Thursday, February 26, 2009

ಡಬಲ್ ಸಿಮ್!!


ರಾತ್ರಿ ಸರಿ ಸುಮಾರು ಹನ್ನೊಂದುವರೆ ಗಂಟೆಯ ಸಮಯ! ಪನ್ನಾಲಾಲ್ ತನ್ನದೇ ವ್ಯವಹಾರಿಕ ಲೋಕದಲ್ಲಿ ಮುಳುಗಿದ್ದಾನೆ. ಖರ್ಚು ವೆಚ್ಚಗಳ ರಶೀದಿ, ವೋಚರ್‍‍ಗಳನ್ನು ಜರ್ನಲ್ ಪುಸ್ತಕದಲ್ಲಿ ನಮೂದಿಸಿ, ಲೆಡ್ಜರ್ ಪುಸ್ತಕಕ್ಕೆ ವರ್ಗಾಯಿಸಿ, ನಗದು, ಬ್ಯಾಂಕ್ ಬ್ಯಾಲೆನ್ಸ್‍ಗಳು ತಾಳೆಯಾಗುವವರೆಗೆ ನೆಮ್ಮದಿ ಅನಿಸುತ್ತಿರಲಿಲ್ಲ. ಜಮಾ ಮಾಡಿದ ನಂತರ ಬಂದ ಶಿಲ್ಕು ಮುಂದಿನ ತಾರೀಖಿಗೆ ಬರೆದು ಲೆಕ್ಕದ ಪುಸ್ತಕಗಳನ್ನು ಮುಚ್ಚುವಾಗ ಶ್ರೀವಿದ್ಯಾ ಸಣ್ಣಗೆ ಗೊರಕೆ ಹೊಡೆಯುತ್ತಿರುತ್ತಾಳೆ. ಹೆಂಡತಿಗೆ ತೊಂದರೆಯಾಗದಂತೆ ಟೇಬಲ್ ಲ್ಯಾಂಪ್ ಆರಿಸಿ, ಬೆಡ್ ಸೇರಬೇಕೆಂದಿರುವಾಗ ಆತನ ಮೊಬೈಲ್ ಕೂಗಿತು!ಗಡಿಯಾರದ ಕಡೆಗೆ ಕಣ್ಣು ಹೊರಳಿಸಿದ. ಸಮಯ ಹನ್ನೆರಡು ಮೀರಿದೆ! ಈ ಅಪರಾತ್ರಿಯಲ್ಲಿ ಕರೆ ಮಾಡಿರುವವರು ಯಾರು?ಕುತೂಹಲದಿಂದ ವ್ಯಾಪಾರಿ ಮೊಬೈಲ್‍ನಲ್ಲಿ ಮೂಡಿದ್ದ ಅಪರಿಚಿತ ನಂಬರನ್ನು ತೆರೆದು ಕಿವಿಗೆ ಹಚ್ಚಿ ಮಾಮೂಲು ಪದ ಬಳಸಿದ."ಹಲೋ! ಚೆನ್ನಾಗಿದ್ದೀರಾ? ನಿಮಗೆ ಇನ್ನೂ ನಿದ್ದೆ ಬಂದಿಲ್ಲಾಂತ ಗೊತ್ತು. ಅದಕ್ಕೆ ಕರೆ ಮಾಡ್ದೆ" ಅತ್ತಲಿನಿಂದ ಬಂದ ಹುಡುಗಿಯ ಮಧುರ ಕಂಠಕ್ಕೆ ಇಡೀ ಮೈ ಬೆವರುವಂತಾಯಿತು.

ದೃಷ್ಟಿ ಅನಾಯಾಸವಾಗಿ ನಿದ್ರೆಯ ಆಳಕ್ಕೆ ಇಳಿದ ಶ್ರೀವಿದ್ಯಾಳ ಕಡೆಗೆ ಚಲಿಸಿತು. ಓರೆಯಾಗಿದ್ದ ಬಾಗಿಲನ್ನು ಸಂಪೂರ್ಣ ಮುಚ್ಚಿ ಮೇಜಿನ ಅಂಚನ್ನು ಹಿಡಿದು ನಿಂತ! ಕೈ, ಕಾಲುಗಳು ನಡುಗುತ್ತಿದ್ದುದನ್ನು ಸ್ವರ ಸ್ಪಷ್ಟವಾಗಿ ಸೂಚಿಸಿತು. ತುಟಿಗಳು ಅದುರಿ ಮಾತು ಹೊರಗೆ ಬಂತು."ಯಾರು ನೀನು?""ಅಷ್ಟು ಬೇಗ ಮರ್‍ತು ಬಿಟ್ರಾ? ನಿನ್ನೆ ಸಂಜೆ... ಹಳದಿ, ಪರ್ಪಲ್ ಅಂಚಿನ ಗಾಗ್ರ ಚೋಲಿ... ನೀವೇ ಹೇಳಿದ್ರಿ ಅದು ನನ್ನ ಮೈ ಬಣ್ಣಕ್ಕೆ ಸರಿ ಹೋಗುತ್ತೇಂತಾ... ನನ್ನ ಮೈಮೇಲೆಲ್ಲಾ ಕೈ ಆಡಿಸಿದ್ರಿ ನೀವು..."ತಟ್ಟನೆ ಮಾತು ನಿಂತಿತು.ಪನ್ನಾಲಾಲ್ ಸಂಪೂರ್ಣ ಬೆವತಿದ್ದ! ತೊಟ್ಟಿದ್ದ ರಾತ್ರಿಯುಡುಗೆಯನ್ನು ಬೆವರಿನ ಮೇಲೆ ಸರಿಸಿ ಮೊಬೈಲನ್ನು ಮೇಜಿನ ಮೇಲಿರಿಸಿದ.ಹಿಂದಿನ ದಿನ ಸಂಜೆ ಬಂದ ಗಿರಾಕಿಗಳ ಮುಖವನ್ನು ಒಂದೊಂದಾಗಿಯೆ ನೆನಪಿಸಿಕೊಂಡ. ಯುವತಿ... ಗಾಗ್ರಚೋಲಿ... ನೆನಪು ಮೆಲುಕು ಹಾಕಿಕೊಂಡ. ಎಷ್ಟೋ ಗಿರಾಕಿಗಳಿಗೆ ಹೇಳುವುದಿದೆ, `ಈ ಬಣ್ಣ ನಿಮ್ಮ ಮೈ ಬಣ್ಣಕ್ಕೆ ಸರಿ ಹೊಂದುತ್ತೆ'`ಪನ್ನಾಲಾಲ್ ಗುಜರಾತಿ ವಸ್ತ್ರ ಮಳಿಗೆ' ಆ ಲೊಕ್ಯಾಲಿಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಕಾಲೇಜು ಹುಡುಗಿಯರ ದಿಂಡೇ ಅಲ್ಲಿಗೆ ಬರುತ್ತಿತ್ತು. ಬರುತ್ತಿದ್ದ ಗಿರಾಕಿಗಳ ಕಡೆಗೆ ಕನ್ನಡಕವನ್ನು ಮೂಗಿನ ತುದಿಗೆ ಜಾರಿಸಿ ನೋಡುತ್ತಿದ್ದ. ಆದರೆ... ಸಂಪೂರ್ಣ ವ್ಯವಹಾರದಲ್ಲಿ ಮುಳುಗಿದ್ದವನಿಗೆ ಹೆಂಡತಿಯ `ಬೇಕು' `ಬೇಡ'ಗಳನ್ನೂ ತಲೆಗೆ ತೆಗೆದುಕೊಳ್ಳುವಷ್ಟು ಸಮಯವಿರಲಿಲ್ಲ.ರಾತ್ರಿ ದಿಂಬಿಗೆ ತಲೆಯಾನಿಸಿ ಕಣ್ಣು ಮುಚ್ಚಿದರೂ ನಿದ್ದೆ ಆವರಿಸುವ ಸೂಚನೆಯೆ ಕಾಣಲಿಲ್ಲ. ನಡು ನಡುವೆ ಶ್ರೀವಿದ್ಯಾ ಅತ್ತಿತ್ತ ಹೊರಳುವಾಗ ಕಣ್ಣುಗಳನ್ನು ಅಗಲಕ್ಕೆ ತೆರೆದು ಮುಚ್ಚುತ್ತಿದ್ದ.ಯಾರು ಆ ಹುಡುಗಿ? ತನ್ನ ಮೊಬೈಲ್ ನಂಬರು ತಿಳಿದಿದ್ದಾದರೂ ಹೇಗೆ? ಇದು ತನ್ನ ವೈಯಕ್ತಿಕ ನಂಬರ್. ಶ್ರೀವಿದ್ಯಾಳಿಗೆ ಬಿಟ್ಟರೆ... ಮತ್ಯಾರಿಗೂ ತಿಳಿಯುವ ಹಾಗಿಲ್ಲ. ಕೂಡಲೆ ನೆನಪಾಯಿತು...!ರಿಪೇರಿಗೆಂದು ಮೊಬೈಲನ್ನು ಅಂಗಡಿಯ ಕೆಲಸದಾತ ಚರಣ್‍ನ ಕೈಯಲ್ಲಿ ಕಳುಹಿಸಿದ್ದ! ಆದರೆ... ಚರಣ್ ನಂಬರನ್ನು ತಿಳಿದುಕೊಳ್ಳುವಷ್ಟು ಚುರುಕಿನ ಹುಡುಗನಲ್ಲ. ಮತ್ತೆ... ತಿಳಿದಿರುವ ಸಾಧ್ಯತೆಯಿರುವುದು ರಿಪೇರಿಯ ಅಂಗಡಿಯಾತನಿಗೆ.ಹಾಗಾದರೆ ಆ ರಿಪೇರಿಯ ಅಂಗಡಿಯ ಹುಡುಗಿ ನಂಬರನ್ನು ಗುರುತಿಸಿಕೊಂಡು ಕಾಲ ಕಳೆಯಲು ಫೋನ್ ಮಾಡಿರಬಹುದು. ಅಂತಹ ಧೈರ್ಯದ ಹುಡುಗಿ ಯಾರು? ತಾನೆ ಖುದ್ದಾಗಿ ಅಲ್ಲಿಗೆ ಹೋಗಿ ನೋಡಬೇಕು. ಕತ್ತಲೆಯಲ್ಲಿ ತೆರೆದಿದ್ದ ಕಣ್ಣುಗಳು ಮೆಲ್ಲನೆ ಮುಚ್ಚಿಕೊಂಡವು. ಆ ಕೋಣೆಯೊಳಗೆ ಮತ್ತೊಂದು ಗೊರಕೆ ಫ಼್ಯಾನಿನ ಗಾಳಿಯ ಜೊತೆಗೆ ಬೆರೆಯಿತು.
***ಮರುದಿನ ಪನ್ನಾಲಾಲ್ ಕಾರನ್ನೇರಿ ಮೊದಲು ಭೇಟಿ ನೀಡಿದ್ದು ಮೊಬೈಲ್ ರಿಪೇರಿಯ ಅಂಗಡಿಯವನನ್ನು. ಅಂಗಡಿಯಾತ ಆದರದಿಂದಲೇ ಬರಮಾಡಿಕೊಂಡ."ಬನ್ನಿ ಸಾಬ್, ಏನಾದ್ರೂ ಹೊಸ ಸೆಟ್ ಬೇಕಿತ್ತೇನೋ?""ಇಲ್ಲ..." ಹುಡುಗಿಗಾಗಿ ಸುತ್ತಲೂ ಕಣ್ಣಾಡಿಸಿದ ಪನ್ನಾಲಾಲ್. ಅಂಗಡಿಯ ಮಾಲೀಕ ಮುಂದೆ ಬಂದ."ಸಾಬ್, ಏನಾದ್ರೂ..." ಮಾಲೀಕನ ಮಾತುಗಳು ಮುಗಿಯುವ ಮೊದಲೇ ಕಿಸೆಯಿಂದ ಮೊಬೈಲ್ ಹೊರಗೆ ತೆಗೆದ."ಈ ಮೊಬೈಲ್ ರಿಪೇರಿ ಮಾಡಿರೋದು ಇಲ್ಲಿಯೆ ತಾನೆ?"ಮಾಲೀಕ ಅದನ್ನು ತೆಗೆದುಕೊಂಡು, ಬಿಲ್ ಪುಸ್ತಕವನ್ನು ಪರಿಶೀಲಿಸಿ `ಹೌದು' ಅನ್ನುವಂತೆ ತಲೆಯಲುಗಿಸಿದ."ಯಾಕೆ ಸೆಟ್ ಸರಿಯಾಗಿಲ್ವೆ?""ಸರಿ ಇದೆ... ಇದನ್ನು ಸರಿ ಮಾಡಿರೋ ಹುಡುಗಿ ಯಾರು?" ನೋಟ ನೆಲಕ್ಕೆ ಅಂಟಿಕೊಂಡ ಶೋಕೇಸ್‍ನ ಹಿಂದಕ್ಕೆ ಸರಿದಾಡಿತು."ಹುಡುಗಿನಾ... ಏನು ಹೇಳ್ತಾ ಇದ್ದೀರಾ ಸಾಬ್...?"ಬೋಳು ತಲೆಯ ಮೇಲೆ ಬಡಿದಂತಾಯಿತು ಪನ್ನಾಲಾಲ್‍ಗೆ. ಅಚಾತುರ್ಯದ ಪ್ರಶ್ನೆ ಕೇಳಬಾರದೆನಿಸಿ ತಲೆಯನ್ನು ಒರೆಸಿಕೊಂಡ."ನಿನ್ನೆ ಯಾರೋ ಹುಡುಗಿ ಫೋನ್ ಮಾಡಿದ ನೆನಪು"ಮಾಲೀಕನ ಮುಖದಲ್ಲಿ ವ್ಯಂಗ್ಯದ ನಗು ಸುಳಿಯಿತು. ಬಟ್ಟೆ ವ್ಯಾಪಾರಿಗೆ ಅವಮಾನವಾದಂತಾಯಿತು."ಸಾಬ್, ಯಾರೋ ಹುಡುಗಿ ಫೋನ್ ಮಾಡಿದ್ರೆ... ನೀವು ಆ ನಂಬರಿನ ಕಂಪನಿಯ ಸರ್ವಿಸ್ ಸೆಂಟರ್‍‍ಗೆ ಹೋಗ್ಬೇಕು. ಮೊಬೈಲ್ ರಿಪೇರಿ ಅಂಗಡಿಗಲ್ಲ" ಮಾಲೀಕನ ಮಾತಿಗೆ ಕ್ಷಮಾಪಣೆಯ ಪದ ಬಳಸಿ ಮೆಟ್ಟಿಲುಗಳನ್ನು ಇಳಿದು ಕಾರನ್ನೇರಿದ. ತನ್ನದು ಆತುರದ ತನಿಖೆ!ಆತ ಅಂಗಡಿಗೆ ಬರುವಾಗ ಒಂದೆರಡು ಗಿರಾಕಿಗಳು ಕಾದು ನಿಂತಿದ್ದರು. ಕೆಲಸದಾಳು ಚರಣ್‍ನ ಕೈಯಲ್ಲಿ ಕೀಲಿಯನ್ನು ಕೊಟ್ಟು ಬಾಗಿಲು ತೆರೆದ. ದೇವರ ಮುಂದೆ ಊದಿನ ಕಡ್ಡಿ ಹಚ್ಚಿ ಕ್ಯಾಶ್ ಕೌಂಟರ್‍‍ಗೆ ಬರುವಾಗ ಗಿರಾಕಿಗಳು ಹಣ ಪಾವತಿಸಲು ಬಂದರು. ಮೊದಲ ಗಿರಾಕಿಯ ಹಣವನ್ನು ಕಣ್ಣಿಗೆ ಒತ್ತಿಕೊಂಡು ನಗದು ಪೆಟ್ಟಿಗೆಗೆ ಸೇರಿಸಿ ಮಾಮೂಲು ನಗು ಬೀರಿದ. ಗಿರಾಕಿಗಳು ಹೆಚ್ಚುತ್ತಿದ್ದಂತೆ, ಹಿಂದಿನ ದಿನ ಬಂದ ಕರೆಯನ್ನು ಮರೆತ ವ್ಯಾಪಾರಿ.ಏಕಾಏಕಿ ಎದುರಿಗಿದ್ದ ಟೆಲಿಫೋನ್ ರಿಂಗಣಿಸಿತು. ತನ್ನ ಮಾಮೂಲು ಸ್ವರದಲ್ಲಿ ಹೇಳಿದ."ಪನ್ನಾಲಾಲ್ ಹಿಯರ್...""ಏನ್ರೀ... ನೀವು ಮೊಬೈಲನ್ನು ಮರ್‍ತು ಬಿಟ್ಟು ಹೋದ್ರಾ? ಯಾರೋ ಗಿರಾಕಿಯೊಬ್ಬಳು ಫೋನ್ ಮಾಡಿದ್ಲು. ಮೊನ್ನೆ ಕೊಂಡು ಹೋಗಿದ್ದ ಹಳದಿ-ಪರ್ಪಲ್ ಗಾಗ್ರಚೋಲಿ ಏನೋ ಡಿಫ಼ೆಕ್ಟ್ ಇದೆಯಂತೆ. ಇವತ್ತು ಹಿಂದಕ್ಕೆ ತರ್‍ತಾಳಂತೆ" ಶ್ರೀವಿದ್ಯಾಳ ಮಾತು ಇಡೀ ಮೈಯನ್ನು ಬೆವರುವಂತೆ ಮಾಡಿತು! ಯಾರು ಆ ಗಿರಾಕಿ?"ಸರಿ ... ಮತ್ತೇನೂ ಹೇಳಿಲ್ಲ ತಾನೆ?" ವ್ಯಾಪಾರಿಯ ಸ್ವರ ನಡುಗಿತು. ರಾತ್ರಿಯ ಹಾಗೇ ಅಸಂಬದ್ದ ಮಾತುಗಳನ್ನು ಹೇಳಿದರೆ ಶ್ರೀವಿದ್ಯಾ ಏನೆಂದು ಕೊಂಡಾಳು? ಮೊಬೈಲ್ ಬಿಟ್ಟು ಬಂದಿದ್ದು ತನ್ನ ಮರೆವಿಗೊಂದು ಸಾಕ್ಷಿ!"ಬೇರೆ ಏನು ಹೇಳೋದು? ನೀವು ನನಗಲ್ಲದೆ ಬೇರೆ ಯಾರಿಗೂ ನಿಮ್ಮ ನಂಬರು ಕೊಟ್ಟಿಲ್ಲಾಂತ ಹೇಳಿದ್ರಿ. ಈಗ ನೋಡಿದ್ರೆ...?""ಅದು ಹ್ಯಾಗೆ ಗೊತ್ತಾಯ್ತೋ ನಂಗೆ ಗೊತ್ತಿಲ್ಲ. ನೀನು ಅದನ್ನು ಸ್ವಿಚ್ ಆಫ಼್ ಮಾಡಿಬಿಡು" ಮಡದಿಗೆ ಹೇಳಿ ಫೋನ್ ಇಟ್ಟು, ಕೈ ಬಟ್ಟೆಯಿಂದ ಮುಖ ಒರೆಸಿಕೊಂಡು ಫ಼್ಯಾನ್‍ನ ಗುಂಡಿಯನ್ನು ಅದುಮಿದ."ಚರಣ್" ಹುಡುಗನನ್ನು ಹತ್ತಿರಕ್ಕೆ ಕರೆದ."ಹಳದಿ, ಪರ್ಪಲ್ ಬಣ್ಣದ ಗಾಗ್ರ ತೆಗೆದುಕೊಂಡಿರೋ ಗಿರಾಕಿ ಯಾರೂಂತ ನಿನಗೆ ಗೊತ್ತಾ?""ಸಾಬ್, ಯಾವ ರೇಂಜ್‍ನದ್ದೂಂತ ಹೇಳಿ?""ಗೊತ್ತಿಲ್ಲ... ನೀನೇ ನೋಡಿ ಹೇಳು"ಉದ್ದನೆಯ ರ್‍ಯಾಕ್ ಕಡೆಗೆ ಹೋದ ಹುಡುಗ ಒಂದೊಂದೆ ಬಟ್ಟೆಗಳ ಮೇಲೆ ಕೈಯಾಡಿಸುತ್ತಾ ಏನೋ ತಿಳಿದವರಂತೆ ಕಣ್ಣುಗಳನ್ನು ಅಗಲಿಸಿ ನಿಂತ."ಸಾಬ್, ಗೊತ್ತು... ನಿಮ್ಮ ಮನೆಯ ಎದುರಿನ ಮನೆ ಹುಡುಗಿ. ಪೂಜಾಂತ ಅವಳ ಹೆಸರು"ವ್ಯಾಪಾರಿ ಚಿಂತೆಗೊಳಗಾದ. ಎದುರು ಮನೆಯ ಹುಡುಗಿ! ಹಾಗಿದ್ದರೆ ಶ್ರೀವಿದ್ಯಾಳಿಗೆ ತಿಳಿದಿರುತ್ತಿತ್ತು. ಅವಳೇ ಫೋನ್ ಮಾಡಿ ಹೇಳಿರುವಾಗ... ಹೆಂಡತಿಯನ್ನೇ ಕೇಳಿದರೆ ಹೇಗೆ? ಇದು ತಪ್ಪು ಹೆಜ್ಜೆ... ತಲೆಯ ಮೇಲೆ ಮೊಟಕಿಕೊಂಡ ಪನ್ನಾಲಾಲ್. ಆ ದಿನ ಹಿಂದಕ್ಕೆ ಬರಲಿರುವ ಹಳದಿ-ಪರ್ಪಲ್ ಗಾಗ್ರದ ಹುಡುಗಿಗಾಗಿ ಕಾದ. ಅವಳು ಬರಲೇ ಇಲ್ಲ!ರಾತ್ರಿ ಮನೆಗೆ ಬಂದವನು ಮೊದಲು ಎತ್ತಿಕೊಂಡಿದ್ದು ಮೊಬೈಲನ್ನು. ತನ್ನ ಮಾತನ್ನು ಶಿರಸಾವಹಿಸಿ ಪಾಲಿಸಿದ್ದಾಳೆ ಶ್ರೀವಿದ್ಯಾ. ಖರ್ಚು ವೆಚ್ಚಗಳ ಪುಸ್ತಕಗಳ ಮುಂದೆ ಕುಳಿತು ಮೊಬೈಲ್‍ಗೆ ಜೀವ ತಂದ. ಸಧ್ಯ ಯಾವುದೇ ಮಿಸ್ ಕಾಲಗಳಿಲ್ಲವೆನ್ನುವ ನೆಮ್ಮದಿಯ ಉಸಿರು ದಬ್ಬಿದ. ತನ್ನ ದಿನದ ವಹಿವಾಟಿನ ಬರವಣಿಗೆಯಲ್ಲಿ ತೊಡಗಿದ.ಅದೇ ಸಮಯ... ಹನ್ನೆರಡು ಗಂಟೆ ಐದು ನಿಮಿಷ! ಫೋನ್ ಮೊಳಗಿತು."ಸಾಬ್, ನಾನು... ನೆನಪಾಯ್ತಾ? ಮಧ್ಯಾಹ್ನ ಫೋನ್ ಮಾಡಿದ್ದೆ... ಅರ್ಜೆಂಟ್ ನಿಮ್ಮನ್ನು ಭೇಟಿಯಾಗಬೇಕು. ಕಾರು ತರ್‍ತೀರಾ? ನವನೀತ್ ಲಾಡ್ಜ್ ಹತ್ತಿರ ನಿಂತಿರ್‍ತೀನಿ"ಪನ್ನಾಲಾಲ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಬೆವತು ನೀರಾದ. ಶ್ರೀವಿದ್ಯಾ ಗೊರಕೆ ಹೊಡೆಯದೆ ಕುತೂಹಲ ತುಂಬಿದವರಂತೆ ಬಾಗಿಲಿನ ಉದ್ದಕ್ಕೂ ನಿಂತಿದ್ದಳು!ಆತ ಕರೆಯನ್ನು ತುಂಡರಿಸಿ ತಲೆ ತಗ್ಗಿಸಿ ನಿಂತ."ರೀ... ನಿಮ್ಮ ಹೆಣ್ಣು ಗಿರಾಕಿ... ಅದೇ ಹಳದಿ... ಪರ್ಪಲ್ ಗಾಗ್ರ?" ಅವಳ ಮಾತಿನಲ್ಲಿ ವ್ಯಂಗ್ಯ ತುಂಬಿತ್ತು. ವ್ಯಾಪಾರಿ ಉತ್ತರಿಸದೆ ಸುಮ್ಮನೆ ನಿಂತಿದ್ದ."ಹೇಳ್ರಿ... ಯಾರು ಆ ಹೆಣ್ಣು ಗಿರಾಕಿ?" ಉದ್ವೇಗದ ನುಡಿಗೆ ತಲ್ಲಣಿಸಿದ."ನಂಗೆ ಗೊತ್ತಿಲ್ಲ...""ಗೊತ್ತಿಲ್ಲಾಂದ್ರೆ ಏನು? ನಿಮ್ಮ ಪರ್ಸನಲ್ ನಂಬರ್ ಕೊಡುವಷ್ಟು ದೊಡ್ಡ ಗಿರಾಕಿನಾ ಅವಳು? ಅದಲ್ಲದೆ ಇದು ಯಾವ ಸಮಯಾಂತ ಫೋನ್ ಮಾಡೋದಿಕ್ಕೆ?" ಏರಿಳಿತವಿತ್ತು ಮಾತಿನಲ್ಲಿ."ನಂಗೊತ್ತಿಲ್ಲ ಕಣೆ... ಯಾರೋ ಏನೋ... ನಾನು ಪೊಲೀಸ್ ಕಂಪ್ಲೇಂಟ್ ಮಾಡ್ತೀನಿ""ನಂಜೊತೆಗೆ ನಾಟಕ ಮಾಡ್ಬೇಡಿ. ಎಷ್ಟು ಸಮಯದಿಂದ ನಡಿತಾ ಇದೆ ಈ ನಾಟಕ?""ಏನು ನಾಟಕ?""ಆ ಹುಡುಗಿ ಜೊತೆಗೆ ನಿಮ್ಮ ಸರಸ""ನೀನು ನನ್ನ ಮಾತು ನಂಬೋದಿಲ್ವಾ? ಅವಳು ಯಾರೂಂತ ನನ್ಗೆ ಗೊತ್ತಿಲ್ಲ. ಮಧ್ಯಾಹ್ನ ನೀನೇ ಮಾತಾಡ್ದೆ. ಯಾರೂಂತ ಕೇಳಿಲ್ವಾ?""ನನ್ನಲ್ಲೇನು ಹೇಳ್ತಾಳೆ? ನೀವೇ ಬೇಕೂಂತ ಹಠ ಹಿಡಿದ್ಲು. ಮತ್ತೆ ಫೋನ್ ಮಾಡ್ತೀನಿಂತ ಹೇಳಿದ್ಲು. ಅದಕ್ಕೆ ನಾನು ಕಾಯ್ತಾ ಇದ್ದೆ. ನಿಮ್ಮ ಬಣ್ಣ ಬಯಲಾಯ್ತು. ನನ್ನ ಯಾಕೆ ದೂರ ಮಾಡ್ತಾ ಇದ್ದೀರೀಂತ ಈಗ ಗೊತ್ತಾಯ್ತು" ಹೆಣ್ಣಿನ ಸಹಜ ದು:ಖ ಕಣ್ಣೀರಾಗಿ ಹೊರಗೆ ಬಂತು.ಪನ್ನಾಲಾಲ್ ಮೊಬೈಲನ್ನು ಮೇಜಿನ ಮೇಲಿರಿಸಿ ಹಿಂತಿರುಗಿದ.ಮೊಬೈಲ್ ಮತ್ತೆ ರಿಂಗಣಿಸಿತು. ಶ್ರೀವಿದ್ಯಾ ಅವನಿಗೆ ಅವಕಾಶ ಕೊಡದವರಂತೆ ಹಾರಿ ಫೋನನ್ನು ಕೈಗೆತ್ತಿಕೊಂಡಳು."ಹಲೋ..." ಅಂದವಳ ಮುಖದಲ್ಲಿ ಸಿಟ್ಟು ತುಂಬಿತ್ತು. ಏಕಾಏಕಿ ಅತ್ತಲಿಂದ ಬಂದ ದನಿಗೆ ಅವಳ ಮುಖ ಬಿಳಚಿಕೊಂಡಿತು! ಫೋನ್ ಹಿಡಿದ ಕೈಯನ್ನು ಗಂಡನ ಕಡೆಗೆ ಚಾಚಿದಳು. ಪನ್ನಾಲಾಲ್ ಹೆದರುತ್ತಲೇ ಮೊಬೈಲನ್ನು ಕಿವಿಗೆ ಹಚ್ಚಿದ! ಅತ್ತಲಿಂದ ಬಂದ ಮಾತುಗಳನ್ನು ಕೇಳುತ್ತಾ ನಿಶ್ಚೇಟಿತನಂತೆ ನಿಂತ!!!
***ವಿಶಾಲವಾದ ಮೇಜಿನ ಮುಂದೆ ಕುಳಿತಿದ್ದ ಅಧಿಕಾರಿಯ ಮುಖದಲ್ಲಿ ಗಂಭೀರತೆ ತುಂಬಿ ಎದುರಿಗೆ ಕುಳಿತಿದ್ದವರಲ್ಲಿ ಭೀತಿ ಹುಟ್ಟಿಸಿತು."ನಿಮಗೆ ವೃಥಾ ತೊಂದರೆ ಕೊಡೋದಿಕ್ಕೆ ನಾನು ನಿಮ್ಮನ್ನು ಇಲ್ಲಿಗೆ ಕರೆಸಿಲ್ಲಾ ಮಿಸ್ಟರ್ ಪನ್ನಾಲಾಲ್. ಪವಿತ್ರ್‍ಆ ಅನ್ನೋ ಹುಡುಗಿ ಹೊಸ ಹಳದಿ ಬಣ್ಣದ ಗಾಗ್ರ ಚೋಲಿ ಹಾಕಿಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ. ಅವಳ ಕೈಯಲ್ಲಿದ್ದ ಚೀಟಿಯಲ್ಲಿ ನಿಮ್ಮ ಹೆಸರು ಇತ್ತು. ಅದಲ್ದೆ ಅವಳ ಮೊಬೈಲ್‍ನಲ್ಲಿ ನಿಮ್ಮ ಮೊಬೈಲ್ ನಂಬರಿತ್ತು!"ಅಧಿಕಾರಿಯ ಮಾತಿಗೆ ಪನ್ನಾಲಾಲ್‍ಗೆ ಉಗುಳು ನುಂಗುವಂತಾಯಿತು. ಶ್ರೀವಿದ್ಯಾ ಗಂಡನ ಕಡೆಗೆ ಅಸಹ್ಯ ನೋಟ ಬೀರಿದಳು."ಸಾರ್, ನೀವೇನು ಹೇಳ್ತಾ ಇದ್ದೀರಾ? ನನಗೆ ಪವಿತ್ರಾ ಅನ್ನೋ ಹುಡುಗಿಯ ಬಗ್ಗೆ ಏನೂ ಗೊತ್ತಿಲ್ಲ." ಅಸಹಾಯಕತೆಯಿಂದ ಕೈ ತಿರುವಿದ."ಪನ್ನಾಲಾಲ್, ನಿಮ್ಮನ್ನು ನಾನು ಆರೋಪಿಸ್ತಾ ಇಲ್ಲ. ಆ ಹುಡುಗಿಯ ಮೊಬೈಲ್‍ನಲ್ಲಿರುವ ಎಲ್ಲಾ ನಂಬರುಗಳನ್ನೂ ಕಾಂಟ್ಯಾಕ್ಟ್ ಮಾಡ್ತಾ ಇದ್ದೀವಿ. ನನ್ನಿಂದ ಯಾವುದನ್ನೂ ಮುಚ್ಚಿಡ್ಬೇಡಿ. ಮಿಸ್ಸೆಸ್ ಪನ್ನಾಲಾಲ್, ತಾವು ದಯವಿಟ್ಟು ಒಂದು ಹತ್ತು ನಿಮಿಷ ಹೊರಗೆ ಕುಳಿತಿರಿ. ನಾನು ಮತ್ತೆ ನಿಮ್ಮನ್ನು ಕರೆಸ್ತೀನಿ"ಗಂಡನ ಮೇಲೆ ರೇಜಿಗೆ ಪಟ್ಟುಕೊಂಡ ಹೆಣ್ಣು ತಲೆ ತಗ್ಗಿಸಿಕೊಂಡು ಹೊರಗೆ ನಡೆಯಿತು. ಪನ್ನಾಲಾಲ್ ತಲೆಗೆ ಕೈ ಹಚ್ಚಿ ಅಧಿಕಾರಿಯ ಮುಂದಿನ ಪ್ರಶ್ನೆಯನ್ನು ಎದುರಿಸುವುದಕ್ಕೆ ಸಿದ್ಧನಾದ."ಮುಚ್ಚು ಮರೆಯಿಲ್ಲದೆ ಈಗ ಹೇಳಿ... ನಿಮ್ಗೆ ಆ ಹುಡುಗಿ ಹೇಗೆ ಪರಿಚಯಾಂತ?" ಅಧಿಕಾರಿಯ ಪ್ರಶ್ನೆಗೆ ಆಶ್ಚರ್ಯದ ನೋಟ ಬೀರಿದ ಪನ್ನಾಲಾಲ್."ಸಾರ್, ಆ ಹುಡುಗಿ ಯಾರೂಂತ ನನಗೆ ನಿಜವಾಗ್ಲೂ ಗೊತ್ತಿಲ್ಲ""ಹಾಗಾದ್ರೆ... ನೀವು ಆ ಹುಡುಗಿಗೆ ಕರೆ ಮಾಡ್ಲಿಲ್ಲಾಂತ ಹೇಳ್ತೀರಾ?""ನಾನು ಯಾವತ್ತೂ ನನ್ನ ಹೆಂಡತಿಗೆ ಬಿಟ್ರೆ... ಬೇರೆ ಯಾರಿಗೂ ಮೊಬೈಲ್ ನಂಬರನ್ನು ಕೊಡ್ಲಿಲ್ಲ""ನಿಮ್ಮ ಮಾತು ನಂಬ್ತೀನಿ""ನಿಜಾನೇ ಹೇಳ್ತಾ ಇದ್ದೀನಿ" ಮೊಬೈಲನ್ನು ಅಧಿಕಾರಿಯತ್ತ ಹಿಡಿದ. ಅಧಿಕಾರಿ ಮುಗುಳ್ನಕ್ಕ."ಸರಿ, ಇದ್ಯಾಕೆ?" ಮೊಬೈಲನ್ನು ತನ್ನ ಕಡೆಗೆ ಹಿಡಿದಿದ್ದನ್ನು ಕಂಡು ಅಧಿಕಾರಿ ಕೇಳಿದ."ಸಾರ್, ಇದರಲ್ಲಿ ನಾನು ಕರೆ ಮಾಡಿರಬಹುದಾದ ನಂಬರುಗಳು ಇದೆ""ಆ ಹುಡುಗಿಯ ನಂಬರನ್ನು ನೀವು ಡಿಲೀಟ್ ಮಾಡಿರಬಹುದು...""ಇಲ್ಲ, ನಾನು ಯಾವುದನ್ನೂ ಡಿಲೀಟ್ ಮಾಡಿಲ್ಲ""ಪರವಾಗಿಲ್ಲ... ಅದನ್ನು ನಾನು ಬೇರೆ ಮೂಲದಿಂದ ಹುಡುಕ್ತೀನಿ" ಅಧಿಕಾರಿಯ ನೋಟ ತೀಕ್ಷಣವಾಗಿತ್ತು. ಪನ್ನಾಲಾಲ್‍ಗೆ ತಾನು ಯಾವುದೋ ಬಲೆಯೊಳಗೆ ಸಿಕ್ಕಿಬಿದ್ದಂತಾಯಿತು."ಪನ್ನಾಲಾಲ್, ನಿಮಗೆ ಕೊನೆಯದಾಗಿ ಹುಡುಗಿಯಿಂದ ಕರೆ ಬಂದಿರೋದು ಯಾವಾಗ?"ಆತ ಕ್ಷಣ ಹೊತ್ತು ಆಲೋಚನೆಗೊಳಗಾದ. ಇದು ಅಧಿಕಾರಿ ತನ್ನ ಬಾಯಿ ಬಿಡಿಸುವ ತಂತ್ರ!"ನಿನ್ನೆ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಐದು ನಿಮಿಷಕ್ಕೆ...""ಅದಲ್ಲ... ಆ ಹುಡುಗಿಯಿಂದ...""ಅದೇ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಐದು ನಿಮಿಷಕ್ಕೆ""ಅದು ಆ ಹುಡುಗಿಯ ಕರೆಯಲ್ಲ. ಅದು ನಮ್ಮ ಇಲಾಖೆಯಿಂದಲೆ ಮಾಡಿರೋ ಕರೆ..." ಪನ್ನಾಲಾಲ್ ಆಶ್ಚರ್ಯ ತೋರಿದ. ಅಧಿಕಾರಿ ಮುಂದುವರಿಸಿದ."ಆ ಕರೆ... ಅದರ ಮುಂದಿನ ಎರಡು ಕರೆಗಳನ್ನು ಮಾಡಿರೋದು ನಾವೇ... ಆ ಹುಡುಗಿ ಪವಿತ್ರಾ ಸೂಸೈಡ್ ಮಾಡ್ಕೊಂಡಿಲ್ಲ. ಅವಳ ಕೊಲೆಯಾಗಿದೆ. ಅದಕ್ಕಾಗಿ ನಮ್ಮ ಇಲಾಖೆ ಆಕೆಯ ನಂಬರಿಗೆ ಬಂದಿರೋ ಕರೆಗಳನ್ನು ಗುರುತಿಸಿ ಆ ನಂಬರುಗಳಿಗೆಲ್ಲಾ ಕರೆ ಮಾಡಿ ವಿಚಾರಿಸ್ತಿದ್ದೀವಿ. ಕೊನೆಗೆ ಎಲ್ಲಾ ಕರೆಗಳ ವಿವರಗಳನ್ನು ಪರಿಶೀಲಿಸಿ ಕೊಲೆಗಾರನನ್ನು ಪತ್ತೆ ಹಚ್ತೀವಿ""ನಿಮಗೆ ನನ್ನ ಮೇಲೆ ಸಂಶಯ?""ಇದು ಸಂಶಯವಲ್ಲ. ನಮ್ಮ ಕರ್ತವ್ಯ ನಾವು ಮಾಡ್ಬೇಕಲ್ವಾ ಮಿಸ್ಟರ್ ಪನ್ನಾಲಾಲ್. ನೋಡೋಣ ಈ ಕೊಲೆ ಪ್ರಕರಣ ಯಾರನ್ನು ಬೆಟ್ಟು ಮಾಡಿ ತೋರಿಸುತ್ತೇಂತ"ಪನ್ನಾಲಾಲ್‍ಗೆ ಒಳಗೊಳಗೆ ಹೆದರಿಕೆ. ಯಾರಿಗೂ ತನ್ನ ಮೊಬೈಲ್ ನಂಬರ್ ನೀಡದಿದ್ದರೂ ತಾನು ಈ ಇಕ್ಕಟ್ಟಿನಲ್ಲಿ ಹೇಗೆ ಸಿಲುಕಿಕೊಂಡೆ?"ಸಾರ್, ನಾನಂತೂ ಯಾರ ವಿಷಯಕ್ಕೂ ತಲೆ ಹಾಕಿದೋನಲ್ಲ. ನೀವು ರಾತ್ರಿ ಮಾಡಿರೋ ಕರೆಯಿಂದಾಗಿ ನನ್ನ ಹೆಂಡತಿಗೆ ನನ್ನ ಮೇಲೆ ಸಂಶಯ... ನಾನು ಆ ಹುಡುಗಿಯ ಜೊತೆಗೆ ಸಂಬಂಧ ಇಟ್ಕೊಂಡಿದ್ದೀನೀಂತ""ಹೇಗೆ ಹೇಳೋದು? ನೀವು ನಿಮ್ಮ ಹೆಂಡತಿಗೆ ಮೋಸ ಮಾಡ್ಲಿಲ್ಲಾಂತ ತಿಳಿತೀನಿ""ಅಂದ್ರೆ... ನಿಮ್ಗೂ ನನ್ನ ಮೇಲೆ...""ನೋ... ನೋ... ನಾನು ಹಾಗೆ ತಿಳ್ಕೊಂಡಿಲ್ಲ. ಇನ್ನು ಒಂದೆರಡು ದಿನ ಕಳೆಯಲಿ. ಈ ಕೊಲೆ ಮಾಡ್ದೋರು ಯಾರೂಂತ ತಿಳಿಯುತ್ತೆ"ಅಧಿಕಾರಿ ಪಕ್ಕದಲ್ಲಿ ನಿಂತಿದ್ದ ಪೇದೆಯನ್ನು ಕರೆದು ಹೊರಗೆ ಕುಳಿತಿದ್ದ ಶ್ರೀವಿದ್ಯಾಳನ್ನು ಕರೆಯುವಂತೆ ಹೇಳಿದ.ಗಂಡನ ಕಡೆಗೆ ಅನುಮಾನದ ನೋಟ ಬೀರಿ, ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತಳು."ಮಿಸೆಸ್ ಪನ್ನಾಲಾಲ್, ನಾವು ಒಂದು ಕೊಲೆ ಬಗ್ಗೆ ತನಿಖೆ ನಡೆಸ್ತಾ ಇದ್ದೀವಿ. ನಿನ್ನೆ ರಾತ್ರಿ, ಮಧ್ಯಾಹ್ನ ನೀವು ರಿಸೀವ್ ಮಾಡಿರೋ ಕರೆಗಳು ನಮ್ಮ ಡಿಪಾರ್ಟ್ ಮೆಂಟ್‍ನಿಂದ ಮಾಡಿರೋ ಕರೆಗಳು. ಆ ನಂಬರ್ ಮಾತ್ರ ಕೊಲೆಯಾಗಿರೋ ಹುಡುಗಿ ಪವಿತ್ರಾಂದು"ಶ್ರೀವಿದ್ಯಾಳಿಗೆ ಸಮಾಧಾನವಾದರೂ ಗಂಡನ ಮೇಲೆ ಅನುಮಾನ ಪರಿಹಾರವಾಗಲಿಲ್ಲ."ಆದ್ರೆ... ಇವರ ನಂಬರ್ ಆ ಹುಡುಗಿಗೆ ಹೇಗೆ ಸಿಕ್ತು?"ಅಧಿಕಾರಿ ಸಶಬ್ದ ನಗು ಹೊರಡಿಸಿದ."ಆತುರ ಪಡ್ಬೇಡಿ ಮಿಸೆಸ್ ಪನ್ನಾಲಾಲ್... ನೋಡಿ... ಒಂದೆರಡು ದಿನಗಳಲ್ಲಿ ತಿಳಿಯುತ್ತೆ. ನೀವಿನ್ನು ಹೋಗಬಹುದು. ಮತ್ತೆ ನಾನು ಕರೆಯುವಾಗ ನೀವು ಹಾಜರಾಗ್ಬೇಕು" ಅಧಿಕಾರಿಯ ಮಾತು ಕೇಳಿ ಇಬ್ಬರೂ ಎದ್ದು ನಿಂತು ಅವನಿಗೆ ವಂದಿಸಿದರು.
***ಒಂದು ದಿನ ಮಧ್ಯಾಹ್ನದ ಹೊತ್ತು, ಗಿರಾಕಿಗಳು ಯಾರೂ ಇಲ್ಲವೆನ್ನಬಹುದು. ಶ್ರೀವಿದ್ಯಾ ಗಂಡನನ್ನು ನೋಡುವುದಕ್ಕಾಗಿ ಅಂಗಡಿಗೆ ಬಂದವಳು ಹೊಸ ಸೀರೆಗಳನ್ನು ನೋಡುತ್ತಿದ್ದಳು."ನಮಸ್ಕಾರ..." ಏಕಾಏಕಿ ಬಂದ ಮಾತಿಗೆ ಹಿಂತಿರುಗಿದವಳಿಗೆ ಆಶ್ಚರ್ಯವಾಯಿತು. ಪೊಲೀಸ್ ಅಧಿಕಾರಿ ಪನ್ನಾಲಾಲ್‍ನ ಎದುರಿಗೆ ಮುಗುಳ್ನಗು ಬೀರಿ ನಿಂತಿದ್ದ! ಅವಳಿಗೆ ನಡುಕ... ತನ್ನ ಗಂಡನೇ ಕೊಲೆಗಾರನೆ?!ಪನ್ನಾಲಾಲ್ ಹೆಂಡತಿಯತ್ತ ಪೇಚು ಮೋರೆ ಹಾಕಿ ನೋಡಿದ. ಅವಳು ಅಧೈರ್ಯದಿಂದಲೇ ಹತ್ತಿರ ಬಂದು ಅಧಿಕಾರಿಗೆ ವಂದಿಸಿದಳು."ಕೊಲೆಗಾರ ಸಿಕ್ಕಿದ್ದಾನೆ ಮಿಸ್ಟರ್ ಪನ್ನಾಲಾಲ್" ಅಧಿಕಾರಿಯ ಮಾತಿಗೆ ಇಬ್ಬರಿಗೂ ಆಶ್ಚರ್ಯದ ಜೊತೆಗೆ ಆತಂಕ."ಹೌದಾ, ಯಾರೂಂತ ಹೇಳ್ತೀರಾ?""ಹೇಳ್ತೀನಿ...""ಬನ್ನಿ ಸಾರ್, ಒಳಗೆ..." ಪನ್ನಾಲಾಲ್ ಕೆಲಸದವರ ಗಮನ ತನ್ನ ಕಡೆಗೆ ಇರುವುದನ್ನು ನೋಡಿ ಅಧಿಕಾರಿಯನ್ನು ಒಳಗೆ ಕರೆದು ಕುಳ್ಳಿರಿಸಿದ."ನೋಡಿ ಪನ್ನಾಲಾಲ್, ಆ ಹುಡುಗಿ ಕೊಲೆಯಾಗಿರೋದು ಸತ್ಯ. ನಿಮ್ಮ ಹೆಸರು ಕೂಡ ಅಲ್ಲಿ ಬಂದಿರೋದು ಸತ್ಯ. ನೀವು ನಿಮ್ಮ ಮೊಬೈಲನ್ನು ಒಮ್ಮೆ ನೀಡಿದ್ರೆ... ನಾನು ನಡೆದುದನ್ನು ನಿಖರವಾಗಿ ಹೇಳ್ತೀನಿ"ಪನ್ನಾಲಾಲ್ ಅಂಜುತ್ತಲೇ ಮೊಬೈಲನ್ನು ನೀಡಿದ. ಅಧಿಕಾರಿ ಮೊಬೈಲನ್ನು ಸ್ವಿಚ್ ಆಫ಼್ ಮಾಡಿ ತೆರೆದ! ಮತ್ತೆ ಅದನ್ನು ಮುಚ್ಚಿ ಹಿಂತಿರುಗಿಸಿದ. ಪನ್ನಾಲಾಲ್‍ಗೆ ಅರ್ಥವಾಗಲಿಲ್ಲ."ನೀವು ನಿಮ್ಮ ಸೆಟ್‍ಗೆ ಎರಡು ಸಿಮ್ ಹಾಕಿರೋ ಉದ್ದೇಶ ಏನು?"ಶ್ರೀವಿದ್ಯಾ ಗಂಡನ ಮುಖ ನೋಡಿದಳು. ಅವನ ಮುಖದಲ್ಲೂ ಆಶ್ಚರ್ಯ!"ಎರಡು ಸಿಮ್! ಅಂದ್ರೇನು ಸಾರ್?""ಅದೇನೂಂತ ನನ್ನನ್ನೇ ಕೇಳ್ತಿದ್ದೀರಿ. ನಿಮ್ಮ ಮೊಬೈಲ್ ತೆರೆದು ನೋಡಿ. ಅದಲ್ಲದೆ ನಿಮ್ಮ ಮೊಬಲ್‍ನಲ್ಲಿರೋ ಹೆಚ್ಚುವರಿ ಬಟನ್ ನೋಡಿ"ಪನ್ನಾಲಾಲ್ ಪರೀಕ್ಷಿಸಿದ. ಒಂದು ಸಿಮ್ ಇರುವ ಬದಲು ಎರಡು ಸಿಮ್‍ಗಳು!"ಹೇಗೆ ಸಾಧ್ಯ?""ಹೇಗೆ ಸಾಧ್ಯಾಂದ್ರೆ...? ತಂತ್ರಜ್ಞಾನ ಮುಂದುವರಿದಿದೆ ಪನ್ನಾಲಾಲ್. ನೀವು ಒಂದು ಸಿಮ್ ಹಾಕಿಸಿದ್ರಿ... ಅದನ್ನೇ ಉಪಯೋಗಿಸ್ತಿದ್ರಿ. ಆದರೆ ನಿಮ್ಮ ಮೊಬೈಲ್‍ಗೆ ಇನ್ನೊಂದು ಸಿಮ್ ಹೇಗೆ ಬಂತೂಂತ ಆಶ್ಚರ್ಯ ತಾನೆ?""ಹೌದು""ಹಾಂ! ಇಲ್ಲೇ ಕೊಲೆಗಾರ ತನ್ನ ಚಾಣಾಕ್ಷತನ ತೋರಿಸಿದ್ದಾನೆ. ಮೊನ್ನೆ ಅಲ್ಲ... ಕೆಲವು ವಾರಗಳ ಹಿಂದೆ ನಿಮ್ಮ ಮೊಬೈಲ್ ಹಾಳಾಗಿತ್ತು. ನೀವು ಅದನ್ನು ರಿಪೇರಿ ಮಾಡ್ಸೋದಿಕ್ಕೆ ಕಳುಹಿಸಿದ್ರಿ. ಆ ದಿನ ಪವಿತ್ರ್‍ಆ ಅನ್ನೋ ಹುಡುಗಿ ನಿಮ್ಮ ಅಂಗಡಿಗೆ ಬಂದಿದ್ಲು. ನಿಮ್ಮಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಿದ್ಲು. ಅದೇ ದಿನ ಕೊಲೆಗಾರ ಅವಳ ಬೆನ್ನು ಬಿದ್ದ. ಅವಳನ್ನು ಅನುಸರಿಸಿ ಅವಳ ಬಗ್ಗೆ ತಿಳಿದುಕೊಂಡ. ತಾನೆ ಪನ್ನಾಲಾಲ್ ಅಂದುಕೊಂಡು ಅಂಗಡಿಯ ಬಗ್ಗೆ ವಿವರ ನೀಡಿದ. ಜೊತೆಗೆ ನಿಮ್ಮ ಮೊಬೈಲ್ ನಂಬರನ್ನೂ ನೀಡಿದ. ನೀವು ಮಧ್ಯಾಹ್ನದ ಹೊತ್ತು ಮನೆಗೆ ಹೋಗ್ತಾ ಇದ್ದಾಗ ಮೊಬೈಲನ್ನು ಬಿಟ್ಟು ಹೋಗ್ತಾ ಇದ್ರಿ. ಅದು ಕೊಲೆಗಾರನಿಗೆ ಅನುಕೂಲವಾಯ್ತು. ಆ ಸಮಯದಲ್ಲಿ ನಿಮ್ಮ ಮೊಬೈಲ್‍ನಿಂದ ಹುಡುಗಿಗೆ ಎರಡನೆ ಸಿಮ್‍ನಿಂದ ಕರೆ ಮಾಡ್ತಿದ್ದ. ಕೆಲವೊಮ್ಮೆ ಆ ಹುಡುಗಿಯೇ ಅವನಿಗೆ ಕರೆ ಮಾಡ್ತಿದ್ಲು. ಆದ್ರೆ ಅದು ನಿಮ್ಮ ನಂಬರಿಗೆ ಬರ್‍ತಿತ್ತು. ಅವಳಿಗೆ ಬರ್‍ತಿದ್ದ ಕರೆ ಮತ್ತು ಅವಳು ಮಾಡ್ತಿದ್ದ ಕರೆಗಳನ್ನು ನೋಟ್ ಮಾಡಿಕೊಂಡು ತನಿಖೆ ನಡೆಸಿದ್ವಿ. ಎರಡು ಕರೆಗಳು ಒಂದೇ ಸೆಂಟರ್‍‍ನಿಂದ ಬರ್‍ತಿದ್ದವು. ತನಿಖೆ ಮುಂದುವರಿಯಿತು. ನಿಮ್ಮ ನಂಬರಿನ ಕಂಪನಿಯನ್ನು ಭೇಟಿ ಮಾಡಿದಾಗ ಡಬಲ್ ಸಿಮ್ ಇರುವ ಸಾಧ್ಯತೆಯ ಬಗ್ಗೆ ತಿಳಿಯಿತು. ಅದರಿಂದಾಗಿ ನಿಮ್ಮ ಮೇಲೆ ಸಂಶಯ ಹೊಂದಬೇಕಾಯಿತು. ಅದಕ್ಕೆ ನಾವೇ ಆ ಹುಡುಗಿಯ ನಂಬರ್ ಉಪಯೋಗಿಸಿಕೊಂಡು ಕಾಲ್ ಮಾಡಿದೆವು. ನಿಮ್ಮಿಂದ ನಮಗೆ ಬೇಕಾದ ಮಾಹಿತಿ ಸಿಗಲಿಲ್ಲ. ಕೊನೆಗೆ ನಾನು ಬಟ್ಟೆ ಕೊಂಡುಕೊಳ್ಳುವ ನೆಪದಿಂದ ಅಂಗಡಿಗೆ ಬಂದು ಕಾದೆ. ಮಧ್ಯಾಹ್ನದ ಹೊತ್ತು ಕೊಲೆಗಾರ ನಿಮ್ಮ ಮೊಬೈಲ್‍ನಿಂದ ಕರೆ ಮಾಡ್ತಾ ಇದ್ದ... ಹಾಗೆ ಮುಂದುವರಿಯಿತು ತನಿಖೆ""ಅಂದ್ರೆ... ನೀವು ಹೇಳ್ತಾ ಇರೋದು ಕೊಲೆಗಾರ ಇಲ್ಲೇ ಇದ್ದಾನೇಂತನಾ?"ಅಧಿಕಾರಿ ಶ್ರೀವಿದ್ಯಾಳ ಕಡೆಗೆ ತೀಕ್ಷ್ಣ ನೋಟ ಬೀರಿ ನಕ್ಕ. ಅವಳು ಕಂಪಿಸಿದಳು!"ಹೌದು""ಕೊಲೆ ಮಾಡೋ ಉದ್ದೇಶವೇನಿತ್ತು?""ಹೆಣ್ಣಿನ ಸಂಗ ಬೇಕಿತ್ತು! ಆ ಹುಡುಗಿ ಒಪ್ಲಿಲ್ಲ... ಅದಕ್ಕೆ...""ಯಾರಾತ... ಕೊಲೆ ಮಾಡಿರೋನು?" ತಲೆ ಚಿಟ್ಟು ಹಿಡಿದವರಂತೆ ಕಿರುಚಿದ ಪನ್ನಾಲಾಲ್. ಅಧಿಕಾರಿ ಎದ್ದು ನಿಂತು ಹೊರಗೆ ದೃಷ್ಟಿ ಹಾಯಿಸಿದ. ಕೆಲಸದವರೆಲ್ಲಾ ಪನ್ನಾಲಾಲ್‍ನ ಕಡೆಗೆ ನೋಡುತ್ತಿದ್ದರು!ಅಧಿಕಾರಿ ಏಕಾಏಕಿ ಓಡು ನಡುಗೆಯಲ್ಲಿ ಹೊರಗೆ ಬಂದ. ಬಾಗಿಲ ಮರೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ತಟ್ಟನೆ ಹಿಡಿದು ನಿಲ್ಲಿಸಿದ!ಪನ್ನಾಲಾಲ್‍ಗೆ ಆಶ್ಚರ್ಯ! ಶ್ರೀವಿದ್ಯಾ ಬೆದರು ನೋಟ ಬೀರಿದಳು. ಚರಣ್ ಅಧಿಕಾರಿಯ ಕೈಗೆ ಸಿಕ್ಕಿ ಬಿದ್ದಿದ್ದ!!ಶ್ರೀವಿದ್ಯಾ ನೆಮ್ಮದಿಯ ನಿಟ್ಟುಸಿರಿಟ್ಟು ಪನ್ನಾಲಾಲ್‍ನನ್ನು ಗಟ್ಟಿಯಾಗಿ ಹಿಡಿದುಕೊಂಡಳು.
****

Read more!

Saturday, February 14, 2009

ಬಿಳಿಕಾಗೆ (ಕಥೆ)


ಮಧ್ಯಾಹ್ನದ ಊಟ ಮುಗಿಸಿ, ಚೇರ್‍‍ನಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಸೊನಾಲಿ ಅಂತರ್ಜಾಲದ ಪುಟಗಳ ಮೇಲೆ ಕಣ್ಣಾಡಿಸಿದಳು. ಕಂಪ್ಯೂಟರ್‍‍ನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಂಡು ಸೋಜಿಗದಿಂದ ಮತ್ತೊಮ್ಮೆ ಓದಿಕೊಂಡಳು. ಅವಳ ನಿರೀಕ್ಷೆಗೂ ಮೀರಿದ ವಾಕ್ಯ ಅದು. ಕೂಡಲೆ ಪರದೆಯನ್ನು ಮುಚ್ಚಿ, ಅತ್ತಿತ್ತ ದೃಷ್ಟಿ ಹಾಯಿಸಿದಳು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದ ಮೇಲೆ ಸಮಾಧಾನವೆನಿಸಿತು. ಯಾರೋ ಕುಚೋದ್ಯಕ್ಕೆ ಕಳುಹಿಸಿದ ಇ-ಮೇಲ್ ಅದು! ಆದರೆ ಸ್ಪಷ್ಟವಾಗಿ ಬರೆದಿತ್ತು. `ಸೊನಾಲಿ, ಸಂಜೆ ಆಫೀಸು ಮುಗಿಸಿ ನೇರವಾಗಿ ಟಾರಸಿಗೆ ಬಾ. ಹೇಳಿದಷ್ಟು ಮಾಡದಿದ್ದರೆ ಪರಿಣಾಮ ನೆಟ್ಟಗಾಗಿರೋದಿಲ್ಲ' ಅದನ್ನು ನೆನೆಯುತ್ತಲೇ ಅಂಗೈ ಕೂಡ ಬೆವರಿತು.

ಈ ಹೊತ್ತಿನಲ್ಲಿ ತಾನು ಇ-ಮೇಲ್ ತೆರೆದು ನೋಡುವ ವಿಷಯ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ಮೀಸೆ ಬೋಳಿಸಿ, ಹೆಣ್ಣಿನ ವೇಷ ತೊಡಿಸಿದ ಹಾಗಿರುವ ಕಂಪ್ಯೂಟರ್‍‍ನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಹೆಣ್ಣು ವಾಸಂತಿಗೆ! ಆ ವಿಷಯದಲ್ಲಿ ತನಗಿಂತ ಬೇರೆಯವರಿಗೆ ಹೆಚ್ಚು ತಿಳಿಯಬಾರದು ಅನ್ನುವ ಸಣ್ಣ ಬುದ್ಧಿಯ ಹೆಣ್ಣು ಅವಳು. ಅಂತರ್ಜಾಲ ನೋಡುವುದೇ ದೊಡ್ಡ ಅಪರಾಧವೆಂದು, ಆ ವಿಷಯವನ್ನು ಮೇಲಧಿಕಾರಿಗೂ ತಿಳಿಸಿದ್ದಳು. ಸ್ವಂತ ಬುದ್ಧಿ ಇಲ್ಲದ ಮೇಲಧಿಕಾರಿ ವಾಸಂತಿಯ ಮಾತನ್ನು ಕೇಳಿ, ಸೋನಾಲಿಯನ್ನು ಕರೆದು ಚೆನ್ನಾಗಿ ಬೈದಿದ್ದ. ಹೆಣ್ಣು ವೇಷದ ಹೆಣ್ಣಿನಂತೆ ಹಲ್ಲು ಪ್ರದರ್ಶಿಸಿ ಅಧಿಕಾರಿಯ ಮನಸ್ಸು ಗೆಲ್ಲುತ್ತಿದ್ದರೆ ಸುಮ್ಮನಿರುತ್ತಿದ್ದನೇನೋ?ಅವಳೇ ಏಕೆ ಈ ಪತ್ರವನ್ನು ಕಳುಹಿಸಿರಬಾರದು. ಸೊನಾಲಿ ಎದ್ದು ಒಮ್ಮೆ ಅತ್ತ ನೋಡಿದಳು. ಹೊಟ್ಟೆಕಿಚ್ಚಿನ ಹೆಣ್ಣು ಅಲ್ಲಿರಲಿಲ್ಲ. ಮೇಲ್ ಕಳುಹಿಸಿದವರು ಯಾರು? ಇಷ್ಟಕ್ಕೂ ಟಾರಸಿಯ ಮೇಲೆ ಬರುವಂತೆ ತನ್ನನ್ನು ಕರೆದಿರುವುದು ಏಕೆ? ಟಾರಸಿಯ ಮೇಲೆ ಬರುವಂತೆ ಕರೆದಿರುವುದರಿಂದ ಇಲ್ಲಿಯೇ ಯಾರದೋ ಕೈವಾಡ! ಅನುಮಾನ ಬಲವಾಯಿತು. ಪ್ರತಿಯೊಂದು ಮೇಜಿನ ಮುಂದೆ ಕುಳಿತಿರುವ ವ್ಯಕ್ತಿಯ ಮೇಲೆ ಸಂಶಯದ ನೋಟ ಹರಿಸಿದಳು. ಯಾರ ಮೇಲೂ ಗಾಢವಾದ ಅನುಮಾನ ಸುಳಿಯಲಿಲ್ಲ.ತಟ್ಟನೆ ನೆನಪಾಯಿತು. ಎರಡು ದಿವಸಗಳ ಹಿಂದೆ ಹೀಗೆ ಟಾರಸಿ ಹತ್ತಿ ಹೋಗಿದ್ದನ್ನು ಯಾರೋ ಗಮನಿಸಿದ್ದಾರೆ. ಆ ಕಿಡಿಗೇಡಿಗಳದ್ದೇ ಕೆಲಸ.ಅಲ್ಲಿಗೆ ಹೋಗುವಂತೆ ಪ್ರೇರೇಪಿಸಿದ್ದ ವಿಷಯ ಮನಸ್ಸನ್ನೂ ಆಕರ್ಷಿಸಿತ್ತು. ಎದುರಿಗೆ ಗಗನಕ್ಕೆ ಮುಖವೆತ್ತಿ ನಿಂತಿರುವ ನಕ್ಷತ್ರ ಹೋಟೇಲು ಅದು. ಅಲ್ಲಿ ಮೂರನೇ ಅಂತಸ್ತಿನಲ್ಲಿ, ಅಂದರೆ ಆಫೀಸಿನ ಕಟ್ಟಡದ ಟಾರಸಿಯ ನೇರಕ್ಕೆ ಸಿನೆಮಾನದ ಶೂಟಿಂಗ್! ಅದು ಶುಭಾಶ್ರೀ ತಿಳಿಸಿದ ಸಂಗತಿ. ಕುತೂಹಲಕ್ಕೆ ಟಾರಸಿ ಹತ್ತಿ ಹೋದಾಗ ಕ್ಯಾಮರಾ ಮೆನ್‍ನ ಕಣ್ಣು ತನ್ನ ಮೇಲೆ ಸುಳಿದಿದ್ದರ ಅರಿವಿರಲಿಲ್ಲ. ಸಂಜೆಯ ಹೊತ್ತು ಆಫೀಸು ಮುಗಿಸಿ ಕೆಳಗಿಳಿದು ಬರುವಾಗ ಕಾದು ನಿಂತಿದ್ದ!ಸೊನಾಲಿ ಸೀರೆಯ ಸೆರಗನ್ನು ಹಾರಿಸಿಕೊಂಡು ರಸ್ತೆಗಿಳಿದಾಗ ಧುತ್ತೆಂದು ಎದುರು ಬಂದು ನಿಂತ. ತಲೆಯ ಮೇಲೆ ಮಧ್ಯಾಹ್ನ ಕಂಡಿದ್ದ ಬಿಳಿಯ ಟೊಪ್ಪಿ ಮಾಯವಾಗಿತ್ತು. ಅವನನ್ನು ಗುರುತಿಸುವುದು ಕಷ್ಟವಾಯಿತು."ಕ್ಷಮಿಸಿ, ನೇರವಾಗಿ ಹೇಳ್ತೀನಿ. ಈ ತಿಳಿ ಗುಲಾಬಿ ರಂಗಿನ ಸೀರೆಯಲ್ಲಿ ಯಾವ ನಾಯಕಿಗಿಂತಲೂ ನೀವು ಕಡಿಮೆಯಿಲ್ಲ. ನಿಮಗೆ ಸೌಂದರ್ಯ ಒಂದು ವರವಾಗಿದೆ. ಅದನ್ನು ಬಳಸಿಕೊಳ್ಳಿ" ಏಕಾಏಕಿ ಪ್ರಶಂಸೆಯ ಮಾತನಾಡಿ ಅವಳ ಚಿತ್ತವನ್ನು ಕದಡಿದ್ದ.ಸೇಲಂಗೆ ಹೋಗಿ ಬರುತ್ತೇನೆಂದ ಪ್ರಮೀಳಾ ಮಧುರೈವರೆಗೂ ಹೋಗಿ ತನಗಾಗಿ ತಂದಿದ್ದ ಗುಲಾಬಿ ರಂಗಿನ ಸೀರೆ ಅದು. ಆಫೀಸಿಗೆ ಬೇಗನೆ ಹೊರಟಿದ್ದಕ್ಕೆ ಸೀರೆಯುಟ್ಟು, ಅದಕ್ಕೊಪ್ಪುವ ಸ್ಲೀವ್ ಲೆಸ್ ಕುಪ್ಪಸ ತೊಟ್ಟು, ಅದೇ ಬಣ್ಣದ ಗುಲಾಬಿ ಹೂವನ್ನು ತುರುಬಿಗೆ ಸಿಕ್ಕಿಸಿದ್ದು, ತಾನು ಇಷ್ಟೊಂದು ಆಕರ್ಷಕವಾಗಿ ಕಾಣಲು ಸಾಧ್ಯವಾಗಿದ್ದೇ?"ಅನಗತ್ಯ ಹೊಗಳ್ತಾ ಇದ್ದೀರಿ. ಇಷ್ಟಕ್ಕೂ ನೀವು ಯಾರು?" ಅನುಮಾನದ ನೋಟ ಅವನತ್ತ ಹರಿಸಿ ಕೇಳಿದಳು. ಅವನು ತುಂಬಾ ಚೆನ್ನಾಗಿ ನಕ್ಕಿದ್ದ."ನೀವು ನನ್ನ ಗಮನಿಸಲಿಲ್ಲ ಅನ್ನಿ. ಇವತ್ತು ಮಧ್ಯಾಹ್ನ ನಿಮ್ಮನ್ನು ಟಾರಸಿಯ ಮೇಲೆ ನೋಡಿದೆ. ನನ್ನ ಕ್ಯಾಮರಾ ನಿಮ್ಮ ರೂಪವನ್ನು ಹಿಡಿದಿಟ್ಟಿದೆ. ಜೊತೆಗೆ ನನ್ನ ಕಣ್ಣೂ..." ಅವನ ಮಾತು ಉಪೇಕ್ಷೆಯೆನಿಸಿತು. ಅವಳು ಕಣ್ಣುಗಳನ್ನು ಅರಳಿಸಿ ಅಷ್ಟೇ ಮುಗ್ಧತೆಯಿಂದ ಕೇಳಿದಳು."ನೀವು... ಸಿನಿಮಾದವರು...?" ಏನನ್ನೋ ಹುಡುಕುವ ನೋಟ ಅವಳದ್ದಾಗಿತ್ತು. ಸಿನಿಮಾದವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದಳಷ್ಟೆ. ಹೀಗೆ, ನೇರವಾಗಿ ನೋಡಿರಲಿಲ್ಲ. ಅದೇ ಕುತೂಹಲ ಅವಳನ್ನು ಆ ಸುಡು ಬಿಸಿಲಿನಲ್ಲಿಯೂ ಟಾರಸಿಯ ಮೆಟ್ಟಿಲುಗಳನ್ನು ಏರುವಂತೆ ಪ್ರಚೋದಿಸಿದ್ದು."ಹೌದು" ಅವನು ಒಪ್ಪಿಕೊಂಡು ನುಡಿದ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಮುಗಿದು ಹೋಗುತ್ತದೆ ಅನ್ನುವ ಸತ್ಯವನ್ನು ಹೇಳಿದ್ದ. ಜೊತೆಗೆ ಅವಳಿಗೆ ಸಿನಿಮಾದಲ್ಲಿ ಅವಕಾಶವನ್ನು ನೀಡುವ ದೊಡ್ಡ ಮನಸ್ಸೂ ಮಾಡಿದ್ದ. ಆದರೆ ಅನಾಯಾಸವಾಗಿ ಬಂದ ಅವಕಾಶವನ್ನು ನಿರಾಕರಿಸಿದ್ದಳು. ಸಿನಿಮಾದಲ್ಲಿ ಅಭಿನಯಿಸುವುದು ಪ್ರತಿಷ್ಟೆಯ ಕೆಲಸವಲ್ಲ. ಹೀಗೆ ಆಫೀಸಿನಲ್ಲಿ ಕೆಲಸ ಮಾಡಿಕೊಂಡು ತಿಂಗಳ ಕೊನೆಗೆ ಸಂಬಳ ಎಣಿಸುವುದೇ ಸಂತೋಷದ ವಿಷಯ ಎಂದು ಚಿಂತಿಸುವ ಸಾಮಾನ್ಯ ಹುಡುಗಿಯೊಬ್ಬಳ ಅಭಿಮತದಂತೆ ಅವಳದ್ದೂ ಆಗಿತ್ತು. ಅದನ್ನು ಅವನಿಗೆ ಹೇಳಿಯೂ ಇದ್ದಳು. ಸೌಂದರ್ಯಕ್ಕೆ ಮಾರುಹೋದವನು ಭರವಸೆಯ ಮಾತುಗಳನ್ನು ಹೇಳಿ ಅವಳಿಂದ ಸಂಕ್ಷಿಪ್ತ ಪಟ್ಟಿಯನ್ನು ಪಡೆದುಕೊಂಡಿದ್ದ."ಮುಂದೆ ಅಗತ್ಯವಾಗಿಯೂ ನಿಮಗೆ ಒಳ್ಳೆಯ ಕೆಲಸವನ್ನು ಕೊಡಿಸುವೆ" ಅವನು ಭರವಸೆಯಿತ್ತಿದ್ದ.ಆದರೆ ಶೂಟಿಂಗ್ ಪ್ಯಾಕ್ ಅಪ್ ಆಗಿ ಒಂದೆರಡು ತಿಂಗಳುಗಳು ಕಳೆದರೂ ಅವನಿಂದ ಉತ್ತರವಿರಲಿಲ್ಲ. ಆತನ ವಿಷಯ ಅಪರೂಪಕ್ಕೊಮ್ಮೆ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಷ್ಟಕ್ಕೇ ಸಿನಿಮಾದವರ ಮೇಲಿದ್ದ ಅಲ್ಪಸ್ವಲ್ಪ ಒಳ್ಳೆಯ ಭಾವನೆಯೂ ಹೋಗಿತ್ತೆನ್ನುವಾಗ ಪತ್ರ ಕಳುಹಿಸಿದ್ದ.ಕುಲುಮನಾಲಿಯ ಸುಂದರ ತಾಣಗಳಲ್ಲಿ ಬಿಡುವಿಲ್ಲದ ಚಿತ್ರೀಕರಣದಿಂದಾಗಿ ಸಂಪರ್ಕವಿಟ್ಟುಕೊಳ್ಳಲು ಸಾಧ್ಯಾವಾಗಿಲ್ಲದಕ್ಕೆ ಕ್ಷಮಾಪಣೆಯನ್ನು ಕೇಳಿ ಬರೆದಿದ್ದ ಪತ್ರ ಅದು. ಜೊತೆಗೆ ಮುಂದಿನ ವಾರ ಅವಳನ್ನು ಭೇಟಿಯಾಗುವುದಕ್ಕೆ ಬರುತ್ತಿರುವುದಾಗಿ ತಿಳಿಸಿದ್ದ. ಅವಳು ಕಾದಿದ್ದೆ ಬಂತು. ಅವನು ಮತ್ತೆ ಶೆಡ್ಯೂಲ್ ಬದಲಾಗಿದೆಯೆಂದು ಪತ್ರ ಕಳುಹಿಸಿ ನಿರಾಶೆಗೊಳಿಸಿದ್ದ.ಶುಭಾಶ್ರೀ ಆ ದಿನ ಮಂಕಾಗಿದ್ದ ಸೊನಾಲಿಯನ್ನು ಆಫೀಸಿನ ಕಿಟಕಿಯ ಪಕ್ಕ ಕರೆದೊಯ್ದಿದ್ದಳು."ನೋಡಲ್ಲಿ ಬಿಳಿಕಾಗೆ" ತೋರು ಬೆರಳನ್ನು ಮುಂದಕ್ಕೆ ಹಿಡಿದು ಹೇಳಿದಳು.ಸೊನಾಲಿಗೆ ಗೆಳತಿಯ ಮಾತು ಕೇಳಿ ಆಶ್ಚರ್ಯ.ಬಿಳಿಕಾಗೆ!ಅವಳು ಕಟ್ಟಡಗಳ ಅಂಚಿಗೆಲ್ಲಾ ದೃಷ್ಟಿ ಹಾಯಿಸಿ ನೋಡಿದರೂ ಎಲ್ಲೂ ಕಾಣಿಸಲಿಲ್ಲ. ಬಿಳಿಕಾಗೆ ಇದೆಯೆಂದು ನಂಬಿದ್ದೆ ತನ್ನ ಮೂರ್ಖತನ. ಗೆಳತಿಗೆ ಬೈದು ಹಿಂದಕ್ಕೆ ಹೊರಳಿದಳು.ಶುಭಾಶ್ರೀ ಬಿಡಲಿಲ್ಲ. ಕುತೂಹಲ ತೋರಿಸುವೆನೆಂದು ಅವಳನ್ನು ಎಳೆದುಕೊಂಡು ಟಾರಸಿಯಲ್ಲಿ ನಿಲ್ಲಿಸಿದಳು. ಮೂರಂತಸ್ತಿನ ಕೆಳಗೆ ಕಿಟಕಿಯ ಪಕ್ಕ ನಿಂತು ಎತ್ತಲೋ ನೋಡುತ್ತಿತ್ತು ಬಿಳಿಕಾಗೆ! ಕಾಕ ದೃಷ್ಟಿ ಟಾರಸಿಯಲ್ಲಿ ನಿಂತಿದ್ದ ಇಬ್ಬರತ್ತಲೂ ಸುಳಿದಾಗ, ಶುಭಾಶ್ರೀ ಪಕ್ಕಕ್ಕೆ ಸರಿದರೆ, ಸೊನಾಲಿ ಪೂರ್ತಿಯಾಗಿ ಗೋಚರಿಸಿದಳು. ಏನೂ ಮಾಡಲಾಗದೆ ಹಾಗೆ ನಿಂತಿದ್ದಳು. ಬಿಳಿಕಾಗೆ ಕೈ ಎತ್ತರಿಸಿ ಸಂಜ್ಞೆ ಮಾಡಿತು.ಹಿಂದಕ್ಕೆ ಜಿಗಿದ ಸೊನಾಲಿ ಗೆಳತಿಯ ತಲೆಗೊಂದು ಮೊಟಕಿದಳು."ಮೋಸ ಮಾಡ್ದೆ ನೀನು... ಹೀಗಂತ ಗೊತ್ತಿದ್ರೆ ನಾನು ಅಲ್ಲಿಗೆ ಬರ್‍ತಾ ಇರ್‍ಲಿಲ್ಲ. ನಿನ್ನದು ಅತಿಯಾಯ್ತು" ಗೆಳತಿಯತ್ತ ಸಿಡುಕು ತೋರಿಸಿ ಕೆಳಗಿಳಿದು ಬಂದಳು.ತನ್ನ ಸೀಟ್‍ನಲ್ಲಿ ಕುಳಿತು ತಲೆಗೆ ಕೈ ಹಚ್ಚಿದಳು. ಶುಭಾಶ್ರೀಯ ತುಂಟತನಕ್ಕೆ ಯಾವ ತೊಂದರೆಯನ್ನು ಎದುರಿಸಬೇಕೋ? ತಿಳಿಯದೆ ಕಂಗಾಲಾಗಿದ್ದಳು."ಆ ಬಿಸಿಲಿಗೆ ಟಾರಸಿಯಲ್ಲಿ ನಿಲ್ಲೋದನ್ನು ಬಿಡುವುದಿಲ್ಲ ನೀವು" ನಕ್ಕು ಹೇಳಿದವನ ಮಾತಿಗೆ ಬೆಚ್ಚಿ, ಎದ್ದು ನಿಂತಳು.ಹಿತೇಶ ನಿಂತಿದ್ದ. ಸದಾ ಕ್ಯಾಮರಕ್ಕೆ ಕಣ್ಣು ಹಚ್ಚಿ, ತನ್ನನ್ನು ತಾನು ಅದರ ಜೊತೆಗೆ ಹೊಂದಿಸಿಕೊಂಡಿದ್ದ ಸಿನಿಮಾದ ವ್ಯಕ್ತಿ; ಹೀಗೆ ಏಕಾಏಕಿ ಬಂದು ನಿಲ್ಲುವನೆನ್ನುವ ನಿರೀಕ್ಷೆಯನ್ನೂ ಅವಳು ಮಾಡಿರಲಿಲ್ಲ."ತಲೆಗೆ ಕೈ ಹಚ್ಚಿಕೊಂಡಿದ್ರಿ, ತಲೆ ನೋವೆ? ಈ ಸುಡು ಬಿಸಿಲಿಗೆ ಟಾರಸಿಯ ಮೇಲೆ ನಿಂತ್ರೆ ಮತ್ತೇನು ಬರುತ್ತೆ?" ವ್ಯಂಗ್ಯವಾಗಿರಲಿಲ್ಲ ಮಾತು.ಸೊನಾಲಿಗೆ ಅವನನ್ನು ವಿಚಾರಿಸುವಷ್ಟು ಕೂಡ ವಿವೇಕವಿರಲಿಲ್ಲ. ಅವಳ ಸಹಾಯಕ್ಕೆ ಶುಭಾಶ್ರೀಯೇ ಬರಬೇಕಾಯಿತು. ನಿಂತೇ ಇದ್ದ ಅವನನ್ನು ಕುಳಿತುಕೊಳ್ಳುವಂತೆ ಹೇಳಿದ ಶುಭಾಶ್ರೀ, ಸೊನಾಲಿಯತ್ತ ತಿರುಗಿ ಕಣ್ಣು ಮಿಟುಕಿಸಿದಳು."ಸಿನಿಮಾವೆಂದ್ರೆ ಜೀವ ಬಿಡ್ತೀಯಾ. ಇವರು ಸಿನಿಮಾದವರೆ. ಸ್ಟಾರ್ ಹೋಟೇಲ್‍ನಲ್ಲಿ ಶೂಟಿಂಗ್ ಆಗ್ತಿತ್ತು ನೆನಪಿದೆಯಾ? ಅದರ ಕ್ಯಾಮರಾಮನ್ ಹಿತೇಶ್ ಅಂತ" ಅವಳು ಎದುರಿಗಿದ್ದವನನ್ನು ಪರಿಚಯಿಸುವಾಗ ಸೊನಾಲಿ ಮುಖದಲ್ಲಿ ನಗು ತಂದುಕೊಂಡಳು.ಹಿತೇಶ ಹೀಗೆ ಎರಡು ಮೂರು ಬಾರಿ ಬಂದಿದ್ದ. ಅವನ ಒಡನಾಟ ಮುಂದೆ ಪ್ರೀತಿಸುವಲ್ಲಿಯವರೆಗೂ ತಲುಪಿತು. ಪ್ರೀತಿ ಪರಾಕಾಷ್ಠೆ ತಲುಪಿದಾಗ ಹಿತೇಶ ಹೇಳ ಹೆಸರಿಲ್ಲದೆ ದೂರವಾದ. ಅವನಿಗೇನು ಒಡಕು ಕಂಡಿತೋ? ಸೊನಾಲಿಯ ಎದೆಯಲ್ಲಿಯೂ ನೋವಿನ ಬಡಿತ. ಅದಕ್ಕೆ ಬರೆಯೆಳೆಯುವಂತೆ ಬಿಳಿಕಾಗೆ ಅವಳ ಹಿಂದೆ ಬಿದ್ದಿತ್ತು.ಒಮ್ಮೆ ಮೇಲಧಿಕಾರಿ ಅವಳನ್ನು ಕರೆದು ವಿಚಾರಿಸಿದ."ಹೀಗೆ ಮಂಕಾಗಿ ಕೂತ್ರೆ ಕೆಲಸ ಸಾಗೋದಿಲ್ಲ. ಇಲ್ಲಿ ಮನಸ್ಸಿಲ್ಲದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡು" ಪದೇ ಪದೇ ಒತ್ತಾಯಿಸಿದಾಗ ಕಣ್ಣೀರಿಟ್ಟು ಕ್ಷಮೆ ಕೇಳಿ ಹೊರಗೆ ಬಂದಿದ್ದಳು. ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಅವಳನ್ನು ದಿನಾ ಗೋಳು ಹೊಯ್ಸಿಕೊಂಡ. ಸುಲಭವಾಗಿ ಯಾವುದಕ್ಕೂ ಒಪ್ಪದ ಅವಳನ್ನು ಮೇಲ್ ಮಾಡಿ ಹೆದರಿಸಿದ್ದು ಇದೆ. ಈಗ ಟಾರಸಿಗೆ ಕರೆದಿರುವುದು ಕೂಡ ಅವನೇ!? ಅನುಮಾನ ಬಲವಾಯಿತು.ಶುಭಾಶ್ರೀಯನ್ನು ಕರೆದು ಮೇಲ್‍ನ ವಿಷಯವನ್ನು ತಿಳಿಸಿದಳು. ಮೇಲ್ ಐಡಿ ಕೂಡ ಯಾರದೋ ಏನೋ? ಅವಳ ಮುಖದಲ್ಲಿಯೂ ಗೊಂದಲವಿತ್ತು. ಅದನ್ನು ನಿರಾಕರಿಸಿದಳು. ಆದರೆ ಇನ್ನೊಂದು ವಿಷಯ ಸ್ಪಷ್ಟವಾಗಿತ್ತು. ಬಿಳಿಕಾಗೆಗೆ ಪಾರಿವಾಳಗಳ ಬೆನ್ನಟ್ಟುವ ಬಲಹೀನತೆ. ಯಾವುದೋ ಪಾರಿವಾಳದ ಜೊತೆಗೆ ಸುತ್ತಾಡುವುದಕ್ಕೆ ಹೋಗಿತ್ತು ಕಾಗೆ."ಬಿಳಿಕಾಗೆ ಮೇಲೆ ನಂಗೆ ಅನುಮಾನ. ನಿನಗೆ ಮೇಲ್ ಕಳುಹಿಸಿ ಕಾಗೆ ಎಲ್ಲೋ ಹಾರಿ ಹೋಗಿದೆ. ಇವತ್ತು ಅಲ್ಲಿ ಕಾಣಿಸ್ತಿಲ್ಲ" ಕಿಟಿಕಿಯ ಪಕ್ಕಕ್ಕೆ ನಿಂತು ಉದ್ಗಾರವೆಳೆದ ಶುಭಾಶ್ರೀಯ ಮಾತಿಗೆ ಕೆಂಡ ತುಳಿದಂತಾಯಿತು. ಕಾಕ ದೃಷ್ಟಿ ತನ್ನ ಮೇಲೆ?"ಏನಾದರಾಗಲಿ ಧೈರ್ಯವಾಗಿ ಹೋಗು. ನಾನು ಬರಬೇಕೆಂದಿದ್ದೆ. ಆದರೆ ಇವತ್ತು ಸಾಧ್ಯವಿಲ್ಲ. ಸಂದೇಶ್ ನನಗಾಗಿ ಬಿಗ್ ಬಜಾರ್‍‍ನಲ್ಲಿ ಕಾಯ್ತಿರ್‍ತಾನೆ. ಬೇಕಾದಲ್ಲಿ ರಾಮಯ್ಯನನ್ನು ಕರೆದುಕೊಂಡು ಹೋಗು" ಗೆಳತಿಯ ಮಾತಿಗೆ ಬೆದರು ಕಣ್ಣುಗಳನ್ನು ಮತ್ತಷ್ಟು ತೆರೆದಳು. ವಿಷಯ ಸಂಪೂರ್ಣ ತಿಳಿಯದೆ ಸುದ್ದಿ ಹರಡುವುದು ಬೇಡವಾಗಿತ್ತು."ಬೇಡ, ನಾನೇ ನಿಭಾಯಿಸ್ತೀನಿ" ಮೊಂಡು ಧೈರ್ಯ ತಂದುಕೊಂಡು ಸಂಜೆ ಆಫೀಸು ಮುಗಿಯುತ್ತಲೇ ನಡುಗುವ ಹೆಜ್ಜೆಗಳನ್ನು ಟಾರಸಿಯ ಮೆಟ್ಟಿಲುಗಳತ್ತ ಹೊರಳಿಸಿದಳು.ಟಾರಸಿಯ ಮೇಲೆ ಬಂದಾಗ ಸಂಜೆಯ ಸೂರ್ಯ ಕೆಂಪಗೆ ಮುಖ ಮಾಡಿದ್ದ. ಗಗನಚುಂಬಿ ಕಟ್ಟಡಗಳ ನೆರಳು ಟಾರಸಿಯ ಮೇಲೆ ಬಿದ್ದಿತ್ತು. ಸುತ್ತಲೂ ದೃಷ್ಟಿ ಹಾಯಿಸಿದವಳಿಗೆ ಯಾರೂ ಕಾಣಿಸದಿದ್ದದ್ದು ಸೋಜಿಗವೆನಿಸಿತು. ಇದು ತನ್ನ ಅವಿವೇಕಿತನ. ಯಾರದೋ ಸುಳ್ಳು ಮೇಲ್ ನೋಡಿ ಇಲ್ಲಿಗೆ ಬಂದ ತಾನೆಂಥವಳು?ಹಿಂದಕ್ಕೆ ತಿರುಗಿ ಹೆಜ್ಜೆ ಎತ್ತಿಟ್ಟವಳನ್ನು ನಿಲ್ಲಿಸಿತು ಕಾಗೆಯ ಕೂಗು. ತಟ್ಟನೆ ನಿಂತು ಉಸಿರು ಬಿಗಿ ಹಿಡಿದಳು. ಕಾಲ ಬುಡದಲ್ಲಿಯೇ ಅಂಗಾತವಾಗಿ ಬಿದ್ದಿತ್ತು ಬಿಳಿಯ ಕಾಗೆ!ಅವಳ ಬಾಯಿಯಿಂದ ಚಿತ್ಕಾರ ಹೊರಟಿತು!
***
ಜನ ನಿಬಿಡ ಪ್ರದೇಶದ ಅತಿ ವಾಹನ ಸಂಚಾರದ ರಸ್ತೆಯನ್ನು ಮಿಂಚಿನ ವೇಗದಲ್ಲಿ ದಾಟಿ, ಜನಜಂಗುಳಿಯ ನಡುವೆ ಸೇರಿಕೊಂಡ ಸೊನಾಲಿಗೆ ಕೈ ಗಡಿಯಾರವನ್ನು ನೋಡುವಷ್ಟೂ ಸಮಯವಿರಲಿಲ್ಲ. ಬೆಳಗ್ಗೆ ಬೇಗನೆ ಎದ್ದು ಹೊರಟಿದ್ದರೂ ಸಮಯಕ್ಕೆ ಸರಿಯಾಗಿ ಬರದ ಬಸ್ಸು, ಅವಳಲ್ಲಿ ಆತಂಕವನ್ನು ಸೃಷ್ಟಿಸಿತು. ಇನ್ನು ಅರ್ಧ ಗಂಟೆಯಲ್ಲಿ ಗಮ್ಯ ತಲುಪುವುದು ಸಾಧ್ಯವೆ? ಅನುಮಾನ ಬಲವಾಯಿತು. ಆದರೆ ಹಿಂದೆ ಸರಿಯುವಂತೆ ಇಲ್ಲ. ಅದು ಬದುಕಿನಲ್ಲಿ ಬಹು ನಿರೀಕ್ಷೆಯಿಂದ ಮುಂದಿಟ್ಟ ದೊಡ್ಡ ಹೆಜ್ಜೆ.ಅವಳು ಸುಸಜ್ಜಿತವಾದ ಹೊಟೇಲನ್ನು ತಲುಪುವಾಗ ಮುಖದ ಮೇಲೆ ಬೆವರು ಇಳಿಯುತ್ತಿತ್ತು. ಸಂದರ್ಶನ ನಡೆಯುವ ಕೋಣೆಯನ್ನು ತಲುಪುವಾಗ ಅಲ್ಲಿ ಸಣ್ಣದೊಂದು ಸರತಿಯ ಸಾಲು ನಿಂತಿತ್ತು. ಅವಳು ಬ್ಯಾಗ್‍ನಲ್ಲಿದ್ದ ಕಾಗದ, ಪತ್ರಗಳನ್ನು ತೆಗೆದು ಸರದಿಯ ಕೊನೆಯಲ್ಲಿ ತಾನೂ ಸೇರಿಕೊಂಡಳು. ಸರದಿಯಲ್ಲಿ ನಿಂತಿರುವವರು ಯಾಕಾಗಿ ನಿಂತಿರುವರೆಂಬ ಅರಿವು ಅವಳಿಗಿರಲಿಲ್ಲ. ಮುಂದೆ ನಿಂತಿದ್ದ ಅಭ್ಯರ್ಥಿಯನ್ನು ಕೇಳಿದಳು."ಇದು ಸಂದರ್ಶನಕ್ಕಾಗಿ ಕಾದಿರೋ ಸರದಿಯಲ್ಲವೆ?"ಅವಳನ್ನು ಕೂಲಂಕಷವಾಗಿ ಗಮನಿಸಿದ ಅವನು ಮುಖ ಸಿಂಡರಿಸಿ ತಲೆಯಲುಗಿಸಿದ."ಇದು ಏರ್ ಹೊಸ್ಟೇಸ್ ಹುದ್ದೆಗೆ ಕಾದಿರೋ ಸರದಿ. ನೀವು...?" ಅವಳತ್ತ ಅನುಮಾನದ ನೋಟ ಹರಿಸಿದ. ಸೊನಾಲಿ ಭೂಮಿಗಿಳಿದು ಹೋದಳು. ತಾನು ತಪ್ಪು ಸಾಲಿನಲ್ಲಿ ಕಾದಿರುವೆ."ಕ್ಷಮಿಸಿ" ಅವಳು ಉತ್ತರಿಸದೆ ನೇರವಾಗಿ ಕೆಳಗಿಳಿದು ರಿಸೆಪ್ಷನ್‍ಗೆ ಬಂದಳು. ತನ್ನ ಸಂದರ್ಶನದ ಆಹ್ವಾನ ಪತ್ರವನ್ನು ತೋರಿಸಿದಳು. ರಿಸೆಪ್ಷನ್ ಹುಡುಗಿ ಕೈ ತೋರಿಸಿದತ್ತ ನಡೆದಳು. ಕೋಣೆ ಮುಚ್ಚಿತ್ತು. ನಯವಾಗಿ ಕೋಣೆಯ ಮೇಲೆ ಬಡಿದಾಗ ಒಳಗಿನಿಂದ ದನಿ ಕೇಳಿಸಿತು. ಮೆಲ್ಲನೆ ಬಾಗಿಲು ತೆರೆದು ಒಳಗೆ ನಡೆದಳು.ಒಮ್ಮೆಲೆ ಮುಖಕ್ಕೆ ನುಗ್ಗಿದ ಹವಾನಿಯಂತ್ರಿತ ಗಾಳಿ ಮೈಯನ್ನು ಅದುರಿಸಿತು. ಒಳಗಿರಬಹುದಾಗ ವ್ಯಕ್ತಿಗಳ ಬಗ್ಗೆ ನಿರೀಕ್ಷಿಸಿದವಳಿಗೆ ಆಶ್ಚರ್ಯ. ಒಂದು ಮಧ್ಯ ವಯಸ್ಸಿನ ಹೆಣ್ಣು, ಅವಳ ಪಕ್ಕದಲ್ಲಿ ಬಿಳಿಯ ವಸ್ತ್ರವನ್ನು ಧರಿಸಿದ್ದ ಐವತ್ತರ ಅಂಚಿನ ವ್ಯಕ್ತಿ. ನೋಡಲು ವಿಚಿತ್ರವಾದ ಬಾಹ್ಯಚಹರೆ. ನೇರಕ್ಕೆ ಚಾಚಿಕೊಂಡ ಮೂಗು. ಅವನ ಉಡುಪಿಗೂ, ಮೈ ಬಣ್ಣಕ್ಕೂ ತಾಳೆಯಾಗುತ್ತಿತ್ತು. ಅವಳು ಕೈ ಜೋಡಿಸಿದಳು. ಬಿಳಿಯ ವಸ್ತ್ರದ ವ್ಯಕ್ತಿ ಕನ್ನಡಕದ ಒಳಗಿನಿಂದ ಅವಳನ್ನು ಗಮನಿಸಿದ.ಅವಳು ಕೈಯಲ್ಲಿದ್ದ ಪತ್ರವನ್ನು ಮುಂದೆ ಹಿಡಿದಳು. ಪಕ್ಕದಲ್ಲಿ ಕುಳಿತಿದ್ದ ಮಧ್ಯವಯಸ್ಸಿನ ಹೆಣ್ಣು ಕುಳಿತುಕೊಳ್ಳುವಂತೆ ಸೂಚಿಸಿದಳು.ಆ ಹೆಣ್ಣು ಸೊನಾಲಿಯ ಅರ್ಹತಾ ಪತ್ರ, ಕಾಗದಗಳನ್ನು ಓದಿದ ಬಳಿಕ ಮೆಚ್ಚುಗೆಯಿಂದ ಅವುಗಳನ್ನು ನೇರ ಮೂಗಿನ ವ್ಯಕ್ತಿಯ ಕಡೆಗೆ ಹಿಡಿದಳು. ಅವನ ದೃಷ್ಟಿ ಸೊನಾಲಿಯಿಂದ ಸರಿಯಲಿಲ್ಲ. ಕಣ್ಣುಗಳೇ ಎಲ್ಲವನ್ನೂ ಪರಿಶೀಲಿಸಿದವು. ಸೊನಾಲಿ ಮುಜುಗರದಿಂದ ಮುದುರಿಕೊಂಡಳು."ವಯಸ್ಸೇನು?" ಅನಗತ್ಯ ಪ್ರಶ್ನೆ ಎದುರಾದಾಗ ತಡವರಿಸಿತು."ಇಪ್ಪತ್ತೊಂದು""ಕೆಲಸವನ್ನು ಮಾಡುವ ಛಲವಿದೆಯಾ?""ಹೌದು""ಸರಿ, ನಾಳೆಯಿಂದ ಬರಬಹುದು"ಸಂದರ್ಶನ ಇಷ್ಟೇನಾ? ಇದಕ್ಕೆ ಇಂತಹ ನಕ್ಷತ್ರ ಹೊಟೇಲು ಅಗತ್ಯವಿತ್ತೆ? ಎದ್ದು ಹೊರಗೆ ಬಂದಳು. ಅಷ್ಟರಲ್ಲಿ ಮಧ್ಯ ವಯಸ್ಸಿನ ಹೆಣ್ಣೂ ಹೊರಗೆ ಬಂದಳು."ನಿಲ್ಲು, ಇದು ನಿನ್ನ ನಿಯುಕ್ತಿಯ ಪತ್ರ. ಇದರಲ್ಲಿರೋ ವಿಳಾಸಕ್ಕೆ ನಾಳೆ ಬಂದು ಬಿಡು. ಇಲ್ಲಿ ಶಿಸ್ತು ಮುಖ್ಯ" ಅವಳು ಕೊಟ್ಟ ನಿಯುಕ್ತಿಯ ಪತ್ರವನ್ನು ತೆಗೆದುಕೊಂಡು ರಸ್ತೆಗಿಳಿದಳು.ಮರು ದಿನ ಆ ವಿಳಾಸಕ್ಕೆ ಬಂದಾಗ ತನ್ನಂತೆ ಹಲವು ಜನ ಅಲ್ಲಿರುವುದು ಕಂಡು ನೆಮ್ಮದಿಯೆನಿಸಿತು. ಅವರ ಜೊತೆಗೆ ಕೂಡಲೇ ಬೆರೆತು ಹೋದಳು. ಅದರಲ್ಲೂ ಶುಭಾಶ್ರೀಯ ತುಂಟತನ ಅವಳನ್ನು ಬಹುವಾಗಿ ಸೆಳೆದಿತ್ತು. ನೇರ ಮೂಗಿನ ವ್ಯಕ್ತಿಯನ್ನು ಅವಳು ಕುಚೋದ್ಯಕ್ಕೆ ಕರೆಯುತ್ತಿದ್ದುದ್ದೇ ಬಿಳಿಕಾಗೆ!ಆ ಆಫೀಸಿಗೆ ಅವಳು ಬೇಗನೆ ಹೊಂದಿಕೊಂಡಿದ್ದು ಬಿಳಿಕಾಗೆಗೆ ಸಂತೋಷ ತಂದಿತ್ತು. ಆದರೆ ಬಿಳಿಕಾಗೆಯ ದೃಷ್ಟಿ ಅವಳ ಮೇಲೆ ಹರಿದಾಗ ಸೊನಾಲಿಗೆ ತಿಳಿದಿರಲಿಲ್ಲ. ಶುಭಾಶ್ರೀಯೇ ಅವಳಿಗೆ ತಿಳಿಸಬೇಕಾಯಿತು."ನೀನು ಅದೃಷ್ಟವಂತೆ, ಕಾಕ ದೃಷ್ಟಿ ನಿನ್ನ ಮೇಲೆ ಬಿದ್ದಿದೆ. ನಿನಗೆ ಅದೃಷ್ಟದ ಬಾಗಿಲು ತೆರೆದಿದೆ. ಕಾಗೆಯನ್ನು ಅಂಗೈಯಲ್ಲಿ ಹಿಡಿದು ಆಡಿಸಿ ಬಿಡು" ಕೆಣಕುವ ಮಾತಿಗೆ ಸೊನಾಲಿ ಉರಿದು ಹೋದಳು."ನಾನು ಮರ್‍ಯಾದಸ್ಥ ಮನೆಯ ಹುಡುಗಿ. ನೀನು ಬಾಯಿಗೆ ಬಂದಂತೆ ಮಾತನಾಡಿದರೆ ಕೆಲಸ ಬಿಟ್ಟು ಬಿಡ್ತೀನಿ" ಕಣ್ಣಾಲಿಗಳು ತುಂಬಿ ಬಂದಿದ್ದವು. ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಶುಭಾಶ್ರೀ ಅವಳನ್ನು ಕರೆದುಕೊಂಡು ತೆರೆದ ಹೊಟೇಲಿಗೆ ಬಂದಳು."ಕ್ಷಮಿಸು ನನ್ನ, ನೀನು ಬುದ್ಧಿ ಬೆಳೆದಿರೋ ಹುಡುಗಿ. ಇಂತಹ ಆಫೀಸಿನಲ್ಲಿ ಕೆಲಸ ಮಾಡೋವಾಗ ಅಧಿಕಾರಿಗಳ, ಅದರಲ್ಲೂ ಮಾಲೀಕನ ಪ್ರಭಾವವಿದ್ದರೆ, ನೀನು ಬದುಕಿನಲ್ಲಿ ಬಯಸಿದ್ದನ್ನು ಪಡೆದುಕೊಳ್ಳಬಹುದು"ಗೆಳತಿ ಅಂದುಕೊಂಡವಳ ಮಾತುಗಳಿಗೆ ಕಿವಿ ಮುಚ್ಚಿಕೊಳ್ಳುವ ಸ್ಥಿತಿ. ಹೆಣ್ಣು ಇಷ್ಟು ಕೆಳ ಮಟ್ಟದಲ್ಲಿ ಯೋಚಿಸಬಲ್ಲಳೇ? ಮಾವ ಕೂಡ ಇದೇ ರೀತಿ ಹೇಳಿದ್ದ."ಸೋನು, ನಿನಗೆ ದಂತದ ಹಾಗೆ ಮೈಬಣ್ಣವಿದೆ. ಜೊತೆಗೆ ಚೆಲುವೆ. ನೀನ್ಯಾಕೆ ಸಿನಿಮಾಕ್ಕೆ ಸೇರಬಾರದು?"ಕೆನ್ನೆಗೆ ಹೊಡೆಯುವಂತೆ ಅರಚಿದ್ದಳು."ನನ್ನ ಏನೂಂತ ತಿಳ್ಕೊಂಡಿದ್ದಿಯಾ? ನನ್ನ ಸೌಂದರ್ಯಾನ ಬಿಚ್ಚಿಟ್ಟು ದುಡ್ಡು ಸಂಪಾದನೆ ಮಾಡುವ ಆಲೋಚನೆಯಾ ನಿನಗೆ?"ಹಿಂದೆ ಮುಂದೆ ಯಾರೂ ಇಲ್ಲದ ನಿರ್ಗತಿಕಳೆಂದು ಉಪೇಕ್ಷೆ ಮಾಡಿದವನನ್ನು ಚೆನ್ನಾಗಿ ಚಾಳಿಸಿದ ನಂತರ ಅಲ್ಲಿ ನಿಲ್ಲದೆ ಕೆಲಸ ಹುಡುಕಿಕೊಂಡು ಪಟ್ಟಣ ಸೇರಿದಳು. ಪಟ್ಟಣ ಸೇರಿದರೂ ಅಷ್ಟೇ. ಎಲ್ಲೆಲ್ಲೂ ಕಾಕ ದೃಷ್ಟಿಯೆ. ಕೊನೆಗೆ ಒಂದು ಕೆಲಸ ಹಿಡಿಯಬೇಕಾದರೆ ಅಲೆಯದ ರಸ್ತೆಗಳಿಲ್ಲ, ತುಳಿಯದ ಮೆಟ್ಟಿಲುಗಳಿಲ್ಲ. ಎಲ್ಲೆಲ್ಲೂ ಬಾಹ್ಯಚಹರೆ, ಅಂತಸ್ತು ಇವುಗಳದ್ದೇ ಮಾನದಂಡ. ಕೊನೆಗೆ ಉಳಿದ ದಾರಿಯೊಂದೆ ಸೌಂದರ್ಯವನ್ನು ಜಮಾಯಿಸುವುದು. ಆದರೆ ಅದೇ ಒಂದು ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆಯೆನ್ನುವ ಅರಿವಿರಲಿಲ್ಲ.
***
ಮಧ್ಯಾಹ್ನದ ಹೊತ್ತಿಗೆ ಸಬ್ ಇನ್ಸ್‍ಪೆಕ್ಟರ್ ಸನ್ನಿಧಿ ತನ್ನ ನೀಲಿ ಮೋಟಾರು ಬೈಕಿಗೆ ಸೈಡ್ ಸ್ಟಾಂಡ್ ಹಾಕಿ ನಿಲ್ಲಿಸಿ, ಮೂರು ಅಂತಸ್ತಿನ ಕಟ್ಟಡವನ್ನು ತಲೆಯೆತ್ತಿ ನೋಡಿದ. ಅವನನ್ನು ಯಾವಾಗಲೂ ಕಾಡುವ ಅನುಮಾನವೇ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಿದ್ದುದು. ಎರಡು ದಿನಗಳ ಹಿಂದೆ ಅದೇ ಕಟ್ಟಡವನ್ನು ಪ್ರವೇಶಿಸಿ ಎಲ್ಲರಿಂದಲೂ ಅಭಿಮತ ಸಂಗ್ರಹಿಸಿದ್ದ. ಅಷ್ಟಾಗಿಯೂ ಯಾವ ನಿರ್ಧಾರಕ್ಕೂ ಬರಲು ಸಾಧ್ಯವಾಗಲಿಲ್ಲ.ಮೆಟ್ಟಿಲುಗಳನ್ನು ಟಕಟಕನೆ ಏರಿ ಆಫೀಸಿನ ಬಾಗಿಲು ತೆರೆದು ನಿಂತ. ಅವನ ದೃಷ್ಟಿ ಸೊನಾಲಿಯ ಕಡೆಗೆ ಹರಿದು ಅಲ್ಲೇ ತಟಸ್ಥವಾಯಿತು. ಕೆಲಸದ ನಡುವೆ ತಲೆಯೆತ್ತಿದವಳ ನೋಟ ಪೆಡಂಭೂತದಂತೆ ಎದುರು ನಿಂತಿದ್ದ ಅಧಿಕಾರಿಯತ್ತ ಹೊರಳಿತು. ಭಯದ ಕರಿ ನೆರಳಿನ ಜೊತೆಗೆ ಒಂದು ಉದ್ಗಾರ ಬಾಯಿಯಿಂದ ಹೊರಗೆ ಬಿತ್ತು.ಅವಳ ಸ್ಥಿತಿಯನ್ನು ಕಂಡವನೇ ಅವಳ ಎದುರು ನಿಂತ. ಎದ್ದು ನಿಂತು ತಲೆ ತಗ್ಗಿಸಿದಳು. ಅವನು ಹ್ಯಾಟ್ ತೆಗೆದು ಕೈಯಲ್ಲಿದ್ದ ಬೆತ್ತದ ಜೊತೆಗೆ ಹಿಡಿದ."ನಿನ್ನ ಅಧಿಕಾರಿಯನ್ನು ನೋಡುವುದಿದೆ" ಅವಳ ಎದೆಯಲ್ಲಿ ಕುಟ್ಟುವ ನಿಶ್ಶಬ್ದ ಸದ್ದು ವೇಗ ಪಡೆದು ಸಶ್ಶಬ್ದವಾಯಿತು."ಅವರು... ಅವರು..." ಕ್ಯಾಬಿನ್‍ನತ್ತ ದೃಷ್ಟಿ ಹರಿಸಿದವಳಿಗೆ ಅಧಿಕಾರಿ ಕಾಣಿಸಲಿಲ್ಲ. ಪೊಲೀಸ್ ಅಧಿಕಾರಿ ಅವಳತ್ತ ಕ್ರೂರ ನೋಟ ಹರಿಸಿ ಮುಂದೆ ನಡೆದ. ಮಾಲೀಕನ ಆಪ್ತ ಸಲಹೆಗಾರ್ತಿ ಅಂಬಿಕಾ ಅವನನ್ನು ಎದುರುಗೊಂಡಳು."ನನಗೆ ಕೆಲವೊಂದು ಅನುಮಾನಗಳಿವೆ. ನಿಮ್ಮ ಕೈಯಲ್ಲಿ ಅದನ್ನು ಬಗೆಹರಿಸೋದಿಕ್ಕೆ ಸಾಧ್ಯನಾ?"ಸಲಹೆಗಾರ್ತಿ ಒಪ್ಪಿಗೆಯಿತ್ತು ಅವನನ್ನು ಒಳಗೆ ಕೂರಿಸಿದಳು."ಕೇಳಿ"ಅಧಿಕಾರಿ ಎದುರಿನ ಗೋಡೆಯತ್ತ ನೋಡುತ್ತಾ ಹ್ಯಾಟ್ ಮತ್ತು ಕೋಲನ್ನು ಮೇಜಿನ ಮೇಲಿರಿಸಿದ."ನಿಮ್ಮ ಮಾಲೀಕ ಅಂದರೆ ಭಗವಂತರಾಯರ ಹೆಣ ನೋಡಿದೋರು ಯಾರಂದ್ರಿ? ಅವರನ್ನು ಕರೆಸೋದು ಸಾಧ್ಯವೇ?"ಅಧಿಕಾರಿಯ ಮಾತಿಗೆ ತಲೆಯಲುಗಿಸಿ, ಬಜ಼ರ್ ಒತ್ತಿದಳು ಸಲಹೆಯ ಹೆಣ್ಣು. ಮರದ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದ ಅಟೆಂಡರ್ ರಾಮಯ್ಯ."ರಾಮಯ್ಯ, ಸಾರ್‍‍ಗೆ ಕುಡಿಯೋದಿಕ್ಕೆ ತಂಪು ಪಾನೀಯ ತಾ. ಹಾಗೇ ಸೊನಾಲಿನ ಒಳಗೆ ಕಳುಹಿಸು"ಅಧಿಕಾರಿಯ ಮುಖ ಗಂಭೀರವಾಗಿತ್ತು. ಅವನು ಮತ್ತೊಂದಷ್ಟು ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುವ ಹೊತ್ತಿಗೆ ಸೊನಾಲಿ ಬಾಗಿಲು ತೆರೆದು ಅನುಮತಿಯೊಂದಿಗೆ ಒಳಗೆ ಬಂದಳು. ಅಧಿಕಾರಿಯ ಬದಲಾಗದ ನೋಟ ಅವಳನ್ನು ಅಡಿಯಿಂದ ಮುಡಿಯವರೆಗೂ ಅಳೆಯಿತು. ಉದ್ದಕ್ಕೆ ಕೈ ತೋರಿಸಿ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ. ಅಳುಕುತ್ತಲೇ ಕುಳಿತ ಸೊನಾಲಿ ಸಲಹಾಗಾರ್ತಿಯತ್ತ ನೋಟ ಹರಿಸಿದಳು. ಅವಳ ಮುಖದಲ್ಲಿ ಗೊಂದಲದ ಛಾಯೆಯಿತ್ತು."ಆಫೀಸು ಬಿಟ್ಟು ನೇರವಾಗಿ ಮನೆ ಸೇರೋ ನೀವು ಆ ದಿನ ಸಂಜೆ ಯಾಕೆ ಟಾರಸಿ ಹತ್ತಿದ್ರಿ?" ಪೊಲೀಸ್ ಅಧಿಕಾರಿಯ ಅನಿರೀಕ್ಷಿತ ಪ್ರಶ್ನೆಗೆ ತಡವರಿಸಿತು. ಮೌನವಾಗಿಯೆ ಕುಳಿತಿದ್ದಳು."ನಿನ್ನನ್ನೇ ಪ್ರಶ್ನಿಸ್ತಿರೋದು... ಟಾರಸಿ ಹತ್ತಿ ಹೋಗುವ ಪ್ರಮೇಯವೇನಿತ್ತು?"ತುಟಿಗಳನ್ನು ಕಚ್ಚಿ ಹಿಡಿದು ಕುಳಿತವಳ ಬಿಗಿತ ಸಡಿಲವಾಯಿತು. ಮೆಲ್ಲಗೆ ತುಟಿಗಳು ಅದುರಿದವು."ಅವತ್ತು ಮಧ್ಯಾಹ್ನ ನನಗೊಂದು ಇ-ಮೇಲ್ ಬಂದಿತ್ತು....." ಕಥೆ ಮುಂದುವರಿದು ನಡೆದ ಘಟನೆಯನ್ನೆಲ್ಲಾ ಚಾಚೂ ತಪ್ಪದೆ ಅಧಿಕಾರಿಯ ಮುಂದೆ ಬಿಚ್ಚಿಟ್ಟಳು. ಅವಳು ಹೇಳಿದನ್ನೆಲ್ಲಾ ಕೇಳಿದ ಬಳಿಕ ಅಧಿಕಾರಿಯ ತುಟಿ ಅರಳಿತು."ತುಂಬಾ ಉಪಕಾರವಾಯಿತು. ನೀವಿನ್ನು ಹೋಗಬಹುದು" ಸೊನಾಲಿ ಆ ಮಾತಿಗೆ ಕಾದಿದ್ದವರಂತೆ ನಡುಗುವ ಹೆಜ್ಜೆಗಳಿಂದ ಹೊರಗೆ ಧಾವಿಸಿದಳು. ರಾಮಯ್ಯ ಜ್ಯೂಸ್‍ನ ಗ್ಲಾಸ್ ಹಿಡಿದುಕೊಂಡು ಒಳಗೆ ನಡೆದ. ಅಧಿಕಾರಿಯ ಮುಂದೆ ಹಿಡಿದ. ಅಧಿಕಾರಿ ಅದನ್ನು ತೆಗೆದುಕೊಳ್ಳುತ್ತಲೇ ಕಂಪ್ಯೂಟರ್‍‍ನ ಹೆಣ್ಣು ವಾಸಂತಿಯನ್ನು ಕರೆಯುವಂತೆ ತಿಳಿಸಿದ.ಅಧಿಕಾರಿ ಜೂಸ್ ಕುಡಿದು ಮುಗಿಸುವಷ್ಟರಲ್ಲಿ, ಗಂಡಸಿನ ಮುಖದ ಹೆಣ್ಣು, ವಾಸಂತಿ ಒಳಗೆ ಬಂದಳು. ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತು ಹಲ್ಲು ಕಿಸಿದಳು. ಸೊನಾಲಿ ಹೇಳಿದ ಕಥೆಯನ್ನು ಪುನರುಚ್ಚರಿಸಿದ ಅಧಿಕಾರಿ."ಆ ಹುಡುಗಿಗೆ ಮೇಲ್ ಕಳಿಸಿದವರು ಯಾರು ಅನ್ನುವುದು ಗೊತ್ತೆ?" ಗಂಡಸಿನ ಮುಖದ ಆ ಹೆಣ್ಣು ಆಲೋಚನೆಗೆ ಬಿದ್ದವರಂತೆ ಕುಳಿತಳು. ಕ್ಷಣದಲ್ಲಿಯೇ ಏನನ್ನೋ ಯೋಚಿಸಿ ತೋರುಬೆರಳನ್ನು ಎತ್ತಿ ಉದ್ಗರಿಸಿದಳು."ಆ ದಿನ ಸೊನಾಲಿಗೆ ಮೇಲ್ ಬಂದಿತ್ತು. ಅದು ಅದು... ಬಿಳಿಕಾಗೆ ಅನ್ನುವ ಇ-ಮೇಲ್ ಅಡ್ರೆಸ್‍ನಿಂದ""ಬಿಳಿಕಾಗೆ!" ಅಧಿಕಾರಿ ಆಶ್ಚರ್ಯದಿಂದ ಹೇಳಿಕೊಂಡ. ಸಲಹಾಗಾರ್ತಿ ಅವನ ಸಹಾಯಕ್ಕೆ ಧಾವಿಸಿದಳು."ಹೌದು, ಭಗವಂತರಾಯರನ್ನು ಜನ `ಬಿಳಿಕಾಗೆ' ಅನ್ನೋ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಆತ ಸಾಧು ಮನುಷ್ಯ. ಯಾರದೋ ಕುಹಕಕ್ಕೆ ಆ ಹೆಸರು ಬಂತು"ಬಿಳಿಕಾಗೆ ಪೊಲೀಸ್ ಅಧಿಕಾರಿಯ ತಲೆಯ ಒಳಗೆಲ್ಲಾ ಹಾರಾಡಿತು. ಅವನು ಗೊಂದಲಕ್ಕೆ ಬಿದ್ದು ವಾಸಂತಿಯನ್ನು ಹೊರಗೆ ಕಳುಹಿಸಿದ. ಸುಮಾರು ಹೊತ್ತು ಸಲಹಾಗಾರ್ತಿಯ ಜೊತೆಗೆ ಮಾತನಾಡಿ ಹೊರಗೆ ಬಂದಾಗ ಸೊನಾಲಿ ಅಲ್ಲಿರಲಿಲ್ಲ!ಅವನು ಮೆಟ್ಟಲುಗಳನ್ನು ಇಳಿದು ಕೆಳಗೆ ಬರುವಾಗ ಮೆಟ್ಟಿಲುಗಳ ಸಂಧಿಯಲ್ಲಿ ಯಾರದೋ ಪಿಸು ಮಾತುಗಳು ಕೇಳಿಸಿದವು. ಅವು ಎರಡು ಹೆಣ್ಣುಗಳ ದನಿ! ಒಂದು ಸೊನಾಲಿಯದ್ದೇ ದನಿ! ಸೊನಾಲಿ ಯಾರೊಂದಿಗೆ ಹೀಗೆ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದಾಳೆ? ಕುತೂಹಲ ಕೆರಳಿತು. ಸ್ವಲ್ಪ ಹೊತ್ತು ಮರೆಯಲ್ಲಿ ಕಾದು ನಿಂತ. ಇನ್ನೊಂದು ಹೆಣ್ಣು ಅಸ್ಪಷ್ಟವಾಗಿ ಗೋಚರಿಸಿತು. ವಾಸಂತಿ! ಅಥವಾ ಸಲಹಾಗಾರ್ತಿ!? ಇಬ್ಬರಲ್ಲಿ ಯಾರೋ ಒಬ್ಬರು!
***
ಮರುದಿನ ಅಧಿಕಾರಿ ಸ್ಟೇಶನ್‍ನಿಂದ ನೇರವಾಗಿ ಭಗವಂತರಾಯರ ಸಲಹಾಗಾರ್ತಿಯ ಮನೆಗೆ ಬಂದ. ಭಗವಂತರಾಯರ ಮಕ್ಕಳು ದೂರದ ಅಮೆರಿಕಾದಲ್ಲಿರುವ ವಿಷಯ ತಿಳಿದಿದ್ದ ಅಧಿಕಾರಿ ಆ ರೀತಿ ನಿರ್ಧಾರ ತೆಗೆದುಕೊಂಡ."ಏನಾದರೂ ಸುಳಿವು...?" ಅಂಬಿಕಾಳ ಪ್ರಶ್ನೆಗೆ ಅಧಿಕಾರಿ ನಗು ತೋರಿಸಿದ."ಹೌದು, ಭಗವಂತರಾಯರ ಆಸ್ತಿಗೆ ಬಾಧ್ಯಸ್ಥರು ಯಾರು? ಅವರ ಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಮೋಹವಿಲ್ಲ"ಸಲಹಾಗಾರ್ತಿಯ ಮುಖ ಬಿಳಿಚಿಕೊಂಡಿತು. ಅಧಿಕಾರಿ ಅದನ್ನು ಗುರುತಿಸಿಕೊಂಡ."ನಿಮಗೆ ಅವರ ಆಸ್ತಿಯ ಮೇಲೆ....?""ನೋ, ನೋ... ನಾನು ಯಾವತ್ತು ಅವರ ಆಸ್ತಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ" ಅಧಿಕಾರಿಯ ಮಾತನ್ನು ತಡೆದು ಹೇಳಿದಳು."ನಿಮ್ಮನ್ನು ಪರೀಕ್ಷಿಸ್ತಾ ಇಲ್ಲ. ಸತ್ಯ ತಿಳಿದುಕೊಳ್ಳುವುದಕ್ಕೆ ಕೇಳಿದೆ""ಇಲ್ಲ. ಖಂಡಿತವಾಗಿಯೂ ನಾನು ಅವರ ಆಸ್ತಿಗೆ ಆಸೆ ಪಟ್ಟವಳಲ್ಲ"ಅಧಿಕಾರಿ ನಕ್ಕು ನುಡಿದ."ಸರಿ, ನಿಮ್ಮ ಮಾತು ನಂಬ್ತೀನಿ. ನೀವು ಈಗಲೇ ಆಫೀಸಿಗೆ ಬಂದು ಬಿಡಿ. ಕೊಲೆಗಾರ ಅಲ್ಲಿಯೇ ಇದ್ದಾನೇಂತ ನನ್ನ ಅನುಮಾನ"ಅಧಿಕಾರಿಯ ಮಾತಿಗೆ ತಡಬಡಿಸಿ ತಯಾರಾದ ಸಲಹಾಗಾರ್ತಿ ಅಂಬಿಕಾ ಆಫೀಸಿಗೆ ಧಾವಿಸಿದಳು. ಆಫೀಸಿನಲ್ಲಿ ಅಧಿಕಾರಿ ಅವಳ ಬರುವಿಕೆಗಾಗಿ ಕಾದು ಕುಳಿತಿದ್ದ. ಎಲ್ಲಾ ಉದ್ಯೋಗಿಗಳತ್ತ ನೋಡಿದ. ನೇರವಾಗಿ ಸೊನಾಲಿಯ ಟೇಬಲ್‍ನ ಹತ್ತಿರ ನಿಂತು ಹೇಳಿದ."ಮಿಸ್ ಸೊನಾಲಿ, ಭಗವಂತರಾಯರಿಗೆ ನಿಮ್ಮ ಮೇಲೆ ಅಭಿಮಾನ, ವಿಶ್ವಾಸವಿತ್ತು. ಆ ದಿನ ನಿಮ್ಮನ್ನು ಸಂದರ್ಶನಕ್ಕೆ ಕರೆಸಿದ್ದು ಕೆಲಸ ಕೊಡಿಸುವ ಉದ್ದೇಶದಿಂದ ಅಲ್ಲ. ಬದಲಾಗಿ ತನ್ನ ಎಲ್ಲಾ ಆಸ್ತಿಗೂ ಒಬ್ಬ ನಂಬಿಕಸ್ಥ ವ್ಯಕ್ತಿಯ ಅಗತ್ಯವಿತ್ತು. ಆ ಅರ್ಹತೆ ನಿಮ್ಮಲ್ಲಿತ್ತು. ನೇರವಾಗಿ ಅದನ್ನು ನಿಮಗೆ ಹೇಳಿದ್ರೆ ನೀವು ಅದನ್ನು ನಿರಾಕರಿಸುತ್ತೀರಿ ಅನ್ನುವ ಉದ್ದೇಶದಿಂದ ಅವರ ಆಫೀಸಿನಲ್ಲಿ ಕೆಲಸ ಕೊಡಿಸಿದ್ರು. ಆದ್ರೆ ನೀವು ಅವರನ್ನು ಕೆಟ್ಟದಾಗಿ ತಿಳಿದುಕೊಂಡ್ರಿ. ನೋಡಿ, ಅವರು ತಮ್ಮ ಸಮಸ್ತ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದಿದ್ದಾರೆ. ಆದ್ರೆ ಈಗ ಅವರ ಕೊಲೆಯಾಗಿದೆ" ಸೊನಾಲಿ ತಲೆ ತಗ್ಗಿಸಿದಳು. ಅಧಿಕಾರಿಯ ಮಾತು ಆಶ್ಚರ್ಯದ ಜೊತೆಗೆ ನಾಚಿಕೆ ತರಿಸಿತು. ಹೂ ಮನಸ್ಸಿನ ಮಾಲೀಕನನ್ನು ಅಪಾರ್ಥ ಮಾಡಿಕೊಂಡಿದ್ದಳು."ಇಷ್ಟಕ್ಕೂ ಅವರ ಕೊಲೆ ಮಾಡಿದೋಳು ನಾನಲ್ಲ""ನೀವು ಕೊಲೆ ಮಾಡಿದ್ದೀರಿಂತ ನಾನು ಹೇಳ್ತಾ ಇಲ್ಲ. ಕೊಲೆ ಮಾಡಿರೋದು ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಹೊಂದಿರೋ ವ್ಯಕ್ತಿ. ಇದರಲ್ಲಿ ಸಿನಿಮಾದ ವ್ಯಕ್ತಿಯ ಪಾಲು ಇದೆ"ಸೊನಾಲಿಗೆ ಅರ್ಥವಾಗದೆ ತಲೆ ಎತ್ತಿದಳು. ಆ ಕ್ಷಣದಲ್ಲಿ ಎಲ್ಲರ ನೋಟ ಅಧಿಕಾರಿಯ ಕಡೆಗಿತ್ತು."ಬಿಳಿಕಾಗೆ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡಿರೋ ವ್ಯಕ್ತಿ, ಅವನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸುವುದಕ್ಕೆ ಯತ್ನಿಸಿದೆ. ಆ ದಿನ ಭಗವಂತರಾಯರು ಸ್ಟಾರ್‍ ಹೊಟೇಲ್‍ನಲ್ಲಿ ಇದ್ದಾಗ ಆ ವ್ಯಕ್ತಿ ಅವರನ್ನು ಒತ್ತಾಯಿಸಿತು. ಆದ್ರೆ ಅವರು ತಮ್ಮ ಸಮಸ್ತ ಆಸ್ತಿಗೂ ಹೊಸದಾಗಿ ನಿಯುಕ್ತರಾಗಿರೋ ನೀವೇ ಬಾಧ್ಯಸ್ಥೆ ಅಂತ ಹೇಳಿದ್ರು. ಅದೇ ಹೊತ್ತು ಆ ವ್ಯಕ್ತಿ ನಿರಾಸೆಯಿಂದ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿ, ನಿಮಗೆ ಬಿಳಿಕಾಗೆಯನ್ನು ತೋರಿಸಿತು. ನೀವು ಅದ್ಭುತ ನೋಡುವವರಂತೆ ಟಾರಸಿಗೆ ಹೋದ್ರಿ. ಆದ್ರೆ ಅಲ್ಲಿ ನಿಮ್ಮನ್ನು ನೋಡಿದ ಮಾಲೀಕ ಸಂತೋಷದಿಂದ ಕೈ ತೋರಿಸಿದ್ರು. ನೀವು ಅಪಾರ್ಥ ಮಾಡಿಕೊಂಡ್ರಿ""ಅಂದ್ರೆ... ಅಂದ್ರೆ...""ಅಂದ್ರೆ... ನಿಮ್ಮ ಗೆಳತಿ ಶುಭಾಶ್ರೀನೇ ನಿಮಗೆ ಬಿಳಿಕಾಗೆ ಅನ್ನೋ ಐಡಿಯಿಂದ ಮೇಲ್ ಕಳುಹಿಸಿರುವುದು. ಅಚಾನಕ್ಕಾಗಿ ಅದರ ಒಂದು ಪ್ರತಿ ಮಾಲೀಕ ಭಗವಂತರಾಯರ ಮೇಲ್ ಐಡಿಗೂ ಹೋಗಿದೆ. ಒಂದೊಮ್ಮೆ ನಿಮ್ಮನ್ನು ಅಗಾಧವಾಗಿ ಪ್ರೀತಿಸೋ ನಾಟಕ ಮಾಡಿದ ಕ್ಯಾಮರಾ ಮೆನ್ ಹಿತೇಶನೇ ಕೊಲೆ ಮಾಡಿರೋದು. ನೆನಪಿದೆಯಾ ನಿಮಗೆ, ಆ ದಿನ ಸಂದೇಶ್‍ನನ್ನು ಭೇಟಿಯಾಗೊದಿಕ್ಕೆ ಬಿಗ್ ಬಜಾರ್‍‍ಗೆ ಹೋಗೋದಿದೆ... ಟಾರಸಿಗೆ ನೀನೇ ಹೋಗೂಂತ ಒತ್ತಾಯಿಸಿದ ನಿಮ್ಮ ಗಳತಿ, ನೇರವಾಗಿ ಹೋಗಿದ್ದು ಸ್ಟಾರ್‍ ಹೋಟೇಲ್‍ಗೆ. ಅಲ್ಲಿದ್ದ ಹಿತೇಶನನ್ನು ಭೇಟಿಯಾಗೊದಿಕ್ಕೆ. ಆ ದಿನ ಟಾರಸಿ ಹತ್ತಿದ ನಿಮ್ಮನ್ನು ಮುಗಿಸುವ ತಂತ್ರ ಹೂಡಿದ ನಿಮ್ಮ ಗೆಳತಿ, ಅಲ್ಲಿ ಭಗವಂತರಾಯರನ್ನು ನೋಡಿ ತನ್ನ ಯೋಜನೆಯೆಲ್ಲಾ ತಿಳಿದು ಹೋಯಿತೂಂತ ಅವರನ್ನೇ ಮುಗಿಸುವಂತೆ ಹಿತೇಶನಿಗೆ ಹೇಳಿದ್ಲು. ಹಾಗೆ ಸ್ಟಾರ್ ಹೊಟೇಲ್‍ನ ಮೂರನೆ ಅಂತಸ್ತಿನಿಂದ ಹಿತೇಶ ಹಾರಿಸಿದ ಗುಂಡಿಗೆ ಅವರು ಬಲಿಯಾದ್ರು"ಕಥೆ ಕೇಳಿದ ಸೊನಾಲಿಯ ಕಣ್ಣುಗಳಲ್ಲಿ ನೀರು ಇಳಿಯಿತು. ಮೆಲ್ಲಗೆ ಕಣ್ಣಿಗೆ ಸೆರಗು ಒತ್ತಿಕೊಂಡಳು. ಅವಳು ಹಿಂತಿರುಗುವಷ್ಟರಲ್ಲಿ ಅಧಿಕಾರಿ ಶುಭಾಶ್ರೀಯ ಮುಂದೆ ನಿಂತಿದ್ದ."ಅತಿಯಾಸೆ ಗತಿಗೇಡು. ನೀವು ವಿಷಯ ತಿಳಿದ ನಂತರವೂ ಮೆಟ್ಟಿಲುಗಳ ಹತ್ತಿರ ಸೊನಾಲಿಯನ್ನು ಕರೆದು ಬೆದರಿಕೆ ಹಾಕಿದ್ರಿ. ಒಂದು ವಿಷಯ ನಿಮಗಿನ್ನೂ ಗೊತ್ತಿಲ್ಲಾಂನ್ಸುತ್ತೆ. ಹಿತೇಶ ನಮ್ಮ ಸುರ್ಪದಿಯಲ್ಲಿದ್ದಾನೆ. ನೀವೂ ಜೊತೆಗೂಡಿ"ಶುಭಾಶ್ರೀ ತಲೆತಗ್ಗಿಸಿ ಅಧಿಕಾರಿಯ ಹಿಂದೆ ನಡೆದಾಗ ಅಧಿಕಾರಿ ಗೆಲುವಿನ ನಗೆಯೊಂದಿಗೆ ಆಫೀಸಿನ ಮುಂದಿನ ಬಾಧ್ಯಸ್ಥೆ, ಸೊನಾಲಿಯ ಬಳಿ ಬಂದು ಶುಭ ಹಾರೈಸಿದ.

Read more!

Saturday, February 7, 2009

ಸಾಹಸಿ ಪಯಣಿಗರ ನೂರೆಂಟು ಗಂಟುಗಳು


ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ.
ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್. ವಿದ್ಯಾರಣ್ಯರವರು.

ಈ ಬೃಹತ್ ಪುಸ್ತಕದಲ್ಲಿ ಯೂರೋಪಿನ ಲೇಖಕರು ಬರೆದಿರುವ ಮೂರು ವಿಭಿನ್ನ ರೀತಿಯ ಪ್ರಯಾಣದ ಕಾದಂಬರಿಗಳಿವೆ. ಮೂಲ ಕಾದಂಬರಿಯನ್ನು ಓದಿದಷ್ಟೇ ಆಪ್ತವೆನಿಸುವ ಇಲ್ಲಿಯ ಕಾದಂಬರಿಗಳೆಲ್ಲಾ ಬೇರೆ ಬೇರೆ ಭೌಗೋಳಿಕ ಹಿನ್ನಲೆಯಿರುವ ಜನರ, ಸಮಾಜದ, ಸಂಸ್ಕೃತಿಯ ಮತ್ತು ಅಲ್ಲಿನ ಮೌಲ್ಯಗಳನ್ನು ಎದುರಿಸುವ ಮತ್ತು ಅಲ್ಲಿ ತನ್ನ ಸರ್ವಾಧಿಕಾರ ಸಾಧಿಸಲು ಪ್ರಯತ್ನಿಸುವ ಅಧಿಕಾರ ಶಾಹಿ ವರ್ಗವನ್ನು ವಿಢಂಬನಾತ್ಮಕವಾಗಿ ತೆರೆದಿಡುವುದಲ್ಲದೆ ಮುಂದೆ ನಡೆಯಬಹುದಾದ ಸರ್ವಾಧಿಕಾರ ಧೋರಣೆಗಳನ್ನು ಸೂಕ್ಷ್ಮವಾಗಿ ಪರಿಚಯಿಸುತ್ತವೆ.
ಈ ಪುಸ್ತಕದಲ್ಲಿ ಕಾದಂಬರಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಜೋನಥಾನ್ ಸ್ವಿಫ್ಟ್‍ನ `ಗಲಿವರಾಯಣ', ಎರಡನೆ ವಿಭಾಗದಲ್ಲಿ ಡೇನಿಯಲ್ ಡೀಫೋನ `ರಾಬಿನ್‍ಸನ್ ಕ್ರುಸೋ' ಮತ್ತು ಮೂರನೆ ವಿಭಾಗದಲ್ಲಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂಪ್ರದಕ್ಷಿಣೆ' ಕಾದಂಬರಿಗಳಿವೆ.
ಗಲಿವರಾಯಣದಲ್ಲಿ ಮೂರು ಕಾದಂಬರಿಗಳಿವೆ. ನಮಗೆಲ್ಲಾ ಗೊತ್ತಿರುವ ಗಲಿವರಾಯಣದ ಕಥೆ ಲಿಲಿಪುಟ್‍ಗಳ ದೇಶದ ಕಥೆ. ಸಾಧಾರಣವಾಗಿ ಪ್ರಾಥಮಿಕ ಶಾಲೆಯಿಂದಲೇ ಈ ಕಥೆಯನ್ನು ಓದಿರುತ್ತೇವಾದರೂ ಇಡೀ ಕಥೆಯನ್ನು ಆಸ್ವಾಧಿಸಬೇಕಾದರೆ ಗಲಿವರಾಯಣದ ಮೊದಲ ಕಾದಂಬರಿ `ಲಿಲಿಪುಟ್‍ಗಳ ನಾಡಿನಲ್ಲಿ' ಅನ್ನು ಓದಲೇಬೇಕು.
ಗಲಿವರ್ ಒಬ್ಬ ವೈದ್ಯನಾಗಿ ನಾವಿಕನಾಗುವ ಕನಸು ಕಾಣುತ್ತಾನೆ. ಅವನು ಹಡಗಿನಲ್ಲಿ ವೈದ್ಯನಾಗಿಯೂ ಸೇರುತ್ತಾನೆ. ಅಲ್ಲಿಂದ ಅವನ ಸಮುದ್ರಯಾನ ಆರಂಭವಾಗುತ್ತದೆ. ಅವನ ಹಡಗು ಅಲೆಗಳ ಹೊಡೆತಕ್ಕೆ ಸಿಕ್ಕಿ ಅಪಘಾತವಾಗುತ್ತದೆ. ಅಲ್ಲಿಂದ ಬದುಕುಳಿದ ತನ್ನ ಸಹಪ್ರಯಾಣಿಕರ ಜೊತೆಗೆ ದೋಣಿಯಲ್ಲಿ ಕುಳಿತು ದಡ ತಲುಪುವ ಪ್ರಯತ್ನ ಮಾಡುತ್ತಾನೆ. ದೋಣಿ ಕೂಡ ದುರಂತಕ್ಕೀಡಾಗಿ ಅವನೊಬ್ಬನೇ ಅಪರಿಚಿತ ನಾಡಿಗೆ ಬರುತ್ತಾನೆ. ಅವನಿಗೆ ಬೆಳಿಗ್ಗೆ ಎಚ್ಚರವಾದಾಗ ಇರುವೆಯಂತ ಪುಟಾಣಿ ವೀರರು ಅವನನ್ನು ಬಂಧಿಸಿರುತ್ತಾರೆ. ಆ ಲಿಲಿಪುಟ್‍ಗಳ ಭಾಷೆ ಅರ್ಥವಾಗದೆ ಸನ್ನೆಯಲ್ಲಿ ತನ್ನ ಬಾಯಾರಿಕೆ, ಹಸಿವುಗಳನ್ನು ತಿಳಿಸುತ್ತಾನೆ. ಅವನ ಸನ್ನೆಯನ್ನು ಅರ್ಥೈಸಿಕೊಂಡು ಅವನಿಗೆ ಬೇಕಾದ ಆಹಾರ, ಪಾನೀಯಗಳನ್ನು ಒದಗಿಸುತ್ತಾರೆ. ಆ ದೇಶದ ರಾಜನ ವಿಶ್ವಾಸ ಗೆದ್ದು ಅವರಲ್ಲಿಯೇ ಒಬ್ಬನಾಗುತ್ತಾನೆ ಗಲಿವರ್. ಆದರೂ ಅಲ್ಲಿಯ ಅರಸನಿಗೆ ಗಲಿವರನ ಮೇಲೆ ಸಂಶಯವಿರುತ್ತದೆ. ಇದಕ್ಕೆ ಕಾರಣ ಆತ ಒಮ್ಮೆ ಲಿಲಿಪುಟ್ ಜನರಿಂದ ತಪ್ಪಿಸಿಕೊಂಡು ಬ್ಲೆಫೆಸ್ಕೋದ ಜನರನ್ನು ಭೇಟಿಯಾಗಿರುತ್ತಾನೆ. ಬ್ಲೆಫೆಸ್ಕೋ ಅರಸನ ವಿರೋಧಿಯಾಗಿರುವ ಲಿಲಿಪುಟ್ ಅರಸ ಮುಂದೆ ಗಲಿವರನ ಸಹಾಯದಿಂದ ಅವನನ್ನು ಎದುರಿಸಲು ಸಿದ್ಧವಾಗುತ್ತಾನೆ. ಆದರೆ ಆ ಎರಡು ದೇಶಗಳ ನಡುವೆ ಶಾಂತಿ, ಸಂಧಾನಕ್ಕೆ ನೆರವಾಗುತ್ತಾನೆ ಗಲಿವರ್. ಕೊನೆಗೆ ತನ್ನ ದೇಶಕ್ಕೆ ಹಿಂತಿರುಗಬೇಕೆನ್ನುವ ಅವನ ತುಡಿತದಂತೆ ಗಲಿವರ ಬ್ಲೆಫೆಸ್ಕೋದ ಅರಸನ ಸಹಾಯದಿಂದ ತನ್ನ ದೇಶಕ್ಕೆ ಮರಳುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಹಿರಿ ಕಿರಿಯರಿಂದ ಎಲ್ಲರಿಗೂ ಆಪ್ತವೆನಿಸುತ್ತದೆ ಈ ಕಾದಂಬರಿ.
ಗಲಿವರನ ಮುಂದಿನ ಪಯಣ ಬ್ರಾಬ್ಡಿಂಗ್‍ನ್ಯಾಗ್ ನಾಡಿನ ಪ್ರವಾಸ. ಅಲ್ಲಿ ಲಿಲಿಪುಟ್‍ಗಳ ಹಾಗೇ ಆದರೆ ವ್ಯತಿರಿಕ್ತವಾಗಿರುವ ದೈತ್ಯ ಜನರ ದರ್ಶನವಾಗುತ್ತದೆ. ಒಬ್ಬ ರೈತನ ಕೈಗೆ ಸಿಕ್ಕಿ, ಅವನ ಕೈಗೊಂಬೆಯಾಗುತ್ತಾನೆ. ಆ ರೈತ ಅವನನ್ನು ಒಬ್ಬ ಜೋಕರ್‍‍ನ ಹಾಗೆ ನಡೆಸಿಕೊಳ್ಳುತ್ತಾನೆ. ಮಾತ್ರವಲ್ಲ, ಅವನನ್ನು ಪ್ರದರ್ಶನಕ್ಕಿಟ್ಟು ಹಣಗಳಿಸುತ್ತಾನೆ. ಇದರಿಂದ ಅವನಿಗೆ ತುಂಬಾ ಬೇಸರವಾಗುತ್ತದೆ. ಬಂಧನದಿಂದ ಮುಕ್ತಿ ಹೊಂದಬೇಕೆನ್ನುವ ಅದಮ್ಯ ಬಯಕೆಯಿರುತ್ತದೆ. ಆದರೆ ಆ ರೈತ, ತನಗೆ ಅವನು ಇನ್ನು ಉಪಯೋಗವಿಲ್ಲವೆನ್ನುವ ನಿರ್ಧಾರಕ್ಕೆ ಬಂದು ಅವನನ್ನು ಆ ನಾಡಿನ ರಾಜನಿಗೆ ಮಾರುತ್ತಾನೆ. ಇವನ ಮೋಜನ್ನು ಮೆಚ್ಚಿಕೊಳ್ಳುವ ರಾಜನ ಪರಿವಾರ ಅವನೊಂದಿಗೆ ಅನ್ಯೋನ್ಯವಾಗಿರುತ್ತದೆ. ಅಲ್ಲಿಯ ಭಾಷೆಯನ್ನು ಕಲಿತು ರಾಣಿಯ ಮನಸ್ಸನ್ನೂ ಗೆದ್ದು ಅರಮನೆಯಲ್ಲಿ ಉಳಿಯುತ್ತಾನೆ. ಕೊನೆಗೆ ತಾನು ಸ್ವತಂತ್ರವಾಗಿ ಜೀವಿಸಲು ಹಾತೊರೆದು ಅಲ್ಲಿಂದ ಹೊರಗೆ ಬರುತ್ತಾನೆ. ಬಲಶಾಲಿಗಳ ಮುಂದೆ ಬಲಹೀನರ ಪಾಡನ್ನು ತೆರೆದಿಡುತ್ತದೆ ಈ ಕಾದಂಬರಿ.
ಇನ್ನು ಮೂರನೆಯ ಕಾದಂಬರಿ `ಹ್ವಿನಿಮ್ ನಾಡಿನ ಪ್ರವಾಸ'; ಬಹಳ ಕುತೂಹಲಕರವಾಗಿಯೂ, ವಿಚಿತ್ರವಾದ ಅನುಭವಕ್ಕೂ ಒದಗುವ ಕಥೆ. ಹ್ವಿನಿಮ್‍ಗಳ ನಾಡಿನಲ್ಲಿ ಮನುಷ್ಯರೇ ಇಲ್ಲ! (ಈ ಕಲ್ಪನೆಯೇ ವಿಚಿತ್ರವಾಗಿದೆ) ಬದಲಾಗಿ ಅಲ್ಲಿ ಹ್ವಿನಿಮ್ (ಕುದುರೆ)ಗಳದ್ದೇ ಕಾರುಬಾರು. ಬುದ್ಧಿಜೀವಿಗಳೆಂದು ತಮ್ಮನ್ನು ತಾವು ಗುರುತಿಸಿರುವ ಆ ಹ್ವಿನಿಮ್‍ಗಳು ಯಾಹು (ಗೋರಿಲ್ಲಗಳನ್ನು ನೆನಪಿಸುವಂತ ಪ್ರಾಣಿ) ಗಳನ್ನು ತಮ್ಮ ಅಡಿಯಾಳನ್ನಾಗಿ ಮಾಡಿಕೊಂಡಿರುತ್ತವೆ. ಆ ಯಾಹುಗಳು ಎಷ್ಟು ಗಲೀಜಾಗಿರುತ್ತವೆಯೆಂದರೆ ಯಾರೂ ಅವುಗಳ ಹತ್ತಿರ ಸುಳಿಯುವುದಿಲ್ಲ! ಇಲ್ಲಿ ಶೋಷಿತ ವರ್ಗವನ್ನು ನೆನಪಿಸುವ ಯಾಹುಗಳು ಮತ್ತು ಅಧಿಕಾರಿ ವರ್ಗದ ಹ್ವಿನಿಮ್‍ಗಳು ಅಲ್ಲಿಗೆ ಬರುವ ನಾಯಕ ಗಲಿವರನನ್ನು ವಿಚಿತ್ರವಾಗಿ ಕಾಣುತ್ತವೆ. ಯಾಹುಗಳಂತೆ ಕಾಣುವ ಅವನನ್ನು ಹ್ವಿನಿಮ್‍ಗಳು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಅವನ ಬುದ್ಧಿವಂತಿಕೆಯನ್ನು ಕಂಡು ಅವನಿಗೆ ಬೇಕಾಗುವ ಎಲ್ಲಾ ಸಹಾಯವನ್ನೂ ಮಾಡುತ್ತವೆ. ಮುಂದೆ ನಾಯಕ ಅವನು ಅಲ್ಲಿಯ ಭಾಷೆಯನ್ನು ಕಲಿತು, ಅಲ್ಲಿನ ರೀತಿ ನೀತಿಗಳನ್ನು ತನಗರಿವಿಲ್ಲದಂತೆ ತನ್ನ ಬದುಕಿನಲ್ಲೂ ಒಗ್ಗಿಸಿಕೊಂಡಿರುತ್ತಾನೆ. ಅವನ ಈ ಬದಲಾವಣೆ ಅವನಿಗೆ ಹಡಗಿನಲ್ಲಿ ಮರಳಿ ತನ್ನ ನಾಡಿಗೆ ಬರುವಾಗ ಅನುಭವಕ್ಕೆ ಬರುತ್ತದೆ.
ಈ ಮೂರು ಕಾದಂಬರಿಗಳಲ್ಲಿಯೂ ಕಾಣುವ ಸಾಮಾನ್ಯ ವಿಷಯವೆಂದರೆ ಬಲಶಾಲಿಯಾದ ಮನುಷ್ಯ ತನ್ನ ಅಧಿಕಾರದಿಂದ ಬಲಹೀನರನ್ನು ಶೋಷಣೆ ಮಾಡುತ್ತಾ ಅವರನ್ನು ತನ್ನ ಸ್ವಾಧೀನಕ್ಕೆ ಒಳಪಡಿಸುತ್ತಾನೆ. ಅಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಾನೆ.
ಡೇನಿಯಲ್ ಡೀಫೋನ ಕಾದಂಬರಿ ರಾಬಿನ್ ಕ್ರೂಸೋದಲ್ಲಿ ಪಾಶ್ಚಿಮಾತ್ಯರ ಸಾಹಸಗಾಥೆಯನ್ನು ತೆರೆದಿಡುತ್ತದೆ. ರಾಬಿನ್ ಕ್ರೂಸೋ ತನ್ನ ಅನ್ವೇಷಣಾ ಬುದ್ಧಿಯಿಂದ ತಾನು ಪ್ರಯಾಣಿಸುತ್ತಿರುವ ಹಡಗು ಅಪಘಾತವಾದಾಗ ಒಬ್ಬಂಟಿಯಾಗಿ ದ್ವೀಪಕ್ಕೆ ಬಂದು ಅಲ್ಲಿ ತನಗೆ ಬೇಕಾದ ಹಾಗೆ ಬದುಕುತ್ತಾನೆ. ಮೇಲ್ನೋಟಕ್ಕೆ ಮನುಷ್ಯನ ಏಕಮುಖವನ್ನು ಪರಿಚಯಿಸಿದರೂ ಇಲ್ಲಿ ಮನುಷ್ಯ ಹೇಗೆ ಒಂದು ಕಡೆ ನೆಲೆ ನಿಂತು ತನಗೆ ಬೇಕಿದ್ದವುಗಳನ್ನು ತನ್ನ ಸುತ್ತಮುತ್ತಲಿಂದ ಗಳಿಸಿಕೊಳ್ಳುತ್ತಾನೆ ಅನ್ನುವುದನ್ನು ಚಿತ್ರಿಸಿದೆ ಈ ಕಾದಂಬರಿ. ಮಾತ್ರವಲ್ಲ, ಅಲ್ಲಿ ಎದುರಾಗುವ ಭೌಗೋಳಿಕ ಅನಾಹುತಗಳು, ಸಮಸ್ಯೆಗಳು, ತೊಂದರೆಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಎದುರಿಸಿ ಭದ್ರವಾಗಿ ನೆಲೆಯೂರುತ್ತಾನೆನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಇನ್ನು ಮೂರನೆಯ ವಿಭಾಗದಲ್ಲಿರುವ ಕಾದಂಬರಿ ಜೂಲ್ಸ್ ವರ್ನ್‍ನ ` 80 ದಿನಗಳಲ್ಲಿ ಭೂ ಪ್ರದಕ್ಷಿಣೆ' ಕುತೂಹಲ ಭರಿತ ಕಾದಂಬರಿ. ಶ್ರೀಮಂತ, ಪ್ರಾಮಾಣಿಕ ಮತ್ತು ಗಂಭೀರ ವ್ಯಕ್ತಿತ್ವದ ಒಬ್ಬಂಟಿ ಫಿಲಿಯಾಸ್ ಫಾಗ್ ತನ್ನ ಸ್ನೇಹಿತರೊಂದಿಗೆ ಪಂದ್ಯ ಕಟ್ಟಿ ಭೂ ಪ್ರದಕ್ಷಿಣೆ ಮಾಡಿಕೊಂಡು ಬರುವ ಕಥಾ ವಸ್ತುವಿರುವ ಈ ಕಾದಂಬರಿ ಕೊನೆಯವರೆಗೂ ಉಸಿರು ಬಿಗಿ ಹಿಡಿದು ಓದುವಂತೆ ಪ್ರೇರೆಪಿಸುತ್ತದೆ. ಆಗಿನ ಕಾಲದಲ್ಲಿ ಹಡುಗು ಮತ್ತು ರೈಲುಗಳ್ಳಲ್ಲಿಯೇ ಭೂ ಪ್ರದಕ್ಷಿಣೆ ಮಾಡುವುದೆಂದರೆ ಊಹೆಗೂ ನಿಲುಕದ ವಿಷಯ. ಫಾಗ್ ತನ್ನ ಹೊಸ ಕೆಲಸದಾಳು ಪಾಸ್ ಪರೋತನ ಜೊತೆಗೆ ಲಂಡನ್‍ನಿಂದ ತಮ್ಮ ಪ್ರಯಾಣ ಆರಂಭಿಸುತ್ತಾರೆ. ಆ ಸಮಯದಲ್ಲಿ ಲಂಡನ್‍ನ ಬ್ಯಾಂಕೊಂದರಲ್ಲಿ ದರೋಡೆಯಾಗಿರುತ್ತದೆ. ಫಾಗ್ ಭೂ ಪ್ರದಕ್ಷಿಣೆ ಹೊರಡುವುದನ್ನು ತಿಳಿದಿರುವ ಪತ್ತೇದಾರ ಫಿಕ್ಸ್, ಅಷ್ಟೊಂದು ಹಣವನ್ನು ಖರ್ಚು ಮಾಡಿಕೊಂಡು ಭೂ ಪ್ರದಕ್ಷಿಣೆ ಹೊರಟ ಫಾಗೇ ಬ್ಯಾಂಕ್‍ನ ಹಣ ಕದ್ದಿರುವ ವ್ಯಕ್ತಿಯೆಂದು ಅವರನ್ನು ಹಿಂಬಾಲಿಸಿ ಬರುತ್ತಾನೆ. ಅವರನ್ನು ಬಂಧಿಸುವಲ್ಲಿ ವಾರಂಟ್ ಬರದೆ ಪ್ರತೀ ಪ್ರಯಾಣದಲ್ಲಿಊ ವಿಳಂಭವಾಗುತ್ತದೆ. ಬ್ರಿಟಿಷರ ವಸಹಾತಿನಲ್ಲೇ ಅವರನ್ನು ಬಂಧಿಸಬೇಕೆಂದು ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ ವಾರೆಂಟ್ ಅವನ ಕೈ ಸೇರುವಲ್ಲಿ ವಿಳಂಭವಾಗಿರುತ್ತದೆ. ತಮ್ಮ ನಿಗಧಿತ ಸಮಯದಂತೆ ಪ್ರಯಾಣ ಮುಂದುವರಿಸುವಲ್ಲಿ ಫಾಗ್‍ರವರಿಗೆ ಅಡೆತಡೆಗಳಾಗುತ್ತವೆ. ಭಾರತದಲ್ಲಿ ಸತಿಗೆ ಹೋಗಬೇಕಿರುವ ಹೆಣ್ಣು ಔದಾಳನ್ನು ರಕ್ಷಿಸಲು ಹೋಗಿ ತಾವೇ ಆಪತ್ತಿನಲ್ಲಿ ಸಿಲುಕುತ್ತಾರೆ. ನಂಬಿಕಸ್ಥ ಆಳು ಪಾಸ್ ಪರೋತನ ಚಾಣಾಕ್ಷ ಬುದ್ಧಿಯಿಂದ ಪ್ರತಿಯೊಂದು ಸಂಕಂಟದಿಂದಲೂ ಪಾರಾಗುತ್ತಾರೆ. ಆಯಾ ದೇಶಗಳಿಗನುಗುಣವಾಗಿ ತಮ್ಮ ಕೈ ಗಡಿಯಾರದ ಸಮಯವನ್ನು ಬದಲಾಯಿಸುವ ಫಾಗ್ ಮತ್ತು ತಾನು ಹೊರಟಲ್ಲಿಂದ ಸಮಯವನ್ನು ಸರಿಹೊಂದಿಸದ ಪಾಸ್ ಪರೋತ, ಸತಿಯ ಹೆಣ್ಣು ಔದಾ, ಪತ್ತೇದಾರ ಫಿಕ್ಸ್ ಎಲ್ಲರೂ ತಮ್ಮ ತಮ್ಮ ಗುರಿ ತಲುಪುದನ್ನೇ ಕಾಯುತ್ತಿರುತ್ತಾರೆ. ಕೊನೆಗೂ ಬ್ರಿಟನ್ ತಲುಪುವ ಮೊದಲೇ ಪತ್ತೇದಾರ ಫಿಕ್ಸ್ ಅವರನ್ನು ಬಂಧಿಸುತ್ತಾನೆ. ಆದರೆ ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ. ಇದರಿಂದಾಗಿ ಎರಡು ದಿವಸಗಳಷ್ಟು ತಡವಾಗಿ ತಮ್ಮ ಗಮ್ಯ ತಲುಪುತ್ತಾರೆ ಫಾಗ್. ನೊಂದ ಅವರು ತನ್ನನ್ನು ನಂಬಿ ಬಂದ ಔದಾಳಿಗೂ ಏನಾದರೊಂದು ದಾರಿ ಮಾಡಿಕೊಡುವುದೆಂದು ನಿರ್ಧರಿಸುವಾಗ ಅವಳು ತನ್ನ ಮನಸ್ಸಿನಲ್ಲಿರುವುದನ್ನು ಹೇಳುತ್ತಾಳೆ. ಅವಳನ್ನು ಮದುವೆಯಾಗಲು ಮುಂದಾಗುವ ಫಾಗ್ ಮದುವೆಯ ದಿನವನ್ನು ನಿರ್ಧರಿಸಲು ಪಾಸ್ ಪರೋತನನ್ನು ಚರ್ಚಿಗೆ ಕಳುಹಿಸುತ್ತಾರೆ. ಆಗ ಶನಿವಾರದಂದು ಮದುವೆ ಸಾಧ್ಯವಿಲ್ಲವೆಂದು ಹಿಂದಕ್ಕೆ ಬರುತ್ತಾನೆ ಪಾಸ್ ಪರೋತ. ಸತ್ಯದ ಅರಿವಾಗುವುದು ಆಗ. ಸಮಯ ಬದಲಾಯಿಸದ ಪಾಸ್ ಪರೋತನ ಗಡಿಯಾರ ಸತ್ಯವನ್ನು ಬಿಚ್ಚಿಡುತ್ತದೆ. ಅವರಿಗೆ ಆಶ್ಚರ್ಯವಾಗಿ ದಿನಗಳನ್ನು ಲೆಕ್ಕ ಹಾಕುತ್ತಾರೆ. ಪಂದ್ಯ ಮುಗಿಯಲು ಇನ್ನೂ ಕೆಲವೇ ಕ್ಷಣಗಳಿದ್ದಾಗ ಫಾಗ್ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಅಲ್ಲಿಗೆ ಹೋಗುತ್ತಾರೆ. ಪಂದ್ಯದಲ್ಲಿ ಗೆದ್ದ ಅವರನ್ನು ಸ್ನೇಹಿತರೆಲ್ಲಾ ಅಭಿನಂದಿಸುತ್ತಾರೆ. ಈ ಬೃಹತ್ ಪುಸ್ತಕದ ಐದು ಕಾದಂಬರಿಗಳಲ್ಲಿಯೂ ತುಂಬಾ ಆಪ್ತವೆನಿಸುವ ಕಾದಂಬರಿ ಇದು. ಅದಕ್ಕೆ ಕಾರಣ ಫಾಗ್‍ರವರ ಪ್ರಯಾಣ ಭಾರತದ ಮೂಲಕ ನಡೆಯುವುದು ಆಗಿರಬಹುದು. ಇಲ್ಲಿನ ಭೌಗೋಳಿಕ ಹಿನ್ನಲೆ, ಪದ್ಧತಿಗಳು, ಆಚಾರ ವಿಚಾರಗಳು ಈ ಕಾದಂಬರಿಯಲ್ಲಿ ಕಾಣಸಿಗುತ್ತದೆ.
ಹೀಗೆ ಈ ಮೂರು ವಿಭಾಗಳಲ್ಲಿಯೂ ವಿಭಿನ್ನ ಕಾದಂಬರಿಗಳಿದ್ದು ಎಲ್ಲವೂ ಒಂದೊಂದು ರೀತಿಯ ಪ್ರಯಾಣದ ಅನುಭವವನ್ನು ನೀಡುತ್ತವೆ. ಇಲ್ಲಿ ಆಪ್ಯವೆನಿಸುವುದು ವಿದ್ಯಾರಣ್ಯರ ಭಾಷಾ ಹಿಡಿತ. ಮೂಲ ಕಾದಂಬರಿಯನ್ನು ಓದಿದಷ್ಟೇ ಸುಖ ಇಲ್ಲಿದೆ. ನಿಜವಾಗಿಯೂ ಕನ್ನಡಕ್ಕೆ ಈ ಕಾದಂಬರಿಗಳನ್ನು ತುರ್ಜುಮೆ ಮಾಡಿರುವ ಲೇಖಕರು ಅಭಿನಂದನಾರ್ಹರು.
ಈ ಕಾದಂಬರಿ ಚಾರುಮತಿ ಪ್ರಕಾಶನ, 12, 10ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು - 560 050; ಫೋ.ಸಂ.94428 35553 ಇವರು ಪ್ರಕಟಿಸಿದ್ದಾರೆ. ಪುಸ್ತಕದ ಬೆಲೆ ರೂ. 280/- ಮಾತ್ರ. ಪುಟಗಳು - 552

Read more!