Saturday, February 14, 2009

ಬಿಳಿಕಾಗೆ (ಕಥೆ)


ಮಧ್ಯಾಹ್ನದ ಊಟ ಮುಗಿಸಿ, ಚೇರ್‍‍ನಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಸೊನಾಲಿ ಅಂತರ್ಜಾಲದ ಪುಟಗಳ ಮೇಲೆ ಕಣ್ಣಾಡಿಸಿದಳು. ಕಂಪ್ಯೂಟರ್‍‍ನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಂಡು ಸೋಜಿಗದಿಂದ ಮತ್ತೊಮ್ಮೆ ಓದಿಕೊಂಡಳು. ಅವಳ ನಿರೀಕ್ಷೆಗೂ ಮೀರಿದ ವಾಕ್ಯ ಅದು. ಕೂಡಲೆ ಪರದೆಯನ್ನು ಮುಚ್ಚಿ, ಅತ್ತಿತ್ತ ದೃಷ್ಟಿ ಹಾಯಿಸಿದಳು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದ ಮೇಲೆ ಸಮಾಧಾನವೆನಿಸಿತು. ಯಾರೋ ಕುಚೋದ್ಯಕ್ಕೆ ಕಳುಹಿಸಿದ ಇ-ಮೇಲ್ ಅದು! ಆದರೆ ಸ್ಪಷ್ಟವಾಗಿ ಬರೆದಿತ್ತು. `ಸೊನಾಲಿ, ಸಂಜೆ ಆಫೀಸು ಮುಗಿಸಿ ನೇರವಾಗಿ ಟಾರಸಿಗೆ ಬಾ. ಹೇಳಿದಷ್ಟು ಮಾಡದಿದ್ದರೆ ಪರಿಣಾಮ ನೆಟ್ಟಗಾಗಿರೋದಿಲ್ಲ' ಅದನ್ನು ನೆನೆಯುತ್ತಲೇ ಅಂಗೈ ಕೂಡ ಬೆವರಿತು.

ಈ ಹೊತ್ತಿನಲ್ಲಿ ತಾನು ಇ-ಮೇಲ್ ತೆರೆದು ನೋಡುವ ವಿಷಯ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ಮೀಸೆ ಬೋಳಿಸಿ, ಹೆಣ್ಣಿನ ವೇಷ ತೊಡಿಸಿದ ಹಾಗಿರುವ ಕಂಪ್ಯೂಟರ್‍‍ನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಹೆಣ್ಣು ವಾಸಂತಿಗೆ! ಆ ವಿಷಯದಲ್ಲಿ ತನಗಿಂತ ಬೇರೆಯವರಿಗೆ ಹೆಚ್ಚು ತಿಳಿಯಬಾರದು ಅನ್ನುವ ಸಣ್ಣ ಬುದ್ಧಿಯ ಹೆಣ್ಣು ಅವಳು. ಅಂತರ್ಜಾಲ ನೋಡುವುದೇ ದೊಡ್ಡ ಅಪರಾಧವೆಂದು, ಆ ವಿಷಯವನ್ನು ಮೇಲಧಿಕಾರಿಗೂ ತಿಳಿಸಿದ್ದಳು. ಸ್ವಂತ ಬುದ್ಧಿ ಇಲ್ಲದ ಮೇಲಧಿಕಾರಿ ವಾಸಂತಿಯ ಮಾತನ್ನು ಕೇಳಿ, ಸೋನಾಲಿಯನ್ನು ಕರೆದು ಚೆನ್ನಾಗಿ ಬೈದಿದ್ದ. ಹೆಣ್ಣು ವೇಷದ ಹೆಣ್ಣಿನಂತೆ ಹಲ್ಲು ಪ್ರದರ್ಶಿಸಿ ಅಧಿಕಾರಿಯ ಮನಸ್ಸು ಗೆಲ್ಲುತ್ತಿದ್ದರೆ ಸುಮ್ಮನಿರುತ್ತಿದ್ದನೇನೋ?ಅವಳೇ ಏಕೆ ಈ ಪತ್ರವನ್ನು ಕಳುಹಿಸಿರಬಾರದು. ಸೊನಾಲಿ ಎದ್ದು ಒಮ್ಮೆ ಅತ್ತ ನೋಡಿದಳು. ಹೊಟ್ಟೆಕಿಚ್ಚಿನ ಹೆಣ್ಣು ಅಲ್ಲಿರಲಿಲ್ಲ. ಮೇಲ್ ಕಳುಹಿಸಿದವರು ಯಾರು? ಇಷ್ಟಕ್ಕೂ ಟಾರಸಿಯ ಮೇಲೆ ಬರುವಂತೆ ತನ್ನನ್ನು ಕರೆದಿರುವುದು ಏಕೆ? ಟಾರಸಿಯ ಮೇಲೆ ಬರುವಂತೆ ಕರೆದಿರುವುದರಿಂದ ಇಲ್ಲಿಯೇ ಯಾರದೋ ಕೈವಾಡ! ಅನುಮಾನ ಬಲವಾಯಿತು. ಪ್ರತಿಯೊಂದು ಮೇಜಿನ ಮುಂದೆ ಕುಳಿತಿರುವ ವ್ಯಕ್ತಿಯ ಮೇಲೆ ಸಂಶಯದ ನೋಟ ಹರಿಸಿದಳು. ಯಾರ ಮೇಲೂ ಗಾಢವಾದ ಅನುಮಾನ ಸುಳಿಯಲಿಲ್ಲ.ತಟ್ಟನೆ ನೆನಪಾಯಿತು. ಎರಡು ದಿವಸಗಳ ಹಿಂದೆ ಹೀಗೆ ಟಾರಸಿ ಹತ್ತಿ ಹೋಗಿದ್ದನ್ನು ಯಾರೋ ಗಮನಿಸಿದ್ದಾರೆ. ಆ ಕಿಡಿಗೇಡಿಗಳದ್ದೇ ಕೆಲಸ.ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದ ವಿಷಯ ಮನಸ್ಸನ್ನೂ ಆಕರ್ಷಿಸಿತ್ತು. ಎದುರಿಗೆ ಗಗನಕ್ಕೆ ಮುಖವೆತ್ತಿ ನಿಂತಿರುವ ನಕ್ಷತ್ರ ಹೋಟೇಲು ಅದು. ಅಲ್ಲಿ ಮೂರನೇ ಅಂತಸ್ತಿನಲ್ಲಿ, ಅಂದರೆ ಆಫೀಸಿನ ಕಟ್ಟಡದ ಟಾರಸಿಯ ನೇರಕ್ಕೆ ಸಿನೆಮಾನದ ಶೂಟಿಂಗ್! ಅದು ಶುಭಾಶ್ರೀ ತಿಳಿಸಿದ ಸಂಗತಿ. ಕುತೂಹಲಕ್ಕೆ ಟಾರಸಿ ಹತ್ತಿ ಹೋದಾಗ ಕ್ಯಾಮರಾ ಮೆನ್‍ನ ಕಣ್ಣು ತನ್ನ ಮೇಲೆ ಸುಳಿದಿದ್ದರ ಅರಿವಿರಲಿಲ್ಲ. ಸಂಜೆಯ ಹೊತ್ತು ಆಫೀಸು ಮುಗಿಸಿ ಕೆಳಗಿಳಿದು ಬರುವಾಗ ಕಾದು ನಿಂತಿದ್ದ!ಸೊನಾಲಿ ಸೀರೆಯ ಸೆರಗನ್ನು ಹಾರಿಸಿಕೊಂಡು ರಸ್ತೆಗಿಳಿದಾಗ ಧುತ್ತೆಂದು ಎದುರು ಬಂದು ನಿಂತ. ತಲೆಯ ಮೇಲೆ ಮಧ್ಯಾಹ್ನ ಕಂಡಿದ್ದ ಬಿಳಿಯ ಟೊಪ್ಪಿ ಮಾಯವಾಗಿತ್ತು. ಅವನನ್ನು ಗುರುತಿಸುವುದು ಕಷ್ಟವಾಯಿತು."ಕ್ಷಮಿಸಿ, ನೇರವಾಗಿ ಹೇಳ್ತೀನಿ. ಈ ತಿಳಿ ಗುಲಾಬಿ ರಂಗಿನ ಸೀರೆಯಲ್ಲಿ ಯಾವ ನಾಯಕಿಗಿಂತಲೂ ನೀವು ಕಡಿಮೆಯಿಲ್ಲ. ನಿಮಗೆ ಸೌಂದರ್ಯ ಒಂದು ವರವಾಗಿದೆ. ಅದನ್ನು ಬಳಸಿಕೊಳ್ಳಿ" ಏಕಾಏಕಿ ಪ್ರಶಂಸೆಯ ಮಾತನಾಡಿ ಅವಳ ಚಿತ್ತವನ್ನು ಕದಡಿದ್ದ.ಸೇಲಂಗೆ ಹೋಗಿ ಬರುತ್ತೇನೆಂದ ಪ್ರಮೀಳಾ ಮಧುರೈವರೆಗೂ ಹೋಗಿ ತನಗಾಗಿ ತಂದಿದ್ದ ಗುಲಾಬಿ ರಂಗಿನ ಸೀರೆ ಅದು. ಆಫೀಸಿಗೆ ಬೇಗನೆ ಹೊರಟಿದ್ದಕ್ಕೆ ಸೀರೆಯುಟ್ಟು, ಅದಕ್ಕೊಪ್ಪುವ ಸ್ಲೀವ್ ಲೆಸ್ ಕುಪ್ಪಸ ತೊಟ್ಟು, ಅದೇ ಬಣ್ಣದ ಗುಲಾಬಿ ಹೂವನ್ನು ತುರುಬಿಗೆ ಸಿಕ್ಕಿಸಿದ್ದು, ತಾನು ಇಷ್ಟೊಂದು ಆಕರ್ಷಕವಾಗಿ ಕಾಣಲು ಸಾಧ್ಯವಾಗಿದ್ದೇ?"ಅನಗತ್ಯ ಹೊಗಳ್ತಾ ಇದ್ದೀರಿ. ಇಷ್ಟಕ್ಕೂ ನೀವು ಯಾರು?" ಅನುಮಾನದ ನೋಟ ಅವನತ್ತ ಹರಿಸಿ ಕೇಳಿದಳು. ಅವನು ತುಂಬಾ ಚೆನ್ನಾಗಿ ನಕ್ಕಿದ್ದ."ನೀವು ನನ್ನ ಗಮನಿಸಲಿಲ್ಲ ಅನ್ನಿ. ಇವತ್ತು ಮಧ್ಯಾಹ್ನ ನಿಮ್ಮನ್ನು ಟಾರಸಿಯ ಮೇಲೆ ನೋಡಿದೆ. ನನ್ನ ಕ್ಯಾಮರಾ ನಿಮ್ಮ ರೂಪವನ್ನು ಹಿಡಿದಿಟ್ಟಿದೆ. ಜೊತೆಗೆ ನನ್ನ ಕಣ್ಣೂ..." ಅವನ ಮಾತು ಉಪೇಕ್ಷೆಯೆನಿಸಿತು. ಅವಳು ಕಣ್ಣುಗಳನ್ನು ಅರಳಿಸಿ ಅಷ್ಟೇ ಮುಗ್ಧತೆಯಿಂದ ಕೇಳಿದಳು."ನೀವು... ಸಿನಿಮಾದವರು...?" ಏನನ್ನೋ ಹುಡುಕುವ ನೋಟ ಅವಳದ್ದಾಗಿತ್ತು. ಸಿನಿಮಾದವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದಳಷ್ಟೆ. ಹೀಗೆ, ನೇರವಾಗಿ ನೋಡಿರಲಿಲ್ಲ. ಅದೇ ಕುತೂಹಲ ಅವಳನ್ನು ಆ ಸುಡು ಬಿಸಿಲಿನಲ್ಲಿಯೂ ಟಾರಸಿಯ ಮೆಟ್ಟಿಲುಗಳನ್ನು ಏರುವಂತೆ ಪ್ರಚೋದಿಸಿದ್ದು."ಹೌದು" ಅವನು ಒಪ್ಪಿಕೊಂಡು ನುಡಿದ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಮುಗಿದು ಹೋಗುತ್ತದೆ ಅನ್ನುವ ಸತ್ಯವನ್ನು ಹೇಳಿದ್ದ. ಜೊತೆಗೆ ಅವಳಿಗೆ ಸಿನಿಮಾದಲ್ಲಿ ಅವಕಾಶವನ್ನು ನೀಡುವ ದೊಡ್ಡ ಮನಸ್ಸೂ ಮಾಡಿದ್ದ. ಆದರೆ ಅನಾಯಾಸವಾಗಿ ಬಂದ ಅವಕಾಶವನ್ನು ನಿರಾಕರಿಸಿದ್ದಳು. ಸಿನಿಮಾದಲ್ಲಿ ಅಭಿನಯಿಸುವುದು ಪ್ರತಿಷ್ಟೆಯ ಕೆಲಸವಲ್ಲ. ಹೀಗೆ ಆಫೀಸಿನಲ್ಲಿ ಕೆಲಸ ಮಾಡಿಕೊಂಡು ತಿಂಗಳ ಕೊನೆಗೆ ಸಂಬಳ ಎಣಿಸುವುದೇ ಸಂತೋಷದ ವಿಷಯ ಎಂದು ಚಿಂತಿಸುವ ಸಾಮಾನ್ಯ ಹುಡುಗಿಯೊಬ್ಬಳ ಅಭಿಮತದಂತೆ ಅವಳದ್ದೂ ಆಗಿತ್ತು. ಅದನ್ನು ಅವನಿಗೆ ಹೇಳಿಯೂ ಇದ್ದಳು. ಸೌಂದರ್ಯಕ್ಕೆ ಮಾರುಹೋದವನು ಭರವಸೆಯ ಮಾತುಗಳನ್ನು ಹೇಳಿ ಅವಳಿಂದ ಸಂಕ್ಷಿಪ್ತ ಪಟ್ಟಿಯನ್ನು ಪಡೆದುಕೊಂಡಿದ್ದ."ಮುಂದೆ ಅಗತ್ಯವಾಗಿಯೂ ನಿಮಗೆ ಒಳ್ಳೆಯ ಕೆಲಸವನ್ನು ಕೊಡಿಸುವೆ" ಅವನು ಭರವಸೆಯಿತ್ತಿದ್ದ.ಆದರೆ ಶೂಟಿಂಗ್ ಪ್ಯಾಕ್ ಅಪ್ ಆಗಿ ಒಂದೆರಡು ತಿಂಗಳುಗಳು ಕಳೆದರೂ ಅವನಿಂದ ಉತ್ತರವಿರಲಿಲ್ಲ. ಆತನ ವಿಷಯ ಅಪರೂಪಕ್ಕೊಮ್ಮೆ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಷ್ಟಕ್ಕೇ ಸಿನಿಮಾದವರ ಮೇಲಿದ್ದ ಅಲ್ಪಸ್ವಲ್ಪ ಒಳ್ಳೆಯ ಭಾವನೆಯೂ ಹೋಗಿತ್ತೆನ್ನುವಾಗ ಪತ್ರ ಕಳುಹಿಸಿದ್ದ.ಕುಲುಮನಾಲಿಯ ಸುಂದರ ತಾಣಗಳಲ್ಲಿ ಬಿಡುವಿಲ್ಲದ ಚಿತ್ರೀಕರಣದಿಂದಾಗಿ ಸಂಪರ್ಕವಿಟ್ಟುಕೊಳ್ಳಲು ಸಾಧ್ಯಾವಾಗಿಲ್ಲದಕ್ಕೆ ಕ್ಷಮಾಪಣೆಯನ್ನು ಕೇಳಿ ಬರೆದಿದ್ದ ಪತ್ರ ಅದು. ಜೊತೆಗೆ ಮುಂದಿನ ವಾರ ಅವಳನ್ನು ಭೇಟಿಯಾಗುವುದಕ್ಕೆ ಬರುತ್ತಿರುವುದಾಗಿ ತಿಳಿಸಿದ್ದ. ಅವಳು ಕಾದಿದ್ದೆ ಬಂತು. ಅವನು ಮತ್ತೆ ಶೆಡ್ಯೂಲ್ ಬದಲಾಗಿದೆಯೆಂದು ಪತ್ರ ಕಳುಹಿಸಿ ನಿರಾಶೆಗೊಳಿಸಿದ್ದ.ಶುಭಾಶ್ರೀ ಆ ದಿನ ಮಂಕಾಗಿದ್ದ ಸೊನಾಲಿಯನ್ನು ಆಫೀಸಿನ ಕಿಟಕಿಯ ಪಕ್ಕ ಕರೆದೊಯ್ದಿದ್ದಳು."ನೋಡಲ್ಲಿ ಬಿಳಿಕಾಗೆ" ತೋರು ಬೆರಳನ್ನು ಮುಂದಕ್ಕೆ ಹಿಡಿದು ಹೇಳಿದಳು.ಸೊನಾಲಿಗೆ ಗೆಳತಿಯ ಮಾತು ಕೇಳಿ ಆಶ್ಚರ್ಯ.ಬಿಳಿಕಾಗೆ!ಅವಳು ಕಟ್ಟಡಗಳ ಅಂಚಿಗೆಲ್ಲಾ ದೃಷ್ಟಿ ಹಾಯಿಸಿ ನೋಡಿದರೂ ಎಲ್ಲೂ ಕಾಣಿಸಲಿಲ್ಲ. ಬಿಳಿಕಾಗೆ ಇದೆಯೆಂದು ನಂಬಿದ್ದೆ ತನ್ನ ಮೂರ್ಖತನ. ಗೆಳತಿಗೆ ಬೈದು ಹಿಂದಕ್ಕೆ ಹೊರಳಿದಳು.ಶುಭಾಶ್ರೀ ಬಿಡಲಿಲ್ಲ. ಕುತೂಹಲ ತೋರಿಸುವೆನೆಂದು ಅವಳನ್ನು ಎಳೆದುಕೊಂಡು ಟಾರಸಿಯಲ್ಲಿ ನಿಲ್ಲಿಸಿದಳು. ಮೂರಂತಸ್ತಿನ ಕೆಳಗೆ ಕಿಟಕಿಯ ಪಕ್ಕ ನಿಂತು ಎತ್ತಲೋ ನೋಡುತ್ತಿತ್ತು ಬಿಳಿಕಾಗೆ! ಕಾಕ ದೃಷ್ಟಿ ಟಾರಸಿಯಲ್ಲಿ ನಿಂತಿದ್ದ ಇಬ್ಬರತ್ತಲೂ ಸುಳಿದಾಗ, ಶುಭಾಶ್ರೀ ಪಕ್ಕಕ್ಕೆ ಸರಿದರೆ, ಸೊನಾಲಿ ಪೂರ್ತಿಯಾಗಿ ಗೋಚರಿಸಿದಳು. ಏನೂ ಮಾಡಲಾಗದೆ ಹಾಗೆ ನಿಂತಿದ್ದಳು. ಬಿಳಿಕಾಗೆ ಕೈ ಎತ್ತರಿಸಿ ಸಂಜ್ಞೆ ಮಾಡಿತು.ಹಿಂದಕ್ಕೆ ಜಿಗಿದ ಸೊನಾಲಿ ಗೆಳತಿಯ ತಲೆಗೊಂದು ಮೊಟಕಿದಳು."ಮೋಸ ಮಾಡ್ದೆ ನೀನು... ಹೀಗಂತ ಗೊತ್ತಿದ್ರೆ ನಾನು ಅಲ್ಲಿಗೆ ಬರ್‍ತಾ ಇರ್‍ಲಿಲ್ಲ. ನಿನ್ನದು ಅತಿಯಾಯ್ತು" ಗೆಳತಿಯತ್ತ ಸಿಡುಕು ತೋರಿಸಿ ಕೆಳಗಿಳಿದು ಬಂದಳು.ತನ್ನ ಸೀಟ್‍ನಲ್ಲಿ ಕುಳಿತು ತಲೆಗೆ ಕೈ ಹಚ್ಚಿದಳು. ಶುಭಾಶ್ರೀಯ ತುಂಟತನಕ್ಕೆ ಯಾವ ತೊಂದರೆಯನ್ನು ಎದುರಿಸಬೇಕೋ? ತಿಳಿಯದೆ ಕಂಗಾಲಾಗಿದ್ದಳು."ಆ ಬಿಸಿಲಿಗೆ ಟಾರಸಿಯಲ್ಲಿ ನಿಲ್ಲೋದನ್ನು ಬಿಡುವುದಿಲ್ಲ ನೀವು" ನಕ್ಕು ಹೇಳಿದವನ ಮಾತಿಗೆ ಬೆಚ್ಚಿ, ಎದ್ದು ನಿಂತಳು.ಹಿತೇಶ ನಿಂತಿದ್ದ. ಸದಾ ಕ್ಯಾಮರಕ್ಕೆ ಕಣ್ಣು ಹಚ್ಚಿ, ತನ್ನನ್ನು ತಾನು ಅದರ ಜೊತೆಗೆ ಹೊಂದಿಸಿಕೊಂಡಿದ್ದ ಸಿನಿಮಾದ ವ್ಯಕ್ತಿ; ಹೀಗೆ ಏಕಾಏಕಿ ಬಂದು ನಿಲ್ಲುವನೆನ್ನುವ ನಿರೀಕ್ಷೆಯನ್ನೂ ಅವಳು ಮಾಡಿರಲಿಲ್ಲ."ತಲೆಗೆ ಕೈ ಹಚ್ಚಿಕೊಂಡಿದ್ರಿ, ತಲೆ ನೋವೆ? ಈ ಸುಡು ಬಿಸಿಲಿಗೆ ಟಾರಸಿಯ ಮೇಲೆ ನಿಂತ್ರೆ ಮತ್ತೇನು ಬರುತ್ತೆ?" ವ್ಯಂಗ್ಯವಾಗಿರಲಿಲ್ಲ ಮಾತು.ಸೊನಾಲಿಗೆ ಅವನನ್ನು ವಿಚಾರಿಸುವಷ್ಟು ಕೂಡ ವಿವೇಕವಿರಲಿಲ್ಲ. ಅವಳ ಸಹಾಯಕ್ಕೆ ಶುಭಾಶ್ರೀಯೇ ಬರಬೇಕಾಯಿತು. ನಿಂತೇ ಇದ್ದ ಅವನನ್ನು ಕುಳಿತುಕೊಳ್ಳುವಂತೆ ಹೇಳಿದ ಶುಭಾಶ್ರೀ, ಸೊನಾಲಿಯತ್ತ ತಿರುಗಿ ಕಣ್ಣು ಮಿಟುಕಿಸಿದಳು."ಸಿನಿಮಾವೆಂದ್ರೆ ಜೀವ ಬಿಡ್ತೀಯಾ. ಇವರು ಸಿನಿಮಾದವರೆ. ಸ್ಟಾರ್ ಹೋಟೇಲ್‍ನಲ್ಲಿ ಶೂಟಿಂಗ್ ಆಗ್ತಿತ್ತು ನೆನಪಿದೆಯಾ? ಅದರ ಕ್ಯಾಮರಾಮನ್ ಹಿತೇಶ್ ಅಂತ" ಅವಳು ಎದುರಿಗಿದ್ದವನನ್ನು ಪರಿಚಯಿಸುವಾಗ ಸೊನಾಲಿ ಮುಖದಲ್ಲಿ ನಗು ತಂದುಕೊಂಡಳು.ಹಿತೇಶ ಹೀಗೆ ಎರಡು ಮೂರು ಬಾರಿ ಬಂದಿದ್ದ. ಅವನ ಒಡನಾಟ ಮುಂದೆ ಪ್ರೀತಿಸುವಲ್ಲಿಯವರೆಗೂ ತಲುಪಿತು. ಪ್ರೀತಿ ಪರಾಕಾಷ್ಠೆ ತಲುಪಿದಾಗ ಹಿತೇಶ ಹೇಳ ಹೆಸರಿಲ್ಲದೆ ದೂರವಾದ. ಅವನಿಗೇನು ಒಡಕು ಕಂಡಿತೋ? ಸೊನಾಲಿಯ ಎದೆಯಲ್ಲಿಯೂ ನೋವಿನ ಬಡಿತ. ಅದಕ್ಕೆ ಬರೆಯೆಳೆಯುವಂತೆ ಬಿಳಿಕಾಗೆ ಅವಳ ಹಿಂದೆ ಬಿದ್ದಿತ್ತು.ಒಮ್ಮೆ ಮೇಲಧಿಕಾರಿ ಅವಳನ್ನು ಕರೆದು ವಿಚಾರಿಸಿದ."ಹೀಗೆ ಮಂಕಾಗಿ ಕೂತ್ರೆ ಕೆಲಸ ಸಾಗೋದಿಲ್ಲ. ಇಲ್ಲಿ ಮನಸ್ಸಿಲ್ಲದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡು" ಪದೇ ಪದೇ ಒತ್ತಾಯಿಸಿದಾಗ ಕಣ್ಣೀರಿಟ್ಟು ಕ್ಷಮೆ ಕೇಳಿ ಹೊರಗೆ ಬಂದಿದ್ದಳು. ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಅವಳನ್ನು ದಿನಾ ಗೋಳು ಹೊಯ್ಸಿಕೊಂಡ. ಸುಲಭವಾಗಿ ಯಾವುದಕ್ಕೂ ಒಪ್ಪದ ಅವಳನ್ನು ಮೇಲ್ ಮಾಡಿ ಹೆದರಿಸಿದ್ದು ಇದೆ. ಈಗ ಟಾರಸಿಗೆ ಕರೆದಿರುವುದು ಕೂಡ ಅವನೇ!? ಅನುಮಾನ ಬಲವಾಯಿತು.ಶುಭಾಶ್ರೀಯನ್ನು ಕರೆದು ಮೇಲ್‍ನ ವಿಷಯವನ್ನು ತಿಳಿಸಿದಳು. ಮೇಲ್ ಐಡಿ ಕೂಡ ಯಾರದೋ ಏನೋ? ಅವಳ ಮುಖದಲ್ಲಿಯೂ ಗೊಂದಲವಿತ್ತು. ಅದನ್ನು ನಿರಾಕರಿಸಿದಳು. ಆದರೆ ಇನ್ನೊಂದು ವಿಷಯ ಸ್ಪಷ್ಟವಾಗಿತ್ತು. ಬಿಳಿಕಾಗೆಗೆ ಪಾರಿವಾಳಗಳ ಬೆನ್ನಟ್ಟುವ ಬಲಹೀನತೆ. ಯಾವುದೋ ಪಾರಿವಾಳದ ಜೊತೆಗೆ ಸುತ್ತಾಡುವುದಕ್ಕೆ ಹೋಗಿತ್ತು ಕಾಗೆ."ಬಿಳಿಕಾಗೆ ಮೇಲೆ ನಂಗೆ ಅನುಮಾನ. ನಿನಗೆ ಮೇಲ್ ಕಳುಹಿಸಿ ಕಾಗೆ ಎಲ್ಲೋ ಹಾರಿ ಹೋಗಿದೆ. ಇವತ್ತು ಅಲ್ಲಿ ಕಾಣಿಸ್ತಿಲ್ಲ" ಕಿಟಿಕಿಯ ಪಕ್ಕಕ್ಕೆ ನಿಂತು ಉದ್ಗಾರವೆಳೆದ ಶುಭಾಶ್ರೀಯ ಮಾತಿಗೆ ಕೆಂಡ ತುಳಿದಂತಾಯಿತು. ಕಾಕ ದೃಷ್ಟಿ ತನ್ನ ಮೇಲೆ?"ಏನಾದರಾಗಲಿ ಧೈರ್ಯವಾಗಿ ಹೋಗು. ನಾನು ಬರಬೇಕೆಂದಿದ್ದೆ. ಆದರೆ ಇವತ್ತು ಸಾಧ್ಯವಿಲ್ಲ. ಸಂದೇಶ್ ನನಗಾಗಿ ಬಿಗ್ ಬಜಾರ್‍‍ನಲ್ಲಿ ಕಾಯ್ತಿರ್‍ತಾನೆ. ಬೇಕಾದಲ್ಲಿ ರಾಮಯ್ಯನನ್ನು ಕರೆದುಕೊಂಡು ಹೋಗು" ಗೆಳತಿಯ ಮಾತಿಗೆ ಬೆದರು ಕಣ್ಣುಗಳನ್ನು ಮತ್ತಷ್ಟು ತೆರೆದಳು. ವಿಷಯ ಸಂಪೂರ್ಣ ತಿಳಿಯದೆ ಸುದ್ದಿ ಹರಡುವುದು ಬೇಡವಾಗಿತ್ತು."ಬೇಡ, ನಾನೇ ನಿಭಾಯಿಸ್ತೀನಿ" ಮೊಂಡು ಧೈರ್ಯ ತಂದುಕೊಂಡು ಸಂಜೆ ಆಫೀಸು ಮುಗಿಯುತ್ತಲೇ ನಡುಗುವ ಹೆಜ್ಜೆಗಳನ್ನು ಟಾರಸಿಯ ಮೆಟ್ಟಿಲುಗಳತ್ತ ಹೊರಳಿಸಿದಳು.ಟಾರಸಿಯ ಮೇಲೆ ಬಂದಾಗ ಸಂಜೆಯ ಸೂರ್ಯ ಕೆಂಪಗೆ ಮುಖ ಮಾಡಿದ್ದ. ಗಗನಚುಂಬಿ ಕಟ್ಟಡಗಳ ನೆರಳು ಟಾರಸಿಯ ಮೇಲೆ ಬಿದ್ದಿತ್ತು. ಸುತ್ತಲೂ ದೃಷ್ಟಿ ಹಾಯಿಸಿದವಳಿಗೆ ಯಾರೂ ಕಾಣಿಸದಿದ್ದದ್ದು ಸೋಜಿಗವೆನಿಸಿತು. ಇದು ತನ್ನ ಅವಿವೇಕಿತನ. ಯಾರದೋ ಸುಳ್ಳು ಮೇಲ್ ನೋಡಿ ಇಲ್ಲಿಗೆ ಬಂದ ತಾನೆಂಥವಳು?ಹಿಂದಕ್ಕೆ ತಿರುಗಿ ಹೆಜ್ಜೆ ಎತ್ತಿಟ್ಟವಳನ್ನು ನಿಲ್ಲಿಸಿತು ಕಾಗೆಯ ಕೂಗು. ತಟ್ಟನೆ ನಿಂತು ಉಸಿರು ಬಿಗಿ ಹಿಡಿದಳು. ಕಾಲ ಬುಡದಲ್ಲಿಯೇ ಅಂಗಾತವಾಗಿ ಬಿದ್ದಿತ್ತು ಬಿಳಿಯ ಕಾಗೆ!ಅವಳ ಬಾಯಿಯಿಂದ ಚಿತ್ಕಾರ ಹೊರಟಿತು!
***
ಜನ ನಿಬಿಡ ಪ್ರದೇಶದ ಅತಿ ವಾಹನ ಸಂಚಾರದ ರಸ್ತೆಯನ್ನು ಮಿಂಚಿನ ವೇಗದಲ್ಲಿ ದಾಟಿ, ಜನಜಂಗುಳಿಯ ನಡುವೆ ಸೇರಿಕೊಂಡ ಸೊನಾಲಿಗೆ ಕೈ ಗಡಿಯಾರವನ್ನು ನೋಡುವಷ್ಟೂ ಸಮಯವಿರಲಿಲ್ಲ. ಬೆಳಗ್ಗೆ ಬೇಗನೆ ಎದ್ದು ಹೊರಟಿದ್ದರೂ ಸಮಯಕ್ಕೆ ಸರಿಯಾಗಿ ಬರದ ಬಸ್ಸು, ಅವಳಲ್ಲಿ ಆತಂಕವನ್ನು ಸೃಷ್ಟಿಸಿತು. ಇನ್ನು ಅರ್ಧ ಗಂಟೆಯಲ್ಲಿ ಗಮ್ಯ ತಲುಪುವುದು ಸಾಧ್ಯವೆ? ಅನುಮಾನ ಬಲವಾಯಿತು. ಆದರೆ ಹಿಂದೆ ಸರಿಯುವಂತೆ ಇಲ್ಲ. ಅದು ಬದುಕಿನಲ್ಲಿ ಬಹು ನಿರೀಕ್ಷೆಯಿಂದ ಮುಂದಿಟ್ಟ ದೊಡ್ಡ ಹೆಜ್ಜೆ.ಅವಳು ಸುಸಜ್ಜಿತವಾದ ಹೊಟೇಲನ್ನು ತಲುಪುವಾಗ ಮುಖದ ಮೇಲೆ ಬೆವರು ಇಳಿಯುತ್ತಿತ್ತು. ಸಂದರ್ಶನ ನಡೆಯುವ ಕೋಣೆಯನ್ನು ತಲುಪುವಾಗ ಅಲ್ಲಿ ಸಣ್ಣದೊಂದು ಸರತಿಯ ಸಾಲು ನಿಂತಿತ್ತು. ಅವಳು ಬ್ಯಾಗ್‍ನಲ್ಲಿದ್ದ ಕಾಗದ, ಪತ್ರಗಳನ್ನು ತೆಗೆದು ಸರದಿಯ ಕೊನೆಯಲ್ಲಿ ತಾನೂ ಸೇರಿಕೊಂಡಳು. ಸರದಿಯಲ್ಲಿ ನಿಂತಿರುವವರು ಯಾಕಾಗಿ ನಿಂತಿರುವರೆಂಬ ಅರಿವು ಅವಳಿಗಿರಲಿಲ್ಲ. ಮುಂದೆ ನಿಂತಿದ್ದ ಅಭ್ಯರ್ಥಿಯನ್ನು ಕೇಳಿದಳು."ಇದು ಸಂದರ್ಶನಕ್ಕಾಗಿ ಕಾದಿರೋ ಸರದಿಯಲ್ಲವೆ?"ಅವಳನ್ನು ಕೂಲಂಕಷವಾಗಿ ಗಮನಿಸಿದ ಅವನು ಮುಖ ಸಿಂಡರಿಸಿ ತಲೆಯಲುಗಿಸಿದ."ಇದು ಏರ್ ಹೊಸ್ಟೇಸ್ ಹುದ್ದೆಗೆ ಕಾದಿರೋ ಸರದಿ. ನೀವು...?" ಅವಳತ್ತ ಅನುಮಾನದ ನೋಟ ಹರಿಸಿದ. ಸೊನಾಲಿ ಭೂಮಿಗಿಳಿದು ಹೋದಳು. ತಾನು ತಪ್ಪು ಸಾಲಿನಲ್ಲಿ ಕಾದಿರುವೆ."ಕ್ಷಮಿಸಿ" ಅವಳು ಉತ್ತರಿಸದೆ ನೇರವಾಗಿ ಕೆಳಗಿಳಿದು ರಿಸೆಪ್ಷನ್‍ಗೆ ಬಂದಳು. ತನ್ನ ಸಂದರ್ಶನದ ಆಹ್ವಾನ ಪತ್ರವನ್ನು ತೋರಿಸಿದಳು. ರಿಸೆಪ್ಷನ್ ಹುಡುಗಿ ಕೈ ತೋರಿಸಿದತ್ತ ನಡೆದಳು. ಕೋಣೆ ಮುಚ್ಚಿತ್ತು. ನಯವಾಗಿ ಕೋಣೆಯ ಮೇಲೆ ಬಡಿದಾಗ ಒಳಗಿನಿಂದ ದನಿ ಕೇಳಿಸಿತು. ಮೆಲ್ಲನೆ ಬಾಗಿಲು ತೆರೆದು ಒಳಗೆ ನಡೆದಳು.ಒಮ್ಮೆಲೆ ಮುಖಕ್ಕೆ ನುಗ್ಗಿದ ಹವಾನಿಯಂತ್ರಿತ ಗಾಳಿ ಮೈಯನ್ನು ಅದುರಿಸಿತು. ಒಳಗಿರಬಹುದಾಗ ವ್ಯಕ್ತಿಗಳ ಬಗ್ಗೆ ನಿರೀಕ್ಷಿಸಿದವಳಿಗೆ ಆಶ್ಚರ್ಯ. ಒಂದು ಮಧ್ಯ ವಯಸ್ಸಿನ ಹೆಣ್ಣು, ಅವಳ ಪಕ್ಕದಲ್ಲಿ ಬಿಳಿಯ ವಸ್ತ್ರವನ್ನು ಧರಿಸಿದ್ದ ಐವತ್ತರ ಅಂಚಿನ ವ್ಯಕ್ತಿ. ನೋಡಲು ವಿಚಿತ್ರವಾದ ಬಾಹ್ಯಚಹರೆ. ನೇರಕ್ಕೆ ಚಾಚಿಕೊಂಡ ಮೂಗು. ಅವನ ಉಡುಪಿಗೂ, ಮೈ ಬಣ್ಣಕ್ಕೂ ತಾಳೆಯಾಗುತ್ತಿತ್ತು. ಅವಳು ಕೈ ಜೋಡಿಸಿದಳು. ಬಿಳಿಯ ವಸ್ತ್ರದ ವ್ಯಕ್ತಿ ಕನ್ನಡಕದ ಒಳಗಿನಿಂದ ಅವಳನ್ನು ಗಮನಿಸಿದ.ಅವಳು ಕೈಯಲ್ಲಿದ್ದ ಪತ್ರವನ್ನು ಮುಂದೆ ಹಿಡಿದಳು. ಪಕ್ಕದಲ್ಲಿ ಕುಳಿತಿದ್ದ ಮಧ್ಯವಯಸ್ಸಿನ ಹೆಣ್ಣು ಕುಳಿತುಕೊಳ್ಳುವಂತೆ ಸೂಚಿಸಿದಳು.ಆ ಹೆಣ್ಣು ಸೊನಾಲಿಯ ಅರ್ಹತಾ ಪತ್ರ, ಕಾಗದಗಳನ್ನು ಓದಿದ ಬಳಿಕ ಮೆಚ್ಚುಗೆಯಿಂದ ಅವುಗಳನ್ನು ನೇರ ಮೂಗಿನ ವ್ಯಕ್ತಿಯ ಕಡೆಗೆ ಹಿಡಿದಳು. ಅವನ ದೃಷ್ಟಿ ಸೊನಾಲಿಯಿಂದ ಸರಿಯಲಿಲ್ಲ. ಕಣ್ಣುಗಳೇ ಎಲ್ಲವನ್ನೂ ಪರಿಶೀಲಿಸಿದವು. ಸೊನಾಲಿ ಮುಜುಗರದಿಂದ ಮುದುರಿಕೊಂಡಳು."ವಯಸ್ಸೇನು?" ಅನಗತ್ಯ ಪ್ರಶ್ನೆ ಎದುರಾದಾಗ ತಡವರಿಸಿತು."ಇಪ್ಪತ್ತೊಂದು""ಕೆಲಸವನ್ನು ಮಾಡುವ ಛಲವಿದೆಯಾ?""ಹೌದು""ಸರಿ, ನಾಳೆಯಿಂದ ಬರಬಹುದು"ಸಂದರ್ಶನ ಇಷ್ಟೇನಾ? ಇದಕ್ಕೆ ಇಂತಹ ನಕ್ಷತ್ರ ಹೊಟೇಲು ಅಗತ್ಯವಿತ್ತೆ? ಎದ್ದು ಹೊರಗೆ ಬಂದಳು. ಅಷ್ಟರಲ್ಲಿ ಮಧ್ಯ ವಯಸ್ಸಿನ ಹೆಣ್ಣೂ ಹೊರಗೆ ಬಂದಳು."ನಿಲ್ಲು, ಇದು ನಿನ್ನ ನಿಯುಕ್ತಿಯ ಪತ್ರ. ಇದರಲ್ಲಿರೋ ವಿಳಾಸಕ್ಕೆ ನಾಳೆ ಬಂದು ಬಿಡು. ಇಲ್ಲಿ ಶಿಸ್ತು ಮುಖ್ಯ" ಅವಳು ಕೊಟ್ಟ ನಿಯುಕ್ತಿಯ ಪತ್ರವನ್ನು ತೆಗೆದುಕೊಂಡು ರಸ್ತೆಗಿಳಿದಳು.ಮರು ದಿನ ಆ ವಿಳಾಸಕ್ಕೆ ಬಂದಾಗ ತನ್ನಂತೆ ಹಲವು ಜನ ಅಲ್ಲಿರುವುದು ಕಂಡು ನೆಮ್ಮದಿಯೆನಿಸಿತು. ಅವರ ಜೊತೆಗೆ ಕೂಡಲೇ ಬೆರೆತು ಹೋದಳು. ಅದರಲ್ಲೂ ಶುಭಾಶ್ರೀಯ ತುಂಟತನ ಅವಳನ್ನು ಬಹುವಾಗಿ ಸೆಳೆದಿತ್ತು. ನೇರ ಮೂಗಿನ ವ್ಯಕ್ತಿಯನ್ನು ಅವಳು ಕುಚೋದ್ಯಕ್ಕೆ ಕರೆಯುತ್ತಿದ್ದುದ್ದೇ ಬಿಳಿಕಾಗೆ!ಆ ಆಫೀಸಿಗೆ ಅವಳು ಬೇಗನೆ ಹೊಂದಿಕೊಂಡಿದ್ದು ಬಿಳಿಕಾಗೆಗೆ ಸಂತೋಷ ತಂದಿತ್ತು. ಆದರೆ ಬಿಳಿಕಾಗೆಯ ದೃಷ್ಟಿ ಅವಳ ಮೇಲೆ ಹರಿದಾಗ ಸೊನಾಲಿಗೆ ತಿಳಿದಿರಲಿಲ್ಲ. ಶುಭಾಶ್ರೀಯೇ ಅವಳಿಗೆ ತಿಳಿಸಬೇಕಾಯಿತು."ನೀನು ಅದೃಷ್ಟವಂತೆ, ಕಾಕ ದೃಷ್ಟಿ ನಿನ್ನ ಮೇಲೆ ಬಿದ್ದಿದೆ. ನಿನಗೆ ಅದೃಷ್ಟದ ಬಾಗಿಲು ತೆರೆದಿದೆ. ಕಾಗೆಯನ್ನು ಅಂಗೈಯಲ್ಲಿ ಹಿಡಿದು ಆಡಿಸಿ ಬಿಡು" ಕೆಣಕುವ ಮಾತಿಗೆ ಸೊನಾಲಿ ಉರಿದು ಹೋದಳು."ನಾನು ಮರ್‍ಯಾದಸ್ಥ ಮನೆಯ ಹುಡುಗಿ. ನೀನು ಬಾಯಿಗೆ ಬಂದಂತೆ ಮಾತನಾಡಿದರೆ ಕೆಲಸ ಬಿಟ್ಟು ಬಿಡ್ತೀನಿ" ಕಣ್ಣಾಲಿಗಳು ತುಂಬಿ ಬಂದಿದ್ದವು. ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಶುಭಾಶ್ರೀ ಅವಳನ್ನು ಕರೆದುಕೊಂಡು ತೆರೆದ ಹೊಟೇಲಿಗೆ ಬಂದಳು."ಕ್ಷಮಿಸು ನನ್ನ, ನೀನು ಬುದ್ಧಿ ಬೆಳೆದಿರೋ ಹುಡುಗಿ. ಇಂತಹ ಆಫೀಸಿನಲ್ಲಿ ಕೆಲಸ ಮಾಡೋವಾಗ ಅಧಿಕಾರಿಗಳ, ಅದರಲ್ಲೂ ಮಾಲೀಕನ ಪ್ರಭಾವವಿದ್ದರೆ, ನೀನು ಬದುಕಿನಲ್ಲಿ ಬಯಸಿದ್ದನ್ನು ಪಡೆದುಕೊಳ್ಳಬಹುದು"ಗೆಳತಿ ಅಂದುಕೊಂಡವಳ ಮಾತುಗಳಿಗೆ ಕಿವಿ ಮುಚ್ಚಿಕೊಳ್ಳುವ ಸ್ಥಿತಿ. ಹೆಣ್ಣು ಇಷ್ಟು ಕೆಳ ಮಟ್ಟದಲ್ಲಿ ಯೋಚಿಸಬಲ್ಲಳೇ? ಮಾವ ಕೂಡ ಇದೇ ರೀತಿ ಹೇಳಿದ್ದ."ಸೋನು, ನಿನಗೆ ದಂತದ ಹಾಗೆ ಮೈಬಣ್ಣವಿದೆ. ಜೊತೆಗೆ ಚೆಲುವೆ. ನೀನ್ಯಾಕೆ ಸಿನಿಮಾಕ್ಕೆ ಸೇರಬಾರದು?"ಕೆನ್ನೆಗೆ ಹೊಡೆಯುವಂತೆ ಅರಚಿದ್ದಳು."ನನ್ನ ಏನೂಂತ ತಿಳ್ಕೊಂಡಿದ್ದಿಯಾ? ನನ್ನ ಸೌಂದರ್ಯಾನ ಬಿಚ್ಚಿಟ್ಟು ದುಡ್ಡು ಸಂಪಾದನೆ ಮಾಡುವ ಆಲೋಚನೆಯಾ ನಿನಗೆ?"ಹಿಂದೆ ಮುಂದೆ ಯಾರೂ ಇಲ್ಲದ ನಿರ್ಗತಿಕಳೆಂದು ಉಪೇಕ್ಷೆ ಮಾಡಿದವನನ್ನು ಚೆನ್ನಾಗಿ ಚಾಳಿಸಿದ ನಂತರ ಅಲ್ಲಿ ನಿಲ್ಲದೆ ಕೆಲಸ ಹುಡುಕಿಕೊಂಡು ಪಟ್ಟಣ ಸೇರಿದಳು. ಪಟ್ಟಣ ಸೇರಿದರೂ ಅಷ್ಟೇ. ಎಲ್ಲೆಲ್ಲೂ ಕಾಕ ದೃಷ್ಟಿಯೆ. ಕೊನೆಗೆ ಒಂದು ಕೆಲಸ ಹಿಡಿಯಬೇಕಾದರೆ ಅಲೆಯದ ರಸ್ತೆಗಳಿಲ್ಲ, ತುಳಿಯದ ಮೆಟ್ಟಿಲುಗಳಿಲ್ಲ. ಎಲ್ಲೆಲ್ಲೂ ಬಾಹ್ಯಚಹರೆ, ಅಂತಸ್ತು ಇವುಗಳದ್ದೇ ಮಾನದಂಡ. ಕೊನೆಗೆ ಉಳಿದ ದಾರಿಯೊಂದೆ ಸೌಂದರ್ಯವನ್ನು ಜಮಾಯಿಸುವುದು. ಆದರೆ ಅದೇ ಒಂದು ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆಯೆನ್ನುವ ಅರಿವಿರಲಿಲ್ಲ.
***
ಮಧ್ಯಾಹ್ನದ ಹೊತ್ತಿಗೆ ಸಬ್ ಇನ್ಸ್‍ಪೆಕ್ಟರ್ ಸನ್ನಿಧಿ ತನ್ನ ನೀಲಿ ಮೋಟಾರು ಬೈಕಿಗೆ ಸೈಡ್ ಸ್ಟಾಂಡ್ ಹಾಕಿ ನಿಲ್ಲಿಸಿ, ಮೂರು ಅಂತಸ್ತಿನ ಕಟ್ಟಡವನ್ನು ತಲೆಯೆತ್ತಿ ನೋಡಿದ. ಅವನನ್ನು ಯಾವಾಗಲೂ ಕಾಡುವ ಅನುಮಾನವೇ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಿದ್ದುದು. ಎರಡು ದಿನಗಳ ಹಿಂದೆ ಅದೇ ಕಟ್ಟಡವನ್ನು ಪ್ರವೇಶಿಸಿ ಎಲ್ಲರಿಂದಲೂ ಅಭಿಮತ ಸಂಗ್ರಹಿಸಿದ್ದ. ಅಷ್ಟಾಗಿಯೂ ಯಾವ ನಿರ್ಧಾರಕ್ಕೂ ಬರಲು ಸಾಧ್ಯವಾಗಲಿಲ್ಲ.ಮೆಟ್ಟಿಲುಗಳನ್ನು ಟಕಟಕನೆ ಏರಿ ಆಫೀಸಿನ ಬಾಗಿಲು ತೆರೆದು ನಿಂತ. ಅವನ ದೃಷ್ಟಿ ಸೊನಾಲಿಯ ಕಡೆಗೆ ಹರಿದು ಅಲ್ಲೇ ತಟಸ್ಥವಾಯಿತು. ಕೆಲಸದ ನಡುವೆ ತಲೆಯೆತ್ತಿದವಳ ನೋಟ ಪೆಡಂಭೂತದಂತೆ ಎದುರು ನಿಂತಿದ್ದ ಅಧಿಕಾರಿಯತ್ತ ಹೊರಳಿತು. ಭಯದ ಕರಿ ನೆರಳಿನ ಜೊತೆಗೆ ಒಂದು ಉದ್ಗಾರ ಬಾಯಿಯಿಂದ ಹೊರಗೆ ಬಿತ್ತು.ಅವಳ ಸ್ಥಿತಿಯನ್ನು ಕಂಡವನೇ ಅವಳ ಎದುರು ನಿಂತ. ಎದ್ದು ನಿಂತು ತಲೆ ತಗ್ಗಿಸಿದಳು. ಅವನು ಹ್ಯಾಟ್ ತೆಗೆದು ಕೈಯಲ್ಲಿದ್ದ ಬೆತ್ತದ ಜೊತೆಗೆ ಹಿಡಿದ."ನಿನ್ನ ಅಧಿಕಾರಿಯನ್ನು ನೋಡುವುದಿದೆ" ಅವಳ ಎದೆಯಲ್ಲಿ ಕುಟ್ಟುವ ನಿಶ್ಶಬ್ದ ಸದ್ದು ವೇಗ ಪಡೆದು ಸಶ್ಶಬ್ದವಾಯಿತು."ಅವರು... ಅವರು..." ಕ್ಯಾಬಿನ್‍ನತ್ತ ದೃಷ್ಟಿ ಹರಿಸಿದವಳಿಗೆ ಅಧಿಕಾರಿ ಕಾಣಿಸಲಿಲ್ಲ. ಪೊಲೀಸ್ ಅಧಿಕಾರಿ ಅವಳತ್ತ ಕ್ರೂರ ನೋಟ ಹರಿಸಿ ಮುಂದೆ ನಡೆದ. ಮಾಲೀಕನ ಆಪ್ತ ಸಲಹೆಗಾರ್ತಿ ಅಂಬಿಕಾ ಅವನನ್ನು ಎದುರುಗೊಂಡಳು."ನನಗೆ ಕೆಲವೊಂದು ಅನುಮಾನಗಳಿವೆ. ನಿಮ್ಮ ಕೈಯಲ್ಲಿ ಅದನ್ನು ಬಗೆಹರಿಸೋದಿಕ್ಕೆ ಸಾಧ್ಯನಾ?"ಸಲಹೆಗಾರ್ತಿ ಒಪ್ಪಿಗೆಯಿತ್ತು ಅವನನ್ನು ಒಳಗೆ ಕೂರಿಸಿದಳು."ಕೇಳಿ"ಅಧಿಕಾರಿ ಎದುರಿನ ಗೋಡೆಯತ್ತ ನೋಡುತ್ತಾ ಹ್ಯಾಟ್ ಮತ್ತು ಕೋಲನ್ನು ಮೇಜಿನ ಮೇಲಿರಿಸಿದ."ನಿಮ್ಮ ಮಾಲೀಕ ಅಂದರೆ ಭಗವಂತರಾಯರ ಹೆಣ ನೋಡಿದೋರು ಯಾರಂದ್ರಿ? ಅವರನ್ನು ಕರೆಸೋದು ಸಾಧ್ಯವೇ?"ಅಧಿಕಾರಿಯ ಮಾತಿಗೆ ತಲೆಯಲುಗಿಸಿ, ಬಜ಼ರ್ ಒತ್ತಿದಳು ಸಲಹೆಯ ಹೆಣ್ಣು. ಮರದ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದ ಅಟೆಂಡರ್ ರಾಮಯ್ಯ."ರಾಮಯ್ಯ, ಸಾರ್‍‍ಗೆ ಕುಡಿಯೋದಿಕ್ಕೆ ತಂಪು ಪಾನೀಯ ತಾ. ಹಾಗೇ ಸೊನಾಲಿನ ಒಳಗೆ ಕಳುಹಿಸು"ಅಧಿಕಾರಿಯ ಮುಖ ಗಂಭೀರವಾಗಿತ್ತು. ಅವನು ಮತ್ತೊಂದಷ್ಟು ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುವ ಹೊತ್ತಿಗೆ ಸೊನಾಲಿ ಬಾಗಿಲು ತೆರೆದು ಅನುಮತಿಯೊಂದಿಗೆ ಒಳಗೆ ಬಂದಳು. ಅಧಿಕಾರಿಯ ಬದಲಾಗದ ನೋಟ ಅವಳನ್ನು ಅಡಿಯಿಂದ ಮುಡಿಯವರೆಗೂ ಅಳೆಯಿತು. ಉದ್ದಕ್ಕೆ ಕೈ ತೋರಿಸಿ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ. ಅಳುಕುತ್ತಲೇ ಕುಳಿತ ಸೊನಾಲಿ ಸಲಹಾಗಾರ್ತಿಯತ್ತ ನೋಟ ಹರಿಸಿದಳು. ಅವಳ ಮುಖದಲ್ಲಿ ಗೊಂದಲದ ಛಾಯೆಯಿತ್ತು."ಆಫೀಸು ಬಿಟ್ಟು ನೇರವಾಗಿ ಮನೆ ಸೇರೋ ನೀವು ಆ ದಿನ ಸಂಜೆ ಯಾಕೆ ಟಾರಸಿ ಹತ್ತಿದ್ರಿ?" ಪೊಲೀಸ್ ಅಧಿಕಾರಿಯ ಅನಿರೀಕ್ಷಿತ ಪ್ರಶ್ನೆಗೆ ತಡವರಿಸಿತು. ಮೌನವಾಗಿಯೆ ಕುಳಿತಿದ್ದಳು."ನಿನ್ನನ್ನೇ ಪ್ರಶ್ನಿಸ್ತಿರೋದು... ಟಾರಸಿ ಹತ್ತಿ ಹೋಗುವ ಪ್ರಮೇಯವೇನಿತ್ತು?"ತುಟಿಗಳನ್ನು ಕಚ್ಚಿ ಹಿಡಿದು ಕುಳಿತವಳ ಬಿಗಿತ ಸಡಿಲವಾಯಿತು. ಮೆಲ್ಲಗೆ ತುಟಿಗಳು ಅದುರಿದವು."ಅವತ್ತು ಮಧ್ಯಾಹ್ನ ನನಗೊಂದು ಇ-ಮೇಲ್ ಬಂದಿತ್ತು....." ಕಥೆ ಮುಂದುವರಿದು ನಡೆದ ಘಟನೆಯನ್ನೆಲ್ಲಾ ಚಾಚೂ ತಪ್ಪದೆ ಅಧಿಕಾರಿಯ ಮುಂದೆ ಬಿಚ್ಚಿಟ್ಟಳು. ಅವಳು ಹೇಳಿದನ್ನೆಲ್ಲಾ ಕೇಳಿದ ಬಳಿಕ ಅಧಿಕಾರಿಯ ತುಟಿ ಅರಳಿತು."ತುಂಬಾ ಉಪಕಾರವಾಯಿತು. ನೀವಿನ್ನು ಹೋಗಬಹುದು" ಸೊನಾಲಿ ಆ ಮಾತಿಗೆ ಕಾದಿದ್ದವರಂತೆ ನಡುಗುವ ಹೆಜ್ಜೆಗಳಿಂದ ಹೊರಗೆ ಧಾವಿಸಿದಳು. ರಾಮಯ್ಯ ಜ್ಯೂಸ್‍ನ ಗ್ಲಾಸ್ ಹಿಡಿದುಕೊಂಡು ಒಳಗೆ ನಡೆದ. ಅಧಿಕಾರಿಯ ಮುಂದೆ ಹಿಡಿದ. ಅಧಿಕಾರಿ ಅದನ್ನು ತೆಗೆದುಕೊಳ್ಳುತ್ತಲೇ ಕಂಪ್ಯೂಟರ್‍‍ನ ಹೆಣ್ಣು ವಾಸಂತಿಯನ್ನು ಕರೆಯುವಂತೆ ತಿಳಿಸಿದ.ಅಧಿಕಾರಿ ಜೂಸ್ ಕುಡಿದು ಮುಗಿಸುವಷ್ಟರಲ್ಲಿ, ಗಂಡಸಿನ ಮುಖದ ಹೆಣ್ಣು, ವಾಸಂತಿ ಒಳಗೆ ಬಂದಳು. ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತು ಹಲ್ಲು ಕಿಸಿದಳು. ಸೊನಾಲಿ ಹೇಳಿದ ಕಥೆಯನ್ನು ಪುನರುಚ್ಚರಿಸಿದ ಅಧಿಕಾರಿ."ಆ ಹುಡುಗಿಗೆ ಮೇಲ್ ಕಳಿಸಿದವರು ಯಾರು ಅನ್ನುವುದು ಗೊತ್ತೆ?" ಗಂಡಸಿನ ಮುಖದ ಆ ಹೆಣ್ಣು ಆಲೋಚನೆಗೆ ಬಿದ್ದವರಂತೆ ಕುಳಿತಳು. ಕ್ಷಣದಲ್ಲಿಯೇ ಏನನ್ನೋ ಯೋಚಿಸಿ ತೋರುಬೆರಳನ್ನು ಎತ್ತಿ ಉದ್ಗರಿಸಿದಳು."ಆ ದಿನ ಸೊನಾಲಿಗೆ ಮೇಲ್ ಬಂದಿತ್ತು. ಅದು ಅದು... ಬಿಳಿಕಾಗೆ ಅನ್ನುವ ಇ-ಮೇಲ್ ಅಡ್ರೆಸ್‍ನಿಂದ""ಬಿಳಿಕಾಗೆ!" ಅಧಿಕಾರಿ ಆಶ್ಚರ್ಯದಿಂದ ಹೇಳಿಕೊಂಡ. ಸಲಹಾಗಾರ್ತಿ ಅವನ ಸಹಾಯಕ್ಕೆ ಧಾವಿಸಿದಳು."ಹೌದು, ಭಗವಂತರಾಯರನ್ನು ಜನ `ಬಿಳಿಕಾಗೆ' ಅನ್ನೋ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಆತ ಸಾಧು ಮನುಷ್ಯ. ಯಾರದೋ ಕುಹಕಕ್ಕೆ ಆ ಹೆಸರು ಬಂತು"ಬಿಳಿಕಾಗೆ ಪೊಲೀಸ್ ಅಧಿಕಾರಿಯ ತಲೆಯ ಒಳಗೆಲ್ಲಾ ಹಾರಾಡಿತು. ಅವನು ಗೊಂದಲಕ್ಕೆ ಬಿದ್ದು ವಾಸಂತಿಯನ್ನು ಹೊರಗೆ ಕಳುಹಿಸಿದ. ಸುಮಾರು ಹೊತ್ತು ಸಲಹಾಗಾರ್ತಿಯ ಜೊತೆಗೆ ಮಾತನಾಡಿ ಹೊರಗೆ ಬಂದಾಗ ಸೊನಾಲಿ ಅಲ್ಲಿರಲಿಲ್ಲ!ಅವನು ಮೆಟ್ಟಲುಗಳನ್ನು ಇಳಿದು ಕೆಳಗೆ ಬರುವಾಗ ಮೆಟ್ಟಿಲುಗಳ ಸಂಧಿಯಲ್ಲಿ ಯಾರದೋ ಪಿಸು ಮಾತುಗಳು ಕೇಳಿಸಿದವು. ಅವು ಎರಡು ಹೆಣ್ಣುಗಳ ದನಿ! ಒಂದು ಸೊನಾಲಿಯದ್ದೇ ದನಿ! ಸೊನಾಲಿ ಯಾರೊಂದಿಗೆ ಹೀಗೆ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದಾಳೆ? ಕುತೂಹಲ ಕೆರಳಿತು. ಸ್ವಲ್ಪ ಹೊತ್ತು ಮರೆಯಲ್ಲಿ ಕಾದು ನಿಂತ. ಇನ್ನೊಂದು ಹೆಣ್ಣು ಅಸ್ಪಷ್ಟವಾಗಿ ಗೋಚರಿಸಿತು. ವಾಸಂತಿ! ಅಥವಾ ಸಲಹಾಗಾರ್ತಿ!? ಇಬ್ಬರಲ್ಲಿ ಯಾರೋ ಒಬ್ಬರು!
***
ಮರುದಿನ ಅಧಿಕಾರಿ ಸ್ಟೇಶನ್‍ನಿಂದ ನೇರವಾಗಿ ಭಗವಂತರಾಯರ ಸಲಹಾಗಾರ್ತಿಯ ಮನೆಗೆ ಬಂದ. ಭಗವಂತರಾಯರ ಮಕ್ಕಳು ದೂರದ ಅಮೆರಿಕಾದಲ್ಲಿರುವ ವಿಷಯ ತಿಳಿದಿದ್ದ ಅಧಿಕಾರಿ ಆ ರೀತಿ ನಿರ್ಧಾರ ತೆಗೆದುಕೊಂಡ."ಏನಾದರೂ ಸುಳಿವು...?" ಅಂಬಿಕಾಳ ಪ್ರಶ್ನೆಗೆ ಅಧಿಕಾರಿ ನಗು ತೋರಿಸಿದ."ಹೌದು, ಭಗವಂತರಾಯರ ಆಸ್ತಿಗೆ ಬಾಧ್ಯಸ್ಥರು ಯಾರು? ಅವರ ಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಮೋಹವಿಲ್ಲ"ಸಲಹಾಗಾರ್ತಿಯ ಮುಖ ಬಿಳಿಚಿಕೊಂಡಿತು. ಅಧಿಕಾರಿ ಅದನ್ನು ಗುರುತಿಸಿಕೊಂಡ."ನಿಮಗೆ ಅವರ ಆಸ್ತಿಯ ಮೇಲೆ....?""ನೋ, ನೋ... ನಾನು ಯಾವತ್ತು ಅವರ ಆಸ್ತಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ" ಅಧಿಕಾರಿಯ ಮಾತನ್ನು ತಡೆದು ಹೇಳಿದಳು."ನಿಮ್ಮನ್ನು ಪರೀಕ್ಷಿಸ್ತಾ ಇಲ್ಲ. ಸತ್ಯ ತಿಳಿದುಕೊಳ್ಳುವುದಕ್ಕೆ ಕೇಳಿದೆ""ಇಲ್ಲ. ಖಂಡಿತವಾಗಿಯೂ ನಾನು ಅವರ ಆಸ್ತಿಗೆ ಆಸೆ ಪಟ್ಟವಳಲ್ಲ"ಅಧಿಕಾರಿ ನಕ್ಕು ನುಡಿದ."ಸರಿ, ನಿಮ್ಮ ಮಾತು ನಂಬ್ತೀನಿ. ನೀವು ಈಗಲೇ ಆಫೀಸಿಗೆ ಬಂದು ಬಿಡಿ. ಕೊಲೆಗಾರ ಅಲ್ಲಿಯೇ ಇದ್ದಾನೇಂತ ನನ್ನ ಅನುಮಾನ"ಅಧಿಕಾರಿಯ ಮಾತಿಗೆ ತಡಬಡಿಸಿ ತಯಾರಾದ ಸಲಹಾಗಾರ್ತಿ ಅಂಬಿಕಾ ಆಫೀಸಿಗೆ ಧಾವಿಸಿದಳು. ಆಫೀಸಿನಲ್ಲಿ ಅಧಿಕಾರಿ ಅವಳ ಬರುವಿಕೆಗಾಗಿ ಕಾದು ಕುಳಿತಿದ್ದ. ಎಲ್ಲಾ ಉದ್ಯೋಗಿಗಳತ್ತ ನೋಡಿದ. ನೇರವಾಗಿ ಸೊನಾಲಿಯ ಟೇಬಲ್‍ನ ಹತ್ತಿರ ನಿಂತು ಹೇಳಿದ."ಮಿಸ್ ಸೊನಾಲಿ, ಭಗವಂತರಾಯರಿಗೆ ನಿಮ್ಮ ಮೇಲೆ ಅಭಿಮಾನ, ವಿಶ್ವಾಸವಿತ್ತು. ಆ ದಿನ ನಿಮ್ಮನ್ನು ಸಂದರ್ಶನಕ್ಕೆ ಕರೆಸಿದ್ದು ಕೆಲಸ ಕೊಡಿಸುವ ಉದ್ದೇಶದಿಂದ ಅಲ್ಲ. ಬದಲಾಗಿ ತನ್ನ ಎಲ್ಲಾ ಆಸ್ತಿಗೂ ಒಬ್ಬ ನಂಬಿಕಸ್ಥ ವ್ಯಕ್ತಿಯ ಅಗತ್ಯವಿತ್ತು. ಆ ಅರ್ಹತೆ ನಿಮ್ಮಲ್ಲಿತ್ತು. ನೇರವಾಗಿ ಅದನ್ನು ನಿಮಗೆ ಹೇಳಿದ್ರೆ ನೀವು ಅದನ್ನು ನಿರಾಕರಿಸುತ್ತೀರಿ ಅನ್ನುವ ಉದ್ದೇಶದಿಂದ ಅವರ ಆಫೀಸಿನಲ್ಲಿ ಕೆಲಸ ಕೊಡಿಸಿದ್ರು. ಆದ್ರೆ ನೀವು ಅವರನ್ನು ಕೆಟ್ಟದಾಗಿ ತಿಳಿದುಕೊಂಡ್ರಿ. ನೋಡಿ, ಅವರು ತಮ್ಮ ಸಮಸ್ತ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದಿದ್ದಾರೆ. ಆದ್ರೆ ಈಗ ಅವರ ಕೊಲೆಯಾಗಿದೆ" ಸೊನಾಲಿ ತಲೆ ತಗ್ಗಿಸಿದಳು. ಅಧಿಕಾರಿಯ ಮಾತು ಆಶ್ಚರ್ಯದ ಜೊತೆಗೆ ನಾಚಿಕೆ ತರಿಸಿತು. ಹೂ ಮನಸ್ಸಿನ ಮಾಲೀಕನನ್ನು ಅಪಾರ್ಥ ಮಾಡಿಕೊಂಡಿದ್ದಳು."ಇಷ್ಟಕ್ಕೂ ಅವರ ಕೊಲೆ ಮಾಡಿದೋಳು ನಾನಲ್ಲ""ನೀವು ಕೊಲೆ ಮಾಡಿದ್ದೀರಿಂತ ನಾನು ಹೇಳ್ತಾ ಇಲ್ಲ. ಕೊಲೆ ಮಾಡಿರೋದು ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಹೊಂದಿರೋ ವ್ಯಕ್ತಿ. ಇದರಲ್ಲಿ ಸಿನಿಮಾದ ವ್ಯಕ್ತಿಯ ಪಾಲು ಇದೆ"ಸೊನಾಲಿಗೆ ಅರ್ಥವಾಗದೆ ತಲೆ ಎತ್ತಿದಳು. ಆ ಕ್ಷಣದಲ್ಲಿ ಎಲ್ಲರ ನೋಟ ಅಧಿಕಾರಿಯ ಕಡೆಗಿತ್ತು."ಬಿಳಿಕಾಗೆ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿರೋ ವ್ಯಕ್ತಿ, ಅವನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸುವುದಕ್ಕೆ ಯತ್ನಿಸಿದೆ. ಆ ದಿನ ಭಗವಂತರಾಯರು ಸ್ಟಾರ್‍ ಹೊಟೇಲ್‍ನಲ್ಲಿ ಇದ್ದಾಗ ಆ ವ್ಯಕ್ತಿ ಅವರನ್ನು ಒತ್ತಾಯಿಸಿತು. ಆದ್ರೆ ಅವರು ತಮ್ಮ ಸಮಸ್ತ ಆಸ್ತಿಗೂ ಹೊಸದಾಗಿ ನಿಯುಕ್ತರಾಗಿರೋ ನೀವೇ ಬಾಧ್ಯಸ್ಥೆ ಅಂತ ಹೇಳಿದ್ರು. ಅದೇ ಹೊತ್ತು ಆ ವ್ಯಕ್ತಿ ನಿರಾಸೆಯಿಂದ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿ, ನಿಮಗೆ ಬಿಳಿಕಾಗೆಯನ್ನು ತೋರಿಸಿತು. ನೀವು ಅದ್ಭುತ ನೋಡುವವರಂತೆ ಟಾರಸಿಗೆ ಹೋದ್ರಿ. ಆದ್ರೆ ಅಲ್ಲಿ ನಿಮ್ಮನ್ನು ನೋಡಿದ ಮಾಲೀಕ ಸಂತೋಷದಿಂದ ಕೈ ತೋರಿಸಿದ್ರು. ನೀವು ಅಪಾರ್ಥ ಮಾಡಿಕೊಂಡ್ರಿ""ಅಂದ್ರೆ... ಅಂದ್ರೆ...""ಅಂದ್ರೆ... ನಿಮ್ಮ ಗೆಳತಿ ಶುಭಾಶ್ರೀನೇ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿರುವುದು. ಅಚಾನಕ್ಕಾಗಿ ಅದರ ಒಂದು ಪ್ರತಿ ಮಾಲೀಕ ಭಗವಂತರಾಯರ ಮೇಲ್ ಐಡಿಗೂ ಹೋಗಿದೆ. ಒಂದೊಮ್ಮೆ ನಿಮ್ಮನ್ನು ಅಗಾಧವಾಗಿ ಪ್ರೀತಿಸೋ ನಾಟಕ ಮಾಡಿದ ಕ್ಯಾಮರಾ ಮೆನ್ ಹಿತೇಶನೇ ಕೊಲೆ ಮಾಡಿರೋದು. ನೆನಪಿದೆಯಾ ನಿಮಗೆ, ಆ ದಿನ ಸಂದೇಶ್‍ನನ್ನು ಭೇಟಿಯಾಗೊದಿಕ್ಕೆ ಬಿಗ್ ಬಜಾರ್‍‍ಗೆ ಹೋಗೋದಿದೆ... ಟಾರಸಿಗೆ ನೀನೇ ಹೋಗೂಂತ ಒತ್ತಾಯಿಸಿದ ನಿಮ್ಮ ಗಳತಿ, ನೇರವಾಗಿ ಹೋಗಿದ್ದು ಸ್ಟಾರ್‍ ಹೋಟೇಲ್‍ಗೆ. ಅಲ್ಲಿದ್ದ ಹಿತೇಶನನ್ನು ಭೇಟಿಯಾಗೊದಿಕ್ಕೆ. ಆ ದಿನ ಟಾರಸಿ ಹತ್ತಿದ ನಿಮ್ಮನ್ನು ಮುಗಿಸುವ ತಂತ್ರ ಹೂಡಿದ ನಿಮ್ಮ ಗೆಳತಿ, ಅಲ್ಲಿ ಭಗವಂತರಾಯರನ್ನು ನೋಡಿ ತನ್ನ ಯೋಜನೆಯೆಲ್ಲಾ ತಿಳಿದು ಹೋಯಿತೂಂತ ಅವರನ್ನೇ ಮುಗಿಸುವಂತೆ ಹಿತೇಶನಿಗೆ ಹೇಳಿದ್ಲು. ಹಾಗೆ ಸ್ಟಾರ್ ಹೊಟೇಲ್‍ನ ಮೂರನೆ ಅಂತಸ್ತಿನಿಂದ ಹಿತೇಶ ಹಾರಿಸಿದ ಗುಂಡಿಗೆ ಅವರು ಬಲಿಯಾದ್ರು"ಕಥೆ ಕೇಳಿದ ಸೊನಾಲಿಯ ಕಣ್ಣುಗಳಲ್ಲಿ ನೀರು ಇಳಿಯಿತು. ಮೆಲ್ಲಗೆ ಕಣ್ಣಿಗೆ ಸೆರಗು ಒತ್ತಿಕೊಂಡಳು. ಅವಳು ಹಿಂತಿರುಗುವಷ್ಟರಲ್ಲಿ ಅಧಿಕಾರಿ ಶುಭಾಶ್ರೀಯ ಮುಂದೆ ನಿಂತಿದ್ದ."ಅತಿಯಾಸೆ ಗತಿಗೇಡು. ನೀವು ವಿಷಯ ತಿಳಿದ ನಂತರವೂ ಮೆಟ್ಟಿಲುಗಳ ಹತ್ತಿರ ಸೊನಾಲಿಯನ್ನು ಕರೆದು ಬೆದರಿಕೆ ಹಾಕಿದ್ರಿ. ಒಂದು ವಿಷಯ ನಿಮಗಿನ್ನೂ ಗೊತ್ತಿಲ್ಲಾಂನ್ಸುತ್ತೆ. ಹಿತೇಶ ನಮ್ಮ ಸುರ್ಪದಿಯಲ್ಲಿದ್ದಾನೆ. ನೀವೂ ಜೊತೆಗೂಡಿ"ಶುಭಾಶ್ರೀ ತಲೆತಗ್ಗಿಸಿ ಅಧಿಕಾರಿಯ ಹಿಂದೆ ನಡೆದಾಗ ಅಧಿಕಾರಿ ಗೆಲುವಿನ ನಗೆಯೊಂದಿಗೆ ಆಫೀಸಿನ ಮುಂದಿನ ಬಾಧ್ಯಸ್ಥೆ, ಸೊನಾಲಿಯ ಬಳಿ ಬಂದು ಶುಭ ಹಾರೈಸಿದ.

No comments: