Thursday, January 27, 2011

ನೆಗೆಟಿವ್ ಪಾತ್ರಗಳ ಬೆಳವಣಿಗೆಯ ‘ಕವಲು’


ತಮ್ಮ ಇತರ ಕೃತಿಗಳಂತೆ ಎಸ್. ಎಲ್. ಬೈರಪ್ಪನವರ ‘ಕವಲು’ ಕಾದಂಬರಿ ಕೂಡ ಓದುಗರಲ್ಲಿ ಕುತೂಹಲ ಕೆರಳಿಸಿದ್ದು ಸುಳ್ಳಲ್ಲ. ಸಂಪ್ರದಾಯಸ್ಥ ಭಾರತೀಯ ಕುಟುಂಬ ವ್ಯವಸ್ಥೆ ಯಾವ ರೀತಿಯಲ್ಲಿ ಛಿದ್ರವಾಗುತ್ತಿದೆಯೆನ್ನುವುದು ಇಡೀ ಕಾದಂಬರಿಯ ಆಶಯವಾದರೆ; ಕಾನೂನಿನ ಪಾತ್ರ ಈಗಿನ ಕುಟುಂಬ ವ್ಯವಸ್ಥೆಯಲ್ಲಿ ಹೇಗೆ ದುರುಪಯೋಗವಾಗುತ್ತಿದೆಯೆನ್ನುವುದನ್ನು ಈ ಕೃತಿ ಎತ್ತಿ ಹಿಡಿದಿರುವುದು ಕೃತಿಯ ಹೆಗ್ಗಳಿಕೆಗೆ ಕಾರಣವಾಗಿದೆ.

ಹಿಂದೆಯಿದ್ದ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಶೋಷಣೆಯೇ ಇಲ್ಲಿ ‘ಮೇಲ್ ಡೋಮಿನೇಟಿಂಗ್’ ಆಗಿರುವುದು ಗಮನಾರ್ಹ. ಹೊಂದಿಕೊಳ್ಳುವ ಗುಣವನ್ನು ಪರಿತ್ಯಜಿಸಿ ಪ್ರತೀಯೊಂದನ್ನೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಾ, ಕೀಳರಿಮೆ ಬೆಳೆಸಿಕೊಂಡ ಒಂದು ವರ್ಗ, ಆ ವರ್ಗದಲ್ಲಿಯ ಮುಗ್ಧತೆಯನ್ನು ಬಳಸಿಕೊಂಡು ಸ್ವಾರ್ಥದಿಂದ ವಂಚಿಸುವ ಇನ್ನೊಂದು ವರ್ಗದ ಕ್ಲ್ಯಾಷ್ಗಳಿಗೆ ಕಾನೂನು ಯಾವ ರೀತಿ ದುರು(ಉ)ಪಯೋಗಕ್ಕೆ ಬರುವುದೆನ್ನುವುದನ್ನು ಕೂಡ ತಿಳಿಸಿಕೊಡುವ ಪ್ರಯತ್ನ ಈ ಕೃತಿಯಲ್ಲಿ ಅಭಿವ್ಯಕ್ತವಾಗಿದೆ. ಆಧುನಿಕ ಸಮಾಜದಲ್ಲಿ ಕುಟುಂಬಗಳು ರೂಪಾಂತರವಾಗುವುದನ್ನು ಮತ್ತು ಬದುಕು ಹೊಸ ಸಮಸ್ಯೆಗಳಿಗೆ ಒಡ್ಡಿಕೊಳ್ಳುವಾಗಿನ ತಲ್ಲಣಗಳನ್ನು ಕಾದಂಬರಿ ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಸುಧಾರಿತ ನ್ಯಾಯ ವ್ಯವಸ್ಥೆಯ ಉಪಯೋಗವನ್ನು ದುರುಪಯೋಗಕ್ಕೆ ಬಳಸಿಕೊಂಡು ಸಾಂಸಾರಿಕ ಜೀವನದಲ್ಲಿ ವೈರತ್ವ, ಹಗೆ ಸಾಧನೆಯಲ್ಲಿ ತೊಡಗಿಕೊಂಡು ಪಾತ್ರಗಳು ಒಂದು ರೀತಿಯಲ್ಲಿ ನೆಗಟಿವ್ ಆಗಿ ಬೆಳವಣಿಗೆ ಪಡೆದಿವೆ."

ಈ ಕಾದಂಬರಿಯಲ್ಲಿ ಜಯಕುಮಾರ- ವೈಜಂತಿಯ ಸುಂದರ ಸಂಸಾರ ವೈಜಂತಿಯ ಸಾವಿನಿಂದ ಅಲ್ಲೋಲ ಕಲ್ಲೋಲವಾಗುತ್ತದೆ. ಜಯಕುಮಾರ ತನ್ನ ಮಡದಿಯ ಸಾವಿನ ಬಳಿಕ ಮನುಷ್ಯ ಸಹಜ ಕಾಮನೆಗಳಿಗೆ ಈಡಾಗಿ ಒಂದು ರೀತಿಯ ಮನೋವ್ಯಾಕುಲತೆಗೆ ತುತ್ತಾಗುತ್ತಾನೆ. ಇಲ್ಲಿ ಈ ಎರಡೂ ಪಾತ್ರಗಳು ಆದರ್ಶ ಪಾತ್ರಗಳಾದರೆ ವೈಜಯಂತಿಯ ಪಾತ್ರ ನೇಪಥ್ಯದ ಹಿಂದಿದ್ದು ಜಯಕುಮಾರನ ಪಾತ್ರ ಮಾತ್ರ ಬೆಳವಣಿಗೆ ಹೊಂದುತ್ತದೆ. ಹಾಗಾಗಿ ಇಡೀ ಕಾದಂಬರಿಯಲ್ಲಿ ಒಳ್ಳೆಯ ಪಾತ್ರವೊಂದು ತೆರೆಮರೆಯಲ್ಲಿದ್ದು, ಬೆಳವಣಿಗೆ ಪಡೆಯದೆ ಉಳಿದ ಪಾತ್ರಗಳ ಕಣ್ಣಿನಲ್ಲಿ ಮಾತ್ರ ಕಾಣಿಸುತ್ತ ಗೌಣವಾಗಿ ಬಿಡುತ್ತದೆ. ಇಲ್ಲಿಯ ನೆಗೆಟಿವ್ ಪಾತ್ರಗಳ ವರ್ಣನೆ ‘ಸ್ತ್ರೀ ಪರ’ ಯಾ ‘ಸ್ತ್ರೀ ವಿರೋಧಿ’ ಕಾದಂಬರಿಯಂತೆ ಕಂಡರೆ ಅಚ್ಚರಿಯೇನಿಲ್ಲ.

ವಿವಾಹಪೂರ್ವ ಲೈಂಗಿಕ ಸಂಬಂಧಕ್ಕೆ ತೊಡಗುವ ಮಂಗಳೆಗೆ ಸ್ತ್ರೀ ಚಳುವಳಿಯ ರೂವಾರಿಗಳಾದ ಮಾಲಾ ಕೆರೂರು, ಚಿತ್ರಾ ಹೊಸೂರು, ಇಳಾರಂತವರು ‘ಮಾಡೆಲ್’ ಆಗಿಯೂ ಅವಳ ವೈಯಕ್ತಿಕ ಮತ್ತು ಲೈಂಗಿಕ ಸ್ವಾತಂತ್ರ್ಯಕ್ಕೆ ಧೈರ್ಯ ನೀಡುತ್ತರೆಂದರೆ ಸುಳ್ಳಲ್ಲ. ಇಲ್ಲಿ ನೈತಿಕ ಅಧ:ಪತನಕ್ಕೆ ಕುಸಿಯುವ ಪಾತ್ರಗಳು ‘ಕ್ರಾಂತಿ’ಕಾರಿಗಳಾಗಿ ಕಾಣುತ್ತವಾದರೂ ಇವೆಲ್ಲಾ ವಿಕೃತ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಒಂದು ಮಾರ್ಗ ಕಂಡುಕೊಳ್ಳುವ ಪಾತ್ರಗಳೇ ಆಗಿವೆ.

ಕಾಲೇಜು ದಿನಗಳಲ್ಲಿ ಪ್ರಭಾಕರನಿಂದ ಶೋಷಣೆಗೊಳಗಾದ ಮಂಗಳೆ ವೃತ್ತಿ ಜೀವನದಲ್ಲಿ ಜಯಕುಮಾರನಿಂದಲೂ ಲೈಂಗಿಕ ಶೋಷಣೆಗೊಳಗಾದರೂ ಪ್ರಭಾಕರನನ್ನು ಮರೆತು ಜಯಕುಮಾರನನ್ನು ಒಪ್ಪಿಕೊಳ್ಳುವುದು ಕೇವಲ ಅವನ ಆಸ್ತಿಯನ್ನು ಅನುಭವಿಸುವುದಕ್ಕಾಗಿ ಮಾತ್ರ. ಇದು ಸ್ಪಷ್ಟವಾಗುವುದು ತನ್ನ ಗಂಡ ಜಯಕುಮಾರನ ವಿರುದ್ಧವೇ ಕಾನೂನಿನ ಮೊರೆ ಹೊಕ್ಕು ಲೈಂಗಿಕ ತೃಷೆಗಾಗಿ ಮತ್ತೆ ಪ್ರಭಾಕರನನ್ನು ಬಯಸುವಲ್ಲಿ. ಹರೆಯಕ್ಕೆ ಬಂದ ಬುದ್ಧಿ ಮಾಂದ್ಯ ಮಗಳು ಪುಟ್ಟಕ್ಕನನ್ನು ಅನುಕಂಪದ ದೃಷ್ಟಿಯಿಂದಲೋ, ಮಮಕಾರದಿಂದಲೋ, ವಾತ್ಸಲ್ಯದಿಂದಲೋ ಮುದ್ದಿಸುವ ಜಯಕುಮಾರನನ್ನು ಅರ್ಥೈಸಿಕೊಳ್ಳದ ಮಂಗಳೆ ಅವನಲ್ಲಿ ಎಲ್ಲವೂ ದೋಷಗಳೇ ಇವೆಯೆಂದುಕೊಳ್ಳುತ್ತಾಳೆ. ಇದು ಮಾನವೀಯ ಅಂತ:ಕರಣವಿಲ್ಲದ ಅವಳ ಮನಸ್ಥಿತಿ ಮಾತ್ರ.

ಕಾದಂಬರಿಯ ಕೊನೆಯಲ್ಲಿ ನಚಿಕೇತ ಪುಟ್ಟಕ್ಕನನ್ನು ಮದುವೆಯಾಗಿ ಆದರ್ಶವಂತನೆನಿಸಿಕೊಂಡರೂ ಒಂದು ರೀತಿಯಲ್ಲಿ ಅವನು ಈ ಹಿಂದೆ ಎರಡು ಮದುವೆಯಾಗಿ ನಲುಗಿದವನು. ಒಟ್ಟು ವ್ಯವಸ್ಥೆಯ ಒತ್ತಡದಿಂದ ಹೊರಗೆ ಬರುವಲ್ಲಿ ಅವನಿಗೆ ಜಯಕುಮಾರನ ತಾಯಿ ಅಂದರೆ ಅವನ ಅಜ್ಜಿ ಮತು ದ್ಯಾವಕ್ಕ ,ಪುಟ್ಟಕ್ಕನ ಮದುವೆಯ ಪ್ರಸ್ತಾಪ ಮಾಡುತ್ತಾ ಸಹಾಯವಾಗುತ್ತಾರೆ.

ಆಧುನಿಕತೆಯನ್ನು ಒಗ್ಗಿಸಿಕೊಂಡ ಇಳಾಲಾಗಲಿ, ಮಂಗಳೆಯಾಗಲಿ ಏನನ್ನೂ ಪಡೆದುಕೊಳ್ಳದೆ ಹತಾಶರಾಗುತ್ತಾರೆ. ಕಾನೂನಿನ ಮೊರೆ ಹೊಕ್ಕರೆ ಅದು ಅವರನ್ನೇ ಶಿಕ್ಷಾರ್ಹರೆಂದು ಬೆಟ್ಟು ಮಾಡಿ ತೋರಿಸುವ ಸನ್ನಿವೇಶವೇ ಎದುರಾಗುತ್ತದೆ. ಹೀಗೆ ಆಧುನಿಕ ಸಮಾಜ ವ್ಯವಸ್ಥೆಯಲ್ಲಿ ಕಾನೂನು ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ಮತ್ತು ಅದು ಯಾವ ರೀತಿ ದುರುಪಯೋಗವಾಗುತ್ತದೆಯೆನ್ನುವುದು ಇಡೀ ಕಾದಂಬರಿಯಲ್ಲಿ ಅಡಕವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಕಾನೂನನ್ನು ತಿಳಿದುಕೊಳ್ಳುವುದಕ್ಕಾದರೂ ಒಮ್ಮೆ ಈ ಕಾದಂಬರಿಯನ್ನು ಓದಲೇಬೇಕು.

Read more!

Saturday, January 15, 2011

ಮಂಜುಳಾ, ಶಂಕರ್ ನಾಗ್ ಅಭಿನಯದ ‘ಸೀತಾ ರಾಮು’


ನಮ್ಮೂರು ಬೆಳ್ಳೆಯ ಪಕ್ಕದ ಊರು ಕುಂಜಾರುಗಿರಿ. ಅದನ್ನು ದುರ್ಗಾ ಬೆಟ್ಟವೆಂದು ಕೂಡ ಕರೆಯುತ್ತಾರೆ. ಕುಂಜರ ಅಂದರೆ ಆನೆ. ಮುಂಭಾಗದಿಂದ ಆನೆಯ ಹಾಗೆ ಕಾಣುವ ಗಿರಿಗೆ `ಕುಂಜಾರುಗಿರಿ' ಎಂಬ ಹೆಸರು ಬಂದಿದೆ ಅನ್ನುವ ಪ್ರತೀತಿ ಇದೆ.

ಅದು ಆಚಾರ್ಯ ಮಧ್ವರ ಜನ್ಮಸ್ಥಳವಾದ ಪಾಜಕಾಕ್ಷೇತ್ರದಿಂದ ಒಂದುವರೆ ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಎರಡು ಗುಹೆಗಳಿದ್ದು ಅವುಗಳಲ್ಲಿ ಒಂದು ಗುಹೆ ಕುಂಜಾರುಗಿರಿ ಬೆಟ್ಟದ ಪಶ್ಚಿಮದ ದಿಕ್ಕಿಗಿರುವ ಪರಶುರಾಮ ಕ್ಷೇತ್ರದ ಗರ್ಭ ಗುಡಿಯಲ್ಲಿ ಹೊರಗೆ ಬರುತ್ತದೆಯೆಂದು ಬಹಳ ವರ್ಷಗಳ ಹಿಂದೆಯೆ ರಾಮಕೃಷ್ಣ ಭಟ್ಟರೆನ್ನುವ ಸಾಹಸಿಯೊಬ್ಬರು ಪತ್ತೆ ಹಚ್ಚಿದ್ದಾರೆಂದು ನಮಗೆ ಗೊತ್ತಿತ್ತು. ಆದರೆ ಈ ಗುಹೆ ಪ್ರವೇಶ ಧ್ವಾರದಲ್ಲಿ ತೆವಳಿಕೊಂಡು ಹೋಗುವ ಹಾಗೆ ಇದ್ದು, ಮುಂದೆ ನೇರವಾಗಿ ನಿಂತು ನಡೆಯಬಹುದಾದಷ್ಟು ಅಗಲವಾಗಿದೆಯಂತೆ. ನಿರಂತರ ಬಾವಲಿಗಳ ಹಾರಾಟದಿಂದ ಅಲ್ಲಿ ನಿಲ್ಲುವುದು ಕೂಡ ಅಸಾಧ್ಯವೆನ್ನುವ ಹಾಗಿದೆ. ಅದಲ್ಲದೆ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಈ ಕುಂಜಾರುಬೆಟ್ಟವನ್ನು ಏರಿ ವಿಹಂಗಮ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಬೆಟ್ಟಕ್ಕೆ ನಾಲ್ಕು ಕಡೆಯಿಂದಲೂ ದಾರಿಯಿದ್ದು. ಪೂರ್ವದಲ್ಲಿ ದೊಡ್ಡ ಪಾದೆಯನ್ನು ಏರಿ ಬರಬೇಕು. ಅಲ್ಲಿಂದ ಮೇಲೇರಿ ಬರುವಾಗ ಆಳವಾದ ಕಣಿವೆಯಂತಹ ನೋಟವನ್ನು ನೋಡುವಾಗ ಒಂದು ರೀತಿಯ ಪುಳಕವಾಗುತ್ತದೆ. ಪಶ್ಚಿಮಕ್ಕೆ ನಾಲ್ಕುನೂರು ಮೆಟ್ಟಿಲುಗಳು, ದಕ್ಷಿಣ ಭಾಗದಲ್ಲಿ ಕಡಿದಾದ ಮೆಟ್ಟಿಲುಗಳು ಮತ್ತು ಉತ್ತರ ಭಾಗದಲ್ಲಿ ಮಣ್ಣಿನ ಮೆಟ್ಟಿಲುಗಳಿವೆ. ಅಲ್ಲಿ ಒಂದಲ್ಲಾ ಒಂದು ಸಿನೆಮಾದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ."

ನಾವು ಹೈಸ್ಕೂಲ್ಗೆ ಹೋಗಬೇಕಾದರೆ ಒಂದೋ ಇನ್ನಂಜೆ ಅಥವಾ ಮೂಡುಬೆಳ್ಳೆಗೆ ಹೋಗಬೇಕಿತ್ತು. ಮೂಡುಬೆಳ್ಳೆಗೆ ನಮ್ಮೂರಿನಿಂದ ಸೇತುವೆ ಸಂಪರ್ಕವಿಲ್ಲದಿದ್ದರಿಂದ ಮಳೆಗಾಲಕ್ಕೆ ನೆರೆ ಬಂದು ನಮ್ಮೂರ ನದಿ, ಪಾಪನಾಶಿನಿಯನ್ನು ದಾಟುವುದು ಅಸಾಧ್ಯ. ತರಗತಿಗೆ ಬಂಕ್ ಹೊಡಯಲೇಬೇಕು. ದೋಣಿಯ ಪ್ರಯಾಣವಿದ್ದರೂ ನೆರೆಗೆ ಅಸಾಧ್ಯ. ನಮ್ಮೂರಿನ ನೆರೆಯೆಂದರೆ ಬೆಟ್ಟು ಗದ್ದೆಯವರೆಗೂ ನೀರು ಏರುವುದುಂಟು ಮತ್ತು ಒಂದು ವಾರವಾದರೂ ನೆರೆಯ ನೀರು ಇಳಿಯುವುದಿಲ್ಲ. ಎಲ್ಲಿ ನೋಡಿದರೂ ಕಾಡಿನ ನೀರು ಗುದ್ದಳಿಸಿ ಕೆಸರು ನೀರಿನಿಂದ ಕೂಡಿದ ಅಲೆಗಳ ಮತ್ತು ನೀರಿನ ಪ್ರವಾಹದ ನೆರೆ ಅದು. ಹಾಗಾಗಿ ನಾವು ಇನ್ನಂಜೆ ಹೈಸ್ಕೂಲನ್ನು ಸೇರುವುದು ಅನಿವಾರ್ಯವಾಗಿತ್ತು. ಅಲ್ಲಿಗೆ ಬಸ್ಸಿನ ವ್ಯವಸ್ಥೆಯಾಗಲಿ ಇನ್ಯಾವುದೇ ವಾಹನಗಳ ವ್ಯವಸ್ಥೆಯೂ ಇರಲಿಲ್ಲ. ನಡಿಗೆಯಿಂದಲೆ ನಾಲ್ಕೈದು ಮೈಲು ನಡೆದು ಹೋಗಬೆಕು.

ಶಾಲೆಗೆ ಹೋಗುವ ದಾರಿಯಲ್ಲಿ ಅಂದರೆ ಕುಂಜಾರುಗಿರಿಯ ಪಕ್ಕದಲ್ಲಿಯೆ ದೊಡ್ಡ ಪಾದೆಯನ್ನು ಇಳಿಯಬೇಕಿತ್ತು. ಆ ಪಾದೆಗೆ `ನಿನ್ನಿ ಪಾದೆ' ಎಂದು ಹೆಸರು. ನಿನ್ನಿ ಅಂದರೆ ತುಳುವಿನಲ್ಲಿ ಎದುರು ಮಾತನಾಡುವುದು ಎಂಬ ಅರ್ಥವಿದೆ. ಈ ಪಾದೆಯ ಕೆಳಗೆ ನಿಂತು ಮಾತನಾಡಿದರೆ ಅದು ಎರಡು ಬಾರಿ ಪ್ರತಿಧ್ವನಿಸುತ್ತದೆ. ಅದಕ್ಕಾಗಿ ನಿನ್ನಿಪಾದೆಯೆಂದು ಹೆಸರು ಬಂದಿರಬಹುದು. ಈ ಪಾದೆಯನ್ನು ಏರಬೇಕಾದರೆ ಒಂದು ಕಟ್ಟು ಕಡ್ಲೆಕಾಯಿ ಬೇಕೆನ್ನುವುದು ಆಗಿನ ಹುಡುಗರ ಜೋಕು. ಈಗ ಕಲ್ಲು ಗಣಿಗಾರಿಕೆಯಿಂದ ಬಂಡೆ ಕರಗಿದೆ. ಆಗಿನ ಅದರ ಭವ್ಯತೆ ಈಗ ಇಲ್ಲ!
ಕುಂಜಾರುಗಿರಿ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರವಂತೂ ತುಂಬಾ ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ಅಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯೂ ಅಷ್ಟೆ. ಎಲ್ಲೆಂದಿಲೋ ದೇವರ ದರ್ಶನ ಮಾಡುವುದಕ್ಕೆ ಬರುತ್ತಾರೆ. ಆಗ ಒಂದು ದೊಡ್ಡ ಜಾತ್ರೆಯೆ ಅಲ್ಲಿ ನೆರೆಯುವುದುಂಟು. ಕೆಲವೊಮ್ಮೆ ಐದು ಶುಕ್ರವಾರಗಳು ಇನ್ನು ಕೆಲವೊಮ್ಮೆ ನಾಲ್ಕು ಶುಕ್ರವಾರಗಳು ಬರುವುದಿದೆ. ಐದು ಶುಕ್ರವಾರವಾದರೆ ಹೆಣ್ಣು ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ಕೈತುಂಬಾ ಬಣ್ಣ ಬಣ್ಣ ಗಾಜಿನ ಬಳೆಗಳನ್ನಿಟ್ಟು, ಬಗೆಬಗೆಯ ಬಿಂದಿ, ಅಲಂಕಾರಿಕ ವಸ್ತುಗಳನ್ನು ಕೊಂಡು ಸಂಭ್ರಮಿಸುವುದಲ್ಲದೆ, ಮಂಡಕ್ಕಿ(ಕುರ್ಲರಿ), ಸಕ್ಕರೆ ಕಡ್ಡಿ ಮಿಠಾಯಿ, ಐಸ್ಕ್ಯಾಂಡಿಗಳನ್ನು ತೆಗೆದುಕೊಂಡು ಬಂಡೆಯ ಒಂದು ಕಡೆಗೆ ಮರದ ನೆರಳಿನ ಅಡಿಯಲ್ಲಿ ಕುಳಿತು ತಿನ್ನುವುದು ಕೂಡ ಒಂದು ರೀತಿಯ ಮಜಾ ಅನಿಸುತ್ತಿತ್ತು. ಈ ಮಜಾವನ್ನು ಅನುಭವಿಸುವುದಕ್ಕಾಗಿಯೆ ಕೆಲವರು ಬರುವುದುಂಟು.

ಶ್ರಾವಣ ಶುಕ್ರವಾರಕ್ಕೆ ದುರ್ಗಾ ದೇವಿಗೆ ಕರಿಯ ಬಳೆ (ಕರಿಯ ಕಾಜಿ) ಹೇರಳವಾಗಿ ಹರಕೆಯ ರೂಪದಲ್ಲಿ ಹಾಕುವುದುಂಟು. ಸಂಜೆಯ ಹೊತ್ತು ಹೆಣ್ಮಕ್ಕಳೆಲ್ಲ ಶಾಲೆ ಮುಗಿಸಿ ಬಳೆಗಳ ಆಸೆಗೆ ದೇವಸ್ಥಾನಕ್ಕೆ ಹೋಗಿ ಮುಜುಗರ ಪಟ್ಟುಕೊಂಡು ಬಳೆಗಾಗಿ ಕಾಯುವುದು ಇದೆ. ಅಲ್ಲಿ ಒಂದು ಕಡೆ ಹರಕೆಗೆ ಬಂದ ಬಳೆಗಳನ್ನು ರಾಶಿ ಹಾಕಿಡುತ್ತಿದ್ದರು. ದೇವಸ್ಥಾನದ ಆಡಳಿತದವರ ಅಥವಾ ಅರ್ಚಕರ ಅನುಮತಿಯ ಮೇರೆಗೆ ಹೆಣ್ಮಕ್ಕಳೆಲ್ಲ ಅವರವರ ಕೈಯಳತೆಗೆ ಸರಿಯಾದ ಬಳೆಗಳನ್ನು ಆರಿಸಿಕೊಂಡು ಕೈತುಂಬಾ ಕರಿಯ ಬಳೆಗಳನ್ನು ಹಾಕಿಕೊಂಡು ಸಂತೋಷಪಡುವುದು ಸಾಮಾನ್ಯ ಸಂಗತಿಯಲ್ಲ. ಯಾಕೆಂದರೆ ಒಂದೆಡೆ ದೇವರ ಬಳೆ ಅನ್ನುವ ಭಕ್ತಿಭಾವ ಇನ್ನೊಂದೆಡೆ ದುಡ್ಡು ಕೊಟ್ಟರೂ ಕೈ ತುಂಬಾ ಬಳೆ ಇಡುವುದಕ್ಕೆ ಸಾಧ್ಯವಾಗದ ಆಗಿನ ಬಡತನ.
ಒಮ್ಮೆ ಹೆಣ್ಮಕ್ಕಳೆಲ್ಲಾ ಹಾಗೆ ಬಳೆ ತರುವುದಕ್ಕೆ ಅಲ್ಲಿಗೆ ಹೋದಾಗ ಅಲ್ಲೇನೋ ಪರವೂರಿನಜನ ಮಹಜರು ನಡೆಸುವಂತೆ ಸುತ್ತೆಲ್ಲಾ ನಿಂತು ಏನೋ ಎಲ್ಲಾ ಮಾತಾಡಿಕೊಳ್ಳುತ್ತಿದ್ದರಂತೆ. ಆಗ ಬಳೆ ತರುವುದಕ್ಕೆ ಹೋಗಿದ್ದ ಆ ಹುಡುಗಿಯರ ಗುಂಪಿನಲ್ಲಿ ನನ್ನಕ್ಕ ಕೂಡ ಇದ್ದರು. ಅಲ್ಲಿಯ ಅರ್ಚಕರು ಅಲ್ಲಿಗೆ ಮಂಜುಳಾ (ಶಂಕರ್ನಾಗ್ ಆಗ ಅಷ್ಟು ಜನಪ್ರಿಯರಾಗಿರಲಿಲ್ಲ!) ಬರುವ ಸುದ್ದಿ ತಿಳಿಸಿದರು. ಅಕ್ಕ ವಿಷಯ ತಿಳಿದು ಮನೆಗೆ ಬಂದು, ನಾಳೆ ಕುಂಜಾರಿಗೆ ಚಿತ್ರ ನಟಿ ಮಂಜುಳಾ ಬರ್ತಾರಂತೆ ಅಂದಿದ್ದೆ. ಮನೆಯಲ್ಲಿ ಅದರ ವಿಷಯವೆ ಮಾತುಕತೆಯಾಗುತ್ತಿತ್ತು. ಸಿನಿಮಾದವರು ಸುಮ್ಮನೆ ಬರ್ತಾರೆಯೆ? ಎಲ್ಲೋ ಶೂಟಿಂಗ್ ಇರಬಹುದು ಅಂತ ಅಮ್ಮ ಊಹಿಸಿದ್ರೆ, ಹೈಸ್ಕೂಲ್ಗೆ ಹೋಗ್ತಿದ್ದ ಅಣ್ಣ, ನಾಳೆ ಶಂಕರ್ನಾಗ್ ಮಂಜುಳಾ ಕುಂಜಾರುಗಿರಿಗೆ ಶೂಟಿಂಗ್ಗೆ ಬರ್ತಾರಂತೆ ಅಂದಿದ್ದೆ ಅದು ಅಪ್ಪನ ಕಿವಿಗೆ ಬಿದ್ದು, ಅಯ್ಯೋ ಮಾರಾಯ! ಇನ್ನು ಶಾಲೆ ಬಂಕ್ ಹಾಕ್ಲಿಕ್ಕೆ ಊಂಟಾ? ಅಂದಾಗ ಅವನು ಬಾಯಿಮುಚ್ಚಿ ಕುಳಿತ. ನಮ್ಮ ಅಪ್ಪ ಆಗ ಮಧುರೈಯಲ್ಲಿದ್ದ ಹೊಟೇಲನ್ನು ಮುಚ್ಚಿ ಊರಿಗೆ ಬಂದು ಎರಡು ಮೂರು ವರ್ಷಗಳಾಗಿರಬಹುದು. ಅಣ್ಣ ಮತ್ತು ಅಕ್ಕಂದಿರ ಎಜುಕೇಶನ್ ಅಲ್ಲಿಯೆ ಆಗಿದ್ದರಿಂದ ಇಲ್ಲಿ ಕನ್ನಡ ಮಾಧ್ಯಮ ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ನಮ್ಮಣ್ಣನಿಗೆ ಲಾಂಗ್ವೇಜ್ ಪ್ರಾಬ್ಲಂ ಇದ್ದುದ್ದರಿಂದ ಅವನಿಗೆ ಶಾಲೆಗೆ ಹೋಗುವುದೆಂದರೆ ಅಷ್ಟಕಷ್ಟೆ. ಅದಲ್ಲದೆ ಶಾಲೆಗೆ ನಾಲ್ಕು ಮೈಲು ಬರಿ ಗಾಲಿನಲ್ಲಿ ನಡೆದುಕೊಂಡು ಹೋಗಿಬರಬೇಕಾದ ಪರಿಸ್ಥಿತಿ. ಹೋಗಿ ಬರಬೇಕಾದ ಸಂಕಟ ಒಂದೆಡೆ; ಕನ್ನಡ ಬರುವುದಿಲ್ಲವೆಂದು ಪೆಟ್ಟು ತಿನ್ನಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಅದಕ್ಕಾಗಿ ಅವನು ಶಾಲೆಗೆ ಹೊರಟರೂ ಗುಡ್ಡದಲ್ಲೋ, ಇನ್ನೆಲ್ಲೋ ಕುಳಿತು ಸಂಜೆ ಆರು ಏಳು ಗಂಟೆಗೆಲ್ಲಾ ಮನೆಗೆ ಬರುತ್ತಿದ್ದ. ಹಾಗಾಗಿ ಅವನು ಶಾಲೆಗೆ ಹೋಗುವುದಿಲ್ಲವೆಂದರೆ ಅಪ್ಪನ ಬೈಗುಳ, ಹೊಡೆತವಿದ್ದೇ ಇರುತ್ತಿತ್ತು.
ಅವನು ಅಪ್ಪನ ಹೆದರಿಕೆಯಿಂದ ಸುಮ್ಮನಾದರೂ ಅಕ್ಕ ಸುಮ್ಮಿನಿರದೆ, ಮಂಜುಳಾ ಬರುವುದಾದರೆ ನಾವು ನೋಡಲೆಬೇಕು ಎಂದು ಹಠ ಮಾಡಿದಾಗ ಅಮ್ಮ ಗದರಿಸಿ ಸುಮ್ಮನಾಗಿಸಿದರು. ಆದರೂ ಮರುದಿನ ಆ ದಾರಿಯಿಂದ ಶಾಲೆಗೆ ಹೋದಾಗ ಅಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿರುದನ್ನು ನೋಡಿ ಹುಡುಗಿಯರೆಲ್ಲಾ ಶಾಲೆಗೆ ಬಂಕ್ ಹೊಡೆದು ಅಲ್ಲಿ ಹಾಜರ್!
ಮಂಜುಳಾರನ್ನು ನೋಡುವ ಉತ್ಸಾಹದಿಂದ ಅಲ್ಲಿ ಹೋದಾಗ ಆಕೆ ದೂರದಲ್ಲಿ ನೀಲಿ ಜರತಾರಿ ಸೀರೆಯುಟ್ಟು ವಧುವಿನಂತೆ ಅಲಂಕಾರ ಮಾಡಿಕೊಂಡು ಒಂದು ಚೇರ್ನಲ್ಲಿ ಕುಳಿತು ಮೇಕಪ್ ಸರಿ ಮಾಡುತ್ತಿದ್ದರಂತೆ. ಇನ್ನೊಂದೆಡೆ ಶಂಕರ್ನಾಗ್ಗೆ ನಿರ್ದೇಶಕರು ದೇವಸ್ಥಾನದ ಮೆಟ್ಟಿಲಿನ ಬಳಿ ನಿಂತು ಸನ್ನಿವೇಶವನ್ನು ವಿವರಿಸುತ್ತಿದ್ದರಂತೆ. ಮಂಜುಳಾರನ್ನು ಹತ್ತಿರದಿಂದ ನೋಡುವ ಆಸೆಯಿಂದ ಅಲ್ಲಿಗೆ ಹೋದರೂ ಜನ ಮುತ್ತಿಗೆ ಹಾಕಿದ್ದರಿಂದ ನೋಡಲಾಗದೆ ಬೆಟ್ಟದ ಕೆಳಗೆ ನಿಂತು, ಇಣುಕಿ ಇಣುಕಿ ಶೂಟಿಂಗ್ ನೋಡುತ್ತಾ ನಿಂತರಂತೆ.

ಎರಡು ಹಾಡಿನ ಸನ್ನಿವೇಶಗಳು ಮತ್ತು ಕೆಲವೊಂದು ದೃಶ್ಯಗಳನ್ನು ಕುಂಜಾರುಗಿರಿಯ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿತ್ತು. ಅದರಲ್ಲೂ ಚಿತ್ರದಲ್ಲಿ ಸೀತಾ ಮದುವೆಯ ಕನಸು ಕಾಣುತ್ತಾ ಇರುವಾಗ ರಾಮುವನ್ನು ರೌಡಿಗಳು ಸಾಯಿಸಿದ ಮೇಲೆ ಅವಳ ತಂದೆಯೂ ಆಘಾತದಿಂದ ಸಾಯುತ್ತಾರೆ. ಅವಳು ಮತಿಭ್ರಮಣೆಗೊಂಡು ಹಾಡುವ ಸಂದರ್ಭ `ಬಂದೇ ಬರುತ್ತಾನೆ' ಹಾಡು. ಈ ಚಿತ್ರದ ಜನಪ್ರಿಯ ಹಾಡುಗಳಲ್ಲೊಂದಾದ ಇದು ಮಂಜುಳಾರವರಿಗೆ ಹೆಸರು ತಂದುಕೊಟ್ಟ ಹಾಡು ಕೂಡ ಹೌದು.

ಬಂದೇ ಬರುತ್ತಾನೆ ರಾಮ ಬಂದೇ ಬರುತ್ತಾನೆ
ಬಂದ ಒಡನೆಯೆ ಸೀತೆಯ ಕಂಡು ರಾಣಿ ಅನುತ್ತಾನೆ...

ತಾಳಿಯ ತರುತ್ತಾನೆ ರಾಮ ಚಿನ್ನದ ಬಳೆಗಳ ತರುತ್ತಾನೆ
ಮದುವೆಯಾಗಿ ತನ್ನರಮನೆಗೆ ಬಾರೆ ಅನುತ್ತಾನೆ...

ಹಾಡು ಹೇಳುತಾನೆ ರಾಮ ಪ್ರೀತಿಯ ಮಾತನಾಡುತಾನೆ
ಯಾರು ಇಲ್ಲ, ಬಾ ಚಿನ್ನ ಎಂದು ಸವಿ ಮುತ್ತನು ಕೊಡುತ್ತಾನೆ...

ಅರ್ಧದಷ್ಟು ಈ ಹಾಡಿನ ಚಿತ್ರೀಕರಣವಾಗಿರುವುದು ಕುಂಜಾರುಗಿರಿ ದೇವಸ್ಥಾನದ ಮುಂಭಾಗದಲ್ಲಿ. ಇದೇ ಚಿತ್ರದ ಇನ್ನೊಂದು ಜನಪ್ರಿಯ ಹಾಡು `ಹೂವಿನ ಸೊಗಸು ನನಗಾಗಿ ಆ ಹೂವೇ ನಿನ್ನ ಪೂಜೆಗಾಗಿ' ಹಾಡಿನ ಕೊನೆಯ ಸಾಲುಗಳು,

ಹೂವಿನ ಸೊಗಸು ನನಗಾಗಿ, ಆ ಹೂವೇ ನಿನ್ನ ಪೂಜೆಗಾಗಿ
ಹೂವಿನ ಸೊಗಸು ನಿನಗಾಗಿ, ಈ ಹೂವಿನ ಮೊಗವು ನನಗಾಗಿ

ಸನಿಹಕೆ ಬರುತಿರೆ, ಬಯಕೆಯು ಕುಣಿದಿರೆ
ಚೆಲುವನೆ ನಾ ತಾಳೆನು
ಬಳಸಲು ತೋಳಲಿ, ಕೆಣಕಲು ಮಾತಲಿ
ಚೆಲುವನೆ ನಾ ಸೋತೆನು

ಈ ಮನಸು ಮನಸು ಬೆರೆತು ಹೋದ ಮೇಲೆ
ನಾಚಿಕೆ ಮಾತೇಕೆ ಹೇಳೆ?

ಮಂಜುಳಾ ಮತ್ತು ಶಂಕರ್ನಾಗ್ರವರ ಈ ಡ್ಯೂಯೆಟ್ ಹಾಡನ್ನು ಮರೆಯಲು ಸಾಧ್ಯವೆ? ಚೆಲುವನ ಪ್ರೀತಿಗೆ ಕರಗುವ ರಾಗರಂಜಿತ ಕದಪುಗಳ ಹುಡುಗಿಯ ಅಂತರಂಗದ ಸವಿ ಮಾತುಗಳು ಹಾಡಾಗಿ ಇಲ್ಲಿ ಹೊರ ಹೊಮ್ಮಿದೆ. ಹಿನ್ನಲೆಯ ಹಸಿರು ಗಿರಿ, ಗಿರಿಯತ್ತ ಚಾಚಿದ ಮೆಟ್ಟಿಲುಗಳು, ಬಂಡೆಯ ಸಾನಿಧ್ಯದ ಸೊಬಗು ಹಾಡಿಗೆ ಮೆರಗು ನೀಡಿರುವುದರಲ್ಲಿ ಸಂದೇಹವಿಲ್ಲ.

ವಿ ಸೋಮಶೇಖರ್ ನಿರ್ದೇಶನದ ಈ ಚಿತ್ರದ ಇನ್ನೊಂದು ಹಾಡು `ಈ ರೂಪವೇ... ನನ್ನಿ ಬಾಳಿನ ನಂದಾದೀಪವು, ಇದು ನೂರಾರು ಜನುಮದ ಅನುಬಂಧವು ತಂದ ಆನಂದವು' ಸನ್ನಿವೇಶದಲ್ಲಿ ರಾಮು (ಶಂಕರ್ನಾಗ್) ಸತ್ತ ಆನಂತರ ಅವನ ಮೆದುಳನ್ನು ಸೀತಾ(ಮಂಜುಳಾ)ಳಿಗೆ ಬದಲಾಯಿಸಿ ಆತನ ನೆನಪುಗಳು ಸೀತಾಳಲ್ಲಿ ಜಾಗೃತವಾಗಿ ಹಿಂದೆ ತಾನು ಸೀತಾಳನ್ನು ದೇವಸ್ಥಾನದಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸುತ್ತಾ ಸಾಗುವ ಹಿನ್ನಲೆಯ ಹಾಡು ಇದು.

ಬ್ಯಾಂಕ್ ಉದ್ಯೋಗಿಯಾಗಿದ ಶಂಕರ್ ನಾಗ್ ಗೆ ರಂಗಭೂಮಿಯಲ್ಲಿದ್ದಷ್ಟು ಆಸಕ್ತಿ ಸಿನಿಮಾಗಳಲ್ಲಿ ಇರಲಿಲ್ಲ. ಅದರಲ್ಲೂ ಕಮರ್ಷಿಯಲ್ ಸಿನಿಮಾಗಳೆಂದರೆ ನಿರಾಕರಿಸುತ್ತಿದ್ದುದೇ ಹೆಚ್ಚು. ಹಾಗೆಯೆ ಈ ಚಿತ್ರ ಕೂಡ ನಾಯಕಿ ಪ್ರಧಾನವಾಗಿದ್ದರಿಂದ ಚಿತ್ರವನ್ನು ನಿರಾಕರಿಸಿದ್ದರಂತೆ. ಕೊನೆಗೆ ನಿರ್ಮಾಪಕ ಅಬ್ಬಯ್ಯ ನಾಯ್ಡುರವರ ಒತ್ತಾಯದ ಮೇರೆಗೆ ಅಭಿನಯಿಸಿದ್ದರಂತೆ. ಈ ಚಿತ್ರದಲ್ಲಿ ಅವರ ಪಾತ್ರವನ್ನು ಮರೆಯುವಂತಿಲ್ಲ. ಮೆದುಳು ಬದಲಾವಣೆಯಿಂದ ಸತ್ತ ವ್ಯಕ್ತಿಯಲ್ಲಿರುವ ರಹಸ್ಯವನ್ನು ತಿಳಿದುಕೊಂಡು ರೌಡಿಗಳನ್ನು ಸೆದೆಬಡಿಯುವ ರಿವೇಂಜ್ ಮಾದರಿಯ ಚಿತ್ರವಿದು. ಮಂಜುಳಾ ತನ್ನ ಪ್ರಿಯಕರ ಸತ್ತ ಮೇಲೆ ನೀಡಿದ ಮತಿಭ್ರಮಣೆಯ ಸನ್ನಿವೇಶವಂತೂ ಮರೆಯಲು ಅಸಾಧ್ಯ. ಇಂತಹ ನೆನಪುಗಳನ್ನು ಮರೆಯುವಂತೆ ಇಲ್ಲ. ಈ ಚಿತ್ರ 1979 ರಲ್ಲಿ ಬಿಡುಗಡೆ ಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ.
ಮತ್ತೆ ಮುಂದಿನ ಕಂತಿನಲ್ಲಿ ಇನ್ನಷ್ಟು!

ಚಿತ್ರ ಕೃಪೆ: ಈ ಕನಸು. ಕಾಂ

Read more!

Wednesday, January 12, 2011

ವ್ಯವಹಾರ ಜಗತ್ತಿನ ‘ಮಾಯಾ ಕಿನ್ನರಿ’ಯೇ?!


ಜೋಗಿಯವರ ಕಾದಂಬರಿಯೆಂದರೆ ಅದೇನೋ ಆಕರ್ಷಣೆಯಿದೆ. ಅವು ತಿಳಿಸುವ ಕುತೂಹಲಕರ ಸಂಗತಿಗಾಗಿಯೋ, ಇಲ್ಲ ನಾವು ಕಂಡು ಕೇಳಿರುವ ಪರಿಸರದ ಸುತ್ತ ಮುತ್ತ ನಡೆಯುವುದಕ್ಕೋ? ಕಾಡಿನ ನಿಗೂಢ ರಹಸ್ಯ, ಪ್ರಕೃತಿಯ ಒಡನಾಟದ ಜೊತೆಗಿನ ಓಡಾಟ, ಹಳ್ಳಿಯ ಜೀವನ, ಕನಸು, ಮುಗಿಲು, ಬೆಟ್ಟ, ಚಾರಣ ಮುಂತಾದವುಗಳು ಬಿಚ್ಚಿಕೊಳ್ಳುವ ರೀತಿ ಅಪೂರ್ವಾಗಿರುತ್ತವೆ. ಆದರೆ ಅದೇ ಗುಂಗಿನಲ್ಲಿ ‘ಮಾಯಾ ಕಿನ್ನರಿ’ ಕಗೆತ್ತಿಕೊಂಡರೆ ಆ ರೀತಿಯ ಕಾಡಿನ ರಹಸ್ಯವಾಗಲಿ, ಕುತೂಹಲವಾಗಲಿ ಇಲ್ಲ. ಇಲ್ಲಿ ಕಟ್ಟಿಕೊಟ್ಟಿರುವ ರಹಸ್ಯ, ಕುತೂಹಲಗಳೆಲ್ಲಾ ವ್ಯವಹಾರಿಕ ಜಗತ್ತು, ರಾತ್ರಿ ಹಗಲೆನ್ನದೆ ಕಣ್ತೆರೆದು ಮಲಗಿರುವ ನಗರಜೀವನ, ಮಾನವ ಸಹಜ ಭಾವನೆಗಳೊಂದಿಗೆ ದೈನಂದಿನ ಬದುಕಿನ ಗುದ್ದಾಟ, ಮೋಸ, ವಂಚನೆ, ಸುಲಿಗೆ, ಯಾಂತ್ರಿಕತೆ, ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ, ಬದುಕು ಇಷ್ಟೇ ಆಗಿ ಹೋಗುವ ಭಯ. ಇವೆಲ್ಲವನ್ನೂ ‘ಮಾಯಾ ಕಿನ್ನರಿ’ ಅನಾವರಣಗೊಳಿಸುತ್ತಾಳೆ. ನಗರ ಜೀವನವೇ ಮಾಯಾಕಿನ್ನರಿಯಾಗಿ ಮೈದಳೆದು ನಿಶ್ಶಬ್ದವಾಗಿ ಆವರಿಸಿ ಬಿಡುತ್ತಾಳೆ."

ಕಾದಂಬರಿಯ ನಾಯಕಿ ಶೋಭಾರಾಣಿಗೆ ಭಿಕ್ಷುಕರೆಂದರೆ ಭಯ. ನಗರ ಜೀವನದಲ್ಲಿ ಇದು ಸಹಜ. ಇಲ್ಲಿ ಯಾರು ಯಾರ ಮೇಲೆ ನಂಬಿಕೆಯಿಡಬೇಕೋ, ಎಲ್ಲಾ ಗೊಂದಲ. ನೆರೆಮನೆಯವರ ಪರಿಚಯವಿಲ್ಲದೆ ಮನೆಯೆಂಬ ಜಗತ್ತೊಳಗೆ ಉಳಿದುಕೊಳ್ಳುವ ಅನಿವಾರ್ಯತೆ. ಭಿಕ್ಷುಕರ ಬಗ್ಗೆ ಭಯವಿದ್ದರೂ ಅವರ ಮೇಲೆ ಅನುಕಂಪ, ಕಾಳಜಿ ಶೋಭಾರಾಣಿಗೆ. ಏನಾದರಾಗಲಿ ಕೈಯೆತ್ತಿ ದಾನ ಮಾಡಿದರೇನೆ ಅವಳಿಗೆ ಸಮಾಧಾನ, ಇಲ್ಲದಿದ್ದರೆ ಪರಿತಾಪ. ಭಿಕ್ಷುಕ ಅವನ ಪಾಡಿಗೆ ಅವನಿದ್ದರೂ ಅವಳಿಗೆ ಆತಂಕ, ಹತಾಶೆ, ನಿರಾಶೆ. ಹಾಗೆಯೇ ಅವಳಿಗೊಂದು ವೀಕ್ನೆಸ್, ಮೊಬೈಲ್ ಕೂಗಿದರೆ ಸಾಕು ಅದನ್ನು ಆದರಿಸುವುದು. ಪರಿಚಯವಿರಲಿ, ಇಲ್ಲದಿರಲಿ ಕಾಲ್ ಅಟೆಂಡ್ ಮಾಡಿದರೇನೆ ಸಮಾಧಾನ.

ವ್ಯವಹಾರಿಕ ಜಗತ್ತು ಯಾವ ಯಾವ ರೂಪದಲ್ಲಿಯೋ ಮನುಷ್ಯನನ್ನು ತನ್ನತ್ತ ಸೆಳೆಯುವಂತೆ ಶೋಭಾರಾಣಿಯ ಗಂಡ ನರಹರಿಯನ್ನೂ ಕೂಡ ಅಪ್ಪಿಕೊಳ್ಳುತ್ತದೆ. ಅವನು ಸ್ವಂತ ಪ್ರೊಡಕ್ಷನ್ ಸಂಸ್ಥೆಯನ್ನು ಹುಟ್ಟು ಹಾಕಿದರೂ ಅವನ ವ್ಯವಹಾರಗಳು ನಿರೀಕ್ಷೆಯನ್ನೂ ಮೀರಿ ಹೊರಗೂ ಚಾಚುತ್ತದೆ. ಅಲ್ಲಿಯ ವಾತಾವರಣ, ನೀತಿ, ನಿಯಮ ಅವನನ್ನು ಸೆಳೆಯುತ್ತದೆ. ಅವನು ಯಾಂತ್ರಿಕ ಬದುಕಿಗೆ ಹೊರಳಿದರೂ ಶೋಭಾರಾಣಿಗೆ ಅವನ ಮೇಲೆ ಅಗಾಧ ಪ್ರೀತಿ. ಅವನ ಅತೀ ಆರೈಕೆಯಲ್ಲಿ ಮನೆಯೇ ಜಗತ್ತಾದರೂ ಖುಷಿಪಡುತ್ತಿರುತ್ತಾಳೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಲೆ ಅವಳಿಗಿದೆ. ಮುಂಜಾನೆದ್ದು ಮುಂಬಾಗಿಲಿಗೆ ರಂಗೋಲಿ ಬರೆದು ಸಂಭ್ರಮಿಸುವ ಕಿನ್ನರಿ ಅವಳು.

ಆದರೂ ಎಲ್ಲೋ, ಏನೋ ಹಾದಿ ತಪ್ಪುವ ಆತಂಕ ಅವಳಿಗೆ. ನಗರ ಬದುಕಿನ ರೀತಿಯಲ್ಲಿಯೂ ಆಸೆಗಳ ಮೂಟೆಕಟ್ಟಿಕೊಂಡು ಒಂದು ಅದ್ಭುತ ಪ್ರೀತಿಯನ್ನು ಕಾಣುತ್ತಾಳೆ. ಆ ಪ್ರೀತಿಯೆ ಒಂದು ಸುವಾಸನೆಯಾಗಿ ಅವಳ ಮನೆಯೆಂಬ ಜಗತ್ತಿನಲ್ಲಿ ಪಸರಿಸುತ್ತಿರುತ್ತದೆ. ಈ ಸುವಾಸನೆಯೆ ಒಂದು ಪಾತ್ರವಾಗಿ ಕಾದಂಬರಿಯ ಉದ್ದಕ್ಕೂ ಹರಡುತ್ತದೆ. ಇದು ಜೀವನ್ಮುಖಿ ಪ್ರೀತಿಯಾಗಿ ಓದುಗನನ್ನು ಕುತೂಹಲಕ್ಕೆ ಕೊಂಡೊಯ್ಯುತ್ತದೆ.

ನರಹರಿ ಹೊರ ಜಗತ್ತಿಗೆ ತನ್ನನ್ನು ತಾನು ಎಕ್ಸ್ಪೋಸ್ ಮಾಡಿಕೊಂಡು ಹಣಗಳಿಸುವ ದಾರಿಯನ್ನು ಹಿಡಿಯುತ್ತಾನೆ. ತಾನು ತೊಡಗಿಸಿಕೊಂಡಿರುವ ವ್ಯವಹಾರ ದೀರ್ಘ ಅವಧಿಯಲ್ಲಿ ಹೆಚ್ಚು ಲಾಭದಾಯಕವಲ್ಲವೆಂದು ಗೊತ್ತು. ಆದರೆ ಅವನ ವ್ಯವಹಾರ ಚತುರತೆಯಲ್ಲಿ ಯಶಸ್ಸು ಸಾಧಿಸುತ್ತಾ, ಅವನಿಗೆ ತಿಳಿದಿರುವ ಮತ್ತು ತಿಳಿಯದಿರುವ ಲೋಕಕ್ಕೆ ನಿಧಾನವಾಗಿ ಇಳಿಯುತ್ತಾನೆ. ಅದು ಅವನ ಮತ್ತು ಮುಂಬೈಯ ಕಂಪನಿಯ ಒಡಂಬಡಿಕೆಯಾಗಿ ಅವನನ್ನು ಹತಾಶೆಗ ಇಳಿಯುವಂತೆ ಮಾಡುತ್ತದೆ. ನಯವಂಚನೆಯ ಜಾಲಕ್ಕೆ ಸಿಕ್ಕು ಚಡಪಡಿಸಿ ಅದರಿಂದ ಹೊರಗೆ ಬರುವಾಗ ಬದುಕು ಬಹಳಷ್ಟು ಅರ್ಥವಾಗಿರುತ್ತದೆ. ನಗರ ಬದುಕಿನ ಅನೂಹ್ಯ ತೆರೆ ಸರಿಯುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ದೃಶ್ಯ ಮಾಧ್ಯಮದ ಬಗ್ಗೆ ಲೇಖಕ ತಿಳಿಸಿಕೊಡುವ ಕರಾಳ ಸತ್ಯಗಳು.

ಕೊನೆಗೂ ನರಹರಿಗೆ ಹೊರ ಜಗತ್ತು ಒಂದು ಭ್ರಮೆಯಾಗಿ ತನ್ನ ಮನೆ, ಮನದನ್ನೆಯೇ ಹೆಚ್ಚಾಗಿ ಕೊನೆಪಕ್ಷ ಪ್ರೀತಿಸುವ, ಅವಳ ಅಭೀಷ್ಟಗಳನ್ನು ಉತ್ತೇಜಿಸುವ, ಅವಳದೇ ಜಗತ್ತಿನಲ್ಲಿ ವಿಹರಿಸುವ ದೊಡ್ಡ ನಿರ್ಧಾರ ಮಾಡುತ್ತಾನೆ. ಏನೆಲ್ಲಾ ಅವನು ತಳ್ಳಿರುತ್ತಾನೋ ಅವೆಲ್ಲವನ್ನೂ ನೆಚ್ಚಿಕೊಳ್ಳುತ್ತಾನೆ. ಹೊರ ಮತ್ತು ಒಳ ಜಗತ್ತಿನ ಸೂಕ್ಷ್ಮಗಳನ್ನು ಶೋಭಾರಾಣಿ ಮತ್ತು ನರಹರಿಯ ಮೂಲಕ ತಿಳಿಸುವ ಜಾಣ್ಮೆ ಲೇಖಕರದ್ದು. ಇಲ್ಲಿಯ ಸಮಸ್ತವನ್ನು ತಿಳಿಸುವ ಕಿನ್ನರಿ, ‘ಯಾರಿಲ್ಲಿಗೆ ಬಂದರು ಕಳೆದಿರುಳು! ಏ ಗಾಳೀ...’ ಎಂದು ಬೆರಗಾಗಿ ಕೇಳುತ್ತಾಳೆ.

ಹೀಗೆ ಸುಖಾಂತದಲ್ಲಿ ಕಾದಂಬರಿ ಕೊನೆಯಾಗುತ್ತದೆಯೆನ್ನುವ ಓದುಗನ ಭ್ರಮೆಗೆ ಲೇಖಕ ತಡೆಯೊಡ್ಡಿ ನರಹರಿ ಮತ್ತೊಮ್ಮೆ ವ್ಯವಹಾರದತ್ತ ಹೊರಳುವುದನ್ನು ಅವನ ಮಾತುಗಳಲ್ಲಿಯೇ ಸ್ಪಷ್ಟಪಡಿಸುತ್ತಾನೆ. ಇದೇ ವ್ಯವಹಾರ ಜಗತ್ತಿನ ‘ಮಾಯಾ ಕಿನ್ನರಿ’ಯೇ?!

ಈ ಪುಸ್ತಕವನ್ನು ಅಂಕಿತ ಪುಸ್ತಕ, ಬೆಂಗಳೂರು ಪ್ರಕಟಿಸಿದೆ. ಮುಖಪುಟ ರಘು ಅಪಾರ ಅವರದ್ದು. ಪುಸ್ತಕದ ವಿನ್ಯಾಸ ಆಕರ್ಷಕವಾಗಿದೆ. ಇದರ ಬೆಲೆ ಕೇವಲ ಎಪ್ಪತ್ತು ರೂಪಾಯಿಗಳು ಮಾತ್ರ.

Read more!

Saturday, January 8, 2011

ಗಿರಿಕನ್ಯೆಯ ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’


ನನಗಾಗ ಶಾಲೆಯ ಮೆಟ್ಟಿಲು ಹತ್ತುವ ವಯಸ್ಸು. ನಮ್ಮದು ಕುಗ್ರಾಮವೆಂದರೆ ಕುಗ್ರಾಮ. ಆದರೆ ಹಸಿರು ವನರಾಶಿಯಿಂದ ಸದಾ ಕಂಗೊಳಿಸುವ ಸೌಂದರ್ಯವಂತೆ ಆ ಊರು. ಆಗಿನ್ನೂ ಸಂಪರ್ಕ ಸಾಧನಗಳಾವುದು ಇರಲಿಲ್ಲವಾಗಿ ಜನರಿಗೆ ಕಾಲ್ನಡಿಗೆಯೆ ಗತಿ. ಊರು ಅನ್ನುವುದಕ್ಕೆ ಒಂದು ರಸ್ತೆ, ನೆಪಮಾತ್ರಕ್ಕೆ! ಹೊಂಡ, ಕಲ್ಲುಗಳ ಪಾದಾಚಾರಿಗೂ ನಡೆಯುವುದಕ್ಕೂ ಕಷ್ಟವಾದ ದಾರಿ ಅದು. ಆ ದಾರಿಯಲ್ಲಿ ಶ್ರೀ ಮಂಜುನಾಥ ಮೋಟಾರ್ ಸರ್ವೀಸ್ (smms) ಕಂಪನಿಯ ಉದ್ದ ಮೂತಿಯ ಒಂದೇ ಒಂದು ಬಸ್ಸು ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಹಾಗಂತ ಯಾರೂ ಆ ಬಸ್ಸಿಗೆ ಕಾಯುವುದು ಇಲ್ಲ. ಬಸ್ಸು ಬಂದರೆ ಉಡುಪಿಗೋ ಶಿರ್ವಕ್ಕೊ ಹೋದಾರು. ಆಗಿನ ಕಾಲಕ್ಕೆ ಅದರ ಅನಿವಾರ್ಯತೆ ಇರಲಿಲ್ಲ ಅನ್ನುವಷ್ಟರ ಮಟ್ಟಿಗೆ.

ಅಂತಹ ನಮ್ಮ ಕಾಡುಗುಡ್ಡ ಹಳ್ಳಿಗೆ ಒಂದು ದಿನ ವಿಚಿತ್ರ ವಾಹನದಲ್ಲಿ ಸಿಟಿಯ ಜನರ ದಿಂಡು ಬಂದು ಬಿಟ್ಟಿತು. ನಮಗೆಲ್ಲಾ ಆಶ್ಚರ್ಯ. ಅವರ ವೇಷಭೂಷಣ, ಸ್ಟೈಲು, ಮಾತುಕತೆ ಎಲ್ಲಾ ಎಲ್ಲಾ ವಿಚಿತ್ರ ಅನಿಸಿಬಿಟ್ಟಿತು."

ಊರಿಗೆ ಏನಾದರೊಂದು ಹೊಸ ವಾಹನ ಬಂದ್ರೆ ಅದು ಮಕ್ಕಳನ್ನು ಕದ್ದೊಯ್ಯುವ ‘ಕಳ್ಳರ ವಾಹನ’ ಅಂತಲೆ ಊರವರ ಅಭಿಪ್ರಾಯ. ಊರಿನ ಪ್ರಮುಖರು ಬಂದ ವಾಹನವನ್ನು ನಿಲ್ಲಿಸಿ, ವಿಚಾರಿಸಿ ವ್ಯಕ್ತಿಗಳ ಬಗೆ ತಿಳಿದುಕೊಂಡ ಬಳಿಕವೆ, ‘ಇಂತವರು ಊರಿಗೆ ಬಂದಿದ್ರು’ ಅನ್ನುವ ಗಾಬು ಊರಿಗೆ ಹರಡುತ್ತಿತ್ತು.

ಹಳ್ಳಿಯಲ್ಲಿ ಮನೆಗಳೆಂದರೆ ಎರಡು ಮೂರು ಫರ್ಲಾಂಗ್ಗಳಿಗೆ ಒಂದು ಮನೆ. ತೊಡಮೆ, ತೋಡು, ಕಾಲುಸಂಕ, ವಳಚ್ಚಿಲ್, ಗುಡ್ಡ, ಕಾಡುಗಳನ್ನು ದಾಟಿ ಮನೆಯನ್ನು ತಲುಪಬೇಕಾದ ಪರಿಸ್ಥಿತಿ. ಕಾಲು ದಾರಿ ಬಿಟ್ಟರೆ ಊರಿಗೆ ರಸ್ತೆಯೆಂದರೆ ಸುಭಾಸ್ನಗರದಿಂದ ಬಂಟಕಲ್ ಕ್ರಾಸ್ ರೋಡ್ವರೆಗಿನ ಒಂದು ಮಣ್ಣಿನ ರಸ್ತೆಯಷ್ಟೆ. ಊರಿನವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅಭಿವೃದ್ಧಿಯೆಂದರೆ ಅದು ಅಪಾಯಗಳಿಗೆ ಆಹ್ವಾನವೆಂದೆ ತಿಳಿದಿದ್ದರು ಅನ್ಸುತ್ತೆ. ಅದಕ್ಕಾಗಿ ರಸ್ತೆಯಾಗಲಿ, ಸರಿಯಾದ ದಾರಿಯನ್ನಾಗಲಿ ಮಾಡುವುದಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಅವರ ಜಾಗೆಯನ್ನೂ ಬಿಟ್ಟು ಕೊಡುತ್ತಿರಲಿಲ್ಲ. ಇವತ್ತಿನ ಹಾಗೆ ಪಂಚಾಯತುಗಳು ಆಗಿನ್ನೂ ಬೆಳೆದಿರಲಿಲ್ಲ. ಇದ್ದರೂ ಅಭಿವೃದ್ಧಿಗೆ ಅವಕಾಶವನ್ನು ನೀಡುತ್ತಿರಲಿಲ್ಲ.

ಅಂತಹ ನಮ್ಮ ಹಳ್ಳಿಗೆ ಇನ್ನೊಂದು ಹೆಸರು ಬೊಲ್ಲೆ (ಬೆಳ್ಳೆ ಹೆಸರಿನ ತುಳು ಉಚ್ಛಾರ). ಊರಿನ ಪೂರ್ವದಿಂದ ಉತ್ತರ ದಿಕ್ಕಿನವರೆಗೂ ಪಾಪನಾಶಿನಿ ನದಿ ಹರಿಯುವುದರಿಂದ ಕೃಷಿ ಪ್ರಧಾನವಾದ ಊರು ನಮ್ಮದು. ಭತ್ತದ ಬೆಳೆ ಮತ್ತು ತೆಂಗಿನಬೆಳೆಗಳನ್ನು ಬಿಟ್ಟರೆ ಉಳಿದಂತೆ ಸೊಪ್ಪು ತರಕಾರಿಯನ್ನು ಬೆಳೆಯುವುದು ಸರ್ವೇ ಸಾಮಾನ್ಯ. ಆ ನದಿಯ ಹತ್ತಿರದಲ್ಲಿ ಅಂದರೆ ಉತ್ತರ ದಿಕ್ಕಿಗೆ ಬೊಲ್ಲೆದಂಗಡಿ. ಅದು ಊರಿನ ಒಂದೇ ಒಂದು ಗೌಡ ಸಾರಸ್ವತ ಬ್ರಾಹ್ಮಣರ ಮನೆ. ದಿನಸಿ ಸಾಮಾನಿಗೆ ಮಾತ್ರವಲ್ಲ ಮೊದಲು ಅಕ್ಕಿ ಮಿಲ್ಲು ಬಂದಂದು ಅಲ್ಲಿಯೆ. ಹಾಗಾಗಿ ಅದು ಒಂದು ಮೂಲೆಯಲ್ಲಿದ್ದರೂ ಜನರಿಗೆ ಅದನ್ನು ಹುಡುಕಿಕೊಂಡು ಹೋಗುವ ಅನಿವಾರ್ಯತೆ. ಅಲ್ಲಿ ಭತ್ತದ ಕೃಷಿ ಮತ್ತು ಕಬ್ಬನ್ನು ಬೆಳೆಯುವುದು ಗೊತ್ತಿತ್ತು.

ಬ್ರಹ್ಮಾವರದ ಕಬ್ಬಿನ ಕಾರ್ಖಾನೆ ಪ್ರಾರಂಭವಾಗುವವರೆಗೂ ಅಲ್ಲಿ ಆಲೆಮನೆಯಿತ್ತು. ಊರಿನ ಸೆಲ್ಫ್ ಮೆಕ್ಯಾನಿಕ್ ಎಂದೇ ಖ್ಯಾತರಾದ ಸೀನಪ್ಪ ಭಟ್ಟರು ಆಲೆಮನೆಯ ರೂವಾರಿ. ಕಬ್ಬು ಮಾಗುವ ಸಮಯಕ್ಕೆ ಅವರು ದೊಡ್ಡ ಕೊಪ್ಪರಿಗೆ ಮತ್ತು ಡಿಸೆಲ್ ಪಂಪ್ ತಂದು ಕಬ್ಬನ್ನು ಕ್ರಶ್ ಮಾಡಿ ಅದರ ಹಾಲನ್ನು ಕೊಪ್ಪರಿಗೆಗೆ ಸುರಿದು ಬೆಲ್ಲ ತಯಾರಿಸುವುದು ಈಗಲೂ ನಮಗೆ ನೆನಪಿದೆ. ಎರಡು ಮೂರು ದಿನಗಳವರೆಗೂ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕೊತ ಕೊತಾಂತ ಕುದಿಯುವುದು ಗೊತ್ತು. ನಾವು ಮಧ್ಯಾಹ್ನದ ಹೊತ್ತಿಗೆ ಶಾಲೆಯಲ್ಲಿ ಬುತ್ತಿ ಊಟ ಮುಗಿಸಿ ಬೆಲ್ಲದ ಆಸೆಗಾಗಿ ಅಲ್ಲಿಗೆ ಓಡುವುದಿತ್ತು. ಬಿಸಿ ಬಿಸಿ ಬೆಲ್ಲವನ್ನು ದೊಡ್ಡ ಎಲೆಗೆ ಹಾಕಿ ಅವರು ನಮಗೆ ಕೊಟ್ಟು, ‘ಎಲ್ಲರೂ ಹಂಚಿ ತಿನ್ನಿ ಅನ್ನೋರು’.

ಅಂತಹ ಅಲೆಮನೆಯಿರುವ ಮನೆಗೆ ಪರವೂರಿನಿಂದ ಬಂದ ನಾಲ್ಕೈದು ವಾಹನಗಳು ಹೋದದ್ದು ನಮಗೆ ತಿಳಿಯಿತು. ಊರಿಗೆ ವಾಹನ ಬಂದರೆ ಕೇಳಬೇಕೆ? ಒಬ್ಬರ ಕಿವಿಯಿಂದ ಒಬ್ಬರಿಗೆ ವಿಷಯ ತಲುಪಿತು. ಹೆಂಗಸರು ಮಕ್ಕಳು ಮುದುಕರೆನ್ನದೆ ಅಲ್ಲಿಗೆ ಹೊರಟರೆ ಅಲ್ಲಿ ಊರೆ ಜಾತ್ರೆ ಸೇರಿದಂತೆ ಕಾಣುತ್ತಿತ್ತು.

ನಮಗೂ ಕುತೂಹಲ; ಅವರಂತೆ, ಇವರಂತೆ ಅನ್ನುವ ಗಾಬು. ಅಕ್ಕ, ಅಣ್ಣನ ಜೊತೆಗೆ ನಾವು ಹೋದೆವು. ಅರ್ಧ ದಾರಿಯಲ್ಲಿ ಅಮ್ಮ ನಮ್ಮನ್ನು ಗದರಿಸಿ ಹೋಗದಂತೆ ತಡೆದರು. ಹಾಗೂ ಹೀಗೂ ಅಣ್ಣನವರೆಲ್ಲಾ ಅಮ್ಮನ ಕಣ್ಣು ತಪ್ಪಿಸಿಕೊಂಡು ಓಡಿದರು.

“ಅಲ್ಲಿ ಆಗ್ತಾ ಇರೋದು ಸಿನಿಮಾ ಶೂಟಿಂಗ್. ಅದನ್ನೆಲ್ಲಾ ಏನು ನೋಡುವುದು ನೀವು ಸಣ್ಣ ಮಕ್ಕಳು, ಸುಮ್ನೆ ಮನೆಗೆ ಬರ್ತೀರಾ ಇಲ್ವಾ?” ಅಂದ್ರು. ಆಗ ಅವರ ಮಾತನ್ನು ಮೀರಿ ನಡೆಯುವ ಧೈರ್ಯವಿರಲಿಲ್ಲ. ಮನೆಗೆ ವಾಪಾಸಾದೆವು. ಆದರೆ ನಮ್ಮ ನೆರೆಮನೆಯ ಹುಡುಗ ಹುಡುಗಿಯರೆಲ್ಲಾ ಹೋದವರ ಬಾಯಿಯಲ್ಲಿ ಡಾ. ರಾಜಕುಮಾರ್ ಮತ್ತು ಜಯಮಾಲರ ಬಗ್ಗೆ ಮಾತುಗಳು.

ಕೊನೆಗೆ ನನ್ನ ಎರಡನೆ ಅಣ್ಣ ಹೈಸ್ಕೂಲ್ ಓದುತ್ತಿದ್ದ ಅವನು ರಾತ್ರಿ ಮನೆಗೆ ಬಂದವನೆ ಎಲ್ಲವನ್ನೂ ನಮಗೆ ವರದಿ ಒಪ್ಪಿಸಿದ. ಶೂಟಿಂಗ್ ನೋಡದಿದ್ದರು ಆ ಸನ್ನಿವೇಶವನ್ನು ಚಿತ್ರಿಸಿಕೊಂಡೆವು.

ಬೊಲ್ಲೆದಂಗಡಿಯ ಸುತ್ತಮುತ್ತ ಬೈಲು ಗದ್ದೆಯಾಗಿರುವುದರಿಂದ ಭತ್ತದ ಪಚ್ಚ ಪೈರಿನ ತೋರಣ ಮತ್ತೊಂದೆಡೆ ಕಬ್ಬಿನ ತೋಟ. ಅಷ್ಟಿದ್ದರೆ ಕೇಳಬೇಕೆ? ಎಂತಹ ಸಿನಿಮಾ ಮಂದಿಯೂ ಆ ದೃಶ್ಯಕ್ಕೆ ಮಾರುಹೋಗದಿರಲಾರರು.

ಅಂತಹ ಪ್ರಕೃತಿಯ ನಡುವೆ ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’ ಅನ್ನುವ ಯುಗಳ ಗೀತೆಯ ಚಿತ್ರೀಕರಣ. ಪಾಪನಾಶಿನಿ ನದಿಯ ‘ಕರಿಯದ ಬಾಕಿಲ್’ ನಿಂದ ಉದ್ದನೆಯ ಎತ್ತರದ ಕಟ್ಟಪುಣಿಯ ಇಕ್ಕೆಲಗಳಲ್ಲಿ ಭತ್ತದ ಹಸಿರು ಅಲ್ಲಿಂದ ಮುಂದುವರೆದು ದೊಡ್ಡ ಗೊಬ್ಬರದ ಗುಂಡಿಯಿರುವ ಗದ್ದೆಯವರೆಗೂ ಚಿತ್ರೀಕರಣ. ಸಾದಾರಣವಾಗಿ ಆ ಹಾಡಿನ ಕೊನೆಯ ಅರ್ಧ ಭಾಗ ಚಿತ್ರೀಕರಣವಾಗಿರುವುದು ನಮ್ಮೂರಿನಲ್ಲೆ.

ಚಿತ್ರೀಕರಣವೆಂದರೆ ಕನಿಷ್ಟಪಕ್ಷ ಒಂದೆರಡು ದಿನವಾದರೂ ಇರುತ್ತಾರೆಂದು ತಿಳಿದಿದ್ದ ನಮಗೆ ನಿರಾಶೆ. ಮರುದಿನ ಹೇಗೂ ಅಮ್ಮನನ್ನು ಒಪ್ಪಿಸಿ ನಾವು ಅಲ್ಲಿಗೆ ಹೋದರೆ ಅಲ್ಲಿ ಮೂಕ ಸಾಕ್ಷಿಯಂತೆ ನಿಂತಿದ್ದು ಬರೀ ಹಸಿರು ಭತ್ತದ ಪೈರಿನ ಗದ್ದೆಗಳು, ಪಾಪನಾಶಿನಿ ನದಿ, ದೊಡ್ಡ ಕಟ್ಟಪುಣಿ, ತೆಂಗಿನ ಮರದ ಸಾಲುಗಳು, ದೇವಸ್ಥಾನದ ಪ್ರಾಂಗಣ, ನಗಾರಿ ಕೋಣೆ, ನೀಲಗಿರಿ ಮರಗಳು... ಅಣ್ಣ ಮತ್ತು ಅವನ ಫ್ರೆಂಡ್ಸೆಲ್ಲಾ ಸೇರಿ, ‘ಓ ಇಲ್ಲಿಂದ ಜಯಮಾಲ ನೃತ್ಯ ಮಾಡ್ತಾ ಬರ್ತಾ ಇದ್ರು. ಅಣ್ಣಾವ್ರು ಆ ಕಡೆಯಿಂದ ಬರ್ತಾ ಇದ್ರು. ಅಲ್ಲಿಯೆ ಭತ್ತದ ತೆನೆಗಳನ್ನು ಕಲಶೆಯ ನಡುವೆ ಇಟ್ಟು ನೃತ್ಯ ಮಾಡ್ತಾ ಇದ್ದಿದ್ದು, ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವ ಮೆಟ್ಟಿಲುಗಳ ದೃಶ್ಯ ತೆಗೆದದ್ದು. ಅಲ್ಲಿ ಅವರೆಲ್ಲಾ ಮೇಕಪ್ ಮಾಡ್ತಾ ಇದ್ರು. ಇಲ್ಲಿ ನಾವೆಲ್ಲಾ ನಿಂತು ನೋಡ್ತಾ ಇದ್ದೆವು. ಕ್ಯಾಮರಾ ನಿಧಾನಕ್ಕೆ ನಮ್ಮತ್ತ ತಿರುಗಿದ್ದು. ಪಿಕ್ಚರ್ ರಿಲೀಸ್ ಆದ ಕೂಡ್ಲೆ ನಾನು ಮೊದಲು ನೋಡ್ಬೇಕು. ನಮ್ಮ ಊರಿನ ಯಾರ್ಯಾರೆಲ್ಲಾ ಅದರೊಳಗೆ ಇದ್ದಾರೆಂತ ಕಾಣ್ಬೇಕು’ ಅಂತ ಉದ್ದಕ್ಕೆ ಹೇಳುತ್ತಿದ್ದರೆ ನಮಗೆ ಎಂತದೋ ಪುಳಕ.

ದೊರೆ-ಭಗವಾನ್ ನಿರ್ಧೇಶನದ ‘ಗಿರಿಕನ್ಯೆ’ಯ ಆ ಹಾಡು ಇಂದಿಗೂ ಜನಪ್ರಿಯ. ನಮ್ಮ ಮಣ್ಣಿನ, ಊರಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಾ ಸಾಗಿದ್ದ ಹಾಡಿನ ಸಾಲುಗಳನ್ನು ಕೇಳುವಾಗ ಅಲ್ಲಿಯ ದೃಶ್ಯಗಳದ್ದೇ ಕಾರುಬಾರು ಕಣ್ಣುಗಳಲ್ಲಿ.

ನೆಲವ ನಂಬಿ ಬಾಳೋರು ನಾವುಗಳೆಲ್ಲಾ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲಾ
ಹಸಿರೆ ಉಸಿರು ನಮಗೆಲ್ಲಾ

ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೆ ಹೊನ್ನು ನಮಗೆಲ್ಲಾ

ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ

ಎಂತಹ ಅದ್ಭುತವಾದ ಹಾಡು! ಅದಕ್ಕೆ ಪೂರಕವಾದ ಪಚ್ಚ ಪೈರಿನ ಗದ್ದೆಗಳು. ಸಮುದ್ರ ಮಟ್ಟಕ್ಕಿಂತಲೂ ಎತ್ತರದಲ್ಲಿರುವ ಕುಂಜಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ಅಲ್ಲಿಂದ ನಿಂತು ಸುತ್ತಾ ನೋಡಿದರೆ ಪೂರ್ವದಲ್ಲಿ ಕುದುರೆಮುಖದ ಬೆಟ್ಟದ ಸಾಲುಗಳು, ಪಶ್ಚಿಮದಲ್ಲಿ ಸುರತ್ಕಲ್ನ ದೀಪಸ್ತಂಭದವರೆಗೂ ಕಾಣುವ ಸಮುದ್ರ, ಉತ್ತರಕ್ಕೆ ಮಣಿಪಾಲ, ದಕ್ಷಿಣಕ್ಕೆ ಹಸಿರು ತುಂಬಿದ ಬೆಟ್ಟಗಳು. ಒಂದೊಂದೆ ದೃಶ್ಯಗಳು ಪರದೆಯ ಮೇಲೆ ಮೂಡಿ ಬರುವಾಗ ಇದು ನನ್ನೂರು, ಇದು ದೇವಸ್ಥಾನದ ಮುಂಭಾಗ, ಇದು ನಗಾರಿ ಕೋಣೆ, ದೇವಸ್ಥಾನದ ಎದುರಿನ ಮೆಟ್ಟಿಲುಗಳು. ಹೀಗೆ ಈಗಲೂ ಆ ಹಾಡು ಬರುವಾಗ ನಾವು ಹೇಳುವುದುಂಟು ಹಳೆಯ ನೆನಪುಗಳನ್ನು ಕೆದಕುತ್ತಾ...

1977 ರಲ್ಲಿ ಚಿತ್ರ ಬಿಡುಗಡೆ ಕಂಡಿತು. ಆಗ ಚಿಕ್ಕಮಕ್ಕಳಿಗೆ ಸಿನಿಮಾ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದಕ್ಕೆ ಮನೆಯಲ್ಲಿ ಅವಕಾಶವಿರಲಿಲ್ಲ. ಸುಮಾರು ಮೂವತ್ತು ವರ್ಷಗಳ ಬಳಿಕ ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಆ ನೆನಪುಗಳು ನನ್ನನ್ನು ಇಲ್ಲಿ ಬಿಚ್ಚಿಡಲು ಅನುವು ಮಾಡಿಕೊಟ್ಟಿದೆ.

ಡಾ. ರಾಜ್ಕುಮಾರ್ ನಮ್ಮ ಊರಿಗೆ ಬಂದಿದ್ರು. ಡಾ. ಜಯಮಾಲ ಬಂದಿದ್ರು. ನೆನೆಸಿಕೊಂಡ್ರೆ ಈಗ್ಲೂ ಖುಷಿಯಾಗುತ್ತೆ. ಕೇವಲ ಸಿನಿಮಾ ಮಂದಿಯನ್ನು ಹೆಚ್ಚಾಗಿ ಈಗಲೂ ಟಿವಿ. ಸಿನೆಮಾಗಳಲ್ಲಿ ಮಾತ್ರ ನೋಡಿರ್ತೀವಿ. ಅವರನ್ನು ನೇರವಾಗಿ ನೋಡುವುದಕ್ಕೂ ದೃಶ್ಯಗಳಲ್ಲಿ ನೋಡುವುದಕ್ಕೂ ವ್ಯತ್ಯಾಸವಿರುತ್ತೆ, ಅಲ್ವಾ...?


ಚಿತ್ರ ಕೃಪೆ: ಈಕನಸು.ಕಾಂ

Read more!