Tuesday, December 28, 2010

ಮುಗಿಲತ್ತ ಹಾರುವ ‘ಕ್ರೌಂಚ ಪಕ್ಷಿಗಳು’


ಕ್ರೌಂಚ ಪಕ್ಷಿಗಳು - ಒಂದು ಸತ್ತು, ಇನ್ನೊಂದು ಬದುಕಿರದಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲವೇನೋ? ಹೌದಲ್ಲ, ವಾಲ್ಮೀಕಿಗೆ ಪರಿತಾಪ ಉಂಟಾದದ್ದೇ ಒಂದು ಹಕ್ಕಿಯ ಸಾವಿನಿಂದ ಮತ್ತು ಇನ್ನೊಂದರ ಒದ್ದಾಟದಿಂದ. ಇದು ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಕಥಾಸಂಕಲದಿಂದ. ಕ್ರೌಂಚ ಪಕ್ಷಿಗಳು ಎಂಬುದು ಈ ಸಂಕಲನದ ಒಂದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನ ಕ್ರಮದ ಒಂದು ಆದಿ ಪ್ರತಿಮೆ - ಇದು ಬೆನ್ನುಡಿಯ ಬರಹ.

ವೈದೇಹಿಯವರ ಕಥೆಗಳನ್ನು ಓದುವಾಗ ಏನೋ ಒಂದು ಆತ್ಮೀಯತೆ. ಇಲ್ಲಿಯ ಪಾತ್ರಗಳೆಲ್ಲಾ ನಮ್ಮ ನಡುವೆ ಇದ್ದು, ಮುಗ್ಧತೆಯಿಂದ ಮುಕ್ತವಾಗಿ ಬೆರೆಯುವಂತಹ ಗುಣಗಳಿರುವವುಗಳು ಅನಿಸುತ್ತದೆ. ಈ ಪಾತ್ರಗಳನ್ನು ಬೆಳೆಸುತ್ತಾ ಬೆಳೆಸುತ್ತಾ ಲೇಖಕಿ ಬಹಳಷ್ಟು ಭಾವುಕರಾಗಿ ಬಿಡುತ್ತಾರೆ. ಒಂದೊಂದು ಪಾತ್ರ ಚಿತ್ರಣವೂ ಧೈರ್ಯದಿಂದ ತಮ್ಮ ಇಂಗಿತವನ್ನು ತೆರೆದಿಡುತ್ತಾ ಮುಗುಳ್ನಗುತ್ತಿರುವಂತೆ ಕಾಣುತ್ತವೆ. ಹಾಗೆಯೆ ಕೆಲವೊಂದು ನಿಗೂಢತೆಗಳನ್ನು ಪಾತ್ರಗಳು ಬಿಟ್ಟುಕೊಡುವುದೇ ಇಲ್ಲ. ಇದು ಸ್ವತ: ಲೇಖಕಿಗೆ ಆ ಪಾತ್ರಗಳ ಬಗೆಯಿರುವ ಪ್ರೀತಿಯನ್ನು ತೋರಿಸುತ್ತದೆ."

‘ಕ್ರೌಂಚ ಪಕ್ಷಿಗಳು’ ಕಥಾಸಂಕಲನದ ಹತ್ತು ಕಥೆಗಳು ವಿಭಿನ್ನವಾದರೂ ಎಲ್ಲಾ ಕಥೆಗಳಲ್ಲಿಯೂ ಒಂದು ಸಾಮ್ಯತೆಯಿದೆ. ಅದು ಮುಗ್ಧ ಮಹಿಳೆಯರ ಅಂತರಂಗದ ತಲ್ಲಣಗಳು. ಕಥೆಗಳೆಲ್ಲಾ ಮಹಿಳಾ ಕೇಂದ್ರಿಕೃತವೆನಿಸಿದರೂ ಆ ಪಾತ್ರಗಳು ಇರುವುದು ಹಾಗೆ; ಇದ್ದು ಬಿಡಲಿ. ನಿಮಗೇನು? ಅನ್ನುವಷ್ಟು ಸ್ಪಷ್ಟ ನಿಲುವುಗಳಿವೆ ಅವುಗಳಲ್ಲಿ. ‘ದಾಳಿ’ ಕಥೆಯ ಅವಮಾನಿತಳಾದರೂ ಮೆಲು ನಗುವ ಯುವತಿ; ‘ನಟಿ’ಯ ರತ್ನೆ; ‘ಸಬಿತಾ’ ಕಥೆಯ ಸಬಿತಾ; ‘ಮಾತು ಸೋತ ಕ್ಷಣ’ದ ವಯಸ್ಸಾದ ವ್ಯಕ್ತಿ; ‘ಮನೆಯವರೆಗಿನ ಹಾದಿ’ಯ ರಾಮಣ್ಣ; ‘ಪ್ರಶ್ನೆ’ಯ ಭುವಿ; ‘ಒಗಟು’ ಕಥೆಯ ಶುಭಾಂಟಿ; ‘ಅವರವರ ಭಾವಕ್ಕೆ’ ಕಥೆಯ ಸಮಿತಾ; ‘ತೆರೆದ ಪುಟಗಳು’ ಕಥೆಯ ರಾಜತ್ತೆ; ‘ಕ್ರೌಂಚ ಪಕ್ಷಿಗಳು’ ಕಥೆಯ ಲಕ್ಷ್ಮಮ್ಮ... ಎಲ್ಲರೂ ತಾವು ಇದ್ದ ಹಾಗೆ ಇದ್ದು ಬಿಡುವವರು. ಹಾಗಂದ್ರೆ ಹಾಗೆ; ಹೀಗಂದ್ರೆ ಹೀಗೆ, ನಿಮಗೇನು? ಅನ್ನುವ ಹಾಗೆ. ಇಲ್ಲಿಯ ಇಷ್ಟು ಕಥೆಗಳು ಬಹಳ ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತವೆ.

ಒಬ್ಬ ಸಾಮಾನ್ಯನಿಗೆ ತಾಳ್ಮೆ ಎಷ್ಟಿರಬಹುದೆನ್ನುವುದಕ್ಕೆ ‘ದಾಳಿ’ ಕಥೆಯ ಮುಗುಳ್ನಗುವಿನ ಹುಡುಗಿಯೇ ಸಾಕ್ಷಿ. ತುಂಬಿ ತುಳುಕುವ ಬಸ್ಸಿನಲ್ಲಿ ‘ಸೀಟ್ ಇಲ್ಲವಲ್ಲ’ ಅಂತ ಆ ಹುಡುಗಿ ಹೇಳಿದ್ದೆ ಕಂಡಕ್ಟರ್ ಅವಳನ್ನು ಹೀನಾಯಮಾನವಾಗಿ ಬೈಯುತ್ತಾನೆ. ಅವನ ಅತಿರೇಕದ ಮಾತುಗಳನ್ನು ಕೇಳಿದರೆ ಉಳಿದವರು ಸಿಟ್ಟಾದರೂ ಅವಳದ್ದು ಮಾತ್ರ ಅದೇ ಮುಗುಳ್ನಗು. ಕೊನೆಗೂ ಅವಳು ನಿಗೂಢವಾಗಿಯೇ ಇರುತ್ತಾಳೆ. ಇದೇ ರೀತಿ ‘ಒಗಟು’ ಕಥೆಯ ಶುಭಾಂಟಿ. ಅಪರೂಪಕ್ಕೆ ಊರಿಗೆ ಬರುವ ಶುಭಾಂಟಿ ಒಂದು ಒಗಟಾಗಿ ಮಧ್ಯಾಹ್ನದ ಹೊತ್ತು ಎಲ್ಲೋ ಒಬ್ಬಳೇ ಟ್ಯಾಕ್ಸಿ ಮಾಡಿಕೊಂಡು ಹೋಗಿ ಬರುತ್ತಾಳೆ. ಅವಳು ಹೋದದ್ದಾದರು ಎಲ್ಲಿಗೆ? ಏನು ಮಾಡಿದಳು? ಇಷ್ಟು ದಿನ ಇಲ್ಲದ ಅವಳ ಈ ವರ್ತನೆಗೆ ಕಾರಣವೇನು? ಎಲ್ಲವೂ ನಿಗೂಢ! ಇಲ್ಲಿ ಅಷ್ಟೇ ಮುಖ್ಯವಾಗಿ ಕಾಣುವುದು ಒಬ್ಬ ಹೆಣ್ಣಿನ ಸ್ವಾತಂತ್ರ್ಯದ ಪ್ರಶ್ನೆ. ಅವಳ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಅಥವಾ ಸಂಶಯಿಸುವ ಹಕ್ಕು ಯಾರಿಗೂ ಇಲ್ಲವೆನ್ನುವುದನ್ನು ಪರೋಕ್ಷವಾಗಿ ಸಾರುವ ಕಥೆಯಿದು.

‘ನಟಿ’ ಕಥೆಯ ರತ್ನೆ ಮತ್ತು ‘ಸಬಿತಾ’ ಕಥೆಯ ಸಬಿತಾ ಇಬ್ಬರೂ ಲವಲವಿಕೆಯ ಜೀವಿಗಳು. ರತ್ನೆ ಬದುಕಿನಲ್ಲಿ ಸೋತು ಗೆಲುವಿನ ದಾರಿ ಕಂಡುಕೊಂಡವಳು. ಇನ್ನೊಬ್ಬರನ್ನು ನಗಿಸುತ್ತಾ ದಿನ ಕಳೆಯುವವಳು. ಸಬಿತಾ ಬದುಕಿಗಾಗಿ ಹೋರಾಡುತ್ತಾ ದುರ್ಗಮಗಳನ್ನು ದೂರುವವಳು. ನಟಿ ಕಥೆಯ ರತ್ನೆ ದುರಂತ ನಾಯಕಿಯಾದಳೆ? ಸಬಿತಾ ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿರುವಳೆ? ಪ್ರಶ್ನೆಗಳು ಊಹನೆಗೆ ಹಚ್ಚುತ್ತವೆ. ‘ಮಾತು ಸೋತ ಕ್ಷಣ’ದಲ್ಲಿ ಮೌನದೊಳಡಗಿದ ಮೌನದ ನಿಗೂಢತೆಯೆ, ಏನೆನ್ನುವುದು ಕೊನೆಗೂ ತಿಳಿಯುವುದಿಲ್ಲ. ಇದು ಕೂಡ ಓದುಗರಿಗೆ ಬಿಟ್ಟ ವಿಚಾರವಾಗಿಯೆ ಉಳಿಯುತ್ತದೆ.

‘ಮನೆಯವರೆಗಿನ ಹಾದಿ’ ಕಥೆಯಲ್ಲಿ ಮನುಷ್ಯ ತನ್ನ ಸ್ವಾರ್ಥವಿಲ್ಲದೆ ಏನನ್ನೂ ಮಾಡಲಾರನ್ನೆನ್ನುವುದು ಸಾಬೀತಾಗುತ್ತದೆ. ‘ಪ್ರಶ್ನೆ’ ಇಬ್ಬರು ಧೈರ್ಯದ ಹುಡುಗಿಯರ ವಯೋಸಹಜವಾದ ಛಾಲೆಂಜ್ ಒಂದು ಪ್ರಶ್ನೆಯಾಗಿಯೇ ನಿಲ್ಲುವ ಕಥೆ. ಭುವಿ ಭಾಷಣಕಾರನನ್ನು ಮೆಚ್ಚಿ ಅವನ ಜೊತೆಗೆ ಒಂದು ರಾತ್ರಿ ಕಳೆಯುವ ಇಚ್ಛೆಯಿರುವವಳು. ಕೊನೆಗೂ ಅದೇ ಪ್ರಶ್ನೆಯನ್ನು ಬರೆದು ಅವನಿಗೆ ಕಳುಹಿದರೆ ಅವನ ಆಹ್ವಾನವನ್ನು ತಿರಸ್ಕರಿಸುತ್ತಾಳೆ. ಆದರೆ ಅವಳ ಗೆಳತಿ ಅನು ಧೈರ್ಯದಿಂದ ಅವನ ಜೊತೆಗೆ ಹೊರಡುತ್ತಾಳೆ. ಅವಳು ಅತಿಥಿಯ ಜೊತೆಗೆ ಹೋದದ್ದೆಲ್ಲಿಗೆ? ಮನೆಗೆ? ರೂಮಿಗೆ? ಎಲ್ಲಿಗೆ ಬಿಡಿಸಿ ಕೇಳುವ ಧೈರ್ಯವಾಗದೆ ಮೆಲ್ಲನೆ ಮೆಟ್ಟಿಲಿಳಿದಳು ಭುವಿ.

ಬಾಡಿಗೆಗೆ ಕೊಡುವ ಮನೆಯಲ್ಲಿ ದೇವರ ಕೋಣೆ ಬೇಕೆ, ಬೇಡವೆ? ಅನ್ನುವ ನಿರ್ಧಾರದೊಂದಿಗೆ ಆರಂಭವಾಗುವ ಕಥೆ ಅಲ್ಲಿಗೆ ಬರುವ ಬಾಡಿಗೆದಾರರಿಗೆ ದೇವರ ಕೋಣೆಯ ಅವಶ್ಯಕತೆಯೇನೆನ್ನುವುದನ್ನು ತಿಳಿಸುತ್ತದೆ, ಕಥೆ ‘ಅವರವರ ಭಾವಕ್ಕೆ’. ಭಾವನಾತ್ಮಕವಾಗಿ ಬಿಡಿಸಿಕೊಳ್ಳುವ ಕಥೆ ಸಮಿತಾಳ ಕೊರಗಿನಿಂದ ಮುಗಿಯುತ್ತದೆ. ರಾಜತ್ತೆಯಂತಹ ಧೈರ್ಯದ ಹೆಂಗಸಿನ ಸುತ್ತಾ ಹೆಣೆದ ಕಥೆ ‘ತೆರೆಯದ ಪುಟಗಳು’. ಕೆಲವೊಂದು ವಿಷಯಗಳನ್ನು ಇನ್ನೊಬ್ಬನ ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ. ಹಾಗೆಯೇ ರಾಜತ್ತೆಯ ಕಥೆ.

ಈ ಸಂಕಲನದ ಕೊನೆಯ ಕಥೆ ‘ಕ್ರೌಂಚ ಪಕ್ಷಿಗಳು’, ಒಂದು ಸತ್ತು ಇನ್ನೊಂದು ಬದುಕಿದ ಉಳಿದ ಪಕ್ಷಿಯ ಕಥೆಯಂತೆಯೂ ಕಾಣುತ್ತದೆ. ಸತ್ತ ಪಕ್ಷಿ ಯಾರು? ಬದುಕಿದ ಪಕ್ಷಿಯ ಒದ್ದಾಟವೇನೆನ್ನುವುದನ್ನು ನಯವಾಗಿ ಈ ಕಥೆ ಲಕ್ಷ್ಮಮ್ಮನ ಪಾತ್ರದ ಮೂಲಕ ತೆರೆದಿಡುತ್ತದೆ. ಮನುಷ್ಯ ಮನುಷ್ಯನಾಗಿರೋದು ಸಾಮಾನ್ಯ ಸ್ಥಿತಿಯಲ್ಲಿ ಮಾತ್ರ. ಸಿದ್ಧಾಂತ, ತತ್ವ, ರೀತಿ, ನೀತಿಗಳ ಬುಡ ತುಸುವೇ ಅಲ್ಲಾಡಿದರೂ ಮೊದಲು ಬಲಿಯಾಗೋದು ಮಹಿಳೆ. ಅವಳ ದೇಹ, ಅವಳ ಮನಸ್ಸು ಮತ್ತು ಅವಳ ಬದುಕು. ಹಾಗೆ ಬಲಿಯಾದ ಪಕ್ಷಿ ಲಕ್ಷ್ಮಮ್ಮ. ಆಶ್ನಾರ್ಣ ಭಟ್ಟರ ವ್ಯಕ್ತಿತ್ವವನ್ನು ತೆರೆದಿಡುವ ಲಕ್ಷ್ಮಮ್ಮ ಹೇಗೆ ಬಲಿಯಾದರೆನ್ನುವುದನ್ನು ತಿಳಿಸುತ್ತಾರೆ.

ಇಲ್ಲಿ ಬಳಸಿಕೊಂಡಿರುವ ಭಾಷೆಯಷ್ಟೆ ಕಥೆಯ ವಸ್ತುಗಳು ವಿಭಿನ್ನ ಮತ್ತು ಚಿಂತನೆಗೆ ಹಚ್ಚುವಂತಹವುಗಳು. ವೈದೇಹಿಯವರ ಕಥೆಗಳನ್ನು ಓದಿಕೊಂಡಷ್ಟು ಹೊಸ ಹೊಸ ವಿಚಾರಗಳು ನಮ್ಮನ್ನು ಕಾಡುತ್ತಿರುತ್ತವೆ. ಹಾಗಾಗಿ ‘ಕ್ರೌಂಚ ಪಕ್ಷಿಗಳು’ ಒಂದು ದೊಡ್ಡ ಓದುಗವರ್ಗವನ್ನೇ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

Read more!

Sunday, December 19, 2010

ಅನಂತಮೂರ್ತಿ ಅವರ ಕೃತಿ ‘ಸಂಸ್ಕಾರ’


ಯು. ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಓದುತ್ತಲೇ ಓದುಗನನ್ನು ಬೆರಗುಗೊಳಿಸುವ ಕಾದಂಬರಿ. ಯಾವುದು ಸಂಸ್ಕಾರ? ಅದನ್ನು ಡ್ರ್ಯಾಸ್ಟಿಕ್ ಆಗಿ ಅನುಸರಿಸು ಅಂದವರು ಯಾರು? ತೋರಿಕೆಗಾಗಿ ಮಾತ್ರ ಈ ಸಂಸ್ಕಾರಗಳು ಬೇಕೆ? ಪ್ರಾಂಜಲ ಮನಸ್ಸಿನಿಂದ ಸಂಸ್ಕಾರಗಳನ್ನು ನಡೆಸಿಕೊಂಡು ಬಂದವರು ಯಾರು? ಹೌದಲ್ಲವೇ, ಇಷ್ಟೊಂದು ಅಸಂಗತ ಅನಿಸಬಹುದಾದ ಪ್ರಶ್ನೆಗಳು ನಮ್ಮನ್ನು ಕೊರೆಯುತ್ತವೆ. ಇದಕ್ಕೆಲ್ಲಾ ಉತ್ತರವಾಗಿ ನಿಲ್ಲಬಹುದಾದ ಒಂದು ಪಾತ್ರ ಮಾತ್ರ ಪ್ರಾಣೇಶಾಚಾರ್ಯರು!"

ತಟ್ಟನೆ ಕಣ್ಣೆದುರು ನಿಲ್ಲುವ ಪ್ರಾಣೇಶಾಚಾರ್ಯರು, ರೋಗಿಷ್ಟೆ ಮಡದಿಯನ್ನು ಉಪಚರಿಸುತ್ತಾ, ಸಂಸ್ಕಾರಗಳನ್ನು ಪಾಲಿಸಿಕೊಂಡು ಬಂದವರು. ಅದರಿಂದಾಗಿಯೆ ಬಹಳ ಸಂಯಮದಿಂದ ಜೀವಿಸುವ ಅವರಿಗೆ ಬದುಕು ಹದವಾಗಿರುವುದು ತಾನು ಪಾಲಿಸಿಕೊಂಡು ಬರುತ್ತಿರುವ ಸಂಯಮದಿಂದ ಎಂದು ತೃಪ್ತಿ ಪಟ್ಟುಕೊಂಡವರು. ಆದರೆ ನಾರಣಪ್ಪ ಸಂಸ್ಕಾರಗಳನ್ನು ಮಾಡಿಕೊಂಡು ಬರಬೇಕಾಗಿದ್ದ ಜಾತಿಯವನಾಗಿದ್ದು, ಅವೆಲ್ಲವನ್ನೂ ತ್ಯಜಿಸಿ ತನ್ನ ಸಾವಿನ ಆನಂತರ ದೊಡ್ಡ ಸಮಸ್ಯೆಯಾಗಿ ಅಗ್ರಹಾರದವರಿಗೆಲ್ಲಾ ಕಾಡುತ್ತಿರುತ್ತಾನೆ. ಒಂದು ರೀತಿಯಲ್ಲಿ ಜಾತಿಯಿಂದ ಬಹಿಷ್ಕಾರಕ್ಕೆ ಒಳಗಾಗದೆ ಜಾತಿಯ ಸಂಸ್ಕಾರಗಳನ್ನು ಬಿಟ್ಟವನ ಶವಸಂಸ್ಕಾರಕ್ಕೆ ಅಗ್ರಹಾರದ ಯಾವೊಬ್ಬನೂ ಮುಂದಾಗುವುದಿಲ್ಲ. ಲಕ್ಷಣಾಚಾರ್ಯರಾಗಲಿ, ಗರುಡಾಚಾರ್ಯರಾಗಲಿ ಕಾಯುವುದು ಪ್ರಾಣೇಶಾಚಾರ್ಯರ ಉತ್ತರಕ್ಕಾಗಿ. ಪ್ರಾಣೇಶಾಚಾರ್ಯರಾದರೂ ಗ್ರಂಥಗಳನ್ನು, ತಾಳೆಗರಿಯ ಓಲೆಗಳನ್ನು ತಿರುಚಿ ಹಾಕಿದರೂ ಕೊನೆಗೆ ದೇವರ ಮೊರೆ ಹೊಕ್ಕರೂ ಸಮಸ್ಯೆಯಾಗಿ ಕಾಡುವ ನಾರಣಪ್ಪನ ಶವಸಂಸ್ಕಾರ ಮಾಡುವ ಯಾವ ಪರಿಹಾರ ಕ್ರಮಗಳು ಸಿಗುವುದಿಲ್ಲ. ಇದರಿಂದ ಅಂತರ್ಮುಖಿಯಾಗುತ್ತಾರೆ.

ಸಂಸ್ಕಾರ ಕಾಣದ ನಾರಣಪ್ಪನ ಶವ ಅಗ್ರಹಾರದ ತುಂಬೆಲ್ಲಾ ಗಬ್ಬು ನಾತ ಬಿರುತ್ತಿದ್ದರೂ ಎಲ್ಲರೂ ತಮ್ಮ ತಮ್ಮ ಹಠ ಸಾಧನೆಯಲ್ಲಿಯೇ ಇದ್ದು ಬಿಡುತ್ತಾರೆ. ಶವಸಂಸ್ಕಾರವಾಗಬೇಕಾದರೂ ತಮ್ಮ ಲಾಭ ಗಳಿಕೆಯ ದೃಷ್ಟಿಯಿಂದ ಯೋಚಿಸುತ್ತಾರಲ್ಲದೆ ಅಗ್ರಹಾರದಲ್ಲಿರುವವನ ಶವ ಸಂಸ್ಕಾರವನ್ನು ಮಾಡಲು ಮುಂದಾಗುವುದಿಲ್ಲ. ಅವರವರ ಸ್ವಾರ್ಥದಿಂದ ಗುರುಗಳಾದ ಪ್ರಾಣೇಶಾಚಾರ್ಯರನ್ನು ಒಪ್ಪಿಸುವುದಕ್ಕೆ ಹಾತೊರೆದರೂ ಅವರ ಮಾತನ್ನು ಮೀರದವರು ಅಗ್ರಹಾರದ ಮಂದಿ. ಗುರುಗಳಿಗಾದರೂ ಅವರ ಜೀವನವೇ ಡೋಲಾಯಮಾನ ಸ್ಥಿತಿಯಲ್ಲಿರುತ್ತದೆ. ನಾರಣಪ್ಪನ ಶವಸಂಸ್ಕಾರದ ಬಗ್ಗೆ ಯಾವೊಂದು ನಿರ್ಧಾರವನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಪರಿಹಾರದ ಹುಡುಕಾಟದಲ್ಲಿಯೆ ದಿನ ಕಳೆಯುತ್ತಾ ಹದ್ದುಗಳು ಹಾರಡುವಲ್ಲಿಯವರೆಗೆ ಮುಂದುವರಿಯುತ್ತದೆ ಅಲ್ಲಿಯ ಪರಿಸ್ಥಿತಿ. ಅಗ್ರಹಾರದ ಜನರ ನಿರೀಕ್ಷೆ ಗುರುಗಳಿಂದ ಬರಬಹುದಾದ ಶವದ ಇತ್ಯರ್ಥದ ಬಗ್ಗೆ. ಅವರ ನಿರ್ಧಾರದ ವಿಳಂಬದಲ್ಲಿ ಅಗ್ರಹಾರದ ಮಂದಿ ಉಪವಾಸ ಬೀಳುವುದು ಅನಿವಾರ್ಯವಾದಾಗ ಅವರೆಲ್ಲಾ ಸೇರಿ ಊರಿನ ಹೊರಗೆ ಹಸಿವೆಯನ್ನು ನೀಗಿಕೊಳ್ಳುವ ದಾರಿಯನ್ನು ಹುಡುಕುತ್ತಾರೆ.

ಚಂದ್ರಿಯೆನ್ನುವ ಸೂಳೆಯ ಜೊತೆಗೆ ಮಧು ಮಾಂಸದ ರುಚಿಗೆ ಅಂಟಿಕೊಂಡ ನಾರಣಪ್ಪನನ್ನು ಜಾತಿಯಿಂದ ಬಹಿಷ್ಕಾರ ಹಾಕದಿರುವುದೇ ತೊಡಕಾಗಿ ಆತನ ಹೆಣ ಅನಾಥವಾಗುತ್ತದೆ. ಆಗ ಅಗ್ರಹಾರದ ತುಂಬೆಲ್ಲಾ ಸ್ವೇಚ್ಛೆಯಿಂದ ಓಡಾಡುವ ಇಲಿಗಳು ಪ್ಲೇಗ್ ಅನ್ನೋ ಮಹಾಮಾರಿಯನ್ನು ಊರಿಡೀ ಹಬ್ಬಿಸುವುದನ್ನು ಯಾವೊಬ್ಬನ ಅರಿವಿಗೂ ಬಾರದು. ನಾರಣಪ್ಪನ ಸಾವಿಗೂ ಅದೇ ಮಹಾಮಾರಿಯೇ ಕಾರಣವಾದರೂ ಆತ ಚಂದ್ರಿಯ ಬಂಧನದಲ್ಲಿದ್ದುದರಿಂದ ಜಾತೀವಾದವೇ ಮೇಲೆ ನಿಂತು ಅವನ ಸಂಸ್ಕಾರಕ್ಕೂ ತಡೆಯಾಗುತ್ತದೆ.

ಇಲ್ಲಿ ಚಂದ್ರಿ ಅಗ್ರಹಾರದ ಜನರಿಗಿಂತ ಕೆಳವರ್ಗದವಳಾದರೂ ಅವಳಿಗೆ ನಾರಣಪ್ಪನ ಶವ ಸಂಸ್ಕಾರ ಮಾಡಬೇಕೆನ್ನುವ ಮಾನವೀಯತೆ ಇದೆ. ಆದರೆ ನಾರಣಪ್ಪನ ಜಾತಿಯಲ್ಲಿಯೇ ಹುಟ್ಟಿದ ಯಾವನಿಗೂ ಆ ಮಾನವೀಯತೆ ಇಲ್ಲದಿರುವುದು ಖೇದನೀಯ. ಚಂದ್ರಿಯಾದರೂ ತನ್ನಲ್ಲಿರುವ ಚಿನ್ನವನ್ನು ಕೊಟ್ಟು ನಾರಣಪ್ಪನ ಶವಸಂಸ್ಕಾರ ಮುಗಿಸಿ ಋಣಮುಕ್ತಳಾಗಬೇಕೆನ್ನುವ ನಿರ್ಧಾರವಿದ್ದವಳು, ಚಿನ್ನವನ್ನೆಲ್ಲಾ ಪ್ರಾಣೇಶಾಚಾರ್ಯರ ಕೈಯಲ್ಲಿಡುತ್ತಾಳೆ. ಆದರೆ ಮನೆಗೆ ಹಿಂತಿರುಗುವಾಗ ಕೊಳೆತು ನಾರುವ ಶವದ ಭೀಕರತೆಗೆ ಬೆದರಿ ರಾತ್ರೋ ರಾತ್ರಿ ಶೇಷಪ್ಪನಲ್ಲಿ ವಿನಂತಿಸಿಕೊಂಡ ಅವಳು ಅವನ ನಿರಾಕರಣೆಯಿಂದ ಮೀನಿನ ವ್ಯಾಪಾರಿ ಮಹ್ಮದ್ ಬ್ಯಾರಿಯ ಕೈಯಲ್ಲಿ ಶವವನ್ನು ಬೂದಿ ಮಾಡಿಸಿ ತನ್ನೂರಿಗೆ ಮರಳುತ್ತಾಳೆ.

ಒಮ್ಮೆ ಚಂದ್ರಿಯ ಸ್ಪರ್ಶದಿಂದ ಪುಲಕಿತರಾದ ಪ್ರಾಣೇಶಾಚಾರ್ಯರು ಅವನ ಸಾನಿಧ್ಯ ಸುಖವನ್ನು ಅನುಭವಿಸುವ ಮನಸ್ಸಾಗಿ ಬಹಳಷ್ಟು ಚಿಂತಿತರಾಗಿರುವಾಗಲೆ ಅವರ ರೋಗಿಷ್ಟ ಮಡದಿ ಸಾವನ್ನಪ್ಪುತ್ತಾಳೆ. ಅವಳ ಸಂಸ್ಕಾರ ಮುಗಿಸಿ ಕಾಲು ಕೊಂಡೊಯ್ದಲ್ಲಿ ನಡೆಯುವುದೆಂದು ಅಗ್ರಹಾರವನ್ನು ಬಿಡುತ್ತಾರೆ. ಅವರ ಮನಸ್ಸೆಲ್ಲಾ ಚಂದ್ರಿಯೇ ತುಂಬಿರುತ್ತಾಳೆ. ಅವಳಿಂದ ಪಡೆದ ಸುಖದ ಮೆಲುಕಿನಲ್ಲಿ ದೂರ ಸವೆಸುತ್ತಿರಲು ಪುಟ್ಟನ ಜೊತೆಯಾಗುತ್ತದೆ. ಅವರಲ್ಲಿರುವ ಅವ್ಯಕ್ತ ಭೀತಿ ತನ್ನ ಪರಿಚಯವೇನಾದರೂ ಆಗಿ, ತನ್ನ ಸುಳಿವು ದೊರೆತರೆ? ಅನ್ನುವುದರಲ್ಲಿಯೂ ಪುಟ್ಟ ಆಹ್ವಾನಗಳನ್ನೆಲ್ಲಾ ನಿರಾಕರಿಸುತ್ತಾ, ಸ್ವೀಕರಿಸುತ್ತಾ ಮುನ್ನಡೆದವರಿಗೆ ಒಂದು ರೀತಿಯ ತಲ್ಲಣವಿರುತ್ತದೆ. ಆದರೂ ಅವರ ತುಡಿತವಿರುವುದು ಚಂದ್ರಿಯನ್ನು ಸೇರುವಲ್ಲಿ. ತಮ್ಮ ಅಸ್ತಿತ್ವವನ್ನೇ ಮರೆ ಮಾಚಿಕೊಂಡು ಸಂಸ್ಕಾರ ಬಂಧವನ್ನು ಕಳಚಿ ಕೊನೆಗೆ ದೇವಸ್ಥಾನದ ಊಟಕ್ಕೆ ಕುಳಿತಾಗ ಅವರ ಗುರುತು ಹಿಡಿದ ವ್ಯಕ್ತಿಯೊಬ್ಬ ಅವರನ್ನು ಪ್ರಶ್ನಿಸಿ ಆತಂಕಕೆಡೆ ಮಾಡುತ್ತಾನೆ. ಅವರು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಕಾಣದ ದಾರಿ ಹಿಡಿದಾಗ ಮತ್ತೆ ಪುಟ್ಟ ಎದುರಾಗುತ್ತಾನೆ. ಅವರನ್ನು ಗಾಡಿ ಹತ್ತಿಸುತ್ತಾನೆ. ಅವರು ನಿರಾಕರಿಸಿದರೂ ಗಾಡಿ ಏರಲೇ ಬೇಕಾದ ಪರಿಸ್ಥಿತಿ. ಮತ್ತೆ?

ಈಗ ಆಕಾಶದಲ್ಲಿ ನಕ್ಷತ್ರಗಳು, ಗೆರೆ ಚಂದ್ರ. ದಿಟ್ಟಗೆ ನಿಂತ ಸಪ್ತರ್ಷಿ ಮಂಡಳ. ಇದ್ದಕ್ಕಿದ್ದಂತೆ ಚಂಡೆಯ ಶಬ್ದ. ಅಲ್ಲೊಂದು ಇಲ್ಲೊಂದು ಕೊಳ್ಳಿಯ ಬೆಂಕಿ. ಗುಡ್ಡ ಹತ್ತುವ ಎತ್ತಿನ ಉಸಿರು. ಕೊರಳಿನ ಗೆಜ್ಜೆ. ನಾಲ್ಕೈದು ಗಂಟೆಗಳ ಪ್ರಯಾಣ. ಮತ್ತೆ?

ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು.

ಇಷ್ಟಾದರೂ ಈ ಕಾದಂಬರಿಯನ್ನು ಓದಿಯೆ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳಲೇಬೇಕಿರುವ ಅನಿವಾರ್ಯತೆ ಓದುಗನಿಗಿದೆ.

Read more!

Monday, November 29, 2010

ನಾಗತಿಹಳ್ಳಿ ಚಂದ್ರಶೇಖರ ಅವರ ‘ವಲಸೆ...’


ಮೇಷ್ಟ್ರ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಓದುವುದೆ ಒಂದು ಚೇತೋಹಾರಿ ಅನುಭವ. ಅವರ ‘ಬಾ ನಲ್ಲೆ ಮಧುಚಂದ್ರಕ್ಕೆ’ ಕಾದಂಬರಿ, ಅಮೆರಿಕಾ! ಅಮೆರಿಕಾ!! ಪ್ರವಾಸಕಥನ ಮತ್ತು ನನ್ನ ಪ್ರೀತಿಯ ಹುಡುಗಿಗೆ ಕಥಾಸಂಕಲನ ಯುವ ಮನಸುಗಳನ್ನು ಸಾಹಿತ್ಯದತ್ತ ಆಕರ್ಷಿಸಿದೆಯೆಂದರೆ ಹೆಚ್ಚಲ್ಲ. ಸದಾ ವಸ್ತುಸ್ಥಿತಿಯ ನಿಚ್ಚಳವಾದ ಅನಾವರಣ, ತಿಳಿ ಹಾಸ್ಯದ ಶೈಲಿಯ ಮಾತುಗಳು, ಒಂದಷ್ಟು ಮುದನೀಡುವ ಸನ್ನಿವೇಶಗಳು ಅವರ ಸಾಹಿತ್ಯದ ಕೃಷಿಯಲ್ಲಿ ಎದ್ದು ಕಾಣುವ ಸಂಗತಿಗಳು.

‘ವಲಸೆ ಹಕ್ಕಿಯ ಹಾಡು’ ಅವರ ಹೊಸ ಕೃತಿಯೇನಲ್ಲ. ಅದು ಅವರು ಎಂಬತ್ತರ ದಶಕದಲ್ಲಿ ಬರೆದ ಕಾದಂಬರಿ. ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಜೀವನವನ್ನ ಕಟ್ಟಿಕೊಡುವ ಶೈಲಿ ತುಂಬಾ ಆಪ್ತವೆನಿಸುತ್ತದೆ. ತಿಳಿ ಹಾಸ್ಯದೊಂದಿಗೆ ಆರಂಭವಾಗುವ ಕಾದಂಬರಿಯಲ್ಲಿ ಚಿಕ್ಕಮಾಳಿಗೆ ಕೊಪ್ಪಲು (ಸಿ.ಎಂ.ಕೊಪ್ಪಲು) ಅನ್ನುವ ಹಳ್ಳಿಯ ಚಿತ್ರಣವನ್ನು, ಅಲ್ಲಿಯ ಜನಜೀವನವನ್ನೂ ತೆರೆಯುತ್ತಾ ಕಾದಂಬರಿ ಓದುಗನನ್ನು ಸೆಳೆದುಕೊಳ್ಳುತ್ತದೆ. ಪಂಡ್ರಿಯೆನ್ನುವ ಮುಗ್ಧ ಹುಡುಗ, ಹುಟ್ಟು ಹೋರಾಟಗಾರನಲ್ಲದಿದ್ದರೂ ಪ್ರಾಮಾಣಿಕವಾಗಿ ಆ ಹಳ್ಳಿಯ ಬಗ್ಗೆ ಕಾಳಜಿವಹಿಸುವ ಕೆಂಚೇಗೌಡರು, ಪ್ರೀತಿ ತೋರಿದರೂ ಪರಿಸ್ಥಿತಿಯೊಂದಿಗೆ ರಾಜಿ ಮಡಿಕೊಳ್ಳದ ಸಿಡುಕು ಸ್ವಭಾವದ ಗೌಡರ ಮಡದಿ ಹೊಂಬಾಳಮ್ಮ, ಸ್ವತಂತ್ರವಾಗಿ ತಿರುಗಾಡಿಕೊಂಡು ಪಡ್ಡೆಯೆಂದು ಗುರುತಿಸಿಕೊಳ್ಳುವ ಗೌಡರ ಮಗ ಸ್ವತಂತ್ರ ಹೀಗೆ ನಾನಾ ಬಗೆಯ ಪಾತ್ರಗಳು ಈ ಕಾದಂಬರಿಯ ಬೆಳವಣಿಗೆಗೆಯಲ್ಲಿ ಜೀವ ಪಡೆದುಕೊಳ್ಳುತ್ತವೆ."

ಡ್ರಿಲ್ ಮಾಸ್ಟ್ರು ಯಲ್ಲಯ್ಯ ಪಂಡ್ರಿಗೆ ಸ್ವಾತಂತ್ರ್ಯ ದಿನಾಚರಣೆಯ ವಂದನಾರ್ಪಣೆಯ ಜವಾಬ್ದಾರಿಯನ್ನು ಕೊಟ್ಟ ಮೇಲೆ ಹೃಸ್ವ ಮತ್ತು ದೀರ್ಘಗಳ ವ್ಯತ್ಯಾಸ ತಿಳಿಯದ ಅವನು ಅದನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಉರು ಹೊಡೆದು ರಾತ್ರಿ ನಿದ್ದೆಯಲ್ಲಿಯೂ ಮಗ ಕನಸಿನಲ್ಲಿ ವಂದನಾರ್ಪಣೆಯೆನ್ನುವುದನ್ನು ಕನವರಿಸುವಾಗ ಅವನ ತಾಯಿ ಭವಾನಿ ಇದು ‘ಒಂದ’ಕ್ಕೆ ಸಂಬಂಧಿಸಿರಬಹುದೆಂದು ಊಹಿಸಿ, “ಎದ್ದು ಹೋಗಿ ಒಂದ ಮಾಡಿ ಬಂದು ಬಿದ್ಕೊ” ಎಂದು ಗದರಿಸಿವ ಸನ್ನಿವೇಶವಂತು ನಗೆಗಡಲಲ್ಲಿ ಮುಳುಗಿಸುತ್ತದೆ. ಇಂತಹ ಮುಗ್ಧತೆಯಿರುವ ಹಳ್ಳಿಯಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಪ್ರಚುರಪಡಿಸುವ ಗೌಡರಿಗೆ ಮಾತ್ರ ಮಗ ಸ್ವತಂತ್ರನಿಂದ ನೆಮ್ಮದಿಯಿರುವುದಿಲ್ಲ. ಸದಾ ಕುಡಿದು, ಗಲಾಟೆ ಮಾಡಿಕೊಂಡು ಬಂದು ಮನೆಯಲ್ಲಿ ತಾಯಿಯ ಮಾತಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು; ಮಾತ್ರವಲ್ಲ, ಗೌಡರ ನೆಮ್ಮದಿಯನ್ನು ಕದಿಯುತ್ತಾನೆ. ಅವನೊಂದು ದೊಡ್ಡ ಹೊರೆಯಾಗಿ ಸದಾ ಅವರನ್ನು ಕಾಡುತ್ತಲೇ ಇರುತ್ತಾನೆ.

ಇಷ್ಟಾದರೂ ಗೌಡರ ಸ್ವಾತಂತ್ರ್ಯ ಸೇವೆ ನಿಲ್ಲುವುದಿಲ್ಲ. ಅವರು ಶಾಲೆಯ, ಊರಿನ ಅಭಿವೃದ್ಧಿಗೆ ತೊಡಗುತ್ತಾರೆ. ಮನೆಯಲ್ಲಿ ಸದಾ ಹಾಲುಹೊಳೆಯೆ ಹರಿಯುತ್ತಿರುತ್ತದೆ. ಅವರ ಉದಾರಗುಣ ಹೊಂಬಾಳಮ್ಮನಿಗೆ ಸರಿಕಾಣದು. ಸದಾ ದುಮುಗುಟ್ಟುತ್ತಾ ಮೌನದ ತೆಕ್ಕೆಗೆ ಜಾರುವ ಅವರು ಒಮ್ಮೆಯೂ ಗೌಡರ ಬಳಿ ಪ್ರೀತಿಯಿಂದ ಮಾತನಾಡಿದಿಲ್ಲ. ಆದರೂ ಗೌಡರ ಮನೆಯೆ ನ್ಯಾಯದ ಕಟ್ಟೆಯಾಗಿರುವುದರಿಂದ ಅವರು ಹೇಳಿದ್ದೆ ನ್ಯಾಯವಾಗಿ ಊರವರಿಗೆಲ್ಲಾ ಅವರ ಮೇಲೆ ಗೌರವ, ಪ್ರೀತಿ ಎಲ್ಲವೂ.

ಇಂತಿರುವ ಗೌಡರು ದೇಶದಲ್ಲೆಲ್ಲಾ ಸ್ವಾತಂತ್ರ್ಯದ ಬಿರುಗಾಳಿ ಬೀಸುತ್ತಿರುವಾಗ ದೇಶಸೇವೆಗಾಗಿ ಅಲ್ಲದಿದ್ದರೂ ಗೆಳೆಯನೊಬ್ಬನನ್ನು ಹುಡುಕುತ್ತಾ ದೇಶ ಸುತ್ತಾಡುವುದಕ್ಕೆ ಹೋಗಿ ವಿಭಜನೆಯಾಗದ ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಕ್ಕಿಕೊಂಡು, ಅಲ್ಲಿ ತಾವು ಗಳಿಸಿಕೊಂಡ ಗೆಳೆಯನ ಮೂಲಕ ತಾನು ಹುಡುಕುತ್ತಿರುವ ವ್ಯಕ್ತಿಯ ಮಗನೆ ಆತನೆಂದು ತಿಳಿದು ಸಂತೋಷಪಡುತ್ತಾರೆ. ಆದರೆ ಗೌಡರ ತಂದೆಯಂತೆಯೆ ಆ ವ್ಯಕ್ತಿಯೂ ಎಲ್ಲಿ ಹೋದ? ಏನಾದನೆನ್ನುವುದು ಮಗನಿಗೂ ಗೊತ್ತಿರುವುದಿಲ್ಲ. ಹೀಗೆ ಅವರ ಹಿನ್ನಲೆಯನ್ನು ಕೆದಕುವ ಕಾದಂಬರಿ ಮತ್ತೆ ಓಟ ಪಡೆಯುವುದು ಕೆಂಚೇಗೌಡರ ಮಗನ ಮರು ಪ್ರವೇಶದಿಂದ. ಅವನು ತಂದೆಯ ಆಸ್ತಿಯನ್ನು ತನಗೆ ಕೊಡಬೇಕೆಂದು ಗಲಾಟೆಯೆಬ್ಬಿಸಿ ಮನೆಯನ್ನು ರಣರಂಗ ಮಾಡುತ್ತಾನೆ. ಗೌಡರಿಗಾದರೂ ಅವನಿಗೆ ಆಸ್ತಿ ಬರೆದುಕೊಟ್ಟರೆ ತಮಗೆ ಉಳಿಯುವುದು ಚಿಪ್ಪು ಮಾತ್ರವೆಂದು ತಿಳಿದಿರುವುದರಿಂದ ಆ ವಿಷಯವನ್ನು ಮುಂದಕ್ಕೆ ದೂಡುತ್ತಾರೆ. ಆದರೆ ಬಂದಾಗಲೆಲ್ಲ ಅವನು ಗಲಾಟೆಯೆಬ್ಬಿಸುತ್ತಲೇ ಇರುತ್ತಾನೆ.

ಒಮ್ಮೆ ಆ ಊರಿಗೆ ಪ್ರಪಂಚ ಅಲೆದಾಟಕ್ಕೆ ಬಂದಿರುವ ಪ್ರೆಂಚ್ ಮಹಿಳೆ ವುಲ್ಫ್ಗಂಗ್ಳು ಭೇಟಿಕೊಟ್ಟು ಗೌಡರ ಮನೆಯಲ್ಲಿಯೆ ಉಳಿಯುತ್ತಾಳೆ. ಅವಳಿಗೆ ಸಿ.ಎಂ.ಕೊಪ್ಪಲು ಹಳ್ಳಿ ತುಂಬಾ ಇಷ್ಟವಾಗಿರುತ್ತದೆ. ಅಲ್ಲಿಯ ಸಂಸ್ಕೃತಿ, ಜನರ ನಡೆ ನುಡಿಗಳನ್ನು ಮೆಚ್ಚಿ, ಅವಳನ್ನು ಬೆರಗಿನಿಂದ ನೋಡುವ ಹಳ್ಳಿಯ ಜನರ ಪ್ರೀತಿಪಾತ್ರಳಾಗುತ್ತಾಳೆ. ಗೌಡರಿಗೆ ತಮ್ಮ ಮನಸ್ಸಿನಲ್ಲಿರುವ ಖಿನ್ನತೆಯನ್ನು ಬಿಚ್ಚಿಕೊಳ್ಳುವ ಸಂದರ್ಭ ಬಂದಾಗ ಅವರು ತಮ್ಮ ಮಗನಿಂದಾದ ನೋವನ್ನೆಲ್ಲಾ ಹೇಳಿಕೊಂಡು ಹಗುರಾಗುತ್ತಾರೆ. ಅವಳ ಸಾಂತ್ವನದಲ್ಲಿ ಒಬ್ಬ ತಾಯಿ, ಒಬ್ಬ ಸ್ನೇಹಿತೆಯ ಆದರ್ಶವನ್ನು ಕಾಣುತ್ತಾರೆ. ಅವಳ ಮಾತಿನಂತೆ ತಮ್ಮ ಎಲ್ಲಾ ಆಸ್ತಿಯನ್ನು ಮಗನಿಗೆ ಬರೆದು ತಾವು ಮಡದಿಯ ಜೊತೆಗೆ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಉಳಿಯುತ್ತಾರೆ.

ಸ್ವತಂತ್ರ ತನ್ನ ದುಷ್ಟ ಗುಣಗಳನ್ನೆ ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಶಾಸಕನಾಗುತ್ತಾನೆ. ಅವನು ಕಾಟಾಚಾರಕ್ಕಾದರೂ ತಂದೆ-ತಾಯಿಯನ್ನು ತಂದಿರಿಸಿಕೊಳ್ಳಬೇಕೆಂದುಕೊಂಡರೂ ಸ್ವಾಭಿಮಾನಿಯಾದ ಕೆಂಚೇಗೌಡರು ಒಲ್ಲೆನೆನ್ನುತ್ತಾರೆ. ಏತನ್ಮಧ್ಯೆ ಹೊಂಬಾಳಮ್ಮ ಜಗದ ಋಣ ತೀರಿಸಿಕೊಂಡಿರುತ್ತಾಳೆ. ಈ ಆಘಾತ ಗೌಡರನ್ನು ಭೀಕರವಾದ ಪರಿಸ್ಥಿತಿಗೆ ತಳ್ಳುತ್ತದೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ತಾತ್ವರ ಪಡುತ್ತಾರೆ. ಆಗ ಅವರ ಸಹಾಯಕ್ಕೆ ಬರುವುದು ಅವರ ಇಂಗ್ಲಿಷ್ ಮಾತ್ರ. ಹಾಗಾಗಿ ಅವರು ಭದ್ರಾವತಿಯಂತಹ ಊರನ್ನು ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ತಾನೇ ಸಲಹಿ ಸಾಕಿದ ಹುಡುಗ ಪಂಡ್ರಿಯ ಮಾತುಗಳಿಂದ ಭೂಮಿಗೆ ಇಳಿದ ಅವರಿಗೆ, ತನ್ನ ಬೆನ್ನ ಹಿಂದೆ ಕರಾಳ ವಾಸ್ತವ ಲೋಕವೊಂದಿದೆ. ಅದು ಸಾವಿಗಿಂತ ಭೀಕರ ಮತ್ತು ನಿರ್ಧಯಿ. ಪ್ರತಿ ಮನುಷ್ಯ ಇಂಥದ್ದೊಂದು ಭೀಕರ ಅವಸ್ಥೆಯನ್ನು ಬೆನ್ನ ಹಿಂದೆ ಹೊತ್ತು ತಿರುಗುತ್ತಾನೆ. ಅದರ ಅರಿವಿದ್ದೂ ನಿರ್ಲಕ್ಷ್ಯದಿಂದ ನಡೆಯುವವ ಜಾಣನೆನ್ನುವ ಅರಿವಾಗುತ್ತದೆ. ಅವರು ಆರಿಸಿಕೊಂಡ ದಾರಿಯೇನು ಸುಗಮವಾಗಿರುವುದಿಲ್ಲ. ಬಹದ್ದೂರು ಷಾನ ಗಜಲುಗಳಲ್ಲಿಯ ಸತ್ಯವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಕೊನೆಗೆ ಅಲ್ಲಿಯೂ ಅವರಿಗೆ ಸೋಲು ಎದುರಾಗುತ್ತದೆ.

ರೋಗಗ್ರಸ್ತನಾಗಿ ಅವರು ಮರಳಿ ಸಿ.ಎಂ.ಕೊಪ್ಪಲು ಹಳ್ಳಿಗೆ ಬರುತ್ತಾರೆ. ಅಲ್ಲಿ ಒಂದು ರೀತಿಯ ಮತಿಭ್ರಾಂತಿಗೆ ಒಳಗಾಗಿ ಹೇಗೇಗೋ ನಡೆದುಕೊಳ್ಳುತ್ತಾರೆ. ಇದನ್ನು ಕಂಡ ಮಗ ಸ್ವತಂತ್ರ ತನ್ನ ಮರ್ಯಾದೆಯ ಪ್ರಶ್ನೆಯೆಂದು ತಿಳಿದು ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾನೆ. ಅಲ್ಲಿಂದ ಹಿಂತಿರುಗಿದ ಅವರು ಏನೂ ಅಲ್ಲದ, ಯಾರಿಗೂ ಬೇಡವಾದ ಒಂದು ಮೌನಿಯಾಗಿ ಮಾತ್ರ ಪರಿಚಯವಾಗುತ್ತಾರೆ. ಹೀಗೆ ಕಾದಂಬರಿ ಅಂತ್ಯವಾಗುತ್ತದೆ. ಮೊದಲೆ ಹೇಳಿದಂತೆ ಮೇಷ್ಟ್ರ ಕಾದಂಬರಿ ನಮ್ಮನ್ನು ಕಾಡುತ್ತಲೆ ಇರುತ್ತದೆ. ಕೆಂಚೇಗೌಡರ ಪಾತ್ರವಂತು ಆದರ್ಶಪ್ರಾಯವಾಗಿ ಮೂಡಿಬಂದಿದೆಯೆಂದರೆ ಅಚರಿಯೇನಿಲ್ಲ.

ಈ ಕೃತಿಯನ್ನು ‘ಅಭಿವ್ಯಕ್ತಿ’ ಒಂದು ಸಾಂಸ್ಕೃತಿಕ ವೇದಿಕೆ, ನಂ. 166, 28ನೇ ಅಡ್ಡ ರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070, ಫೋನ್ : 080-26715235 ಇವರು ಪ್ರಕಟಿಸಿದ್ದಾರೆ.

Read more!

Friday, November 26, 2010

ಉತ್ಕೃಷ್ಟ ರಚನೆಯ ‘ಜಾಲ’


ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅವ್ಯವಸ್ಥೆಯ ವಿಡಂಬನಾತ್ಮಕ ರಚನೆಯ ‘ಜಾಲ’ ಕಾದಂಬರಿ ಇಂಗ್ಲಿಷ್ ಕಾದಂಬರಿಯನ್ನು ಓದುತ್ತಿರುವಂತೆ ಭಾಸವಾದರೆ ಸುಳ್ಳಲ್ಲ. ಈ ರೀತಿಯ ರಚನೆ ಒಬ್ಬ ಸಾಮಾನ್ಯ ಲೇಖಕನಿಗೆ ಅಸಾಧ್ಯ. ಎಷ್ಟೊಂದು ವಿಷಯಗಳನ್ನು ಸೂಕ್ಷ್ಮವಾಗಿ, ಬಹಳ ನಾಜೂಕಾಗಿ, ವಿಡಂಬನೆಯ ಶೈಲಿಯಲ್ಲಿ ಕಾದಂಬರಿಕಾರ ನಾರಾಯಣ ಮಾಳ್ಕೋಡ್ ಕಟ್ಟಿಕೊಡುತ್ತಾರೆ. ಕಾದಂಬರಿಯಲ್ಲಿ ಬರುವ ರಾಜಕೀಯ ಅವ್ಯವಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಕಾಣಸಿಗದಿದ್ದರೂ ಅದು ಎಲ್ಲೋ ಒಂದು ಕಡೆ ನಡೆಯುತ್ತಿರುವಂತೆ ನಮಗೆ ಅನಿಸುತ್ತದೆ.

ಇಲ್ಲಿಯ ಪಾತ್ರಗಳೆಲ್ಲವೂ ಮೆಚ್ಯೂರ್ಡ್ ಪಾತ್ರಗಳು. ಏನನ್ನೋ ಹೇಳುತ್ತಾ ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಬಹಳ ಚೆನ್ನಾಗಿ ಅರಗಿಸಿಕೊಂಡಿರುವಂತೆ ಮಾತುಗಳ ಮೂಲಕ ವಸ್ತು ಸ್ಥಿತಿಯನ್ನು ಬಿಚ್ಚಿಡುತ್ತಾ ಹೋಗುತ್ತವೆ ಇಲ್ಲಿಯ ಪಾತ್ರಗಳೆಲ್ಲ. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲ; ಅವಳು ರಾಜಕೀಯದ ಏರು ಪೇರುಗಳನ್ನು ಅರಿತವಳು ಅನ್ನುವಂತೆ ಇಲ್ಲಿಯ ಸಣ್ಣ ಪುಟ್ಟ ಪಾತ್ರಗಳು ಕೂಡ ಬಹಳ ಸೊಗಸಾಗಿ ಮಾತನಾಡುತ್ತವೆ. ಒಂದಕ್ಕಿಂತ ಒಂದು ಪಾತ್ರಗಳ ಮಾತುಗಳು ಅಸಂಗತವೆನಿಸಿದರೂ ಅವುಗಳ ಒಳಗಿರುವ ನಿಗೂಢತೆ ಬಹಳ ಸುಲಭವಾಗಿ ಓದುಗನನ್ನು ತಲುಪುತ್ತದೆ. ಈ ರೀತಿಯ ಅಸಂಗತ ಮಾತುಗಳನ್ನೇ ಪೋಣಿಸಿ ಸಾಮಾಜಿಕ, ರಾಜಕೀಯದ ಅಭದ್ರತೆಯನ್ನು ಜಾಲಾಡಿಸುವ ರಚನೆ ಇಷ್ಟವಾಗುತ್ತದೆ. ಇಲ್ಲಿ ಒಂದು ಸನ್ನಿವೇಶಕ್ಕೆ ಇನ್ನೊಂದನ್ನು ಬೆಸೆಯುವ ಮಾತಿನ ಮಂಟಪ ಕಾದಂಬರಿಕಾರನ ಕೈಯಲ್ಲಿ ಲೀಲಾಜಾಲವಾಗಿ ಮೂಡಿಬಂದಿದೆ."

ವ್ಯಕ್ತಿ ಮತ್ತು ಪರಿಸ್ಥಿತಿಯ ಸಂಬಂಧಗಳು, ರಾಜಕೀಯ ಬಿಕ್ಕಟ್ಟುಗಳು, ವಿದ್ರೋಹಗಳು, ವಿಕಲ್ಪಗಳು ಇವೆಲ್ಲವೂ ಈ ಕಾದಂಬರಿಯಲ್ಲಿ ಆಟವಾಡುತ್ತಾ ಪಾತ್ರಗಳೆಲ್ಲವೂ ಒಂದನ್ನು ಇನ್ನೊಂದು ಮುಷ್ಟಿಯಲ್ಲಿ ಹಿಡಿದುಕೊಂಡಿರುವಂತೆ ಭಾಸವಾದರೂ ಇಲ್ಲಿ ವಾಸ್ತವದ ಕರಿ ನೆರಳು ಕಾಣಿಸುತ್ತದೆ. ದಿನಬೆಳಗಾದರೆ ನಡೆಯುವ ವಿದ್ಯಮಾನಗಳು ಇಲ್ಲಿ ಈಗಲೆ ನಡೆಯುತ್ತಿರುವಂತೆ ಬಿಂಬಿತವಾಗಿವೆ.

ಮಾದರಿ ಪಟ್ಟಣವಾಗಿ ರೂಪುಗೊಂಡಿರುವ ಹೊಸಪಟ್ಟಣದ ರಚನೆ ಮತ್ತು ಕಲ್ಪನೆಯೆ ವಿಚಿತ್ರವಾದ್ದುದು. ಒಂದು ವೃತ್ತಾಕಾರದಲ್ಲಿರುವ ಪಟ್ಟಣದಲ್ಲಿ ಅರವಿಂದ ಹೆಗಡೆಯೆನ್ನುವ ಪೂಜಾರಿ, ದಾಸಪ್ಪನೆನ್ನುವ ಏಕಸಾಮ್ಯವಿಚಾರಧಾರೆಯ ರಾಜಕೀಯ ವ್ಯಕ್ತಿ; ಹೊರನೋಟಕ್ಕೆ ಇಬ್ಬರೂ ಬೇರೆಬೇರೆಯದಾಗಿ ಕಂಡರೂ ಇಬ್ಬರಲ್ಲು ಒಂದು ರೀತಿಯ ಸಾಮ್ಯತೆ ಇದೆ. ಜನರನ್ನ ತನ್ನತ್ತ ಒಲಿಸಿಕೊಳ್ಳುವ ಸಾಫ್ಟ್ ಕಾರ್ನರ್ ಅರವಿಂದನದ್ದಾದರೆ, ಜನರನ್ನು ತನ್ನ ಶಕ್ತಿ, ವಾಕ್ಚಾತುರ್ಯ, ಬೆದರಿಕೆಯ ಮೂಲಕ ಆಕ್ರಮಿಸಿಕೊಳ್ಳುವ ವ್ಯಕ್ತಿ ದಾಸಪ್ಪ. ಹಿಟ್ಲರಿಜಂ ಕೂಡ ಇಲ್ಲಿ ಎದ್ದು ಕಾಣುತ್ತದೆ.

ಕಥೆ ಆರಂಭವಾಗುವುದು ಶಹನಾಯಿ ವಾದಕ ವೆಂಕಪ್ಪ ಭಂಡಾರಿಯ ಕೊಲೆಯಿಂದ. ಇಲ್ಲಿ ಕೊಲೆ ಮಾಡಿದವರು ಯಾರು? ಪಶುವಿನಷ್ಟು ಸಾಧುವಾದ ವೆಂಕಪ್ಪನನ್ನು ಯಾಕೆ ಕೊಲೆ ಮಾಡಿದರು? ಇವೆಲ್ಲಾ ಕ್ಷುಲ್ಲಕವಾಗಿ ಕೇವಲ ಆ ಕೊಲೆಯಿಂದ ಉದ್ಭವಿಸಿದ ಬಿಕ್ಕಟ್ಟುಗಳನ್ನು ಮಾತ್ರ ಜಾಲಾಡುತ್ತಾ ಸಾಗುತ್ತದೆ ಕಥೆ. ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುವ ರಚನೆಯಲ್ಲವಾದರೂ ಸಮಾಜದಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ತುಡಿತ ಓದುಗನನ್ನು ಬಿಟ್ಟುಕೊಡುವುದಿಲ್ಲ. ಇಲ್ಲಿಯ ಸಂಭಾಷಣೆಗಳೆಲ್ಲವೂ ಹಲವಾರು ವಿಷಯಗಳನ್ನು ಪ್ರಸ್ತುತಪಡಿಸುತ್ತವೆ.

ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಒಬ್ಬ ತಾಯಿಯ ಮಾತು ಹೇಗಿದೆಯೆಂದರೆ - ‘ಸದ್ಯದಲ್ಲೇ ಎದುರಾಗಲಿರುವ ಚುನಾವಣೆಯಲ್ಲಿ ನಾನು ಮತ ಚಲಾಯಿಸಬಹುದು ಎನಿಸುತ್ತದೆ’ ಈ ಮಾತುಗಳು ಇಲ್ಲಿ ರಾಜಕೀಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಆರೋಗ್ಯ ಸುಧಾರಿಸಿದೆ. ಎದ್ದು ಓಡಾಡಬಲ್ಲೆ ಅನ್ನುತ್ತಿದ್ದಳೆನೋ... ಇದು ಲೇಖಕನ ಪ್ರಬುದ್ಧತೆಯ ಲಕ್ಷಣವೂ ಹೌದು ಅನಿಸಿದರೆ ತಪ್ಪಲ್ಲ.

ಸುಬ್ಬಯ್ಯನ ಕ್ಷೌರದ ಅಂಗಡಿ ರಾಜಕೀಯದ ವಿಶ್ಲೇಷಣೆಯ ಅಡ್ಡೆಯಿದ್ದಂತೆ. ಅಲ್ಲಿ ನಡೆಯುವ ಮಾತುಕತೆಗಳು ಇನ್ನೆಲ್ಲಿಯೂ ಕೇಳಿಸಲಾರವು. ಇವತ್ತಿನ ರಾಜಕೀಯದ ಬಿಕ್ಕಟ್ಟನ್ನು ಪ್ರಸ್ತುತಪಡಿಸುವ, ‘ಆಡಳಿತ ಬದಲಾಗುತ್ತದೆ, ಸರ್ಕಾರ ಬದಲಾಗುತ್ತದೆ. ಆದರೆ ಜನರ ಸ್ಥಿತಿ ಮಾತ್ರ ಒಂದೇ ರೀತಿಯಲ್ಲಿರುತ್ತದೆ’ ಅನ್ನುವ ಮಾತು ಅಕ್ಷರಶ: ಸತ್ಯವಾದದ್ದು. ಕಾದಂಬರಿಯ ಉದ್ದಕ್ಕೂ ಇಂತಹ ವಿವೇಚನೆಯುಳ್ಳ ಮಾತುಗಳು ಬರುತ್ತಿರುತ್ತವೆ.

ಇಲ್ಲಿ ಬರುವ ಸ್ತ್ರೀ ಪಾತ್ರಗಳು ಕೂಡ ಬಹಳ ದೃಢವಾದ ಹಂಬಲವುಳ್ಳ ಪಾತ್ರಗಳು. ಗಾಯತ್ರಿ, ಸೀತಾ, ಮಾಧವಿ, ಭಾಗ್ಯ, ಸರಸ್ವತಿ, ಮೀನಾ, ಮಾಲಿನಿ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾದರೂ ಅದರಲ್ಲಿಯೆ ಕೊರಗುವುದಿಲ್ಲ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವಂತಹವುಗಳು. ಈ ಪಾತ್ರಗಳನ್ನು ಕೀಳಾಗಿ ಬಿಂಬಿಸಲು ಗೋಡೆಗೆ ಅಂಟುವ ಪೋಸ್ಟರ್ಗಳ ಬಗ್ಗೆ ಹೆದರಿಕೆಯಿದ್ದರೂ ಅದನ್ನು ವಿಚಾರಿಸುವಷ್ಟು ಮತ್ತು ಅಪವಾದವನ್ನು ಹತ್ತಿರಕ್ಕೆ ಎಳೆದುಕೊಳ್ಳುವಲ್ಲಿ ತಡೆಯುವ ಗಟ್ಟಿಗಿತ್ತಿಯರು ಇಲ್ಲಿಯ ಸ್ತ್ರೀಯರು.

ಕೆಲವೊಂದು ಕಟು ವಾಸ್ತವಿಕ ಸತ್ಯಗಳು ಕೂಡ ಇಲ್ಲಿ ಅನಾವರಣಗೊಂಡಿದೆ. ಉದಾಹರಣೆಗೆ ‘ಎಲ್ಲರೂ ತಮಗೆ ತಾವೇ ದೊಡ್ಡವರೆಂದುಕೊಂಡು ಬಿಡುತ್ತಾರೆ. ಒಂದು ಕೆಲಸ ಹೋದರೆ ಮತ್ತೊಂದು ಕೆಲಸ ಸಿಗುತ್ತದೆ ಎಂಬ ಧೋರಣೆ ಅವರದು. ಆದರೆ ಈ ಧೋರಣೆ ಇರುವವರು ಎಲ್ಲಿಯೂ ನೆಲೆ ಕಂಡುಕೊಳ್ಳುವುದಿಲ್ಲ. ಕೋತಿಗಳಂತೆ ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಜಿಗಿಯುತ್ತಲೇ ಇರುತ್ತಾರೆ. ಜೀವನದಲ್ಲಿ ಸೆಟಲ್ ಎಂಬ ಪ್ರಶ್ನೆಯೇ ಬರುವುದಿಲ್ಲ’ ಇದು ವಾಸ್ತವಿಕವಾಗಿ ಒಪ್ಪಿಕೊಳ್ಳಬೇಕಾದ ಮಾತು. ಈ ಮಾತುಗಳನ್ನು ಓದುವಾಗ ಶ್ರೀಕೃಷ್ಣ ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರ’ ನೆನಪಾಗದಿರದು.

ರಾಜಕಾರಣಿ, ಪೂಜಾರಿ, ಡಾಕ್ಟರ್, ನ್ಯಾಯಮೂರ್ತಿ ಹೀಗೆ ಒಂದೊಂದು ರೀತಿಯ ಪಾತ್ರಗಳ ಮೂಲಕ ವಾಸ್ತವತೆಯ ಅವಲಕ್ಷಣಗಳನ್ನು ಕಟುವಾಗಿ ಟೀಕಿಸುವಂತಹ ಸ್ಥಿತಿ ಇಲ್ಲಿ ಚಿತ್ರಿತವಾಗಿದೆ. ಇಂತಹ ಗಂಭೀರ ಚಿಂತನೆಗೆ ಒಳಪಡಿಸುವ ಕಾದಂಬರಿಯನ್ನು ಓದಲೇಬೇಕು. ಈ ಕೃತಿಯನ್ನು ಸುಮುಖ ಪ್ರಕಾಶನ, ಮಾಗಡಿ ರಸ್ತೆ, ಟೋಲ್ಗೇಟ್, ವಿದ್ಯಾರಣ್ಯನಗರ, ಬೆಂಗಳೂರು - 23, ದೂರವಾಣಿ ಸಂಖ್ಯೆ ೦೮೦- 23118585 ಇವರು ಪ್ರಕಟಿಸಿದ್ದಾರೆ.

Read more!

Tuesday, November 16, 2010

ಬಾಳಾಸಾಹೇಬ ಲೋಕಾಪುರ ಅವರ ಕಥೆ ‘ಕಂಗಳು ತುಂಬಿದ ಬಳಿಕ’


ಕೃಷ್ಣೆ ಒಡಲ ತುಂಬ ಸಂಕಲನದ ಇನ್ನೊಂದು ಕಥೆ ‘ಕಂಗಳು ತುಂಬಿದ ಬಳಿಕ’. ಡಾ. ಬಾಳಾಸಾಹೇಬ ಲೋಕಾಪುರ ಅವರಿಂದ ಮೂಡಿಬಂದ ಮನೋಜ್ಞವಾದ ಕಥೆ ಇದು. ಪಕ್ವವಾದ ಎರಡು ಮನಸುಗಳ ಪರಿವರ್ತನಾ ಭಾವವು ಗಾಢವಾದ ಮೌನದೊಳಗೆ ತಬ್ಬಿಕೊಳ್ಳುವ ಸ್ಥಿತಿಯಾಗಿ ಏರ್ಪಡುವುದು ಇಲ್ಲಿಯ ವಿಶೇಷತೆ.

ಈ ಕಥೆಯ ಕೆ.ಟಿ.ಕೆ. ಸ್ವಪ್ರಯತ್ನದಿಂದ ಉನ್ನತ ಹುದ್ದೆಯನ್ನು ಗಳಿಸಿಕೊಂಡು ಎಂದೋ ತನ್ನ ಬಾಲ್ಯದಲ್ಲಿ ಬೆರಗಿನ ಭಾವನೆಗಳಿಗೆ ಲಗ್ಗೆಯಿಟ್ಟ ಬಾಲ್ಯಸಖಿಯೊಬ್ಬಳ ಅನಿರೀಕ್ಷಿತ ಮುಖಾಮುಖಿಯಲ್ಲಿ ವಿಷಾದದ ಸ್ಥಾಯಿಗಿಳಿಯುವ ಕಥೆಯಿದು. ಅನುಕಂಪ, ನಿರೀಕ್ಷೆ, ಆಸೆಗಳ ನಡುವೆ ಸಾಧಾರಣವಾಗಿ ಹುದುಗಿಹೋದ ಬದುಕನ್ನು ಕಂಡು ಒಳಗೊಳಗೆ ಕೊರಗುವ, ನಿಜ ಬದುಕಿನ ಸ್ಥಿತಿ ಮತ್ತು ಲಯವನ್ನು ಆವರಿಸಿಕೊಳ್ಳುತ್ತಾ ಪಟ್ಟಣದಲ್ಲಿ ಕಳೆದು ಹೋಗುವ ಅಸ್ತಿತ್ವವನ್ನು ವಿಮರ್ಶಿಸುತ್ತಾ ಹಾಗೂ ಕಳೆದುಕೊಂಡಿರುವುದನ್ನು ಜ್ಞಾಪಿಸಿಕೊಳ್ಳುವ ಮನೋಸ್ಥಿತಿ ಅಸಿಸ್ಟೆಂಟ್ ಕಮಿಷನರ್ ಕೆ.ಟಿ.ಕೆ.ಯದ್ದು."

ವೇಶ್ಯೆಯೊಬ್ಬಳನ್ನು ಲಾಕಪ್ಪಿಗೆ ಹಾಕಿ, ಆಕೆ ತನಗೆ ಎ.ಸಿ ಸಾಹೇಬ್ರು ಪರಿಚಯವೆಂದು ಹೇಳಿಕೊಂಡಾಗ ಬೆರಗಾಗುವ ಪೊಲೀಸ್ ವೃಂದ ಕೆ.ಟಿ.ಕೆ.ಗೆ ವಿಷಯ ತಿಳಿಸುವಲ್ಲಿಂದ ಕಥೆ ಆರಂಭವಾಗುತ್ತದೆ. ಅವಳ ಹೆಸರೇನೆಂದು ಗುಮಾನಿಯಿಂದ ಕೇಳುವ ಕಮಿಷನರ್ಗೆ, “ಅವರಿಗೆ ಹೆಸರ ಎಲ್ಲೀದು ಸರ್- ಎಷ್ಟೋ ಸಲ ನಮಗ ಸಿಗತಾರೊ ಅಷ್ಟ ಹೆಸರ ಹೇಳತಾರ” ಎಂದು ಹೇಳುವ ಪೊಲೀಸ್ನ ಮಾತುಗಳು ಸತ್ಯವಾದರೂ, ಅಲ್ಲಿ ಕುಹಕವಿದೆ.

ಅವಳ ಹೆಸರು ತಿಳಿದುಕೊಳ್ಳುವಾಗ ಸಿಟ್ಟಿನ ಬೀಜಗಳು ಒಳಗೇ ಒಡೆದು ಅನಂತ ಮೂಲಗಳಿಂದ ಸಾಹೇಬರನ್ನು ಆಕ್ರಮಿಸಿಕೊಳ್ಳುತ್ತವೆ. ಅವಳ ಹೆಸರು ರೇಖಾ ಎಂದು ಬರೆಸಿದರೂ; ರೇಣುಕಾ ಇರಬೇಕೆನ್ನುವ ಮಾತಿನಲ್ಲಿ ಬಾಲ್ಯದ ನೆನಪುಗಳತ್ತಾ ಕೊಂಡೊಯ್ದು ಒಂದು ರೀತಿಯ ಪುಳಕ ಅವರನ್ನು ಆವರಿಸುತ್ತದೆ.

ಬಾಲ್ಯದಲ್ಲಿ ಅಜ್ಜಿ ಒಂದು ಕಥೆ ಹೇಳು ಎಂದು ಪೀಡಿಸಿ ಕಥೆ ಕೇಳುತ್ತಲೇ ನಿದ್ದೆ ಹೋಗುವ ಮಕ್ಕಳು ಜಗತ್ತಿನಲ್ಲಿವೆ ಎಂಬುದು ಕೆ.ಟಿ.ಕೆ.ಗೆ ಬೆರಗಿನ ಸಂಗತಿ. ನಿದ್ದೆ ಯಾವಾಗ ಬರುತ್ತಿತ್ತೆನ್ನುವುದೇ ಅವನಿಗೆ ತಿಳಿಯುತ್ತಿರಲಿಲ್ಲ. ನಿದ್ದೆ ಬಂದದ್ದೆಂದರೆ ಆತ ಎದ್ದಾಗಿನ ಸ್ಥಿತಿ. ಬಡತನದಲ್ಲಿಯೆ ಬೆಳೆದ ಅವನಿಗೆ ಒಡೆದರೆ ನೂರು ಸುಟ್ಟರೆ ಸಾವಿರವಾಗುವ ತಗಣೆಗಳು ಕಚ್ಚಿದರೂ ತಿಳಿಯುವುದಿಲ್ಲ. ಅಂತಹ ಕೆ.ಟಿ,ಕೆ.ಯನ್ನು ಪ್ರೀತಿಯಿಂದ ‘ಕಲ್ಲಪ್ಪಾ’ ಎಂದು ಕರೆಯುವಷ್ಟು ಆತ್ಮೀಯಳಾಗಿರುವವಳು ಆತನ ಬಾಲ್ಯದ ಗೆಳತಿ ರೇಣುಕಾ.

ಜೋರಾಗಿ ಮಾತಾಡಿದರೆ ಅಸಂಸ್ಕೃತಿಯೆಂದು ಬದುಕುವ ಈಗಿನ ದಿನಗಳಲ್ಲಿ ಬಾಲ್ಯದ ವಿಚಿತ್ರ ನೆನಪುಗಳು ಅವನನ್ನು ಪುಳಕಗೊಳಿಸುತ್ತಿದ್ದವು. ಒಂದು ದಿನ ಕಣ್ಣಾಮುಚ್ಚಾಲೆ ಆಡುತ್ತಾ ಹೊಟ್ಟಿನ ಬಣವಿಯಲ್ಲಿ ಅಡಗಿ ಕುಳಿತಾಗ ರೇಣುಕಾ ಎಂಬ ಹರಾಮಿ ಹುಡುಗಿ ಅವನ ಕೈಯನ್ನು ತೆಗೆದುಕೊಂಡು ತನ್ನ ಲಂಗದಲ್ಲಿ ತೂರಿಸಿಕೊಂಡಿದ್ದಳು. ಕೈಗೆ ಹತ್ತಿದ ತಂಬಲಕ್ಕೆ ಹೇಸಿದವನಿಗೆ... ಹೀಗೆ ಅವಳ ಚಾರಿತ್ರ್ಯವನ್ನು ನೆನಪಿಸುತ್ತಾ ಅವಳು ಸೂಳೆಯಾದಳೆನ್ನುವ ನೋವು ಅವನನ್ನು ನೋಯಿಸುತ್ತಾ, ಪರಿಸ್ಥಿತಿಯನ್ನು ಕೈ ಹಿಡಿದ ಶ್ರೀಮಂತೆ ಗೀತಾಳ ಜೊತೆಗೆ ತುಲನೆ ಮಾಡಿಕೊಳ್ಳುತ್ತದೆ.

ಮಂತ್ರಿಗಳ ಮನೆತನದ ಹುಡುಗಿ ಗೀತಾ ಮದುವೆಯಾಗಿಯೂ ಗಂಡನ ಮನೆಗೆ ಬಾರದೆ ಅವನ ಅವ್ವ, ಅಪ್ಪ, ಅಕ್ಕರನ್ನು ದಿಕ್ಕರಿಸುವ ಒಬ್ಬ ಹೆಂಡತಿಯಾಗಿ ಮಾತ್ರ ದಕ್ಕುತ್ತಾಳೆ. ಅವಳಿಗೆ ಸ್ನಿಗ್ಧ ಸೌಂದರ್ಯವಿತ್ತು, ಈಗಲೂ ಇದೆ. ಆ ಸೌಂದರ್ಯ ಮೈ, ಮುಖಗಳಲ್ಲಿರುವುದು ಕೇವಲ ಭ್ರಮೆ. ಮೈಮಾಟದಲ್ಲಿ ಸುಖದ ಕೊಬ್ಬು ಸೇರಿ ಮತ್ತಷ್ಟು ಆಕರ್ಷಣೆ ಅವಳಿಗೆ. ಯಾಕೆ ಅವಳನ್ನು ಕಂಡರೆ ಧುಮುಧುಮಿಕೆಯೆನ್ನುವುದು ಕೆ.ಟಿ.ಕೆ.ಗೆ ಅರ್ಥವಾಗುವುದಿಲ್ಲ.

ಹೆಂಡತಿಯ ಬಗ್ಗೆ ತಾತ್ಸಾರ ಹುಟ್ಟುತ್ತಾ, ಚಾರ್ಜ್ಶೀಟ್ ಹಾಕದೆ ರೇಣುಕಾಳನ್ನು ಬಿಡುಗಡೆಗೊಳಿಸಿ ತನ್ನ ಅವಳ ನಡುವೆ ಒಂದಿಷ್ಟು ಎಲ್ಲೋ ಇದ್ದಿರಬಹುದಾದ ಮನದ ಎಳೆಗಳನ್ನು ಬಿಚ್ಚಿ ಇಡಬಲ್ಲಳು ಎಂಬ ಭ್ರಮೆಗೆ ಅವಳನ್ನು ತನ್ನ ಮನೆಗೆ ಕರೆತರುತ್ತಾನೆ. ಅವಳು ಬಂಗ್ಲೆಯ ಪ್ರತೀ ಇಂಚು ನೆಲವನ್ನು ಅನುಭವಿಸುತ್ತಾ ಹಠಮಾರಿಯಂತೆ, ಅಮೂಲಾಗ್ರವಾಗಿ ನೋಡುತ್ತಾ ಅವನ ಮಲಗುವ ಕೋಣೆಯಲ್ಲಿ ಬೆತ್ತಲಾಗುತ್ತಾ ಆಹ್ವಾನಿಸುವಾಗ ಕೆ.ಟಿ.ಕೆ ವಿಚಲಿತನಾಗುತ್ತಾನೆ. ಆಗ ಅವನಲ್ಲಿ ಪ್ರಚೋದನೆಯಿರದೆ ಅವಳ ದೇಹವನ್ನು ಕಂಡು ಕಣ್ಣು ತುಂಬಿ, ವಿರಾಗದ ಭಾವ ಹುಟ್ಟಿ, ಬಾಲ್ಯದ ನವಿರು ನೆನಪುಗಳನ್ನೆಲ್ಲಾ ಬೆತ್ತಲೆಯ ವಿರೂಪ ಸ್ಥಿತಿ ಅಳಿಸಿಹಾಕಿ, ಅವಳನ್ನು ನಿರಾಕರಿಸುತ್ತಾ ಮೌನಿಯಾಗುತ್ತಾನೆ.

ಆ ನಿರಾಕರೆಣೆಗೆ ಅವಳಲ್ಲಿದ್ದ ಅನುರಮ್ಯ ಭಾವನೆಗಳಿಗೆ ಜ್ಞಾನೋದಯದ ಬೆಳಕು ಬಿದ್ದು ಅವಳು ಮೈ ಮುಚ್ಚಿಕೊಳ್ಳುತ್ತಾಳೆ. ಶಿಸ್ತಿನ ಬಗ್ಗೆ ಸಿಟ್ಟುಗೊಂಡವನ ಹಾಗೆ ಅವಳಿಂದ ಮನೆಯೆಲ್ಲಾ ಅಸ್ತವ್ಯಸ್ತಗೊಳ್ಳುತ್ತಿರುವ ಪರಿಯನ್ನು ಆನಂದಿಸುತ್ತಾನೆ. ಅವಳೊಂದು ಅಸಂಗತ ನಾಟಕದ ಪಾತ್ರಧಾರಿಯಂತೆ ಕುಳಿತು ಮಾತನಾಡುವಾಗ ಅರಗಿಸಿಕೊಳ್ಳಲಾರದೆ ಮನಸ್ಸ್ಸು ಮುದುಡಿಕೊಳ್ಳುತ್ತದೆ. ಅವಳು ತಿರಸ್ಕೃತಳಾದರೂ ಅವನನ್ನು ಮುತ್ತಿಟ್ಟು ಹೊರಟಾಗ ಅವನಿಗೆ ಅಸಹ್ಯವೆನಿಸಿ ಎಲ್ಲವನ್ನೂ ಕಾರಿಕೊಳ್ಳುತ್ತಾನೆ. ಆದರೂ ಬಾಲ್ಯದ ಅವಳ ಒಡಾನಾಟದಲ್ಲಿದ್ದವನು ಅವಳು ಎಲ್ಲೋ ಯಾರದೋ ಒಂದು ಕತ್ತಲು ಕೋಣೆಯ ಚಾಪೆ ಮೇಲೆ... ನೆನೆಯುತ್ತಲೆ ಅಳು ಬರುತ್ತದೆ. ಅವಳ ಆ ಸ್ಥಿತಿಯನ್ನು ಕಂಡು ಸಹಾಯಕನಾಗುವ ಅವನಲ್ಲಿಯ ವೇದನೆಗೆ ಕಂಗಳು ತುಂಬಿ ಬರುತ್ತವೆ. ಅಷ್ಟರಲ್ಲಿಯೆ ಹಿಂದಿರುಗಿ ಬರುವ ಅವನ ಮಡದಿ ಗೀತಾ ಕುಶಲವನ್ನು ವಿಚಾರಿಸುವಾಗ, ‘ತನ್ನ ಮನಸ್ಸು ಒಂದು ಹುಸಿ ನಂಬಿಕೆಯಲ್ಲಿ ಲೀನವಾಯಿತೆ?’ ಎನ್ನುವ ಗೊಂದಲಕ್ಕೆ ಬೀಳುತ್ತಾನೆ.

ಹೀಗೆ ಬಾಲ್ಯದ ನೆನಪುಗಳಲ್ಲಿ ಕಳೆದು ಹೋಗುವ ಸ್ಥಿತಿಯನ್ನು ನೆನಪಿಸುತ್ತಾ ವಾಸ್ತವದೊಂದಿಗೆ ಹೋಲಿಸುತ್ತಾ ಕಥೆ ಭ್ರಮಾಲೋಕಕ್ಕೆ ಕರೆದೊಯ್ಯುತ್ತದೆ.

ಚಿತ್ರ ಕೃಪೆ: ಎಸ್.ವಿ.ಹೂಗಾರ್

Read more!

Thursday, November 11, 2010

ಶಿವರಾಮ ಕಾರಂತರ ‘ಬೆಟ್ಟದ ಜೀವ’


‘ಬೆಟ್ಟದ ಜೀವ’ ಕಾದಂಬರಿ ಮೇಲ್ನೋಟಕ್ಕೆ ವ್ಯಕ್ತಿ ಚಿತ್ರಣದಂತೆ ಕಂಡರೂ, ಇಲ್ಲಿ ಶ್ರಮಜೀವಿಯೊಬ್ಬನ ಬದುಕು ಮತ್ತು ಬದುಕಿನಲ್ಲಿ ತಮ್ಮ ಕರುಳ ಬಳ್ಳಿಗಳನ್ನು ಕಳೆದುಕೊಂಡಿರುವ ಜೀವಿಗಳ ಸೂಕ್ಷ್ಮ ಸಂವೇದನೆಯಿದೆ. ಆ ಸಂವೇದನೆಯಲ್ಲೂ ಬತ್ತದ ಉತ್ಸಾಹದ ಜೊತೆಗೆ ಪರೋಪಕಾರದ ಉದಾತ್ತ ಗುಣವನ್ನು ಬೆಳೆಸಿಕೊಂಡು ಬದುಕುವ ವ್ಯಕ್ತಿಯ ಬದುಕಿನ ಸ್ತರಗಳನ್ನು ಈ ಕಾದಂಬರಿಯು ಚಿತ್ರಿಸುತ್ತದೆ. ಏಕವ್ಯಕ್ತಿ ಕೇಂದ್ರಿಕೃತ ಮತ್ತು ಒಂದೇ ಕೋನದಲ್ಲಿ ಕಥೆ ಸಾಗುತ್ತಾದರು, ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾದ ಮಗ ಮನೆಯಿಂದ ದೂರವಿದ್ದು ಮತ್ತೆ ಹಿಂತಿರುಗುವನೊ, ಇಲ್ಲವೊ? ಅನ್ನುವ ಕುತೂಹಲ ಹುಟ್ಟಿಸುತ್ತಾ ಮುಂದುವರಿಯುವುದು ಕೂಡ ಈ ಕಾದಂಬರಿಯ ಕೇಂದ್ರವಾಗಿದೆ. ಗೋಪಾಲಯ್ಯ, ಶಂಕರಿ, ಶಿವರಾಮ, ದೇರಣ್ಣಗೌಡ, ನಾರಾಯಣ, ಲಕ್ಷ್ಮೀ, ಬಟ್ಯಗಳಂತಹ ಕೆಲವೇ ಪಾತ್ರಗಳ ಮೂಲಕ ನೇರಮಾತುಗಳಿಂದ ಅರ್ಥಪೂರ್ಣವಾದ ಜೀವನಾನುಭವಳನ್ನು ಮಂಡಿಸುವುದು ಈ ಕಾದಂಬರಿಯ ಪ್ರಮುಖ ಲಕ್ಷಣ."

ಕಥೆಯ ಮುಖ್ಯವಾಹಿನಿ ಬದುಕಿದ್ದೂ ಹೆತ್ತವರಿಂದ ದೂರವಿರುವ ಮಗ ಶಹರಿನ ವ್ಯಾಮೋಹಕ್ಕೆ ಬಲಿಯಾಗಿ, ಮನೆಗೆ ಹಿಂದಿರುಗದೆ ಇರುವುದಾದರೂ, ಇಲ್ಲಿ ಬೆಟ್ಟದ ಮೇಲೆ ನಿರೀಕ್ಷೆಗಳನ್ನು ಹೊತ್ತು ನಿಂತ ಮಹಾತ್ವಕಾಂಕ್ಷಿಯೊಬ್ಬನ ಕಷ್ಟ ಕಾರ್ಪಣ್ಯಗಳನ್ನು, ತಲ್ಲಣಗಳನ್ನು ಗೋಪಾಲಯ್ಯನ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಮಗನನ್ನು ಕಳೆದುಕೊಳ್ಳುವ ಆತಂಕ, ಭಯವಿದ್ದರೂ ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಅವರು ಮಾತ್ರ ಕೈ ಹಿಡಿದ ಶಂಕರಿಯಲ್ಲಿ ಮಗನ ಬಗೆಗಿರುವ ಅದಮ್ಯ ಆಸೆಗಳನ್ನು ಉಪೇಕ್ಷಿಸಲಾರದೆ ಒಳಗೊಳಗೆ ಬೇಯುವುದು, ಬದುಕಿನ ಕೊನೆ ಘಳಿಗೆಯ ಹೆದರಿಕೆಯಿಂದಲ್ಲ. ಬದಲಾಗಿ ಅಲ್ಲಿ ಆತ್ಮೀಯತೆ, ಹೊಂದಾಣಿಕೆ, ಭರವಸೆಗಳ ಮಹಾಪೂರವೆ ತುಂಬಿದೆ; ಅವರನ್ನು ಸಾಂತ್ವನಿಸುವ ಹಿರಿಮೆಯಿದೆ.

‘ಲಕ್ಷ್ಮೀ ದನವನ್ನು ಹುಲಿ ಹಿಡಿದ ಹಾಗೆ ಯಾವುದೋ ಹೆಣ್ಣು ಹುಲಿ ಮಗನನ್ನು ಹಿಡಿದಿದೆ’ ಯೆನ್ನುವ ಉಪಮೆಯು ಮಗ ಶಂಭುವಿನಿಂದ ದೂರವಿದ್ದರೂ ಅವನ ಬಗ್ಗೆ ನಡೆದಿರಬಹುದಾದ್ದನ್ನು ಅವರು ಊಹಿಸುವಂತೆ ಮಾಡುತ್ತದೆ. ಅದಲ್ಲದೆ ನಾರಾಯಣನ ಮಡದಿ ಶಿವರಾಮನ ಜೊತೆಗೆ ಶಂಭು ಅವಳ ಜೊತೆಗೆ ನಡೆದುಕೊಂಡ ರೀತಿಯಿಂದ ಅವನು ನಿಗೂಢವಾಗಿರುವುದಕ್ಕೆ ಮತ್ತು ಅವನ ಗುಣಗಳನ್ನು ತಿಳಿಸುವುದಕ್ಕೆ ಸರಿಯಾದ ಸಾಕ್ಷಿಯಾಗಿ ನಿಲ್ಲುತ್ತದೆ. ಲಕ್ಷ್ಮೀಗೆ ಅವನು ದೂರವಿರುವುದಕ್ಕೆ ಒಂದು ರೀತಿಯಲ್ಲಿ ತಾನು ಕಾರಣಳೆನ್ನುವ ಅಗಾಧ ಅಪರಾದಿ ಭಾವನೆಯಿದ್ದರೂ ಅದು ಅವಳ ಪರಿಸ್ಥಿತಿಯನ್ನು ಮೀರಿರುವಂತದ್ದು.

ಬೆಟ್ಟದ ಮೇಲೆಯೆ ತನ್ನ ಹಿರಿಯರ ಆಸ್ತಿಯನ್ನು ಅನುಭೋಗಿಸುತ್ತಾ, ಕಾಟುಮೂಲೆ ಮತ್ತು ನೀರ್ಕಟ್ಟೆಯಂತಹ ಪ್ರಯೋಜನಕ್ಕೆ ಬಾರದ ಬಂಡೆ ಕಲ್ಲುಗಳ ನೀರಿನ ಸೆಲೆಯಿರುವ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸುವ ಗೋಪಾಲಯ್ಯನ ಛಲಗಳೇನಿದ್ದರೂ ಕೊನೆಗೂ ಉಳಿಯುವುದು ಅತೃಪ್ತಿ ಮತ್ತು ಶಂಭುನಿಲ್ಲದ ನೋವು. ಶಂಕರಿಯವರು ಕೂಡ ಎಷ್ಟೇ ಲವಲವಿಕೆಯಿಂದಿದ್ದರೂ ಅವರನ್ನು ಹೈರಾಣಾಗಿಸುವುದು ತಮ್ಮ ತೊಡೆಗಳಲ್ಲಿಯೆ ತಲೆಯಿಟ್ಟು ಇಹಲೋಕ ತ್ಯಜಿಸಿದ ಮಗಳು ವಾಗ್ದೇವಿಯ ದಾರುಣ ಸಾವು ಮತ್ತು ಇದ್ದು ಇಲ್ಲದಂತೆ ದೂರವಿರುವ ಮಗ ಶಂಭುವಿನ ಚಿಂತೆ.

ಮಗನಿಲ್ಲದ ಚಿಂತೆ ಮನವನ್ನು ಸುಡುತ್ತಿದ್ದರೂ ಅನಾಥನಾಗಿರುವ ನಾರಾಯಣನನ್ನು ಕರೆಸಿ ಕಾಟುಮೂಲೆಯನ್ನು ಅವನ ಭೋಗ್ಯಕ್ಕೆ ಬಿಟ್ಟು ಸ್ವತ: ತನ್ನ ಮಗ ಶಂಭುವಿಗಿಂತಲೂ ಹೆಚ್ಚಾಗಿ ಅವನನ್ನು ನೋಡುವುದು ಗೋಪಾಲಯ್ಯನವರ ಉದಾರತೆಗೆ ಕನ್ನಡಿ ಹಿಡಿಯುತ್ತದೆ. ಮಗ ಬರಲಾರನೆನ್ನುವ ದೃಢವಾದ ನೋವು, ‘ನಮ್ಮ ಸರ್ವ ಭವಿಷ್ಯಕ್ಕೂ - ನಮ್ಮ ಹೆಣ ಹೊರಲಿಕ್ಕೆ ಆಗಲಿ, ಪಿಂಡ ಹಾಕಲಿಕ್ಕೇ ಆಗಲಿ - ನಾರಾಯಣನೇ ಗತಿ; ಅವನು ಅಷ್ಟನ್ನು ಮಾಡಿಯಾನು; ಮಾಡಿದರೆ ನಮ್ಮ ಪ್ರೇತಕ್ಕೂ ತೃಪ್ತಿಯಾದೀತು. ಬದಲು ವಂಶದ ಮಗನು ಬಂದು ಶ್ರಾದ್ಧ ಮಾಡಿದರೂ ನನಗೆ ಬೇಕಿಲ್ಲ” ಈ ಮಾತುಗಳ ಮೂಲಕ ಅವರಿಗೆ ಮಗನು ಬಂದೇ ಬರುವನೆನ್ನುವ ಭರವಸೆಯ ಜೊತೆಗೆ ನಾರಾಯಣನಲ್ಲಿಟ್ಟಿರುವ ಅವರ ಭರವಸೆಯನ್ನೂ ಎತ್ತಿ ಹಿಡಿಯುತ್ತದೆ.

ನಾರಾಯಣನಿಗಾದರೂ ಮುಂದೆ ಶಂಭುವು ಬಂದರೆ ತಾನು ಉಟ್ಟ ಬಟ್ಟೆಯಲ್ಲಿಯೇ ಇಲ್ಲಿಂದ ಹೊರಟು ಎಲ್ಲಿಗೆ ಹೋಗಬೇಕೆನ್ನುವ ದೂರದರ್ಶಿತ್ವ, ನಿರ್ಗತಿಕತೆ, ನಿರಾಶೆ ಆವರಿಸುವಾಗ ಅಲ್ಲೇ ಎಲ್ಲಾದರೂ ಜಾಗೆ ಖರೀದಿಸಿ ಕಾಟುಮೂಲೆಯನ್ನು ಬಿಟ್ಟು ಹೋಗುವ ನಿರ್ಧಾರವಿದ್ದರೂ ಮುಂದೆ ಗೋಪಾಲಯ್ಯನವರಿಂದಲೆ ಭರವಸೆಯ ಮಾತುಗಳು ಬಂದಾಗ ಅವನು ಮೌನಿ.

ಇಲ್ಲಿ ಬೆಟ್ಟವೆಂದರೆ ಬರೀಯ ಕಣ್ಣಿಗೆ ಹಬ್ಬ ತರುವ ಹಸಿರು ಬೆಟ್ಟವಲ್ಲ; ಬದಲಾಗಿ ಹುಲಿ, ಕಪ್ಪು ಚಿತರೆ, ಶಾರ್ದೂಲ, ಕಾಟಿ, ಆನೆ, ಪಾರಂಬೆಕ್ಕು(ಹಾರುವ ಅಳಿಲು)ಗಳಂತಹ ಅಪೂರ್ವದ ಪ್ರಾಣಿಗಳು ಮತ್ತು ಅವುಗಳ ಕ್ರೂರತನದ ಅನಾವರಣಗಳನ್ನು ತಿಳಿಸುತ್ತದೆ. ಅವುಗಳ ನಡುವೆಯೂ ಮನುಷ್ಯ ಬದುಕುವ ಮತ್ತು ಭದ್ರತೆಯನ್ನು ನಿರ್ಮಿಸುವ ಹೋರಾಟವನ್ನು ಕೂಡ ಇಲ್ಲಿ ದಾಖಲಿಸಲಾಗಿದೆ. ಅಲ್ಲದೆ ಸಸ್ಯಪ್ರಬೇಧಗಳು, ಮರಗಿಡಗಳಿರುವಲ್ಲಿ ಕಂಗು, ಮರಗೆಣಸುಗಳಂತಹ ವ್ಯವಹಾರಿಕ ಬೆಳೆಗಳನ್ನು ಬೆಳೆಸಿ ಬದುಕುವ ಛಲ ಮಾದರಿಯಾಗಿಯೂ ಕಾಣುತ್ತದೆ.

ಬೆಟ್ಟದ ಜೀವ ಕಾದಂಬರಿಯಲ್ಲಿ ಗಂಭೀರವಾದ ಸಮಸ್ಯೆಗಳು, ವಿಷಯಗಳು ಕಂಡರೂ ಪಾತ್ರಗಳು ಮಾತ್ರ ನಿರಾಳ. ಗೋಪಾಲಯ್ಯನಂತಹ ಪಾತ್ರವೇ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಾ ಬಟ್ಯ, ನಾರಾಯಣ, ದೇರಣ್ಣಗೌಡ ಪಾತ್ರಗಳ ಮೂಲಕ ಹಾಸ್ಯವನ್ನು ಮಾಡುತ್ತಾ ಲವಲವಿಕೆಯಿಂದ ಇರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಶಿವರಾಮನನ್ನು ತಹಶೀಲ್ದಾರನೆಂದು ಪರಿಚಯಿಸುವುದು. ಸ್ವತ: ನಾರಾಯಣನಿಗೂ ಶಿವರಾಮ ತಹಶೀಲ್ದಾರನೇನೋ ಅನ್ನುವ ಅನುಮಾನವಾಗುವವರೆಗೂ. ಇದಲ್ಲದೆ ಹುಲಿಗಾಗಿ ಕರ್ಫು ಇಡುವ ಸಂದರ್ಭದಲ್ಲಿ ಹುಲಿಯ ಆಕರ್ಷಣೆಗಾಗಿ ನಾಯಿಯನ್ನು ಒಳಗಿಟ್ಟು ಅದನ್ನು ವಿವರಿಸುವ ಸನ್ನಿವೇಶವಂತು ನಗೆಯುಕ್ಕಿಸುತ್ತದೆ.

ಬೆಟ್ಟದ ಮೇಲಿನ ಬದುಕು ಎಷ್ಟು ದುಸ್ತರವೆನ್ನುವುದನ್ನು, ‘ನಮ್ಮಲ್ಲಿ ಸಾಯುವುದು ಸುಲಭ; ಹೆಣಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಸ್ವಲ್ಪ ಕಷ್ಟ ನೋಡಿ’ ಈ ವಾಕ್ಯಗಳು ಸಾಬೀತುಪಡಿಸುತ್ತವೆ. ಆದರೂ ಇಂತಹ ಬದುಕನ್ನು ತ್ಯಜಿಸಿ, ಪೇಟೆಯಲ್ಲಿ ಬದುಕುವ ಉತ್ಸಾಹ ಗೋಪಾಲಯ್ಯನವರಿಗಾಗಲಿ, ಶಂಕರಿಯವರಿಗಾಗಲಿ ಇಲ್ಲ. ತಾವು ವಾಸಿಸುತ್ತಿರುವುದು ತಮ್ಮ ಹಿರಿಯರ ಆಸ್ತಿಯನ್ನು. ಅದನ್ನು ಉಪಭೋಗಿಸುತ್ತಾ ಬದುಕುವುದರಲ್ಲಿಯೂ ಖುಷಿಯನ್ನು ಕಂಡವರು ಅವರು. ಆ ಆಸ್ತಿಯನ್ನು ಮಾರಾಟ ಮಾಡದೆ ತಮ್ಮ ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸುವ ಆಶಯವೂ ಅವರಿಗಿದೆ.

ಇಲ್ಲಿ ಇನ್ನೊಂದು ಬಹು ಮುಖ್ಯ ಅಂಶವೆಂದರೆ ಗೋಪಾಲಯ್ಯ ಎಂತಹ ಧೀಮಂತ ವ್ಯಕ್ತಿಯೆಂದರೆ ಅವರಿಗೆ ಜಾತಿ, ವರ್ಗ, ಲಿಂಗಗಳ ಅಂತರವಿಲ್ಲದೆ ಬಟ್ಯ, ದೇರಣ್ಣನಂತಹವರ ಜೊತೆಗೆ ಒಳ್ಳೆಯ ಸಂಬಂಧವಿರಿಸಿಕೊಂಡವರು. ತಮ್ಮ ಸ್ವಾರ್ಥವಿದ್ದರೂ ಅವರಿಗೆ ಬದುಕಿಗೊಂದು ದಾರಿಯನ್ನೂ ಮಾಡಿಕೊಡುತ್ತಾರೆ. ಹಾಗಾಗಿ ಬಟ್ಯ, ನಾರಾಯಣ, ಲಕ್ಷ್ಮೀ, ದೇರಣ್ಣ ಗೌಡರಂತಹ ಪಾತ್ರಗಳಿಗೆ ಅಸಾಧಾರಣ ವ್ಯಕ್ತಿಯಾಗಿ ಮತ್ತು ದೇವರಂತಹ ಮನುಷ್ಯನಾಗಿ ಗೋಚರಿಸುತ್ತಾರೆ.

ಇಡೀ ಕಾದಂಬರಿ ಬೆಟ್ಟದಂತಹ ಪರಿಸರದಲ್ಲಿ ನಡೆಯುವುದಲ್ಲದೆ ಅಲ್ಲಿಯ ಕಷ್ಟಕರ ಬದುಕು, ನಗರದಿಂದ ದೂರವೇ ಉಳಿಯುವ ಅಭಾಗ್ಯ, ಕಾಡುಮೃಗಗಳನ್ನು ಎದುರಿಸುವ ಸಮಸ್ಯೆಯ ಜೊತೆಗೆ ಹೊಂದಾಣಿಕೆ ನಡೆಸುವುದು ಇವೆಲ್ಲಾ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿಕೊಂಡಂತೆ ಕಾಡುತ್ತದೆ. ದನವನ್ನು ಹಿಡಿದು ತಿನ್ನುವ ಹುಲಿಯ ಶಿಕಾರಿಯಂತು ಕಾದಂಬರಿಯ ಒಂದು ಮುಖ್ಯ ಭಾಗವಾಗಿ ಮೂಡಿಬಂದಿದೆ. ಕೊನೆಗೂ ಹುಲಿಯನ್ನು ಸಾಯಿಸುವಲ್ಲಿ ಯಶಸ್ವಿಯಾಗುವ ಗೋಪಾಲಯ್ಯ ಮಗ ಶಂಭುವನ್ನು ಹುಡುಕಿಕೊಂಡು ಬರುವಲ್ಲಿಯೂ ಯಶಸ್ಸು ಸಾಧಿಸುತ್ತಾರೆನ್ನುವ ಆಶಯದಂತೆ ಕಾದಂಬರಿ ಮುಕ್ತಾಯವನ್ನು ಪಡೆಯುತ್ತದೆ.

ಶಂಭುವಿನ ವಿಚಾರವನ್ನು ಕಾಕತಾಳೀಯವೆಂಬಂತೆ ಹೇಳುವ ಶಿವರಾಮ ಕೊನೆಗೂ ಆತ ಪುಣೆಯಲ್ಲಿ ಕಂಡ ವ್ಯಕ್ತಿಯೆ ಶಂಭುವೆನ್ನುವ ಸತ್ಯ ಸಿನಿಮೀಯವಾಗಿ ಕಂಡರೂ ಕಾದಂಬರಿಯ ಅಂತ್ಯವನ್ನು ಓದುಗನ ಊಹನೆಗೆ ಬಿಟ್ಟಿರುವುದು ಇಡೀ ಕಾದಂಬರಿಯ ಕುತೂಹಲದ ಘಟ್ಟಕ್ಕೆ ನಾಂದಿಯಾದಿತೇ ಹೊರತು ಅದೇ ಅಂತ್ಯವೂ ಆಗಬೇಕಾಗಿಲ್ಲ. ಇಲ್ಲಿ ಗೋಪಾಲಯ್ಯನವರು ಗಾಡಿ ಕಟ್ಟಿಕೊಂಡು ಹೊರಡುವ ಆತುರ ಎಷ್ಟಿದೆಯೆಂದರೆ ‘ಆಗಲೆ ಭಟ್ಟರು ಪುಣೆಯ ತನಕವೂ ಹೋಗಲು ಕಾಲು ಕಿತ್ತಂತೆಯೇ’ ಎನ್ನುವ ಆಶಯದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಈ ಆಶಯವೇ ಶಿವರಾಮ ಹೇಳುವ ಪುಣೆಯ ವ್ಯಕ್ತಿಯೆ ಶಂಭುವೆನ್ನುವುದು ನಿಟ್ಟುಸಿರಿಡುವಂತೆ ಮಾಡುತ್ತದೆ.

ಪ್ರಸ್ತುತ ಡಾ|| ಕೆ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಶ್ರೀ ಪಿ. ಶೇಷಾದ್ರಿಯವರ ನಿರ್ದೇಶನದಲ್ಲಿ ದತ್ತಣ್ಣ, ಲಕ್ಷ್ಮೀ ಹೆಗಡೆಯಂತಹ ಪ್ರತಿಭೆಗಳಿಂದ ಜೀವ ತುಂಬುತ್ತಿರುವುದು ಚಿತ್ರ ಬಿಡುಗಡೆಯಾಗುವವರೆಗೂ ಕುತೂಹಲ ಮೂಡಿಸಿದೆ. ಇಂತಹ ಅಪೂರ್ವ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ತರುತ್ತಿರುವ ಶ್ರೀ ಪಿ. ಶೇಷಾದ್ರಿಯವರಿಗೆ ಅಭಿನಂದನೆಗಳು.

Read more!

Wednesday, November 3, 2010

ಬಾಲ


ಬಾಳಾಸಾಹೇಬ ಲೋಕಾಪುರ ಅವರ ‘ಕೃಷ್ಣೆ ಒಡಲ ತುಂಬ’ ಇದುವರೆಗಿನ ಕಥೆಗಳು ಪುಸ್ತಕದ ಮೊದಲ ಕಥೆ ‘ಬಾಲ’ ಮನುಷ್ಯನ ಬೆಳವಣಿಗೆಯ ಪರೋಕ್ಷವಾದ ಐರನಿಯಾಗಿರುವುದಲ್ಲದೆ, ಇದು ತಾರ್ಕಿಕ ಮತ್ತು ದಾರ್ಶನಿಕಗಳ ನಡುವಿನ ಸಂಘರ್ಷವಾಗಿ ಬೆಳೆಯುತ್ತಾ ಅವು ಗುರು ಶಿಷ್ಯರ ನಡುವಿನ ಮಾತುಗಳಲ್ಲಿ ಬದುಕಿನ ಸ್ತರಗಳನ್ನು ಬಿಂಬಿಸುವ ಮತ್ತು ಕಾಲ ಬದಲಾದಂತೆ ಮತ್ತೊಂದು ತಲೆಮಾರಿನ ಪ್ರಗತಿಯನ್ನು ಗುರುತಿಸುತ್ತದೆ."

ಎಂ.ಆರ್. ಕೆ ಪ್ರೊಫೆಸರ್‌ರವರ ವ್ಯಕ್ತಿ ಚಿತ್ರಣದೊಂದಿಗೆ ಆರಂಭವಾಗುವ ಕಥೆ ಅವರು ಬಾಹ್ಯ ಘಟನೆಗಳತ್ತ ವಿಮುಖರಾಗುತ್ತಾ ತಮ್ಮದೇ ಲೋಕವನ್ನು ಸೃಷ್ಟಿಸಿಕೊಂಡು ತಾವು ಅನುಭವಿಸಿದ ಓದು ಬರೆಹಗಳನ್ನು ಮೆಲುಕು ಹಾಕುತ್ತಾ ವಯೋ ಸಹಜವಾದ ಭ್ರಮೆಗಳನ್ನು ಹುಟ್ಟಿಸಿಕೊಂಡು ಪುಳಕಿತರಾಗುತ್ತಾರೆ.

ಅವರ ಗ್ರಂಥಾಲಯವೆಂದರೆ ಬರೀಯ ಅಚ್ಚು ಹಾಕಿ ಬೆಚ್ಚಗೆ ಕುಳಿತ ಪುಸ್ತಕದ ರಾಶಿಯಲ್ಲ; ಸ್ವತ: ಲೇಖಕರುಗಳೆ ಜೀವಂತವಾಗಿ ಗ್ರಂಥಾಲಯದಲ್ಲಿರುವ ಪುಳಕ ಅವರಿಗೆ. ಇದು ಕಥೆಗಾರನಿಗೆ ಪುಸ್ತಕಗಳ ಮೇಲಿರುವ ಅಪಾರ ಪ್ರೀತಿಯನ್ನು ಧ್ವನಿಸುತ್ತದೆ.

ರಕ್ತಿ ಹೀರಿ ತನು ಅಲ್ಲಾಡಿಸಿ ಇಡೀ ರಾತ್ರಿ ನಿದ್ದೆಗೆಡಿಸಿಕೊಂಡು ಹೆಂಡಿರು ಮಕ್ಕಳು ಸಂಸಾರವೆನ್ನುವ ಮೋಹದಿಂದ ಪ್ರೊಫೆಸರರನ್ನು ದೂರಗೊಳಿಸಿ, ಅವುಗಳೆಲ್ಲಗಳಿಂದ ವಿಮುಖವಾಗುವ ಆತ್ಮದ ತುಂಡುಗಳು ಅವರ ಬರಹಗಳು. ಇಲ್ಲಿ ಲೇಖಕರ ಬರಹಗಳೆಂದರೆ ಅವರ ಗಾಢವಾದ ಅನುಭವವಗಳು, ಎಕ್ಸ್‌ಪೋಷರ್‍ಸ್‌ಗಳು ಮಾತ್ರವಲ್ಲ ಇಮೇಜಿನೇಷನ್ಸ್‌ಗಳು. ಅವು ಆತ್ಮದ ತುಂಡುಗಳಾಗಿ ಜೀವಂತಿಕೆ ಪಡೆದುಕೊಂಡು ಪುಸ್ತಕ ರೂಪದಲ್ಲಿ ಹೊರ ಹೊಮ್ಮಿರುವಂತಹವುಗಳು. ಇದು ಲೇಖಕನ ಸೃಜನಶೀಲತೆಯ ಮತ್ತು ಮಹಾತ್ವಾಕಾಂಕ್ಷೆಯ ತಲ್ಲಣಗಳಾಗಿ ಓದುಗನನ್ನು ಕಾಡುವುದು. ಮನುಷ್ಯನಾದವನಿಗೆ ಅನುಭವಗಳನ್ನು ಪಡೆಯಬೇಕಾದರೆ ಆತ ತನ್ನ ಸುತ್ತಮುತ್ತ ಘಟಿಸುವ ಸಂಗತಿಗಳನ್ನು ಒಟ್ಟಾಗಿ ಗ್ರಹಿಸಿ ತನ್ನ ಕಲ್ಪನೆಯಲ್ಲಿ ಹೊಸೆದುಕೊಡುವುದು ಅನುಭವ ಮತ್ತು ಅನುಭಾವದಿಂದ ಸಾಧ್ಯ. ‘ಎಲ್ಲೋ ಹುಡಿಕಿದೆ ಇಲ್ಲದ ದೇವರ’ ಅನ್ನುವ ಕವಿ ಸಾಲಿನಂತೆ ಹೊರಗೆಲ್ಲಾ ಹುಡುಕುತ್ತಾ ಅಂಡಲೆಯುವುದು, ವ್ಯರ್ಥ ಕಾಲಹರಣ ಮಾಡುವುದು ಒಂದು ವರ್ಗದ ಜನರಿಗೆ ಬದುಕು ಹೊರಗಡೆಯೆ ಅನಂತ ಪ್ರಮಾಣದಲ್ಲಿ ಸಿಗುತ್ತಿರಬೇಕು ಅನ್ನುವುದು ಊಹನೆಯಾಗಿ ಉಳಿದರೂ ವಾಸ್ತವದಲ್ಲಿ ಓದುವ, ಬರೆಯುವ ಹವ್ಯಾಸ ಹೇಗೆ ದೂರವಾಗುತ್ತಿದೆಯೆನ್ನುವುದನ್ನೂ ಪ್ರತಿಬಿಂಬಿಸುತ್ತದೆ.

ಹೊರಗಡೆಯ ಅಲೆದಾಟ ಇಲ್ಲಿ ಲೌಕಿಕವಾದ ಮತ್ತು ಎಲ್ಲರೂ ಒಪ್ಪಿಕೊಳ್ಳುವ ಬದುಕಿನ ಪರಿಯಾದರೆ, ಅಲ್ಲಿ ಅನುಭವಗಳ ಮೂಟೆಯಿರಬಹುದು ಅದೇ ಮುಂದೆ ತನ್ನನ್ನೇ ತಾನು ಸುತ್ತಿಕೊಳ್ಳುವ ಕಕೂನ್ಸ್ ತರಹ ಅನುಭವಗಳತ್ತ ವಾಲುತ್ತಾ ಎಂದಾದರೊಮ್ಮೆ ಪ್ರೊಫೆಸರ್‌ರಂತೆ ರೂಮಿನ ಒಳಗೆ, ರ್‍ಯಾಕಿನಲ್ಲಿ ಜೀವಂತವಾಗಿರುವ ಪುಸ್ತಕಗಳಂತೆ ಮತ್ತು ತಮ್ಮ ಅನುಭವದ ಆತ್ಮದ ತುಂಡುಗಳಂತೆ ಕಾಣಬಹುದು. ಇದು ಹೊರಗಡೆಯ ಬದುಕಿಗಿಂತ ಭಿನ್ನವಾದ ಒಂದು ಅನುಭವವನ್ನು ಕೊಡುವ ಸತ್ಯದಂತೆ ಗೋಚರವಾಗುತ್ತದೆ.

ಪ್ರೊಫೆಸರರಿಗೆ ಕಿವಿ ಕೇಳಿಸದಿದ್ದರೂ ಧ್ವನಿ ಹೊರಡಿಸುವುದು ತಿಳಿಯುತ್ತದೆ. ಅವರು ಬೆರಗಿನಿಂದ, ‘ನೀವು ಯಾವಾಗ ಮಾತನಾಡಲು ಕಲಿತಿರಿ?’ ಎಂದು ಪುಸ್ತಕಗಳನ್ನು ಕೇಳುತ್ತಾರೆ. ಅವು ತಮ್ಮ ಆತ್ಮದ ತುಂಡುಗಳಂತಹ ಪುಸ್ತಕಗಳು ಮಾತ್ರವಲ್ಲ ತಮ್ಮ ಅನುಭವಗಳನ್ನು ಧಾರೆಯೆರೆದು ಕೊಟ್ಟ ಹಲವು ಶಿಷ್ಯ ವೃಂದಗಳಲ್ಲಿ ಒಬ್ಬ ಶಿಷ್ಯನ ದನಿಯಾಗಿರುವುದು ತಿಳಿಯುತ್ತದೆ. ಅಷ್ಟೊಂದು ತಮ್ಮ ಗ್ರಂಥಾಲಯದಂತಹ ಪ್ರಪಂಚವನ್ನು ನೆಚ್ಚಿಕೊಂಡಿರುವ ಅವರಿಗೆ ಪುಸ್ತಕಗಳೆ ಮಾತನಾಡಿದಂತೆ ಕಂಡರೂ ಇಲ್ಲಿ ಶಿಷ್ಯಂದಿರು ತನ್ನನ್ನು ಮೀರಿ ಹೋಗಲಾರರೆನ್ನುವ ಪರೋಕ್ಷವಾದ ಅವರ ಬಾಹ್ಯದಲ್ಲಿ ತೋರಿಸಿಕೊಳ್ಳಲಾಗದ ‘ಅಹಂ’ ಅನ್ನು ಕೂಡ ತಿಳಿಸುತ್ತದೆ.

ಇಲ್ಲಿ ಕಥೆಗಾರ, ಗ್ರಂಥಾಲಯದಲ್ಲಿ ಕುರ್ಚಿ ಇರಬಾರದು; ನಾವು ನೆಲಕ್ಕೆ ಕುಂತು ಓದಬೇಕು. ಬುದ್ಧಿ ಆಕಾಶಕ್ಕೆ ಜಿಗಿದಾಗ ನೆಲ ನಮ್ಮ ಇರುವಿಕೆಯನ್ನು ನೆನಪಿಸಿಕೊಡುತ್ತದೆ. ಕುರ್ಚಿಗೆ ಆ ಶಕ್ತಿ ಇರುವುದಿಲ್ಲ. ಈ ವಾಕ್ಯಗಳು ಮನುಷ್ಯನ ಬುದ್ಧಿಮಟ್ಟ ಹೆಚ್ಚಾದಂತೆ ಅವನು ತಾನು ನಿಂತ ನೆಲವನ್ನೇ ಮರೆಯುತ್ತಾನಲ್ಲದೆ, ಓತಪ್ರೋತವಾಗಿ ತನ್ನ ಮನಸ್ಸನ್ನು ಹರಿಯಬಿಡುತ್ತಾನೆ, ಅವನನ್ನು ಎಚ್ಚರಿಸುವುದು ಭೂಮಿಯೆನ್ನುವ ಸತ್ಯವನ್ನು ತಿಳಿಸುತ್ತಾರೆ. ಈ ವಾಕ್ಯಗಳಲ್ಲಿ ಮನುಷ್ಯನ ಕಾಮನೆಗಳು, ಅಹಂ ಮತ್ತು ಅನುಭವದ ಕೊರತೆ ಇವುಗಳನ್ನು ಹದ್ದು ಬಸ್ತಿನಲ್ಲಿಡದಿದ್ದರೆ ತನ್ನನ್ನು ತಾನು ಮರೆತು ಬಿಡುವ ಕಲ್ಪನೆಯಿದೆ. ನಿಜವಾಗಿಯೂ ಇದೊಂದು ಅದ್ಭುತ ಅನುಭವದ ಮಾತು! ಹಾಗಾಗಿಯೆ ಈ ಕಥೆ ಶಿಷ್ಯ ಮತ್ತು ಗುರುವಿನ ಸಂಬಂಧವನ್ನು ತಿಳಿಸುವುದಕ್ಕಿಂತಲೂ ಅನುಭವಗಳನ್ನು ಹಂಚಿಕೊಡುವಲ್ಲಿ ಒಂದು ಯಶಸ್ವಿ ದನಿಯಾಗಿ ನಿಲ್ಲುತ್ತದೆ.

ಇಂಡಿಯಾ ಅಮೆರಿಕಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಶಿಷ್ಟಾಚಾರದ ಹೋಲಿಕೆಯನ್ನು ಮಾಡುತ್ತಾ ತನ್ನ ಗುರುವನ್ನು ಮೀರಿಸುವ ಮಾತುಗಳನ್ನು ಆಡುತ್ತಾನೆ ಶಿಷ್ಯ ಬಗರಿ. ವ್ಯಕ್ತಿ ಸ್ವಾತಂತ್ರ್ಯವೆಂದರೆ ಇನ್ನೊಬ್ಬನನ್ನು ಹೊಡೆಯೋದು ಬಡಿಯೋದು ಅಲ್ಲ. ಅದಕ್ಕಿಂತಲೂ ವಿಭಿನ್ನವಾಗಿರುವಂತಹುದು. ಒಂದು ಕಪ್ ಚಹಾ ಮಾಡಿಕೊಡುವ ಭಾರತೀಯ ಶಿಷ್ಟಾಚಾರದಲ್ಲಿಯೂ ವ್ಯಕ್ತಿಗತವಾದ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಶಿಷ್ಯನ ಪರಿ ದ್ವೈತ ಅದ್ವೈತಗಳ ನಡುವೆ ಹೋಲಿಸಿದಾಗ ಶಿಷ್ಯ ಸೋಲಿನೊಡನೆ ಜಾರುತ್ತಾ ಗೆಲುವಿನ ಹಾದಿ ಏರುತ್ತಾ ಒಂದೊಮ್ಮೆ ಎಷ್ಟೊಂದು ಶಿಸ್ತಿನ ಸಿಟ್ಟಿನ ಪ್ರಖರ ವೈಚಾರಿಕತೆಯ ಮನುಷ್ಯನಾಗಿದ್ದರು ಈ ಪ್ರೊಫೆಸರು ಎಂದು ಅಚ್ಚರಿಪಡುತ್ತಾನೆ.

ಶಿಷ್ಯನಿಗೆ, ಬದುಕಿನ ದಾರಿ ಅಂಚು ಪಟ್ಟಿಯಿಂದ ಗೆರೆ ಎಳೆಯುವಂತೆ ಅಲ್ಲ; ಕಾಡಿನ ಕಾಲು ಹಾದಿಯಂತೆ ಒಮ್ಮೊಮ್ಮೆ ನಾವೇ ಹೊಸದಾರಿಯನ್ನು ತುಳಿಯುವುದು ಅನಿವಾರ್ಯ ಅಂದುಕೊಳ್ಳುತ್ತಾ, ಇಂಡಿಯಾದಲ್ಲಿ ಅದು ಸಾಧ್ಯವಿಲ್ಲವೆನಿಸುತ್ತದೆ. ಯಾವಾಗಲೂ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರು ಶಿಷ್ಯನ ಮುಂದೆ ಸೋಲು ಒಪ್ಪಿಕೊಳ್ಳಲಾರರು. ಮುಂದೆ ಕ್ರಾಂತಿಯ ವಿಷಯವನ್ನು ಮಾತನಾಡುತ್ತಾ,

ಕ್ರಾಂತಿಯೆಂದರೆ ಬದಲಾವಣೆ, ಪ್ರಗತಿ, ನಿಂತ ನೆಲದ ವಿಸ್ತಾರದಲ್ಲಿ ಕ್ರಾಂತಿ ಅಂದರೆ ಕ್ರಿಯೆಯ ಎಲ್ಲಾ ಅಯಾಮಗಳನ್ನು ಮೂಲಭೂತವಾಗಿ ಅರ್ಥ ಮಾಡಿಕೊಳ್ಳುವುದು. ಅರ್ಥ ಮಾಡಿಕೊಳ್ಳುವ ಕ್ರಿಯೆ ಮೌನವಾಗಿ ನಡೆಯುವಂತದ್ದು. ಕ್ರಾಂತಿ ಮೌನದ ವಿರೋಧಿ. ಅದು ಪ್ರತಿಕ್ರಿಯೆಯಲ್ಲ. ಪ್ರತಿಕ್ರಿಯೆ ಯಾವತ್ತೂ ಸಂತೋಷವನ್ನು ಹುಟ್ಟು ಹಾಕುತ್ತದೆ. ವಿರೋಧ ಯಾವತ್ತೂ ಕ್ರಿಯಾಶೀಲವಲ್ಲ - ಪ್ರೊಫೆಸರರು ವಾದಿಸುತ್ತಾರೆ.

ಶಿಷ್ಯ ಬಗರಿಗೆ - ಕ್ರಾಂತಿಯೆಂದರೆ ಆದರ್ಶರಹಿತವಾಗಿರಬೇಕು. ಕ್ರಾಂತಿ ಅಂದ್ರೆ ದೇಶದ ಪ್ರಗತಿ, ಇದರಿಂದ ಬಲಿದಾನಗಳಾದರೂ ತಪ್ಪಿಲ್ಲ. ಅದನ್ನೇ ವಿರೋಧಿ ಅನ್ನುವುದಾದರೆ ಆ ವಿರೋಧದಲ್ಲಿಯೇ ಆನಂದ ಇದೆ. ಜಗತ್ತಿನ ಎಲ್ಲರೂ ಚಿಂತನೆ ಮತ್ತು ವಿಚಾರಣೆಗಳಿಗೆ ಒಗ್ಗಿದ ಮೇಲೆ ಎಲ್ಲಾ ಕಡೆ ತಾತ್ವಿಕವಾದ ಸಮಾನತೆ ಮೂಡುತ್ತದೆ. ಇದು ಬದುಕಿನ ಎಲ್ಲಾ ಸ್ತರದಲ್ಲಿಯೂ ಅಸಮಾಧಾನ ತರುವುದು ವಾಸ್ತವ ಸತ್ಯ. ಈ ಸತ್ಯ ಕ್ರಾಂತಿಯ ಮೂಲ.

ಇಲ್ಲಿ ಶಿಷ್ಯನ ತರ್ಕ ಮೇಲುಗೈಸಾಧಿಸಿ ಗುರುವಿನ ಸೋಲಿಗೆ ನಾಂದಿಹಾಡುತ್ತಾನೆ. ಸಮಾನತೆಯೆಂದರೆ ಕಲ್ಪನೆ ಮಾತ್ರ. ಅದು ಭ್ರಮೆ. ವಿಚಾರಗಳು ಸ್ವಂತವಾದ ಮೇಲೆ ಈ ಸಮಾನತೆ ಮೂಡುತ್ತದೆ. ಆಗ ಪ್ರೀತಿ ಹುಟ್ಟುತ್ತದೆ. ಅದೇ ನಿಜವಾದ ಕ್ರಾಂತಿ. ಪ್ರೀತಿಯನ್ನು ಬೆಳೆಸಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೇ ಕ್ರಾಂತಿಯನ್ನೂ ಅನ್ನುತ್ತಾರೆ ಪ್ರೊಫೆಸರ್. ಗುರುವಿನ ತರ್ಕವನ್ನು ಒಪ್ಪಿಕೊಳ್ಳದ ಶಿಷ್ಯ ಬರೀ ಪ್ರೀತಿಯಿಂದ ಊಟ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲವೆನ್ನುತ್ತಾನೆ. ಸ್ಥಾವರ ಅಳಿದ ಮೇಲೆ ಜಂಗಮಕ್ಕೆ ಬೆಲೆಯೆನ್ನುವ ತರ್ಕವನ್ನು ಮುಂದಿಡುತ್ತಾನೆ. ಶಿಷ್ಯನ ಈ ರೀತಿಯ ಬೆಳವಣಿಗೆ ಕಂಡು ಪ್ರೊಫೆಸರ್ ಅಧೀರರಾಗುತ್ತಾರೆ.

ಆಗ ಶಿಷ್ಯ ಗುರುವನ್ನು ಸೋಲಿಸಿದೆನೆನ್ನುವ ಭ್ರಮೆಗೆ ಇಳಿಯುತ್ತಾನೆ. ಆ ‘ಅಹಂ’ ಅವನ ತಲೆಯ ಕೋಡುಗಳಾಗಿ, ಬಗಲಲ್ಲಿನ ರೆಕ್ಕೆಗಳಾಗಿ ಕಾಣಿಸುತ್ತದೆ. ತನ್ನ ಮುಂದಿನ ಪೀಳಿಗೆಗೆ ಉತ್ತರ ಹುಡುಕುವ ಶಿಷ್ಯನ ತವಕ ಇತಿಹಾಸವಾಗಿ ಅದು ಅಗತ್ಯವಾಗಿರುವುದೆ ಸಂದೇಹಗಳ ಪರಿಹಾರವೆನ್ನುತ್ತಾ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಅವನ ಬೆಳವಣಿಗೆಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಶಿಷ್ಯ ಬಗರಿ ಎದ್ದು ಹೊರಗೆ ಹೊರಡುತ್ತಾನೆ. ಸದಾ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರರಿಗೆ ಅವನ ಬಾಲ ಮಾತ್ರ ಬಾಗಿಲ ಬಳಿಯೆ ಸಿಕ್ಕಿಕೊಂಡು ಬಾಗಿಲು ಮುಚ್ಚುವುದೂ ಕಷ್ಟವಾಗುತ್ತದೆ. ಒಂದು ಮುಗಿದ ಅಧ್ಯಾಯದ ಕೊಂಡಿಯಂತೆ ‘ಬಾಲ’ ಕಂಡರೂ ಅದು ಇತಿಹಾಸದ ಜೀವಂತಿಕೆಯಿರುವ ಇನ್ನೊಂದು ಅಧ್ಯಾಯದ ಪ್ರಗತಿಯಾಗಿ ಗೋಚರಿಸುವುದು ಈ ಕಥೆಯ ವಿಶೇಷತೆ.
ಚಿತ್ರ ಕೃಪೆ: ಎಸ್.ವಿ. ಹೂಗಾರ್

Read more!

Saturday, October 2, 2010

ಹರಿಚಿತ್ತ ಸತ್ಯ


ವಸುಧೇಂದ್ರರ ‘ಹರಿಚಿತ್ತ ಸತ್ಯ’ ಅವರ ಪ್ರಬಂಧ ಮತ್ತು ಕಥೆಗಳ ಹಾಗೆಯೇ ಸುಲಲಿತವಾಗಿ ಓದಿಸಿಕೊಂಡು ಹೋಗುವ ಸರಳ, ಸುಂದರ ಕಥನಕದ ಕಾದಂಬರಿ.

ರಂಗಮ್ಮ ಮತ್ತು ಪದ್ದಿ ಪಾತ್ರಗಳ ಮೂಲಕ ಲವಲವಿಕೆಯಿಂದ ಆರಂಭವಾಗುವ ಕಾದಂಬರಿ ವ್ಯಂಗ್ಯ ಮತ್ತು ವಿನೋಧದ ಸಂಭಾಷಣೆಗಳಿಂದ ಓದಿಸಿಕೊಂಡು ಹೋಗುತ್ತದೆ. ಬಳ್ಳಾರಿಯ ಇಂದಿನ ಸ್ಥಿತಿಗತಿಗಳನ್ನು ತಿಳಿದುಕೊಂಡಿರುವವರಿಗೆ ಇದು ಸದ್ಯದ ವಿದ್ಯಮಾನಗಳೊಳಗೆ ನಡೆಯುವ ಸಂಗತಿಯೇನೋ ಅನಿಸಿದರೆ ತಪ್ಪಲ್ಲ. ಆದರೆ ಬಳ್ಳಾರಿಯ ಕಾದ ಬಾಣಲೆಯಂತಹ ಬಿಸಿಲು, ಕೆಂಪು ನೀರಿನ ಹಳ್ಳಗಳ ಚಿತ್ರಣ ವಾಸ್ತವದ ಬಳ್ಳಾರಿಯನ್ನು ನೆನಪಿಸಿದರೂ ಕಥೆ ನಡೆಯುವುದು ವಾಸ್ತವದಲ್ಲವೆಂದು ತಿಳಿಯುವುದು ಅದನ್ನು ಓದುತ್ತಾ ಹೋದಂತೆ. "

ಇಲ್ಲಿಯ ಕಥನವು ನವಿರಾದ ನಿರೂಪಣೆಯ ಜೊತೆಗೆ ಗಟ್ಟಿ ಸಂಬಂಧಗಳನ್ನು ಬೆಸೆಯುತ್ತಾ ಪಾತ್ರಗಳ ಮುಗ್ಧತೆ, ಸಾಚಾತನ ಮತ್ತು ಮೌಢ್ಯಗಳೊಳಗೆ ಹುದುಗಿಕೊಳ್ಳುವುದನ್ನು ತೆರೆದಿಡುತ್ತದೆ. ಅವರ ಪ್ರಬಂಧಗಳಲ್ಲಿ ಅಥವಾ ಕಥೆಗಳಲ್ಲಿ ಇರುವಂತೆ ಲೇಖಕರು ಕಾದಂಬರಿಯ ಮೊದಲಾರ್ಧದಲ್ಲಿ ಅಂತಹ ಪ್ರಯತ್ನವನ್ನು ಮಾಡಿರುವುದು ಕಥೆಯ ಓಟಕ್ಕೆ ಕಾರಣವಾಗಿದೆ. ಕಾದಂಬರಿ ಸಾಂಪ್ರದಾಯಿಕ ಚೌಕಟ್ಟಿನೊಳಗೆ ತಿರುಗುತ್ತಾ, ಆಧುನಿಕತೆಯ ಸಣ್ಣ ಬಾರ್ಡರನ್ನು ಹಚ್ಚಿ ಮುಂದೇನು ಅನ್ನುವ ಕುತೂಹಲವನ್ನು ಉಳಿಸಿಕೊಳ್ಳುತ್ತದೆ.

ಮಗಳು ಪದ್ಮಾವತಿ (ಪದ್ದಿ)ಗೆ ಮದುವೆ ಮಾಡಲು ಸಾಹಸ ಪಡುವ ರಂಗಮ್ಮ, ಅವರ ಮಾತನ್ನು ತಳ್ಳಿ ಹಾಕದ ಮಗಳು ಪದ್ದಿಯ ಪಾತ್ರಗಳು ಒಂದಕ್ಕೊಂದು ಪೂರಕವಾಗಿಯೂ, ನಡತೆಯಲ್ಲಿ ವಿರುದ್ಧವಾಗಿಯೂ ಮುಂದುವರಿಯುವುದು ಹಳೆ ಬೇರು ಹೊಸ ಚಿಗುರು ಸೇರಿ ಮರ ಸೊಬಗಾದಂತೆ ಕಾದಂಬರಿಯ ಸೊಬಗಿನಲ್ಲಿ ನವಿರಾದ ಸಂಘರ್ಷವನ್ನು ತೋರಿಸುತ್ತದೆ.

ಹೀಗೆ ಲವಲವಿಕೆಯಿಂದ ಸಾಗುವ ಕಾದಂಬರಿ ತಿರುವು ಪಡೆದುಕೊಳ್ಳುವುದು ಪದ್ದಿಯ ಮಾನಸಿಕ ಸ್ಥಿತ್ಯಂತರದಿಂದ. ಕಾದಂಬರಿಯ ಈ ಭಾಗ ತ್ರಿವೇಣಿಯವರ ಶರಪಂಜರ, ಮುಚ್ಚಿದ ಬಾಗಿಲುಗಳ ಸನ್ನಿವೇಶಗಳನ್ನು ನೆನಪಿಸಿದರೂ ಅದು ಎಲ್ಲವೂ ತಾನು ಅಂದುಕೊಂಡಂತೆ ನಡೆಯುತ್ತದೆ ಅನ್ನುವ ಭ್ರಮೆಯೊಳಗೆ ಬೀಳುತ್ತಾ, ಯಾವುದೂ ನಡೆಯದೆನ್ನುವ ಹತಾಶೆಯ ದಾರಿ ಹಿಡಿಯುತ್ತಾ ಮಾನಸಿಕವಾಗಿ ಕುಗ್ಗುವ ಒಂದು ಸ್ಥಿತಿಯಾಗಿಯೇ ಉಳಿಯುತ್ತದೆ. ತನ್ನ ಹಾಗೂ ತಾನು ಕೈ ಹಿಡಿಯುವ ಯುವಕನ ಜೊತೆಗಿನ ಪರಿಸ್ಥಿತಿಯನ್ನು ತುಲನಾತ್ಮಕವಾಗಿ ಪರಿಗಣಿಸುತ್ತಾ ಅವನಿಗಿಂತ ತಾನು ಮಿಗಿಲು ಅನ್ನುವ ವಾಸ್ತವನ್ನು ಒಪ್ಪಿಕೊಂಡು ತನ್ನ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಳ್ಳುವ ಪದ್ದಿ ವೇದನೆಯಿಂದ ಚಡಪಡಿಸುತ್ತಾಳೆ. ಇಲ್ಲಿ ಕಾರಂತರ ಮತ್ತು ತೇಜಸ್ವಿಯವರ ಕಾದಂಬರಿಗಳಲ್ಲಿ ವ್ಯತಿರೀಕ್ತಗಳಿಗೆ ವೈಜ್ಞಾನಿಕವಾದ ಹಿನ್ನಲೆಯನ್ನು ನೀಡುವಂತೆ ಲೇಖಕರು ಬಹಳ ಜಾಣ್ಮೆಯಿಂದ ಅವಳು ಮಾನಸಿಕ ಯಾತನೆಗೆ ಸಿಲುಕಿದ್ದರೂ ಅದರಿಂದ ಹೊರಗೆ ಬರುವುದನ್ನು ಸುಂದರವಾಗಿ ನಿರೂಪಿಸಿದ್ದಾರೆ.

ಇದನ್ನು ಓದುತ್ತಾ ಓದುತ್ತಾ ನಮ್ಮನ್ನು ಹಠಾತ್ತನೆ ಅರವತ್ತು, ಎಪ್ಪತ್ತರ ದಶಕಕ್ಕೆ ಕೊಂಡೊಯ್ದು ನಿಲ್ಲಿಸುವ ಅಪರೂಪದ ಕಾದಂಬರಿಯೆಂದರೆ ತಪ್ಪಲ್ಲ. ಮಹಿಳಾ ಸಮಸ್ಯೆ ಮತ್ತು ಮಹಿಳಾ ಪ್ರಧಾನವೆನ್ನುವುದಕ್ಕಿಂತಲೂ ಒಂದು ಸಾಂಪ್ರದಾಯಿಕ ಹಿನ್ನಲೆಯಲ್ಲಿ ಮೂಡಿ ಬಂದಿರುವ ಸರಳವಾದ ಕೃತಿ ಇದು.

ಇತ್ತೀಚಿನ ಸಾಹಿತ್ಯ ವಲಯದಲ್ಲಿಯ ಹೆಚ್ಚಿನ ಕಾದಂಬರಿಗಳು ಗಂಭೀರವಾದ ವಿಷಯಗಳನ್ನೊಳಗೊಂಡು ವಾಸ್ತವತೆಗೆ ಒತ್ತು ಕೊಟ್ಟಿರುವುದನ್ನು ಗಮನಿಸಬಹುದಾದರೂ ‘ಹರಿಚಿತ್ತ ಸತ್ಯ’ ವಾಸ್ತವತೆಯಲ್ಲಿಯೆ ನವಿರಾದ ಸನ್ನಿವೇಶಗಳನ್ನು ಸೃಷ್ಟಿಸುತ್ತಾ ಬಹಳ ಆಪ್ತವಾಗುತ್ತದೆ. ಅದರಲ್ಲೂ ವಧುಪರೀಕ್ಷೆಯ ಘಟನೆಯನ್ನು ಹಾಸ್ಯಮಯವಾಗಿ ಚಿತ್ರಿಸುತ್ತಾ ಕೊನೆಗೆ ಪರೀಕ್ಷೆಗೊಡ್ಡುವವನನ್ನೆ ಓಡಿಸುವ ಜಾಣ ಹುಡುಗಿಯಾಗಿ ಪದ್ದಿ ಕಾಣಿಸಿಕೊಳ್ಳುತ್ತಾಳೆ. ಅವಳು ವರನನ್ನು ಬಿಳಿ ತಲೆಗೂದಲು ಇರುವವನೆಂದು ನಿರಾಕರಿಸುವುದು ಮಾತ್ರ ಕ್ಷುಲ್ಲಕವೆನಿಸುತ್ತದೆ.

ಅವಳು ನಿರಾಕರಿಸಿದ ಹುಡುಗ ರಾಘವೇಂದ್ರ, ಸುಧಾ ಅನ್ನುವ ಹುಡುಗಿಯೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಾನೆ. ಅವನ ಸಂಸಾರ ಸುಖಿ ಸಂಸಾರವಾದರೂ ಗಂಡು ಮಗುವಿನ ಅಭೀಪ್ಸೆಯಲ್ಲಿ ಹುಟ್ಟುವ ಕುರುಡು ಮಗುವಿನ ಚಿತ್ರಣ ಅಂತರಂಗವನ್ನು ಕಲಕುತ್ತದೆ. ಗಂಡು ಮಗುವಿಗಾಗಿ ಹಂಬಲಿಸುವ ಮನೆಯವರು, ಮಗು ಹುಟ್ಟು ಕುರುಡನಾದಾಗ ಅದರ ಬಗೆ ತಿರಸ್ಕಾರದ ಮಾತುಗಳನ್ನಾಡುವಾಗ ಸುಧಾ ಸಹಿಸದಾಗುತ್ತಾಳೆ. ಅವಳ ಮಾತುಗಳಲ್ಲಿ ಹೆತ್ತವಳಿಗೆ ಹೆಗ್ಗಣ ಮುದ್ದು ಅನ್ನುವುದಕ್ಕಿಂತಲೂ ಮಾನವೀಯತೆಯ ಮಮತೆ ಅಲ್ಲಿರುವುದು ಗೋಚರಿಸುತ್ತದೆ. ಇಂತಹುದೇ ಸನ್ನಿವೇಶವೊಂದು ಖ್ಯಾತ ಲೇಖಕ ಡಾ. ಬಾಳಾಸಾಹೇಬ ಲೋಕಾಪುರ ಅವರ ‘ಹುತ್ತ’ ಕಾದಂಬರಿಯನ್ನು ನೆನಪಿಸುತ್ತದೆ. ಆ ಕಾದಂಬರಿಯಲ್ಲಿ ಹೆಣ್ಣು ಜೀವವನ್ನು ಉಳಿಸುವ ಹೋರಾಟದಲ್ಲಿ ನವಜಾತ ಶಿಶು ಇರುವೆಗಳಿಗೆ ಆಹುತಿಯಾಗಿ ಕಣ್ಣು ಕಳೆದುಕೊಂಡಿರುತ್ತದೆ. ಅಂತಹುದೇ ಹುಟ್ಟು ಕುರುಡು ಮಗುವಿನ ಘಟನೆ ಇಲ್ಲಿ ಕಂಡರೂ ಆ ಮಗುವಿನ ಮುಗ್ಧತೆ ಮತ್ತು ಶೂನ್ಯತ್ವದಿಂದ ಪಡೆದ ದೈಹಿಕ ಶಕ್ತಿ, ಮುಂದೆ ಅದೇ ಮಗು ಸಂಭ್ರಮಿಸುತ್ತಾ ತಾನು ಕಾಣಲು ಸಾಧ್ಯವಿರದ ತೆಪ್ಪದಲ್ಲಿ ವಿಹರಿಸುತ್ತಾ ದುರ್ಘಟನೆಗೊಳಗಾದಾಗ ಸುಧಾಳಾಗಲಿ, ಅವಳ ಹೆಣ್ಣು ಮಗುವಾಗಲಿ ಅಥವಾ ಇನ್ನೊಬ್ಬ ಪ್ರಯಾಣಿಕರಾಗಲಿ ಅನುಕಂಪ ಹುಟ್ಟಿಸುವುದಿಲ್ಲ. ಅನುಕಂಪ ಹುಟ್ಟಿಸುವುದು ಏನೂ ತಿಳಿಯದ ಲೋಕದಲ್ಲಿದ್ದು ಲೋಕವನ್ನು ಕಾಣದಿರುವ ಕುರುಡು ಮಗು ಪ್ರಕಾಶ. ಈ ಘಟನೆ ಒಂದು ಕ್ಷಣ ಓದುಗನನ್ನು ಮೌನಕ್ಕೆ ತಳ್ಳುತ್ತದೆ. ಮತ್ತು ಈ ಅಂತ್ಯ ಬೇಕಿತ್ತೆ? ಅನಿಸುತ್ತದೆ.

ಕಾದಂಬರಿಯ ಕೊನೆಯಲ್ಲಿ ರಾಘವೇಂದ್ರನಿಗೆ ಎರಡನೆ ಸಂಬಂಧವಾಗಿ ಹೋಗುವ ಪದ್ದಿ ಅವನ ಜೊತೆಗೆ ಸಂಸಾರಕ್ಕಿಳಿಯುತ್ತಾಳೆ. ಹೀಗೆ ತಾನು ನಿರಾಕರಿಸಿದವನನ್ನೇ ಅನಿವಾರ್ಯವಾಗಿ ಮದುವೆಯಾಗಿ ಅವನ ನೋವುಗಳನ್ನು ಮರೆಸುವಲ್ಲಿ ಯಶಸ್ವಿಯಾಗುತ್ತಾ ಕಾದಂಬರಿ ಸುಖಾಂತದಲ್ಲಿ ಮುಗಿಯುತ್ತದೆ.

ಗಂಭೀರ ಚಿತ್ರಣಗಳಿಗಿಂತ ವಿಭಿನ್ನವಾದ ಕೃತಿ ಇದು. ಒಮ್ಮೆಯಾದರೂ ಇದನ್ನು ಓದಲೇಬೇಕು. ಈ ಪುಸ್ತಕವನ್ನು ವಸು ತಮ್ಮ ಛಂದ ಪುಸ್ತಕದ ಮೂಲಕ ಪ್ರಕಟಿಸಿದ್ದಾರೆ. ಮುಖ ಪುಟ ವಿನ್ಯಾಸ ರಘು ಅಪಾರ ಅವರದ್ದು ಮತ್ತು ಇದರ ಬೆಲೆ ರೂ. 95 ಮಾತ್ರ. ಪುಸ್ತಕಗಳಿಗಾಗಿ ಮೊ.ಸಂ. 98444 22782 ನ್ನು ಸಂಪರ್ಕಿಸಬಹುದು.

Read more!

Thursday, June 10, 2010

ಆಂಟನ್ ಚೆಕಾಫ್ ಕಥೆಗಳು


ಸಣ್ಣ ಕಥಾ ಪ್ರಕಾರವೆಂದಕೂಡಲೇ ನೆನಪಾಗುವುದು ಆಂಟನ್ ಚೆಕಾಫ್. ಸರಳ ಬರವಣಿಗೆಯಿಂದ ಬದುಕಿನ ಮೌಲ್ಯಗಳನ್ನು ಲೇವಡಿಯ ಮೂಲಕ ತೆರೆದಿಡುವ ಚೆಕಾಫ್‌ನ ಕಥೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಒಂದು ಸವಾಲು. ವರ್ಗ ನೀತಿಯ ತಾರತಮ್ಯವನ್ನು, ನೋವು, ಹತಾಶೆಗಳನ್ನು ಮನಮುಟ್ಟುವ ರೀತಿಯಲ್ಲಿ ಬರೆದ ಚೆಕಾಫ್‌ನನ್ನು ಓದಿಕೊಳ್ಳುವುದು ಒಂದು ಸುಂದರ ಅನುಭವವೆಂದರೆ ತಪ್ಪಲ್ಲ. ಇಂದಿನ ದಿನ ಪತ್ರಿಕೆಗಳು ಬಯಸುವ ರೀತಿಯಲ್ಲಿ ಆಗಲೇ ಚೆಕಾಫ್ ಪುಟಗಳ ಮಿತಿಯಲ್ಲಿ ಸಣ್ಣ ಕಥೆಗಳನ್ನು ಬರೆದರೂ, ಅವುಗಳ ಆಳವನ್ನು ತಿಳಿದುಕೊಳ್ಳಬೇಕಾದರೆ ಕಥೆ ಓದಿದ ಬಳಿಕ ನಮ್ಮನ್ನು ಒರೆಗೆ ಹಚ್ಚುವುದನ್ನು ತಿಳಿಯಬಹುದು. ಒಂದು ಉದಾಹರಣೆ ಕೊಡುವುದಾದರೆ ‘ಊಸರವಳ್ಳಿ’ ಕಥೆ. ಒಂದು ನಾಯಿ ಒಬ್ಬ ಕುಡುಕ ಬಡಗಿಯ ಕೈಬೆರಳನ್ನು ಕಚ್ಚಿದಾಗ ಸಿಟ್ಟಿಗೆದ್ದ ಬಡಗಿ ಆ ನಾಯಿಯನ್ನು ಒಂದು ಗತಿ ಕಾಣಿಸಬೇಕೆಂದು ಹಾತೊರೆಯುತ್ತಿರುವಾಗ ಪೊಲೀಸ್ ಅಧಿಕಾರಿ ಅಲ್ಲಿಗೆ ಬಂದು ತನಿಖೆ ನಡೆಸುತ್ತಾನೆ. ಬಡಗಿಯ ಮೇಲಿದ್ದ ಕನಿಕರ ಕ್ರಮೇಣ ಕರಗಿ ಆ ನಾಯಿಯ ಒಡೆಯನ ಮೇಲೆ ತಿರುಗಿ ಕೊನೆಗೆ ಆತ ಬಹುಗೌರವಸ್ಥ ವ್ಯಕ್ತಿಯೆಂದು ತಿಳಿದ ಮೇಲೆ ಆ ಅಭಿಪ್ರಾಯ ಮತ್ತೆ ಬಡಗಿಯತ್ತ ತಿರುಗುತ್ತದೆ. ಹೀಗೆ ಕ್ಷಣ ಕ್ಷಣವೂ ಸನ್ನಿವೇಶ ಬದಲಾಗುತ್ತಾ ಹೋಗುವುದನ್ನು ಗಾಳಿ ಬಂದ ಕಡೆಗೆ ಕೊಡೆ ಹಿಡಿಯುವ ಮಾತಿನಂತೆ ಕಾಣಿಸುತ್ತದೆ. ಅರಗಿಸಿಕೊಳ್ಳಲು ಭಾರವೆನಿಸದ ಇಲ್ಲಿಯ ಎಲ್ಲಾ ಕಥೆಗಳು ಬಹಳ ಸ್ವಾರಸ್ಯಕರ ಮತ್ತು ಜೀವನದ ಮೌಲ್ಯಗಳನ್ನು ಸೂಕ್ಷ್ಮವಾಗಿ ತೋರಿಸುತ್ತಾ ಅಸಹಾಯಕತೆಯ ದನಿಯಾಗಿ ಮಾರ್ದನಿಸುತ್ತದೆ. "

‘ಭಿಕ್ಷುಕ’ ಕಥೆಯಲ್ಲಿ ಭಿಕ್ಷುಕ ಮತ್ತು ಕುಡುಕನಾಗಿದ್ದವನೊಬ್ಬ ಸುಳ್ಳು ಹೇಳಿಕೊಂಡು ದಿನಕಳೆಯಬೇಕೆಂದುಕೊಂಡರೂ ಅವನನ್ನು ಭಿಕ್ಷೆ ಬೇಡದೆ ದುಡಿದು ತಿನ್ನುವಂತೆ ಪ್ರಚೋದಿಸುವ ವ್ಯಕ್ತಿಯೊಬ್ಬ ಅವನನ್ನು ಕರೆದುಕೊಂಡು ಬಂದು ತನ್ನ ಮನೆಯಲ್ಲಿ ಕಟ್ಟಿಗೆ ಒಡೆಯುವ ಕೆಲಸಕ್ಕೆ ನೇಮಿಸುತ್ತಾನೆ. ಅದೃಷ್ಟವಶಾತ್ ಆ ವ್ಯಕ್ತಿಯ ಮಡದಿ ಒಳ್ಳೆಯವಳಾಗಿದ್ದು ಸೋಂಬೇರಿ ಭಿಕ್ಷುಕನನ್ನು ಹಿಯಾಳಿಸುತ್ತಾ ತಾನೆ ಕಟ್ಟಿಗೆಯನ್ನು ಒಡೆಯುತ್ತಾಳೆ. ಆ ಸತ್ಯ ಕೊನೆಗೆ ಅನಾವರಣವಾಗುವ ಹೊತ್ತಿಗೆ ಅವನಿಗೆ ಬೇರೊಂದು ಕಡೆ ಒಳ್ಳೆಯ ಕೆಲಸ ದೊರಕಿಸಿಕೊಡುತ್ತಾನೆ. ಆತ ಈ ವಿಷಯ ಅವನನ್ನು ಮತ್ತೊಮ್ಮೆ ಭೇಟಿಯಾದಾಗ ತಿಳಿಸುತ್ತಾನೆ. ಅವನ ಹೆಂಡತಿಯ ಬೈಗಳಿಂದ ಮತ್ತು ಅವಳ ಒಳ್ಳೆಯತನದಿಂದ ತಾನು ಕುಡಿತವನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿರುವುದಾಗಿ ಆ ಭಿಕ್ಷುಕ ಹೇಳುತ್ತಾನೆ.

ಒಂದು ಸೀನಿನಿಂದ ಕೀಳರಿಮೆಗೆ ತುತ್ತಾಗುವ ವ್ಯಕ್ತಿ ತಾನು ಯಾರ ಮೇಲೆ ಸೀನಿದೆನೋ ಆತನನ್ನು ಕ್ಷಮಾಪಣೆಗಾಗಿ ಕೇಳಿಕೊಳ್ಳುತ್ತಾನೆ. ಆತ ಕ್ಷಮಿಸಿದೆನೆಂದರೂ ಈತ ಬೆಂಬಿಡದೆ ಅದೇ ಭಾವೋದ್ವೇಗದಲ್ಲಿ ಅವನಿಗೆ ಕಾಟವಾಗಿ ಪರಿಣಮಿಸುತ್ತಾನೆ. ಕೊನೆಗೆ ಬೇಸತ್ತ ಅವನು ಗದರಿಸಿ ಅವನನ್ನು ಆಚೆಗೆ ತಳ್ಳುತ್ತಾನೆ. ಬಹಳ ತಮಾಷೆಯಾಗಿ ಇದು ‘ಅಧಿಕೃತ ಸಾವು’ ಕಥೆಯಲ್ಲಿ ಕಂಡರೂ ಇಲ್ಲಿ ವರ್ಗಭೇದದ ಗಾಢ ಸಂಬಂಧವಿರುವುದನ್ನು ಗಮನಿಸಬಹುದು. ‘ಶಾಂಪೇನ್’ ಕಥೆಯಲ್ಲಿ ಹತಾಶ ವ್ಯಕ್ತಿಯೊಬ್ಬ ಒಂಟಿ ಜೀವನ ನಡೆಸಿ ಬೇಸತ್ತು ಒಂದು ಹನಿ ಪ್ರೀತಿಗಾಗಿ ಹಂಬಲಿಸುವ ಚಿತ್ರಣವಿದೆ.

ಮನುಷ್ಯನ ನಿರ್ಧಾರಗಳು ಊಸರವಳ್ಳಿಯಂತೆ ಸದಾ ಬಣ್ಣ ಬದಲಾಯಿಸುವುದನ್ನು ‘ಊಸರವಳ್ಳಿ’ ಕಥೆ ತೆರೆದಿಡುತ್ತದೆ. ಒಬ್ಬ ಕುಡುಕ ಬಡಗಿಯ ಕೈ ಬೆರಳಿಗೆ ನಾಯಿಯೊಂದು ಕಚ್ಚಿ ಆತ ಅದಕ್ಕಾಗಿ ಪರಿಹಾರ ಪಡೆಯಬೇಕೆಂದುಕೊಳ್ಳುತ್ತಾನೆ. ಆದರೆ ಮಧ್ಯೆ ಪ್ರವೇಶಿಸುವ ಪೊಲೀಸ್ ಅಧಿಕಾರಿ ಮೊದಲಿಗೆ ಆತನ ಮೇಲೆ ಕನಿಕರ ಮೂಡಿದರೂ ಕ್ರಮೇಣ ಅದು ಊಸರವಳ್ಳಿ ಬಣ್ಣ ಬದಲಾಯಿಸಿದಂತೆ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಕುಡುಕ ಬಡಗಿಯದೇ ತಪ್ಪು ಅನ್ನುವುದು ಸಾಬೀತುಗೊಳಿಸುತ್ತಾನೆ.

ಪಟ್ಟಣದ ಕುಡುಕನೊಬ್ಬ ಸನ್ಯಾಸಿಗಳ ಆಶ್ರಮಕ್ಕೆ ಬಂದು ಮನುಷ್ಯರಲ್ಲಿ ಸತ್ಯ ಉಳಿದಿಲ್ಲ, ಅವರೆಲ್ಲಾ ಮೋಹದಲ್ಲಿ ಮುಳುಗಿರುವುದಾಗಿಯೂ ಅವರನ್ನು ಇದರಿಂದ ಮುಕ್ತಿ ಹೊಂದುವಂತೆ ಯಾರು ಭೋದಿಸುತ್ತಾರೆಂದು ಕೇಳುವಾಗ ಆಲೋಚನೆಗೊಳಗಾದ ಸನ್ಯಾಸಿ ಗುರು ಪಟ್ಟಣಕ್ಕೆ ಹೋಗಿ ಅಲ್ಲಿಯ ಸ್ಥಿತಿಯನ್ನು ಅಧ್ಯಯನ ಮಾಡುತ್ತಾನೆ. ತನ್ನ ಕೈಯಿಂದ ಅದನ್ನು ಸರಿಪಡಿಸಲಾಗದೆ ಆತ ಆಶ್ರಮಕ್ಕೆ ಹಿಂತಿರುಗಿ ಉಳಿದ ಸನ್ಯಾಸಿಗಳಿಗೆ ಅಲ್ಲಿಯ ನಗ್ನ ಸ್ತ್ರೀಯರು, ಕುಡಿತದ ಬಗ್ಗೆ ಮತ್ತು ಅಲ್ಲಿಯ ಸ್ಥಿತಿಗತಿಗಳನ್ನು ತಿಳಿಸುತ್ತಾನೆ. ಮರುದಿನ ಆತ ಆಶ್ರಮಕ್ಕೆ ಹಿಂತಿರುಗುವಾಗ ಅಲ್ಲಿ ಒಬ್ಬನೇ ಒಬ್ಬ ಸನ್ಯಾಸಿ ಉಳಿದಿರುವುದಿಲ್ಲ. ಎಲ್ಲರೂ ಪಟ್ಟಣದ ಕಡೆಗೆ ಹೋಗಿರುತ್ತಾರೆ. ಕ್ಷಣಿಕ ಸುಖದತ್ತ ವಾಲುವ ಮನಸ್ಸನ್ನು ‘ಒಂದು ಹೆಸರಿಲ್ಲದ ಕಥೆ’ ಯಲ್ಲಿ ಕಾಣಬಹುದು.

ಅಪರಾಧಿಯಾದರೂ ತನ್ನ ಹೆಸರು ಪತ್ರಿಕೆಯಲ್ಲಿ ಬಂತೆನ್ನುವ ಖುಷಿಯನ್ನು ಹಂಚಿಕೊಳ್ಳುವ ಕಥೆ ‘ಖುಷಿ’. ವಾಸ್ತವವನ್ನು ನೆಚ್ಚಿಕೊಂಡರೂ ಕನಸುಗಳತ್ತ ವಾಲುವ ಮನುಷ್ಯ ಅದೃಷ್ಟ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹ ಲಕ್ಷಣಗಳುಳ್ಳ ಒಬ್ಬ ಚಮ್ಮಾರ ಕನಸು ಕಾಣುತ್ತಾ ವಾಸ್ತವವನ್ನು ಮರೆತು ಬಿಡುತ್ತಾನೆ. ಅವನಿಗಾಗುವ ಕನಸಿನ ಅನುಭವ ‘ಚಮ್ಮಾರ ಮತ್ತು ಭೂತ’ ಕಥೆಯಲ್ಲಿ ವ್ಯಕ್ತವಾಗಿದೆ. ಬಡ ಕುಟುಂಬವೊಂದರ ಜವಾಬ್ದಾರಿಯಿಲ್ಲದ ಕುಡುಕ ಯಜಮಾನನ ದುರಭ್ಯಾಸಗಳನ್ನು ಚಿತ್ರಿಸುವ ಕಥೆ ‘ಹಳೆಯ ಮನೆ’. ಕುಡಿತದಿಂದ ಮುಕ್ತಿ ಹೊಂದುವ ನಿರ್ಧಾರವಿದ್ದರೂ ಅವಕಾಶ ಎದುರಾದಾಗ ತನ್ನ ಚಾಳಿಯನ್ನು ಮುಂದುವರಿಸುವ ಯಜಮಾನ ಕೊನೆಗೂ ಬದಲಾಗುವುದೇ ಇಲ್ಲ.

ಈ ಸಂಕಲನದ ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುವ ಕಥೆ ‘ಪಣ’. ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ಇವೆರಡರಲ್ಲಿ ಯಾವುದು ಮಾನವೀಯ ಮತ್ತು ನೈತಿಕವಾದುದೆಂಬ ಪ್ರಶ್ನೆಯೊಡ್ಡುವ ಪಣ, ಪಣ ಒಡ್ಡುವವನನ್ನು ಮತ್ತು ಒಪ್ಪಿಕೊಂಡವರಿಬ್ಬರ ಕಣ್ಣನ್ನೂ ತೆರೆಸುವ ಕಥೆ. ದುಡ್ಡಿನ ಅಗತ್ಯಕ್ಕಾಗಿ ಪಂಥವನ್ನು ಸ್ವೀಕರಿಸುವ ವ್ಯಕ್ತಿ, ಷರತ್ತಿನ ಪ್ರಕಾರ ಹದಿನೈದು ವರ್ಷಗಳಷ್ಟೂ ದೀರ್ಘ ಅವಧಿಯಲ್ಲಿ ಸೆರೆವಾಸದಲ್ಲಿದ್ದು ಏಕಾಂತವಾಗಿ ಜೀವಿಸುವುದನ್ನು ಸಾಬೀತು ಮಾಡುತ್ತಾನಾದರೂ. ಏಕಾಂತದಲ್ಲಿದ್ದುಕೊಂಡೇ ಜೀವನದ ಮೌಲ್ಯಗಳನ್ನು ಕಂಡುಕೊಂಡು ಮುಂದೊಂದು ದಿನ ನಿಶ್ಶಕ್ತನಾಗಿ ಒಂದು ಚೀಟಿ ಬರೆದಿಡುತ್ತಾನೆ. ಪಣದ ಕೊನೆಯ ದಿನ ಪಂಥಕ್ಕೊಡಿದವನು ತನ್ನ ಇಪ್ಪತ್ತು ಲಕ್ಷಗಳು ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವನನ್ನು ಅಲ್ಲಿಯೇ ಮಲಗಿಸಿ ಉಸಿರುಗಟ್ಟಿಸಿ ಸಾಯಿಸುವ ಯೋಚನೆಯನ್ನು ಮಾಡುತ್ತಾನೆ. ಆದರೆ ಆತ ಬರೆದಿಟ್ಟ ಚೀಟಿಯನ್ನು ನೋಡಿ ಆಘಾತಕ್ಕೊಳಗಾಗುತ್ತಾ ಜೀವನ ಮೌಲ್ಯವನ್ನು ಮತ್ತು ದುರಾಸೆಗಳ ಮಿಥ್ಯೆಯನ್ನು ಕಂಡುಕೊಳ್ಳುತ್ತಾನೆ. ಈ ಸಂಕಲದ ಅತ್ಯುತ್ತಮ ಕಥೆಯಿದು.

ನಾಯಿಯೊಡತಿಯ ಪ್ರೀತಿಗೆ ಬೀಳುವ ವ್ಯಕ್ತಿ ಅವಳನ್ನು ಹೇಗಾದರೂ ತನ್ನವಳನ್ನಾಗಿಸಿಕೊಳ್ಳುವುದಕ್ಕೆ ಹಂಬಲಿಸುತ್ತಾನೆ. ಕೊನೆಗೂ ಪ್ರೀತಿಗೆ ಸೋಲಲೇಬೇಕಾದ ಅವರಿಬ್ಬರೂ ಬದುಕಿನ ಜಟಿಲ ಮತ್ತು ಕಷ್ಟಕರ ಬದುಕು ತಾವು ಒಂದಾದ ಮೇಲೆ ಆರಂಭವಾಗುವುದೆನ್ನುವ ಅನುಭವವಿದ್ದರೂ ಅಗಲಿರಲಾರರು. ಇದು ‘ನಾಯಿಯೊಡತಿ’ ಕಥೆ. ‘ಮನೆ’ ಕಥೆಯಲ್ಲಿ ತಪ್ಪು ದಾರಿಗಿಳಿದ ಮಗನನ್ನು ತಿದ್ದುವ ತಂದೆಯ ಒದ್ದಾಟವನ್ನು ಮಾರ್ಮಿಕವಾಗಿ ಬಿಂಬಿಸಲಾಗಿದೆ. ಯಾವ ರೀತಿಯಲ್ಲಿ ಆ ತಪ್ಪನ್ನು ಮಗನಿಗೆ ಸ್ಪಷ್ಟಪಡಿಸಬೇಕೆನ್ನುವುದು ತಿಳಿಯದ ಜವಾಬ್ದಾರಿಯುತ ತಂದೆಯೊಬ್ಬನ ಅಳಲು ಇಲ್ಲಿದೆ. ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿಯಿರುವ ಹೆಂಗಸು ಹೊಟೇಲ್‌ನಲ್ಲಿ ಉಳಿದುಕೊಂಡು ಒಬ್ಬ ಡ್ರೈವರ್‌ನ ಕೊಳಕು ಮಾತುಗಳನ್ನು ಕೇಳಬೇಕಾಗುತ್ತದೆ. ಹೊಟೇಲ್ ಮಾಲೀಕನಿಗೆ ದೂರು ಕೊಟ್ಟು ಅವನನ್ನು ಅಲ್ಲಿಂದ ಓಡಿಸುವ ತಂತ್ರ ಹೂಡಿದರೂ ಕೊನೆಗೆ ಆತ ಒಳ್ಳೆಯವನೆಂದು ತಿಳಿಯುತ್ತಲೇ ಆತ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನಾದರೂ ಮದುವೆಯಾಗಲಿ ಎಂದು ಚಡಪಡಿಸುತ್ತಾಳೆ. ಇದು ‘ಹೊಟೇಲಿನಲ್ಲಿ’ ಕಥೆಯ ಸಾರಾಂಶ.

ಹೀಗೆ ಒಟ್ಟು ಹನ್ನೆರಡು ಕಥೆಗಳಿರುವ ಈ ಸಂಕಲನವನ್ನು ಕನ್ನಡಭಿಮುಖಿಯಾಗಿಸಿದವರು ಮಹಾಬಲ ಸೀತಾಳಭಾವಿ ಅವರು. ಈ ಕೃತಿಯನ್ನು ಅಂಕಿತ ಪುಸ್ತಕ, ಬೆಂಗಳೂರು ಇವರು ಹೊರ ತಂದಿದ್ದಾರೆ.

Read more!

Sunday, June 6, 2010

ಡಾ. ಕೆ. ಎನ್. ಗಣೇಶಯ್ಯ ಅವರ ‘ಪದ್ಮಪಾಣಿ’


ತಮ್ಮ ವಿಶಿಷ್ಟ ಕಥನ ಶೈಲಿಯಿಂದ ಕನ್ನಡದ ಕಥಾಪ್ರಕಾರದಲ್ಲಿ ಗುರುತಿಸಿಕೊಂಡಿರುವ ಡಾ. ಕೆ. ಎನ್. ಗಣೇಶಯ್ಯನವರ ಇತ್ತೀಚಿನ ಕಥಾಸಂಕಲನ ‘ಪದ್ಮಪಾಣಿ’. ಎಂಟು ಕಥೆಗಳನ್ನೊಳಗೊಂಡಿರುವ ಈ ಸಂಕಲನದಲ್ಲಿ ‘ಉಗ್ರಬಂಧ’ ಮತ್ತು ‘ಮಲಬಾರ್ ೦೭’ ಕಥೆಗಳನ್ನುಳಿದು ಉಳಿದ ಆರು ಕಥೆಗಳು ಚರಿತ್ರೆ ಮತ್ತು ಚರಿತ್ರೆಯ ಚೌಕಟ್ಟಿನೊಳಗೆ ಬೆಳೆದು ಅವುಗಳಿಗೆ ಆಧಾರ ಸಹಿತ ಸಮರ್ಥಿನೆ ನೀಡುವ ರೀತಿ ಕಥಾ ಬೆಳವಣಿಗೆಯಲ್ಲಿ ಕೂತುಹಲವನ್ನು ಹುಟ್ಟಿಸುತ್ತದೆ. ಎಂದೋ ಚರಿತ್ರೆಯ ಕೆಲವು ಘಟನೆಗಳನ್ನು, ವ್ಯಕ್ತಿಗಳನ್ನು ಪಠ್ಯ ಪುಸ್ತಕದಲ್ಲಿಯೋ, ಕಥೆ ಪುಸ್ತಕಗಳಲ್ಲಿಯೋ ಅಲ್ಪ ಸ್ವಲ್ಪ ಓದಿರುವ ನಮಗೆ ಅದಕ್ಕಿಂತಲೂ ಬೇರೆಯದೇ ಆದ ಸಂಭವಗಳನ್ನು ತಮ್ಮ ಕಥೆಯ ಮೂಲಕ ತೆರೆದಿಡುತ್ತಾರೆ ಡಾ. ಗಣೇಶಯ್ಯನವರು. "

ಪದ್ಮಪಾಣಿ ಕಥಾ ಸಂಕಲನದಲ್ಲಿ ಚರಿತ್ರೆಯ ಹಿಂದಿರುವ ಕಟು ಸತ್ಯಗಳನ್ನು ಸಮರ್ಥಿಸುತ್ತಾ (ಇಲ್ಲಿ ಅವರು ಅಧ್ಯಯನ ಮಾಡಿರುವ ಆಕರ ಗ್ರಂಥಗಳ ಬಗ್ಗೆಯೂ ತಿಳಿಸಿದ್ದಾರೆ) ಕಥೆಯನ್ನು ಬಿಚ್ಚಿಡುತ್ತಾರೆ. ಅಜಂತಾದ ಗುಹೆಗಳಲ್ಲಿಯ ವೈಶಿಷ್ಟ್ಯವನ್ನು ‘ಪದ್ಮಪಾಣಿ’ ಕಥೆಯ ಮೂಲಕ ಬಹಳ ವಾಸ್ತವಿಕವಾಗಿ ಹೇಳುತ್ತಾರೆ.

‘ಕೆರಳಿದ ಕರುಳು’ ಕಥೆಯಲ್ಲಿ ದಂತಕತೆಯಾಗಿರುವ ಪಾಲುಕ್ಕಮ್ಮ ದೇವತೆಯ ಹಿನ್ನಲೆಯನ್ನಾಧರಿಸಿ, ಆಕೆಗೆ ಆಗಿರುವ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಹೆಣ್ಣೊಬ್ಬಳ ಚಿತ್ರಣವಿದೆ. ಕೇವಲ ಜಾನಪದ ಹಾಡಿನ ದಾಟಿಯನ್ನು ಹಿಡಿದು ಕಥೆಯೊಂದನ್ನು ಹೆಣೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಮೈಸೂರಿನ ಅರಸರಿಗೆ ಮಕ್ಕಳಿಲ್ಲ ಅನ್ನುವ ಕುರಿತು ಸಂಶೋಧನೆಗಿಳಿದು ಅವರಿಗಿರುವ ಶಾಪದ ಹಿನ್ನಲೆಯನ್ನು ಅರಿತು ಅದನ್ನು ವೈಜಾನಿಕವಾಗಿ ಸಮರ್ಥಿಸುವ ಕಥೆ ‘ಮರಳ ತೆರೆಯೊಳಗೆ’. ಕಥೆಗಳಿಗೆ ಪೂರಕವಾದ ಚಿತ್ರಗಳನ್ನು ಒಳಗೊಂಡಿರುವ ಈ ಸಂಕಲನದ ಇನ್ನೊಂದು ಕಥೆ ‘ಕಿತ್ತೂರ ನಿರಂಜನಿ’. ಕಿತ್ತೂರನ್ನು ಆಳಿದ ೧೪ ರಾಜ ವಂಶದ ಹೆಸರುಗಳಲ್ಲಿ ೯ನೇಯ ರಾಜನ ಹೆಸರು ಮಾಳವ ರುದ್ರ ಗೌಡ ಉರ್ಫ್ ಫಕೀರರುದ್ರಸರ್ಜ ಒಂದು ಮುಸ್ಲಿಂ ಹೆಸರಿನಂತಿದ್ದು ಅದರ ಜಾಡಿನಲ್ಲಿ ಸಾಗುವ ಕಥೆ. ಬಹಳ ಕುತೂಹಲ ಮತ್ತು ಅಷ್ಟೇ ದುರಂತವಾಗಿರುವುದು ವಿಷಾದನೀಯ.

ಬೇಲೂರಿನ ಶಿಲಾಬಾಲಿಕೆಯರಿಗೆ ಮನಸೋಲದವರು ಯಾರು ಇಲ್ಲ. ಇಲ್ಲಿಯ ಆ ಶಿಲಾಬಾಲಿಕೆಯರ ಕೆತ್ತನೆಯ ಹಿಂದೆ ಒಂದು ದೀರ್ಘ ಕಥೆಯಿರುವುದು ಸೋಜಿಗ. ಇಲ್ಲಿಯ ಶಿಲಾ ಕೆತ್ತನೆಗೆ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲೆಯೇ ರೂಪದರ್ಶಿನಿಯಾಗಿದ್ದಳೆ? ಅನ್ನುವುದು ಕೌತುಕ. ವಿಷ್ಣುವರ್ಧನ ಜೈನ ಧರ್ಮವನ್ನು ತ್ಯಜಿಸಿ ವೈಷ್ಣವ ಧರ್ಮಸ್ವೀಕಾರ ಮಾಡಿದರೂ ಶಾಂತಲೆ ಜೈನಧರ್ಮದಲ್ಲಿದ್ದುಕೊಂಡೇ ಚವಣ ಮತ್ತು ಆತನ ತಂದೆ ದಾಸೋಜರಿಂದ ತನ್ನ ಹುಟ್ಟೂರಾದ ಬಳ್ಳಿಗಾವೆಯಿಂದಲೇ ಮದನಿಕೆಯರ ಪ್ರತಿಮೆಗಳನ್ನು ಮಾಡಿ ಬೇಲೂರಿಗೆ ತರಲಾಗುತ್ತಾದರೂ ಅದರ ಹಿನ್ನಲೆಯನ್ನು ತಿಳಿದುಕೊಳ್ಳುವಲ್ಲಿ ವಿಷ್ಣುವರ್ಧನ ಆಸಕ್ತನಾಗುತ್ತಾನೆ. ಮದನಿಕೆಗಳ ಹಿಂದೆ ಶಾಂತಲೆಯದೇ ನಾಟ್ಯ ಭಂಗಿಗಳಿರುವುದು ಸ್ಪಷ್ಟವಾಗುತ್ತದೆ. ದುರಂತದಲ್ಲಿಯೇ ಕಥೆ ಮುಗಿಯುತ್ತದೆಯಾದರೂ ಬಿಚ್ಚಿಕೊಳ್ಳುವ ಕಥೆ ಅಪೂರ್ವವೆನಿಸುತ್ತದೆ.

‘ಧರ್ಮಸ್ಥಂಭ’, ಸಾಂಚಿಯಲ್ಲಿರುವ ಅರ್ಧ ಮುರಿದ ಕಂಭದ ಹಿಂದಿರುವ ದುರಂತ ಕಥೆಯೊಂದನ್ನು ಬಿಚ್ಚಿಡುತ್ತದೆ. ಬೌದ್ಧ ಧರ್ಮದ ವೈಚಾರಿಕತೆ ಮತ್ತು ತಾತ್ವಿಕ ಚಿಂತನೆಗಳನ್ನು ಸೂಕ್ಷ್ಮವಾಗಿ ವಾದಿಸುತ್ತಾ ಮಾದ್ರಿಯ ಮಾತುಗಳ ಮೂಲಕ ಸಮರ್ಥಿಸುತ್ತಾ ಸಾಗುವ ಕಥೆ ಎಂತಹವರನ್ನು ಒಮ್ಮೆ ಚಿಂತನೆಗೆ ಹಚ್ಚುತ್ತದೆ.

‘ಅತ್ತಿಯ ಮರ ಹೂಬಿಡುವುದಿಲ್ಲ, ಬಿಟ್ಟರೂ ರಾತ್ರಿಯ ಹೊತ್ತು ಅರಳುತ್ತದೆ’ ಇದು ನಾವು ಸಣ್ಣವರಿದ್ದಾಗ ಕೇಳಿದ ಮಾತುಗಳು. ಅದರ ವೈಜಾನಿಕ ಸತ್ಯ ‘ಮಲಬಾರ್ ೦೭’ ಕಥೆಯ ಮೂಲಕ ತಿಳಿಯುತ್ತದೆ. ವಿಚಿತ್ರ ಅಂದರೆ ಅತ್ತಿಯ ಕಾಯಿಯ ಒಳಗಡೆಯೇ ಹೂವಿದ್ದು ಪರಾಗ ಕ್ರಿಯೆ ನಡೆಸಲು ಒಂದು ರೀತಿಯ ಕಣಜ ಕಾಯಿಯಲ್ಲಿರುವ ತೂತಿನ ಮೂಲಕ ಒಳಹೊಕ್ಕು, ಅಲ್ಲಿಯೇ ಮೊಟ್ಟೆಗಳನ್ನಿಡುತ್ತದೆ. ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪರಿಸರ ನಾಶಗೊಳಿಸುವ ಅಮೆರಿಕದ ತಂತ್ರವನ್ನು ವಿಫಲಗೊಳಿಸುವ ಕಥೆಯಿದು. ಇದೇ ರೀತಿ ‘ಉಗ್ರಬಂಧ’ ಕಥೆಯಲ್ಲಿ ವಿಕಾಸವಾದದ ಹೊಸ ತತ್ವ ತಾಯಿ ಮಕ್ಕಳ ಕಲಹ (Parent- Offspring Conflict) ಅನ್ನು ಪ್ರತಿಪಾದಿಸಿ ಮನುಷ್ಯ ಸಂಬಂಧಗಳನ್ನು ಜಾತೀಯತೆಯ ಚೌಕಟ್ಟನ್ನು ಮೀರಿ ಪ್ರಸ್ತುತ ಪಡಿಸುತ್ತದೆ.

ಇಂತಹ ಅಪರೂಪದ ಸಾಹಿತ್ಯವನ್ನು ಕೊಡುತ್ತಿರುವ ಡಾ. ಗಣೇಶಯ್ಯ ಅವರ ಕೃತಿಗಳನ್ನು ಓದಲೆಬೇಕು ಮತ್ತು ಅವರ ಸಾಹಿತ್ಯ ಕೃಷಿಯನ್ನು ಮೆಚ್ಚಲೇಬೇಕು. ಈ ಕೃತಿಯನ್ನು ಅಂಕಿತ ಪುಸ್ತಕದವರು ಹೊರ ತಂದಿದ್ದಾರೆ. ಇದರ ಬೆಲೆ ಕೇವಲ ರು. ೧೨೦/- ಮಾತ್ರ.

Read more!

Wednesday, June 2, 2010

ರಸವಿದ್ಯೆಯ ಪಥದಲ್ಲಿ ವ್ಯಕ್ತಿ ವಿಕಾಸದ ಸೂತ್ರ - ದ ಅಲ್ಕೆಮಿಸ್ಟ್


ರಸವಿದ್ಯೆಯಿಂದ ವಸ್ತುಗಳನ್ನು ಚಿನ್ನವಾಗಿಸುವ ತಂತ್ರವನ್ನು ಕಲಿಯುವುದಕ್ಕಿಂತಲೂ ನಮ್ಮ ನಡುವೆ ಘಟಿಸುವ ಆಗು ಹೋಗುಗಳನ್ನು ಅಧ್ಯಯನ ಮಾಡುತ್ತಾ ಬಂದರೆ ಅದಕ್ಕಿಂತಲೂ ಉತ್ತಮವಾದ ಜೀವನಾನುಭವ ಬೇರೊಂದಿಲ್ಲ ಅನ್ನುವ ಸಂದೇಶವನ್ನು ಪರೋಕ್ಷವಾಗಿ ತೆರೆದಿಡುವ ಪೌಲೋ ಕೊಯೆಲ್ಹೋ ಅವರ ಕಾದಂಬರಿ ‘ದ ಅಲ್ಕೆಮಿಸ್ಟ್’

ಮನುಷ್ಯ ತನ್ನ ಆತ್ಮದ ಜೊತೆಗೆ ಸಂಭಾಷಿಸುತ್ತಾ, ಜೀವನಾನುಭವಗಳನ್ನು ಪರಾಮರ್ಶಿಸುತ್ತಾ, ತನ್ನೊಳಗೆ ಅವುಗಳೆಲ್ಲವನ್ನೂ ಮಂಥಿಸುತ್ತಾ ಮುನ್ನಡೆದರೆ ಅವನು ಎಲ್ಲರಿಗೂ ತಿಳಿಯುವ ಮತ್ತು ಎಲ್ಲರನ್ನೂ ಅರ್ಥೈಸಿಕೊಳ್ಳಬಹುದಾದ ವಿಶ್ವ ಭಾಷೆಯನ್ನು ಕಲಿಯಬಹುದೆಂದು ಸಾರುತ್ತಾನೆ ಕಾದಂಬರಿಕಾರ. ಇಲ್ಲಿ ವಿಶ್ವ ಭಾಷೆಯನ್ನು ಅರಿತರೆ ಮೂಕ ಪ್ರಾಣಿಗಳು ಮಾತ್ರವಲ್ಲ, ನಿರ್ಜೀವ ವಸ್ತುಗಳನ್ನೂ ಅರ್ಥ ಮಾಡಿಕೊಳ್ಳಬಹುದೆನ್ನುವ ಸತ್ಯದ ಅನಾವರಣವಾಗುತ್ತದೆ."

ಈ ಕಾದಂಬರಿಯಲ್ಲಿ ಪಾದ್ರಿಯಾಗಲೆಂದು ಹೊರಟ ಹುಡುಗ ಸ್ಯಾಂಟಿಯಾಗೋ ವಿಶ್ವ ಪರ್ಯಟನೆ ಮಾಡಬೇಕೆನ್ನುವ ಹಂಬಲದಿಂದ ತನ್ನ ತಂದೆಯ ಬಳಿ ವಾದ ಮಾಡಿ ಅವರಿಂದ ಚಿನ್ನದ ನಾಣ್ಯಗಳನ್ನು ಪಡೆದುಕೊಂಡು, ‘ಒಬ್ಬ ಕುರುಬನಾದರೆ ಮಾತ್ರ ದೇಶ ಸಂಚಾರ ಮಾಡಬಹುದು’ ಎನ್ನುವ ತಂದೆಯ ಮಾತಿನಂತೆ ಕುರಿಗಳನ್ನು ಕೊಂಡುಕೊಂಡು ಸಂಚಾರ ಆರಂಭಿಸುತ್ತಾನೆ. ಎಲ್ಲರಿಗೂ ಅರ್ಥವಾಗುವ ವಿಶ್ವ ಭಾಷೆ ಅಂದರೆ ತಿಳುವಳಿಕೆಯ ಜ್ಞಾನವನ್ನು ಪಡೆದುಕೊಂಡು ಬದುಕುತ್ತಿರುವ ಹೊತ್ತಿಗೆ ಕನಸೊಂದನ್ನು ಕಾಣುತ್ತಾನೆ. ಒಂದು ಮಗು ಆತನನ್ನು ಕರೆದುಕೊಂಡು ಪಿರಮಿಡ್ನ ಬಳಿ ನಿಲ್ಲಿಸಿದಂತೆ ಆ ಕನಸು. ಅದೇ ಮತ್ತೊಮ್ಮೆ ಕಾಣಿಸಿದಾಗ ಆ ಹುಡುಗ ತಾನು ಕಂಡ ಕನಸಿನ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಹೀಗೆ ಆ ಕನಸಿನ ಅರ್ಥ, ಪಿರಮಿಡ್ನ ಬಳಿ ಇರುವ ಗುಪ್ತ ನಿಧಿಯ ಕುರಿತಾಗಿದೆ ಅನ್ನುವ ಅಭಿಪ್ರಾಯ ತಿಳಿದ ಬಳಿಕ ಈಜಿಪ್ಟನ್ನು ಸೇರುವ ತುಡಿತದಿಂದ ಆತನ ಪ್ರಯಾಣ ಮುಂದುವರಿಯುತ್ತದೆ. ತನ್ನ ಮಾಮೂಲು ವಾಸಸ್ಥಾನವಾದ ಪಾಳು ಬಿದ್ದ ಚರ್ಚ್ನಿಂದ ಆತನ ಪ್ರಯಾಣ ಆರಂಭವಾಗುತ್ತದೆ. ತನ್ನ ಕುರಿಗಳಿಂದ ತಾನು ವಿಶ್ವ ಭಾಷೆಯನ್ನು ಕಲಿತಿರುವೆಂದು ತಿಳಿಯುವ ಹುಡುಗ, ಬಳಿಕ ತನ್ನ ಹೃದಯದ ಪಿಸುನುಡಿಗಳನ್ನು ಆಲಿಸುವ ಮೂಲಭೂತ ವಿವೇಕವನ್ನು, ಜೀವನ ಪಥದಲ್ಲಿ ಹರಡಿರುವ ಶಕುನಗಳನ್ನು ಗುರುತಿಸುವ ಮತ್ತು ತನ್ನ ಕನಸನ್ನು ಸಾಕಾರಗೊಳಿಸುವುದನ್ನೂ ಅರಿತುಕೊಳ್ಳುತ್ತಾನೆ.

ತನ್ನ ಪ್ರಯಾಣಕ್ಕೆ ಅಣಿಗೊಂಡ ಹುಡುಗ ಕುರಿಗಳನ್ನು ಮಾರಿ ಆ ಹಣವನ್ನು ಭದ್ರವಾಗಿಟ್ಟುಕೊಂಡು ಹೊರಡುತ್ತಾನಾದರೂ ಒಬ್ಬ ನಯವಂಚಕನಿಂದ ಅದನ್ನು ಕಳೆದುಕೊಳ್ಳುತ್ತಾನೆ. ಮುಂದೆ ದಾರಿ ಕಾಣದೆ ಒಬ್ಬ ಬೇಕರಿಯವನ ಬಳಿ ಕೆಲಸ ಮಾಡಿ ಆ ದಿನದ ಹೊಟ್ಟೆಯ ಹಸಿವನ್ನು ನೀಗಿಕೊಂಡು ಮುಂದುವರಿಯುವಾಗ ಅವನಿಗೆ ಕ್ರಿಸ್ಟಲ್ ವ್ಯಾಪಾರಿಯ ಪರಿಚಯವಾಗುತ್ತದೆ. ಅಲ್ಲಿ ವ್ಯಾಪಾರಿಯ ಏಕತಾನತೆಯ ಬದುಕಿಗೆ ಹೊಸ ಆಲೋಚನೆಗಳನ್ನು ಕೊಟ್ಟು ಶ್ರೀಮಂತನನ್ನಾಗಿಸುತ್ತಾನೆ. ಜೊತೆಗೆ ತಾನೂ ಹಣ ಗಳಿಸುತ್ತಾನೆ. ಆ ಯೋಚನೆಯ ಮುಖ್ಯ ಗುರಿ ಆ ದಾರಿಯಲ್ಲಿ ಮೆಕ್ಕಾದತ್ತ ಪ್ರಯಾಣ ಮಾಡುವವರಿಗೆ ಕ್ರಿಸ್ಟಲ್ನ ಲೋಟಗಳಲ್ಲಿ ಚಹಾದ ಸರಬರಾಜು. ಇದನ್ನು ವ್ಯಾಪಾರಿ ನಿರಾಕರಿಸಿದರೂ ಹುಡುಗ, ‘ಗಂಡಸರ ಮನಸನ್ನು ಆಕರ್ಷಿಸುವಲ್ಲಿ ಸೌಂದರ್ಯವನ್ನು ಬಿಟ್ಟರೆ ಮತ್ತೊಂದಿಲ್ಲ’ ಅನ್ನುವ ವಾಸ್ತವದ ಸತ್ಯವನ್ನು ತಿಳಿಸಿದ ಬಳಿಕ ಆತ ಒಪ್ಪಿಕೊಳ್ಳುತ್ತಾನೆ. ಆ ಹಣ ತನಗೆ ಮತ್ತೆ ಕುರಿ ಮಂದೆಯನ್ನು ಹೊಂದುವುದಕ್ಕಾಗಿ ಎಂದು ಯೋಚಿಸಿದರೂ, ಅವನ ಆಂತರ್ಯದಲ್ಲಿರುವುದು ಗುಪ್ತನಿಧಿಯ ಬೇಟೆಗೆ ತೊಡಗಿಕೊಳ್ಳುವುದು ಮಾತ್ರ. ಆ ಕನಸೇ ಅವನನ್ನು ಕಳೆದುಕೊಂಡಿರುವ ಹಣವನ್ನು ಮತ್ತೊಮ್ಮೆ ಗಳಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆಗಲೇ ಗಾಳಿಯ ಈರ್ಷ್ಯೆಯನ್ನು ಕಂಡು ಹುಡುಗ ತಾನೂ ಅಷ್ಟೇ ಸ್ವತಂತ್ರನಾಗುವುದಕ್ಕೆ ಬಯಸುತ್ತಾನೆ.

ತನ್ನ ಪ್ರಯಾಣದ ಆದಿಯಲ್ಲಿ ಆತ ವೃದ್ಧನೊಬ್ಬನನ್ನು ಭೇಟಿಯಾಗಿರುತ್ತಾನೆ. ಆತ ‘ಪ್ರಿನ್ಸಿಪಲ್ ಅಫ್ ಫೆವರೆಬಿಲಿಟಿ’ ಅಂದರೆ ಆರಂಭಿಕ ಅದೃಷ್ಟದ ಬಗ್ಗೆ ತಿಳಿಸುತ್ತಾನೆ. ಅದೃಷ್ಟ ನಮ್ಮ ಕಡೆಗಿರುವಾಗ ಅದರ ಲಾಭವನ್ನು ಪಡೆದುಕೊಳ್ಳಬೇಕು. ನಮಗೆ ಎಷ್ಟು ಸಾಧ್ಯವೋ ಅಷ್ಟು ಅದು ನೆರವೇರಲು ಅನುವುಮಾಡಿಕೊಡಬೇಕು. ಇದು ಆರಂಭಿಕ ಅದೃಷ್ಟದ ನಿಯಮ. ಈ ನಿಯಮವನ್ನು ತಿಳಿದುಕೊಂಡ ಹುಡುಗ ತನ್ನ ಕನಸುಗಳನ್ನು ನನಸಾಗಿಸುವಲ್ಲಿ ಮುಂದುವರಿಯುತ್ತಾನೆ. ಆದರೆ ಕ್ರಿಸ್ಟಲ್ ವ್ಯಾಪಾರಿ ಹೇಳಿದ ಮಾತು ಅವನನ್ನು ಮತ್ತೊಮ್ಮೆ ಆಲೋಚಿಸುವಂತೆ ಮಾಡುತ್ತದೆ. ಒಮ್ಮೆ ಕನಸು ನನಸಾಗಿ ಬಿಟ್ಟರೆ ಮುಂದೆ ಜೀವಿಸಲು ಬೇರೆ ದಾರಿಯಿರುವುದಿಲ್ಲವೆನ್ನುವ ಮಾತು ಅದು.

ಕೊನೆಗೂ ಮರುಭೂಮಿಯ ದಾರಿ ಹಿಡಿದ ಹುಡುಗ ಕ್ಯಾರವಾನ್ನಲ್ಲಿ ಸಾಗುತ್ತಿರುವಾಗ ಒಬ್ಬ ಇಂಗ್ಲಿಷ್ನವನ ಪರಿಚಯವಾಗುತ್ತದೆ. ಅವನಿಂದ ‘ರಸವಿದ್ಯೆ’ಯ ಬಗ್ಗೆ ತಿಳಿದುಕೊಳ್ಳುತ್ತಾನೆ. ಅವನಿಂದ ಪ್ರೇರಿತನಾಗಿ ವಿಶ್ವ ಭಾಷೆಯನ್ನೇ ಅರಿತಿರುವ ಆತ ಎಲ್ಲವನ್ನೂ ಆತ್ಮವಿಮರ್ಶೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತಾ, ‘ಈಂಟ್ಯೂಜನ್ ಅಂದರೆ ಅಂತರದೃಷ್ಟಿ ಎಂಬುವುದು ವಾಸ್ತವದಲ್ಲಿ ಸಾರ್ವತ್ರಿಕ ಜೀವನಧಾರೆಯಲ್ಲಿ ಆತ್ಮದ ಹಠಾತ್ ಮುಳುಗುವಿಕೆ’ ಎಂದು ತಿಳಿಯುತ್ತದೆ. ತಮ್ಮ ಅವಶ್ಯಕತೆಗಳನ್ನು, ಅಗತ್ಯತೆಗಳನ್ನು ಪಡೆಯುವ ಸಾಮರ್ಥ್ಯವಿದ್ದವರು ಅಜ್ಞಾತದ ಬಗ್ಗೆ ಹೆದರಬೇಕಾಗಿಲ್ಲ ಅನ್ನುವ ಸತ್ಯದ ಅರಿವಾದ ಹುಡುಗ ಮರುಭೂಮಿಯ ಭೀಕರತೆಯ ಬಗ್ಗೆ ಹೆದರದೆ ತನ್ನ ಗಮ್ಯ ತಲುಪುವುದರ ಕಡೆಗೆ ಗಮನ ಕೊಡುತ್ತಾನೆ. ಬದುಕಿನಲ್ಲಿ ಉನ್ನತಿ ಅಥವಾ ಸುಧಾರಣೆಯೆಂದರೆ ರಸವಿದ್ಯೆಯ ಭಾಷೆಯಲ್ಲಿ ಅದು ಪ್ರಪಂಚದ ಆತ್ಮ. ನಾವು ಏನನ್ನಾದರೂ ಹೃದಯಾಳದಿಂದ ಬಯಸಿದಾಗ ಪ್ರಪಂಚದ ಆತ್ಮಕ್ಕೆ ಬಹಳ ಹತ್ತಿರವಾಗಿರುತ್ತೇವೆ. ಇದು ಸಕಾರಾತ್ಮಕ ಶಕ್ತಿ. ಎಲ್ಲಾ ವಿಷಯಗಳ ಹಿಂದೆ ಇರುವುದು ಇದೇ ಸೂತ್ರ.

ಹೀಗೆ ಮರುಭೂಮಿಯ ಪ್ರಯಾಣದಲ್ಲಿ ರಸವಿದ್ಯಾ ಪ್ರವೀಣನನ್ನು ಹುಡುಕುತ್ತಿರುವಾಗ ಫಾತೀಮಾ ಅನ್ನುವ ಹುಡುಗಿಯ ಮೋಹಕ್ಕೆ ಒಳಗಾಗುತ್ತಾನೆ ಹುಡುಗ. ತನ್ನ ನಿಧಿ ಇರುವುದು ಈಜಿಪ್ಟ್ನ ಪಿರಮಿಡ್ನಲ್ಲಿ ಅಲ್ಲ, ಅದು ಈ ಫಾತೀಮಾ ಅನ್ನುವ ಹುಡುಗಿಯಲ್ಲಿ ಎಂದು ತಿಳಿಯುವ ಅವನಿಗೆ, ನಾವು ಅತೀತದಲ್ಲಾಗಲಿ ಭವಿಷ್ಯದಲ್ಲಾಗಲಿ ಜೀವಿಸುತ್ತಿಲ್ಲ. ವರ್ತಮಾನದ ಬಗ್ಗೆ ಗಮನವನ್ನು ಕೇಂದ್ರಿಕರಿಸಿದಾಗ ನಾವು ಸಂತಸದಿಂದಿರಬಹುದು ಅನ್ನುವುದು ಮನದಟ್ಟಾಗುತ್ತದೆ. ಹುಡುಗಿಯ ಗುಂಗಿನಲ್ಲಿ ತನ್ನ ನಿಧಿ ಹುಡುಕಾಟದ ಕಾರ್ಯವನ್ನೇ ಮರೆತು ಅವಳಲ್ಲಿ ಅನುರಕ್ತನಾಗುತ್ತಾನೆ.

‘ಮನುಷ್ಯನ ಬಾಯಿಯೊಳಗೆ ಏನು ಪ್ರವೇಶಿಸುತ್ತದೋ ಅದು ಕೆಟ್ಟದ್ದಲ್ಲ, ಆದರೆ ಅದರಿಂದ ಏನು ಹೊರಗೆ ಬೀಳುವುದೋ ಅದು ಕೆಟ್ಟದ್ದು’ ಎನ್ನುವ ರಸಜ್ಞನ ಮಾತನ್ನು ಮೆಚ್ಚಿಕೊಂಡ ಹುಡುಗ ಮತ್ತೆ ಪ್ರಯಾಣ ಮುಂದುವರಿಸಿ ಹೇಗೂ ಓಯಸಿಸ್ ತಲುಪುತ್ತಾನೆ. ಅಲ್ಲಿ ಅಪಾಯಕ್ಕೆ ಸಿಲುಕಿ ತನ್ನಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡು ನಿರಾಶನಾಗುತ್ತಾನೆ. ಆದರೆ ರಸಜ್ಞನ ಚಾಕಚಕ್ಯತೆಯಲ್ಲಿ ಚಿನ್ನವನ್ನು ಪಡೆದುಕೊಂಡು ಪಿರಮಿಡ್ ತಲುಪಿ ತನ್ನ ನಿಧಿಗಾಗಿ ಶೋಧನೆ ನಡೆಸುತ್ತಾನೆ. ನಿಧಿಯ ಸ್ಥಳ ನಿರ್ದಿಷ್ಟವಾದಾಗ ಅಗೆತ ಆರಂಭಿಸುತ್ತಾನೆ. ಅಲ್ಲಿಯೂ ತನ್ನ ಬಳಿಯಿದ್ದ ಚಿನ್ನವನ್ನು ಕಳೆದುಕೊಂಡು ಅಸ್ವಸ್ಥನಾಗಿ ಬಿಡುತ್ತಾನೆ. ಅವನಿಂದ ವಿಷಯ ತಿಳಿದ ದರೋಡೆಕಾರರು ಕೂಡ ಇಂತಹುದೆ ನಿಧಿ ಪಾಳು ಬಿದ್ದ ಚರ್ಚ್ನ ಬಳಿಯಿದೆಯೆಂದು ಕೇಳಿದರೂ ಅವನ ಹಾಗೆ ನಿಧಿಯನ್ನು ಹುಡುಕಿಕೊಂಡು ಹೋಗಿ ಮೂರ್ಖರಾಗದೆ ಉಳಿದ್ದಿದ್ದೇವೆ ಎಂದು ಹೇಳುವಾಗ ನಿಧಿ ಇರುವುದು ಈಜಿಪ್ಟಿನ ಪಿರಮಿಡ್ನಲ್ಲಿ ಅಲ್ಲ, ತಾನು ಕುರಿಗಳ ಜೊತೆಗೆ ಹಾಯಾಗಿದ್ದ ಪಾಳು ಚರ್ಚ್ನಲ್ಲಿಯೇ ಇದೆ ಎಂದು ಅರಿತ ಅವನು ಅಲ್ಲಿಗೆ ಬಂದು ಅದನ್ನು ಪಡೆಯುತ್ತಾನೆ.

ಸುದೀರ್ಘ ಪಯಣದಲ್ಲಿ ಹುಡುಗ ಬದುಕಿನ ಕ್ಲಿಷ್ಟತೆ, ವಿಶ್ವ ಭಾಷೆ, ಅಂತರ ದೃಷ್ಟಿಯಿಂದ ಪ್ರಪಂಚದ ಆತ್ಮದ ಜೊತೆಗೆ ಸಂವಾದ ಮಾಡುತ್ತಾನೆ. ಈ ರೀತಿ ಜೀವನವನ್ನು ಶಾಶ್ವತವಾಗಿ ಬದಲಾಯಿಸುವ ನಿಯಮಗಳನ್ನು, ಸರ್ವಕಾಲಿಕವಾಗಿ ಒಪ್ಪಿಕೊಳ್ಳುವ ಸತ್ಯ ಸಂಗತಿಗಳನ್ನು ಚೆನ್ನಾಗಿ ವಿವರಿಸುವ ಈ ಕೃತಿಯನ್ನು ಓದಲೇಬೇಕು.

ಈ ಕಾದಂಬರಿಯನ್ನು ಅನುವಾದಿಸಿರುವವರು ಕಿರಣ್ ಕುಮಾರ್ ಟಿ. ಪಿ. ಬೆಂಗಳೂರಿನ ಅನುಭವ ಪ್ರಕಾಶನದವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಇದರ ಬೆಲೆ ರೂ. ೬೦ ಮಾತ್ರ.

Read more!

Saturday, May 22, 2010

ಸಾಮಾಜಿಕ ಸ್ಥಿತ್ಯಂತರಗಳ - ಅನಿಕೇತನ



‘ಅನಿಕೇತನ’ ಬಿ. ಜನಾರ್ಧನ ಭಟ್ ಅವರ ಮೂರನೆಯ ಕಾದಂಬರಿ. ‘ಉತ್ತರಾಧಿಕಾರ’ ಮತ್ತು ‘ಹಸ್ತಾಂತರ’ ಕಾದಂಬರಿಗಳಂತೆ ‘ಅನಿಕೇತನ’ ಕಾದಂಬರಿಯ ಘಟನೆಗಳು ನಡೆಯುವುದು ನಡುಕಣಿ ಅನ್ನುವ ಗ್ರಾಮವೊಂದರಲ್ಲಿ. ಹಿಂದಿನ ಎರಡು ಕಾದಂಬರಿಗಳಂತೆ ಇದು ಕೂಡ ಸಮಾಜವೊಂದರ ಸ್ಥಳಾಂತರ ಮತ್ತು ಆ ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಪಲ್ಲಟವನ್ನು ದಾಖಲಿಸುತ್ತದೆ. ಸಂಸ್ಕೃತಿಯ ನಾಶವನ್ನು ಪರಿಸರ ನಾಶದ ಮೂಲಕ ಪ್ರತಿಬಿಂಬಿಸುತ್ತಾ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಕೃತಿಕ ವಿನಾಶವನ್ನು ಸೂಕ್ಷಮವಾಗಿ ತೆರೆದಿಡುತ್ತಾ ನಡುಕಣಿ ಗ್ರಾಮ ನೆಹರೂನಗರವಾಗಿ ಪರಿವರ್ತಿತವಾಗುವುದನ್ನು ತೋರಿಸುತ್ತದೆ.

ಉತ್ತರಾಧಿಕಾರದಂತೆ ಇಲ್ಲಿಯೂ ಮೂರು ತಲೆಮಾರುಗಳಲ್ಲಿ ನಡೆಯುವ ಘಟನೆಗಳನ್ನು ನಮ್ಮ ಮುಂದೆ ಸುಬ್ರಾಯ ಸರಳಾಯರು, ಮಧುಸೂದನ ಸರಳಾಯರು ಮತ್ತು ಕೇಶವ ಪಾತ್ರಗಳ ಮೂಲಕ ಪ್ರತಿಬಿಂಬಿಸುತ್ತದೆ ಈ ಅನಿಕೇತನ.

ಪಟ್ಟಣದಲ್ಲಿದ್ದು ಹೊಟೇಲು ನಡೆಸುವ ಉದ್ದೇಶದಿಂದ ಹಳ್ಳಿಗೆ ಬರುವ ಮಧುಸೂದನ ಸರಳಾಯರ ಸಂಸಾರಕ್ಕೆ ಬಂಧನದ ಅನುಭವವಾಗುತ್ತದೆ. ಹಿರಿಯ ಮಗ ಕೇಶವನಿಗೆ ತನ್ನ ಓದಿನ ಜೊತೆಗೆ ಜವಾಬ್ದಾರಿಗಳ ಹೊರೆಯೂ ಇರುತ್ತದೆ. ಆದರೂ ಅಲ್ಲಿಯ ಪರಿಸ್ಥಿತಿಗೆ ಒಗ್ಗಿಕೊಂಡು ಪಲಾಯನ ಮಾಡದೆ ಪ್ರತಿಯೊಂದು ತೊಂದರೆಗಳನ್ನು ಎದುರಿಸುತ್ತಾ ಸಾಗುತ್ತದೆ ಮಧು ಭಟ್ಟರ ಸಂಸಾರದ ರಥ.

ಊರಿನಲ್ಲಿ ವ್ಯವಹಾರಗಳ ನಡುವೆ ಬಲಾಬಲಗಳ ಪ್ರಯೋಗ ಸೇರಿ, ರಾಘವ ಸೇನರು ಮಾರ್ಮಾರ್ ದಣಿಗಳ ಎದುರಾಳಿಯಾಗಬೇಕಾಗುತ್ತದೆ. ಕ್ಷುಲ್ಲಕ ವಿಷಯಗಳಿಗೆ ಈಡಾಗಿ ಎರಡು ಗುಂಪುಗಳು ಹುಟ್ಟಿಕೊಂಡು ವಿನಾಶದ ದಾರಿಗೆ ನಾಂದಿಯಾಗುವುದನ್ನು ತಿಳಿಸುವ ಈ ಕಾದಂಬರಿಯಲ್ಲಿ ನಡೆಯುವ ವಿದ್ಯಮಾನಗಳೆಲ್ಲಾ ಅರವತ್ತು ಎಪ್ಪತ್ತರ ದಶಕದಲ್ಲಿ ನಡೆಯುವಂತದ್ದೆನ್ನುವುದನ್ನು ಗಮದಲ್ಲಿರಿಸಿಕೊಳ್ಳಬೇಕಾಗುತ್ತದೆ. ಮಧ್ಯೆ ಎಲ್ಲೋ ಹಠಾತ್ತನೆ ಇತ್ತೀಚಿನ ಘಟನೆಗಳನ್ನು ಕಾದಂಬರಿ ಒಳಗೊಂಡಂತೆ ಕಂಡರೂ, ಅವು ಆಗಿನ ಕಾಲದಲ್ಲಿಯೂ ಇದ್ದವುಗಳೇ ಈಗಲೂ ಮುಂದುವರಿಯುತ್ತಿವೆ ಅನ್ನುವುದು ಸತ್ಯವೆನಿಸುತ್ತದೆ.

ಕಾದಂಬರಿ ಆರಂಭವಾಗುವುದು ಕೇಶವ ಹದಿನೈದು ವರ್ಷಗಳ ಬಳಿಕ ತನ್ನ ಊರಾದ ನಡುಕಣಿಗೆ ಬರುವಲ್ಲಿಂದ. ಅಲ್ಲಿಯ ಬದಲಾವಣೆಗಳು ಅವನನ್ನೇ ಗೊಂದಲಕ್ಕೆ ಸಿಲುಕಿಸಿ, ಧುತ್ತನೆ ಫ್ಲ್ಯಾಶ್ ಬ್ಯಾಕಿಗೆ ಓದುಗನನ್ನು ಕೊಂಡೊಯ್ಯುತ್ತದೆ. ಅದೇ ಸನ್ನಿವೇಶ, ಕಥನಕ ಸ್ವಲ್ಪ ವಿಭಿನ್ನವಾಗಿ ಘಟಿಸುತ್ತಾ ಆಗಿನ ಆಗು ಹೋಗುಗಳನ್ನು ತಿಳಿಸುತ್ತದೆ ಇಲ್ಲಿನ ಕಥಾ ವಸ್ತು.

ಫ್ಲ್ಯಾಶ್ ಬ್ಯಾಕ್‌ನಲ್ಲಿ ಮಧುಸೂದನ ಭಟ್ಟರು ತನ್ನ ತಂದೆ ಸುಬ್ರಾಯ ಭಟ್ಟರು ಅರ್ಚಕರಾಗಿ ಸೇವೆಸಲ್ಲಿಸುತ್ತಿದ್ದ ಮಹಾಲಿಂಗೇಶ್ವರ ದೇವಸ್ಥಾನವಿದ್ದ ನಡುಕಣಿಗೆ ಬಂದರೂ ಅಲ್ಲಿ ನೆಲೆನಿಲ್ಲುವುದಕ್ಕೂ ತಾತ್ವಾರ ಪಡಬೇಕಾಗುತ್ತದೆ. ಸರಳ, ಮುಗ್ಧತೆಯ ಸ್ವಭಾವದ ಅವರಿಗೆ ಮುಕುಂದ ಭಟ್ಟರಿಗೆ ವಿರುದ್ಧವಾಗಿ ತಾನು ಹೊಟೇಲು ಆರಂಭಿಸುತ್ತಿದ್ದೇನೆ ಅನ್ನುವ ಅಳುಕಿದ್ದರೂ ಬದುಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಅದನ್ನು ಮಾರ್ಮಾರ್ ದಣಿಗಳ ಕಟ್ಟಡದಲ್ಲಿ ಆರಂಭಿಸುತ್ತಾರೆ. ಎಲ್ಲವೂ ಕಾಲಘಟ್ಟದಲ್ಲಿ ಲೀನವಾದಾಗ ನಿರೀಕ್ಷಿಸಿದಷ್ಟನ್ನು ಪಡೆಯಲಾಗದಿದ್ದರೂ ಬದುಕುವುದಕ್ಕೆ ಅಸಾಧ್ಯವೆನಿಸುವುದಿಲ್ಲ. ಮಣ್ಣು, ಮಣ್ಣಿನ ಸಂಸ್ಕೃತಿಯನ್ನು ನಿಚ್ಚಳವಾಗಿ ಚಿತ್ರಿಸುತ್ತಾ, ಒಟ್ಟಾರೆ ಆ ಸುಂದರ ಪರಿಸರದ ಅಧ:ಪತನವನ್ನು ದಾಖಲಿಸುತ್ತದೆ ಈ ಕಾದಂಬರಿ.

ಕಾದಂಬರಿಗೆ ಜೀವಾಳವಾಗುವ ಇನ್ನೊಂದು ಬಹುಮುಖ್ಯ ಪಾತ್ರ ಗೂರಲ ಗೋಪಾಲ ದಾಸರು. ತಮ್ಮಷ್ಟಕ್ಕೆ ತಾವಿದ್ದುಕೊಂಡು ಜನರಲ್ಲಿ ಭಕ್ತಿ ಭಾವನೆಯನ್ನು ಮೂಡಿಸುವವರು, ಇದ್ದಕ್ಕಿದ್ದಂತೆ ಊರು ತೊರೆದು ಹೋದರೂ ಮರಳಿ ಬರುವ ಅವರಿಗೆ ಒಂದು ಸಣ್ಣ ಶಾಕ್ ಅನ್ನು ಕೂಡ ತಡೆದುಕೊಳ್ಳುವ ಶಕ್ತಿಯಿರುವುದಿಲ್ಲ. ಇಲ್ಲಿ ಅವರ ಅಂತ್ಯ ಅನ್ನುವುದು ಊರಿನ ಅಂತ್ಯವೆನ್ನುವುದರ ಪರಿಕಲ್ಪನೆಯಿರುವುದು ಕಾದಂಬರಿಯ ಪ್ಲಸ್ ಪಾಯಿಂಟ್.

ಶಂಕರರಾಯರು, ದೊಡ್ಡು ನಾಯಕರು, ವೆಂಕಟ್ರಮಣ ಭಟ್ಟರು, ವಸಂತ, ಪೂವಯ್ಯ ಹೀಗೆ ಬೇರೆ ಬೇರೆ ಪಾತ್ರಗಳು ಕಾದಂಬರಿಯ ಬೆಳವಣಿಗೆಗೆ ಪೂರಕವಾಗಿ ನಿಂತಿವೆ. ದೊಡ್ಡು ನಾಯಕರ ಹಿನ್ನಲೆ, ವೆಂಕಟ್ರಮಣ ಭಟ್ಟರ ದಾರ್ಪಿಷ್ಟತೆ, ಮಾರ್ಮಾರ್ ದಣಿಗಳ ಅಹಂ, ರಾಘವ ಸೇನರ ಉದ್ದಟತನ ದ್ವೇಷದ ಕಿಡಿಯನ್ನು ಹೊತ್ತಿಸುತಾ, ಧಗಿಸುತ್ತಾ, ತಣ್ಣಗಾಗುತ್ತಾ ಸಾಗುವಾಗಲೇ, ಇನ್ನೊಂದು ಏನೋ ವ್ಯತಿರೀಕ್ತ ನಡೆದು ಆ ಪಾತ್ರಗಳೇ ಸೋಲನ್ನನುಭವಿಸಿ, ಶಾಂತವಾಗುತ್ತಾ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ತೆಪ್ಪಗಿದ್ದು ಬಿಡುತ್ತವೆ.

ಕಾದಂಬರಿಯ ಇನ್ನೊಂದು ಮುಖ್ಯ ಆಕರ್ಷಣೆ ಕಥೆಯ ಆರಂಭ. 1975 ರ ರಾಕ್ಷಸ ನಾಮ ಸಂವತ್ಸರ ಫಲದಲ್ಲಿ ಘಟಿಸಬಹುದಾದ ಸಂಭಾವ್ಯಗಳನ್ನು ಕಾದಂಬರಿಯಲ್ಲಿ ವ್ಯಕ್ತಪಡಿಸಿರುವ ರೀತಿ ನವ್ಯತರದ್ದು.

ಈ ಕಾದಂಬರಿಯ ಮುಖ್ಯ ಕಥಾವಸ್ತು ಸಮಾಜವೊಂದರ ಸ್ಥಳಾಂತರ ಮತ್ತು ಸಂಸ್ಕೃತಿಯ ಪಲ್ಲಟವನ್ನು ಪ್ರತಿಬಿಂಬಿಸುವುದಲ್ಲದೆ ಕನ್ನಡಕ್ಕೆ ಹೊಸತೆನ್ನುವ, ಒಂದೇ ಪ್ರದೇಶದಲ್ಲಿ ನಡೆಯುವ ಘಟನೆಗಳನ್ನು ಮೂರು ಕಾದಂಬರಿಗಳಲ್ಲಿ ಬಳಸಿಕೊಂಡಿರುವ ರೀತಿ. ಮೂರನೆಯ ಕಾದಂಬರಿ ‘ಅನಿಕೇತನ’ದ ಹಿಂದಿನ ಭಾಗಗಳಲ್ಲದಿದ್ದರೂ ಈ ಹಿಂದೆ ಪ್ರಕಟವಾದ ‘ಉತ್ತರಾಧಿಕಾರ’ ಮತ್ತು ‘ಹಸ್ತಾಂತರ’ದ ಒಂದು ಭಾಗದಂತೆ ಈ ‘ಅನಿಕೇತನ’ ಕಂಡರೂ, ಮೊದಲ ಎರಡು ಕಾದಂಬರಿಗಳನ್ನು ಓದದೆಯೇ ಇದನ್ನು ಓದಬಹುದು. ಈ ತ್ರಿವಳಿಗಳು ಒಂದು ಕಾಲಘಟ್ಟದ ಅದ್ಭುತ ಚಿತ್ರಣಗಳೆಂದರೆ ತಪ್ಪಲ್ಲ.

ಈ ಕಾದಂಬರಿಯನ್ನು ಸ್ವಂತ ಪ್ರಕಾಶನ, ಅಕ್ಷರ, ದೇವಸ್ಥಾನ ರಸ್ತೆ, ಬೆಳ್ಮಣ್ಣು - 576 111 ಇವರು ಪ್ರಕಟಿಸಿದ್ದು, ಬೆಲೆ ರೂ.90 ಮಾತ್ರ.

Read more!

Monday, March 22, 2010

ನಾನು ಲೈಂಗಿಕ ಕಾರ್ಯಕರ್ತಳು - ನಳಿನಿ ಜಮೀಲಾ


ಆತ್ಮ ಕಥೆಯಲ್ಲಿ ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ಹೇಳಿಕೊಳ್ಳುವುದು ಸರಿಯಾದ ಒಂದು ದೃಷ್ಟಿಕೋನ. ಆತ್ಮಕಥೆಗಳು ಒಂದು ರೀತಿಯ ಮಾದರಿ ಮತ್ತು ಮಾರ್ಗದರ್ಶನ ನೀಡಬಲ್ಲ ಬರಹ ಸಮೂಹವೂ ಆಗಿರಬಹುದು. ಉದಾಹರಣೆಗೆ ‘ನನ್ನ ಆತ್ಮಕಥೆ’ ಅಥವಾ ‘ಸತ್ಯಾನ್ವೇಷಣೆ’ ಗಾಂಧೀಜಿಯವರ ಆದರ್ಶಗಳನ್ನು ಎತ್ತಿ ತೋರಿಸುವ ಆತ್ಮಕಥನ. ಕೆಲವೊಂದು ವ್ಯತಿರೀಕ್ತಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವುದರಿಂದ ಅದನ್ನು ‘ಸತ್ಯ’ದ ಶೋಧನೆಯೆಂದರೂ ತಪ್ಪಲ್ಲ. ಕೆ.ಟಿ. ಗಟ್ಟಿಯವರ ‘ತೀರ’ - ಶೈಕ್ಷಣಿಕ ವಿಷಯದ ಶೋಷಿತ ವರ್ಗದ ದನಿಯಾಗಿದೆ. ಶಾಂತರಾಮ ಸೋಮಯಾಜಿಯವರ ‘ಮೇರಿಯ ಕಥೆ’ ಕಾನ್ಸರ್ನ ವಿರುದ್ಧ ಹೋರಾಡಿದ ಹೆಣ್ಣೊಬ್ಬಳ ಅಸಹಾಯಕ ಕೂಗನ್ನು ಮಾರ್ದನಿಸಿದೆ. ಕಮಲದಾಸ್ ಅವರ ‘ನನ್ನ ಆತ್ಮಕಥೆ’ಯಲ್ಲಿ ‘ಹೆಣ್ಣು’ ‘ಈ ಶತಮಾನದ ಮಾದರಿ’ ಹೆಣ್ಣು ಅನ್ನುವುದನ್ನು ತೋರಿಸುತ್ತದೆ.

ಅದೇ ರೀತಿ ಒಬ್ಬ ಸೆಕ್ಸ್ ವರ್ಕರ್ ತನ್ನ ಆತ್ಮಕಥೆಯನ್ನು ಬರೆದರೆ ಅದರಿಂದ ಸಮಾಜಕ್ಕೆ ಏನು ಸಂದೇಶವಿದೆ ಅನ್ನುವ ಸಂದೇಹ ಸಹಜ. ಇಲ್ಲಿ ನಳಿನಿ ಜಮೀಲಾ ತಮ್ಮ ‘ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ’ ದಲ್ಲಿ ಹೋರಾಟಗಾರ್ತಿಯಾಗಿ, ಬಂಡಾಯಗಾರ್ತಿಯಾಗಿ ಮತ್ತು ‘ಕಾಯಕವೇ ಕೈಲಾಸ’ ಎಂದು ವೃತ್ತಿ ಧರ್ಮವನ್ನು ಪಾಲಿಸುವ ಪ್ರಾಮಾಣಿಕ ಹೆಣ್ಣಾಗಿ ಗುರುತಿಸಿಕೊಳ್ಳುತ್ತಾರೆ. ಹೀಗೆ ಸಮಾಜದಿಂದ ಕೀಳಾಗಿ ಕಾಣುವ ವೇಶ್ಯೆಯರ ಬಗ್ಗೆ ಗೆಜ್ಜೆಪೂಜೆ, ಹಗಲುಕನಸು, ಹೂವುಹಣ್ಣು, ಮಸಣದ ಹೂ, ಮುಂತಾದ ಕಾದಂಬರಿಗಳಲ್ಲಿ ಸಮಾಜ ಮುಖಿಯಾದ ಸಮಸ್ಯೆಗಳನ್ನು ಪ್ರತಿಬಿಂಬಿಸಿದರೆ, ತಮಿಳ್ ಸೆಲ್ವಿ ಅವರು ಅನುವಾದಿಸಿದ ಹಿಜಡಾಗಳ ಬಗೆ ಬರೆದ ‘ನಾನು ಅವನಲ್ಲ ಅವಳು’ ಆತ್ಮಕಥೆಯಲ್ಲಿ ಸಮಾಜದಿಂದ ಶೋಷಿತ ವರ್ಗಕ್ಕೆ ಸರಿದಿರುವ ಹಿಜಡಾಗಳ ಬಗ್ಗೆ ಮತ್ತು ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಥೆಯಿದೆ.

ಆದರೆ ಒಬ್ಬ ಸೆಕ್ಸ್ ವರ್ಕರ್ ತನ್ನ ಆತ್ಮ ಕಥೆಯನ್ನು ಬರೆದರೆ ಅವಳ ಹೋರಾಟ ಯಾವುದಕ್ಕಾಗಿ? ಕೇವಲ ಹಣಗಳಿಸುವುದಕ್ಕಾಗಿ ಇಂತಹ ಒಂದು ದಾರಿಯನ್ನು ಹುಡುಕಬೇಕಿತ್ತೆ? ಇಲ್ಲಿ ಅವಳಿಗೆ ಅನ್ಯಾಯವಾಗಿದೆ; ಶೋಷಣೆಗೆ ಒಳಗಾಗಿದ್ದಾಳೆ ಒಪ್ಪಿಕೊಳ್ಳಬಹುದು. ಲೇಖಕಿಯೇ ಹೇಳಿಕೊಳ್ಳುವಂತೆ ತಾನು ಶ್ರೀಮಂತ ಕುಟುಂಬದ ಹಿನ್ನಲೆಯಿಂದ ಬಂದವಳು, ಲೈಂಗಿಕ ಶೋಷಣೆಯಾಗಿದೆ. ಆದರೆ ಅದನ್ನು ಮೆಟ್ಟಿ ನಿಲ್ಲುವ ಆತ್ಮ ಸ್ಥೈರ್ಯವನ್ನು ಬಿಟ್ಟು, ಅದನ್ನೂ ಒಂದು ವೃತ್ತಿಯಾಗಿ ಮುಂದುವರಿಸುವ ಅನಿವಾರ್ಯತೆ ಇತ್ತೆ? ಎಂಬ ಪ್ರಶ್ನೆ ಎದುರಾಗುತ್ತದೆ.

ಇಲ್ಲಿ ಮೆಚ್ಚಿಕೊಳ್ಳಬೇಕಿರುವುದು ಯಾವುದೇ ಅಳುಕಿಲ್ಲದೆ ಮುಕ್ತವಾಗಿ ತಾನು ಆ ವೃತ್ತಿಯಲ್ಲಿ ಏನೆಲ್ಲಾ ಸುಖ, ದುಃಖಗಳನ್ನು ಅನುಭವಿಸಿದೆಯೆನ್ನುವ ಚಿತ್ರಣ. ಆದರೆ ಇದು ಯಾವ ಆದರ್ಶವನ್ನು ತೋರಿಸುತ್ತದೆ. ಅಂತಹ ವರ್ಗಕ್ಕೆ ಮಾತ್ತು ಆ ದಂಧೆಗೊಳಗಾದವರಿಗೆ ಯಾವ ರೀತಿ ಬದುಕಬೇಕೆನ್ನುವುದನ್ನು ತಿಳಿಸುತ್ತದೆಯೆ? ಒಂದು ಆರೋಗ್ಯ ಮುಖಿಯಾದ ಸಮಾಜಕ್ಕೆ ಇದರಿಂದ ಏನು ಪ್ರಯೋಜನ? ಒಬ್ಬ ಸೆಕ್ಸ್ ವರ್ಕರ್ ಆಗಿದ್ದು ಅದೇ ಬದುಕಿನ ಸಾಧನೆಯಲಲ್ಲಿ, ಅದನ್ನು ಮೆಟ್ಟಿ ಏನಾದರೂ ಸಾಧಿಸಿದ್ದರೆ ನಿಜವಾಗಿಯೂ ಇಂತಹ ಆತ್ಮಕಥೆಗಳು ಇನ್ನಷ್ಟು ಬರಲೆಂದು ಸಮಾಜ ನಿರೀಕ್ಷಿಸಬಹುದು.

ಇಂತಹ ಕಾನೂನು ಬಾಹಿರ ವೃತ್ತಿಯಲ್ಲಿ ದೌರ್ಜನ್ಯ ದಬ್ಬಾಳಿಕೆಗಳು ಸಹಜ. ಶೋಷಣೆಗೊಳಗಾದವರನ್ನು ಶೋಷಿಸುತ್ತಲೇ ಅವರಿಂದ ಪ್ರಯೋಜನ ಪಡೆದುಕೊಂಡು ಅವರಿಗೆ ವಿರುದ್ಧವಾಗಿ ನಿಲ್ಲುವ ಪ್ರಸಂಗಗಳು ಸರ್ವೇ ಸಾಮಾನ್ಯ. ಅದರಲ್ಲೂ ಪೊಲೀಸ್ ದೌರ್ಜನ್ಯ ತೀರ ವಿಪರೀತ ಮಟ್ಟದಾಗಿರುತ್ತದೆಯೆನ್ನುವುದನ್ನು ಲೇಖಕಿ ನಿರ್ಭಿಡೆಯಿಂದ ಬರೆದಿದ್ದಾರೆ.

‘ಹೂವು ಹಣ್ಣು’ ಕಾದಂಬರಿಯಲ್ಲಿ ಒಬ್ಬ ತಾಯಿ, ತನ್ನ ಮಗಳು ತನ್ನಂತೆ ಈ ವೃತ್ತಿಗೆ ಇಳಿಯಬಾರದೆನ್ನುವ ತುಡಿವಿರುವಂತೆಯೇ, ಇಲ್ಲಿ ಲೇಖಕಿಗೆ ತನ್ನ ಮಗಳ ಮೇಲಿರುವ ಕಳಕಳಿ ಅತೀ ಸೂಕ್ಷವಾಗಿದೆ. ‘ತನ್ನ ಮಗಳು ಈ ವೃತ್ತಿ ಬಯಸುವುದಾದರೆ ಅವಳಿಗೆ ಬಿಟ್ಟ ಅವಕಾಶ’ ಎಂದು ಹೇಳಿಕೊಂಡರೂ ಇಲ್ಲಿ ಅವಳನ್ನು ಒಂಟಿಯಾಗಿ ಬಿಟ್ಟು ಹೋಗುವಾಗ ಅಥವಾ ಇನ್ನೊಬ್ಬರ ಮನೆಯಲ್ಲಿ ಬಿಟ್ಟಿರುವಾಗ ತಾಯಿ ಹೃದಯ ಮಗಳ ಯೋಗ ಕ್ಷೇಮವನ್ನು ಬಯಸುವುದು, ತನ್ನಂತೆ ಮಗಳು ಈ ವೃತ್ತಿಗೆ ಇಳಿಯಬಾರದೆನ್ನುವ ಒಂದು ತುಡಿತದಿಂದಲ್ಲವೆ?
ಮೇಲ್ನೋಟಕ್ಕೆ ನಾವು ‘ಹಾಗೆ ಹೀಗೆ’ ಅನ್ನುವ ಸ್ಟೇಟ್ಮೆಂಟ್ಗಳನ್ನು ಅಥವಾ ಹೇಳಿಕೆಗಳನ್ನು ಸುಲಭದಲ್ಲಿ ಹೇಳಿ ಬಿಡಬಹುದು. ಆದರೆ ಅದನ್ನು ಪಾಲಿಸುವುದು ಅಷ್ಟೆ ಕಷ್ಟದ ಕೆಲಸ.

ಲೇಖಕಿ ಈಗ ಸಮಾಜದ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಗುರುತಿಸಿಕೊಳ್ಳುವಷ್ಟರಮಟ್ಟಿಗೆ ಬೆಳೆದಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಡಾಕ್ಯುಮೆಂಟರಿಗಳನ್ನು ಕೂಡ ತಯಾರಿಸಿದ್ದಾರೆ. ದೇವದಾಸಿಯಂತಹ ಪದ್ಧತಿಯ ವಿರುದ್ಧ ದನಿ ಎತ್ತುವ ಲೇಖಕಿ ಸ್ವತಃ ಅದೆಷ್ಟೊ ಶೋಷಣೆಗೊಳಗಾದ ಹೆಣ್ಣುಗಳನ್ನು ಗುರುತಿಸಿ ಈ ಪಿಡುಗಿನಿಂದ ಪಾರು ಮಾಡಬಹುದಲ್ಲವೆ? ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪವಾದರೂ ಪ್ರಯತ್ನಿಸಬಹುದಲ್ಲವೆ? ಅವರ ಬದುಕಿನ ಕಷ್ಟ, ಕೋಟಲೆಗಳನ್ನು ತಿಳಿದಿರುವ ಲೇಖಕಿ ಅಂತಹ ಒಂದು ಸಾಮಾಜಿಕ ಪಿಡುಗನ್ನು ನಿರ್ಮೂಲನ ಮಾಡುವಂತಹ ಕಾರ್ಯಗಳನ್ನು ಎತ್ತಿಕೊಳ್ಳಬಾರದೇಕೆ? ಈ ಮಾತು ಯಾಕೆಂದರೆ ಇಲ್ಲಿ ಅದನ್ನೇ ವೃತ್ತಿಯಾಗಿ ಸ್ವ ಇಚ್ಚೆಯಿಂದ ತೊಡಗಿಸಿಕೊಳ್ಳುವರು ವಿರಳ. ಮೋಸ ವಂಚನೆಯಿಂದಲೇ ಇಂತಹ ದಂಧೆಗೆ ಇಳಿಯುವವರು ಹೆಚ್ಚು. ಇದನ್ನು ವ್ಯವಹಾರ ಅಂದುಕೊಂಡರೂ ಶೋಷಣೆಯಿಂದಲೇ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಅದೆಷ್ಟು ಮುಗ್ಧ ಅಮಾಯಕ ಹೆಣ್ಣುಗಳನ್ನೂ ತಾವೇ ಹುಡುಕಿ ‘ಜ್ವಾಲಾಮುಖಿ’ ಯ ಮೂಲಕ ಹೋರಾಟ ನಡೆಸಿ ಅವರನ್ನು ಮುಕ್ತರಾಗಿಸಬಹುದು. ಯಾರಿಗೆ ಈ ವೃತ್ತಿಯಿಂದ ಹೊರಬರಬೇಕೆನ್ನುವ ಇಚ್ಚೆ ಇದೆಯೊ ಅವರಿಗೆ ಮಾತ್ರ ಸಹಾಯ ಮಾಡುವ ಬದಲು ಯಾರು ಬಲವಂತವಾಗಿ ವೃತ್ತಿಗೆ ಇಳಿದಿದ್ದಾರೋ ಅವರನ್ನು ಗುರುತಿಸಿ ಇಂತಹ ದಂಧೆಯಿಂದ ಮುಕ್ತಗೊಳಿಸಬಹುದಲ್ಲವೆ?

ಸಾಮಾಜಿಕ ವ್ಯವಸ್ಥೆಯಾದ ಕೌಟುಂಬಿಕ ಜೀವನವನ್ನು ಆದರ್ಶ ಪ್ರಾಯವೆಂದು ನಂಬಂದ ಲೇಖಕಿ ತನ್ನ ರಕ್ಷಣೆಯನ್ನು ಒಪ್ಪಿಕೊಂಡಿರುವುದು ಮಗುವಿನ ತಾಯಿಯಾದಾಗ. ಈ ಆಸರೆ ಪಡೆದಿದ್ದು ಒಬ್ಬ ‘ಗಂಡ’ ಅನ್ನುವ ವ್ಯಕ್ತಿಯಿಂದ. ಗಂಡ, ಮಗು ಮತ್ತು ಆಸರೆ ಕೌಟುಂಬಿಕ ಜೀವನದ ಆದರ್ಶಗಳಲ್ಲವೆ? ಇಂತಹ ಅನೇಕ ವ್ಯತಿರೀಕ್ತಗಳು ಮತ್ತು ಅಪೂರ್ಣ ವಿಷಯಗಳಿಂದ ಲೇಖಕಿ ಏನನ್ನು ಹೇಳ ಹೊರಟಿದ್ದಾರೆ ಅನ್ನುವುದು ತಿಳಿಯುವುದಿಲ್ಲ.

ಲೈಂಗಿಕ ದುಡಿಮೆಗೂ ಸುಖ, ಸಂತೋಷಗಳ ಸೌಂದರ್ಯದ ಉತ್ಪಾದನೆಗೂ ಸಂಬಂಧ ಕಲ್ಪಸುವ ಲೇಖಕಿ ಲೈಂಗಿಕ ಕೆಲಸವನ್ನು ‘ಆಪ್ತ ಸಲಹೆ’ ಮತ್ತು ‘ಚಿಕಿತ್ಸೆ’ ಗಳಿಗೆ ಪ್ರತಿಪಾದಿಸಿರುವುದನ್ನು ಹೊಸ ದೃಷ್ಟಿಯಿಂದ ಯೋಚಿಸಬೇಕಾಗಿದೆ.

ಒಬ್ಬ ಲೈಂಗಿಕ ಸೇವಕಿಯಾಗಿ, ಒಬ್ಬ ಮಗಳಾಗಿ, ತಾಯಿಯಾಗಿ, ಪತ್ನಿಯಾಗಿ ಹೋರಾಟದ ಹಾದಿ ಹಿಡಿದು ‘ಆತ್ಮ ಕಥೆ’ಯನ್ನು ಬರೆದಿರುವುದು, ಸಮಾಜದ ಇನ್ನೊಂದು ಪಾರ್ಶ್ವದಲ್ಲಿ ನಡೆಯುವ ದಾರುಣವಾದ ವಾಸ್ತವಿಕತೆಯನ್ನು ತೆರೆದಿಡುತ್ತದೆ. ಈ ಕೃತಿಯನ್ನು ಕೆ. ನಾರಾಯಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಸೃಷ್ಟಿ ಪಬ್ಲಿಕೇಶನ್, ವಿಜಯನಗರ, ಬೆಂಗಳೂರು ಇವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇದರ ಬೆಲೆ ರೂ. ೧೫೦/- ಮಾತ್ರ.

Read more!

Tuesday, March 9, 2010

ಬದುಕಿನ ಸೂತ್ರ ಹರಿದ ‘ಸೂತ್ರದ ಗೊಂಬೆ’


ನಾನು ಸೂತ್ರದ ಗೊಂಬೆ, ನೀನೂ ಸೂತ್ರದ ಗೊಂಬೆ
ಈ ಮಾತಿನಲಿ ಭ್ರಮೆಯಿಲ್ಲ, ಸರ್ವರೂ ಸೂತ್ರಧಾರಿಗಳೇ
ನನ್ನಾಡಿಸುವವನು ಮತ್ತೊಬ್ಬನಾಡಿಸುವನು
ನೇಪಥ್ಯದಲ್ಲಿ ನಿಂತ ಆ ದೇವನೇ ಎಲ್ಲರ ಸೂತ್ರಧಾರಿ.

ಇದು ಬಂಗಾಲಿ ಲೇಖಕ ಡಾ. ಪ್ರತಾಪ್ ಚಂದ್ರ ಚಂದರ್ ಅವರ ಕಾದಂಬರಿಯಲ್ಲಿರುವ ಒಂದು ಕವಿತೆ. ನಾವೆಲ್ಲಾ ಸೂತ್ರದ ಬೊಂಬೆಯಾದರೆ ವಿಧಿಯೇ ಅದ್ರ ಸೂತ್ರವನ್ನು ಹಿಡಿದು ಕುಣಿಸುವವನು. ಹೀಗೆ ಭ್ರಮೆಗೊಳಗಾದ ಮತ್ತು ಬದುಕಿನ ಸಂಕಷ್ಟಗಳನ್ನು ಎದುರಿಸಲು ಸೋತವನೊಬ್ಬನ ಅಸಹಾಯಕ ಕೂಗು ‘ಸೂತ್ರದ ಗೊಂಬೆ’ ಕಾದಂಬರಿಯಲ್ಲಿ ಕಾಣದ ಪಾತ್ರವಾಗಿ ಆಡಿದೆ.

ಮೋಹನ ಮಾಸ್ತರ ನಿರ್ಜೀವ ಗೊಂಬೆಗಳಿಗೆ ಕೈ ಚಳಕದಿಂದ ಜೀವ ತರಿಸಬಲ್ಲ ಮಾಂತ್ರಿಕ ಶಕ್ತಿಯುಳ್ಲವನು. ಸಾಮಂತರ ಗರಡಿಯಲ್ಲಿ ಪಳಗಿದವನಿಗೆ ಗೊಂಬೆಯಾಡಿಸುವುದು ಬಿಟ್ಟರೆ ಹೊರ ಜಗತ್ತು ಗೊತ್ತೇ ಇಲ್ಲ. ಹಾಗಂತ ಲೋಕಜ್ಞಾನ ಅರಿಯದ ಮುಗ್ಧನೂ ಅಲ್ಲ. ಬದುಕಿನಲ್ಲಿ ಪ್ರೀತಿಯನ್ನು ಕಳೆದುಕೊಂಡ ಸಾಮಂತರು ತೊಡಗಿಸಿಕೊಂಡಿದ್ದು ಗೊಂಬೆಯಾಟದ ವೃತ್ತಿಯಲ್ಲಿ. ಅಂತಹ ಅದ್ಭುತ ಕಲೆಗೆ ಮಾರು ಹೋದ ಮೋಹನ ಮನೆಯಿಂದ ಓಡಿ ಬಂದು ಅವರ ಕಂಪನಿಯಲ್ಲಿ ಸೇರಿಕೊಳ್ಳುತ್ತಾನೆ. ನಾಟಕದ ಪರದೆಗಳನ್ನು ಬರೆಯಿಸಲು ಬೀರು ಬಾಬುಗಳ ಮನೆಗೆ ಬರುತ್ತಾನೆ. ಅವರ ಹಿರಿ ಮಗಳು ‘ಟಗರ್’ಳಿಂದ ಆಕರ್ಷಿತನಾಗಿ ಬಡ ಸಂಸಾರವೊಂದರ ಜವಾಬ್ದಾರಿಯುತ ಅಳಿಯನಾಗುತ್ತಾನೆ. ಅಕಸ್ಮಾತ್ ಮದುವೆಯ ಮೊದಲ ರಾತ್ರಿಯೆಂದೇ ಅನಿವಾರ್ಯವಾಗಿ ಗೊಂಬೆಯಾಟದ ಪ್ರದರ್ಶನಕ್ಕೆ ಹೋಗಿ, ನವ ವಧುವಿನ ಸಿಟ್ಟಿಗೆ ಗುರಿಯಾಗಬೇಕಾಗುತ್ತದೆ. ‘ಗೊಂಬೆಯಾಡಿಸುವ ಉದ್ಯೋಗ ಬದುಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ’ವೆನ್ನುವ ಅವಳು ಗೊಂಬೆಗಳ ಸೂತ್ರ ಬಿಟ್ಟು ಮರ್ಯಾದೆಯ ಸಂಸಾರದ ಸೂತ್ರ ಹಿಡಿಯಲು ಹಠ ಹಿಡಿಯುತ್ತಾಳೆ. ಮೋಹನನ ಜೀವವೇ ಗೊಂಬೆಗಳು. ಅವುಗಳನ್ನು ಬಿಟ್ಟಿರಲಾರ. ಅಂತಹ ಪರಿಸ್ಥಿತಿಯಲ್ಲಿ ಅವಳು ಬೇರೆಯೇ ದಾರಿಯನ್ನು ಕಂಡುಕೊಳ್ಳುತ್ತಾಳೆ.

ಕಥೆ ಆರಂಭವಾಗುವುದೇ ಹರಿನಡಿಹಿಯಲ್ಲಿ ‘ಟಗರ್’ ಮನೆ ಬಿಟ್ಟು ಓಡಿ ಹೋಗುವಲ್ಲಿಂದ. ಸಾಮಂತರ ಉಯಿಲಿನಂತೆ ಅವರ ನಂತರ ಗೊಂಬೆಗಳ ಜವಾಬ್ದಾರಿ ಮೋಹನನಿಗೆ ಬರುತ್ತದೆ. ಅವನ ಬಳಿಯೇ ಕೆಲಸ ಮಾಡಿಕೊಂಡಿರುವ ಹೆಣ್ಣಿಗ ಶರತ್ನ ಮೋಹದ ಬಲೆಗೆ ಬಿದ್ದ ಅವಳು ಗೊಂಬೆಗಳನ್ನು ಪುಡಿ ಮಾಡಿ ಮನೆಯಲ್ಲಿದ್ದ ಹಣವನ್ನೆಲ್ಲಾ ದೋಚಿಕೊಂಡು ಹೋಗುತ್ತಾಳೆ. ಇಲ್ಲಿ ಅವಳಿಗೆ ತನ್ನ ಸವತಿಯರಾದ ಗೊಂಬೆಗಳ ಮೇಲಿರುವ ಸಿಟ್ಟನ್ನು ಅವುಗಳನ್ನು ಹಾಳುಗೆಡವುದರಲ್ಲಿ ತೋರಿಸುತ್ತಾಳೆ. ಮತ್ತು ನಿಜವಾಗಿಯೂ ಶರತ್ನೊಂದಿಗೆ ಹೋಗುವ ಮನಸ್ಸಿಲ್ಲದಿರುವುದನ್ನು ಒತ್ತಿ ಹೇಳುತ್ತದೆ.

ಟಗರ್ ಹೆಣ್ಣಿನ ಸಹಜ ಆಕಾಂಕ್ಷೆಯಂತೆ ಮೋಹನನ ಕೈ ಹಿಡಿದರೂ ಅವನು ಗೊಂಬೆಗಳ ನಡುವೆ ಬದುಕುವುದನ್ನು ಬಯಸದವಳು ಪ್ರತೀಕಾರವೆಂಬಂತೆ ಶರತನೊಂದಿಗೆ ಓಡಿ ಹೋದರೂ ಅದು ಮೋಹನನ ಕಣ್ಣು ತೆರೆಸುವ ಉದ್ದೇಶದಿಂದಿರಬಹುದೆ. ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುವಾಗಲೇ ಶರತ್ನ ಮೂರನೆ ಹೆಂಡತಿ ಮೀನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೂ ಶರತ್ನ ಪ್ರಭಾವದಿಂದ ಹೊರ ಬರದ ಅವಳ ಬಗ್ಗೆ ತಿಳಿದ ಮೋಹನ ತಾನು ಅವಳ ದೇಹವನ್ನು ಮಾತ್ರ ಪಡೆದೆ ಮನಸನ್ನಲ್ಲವೆಂದು ಕೊರಗುತ್ತ, ‘ಏನು ಕೊಟ್ಟರೆ ನನ್ನನ್ನು ಪ್ರೀತಿಸುತ್ತೀಯಾ?’ ಎಂದು ಕೇಳುತ್ತಾನೆ. ಆಗ ಅವಳು, ‘ತಾನು ಯಾರನ್ನೂ ಪ್ರೀತಿಸಲ್ಲ, ಪ್ರೀತಿ ಅನ್ನೋದು ಒಂದು ಸೋಗು’ ಅನ್ನುವ ಸತ್ಯದ ಅರಿವಿರುವ ಪ್ರಬುದ್ಧ ಉತ್ತರವನ್ನು ನೀಡುತ್ತಾಳೆ. ಹಾಗೆ ಚಿಂತಿಸಬಲ್ಲ ಅವಳು ಶರತ್ನಂತ ಒಬ್ಬ ಸಾಮಾನ್ಯ ಗಂಡಸನ್ನು ಇಚ್ಛೆ ಪಡುವುದು ಬದುಕಿನಲ್ಲಿ ಕಳೆದುಕೊಂಡಿರುವ ಭ್ರಮೆಗಳಿಗಾಗಿ ಮಾತ್ರ. ಅದನ್ನು ದುರುಪಯೋಗ ಪಡಿಸಿಕೊಳ್ಳಲು ಕಾತರಿಸಿದವನು ಸುಲಭದಲ್ಲಿ ಹಣ, ಹೆಣ್ಣು, ಮೋಜಿನಲ್ಲಿ ಕಳೆಯಲು ನಿರ್ಧರಿಸಿದಾತ ಶರತ್. ಟಗರ್ ನೊಂದಿಗೆ ಊರು ತೊರೆದರೂ ಆತನ ಅನೈತಿಕ ಮತ್ತು ಕಾನೂನುಬಾಹಿರ ವೃತ್ತಿಗಳನ್ನು ತಿಳಿದು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿರುತ್ತದೆ.

ರೈತನ ಮಗ ಬೇಸಾಯ ಮಾಡಿಕೊಂಡೇ ಬದುಕಬೇಕೆನ್ನುವ ಸೂತ್ರಕ್ಕೆ ಒಗ್ಗಿ ಹೋದ ಮೋತಿಬಾಬುಗಳ ಮಗ ಕೊನೆಗೂ ನಿಜ ಜೀವನದಲ್ಲಿ ಸೂತ್ರ ಹಿಡಿಯಲಾರದೆ ಸೋಲುತ್ತಾನೆ. ತನ್ನೆಲ್ಲಾ ಮನದ ಬೇಗುದಿಗಳನ್ನು ಸಾಮಂತರ ಇನ್ನೊರ್ವ ಶಿಷ್ಯೆ, ಟಗರಳ ತಂಗಿ ಶಿಉಲಿಯ ಜೊತೆಗೆ ಹಂಚಿಕೊಳ್ಳುತ್ತಾನೆ. ಅವನ ಬದುಕಿನಲ್ಲಿ ಸ್ಪೂರ್ತಿ ತುಂಬುವ ಅವಳು, ‘ನಿನ್ನವರೇ ನಿನ್ನ ತ್ಯಜಿಸಿದರೂ, ಆ ಬಗ್ಗೆ ಚಿಂತಿಸದಿರು. ನಿನ್ನಾಸೆಯ ಬಳ್ಲಿಗಳು ಬಾಡಿದರೂ, ನಿನ್ನ ಗೀತೆ ಹಾಡುತ್ತಾ ನಗುತ್ತಿರು’ ಅನ್ನುವ ರವೀಂದ್ರನಾಥ್ ಠಾಗೋರರ ಕವಿತೆಯನ್ನು ಹಾಡಿ ಮತ್ತೆ ಚೈತನ್ಯ ತುಂಬಿಸುತ್ತಾಳೆ. ಸಂಸಾರದ ಸೂತ್ರ ಹರಿದ ಮೇಲೆ ಗೊಂಬೆಗಳನ್ನು ತ್ಯಜಿಸಿದವನು ಮತ್ತೊಮ್ಮೆ ಸೂತ್ರವನ್ನು ಕೈಗೆ ತೆಗೆದುಕೊಳ್ಳುತ್ತಾನೆ. ಅದನ್ನು ನೋಡಲು ಬರುವ ಟಗರ್ಳನ್ನು ಗುರುತಿಸಿ ಹಿಂಬಾಲಿಸಿದ ಮೋಹನನಿಗೆ ಆಕೆ ವೈಶ್ಯೆ ಅನುರಾಧಳಾಗಿ ಮಾತ್ರ ದೊರಕುತ್ತಾಳೆ. ಎಷ್ಟೇ ಒತ್ತಯಿಸಿದರೂ ಬರಲೊಲ್ಲದ ಅವಳು ನೀಡುವ ಕಾರಣದಿಂದ ಹತಾಶನಾಗುತ್ತಾನೆ. ಇದಕ್ಕೆಲ್ಲಾ ಉತ್ತರಿಸುವ ಶಿಉಲಿ ಆತನ ಹೊಸ ಬದುಕನ್ನು ರೂಪಿಸುತ್ತಾಳೆ.

ನಿಷ್ಠಾವಂತ ಕಲಾವಿದನೊಬ್ಬನ ಬದುಕಿನ ಏಳು ಬೀಳುಗಳನ್ನು ಚಿತ್ರಿಸುವ ಈ ಕಾದಂಬರಿಯನ್ನು ಡಾ. ಡಿ. ಎನ್. ಶ್ರೀನಾಥ್ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದರೆ. ಈ ಕೃತಿಯನ್ನು ಗೀತಾ ಬುಕ್ ಹೌಸ್, ಮೈಸೂರು ಕೃತಿ ರೂಪದಲ್ಲಿ ಪ್ರಕಟಿಸಿದ್ದಾರೆ.

Read more!

Saturday, February 27, 2010

ಖಾಸನೀಸರ ಕಥೆಗಳು


ಖಾಸನೀಸರ ಕಥೆಗಳು: ಸ್ವಾರಸ್ಯಕರ, ಕುತೂಹಲ ಮತ್ತು ಕೆಲವೊಂದು ಜೀವನ ಮೌಲ್ಯಗಳನ್ನು ತಿಳಿಸುವ ಅಪರೂಪದ ಕಥಾ ಗುಚ್ಛ. ಇಲ್ಲಿಯ ಐದು ಕಥೆಗಳು ಸರ್ವೆ ಸಾಮಾನ್ಯ ನೀಳ್ಗತೆಗಳೆ. ಪುಟಗಳ ಪರಿಮಿತಿಯಿಲ್ಲದೆ ಬೆಳೆದ ಈ ಕಥೆಗಳು ಎಲ್ಲೂ ಬೋರ್ ಹೊಡೆಸುವುದಿಲ್ಲ. ಬದಲಾಗಿ ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಇಲ್ಲಿಯ ‘ಅಪಘಾತ’ ಕಥೆಯ ರಾಮನಾಥ, ‘ಹೀಗೂ ಇರಬಹುದು’ ಕಥೆಯ ಲಕ್ಷ್ಮಣ, ‘ತಬ್ಬಲಿಗಳು’ ಕಥೆಯ ತಂದೆ, ತಾಯಿ, ತಮ್ಮ ಮತ್ತು ತಂಗಿ ಪಾತ್ರಗಳು, ‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯ ವಾಸು ಮತ್ತು ‘ಮೋನಾಲೀಸಾ’ ಕಥೆಯ ಪೆರ್ರೂಗಿ ಪಾತ್ರಗಳು ಕಥೆಗಳಿಗೆ ಜೀವಂತಿಕೆ ತುಂಬಿವೆ.

‘ಅಪಘಾತ’ ಕಥೆಯ ನಾಯಕ ಸಾವಿಗೆ ಅರ್ಥವಿಲ್ಲದ ಮುಂಬೈನ ಜೀವನದಲ್ಲಿ ಸ್ವಾಲಂಬಿಯಾಗಿ ಬದುಕುತ್ತಿರುವವನು ವಕೀಲ ರಾಮನಾಥ. ಒಮ್ಮೆ ತನ್ನ ಬಾಲ್ಯದ ನೆನಪುಗಳಲ್ಲಿ ಸೋತು ಹೋದ ನಿರ್ವೀಣ್ಯ ಮನೋಸ್ಥಿತಿಯಲ್ಲಿದ್ದಾಗಲೇ ಅತೀ ಶುಭ್ರ ಪಾರದರ್ಶಕ ಬಟ್ಟೆ ಧರಿಸಿದ್ದ ಯುವತಿಯನ್ನು ನೋಡುತ್ತಾನೆ. ಅವಳೂ ಪರಿಚಿತಳಂತೆ ನಗು ಬೀರುತ್ತಾಳೆ. ಮಾತ್ರವಲ್ಲ ಕಾಮುಕ ದೃಷ್ಟಿಯಿಂದ ಅವನನ್ನು ಸೆಳೆಯಲು ಪ್ರಯತ್ನಿಸುತ್ತಾಳೆ. ಅದೇ ಯುವತಿ ರೈಲಿನಲ್ಲಿಯು ಎದುರಾಗುತ್ತಾಳೆ. ಆಗ ಆ ಕಂಪಾರ್ಟ್ ಮೆಂಟ್ನಲ್ಲಿ ಅವರಿಬ್ಬರೇ ಇರುತ್ತಾರೆ. ತನ್ನ ತೆಕ್ಕೆಗೆ ಬೀಳದ ವ್ಯಕ್ತಿಯೊಬ್ಬನಿದ್ದಾನೆ ಅನ್ನುವ ಅಸಹನೀಯ ವಿಚಾರ ಅವಳ ಮನಸ್ಸನ್ನು ಕೆಡಿಸುತ್ತದೆ. ಅವಳು ಅವನನ್ನು ಇಕ್ಕಟಿಗೆ ಸಿಲುಕಿಸಿ ಅವರ ಹಣವನ್ನು ದೋಚುವ ಪ್ರಯತ್ನ ಮಾಡುತ್ತಾಳೆ. ಅದಕ್ಕೆಲ್ಲಾ ಜಗ್ಗದ ರಾಮನಾಥನಿಗೆ, ‘ತನ್ನನ್ನು ಬಲಾತ್ಕರಿಸಲು ಬಂದ’ನೆನ್ನುವ ಆರೋಪವನ್ನು ಹೊರಿಸಿ ಪೊಲೀಸರಿಗೂ ತಿಳಿಸುತ್ತಾಳೆ. ಆದರೆ ಇದರಿಂದ ವಿಚಲಿತನಾಗದ ಆತ ತಾನು ನಿರಪರಾಧಿ ಅನ್ನುವುದಕ್ಕೆ ಸಾಕ್ಷಿಯೆನ್ನುವಂತೆ ಎಲ್ಲರ ಸಮಕ್ಷಮದಲ್ಲಿ ತನ್ನ ಕೋಟನ್ನು ತೆಗೆಯುತ್ತಾನೆ. ಆತನಿಗೆ ಎರಡು ಕೈಗಳಿರುವುದಿಲ್ಲ. ಹಾಗಿರುವಾಗ ಬಲಾತ್ಕರಿಸುವ ಪ್ರಮೆಯವಿದೆಯೇ?

ಸಾಮಾಜಿಕ ನಿಯಮ- ನಿರ್ಬಂಧಗಳ ಮೂಲಕ ಹೆಣ್ಣು ಗಂದಿನ ಸಂಬಂಧ ವಿಷಯಕವಾದ ತೊಡಕುಗಳು ತಲೆದೋರುತ್ತವೆ. ‘ಹೀಗೂ ಇರಬಹುದು’ ಕಥೆಯಲ್ಲಿ ಇಳಿವಯಸ್ಸಿನಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ನಾಯಕರು, ಕಚ್ಚೆ ಸಡಿಲು ಅಚ್ಚಂಭಟ್ಟರ ಸಹವಾಸದಿಂದ ಅಂಭಕ್ಕನನ್ನು ಮದುವೆಯಾಗುತ್ತಾರೆ. ವಾರನ್ನಕ್ಕೆ ಬರುವ ಪುರೋಹಿತರ ಹುಡುಗ ಶ್ಯಾಮ ಅವರ ಮನೆಯಲ್ಲಿಯೇ ಒಬ್ಬನಾಗುತ್ತಾನೆ. ನಾಯಕರ ಹಿರಿ ಮಗ ರಾಮಣ್ಣ ಅಮೆರಿಕಾದಲ್ಲಿದ್ದು ಅಲ್ಲಿಯೆ ಸಂಸಾರಸ್ಥನಾಗುತ್ತಾನೆ. ಕಿರಿಯವನು ಲಕ್ಷ್ಮಣ ವೃತ್ತಿಯಲ್ಲಿ ವಕೀಲ. ಇದು ಇಷ್ಟು ಫ್ಲ್ಯಾಷ್ ಬ್ಯಾಕ್. ಕಥೆ ಆರಂಭವಾಗುವುದು ತನ್ನ ತಂದೆಯ ಸಾವಿನ ತಂತಿಯನ್ನು ಲಕ್ಷ್ಮಣ ಪಡೆದುಕೂಳ್ಳುವಲ್ಲಿಂದ. ನಾಯಕರಂತ ವ್ಯಕ್ತಿಗೆ ಈ ರೀತಿಯ ಸಾವು ಅಸಹನೀಯವೆಂದು ತಿಳಿದ ಮೇಲೆ ಲಕ್ಷ್ಮಣ ಆ ಸಾವಿನ ಹಿನ್ನಲೆಯನ್ನು ಹಿಡುಕೊಂಡು ಹೋಗುತ್ತಾನೆ. ಅವರದ್ದು ಆತ್ಮಹತ್ಯೆ ಹೌದು! ಕಾರಣ ಶ್ಯಾಮ ಹಾಗು ಅವರ ಎರಡನೆ ಹೆಂಡತಿ ಅಂಭಕ್ಕನಿಗೆ ಅನೈತಿಕ ಸಂಬಂಧವಿರುವುದು ತಿಳಿಯುತ್ತದೆ. ಅದಕ್ಕಾಗಿಯೇ ಶ್ಯಾಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಥೆಯ ತಿರುವು ಪಡೆಯುವುದು ಅಂಭಕ್ಕ ಬಸುರಿ ಅನ್ನುವ ವಿಷಯದಲ್ಲಿ. ಲಕ್ಷ್ಮಣ ವೈದ್ಯರನ್ನು ಭೇಟಿಯಾಗಿ ತನ್ನ ತಂದೆ ತನ್ನ ತಾಯಿ ಹೆರಲು ಅಸಮರ್ಥಳೆಂದು ತಿಳಿದಾಗ ಮಕ್ಕಳಾಗದಂತೆ ಅಪರೇಷನ್ ಮಾಡಿಕೊಂಡಿರುತ್ತಾರೆ. ಹಾಗೆ ಅಂಭಕ್ಕನ ಬಸುರಿಗೆ ಕಾರಣ ತಿಳಿಯುತ್ತದೆ. ಹಾಗೆ ಲಕ್ಷ್ಮಣನಿಗೆ ತನ್ನ ತಂದೆಯ ಸಾವಿನ ಹಿನ್ನಲೆಯೂ ತಿಳಿಯುತ್ತದೆ.

ವಿಭಿನ್ನ ಕಥಾವಸ್ತು ಮತ್ತು ನಿರೂಪಣೆಯಿರುವ ಕಥೆ ‘ತಬ್ಬಲಿಗಳು’ ಇಲ್ಲಿಯ ಪಾತ್ರಗಳು ತಂದೆ, ತಾಯಿ. ತಮ್ಮ, ತಂಗಿ ಮತ್ತು ಸೊಸೆ. ಮನೆಯ ಚುಕ್ಕಾಣಿ ಹಿಡಿದ ತಾಯಿ ಬಾಯಿ ಬಡಕಿ. ಅವಳ ಮಾತಿಗೆ ಯಾರ ದನಿಯೂ ನಿಲ್ಲಲಾರದು. ಸೊಸೆಯನ್ನು ನೆಮ್ಮದಿಯಿಂದ ಇರಗೊಡದವಳು. ಆದರೆ ಸೊಸೆ ಧೈರ್ಯವಂತೆ. ಅತ್ತೆ ಸಾಯುತ್ತೇನೆಂದಾಗ ಧೈರ್ಯವಾಗಿ ‘ಸಾಯುವವರು ಯಾರೂ ತಾನು ಸಾಯುತ್ತೇನೆ ಎಂದು ಹೇಳುವುದಿಲ್ಲ. ಸಾಯುವುದಕ್ಕೂ ಧೈರ್ಯವಿರಬೇಕು’ ಅನ್ನುವವಳು. ಅವಳೇ ಮುಂದೊಂದು ದಿನ ರೈಲಿನ ಗಾಲಿಗಳಿಗೆ ತಲೆಯೊಡ್ಡುತ್ತಾಳೆ. ತಂಗಿಗೆ ಹುಚ್ಚು ಕಾಯಿಲೆ ಹಿಡಿದಾಗ ತನ್ನ ಸೊಸೆಯೇ ಸತ್ತು ಪೀಡಿಸುತ್ತಾಳೆ ಎಂದು ಊರೀಡಿ ಹೇಳಿಕೊಳ್ಳುವ ಹೆಂಗಸು ತಾಯಿ. ತಮ್ಮನ ಹೆಂಡತಿ ಸತ್ತ ಮೇಲೆ ಅವನು ಮಲ್ಲಿಗೆ ಹೂವುಗಳ ಪರಿಮಳದ ಹಿಂದೆ ಮುಖ ಹೊರಳಿಸಿದವನು. ತಂಗಿಗೆ ಹಿಡಿದ ಕಾಯಿಲೆ ಗುಣವಾಗಲೆಂದು ಮಂತ್ರಾಲಯಕ್ಕೆ ಬರುವ ಕುಟುಂಬದ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಲೋಚಿಸುತ್ತಾ ದೂರವಾಗ ಬಯಸುತ್ತಾರೆ. ಇಲ್ಲಿ ಕುಟುಂಬದ ಜವಬ್ದಾರಿಯನ್ನು ಹೊರಲಾರದ ತಂದೆ, ಮಡದಿಯನ್ನು ಕಳೆದುಕೊಂಡ ಹದಿಹರೆಯದ ವಿಧುರ ತಮ್ಮ, ಹುಚ್ಚು ಹಿಡಿದ ತಂಗಿ ವಟವಟಿಸುತ್ತಾ ಸಂಸಾರ ನಡೆಸುವ ತಾಯಿ. ಕೊನೆಗೂ ರಥೋತ್ಸವದ ದಿನ ಅವರೆಲ್ಲಾ ಬೇರೆಬೇರೆಯಾಗಿ ತಬ್ಬಲಿಗಳಾಗುತ್ತಾರೆ. ಕಥೆಯನ್ನು ನಿರೂಪಿಸಿದ ಶೈಲಿ ನಾನಾ ರೀತಿಯಿಂದ ಚಿಂತನೆಗೆ ಹಚ್ಚುತ್ತದೆ.

‘ಅಲ್ಲಾಉದ್ದೀನನ ಅದ್ಭುತ ದೀಪ’ ಕಥೆಯಲ್ಲಿ ವಾಸು ತನ್ನ ತಾಯಿಯ ಕೋರಿಕೆಯಂತೆ ಕಕ್ಕ ಸತ್ಯಬೋಧನನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಒಂದು ರಾತ್ರಿಯಲ್ಲಿ ಪಾಪದ ಬೀಜ ಬಿತ್ತಿದ ಕಕ್ಕ ಒಳ್ಳೆಯವನೆ. ಅಂಬಕ್ಕನೇ ಆತನನ್ನು ಅಡ್ಡ ದಾರಿಗೆ ಎಳೆದರೂ ತನ್ನ ತಪ್ಪು ಇಲ್ಲದಿದ್ದರೂ ಸತ್ಯವನ್ನು ದನಿ ಏರಿಸಿ ಹೇಳದೆ ಮನೆ ಬಿಟ್ಟು ಹೋಗುತ್ತಾನೆ. ಅವನು ಮರಳಿ ಬಾರದಿದ್ದರೆ ಆ ಮನೆಯಲ್ಲಿ ತಮಗೆ ಅಸ್ಥಿತ್ವವೇ ಇಲ್ಲ, ಅದಕ್ಕಾಗಿ ಆಕಾಶ ಭೂಮಿ ಒಂದಾದರೂ ಸರಿಯೇ ಅವನನ್ನು ಹುಡುಕಿಕೊಂಡು ಬರುವಂತೆ ಒತ್ತಾಯಿಸುತ್ತಾಳೆ ವಾಸುವಿನ ತಾಯಿ. ಆದರೆ ಅದು ಅಲ್ಲಾಉದ್ದೀನನ ಅದ್ಭುತ ದೀಪವನ್ನು ಅರಸಿ ಹೊರಟಂತೆ ಆಗುತ್ತದೆ. ಕಥೆ ಅಪೂರ್ಣವೆನಿಸಿದರೂ ಅದನ್ನು ನಾನಾ ಕೋನಗಳಿಂದ ಆಲೋಚಿಸಲು ಓದುಗನಿಗೆ ಬಿಟ್ಟಿರುವುದು ಕಥೆಯ ಪ್ಲಸ್ ಪಾಯಿಂಟ್.

ವಾಸ್ತವದ ಎಳೆಯಿಂದನ್ನು ಹಿಡಿದು ಬರೆದ ಕಥೆ ‘ಮೋನಾ ಲೀಸಾ’. ಇಲ್ಲಿ ಪುನರ್ಜನ್ಮದ ಅನುಭಾವಾತೀತ ಸತ್ಯವನ್ನು ಪ್ರತಿಪಾದಿಸುವ ಹಿನ್ನಲೆಯಿದ್ದರೂ ಕೋರ್ಟು 400 ವರ್ಷಗಳ ಹಿಂದಿನ ಮೋನಾ ಲೀಸಾ ಹಾಗು ತಾನು ಉಪಚರಿಸಿದ ಮೆಟಿಲ್ಡಾಳ ನಡುವಿನ ಸಾಮ್ಯತೆಯನ್ನು ನಿರಾಕರಿಸಿ, ಮೋನಾಲೀಸಾ ಕಲಾಕೃತಿಯನ್ನು ಕದ್ದೊಯ್ದ ಆರೋಪದಲ್ಲಿ ಪೆರ್ರೂಗಿಯನ್ನು ಬಂಧಿಸುತ್ತದೆ. ತನ್ನ ಪ್ರೇಯಸಿಯನ್ನು ಮೋನಾಲೀಸಾಳಿಗೆ ಹೋಲಿಸುತ್ತ ಭಾವನೆಗಳನ್ನು ನವಿರಾಗಿ ಚಿತ್ರಿಸುತ್ತಾ ಪುನರ್ಜನ್ಮವನ್ನು ಕೆದಕುತ್ತ ಸಾಗುತ್ತದೆ ಕಥೆ.

ಸೃಜನಶೀಲತೆಯ, ಚಿಂತನಾ ವೈಖರಿಯಿರುವ ಖಾಸನೀಸರ ಕಥೆಗಳನ್ನು ಒಮ್ಮೆಯಾದರೂ ಓದಲೇಬೇಕು.

Read more!

Friday, February 26, 2010

ವಿವೇಕ ಶಾನಭಾಗ ಅವರ ಆಯ್ದ ಕಥೆಗಳು


ಸರಳವಾದ ಶೈಲಿಯಲ್ಲಿ ಮನಮುಟ್ಟುವಂತೆ ಬರೆಯುವ ವಿವೇಕ ಶಾನಭಾಗ ಅವರ ಕಥೆಗಳನ್ನು ಓದಿಯೇ ಆಸ್ವಾದಿಸಬೇಕು. ಇಲ್ಲಿಯ ಹೆಚ್ಚಿನ ಕತೆಗಳಲ್ಲಿ ಉತ್ತರ ಕನ್ನಡದ ಪಾತ್ರ ಚಿತ್ರಣಗಳಿವೆ. ಕೆ.ವಿ. ಸುಬ್ಬಣ್ಣ ಅವರ ನೆನಪಿನ ‘ಮೊದಲ ಓದು’ ಪುಸ್ತಕ ಮಾಲಿಕೆಯಲ್ಲಿ ಹೊರ ಬಂದಿರುವ ವಿವೇಕರ ಆಯ್ದ ಕಥೆಗಳ ಸಂಗ್ರಹಯೋಗ್ಯ ಕೃತಿ ಇದು.

ಕಂತು ನೀಳ್ಗತೆ ಸೇರಿದಂತೆ ಏಳು ಕಥೆಗಳಿರುವ ಈ ಕೃತಿಯ ಇತರ ಕಥೆಗಳು ಲಂಗರು, ಅಂತ:ಪಟ, ಹುಲಿ ಸವಾರಿ, ಸಶೇಷ, ಮತ್ತೊಬ್ಬನ ಸಂಸಾರ ಮತ್ತು ಶರವಣ ಸರ್ವಿಸಸ್."

ಲಂಗರು ಕಥೆಯಲ್ಲಿ ಮಚವೆಯ ಪ್ರಾಮುಖ್ಯತೆ ಕಡಿಮೆಯಾದಂತೆ ರಘುವೀರನ ಜೀವನವೂ ಹದಗೆಡುವಾಗ ಊರಿನವರ ದೃಷ್ಟಿಯಲ್ಲಿ ಭೋಳೇ ಸ್ವಭಾವದವನು ಅನಿಸಿಕೊಳ್ಳಬೇಕಾಗುತ್ತದೆ. ಆದರೆ ಆತ ಮುಗ್ಧ, ಎಲ್ಲರಿಂದಲೂ ಪಕ್ಕನೆ ಮೋಸಕ್ಕೆ ಒಳಗಾಗುವವ ಮತ್ತು ಸಂಬಂಧಗಳಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸದ ಉದಾರ ಮನಸ್ಸಿನವ. ಹಾಗಾಗಿಯೇ ಅವನು ಅಣ್ಣ ಅನಂತನಿಂದಲೂ ಮೋಸಕ್ಕೊಳಗಾಗಿ ಆಸ್ತಿಯ ಪಾಲಾಗಿ ಮಚವೆಯನ್ನು ಪಡೆದವನು. ಇದು ಅವನ ಮಡದಿಯ ಆರೋಪವೂ ಹೌದು. ಓದಿನಲ್ಲಿ ಅನಂತನಿಗಿಂತಲು ಜಾಣ. ಆದರೆ ವ್ಯವಹಾರದಲ್ಲಿ ಅಣ್ಣನ ಸೂತ್ರವಿರುವಾಗ ಅದರ ಒಳಗುಟ್ಟುಗಳನ್ನು ಅರಿಯುವಲ್ಲಿ ವಿಫಲನಾದವನು. ಮಚವೆಯ ಏರಿಳಿತದಲ್ಲಿ ಅಲೌಕಿಕದ ಬೆನ್ನು ಹಿಡಿದವನಿಗೆ ಶರಾವತಿ ನದಿಗೆ ಸೇತುವೆಯಾದಾಗ ಮಚವೆಯ ಪ್ರಾಮುಖ್ಯತೆ ಹೋಗಿ, ಒಂದು ಅಸ್ಥಿಪಂಜರವಾಗುವ ಸ್ಥಿತಿಯಂತೆ, ಮಡದಿಯ ಆಸ್ತಿಯ ಬೇಡಿಕೆಯಲ್ಲಿ ಮೌನವಾಗುತ್ತಾನೆ.

ಲಂಗರು ಕಥೆಯ ರಘುವೀರನಂತೆ ಅಂತ:ಪಟ ಕಥೆಯ ಮಹಾದೇವ. ಆತ ಕೆಲಸ ಮಾಡುತ್ತಿದ್ದ ಬಟ್ಟೆಯ ಮಿಲ್ಲು ಮುಚ್ಚಿದ ಬಳಿಕ ದರ್ಜಿಯ ಕೆಲಸಕ್ಕೆ ಬರುತ್ತಾನೆ. ಅಲ್ಲಿ ರಾಮಣ್ಣನಿಂದ ಎಲ್ಲವನ್ನೂ ಕಲಿತುಕೊಳ್ಳುತ್ತಾನಾದರೂ ಅಳತೆ ತೆಗೆಯುವ ಕೆಲಸ ಮಾತ್ರ ಕಲಿಯಲು ಅವಕಾಶವಿರುವುದಿಲ್ಲ. ಮದುವೆಯ ಅನಂತರ ಜೀವನ ಸುಸೂತ್ರವಾಗಿ ನಡೆದು, ಮಾವನ ಆಸ್ತಿಗೂ ಭಾದ್ಯಸ್ಥನಾಗುತ್ತಾನೆ. ಹೊಸ ಬದುಕಿಗೆ ಹೊಂದಿಕೊಳ್ಳುವಾಗ ರಾಗಿಣಿಯ ಪರಿಚಯವಾಗುತ್ತದೆ. ಗಂಡನಿಂದ ದೂರವಿರುವ ಅವಳು ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಾಳೆ. ಅವಳ ಸಾನಿಧ್ಯ, ತನ್ನ ಸಂಬಂಧ ನೂನ್ಯತೆಯ ಹೊಳೆಯದಿದ್ದ ಮನಸಿನಲ್ಲಿ ಹೊಸ ಪುಳಕ ಹುಟ್ಟಿಸುತ್ತದೆ. ಈ ಸಂಬಂಧ ಕಾಮಾತಿರೇಕ ತಲುಪಿ, ಈ ದೇಹಗಳ ಮೂಲಕ ಹೊಸ ದಾರಿಯನ್ನು ಹುಡುಕುತ್ತಿದ್ದೇನೆ ಅನಿಸುತ್ತದೆ. ಆದರೆ ಅವಳ ನಿರ್ಧಾರವನ್ನು ಕೇಳಿ ಅಸಾಧ್ಯದ ನಿರ್ಣಯ ನೀಡುತ್ತಾನೆ.

‘ಕಂತು’ ಗ್ರಹಣಕ್ಕೆ ಸಂಬಂಧಿಸಿದ ಒಂದು ಅತ್ಯುತ್ತಮ ಕಥೆ. ಮಾವಿನೂರಿನಲ್ಲಿ ಪೂರ್ಣ ಗ್ರಹಣ ಗೋಚರಿಸುವುದೆನ್ನುವಾಗ ದೇಶ ವಿದೇಶದಿಂದ ಜನರು ಅಲ್ಲಿಗೆ ಬರುತ್ತಾರೆ. ಸದಾನಂದ ಮಾಸ್ತರರಿಗೆ ಗ್ರಹಣದ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಊರವರಿಗೆ ತಿಳಿಸುವ ಧ್ಯೇಯವಿದ್ದರೂ, ಎಷ್ಟೇ ಸರಳವಾಗಿ ವಿವರಿಸ ಹೋದರೂ ಮತ್ತಷ್ಟು ಕಗ್ಗಂಟಾಗಿ ಆ ವಿವರಗಳು ತಮ್ಮನ್ನೇ ಸುತ್ತಿಕೊಂಡಂತಾಗುತ್ತದೆ. ಗ್ರಹಣದ ಸಂಗತಿ ನಡೆಯುತ್ತಿರುವಾಗಲೇ ಆ ಊರು ಮುಳುಗಡೆಯಾಗುವಾಗ ದೇವಸ್ಥಾನದ ಜವಾಬ್ದಾರಿಯಿರುವ ಗಂಗಾಧರ ನಿಧಿಯನ್ನು ಹುಡುಕಿ ಲಾಭಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಮಾತ್ರವಲ್ಲ ಊರಿನ ಜನರೆಲ್ಲಾ ತಮ್ಮ ತಮ್ಮ ಮುಳುಗಡೆಯಾಗಲಿರುವ ಮನೆಗಳನ್ನು ಗ್ರಹಣ ವೀಕ್ಷಿಸಲು ಬರುವವರಿಗೆ ಬಾಡಿಗೆಗೆ ನೀಡಿ ಹಣ ಗಳಿಸುವ ತಂತ್ರ ಹೂಡುತ್ತಾರೆ. ಜಗನ್ನಾಥ ಮತ್ತು ಆತನ ಅಣ್ಣನ ಮಗ ಪಾಂಡುರಂಗ ಕೂಡ ಇದರಿಂದ ಹೊರತಾಗಿರುವುದಿಲ್ಲ. ಊರಿನವರಿಗೆ ಹಣದ ಅಮಲು ಹತ್ತಿಸಿ ಅವರ ಮನ ಓಲೈಸುವ ಸರಕಾರ ಆ ಜನರ ಮುಗ್ಧತೆಯ ಪ್ರತಿಬಿಂಬದಂತೆ ಕಾಣುತ್ತದೆ.

ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವ್ಯವಸ್ಥಿತ ರೀತಿಯಲ್ಲಿ ಚಿತ್ರಿಸುವ ಕಥೆ ‘ಹುಲಿ ಸವಾರಿ’. ಮಾನವೀಯ ಮೌಲ್ಯಗಳೆಲ್ಲಾ ವ್ಯವಹಾರಿಕವಾಗಿ ಮನುಷ್ಯನ ಸ್ಥಿರತೆಯನ್ನು ವಿಭಿನ್ನವಾಗಿ ತಿಳಿಸುತ್ತದೆ.

ಆರ್ಥಿಕ ಉದಾರಿಕರಣದ ಇನ್ನೊಂದು ಉತ್ತಮ ಕಥೆ ‘ಸಶೇಷ’. ನಂಬಿಯಾರ್ ಮಧ್ಯಮವರ್ಗದಿಂದ ಬಂದರೂ ಓದಿ ಒಳ್ಳೆಯ ಕೆಲಸ ಹಿಡಿದು ದುಬೈಗೆ ತೆರಳಿ ಡಾಲರ್ಗಳಲ್ಲಿ ಸಂಬಳ ಎಣಿಸುತ್ತಾನೆ. ಆದರೆ ಆತ ಒಂದು ಸಾಲದ ಸಮಸ್ಯೆಯಲ್ಲಿ ಬೀಳುತ್ತಾನೆ. ಆ ಸಾಲ ಎಷ್ಟೆಂದರೆ ‘ಹನ್ನೆರಡು ರೂಪಾಯಿಗಳು’. ತನ್ನ ಅಜ್ಜನಿಂದ ಬಂದ ಖರ್ಚುವೆಚ್ಚಗಳನ್ನು ಬರೆದಿಡುವ ಅಭ್ಯಾಸ, ಈ ಸಮಸ್ಯೆಯನ್ನು ಎತ್ತಿ ಹಿಡಿಯುತ್ತದೆ. ಈ ಅಭ್ಯಾಸ ನಾವು ಗಳಿಕೆಯ ಮಿತಿಯಲ್ಲಿದ್ದೇವೆ ಮತ್ತು ವ್ಯಯಿಸಿದ್ದು ಸಕಾರಣಕ್ಕಾಗಿ ಅನ್ನುವ ಉದ್ದೇಶದಿಂದಾಗಿ ಮಾತ್ರ ಅನ್ನುವುದಕ್ಕಾಗಿ. ಕೊನೆಗೂ ಗೆಳೆಯನ ಮಾತಿನಂತೆ ಖರ್ಚು ಬರೆಯುವುದನ್ನು ನಿಲ್ಲಿಸಿದ ನಂಬಿಯಾರ್ ದಂಪತಿಗಳಿಗೆ ಏನೋ ನಿಯಮ ಮುರಿದ ಅಳುಕು ಇರುತ್ತದೆ.

ಒಂದೇ ಹೆಸರಿನ ಇಬ್ಬರು ಹುಡುಗರ ತಂದೆಯ ಹೆಸರೂ ಒಂದೇ ಮತ್ತು ಅವರಿಬ್ಬರ ಇನಿಶಿಯಲ್ ಕೂಡ ಒಂದೇ! ಆ ಹುಡುಗರನ್ನು ಗುರುತಿಸಬಹುದಾದ ಒಂದೇ ಒಂದು ವ್ಯತ್ಯಾಸವೆಂದರೆ ಒಬ್ಬ ಆರ್ಟ್ಸ್ ಮತ್ತೊಬ್ಬ ಸಾಯನ್ಸ್ ವಿದ್ಯಾರ್ಥಿ. ಸೆಲ್ಸ್ ಮನ್ ಜಾನಕೀರಾಮನಿಗೆ ಎರಡು ಸಂಸಾರವಿದೆಯೆನ್ನುವುದು ಊರಿನ ತುಂಬಾ ಬಿರುಗಾಳಿಯಂತೆ ಹರಡಿದ ಸುದ್ದಿ. ಕೊನೆಗೂ ಓದುಗನಿಗೆ ನಿರ್ಧರಿಸಲು ಬಿಟ್ಟಂತೆ ‘ಮತ್ತೊಬ್ಬನ ಸಂಸಾರ’ ಕಥೆ ಕೊನೆಗೊಳ್ಳುವುದರಿಂದ ‘ಹೌದೋ? ಅಲ್ಲವೋ?’ ಅನ್ನುವುದು ಕಾಡುತ್ತಲೇ ಇರುತ್ತದೆ.

ಈ ಪುಸ್ತಕದ ಇನ್ನೊಂದು ಅತ್ಯುತ್ತಮ ಕಥೆ ‘ಶರವಣ ಸರ್ವಿಸಸ್’ ವೇಗದ ಬದುಕಿನಲ್ಲಿ ಎಲ್ಲವನ್ನೂ ಮನೆಯ ಬಾಗಿಲಿನವರೆಗೆ ತಲುಪಿಸುವುದನ್ನು ನಿರೀಕ್ಷಿಸುವ ಜನರ ದಿನನಿತ್ಯದ ಜಂಜಾಟವನ್ನು ಬಿಚ್ಚಿಡುತ್ತದೆ ಈ ಕಥೆ. ವ್ಯವಹಾರದ ಬೆನ್ನು ಹಿಡಿದ ಮೇಲೆ ಶರವಣನಿಗೆ ಸಂಸಾರದಿಂದ ದೂರವಾಗುವ ಸನ್ನಿವೇಶದಲ್ಲಿ ಎಲ್ಲವನ್ನೂ ಕಳೆದುಕೊಂಡ ಭಾವನೆ ಎದುರಾಗುತ್ತದೆ. ಆದರೂ ವ್ಯವಹಾರವನ್ನು ಬಿಡಲಾರದ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಈ ಕಥೆಯ ಪ್ಲಸ್ ಪಾಯಿಂಟ್ ಶರವಣನ ಫ್ಲ್ಯಾಷ್ಬ್ಯಾಕ್ ಆತನ ಮಾತಿನಿಂದಲೇ ಹೇಳಿಸುವ ತಂತ್ರ. ಇದು ಹೊಸತನವೂ ಹೌದು ಮತ್ತು ಕಥೆಗೆ ಮೆರುಗನ್ನೂ ನೀಡಿರುವುದು ಸತ್ಯ. ಹಾಗಾಗಿ ಈ ಕಥೆ ಬಹಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.

ಈ ಕೃತಿಯ ಏಳು ಕಥೆಗಳೂ ಕನ್ನಡ ಸಾಹಿತ್ಯವನ್ನು ಪ್ರವೇಶಿಸುವವರಿಗೆ ಅಪೂರ್ವ ಕೊಡುಗೆಯೆಂದರೆ ತಪ್ಪಾಗಲಾರದು. ಇಲ್ಲಿಯ ಕಥೆಗಳನ್ನು ಓದಿಯೇ ಆನಂದಿಸಬೇಕು.

Read more!

Monday, February 22, 2010

ಬಾಳಾಸಾಹೇಬ ಲೋಕಾಪುರ ಅವರ ‘ನೀಲಗಂಗಾ’ - ಒಂದು ಪ್ರೇಮ ಕಥೆ


‘ಉಧೊ! ಉಧೊ!’, ‘ಬಿಸಿಲುಪುರ’ ಮತ್ತು ‘ಹುತ್ತ’ ಕಾದಂಬರಿಗಳ ಮೂಲಕ ಚಿರಪರಿಚಿತರಾಗಿರುವ ಬಾಳಾಸಾಹೇಬ ಲೋಕಾಪುರ ಅವರ ಇನ್ನೊಂದು ಕೃತಿ ‘ನೀಲಗಂಗಾ’. ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮಾದ ಲಹರಿಯೂ ಹೌದು.

ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ. ಆಡು ಭಾಷೆಯ ಸೊಗಸು ಆಡುವುದಕ್ಕಿಂತಲೂ, ಓದುವುದರಲ್ಲಿಯೇ ಹೆಚ್ಚು ಆಪ್ತವೆನಿಸುತ್ತದೆ. ಪಂಚಯ್ಯ, ನೀಲಗಂಗಾ ಮತ್ತು ಸ್ವರೂಪರಾಣಿ ಪಾತ್ರಗಳ ಮೂಲಕ ಸ್ವಗತವಲ್ಲದೆ ಆಯಾಯ ಪಾತ್ರ ಚಿತ್ರಣದ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ."

ತುತ್ತು ಕೂಳಿಗೂ ಗತಿಯಿಲ್ಲದ ಬಡ ಹುಡುಗ ಪಂಚಯ್ಯ. ಮನೆಯವರ ಅನಾಧಾರದಲ್ಲಿ ಅನಾಥನಾಗಿ ಆಶ್ರಮ ಸೇರಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಕವಿ ಹೃದಯದ ಆತ ಪ್ರಬುದ್ದನಾಗಿ ಬೆಳೆದು ಸಾರಸ್ವತ ಲೋಕದ ‘ಮೃತ್ಯುಂಜಯ’ ಆಗಿ ಕಾಲೇಜ್ನಲ್ಲಿ ಪ್ರೊಫೆಸರೂ ಆಗುತ್ತಾನೆ.

ನೀಲಗಂಗಾ, ವೇದಮೂರ್ತಿ ‘ಮಲ್ಲಯ್ಯ’ನವರ ಮಗಳು. ಹೆಡೆದವ್ವನ ಪ್ರೀತಿಯಿಂದ ವಂಚಿತಳಾದ ಅವಳಿಗೆ ಹೆತ್ತಬ್ಬೆಯ ಪ್ರೀತಿಯ ಜೊತೆಗೆ ಜವಾಬ್ದಾರಿಯ ತಂದೆಯಾಗಿ ಅವೆರಡು ತಾವೇ ಆಗಿ ಅವಳನ್ನು ಬೆಳೆಸುತ್ತಾರೆ ಮಲ್ಲಯ್ಯ. ಕೊರ್ಯಾಣ ಹಿಡಿದು ಬದುಕುವ ಅವರ ಮನೆ ಬಡತನದ, ಬಟ್ಟಾ ಬಯಲಿನಂತೆ ಬಾಗಿಲುಗಳಿಲ್ಲದ ತೆರೆದ ಜಾಗ. ಹೀಗೆ ಬಡತನದಲ್ಲಿಯೇ ಬೆಳೆಯುತ್ತಾ ಕೃಷ್ಣೆಯಷ್ಟೆ ಮುಗ್ಧಳಾಗಿರುವ ನೀಲಗಂಗಾಳಿಗೆ ಓದಿ, ಪ್ರೊಫೆಸರ್ ಆಗಿರುವ ಪಂಚಯ್ಯನ ಮೇಲೆ ಹೇಳಿಕೊಳ್ಳಲಾರದಷ್ಟು ಪ್ರೀತಿ. ಅವನು ಮಾತನಾಡದಿದ್ದರೆ ಏನೋ ಕಳೆದುಕೊಳ್ಳುವ ತಳಮಳ. ಅಂತೊಂದು ಕಾತುರದ ದಿನ ಕೃಷ್ಣೆಯ ಬಳಿ ಅವನ ಭೇಟಿಯಾದಾಗ ಮಾತನಾಡಿದರೂ, ನಿರ್ಲಕ್ಷಿತನಂತೆ ಮೌನೊದೊಳಗೆ ನುಸುಳಿ ಹೋದ ಪಂಚಯ್ಯ ಮಲ್ಲಯ್ಯನವರು ಇಲ್ಲದ ಸಮಯದಲ್ಲಿ ನೀಲಗಂಗಾಳನ್ನು ಹುಡುಕಿಕೊಂಡು ಬರುತ್ತಾನೆ. ಹದಿಹರೆಯದ ಕನಸುಗಳ ಬೆಚ್ಚನೆಯ ಮುಸುಕೊಳಗೆ ಅರಿಯದೆ ನೀಲಗಂಗಾಳ ಕತ್ತಲ ಬದುಕಿಗೆ ನಾಂದಿ ಹಾಡುತ್ತಾನೆ.

ನೀಲಗಂಗಾಳ ಬದಲಾದ ಭಾವಕ್ಕೆ ಕಾರಣ ತಿಳಿದ ಮಲ್ಲಯ್ಯ ‘ಎಲ್ಲಾ ಶಿವನಿಚ್ಛೆ’ಯೆನ್ನುವ ದೈವ ಭಕ್ತ. ಮಗಳಿಗಾದ ಅನ್ಯಾಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದರೂ, ಅವರುಗಳ ಅಸಹಾಯಕತೆ, ಗೌಡರ ವಿಳಂಬ ನಿರ್ಧಾರ, ಕೊನೆಗೂ ಕೆಟ್ಟ ಸುದ್ದಿಯಾಗಿಯೇ ಎದುರಾಗುತ್ತದೆ. ಪಂಚಯ್ಯನನ್ನು ಹುಡುಕಿಕೊಂಡು ಬರುವಾಗ ಅವನು ಸ್ವರೂಪರಾಣಿಯೆನ್ನುವ ಅವನ ಅಭಿಮಾನಿಯಾದ ವೈದ್ಯೆಯ ಜೊತೆಗೆ ಮದುವೆಯಾಗಿ ಹನಿಮೂನಿಗೆ ಹೊರಟಿರುವುದು ತಿಳಿಯುತ್ತದೆ. ಇದರಿಂದ ನೊಂದ ಮಲ್ಲಯ್ಯ ಊರಿನವರಿಂದಲೂ ನಿಂದೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿ ನೀಲಗಂಗಾಳನ್ನು ನಿರ್ಗತಿಕಳನ್ನಾಗಿಸುತ್ತಾನೆ.

ಮುಂದೆ ಗಂಡು ಕೂಸಿಗೆ ಜನ್ಮವಿತ್ತ ನೀಲಗಂಗಾ ಎಲ್ಲದರಲ್ಲಿಯೂ ನಿರಾಸಕ್ತಳಾಗಿ, ಇನ್ನೊಂದೆಡೆ ತನ್ನ ತಂದೆಯ ಸಾವಿಗೆ ಕಾರಣನಾದೆನಲ್ಲಾವೆನ್ನುವ ದು:ಖ ಅವಳನ್ನು ಅಂತರ್ಮುಖಿಯನ್ನಾಗಿಸುತ್ತದೆ. ಬದುಕಿನಲ್ಲಿ ಸತ್ವವನ್ನೇ ಕಳೆದುಕೊಂಡ ಅವಳು ಅನ್ನಕ್ಕೂ ತಾತ್ವರ ಪಡುತ್ತಾಳೆ. ಕೊನೆಗೆ ತನ್ನ ಮೇಲೆ ಅನುಕಂಪ ತೋರಿದ ನಾಗವ್ವನೇ ಅವಳನ್ನು ನಿಂದಿಸುತ್ತಾಳೆ. ಆದರೆ ಹಸಿದ ಒಡಲಿನ ಜೊತೆಗೆ ಎಳೆ ಕೂಸಿನ ಮಮತೆ ಅವರ ಮುಂದೆ ಕೈಯೊಡ್ಡುತ್ತದೆ. ಅಲ್ಲಿ ನಾಗವ್ವನಿಂದ ಅವಮಾನಿತಳಾದ ಅವಳು ಹೆಣ್ಣು ಮಕ್ಕಳಿಗೆ ಕೊರ್ಯಣದ ಹಕ್ಕು ಇಲ್ಲದಿದ್ದರೂ ತನ್ನ ಗಂಡುಮಗುವಿಗೆ ಆ ಹಕ್ಕಿದೆಯೆಂದು ಹೊರಟಾಗ ನಾಗಮ್ಮ, ‘... ಈ ಜೋಳಿಗೆ ಐತಲ್ಲಾ ಅದು ಭಿಕ್ಷಾ ಬೇಡು ವಸ್ತು ಅಲ್ಲ. ಅದು ಶಿವನ ಸಂಕೇತ... ನಿನಗಾ ಧರ್ಮ ಸೂಕ್ಷ್ಮ ಕಲಿಸಿಕೊಡಬೇಕಾಗಿಲ್ಲ’ ಅನ್ನುವಾಗ ಸತ್ಯದ ಅರಿವಾಗಿ ಹಿಂದಕ್ಕೆ ಬರುತ್ತಾಳೆ ನೀಲಗಂಗಾ.

ಕವಿ ಹೃದಯದ ಪಂಚಯ್ಯನನ್ನು ಭೇಟಿಯಾಗಿ ತನ್ನ ತಾಯಿಯ ಮಾತನ್ನೂ ಮೀರಿ ಮದುವೆಯಾದ ಸ್ವರೂಪರಾಣಿ, ಓದುಗರನ್ನು ಭ್ರಾಮಾಲೋಕಕ್ಕೆ ಕರೆದೊಯುವ ಕವಿ, ವಾಸ್ತವದ ಬಗ್ಗೆ ಸ್ಪಷ್ಟವಾಗಿ ಮತ್ತು ನಿಷ್ಟುರವಾಗಿ ತನ್ನ ಮಡದಿಗೆ ಹೇಳುವಾಗ ತಾನು ಭಾವಿಸಿದೆಲ್ಲಾ ಸುಳ್ಳೇ ಅನಿಸುತ್ತದೆ ಅವಳಿಗೆ. ಅವಳನ್ನು ನಿರಾಶೆ ಆವರಿಸಿ, ಅವನ ಮೇಲೆ ಬೇಸರ ಮೂಡಿದರೂ, ಅದು ಪ್ರೀತಿಯ ಉನ್ಮಿಲಿತವೆನಿಸುತ್ತದೆ. ಅವನ ಬಗ್ಗೆ ವ್ಯತಿರೀಕ್ತವಾದ ಭಾವನೆಯೊಂದು ಉದಯಿಸುತ್ತದೆ. ಆದರೂ ಅವಳ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ.

ಒಮ್ಮೆ ಪಂಚಯ್ಯ ತನ್ನ ಮುಖ್ಯ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೊರಟಾಗ ಆತ ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾನೆ ಅನ್ನುವ ಸಂಶಯ ಸ್ವರೂಪರಾಣಿಗೆ ಮೂಡುತ್ತದೆ. ಅವನು ಬೆಂಗಳೂರಿಗೆ ಹೊರಟ ಮೇಲೆ ತಾನು ಉತ್ತರಭಾರತದ ಪ್ರವಾಸ ಕೈಗೊಂಡು ಅವನಿಗೆ ವಿಸ್ಮಯ ಮೂಡಿಸುವ ಹವಣಿಕೆಯಲ್ಲಿರುತ್ತಾಳೆ.

ಆದರೆ ಕಥೆ ತಿರುವು ಪಡೆಯುವುದು ಅಲ್ಲಿಯೆ. ಪಂಚಯ್ಯನ ಊರಿನವನೇ ಆದ ವಿದ್ಯಾರ್ಥಿಯೊಬ್ಬ ನೀಲಗಂಗಾಳಿಗೆ ಪಂಚಯ್ಯನಿಂದ ಆದ ಅನ್ಯಾಯವನ್ನು ಸ್ವರೂಪರಾಣಿಗೆ ತಿಳಿಸುತ್ತಾನೆ. ತಾನು ಕೈ ಹಿಡಿದಾತನ ಬಣ್ಣ ಬದಲಾದಾಗ ಹತಾಶಳಾದರೂ ತನ್ನ ಕಾರಿನಲ್ಲಿಯೇ ಪಂಚಯ್ಯನ ಊರಿಗೆ ಬರುತ್ತಾಳೆ. ನೀಲಗಂಗಾಳಿಗಾದ ಅನ್ಯಾಯವನ್ನು ತಿಳಿದು ಅವಳ ಇಚ್ಛೆಯಂತೆಯೇ ತನ್ನ ಜೊತೆಗೆ ಕರೆದುಕೊಂಡು ಬರುತ್ತಾಳೆ.

ಇತ್ತ ಪಂಚಯ್ಯ ಬೆಂಗಳೂರಿನಿಂದ ಮರಳಿದವನು ಸ್ವರೂಪರಾಣಿ ತನ್ನ ಊರಿಗೆ ಹೊರಟಿರುವುದು ತಿಳಿದು ಅವನು ಹುಡುಕಿಕೊಂಡು ಅಲ್ಲಿಗೆ ಬರುವಾಗ ಅವನ ತಾಯಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತದೆ. ಆತನ ಅಕ್ಕ ನಾಗವ್ವ ತಮ್ಮನಿಂದ ನೀಲಗಂಗಾಳಿಗಾದ ಮೋಸವನ್ನು ಕೇಳಿ ಸಿಟ್ಟಾಗುತ್ತಾಳೆ. ಆದರೂ ಅವಳಿಗೆ ಆತ ನಿರ್ದೋಶಿಯೆನ್ನುವುದು ಬೇಕು. ಆದರೆ ಪಂಚಯ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಾಗವ್ವ ನಿಷ್ಠುರವಾಗಿ ಮಾತನಾಡಿ ಒಂದು ಅಮಾಯಕ ಹೆಣ್ಣಿಗಾದ ನೋವನ್ನು ಪ್ರತಿಭಟಿಸುತ್ತಾಳೆ. ಪಂಚಯ್ಯ ಅಲ್ಲಿ ಸ್ವರೂಪರಾಣಿ ಮತ್ತು ನೀಲಗಂಗಾಳನ್ನು ಕಾಣದೆ ಹುಡುಕುತ್ತ ಬರುವಾಗ ಅವನಿಗೆ ಒಮ್ಮೆ ಸ್ವರೂಪರಾಣಿ ಹೇಳಿದ ಮಾತುಗಳು ನೆನಪಾಗಿ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಅವಳನ್ನು ಭೇಟಿಯಾದರೂ ಸ್ವರೂಪರಾಣಿಯ ದೃಢ ನಿರ್ಧಾರದ ಮುಂದೆ ತಲೆ ತಗ್ಗಿಸುತ್ತಾನೆ. ಆಕೆಯೇ ನೀಲಗಂಗಾಳ ಜೊತೆಗೆ ಊರಿಗೆ ಹೋಗು ಅನ್ನುತ್ತಾಳೆ. ಪಂಚಯ್ಯ ಕ್ಷಮಾಪಣೆ ಕೇಳಿಕೊಂಡು ಮಗುವಿನ ಜೊತೆಗೆ ನೀಲಗಂಗಾಳನ್ನು ಕರೆದುಕೊಂಡು ಊರಿಗೆ ಹಿಂತಿರುಗುತ್ತಾನೆ.

ಹೀಗೆ ಕಥೆ ಮುಗಿದರೂ ಆ ಕಥಾಭಾಷೆಯ ಸವಿ ಕೃತಿಯನ್ನು ಮಗದೊಮ್ಮೆ ಓದುವಂತೆ ಪ್ರೇರೇಪಿಸುತ್ತದೆ. ಅದೇ ಲಹರಿ, ಪದಗಳ ಸಿಹಿಯನ್ನು ಅಸ್ವಾದಿಸುವ ಮನಸ್ಸು ತನ್ನಿಂದ ತಾನೆ ಖುಷಿಪಡುತ್ತದೆ. ಈ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ರೂಪ ಪ್ರಕಾಶನ, 2406, 2407/ ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ, ಮೈಸೂರು - 570 004.

Read more!

Tuesday, January 26, 2010

ಭೃಂಗದ ಬೆನ್ನೇರಿ... ಕಲ್ಪನಾವಿಲಾಸ - ‘ಮದಾಂ ಬೊವಾರಿ’


ಪ್ರೆಂಚ್ ಕಾದಂಬರಿಗಾರ ಗುಸ್ತಾವ್ ಫ್ಲಾಬೇರ್ನ ಜನಪ್ರಿಯ ಕಾದಂಬರಿ ‘ಮದಾಂ ಬೊವಾರಿ’. ಮಧ್ಯಮ ವರ್ಗದ ಹೆಣ್ಣೊಬ್ಬಳು ಆಸೆ ಆಕಾಂಕ್ಷೆಗಳನ್ನು ಹೊತ್ತು, ಸಾಮಾನ್ಯ ವ್ಯಕ್ತಿತ್ವದವನನ್ನು ಮದುವೆಯಾಗಿ ತನ್ನ ಕನಸುಗಳಿಗೆ ತೆರೆ ಹಾಕಿಕೊಳ್ಳುತ್ತಾಳೆ. ಆದರೆ ಅವಳ ಬದುಕು ಅಲ್ಲಿಗೆ ಅಂತ್ಯವಾಗುವುದಿಲ್ಲ. ತಾನು ಕಂಡ ಕನಸಿನಂತೆ ಬದುಕು ರೂಪಿಸಬೇಕೆನ್ನುವಾಗ ಪ್ರೇಮಿಯೊಬ್ಬನ ತೆಕ್ಕೆಗೆ ಜಾರುತ್ತಾಳಾದರೂ ಅದೆಲ್ಲಾ ಕ್ಷಣಿಕ ಮತ್ತು ಸ್ವಾರ್ಥವೇ ತುಂಬಿರುವ ಜನರಿಗೆ ಸುಖದ ಮಹಲು. ಅವರ ಸಾಂಗತ್ಯದಲ್ಲಿ ತನ್ನ ಆಸೆಗಳೆಲ್ಲಾ ಕೈಗೂಡದೆನ್ನುವ ನಿರಾಶೆ ಕಾಡುತ್ತಲೇ ಇರುತ್ತದೆ. ಹೀಗೆ ಭೃಂಗದ ಬೆನ್ನೇರಿ ಕಲ್ಪನಾವಿಲಾಸದಲ್ಲಿ ತೇಲುವ ಬೊವಾರಿಗೆ ಕನಸುಗಳೇ ಬದುಕಾಗುತ್ತವೆ. ಕಂಡ ಕನಸುಗಳೆಲ್ಲಾ ಬರೀ ಭ್ರಮೆಯೆನಿಸುತ್ತದೆ. ವಾಸ್ತವದ ಅರಿವಾಗುವ ಹೊತ್ತಿಗೆ ಬದುಕು ಇಷ್ಟೇನಾ? ಅನ್ನುವ ಕಟು ಸತ್ಯ, ಉನ್ಮಾದದಿಂದ ಎತ್ತಿ ನೆಲಕ್ಕೆ ಅಪ್ಪಳಿಸುತ್ತದೆ."

ಈ ಕಾದಂಬರಿಯ ಮುಖ್ಯ ಪಾತ್ರ ಬೊವಾರಿಯಾದರೂ ಕಾದಂಬರಿ ಆರಂಭವಾಗುವುದು ಚಾರ್ಲ್ಸ್ ಬೊವಾರಿ ಎಂಬ ಹುಡುಗನಿಂದ. ಕುಡುಕ ಮತ್ತು ಜವಾಬ್ದಾರಿಗಳಿಲ್ಲದ ತಂದೆಯ ಮಗನಾದರೂ, ಮಗನ ಉನ್ನತಿಗಾಗಿ ಹಪಹಪಿಸುವ ತಾಯಿಯ ಕನಸಿನಂತೆ ಉನ್ನತ ಶಿಕ್ಷಣ ಪಡೆದ ಚಾರ್ಲ್ಸ್ ವೃತ್ತಿಯಲ್ಲಿ ವೈದ್ಯನಾಗುತ್ತಾನೆ.

ಹೀಗೆ ತನ್ನ ವೃತ್ತಿಯಲ್ಲಿ ಹೆಸರುಗಳಿಸಿಕೊಂಡ ಚಾರ್ಲ್ಸಗೆ ಲೊಬರ್ಟೊದ ಹೊಲಮನೆಯ ಮಾಲೀಕ ರುವೊಲ್ಟ್ಗೆ ಚಿಕಿತ್ಸೆ ನೀಡುವ ಸಂದರ್ಭ ಎದುರಾಗುತ್ತದೆ. ಆತನ ಮಗಳು ಎಮ್ಮಳ ಉಪಚಾರಿಕೆ ಪ್ರೇಮಕ್ಕೆ ತಿರುಗಿ, ವೈದ್ಯನ ಹೆಂಡತಿಯಾಗಿ ಕನಸುಗಳ ಮೂಟೆಯನ್ನೇ ಹೊತ್ತುಕೊಂಡು ‘ಮೆದಾಂ ಬೊವಾರಿ’ಯಾಗಿ ಬರುತ್ತಾಳೆ.

ಚಾರ್ಲ್ಸ್ನಿಗೆ ತನ್ನ ವೃತ್ತಿಯಿಂದಾಗಿ ಶ್ರೀಮಂತರ ಪಾರ್ಟಿಗಳಲ್ಲಿ ಭಾಗವಹಿಸುವ ಅವಕಾಶ ದೊರಕುತ್ತದೆ. ಆತ ತಾನು ಅತೀಯಾಗಿ ಪ್ರೀತಿಸುವ ಎಮ್ಮಳ ಜೊತೆಗೆ ಆಹ್ವಾನಗಳಿಗೆ ಹೋಗುತ್ತಾನಾದರೂ, ಅವಳು ಅವನನ್ನು ಮತ್ತು ಅವನ ಅಭಿರುಚಿಗಳನ್ನು ನಿಂದಿಸುತ್ತಾಳೆ. ಆತ ತನ್ನ ವೃತ್ತಿಗೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಅನ್ನುವ ನೋವು ಅವಳನ್ನು ಕಾಡುತ್ತಲೇ ಇರುತ್ತದೆ. ಅದೇ ಮುಂದೆ ಗಂಡನ ವೃತ್ತಿಯನ್ನು ವ್ಯವಹಾರದ ಮಟ್ಟಕ್ಕೆ ಇಳಿಸಿ, ರೋಗಿಗಳಿಂದ ಬಾಕಿ ಇರುವ ಹಣವನ್ನು ವಸೂಲಿ ಮಾಡಿಕೊಂಡು, ಐಶರಾಮದ ಜೀವನಕ್ಕೆ ನಾಂದಿ ಹಾಡುತ್ತಾಳೆ. ಆ ಸಮಯದಲ್ಲಿ ಅವಳು ತುಂಬು ಗರ್ಭಿಣಿ.

ಚಾರ್ಲ್ಸ್ ತನ್ನ ವೃತ್ತಿಯನ್ನು ಯಾನ್ಪಿಲ್ ಪಟ್ಟಣಕ್ಕೆ ಸ್ಥಳಾಂತರಿಸುತ್ತಾನೆ. ಅಲ್ಲಿ ಒಮ್ಮೆ ಬೊವಾರಿ ದಂಪತಿಗಳನ್ನು ಪಾರ್ಟಿಗೆ ಆಹ್ವಾನಿಸುತ್ತಾನೆ ಒಮೇ. ಆ ಪಾರ್ಟಿಯಲ್ಲಿ ಎಮ್ಮ ಬೊವಾರಿಗೆ ಲಿಯಾನ್ ದುಪ್ವಿ ಎಂಬ ಯುವಕನ ಪರಿಚಯವಾಗುತ್ತದೆ. ಶ್ರೀಮಂತಿಕೆಯ ಕನಸು ಕಾಣುತ್ತಿದ್ದ ಎಮ್ಮಳಿಗೆ ಆತನ ಸಾಂಗತ್ಯ, ಹಾವಭಾವ, ಮಾತು, ಮೌನಗಳು ತುಂಬಾ ಇಷ್ಟವಾಗುತ್ತವೆ. ಅವಳಿಗೆ ತಾನು ಮದುವೆಯಾದ ಹೆಣ್ಣು ಅನ್ನುವ ಮಾನಸಿಕ ಪರಿಧಿಯಿದ್ದರೂ ಅದನ್ನು ಮೀರಿ ಕನಸುಗಳ ನಾಗಲೋಟ ಸಾಗುತ್ತದೆ. ಎಮ್ಮಳ ಪ್ರೀತಿಗೆ ಲಿಯಾನ್ ಕೂಡ ಬಿದ್ದಿರುತ್ತಾನೆ. ಅವಳ ಬಗೆಗಿರುವ ತನ್ನ ಪ್ರೀತಿಯನ್ನು ತೆರೆದಿಡುವ ಹಂಬಲವಿದ್ದರೂ ತೋರಿಸಿಕೊಳ್ಳಲಾರದೆ ಅಸಹಾಯಕನಾಗುತ್ತಾನೆ.

ಎತನ್ಮಧ್ಯೆ ಎಮ್ಮ ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಆ ಮಗು ಅವಳಿಗೆ ಕುರೂಪಿಯಾಗಿ ಕಾಣುತ್ತದೆ. ತನ್ನ ಸೌಂದರ್ಯದ ಎದುರು ಮಗುವನ್ನು ದೂರ ತಳ್ಳುವ ನಿರ್ಧಯಿ ತಾಯಿಯಾಗುತ್ತಾಳೆ. ತನಗೆ ಇದುವರೆಗೂ ಇದ್ದೇ ಇರುವ ನಿಸ್ಸಾಯಕತೆಗೆ ಅವಳಲ್ಲಿ ಗಂಡು ಮಗುವೇ ಬೇಕೆನ್ನುವ ಹಂಬಲ. ಗಂಡಾದರೆ ದೇಶಾಂತರಗಳ ಮತ್ತು ಎಲ್ಲಾ ಭಾವನೆಗಳ ಶೋಧಕ್ಕೂ ಕೈ ಹಾಕಬಲ್ಲನೆಂಬ ಆಶಯವಿರುತ್ತದೆ. ಆದರೆ ಹೆಣ್ಣು ಹೆಜ್ಜೆ ಹೆಜ್ಜೆಗೂ ಹಿಮ್ಮೆಟ್ಟಬೇಕು. ದೈಹಿಕ ದುರ್ಬಲತೆ, ಕಾನೂನಿಗನುಗುಣವಾಗಿ ಅಧೀನತೆ, ಸಂಪ್ರದಾಯಿಕ ನಿರ್ಬಂಧ ಇವೆಲ್ಲದರ ಬಂಧಿಯಾಗಿಯೇ ಉಳಿಯಬೇಕಾದಿತ್ತೆನ್ನುವ ಭಯವೂ ಇರುತ್ತದೆ.

ಹಾಗೆ ಸುಖದ ಬೆನ್ನು ಹತ್ತಿ ಹೊರಟ ಅವಳಿಗೆ ಲಿಯಾನ್ ಆತ್ಮೀಯನಾಗುತ್ತಾನೆ. ಚಾರ್ಲ್ಸನಲ್ಲಿಲ್ಲದ ಗುಣಗಳನ್ನು, ಬಯಕೆಗಳನ್ನು ಲಿಯಾನ್ ತನ್ನ ಪ್ರೇಮಿ ಎಂಬ ಭ್ರಮೆಯಲ್ಲಿ ಕಂಡುಕೊಳ್ಳುತ್ತಾಳೆ. ಅವನಿಗೆ ಉಡುಗೊರೆಗಳನ್ನು ನೀಡುತ್ತಾಳೆ. ಆದರೂ ತನ್ನ ಉದ್ದುದ್ದ ಭಾವನೆಗಳನ್ನು ಅದುಮಿಟ್ಟು ಸಚ್ಚರಿತ್ರಳೆಂದುಕೊಳ್ಳುವ ಹೆಮ್ಮೆಯೂ ಅವಳೀಗೆ ಬೇಕು. ಹೀಗೆ ತನ್ನ ಗಂಡನನ್ನು ಮಗುವನು ನಿರ್ಲಕ್ಷಿಸಿದ ಅವಳು ಲಿಯಾನ್ನಂತೆಯೇ ಮೂವತ್ತು ವರ್ಷ ವಯಸ್ಸಾದರೂ, ಮದುವೆಯಿಲ್ಲದ ಒಳ್ಳೆಯ ವರಮಾನವಿರುವ, ಗಟ್ಟಿ ಹೃದಯದ, ಚತುರ ಮನುಷ್ಯ ರುದೊಲ್ಪ್ನ ತೆಕ್ಕೆಗೆ ಜಾರುತ್ತಾಳೆ. ಹಸಿದ ರುದೊಲ್ಪ್ಗೆ ಹೆಣ್ಣೆಂದರೆ ಮೋಜು ಮಾತ್ರ. ಅದನ್ನು ತಿಳಿಯದ ಎಮ್ಮ ಅವನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅವನ ಸುಖದ ರುಚಿಕೊಂಡ ಅವಳು ಅವನಿಲ್ಲದೆ ಬದುಕೇ ಇಲ್ಲವೆನ್ನುವವರೆಗೂ ಬರುತ್ತಾಳೆ. ಆದರೆ ರುದೊಲ್ಫ್ ಹೆಣ್ಣಿಗ. ನಿಂತ ನೀರಾಗಲಾರ. ಎಮ್ಮಳನ್ನು ದೂರವಿಡುತ್ತಾನೆ. ಇದನ್ನು ಅರಿತ ಎಮ್ಮ ತಾನು ಆವನಿಗೆ ಒಲಿದುದ್ದಕ್ಕಾಗಿ ಪಶ್ಚಾತ್ತಾಪವಿದೆಯೇ ಅಥವಾ ಅವನನ್ನು ಇನ್ನಷ್ಟು ಪ್ರೀತಿಸಬೇಕೆ ಎಂಬ ಜಿಜ್ನಾಸೆಗೆ ಬೀಳುತ್ತಾಳೆ. ಪ್ರೇಮ, ಪ್ರಣಯ ಎನ್ನುವ ಸರಳ ಪ್ರಮೇಯದಲ್ಲಿ ಗೊಂದಲವೆಲ್ಲ ಏಕೆ? ಅನ್ನುವ ರೂದೊಲ್ಫ್ ಕೇವಲ ಅವಳನ್ನು ಒಲಿಸಿಕೊಳ್ಳಲು ಪತ್ರ ಬರೆದಿದ್ದ ಮತ್ತು ಅದು ಹೃದಯದಿಂದ ಅಲ್ಲ. ಸತ್ಯದ ಅರಿವಾಗಿ ಅವಳಲ್ಲಿಯ ಕಾವು, ಕನಸುಗಳೆಲ್ಲಾ ಮುರಿದು ಬಿದ್ದು ಹತಾಶಳಾಗುತ್ತಾಳೆ.

ಎಮ್ಮ ಮತ್ತೆ ಭ್ರಂಗದ ಬೆನ್ನೇರಿ ಸಾಗುತ್ತಾಳೆ. ಲಿಯಾನ್ ಅವಳಿಗಾಗಿ ಕಾದಿರುತ್ತಾನೆ. ತನ್ನ ಬಾಲ್ಯದ ನೆನಪುಗಳನ್ನು ಕೆದಕಿಕೊಂಡು ತಾನು ಕಟ್ಟಿದ ಗೋಪುರವನ್ನು ಇನ್ನಷ್ಟು ಜೀವಂತವಾಗಿಸುತ್ತಾಳೆ. ‘ನಿನ್ನ ಎಲ್ಲಾ ಪ್ರೇಮಿಗಳನ್ನು ತೊರೆದು ನನ್ನಲಿಯೇ ಅನುರಕ್ತನಾಗು’ ಎಂದು ಲಿಯಾನ್ನನ್ನು ಕಾಡುತ್ತಾಳೆ. ಅವಳಿಂದ ಸುಖ ಉಂಡ ಲಿಯಾನ್ ಕೊನೆಗೂ ನಮ್ಮಿಬ್ಬರ ಸಂಬಂಧ ಬಿರುಕು ಬಿಡುವಂತೆ ಏನಾದರೊಂದು ಘಟಿಸಬಾರೆದೆ? ಎಂದು ಹಲುಬುತ್ತಾನೆ.

ಎಮ್ಮ ಪ್ರತಿ ಗುರುವಾರವೂ ಲಿಯಾನ್ಗಾಗಿ ಹೋಟೇಲ್ನಲ್ಲಿ ಉಳಿದು ಅವನಿಂದ ಸುಖ ಅನುಭವಿಸುತ್ತಾಳಾದರೂ ತನ್ನ ಖರ್ಚಿನಿಂದಲೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಸಾಲ ಪತ್ರಗಳ ಮೊರೆ ಹೋದವಳು ಸಾಲದ ಹೊರೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಸಾಲದ ಮೇಲೆ ಸಾಲ ಏರಿ ಜೀವನ ಪರ್ಯಂತ ಅದು ಮುಗಿಯುವುದಿಲ್ಲ ಅನ್ನುವ ಹೊತ್ತಿಗೆ ಮನೆಯ ಸಾಮಾನುಗಳೆಲ್ಲಾ ಹರಾಜಗುವ ಸ್ಥಿತಿ ತಲುಪುತ್ತದೆ. ತನ್ನ ಇಬ್ಬರೂ ಪ್ರೇಮಿಗಳ ನಡುವೆ ಹಾದರ ನಡೆಸಿದ ಅವಳು ಹಣಕ್ಕಾಗಿವರ ಮುಂದೆ ಕೈ ಚಾಚುತ್ತಾಳೆ.

‘ಪ್ರೇಮದ ಮೇಲೆ ಬೀಸುವ ಶೀತ ಮಾರುತಗಳಲ್ಲಿ ಅತಿ ಶೀತಲ ಕೊರತೆ ಬರುವುದೆಂದರೆ ಹಣ ಬೇಡಿದಾಗ. ಅದು ಬೇರನ್ನು ಕಿತ್ತೆಸೆಯುತ್ತದೆ’ ಅನ್ನುವ ಸತ್ಯ ಗೋಚರಿಸುತ್ತದೆ.

ಮರೀಚಿಕೆಯ ಬೆನ್ನು ಹಿಡಿದವಳು ಕೊನೆಗೆ ಬದುಕು ಇಷ್ಟೆ ಅನ್ನುವ ಅತೃಪ್ತಿಯಲ್ಲಿ ವಿಷ ಸೇವಿಸಿ ಬದುಕಿಗೆ ವಿದಾಯ ಹೇಳುತ್ತಾಳೆ. ಆ ಸಮಯದಲ್ಲಿ ಚಾರ್ಲ್ಸ್ನೇ ಎಲ್ಲವೂ ಆಗಿ, ತನ್ನ ಹೆತ್ತ ಕುಡಿಯನ್ನು ನೋಡಲು ಇಚ್ಛೆ ಪಡುತ್ತಾಳೆ. ಅವಳು ಉಳಿಸಿದ ಸಾಲದ ಶೂಲದಲ್ಲಿ ಸಿಲುಕಿ ಅವನೂ ಸಾಯುತ್ತಾನೆ. ಮುಂದೆ ಮಗಳು ಬರ್ಥ ಅಜ್ಜಿಯ ಊರಿಗೆ ಹೋದರೂ, ಒಂದು ಜವಳಿ ಕಾರ್ಖಾನೆಯಲ್ಲಿ ಕೂಲಿ ಹೆಣ್ಣಾಗಿ ಕೆಲಸ ಮಾಡುತ್ತಾಳೆ.

ಕಾದಂಬರಿಯ ಪೂರ್ವಾರ್ಧ ನಿಧಾನಗತಿಯಲ್ಲಿ ಸಾಗಿದರೂ ಉತ್ತರಾರ್ಧ ಲವಲವಿಕೆಯಂದ ಮತ್ತು ಕಾವ್ಯಾತ್ಮಕವಾಗಿ, ಸುಂದರ ಪದಗಳ ಜೋಡಣೆಯಿಂದ ಹೆಚ್ಚು ಕುತೂಹಲಕರವಾದ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ.

‘ಮದಾಂ ಬೊವಾರಿ’ ಒಮ್ಮೆ ಓದಲೇ ಬೇಕಾದ ಕೃತಿ. ಇದನ್ನು ಅನುವಾದಿಸಿದ ವಿ. ನಾಗರಾಜ ರಾವ್ ಅವರ ಪ್ರಯತ್ನವನ್ನು ಹೊಗಳಲೇಬೇಕು. ಈ ಪುಸ್ತಕವನ್ನು ಪ್ರಕಟಿಸುವವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು - 2

Read more!

Saturday, January 23, 2010

ಸಮಾಜಕ್ಕೆ ಹಿಡಿದ ‘ಕನ್ನಡಿ’


ಈ ಹಿಂದೆ ‘ಯಾನ’ ಕಥಾಸಂಕಲನದ ಮೂಲಕ ಹೊಸ ಕಥೆಗಳನ್ನು ಸೃಷ್ಟಿಸಿದ ಸೃಜನಶೀಲ ಕಥೆಗಾರ ಪ್ರೇಮಶೇಖರರ ಮತ್ತೊಂದು ಕಥಾಸಂಕಲನ ‘ಕನ್ನಡಿ’. ಪತ್ತೆದಾರಿ, ಫ್ಯಾಂಟಸಿಯ ಮೂಲಕ ಕಥೆಯನ್ನು ನಿರೂಪಿಸುವ ಅವರು ಕನ್ನಡಿಯಲ್ಲಿ ತೀರ ಹೊಸತೆನ್ನಬಹುದಾದ ಮತ್ತು ಸಮಾಜದ ಎಲ್ಲಾ ಸ್ತರಗಳ ಕಗ್ಗಂಟು, ವ್ಯಭಿಚಾರ, ಮೋಸ ಮುಂತಾದವುಗಳಿಗೆ ‘ಕನ್ನಡಿ’ ಹಿಡಿದಿರುವುದು ಅವರ ಸಾಹಿತ್ಯ ಕೃಷಿಯ ಒಳ್ಳೆಯ ಪ್ರಯತ್ನವಾಗಿದೆ.

‘ಕನ್ನಡಿ’ ಕಥಾಸಂಕಲನದಲ್ಲಿ ಹತ್ತು ಕಥೆಗಳಿದ್ದು ಒಂದೊಂದು ಕಥೆಯು ಸಮಾಜದ ಆಗುಹೋಗುಗಳನ್ನು ಕೂಲಂಕಷವಾಗಿ ಬಿಚ್ಚಿಡುತ್ತ ಹೋಗುತ್ತವೆ."


‘ಕನ್ನಡಿ’ ಕಥೆಯಲ್ಲಿ ಅನಿವಾರ್ಯ ಕಾರಣಗಳಿಗೆ ಕಸಾಯಿಖಾನೆಯನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿ, ಅಲ್ಲಿ ಕುರಿಗಳನ್ನು ಕಡಿಯುವ ವಿಧಾನದ ಬಗ್ಗೆ ಆಕ್ಷೇಪವೆತ್ತುವ ನಾಯಕ ಹೃದಯತಹ ಕಟುಕನಲ್ಲ. ಅವುಗಳನ್ನು ಮಾಂಸಕ್ಕಾಗಿ ಸಾಯಿಸುವ ರೀತಿಯಲ್ಲಿ ಅವುಗಳು ಪಡುವ ಯಾತನೆಯನ್ನು ಗಮನಿಸಿ, ಒಂದೆ ಏಟಿಗೆ ಸಾಯಿಸಲು ಸೂಚಿಸುತ್ತಾನೆ. ಆದರೆ ಒಂದೇ ಏಟಿಗೆ ಅವುಗಳನ್ನು ಸಾಯಿಸುವುದರಿಂದ ಅನುಭವಿಸುವ ನೋವು ಹೆಚ್ಚು ಅನ್ನುವುದನ್ನು ಲೇಖಕರು ವೈಜ್ಞಾನಿಕ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುವುದು ಮನಸ್ಸಿಗೆ ಸಮಾಧಾನ ನೀಡುತ್ತದೆ. ಕಥೆ ಓದಿ ಮುಗಿಸಿದರೂ ಕಸಾಯಿಖಾನೆಯ ರೌದ್ರತೆ ಓದುಗನನ್ನು ಕಾಡುತ್ತಲೇ ಇರುತ್ತದೆ.

ಅಲೆಮಾರಿಗಳ ಬದುಕು ಮತ್ತು ಇಂದಿನ ಸಾಮಾಜಿಕ ಸಮಸ್ಯೆಯಾದ ‘ಭಯೋತ್ಪಾದನೆಯ ಭೀತಿಯನ್ನು ಬಿಂಬಿಸುವ ಕಥೆ ‘ಗಾಯ’. ಮನೆಯ ಎದುರು ಬಂದ ಅಲೆಮಾರಿಗಳ ದಿಂಡು ಖಾಲಿ ಜಾಗದಲ್ಲಿ ಪಿರಮಿಡ್ಡಿನಂತೆ ಮನೆಯನ್ನು ನಿರ್ಮಿಸಿ ಊಹಾ ಪೋಹಗಳಿಗೆ ಎಡೆಯಾಗುವುದು ಚೆನ್ನಾಗಿ ನಿರೂಪಿತವಾಗಿದೆ. ಅಪರಿಚಿತರ ಬಗ್ಗೆ ಅನುಮಾನ ಪಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ನೆರೆಕರೆಯವರೆಲ್ಲಾ ಒಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಥೆಯ ಉತ್ತರಾರ್ಧ ಪ್ಯಾಂಟಸಿಯಲ್ಲಿ ಕೊನೆಯಾಗುವುದು ತುಸು ಗೊಂದಲವೆನಿಸಿದರೂ ಒಳ್ಳೆಯ ಕಥೆ ‘ಗಾಯ’

‘ಸೆಕ್ಯೂಲಿರಿಸಂ’ ಅನ್ನು ವಿಢಂಬನಾತ್ಮಕವಾಗಿ ನಿರೂಪಿಸುವ ಹಾಗೂ ಸರಕಾರ ಮತ್ತು ಧಾರ್ಮಿಕ ಬಂಡುಕೋರರ ನಡುವಿನ ಕದನವಿರಾಮದ ನಂತರದ ಏಳಿಗೆಯ ಕಥೆ ‘ಮುಖಾಮುಖಿ’. ರಾಜಕೀಯದ ಅಧಿಕಾರವಿರುವಾಗ ಜನಪ್ರತಿನಿಧಿಗಳು ಪ್ರಜೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಮನೋಜ್ಞವಾಗಿ ತೆರೆದಿಡುವ ಕಥೆಯಿದು. ‘ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು’ ಕಥೆಯಲ್ಲಿ ಅಭಿವೃದ್ಧಿಯಿಂದ ಕೆಡುಕಾಗಿ ಮತ್ತೆ ಅಭಿವೃದ್ಧಿಯನ್ನೇ ಬಯಸದ ಜನ, ವಿಚಾರವಾದಿ ಸಂಘಟನೆಯ ಎದುರು ನಿಲ್ಲುತ್ತಾರೆ. ಈ ಕಥೆ ಅಭಿವೃದ್ಧಿಯ ಹೆಸರಲ್ಲಿ ನಡೆಯುವ ಆಧ್ವಾನಗಳನ್ನು ಚಿತ್ರಿಸುತ್ತದೆ.
ಸಮಾಜದಲ್ಲಿ ಏನನ್ನು ಬಯಸದ ಮತ್ತು ತನ್ನಷ್ಟಕ್ಕೆ ತಾನಿರುವ ವ್ಯಕ್ತಿ ನಾಗಲಿಂಗಂನ ಹೊಸ ಸಂಬಂಧದ ಕಥೆಯಾಗಿ ಮೂಡಿರುವ ಕಥೆ ‘ಅರ್ಥ’. ಪ್ರೊ. ಸಂಗೊಟೈಯವರ ಮಾತಿನಂತೆ ಅವನನ್ನು ವಿಚಾರಿಸುವ ಕಥಾನಾಯಕನಿಗೆ ಮಾತಾಡಲು ಅವಕಾಶ ನೀಡದ ನಾಗಲಿಂಗಂ ತನ್ನ ಹೆಂಡತಿಯ ಸಾವಿಗೆ ಪರೋಕ್ಷವಾಗಿ ಕಾರಣನಾಗುತ್ತಾನೆ. ಮುಂದೆ ಅವನು ಅರೆಸ್ಟ್ ಆಗಿ ಬಿಡುಗಡೆಯಾದರೂ ತನ್ನ ಹೆಂಡತಿಯನ್ನು ಕೊಲೆ ಮಾಡದೆ ಅವಳಾಗಿಯೇ ದೂರವಾಗುವಂತೆ ಮಾಡಿದ ಅವನ ಚಾಣಾಕ್ಷ ಬುದ್ಧಿಗೆ ಬೆರಗಾಗುತ್ತಾನೆ ನಿರೂಪಕ. ಮಗಳ ಸಾವಿನ ಬಗ್ಗೆ ದೂರು ಕೊಟ್ಟ ಅತ್ತೆಯೇ ದೂರನ್ನು ವಾಪಾಸು ತೆಗೆದುಕೊಂಡು ಕೇಸ್ ಅಲ್ಲಿಗೆ ಮುಚ್ಚಿ ಹೋಗುತ್ತದೆ.

ಬಾಲ್ಯ ಸಖ್ಯದ ಇತಿಮಿತಿಗಳಿಗೊಂದು ಪರಿಶುದ್ಧ ಮನಸುಗಳೆರಡರ ವ್ಯಾಪ್ತಿಯೊಳಗೆ ಸುಂದರವಾಗಿ ಕಟ್ಟಿದ ಕಥೆ ‘ಈ ಕಥೆಗಳಿಗೇಕೆ ಆದಿ ಅಂತ್ಯಗಳಿಲ್ಲ?’ ಏನೋ ನಿರೀಕ್ಷಿಸುವ ಹೊತ್ತಿಗೆ ಏನೂ ನಡೆಯದೆ; ಏನೊ ಆಗದೆನ್ನುವಾಗ ಏನೋ ಘಟಿಸಿ, ನಾವೇ ಆ ಪಾತ್ರಗಳಾಗಿ ಹೋಗುವಷ್ಟು ಮನಸ್ಸನ್ನು ಆವರಿಸುವ ಕಥೆಯಿದು. ಇದೇ ಸಂಕಲನದ ಪ್ಲಸ್ ಪಾಯಿಂಟ್ ಆಗಿರುವ ಈ ಕಥೆ ನಮ್ಮದಲ್ಲದ ಹಾದಿಯಲ್ಲಿ ಬಹುದೂರ ನೆನಪಾಗಿ ಸಾಗುವ ಕಥೆ.

ಈ ಸಂಕಲನದ ಇನ್ನೊಂದು ಉತ್ತಮ ಕಥೆ ‘ಕ್ರೌರ್ಯ’ ಅಸಹಾಯಕ ಮಹಿಳೆಯೊಬ್ಬಳನ್ನು ಅಮಾನುಷವಾಗಿ ಬಳಸಿಕೊಳ್ಳುವ ನೀತಿ ಗೆಟ್ಟ ಯುವಕರು, ಸಮಾಜ ಎತ್ತ ಸಾಗಿದೆ ಅನ್ನುವುದನ್ನು ತಿಳಿಸಿದರೆ, ಇಂತಹ ಅವಮಾನವೀಯ ಸ್ಥಿತಿಯಲ್ಲಿ ದೂರ ನಿಂತು ಪೌರುಷ ತೋರುವ ಇನ್ನೊಬ್ಬ ಯುವಕ, ತನ್ನ ಹೊಟ್ಟೆ ತುಂಬಿಸುವ ವಾಹನವನ್ನೇ ಬಿಟ್ಟು ಓಡುವ ಡ್ರೈವರ್ ಮತ್ತು ಇಡೀ ಪರಿಸ್ಥಿತಿಯನ್ನು ಪ್ರತಿಭಟಿಸುವ ವಯಸ್ಕನ ಪಾತ್ರ ಚಿತ್ರಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಆ ಕೃತ್ಯದ ಬಗ್ಗೆ ಡಿಟೈಲ್ಡ್ ರೀಪೋರ್ಟ್ ತಯಾರಿಸುವುದಕ್ಕೆ ಮಹಿಳೆಯ ಅಸಹಾಯಕ ಪರಿಸ್ಥಿತಿಯ ಚಿತ್ರಗಳನ್ನು ತೆಗೆಯಲು ಮುಂದಾಗುತ್ತಾನೆ ಯುವಕ. ಅಂತಹ ಪರಿಸ್ಥಿತಿಯಲ್ಲಿ ವೃದ್ಧನ ಮಾತುಗಳು ಮತ್ತು ಸಾಂತ್ವನ ಆ ಮಹಿಳೆಗೆ ಮಾತ್ರವಲ್ಲ ಓದುಗನಿಗೂ ‘ಕೊನೆಗೂ ಸಹಾಯಕ್ಕೆ ಒಬ್ಬನಿದ್ದಾನಲ್ಲಾ?’ ಅನ್ನುವ ಸಮಾಧಾನವನ್ನು ನೀಡುತ್ತದೆ.

ಫ್ಯಾಂಟಿಸಿಯ ಲೋಕಕ್ಕೆ ಎಳೆದೊಯ್ಯುವ ‘ಉಗಮ’ ಮತ್ತು ‘ಹುತ್ತ್ತ’ ಕಥೆಯಲ್ಲಿ ಬರುವ ಪ್ರೊಪೆಸರ್ ಮತ್ತು ಬಾಲ್ಕನಿಯ ಒಂಟಿತನದ ಭಾವೊದ್ವೇಗವನ್ನು ಬಹಳ ಹಾಸ್ಯಮಯವಾಗಿ ನಿರೂಪಿಸುವ ಕಥೆ. ಮುಖದಲ್ಲೊಂದಿಷ್ಟು ಮಂದಹಾಸವನ್ನು ಮೂಡಿಸಬಲ್ಲ ಕಥೆ ಇದು.

ಹಾಸ್ಯದಿಂದ ಆರಂಭವಾಗಿ ಬದುಕಿನ ಕಹಿ ಸತ್ಯವನ್ನು ಬಿಚ್ಚಿಡುವ ಕಥೆ ‘ಮೂಡಲ ಸೀಮೆಯ ಮುಸ್ಸಂಜೆ ಸೊಲ್ಲು’ ತನ್ನ ಸ್ವಂತ ಅಕ್ಕನೆಂದು ಭ್ರಮಿಸಿದವನು ಆಕೆ ತನ್ನ ತಾಯಿಯೆನ್ನುವ ನಿಗೂಢತೆಯನ್ನು ಬಿಚ್ಚಿಡುವಾಗಿನ ಆನಂದ ಕೇವಲ ಹುಡುಗನದಲ್ಲ, ಓದುಗರದ್ದೂ.

ಪ್ರೇಮಶೇಖರ ಅವರ ‘ಕನ್ನಡಿ’ ಓದುಗರನ್ನು ಪ್ರತಿಫಲಿಸುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕವನ್ನು ಹೊರತಂದಿರುವವರು ‘ವಿಸ್ಮಯ ಪ್ರಕಾಶನ’ ‘ಮೌನ’ 366, ನವಿಲು ರಸ್ತೆ, ಎ-ಬಿ ಬ್ಲಾಕ್, ಕುವೆಂಪುನಗರ, ಮೈಸೂರು - 570 023 ಇವರು.

Read more!

Wednesday, January 13, 2010

ಪರಿಸರ ಸಂರಕ್ಷಣೆಯ ಮಾರ್ದನಿ - ಪರಿಸರದ ಮರುದನಿಗಳು


ಪರಿಸರದ ಬಗ್ಗೆ ಅದೆಷ್ಟೊ ಕಥೆ ಕಾದಂಬರಿ ಲೇಖನ ಮಾಲೆಗಳನ್ನು ಓದುತ್ತಿದ್ದೆನಾದರೂ ಸಂಪೂರ್ಣವಾಗಿ ನಮ್ಮ ಪರಿಸರ ಜಾಗ್ರತಿಯ ಬಗ್ಗೆ, ಬದಲಾಗುತ್ತಿರುವ ಪರಿಸರದ ಬಗ್ಗೆ ಮಾರ್ದನಿಸುತ್ತಿರುವ ಎಚ್ಚರಿಕೆಯ ಫಂಟಾ ಘೋಷಗಳನ್ನು ತಿಳಿದುಕೊಳ್ಳುತ್ತಾ, ನಮ್ಮ ಒಳಗೂ ಒಬ್ಬ ಪರಿಸರ ಪ್ರೇಮಿ ಹುಟ್ಟಿಕೊಳ್ಳುತ್ತಾ, ಅದರ ಸಂರಕ್ಷಣೆಯ ಬಗ್ಗೆ ಕಿಂಚಿತ್ತು ಅಲೋಚನೆಯನ್ನು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಈ ದಾರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆಗಳು ನನ್ನನ್ನು ಬಹಳವಾಗಿ ಆಕರ್ಷಿಸಿದ್ದವು, ಮಾತ್ರವಲ್ಲ ಅವರ ಕಥೆಗಳಲ್ಲಿರುವ ನೈಜ್ಯ ಚಿತ್ರಣ, ಪರಿಸರದ ಕಾಳಜಿ, ಪರಿಸರದಲ್ಲಿ ಒಂದಾಗಿ ಹೋಗುವ ಪಾತ್ರ ಚಿತ್ರಣಗಳು ಕಣ್ಣ ಮುಂದೆ ನೈಜತೆಯೆಂಬಂತೆ ದೃಗೋಚರಿಸುತ್ತದೆ. ಪಾತ್ರಗಳ ನೋವು, ಹತಾಶೆಗಳು ಕೊನೆಗೆ ನಮ್ಮಲ್ಲೇ ಉಳಿದು ಬದುಕಿನ ಇಡೀ ಹತಾಶೆಯನ್ನು ಬಿಚ್ಚಿಟ್ಟು ತಲೆಯೊಳಗೆ ಕೊರೆಯುತ್ತಲೇ ಇರುತ್ತವೆ."

ಹೇಗೆ ಪರಿಸರವನ್ನು, ಪರಿಸರದ ಸುತ್ತಾ ನಡೆಯುವ ಮಾನವ ನಿರ್ಮಿತ ವ್ಯವಸ್ಥೆಯೊಳಗೆ ಅದು ನಾಶವಾಗುತ್ತ ಒಂದೊಮ್ಮೆ ‘ಇಲ್ಲ’ವಾಗುವ ಮತ್ತು ‘ಇದ್ದವೆಂಬ’ ಅಂತೆ ಕಂತೆಗಳ ನಡುವೆ ಸುದ್ದಿಯಾಗಬಹುದಾದ ಈ ಪರಿಸರದ ಕಥೆಗಳನ್ನು ಹುಡುಕುತ್ತಿರುವಾಗ ಲೇಖಕ ‘ಶಶಿಧರ ವಿಶ್ವಾಮಿತ್ರ’ ಅವರ ‘ಪರಿಸರದ ಮರುದನಿಗಳು’ ನನ್ನ ಕಣ್ಣಿಗೆ ಬಿತ್ತು. ಕೇವಲ ಕಥೆಯಾಗಿ ಉಳಿಯದೆ ಪರಿಸರ ಜಾಗೃತಿಯ ಅಭಿಯಾನ ರೂಪಿಸುವಲ್ಲಿ ಒಂದು ಪ್ರಯತ್ನವಾಗಬಲ್ಲ ಈ ಸಂಕಲನದಲ್ಲಿ ಸುಮಾರು 8 ಕಥೆಗಳು ಹಾಗೂ 2 ನಿಳ್ಗತೆಗಳು ಇವೆ.

ಪ್ರಾಣಿ, ಪಕ್ಷಿ ಸಂಕುಲದ ಅವನತಿ ಮಾನವ ನಿರ್ಮಿತ ಸಮಾಜದಲ್ಲಿ ಹೇಗೆ ಸಂಭವಿಸುತ್ತದೆಯೆನ್ನುವುದನ್ನು ಇಲ್ಲಿಯ ಕಥೆಗಳು ಸ್ಪಷ್ಟವಾಗಿ ತಿಳಿಸುತ್ತವೆ. ಗುಬ್ಬಚ್ಚಿಯಂತಹ ಹಕ್ಕಿಗಳು ಮೊಬೈಲ್ ಹೊರಸೂಸುವ ವಿಕಿರಣಗಳಿಗೆ ಸಿಲುಕಿ ಮತ್ತು ಮಾದ್ಯಮಗಳ ಭರಾಟೆಯಲ್ಲಿ ಅಪರೂಪವಾಗಿರುವಂತಹ ಸನ್ನಿವೇಶಗಳಂತೆ ಇಲ್ಲಿಯ ಕಥೆಗಳಲ್ಲಿ ನರಿ, ಹಾವು, ಗೀಜಗ, ಕಾಗೆ, ಚಿರತೆಗಳ ಸಂತತಿ ಹೇಗೆ ಅಳಿಯುತ್ತದೆ ಎನ್ನುವುದನ್ನು ಮನ ಮುಟ್ಟುವ ರೀತಿಯಲ್ಲಿ ನಿರೂಪಿಸಲಾಗಿದೆ.

ಮೇಲ್ನೋಟಕ್ಕೆ ಇಲ್ಲಿಯ ಕಥೆಗಳು ಮಕ್ಕಳ ಕಥೆಗಳಂತೆ ಕಂಡರೂ ಅದರಲ್ಲಿರುವ ಕಾಳಜಿ ಮಹತ್ವವಾದವು. ಪ್ರತಿಯೊಂದು ಪ್ರಾಣಿ ಪಕ್ಷಿಯ ಸ್ವಾತಂತ್ರ್ಯಕ್ಕೆ ಮನುಷ್ಯ ಹೇಗೆ ಅಡ್ಡಗಾಲಾಗುತ್ತಾನೆ ಮತ್ತು ಅವುಗಳನ್ನು ಯಾವ ರೀತಿಯಲ್ಲಿ ತನ್ನ ಸ್ವಾರ್ಥಕ್ಕಾಗಿ ನಡೆಸಿಕೊಳ್ಳುತ್ತಾನೆ ಎನ್ನುವುದನ್ನು ಅಧ್ಯಯನ ಮಾಡಿ ಬರೆದಂತೆ ಬಹಳ ಸುಂದರವಾಗಿ ಲೇಖಕರು ಬರೆದಿದ್ದಾರೆ.

ಕೇವಲ ಪ್ರಾಣಿ, ಪಕ್ಷಿ, ಜೀವ ಜಂತುಗಳ ಬಗ್ಗೆ ಮಾತ್ರವಲ್ಲ ಪರಿಸರ ಪ್ರಜ್ಞೆಯಲ್ಲಿ ಮೂಡುವ ಕಾಡು, ನದಿ, ಹಳ್ಳ, ತೊರೆ,ಜಲಪಾತ, ಸಸ್ಯರಾಶಿ, ಸಕಲ ಜೀವ ಸಂಕುಲಗಳ ಬಗ್ಗೆ ಪ್ರೀತಿ ಹುಟ್ಟಿಸುವ ವಿವರಗಳು, ನಾವೇ ಆ ಪರಿಸರದಲ್ಲಿದ್ದೇವೆ ಅನ್ನುವ ಭ್ರಮೆಯನ್ನು ಹುಟ್ಟಿಸುತ್ತದೆ.

‘ಕಡೆಯ ಚಿರತೆ’ ನೀಳ್ಗತೆಯಲ್ಲಿ ಒಂದು ಪಾತ್ರ. ಬೇಟೆಗಾರ ಮಾತ್ರ ಅಲ್ಲ ಬೇಟೆಗಾರರ ಗುರುವೂ ಆಗಿದ್ದೂ ಈಗ ಪರಿಸರದ ಸತ್ಯತೆ ತಿಳಿದ ಆತನ ಮಾತುಗಳು ನಮ್ಮಲ್ಲೂ ಒಂದಷ್ಟು ಪರಿಸರ ಪ್ರಜ್ಞೆಯನ್ನು ಹುಟ್ಟಿಸುತ್ತದೆ.

“ಕಾಡು ಎಂದರೇನು? ಮರಗಿಡಬಳ್ಳಿಗಳೇ? ಹುಲಿ, ಜಿಂಕೆ, ಸಿಂಹ ಇತ್ಯಾದಿ ಮೃಗಗಳೇ? ಮಲೆಗಳೇ? ಇಷ್ಟು ಮಾತ್ರ ಅಲ್ಲ ಎಂದು ನನ್ನ ಅನುಭವ ಸಾರುತ್ತಿದೆ. ಕಾಡೆಂದರೆ ವಾಸ್ತವವಾಗಿ ಮೈ ಬೀಸಿ ಹರಡಿರುವ ಬೆಟ್ಟ, ಗುಡ್ಡ, ಕಣಿವೆ, ಮೈದಾನಗಳಲ್ಲಿ, ತನ್ನಂತೆ ಮೈದಳೆದಿರುವ ಶಾಂತಿಯಲ್ಲಿ, ಮರ, ಗಿಡ, ಪ್ರಾಣಿಗಳು ಸ್ವೇಚ್ಛೆಯಿಂದ ಬಾಳುವ ಬಾಳು ಎನಿಸುತ್ತದೆ. ಹರ್ಷವನ್ನು ಬೀರುವ ಹರಿದ್ವನಗಳಲ್ಲಿ ನಡುರಾತ್ರಿ ಮಿಟುಕುವ ನಕ್ಷತ್ರಗಳ ಮಂದ ಬೆಳಕಿನಲ್ಲಿ ಆಕಾಶ ಹೊದ್ದು ಮಲಗಿರುವ ಕಾಡಿನ ಒಕ್ಕಡೆ ನೀವು ಮಿಸುಕದೆ ಹಾಯ ಕೂತರೆ, ಈಗ ನಾನು ಹೇಳುತ್ತಿರುವ ಶಾಂತಿಯ ಅರ್ಥವೇನು? ಬಾಳಿನ ಸಂಭ್ರಮಕ್ಕೆ ಶಾಂತಿ ಏಕೆ ಬೇಕು? ಎಂದು ಗೊತ್ತಾಗುತ್ತದೆ”

ಈ ಮೇಲಿನ ವಾಕ್ಯಗಳೇ ನಮ್ಮನ್ನು ಪರಿಸರ ಸಂಬಂಧಿ ಪ್ರದೇಶದೊಳಗೆ ಕರೆದೊಯ್ಯುವ ಅತೀತಾತೀತ ಶಕ್ತಿಯೆನಿಸುವುದರಿಂದಲೇ ಪರಿಸರದ ಮೇಲೆ ವ್ಯಾಮೋಹ ಹುಟ್ಟಿಸುತ್ತದೆ.

ಇಲ್ಲಿಯ ಬಹುತೇಕ ಕತೆಗಳು ದುರಂತದಲ್ಲಿಯೇ ಮುಗಿಯುವುದು, ತಿಳಿದೇ ತಿಳಿಯದೆಯೊ ಮನುಷ್ಯನ ಪ್ರಗತಿಯೆಂಬ ಸ್ವಾರ್ಥದಲ್ಲಿಯೇ ನಲುಗಿ ಹೋಗುವ ಜೀವಿಗಳ ದುರಂತಮಯ ಬದುಕು ಸ್ಪಷ್ಟವಾಗಿ ಚಿತ್ರಿತವಾಗಿದೆ. ತಾನು ತನ್ನ ಪರಿಸರವೆಂಬ ಅಭಿಮಾನ, ತನ್ನಂತೆಯೇ ಇತರ ಜೀವ ಜಂತುಗಳು ಬದುಕಲು ಅವಕಾಶ ಕಲ್ಪಿಸಬೇಕೆನ್ನುವ ಪ್ರಜ್ನೆ ಇರುವುದಾದರೆ ಅದೆಷ್ಟೊ ವ್ಯೆವಿದ್ಯಮಯ ಜೀವ ಜಂತನ್ನು ವಿನಾಶದಂಚಿನಿಂದ ತಪ್ಪಿಸಬಹುದು.

ಈ ಪರಿಸರ ಕಥಾ ಸಂಪದದ ನರಿಗಳು, ಗೌಜುಗಗಳ ಅಂಕ, ಗೃಧ್ರಸಂಸಾರ, ದಿಕ್ಕೆಟ್ಟ ಗಜಗಣ, ರೆಕ್ಕೆಮುರುಕ, ಅರಗಿಣಿಗಳ ಪ್ರಸಂಗ, ಮುಸವಗಳ ಜೋಡಿ, ಕಾಡುಬೆಕ್ಕಿನ ಮರಿ ಮತ್ತು ಒಂದಾನೆಯಿತ್ತು ಕಥೆಗಳೆಲ್ಲಾ ಮುಂದಿನ ಪೀಳಿಗೆಗೆ ಒಂದು ಅದ್ಭುತ ಕಥನಕವಾದರೂ ಹೆಚ್ಚಲ್ಲ. ಕಲುಷಿತವಾಗುತ್ತಿರುವ ಪರಿಸರ, ನಶಿಸುತ್ತಿರುವ ಜೀವ ಸಂಕುಲಗಳು ಇಂತಹ ಕಥನಕಗಳಲ್ಲಿಯೇ ಸಿಗುವ ದಿನ ದೂರವಿರಲಾರದು!

ಕಡೆಯ ಚಿರತೆ, ನೀಳ್ಗತೆಯ ಚಿರತೆಗಳ ಅವಸಾನ ಇವತ್ತು ಮಾಯವಾಗಿ ಕೇವಲ ಪ್ರಾಣಿ ಸಂಗ್ರಹಾಲಯದಲ್ಲಿ ನೋಡುವ ಮತ್ತು ಅಳಿವಿನಂಚಿನಲ್ಲಿರುವ ಹುಲಿ ಸಂತತಿಯ ಹಾಗೆ ಚಿರತೆಯ ಸಂತತಿಯೂ ಅಳಿಯುವಲ್ಲಿ ಸಂಶಯವಿಲ್ಲವೆನ್ನುವುದನ್ನು ಬಿಂಬಿಸುತ್ತದೆ. ಈ ಸಂಕಲನದ ಇನ್ನೊಂದು ನೀಳ್ಗತೆ ‘ಕಾಡೊಂದಿತ್ತಲ್ಲ’ ಕಣ್ಣ ಮುಂದೆ ಪ್ರಕೃತಿಯ ಸಮೃದ್ಧ ಚಿತ್ರವನ್ನು, ಕಾಡಿನ ವೈಭವನ್ನೂ ತೆರೆದಿಡುತ್ತದೆ.

ಇಂತಹ ಪರಿಸರದ ಮರುದನಿಗಳು ಸ್ವಲ್ಪ ಮಟ್ಟಿಗಾದರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೆಚ್ಚಿಸಿದರೆ ಅದೇ ಕಾಡು, ಅದೇ ಜೀವ ಸಂಕುಲಗಳು ಉಳಿದಾವೇನೊ?

ಈ ಪುಸ್ತಕವನ್ನು ಭಾಗ್ಯಲಕ್ಷ್ಮಿ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿದ್ದಾರೆ. ಇದರ ಬೆಲೆ ಕೇವಲ 150 ರೂಪಾಯಿಗಳು.

Read more!