Sunday, March 20, 2011

ಪಿ. ಲಂಕೇಶ್ ಅವರ ‘ಅಕ್ಕ’


ಅಕ್ಕ ದೇವೀರಿಗೆ ಮೈಮೇಲೆ ಪ್ರೀತಿ ಬಂತೆಂದ್ರೆ ಅವ್ವನ ಹಾಗೆ ಎದೆಗೆ ತಬ್ಬ್ಕೊಂಡು ಮುತ್ತಿಡ್ತಾಳೆ; ಸಿಟ್ಟು ಬಂದ್ರೆ ಲಾತನೂ ಕೊಡ್ತಾಳೆ. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ನನ್ನಕ್ಕ ನಾಲ್ಕು ದಿನದಿಂದ ಎಲ್ಲಿಗೆ ಹೋದ್ಲೋ?... ಇದು ಕ್ಯಾತ ಉರುಫ್ ಕೃಷ್ಣನ ಅಳಲು. ದಾರಿ ಹೋಕ ನೋಡುವ, ಚಿಂತಿಸುವ, ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ರೆ ಅವನಿಗೆ ಒಂದಲ್ಲ ಒಂದು ದಿನ ಈ ಕ್ಯಾತ ಅಥವಾ ಕೃಷ್ಣ ಸಿಕ್ಕೇ ಸಿಗುತ್ತಾನೆ. ಈ ಕ್ಯಾತನ ಹಟ್ಟಿ, ಅವನ ಅಕ್ಕ, ಅವರಿಬ್ಬರನ್ನು ಸುತ್ತುವರಿದ ರಾಜಕೀಯ - ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತೆ. ಕ್ಯಾತ ಕಂಡದ್ದನ್ನು ಹೇಳುವ ಈ ಪುಟ್ಟ ಕಾದಂಬರಿ ನಿಜಕ್ಕೂ ರಾಜಕೀಯ ಕಾದಂಬರಿ. ಇದು ಬೆನ್ನುಡಿಯಲ್ಲಿ ಲಂಕೇಶ್ ಅವರ ಮಾತುಗಳು. ಅರಿಕೆಯಲ್ಲಿಯೂ ಪುಟ್ಟ ಹುಡುಗನ ಮಾತಿನಲ್ಲಿಯೇ ಕಥೆಯನ್ನು ಸಿದ್ಧಪಡಿಸಿರುವುದಾಗಿ ಲಂಕೇಶ್ ಹೇಳಿಕೊಳ್ಳುತ್ತಾರೆ. ಹಾಗಾಗಿ ಇಡೀ ಕಾದಂಬರಿಯಲ್ಲಿ ಕ್ಯಾತನ ಶೈಲಿಯ ಅಲ್ಪಪ್ರಾಣ, ಮಹಾಪ್ರಾಣದ ಮಿಶ್ರಣ, ಸಕಾರ ಶಕಾರ ಷಕಾರದ ಅನಿಶ್ಚಯತೆಯನ್ನು ಹಾಗೆ ಇಟ್ಟುಕೊಂಡಿರುವುದು ಕಾದಂಬರಿಯ ವಿಶಿಷ್ಟತೆಯಾಗಿದೆ.

ನಿಷ್ಠುರವಾಗಿ ರಾಜಕೀಯದ ಬಗ್ಗೆ, ವ್ಯಕ್ತಿಗಳ ಬಗ್ಗೆ ಬರೆಯುತ್ತಿದ್ದ ಲಂಕೇಶ್ ಅವರ ವಿಶಿಷ್ಟ ಶೈಲಿಯ, ದೇಸಿ ಸೊಗಡಿನ, ಸ್ಲಂ ಏರಿಯಾದ ಹೀರೋನೊಬ್ಬನ ಭಾಷೆಯಲ್ಲಿಯೇ ಕಾದಂಬರಿಯಾಗಿಸುವ ‘ಅಕ್ಕ’ ರಾಜಕೀಯ ಮತ್ತು ಸಿನಿಮಾ ಜಗತ್ತಿನ ಗಬ್ಬು ನಾತವನ್ನು ಸ್ಲಂ ಏರಿಯಾದ ನಾತಕ್ಕಿಂತಲೂ ಕಟುವಾಗಿ ಹೊರಗೆಳೆಯುವ ಚಿತ್ರಣವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಕೇವಲ ಕ್ಯಾತ ಮಾತ್ರವಲ್ಲ, ಅಲ್ಲಿಯ ಪರಿಸರದ ನೂರಾರು ಕ್ಯಾತರುಗಳ ಅನಾಥ ಪ್ರಜ್ಞೆ, ಹಸಿವು, ಅಸಹಾಯಕತೆ, ನೋವು, ಅನಿವಾರ್ಯತೆಗಳನ್ನು ಮತ್ತು ಸಂಭಾವಿತರ ಬದುಕಿನ ಇನ್ನೊಂದು ಮುಖವನ್ನು ತೆರೆದಿಡುವ ಈ ಕಥನಕದ ನಿರೂಪಣಾ ಶೈಲಿಯಾಗಲಿ, ಬಳಸಿದ ಭಾಷೆಯಾಗಲಿ ಎಲ್ಲೂ ದೋಷವೆನಿಸದೆ ಸ್ವತಂತ್ರವಾಗಿ ಓದಿಸಿಕೊಂಡು ಹೋಗುವುದಲ್ಲದೆ; ಬದುಕಿಲ್ಲದೆ ಬದುಕುವವರ ಬವಣೆಗಳನ್ನು ಮನಮುಟ್ಟುವಂತೆ ದಾಖಲಿಸಿದೆ.

ಈ ಕಾದಂಬರಿಯಲ್ಲಿ ಕ್ಯಾತ, ‘ಅಕ್ಕ’ ದೇವೀರಿಯ ಬಗ್ಗೆ ಹೇಳುತ್ತಾ ತಾನು ಬೆಳೆದು ಬಂದ ಪರಿಸರ; ಅಲ್ಲಿಯ ಅಸಹಾಯಕತೆ, ಇನ್ನೊಬ್ಬರಿಗೆ ಬಲಿಯಾಗುವ ಅನಿವಾರ್ಯತೆ ಎಲ್ಲವನ್ನೂ ಸಹಿಸಿಕೊಂಡು ಮುಂದೊಂದು ದಿನ ಒಳ್ಳೆಯದಾಗಬಹುದೆನ್ನುವ ಆಶಾದಾಯಕ ನಿಲುವನ್ನು ಹೊಂದಿರುವವ.

ಬಾಲ್ಯದ ದಿನಗಳಲ್ಲಿ ದೇವೀರಿಯ ಕಾರ್ಯವೈಖರಿಗಳು ಏನೆಂದು ಅರಿಯದ ಕ್ಯಾತನಿಗೆ ತಾನು ವಯಸ್ಸಿಗೆ ಬಂದಾಗ ಅವಲೋಕನ ನಡೆಸಿದಾಗ ಅವಳು ಯಾವ ಒತ್ತಡಕ್ಕೆ ಸಿಲುಕಿ ಎಂತಹ ಕೆಲಸಕ್ಕೆ ಇಳಿದಿದ್ದಾಳೆನ್ನುವುದು ಅರಿವಾಗುತ್ತಲೇ ಅವಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದರಲ್ಲಿಯೂ ಅವನಿಗೆ ‘ಅಕ್ಕ’ನ ಮೇಲೆ ಪ್ರೀತಿಯೇ ಇದೆ. ಸ್ಲಂ ಏರಿಯಾದಲ್ಲಿ ಬೆಳೆದು ಜೀವನ ಹೋರಾಟದ ಅನಿವಾರ್ಯತೆಯಲ್ಲಿ ದಾರಿ ತಪ್ಪಿಸುವ ಮತ್ತು ಅಡ್ಡ ದಾರಿ ಹಿಡಿಯುವುದಕ್ಕೆ ಪ್ರೇರೇಪಿಸುವ ಕ್ಷುದ್ರ ಶಕ್ತಿಗಳ ನಡುವೆ ಬದುಕಿನ ದಾರಿಯೆನೆಂದು ತಿಳಿಯದೆ ಅದನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಆ ಗಬ್ಬು ನಾತ, ಸೊಳ್ಳೆಗಳು, ರೋಗಗಳು, ವಾಸನೆಗಳಲ್ಲಿಯೇ ಬದುಕು ಸುಖಮಯವಾಗಿರುವುದು ಅಲ್ಲಿಯ ಜನರಿಗೆ.

ದೇವೀರಿ ಕೊಳಕು ದಂಧೆಯಲ್ಲಿ ಸಿಲುಕಿಕೊಂಡಿದ್ದರೂ ಅವಳು ಸಬಲೆ, ಯಾರನ್ನಾದರೂ ಎದುರಿಸಬಲ್ಲ ಧೀರೆ ಅನ್ನುವ ಅಭಿಮಾನದ ಜೊತೆಗೆ ಅವಳು ಲಕ್ಷಣವಾಗಿ ಆಫೀಸಿನಲ್ಲೋ, ಇನ್ಯಾವುದೋ ಕಚೇರಿಯಲ್ಲೋ ದುಡಿದು ಬರುವವಳು ಅಥವಾ ಗಾರೆ ಕೆಲಸಕ್ಕೆ ಹೋಗಿ ಸುಸ್ತಾಗಿ ಬರುವವಳೆನ್ನುವ ಕ್ಯಾತನ ತಿಳುವಳಿಕೆ ಬುಡಮೇಲಾಗುವುದು ಅವನನ್ನು ಸಿಂಗಾರ ಸೆಟ್ಟಿಯ ಮನೆ ಕೆಲಸಕ್ಕೆ ಹಚ್ಚಿ, ರಮಿಸಿ ಅವಳು ಅಟೋ ಹತ್ತಿ ಹೋದ ಬಳಿಕ. ಅದೇ ಕೊನೆಯ ದಿನ, ಮತ್ತೆಂದೂ ಅವನು ಅಕ್ಕನನ್ನು ನೋಡಲಿಲ್ಲ. ಅವಳು ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ಯಾರ ಮನೆಯಲ್ಲಿರುವಳೋ? ಯಾರ ಜೊತೆಗಿರುವಳೋ? ಒಂದೂ ಕ್ಯಾತನಿಗೆ ತಿಳಿದಿಲ್ಲ. ಆದರೆ ಅಕ್ಕನ ಬಗ್ಗೆ ಯೋಚಿಸುತ್ತಲೇ ಇದ್ದಾನೆ.

ಈ ಕಾದಂಬರಿಯಲ್ಲಿ ದೇವೀರಿಯನ್ನು ಕ್ಯಾತನ ಕಣ್ಣಿನಿಂದ ನೋಡುವುದರ ಜೊತೆಗೆ ಅವಳ ಪರಿಸ್ಥಿತಿಯನ್ನು ಅರಿಯಬೇಕಾಗಿರುವುದು ಮುಖ್ಯ. ತಾಯಿ ತಂದೆಯನ್ನು ಕಳೆದುಕೊಂಡ ಬಳಿಕ ತಂದೆಯ ಹೂವಿನ ಅಂಗಡಿಯೂ ಮುಚ್ಚಿ ನಿರ್ಗತಿಕ ಸ್ಥಿತಿ ತಲುಪುವ ಹೊತ್ತಿಗೆ ರಾಮಪ್ಪನವರ ಸಹಾಯದಿಂದ ನರಸಿಂಹ ಮೇಸ್ತ್ರಿಯ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಬದುಕುತ್ತಿರುವಾಗಲೇ ಪದೇ ಪದೇ ಅವಳ ಮನೆಗೆ ಬರುವ ನಾಗ್ರಾಜ ಮತ್ತು ಖಡವಾ ಅವಳ ಬಾಡಿಗಾರ್ಡುಗಳಂತೆ ಕಂಡರೂ, ಅವರೂ ಕೂಡ ದೇವೀರಿಯನ್ನು ಶೋಷಣೆಗೆ ತಳ್ಳುವವರೆ. ಶೋಷಣೆಯ ವಿರುದ್ಧ ದನಿ ಎತ್ತುವ ದೇವೀರಿ ಪರಿಸ್ಥಿತಿಯ ಕೈಗೊಂಬೆಯಾಗಿ ಬೇಡದ ಬದುಕನ್ನು ನೆಚ್ಚಿಕೊಳ್ಳಲೇಬೇಕಾಗುತ್ತದೆ.

ತಟಕ್ಕನೆ ಮನೆ ಕೆಲಸಗಳನ್ನು ಮುಗಿಸಿ ಅಲಂಕರಿಸಿಕೊಂಡು ಎಲ್ಲೋ ಮರೆಯಾಗುವ ಅವಳ ವೃತ್ತಿ ಏನು ಅನ್ನುವುದು ಓದುಗನನ್ನು ಕಾಡುವುದಾದರೂ ಅಲ್ಲಿ ಅವಳ ಹತಾಶೆ, ಸಿಟ್ಟು, ಕೋಪದ ಪ್ರದರ್ಶನವಾಗುವುದು ಕ್ಯಾತನ ಮೇಲೆ. ಅಕ್ಕ ಮುದ್ದಿಸುವುದರ ಜೊತೆಗೆ ಗುದ್ದು ಕೊಡುತ್ತಾಳಾದರೂ ಅವಳ ದಯನೀಯ ಸ್ಥಿತಿಗೆ ಮರುಗುವ ಎಳೆ ಮನಸ್ಸು, ಮುಗ್ಧತೆಯಿಂದ ರಾತ್ರಿ ಮಲಗುವಾಗ ಅವಳ ಬೆಚ್ಚಗಿನ ದೇಹದವನ್ನು ಅಪ್ಪಿಕೊಂಡು ಅವ್ವನ ನೆನಪು ಕಾಡುತ್ತಾ ಮತ್ತದೇ ಮುಗ್ಧತೆಯ ಪ್ರಶ್ನೆಗಳನ್ನು ಕೇಳುವಾಗಲೂ ಎಂತಹ ಕಲ್ಲು ಹೃದಯ ಕೂಡ ಕರಗಬೇಕು. ಇಲ್ಲಿ ರಾಜಕೀಯದ ದುರ್ನಾತಕ್ಕಿಂತಲೂ ಅಸಹಾಯಕ ಜನರ ಕೂಗು ಮಾರ್ದನಿಸುವುದನ್ನು ಗುರುತಿಸಬಹುದು. ರಾಜಕೀಯ ವ್ಯಕ್ತಿಗಳ ಸ್ವಾರ್ಥ ಮತ್ತು ಸ್ಲಂ ಜನರ ಬದುಕಿನ ಅಸಹಾಯಕ ಕೂಗು ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡದು.

ದೇವೀರಿಯ ಆ ಸ್ಥಿತಿಗೆ ರಾಜಕೀಯ ವ್ಯಕ್ತಿಗಳೇ ಕಾರಣವೆನ್ನುವುದು ಸ್ಪಷ್ಟವಾಗುತ್ತದೆ. ನಿಜವಾಗಿಯೂ ದೇವೀರಿಗೆ ತಾನೊಬ್ಬ ನಟಿಯಾಗಬೇಕೆನ್ನುವ ಬಯಕೆಯಿರುತ್ತದೆ. ಆದರೆ ಅವಳು ನಟನೆಗೆ ಇಳಿದರೆ ತಮಗೆ ದಕ್ಕುವುದಿಲ್ಲವೆಂದು ತಿಳಿದು ರಾಮಪ್ಪನೆಂಬ ಪುಢಾರಿ ನಾಗ್ರಾಜ ಮತ್ತು ಖಡವಾರನ್ನು ಅವಳ ಕಾವಲಿಗೆ ಬಿಡುತ್ತಾರೆ. ಅದೇ ರೀತಿ ನರಸಿಂಹ ಮೇಸ್ತ್ರಿಯೂ ಅವಳನ್ನು ದುರುಪಯೋಗ ಪಡಿಸಿಕೊಂಡವ. ಇಂತಹ ವ್ಯಕ್ತಿಗಳ ನಡುವೆ ಅವಳು ಬೆಳೆದು ಕೆಲವೊಮ್ಮೆ ಪ್ರತಿಭಟಿಸುವುದನ್ನು ಕಲಿತುಕೊಂಡವಳು.

ಕ್ಯಾತನಿಗೆ ಅಕ್ಕನ ಮೇಲೆ ಸಿಟ್ಟಿದ್ದರೂ ಅವನಿಗೆ ಖುಷಿ ಕೊಡುವ ಸಂಗತಿಗಳೆಂದರೆ ಸಿನಿಮಾದಲ್ಲಿ ನಟಿಸುವ ಪದ್ದಿ ಮತ್ತು ಆಕೆಯ ಆತ್ಮೀಯತೆ ಹಾಗೂ ಸುಧೀರನ ಗೆಳೆತನ. ಸುಧೀರ ತನಗಿಂತಲೂ ಸುಸ್ಥಿತಿಯಲ್ಲಿರುವವನು ಹಾಗೆಯೇ ಪದ್ದಿ ಸದಾ ಸಿನಿಮಾ ಮಂದಿಯೊಂದಿಗೆ ಬೆರೆಯುತ್ತಾ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವವಳು.

ಒಮ್ಮೆ ರಾಮಪ್ಪನ ಮನೆಗೆ ಹೋಗಿ ಬಾಡಿಗೆ ವಿಷಯ ಮಾತನಾಡಬೇಕಾದ ಕ್ಯಾತ, ದೇವೀರಿ ಹೇಳಿದರೂ ಅಲ್ಲಿ ಹೋಗದೆ ಹೋಗಿದ್ದೇನೆಂದು ಸುಳ್ಳು ಹೇಳುತ್ತಾನೆ. ದೇವೀರಿಗೆ ಅವನು ಸುಳ್ಳು ಹೇಳುವುದು ಮನದಟ್ಟಾಗಿರುತ್ತದೆ. ಅವನನ್ನು ಚೆನ್ನಾಗಿ ಹೊಡೆದು ಬಡಿದು ಮಾಡುವಷ್ಟರಲ್ಲಿ ರಂಗಜೆಟ್ಟಿ ಅವನನ್ನು ಬಿಡಿಸಿಕೊಂಡು ಹೋಗುತ್ತಾನೆ. ಇಷ್ಟಾದರೂ ರಾತ್ರಿ ಹೊತ್ತು ಅನಾಥ ಹುಡುಗ ಕ್ಯಾತ ಓದುವ ನೆಪದಲ್ಲಿ ಪುಸ್ತಕವನ್ನು ಹಿಡಿದುಕೊಂಡು ಕುಳಿತಿರಬೇಕಾದರೆ ದೇವೀರಿ ಶಾಂತವಾದ ದನಿಯಿಂದ ಅವನನ್ನು ಮಲಗುವಂತೆ ಹೇಳುತ್ತಾಳೆ. ಕ್ಯಾತನಿಗೆ ಅಚ್ಚರಿ ಆ ಸಮಯದಲ್ಲಿ ಅವನಾಡುವ ಮಾತುಗಳು ಯಾರನ್ನಾದರೂ ಭಾವುಕನನ್ನಾಗಿ ಮಾಡದಿರದು.

‘ದೇವೀರಿ ದುಪ್ಪಟಿ ಎಳೆದುಕೊಂಡು ಮಲಗಲು ರೆಡಿಯಾದಳು. ಕ್ಯಾತ ಪಾಟಿನ ಚೀಲ ಎಳೆದುಕೊಂಡ. ದೇವೀರಿ ಸುಮ್ಮನೆ ಇದ್ದಳು. ಆದ್ರೂ ಯಾಕೋ ಆಕೆ ಮನಸ್ಸಿನಾಗೆ ಅಳ್ತಿದ್ದಂಗಿತ್ತು. ದೇವೀರಿ ದೀಪ ಆರಿಸಿದಳು. ಸುತ್ತ ಕತ್ತಲು ಸಾರ್. ಬೇಜಾನ್ ಕತ್ತಲು. ಎಲ್ಲೂ ಒಂದು ಚೂರು ಗದ್ಲ ಇಲ್ಲ. ದೇವೀರಿ ಕ್ಯಾತನ್ನ ಮಗುವನ್ನು ಎತ್ತಿಕಂಡಂಗೆ ಉಸೇವಕ್ಕೆ ಎತ್ತಿಕೊಂಡು ಪಕ್ಕಕ್ಕೆ ಮಲಗಿಸಿಕೊಂಡಳು. ಹಂಗೇ ಬರ್ತಿದ್ದ ನಿದ್ರೆ ಹೊಂಟೋಯ್ತು ಸಾರ್, ನಮ್ಮವ್ವ ನನ್ನ ಮಲಗಿಸಿಕಂಡಂಗೆ ಸೊಂಟದ ಸುತ್ತ ಕೈ ಹಾಕಿ ಎಳಕೊಂಡು ಎದೆಗೆ ಅಪ್ಪಿಕೊಂಡ್ಳು ದೇವೀರಿ. ಬೆಚ್ಚಗೆ. ಎಷ್ಟು ಬೆಚ್ಚಗೆ, ಮೆತ್ತಗಿದ್ಲು ದೇವೀರಿ. ನಂಗೆ ತಡಿಯಾಕಾಗ್ದಷ್ಟು ಅಳು ಬಂತು. ಅತ್ತರೆ ಮತ್ತೆ ದೊಡ್ಡ ಗಲಾಟೆ ಆಗ್ತದೆ ಅಂತ ತಡಕಂಡೆ. ಆದರೆ ದೇವೀರಿ ಅಳಾಕೆ ಶುರುಮಾಡಿದ್ಲು ಸಾರ್.’ ಇಡೀ ಪ್ಯಾರಾದಲ್ಲಿ ದೇವೀರಿಯ ನೋವು ಓದುಗನನ್ನು ತಟ್ಟುವುದಲ್ಲದೆ ಒಬ್ಬ ಅಸಹಾಯಕ ಹುಡುಗನ ಮುಗ್ಧತೆಯನ್ನು ಬಿಚ್ಚಿಟ್ಟು ಭಾವುಕರನ್ನಾಗಿಸುತ್ತದೆ. ಇಂತಹ ಎರಡು ಮೂರು ಪ್ರಸಂಗಗಳು ಕಾದಂಬರಿಯಲ್ಲಿ ಬರುತ್ತವಾದರೂ ಅಲ್ಲಿಯೇ ಕ್ಯಾತನ ಪ್ರವೇಶವಾಗುತ್ತಲೆ ನಮ್ಮನ್ನು ವಾಸ್ತವಕ್ಕೆ ತರುತ್ತದೆ.

ಇಂತಹ ಅಪರೂಪದ ಕಾದಂಬರಿಯನ್ನು ಓದುವಾಗ ಸ್ಲಂ ಜನರ ಆಶಾದಾಯಕ ನಿರೀಕ್ಷೆಯನ್ನು ನೆನಪಿಸುವ ಘಟನೆ ನೆನಪಾಗುತ್ತದೆ. ಯಾರೇ ಆಗಲಿ ಕ್ಯಾಮರಾ ಹಿಡಿದುಕೊಂಡು ಸ್ಲಂ ಏರಿಯಾದಲ್ಲಿ ನಡೆದರೆ ಸಾಕು ಅವನು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಇತ್ತೀಚೆಗೆ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ ಗೆಳೆಯನೊಬ್ಬ ಹೇಳಿದ ಮಾತುಗಳು ನೆನಪಾಗುತ್ತವೆ. ಅವನು ಸುಮ್ಮನೆ ಸ್ಲಂ ಏರಿಯಾದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾಗ ಅಲ್ಲಿಯ ಮಹಿಳೆಯರೆಲ್ಲ ಸೇರಿ ಅವನು ಪತ್ರಿಕೆಯವನೆಂದು ತಿಳಿದು, ‘ಸಾರ್ ಇಲ್ಲಿ ನಮಗೆ ಮೂಲಭೂತ ಸೌಕರ್ಯಗಳೇ ಇಲ್ಲ ಸಾರ್, ನಮ್ಮ ಗುಡುಸ್ಲು ನೋಡಿ ಸಾರ್. ನೀವೇನಾದರೂ ಪೇಪರ್ನಲ್ಲಿ ಹಾಕಿಸಿಬಿಟ್ರೆ ನಮ್ಮ ಬಗ್ಗೆ ಯಾರಿಗಾದ್ರೂ ಕನಿಕರ ಮೂಡಬಹುದು, ಸಾರ್’ ಅಂತ ಅಲವತ್ತುಕೊಂಡರಂತೆ. ಈ ರೀತಿಯ ನಿರ್ಲಕ್ಷಕ್ಕೊಳಗಾಗಿರುವ ಅದೆಷ್ಟೋ ಏರಿಯಾಗಳಲ್ಲಿ ಕ್ಯಾತನಂತಹ ಮುಗ್ಧ ಹುಡುಗರು, ದೇವೀರಿಯಂತಹ ಶೋಷಣೆಗೊಳಗಾದ ಹೆಣ್ಣುಗಳು ಇದ್ದಾರೋ. ಆದರೆ ಅವರ ಬವಣೆಗಳು ಅವರಿಗೆ...

ಈ ನಿಟ್ಟಿನಲ್ಲಿ ಲಂಕೇಶ್ ಅವರು ‘ಅಕ್ಕ’ ಕಾದಂಬರಿಯಲ್ಲಿ ರಾಜಕೀಯ ಹುನ್ನಾರವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಬಹಳ ಸಮಯದ ಬಳಿಕ ಒಂದು ಒಳ್ಳೆಯ ಮತ್ತು ನೂತನ ಶೈಲಿಯ ಕಾದಂಬರಿಯನ್ನು ಓದಿದ ಅನುಭವವಾಯಿತು. ಅನಾಥಾಶ್ರಮದ ಉಸಿರುಕಟ್ಟಿಸುವ ವಾತಾವರಣವನ್ನು ನಿರಾಕರಿಸುತ್ತಲೇ, ತನ್ನ ಹಟ್ಟಿಯ ನಾತವನ್ನು ನೆನಪಿಸಿಕೊಳ್ಳುವ ಕ್ಯಾತ ಈಗಲೂ ಕಾಡುತ್ತಲೇ ಇರುತ್ತಾನೆ. ಯಾರಿಗೂ, ಕೊನೆಗೆ ಕ್ಯಾತನಿಗೂ ಹೇಳದೆ ರಿಕ್ಷಾ ಏರಿದ ದೇವೀರಿ ಎಲ್ಲಿಯೋ ನೋವು ಅನುಭವಿಸುತ್ತಿದ್ದಾಳೆ ಅನಿಸುತ್ತದೆ. ‘ಅಕ್ಕ’ ಓದಲೇಬೇಕಾದ ಒಂದು ಒಳ್ಳೆಯ ಕಾದಂಬರಿ.

Read more!

Wednesday, March 16, 2011

ಸುನಂದಾ ಪ್ರಕಾಶ ಕಡಮೆ ಅವರ ‘ಗಾಂಧಿ ಚಿತ್ರದ ನೋಟು’


ಸುನಂದಾ ಪ್ರಕಾಶ ಕಡಮೆಯವರ ‘ಗಾಂಧಿ ಚಿತ್ರದ ನೋಟು’ ಕಥಾ ಸಂಕಲನದ ಬಹುತೇಕ ಕಥೆಗಳು ಕಥನಗಾರಿಕೆಯ ಸೃಜನಶೀಲತೆಯನ್ನು ಅನಾವರಣಗೊಳಿಸುತ್ತವೆ. ಇಲ್ಲಿಯ ಒಂದೊಂದು ಕಥೆಯು ಒಂದೊಂದು ಮುಖಿಯಾಗಿದ್ದು; ಬದುಕಿನಲ್ಲಿ ಕಳೆದುಕೊಳ್ಳುವ ತಲ್ಲಣಗಳನ್ನು ಬಹಳ ಮನೋಜ್ಞವಾಗಿ ಬಿಂಬಿಸುತ್ತವೆ. ಎಲ್ಲವೂ ಇದ್ದು ಎಲ್ಲೋ ಒಂದು ಕಡೆ ಏನೂ ಇಲ್ಲದೆ ಹೋಗುವ ಸಂದರ್ಭಗಳಲ್ಲಿ ಸಂಬಂಧಗಳು, ಸಮಸ್ಯೆಗಳು ಎದುರಾಗುವ ಮತ್ತು ಸೋಲದೆ ಪರಿಹಾರವನ್ನು ಕಾಣುವ ಪಾತ್ರಗಳು ಇಲ್ಲಿಯ ಕಥೆಗಳಲ್ಲಿ ಎದ್ದು ಕಾಣುತ್ತದೆ.

‘ಸುನಂದಾ ಅವರ ಕಥೆಗಳ ಶಕ್ತಿ ಇರುವುದು ಅವುಗಳ ನಿರೂಪಣೆಯಲ್ಲಿರುವ ನಿಸ್ಪ್ರಹತೆಯಲ್ಲಿ’ ಇದು ಮುನ್ನುಡಿಯಲ್ಲಿ ವಿವೇಕ ಶಾನಭಾಗ ಅವರ ಮಾತು. ಇದು ಸತ್ಯ. ಪಾತ್ರಗಳ ಸ್ವಚ್ಛಂದ ಚಿತ್ರಣ ಕಳೆದು ಹೋದ ಬದುಕಿನ ತುಣುಕುಗಳಾಗಿ ಮತ್ತು ನಮ್ಮ ಸುತ್ತ ಮುತ್ತಲಲ್ಲಿಯೇ ಆಗಿ ಹೋದಷ್ಟು ಆಪ್ತವಾಗುತ್ತಾ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ಸುನಂದಾರವರ ಕಥೆಗಳಲ್ಲಿಯ ಇನ್ನೊಂದು ವಿಶೇಷತೆಯೆಂದರೆ ಎಲ್ಲೂ ಎಲ್ಲವನ್ನೂ ಬಿಚ್ಚಿಡದೆ ಕೆಲವನ್ನು ಓದುಗರಿಗಾಗಿ ಉಳಿಸಿ ಬಿಡುವ ಸೂಕ್ಷ್ಮತೆಗಳು ಹಲವು. ಇವು ಓದುಗನ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲವು ಮತು ಚಿಂತನೆಗೆ ಹಚ್ಚಬಲ್ಲವು. ಆದ್ದರಿಂದಾಗಿಯೇ ಲೇಖಕಿ ಇಲ್ಲಿ ವಿಭಿನ್ನರಾಗಿ ಉಳಿಯುತ್ತಾರೆ.

ಈ ಸಂಕಲನದ ಕಥೆಗಳೆಲ್ಲವೂ ಎಲ್ಲೋ ಘಟಿಸಿದಷ್ಟು ವಾಸ್ತವತೆಯನ್ನು ಬಿಂಬಿಸಿದರೂ ಬಹುತೇಕ ಕಥೆಗಳಲ್ಲಿ ಒಪ್ಪಿಕೊಳ್ಳಬಹುದಾದ ನೈಜತೆಗಳು ಕಥೆಯನ್ನು ಕಥೆಯಾಗಿಯೇ ಉಳಿಸದೆ ಬೇರೊಂದು ದೃಷ್ಟಿಕೋನದಲ್ಲಿ ಮರುವಿಶ್ಲೇಷಣೆಗೆ ಒಳಪಡಿಸುತ್ತವೆ.

ಇಡೀ ಸಂಕಲನದಲ್ಲಿ ಬಹುವಾಗಿ ಕಾಡುವ ಕಥೆ ‘ತಂಕಿ’. ಮೌನವಾಗಿ ನೋವುಗಳನ್ನೆಲ್ಲಾ ತನ್ನೊಳಗೆಬಚ್ಚಿಟ್ಟುಕೊಂಡು ವಿಷಾದದೆಡೆಗೆ ನಡೆಯುವ ತಂಕಿಯ ಅಕ್ಕ ಒಂದು ಜೀವಂತ ಗೊಂಬೆ ಮಾತ್ರ. ಅವಳ ಭಾವನೆಗಳು, ಆಕಾಂಕ್ಷೆಗಳನ್ನು ಹತ್ತಿಕ್ಕಿಕೊಂಡು ತನ್ನ ಸುತ್ತ ಒಂದು ಅವ್ಯಕ್ತ ಬಲೆಯನ್ನು ನೇಯ್ದು ನಾಳೆಗಳಿಲ್ಲದ ಬದುಕಿನಲ್ಲಿ, ಬದುಕನ್ನು ಸವೆಸುವುದು ಒಂದು ಮೂಕ ರೋಧನವಾಗುಳಿಯುತ್ತದೆ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆಯೆನ್ನುವಂತೆ ವಾಸಿಯಾಗದ ಕಾಯಿಲೆಗೆ ತುತ್ತಾಗುವ ಶಂಕರ (ತಂಕಿ) ತನ್ನ ಬದುಕಿನ ಕೊನೆ ತಿಳಿದಿದ್ದರೂ ಲವಲವಿಕೆಯಿಂದ ಬದುಕುವವನು. ಅಕ್ಕನ ಹತಾಶೆ, ಅಮ್ಮನ ಕನಿಕರವನ್ನು ಉಣ್ಣುತ್ತಲೇ ನಿಜವನ್ನು ಮರೆತು ಬದುಕುವವನು.

‘ಪತ್ರೊಡೆ’ ಕಥೆಯಲ್ಲಿ ಸಾಂಪ್ರದಾಯಿಕ ಎಳೆಯೊಂದನ್ನು ಮತ್ತು ರೀತಿರಿವಾಜುಗಳನ್ನು ತಿಳಿಸುತ್ತಾ ಸತ್ತ ನಂತರದ ಸೂಕ್ಷ್ಮ ಸಂಬಂಧವೊಂದನ್ನು ಕಾಣಿಸುತ್ತಾ, ಅಲ್ಲಿರುವ ಪ್ರೀತಿ, ದ್ವೇಷಗಳನ್ನು ತಿಳಿಸುತ್ತಾಸಾಗುವ ಕಥೆಯಲ್ಲಿ ತನ್ನಾಸೆಗಳನ್ನು ಪೂರೈಸಿಕೊಳ್ಳುವ ಯಮುನಜ್ಜಿಯ ಪಾತ್ರ ಎರಡು ತಲೆಮಾರುಗಳ ನಡುವಿನ ಒಂದು ಕೊಂಡಿಯಂತೆ ತೋರಿದರೆ ಹೆಚ್ಚಲ್ಲ.

ಸಂಸಾರದ ಜಂಜಡಗಳನ್ನು ಪರಿಣಾಮಕಾರಿಯಾಗಿ ಗುರುತಿಸಿಕೊಂಡು ನರೆದಿರುವ ಕಥೆ ‘ಚಿನ್ನಿದಾಂಡು’. ಎಲ್ಲರೊಂದಿಗಿದ್ದು ಪರಕೀಯವಾಗಿ ಉಳಿದು ಹೋಗುವ ಒಂದು ಸಂಬಂಧ; ಕಣ್ಣಂಚಿನಲ್ಲಿಯೇ ಆಸೆಗಳನ್ನು ಕಟ್ಟಿಕೊಂಡು ಅಲ್ಲಿರಲಾರದೆ ಎಲ್ಲೂ ಹೋಗಲಾರದ ಸಂದಿಗ್ಧತೆಯಲ್ಲಿ ತೊಳಲಾಡಿ ಕೊನೆಗೂ ಒಂದು ರೀತಿಯಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡು ಆವಜ್ಞೆಗೆ ಒಳಗಾಗಿಯೇ ನಿಂತು ಬಿಡುತ್ತದೆ.

ಹೊಸ ಬಗೆಯ ನಿರೂಪಣೆಯ ಕಥನ ‘ಚೌಕ ಮತ್ತು ಗೋಲ’. ಯಾವುದು ಹೇಗಿದ್ದರೆ ಒಳ್ಳೆಯದು ಮತ್ತು ಹೇಗಿರಬಾರದೆನ್ನುವ ಎರಡು ಸೂಕ್ಷ್ಮಗಳನ್ನು ಬರೀಯ ಎರಡು ಆಕೃತಿಗಳಲ್ಲಿ ಬಿಂಬಿಸುವ ಕಥೆಯಲ್ಲಿ ಹೊಸತನವಿದೆ. ಇಲ್ಲಿಯ ಹುಡುಕಾಟವಿರುವುದು ಚೌಕ ಮತ್ತು ಗೋಲಗಳೂ ಯಾವುವು ಅನ್ನುವಂತದ್ದು. ಇದೇ ರೀತಿಯಲ್ಲಿ ‘ಕೋಲು ಸಂಪಿಗೆ ಮರ’; ‘ಅಪ್ಪಿ’; ‘ಕಾಯದೊಳಗಣ ಆತ್ಮ’ ಕಥೆಗಳು ಕೂಡ ನಾವಿನ್ಯ ಶೈಲಿಯನ್ನು ಹೊಂದಿವೆ.

‘ಹೀಗೆ ಕಥೆಯೆಂಬ ಒಂದು ಕಥೆಯು ನನ್ನನ್ನೇ ನಡುಗಿಸಿ, ಆಕಾಶಕ್ಕೆ ತಳ್ಳಿ, ಹಾಗೆ ಏಕಾಂಗಿಯಾಗಿ ಆ ಒಮ್ದು ದಡಕ್ಕೆ ಒಯ್ದು ನಿಲ್ಲಿಸುವ ಮೊದಲು ನಾನು ಈ ಕಥೆ ಕಟ್ಟುವ ದುಶ್ಚಟದಿಂದ ಹೊರಬರಬೇಕು’ ಇದು ‘ಕೋಲು ಸಂಪಿಗೆ ಮರ’ದ ಸಾಲುಗಳು. ಅವ್ಯಕ್ತವಾದ ಬದುಕಿನ ಕ್ಷಣಗಳನ್ನು ವಿಭಿನ್ನ ಶೈಲಿಯಲ್ಲಿ ಬರೆದ ಕಥೆ ಇದು. ಆಧುನಿಕ ಜೀವನ ಶೈಲಿಯಲ್ಲಿ ಬರಡಾಗುವ ಬಸಿರ ತುಣುಕುಗಳ ಅವ್ಯವಸ್ಥೆಯನ್ನು ಮತ್ತು ತಪ್ಪಿಸಿಕೊಳ್ಳಲಾಗದ ಅನಿವಾರ್ಯತೆಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಒಂದು ಮುಗ್ಧ ಹುಡುಗಿಯ ಪಾತ್ರ ಚಿತ್ರಣದ ಮೂಲಕ ತೆರೆದಿಡುವ ಕಥೆಯೆ ‘ಅಪ್ಪಿ’. ಆಂತರಿಕ ತುಮುಲಗಳನ್ನು ಪರಾಮರ್ಶಿಸುವ ಕಥೆ, ‘ಕಾಯದೊಳಗಣ ಆತ್ಮ’ ಕೇವಲ ಒಂದು ರೀತಿಯ ವ್ಯಾಕುಲತೆ ಮಾತ್ರವಲ್ಲ ಬದುಕಿನಲ್ಲಿ ಆಗು ಹೋಗುಗಳನ್ನು ಕೂಡ ಉದಾತ್ತವಾಗಿ ಚಿತ್ರಿಸಿದೆ.

ಮಾನವ ಸಂಬಂಧಗಳು ನೈಜ್ಯ ಅಂತ:ಕರಣದ ಮೂಲಕ ಭಾವನಾತ್ಮಕ ಸಂಬಂಧಗಳನ್ನು ಬೆಸೆದುಕೊಂಡು ಬದುಕುತ್ತಿರುತ್ತವೆ. ಅಂತಹ ಸಂಬಂಧದೊಳಗೆ ತನ್ನ ತಾಯಿಯನ್ನು ಹುಡುಕುವ ಮಗಳೊಬ್ಬಳಿಗೆ ತಾನೇ ತಾಯಿಯಾಗಿ ಉಳಿಯುವ ಮಲತಾಯಿಯ ಅಂತ:ಕರಣ ಮತ್ತು ಮಗಳ ಭಾವದೀಪ್ತಿ, ‘ನಿನ್ನದೊಂದು ನೋಟ ಬೇಕು’ ಕಥೆಯಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಹಳದಿ ಸೀರೆಯುಟ್ಟ ತಾಯಿಯಂದಿರೆಲ್ಲಾ ತನ್ನ ಅಮ್ಮನ ಹಾಗೆ ಕಾಣುವ ಚಿನ್ನುಗೆ ಕೊನೆಗೂ ಹಳದಿಸೀರೆಯುಟ್ಟ ಮಲತಾಯಿ ಕೂಡ ಅಮ್ಮನಂತೆ ಕಾಣುವುದು ಈ ಕಥೆಯ ತಾಂತ್ರಿಕತೆಯೂ ಹೌದು. ಇಂತಹುದೇ ಇನ್ನೊಂದು ಹುಡುಕಾಟದ ಕಥೆ, ‘ನನ್ನ ಪೊರೆವ ತೊಟ್ಟಿಲು’. ಬಾಲ್ಯದ ನೆನಪುಗಳನ್ನು ಬೆಚ್ಚಗೆ ಬಿಚ್ಚಿಡುವ ‘ಮಳೆ ಹೊಯ್ದು ನಿಂತ ಕ್ಷಣ’ ಕಥೆಯಲ್ಲಿ ಹೆಣ್ಣೊಬ್ಬಳು ಬದುಕಿನಲ್ಲಿ ಜವಾಬ್ದಾರಿಗಳ ಹೊರೆಯನ್ನು ಹೊತ್ತು ಏಗಬೇಕಾದ ಅನಿವಾರ್ಯತೆಯನ್ನು ಹೇಳುತ್ತಾ, ಸಮಾಜದಲ್ಲಿ ಗಂಡು-ಹೆಣ್ಣಿನ ಪಾತ್ರ, ಜವಾಬ್ದಾರಿಗಳ ಬಗೆಯೂ ತಿಳಿಸುತ್ತದೆ.

ಜೇಡವನ್ನು ಉಪಮೆಯವಾಗಿಟ್ಟುಕೊಂಡು ರಚಿಸಿರುವ ಕಥೆ ‘ಜೇಡ ಬಲೆ ನೇಯುತಿದೆ’. ಇದು ಗಂಡ ಹೆಂಡಿರ ಸಂಬಂಧದ ಕಥೆಯಾದರೂ ಹೊರ ಜಗತ್ತಿನೊಂದಿಗೆ ವ್ಯವಹರಿಸುವ ಗಂಡು ಮತ್ತು ಒಳಜಗತ್ತಿನಲ್ಲಿ ಬದುಕು ಸವೆಸುವ ಹೆಣ್ಣಿನ ಸಂಬಂಧವನ್ನು ಬಿಚ್ಚಿಡುವ ಕಥೆ. ಮಿತ್ರಕ್ಕನ ಪಾತ್ರ ಚಿತ್ರಣ ಮನಸ್ಸಿನಲ್ಲಿ ಉಳಿದು ಬಿಡುತ್ತದೆ.

‘ಜರಿಯಂಚಿನ ಫ್ರಾಕು’ ಕಥೆಯಲ್ಲಿ ಶ್ರಮಜೀವಿಯೊಬ್ಬನ ಹೋರಾಟದ ದನಿಯಿದೆ. ತನ್ನ ಶ್ರಮದಿಂದ ಮೇಲೆ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳುವ ಹೊತ್ತಿಗೆ ಸಾಮಾಜಿಕ ವ್ಯವಸ್ಥೆಯೊಳಗೆ ನಲುಗಿ ತನಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯತೆಯಲ್ಲಿ ಬಂದ ಕೆಲಸವನ್ನು ಒಪ್ಪಿಕೊಳ್ಳುತ್ತಾ, ತನ್ನ ಮಗಳಿಗಾಗಿ ಹೊಲಿಯಲು ತಂದ ಜರಿ ಮಾತ್ರ ಹಾಗೆಯೇ ಉಳಿದು ನೋವುಣಿಸುತ್ತದೆ. ನಗರದ ಅಭಿವೃದ್ಧಿಯಲ್ಲಿ ಬದುಕು (ಹೊಲಿಗೆ ಮೆಷಿನ್ನು) ಕಳೆದುಕೊಳ್ಳುವ ವಾಸ್ತವ ಚಿತ್ರಣವನ್ನು ನಿರೂಪಿಸುತ್ತದೆ.

ಈ ಸಂಕಲನದ ಕೊನೆಯ ಕಥೆ ‘ಗಾಂಧಿ ಚಿತ್ರದ ನೋಟು’; ಎಷ್ಟೇ ಪ್ರಾಮಾಣಿಕ ವ್ಯಕ್ತಿಯಾದರೂ ಹಣದ ವಿಷಯದಲ್ಲಿ ಎಂತಹವನ ಮನಸ್ಸನ್ನೂ ಕೂಡ ಒಮ್ಮೆ ಸ್ವಾರ್ಥಿಯನ್ನಾಗಿಸುತ್ತದೆ. ಹಾಗೆ ಸ್ವಾರ್ಥದಿಂದ ಎಗರಿಸಿದ ಹಣವನ್ನು ಹಿಂತಿರುಗಿಸುವ ಕೆಲಸದಾಕೆಯ ಪ್ರಾಮಾಣಿಕತೆಯು ಅವಳನ್ನು ತುಚ್ಛಿಕರಿಸಿ ‘ಕ್ಷಮೆ’ ನೀಡದೆ ಆರೋಪದ ಹಣೆಪಟ್ಟಿಯನ್ನು ಕಟ್ಟುತ್ತದೆ. ಇಲ್ಲಿ ಅಸಹಾಯಕ ಪಾತ್ರಗಳು ಕೆಲಸದಾಕೆಯ ಮೇಲೆ ಕನಿಕರ ತೋರಿಸುತ್ತವಾದರೂ ವ್ಯಂಗ್ಯದ ದನಿಯೊಂದು ಸದಾ ಅವಳನ್ನು ಕುಕ್ಕುತ್ತಲೇ ಇರುತ್ತದೆ.

ಸುನಂದಾರವರು ತಮ್ಮ ಕಥಾ ಪಾತ್ರಗಳ ಮೂಲಕ ಬದುಕಿನ ಸೂಕ್ಷ್ಮತೆಯನ್ನು ಮನಮುಟ್ಟುವಂತೆ ಬರೆದಿರುವುದು ಶ್ಲಾಘನೀಯ. ಇಲ್ಲಿಯ ಕಥನಗಳನ್ನು ಒಮ್ಮೆಯಾದರೂ ಓದಿಯೇ ಆಸ್ವಾದಿಸಬೇಕು.

Read more!

Thursday, March 3, 2011

ಕೊರೆಲ್


ವಿಶ್ವವಿಖ್ಯಾತ ಬಂಗಾಲಿ ಕಾದಂಬರಿಕಾರ ಶರಚ್ಚಂದ್ರ ಚಟರ್ಜಿ (ಶರತ್ ಚಂದ್ರ ಚಟ್ಟೋಪಾಧ್ಯಾಯ) ಯವರ ಕಾದಂಬರಿ ‘ಕೊರೆಲ್’ ಸರಳ, ಸುಂದರ ಕಥಾವಸ್ತುವುಳ್ಳ ಕೃತಿ. ಕೊರೆಲ್ ಲಂಡನ್ ಸಮೀಪದ ಒಂದು ಊರಿನ ಹೆಸರು. ಈ ಕಾದಂಬರಿಯ ಕಾಲ, ಆಗಿನ್ನೂ ಬರ್ಮಾ ಬ್ರಿಟಿಷರ ಸಂಸ್ಥಾನಕ್ಕೆ ಒಳಪಟ್ಟಿರಲಿಲ್ಲ. ಆ ಸಮಯದಲ್ಲಿ ನಡೆಯುವ ಒಂದು ಘಟನೆಯೇ ಇಲ್ಲಿ ಮುಖ್ಯ ಕಥನಕ. ಎರಡು ಕುಟುಂಬಗಳ ಎರಡನೆ ತಲೆಮಾರಿನಲ್ಲಿಯ ರಾಗ-ದ್ವೇಷದಂತೆ ಕಂಡರೂ ಆ ಕುಟುಂಬಗಳ ಸಂಘರ್ಷ, ಕಲಹಗಳು ಇಲ್ಲಿ ಮುಖ್ಯವಾಗಿರುವುದಿಲ್ಲ."

ಇಲ್ಲಿ ಇಬ್ಬರು ನಿವೃತ್ತ ಸೈನಿಕರು ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಅಟ್ಟಲಿಕೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಅವರಿಬ್ಬರೂ ಸಂಸಾರಸ್ಥರಾಗಿದ್ದು, ಸುಂದರ ಜೀವನ ಅವರದ್ದು. ಒಬ್ಬನಿಗೆ ಲಿವೋ ಅನ್ನುವ ಒಂದು ಗಂಡು ಮಗು, ಮತ್ತೊಬ್ಬನಿಗೆ ಮೇರಿ ಅನ್ನುವ ಹೆಣ್ಣು ಮಗುವಿರುತ್ತದೆ. ಲಿವೋನ ತಾಯಿ ಅಸ್ವಸ್ಥದಿಂದ ಮರಣಿಸಿದ ಬಳಿಕ ಆತನನ್ನು ಮೇರಿಯ ತಾಯಿಯು ಬಹಳ ಕಾಳಜಿಯಿಂದ ಬೆಳೆಸುತ್ತಾಳೆ. ಪತ್ನಿ ವಿಯೋಗದಿಂದ ಲಿವೋನ ತಂದೆ ಜೂಜಾಟಕ್ಕೆ ಇಳಿದು ಆಸ್ತಿಯನ್ನೆಲ್ಲಾ ಕಳೆದುಕೊಂಡು ಕೊನೆಗೆ ಮನೆಯನ್ನು ಮೇರಿಯ ತಂದೆಯ ಬಳಿ ಅಡವಿಡುತ್ತಾನೆ. ಹುಟ್ಟಿನಿಂದ ಬಡವನಲ್ಲವಾದರೂ ಲಿವೋ ಬಡತನಕ್ಕೆ ಸಿಲುಕುತ್ತಾನೆ. ಆತ ಸ್ವಾಭಿಮಾನಿ. ತಂದೆಯ ಸಾಲದ ಹೊರೆಯಿದ್ದರೂ ಅದನ್ನು ತೀರಿಸಬೇಕೆನ್ನುವ ದೃಢ ನಿರ್ಧಾರವಿರುವವನು.

ಬದುಕು ಒಂದೇ ತೆರನಾಗಿರುವುದಿಲ್ಲ. ಕಾಲಕ್ರಮೇಣ ಲಿವೋನಂತೆಯೇ ಮೇರಿಯೂ ಕೂಡ ತಂದೆ- ತಾಯಿಯರನ್ನು ಕಳೆದುಕೊಂಡು ಅನಾಥಳಾಗುತ್ತಾಳೆ. ಲಿವೋ ಅವಳನ್ನು ಸಾಂತ್ವನಿಸುತ್ತಾನೆ.

ಆದರೆ ಲಿವೋನಿಗೆ ತಾನೊಬ್ಬ ಸಾಲಗಾರ; ತನ್ನ ಜೀವಿತದಲ್ಲಿ ಮೇರಿಯ ಸಾಲವನ್ನು ತೀರಿಸಿ ಋಣಮುಕ್ತನಾಗಬೇಕೆಂದು ಬಯಸುತ್ತಾನೆ. ಮೇರಿಯಾದರೂ ಶ್ರೀಮಂತಿಕೆಯಿಂದ ಮತ್ತು ಚೆಲುವಿನಿಂದ ರಾರಾಜಿಸುತ್ತಿರುತ್ತಾಳೆ. ಲಿವೋನೊಳಗಿರುವ ಕೀಳರಿಮೆಯೋ ಅಥವಾ ತಾಳ್ಮೆಯೋ ಅವನನ್ನು ಮೇರಿಯಿಂದ ದೂರವಿರುವಂತೆ ಮಾಡುತ್ತದೆ. ಮೇರಿಯಾದರೂ ಸ್ವತಂತ್ರಳು ಮತ್ತು ಅವಳಿಗೆ ಬೇಕಾದ ರೀತಿಯಲ್ಲಿ ಬದುಕುವವಳು. ಬರವಣಿಗೆಯ ಹುಚ್ಚು ಬೆಳೆಸಿಕೊಂಡ ಲಿವೋಗೆ ಅವಳ ಸ್ವಾತಂತ್ರ್ಯ ಮತ್ತು ಸ್ವಚಂದದ ಬದುಕು ಎಲ್ಲೋ ದಾರಿ ತಪ್ಪುತ್ತಿದೆಯೆಂದು ತಿಳಿಯುತ್ತದೆ. ಮೇರಿ ಒಮ್ಮೆ ಮಿತಿಮೀರಿ ಕುಡಿದು ಗೆಳೆಯರ ಜೊತೆಗೆ ಪಿಯಾನೋ ನುಡಿಸುತ್ತಾ ಇಡೀ ರಾತ್ರಿ ಕಳೆಯುವಾಗ ಲಿವೋ ಅವಳಿಗೆ ಬುದ್ಧಿಮಾತು ಹೇಳುತ್ತಾನೆ.

ಸುಖದ ದಾರಿಯನ್ನು ಸವೆಸಿಕೊಂಡ ಮೇರಿಗಾದರೂ ಲಿವೋನ ಬುದ್ಧಿವಾದ ಹೊರೆಯೆನಿಸಿ ಅವನನ್ನು ಅವಮಾನಿಸಿ, ತಿರಸ್ಕರಿಸುತ್ತಾಳೆ. ಅದಲ್ಲದೆ, ಒಳಗೊಳಗೆ ದ್ವೇಷದ ಕಿಚ್ಚನ್ನು ಹೊತ್ತಿಸಿಕೊಳ್ಳುತ್ತಾಳೆ. ಅವಳ ಉದ್ದೇಶವೇನಿದೆಯೆಂದರೆ ಹೇಗಾದರೂ ಸರಿಯೇ ಲಿವೋ ಅವಳಿಂದ ಅವಮಾನಿತನಾಗಬೇಕೆಂದು ಕಾಯುತ್ತಿರುತ್ತಾಳೆ.

ಲಿವೋ ಬಹಳ ತಾಳ್ಮೆಯ ಮತ್ತು ಸಹನಾಶೀಲ ವ್ಯಕ್ತಿತ್ವದವನು. ಮೇರಿಯ ಅಪಾರ್ಥವನ್ನು ಅರ್ಥೈಸಿಕೊಂಡು ಅವಳ ಮನೆಗೆ ಬಂದು ಹೋಗುವವರ ಗದ್ದಲಗಳನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಅವಳಿಗೆ ಬುದ್ಧಿವಾದ ಹೇಳುವುದು ಕೂಡ ನಿಶ್ಪ್ರಯೋಜಕವೆಂದು ತಿಳಿಯುತ್ತಾನೆ. ಆದರೆ ಅವಳು ಮರುದಿನ ಲಿವೋನ ಮನೆಗೆ ಬಂದು ಅವನನ್ನು ಕರೆಯುತ್ತಾಳೆ. ಲಿವೋ ಅವಳು ಕುಡಿದು ನಶೆ ಏರಿಸಿಕೊಂಡಿರುವುದನ್ನು ಗಮನಿಸಿ, ಕುಡಿಯುವುದನ್ನು ಕಡಿಮೆ ಮಾಡಬೇಕೆಂದು ಅವಳನ್ನು ಕೇಳುತ್ತಾನೆ. ಇದರಿಂದ ಕುಪಿತಳಾದ ಮೇರಿಯು ತಾನು ಕುಡಿದಿಲ್ಲವೆಂದು ವಾದಿಸುತ್ತಾಳೆ. ಆಗ ಲಿವೋ ಅವಳನ್ನು ಸುಧಾರಿಸಿಕೊ, ಇಲ್ಲ ಮನೆಗೆ ಹೋಗು ಎಂದು ಕಾಳಜಿಯಿಂದ ಹೇಳುತ್ತಾನೆ. ಇದರಿಂದ ಅವಮಾನಿತಳಾದ ಅವಳು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಹಗೆ ಸಾಧಿಸುವಂತೆ ಹಿಂತಿರುಗುತ್ತಾಳೆ.

ಹೀಗೆ ಮುಂದೊಂದು ದಿನ ತನ್ನ ಹುಟ್ಟು ಹಬ್ಬದ ದಿನದಂದು ಒಬ್ಬ ಜಾದೂಗಾರನನ್ನು ಕರೆಸಿ, ಅವನಿಂದ ಜಾದೂ ಪ್ರದರ್ಶನವನ್ನು ನಡೆಸಿಕೊಡುವಂತೆ ಕೋರುತ್ತಾಳೆ. ಆದರೆ ಆತ ಆ ದಿನ ಬರದೆ ಕೈಕೊಡುತ್ತಾನೆ. ಮೇರಿ ಅವಮಾನಿತಳಾಗಿ ಅಳುತ್ತಾಳೆ. ಈ ವಿಷಯ ತಿಳಿದ ಲಿವೋ ಅವಳ ಮನೆಗೆ ಬಂದು ಪಿಯಾನೋ ನುಡಿಸಿ ಸೇರಿದವರನ್ನು ರಂಜಿಸುತ್ತಾನೆ. ಆವರೆಗೆ ಅವಳಲ್ಲಿದ್ದ ದ್ವೇಷವೆಲ್ಲ ಕರಗಿ ಲಿವೋನನ್ನು ಅಪ್ಪಿ ಹಿಡಿದು ಅಳುತ್ತಾಳೆ. ಲಿವೋ ತನ್ನ ಸಾಲದ ಋಣದಿಂದ ಮುಕ್ತನಾಗಿದ್ದರೂ ಮೇರಿಯ ಪ್ರೀತಿಯಲ್ಲಿ ಕರಗಿ ಹೋಗುತ್ತಾನೆ. ಇದು ಕಥೆಯ ಸಂಕ್ಷಿಪ್ತ ರೂಪ.

ಈ ಕಾದಂಬರಿಯ ಕಾಲವಾಗಲಿ, ನಡೆಯುವ ಘಟನೆಯಾಗಲಿ ಈಗಿನ ಸಂದರ್ಭಕ್ಕೆ ಅಪ್ರಸ್ತುತವೆನಿಸುತ್ತದೆ. ಇಲ್ಲಿ ಕೇವಲ ಪ್ರೀತಿ, ದ್ವೇಷಗಳ ಬಗ್ಗೆ ಮಾತ್ರವಿರದೆ ಒಂದು ಅನೂಹ್ಯ ಸಂಬಂಧವನ್ನು ಬಿಚ್ಚಿಕೊಡುತ್ತದೆ. ಮೇಲ್ನೋಟಕ್ಕೆ ಕಥಾನಾಯಕ ನಾಯಕಿಯರು ನೆರೆಕರೆಯವರಾದರೂ ಅವರಲ್ಲಿ ಆ ಸಂಬಂಧಕ್ಕಿಂತಲೂ ಇಲ್ಲಿ ಅವರು ಮಾಮೂಲು ವ್ಯಕ್ತಿಗಳಾಗಿ ಗೋಚರಿಸುತ್ತಾರೆ. ಕೆಲವೇ ಕೆಲವು ಪಾತ್ರಗಳ ಮೂಲಕ ಅಭಿವ್ಯಕ್ತವಾಗುವ ಇಲ್ಲಿಯ ಪ್ರಸಂಗ ಹೆಚ್ಚು ಶ್ರಮವಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಪ್ರಯತ್ನಿಸಿದಲ್ಲಿ ಕೊರೆಲ್ ಇಂಗ್ಲೀಷ್ ಸಾಹಿತ್ಯದಲ್ಲಿರುವ ನಾಟಕಗಳಂತೆ ರಂಗಪ್ರದರ್ಶನಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ. ಇಲ್ಲಿಯ ಕಥೆಯನ್ನು ಓದುವಾಗ ಶೇಕ್ಸ್ಪಿಯರ್ನ ನಾಟಕಗಳ ನೆನಪಾಗದಿರದು. ಇಂತಹ ಅಪರೂಪದ ಕೃತಿಗಳನ್ನು ಹುಡುಕಿ ಓದುವುದರಿಂದ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಈ ಕೃತಿಯನ್ನ ಒಮ್ಮೆಯಾದರೂ ಓದಲೇಬೇಕು.

ಈ ಕೃತಿಯನ್ನು 1983 ರಲ್ಲಿ ಶ್ರೀ ಜನಾರ್ಧನ ಕುಲಕರ್ಣಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಸಮಾಜ ಪುಸ್ತಕಾಲಯ ಪ್ರಕಟಿಸಿದೆ.

Read more!