Wednesday, August 31, 2011

ರಂಗಭೂಮಿಯ ಚರಿತ್ರೆ


ದೃಶ್ಯ ಮಾಧ್ಯಮಗಳು ವಿಷಯಗಳನ್ನು ಬಹಳ ಬೇಗನೆ ಜನಮಾನಸಕ್ಕೆ ತಲುಪಿಸುತ್ತವೆ ಅನ್ನುವುದು ಅಕ್ಷರಶ: ಸತ್ಯವಾದ ಮಾತು. ಸಿನಿಮಾ, ದೂರದರ್ಶನಗಳಂತು ವೀಕ್ಷಕವರ್ಗವನ್ನು ಮೋಡಿ ಮಾಡಿರುವುದು ಎಲ್ಲರೂ ಒಪ್ಪಬೇಕಾದ ವಾಸ್ತವ. ಆಯಾಯ ಕಾಲಕ್ಕೆ ಬದಲಾಗುತ್ತಿರುವ ಅಭಿರುಚಿಯನ್ನು ಅವಲಂಭಿಸಿ ಬದಲಾವಣೆಗಳನ್ನು ಮಾಧ್ಯಮಗಳು ಉಣಿಸುತ್ತಿರುವುದು ಎಲ್ಲದಕ್ಕೂ ಸಾಕ್ಷಿಯಂತಿದೆ. ದೃಶ್ಯ ಮಾಧ್ಯಮದಲ್ಲಿ ಕೇವಲ ಪ್ರತಿರೂಪಗಳನ್ನೇ ನೆಚ್ಚಿಕೊಂಡು ಖುಷಿ ಪಡುವ ವೀಕ್ಷಕನಿಗೆ ಅದೊಂದು ಕೇವಲ ಪ್ರತಿರೂಪ (ಇಮೇಜ್) ಅನ್ನುವುದು ನೆನಪಾಗುವುದೇ ಇಲ್ಲ. ಆದರೆ ಇದಕ್ಕೆ ಇಂದಿಗೂ ವ್ಯತಿರೀಕ್ತವಾಗಿರುವ ವ್ಯವಸ್ಥೆಯೆ ರಂಗಭೂಮಿ. ದೃಢವಾದ ಚಿಂತನೆ ಮತ್ತು ಚಲನಶೀಲವಾದ ಸ್ಥಿತಿಗಳ ನಡುವಿನ ನಿರೂಪಣಾ ತಂತ್ರದಿಂದಾಗಿ ವೀಕ್ಷಕವರ್ಗವನ್ನು ಹಿಡಿದಿಡುವ ಪ್ರಯತ್ನ ನಾಟಕಗಳದ್ದು. ದೃಶ್ಯಮಾಧ್ಯಮ ಮತ್ತು ರಂಗಭೂಮಿಗೆ ಭಾಷೆಯೊಂದೇ ಮುಖ್ಯ ಅನಿಸುವುದಿಲ್ಲ. ಭಾಷೆಗಿಂತಲೂ ಅಭಿನಯಕ್ಕೆ ಪ್ರಾಧಾನ್ಯತೆ ಹೆಚ್ಚು. ಇಲ್ಲಿ ಪಾತ್ರಧಾರಿ ಮತ್ತು ಪ್ರೇಕ್ಷಕರ ನಡುವೆ ಆತ್ಮೀಯ ಮತ್ತು ನೇರ ಸಂಬಂಧವಿರುವುದರಿಂದ (ಲೈವ್), ಸಂವಹನಕ್ಕೆ ಅವಕಾಶಗಳಿಗೆ. ಹಾಗಾಗಿ ಅಭಿನಯಗಾರರಿಗೆ ಪ್ರತಿಕ್ರಿಯೆ ಕೂಡಲೆ ಸಿಗುತ್ತವೆ. ಇದರಿಂದಾಗಿ ರಂಗಕಲಾವಿದರೂ ಇಂದಿಗೂ ದೃಶ್ಯ ಮಾಧ್ಯಮಗಳಿಗಿಂತ ರಂಗಭೂಮಿಯನ್ನು ಹೆಚ್ಚು ಇಷ್ಟಪಡುವುದನ್ನು ಕಾಣಬಹುದು. ಮಾತ್ರವಲ್ಲ, ಒಬ್ಬ ನಿಜವಾದ ಕಲಾವಿದ ರಂಗಭೂಮಿಯ ಅಭಿನಯವನ್ನು ಎಂದಿಗೂ ನಿರಾಕರಿಸುವುದಿಲ್ಲ.

ರಂಗಭೂಮಿಯನ್ನು ಕುರಿತು ಅದೆಷ್ಟೋ ಕೃತಿಗಳು ಬೆಳಕು ಕಂಡಿವೆಯಾದರೂ, ಕಾದಂಬರಿ ಲೋಕದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ನಾವು ಕಾಣಬಹುದು. ಅವುಗಳಲ್ಲಿ ಹೆಸರಿಸಬಹುದಾದ ಕೃತಿಗಳೆಂದರೆ ‘ನಟಸಾರ್ವಭೌಮ’; ‘ಶಾಂತಲ’; ‘ರಂಗನಾಯಕಿ’; ‘ನಟಿ’; ‘ಬಣ್ಣದ ಜಿಂಕೆ’ ಮತ್ತು ‘ಸಾಂವಿ’."

ಈ ಕೃತಿಗಳು ಚಾರಿತ್ರಿಕವಾಗಿ ಏನನ್ನೂ ಹೇಳುವುದಿಲ್ಲವಾದರೂ ರಂಗ ಕಲಾವಿದರ ಬದುಕನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಬಿಂಬಿಸಿದ ಕಾದಂಬರಿಗಳು ಇವು. ಇತ್ತೀಚೆಗೆ ಕನ್ನಡದಲ್ಲಿ ರಂಗಭೂಮಿಯ ಬಗ್ಗೆ ಆಳವಾದ ವಿಷಯಗಳನ್ನೊಳಗೊಂಡ ಅಪರೂಪದ ಕಾದಂಬರಿಯೊಂದು ಪ್ರಕಟವಾಗಿರುವುದು ಹೆಮ್ಮೆಯ ವಿಷಯ. ಅದುವೆ ಗಂಗಾಧರ ಗಾಡ್ಗೀಳರ ಮರಾಠಿ ಮೂಲ ಕಾದಂಬರಿ ‘ಗಂಧರ್ವಯುಗ’.

ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಚಂದ್ರಕಾಂತ ಪೋಕಳೆ ಅವರು ಅನುವಾದಕರ ಮಾತಿನಲ್ಲಿ, ‘ಈ ಕಾದಂಬರಿಯು ಮರಾಠಿಯಷ್ಟೇ ಕನ್ನಡದ ರಂಗಭೂಮಿಯ ದೃಷ್ಟಿಯಿಂದಲೂ ಮಹತ್ವದ್ದು’ ಅಂದಿದ್ದಾರೆ. ಇದು ಸಹಜವೂ ಹೌದು. ಯಾಕೆಂದರೆ ದೃಶ್ಯ ಮಾಧ್ಯಮ ಮತ್ತು ಸಾಹಿತ್ಯ ದೃಷ್ಟಿಯಿಂದ ಶ್ರೇಷ್ಠ ಕೃತಿಗಳಿಗೆ ಭಾಷೆಯ ಹಂಗಿಲ್ಲ. ಇವತ್ತಿಗೂ ಅನುವಾದಿತ ಕೃತಿಗಳನ್ನು ಸಾರಸ್ವತ ಲೋಕ ಸ್ವೀಕರಿಸುತ್ತಾ ನಮ್ಮ ಭಾಷೆಯ ಸಂಸ್ಕೃತಿ ಮತ್ತು ಸದಾಚಾರಗಳನ್ನು ಕೊಂಡುಕೊಳ್ಳುವಿಕೆಗೆ ಒಳಪಡಿಸಿದೆ. ಇದು ಓದುಗನೊಬ್ಬನಿಗೆ ಅಪಾರ ಜ್ಞಾನ ಭಂಡಾರವನ್ನು ಒದಗಿಸಬಲ್ಲ ಕಾರ್ಯವೂ ಆಗಿರುವುದರಿಂದ ಇವಕ್ಕೆ ತಡೆ ಇಲ್ಲವೆನ್ನುವುದು ನನ್ನ ನಂಬಿಕೆ.

ಈ ಕಾದಂಬರಿಯು ಮರಾಠಿ ರಂಗಭೂಮಿಯ ಲೋಕೊತ್ತರದ ರಂಗಚೇತನ ಬಾಲಗಂಧರ್ವ ಅವರ ಬದುಕಿನ ಕೃತಿಯಾಗಿರುವುದರಿಂದ, ಇದನ್ನು ಚಾರಿತ್ರಿಕ ಕಾದಂಬರಿಯೆಂದು ಗುರುತಿಸಿರುವುದು ಗಮನಾರ್ಹ. ಕೇವಲ ಬಾಲಗಂಧರ್ವರ ವ್ಯಕ್ತಿ ಚಿತ್ರಣ ಮಾತ್ರವಲ್ಲ ಅದರ ಜೊತೆಗೆನೆ ರಂಗಭೂಮಿಯ ಏಳುಬೀಳುಗಳನ್ನು ಅಧ್ಯಯನ ಮಾಡಿ ಬರೆದಿರುವುದರಿಂದ ಇದೊಂದು ಅಪರೂಪದ ಕೃತಿಯೆಂದರೆ ತಪ್ಪಾಗಲಾರದು. ಕೃತಿಯನ್ನು ಓದುತ್ತಿರುವಂತೆ ಜೀವನ ಚರಿತ್ರೆಯಾಗಿಯೂ ಮತ್ತು ನಾನ್ ಫಿಕ್ಷನ್ ಕೃತಿಯಂತೆಯೂ ಗುರುತಿಸಿಕೊಳ್ಳುವ ‘ಗಂಧರ್ವಯುಗ’ ಕನ್ನಡ ಮಟ್ಟಿಗಂತೂ ಹೊಸತೆನ್ನಬಹುದು.

ಈ ಕೃತಿಯನ್ನು ಚಾರಿತ್ರಿಕ ಹಿನ್ನಲೆಯಲ್ಲಿ ರಚಿಸಿರುವುದರಿಂದ ಆಗಿನ ರಂಗಭೂಮಿಯ ಕಲಾವಿದರ ಬದುಕು, ಸಾಧನೆ, ಹೋರಾಟಗಳನ್ನು ಬಹಳ ಕೂಲಂಕಷವಾಗಿ ಚಿತ್ರಿಸಲಾಗಿದೆ. ಮರಾಠಿ ರಂಗಭೂಮಿ ಇಂದಿಗೂ ತನ್ನ ಹಿಂದಿನ ಛಾಪನ್ನು ಉಳಿಸಿಕೊಂಡಿರುವುದರಿಂದ ನಾಟಕಗಳ ಶ್ರೀಮಂತಿಕೆ ಇನ್ನೂ ಅದೇ ರೀತಿಯಲ್ಲಿ ಮುಂದುವರೆದಿದೆಯೆನ್ನಬಹುದು.

ಇದೊಂದು ಅನುವಾದಿತ ಕೃತಿಯಾದರೂ ಸಾಹಿತ್ಯದಲ್ಲಿ ಅನುವಾದವೆನ್ನುವುದು ಒಂದು ಪ್ರತ್ಯಭಿಜ್ಞಾನವಿದ್ದಂತೆ. ಇದರಿಂದ ಸಾಂಸ್ಕೃತಿಕ ವಿನಿಮಯದ ಸಾಧ್ಯತೆಗಳಿಗೆ. ಹಾಗಾಗಿ ಈ ಕೃತಿಯಲ್ಲಿಯೂ ಅದು ಒಂದು ಪ್ರದೇಶದ ಸಂಸ್ಕೃತಿ, ಪರಿಸರಗಳನ್ನು ಒಳಗೊಂಡಿದ್ದರೂ ಅದರ ಒಳನೋಟವಿರುವುದು ಎಲ್ಲಾ ಕಲಾವಿದರ ಬದುಕನ್ನ ಬಿಂಬಿಸುವಂತೆಯೆ. ಪೋಕಳೆಯವರ ಪರಿಣಾಮಕಾರಿಯಾದ ಅನುವಾದವೂ ಇದಕ್ಕೆ ಪೂರಕವಾಗಿದೆ.

ಬಾಲಗಂಧರ್ವ ಮರಾಠಿ ರಂಗಭೂಮಿಯ ಶ್ರೇಷ್ಠ ಕಲಾವಿದ. ಇವರ ರಂಗಭೂಮಿಯ ಬದುಕನ್ನು ಸಮಗ್ರವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಿರುವುದಲ್ಲದೆ, ಚಾರಿತ್ರಿಕ ಒಳನೋಟವನ್ನು ವ್ಯಕ್ತಪಡಿಸುವ ಕೃತಿಯಾಗಿ, ವ್ಯಕ್ತಿಗತವಾದ ಸಂಕಟ, ಅಸಹಾಯಕತೆ, ತೊಳಲಾಟಗಳ ಮೂಲಕ ರಂಗಭೂಮಿಯ ನೇಪಥ್ಯವನ್ನ ಎತ್ತುವ ಪ್ರಯತ್ನವೂ ಇಲ್ಲಿ ನಡೆದಿದೆ. ಇದರ ಜೊತೆಗೆ ಬಾಲಗಂಧರ್ವರ ಸಮಕಾಲೀನರಾದ ಕೃಷ್ಣರಾವ, ಗಣಪತರಾವ ಬೋಡಸ, ಕೇಶವರಾವ ಭೋಸಲೆ ಮುಂತಾದ ರಂಗಕರ್ಮಿಗಳ ಜೊತೆಗೆ ಕೋಲ್ಹಟಕರ, ಗಡಕರಿಯವರಂತಹ ನಾಟಕಕಾರರ ಬದುಕನ್ನು ಕೂಡ ಸೂಕ್ಷಮವಾಗಿ ತೆರೆದಿಡುವ ಪ್ರಯತ್ನ ಇಲ್ಲಿದೆ.

ವೃತ್ತಿ ಮಾತ್ಸರ್ಯ ಅಳಿಸಲಾಗದ ಮತ್ತು ಸಹಿಸಲಾಗದ ಅನಾರೋಗ್ಯಕರ ಬೆಳವಣಿಗೆಯಿಂದಾಗಿ ಸಾಮಾನ್ಯನ ಬದುಕು ದುಸ್ತರದತ್ತ ಸಾಗುವುದು ಲೋಕರೂಢಿ. ಈ ರೀತಿಯ ಮತ್ಸರ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ, ಒಟ್ಟು ಸಾಮಾಜಿಕ ವ್ಯವಸ್ಥೆಯನ್ನು ಮೀರಿಯೂ ನಡೆಯಬಹುದು. ರಂಗಭೂಮಿ ಕೂಡ ಈ ವೃತ್ತಿ ಮಾತ್ಸರ್ಯದಿಂದ ಹೊರತಾಗಿಲ್ಲ. ಇದು ಒಂದೊಂದು ಕಡೆ ಆರೋಗ್ಯಕರವಾಗಿಯೂ ಪರಿಣಿಮಿಸುವುದಿದೆ. ಬಾಲಗಂಧರ್ವರಂತಹ ದಿಗ್ಗಜರನ್ನು ಕೂಡ ಇದು ರಂಗಭೂಮಿಗೆ ಕೊಟ್ಟಿರುವುದು ಉಲ್ಲೇಖಾರ್ಹ.

ತಿಲಕರ ವಾತ್ಸಲ್ಯ ಮತ್ತು ಪ್ರೋತ್ಸಾಹದಿಂದ ಬಲಕ ನಾರಾಯಣ ಹಾಡುಗಾರನಾಗಿ ಮತ್ತು ನಟನಾಗಿ ರಂಗಭೂಮಿಗೆ ಕಾಲಿಟ್ಟದ್ದು ಮರಾಠಿ ರಂಗಭೂಮಿಯಲ್ಲಿ ದೈತ್ಯ ಅಲೆಯೊಂದು ಆವರ್ತವಾದಂತಾಯಿತು. ಬಾಬಾ ಮಹಾರಾಜರು ನಾರಾಯಣನ ಹಾಡನ್ನು ಮೆಚ್ಚಿ ಮುಂದೆ ಅಂದಿನ ಖ್ಯಾತ ನಾಟಕ ಕಂಪನಿ ‘ಕಿರ್ಲೋಸ್ಕರ್’ಗೆ ಸೇರಿಸಿದರು. ಆ ಸಮಯದಲ್ಲಿ ಹೆಣ್ಣಿನ ಪಾತ್ರ ಮಾಡುವುದಕ್ಕೆ ಅಗತ್ಯವಾಗಿ ಒಬ್ಬ ನಟನ ಅಗತ್ಯವಿತ್ತು. ಆ ಸ್ಥಾನವನ್ನು ತುಂಬಿದವರು ನಾರಾಯಣರು. ಕ್ರಮೇಣ ಆತನ ಪ್ರಸಿದ್ಧಿ ಎಲ್ಲಿಯವರೆಗೆ ಹಬ್ಬಿತ್ತೆಂದರೆ, ಅವನ ಅಭಿನಯಕ್ಕೆ ಮನಸೋತ ರಂಗಾಸಕ್ತರೆಲ್ಲ – ತಮ್ಮ ಹೆಂಡದಿರು ಕೂಡ ಆತನ ಸ್ತ್ರೀ ಪಾತ್ರದಂತೆ ವರ್ತಿಸಬೇಕೆಂದು ಅಪೇಕ್ಷೆ ಪಡುತ್ತಿದ್ದರು.

ಒಬ್ಬ ಆಪ್ಪಟ ನಟನಾಗಿ ಗುರುತಿಸಿಕೊಂಡ ನಾರಾಯಣ ಮುಂದೆ ‘ಬಾಲಗಂಧರ್ವ’ನೆಂದೆ ಖ್ಯಾತರಾದರು. ಇದು ರಂಗಭೂಮಿಯ ಘನತೆಯನ್ನೂ ಹೆಚ್ಚಿಸಿತಾದರೂ, ಅಲ್ಲಿ ನಡೆಯುವ ವೈಷಮ್ಯ, ತೀವ್ರ ಸ್ಪರ್ಧೆ, ಮತ್ಸರದ ಬೇರುಗಳ ಜೊತೆಗೆ ಜೀಕುವುದು ಮತ್ತು ರಂಗಭೂಮಿಯ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಹೆಣಗಾಡಬೇಕಾಯಿತು. ಕೌಟುಂಬಿಕ ಬದುಕು, ಆಘಾತ, ಮಾನಸಿಕ ಹೊಡೆತಗಳನ್ನು ಎದುರಿಸುತ್ತಲೇ, ರಂಗಾಯಣದಲ್ಲಿಯೂ ಸಮತೋಲನವನ್ನು ಕಾಯ್ದುಕೊಂಡು ಬರುವ ಅನಿವಾರ್ಯತೆಯಿಂದ, ಯಾವುದಕ್ಕೂ ಕುಂದು ಬಾರದಂತೆ ಅದರ ಏಳಿಗೆಗಾಗಿ ಶ್ರಮಿಸಿದವರು ಬಾಲಗಂಧರ್ವರು. ಇದು ಅವರ ರಂಗದ ಬಗೆಗಿನ ನಿಸ್ಸೀಮ ಪ್ರೀತಿಯನ್ನು ತೋರಿಸುತ್ತದೆ. ಅವರಿಗೆ ಬೇರೆ ಜವಾಬ್ದಾರಿಗಳಿದ್ದರೂ ನಟನೆಯೇ ಮುಖ್ಯವಾಗಿತ್ತು. ಇದರಿಂದಾಗಿ ಮನೆ ಮನೆಯಲ್ಲಿ ಅವರ ಭಾವಚಿತ್ರವನ್ನು ತೂಗುಹಾಕುವಷ್ಟರ ಎತ್ತರಕ್ಕೆ ಬೆಳೆದರು.

ಮುಂದೆ ಕೆಲವೊಂದು ಬಾಲಗಂಧರ್ವರು ಅವರದಲ್ಲದ ಆಪಾದನೆಯನ್ನು ಹೊತ್ತುಕೊಂಡು ಕಂಪನಿಯನ್ನು ಬಿಟ್ಟು ಹೊರಗೆ ಬರಬೇಕಾಯಿತು. ಆನಂತರ ‘ಗಂಧರ್ವ ನಾಟಕ ಮಂಡಳಿ’ಯ ಸ್ಥಾಪನೆಯಆಗಿ ಅಲ್ಲಿಯೂ ನಾಟಕಗಳೆಲ್ಲವೂ ಜಯಭೇರಿ ಸಾಧಿಸುವಂತೆ ಮಾಡಿದರು. ಹೊಸ ಕಂಪನಿಯನ್ನು ಕಟ್ಟುವಾಗಿನ ಏಳುಬೀಳುಗಳನ್ನು ಕೂಡ ಈ ಕಾದಂಬರಿ ಸೂಕ್ಷ್ಮವಾಗಿ ತಿಳಿಸುವುದಲ್ಲದೆ, ಕಲಾವಿದರ ಬದುಕು ಮತ್ತು ಅದು ರಂಗಚಟುವಟಿಕೆಗಳಲ್ಲಿ ಹೇಗೆ ಅನ್ಯೋನ್ಯವಾಗಿರುತ್ತದೆಯೆನ್ನುವುದನ್ನು ಈ ಕಾದಂಬರಿ ಬಹಳ ಮಾರ್ಮಿಕವಾಗಿ ಚಿತ್ರಿಸಿದೆ. ಇದು ಒಂದು ಚಾರಿತ್ರಿಕ ಕೃತಿಯಾಗಿರುವುದರಿಂದಲೇ ಸಹಜತೆಯನ್ನು ಉಳಿಸಿಕೊಂಡಿದೆ.
ಬಾಲಗಂಧರ್ವರು ಮಗಳನ್ನು ಕಳೆದುಕೊಂಡರೂ ರಂಗಭೂಮಿಯಿಂದ ವಿಮುಖರಾದವರಲ್ಲ. ಅದೇ ಅವರ ಜೀವಾಳವಾಗಿತ್ತು. ಕೊನೆಗೆ ಕಂಪನಿಯನ್ನು ನಡೆಸಲಾರದೆ ಸಾಲದಲ್ಲಿ ಮುಳುಗಿದಾಗ, ಕಂಪನಿಯ ಮಾಲಕತ್ವವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ತಾವು ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನಷ್ಟೇ ವಹಿಸಿಕೊಂಡರು. ಆನಂತರ ಖರ್ಚುಗಳನ್ನು ನಿಯಂತ್ರಿಸಲಾರದೆ ಸಾಲದ ಹೊರೆಯಲ್ಲಿ ಮುಳುಗಿದರು. ಆದರೂ ಧೃತಿಗೆಡದೆ ರಂಗಭೂಮಿಯಲ್ಲಿಯೇ ಮುಂದುವರೆದರು. ರಂಗವೃತ್ತಿಯನ್ನೇ ನಂಬಿ ಬದುಕಿದ ಬಾಲಗಂಧರ್ವರು, ರಂಗಭೂಮಿಯ ಸುವರ್ಣಯುಗ’ವನ್ನು ಸ್ಥಾಪಿಸಿದರು.
ಹೀಗೆ ನಟನೊಬ್ಬನ ಏಳುಬೀಲಿನ ಜೊತೆಗೆ ರಂಗಭೂಮಿಯ ಬೆಲವಣಿಗೆ ಮತ್ತು ನಿರೂಪಣೆಗಳನ್ನು ಕಾದಂಬರಿ ದಾಖಲೆಗಳೊಂದಿಗೆ ಪುನರ್ ಸೃಷ್ಟಿಸಿರುವುದರಿಂದ, ಇಂತಹ ಚಾರಿತ್ರಿಕ ಕಾದಂಬರಿಗಳು ರಂಗಾಭ್ಯಾಸಕತರಿಗೆ ಅಧ್ಯಯನಕ್ಕೆ ಆಧಾರ ಕೃತಿಯಾಗಿಯೂ ಉಪಯೋಗವಾಗುವಂತಹುದು.
ಇದೊಂದು ಓದಿ ಪಕ್ಕಕ್ಕಿಡುವ ಕೃತಿಯಲ್ಲ. ಗಂಭೀರ ಓದುವಿಕೆಯ ಮಹತ್ವದ ಕೃತಿಯಾಗಿರುವ ಇದನ್ನು ಬೆಳದಿಂಗಳು ಪ್ರಕಾಶನ, ಬೆಳಗಾವಿ ಇವರು ಪ್ರಕಟಿಸಿದ್ದಾರೆ.


Read more!

Tuesday, August 23, 2011

ಸಲಾಂ ಟು `ಮುತ್ತೆತ್ತೂರಿನ ದರ್ಗಾ'


ಕಿದೂರು ವೇಣುಗೋಪಾಲ ಶೆಟ್ಟಿ ಅವರ ಕಥಾಸಂಕಲನ `ಮುತ್ತೆತ್ತೂರಿನ ದರ್ಗಾ’ ಒಂದು ವಿಭಿನ್ನ ಹಾಗೂ ಆಕರ್ಷಕ ಶೀರ್ಷಿಕೆಯ ಕೃತಿ. ಇಲ್ಲಿಯ ಕಥೆಗಳನ್ನು ಓದುತ್ತಲೇ ಕಥೆಗಾರನ ಪ್ರಬುದ್ಧತೆಯು ನಮಗೆ ತಿಳಿಯುತ್ತದೆ. ಪರಿಪಕ್ವವಾದ ಮತ್ತು ಗಟ್ಟಿ ಹಂದರವನ್ನು ಒಳಗೊಂಡಿರುವ ಇಲ್ಲಿಯ ಕಥೆಗಳೆಲ್ಲವೂ ವೈಯಕ್ತಿಕವಾಗಿ ಪಾತ್ರಗಳ ಆಂತರಿಕ ತುಮುಲವನ್ನು ಮತ್ತು ಸಮಾಜದ ಒಟ್ಟು ವ್ಯವಸ್ಥೆಯನ್ನು ಓದುಗರಿಗೆ ತಲುಪಿಸುತ್ತದೆ. ಇಲ್ಲಿಯ ಕಥಾ ನಿರೂಪಣಾ ಶೈಲಿ, ಪಾತ್ರಗಳ ಒಳಮನಸ್ಸನ್ನು ಬಗೆಯುವ ರೀತಿ ಎಲ್ಲವೂ ಬೇರೆಯದಾಗಿಯೆ ಇದ್ದು, ನಾವು ಸುತ್ತಮುತ್ತಲು ಕಂಡಂತಹ ಬದುಕನ್ನು ಮತ್ತೊಂದು ನೆಲೆಯಲ್ಲಿ ತೆರೆದಿಡುವುದೇ ಆಗಿದೆ. ಆದರೆ ಇಲ್ಲಿ ಯಾವ ಇಸಂಗಳಿಗೆ ಈಡಾಗದೆ, ನೇರವಾಗಿ ಮತ್ತು ಧೈರ್ಯವಾಗಿ ಕಥೆಗಳನ್ನು ಹೆಣೆದಿರುವುದು ಮೆಚ್ಚತಕ್ಕದ್ದು."

ಇಲ್ಲಿಯ ಹೆಚ್ಚಿನ ಕಥೆಗಳೆಲ್ಲವೂ ನೇರ ನಿರೂಪಣೆಯಲ್ಲಿ, ಸರಳ ಮತ್ತು ಸುಂದರವಾದ ಪ್ರಾದೇಶಿಕ ಭಾಷೆಯಲ್ಲಿ ಬಿಚ್ಚಿಡುತ್ತಾ ಓದುಗನಿಗೆ ಆಪ್ತವೆನಿಸುವಂತಹವುಗಳು. ಕಥೆ ಹೀಗೆ ಇರಬೇಕೆನ್ನುವ ಯಾವ ಕಟ್ಟುಪಾಡುಗಳಿಗೂ ಒಳಗಾಗದೆ ಬರೆದಿರುವುದರಿಂದ ಕೆಲವೊಮ್ಮೆ ಇವು ವಾಸ್ತವದಲ್ಲಿ ನಡೆದ ಮತ್ತು ನಡೆಯುತ್ತಿರುವ ಸಂಗತಿಗಳೇನೋ ಅನಿಸದಿರದು. ಕೇವಲ ವಾಸ್ತವದ ವಿಷಯವನ್ನು ಕಥೆಯಾಗಿ ಕಟ್ಟಿಕೊಡುವುದಿಲ್ಲ; ಅದರ ಜೊತೆ ಜೊತೆಗೆನೆ ಅನುಭವಗಳನ್ನು ಲೇಖಕ ಪಾತ್ರಗಳ ಮೂಲಕ ಹಂಚಿಕೊಳ್ಳುವುದರಿಂದ, ಕಾಲ್ಪನಿಕತೆಯಿಂದ ಹೊರಗೆ ಬಂದಂತಹ ಅನುಭವವಾದರೆ ಅತಿಶಯೋಕ್ತಿಯಲ್ಲ. ಕೋಮು ಸೌಹಾರ್ದತೆ, ಸಂಕಟ, ನೋವು, ಯಾತನೆಗಳ ನಡುವೆ ಬೆಳೆಯುವ ಪಾತ್ರ ಚಿತ್ರಣಗಳು ಆದರ್ಶಪ್ರಾಯವಾಗಿ ಕಾಣಿಸುತ್ತವೆ. ಕೆಲವೊಮ್ಮೆ ಒಂದು ಸ್ವಸ್ಥ ಸಮಾಜದ ಪರಿಕಲ್ಪನೆ ಕೂಡ ಈ ಸಂಕಲನದ ಕಥೆಗಳಲ್ಲಿ ಕಾಣಸಿಗುತ್ತದೆ.

ಈ ಕಥಾಸಂಕಲನದ ಮತ್ತೊಂದು ವಿಶೇಷ ಅಂಶವೆಂದರೆ ಹೆಚ್ಚಿನ ಕಥೆಗಳೆಲ್ಲಾ ಲೇಖಕನೇ `ಫಸ್ಟ್ ಪರ್ಸನ್’ ಆಗಿ ಕಥೆಯನ್ನು ಪ್ರಸೆಂಟ್ ಮಾಡುವಂತೆ ಕಂಡರೂ ಕಥೆಯ ಆಳಕ್ಕೆ ಇಳಿಯುತ್ತಲೇ ಅಲ್ಲಿಯ ಒಂದು ಪಾತ್ರವೇ ಆ ಫಸ್ಟ್ ಪರ್ಸನ್ ನಿರೂಪಣೆ ಮಾಡುವುದನ್ನು ತಿಳಿಯುತ್ತದೆ. ಇದಕ್ಕೆ ಉತ್ತಮ ಉದಾಹರಣೆಯನ್ನು ಕೊಡುವುದಿದ್ದರೆ ಮುಸಡಾ ಅನ್ನುವ ಬಣ್ಣದ ಎಲೆಗಳನ್ನು ಬಿಡುವ ಗಿಡ, ಚಿಟ್ಟೆಗಳಿಗೆ ಹೂವೆನ್ನುವ ಹಾಗೆ ಭ್ರಮೆ ಹುಟ್ಟಿಸಿ ತನ್ನತ್ತ ಆಕರ್ಷಿಸುವಂತೆ ಮಾಡುವುದಿದೆಯಲ್ಲ ಹಾಗೇನೆ ಇಲ್ಲಿಯ ಕಥೆಗಳು ಓದುಗನನ್ನು ಒಳಕ್ಕೆ ಎಳೆದುಕೊಳ್ಳುತ್ತವೆ.

ಮಾನವೀಯತೆಯ ನೆಲೆಗಟ್ಟಿನಲ್ಲಿ ರಚಿಸಿದ `ಮುಸ್ಲಿಯಾರ್’; `ನಾನು ಕೊಂದ ಅಜ್ಜಿ’; ಮುಂತಾದ ಕಥೆಗಳು ಮತ್ತು ಕೋಮು ಸೌಹಾರ್ದತೆಯನ್ನು ಬಿಂಬಿಸುವ `ಮುತ್ತೆತ್ತೂರಿನ ದರ್ಗಾ’; ನವಿರು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಡುವ `ಅಜ್ಜನ ಕೊನೆಯ ದಿನ ಕೊನೆಯಾದದ್ದು’; `ಏಕೆ ಹೀಗೆ...’; `ಅಪ್ಪಾ ಭಟ್ಟರ ಮನೆತನ’ ಮತ್ತು `ಸಿದ್ಧಾರ್ಥ’ ಕಥೆಗಳು, `ಸೋಲು’; `ಅಕ್ಟೋಪಸ್’; `ಮರೆಯ ನೆರಳಿನಲ್ಲಿ’ ಯಂತಹ ಗಂಭೀರ ಚಿಂತನೆಯ ವಸ್ತುಗಳು ಕೂಡ ಸುಲಭವಾಗಿ ಕಿದೂರರ ಲೇಖನಿಯಿಂದ ಪರಿಣಾಮಕಾರಿಯಾಗಿ ಮೂಡಿ ಬಂದಿವೆ.

ಈ ಕಥಾಸಂಕಲನದ `ಮುಸ್ಲಿಯಾರ್’, `ಅಜ್ಜನ ಕೊನೆಯ ದಿನ ಕೊನೆಯಾದದ್ದು’ ಮತ್ತು `ಮುತ್ತೆತ್ತೂರಿನ ದರ್ಗಾ’ ಕಥೆಗಳಲ್ಲಿ ಕೋಮುಸೌಹಾರ್ದತೆ ಮೂಡಿಬಂದಿರುವುದು ಒಂದು ಸ್ವಸ್ಥ ಸಮಾಜದ ಪರಿಕಲ್ಪನೆಯಲ್ಲಿ ಮಾತ್ರವಲ್ಲ, ಅವು ಸಹಜವಾಗಿ ಒಂದೊಮ್ಮೆ ನಮ್ಮ ಸುತ್ತ ಮುತ್ತಲಿದ್ದ ಸಮಾಜವೇ ಅನ್ನುವುದನ್ನು ಸಾಭೀತುಪಡಿಸುತ್ತದೆ. ಈ ಎರಡು ಕಥೆಗಳಲ್ಲಿಯೂ ವರ್ತಮಾನದ ಸಮಸ್ಯೆಗಳನ್ನು ಮುಖಾಮುಖಿಯಾಗಿಸುತ್ತಾ, ಸಹಬಾಳ್ವೆಯ ಆರೋಗ್ಯಕರ ಚಿಂತನೆಯನ್ನು ಮುಂದಿಡುತ್ತವೆ.

`ಮುಸ್ಲಿಯಾರ್’ ಕಥೆಯ ಮುಸ್ಲಿಯಾರ್, ಎಲ್ಲರಿಗೂ ಬೇಕಾದ ವ್ಯಕ್ತಿ. ಆತ ತುಂಬಾ ನಾಜೂಕಿನ ಮನುಷ್ಯ. ಅವರು ಹೊರಗೆ ಹೊರಟಾಗ ಎಂತಹ `ಹರಾಮೇ’ಯಾದರೂ ಅವರಿಗೆ ಸೊಂಟ ಬಗ್ಗಿಸಿ ನಮಸ್ಕರಿಸಲೇ ಬೇಕು. ಅಂತಹ ಮುಸ್ಲಿಯಾರರಿಗೆ ಜಾತಿ ಮತದ ಕಟ್ಟುಪಾಡುಗಳು ಇಲ್ಲವಾಗಿ ಅವರ `ಭಸ್ಮ’ದ ಮಹಿಮೆ ಎಲ್ಲರಿಗೂ ಅವಶ್ಯಕವಾಗಿತ್ತು. ಮುಸ್ಲಿಯಾರಜ್ಜ ಅದೇ ಭಾಂದವ್ಯವನ್ನು ಮುನ್ನಡೆಸಿಕೊಂಡು ಬರುತ್ತಾರಾದರೂ ಆ ನಿರೀಕ್ಷೆ ಮುಂದೆ ಅವರಿಗೆ ನಿರೀಕ್ಷೆಯಾಗಿ ಉಳಿಯುವುದಿಲ್ಲ. ತಾವೆ ಭಸ್ಮದಿಂದ ಕೆಲವೊಂದು ಮಕ್ಕಳನ್ನು ಸ್ವಸ್ಥ್ಯರನ್ನಾಗಿಸಿದವರು. ಈಗ ಅದೇ ಮಕ್ಕಳು ತಮ್ಮ ಕಣ್ಣೆದುರಿಗೆ ಬೆಳೆದು ನಿಂತು, ಪದೇ ಪದೇ ಅವರು ಮನೆಗೆ ಬರುವುದನ್ನು ಪ್ರಶ್ನಿಸುವ ರೀತಿಯಲ್ಲಿ ಅಸಹನೀಯ ನೋವನ್ನುಂಟು ಮಾಡುವಾಗ ಊರನ್ನು ತೊರೆಯುತ್ತಾರೆ. ಆದರೆ ಅವರ ಮಹತ್ವದ ಅರಿವಾಗುವುದು ಕೊನೆಯಲ್ಲಿ ಆ ವ್ಯಕ್ತಿಯ ಮಗುವಿಗೆ ಅಸೌಖ್ಯ ಕಾಡಿದಾಗ. ಹೀಗೆ ಜಾತೀಯತೆಗಿಂತ ಮಿಗಿಲಾದ ಒಂದು ಭಾಂದವ್ಯವನ್ನು ಮುಸ್ಲಿಯಾರಜ್ಜ ಉಳಿಸಿರುತ್ತಾರೆ. ಇದು ನಿಜವಾಗಿಯೂ ಇಂದಿನ ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದೆಯೆನ್ನುವುದು ಓದುಗನ ಅಭಿಪ್ರಾಯವೂ ಆಗುತ್ತದೆ.

ಇನ್ನೊಂದು ಕಥೆ `ಮುತ್ತೆತ್ತೂರಿನ ದರ್ಗಾ’. ಇಲ್ಲಿಯ ದರ್ಗಾದ ವಿಶೇಷತೆಯೆಂದರೆ ಸಮುದ್ರ ತೀರದಲ್ಲಿ ಅರಬ್ಬಿಯೊಬ್ಬನ ದೇಹದ ಒಂದು ಭಾಗವನ್ನು ಹಾಗೇ ನಿರ್ಲಕ್ಷಿಸದೆ ಅದನ್ನು ತಂದು ಹೂಳುವ ಬೆಸ್ತರಿಗೆ, ಆ ಅರಬ್ಬಿಕಾಕನೆ ಅಮೂರ್ತ ರೂಪದಲ್ಲಿ ಕಾಣಿಸಿ(ಇಲ್ಲಿ ಸೂಟೆಯ ರೂಪದಲ್ಲಿ ಕಾಣಿಸಿ) ಅವರು ತನಗಾಗಿ ನಿರ್ಮಿಸಿದ ದರ್ಗಾವನ್ನು ನೋಡಿಕೊಳ್ಳುವಂತೆ ಸೂಚಿಸುತ್ತಾನೆ. ಇಲ್ಲಿಯ ಪ್ರಾಮುಖ್ಯತೆಯಿರುವುದು ಸತ್ತ ಹೆಣವನ್ನು ಮಾನವೀಯ ಅಂತ:ಕರಣವಿರುವ ವ್ಯಕ್ತಿಗಳು ಅದಕ್ಕೊಂದು ಸಂಸ್ಕಾರವನ್ನು ಮಾಡುವುದು. ಆಗ ಜಾತೀಯತೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಅನಂತಮೂರ್ತಿಯವರ `ಸಂಸ್ಕಾರ’ದಲ್ಲಿ ಮುಸಲ್ಮಾನನೊಬ್ಬ ಹೆಣದ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತಹ ಸನ್ನಿವೇಶವೇ ಮುತ್ತೆತ್ತೂರಿನ ದರ್ಗಾ ಕಥೆಯಲ್ಲಿದೆ. ಆದರೆ ಅದನ್ನು ಕಥೆಯ ಹೈಲಟಾಗಿಸದೆ ಸರಳವಾಗಿ ಹೇಳಿ ಮುಗಿಸುವ ಲೇಖಕರಿಗೆ ಅದಕ್ಕಿಂತಲೂ ಮಿಗಿಲಾದ ಭಾವಕ್ಯತೆಯ ಬಗೆ ಹೇಳುವ ಆದರ್ಶ ಎದ್ದು ಕಾಣುತ್ತದೆ. ಇಲ್ಲಿ ವರ್ಷದ ಉರೂಸ್ ನಡೆಯುವ ಸಂದರ್ಭದಲ್ಲಿ ಅದನ್ನು ಬಿಟ್ಟುಕೊಟ್ಟು ಉಳಿದಂತೆ ಅದರ ರಕ್ಷಣೆ ಬೆಸ್ತರದ್ದು. ಇಲ್ಲಿ ಕಾಣುವ ಸಮಾಜ ಕೂಡ ಬಹಳ ಸ್ವಸ್ಥ ಸಮಾಜ. ಉರೂಸ್ ನಡೆಯುವ ಸಂದರ್ಭದಲ್ಲಿಯಂತು ಅದನ್ನು ನೋಡುವವನಿಗೂ ಎಂತಹ ಅನ್ಯೋನ್ಯತೆ ಅನಿಸದಿರದು. ಆ ಕೋಮು ಸೌಹಾರ್ದತೆಯ ದೃಶ್ಯವನ್ನು ನೋಡಲು ಬರುವ ಹಯಗ್ರೀವ ಮತ್ತು ಹನೀಫ ಇಬ್ಬರೂ ಆಪ್ತ ಸ್ನೇಹಿತರು. ಆ ದರ್ಗಾವನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಅನಾಥ, ಭಿಕ್ಷುಕನ ರೂಪದಲ್ಲಿ ಬಂದು ಅದರ ಏಳಿಗೆಯನ್ನು ನೋಡಿಕೊಳ್ಳುವಂತೆ ಊರಿನವರಿಗೆ ಭಾಸವಾದರೂ ಆತನ ಜಾತೀಯತೆಯ ಪ್ರಶ್ನೆ ಎಲ್ಲೂ ಬರುವುದಿಲ್ಲ. ಕೆಲವರಿಗೆ ಅವನು ಮುಸ್ಲಿಂನಂತೆ ಕಂಡರೂ ಇನ್ನುಳಿದವರ ದೃಷ್ಟಿಯಲ್ಲಿ ಆತ ಅರಬ್ಬಿಕಾಕನ ರಕ್ಷಣೆಗೆ ಬಂದವನೆಂದೇ ತಿಳಿಯುತ್ತಾರೆ. ಹೀಗೆ ಊರು ಅನ್ಯೋನ್ಯತೆಯಿಂದಿರುವಾಗ ಆಧುನಿಕತೆಯ ಕರಾಳ ಛಾಯೆ ಮುತ್ತೆತ್ತೂರಿಗೂ ಬಂದು ವೈಮನಸ್ಸು ಉಂಟಾಗಿ ರಕ್ತಪಾತವೂ ನಡೆಯುತ್ತದೆ. ಅದರ ಪರಿಣಾಮವಾಗಿ ಮುತ್ತೆತ್ತೂರು ಕೋಮು ಗಲಭೆಗೆ ನಾಂದಿಯಾಗುತ್ತದೆ. ಆ ಘಟನೆಯಿಂದ ತೀವ್ರ ಗಾಯಗೊಂಡ ಹಯಗ್ರೀವನನ್ನು ಹನೀಫ ಆದರಿಸಿ ಹಿಡಿಯುವುದರೊಂದಿಗೆ ಕಥೆ ಅಂತ್ಯವಾಗುತ್ತದೆ. ಹೀಗೆ ಅನ್ಯೋನ್ಯತೆ ಕೇವಲ ಜಾತೀಯತೆಯ ಮರುಸೃಷ್ಟಿ ಪಡೆದು ಇಡೀ ಸಮಾಜವನ್ನು ಹೇಗೆ ಕಂಗೆಡಿಸುತ್ತದೆಯೆನ್ನುವುದರ ಜೊತೆಗೆ ಸ್ನೇಹದ ತೀವ್ರತೆಯನ್ನು ಕೂಡ ಈ ಕಥೆ ಚೆನ್ನಾಗಿ ನಿರೂಪಿಸಿದೆ.

`ನಾನು ಕೊಂದ ಅಜ್ಜಿ’ ಬದುಕಿನ ಕೊನೆಯ ದಿನಗಳಲ್ಲಿ ಸಾಮಾನ್ಯವಾಗಿ ನರಳುವ ವಯೋವೃದ್ದೆಯ ಕಥೆಯಾದರೂ ಇಲ್ಲಿ ಗಮನಿಸಬೇಕಾಗಿರುವುದು ಎಲ್ಲವೂ ಇದ್ದು ಎಲ್ಲವನ್ನೂ ತೊರೆದ ಅಸಹಾಯಕತೆಯ ಪ್ರತಿಬಿಂಬವನ್ನು. ತನ್ನ ಕೊನೆಗಾಲದಲ್ಲಿ ತಾನು ಯಾರ ಜೊತೆಗಿರುವುದೆನ್ನುವ ದೊಡ್ಡ ಸಮಸ್ಯೆ ಎದುರಾಗಿ ಆಕೆ ತನ್ನ ಮಗನ ಸಮಾನನಾದ ನಿರೂಪಕ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ. ಆಗ ಅವಳಿಗೊಂದು ಪರಿಹಾರ ಸೂಚಿಸುವ ನಿರೂಪಕ ಕೊನೆಗೆ ಯಾವ ನಿರ್ಧಾರವನ್ನೂ ತಳೆಯಲಾರದೆ ಅವಳಿಗೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ, `ಇದ್ದದ್ದನ್ನು ಇದ್ದ ಹಾಗೆ ಎದುರಿಸುವುದೊಂದೆ ದಾರಿ’ಯೆನ್ನುತ್ತಾನೆ. ಈ ಮಾತು ಹೇಳಿದ್ದೆ ಆ ವೃದ್ದೆಗೆ ಏನನಸಿತೊ ಬದುಕನ್ನೆ ಅಂತ್ಯಗೊಳಿಸಿಕೊಳ್ಳುತ್ತಾಳೆ. ಅದನ್ನು ಕೇಳಿದ ನಿರೂಪಕನಿಗೆ ಅಪರಾಧಿ ಭಾವನೆ ಕಾಡುತ್ತದೆ. ಈ ಕಥೆಯಲ್ಲಿ ಬರುವ ಸಮಸ್ಯೆ ಇಳಿವಯಸ್ಸಿನಲ್ಲಿರುವ ಎಲ್ಲರದ್ದು. ಮಾನಸಿಕವಾಗಿ ಅಂತಹ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳುವುದು ಹೇಳಿದಷ್ಟು ಸುಲಭದ ಮಾತಲ್ಲ. ತಾನೊಂದು ಹೊರೆಯೆನ್ನುವ ಕೀಳರಿಮೆಯ ಜೊತೆಗೆ ತನ್ನನ್ನಾರು ನೋಡಿಕೊಳ್ಳುವುದಿಲ್ಲವೆನ್ನುವ ಭಯ ಇನ್ನಷ್ಟು ಮಾನಸಿಕ ಖಿನ್ನತೆಗೆ ತಳ್ಳುತ್ತದೆ. ಅದಕ್ಕಾಗಿಯೆ ರೋಗಿ ಮತ್ತು ಅಸಹಾಯಕರಿಗೆ ಧೈರ್ಯ ತುಂಬುವ `ಪ್ರೀತಿ’ ಬೇಕೇಬೇಕು. ಆ ಪ್ರೀತಿಯ ಕೊರತೆಯಲ್ಲಿಯೇ ಅಜ್ಜಿಯ ಸಾವು ಸಮಸ್ಯೆಯೊಂದಕ್ಕೆ ಪರಿಹಾರವಿಲ್ಲದೆ ಋಣಾತ್ಮಕದತ್ತ ಚಲಿಸುತ್ತದೆ.

ಪ್ರತಿಭಾವಂತ ವಿದ್ಯಾರ್ಥಿ ಪ್ರವೀಣ ಸಾಮಾಜಿಕ ಪಿಡುಗುಗಳ ವಿರುದ್ಧ ದನಿಯೆತ್ತುವ `ಅಕ್ಟೋಪಸ್’ ಕಥೆಯ ಬಿಸಿ ರಕ್ತದ ತರುಣ. ತನ್ನ ಕಾಲೇಜು ದಿನಗಳಲ್ಲಿಯೇ ಪಿಡುಗಗಳ ವಿರುದ್ಧ ಭಾಷಣಗಳನ್ನು ಮಾಡಿ ಎಲ್ಲರನ್ನೂ ಗೆದ್ದುಕೊಂಡಿದ್ದರೂ, ಮಾತಿನಿಂದ ಏನೂ ಸಾಧಿಸಲಾಗಲಿಲ್ಲವೆನ್ನುವುದನ್ನು ಅರಿತುಕೊಳ್ಳುತ್ತಾನೆ. ಅವನ ಈ ರೀತಿಯ ದನಿಗೆ ಕಾರಣವೂ ಇಲ್ಲದಲ್ಲ. ವರದಕ್ಷಿಣೆಯಂತಹ ಪಿಡುಗಿಗೆ ಅವನ ಅಕ್ಕ ಬಲಿಯಾಗಿರುತ್ತಾಳೆ. ಅದೇ ಅವನನ್ನು ಮೋಸ, ವಂಚನೆ, ಲಂಚ, ಲಲಾಸೆಗಳ ವಿರುದ್ಧವೂ ಹೋರಾಡಲು ಪ್ರಚೋದಿಸುತ್ತದೆ. ಆದರೆ ವಾಸ್ತವದಲ್ಲಿ ಅವೆಲ್ಲವೂ ಏನೂ ಆಗದೆ ಹಾಗೆ ಇದ್ದು ಬಿಡುವಂತಹವುಗಳು ಮತ್ತು ಮುಂದುವರಿಯುತ್ತಾ ಅಕ್ಟೋಪಸ್ನ ಹಾಗೆ ಬಿಗಿ ಹಿಡಿತದಲ್ಲಿರುವವುಗಳು ಅನ್ನುವ ಸತ್ಯ ಗೋಚರವಾಗುತ್ತದೆ. ಅವನ್ನು ಏನೂ ಮಾಡಲಾಗದ ಅಸಹಾಯಕತೆಯನ್ನು ಮುಂದೊಂದು ದಿನ ಅವನೂ ಅವುಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಅಂತಹ ಅಕ್ಟೋಪಸ್ನ ಬಾಹುಗಳಲ್ಲಿ ಅವನೂ ಸೇರಿಕೊಳ್ಳುವುದು ಕಥೆಯ ಅಂತ್ಯದಲ್ಲಿ ಕಾಣಬಹುದು. ನಿಜವಾಗಿಯೂ ಅದು ಅವನ ಮನಸ್ಸಿನ ವಿರುದ್ಧವಾದರೂ ಪ್ರವಾಹದ ಎದುರು ಈಜುವ ಸಾಹಸವು ಎಲ್ಲದಕ್ಕೂ ಪರಿಹಾರವಲ್ಲವೆನ್ನುವ ನಿಜವನ್ನು ತೋರಿಸುತ್ತದೆ.

`ಅಜ್ಜನ ಕೊನೆಯ ದಿನ ಕೊನೆಯಾದದ್ದು’ ಕಥೆ ಮೇಲ್ನೋಟಕ್ಕೆ ಸ್ವಲ್ಪ ನವಿರಾದ ಹಾಸ್ಯವನ್ನು ಬಿಂಬಿಸುವಂತೆ ಕಂಡರೂ ನಿರೂಪಕನಿಗೆ ಎದುರಾಗುವ ದೊಡ್ಡ ಸಮಸ್ಯೆಯ ನಡುವೆಯೂ ಅಜ್ಜನಿಗೆ ಸೀರಿಯಸ್ ಆದಾಗ ಒಂದು ಕಡೆ ಹಿಂದೂ- ಮುಸ್ಲಿಂ ಗಲಭೆ ಆರಂಭವಾಗಿ ಪ್ರೀತಿಯ ಅಜ್ಜನನ್ನು ನೋಡುವುದಕ್ಕೂ ಅಸಾಧ್ಯವಾಗುತ್ತದೆ. ಆದರೂ ಎಲ್ಲಿಂದಲೋ ರಾತ್ರಿಯ ಹೊತ್ತು ಊರು ಸೇರುವಾಗ ಇದಿರಾಗುವ ಮೊಯಿಂನಿ ಬ್ಯಾರಿಯ ಸಾಂತ್ವನ ನಿರೂಪಕನಿಗೆ ಸಮಾಧಾನ ತರುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಬಾಂಧವ್ಯವಿದೆಯಲ್ಲ ಅದು ಒಂದು ಕಡೆ ಹತ್ತಿ ಉರಿಯುವ ಜಾತೀಯತೆಯ ದಳ್ಳುರಿ, ಇನ್ನೊಂದೆಡೆ ಜಾತೀಯತೆಯನ್ನು ಮೀರಿದ ಮಾನವೀಯತೆಯ ಮತ್ತು ಬಾಂಧವ್ಯದ ನಂಟು. ಇವೆಲ್ಲವೂ `ಮುಸ್ಲಿಯಾರ್’ ಮತ್ತು `ಮುತ್ತೆತ್ತೂರಿನ ದರ್ಗಾ’ ಕಥೆಯಲ್ಲಿರುವಂತೆಯೇ ಓದುಗನನ್ನು ಬಾಂಧವ್ಯದ ನೆಲೆಯಲ್ಲಿ ಕಟ್ಟಿ ಹಾಕುತ್ತದೆ.

ಇದೇ ಕಥೆಯ ರೀತಿಯಲ್ಲಿ ಬರೆದ ಇನ್ನೆರಡು ಕಥೆಗಳು, `ಅಪ್ಪಾ ಭಟ್ಟರ ಮನೆತನ’ ಮತ್ತು `ಸಿದ್ಧಾರ್ಥ’. ಅಪ್ಪಾ ಭಟ್ಟರ ಮನೆತನ ಕಥೆಯಲ್ಲಿ `ಮಣ್ಣಲ್ಲಿ ಮುಚ್ಚಿದೆ ಎನ್ನುವುದಾದರೆ ಹೆಣ ಹೂತಲ್ಲಿಯೂ ಮನೆ ಕಟ್ಟಿ ಕುಳಿತುಕೊಳ್ಳಬಹುದಲ್ಲವೆ?’ ಅನ್ನುವ ಪಾರಕ್ಕನ ಮಾತುಗಳು; ಲೇಖಕ ಒಂದು ಪಾತ್ರದ ಅಂತರಾಳಕ್ಕೆ ಇಳಿದು ವಿಷಯಗಳನ್ನು ನಿರೂಪಿಸುವ ಕಥನ ಶೈಲಿಯನ್ನು ಎತ್ತಿ ತೋರಿಸುತ್ತದೆ. ಮತ್ತು ಈ ಸಂಕಲನದ ಎಲ್ಲಾ ಕಥೆಗಳಲ್ಲಿರುವಂತೆ ಒಂದು ಚಿತ್ರಣದಿಂದ ಇನ್ನೊಂದು ಕಥನ ಚಿತ್ರಣಕ್ಕೆ ಸ್ಕಿಪ್ ಮಾಡುವಾಗ ಓದುಗನಿಗೆ ಗೊಂದಲವಾಗದಂತೆ ಸರಾಗವಾಗಿ ಬರೆದಿರುವ ರೀತಿ ಆಪ್ತವೆನಿಸುತ್ತದೆ. ಕಥೆಯ ಕೊನೆಯಲ್ಲಿ ಮಾವಿನ ಮರಕ್ಕೆ ಬೀಳುವ ಕೊಡಲಿಯೇಟು ಪಾರಕ್ಕನ ಅಂತ್ಯವನ್ನು ಸೂಚಿಸುವ ತಂತ್ರವಾಗಿ ಬಳಸಿರುವುದನ್ನು ಕಾಣಬಹುದು. ಈ ಕಥೆಯಲ್ಲಿ ಮುದ್ರಾರಾಕ್ಷಸನ ತೊಂದರೆಯಿಂದಾಗಿ ರಮಾಕಾಂತನ ಹೆಸರು ಕೆಲವೊಂದು ಕಡೆ ರಮಾನಂದನಾಗಿಯೂ, ರಮೇಶನಾಗಿಯೂ ಓದುಗನನ್ನು ಸ್ವಲ್ಪ ಕನ್ಫ್ಯೂಸ್ಗೆ ತಳ್ಳುತ್ತದೆ.

ಇನ್ನು `ಸಿದ್ಧಾರ್ಥ’ ಕಥೆಯಲ್ಲಿ ಕಥಾನಾಯಕ ಸಿದ್ಧಾರ್ಥ ಪ್ರಕೃತಿಯ ವೈಚಿತ್ರವನ್ನು ಪರಾಮರ್ಶಿಸಿಕೊಳ್ಳುವ ಕಥೆಯಾಗಿ ಉಳಿಯದೆ, ನಿಗೂಢವೊಂದರ ನಿಗೂಢತೆಯನ್ನು ನಿಗೂಢವಾಗುಳಿಸದೆ ಒಂದು ಆಶಾಭಾವನೆಯನ್ನು ಹುಟ್ಟು ಹಾಕಿ ವಿರಮಿಸುತ್ತದೆ. ಇಲ್ಲಿ ಹೂ ಬಿಡದೆ ಉಳಿಯುವ ಬರಡು ಮಾವಿನ ಮರ ಮುಂದಿನ ವರ್ಷವಾದರೂ ಫಲ ಕೊಡಬಹುದೆ? ಅನ್ನುವ ಪ್ರಶ್ನೆಯೆ ಒಂದು ಆಶಾಭಾವನೆಯನ್ನು ಮೂಡಿಸುತ್ತದೆ. ಹಿಂದಿನ ಕಾಲದಲ್ಲಿ ರಕ್ತಾಶೋಕ ವೃಕ್ಷ ಹೂಬಿಡಲು ಕನ್ಯೆಯೊಬ್ಬಳಿಂದ ಧೋಹದ ಕಾರ್ಯವನ್ನು ಮಾಡಿಸುತ್ತಿದ್ದರಂತೆ. ಹೆಣ್ಣಿನ ಸುಕೋಮಲವಾದ ಪಾದ ಸ್ಪರ್ಶದಿಂದ ಆ ಮರ ಹೂ ಬಿಡುತ್ತಿತ್ತಂತೆ. ಅದೇ ಕಾರ್ಯ ಈ ಕಥೆಯಲ್ಲಿ ನಿಂಗಿಯ ಜೊತೆಗೆ ಸಿದ್ಧಾರ್ಥನ ಮಿಲನವೇ ಬರಡು ಮರ ಫಲವನ್ನು ಬಿಡುವಂತೆ ಮಾಡಬಹುದೇನೋ?

ಈ ಸಂಕಲನದ ಗಂಭೀರ ಚಿಂತನೆಯ ಎರಡು ಕಥೆಗಳು, `ಸೋಲು’ ಮತ್ತು `ಮರೆಯ ನೆರಳಿನಲ್ಲಿ’. ಸೋಲು ಕಥೆಯಲ್ಲಿ ಶಿಸ್ತಿನ ಸಿಪಾಯಿಯಂತಿರುವ ರಾಜಾರಾಯರ ಸುರ್ಪದಿಯಲ್ಲಿ ಬೆಳೆಯುವ ಮಕ್ಕಳಿಬ್ಬರಿಗೆ ಸ್ವಾತಂತ್ರ್ಯ ಸಿಗುವುದು ತಂದೆ ಮನೆಯಲ್ಲಿಲ್ಲದಾಗ. ಅವರೆಷ್ಟೇ ಸ್ಟ್ರಿಕ್ಟ್ ಅನಿಸಿದರೂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದೂ ಅಲ್ಲಿ ಮಕ್ಕಳನ್ನು ಶಿಸ್ತಿನಿಂದ ನೋಡಿಕೊಳ್ಳುವಲ್ಲಿ ಸೋಲುತ್ತಾರೆ. ಒಂದು ಕಡೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಮಕ್ಕಳನ್ನು ಬೆಳೆಸುವ ರೀತಿ, ಮತ್ತೊಂದೆಡೆ ಕಾಲೇಜಿನಲ್ಲಿ ಅವರ ಶಿಸ್ತನ್ನು ಮೀರಿ ನಡೆಯುವ `ಪ್ರೇಮ ಪ್ರಕರಣ’ ಅವರ ಶಿಸ್ತನ್ನು ಅಧ:ಪತನಕ್ಕಿಳಿಸುತ್ತದೆ. ಇದು ಅವರ ಬದುಕಿನಲ್ಲಾದ `ಸೋಲು’ ಮಾತ್ರವಲ್ಲ, ಆ ಪ್ರಕರಣದ ತಿರುವು ಅವರನ್ನು ತಲೆಯೆತ್ತದಂತೆ ಮಾಡುತ್ತದೆ.

`ಮರೆಯ ನೆರಳಿನಲ್ಲಿ’ ಈ ಸಂಕಲನದ ಎಲ್ಲಾ ಕಥೆಗಳನ್ನು ಮೀರಿ ನಿಲ್ಲುವ ಕಥೆ. ಒಂದನೆಯದಾಗಿ ಇದು ಒಂದು ಗಂಭೀರ ಚಿಂತನೆಯ ಹಂದರವಿರುವ ಕಥೆ. ಎರಡನೆಯದಾಗಿ ಇಲ್ಲಿ ಬಳಸಿಕೊಂಡಿರುವ `ಫ್ಲ್ಯಾಷ್ ಬ್ಯಾಕ್’ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಂತಪ್ಪ ದಿನನಿತ್ಯದ ಕಾಯಕದಲ್ಲಿ ಮುಳುಗಿರುವಾಗ ದೇವಕಿಯ ಸಾವಿನ ಸುದ್ದಿಯನ್ನು ಹೇಳುವ ಕೊಗ್ಗು, ಅವನಲ್ಲಿ ದೇವಕಿಯ `ಶಾಶ್ವತ ನಿರ್ಗಮನ’ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದ ಯೌವನದ ದಿನಗಳನ್ನು ನೆನಪಿಸುತ್ತದೆ. ಆ ನೆನಪಿನಲ್ಲಿ ದೇವಕಿಯ ಪಾತ್ರ ಹಿರಿದು. ಸಾಕು ಮಗಳಾಗಿ, ತನ್ನದಲ್ಲದ ಮನೆಯೊಂದರ ಜವಾಬ್ದಾರಿಯನ್ನು ಹೊತ್ತು ಒಂದು ಹನಿ ಪ್ರೀತಿಗಾಗಿ ಹಂಬಲಿಸಿ ಅದೂ ಫಲಿಸದೆ ಒಂಟಿಯಾಗಿಯೇ ಉಳಿದು ಹೋದ ಹೆಣ್ಣು ಮಗಳೊಬ್ಬಳ ಸಂವೇದನಾಶೀಲತೆಗಿಂತಲೂ, ಯುವಕನೊಬ್ಬನ ವಿರಹದ ದನಿಯಾಗಿ ಈ ಕಥೆ ನಿಲ್ಲುತ್ತದೆ.

ಇನ್ನುಳಿದಂತೆ `ಏಕೆ ಹೀಗೆ...?’ ಹೆಣ್ಣೊಬ್ಬಳು ಅನಿವಾರ್ಯವಾಗಿ ಒಂಟಿ ಜೀವನ ನಡೆಸಬೇಕಾದ ಸಂದರ್ಭದಲ್ಲಿ ಸಮಾಜದ ದೃಷ್ಟಿಯಲ್ಲಿ ಅವಳ ಅಂತರಂಗದ ಕಲ್ಪನೆಗಳೇನು ಅನ್ನುವುದನ್ನು ಪ್ರಕೃತಿಯ ಜೊತೆಗೆ ತುಲನೆ ಮಾಡಿ ನಿರೂಪಿಸುವ ಕಥೆ. ಆದರೆ ಈ ಕಥೆಯಲ್ಲಿ ಎಲ್ಲಿಯೂ ಹೆಣ್ಣಿನ ಪಾತ್ರ ಪರಿಧಿಯನ್ನು ಮೀರಿ ಹೋಗದಿರುವುದರಿಂದ ಕಥೆಗೆ ಎಲ್ಲೂ ಮೋಸವಾಗುವುದಿಲ್ಲ. ಪ್ರಕೃತಿ ಕಲಿಸುವ ಪಾಠದಿಂದ ಮತ್ತು ಸುತ್ತಲ ನೋಟದಿಂದ ಅವಳ ಅಂತರಂಗದ ಬಯಕೆಗಳೆಂದೂ ಹೆಡೆಯೆತ್ತುವುದಿಲ್ಲ. ಇದು ಕಥೆಯ ಪ್ಲಸ್ ಪಾಯಿಂಟ್. ಒಂದು ವೇಳೆ ಪ್ರಕೃತಿಯ ಸಹಜ ಕ್ರಿಯೆಗೆ ಅವಳು ಸ್ಪಂದಿಸಿದ್ದರೆ ಅವಳು ಅವಳದ್ದಲ್ಲದ ದಾರಿ ಹಿಡಿಯುವ ಸಾಧ್ಯತೆಯಿತ್ತು. ಆದರೆ ಅವಳ ವಿಲ್ ಪವರ್ ಅಷ್ಟೊಂದು ಗಟ್ಟಿಯಾಗಿರುವುದರಿಂದ ಎಲ್ಲವನ್ನೂ ಮತ್ತು ಎಲ್ಲರನ್ನೂ ಹಗುರವಾಗಿ ತೇಲಿಸಿ ಬಿಡುತ್ತಾಳೆ.

2005ರಲ್ಲಿ ಪ್ರಥಮ ಆವೃತಿಯಾಗಿ ಬಿಡುಗಡೆಯಾಗಿರುವ ಈ ಪುಸ್ತಕ, `ಪುಸ್ತಕ ನಿಧಿ’, ಕುಂದಾಪುರ ಇವರ ಪ್ರಕಟಣೆಯಾಗಿದೆ. ಪ್ರಿಂಟಿಂಗ್ ಟೆಕ್ನಾಲಜಿ ಸುಧಾರಿತ ಈ ಕಾಲದಲ್ಲಿ `ಮುತ್ತೆತ್ತೂರಿನ ದರ್ಗಾ’ವನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಪ್ರಕಟಿಸಬಹುದಿತ್ತು ಅನಿಸುತ್ತದೆ. ಈ ನ್ಯೂನತೆಯನ್ನು ಮರೆ ಮಾಚುವಂತೆ ಇಲ್ಲಿಯ ಕಥೆಗಳೆಲ್ಲವೂ ಸಮೃದ್ಧವಾಗಿ ಮೂಡಿ ಬಂದಿವೆ. ಕಥೆಗಳು ಹೇಗಿರಬೇಕು ಅನ್ನುವುದಕ್ಕೆ ಒಂದು ಸೀಮಿತ ಚೌಕಟ್ಟಿನಲ್ಲಿ ಬೆಳೆಯುವ ಇಲ್ಲಿಯ ಕಥೆಗಳೇ ಸಾಕ್ಷಿಯಾಗುತ್ತವೆ. ಭರವಸೆಯ ಕಥೆಗಾರರಾಗಿರುವ ಕಿದೂರು ವೇಣುಗೋಪಾಲ ಶೆಟ್ಟಿಯವರಿಂದ ಇನ್ನಷ್ಟು ಕಥೆಗಳನ್ನು ನಿರೀಕ್ಷಿಸಬಹುದು.


Read more!

Tuesday, August 9, 2011

ಕಲಾ ಮೇಳ ಮತ್ತು ಸಂಸಾರದ ಧೀಂಗಿಣ

ಕಾದಂಬರಿಗಳಿಗೆ ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರಭಾಕರ ನೀರ್ಮಾರ್ಗ ಅವರು ಎತ್ತಿದ ಕೈ. ಅವರು ಪ್ರಾದೇಶಿಕ ಹಿನ್ನಲೆಯಲ್ಲಿ ತಮ್ಮ ಕಾದಂಬರಿಗಳಿಗೆ ಕಥನ ರೂಪವನ್ನು ಕೊಡುವಲ್ಲಿ ಯಶಸ್ವಿಯಾದವರು. ಈ ಹಿಂದೆ ಅವರು ರಚಿಸಿದ `ತಿಲ್ಲಾನ’ ಕಾದಂಬರಿಯಲ್ಲಿ ಅವಿಭಾಜಿತ ದಕ್ಷಿಣ ಕನ್ನಡದ ಸಂಸ್ಕೃತಿಯ ಪ್ರತೀಕದಂತಿರುವ `ಭೂತದ ಕೋಲ’ ಮತ್ತು `ಭೂತ ಕಟ್ಟುವವರ’ ಬಗೆ ಚೆನ್ನಾಗಿ ಅಧ್ಯಯನ ಮಾಡಿ ಬರೆದಿದ್ದಾರೆ. ಅದೇ ರೀತಿ ಅವರ ಇನ್ನೊಂದು ಕೃತಿ `ಧೀಂಗಿಣ’, ದಕ್ಷಿಣ ಕನ್ನಡದ ಗಂಡು ಮೆಟ್ಟಿನಕಲೆ ಯಕ್ಷಗಾನವನ್ನ ಕೇಂದ್ರಿಕರಿಸಿ ಬರೆದಿರುವ ಕೃತಿ.


ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ ಯಕ್ಷಗಾನ ಕಲೆಯ ಬಗೆ ಆಳವಾಗಿ ಇಳಿಯದೆ, ಯಕ್ಷಗಾನ ಮೇಳವನ್ನು ಕಟ್ಟಿ ಅದನ್ನು ಒಪ್ಪಿಕೊಂಡು ಮತ್ತು ಮುಂದುವರಿಸಿಕೊಂಡು ಹೋಗುವಾಗಿನ ಸಂಕಟಗಳ ಕುರಿತಾಗಿ ಸವಿವರವಾಗಿ ಬರೆದಿರುವುದೆನ್ನುವುದು ಮುಖ್ಯ. ಪ್ರಾದೇಶಿಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಸಂಸಾರಿಕ ಜೀವನವನ್ನು ಚಿತ್ರಿಸುತ್ತಾ ಒಂದು ಕಲೆಯ ಬಗೆ ಕಾಳಜಿಯನ್ನು ಇರಿಸಿಕೊಂಡು ಬರೆದ ಶೈಲಿಯಲ್ಲಿ ಎಲ್ಲೂ ಪದಗಳ ಭಾರವಾಗಲಿ, ಉಪಮೆಯ ಹೊರೆಯಾಗಲಿ ಓದುಗನನ್ನು ಕಾಡುವುದಿಲ್ಲ. ಪ್ರಾದೇಶಿಕ ಭಾಷೆ ಎಷ್ಟು ಸುಲಲಿತವೋ ಅಷ್ಟೇ ಸರಳ ಪದಗಳ ಬಳಕೆ ಕೂಡ ಇಲ್ಲಿದೆ. ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ ಈ ಕಾದಂಬರಿಯನ್ನು ಓದುತ್ತಿರುವಾಗ ನಿಮಗೆ ಒಂದು ಪ್ರಾದೇಶಿಕ ವ್ಯವಸ್ಥೆಯನ್ನು ಅದು ಕಟ್ಟಿಕೊಡುತ್ತದೆಯೆ ಹೊರತು ಜಾತೀಯತೆಯನ್ನು ಎಲ್ಲೂ ಎತ್ತಿ ಹಿಡಿಯುವುದಿಲ್ಲ. ಅದೇ ನೀವು ಮುನ್ನುಡಿಯನ್ನು ಓದಿದ ಬಳಿಕ ಕಾದಂಬರಿಯನ್ನು ಓದಿದರೆ `ಜಾತೀಯತೆ’ ಇಲ್ಲಿ ಉದ್ಭವಿಸಿದೆಯೆನಿಸಿದರೂ ಹೆಚ್ಚಲ್ಲ. ಒಟ್ಟಾರೆಯಾಗಿ ಮುನ್ನುಡಿಯನ್ನು ಬಿಟ್ಟು ಕಾದಂಬರಿಯನ್ನು ಗಮನಿಸಿದರೆ ಒಂದು ಸಂಸಾರದ ಮತ್ತು ಒಂದು ಕಲೆಯ ಏಳುಬೀಳಿನ ಚಿತ್ರಣವನ್ನ ಈ ಕಾದಂಬರಿ ತೆರೆದಿಡುತ್ತದೆ.

ಕಾದಂಬರಿ ಆರಂಭವಾಗುವುದು ಮಾಣೂರಿನ ಚಿತ್ರಣದೊಂದಿಗೆ. ಒಂದು ಪ್ರಾದೇಶಿಕ ಕಥನಕ್ಕೆ ಪೂರಕವಾದ ಒಂದು ಹಳ್ಳಿಯ ಚಿತ್ರಣ. ಹಳ್ಳಿಯೆಂದರೆ ಹೀಗೆ ಇರಬೇಕೆನ್ನುವ ಸಿದ್ಧ ಸೂತ್ರವನ್ನು ಮುರಿದು ಅಲ್ಲಿಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಸ್ಥಿತಿಯನ್ನು ವಿವರಿಸುತ್ತಾ ಜನರ ಮುಗ್ಧತೆ ಮತ್ತು ಇನ್ನೂ ಆಧುನಿಕತೆಯ ಢಂಬಾಚಾರಗಳು ಸೋಕದಿರುವುದನ್ನು ಓದುತ್ತಾ, ಓದುಗನಿಗೆ ಒಂದು ಹೊಸ ಪರಿಸರದ ಕಲ್ಪನೆಯನ್ನು ನೀಡುತ್ತದೆ. ಕಾದಂಬರಿಯ ಮುಖ್ಯ ಅಂಶ ಕೂಡ ಇದಾಗಿದೆ. ಈಗಲೂ ಹಳ್ಳಿಯಲ್ಲಿ ಕೋಲ, ಯಕ್ಷಗಾನದಂತಹ ಸಾಂಸ್ಕೃತಿಕ ಕಲೆಗಳೆಂದರೆ ಅಲ್ಲಿಯ ಕಳೆಯೇ ವಿಭಿನ್ನವಾದದ್ದು. ಪ್ರತೀಯೊಬ್ಬ ಜನಸಾಮಾನ್ಯನು ಅದನ್ನು ಒಂದು ಹಬ್ಬದಂತೆ ಮತ್ತು ಸಂತೋಷದ ಸ್ಥಿತಿಯಂತೆ ಅನುಭವಿಸುವುದು ಅವರಲ್ಲಿ ಉಳಿದುಕೊಂಡಿರುವ ಸಾಂಸ್ಕೃತಿಕ ಆರಾಧನೆಗೆ ಸಾಕ್ಷಿಯಾಗಿದೆ. ಯಕ್ಷಗಾನವೆಂದರೆ ರಾತ್ರಿಯಿಂದ ಆರಂಭವಾಗಿ ಮುಂಜಾವಿನ ತನಕವೂ ನಡೆಯುವುದು ಪರಿಪಾಠ. ಆದರೆ ಇತ್ತೀಚೆಗೆ ಆ ಸಂಪ್ರದಾಯ ನಾಶವಾಗುತ್ತಾ ಗಂಟೆಗಳ ಸೀಮಿತಕ್ಕೆ ಪ್ರದರ್ಶನ ಬಂದು ನಿಂತಿರುವುದು ಕಲೆಯೊಂದರ ದುರಂತ. ಆದರೆ `ಧೀಂಗಿಣ’ದಲ್ಲಿ ರಾತ್ರಿಯಿಂದ ಹಗಲಾಗುವವರೆಗೂ ಯಕ್ಷಗಾನ ನಡೆಯುತ್ತದೆ. ಆ ಚೆಂಡೆ, ಮದ್ದಳೆ, ಭಾಗವತಿಕೆಯ ಮತ್ತು ಪಾತ್ರಗಳ ಗುಂಗು ಪ್ರೇಕ್ಷಕನ ತಲೆಯೊಳಗೆ ಮೊರೆಯುತ್ತಿರುವಂತೆಯೇ ಓದುಗನನ್ನೂ ಆ ಸ್ಥಿತಿಗೆ ಸೆಳೆಯುತ್ತದೆ.

ಈ ಕಾದಂಬರಿಯ ಮುಖ್ಯ ಪಾತ್ರ ಸುಬ್ಬಣ್ಣ. ಪ್ರಾದೇಶಿಕ ಪದಗಳಲ್ಲಿಯೇ ಹೇಳುವುದಾದರೆ ಸುಬ್ಬಣ್ಣನಿಗೆ ಯಕ್ಷಗಾನದಲ್ಲಿ `ಭಯಂಕರ’ ಆಸಕ್ತಿ. ಹವ್ಯಾಸಿ ಕಲಾವಿದನಾಗಿ ಆ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಮುಂದೊಂದು ದಿನ ತಾನೂ ಒಂದು ಮೇಳವನ್ನು ಕಟ್ಟಿಕೊಳ್ಳಬೇಕೆನ್ನುವ ಇರಾದೆಯಿರುವವನು. ಅವನ ಆಸಕ್ತಿಗೆ ನೀರೆರೆಯುವವನು ಬಾಲು ಅನ್ನುವ ಕಲಾವಿದ. ಇದಕ್ಕೆ ಪೂರಕವಾಗಿರುವುದು ರಾಘಣ್ಣನವರ ಬೆಂಬಲ. ಇವೆಲ್ಲವನ್ನೂ ಮನಸಿನಲ್ಲಿಯೇ ಪುನರುಚ್ಚರಿಸುತ್ತಾ, ಮುಂದೊಂದು ದಿನ ಸುಬ್ಬಣ್ಣ ಬಾಲುವಿನ ಸಹಾಯದಿಂದ ಅವನತಿಯತ್ತ ಸಾಗಿದ ಒಂದು ಮೇಳವನ್ನು ಖರೀದಿಸಿ, ಅದನ್ನು ಪೋಷಿಸುತ್ತಾನೆ. ಮಾತ್ರವಲ್ಲ, ತನ್ನಿಂದ ಸ್ಥಾಪಿಸಲ್ಪಟ್ಟ ಮಾಣೂರಿನ ಮೇಳವನ್ನು ಪ್ರಸಿದ್ಧಿಗೆ ತರುತ್ತಾನೆ.

ಕಲೆಯನ್ನು ನೆಚ್ಚಿಕೊಂಡವನು ಸಂಸಾರಿಕವಾಗಿ ಸೋಲುತ್ತಾನೆನ್ನುವುದು ಇಲ್ಲಿಯ ಕೆಲವು ಪಾತ್ರಗಳಿಂದ ಚಿತ್ರಿಸಿದ್ದರೂ, ವಾಸ್ತವ ಹಾಗಿರದೆ ಇದು ಕೇವಲ ಕಾದಂಬರಿಯ ಬೆಳವಣಿಗೆಗೆ ಒಂದು ಸೂತ್ರವನ್ನು ಬಳಸಿಕೊಂಡಂತೆ ಕಾಣುತ್ತದೆ. ಬ್ರಹ್ಮಾಚಾರಿಯಾಗಿಯೇ ಉಳಿಯುವ ಮನಸ್ಸಿನವ ಸುಬ್ಬಣ್ಣ. ಅವನ ಈ ತ್ಯಾಗ ಏನಿದೆ ಅದು ಕಲೆಯ ಆರಾಧನೆಗಾಗಿ ಅನ್ನುವುದು ಮುಖ್ಯ. ತಾನು ಊರೂರು ಅಲೆಯುವವನು ಸಂಸಾರಿಯಾದರೆ ಕಲೆಯನ್ನು ನಿರ್ಲಕ್ಷಿಸುವೆನೆನ್ನುವ ಭಯ ಅವನನ್ನು ಕಾಡುವುದೇನೋ? ಯಾರ ಒತ್ತಾಯಕ್ಕೂ ಮಣಿಯದೆ ತಾನು ನೆಚ್ಚಿಕೊಂಡ ಕಲೆಯನ್ನು ಆರಾಧನಾಭಾವದಿಂದ ಮುಂದುವರಿಸಿಕೊಂಡು ಹೋಗುತ್ತಾನೆ. ಆದರೆ ಅವನು ಒತ್ತಾಯದ ಅನಿವಾರ್ಯತೆಗೆ ಮಣಿದು ಸಂಸಾರಿಯಾಗುತ್ತಾನೆ. ಇದು ಅವನ ಅಧ:ಪತನ ಮಾತ್ರವಲ್ಲ ಅವನು ಸ್ಥಾಪಿಸಿದ ಕಲೆಯೊಂದರ ಅವನತಿಯ ಹಾದಿಯಾಗುವುದು ಕೂಡ ಒಂದು ದುರಂತ.

ಇಡೀ ಕಾದಂಬರಿಯಲ್ಲಿ ಪ್ರೀತಿ, ಪ್ರೇಮ, ರಾಗ, ದ್ವೇಷಗಳು ಕೂಡ ಹಾಸು ಹೊಕ್ಕಾಗಿ ಕಾದಂಬರಿಯನ್ನು ಬೆಳೆಯುವಂತೆ ಮಾಡುತ್ತದೆಯಾದರೂ ಅದು ಓದಿನ ಓಘಕ್ಕೆ ತಡೆಗಳಂತೆ ನಿರ್ಮಿತವಾಗಿರುವುದು ಸ್ವಲ್ಪ ಮಟ್ಟಿಗೆ ಹೌದೆನಿಸಿದರೂ ಸಂಸಾರದ ಚಿತ್ರಣದಲ್ಲಿ ಕುತೂಹಲ ಮತ್ತು ತಿರುವುಗಳನ್ನು ಇಲ್ಲಿ ಹೇಳಿರುವುದು ಇನ್ನೊಂದು ದೃಷ್ಟಿಕೋನದಿಂದ ಚಿಂತನೆಗೆ ಹಚ್ಚುತ್ತದೆ. ಇದರಿಂದಾಗಿ ಕಾದಂಬರಿ ಎರಡು ರೇಖೆಗಳಲ್ಲಿ ಸಾಗುತ್ತದೆ. ಒಂದು ಸಂಸಾರದ ಚಿತ್ರಣ; ಇನ್ನೊಂದು ಮೇಳದ ಏಳು ಬೀಳುಗಳ ಚಿತ್ರಣ. ಇವೆರಡೂ ಕೊನೆಗೆ ಒಂದೇ ರೇಖೆಗೆ ಬರುವ ಪ್ರಯತ್ನವನ್ನು ಮಾಡುತ್ತಾವಾದರೂ ದುರಂತ ಸಂಭವಿಸುತ್ತಲೇ ಕಾದಂಬರಿಯ ಅಂತ್ಯವನ್ನು ಊಹಿಸಬಹುದಾಗಿದೆ. ಆದರೆ ಕಾದಂಬರಿಯ ಕೊನೆಯ ಪುಟಗಳಲ್ಲಿ ಒಂದು ತಿರುವು ಕಾಣಿಸಿಕೊಂಡು `ಸುಖಾಂತ’ದಲ್ಲಿ ಮುಗಿಯುವುದು ಒಂದು ನಿಟ್ಟುಸಿರಿಗೆ ಸಾಧ್ಯವಾಗುತ್ತದೆ. ಅದೇ, ಸುಬ್ಬಣ್ಣ ಮತ್ತೆ ಮಾಣೂರು ಮೇಳವನ್ನು ಸುಸ್ಥಿತಿಗೆ ತರುವ ಸಂಗತಿ ಅಭಿವ್ಯಕ್ತವಾಗುವುದು ಕಾದಂಬರಿಯ ಕೊನೆಯಲ್ಲಿ, ಓದುಗನಿಗೆ ಸಮಾಧಾನವಾಗುವ ರೀತಿಯಲ್ಲಿ.

ಇನ್ನು ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳೆಲ್ಲವೂ ಒಂದು ರೀತಿಯ ತೊಳಲಾಟಗಳಲ್ಲಿ ಮುಳುಗಿರುವುದು ಕಾಣಿಸುತ್ತದೆ. ಬಾಲುವಿಗೆ ಮನಸೋತ ರಾಘಣ್ಣನ ಮಗಳು ಕಲ್ಯಾಣಿಯಾಗಲಿ, ಸುಬ್ಬಣ್ಣನನ್ನು ಮದುವೆಯಾಗುವ ಸುಗುಣಳಾಗಲಿ, ಬಾಲುವನ್ನು ಮಾನಸಿಕವಾಗಿ ಆಧಾರವೆಂದು ಬಯಸುವ ಪಾರ್ವತಿಯಾಗಲಿ, ಎಲ್ಲೂ ಒಂದು ಗಟ್ಟಿ ಪಾತ್ರವಾಗದೆ ತಮ್ಮೊಳಗೆ ನ್ಯೂನತೆಗಳನ್ನು ತುಂಬಿಕೊಂಡು ಇನ್ನೊಂದು ಪಾತ್ರವನ್ನು ಕೆಡಿಸಲು ಸೃಷ್ಟಿಯಾದಂತೆ ಕಾಣುತ್ತವೆ. ಸಾಂಸಾರಿಕ ಜಂಜಾಟಗಳಿಗೆ ಮೂಲ ಹೆಣ್ಣು ಅನ್ನುವುದನ್ನು ಇವು ಎತ್ತಿ ಹಿಡಿಯುವಂತೆ ಗೋಚರಿಸುತ್ತವೆ. ಈ ಮೂರು ಪಾತ್ರಗಳಲ್ಲಿ ಪಾರ್ವತಿಯ ಪಾತ್ರಚಿತ್ರಣ ಓದುಗನನ್ನು ಸೆಳೆದರೂ ಅವಳ ಮೇಲೆ ಅನುಕಂಪ ಮೂಡಲಿ ಅನ್ನುವ ದೃಷ್ಟಿಯಿಂದ ಚಿತ್ರಿಸದೆ, ಅವಳು ಅನಾಥೆಯಾಗಿಯೇ ಉಳಿದರೆ ಹೆಚ್ಚು ಪರಿಣಾಮಕಾರಿಯಾಬಹುದೆನ್ನುವ ಅಂಶವನ್ನೂ ಇಲ್ಲಿ ಕಾಣಬಹುದು. ಹಾಗೆಯೇ ಬಾಲುನಂತಹ ಒಬ್ಬ ಆದರ್ಶಪ್ರಾಯದ ಯುವಕ ತನ್ನನ್ನು ಮೆಚ್ಚಿ ಕೈಹಿಡಿದ ರೂಪಸಿಯಾದ ಹೆಣ್ಣು ಕಲ್ಯಾಣಿಯಿದ್ದರೂ ಪಾರ್ವತಿಯ ಅಸಹಾಯಕತೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಬಾಲುವಿನ ಬಗೆಗಿದ್ದ ಒಳ್ಳೆಯ ಭಾವನೆಯನ್ನು ನುಂಗಿ ಬಿಡುತ್ತದೆ. ಇದು ಕಲಾವಿದರಿಗೆ ಇರಬೇಕಾದ ಅರ್ಹತೆಯೋ? ಇಲ್ಲ, ಅವರ ಬಲಹೀನತೆಯೇನೋ? ಅನಿಸದಿರದು.

ಕಾದಂಬರಿಯ ಮೂಲ ತಿರುಳಿರುವುದು ಒಂದು ಕಲೆಯನ್ನು ಉಳಿಸುವಲ್ಲಿ ಏನೆಲ್ಲಾ ಕಷ್ಟಸಾಧ್ಯತೆಗಳಿವೆಯೆನ್ನುವುದನ್ನು ತಿಳಿಸುವುದೇ ಆದರೂ ಮೇಳದ ಆರ್ಥಿಕ ಸ್ಥಿತಿ, ಗತಿಗಳನ್ನೂ ಕೂಡ ತಿಳಿಸುತ್ತದೆ. ಮೇಳವನ್ನು ಕಟ್ಟಿಕೊಂಡು ಒಂದು ಕಲೆಯನ್ನು ಉಳಿಸುವುದಕ್ಕಾಗಿ ಸುಬ್ಬಣ್ಣನಂತಹ ಮಧ್ಯಮವರ್ಗದ ವ್ಯಕ್ತಿ, ರಾಘಣ್ಣ ಮತ್ತು ಬಾಲುವಿನಂತಹ ಉದಾರಿಗಳ ಸಹಾಯದಿಂದ ತನ್ನ ಹಠವನ್ನು ಸಾಧಿಸಿಯೇ ಬಿಡುತ್ತಾನೆ. ಕಲಾವಿದರಿಗೆ ಒಬ್ಬ ನೆಚ್ಚಿನ ವ್ಯವಸ್ಥಾಪಕನಾಗಿ ಕಲೆಯನ್ನು ಪೋಷಿಸುವ ದೃಷ್ಟಿಯಿಂದ ತೊಂದರೆಗಳನ್ನು ಎದುರಿಸುತ್ತಾ ಸುಸೂತ್ರವಾಗಿ ಮೇಳವನ್ನು ಮುನ್ನಡೆಸುತ್ತಾನೆ. ಆದರೆ ಅವನಲ್ಲಿರುವ ಕಲಾಸಕ್ತಿಗೆ ವ್ಯತಿರೀಕ್ತವಾಗಿ ಅವನ ಕೈ ಹಿಡಿದ ಸುಗುಣಳ ಗುಣ. ಪ್ರತೀಯೊಂದನ್ನು ಹಣದಿಂದ ಅಳೆಯುವ ಅವಳು ಕಲಾವಿದರಿಗೆ ದ್ರೋಹಬಗೆಯುವಂತೆ ನಡೆದುಕೊಳ್ಳುತ್ತಾಳೆ. ಐಶರಾಮದ ಜೀವನಕ್ಕೆ ಮಾರು ಹೋಗುವ ಅವಳು ತನಗೆ ಬೇಕಾಗಿರುವುದೆಲ್ಲವನ್ನೂ ಅನುಭವಿಸುತ್ತಾ ಸುಬ್ಬಣ್ಣನ ಬಾಳಿಗೂ ಮುಳ್ಳಾಗುತ್ತಾಳೆ. ಅದಕ್ಕೆ ಬೆನ್ನೆಲುಬಾಗಿ ಅವಳ ತಮ್ಮ ಆನಂದ ನಿಂತಿರುತ್ತಾನೆ. ಅನಗತ್ಯವಾಗಿ ಮೇಳದ ಮೇಲ್ವಿಚಾರಣೆಯಲ್ಲಿ ಮೂಗುತೂರಿಸಿ ಅಲ್ಲಿಯ ವ್ಯಸ್ಥೆಯನ್ನೇ ಕದಡುತ್ತಾನೆ. ಇದರ ಪರ್ಯವಸಾನವಾಗಿ ಕಲಾವಿದರು ಮೇಳವನ್ನು ತೊರೆಯುವುದಲ್ಲದೆ, ಮೇಳಕ್ಕೆ ಹೊಸ ಪ್ರಯೋಗವೆಂಬಂತೆ ಅಶ್ಲೀಲ ಪರಿವರ್ತನೆಗಳನ್ನು ತಂದು ಮುಳುಗಿಸುತ್ತಾನೆ.

ಮುಂದೆ ಸುಗುಣಳು ಕೂಡ ಸುಬ್ಬಣ್ಣನನ್ನು ಮೇಳದ ಕಡೆಗೆ ತಲೆ ಹಾಕದಂತೆ ಮಾಡಿ ಅವನಿಗೆ ಹುಚ್ಚನ ಪಟ್ಟವನ್ನು ಕಟ್ಟಿ ಅವನನ್ನು ಆಸ್ಪತ್ರೆಗೆ ಸೇರಿಸಿ ತಾನು ಕಂಡ ಕಂಡವರ ಜೊತೆಗೆ ಬದುಕನ್ನು ಹಂಚಿಕೊಳ್ಳುತ್ತಾಳೆ. ಆದರೆ ಕೊನೆಗೆ ಅವಳ ಗತಿಯೂ ಕೂಡ ಯಾರಿಗೂ ಬರಬಾರದ ಸ್ಥಿತಿಯಾಗಿ ಅಂತ್ಯವಾಗುವುದು ಕಥನದ ಕೊನೆಯಲ್ಲಿ.

ತಿಲ್ಲಾನ ಕಾದಂಬರಿಯ ರೀತಿಯಲ್ಲಿಯೇ ಸರಳ ಮತ್ತು ಸುಂದರವಾಗಿ ಮೂಡಿ ಬಂದಿರುವ ಧೀಂಗಿಣ ಕಾದಂಬರಿ ಕೂಡ ಪ್ರಾದೇಶಿಕತೆಯನ್ನು ಉಳಿಸಿಕೊಂಡಿರುವ ಕಾದಂಬರಿ. ಆಪ್ತವೆನಿಸುವ ಇಲ್ಲಿಯ ಚಿತ್ರಣಗಳಿಗಾದರೂ ಧೀಂಗಿಣವನ್ನು ಓದಲೇಬೇಕು.


Read more!