Tuesday, March 9, 2010

ಬದುಕಿನ ಸೂತ್ರ ಹರಿದ ‘ಸೂತ್ರದ ಗೊಂಬೆ’


ನಾನು ಸೂತ್ರದ ಗೊಂಬೆ, ನೀನೂ ಸೂತ್ರದ ಗೊಂಬೆ
ಈ ಮಾತಿನಲಿ ಭ್ರಮೆಯಿಲ್ಲ, ಸರ್ವರೂ ಸೂತ್ರಧಾರಿಗಳೇ
ನನ್ನಾಡಿಸುವವನು ಮತ್ತೊಬ್ಬನಾಡಿಸುವನು
ನೇಪಥ್ಯದಲ್ಲಿ ನಿಂತ ಆ ದೇವನೇ ಎಲ್ಲರ ಸೂತ್ರಧಾರಿ.

ಇದು ಬಂಗಾಲಿ ಲೇಖಕ ಡಾ. ಪ್ರತಾಪ್ ಚಂದ್ರ ಚಂದರ್ ಅವರ ಕಾದಂಬರಿಯಲ್ಲಿರುವ ಒಂದು ಕವಿತೆ. ನಾವೆಲ್ಲಾ ಸೂತ್ರದ ಬೊಂಬೆಯಾದರೆ ವಿಧಿಯೇ ಅದ್ರ ಸೂತ್ರವನ್ನು ಹಿಡಿದು ಕುಣಿಸುವವನು. ಹೀಗೆ ಭ್ರಮೆಗೊಳಗಾದ ಮತ್ತು ಬದುಕಿನ ಸಂಕಷ್ಟಗಳನ್ನು ಎದುರಿಸಲು ಸೋತವನೊಬ್ಬನ ಅಸಹಾಯಕ ಕೂಗು ‘ಸೂತ್ರದ ಗೊಂಬೆ’ ಕಾದಂಬರಿಯಲ್ಲಿ ಕಾಣದ ಪಾತ್ರವಾಗಿ ಆಡಿದೆ.

ಮೋಹನ ಮಾಸ್ತರ ನಿರ್ಜೀವ ಗೊಂಬೆಗಳಿಗೆ ಕೈ ಚಳಕದಿಂದ ಜೀವ ತರಿಸಬಲ್ಲ ಮಾಂತ್ರಿಕ ಶಕ್ತಿಯುಳ್ಲವನು. ಸಾಮಂತರ ಗರಡಿಯಲ್ಲಿ ಪಳಗಿದವನಿಗೆ ಗೊಂಬೆಯಾಡಿಸುವುದು ಬಿಟ್ಟರೆ ಹೊರ ಜಗತ್ತು ಗೊತ್ತೇ ಇಲ್ಲ. ಹಾಗಂತ ಲೋಕಜ್ಞಾನ ಅರಿಯದ ಮುಗ್ಧನೂ ಅಲ್ಲ. ಬದುಕಿನಲ್ಲಿ ಪ್ರೀತಿಯನ್ನು ಕಳೆದುಕೊಂಡ ಸಾಮಂತರು ತೊಡಗಿಸಿಕೊಂಡಿದ್ದು ಗೊಂಬೆಯಾಟದ ವೃತ್ತಿಯಲ್ಲಿ. ಅಂತಹ ಅದ್ಭುತ ಕಲೆಗೆ ಮಾರು ಹೋದ ಮೋಹನ ಮನೆಯಿಂದ ಓಡಿ ಬಂದು ಅವರ ಕಂಪನಿಯಲ್ಲಿ ಸೇರಿಕೊಳ್ಳುತ್ತಾನೆ. ನಾಟಕದ ಪರದೆಗಳನ್ನು ಬರೆಯಿಸಲು ಬೀರು ಬಾಬುಗಳ ಮನೆಗೆ ಬರುತ್ತಾನೆ. ಅವರ ಹಿರಿ ಮಗಳು ‘ಟಗರ್’ಳಿಂದ ಆಕರ್ಷಿತನಾಗಿ ಬಡ ಸಂಸಾರವೊಂದರ ಜವಾಬ್ದಾರಿಯುತ ಅಳಿಯನಾಗುತ್ತಾನೆ. ಅಕಸ್ಮಾತ್ ಮದುವೆಯ ಮೊದಲ ರಾತ್ರಿಯೆಂದೇ ಅನಿವಾರ್ಯವಾಗಿ ಗೊಂಬೆಯಾಟದ ಪ್ರದರ್ಶನಕ್ಕೆ ಹೋಗಿ, ನವ ವಧುವಿನ ಸಿಟ್ಟಿಗೆ ಗುರಿಯಾಗಬೇಕಾಗುತ್ತದೆ. ‘ಗೊಂಬೆಯಾಡಿಸುವ ಉದ್ಯೋಗ ಬದುಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ’ವೆನ್ನುವ ಅವಳು ಗೊಂಬೆಗಳ ಸೂತ್ರ ಬಿಟ್ಟು ಮರ್ಯಾದೆಯ ಸಂಸಾರದ ಸೂತ್ರ ಹಿಡಿಯಲು ಹಠ ಹಿಡಿಯುತ್ತಾಳೆ. ಮೋಹನನ ಜೀವವೇ ಗೊಂಬೆಗಳು. ಅವುಗಳನ್ನು ಬಿಟ್ಟಿರಲಾರ. ಅಂತಹ ಪರಿಸ್ಥಿತಿಯಲ್ಲಿ ಅವಳು ಬೇರೆಯೇ ದಾರಿಯನ್ನು ಕಂಡುಕೊಳ್ಳುತ್ತಾಳೆ.

ಕಥೆ ಆರಂಭವಾಗುವುದೇ ಹರಿನಡಿಹಿಯಲ್ಲಿ ‘ಟಗರ್’ ಮನೆ ಬಿಟ್ಟು ಓಡಿ ಹೋಗುವಲ್ಲಿಂದ. ಸಾಮಂತರ ಉಯಿಲಿನಂತೆ ಅವರ ನಂತರ ಗೊಂಬೆಗಳ ಜವಾಬ್ದಾರಿ ಮೋಹನನಿಗೆ ಬರುತ್ತದೆ. ಅವನ ಬಳಿಯೇ ಕೆಲಸ ಮಾಡಿಕೊಂಡಿರುವ ಹೆಣ್ಣಿಗ ಶರತ್ನ ಮೋಹದ ಬಲೆಗೆ ಬಿದ್ದ ಅವಳು ಗೊಂಬೆಗಳನ್ನು ಪುಡಿ ಮಾಡಿ ಮನೆಯಲ್ಲಿದ್ದ ಹಣವನ್ನೆಲ್ಲಾ ದೋಚಿಕೊಂಡು ಹೋಗುತ್ತಾಳೆ. ಇಲ್ಲಿ ಅವಳಿಗೆ ತನ್ನ ಸವತಿಯರಾದ ಗೊಂಬೆಗಳ ಮೇಲಿರುವ ಸಿಟ್ಟನ್ನು ಅವುಗಳನ್ನು ಹಾಳುಗೆಡವುದರಲ್ಲಿ ತೋರಿಸುತ್ತಾಳೆ. ಮತ್ತು ನಿಜವಾಗಿಯೂ ಶರತ್ನೊಂದಿಗೆ ಹೋಗುವ ಮನಸ್ಸಿಲ್ಲದಿರುವುದನ್ನು ಒತ್ತಿ ಹೇಳುತ್ತದೆ.

ಟಗರ್ ಹೆಣ್ಣಿನ ಸಹಜ ಆಕಾಂಕ್ಷೆಯಂತೆ ಮೋಹನನ ಕೈ ಹಿಡಿದರೂ ಅವನು ಗೊಂಬೆಗಳ ನಡುವೆ ಬದುಕುವುದನ್ನು ಬಯಸದವಳು ಪ್ರತೀಕಾರವೆಂಬಂತೆ ಶರತನೊಂದಿಗೆ ಓಡಿ ಹೋದರೂ ಅದು ಮೋಹನನ ಕಣ್ಣು ತೆರೆಸುವ ಉದ್ದೇಶದಿಂದಿರಬಹುದೆ. ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುವಾಗಲೇ ಶರತ್ನ ಮೂರನೆ ಹೆಂಡತಿ ಮೀನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೂ ಶರತ್ನ ಪ್ರಭಾವದಿಂದ ಹೊರ ಬರದ ಅವಳ ಬಗ್ಗೆ ತಿಳಿದ ಮೋಹನ ತಾನು ಅವಳ ದೇಹವನ್ನು ಮಾತ್ರ ಪಡೆದೆ ಮನಸನ್ನಲ್ಲವೆಂದು ಕೊರಗುತ್ತ, ‘ಏನು ಕೊಟ್ಟರೆ ನನ್ನನ್ನು ಪ್ರೀತಿಸುತ್ತೀಯಾ?’ ಎಂದು ಕೇಳುತ್ತಾನೆ. ಆಗ ಅವಳು, ‘ತಾನು ಯಾರನ್ನೂ ಪ್ರೀತಿಸಲ್ಲ, ಪ್ರೀತಿ ಅನ್ನೋದು ಒಂದು ಸೋಗು’ ಅನ್ನುವ ಸತ್ಯದ ಅರಿವಿರುವ ಪ್ರಬುದ್ಧ ಉತ್ತರವನ್ನು ನೀಡುತ್ತಾಳೆ. ಹಾಗೆ ಚಿಂತಿಸಬಲ್ಲ ಅವಳು ಶರತ್ನಂತ ಒಬ್ಬ ಸಾಮಾನ್ಯ ಗಂಡಸನ್ನು ಇಚ್ಛೆ ಪಡುವುದು ಬದುಕಿನಲ್ಲಿ ಕಳೆದುಕೊಂಡಿರುವ ಭ್ರಮೆಗಳಿಗಾಗಿ ಮಾತ್ರ. ಅದನ್ನು ದುರುಪಯೋಗ ಪಡಿಸಿಕೊಳ್ಳಲು ಕಾತರಿಸಿದವನು ಸುಲಭದಲ್ಲಿ ಹಣ, ಹೆಣ್ಣು, ಮೋಜಿನಲ್ಲಿ ಕಳೆಯಲು ನಿರ್ಧರಿಸಿದಾತ ಶರತ್. ಟಗರ್ ನೊಂದಿಗೆ ಊರು ತೊರೆದರೂ ಆತನ ಅನೈತಿಕ ಮತ್ತು ಕಾನೂನುಬಾಹಿರ ವೃತ್ತಿಗಳನ್ನು ತಿಳಿದು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿರುತ್ತದೆ.

ರೈತನ ಮಗ ಬೇಸಾಯ ಮಾಡಿಕೊಂಡೇ ಬದುಕಬೇಕೆನ್ನುವ ಸೂತ್ರಕ್ಕೆ ಒಗ್ಗಿ ಹೋದ ಮೋತಿಬಾಬುಗಳ ಮಗ ಕೊನೆಗೂ ನಿಜ ಜೀವನದಲ್ಲಿ ಸೂತ್ರ ಹಿಡಿಯಲಾರದೆ ಸೋಲುತ್ತಾನೆ. ತನ್ನೆಲ್ಲಾ ಮನದ ಬೇಗುದಿಗಳನ್ನು ಸಾಮಂತರ ಇನ್ನೊರ್ವ ಶಿಷ್ಯೆ, ಟಗರಳ ತಂಗಿ ಶಿಉಲಿಯ ಜೊತೆಗೆ ಹಂಚಿಕೊಳ್ಳುತ್ತಾನೆ. ಅವನ ಬದುಕಿನಲ್ಲಿ ಸ್ಪೂರ್ತಿ ತುಂಬುವ ಅವಳು, ‘ನಿನ್ನವರೇ ನಿನ್ನ ತ್ಯಜಿಸಿದರೂ, ಆ ಬಗ್ಗೆ ಚಿಂತಿಸದಿರು. ನಿನ್ನಾಸೆಯ ಬಳ್ಲಿಗಳು ಬಾಡಿದರೂ, ನಿನ್ನ ಗೀತೆ ಹಾಡುತ್ತಾ ನಗುತ್ತಿರು’ ಅನ್ನುವ ರವೀಂದ್ರನಾಥ್ ಠಾಗೋರರ ಕವಿತೆಯನ್ನು ಹಾಡಿ ಮತ್ತೆ ಚೈತನ್ಯ ತುಂಬಿಸುತ್ತಾಳೆ. ಸಂಸಾರದ ಸೂತ್ರ ಹರಿದ ಮೇಲೆ ಗೊಂಬೆಗಳನ್ನು ತ್ಯಜಿಸಿದವನು ಮತ್ತೊಮ್ಮೆ ಸೂತ್ರವನ್ನು ಕೈಗೆ ತೆಗೆದುಕೊಳ್ಳುತ್ತಾನೆ. ಅದನ್ನು ನೋಡಲು ಬರುವ ಟಗರ್ಳನ್ನು ಗುರುತಿಸಿ ಹಿಂಬಾಲಿಸಿದ ಮೋಹನನಿಗೆ ಆಕೆ ವೈಶ್ಯೆ ಅನುರಾಧಳಾಗಿ ಮಾತ್ರ ದೊರಕುತ್ತಾಳೆ. ಎಷ್ಟೇ ಒತ್ತಯಿಸಿದರೂ ಬರಲೊಲ್ಲದ ಅವಳು ನೀಡುವ ಕಾರಣದಿಂದ ಹತಾಶನಾಗುತ್ತಾನೆ. ಇದಕ್ಕೆಲ್ಲಾ ಉತ್ತರಿಸುವ ಶಿಉಲಿ ಆತನ ಹೊಸ ಬದುಕನ್ನು ರೂಪಿಸುತ್ತಾಳೆ.

ನಿಷ್ಠಾವಂತ ಕಲಾವಿದನೊಬ್ಬನ ಬದುಕಿನ ಏಳು ಬೀಳುಗಳನ್ನು ಚಿತ್ರಿಸುವ ಈ ಕಾದಂಬರಿಯನ್ನು ಡಾ. ಡಿ. ಎನ್. ಶ್ರೀನಾಥ್ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದರೆ. ಈ ಕೃತಿಯನ್ನು ಗೀತಾ ಬುಕ್ ಹೌಸ್, ಮೈಸೂರು ಕೃತಿ ರೂಪದಲ್ಲಿ ಪ್ರಕಟಿಸಿದ್ದಾರೆ.

No comments: