Tuesday, December 28, 2010

ಮುಗಿಲತ್ತ ಹಾರುವ ‘ಕ್ರೌಂಚ ಪಕ್ಷಿಗಳು’


ಕ್ರೌಂಚ ಪಕ್ಷಿಗಳು - ಒಂದು ಸತ್ತು, ಇನ್ನೊಂದು ಬದುಕಿರದಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲವೇನೋ? ಹೌದಲ್ಲ, ವಾಲ್ಮೀಕಿಗೆ ಪರಿತಾಪ ಉಂಟಾದದ್ದೇ ಒಂದು ಹಕ್ಕಿಯ ಸಾವಿನಿಂದ ಮತ್ತು ಇನ್ನೊಂದರ ಒದ್ದಾಟದಿಂದ. ಇದು ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಕಥಾಸಂಕಲದಿಂದ. ಕ್ರೌಂಚ ಪಕ್ಷಿಗಳು ಎಂಬುದು ಈ ಸಂಕಲನದ ಒಂದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನ ಕ್ರಮದ ಒಂದು ಆದಿ ಪ್ರತಿಮೆ - ಇದು ಬೆನ್ನುಡಿಯ ಬರಹ.

ವೈದೇಹಿಯವರ ಕಥೆಗಳನ್ನು ಓದುವಾಗ ಏನೋ ಒಂದು ಆತ್ಮೀಯತೆ. ಇಲ್ಲಿಯ ಪಾತ್ರಗಳೆಲ್ಲಾ ನಮ್ಮ ನಡುವೆ ಇದ್ದು, ಮುಗ್ಧತೆಯಿಂದ ಮುಕ್ತವಾಗಿ ಬೆರೆಯುವಂತಹ ಗುಣಗಳಿರುವವುಗಳು ಅನಿಸುತ್ತದೆ. ಈ ಪಾತ್ರಗಳನ್ನು ಬೆಳೆಸುತ್ತಾ ಬೆಳೆಸುತ್ತಾ ಲೇಖಕಿ ಬಹಳಷ್ಟು ಭಾವುಕರಾಗಿ ಬಿಡುತ್ತಾರೆ. ಒಂದೊಂದು ಪಾತ್ರ ಚಿತ್ರಣವೂ ಧೈರ್ಯದಿಂದ ತಮ್ಮ ಇಂಗಿತವನ್ನು ತೆರೆದಿಡುತ್ತಾ ಮುಗುಳ್ನಗುತ್ತಿರುವಂತೆ ಕಾಣುತ್ತವೆ. ಹಾಗೆಯೆ ಕೆಲವೊಂದು ನಿಗೂಢತೆಗಳನ್ನು ಪಾತ್ರಗಳು ಬಿಟ್ಟುಕೊಡುವುದೇ ಇಲ್ಲ. ಇದು ಸ್ವತ: ಲೇಖಕಿಗೆ ಆ ಪಾತ್ರಗಳ ಬಗೆಯಿರುವ ಪ್ರೀತಿಯನ್ನು ತೋರಿಸುತ್ತದೆ."

‘ಕ್ರೌಂಚ ಪಕ್ಷಿಗಳು’ ಕಥಾಸಂಕಲನದ ಹತ್ತು ಕಥೆಗಳು ವಿಭಿನ್ನವಾದರೂ ಎಲ್ಲಾ ಕಥೆಗಳಲ್ಲಿಯೂ ಒಂದು ಸಾಮ್ಯತೆಯಿದೆ. ಅದು ಮುಗ್ಧ ಮಹಿಳೆಯರ ಅಂತರಂಗದ ತಲ್ಲಣಗಳು. ಕಥೆಗಳೆಲ್ಲಾ ಮಹಿಳಾ ಕೇಂದ್ರಿಕೃತವೆನಿಸಿದರೂ ಆ ಪಾತ್ರಗಳು ಇರುವುದು ಹಾಗೆ; ಇದ್ದು ಬಿಡಲಿ. ನಿಮಗೇನು? ಅನ್ನುವಷ್ಟು ಸ್ಪಷ್ಟ ನಿಲುವುಗಳಿವೆ ಅವುಗಳಲ್ಲಿ. ‘ದಾಳಿ’ ಕಥೆಯ ಅವಮಾನಿತಳಾದರೂ ಮೆಲು ನಗುವ ಯುವತಿ; ‘ನಟಿ’ಯ ರತ್ನೆ; ‘ಸಬಿತಾ’ ಕಥೆಯ ಸಬಿತಾ; ‘ಮಾತು ಸೋತ ಕ್ಷಣ’ದ ವಯಸ್ಸಾದ ವ್ಯಕ್ತಿ; ‘ಮನೆಯವರೆಗಿನ ಹಾದಿ’ಯ ರಾಮಣ್ಣ; ‘ಪ್ರಶ್ನೆ’ಯ ಭುವಿ; ‘ಒಗಟು’ ಕಥೆಯ ಶುಭಾಂಟಿ; ‘ಅವರವರ ಭಾವಕ್ಕೆ’ ಕಥೆಯ ಸಮಿತಾ; ‘ತೆರೆದ ಪುಟಗಳು’ ಕಥೆಯ ರಾಜತ್ತೆ; ‘ಕ್ರೌಂಚ ಪಕ್ಷಿಗಳು’ ಕಥೆಯ ಲಕ್ಷ್ಮಮ್ಮ... ಎಲ್ಲರೂ ತಾವು ಇದ್ದ ಹಾಗೆ ಇದ್ದು ಬಿಡುವವರು. ಹಾಗಂದ್ರೆ ಹಾಗೆ; ಹೀಗಂದ್ರೆ ಹೀಗೆ, ನಿಮಗೇನು? ಅನ್ನುವ ಹಾಗೆ. ಇಲ್ಲಿಯ ಇಷ್ಟು ಕಥೆಗಳು ಬಹಳ ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತವೆ.

ಒಬ್ಬ ಸಾಮಾನ್ಯನಿಗೆ ತಾಳ್ಮೆ ಎಷ್ಟಿರಬಹುದೆನ್ನುವುದಕ್ಕೆ ‘ದಾಳಿ’ ಕಥೆಯ ಮುಗುಳ್ನಗುವಿನ ಹುಡುಗಿಯೇ ಸಾಕ್ಷಿ. ತುಂಬಿ ತುಳುಕುವ ಬಸ್ಸಿನಲ್ಲಿ ‘ಸೀಟ್ ಇಲ್ಲವಲ್ಲ’ ಅಂತ ಆ ಹುಡುಗಿ ಹೇಳಿದ್ದೆ ಕಂಡಕ್ಟರ್ ಅವಳನ್ನು ಹೀನಾಯಮಾನವಾಗಿ ಬೈಯುತ್ತಾನೆ. ಅವನ ಅತಿರೇಕದ ಮಾತುಗಳನ್ನು ಕೇಳಿದರೆ ಉಳಿದವರು ಸಿಟ್ಟಾದರೂ ಅವಳದ್ದು ಮಾತ್ರ ಅದೇ ಮುಗುಳ್ನಗು. ಕೊನೆಗೂ ಅವಳು ನಿಗೂಢವಾಗಿಯೇ ಇರುತ್ತಾಳೆ. ಇದೇ ರೀತಿ ‘ಒಗಟು’ ಕಥೆಯ ಶುಭಾಂಟಿ. ಅಪರೂಪಕ್ಕೆ ಊರಿಗೆ ಬರುವ ಶುಭಾಂಟಿ ಒಂದು ಒಗಟಾಗಿ ಮಧ್ಯಾಹ್ನದ ಹೊತ್ತು ಎಲ್ಲೋ ಒಬ್ಬಳೇ ಟ್ಯಾಕ್ಸಿ ಮಾಡಿಕೊಂಡು ಹೋಗಿ ಬರುತ್ತಾಳೆ. ಅವಳು ಹೋದದ್ದಾದರು ಎಲ್ಲಿಗೆ? ಏನು ಮಾಡಿದಳು? ಇಷ್ಟು ದಿನ ಇಲ್ಲದ ಅವಳ ಈ ವರ್ತನೆಗೆ ಕಾರಣವೇನು? ಎಲ್ಲವೂ ನಿಗೂಢ! ಇಲ್ಲಿ ಅಷ್ಟೇ ಮುಖ್ಯವಾಗಿ ಕಾಣುವುದು ಒಬ್ಬ ಹೆಣ್ಣಿನ ಸ್ವಾತಂತ್ರ್ಯದ ಪ್ರಶ್ನೆ. ಅವಳ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಅಥವಾ ಸಂಶಯಿಸುವ ಹಕ್ಕು ಯಾರಿಗೂ ಇಲ್ಲವೆನ್ನುವುದನ್ನು ಪರೋಕ್ಷವಾಗಿ ಸಾರುವ ಕಥೆಯಿದು.

‘ನಟಿ’ ಕಥೆಯ ರತ್ನೆ ಮತ್ತು ‘ಸಬಿತಾ’ ಕಥೆಯ ಸಬಿತಾ ಇಬ್ಬರೂ ಲವಲವಿಕೆಯ ಜೀವಿಗಳು. ರತ್ನೆ ಬದುಕಿನಲ್ಲಿ ಸೋತು ಗೆಲುವಿನ ದಾರಿ ಕಂಡುಕೊಂಡವಳು. ಇನ್ನೊಬ್ಬರನ್ನು ನಗಿಸುತ್ತಾ ದಿನ ಕಳೆಯುವವಳು. ಸಬಿತಾ ಬದುಕಿಗಾಗಿ ಹೋರಾಡುತ್ತಾ ದುರ್ಗಮಗಳನ್ನು ದೂರುವವಳು. ನಟಿ ಕಥೆಯ ರತ್ನೆ ದುರಂತ ನಾಯಕಿಯಾದಳೆ? ಸಬಿತಾ ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿರುವಳೆ? ಪ್ರಶ್ನೆಗಳು ಊಹನೆಗೆ ಹಚ್ಚುತ್ತವೆ. ‘ಮಾತು ಸೋತ ಕ್ಷಣ’ದಲ್ಲಿ ಮೌನದೊಳಡಗಿದ ಮೌನದ ನಿಗೂಢತೆಯೆ, ಏನೆನ್ನುವುದು ಕೊನೆಗೂ ತಿಳಿಯುವುದಿಲ್ಲ. ಇದು ಕೂಡ ಓದುಗರಿಗೆ ಬಿಟ್ಟ ವಿಚಾರವಾಗಿಯೆ ಉಳಿಯುತ್ತದೆ.

‘ಮನೆಯವರೆಗಿನ ಹಾದಿ’ ಕಥೆಯಲ್ಲಿ ಮನುಷ್ಯ ತನ್ನ ಸ್ವಾರ್ಥವಿಲ್ಲದೆ ಏನನ್ನೂ ಮಾಡಲಾರನ್ನೆನ್ನುವುದು ಸಾಬೀತಾಗುತ್ತದೆ. ‘ಪ್ರಶ್ನೆ’ ಇಬ್ಬರು ಧೈರ್ಯದ ಹುಡುಗಿಯರ ವಯೋಸಹಜವಾದ ಛಾಲೆಂಜ್ ಒಂದು ಪ್ರಶ್ನೆಯಾಗಿಯೇ ನಿಲ್ಲುವ ಕಥೆ. ಭುವಿ ಭಾಷಣಕಾರನನ್ನು ಮೆಚ್ಚಿ ಅವನ ಜೊತೆಗೆ ಒಂದು ರಾತ್ರಿ ಕಳೆಯುವ ಇಚ್ಛೆಯಿರುವವಳು. ಕೊನೆಗೂ ಅದೇ ಪ್ರಶ್ನೆಯನ್ನು ಬರೆದು ಅವನಿಗೆ ಕಳುಹಿದರೆ ಅವನ ಆಹ್ವಾನವನ್ನು ತಿರಸ್ಕರಿಸುತ್ತಾಳೆ. ಆದರೆ ಅವಳ ಗೆಳತಿ ಅನು ಧೈರ್ಯದಿಂದ ಅವನ ಜೊತೆಗೆ ಹೊರಡುತ್ತಾಳೆ. ಅವಳು ಅತಿಥಿಯ ಜೊತೆಗೆ ಹೋದದ್ದೆಲ್ಲಿಗೆ? ಮನೆಗೆ? ರೂಮಿಗೆ? ಎಲ್ಲಿಗೆ ಬಿಡಿಸಿ ಕೇಳುವ ಧೈರ್ಯವಾಗದೆ ಮೆಲ್ಲನೆ ಮೆಟ್ಟಿಲಿಳಿದಳು ಭುವಿ.

ಬಾಡಿಗೆಗೆ ಕೊಡುವ ಮನೆಯಲ್ಲಿ ದೇವರ ಕೋಣೆ ಬೇಕೆ, ಬೇಡವೆ? ಅನ್ನುವ ನಿರ್ಧಾರದೊಂದಿಗೆ ಆರಂಭವಾಗುವ ಕಥೆ ಅಲ್ಲಿಗೆ ಬರುವ ಬಾಡಿಗೆದಾರರಿಗೆ ದೇವರ ಕೋಣೆಯ ಅವಶ್ಯಕತೆಯೇನೆನ್ನುವುದನ್ನು ತಿಳಿಸುತ್ತದೆ, ಕಥೆ ‘ಅವರವರ ಭಾವಕ್ಕೆ’. ಭಾವನಾತ್ಮಕವಾಗಿ ಬಿಡಿಸಿಕೊಳ್ಳುವ ಕಥೆ ಸಮಿತಾಳ ಕೊರಗಿನಿಂದ ಮುಗಿಯುತ್ತದೆ. ರಾಜತ್ತೆಯಂತಹ ಧೈರ್ಯದ ಹೆಂಗಸಿನ ಸುತ್ತಾ ಹೆಣೆದ ಕಥೆ ‘ತೆರೆಯದ ಪುಟಗಳು’. ಕೆಲವೊಂದು ವಿಷಯಗಳನ್ನು ಇನ್ನೊಬ್ಬನ ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ. ಹಾಗೆಯೇ ರಾಜತ್ತೆಯ ಕಥೆ.

ಈ ಸಂಕಲನದ ಕೊನೆಯ ಕಥೆ ‘ಕ್ರೌಂಚ ಪಕ್ಷಿಗಳು’, ಒಂದು ಸತ್ತು ಇನ್ನೊಂದು ಬದುಕಿದ ಉಳಿದ ಪಕ್ಷಿಯ ಕಥೆಯಂತೆಯೂ ಕಾಣುತ್ತದೆ. ಸತ್ತ ಪಕ್ಷಿ ಯಾರು? ಬದುಕಿದ ಪಕ್ಷಿಯ ಒದ್ದಾಟವೇನೆನ್ನುವುದನ್ನು ನಯವಾಗಿ ಈ ಕಥೆ ಲಕ್ಷ್ಮಮ್ಮನ ಪಾತ್ರದ ಮೂಲಕ ತೆರೆದಿಡುತ್ತದೆ. ಮನುಷ್ಯ ಮನುಷ್ಯನಾಗಿರೋದು ಸಾಮಾನ್ಯ ಸ್ಥಿತಿಯಲ್ಲಿ ಮಾತ್ರ. ಸಿದ್ಧಾಂತ, ತತ್ವ, ರೀತಿ, ನೀತಿಗಳ ಬುಡ ತುಸುವೇ ಅಲ್ಲಾಡಿದರೂ ಮೊದಲು ಬಲಿಯಾಗೋದು ಮಹಿಳೆ. ಅವಳ ದೇಹ, ಅವಳ ಮನಸ್ಸು ಮತ್ತು ಅವಳ ಬದುಕು. ಹಾಗೆ ಬಲಿಯಾದ ಪಕ್ಷಿ ಲಕ್ಷ್ಮಮ್ಮ. ಆಶ್ನಾರ್ಣ ಭಟ್ಟರ ವ್ಯಕ್ತಿತ್ವವನ್ನು ತೆರೆದಿಡುವ ಲಕ್ಷ್ಮಮ್ಮ ಹೇಗೆ ಬಲಿಯಾದರೆನ್ನುವುದನ್ನು ತಿಳಿಸುತ್ತಾರೆ.

ಇಲ್ಲಿ ಬಳಸಿಕೊಂಡಿರುವ ಭಾಷೆಯಷ್ಟೆ ಕಥೆಯ ವಸ್ತುಗಳು ವಿಭಿನ್ನ ಮತ್ತು ಚಿಂತನೆಗೆ ಹಚ್ಚುವಂತಹವುಗಳು. ವೈದೇಹಿಯವರ ಕಥೆಗಳನ್ನು ಓದಿಕೊಂಡಷ್ಟು ಹೊಸ ಹೊಸ ವಿಚಾರಗಳು ನಮ್ಮನ್ನು ಕಾಡುತ್ತಿರುತ್ತವೆ. ಹಾಗಾಗಿ ‘ಕ್ರೌಂಚ ಪಕ್ಷಿಗಳು’ ಒಂದು ದೊಡ್ಡ ಓದುಗವರ್ಗವನ್ನೇ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

Read more!

Sunday, December 19, 2010

ಅನಂತಮೂರ್ತಿ ಅವರ ಕೃತಿ ‘ಸಂಸ್ಕಾರ’


ಯು. ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಓದುತ್ತಲೇ ಓದುಗನನ್ನು ಬೆರಗುಗೊಳಿಸುವ ಕಾದಂಬರಿ. ಯಾವುದು ಸಂಸ್ಕಾರ? ಅದನ್ನು ಡ್ರ್ಯಾಸ್ಟಿಕ್ ಆಗಿ ಅನುಸರಿಸು ಅಂದವರು ಯಾರು? ತೋರಿಕೆಗಾಗಿ ಮಾತ್ರ ಈ ಸಂಸ್ಕಾರಗಳು ಬೇಕೆ? ಪ್ರಾಂಜಲ ಮನಸ್ಸಿನಿಂದ ಸಂಸ್ಕಾರಗಳನ್ನು ನಡೆಸಿಕೊಂಡು ಬಂದವರು ಯಾರು? ಹೌದಲ್ಲವೇ, ಇಷ್ಟೊಂದು ಅಸಂಗತ ಅನಿಸಬಹುದಾದ ಪ್ರಶ್ನೆಗಳು ನಮ್ಮನ್ನು ಕೊರೆಯುತ್ತವೆ. ಇದಕ್ಕೆಲ್ಲಾ ಉತ್ತರವಾಗಿ ನಿಲ್ಲಬಹುದಾದ ಒಂದು ಪಾತ್ರ ಮಾತ್ರ ಪ್ರಾಣೇಶಾಚಾರ್ಯರು!"

ತಟ್ಟನೆ ಕಣ್ಣೆದುರು ನಿಲ್ಲುವ ಪ್ರಾಣೇಶಾಚಾರ್ಯರು, ರೋಗಿಷ್ಟೆ ಮಡದಿಯನ್ನು ಉಪಚರಿಸುತ್ತಾ, ಸಂಸ್ಕಾರಗಳನ್ನು ಪಾಲಿಸಿಕೊಂಡು ಬಂದವರು. ಅದರಿಂದಾಗಿಯೆ ಬಹಳ ಸಂಯಮದಿಂದ ಜೀವಿಸುವ ಅವರಿಗೆ ಬದುಕು ಹದವಾಗಿರುವುದು ತಾನು ಪಾಲಿಸಿಕೊಂಡು ಬರುತ್ತಿರುವ ಸಂಯಮದಿಂದ ಎಂದು ತೃಪ್ತಿ ಪಟ್ಟುಕೊಂಡವರು. ಆದರೆ ನಾರಣಪ್ಪ ಸಂಸ್ಕಾರಗಳನ್ನು ಮಾಡಿಕೊಂಡು ಬರಬೇಕಾಗಿದ್ದ ಜಾತಿಯವನಾಗಿದ್ದು, ಅವೆಲ್ಲವನ್ನೂ ತ್ಯಜಿಸಿ ತನ್ನ ಸಾವಿನ ಆನಂತರ ದೊಡ್ಡ ಸಮಸ್ಯೆಯಾಗಿ ಅಗ್ರಹಾರದವರಿಗೆಲ್ಲಾ ಕಾಡುತ್ತಿರುತ್ತಾನೆ. ಒಂದು ರೀತಿಯಲ್ಲಿ ಜಾತಿಯಿಂದ ಬಹಿಷ್ಕಾರಕ್ಕೆ ಒಳಗಾಗದೆ ಜಾತಿಯ ಸಂಸ್ಕಾರಗಳನ್ನು ಬಿಟ್ಟವನ ಶವಸಂಸ್ಕಾರಕ್ಕೆ ಅಗ್ರಹಾರದ ಯಾವೊಬ್ಬನೂ ಮುಂದಾಗುವುದಿಲ್ಲ. ಲಕ್ಷಣಾಚಾರ್ಯರಾಗಲಿ, ಗರುಡಾಚಾರ್ಯರಾಗಲಿ ಕಾಯುವುದು ಪ್ರಾಣೇಶಾಚಾರ್ಯರ ಉತ್ತರಕ್ಕಾಗಿ. ಪ್ರಾಣೇಶಾಚಾರ್ಯರಾದರೂ ಗ್ರಂಥಗಳನ್ನು, ತಾಳೆಗರಿಯ ಓಲೆಗಳನ್ನು ತಿರುಚಿ ಹಾಕಿದರೂ ಕೊನೆಗೆ ದೇವರ ಮೊರೆ ಹೊಕ್ಕರೂ ಸಮಸ್ಯೆಯಾಗಿ ಕಾಡುವ ನಾರಣಪ್ಪನ ಶವಸಂಸ್ಕಾರ ಮಾಡುವ ಯಾವ ಪರಿಹಾರ ಕ್ರಮಗಳು ಸಿಗುವುದಿಲ್ಲ. ಇದರಿಂದ ಅಂತರ್ಮುಖಿಯಾಗುತ್ತಾರೆ.

ಸಂಸ್ಕಾರ ಕಾಣದ ನಾರಣಪ್ಪನ ಶವ ಅಗ್ರಹಾರದ ತುಂಬೆಲ್ಲಾ ಗಬ್ಬು ನಾತ ಬಿರುತ್ತಿದ್ದರೂ ಎಲ್ಲರೂ ತಮ್ಮ ತಮ್ಮ ಹಠ ಸಾಧನೆಯಲ್ಲಿಯೇ ಇದ್ದು ಬಿಡುತ್ತಾರೆ. ಶವಸಂಸ್ಕಾರವಾಗಬೇಕಾದರೂ ತಮ್ಮ ಲಾಭ ಗಳಿಕೆಯ ದೃಷ್ಟಿಯಿಂದ ಯೋಚಿಸುತ್ತಾರಲ್ಲದೆ ಅಗ್ರಹಾರದಲ್ಲಿರುವವನ ಶವ ಸಂಸ್ಕಾರವನ್ನು ಮಾಡಲು ಮುಂದಾಗುವುದಿಲ್ಲ. ಅವರವರ ಸ್ವಾರ್ಥದಿಂದ ಗುರುಗಳಾದ ಪ್ರಾಣೇಶಾಚಾರ್ಯರನ್ನು ಒಪ್ಪಿಸುವುದಕ್ಕೆ ಹಾತೊರೆದರೂ ಅವರ ಮಾತನ್ನು ಮೀರದವರು ಅಗ್ರಹಾರದ ಮಂದಿ. ಗುರುಗಳಿಗಾದರೂ ಅವರ ಜೀವನವೇ ಡೋಲಾಯಮಾನ ಸ್ಥಿತಿಯಲ್ಲಿರುತ್ತದೆ. ನಾರಣಪ್ಪನ ಶವಸಂಸ್ಕಾರದ ಬಗ್ಗೆ ಯಾವೊಂದು ನಿರ್ಧಾರವನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಪರಿಹಾರದ ಹುಡುಕಾಟದಲ್ಲಿಯೆ ದಿನ ಕಳೆಯುತ್ತಾ ಹದ್ದುಗಳು ಹಾರಡುವಲ್ಲಿಯವರೆಗೆ ಮುಂದುವರಿಯುತ್ತದೆ ಅಲ್ಲಿಯ ಪರಿಸ್ಥಿತಿ. ಅಗ್ರಹಾರದ ಜನರ ನಿರೀಕ್ಷೆ ಗುರುಗಳಿಂದ ಬರಬಹುದಾದ ಶವದ ಇತ್ಯರ್ಥದ ಬಗ್ಗೆ. ಅವರ ನಿರ್ಧಾರದ ವಿಳಂಬದಲ್ಲಿ ಅಗ್ರಹಾರದ ಮಂದಿ ಉಪವಾಸ ಬೀಳುವುದು ಅನಿವಾರ್ಯವಾದಾಗ ಅವರೆಲ್ಲಾ ಸೇರಿ ಊರಿನ ಹೊರಗೆ ಹಸಿವೆಯನ್ನು ನೀಗಿಕೊಳ್ಳುವ ದಾರಿಯನ್ನು ಹುಡುಕುತ್ತಾರೆ.

ಚಂದ್ರಿಯೆನ್ನುವ ಸೂಳೆಯ ಜೊತೆಗೆ ಮಧು ಮಾಂಸದ ರುಚಿಗೆ ಅಂಟಿಕೊಂಡ ನಾರಣಪ್ಪನನ್ನು ಜಾತಿಯಿಂದ ಬಹಿಷ್ಕಾರ ಹಾಕದಿರುವುದೇ ತೊಡಕಾಗಿ ಆತನ ಹೆಣ ಅನಾಥವಾಗುತ್ತದೆ. ಆಗ ಅಗ್ರಹಾರದ ತುಂಬೆಲ್ಲಾ ಸ್ವೇಚ್ಛೆಯಿಂದ ಓಡಾಡುವ ಇಲಿಗಳು ಪ್ಲೇಗ್ ಅನ್ನೋ ಮಹಾಮಾರಿಯನ್ನು ಊರಿಡೀ ಹಬ್ಬಿಸುವುದನ್ನು ಯಾವೊಬ್ಬನ ಅರಿವಿಗೂ ಬಾರದು. ನಾರಣಪ್ಪನ ಸಾವಿಗೂ ಅದೇ ಮಹಾಮಾರಿಯೇ ಕಾರಣವಾದರೂ ಆತ ಚಂದ್ರಿಯ ಬಂಧನದಲ್ಲಿದ್ದುದರಿಂದ ಜಾತೀವಾದವೇ ಮೇಲೆ ನಿಂತು ಅವನ ಸಂಸ್ಕಾರಕ್ಕೂ ತಡೆಯಾಗುತ್ತದೆ.

ಇಲ್ಲಿ ಚಂದ್ರಿ ಅಗ್ರಹಾರದ ಜನರಿಗಿಂತ ಕೆಳವರ್ಗದವಳಾದರೂ ಅವಳಿಗೆ ನಾರಣಪ್ಪನ ಶವ ಸಂಸ್ಕಾರ ಮಾಡಬೇಕೆನ್ನುವ ಮಾನವೀಯತೆ ಇದೆ. ಆದರೆ ನಾರಣಪ್ಪನ ಜಾತಿಯಲ್ಲಿಯೇ ಹುಟ್ಟಿದ ಯಾವನಿಗೂ ಆ ಮಾನವೀಯತೆ ಇಲ್ಲದಿರುವುದು ಖೇದನೀಯ. ಚಂದ್ರಿಯಾದರೂ ತನ್ನಲ್ಲಿರುವ ಚಿನ್ನವನ್ನು ಕೊಟ್ಟು ನಾರಣಪ್ಪನ ಶವಸಂಸ್ಕಾರ ಮುಗಿಸಿ ಋಣಮುಕ್ತಳಾಗಬೇಕೆನ್ನುವ ನಿರ್ಧಾರವಿದ್ದವಳು, ಚಿನ್ನವನ್ನೆಲ್ಲಾ ಪ್ರಾಣೇಶಾಚಾರ್ಯರ ಕೈಯಲ್ಲಿಡುತ್ತಾಳೆ. ಆದರೆ ಮನೆಗೆ ಹಿಂತಿರುಗುವಾಗ ಕೊಳೆತು ನಾರುವ ಶವದ ಭೀಕರತೆಗೆ ಬೆದರಿ ರಾತ್ರೋ ರಾತ್ರಿ ಶೇಷಪ್ಪನಲ್ಲಿ ವಿನಂತಿಸಿಕೊಂಡ ಅವಳು ಅವನ ನಿರಾಕರಣೆಯಿಂದ ಮೀನಿನ ವ್ಯಾಪಾರಿ ಮಹ್ಮದ್ ಬ್ಯಾರಿಯ ಕೈಯಲ್ಲಿ ಶವವನ್ನು ಬೂದಿ ಮಾಡಿಸಿ ತನ್ನೂರಿಗೆ ಮರಳುತ್ತಾಳೆ.

ಒಮ್ಮೆ ಚಂದ್ರಿಯ ಸ್ಪರ್ಶದಿಂದ ಪುಲಕಿತರಾದ ಪ್ರಾಣೇಶಾಚಾರ್ಯರು ಅವನ ಸಾನಿಧ್ಯ ಸುಖವನ್ನು ಅನುಭವಿಸುವ ಮನಸ್ಸಾಗಿ ಬಹಳಷ್ಟು ಚಿಂತಿತರಾಗಿರುವಾಗಲೆ ಅವರ ರೋಗಿಷ್ಟ ಮಡದಿ ಸಾವನ್ನಪ್ಪುತ್ತಾಳೆ. ಅವಳ ಸಂಸ್ಕಾರ ಮುಗಿಸಿ ಕಾಲು ಕೊಂಡೊಯ್ದಲ್ಲಿ ನಡೆಯುವುದೆಂದು ಅಗ್ರಹಾರವನ್ನು ಬಿಡುತ್ತಾರೆ. ಅವರ ಮನಸ್ಸೆಲ್ಲಾ ಚಂದ್ರಿಯೇ ತುಂಬಿರುತ್ತಾಳೆ. ಅವಳಿಂದ ಪಡೆದ ಸುಖದ ಮೆಲುಕಿನಲ್ಲಿ ದೂರ ಸವೆಸುತ್ತಿರಲು ಪುಟ್ಟನ ಜೊತೆಯಾಗುತ್ತದೆ. ಅವರಲ್ಲಿರುವ ಅವ್ಯಕ್ತ ಭೀತಿ ತನ್ನ ಪರಿಚಯವೇನಾದರೂ ಆಗಿ, ತನ್ನ ಸುಳಿವು ದೊರೆತರೆ? ಅನ್ನುವುದರಲ್ಲಿಯೂ ಪುಟ್ಟ ಆಹ್ವಾನಗಳನ್ನೆಲ್ಲಾ ನಿರಾಕರಿಸುತ್ತಾ, ಸ್ವೀಕರಿಸುತ್ತಾ ಮುನ್ನಡೆದವರಿಗೆ ಒಂದು ರೀತಿಯ ತಲ್ಲಣವಿರುತ್ತದೆ. ಆದರೂ ಅವರ ತುಡಿತವಿರುವುದು ಚಂದ್ರಿಯನ್ನು ಸೇರುವಲ್ಲಿ. ತಮ್ಮ ಅಸ್ತಿತ್ವವನ್ನೇ ಮರೆ ಮಾಚಿಕೊಂಡು ಸಂಸ್ಕಾರ ಬಂಧವನ್ನು ಕಳಚಿ ಕೊನೆಗೆ ದೇವಸ್ಥಾನದ ಊಟಕ್ಕೆ ಕುಳಿತಾಗ ಅವರ ಗುರುತು ಹಿಡಿದ ವ್ಯಕ್ತಿಯೊಬ್ಬ ಅವರನ್ನು ಪ್ರಶ್ನಿಸಿ ಆತಂಕಕೆಡೆ ಮಾಡುತ್ತಾನೆ. ಅವರು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಕಾಣದ ದಾರಿ ಹಿಡಿದಾಗ ಮತ್ತೆ ಪುಟ್ಟ ಎದುರಾಗುತ್ತಾನೆ. ಅವರನ್ನು ಗಾಡಿ ಹತ್ತಿಸುತ್ತಾನೆ. ಅವರು ನಿರಾಕರಿಸಿದರೂ ಗಾಡಿ ಏರಲೇ ಬೇಕಾದ ಪರಿಸ್ಥಿತಿ. ಮತ್ತೆ?

ಈಗ ಆಕಾಶದಲ್ಲಿ ನಕ್ಷತ್ರಗಳು, ಗೆರೆ ಚಂದ್ರ. ದಿಟ್ಟಗೆ ನಿಂತ ಸಪ್ತರ್ಷಿ ಮಂಡಳ. ಇದ್ದಕ್ಕಿದ್ದಂತೆ ಚಂಡೆಯ ಶಬ್ದ. ಅಲ್ಲೊಂದು ಇಲ್ಲೊಂದು ಕೊಳ್ಳಿಯ ಬೆಂಕಿ. ಗುಡ್ಡ ಹತ್ತುವ ಎತ್ತಿನ ಉಸಿರು. ಕೊರಳಿನ ಗೆಜ್ಜೆ. ನಾಲ್ಕೈದು ಗಂಟೆಗಳ ಪ್ರಯಾಣ. ಮತ್ತೆ?

ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು.

ಇಷ್ಟಾದರೂ ಈ ಕಾದಂಬರಿಯನ್ನು ಓದಿಯೆ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳಲೇಬೇಕಿರುವ ಅನಿವಾರ್ಯತೆ ಓದುಗನಿಗಿದೆ.

Read more!