍ಗೆ ಸೇರಿಸಿದ.ಶುಭ್ರ ನೀಲಿಯ ಆಕಾಶದಲ್ಲಿ ಇದ್ದೂ ಇಲ್ಲದಂತಿದ್ದ ಚಂದಿರನ ಬೆಳಕು ಹರಡಿದ್ದ ಸಮುದ್ರ ದಂಡೆಯತ್ತ ದೃಷ್ಟಿ ಹೊರಳಿಸಿದ.ಇನ್ನೊಂದೆರಡು ಗಂಟೆಯಲ್ಲಿ ಸಮುದ್ರ ಶಾಂತವಾಗುವುದೆಂದು ತಿಳಿದಿತ್ತು. ಟಾರಸಿಯಿಂದ ಇಳಿದು ಹಜಾರಕ್ಕೆ ಬಂದ.ಮುಂಬಾಗಿಲನ್ನು ಸರಿಸಿ ಹೊರಗೆ ಇಣುಕು ಹಾಕಿದ. ಮನೆಯ ಸುತ್ತಾ ಎರಡಾಳಿನ ಎತ್ತರಕ್ಕೂ ಬೆಳೆದಿದ್ದ ಒರಟು ಹುಲ್ಲಿನ ಗರಿಗಳು ಗಾಳಿಗೆ ಕಿಚಾಯಿಸುವಂತೆ ಸದ್ದು ಮಾಡಿದವು. ಅವುಗಳ ನಡುವೆಯಿದ್ದ ಕಾಲುದಾರಿಯಲ್ಲಿ ನಡೆಯುವ ಧೈರ್ಯ ಉಡುಗಿ ಹೋಯಿತು. ಹಿಂದಕ್ಕೆ ಸರಿದು ಮೆಟ್ಟಿಲ ಮೇಲೆ ನಿಂತ.ಹುಲ್ಲುಗಳೆಡೆಯಿಂದ ಸದ್ದು ಕೇಳಿಸಿತು!ಕಿವಿಗಳನ್ನು ತೆರೆದು ಮಂದ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡ."ಯಾರಲ್ಲಿ?" ಬಾಯಿಯಿಂದ ಹೊರಟ ಪ್ರಶ್ನೆ ಗಂಟಲಿನಲ್ಲಿಯೇ ಇಳಿದಂತಾಯಿತು.ಪ್ರತಿಕ್ರಿಯೆ ಇಲ್ಲದಾಗ ಹಜಾರಕ್ಕೆ ನುಗ್ಗಿ, ಮುಂಬಾಗಿಲನ್ನು ಮುಚ್ಚಿ ಚಿಲಕ ಸೇರಿಸಿದ. ಇದ್ದೂ ಇಲ್ಲದಂತೆ ಉರಿಯುತ್ತಿದ್ದ ವಿದ್ಯುತ್ ದೀಪ, ರಾತ್ರಿಗೆ ಕೈ ಕೊಡುವ ಸೂಚನೆಯಿತ್ತಿತ್ತು. ಗೋಡೆಯ ಪಕ್ಕಕ್ಕಿದ್ದ ಲಾಂದ್ರವನ್ನು ಬೆಳಗಿಸಿ ವಿದ್ಯುತ್ ದೀಪದ ಗುಂಡಿ ಆರಿಸಿದ."ಒಳ್ಳೆಯದಾಯಿತು... ನಾನು ರಾತ್ರಿಗೆ ಬರ್‍ತೀನೀಂತ ನಿಮ್ಗೆ ಗೊತ್ತು... ಪಕ್ಕ ಬಾಗಿಲು ತೆಗ್ದು ಬಿಡಿ" ಕಿಟಕಿಯ ಬಳಿಯಿಂದ ಕೇಳಿದ ಪಿಸುದನಿಗೆ ಎದೆಗೆ ಕೈ ಹಚ್ಚಿ ನಿಂತ."ಸಮೀರ, ಬಾಗಿಲು ತೆಗೆಯಿರಿ..." ಕಿಟಿಕಿಯ ಬಳಿಯಿಂದ ಸರಿದು ಮುಂಬಾಗಿಲಿಗೆ ಬಂದು ನಿಂತಿತು ಹೆಣ್ಣು! ಜೊತೆಗೆ ಬಾಗಿಲಿನ ಮೇಲೆ ನಯವಾಗಿ ಗುದ್ದಿತು.ಗೊಣಗುತ್ತಾ ಅಸಹಾಯಕತೆಯಿಂದ ಬಾಗಿಲು ತೆರೆದು ನಿಂತ. ತಟ್ಟನೆ ಒಳಗೆ ಸೇರಿದ ಹೆಣ್ಣು ಬಾಗಿಲು ಮುಚ್ಚಿ ನಿಂತಾಗ ನಿಟ್ಟುಸಿರಿಟ್ಟ."ನಿಂಗೆ ಅದೆಷ್ಟು ಸಲ ಹೇಳಿದ್ದೀನಿ. ಹೀಗೆ ರಾತ್ರಿಗೆಲ್ಲಾ ಬರ್‍ಬೇಡಾಂತ. ನಂಗೆ ಇಷ್ಟವಾಗೋದಿಲ್ಲ"ಲಾಂದ್ರದ ಬೆಳಕಿಗೆ ಮುಖವೊಡ್ಡಿ ನಿಂತ. ಅವನ ದೈತ್ಯ ನೆರಳನ್ನು ನೋಡಿ ಕಿಲಕಿಲನೆ ನಕ್ಕ ಹೆಣ್ಣು ಮೇಜಿನ ಬಳಿ ಸರಿದು ಅಟ್ಟೆಯ ಮೇಲಿದ್ದ ಕಾಗದಗಳನ್ನು ತೆಗೆದು ಬೆಳಕಿಗೆ ಹಿಡಿಯಿತು.ಐವತ್ತನೆ ಕಥೆ!ಹಾಳೆಯ ಮೇಲಿದ್ದ ಶೀರ್ಷಿಕೆಯನ್ನು ಓದಿ ಬಾಯಿಯಿಂದ, `ಪ್ಚ್!' ಸದ್ದು ಹೊರಡಿಸಿತು."ಸಮೀರ, ನಾನು ನಿಮ್ಮ ಅಭಿಮಾನೀಂತ ಹೇಳ್ದೆ. ನಿಮ್ಮ `ಐವತ್ತನೆ ಕಥೆ' ಯಾವಾಗ ಮುಗಿಸ್ತೀರೀಂತ ನನಗೆ ಕಾತುರ. ನೀವು ನೋಡಿದ್ರೆ ಶೀರ್ಷಿಕೆ ಬರೆದು ನಿಲ್ಸಿದ್ದೀರಾ... ನನಗೆ ಕಥೆ ಹೇಳಿದ ವೇಗದಲ್ಲಿಯೆ ಬರೆದು ಮುಗಿಸಿ. ನೀವು ಹೇಳಿದ ಕಥೆ ಕುತೂಹಲವಾಗಿತ್ತು. ಬೇಕಿದ್ರೆ ಇನ್ನೊಂದೆರಡು ದಿನ ನಾನು ಇತ್ತ ತಲೆ ಹಾಕೋದಿಲ್ಲ. ತನುಹಾ ಬಂಡೆ ಜಾರಿ ಬಿದ್ದಿಲ್ಲಾಂತ ಹೇಳಿದ್ರಿ... ಅದು ನನ್ನಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಕಥೆಗೊಂದು ಅಂತ್ಯ ಬರ್‍ದು ಬಿಡಿ"ಹಾಳೆಗಳನ್ನು ಮೇಜಿನ ಮೇಲೆ ಎಸೆದ ಹೆಣ್ಣು ಅವನನ್ನು ತಬ್ಬಿ ಹಿಡಿಯಿತು. ಕೊಸರಾಡಿಕೊಂಡರೂ ಉಪಯೋಗವಿಲ್ಲವೆಂದು ಗೊತ್ತು.ಸಮುದ್ರದ ಬೋರ್ಗರೆತ ನಿಲ್ಲುವ ಸೂಚನೆಯಂತೆ ಗಾಳಿ ಬಲವಾಗಿ ಬೀಸಿತು. ಹುಲ್ಲು ಗರಿಗಳ ಒರೆಸು ಶಬ್ದದೊಂದಿಗೆ ತೂರಿ ಬಂದ ಗಾಳಿ ಲಾಂದ್ರವನ್ನು ಆರಿಸಿತು."ಒಳ್ಳೆಯದಾಯ್ತು ಬಿಡಿ" ಕತ್ತಲು ಆವರಿಸಿದಾಗ ಹೆಣ್ಣು ಪಿಸು ದನಿಯಲ್ಲಿ ನುಡಿಯಿತು. ಸಮುದ್ರ ಶಾಂತವಾದಂತಾಯಿತು. ಎದ್ದು ಕುಳಿತು ಬಾಗಿಲಿನತ್ತ ದೃಷ್ಟಿ ಹಾಯಿಸಿದ. ಹೆಣ್ಣು ಹೊರಟು ಬಾಗಿಲತ್ತ ನಿಂತಿದ್ದಳು."ಸಮೀರ, ಗಾಳಿಮರದ ತೋಪಿನವರೆಗೂ ನನ್ನ ಬಿಟ್ಬಿಡಿ" ದನಿಯಲ್ಲಿ ಆತಂಕ ತುಂಬಿತ್ತು."ಶಾಲಿ, ನಿನಗೆ ನಾನು ಎಷ್ಟು ಸಲ ಹೇಳಿದ್ದೆ. ನೀನು ಕೇಳ್ತಾ ಇಲ್ಲ. ಈಗ ನನ್ನನ್ನು ಸಿಕ್ಕಿ ಹಾಕಿಕೊಳ್ಳೊ ಹಾಗೇ ಮಾಡ್ತಿಯಾ" ಗೊಣಗುತ್ತಲೇ ಅವಳ ಹಿಂದೆ ನಡೆದ.ಹುಲ್ಲುಗಳ ನಡುವಿನ ದಾರಿ ಕ್ರಮಿಸಿ ಗಾಳಿಮರದ ತೋಪಿನ ಬಳಿ ಬರುವವರೆಗೂ ಕಿವಿಗಳಿಗೆ ಗಾಳಿ ಸೇರದಂತೆ ಮುಖಕ್ಕೆ ಸೆರಗು ಸೇರಿಸಿ ನಡೆಯುತ್ತಿದ್ದ ಶಾಲಿನಿ, ಅವನಿಗೆ ಹೇಳದೆ ಹಂಚಿನ ಮನೆಯತ್ತ ಓಡಿದಳು.ಮುಂದೆ ಹೆಜ್ಜೆ ಎತ್ತಿಡಲಿದ್ದವನು ಒಮ್ಮೆ ಸುತ್ತಲೂ ದೃಷ್ಟಿ ಹಾಯಿಸಿದ. ರಬ್ಬರ್ ಪೈಪ್‍ಗಳ ಮೇಲೆ ಲಂಗರು ಹಾಕಿ ನಿಂತ ನಾಡದೋಣಿಗಳ ಬಳಿಯಿಂದ ಪೆಟ್ರೋಮ್ಯಾಕ್ಸ್‍ನ ಬೆಳಕು ಸ್ಪಷ್ಟವಾಗಿ ಗೋಚರಿಸಿತು. ಅಪರೂಪವೇನಲ್ಲ, ಅದೆಷ್ಟೋ ಬಾರಿ ನಡುರಾತ್ರಿಯವರೆಗೂ ಟಾರಸಿಯಲ್ಲಿ ಕುಳಿತು ಬರೆಯುವಾಗ ಕಂಡಿದ್ದ. ಮೊದಮೊದಲು ಕುತೂಹಲವಿತ್ತು. ದೀಪದ ಬೆಳಕಿನ ಸುತ್ತಾ ಕುಳಿತು ಹೊಟ್ಟೆ ಉಬ್ಬೇರಿಸುವಂತೆ ಕುಡಿದು, ಇಸ್ಪೀಟು ಎಲೆಗಳ ಆಟವಾಡುತ್ತಿದ್ದಾರೆಂದು ತಿಳಿದಿದ್ದ. ಶಾಲಿನಿಯ ಪರಿಚಯವಾದ ನಂತರ ಕುತೂಹಲ ಇಳಿದಿತ್ತು. ಅವಳಿಗೂ ಗೊತ್ತಿಲ್ಲದ ಸಂಗತಿ ಅದು!ಮರದ ಸಾಲು ಹಿಡಿದು ವೇಗದ ಹೆಜ್ಜೆ ಹೊರಳಿಸಿದ. ಅಭ್ಯಾಸವಿಲ್ಲದ ಮರಗಳ ದಂಡೆಯ ಮೇಲಿನ ನಡುಗೆ ವೇಗವನ್ನು ನಿಯಂತ್ರಿಸುತ್ತಿತ್ತು.ತೋಪು ಮುಗಿದು ತೆರೆದ ಭಾಗದತ್ತ ಹೆಜ್ಜೆ ಹಾಕುವಾಗ ಗೊಗ್ಗರು ದನಿಯೊಂದು ಕೇಳಿ ಬೆಚ್ಚಿ ಬಿದ್ದ. ಕಾಲು ತಟಸ್ಥವಾಯಿತು."ನೀನು ಇಂತಹ ರಾತ್ರಿಯಲ್ಲಿ ಆ ಹೆಣ್ಣಿನ ಜೊತೆಗೆ ಓಡಾಡೋದು ಒಳ್ಳೆಯದಲ್ಲ. ನಾನು ನಿನ್ನ ಹಿತೈಷಿಯಾಗಿ ಹೇಳ್ತಾ ಇದ್ದೀನಿ"ಮಾತುಗಳು ಬಂದಾಗ ಧೈರ್ಯ ತುಂಬಿತು. ಮುಂಬೈ ತೊರೆದು ದಕ್ಷಿಣದ ಕಡಲತಡಿಗೆ ಬಂದಾಗ ವಿಧೇಯನಂತೆ ನಿಂತು ಉಪಚರಿಸಿದ್ದ ಚಂದ್ರಚೂಢ. ಉಳಿದುಕೊಳ್ಳಲು ಪಾಳು ಬಿದ್ದಂತಿದ್ದ ಅವನ ದೂರದ ಸಂಬಂಧಿಯೊಬ್ಬರ ಮನೆಯನ್ನು ಐದು ನೂರು ರೂಪಾಯಿಗಳ ಬಾಡಿಗೆಗೆ ನೀಡಿದ್ದ."ಚಂದ್ರಚೂಢ, ಬರೋ ಇಚ್ಛೆ ಇರ್‍ಲಿಲ್ಲ. ಆ ಹೆಣ್ಣು ನನ್ನ ಹುಡುಕಿಕೊಂಡು ಬಂದಿದ್ಲು. ಮನೆಯವರೆಗೂ ತಲುಪಿಸೋದಿಕ್ಕೆ ಹೇಳಿದ್ಲು"ಚಂದ್ರಚೂಢ ಒಣ ನಗೆ ನಕ್ಕ."ಅವಳು ಮಹಾ ಕುತಂತ್ರಿ. ನಿನ್ನ ಹೊಸಬಾಂತ ಏಮಾರಿಸಿ ಬಿಡ್ತಾಳೆ" ಚಂದ್ರಚೂಢ ತಟ್ಟನೆ ಮಾತು ನಿಲ್ಲಿಸಿ ಕತ್ತಲಲ್ಲಿ ಹೆಜ್ಜೆ ಹಾಕಿ ಹೊರಟ.ಸಮೀರ ಹುಲ್ಲು ಮೆದೆಯ ಸೀಳು ದಾರಿ ಹಿಡಿದು ನಡೆದ. ಏಕಾಏಕಿ ಹೆಣ್ಣಿನ ಆರ್ತನಾದ ಕೇಳಿಸಿತು. ಎದೆಗೆ ಕೈ ಹಚ್ಚಿ ನಿಂತ!ದೋಣಿಯ ಬಳಿಯಿದ್ದ ಪೆಟ್ರೋಮ್ಯಾಕ್ಸ್ ದೀಪ ಆರಿತು. ಅಲ್ಲಿದ್ದ ಮಂದಿ ಚದುರಿದಂತೆ ಕಂಡರು. ಅಲ್ಲಿ ನಿಂತಿರಲಾರದೆ ವೇಗದ ಹೆಜ್ಜೆಯಿಡುತ್ತಾ ಬಾಗಿಲು ತೆರೆದು ಒಳಗೆ ಸೇರಿಕೊಂಡ.ಸಾವು ಆವರಿಸಿದಂತೆ ಚೀರಿಕೊಂಡಿತ್ತು ಹೆಣ್ಣು!
***
ಸಮುದ್ರ ಕೊರೆತಕ್ಕೆ ತಡೆಗೋಡೆಯಂತೆ ಹಾಕಿದ್ದ ಕಲ್ಲು ರಾಶಿಗಳನ್ನು ಜಿಗಿದು ಗಾಳಿಮರದ ತೋಪಿನಿಂದ ಹಾದು ರಸ್ತೆಯ ಹಾದಿ ಹಿಡಿದ ಕಥೆಗಾರ.ನೆಲದವರೆಗೂ ಇಳಿದಿದ್ದ ಮಂಗಳೂರಿನ ಹಂಚಿನ ಸಣ್ಣ ಮನೆ ಅದು. ಜನ ಸಮೂಹವೆ ಅಲ್ಲಿ ನೆರೆದಿತ್ತು.ಚಂದ್ರಚೂಢ ಗಾಳಿಯಲ್ಲಿ ತೂರಿ ಕಳುಹಿಸಿದ್ದ ಸಂದೇಶ ಅದು! ಹೃದಯ ಕೈಯಲ್ಲಿಯೇ ಹಿಡಿದುಕೊಂಡು ಬಂದಿದ್ದ ಸಮೀರ.ರಾತ್ರಿಗೆ ತನ್ನಿಂದ ಬೀಳ್ಕೊಟ್ಟ ಹೆಣ್ಣು ಶವವಾಗಿದ್ದಾಳೆ?! ಅವಳ ಕೊರಡಿನಂತಹ ದೇಹ ನೋಡುವ ಧೈರ್ಯವಿರಲಿಲ್ಲ. ಹೋಗದಿದ್ದರೆ ಚಂದ್ರಚೂಢನ ವ್ಯಂಗ್ಯದ ಮಾತುಗಳನ್ನು ಎದುರಿಸಬೇಕಾದ ಪರಿಸ್ಥಿತಿ. ಯಾವುದೋ ಅವಿನಾಭಾವ ಸಂಬಂಧ ಬೆಳೆದಿತ್ತು."ನಿಮ್ಮ ಎಲ್ಲಾ ಕಥೆಗಳನ್ನು ಓದಿದ್ದೀನಿ ಸಮೀರ. ಕುತೂಹಲ ಉಳಿಸಿಕೊಂಡು ಅದೇಗೆ ಬರಿತೀರೋ? ನಿಮ್ಮ ಶೈಲಿ ಕೂಡ ವಿಭಿನ್ನ. ಮುಂದೆ ಯಾವ ಕಥೆ ಬರಿತೀರಾ?"ಸಮುದ್ರ ದಂಡೆಯಲ್ಲಿ ಕುಳಿತು ಕಾಗದದ ಮೇಲೆ ಪೆನ್ನು ಆಡಿಸುತ್ತಿದ್ದಾಗ ಅಲೆಗಳ ಜೊತೆಗೆ ಆಟವಾಡುತ್ತಿದ್ದವಳು ಪರಿಚಯ ಮಾಡಿಕೊಂಡು ಆಶ್ಚರ್ಯದಿಂದ ಕೇಳಿದ್ದಳು.ಸ್ಫುಟವಾಗಿ ಶಿಲ್ಪಿ ಕಡೆದ ಶಿಲ್ಪದಂತಿದ್ದ ದೇಹ ಸೌಂದರ್ಯವನ್ನು ಪುರುಷರ ಕಣ್ಣಿಗೆ, ಬಾಣ ಬಿಟ್ಟಷ್ಟೆ ವೇಗವಾಗಿ ಆಕರ್ಷಿಸುತ್ತಿದ್ದಳು.ಕಥೆಗಾರನೆಂಬ ಆತ್ಮೀಯತೆ, ಜೊತೆಗೆ ಒಂಟಿ ಯುವಕ! ಎಲ್ಲರಿಗಿಂತಲೂ ಬಹಳವಾಗಿಯೇ ಹಚ್ಚಿಕೊಂಡಿದ್ದಳು.ಬದುಕಿನ ಕಹಿ ಘಟನೆಯನ್ನು ಬಿಚ್ಚಿಟ್ಟ ಕಥೆಯ ರೂಪದಲ್ಲಿ!"ತನುಹಾಳ ಸಾವು ನಿಜವಲ್ಲಾಂತ ನೀವು ಹೇಗೆ ನಿರೂಪಿಸ್ತೀರಾ?" ಕಥೆ ಕೇಳಿದ ನಂತರ ತೊದಲಿದ್ದಳು."ಅದನ್ನು ನಿನಗೆ ಹೇಳಿದ್ರೆ ಮಜ಼ಾ ಇರೋಲ್ಲ ಶಾಲಿ. ಒಂದು ವಾರದಲ್ಲಿ ಬರೆದು ಮುಗಿಸ್ತೀನಿ. ನೀನೇ ಓದು..."ಶೀರ್ಷಿಕೆಯಲ್ಲಿಯೇ ನಿಂತಿತ್ತು ಕಥೆ. ಹೇಳಲೇ ಬಾರದಿದ್ದ ಬದುಕಿನ ಕಥೆ. ತನುಹಾಳ ಜೊತೆಗಿನ ನಿಜ ಬದುಕು! ತಪ್ಪಿ ನಾಲಗೆ ಒದರಿತ್ತು ಅದನ್ನು.ಜನ ಸಮೂಹದ ನಡುವೆ ತೂರಿಕೊಂಡು ಮನೆಯ ಒಳಗೆ ಇಣುಕು ಹಾಕಿದ. ಸತ್ತವಳ ಮುಖದಲ್ಲಿ ಪ್ರಶಾಂತತೆಯಿರಲಿಲ್ಲ. ಸಾವಿನ ಭೀತಿ ಮುಖದಲ್ಲಿ ವಿಕಾರವಾಗಿತ್ತು. ನುಣುಪು ಹೊಟ್ಟೆಯ ಮೇಲೆ ಬಲವಾಗಿ ಇರಿದಂತೆ ಇತ್ತು ಗಾಯ. ಜಗುಲಿಯ ಉದ್ದಕ್ಕೂ ನೀರು ಹರಿದಂತೆ ಕಾಣುತ್ತಿತ್ತು ರಕ್ತ!ಹೆಚ್ಚು ಹೊತ್ತು ನಿಲ್ಲಲಾರೆನೆನಿಸಿತು. ಹಾಗೇ ಹಿಂದಕ್ಕೆ ತಿರುಗಿದ.ಭುಜದ ಮೇಲೆ ಭಾರವಾದ ಕೈಗಳು ಬಿದ್ದಾಗ ಬೆದರಿದ. ಮುಖ ತಿರುಗಿಸಿ ನೋಡಿದ. ಚಂದ್ರಚೂಢ!ಯಾವೊಂದು ಭಾವನೆಯೂ ಆ ನೋಟದಲ್ಲಿರಲಿಲ್ಲ. ಮುಖ ಮತ್ತಷ್ಟು ಕಳಹೀನವಾಯಿತು."ನಿನ್ನೆ ರಾತ್ರಿಗೆ ನಿನ್ನ ಜೊತೆಗಿದ್ಲು... ಪೊಲೀಸ್ ನಿನ್ನ ಮನೆಯವರೆಗೂ ಬಂದ್ರೂ ಆಶ್ಚರ್ಯವಿಲ್ಲ"ಬಾಂಬ್ ಸಿಡಿಸಿದಂತೆ ಹೇಳಿದ. ಸಂಪೂರ್ಣ ತಿರುಗಿದ ಸಮೀರ ತರತರ ಕಂಪಿಸಿದ. ತಾನಾಗಿ ಮೈ ಮೇಲೆ ಎಳೆದುಕೊಂಡ ಸಮಸ್ಯೆ.ಚಂದ್ರಚೂಢನ ಕೈ ಹಿಡಿದುಕೊಂಡು ತೆಂಗಿನ ತೋಟದ ಮಧ್ಯೆ ಬಂದ. ಕಣ್ಣೀರು ಯಾವ ಕ್ಷಣದಲ್ಲಿಯಾದರೂ ಹೊರಗೆ ಬರುವಂತೆ ಇತ್ತು."ಚಂದ್ರಚೂಢ, ನನ್ನ ಹೆದರಿಸ್ಬೇಡ. ನನ್ನ, ಶಾಲಿನಿಯ ಸಂಬಂಧ ಯಾರಿಗೂ ತಿಳಿಯದಂತೆ ಕಾಪಾಡು" ಆತುರಾತುರವಾಗಿ ಜೇಬಿಗೆ ಕೈಯಿಳಿಸಿ ಐದು ನೂರರ ಒಂದು ನೋಟು ತೆಗೆದು ಅವನ ಕಿಸೆಯಲ್ಲಿಳಿಸಿದ.ಗಂಭೀರ ಚಿಂತೆಗೊಳಗಾದ."ನಿನ್ನ ತಪ್ಪಿಲ್ಲ ಸಮೀರ. ಅವಳು ನಿನ್ನನ್ನ ತುಂಬಾ ಪ್ರೀತಿಸಿದ್ಲು. ನಿನ್ನ ಕಥೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ಲು... ಆದ್ರೆ...""ಆದ್ರೆ... ಏನು? ನನ್ನ ಜೊತೆಗೆ ದೈಹಿಕ ಸಂಬಂಧ ಇತ್ತೂಂತನಾ?" ಅಲುಗಿಸಿ ಕೇಳಿದ. ಚಂದ್ರಚೂಢ ನೆರೆದಿದ್ದ ಜನರ ಕಡೆಗೆ ನೋಡಿದ."ಅಲ್ಲ... ನಿನ್ನ ಐವತ್ತನೆ ಕಥೆ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ಲು. ತನುಹಾ ನಿನ್ನ ಕಲ್ಪನೆಯ ಹೆಣ್ಣಲ್ಲವಂತೆ... ನಿನ್ನ ಬದುಕಿನಲ್ಲಿ ಬಂದ ಹುಡುಗಿಯಂತೆ. ಅವಳ ಸಾವು ನಿನ್ನನ್ನು ಮುಂಬೈ ಬಿಟ್ಟು ಬರುವಂತೆ ಮಾಡಿದೆಯಂತೆ. ನಿಜವೇನಾ?"ತತ್ತರಿಸಿದ ಕಥೆಗಾರ ತಲೆಯ ಮೇಲೆ ಕೈಯಿಟ್ಟು ನಿಂತ. ಚಂದ್ರಚೂಢನ ಸಾಂತ್ವನದ ಕೈಗಳು ಮತ್ತೊಮ್ಮೆ ಭುಜದ ಮೇಲೆ ಬಿದ್ದಾಗ ಕಣ್ಣೀರು ಇಳಿಯಿತು.ಪೊಲೀಸ್ ಜೀಪು ರಸ್ತೆಯ ನಡುವೆ ನಿಂತಾಗ ಎಚ್ಚರಿಸಿದ."ನೀನು ಮನೆ ಸೇರ್‍ಬಿಡು. ನನಗೆ ಗೊತ್ತಿರೋ ವಿಷಯ ನಾನು ಯಾರಿಗೂ ಹೇಳೊದಿಲ್ಲ" ರಸ್ತೆ ದಾಟಿ ಮರಳ ರಾಶಿಯ ಮೇಲೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಮನೆಯತ್ತ ನಡೆದ.ಮುಂಬೈನ ಸಮುದ್ರ ತೀರಕ್ಕಿಂತ ದಕ್ಷಿಣದ ತೀರ ಅಪಾಯವಲ್ಲದ ತಾಣವೆಂದು ತಿಳಿದಿದ್ದ. ನಿರ್ಧಾರ ಬುಡಮೇಲಾಯಿತು.ಶಾಲಿನಿ, ತನುಹಾಳ ಬಗ್ಗೆ ತಲೆಕೆಡಿಸಿಕೊಂಡಿದ್ದಾಳೆ! ತನ್ನಿಂದ ಸತ್ಯ ತಿಳಿದು ಏನೋ ಸಾಧಿಸಲು ಹೊರಟಿದ್ದಾಳೆ! ಅವಳ ಸಾವು ತನಗೆ ಪ್ರತಿಕೂಲವೇ ಆಗಿದೆ!ನಿಡಿದಾದ ಉಸಿರು ದಬ್ಬಿ ಮಂಚಕ್ಕೊರಗಿದ.ಚಂದ್ರಚೂಢ ನಂಬಿಕೆಯ ವ್ಯಕ್ತಿ. ಶಾಲಿನಿಗೆ ಹೇಳಿದ ತನುಹಾಳ ಕಥೆ ಅವನ ಕಿವಿಯ ಮೇಲೂ ಬಿದ್ದಿದೆ. ತಲೆ ಒಂದೇ ಸಮನೆ ಸಿಡಿಯುವ ನೋವು.ಅನಿರೀಕ್ಷಿತವೆಂಬಂತೆ ಬಾಗಿಲ ಮೇಲೆ ಬಡಿತದ ಸದ್ದು! ಜೊತೆಗೆ ಬೂಟುಗಳ ಸದ್ದು! ಆತಂಕದಿಂದ ಎದ್ದು ಕುಳಿತ. ಮೆದುಳು ನಿಷ್ಕ್ರೀಯವಾಯಿತು.ಪೊಲೀಸ್ ಬರದಂತೆ ನಿಗ್ರಹಿಸುತ್ತೇನೆಂದಿದ್ದ ಚಂದ್ರಚೂಢ. ಅವನ ಮೇಲಿರಿಸಿದ ಅತಿಯಾದ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾನೆ. ಬೆದರು ಕೈಗಳಿಂದಲೇ ಬಾಗಿಲು ತೆರೆದು ನಿಂತ.ಅವನನ್ನು ದೂಡಿಕೊಂಡಂತೆ ಬಂದ ಚಂದ್ರಚೂಢ. ಜೊತೆಗೆ ನಡುವಯಸ್ಸಿನ ದಢೂತಿ ಹೆಂಗಸು. ಉಪಚರಿಸುವ ಅಗತ್ಯವಿಲ್ಲದಂತೆ ಬೆನ್ನು ಮುರಿದ ಕುರ್ಚಿಯಲ್ಲಿ ದೊಪ್ಪನೆ ಕುಸಿದು ಕುಳಿತಿತು."ಸಮೀರ, ಇವರು ಈ ಮನೆಯ ಒಡತಿ... ಶಶಿರೇಖಾಂತ. ನೀನು ಎದುರಿಸುತ್ತಿರೋ ಸಮಸ್ಯೆಯಲ್ಲಿ ಇವಳು ಸಿಕ್ಕಿ ಬಿದ್ದಿದ್ದಾಳೆ"ಮೊದಲೇ ಹೆದರಿದವನ ಮೇಲೆ ಚೇಳು ಹಾಕಿದಂತಾಯಿತು. ಗೋಡೆಗೆ ಅಂಟಿದಂತೆ ಒರಗಿದ."ನಾನು ಎದುರಿಸುತ್ತಿರೋ ಸಮಸ್ಯೆ ಯಾವುದು?" ಬೆರಗು ಕಣ್ಣಿನಿಂದ ಕೇಳಿದ ಕಥೆಗಾರ."ನಾನು ಹೇಳಿದ್ನಲ್ಲಾ... ನೀವಿಬ್ರೂ ಒಂದೇ ಸಮಸ್ಯೆನಾ ಎದುರಿಸ್ತಾ ಇದ್ದೀರಿ" ಅರ್ಥವಾಗದೆ ಕುಳಿತಿದ್ದ ಹೆಂಗಸಿನತ್ತ ಮುಖ ಹೊರಳಿಸಿದ. ತಲೆಯ ಮೇಲೆ ಕೈ ಹೊತ್ತು ಕೊಂಡು ಕುಳಿತಿತ್ತು ಹೆಂಗಸು."ಸತ್ತಿರೋ ಶಾಲಿನಿಯ ದೂರದ ಸಂಬಂಧಿ ಈಕೆ. ಶಾಲಿನಿಯ ಕೊಲೆ ಮಾಡಿರೋದು ಇವಳೂಂತ ಶಾಲಿನಿಯ ತಂದೆಯ ಆರೋಪ"ಶಾಲಿನಿಯ ಸಾವಿಗೆ ತಾನು ಕಾರಣವಲ್ಲವೆನ್ನುವ ನೆಮ್ಮದಿ ತುಂಬಿದರೂ, ಅವಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚಂದ್ರಚೂಢನನ್ನು ನಂಬುವಂತಿಲ್ಲ."ಆ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿರೋದು ಹೇಗೆ?" ಕುತೂಹಲವಿತ್ತು ಪ್ರಶ್ನೆಯಲ್ಲಿ. ಶಶಿರೇಖಾ ತಲೆ ಕೆಳಗೆ ಹಾಕಿ ಕುಳಿತಿದ್ದಳು. ಚಂದ್ರಚೂಢ ಅವಳ ಮುಖವನ್ನೊಮ್ಮೆ ದಿಟ್ಟಿಸಿದ. ನಿಸ್ತೇಜಕವಾಗಿತ್ತು ಕಣ್ಣುಗಳು. ಕಥೆಗಾರನಿಗೆ ಉತ್ತರ ಕೇಳುವ ಕಾತುರ."ಹತ್ತು ವರ್ಷಗಳ ಹಿಂದೆ ಬಿಷನ್‍ಲಾಲ್‍ನನ್ನು ಅಗಾಧವಾಗಿ ಪ್ರೀತಿಸಿದ ಹೆಣ್ಣು ಇವಳು. ದಕ್ಷಿಣದ ಮರಳ ದಂಡೆಗೆ ಬಂದವನಿಗೆ ಕೈ ತುಂಬಾ ಹಣ ಸಂಪಾದನೆಯ ದಾರಿ ಸೂಚಿಸಿದವಳೂ ಇವಳೇ. ಇವಳ ನೆನೆಪಿಗಾಗಿ ಈ ಬಂಗ್ಲೆಯನ್ನು ಖರೀದಿಸಿದ್ದ. ಆದರೆ... ಅವನ ವ್ಯವಹಾರ ಅರ್ಧಕ್ಕೆ ನಿಂತು ಹೋಯಿತು. ಹೇಳ ಹೆಸರಿಲ್ಲದೆ ಮುಂಬೈಗೆ ಓಡಿದ"ಬಿಷನ್‍ಲಾಲ್‍ನ ಹೆಸರು ಕೇಳುತ್ತಲೇ ಎದೆ ನಡುಗಿತು. ಚಂದ್ರಚೂಢ ಶಾಲಿನಿಯಿಂದ ಮಾಹಿತಿ ಸಂಗ್ರಹಿಸಿಕೊಂಡು ಸುಳ್ಳು ಕಥೆ ಹೆಣೆಯುತ್ತಿದ್ದಾನೆ. ಅದಕ್ಕೆ ಪೂರಕವಾಗಿ ಅವನು ನೀಡಿರುವ ಉತ್ತರ ಕೂಡ ಸಮಂಜಸವಾದುದಲ್ಲ."ಸಮಸ್ಯೆಗೆ ಸರಿಯಾದ ಉತ್ತರ ನೀಡ್ಲಿಲ್ಲ ನೀನು..."ತಲೆ ಅಡಿಗೆ ಹಾಕಿ ಕುಳಿತಿದ್ದ ಹೆಂಗಸು ಮುಖವೆತ್ತಿ ನೋಡಿತು. ಏನೋ ಹೇಳುವ ಕಾತುರವಿತ್ತು. ಚಂದ್ರಚೂಢ ತಡೆದ."ತಾಳ್ಮೆಯಿಂದ ಕೇಳು. ರಾತ್ರಿ ಇಲ್ಲಿಗೆ ಬರೋ ಸ್ಮಗ್ಲಿಂಗ್ ದೋಣಿಯಲ್ಲಿ ಬಿಷನ್‍ಲಾಲ್ ಆಗಾಗ ಕಾಣಿಸಿಕೊಳ್ತಾನೆ. ಅವನು ತರೋ ವಸ್ತುಗಳಿಗಾಗಿ ಜನ ಮಧ್ಯರಾತ್ರಿಯವರೆಗೂ ಲಂಗರು ಹಾಕಿರೋ ದೋಣಿಯ ಬಳಿ ಕಾಯ್ತಾರೆ"ಆಶ್ಚರ್ಯದಿಂದ ಕಣ್ಣು ಅಗಲವಾಯಿತು. ಬಾಯಿಯಿಂದ ಹೊರಟ ಉದ್ಗಾರ ಗಂಟಲಿನೊಳಗೆ ಸೇರಿತು. "ಅಂದ್ರೆ..." ಉಗುಳು ನುಂಗಿಕೊಂಡ."ಅಂದ್ರೆ... ಹಾಂ... ಹೌದು ಪೆಟ್ರೋಮ್ಯಾಕ್ಸ್ ಹಿಡ್ಕೊಂಡು ದೋಣಿಯ ಬಳಿ ಕಾಯೋದು ಬಿಷನ್‍ಲಾಲ್‍ಗಾಗಿ... ಅವನು ಯಾವಾಗ ಬರ್‍ತಾನೇಂತ ಹೇಳೋಕಾಗೋದಿಲ್ಲ. ಬಂದಾಗಲೆಲ್ಲಾ ಲಕ್ಷಗಟ್ಟಲೆ ಮಾಲು ತರ್‍ತಾನೆ" ನಿಗೂಢವಾಗಿದ್ದ ಒಂದು ಸಂಗತಿ ಬಿಚ್ಚಿಕೊಂಡಾಗ ಆತಂಕ ಕಡಿಮೆಯಾಯಿತು. ಆದರೂ ಅಪಾಯ ತಪ್ಪಿದ್ದಲ್ಲ. ಬಿಷನ್‍ಲಾಲ್... ತನುಹಾಳ ಚಿಕ್ಕಪ್ಪ! ತನಗೆ ಆಸರೆ ನೀಡಿರುವ ಪಾಳು ಬಂಗಲೆ ಅಪಾಯದ ತಾಣ!ಶಶಿರೇಖಾಳನ್ನು ಕಾಣಲು ಬರುವ ಬಿಷನ್‍ಲಾಲ್‍ಗೆ ಸುಲಭವಾಗಿ ಆಹಾರವಾಗಬಹುದು. ಬೆನ್ನ ಹುರಿಯಲ್ಲಿ ಚಳಿಯಾಡಿದಂತಾಯಿತು."ಒಪ್ಪಿಕೊಳ್ತೀನಿ ಚಂದ್ರಚೂಢ. ಆದ್ರೆ... ಶಾಲಿನಿಯ ಕೊಲೆ ಮಾಡ್ದೋರು ಯಾರು? ಯಾಕೇಂತ? ಈ ಸಮಸ್ಯೆಯಲ್ಲಿ ಶಶಿರೇಖಾ ಸಿಕ್ಕಿ ಹಾಕಿಕೊಳ್ಳುವುದು ಹೇಗೆ?""ನಿನ್ನ ಹಾಗೆ..." ತಟ್ಟನೆ ಉತ್ತರಿಸಿದ ಚಂದ್ರಚೂಢ."ಅರ್ಥವಾಗ್ಲಿಲ್ಲ. ಸುಮ್ನೆ ನನ್ನ ಹೆದರಿಸ್ತೀಯಾ?"ಸಮೀರನ ಮಾತಿಗೆ ಕಿಟಕಿಯ ಬಳಿಗೆ ಸರಿದು ನಿಂತು ವ್ಯಂಗ್ಯದ ನಗೆ ನಕ್ಕ."ಅವಳು ನಿನ್ನ ಅಭಿಮಾನೀಂತ ಆವರಿಸಿದ್ಲು... ಇವಳಿಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮಗಳೂಂತ ಒಪ್ಪಿಕೊಳ್ಳಬೇಕಾಯಿತು"ಸಮಸ್ಯೆಯೊಂದು ನೂರಾರು ಗಂಟುಗಳಾಗಿ ಸಿಕ್ಕಿ ಹಾಕಿಕೊಂಡಂತೆ ಇತ್ತು. ಪ್ರಶ್ನಾರ್ಥಕ ನೋಟ ಬೀರಿದ."ಬಿಷನ್‍ಲಾಲ್‍ನ ಮಗಳು ಅವಳು. ಯಾವುದೋ ಕೆಂಪುದೀಪದ ಏರಿಯಾಕ್ಕೆ ಹೋಗೋ ಹೆಣ್ಣನ್ನು ಕರೆದುಕೊಂಡು ಬಂದು ಇವಳ ಕೈಗೆ ಒಪ್ಪಿಸ್ದ. ಹಿಂದೆ ಮುಂದೆ ಆಲೋಚಿಸದೆ ಅವಳನ್ನು ಸಾಕಿದ್ಲು. ಆದ್ರೆ... ಈಗ..."ಅಲ್ಲಿಯವರೆಗೂ ಸುಮ್ಮನಿದ್ದ ಹೆಂಗಸು ಚೀರಿದಳು."ಚಂದ್ರಚೂಢ, ನೀನು ಢಂಗುರ ಬಾರ್‍ಸಿ ನನ್ನ ಜೈಲು ಸೇರೋ ಹಾಗೆ ಮಾಡ್ತಿದ್ದೀಯಾ"ಚಂದ್ರಚೂಢನ ಮುಖದಲ್ಲಿ ಅದೇ ನಗು!"ಶಶಿರೇಖಾ, ಆತುರ ಪಡ್ಬೇಡಾ. ಇದು ಐವತ್ತನೆ ಕಥೆ. ಕೊನೆಯವರೆಗೂ ಕುತೂಹಲ ಉಳಿಸ್ಕೊಂಡು ಬರೆಯೋ ಕಥೆಗಾರನಿಗೆ ಸಹಾಯವಾಗ್ಲೀಂತ ಹೇಳ್ತಿದ್ದೀನಿ"ಸಹನೆ ಕಳೆದುಕೊಂಡ ಹೆಂಗಸು ಕುರ್ಚಿಯಿಂದ ಎದ್ದು ನಿಂತು ಚಂದ್ರಚೂಢನತ್ತ ಧಾವಿಸಿತು. ಆತ ಕೈ ಅಡ್ಡ ತಂದು ಪಕ್ಕಕ್ಕೆ ತಳ್ಳಿದ. ಸಮತೋಲನ ಕಳೆದುಕೊಂಡಂತೆ ದೊಪ್ಪನೆ ನೆಲದ ಮೇಲೆ ಬಿದ್ದಳು. ಸಮೀರ ಸಹಾಯಕ್ಕೆ ಧಾವಿಸಿದ."ಬಿಟ್ಟು ಬಿಡು ಸಮೀರ. ಶಾಲಿನಿಗೆ ನೀನು ಯಾರೂಂತ ಚೆನ್ನಾಗಿ ಗೊತ್ತಿತ್ತು. ನಿನ್ನ ಮೇಲೆ ಸೇಡು ತೀರಿಸಿಕೊಳ್ಳೋದಿಕ್ಕೆ ಕಾಯ್ತ ಇದ್ಲು. ಅದನ್ನು ಶಶಿರೇಖಾಳ ಮುಂದೆ ಬಿಚ್ಚಿಟ್ಲು"ಶಶಿರೇಖಾಳನ್ನು ಮೇಲಕ್ಕೆತ್ತಿ ಕೂರಿಸಿದವನು ಆಘಾತಕ್ಕೊಳಗಾದವರಂತೆ ನಿಂತ."ಆಶ್ಚರ್ಯ ಅನ್ಸುತ್ತಲ್ಲಾ...? ನಿನ್ನ ಐವತ್ತನೆ ಕಥೆ ಕಲ್ಪನೆಯದಲ್ಲ, ನಿಜ ಕಥೆ... ತನುಹಾ ಕಾಲ್ಪನಿಕ ಪಾತ್ರವಲ್ಲ, ನಿನ್ನ ಪ್ರೀತಿಸಿದ ಹುಡುಗಿ. ಅವಳು ಸತ್ತಿಲ್ಲ, ನೀನೂ ಕೊಲೆ ಮಾಡ್ಲಿಲ್ಲ. ಅವಳನ್ನು ಕೊಂದಿದ್ದು..."ಅವನ ಮಾತು ಪೂರ್ತಿಯಾಗಿರಲಿಲ್ಲ ಹೆಂಗಸು ಎದ್ದು ಪೂತ್ಕರಿಸುತ್ತಾ ಚಂದ್ರಚೂಢನ ಕುತ್ತಿಗೆಯಲ್ಲಿ ಹಿಡಿಯಿತು. ಅಸಹಾಯಕತೆಯಿಂದ ಕೈ ಎತ್ತಿದ. ಕಣ್ಣಗುಡ್ಡೆಗಳು ಹೊರಕ್ಕೆ ಬಂದಂತಾಯಿತು. ಸಮೀರ ಸಹಾಯಕ್ಕೆ ಧಾವಿಸಿ ಹೆಂಗಸನ್ನು ದೂರ ಸರಿಸಿದ. ಸೋತಂತೆ ಕುಸಿದು ಕುಳಿತಳು."ತನುಹಾ ಸಾಯೋದಿಕ್ಕೂ ಕಾರಣ ಇವಳೇ... ಈಗ ಶಾಲಿನಿನ ಕೊಂದಿದ್ದು ಇವಳೇ..."ಸಿಕ್ಕಿನಂತೆ ಜಟಿಲವಾದ ಸಮಸ್ಯೆಯ ಗಂಟು ಮೆಲ್ಲಗೆ ಬಿಚ್ಚಿಕೊಂಡಿತು."ಇವಳು ಬಿಷನ್‍ಲಾಲ್‍ನನ್ನು ಸ್ಮಗ್ಲಿಂಗ್ ಗುಂಪಿಗೆ ಸೇರಿಸಿ ಆಟವಾಡಿಸಿದ್ಲು. ಸಂಸಾರಸ್ಥ ಬಿಷನ್‍ಗೆ ತನ್ನ ಮಕ್ಕಳ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ತನುಹಾ, ತನುಜಾ ಇಬ್ಬರೂ ಅವನ ಮಕ್ಕಳು. ಕೊಲೆಯಾಗಿರೋ ಶಾಲಿನಿನೇ ತನುಜಾ... ತನುಹಾ ಓದಿ, ಪದವಿ ಪಡೆದು ಮುಂದೆ ಬಂದ್ಲು. ಈ ಹೆಂಗಸಿಗೆ ಅದನ್ನು ಸಹಿಸೋದಕ್ಕಾಗ್ಲಿಲ್ಲ. ತಾನು ಬಿಷನ್‍ಲಾಲ್‍ನಿಂದ ಗಳಿಸಿಕೊಂಡಿರೋ ನಗ, ನಗದು, ಆಸ್ತಿಯೆಲ್ಲಾ ಅವನ ಮಕ್ಕಳಿಗೆ ಸೇರುತ್ತೇಂತ ಸಾಯಿಸ್ಲಿಲ್ಲ. ಬದಲಾಗಿ ತನ್ನ ಅಡ್ಡದಾರಿಗೆ ಅವರಿಬ್ಬರನ್ನೂ ಸೇರಿಸೋದಿಕ್ಕೆ ನೋಡಿದ್ಲು. ಅವರಿಬ್ರೂ ಒಪ್ಲಿಲ್ಲ""ತನುಹಾ ಬಂಡೆಯಿಂದ ಅಲೆಗಳ ಹೊಡೆತಕ್ಕೆ ಸಿಕ್ಕಿ, ಬಿದ್ದಿದ್ದನ್ನು ನಾನು ನೋಡಿದ್ದೀನಿ""ಅದು ನೀನು ತಿಳ್ಕೊಂಡಿರೋ ತಪ್ಪು ಸಮೀರ. ಶಶಿರೇಖಾ, ತನುಹಾಳನ್ನು ಮಾನಸಿಕವಾಗಿ ಹಿಂಸಿಸಿದ್ದಾಳೆ. ನೊಂದು ಹೋದ ಅವಳು ನಿನ್ನ ಪ್ರೀತಿಗಾಗಿ ಕಾದ್ಲು. ನೀನು ಸರಿಯಾದ ಉತ್ತರ ಕೊಡ್ಲಿಲ್ಲ. ಹುಚ್ಚಿಯಂತೆ ಬಂಡೆಯೇರಿ ಕುಳಿತಿದ್ಲು. ನೀನು ಅಲ್ಲಿಗೆ ಹೋಗದಿದ್ರೂ ಆ ದಿನ ಅವಳು ನಿರ್ಧರಿಸಿದಂತೆ ಆತ್ಮಹತ್ಯೆ ಮಾಡಿಕೊಳ್ತಾ ಇದ್ಲು. ಅದಕ್ಕೆ ಸಾಕ್ಷಿ ಅವಳು ತನ್ನ ಕೋಣೆಯಲ್ಲಿ ಬರೆದಿಟ್ಟಿರೋ ಪತ್ರ. ಅದನ್ನು ಶಾಲಿನಿ ನನಗೆ ತೋರಿಸಿದ್ಲು. ಅದರಲ್ಲಿ ನಿನ್ನ ಹೆಸರು ಇದ್ದಿದ್ದನ್ನು ನೋಡಿ ಅವಳು, ತನುಹಾಳ ಸಾವಿಗೆ ನೀನೇ ಕಾರಣಾಂತ ತಿಳಿದಿದ್ಲು... ಆದ್ರೆ ನಿನ್ನೆ ರಾತ್ರಿ ಶಾಲಿನಿ ನಿನ್ನ ಭೇಟಿಯಾಗೋದನ್ನು ಕದ್ದು ಹಿಂಬಾಲಿಸಿದ ಇವಳು, ಮನೆಗೆ ಬಂದವಳಿಗೆ ನಿನ್ನ ಭೇಟಿಯಾಗದ ಹಾಗೆ ಷರತ್ತು ಹಾಕಿದ್ಲು. ಮಾತಿಗೆ ಮಾತು ಬೆಳೆದು ಅವಳನ್ನು ಇರಿದ್ಲು... ಇನ್ನೂ ಇವಳನ್ನು ಸುಮ್ನೆ ಬಿಟ್ಟಿರಬೇಕೂಂತ ಹೇಳ್ತೀಯಾ?"ತಲೆ ಸಿಡಿದು ಹೋಗುವಂತೆ ಭಾಸವಾಯಿತು. ಹಣೆಗೆ ಕೈಯೊತ್ತಿಕೊಂಡ ಕಥೆಗಾರ.ಬಾಗಿಲಿನ ಉದ್ದಕ್ಕೂ ಬಿದ್ದ ಪೊಲೀಸ್ ಅಧಿಕಾರಿಯ ನೆರಳಿಗೆ, ಪಶ್ಚಾತ್ತಾಪದ ಕಳೆಯೇ ಇರದ ಹೆಂಗಸು ಸೋತಂತೆ ಕುಸಿದು ಕುಳಿತಿತು.ಐವತ್ತನೆ ಕಥೆಯ ಹಾಳೆಯ ಕೊನೆಯ ಪುಟದಲ್ಲಿ `ಮುಗಿಯಿತು' ಎಂದು ಬರೆದ ಸಮೀರ ನಿಟ್ಟುಸಿರಿಟ್ಟ.


Read more!