Friday, April 13, 2012

ಹಚ್ಚಿಟ್ಟ ಹಣತೆಯ ಬೆಳಕಿನೆಡೆಗೆ


ಕವಿತೆಗಳಿಗೆ ಬಹಳ ದೊಡ್ಡದಾದ ಒಂದು ಕ್ಯಾನ್‌ವಸ್ ಇರುವುದರಿಂದ ಅವುಗಳನ್ನು ವಾಚಿಸುವಾಗ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯದಾದ ಅರ್ಥವನ್ನು ಕೊಡುತ್ತವೆ. ಒಂದು ಕವಿತೆಯನ್ನು ಆಯ್ದುಕೊಂಡರೆ ಅವುಗಳ ಒಳ ಹೂರಣ ಒಂದು ನೀಳ್ಗತೆಯೋ ಅಥವಾ
ಮಹಾನ್ ಕಾದಂಬರಿಯೋ ಆಗಬಲ್ಲುದು. ಹಾಗಾಗಿ ಕವಿತೆಗಳಿಗೆ ಚೌಕಟ್ಟನ್ನು ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅವು ತೆರೆದಿಡುವ ಅರ್ಥವ್ಯಾಪ್ತಿ ವಿಸೃತವಾದದ್ದು. ಇವುಗಳ ಜೊತೆಗೆನೆ ಕವಿತೆ ಸ್ಫುರಿಸುವ ಮಾದುರ್ಯತೆ ಓದುಗನ ಮನದಾಳಕ್ಕೆ ಇಳಿದು ಅಲ್ಲಿಯೇ ರಿಂಗಣಿಸಿ ಇನ್ನಷ್ಟು ಭಾವಲೋಕಕ್ಕೊಯ್ಯುವ ಧೀಮಂತಿಕೆ ಕೂಡ ಕವಿತೆಗಳಿಗಿವೆ. ಹಾಗಾಗಿ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಲಿ ಕರೆಯಿತು' ಕೆ. ಎಸ್. ನರಸಿಂಹಸ್ವಾಮಿ ಅವರ `ಸಿರಿಗೆರೆಯ ನೀರಿನಲಿ ಅರಳು ತಾವರೆಯಲಿ' ಎಚ್. ಎಸ್. ಶಿವಪ್ರಕಾಶರ `ನನ್ನ ಚಲ್ಲಾಟದ ಮಲ್ಲಿಗೆ ತೋಟದ ಹಕ್ಕಿ ಈ ನಿಮಿಷಕೆ ಹಾರಿ ಬಂತು' ಕವಿತೆಗಳಾಗಲಿ, ಕುವೆಂಪುರವರ ಕವಿತೆಗಳಾಗಲಿ ಇಂದಿಗೂ ಕೂಡ ನಮಗೆ ಶ್ರೇಷ್ಠವೆನಿಸುತ್ತವೆ. ಈ ಕವಿತೆಗಳ ಮರು ಓದು ಮತ್ತು ಹೊಸ ಪೀಳಿಗೆಯ ಓದು ಮುಖ್ಯವಾಗುತ್ತಲೇ ಅವುಗಳಲ್ಲಿಯೂ ನವ್ಯೋತ್ತರದ ಕವಿತೆಗಳು ಹುಟ್ಟು ಹಾಕುವ ಬೆರಗು ಪ್ರಸ್ತುತ ಮುಖ್ಯವೆನಿಸುತ್ತದೆ. ಅಂತಹ ಹೊಸ ಪೀಳಿಗೆಯ ಕವಿತೆಗಳಲ್ಲಿ ಧನಂಜಯ ಕುಂಬ್ಳೆ ಅವರ `ಹಣತೆ ಹಾಡು' ಕೂಡ ಗುರುತಿಸಿಕೊಳ್ಳುತ್ತದೆ.

ಧನಂಜಯ ಕುಂಬ್ಳೆಯವರ ಈ ಕವನ ಸಂಕಲನ ಎರಡು ರೀತಿಯಲ್ಲಿ ಬಹಳ ಮುಖ್ಯವೆನಿಸುತ್ತದೆ. ಒಂದು ೨೦೧೧ ರ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಅನ್ನುವುದಕ್ಕೆ, ಮತ್ತೊಂದು ಇದು ಗಡಿನಾಡಿನ ಕನ್ನಡಿಗನೊಬ್ಬನ ಕವಿತೆಗಳೆನ್ನುವುದಕ್ಕೆ. ಅದಲ್ಲದೆ `ಹಣತೆ ಹಾಡು' ನವಿರಾದ ಕಾವ್ಯಗಳ ಗುಚ್ಛ ಮತ್ತು ಕೆಎಸ್‌ಎನ್ ಅವರ ಕವನಗಳನ್ನು ನೆನಪಿಸುವ ಪ್ರೇಮಕಾವ್ಯದಿಂದ ಹಿಡಿದು ದೇಶಪ್ರೇಮವನ್ನು ಸೂಸುವ ಕವನಗಳವರೆಗೂ ಇವು ಕಂಪ ಬೀರುತ್ತವೆ.

ಪ್ರೀತಿ, ಪ್ರೇಮ ಭಾಷ್ಯೆಗಳಿಗೆ ಹೇಗೆ ಅಂತ್ಯವೆನ್ನುವುದಿಲ್ಲವೋ ಹಾಗೆಯೇ ಕಾವ್ಯದ ಪರಿಭಾಷೆಯಲ್ಲಿ ಬಳೆಕೆಯಾಗುವ ಕೊಳಲು, ಗಿರಿಕಂದರದಂತಹ ಪದಗಳು ಮತ್ತೆ ಮತ್ತೆ ಉದಯಿಸಿ ಜೀವನ್ಮುಖಿ ಉಲ್ಲಾಸವನ್ನ ಪ್ರಸ್ತುತಪಡಿಸುವುದರಿಂದ ಇಲ್ಲಿಯ ನಾಲ್ಕು ಕವಿತೆಗಳಲ್ಲಿ ಬರುವ ಕೊಳಲು, ಒಂದೊಂದು ಕವಿತೆಯಲ್ಲೂ ಬೇರೆಯದೇ ಆದ ಮಾದುರ್ಯತೆಯನ್ನು ಹೊರಡಿಸುತ್ತದೆ. ಕನ್ನಡದ ಕಾವ್ಯ ಪದಗಳಿಗೆ `ಔಟ್ ಡೇಟೆಡ್' ಅನ್ನುವಂತದ್ದು ಇಲ್ಲ. ಇದು ಗದ್ಯ ಪ್ರಕಾರದಲ್ಲಿ ಬಳಸಬಹುದಾದ ಪದವಾದರೂ ಕಾವ್ಯದಲ್ಲಿ ಎಷ್ಟು ಕವಿಗಳು ಬರೆದರೂ ಬತ್ತದ ಚಿಲುಮೆಯ ಪದಗಳೇ ಪ್ರೀತಿ, ಪ್ರೇಮ, ಕೊಳಲು, ಕೊರಳು... ಇವು ಸವಕಲಾಗಿ ಕಾಣುವುದು ಪ್ರೀತಿ ಕಳೆದುಕೊಂಡ ಮನಸ್ಸುಗಳಲ್ಲಿ ಮಾತ್ರ! ಹಾಗಾಗಿ ಮೈಸೂರು ಮಲ್ಲಿಗೆಯ ಕವಿತೆಗಳಲ್ಲಿ ಕಂಪಿರುವಂತೆ ಹಣತೆಯಲ್ಲಿ ಆರಲಾರದ ಬೆಳಕು ಪಸರಿಸಿರುವುದನ್ನು ಕಾಣಬಹುದು.

ಈ ಸಂಕಲನದ ಎಲ್ಲಾ ಕವಿತೆಗಳು ಗುನುಗುನಿಸುವಂತಿದೆ. ಭಾವದೀಪ್ತಿಯ ಈ ಕವಿತೆಗಳೆಲ್ಲವೂ ಗಾಯನವಾಗಿಯೂ ಮಾಧುರ್ಯ ತುಂಬಬಲ್ಲವು. ಹಾಗಾಗಿ ಇಲ್ಲಿ ಬರುವ ಕೊಳಲು ಕವಿತೆಯ `ಚೈತನ್ಯ ತುಂಬಿದ ಕೊಳಲು'; ಮೊನಾಲಿಸಾದ `ಡಾವೆನ್ಸಿ ಕುಂಚದ ಎಳೆಯ ಜೀವ ತಂತು'; ದಿವ್ಯಾರ್ಪಣೆಯ `ಬಳುಕು ಸೊಗಸಿನ ತಂಪು ಗಾಳಿಯಲಿ'; ಜೀವಚೀಲದ ಬೇರು ಕವಿತೆಯ `ಮೊಗ್ಗು ಚಿಗುರಾಗಿ ಎಲೆ ಹಸುರಾಗಿ'; ಒಂಟಿ ಮನಸು ಅರಳುವ ಸಮಯದ `ಸುರಿವ ಪರಿಮಳಕೆ ಮುಖವೊಡ್ಡಿ ನಿಂತಾಗ'; ಶಿಲ್ಪದ `ತನ್ಮತೆಯ ಪೆಟ್ಟಿಗುದುರುವ ಶಬ್ದಕ್ಕೂ ಅರ್ಥವಿದೆ ಲಯವಿದೆ ಪ್ರಾಸವಿದೆ'; `ಕಾಡಿದ ಕೊಳಲು'ವಿನ `ಅರಳಿದ ಹೂಗಳ ಮಡಿಲಲಿ ಕುಳಿತು ಕಂಪಿನ ನೀರನು'; `ಕನಸ ಹಕ್ಕಿಗಳು ಹಾಡುತಿವೆ'ಯ `ಜೇನನು ಹೀರಲು ಹಾರುವ ದುಂಬಿ ಹೂವಿನ ಕರೆಗೆ'; `ಸ್ಪಂದನ'ದ `ಕರೆಯ ಕಂಪಿನಲಿ ಕರಗಿ ನೀನಾಗಬಲ್ಲೆ'; `ಹಣತೆಯ ಹಾಡು'ವಿನ `ಹೃದಯ ಹೃದಯಗಳ ತಳದಲ್ಲಿ ಕನಸಿಹುದು' ಈ ಕವಿತೆಗಳಲ್ಲಾ ತೆರೆದಿಡುವಂತಹುದು ಜೀವನ್ಮುಖಿಯ ಆಶಯಗಳನ್ನ, ಪ್ರೀತಿ ಪ್ರೇಮಗಳನ್ನ. ಇವೆಲ್ಲವೂ ಪಲುಕು ಪಲುಕು ಒಲವನ್ನ ಮಿಡಿಯುವಂತದ್ದು. ಬದುಕು ಇಲ್ಲವೆಂದುಕೊಂಡು ನೆನಪು ಕಾಡುವಾಗ ತ್ಯಾಗದ ಬೆಲೆ ಅರಿತು ಮನಸ್ಸು ಮಿಡಿದು ಅರ್ಪಣೆಯ ಭಾವವನ್ನುದಯಿಸುವ `ಪ್ರತಿಧ್ವನಿ' ತನ್ನ ತಾನು ಸುರುಟಿಕೊಳ್ಳುತ್ತಾ ಬದುಕನ್ನೂ ಸುರುಟಿಕೊಳ್ಳುವ ಸ್ವಾಭಿಮಾನದ `ಬೀಡಿ ಕಟ್ಟುವ ಹುಡುಗಿಗೆ' ಯಾರಿಗೂ ಬೇಡವಾದ ಅಬ್ಬಲಿಗೆ ಅಮೂರ್ತತೆಯ ವಿಷಬಟ್ಟಲು, ಗೊತ್ತಿದ್ದು ಗೊತ್ತಿಲ್ಲದೆ ಮಾಡಿದ `ಮೊದಲ ಪಾಪ' ನಿಶ್ಯಬ್ದದ ರೌದ್ರತೆಯ ನಡುವೆಯೂ, ದೇಶಭಿಮಾನದ ಕಾರ್ಗಿಲ್ ಗೆಳೆಯನಿಗೆ...
`ಹೇ ಗೆಳೆಯ ನಿನಗಿದೋ ನಮ್ಮ ಹೂವ ತೊಡುಗೆ
ಹೂಗಳಿಗೆ ಪರಿಮಳ ಅದು ನಿನ್ನ ಕೊಡುಗೆ'
ಹೀಗೆ ಇಲ್ಲಿಯ ಎಲ್ಲಾ ಕವನಗಳಲ್ಲಿಯೂ ಒಂದು ಆಸೆ, ಅದಕ್ಕೆ ವ್ಯತಿರೀಕ್ತವಾಗಿ ನಿರಾಸೆ ಮತ್ತೆ ನಿರಾಸೆಯನ್ನು ಮೆಟ್ಟಿ ನಿಲ್ಲುವ ಮತ್ತೊಂದು ಆಶಾಭಾವನೆಯಿರುವುದು ಕವಿಯ ಕನಸುಗಳು.

`ಗೊತ್ತೇನ್ರಿ ನಿಮಗ' ಕವಿತೆಯ ರಾಜನ ಮುಗ್ಧತೆ `ನಾನು' ಕವಿತೆಯ `ಧನು'ವಿನ ಮುಗ್ಧತೆ ಕಾವ್ಯದೋದುಗನ ತುಟಿಯನ್ನು ಬಿರಿಯುವ ಕವಿತೆಗಳು. ಹಾಗಾಗಿ ಈ ಸಂಕಲನದ ಕವಿತೆಗಳಲ್ಲಿ ನವರಸಗಳು ತುಂಬಿರುವುದರಿಂದಲೇ ಒಂದು ಸುಂದರವಾದ ಕಾವ್ಯಾನಂದವನ್ನು ಇವು ಹರಿಯಬಿಡುತ್ತವೆ.
ಇದು ಧನಂಜಯ ಕುಂಬ್ಳೆಯವರ ಮೂರನೆಯ ಕವನ ಸಂಕಲನವೂ ಹೌದು. ವೈದೇಹಿಯವರ ಮುನ್ನುಡಿಯಿರುವ ಈ ಕವನಸಂಕಲನ ಓದುಗರ ಪ್ರೀತಿಯನ್ನು ಗಳಿಸುವುದರಲ್ಲಿ ಎರಡು ಮಾತಿಲ್ಲ.

Read more!

Thursday, March 15, 2012

ಹಕ್ಕಿ ಚೆಲ್ಲಿದ ಬೀಜದ ಮೊಳಕೆ


`ಹಕ್ಕಿ ಚೆಲ್ಲಿದ ಬೀಜ' ಶೀರ್ಷಿಕೆಯೆ ಅಮೂರ್ತತೆಯನ್ನು ಸೂಚಿಸುವ ಸಿ ಎನ್ ರಾಮಚಂದ್ರ ಅವರ ಮೂರನೆಯ ಕಥಾಸಂಕಲನ. ಹಕ್ಕಿ ಎಲ್ಲಿ ಬೇಕಾದರೂ ಬೀಜವನ್ನು ಚೆಲ್ಲಬಹುದು. ಇದು ಅಮೂರ್ತತೆ. ಆದರೆ ಆ ಬೀಜ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದು ಅದು ಟಿಸಿಲೊಡೆಯುವಲ್ಲಿಂದ. ಆ ಪ್ರಕ್ರಿಯೆ ನೆಲದ ಮೇಲೆಯೇ ಆಗಬೇಕೆಂದೇನಿಲ್ಲ. ಮರದ ಮೇಲೂ ಬೀಜ ಮೊಳಕೆಯೊಡೆಯಬಹುದು. ಇದು ಅದ್ಭುತವೂ ಅಲ್ಲ, ಅಗೋಚರವೂ ಅಲ್ಲ. ಎಲ್ಲಿ ಮೊಳಕೆಯೊಡೆಯುವುದಕ್ಕೆ ಅವಕಾಶವಿದೆಯೋ ಅಲ್ಲಿಯೇ ಗಿಡವಾಗಬಹುದು. ಆದರೆ ಅದರ ಮೂಲವನ್ನು ಶೋಧಿಸುವುದು ಬಹಳ ಕಷ್ಟ. ಅದು ಯಾವ ಮರದ ಬೀಜ? ಆ ಬೀಜ ಅಲ್ಲಿಯೇ ಗಿಡವಾಗಿ ಬೆಳೆಯುವುದೆ? ಆ ಬೀಜಕ್ಕೆ ಆಸರೆಯಾಗುವ ಮರ ಕೊನೆಯವರೆಗೂ ಗಿಡವನ್ನು ತಾಳಿಕೊಳ್ಳುವುದೆ? ಇದು ಅಸ್ಪಷ್ಟ. ಹಾಗೆಯೇ ಇಲ್ಲಿಯ ಕಥೆಗಳ ಸೆಕ್ಯೂಲರಿಸಂ. ಹುಟ್ಟುವುದು ಎಲ್ಲಿಯೋ ಬೆಳೆಯುವುದು ಇನ್ನೆಲ್ಲಿಯೋ? ಆದರೆ ಅವೆರಡರ ನಡುವೆ ಹುಟ್ಟಿಕೊಳ್ಳುವ ಕುತೂಹಲವೇ ಹುಡುಕಾಟವಾಗಿ ಇಲ್ಲಿಯ ಕಥೆಗಳಲ್ಲಿ ಗೋಚರಿಸುತ್ತದೆ. ಅದು ಕಳೆದುಕೊಂಡ ಸಂಬಂಧಗಳ ಹುಡುಕಾಟವಿರಬಹುದು, ಬಾಲ್ಯದ ಹುಡುಕಾಟವಿರಬಹುದು. ಒಟ್ಟು ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೋರಾಟ ಸಾಧಾರಣ ಎಲ್ಲಾ ಕಥೆಗಳಲ್ಲಿಯು ಕಾಣಸಿಗುತ್ತದೆ.
ಕಥೆಗಳನ್ನು ಓದುತ್ತಲೇ ಎಲ್ಲೋ ಕೈ ಬಿಟ್ಟು ಹೋಗುವಂತಹ ತವಕಗಳು ಇಲ್ಲಿಯ ಪಾತ್ರಗಳಲ್ಲಿ ಕಾಣುತ್ತಾವಾದರೂ, ಪಾತ್ರಗಳಲ್ಲಿ ಜಾತೀಯತೆಯನ್ನು ಗುರುತಿಸಿಕೊಂಡು ಜಾತ್ಯಾತೀತವನ್ನು ಮೀರುವ ಪ್ರಯತ್ನ ಇಲ್ಲಿಯದಾಗಿದೆ. ಹಾಗಾಗಿ ರಾಬರ್ಟ್ ಪದ್ಮರಾಜನಾಗಲಿ, ಭಾರತಿಪುತ್ರನ್, ಇಳಾಪೈ ಪಾತ್ರಗಳಿಗೆಲ್ಲಾ ಜಾತೀಯತೆ ಮುಖ್ಯವೆನಿಸುವುದಿಲ್ಲ. ಇವು ಬದುಕನ್ನು ಕಟ್ಟಿಕೊಳ್ಳುವಲ್ಲಿ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ತುಡಿತಕ್ಕೊಳಗಾಗುತ್ತಲೇ ಇರುತ್ತವೆ.
`ಹಕ್ಕಿ ಚೆಲ್ಲಿದ ಬೀಜ', `ಧೀಯೋಯನ' ಕಥೆಗಳನ್ನು ಓದುವಾಗ ಜನಪ್ರಿಯ ಶೈಲಿಯ ಒಂದು ಅಂಚಿನಲ್ಲಿ ನಿರೂಪಣೆ ಸಾಗುತ್ತದಾದರೂ, ಅವಕ್ಕಿಂತಲೂ ಮಿಗಿಲಾಗಿ ಅವುಗಳಲ್ಲಿ `ಸಂಥಿಂಗ್' ಇದೆ ಅನಿಸದಿರದು. ಧೀಯೋಯೊನ ಕಥೆಯ ಹುಡುಕಾಟದಲ್ಲಿ ಕೊನೆಗೆ ಸಿಗುವುದು ನಿರಾಶೆಯಾದರೂ ಆ ನಿರಾಶೆಯೆನ್ನುವುದು ಸಾವಿನವರೆಗೂ ಕಾಡುವ ಮತ್ತು ಅನ್ಯ ದಾರಿಯಲ್ಲಿ ಸಾಗಿದ ಪರಿಗೆ ಶಾಪವೇನೋ ಅನ್ನುವ ರೀತಿಯಲ್ಲಿ ಭಾರತಿಯನ್ನು ಅಂತರ್ಮುಖಿಯನ್ನಾಗಿಸುವ ಹಾಗಿದೆ. ಅವಳ ಪ್ರೀತಿಯ ಸಾಕ್ಷ್ಯವೊಂದು ಶೋಚನೀಯ ಸ್ಥಿತಿಯಲ್ಲಿರುವುದು ಎಂತಹ ಓದುಗನ ಮನಸ್ಸನ್ನಾದರೂ ಸ್ವಲ್ಪ ಮಟ್ಟಿಗೆ ಅಲ್ಲಾಡಿಸಿ ಬಿಡುತ್ತದೆ. ಹಾಗೆಯೇ ಈ ಕಥೆ ಗಂಭೀರವಾಗಿ ಓದಿಸಿಕೊಳ್ಳುತ್ತಲೇ ತಟ್ಟನೆ ಸಿನಿಮೀಯತೆಗೆ ವಾಲುವುದರಿಂದ ಕೊಂಚ ಇತರೆ ಕಥೆಗಳ ಜೊತೆಗೆ ತುಲನಾತ್ಮಕವಾಗಿ ನೋಡುವುದಕ್ಕೆ ಅಸಾಧ್ಯವೆನಿಸುತ್ತದೆ. ಈ ಕಥೆಯಲ್ಲಿ ಭಾರತಿ ಅವಳ ಕ್ಲಾಸ್‌ಮೇಟ್ ಉನ್ನತ ಸ್ಥಾನದಲ್ಲಿರುವ ಶಂಕರನ ಕ್ವಾರ್ಟಸ್‌ಗೆ ಅವನ ಅನುಮತಿಯಿಲ್ಲದೆ ಬಂದು ಅವನನ್ನೇ ಅತಿಥಿಯ ರೂಪದಲ್ಲಿ ಕ್ಯಾರ್ ತೆಗೆದುಕೊಳ್ಳುವುದು. ಇದು ತೀರ ಸಿನಿಮೀಯವಾಗಿ ತೋರುತ್ತದೆ. ಆದರೂ ಇದೊಂದು ನೀಳ್ಗತೆಯಾಗಿ ಮತ್ತು ಕಥನ ಶೈಲಿಯಲ್ಲಿ ವಿಭಿನ್ನತೆಯಿರುವುದರಿಂದ ಕಥೆಯ ಉತ್ತರಾರ್ಧ ಪರಿಣಾಮಕಾರಿಯಾಗಿ ಮೂಡಿಬಂದಿರುವುದರಿಂದ ಮಗುವಿನಂತಹ ಮಗನ ಪಾತ್ರ ಓದುಗನ ಮನದಲ್ಲಿಯೇ ಉಳಿದು ಬಿಡುತ್ತದೆ.
ಸಿ ಎನ್ ರಾಮಚಂದ್ರ ಅವರ ಕಥೆಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಕಥೆಯ ಬೆಳೆಯುತ್ತಾ ಹೋದ ಹಾಗೆ ಕಥೆಯಲ್ಲಿ ಯಾವುದು ಮುಖ್ಯ ಅನಿಸುವುದಿಲ್ಲವೋ, ಅದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿ `ನಿಕ್ಷೇಪ' ಕಥೆ ತುಸು ವಿಭಿನ್ನವಾಗಿ ನಿಲ್ಲುತ್ತದೆ. ಇದಕ್ಕೆ ಆ ಕಥೆ ನಡೆಯುವ ಕಾಲಘಟ್ಟವೂ ಕಾರಣವಾಗಿರಬಹುದು. ಇಲ್ಲಿಯೂ ಮನುಷ್ಯ ಸದಾ ತನ್ನ ನಿಕ್ಷೇಪವನ್ನು ಕಂಡುಕೊಳ್ಳುವಲ್ಲಿ ಮಾತ್ರ ತೊಡಗಿರುತ್ತಾನೆಯೆನ್ನುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಗೊಡ್ಡಾರ್ಡ್‌ನ ಹೆಸರು ಪ್ರತೀ ವಾಕ್ಯದಲ್ಲಿಯೂ ಪುನರಾವರ್ತೆನೆಯಾಗಿ ಇಂಗ್ಲೀಷ್ ಕಥಾ ಶೈಲಿಯನ್ನು ನೆನಪಿಸುತ್ತದೆ.
ಅತಂತ್ರವಾಗಿ ಬಿಡುವ ಮನುಷ್ಯನೊಬ್ಬನ ಚಿತ್ರಣವನ್ನ ನೀಡುವ `ಸಮಾಧಿಯ ಮೇಲೊಂದು ಹೂವು' ಸಂಬಂಧವಿರದ ವ್ಯಕ್ತಿಯೊಬ್ಬನಿಗೆ ಜವಾಬ್ದಾರಿಯನ್ನು ಹೊರುವ ಕಾಯಕದ ನಡುವೆ ಎಲ್ಲವನ್ನೂ ಕಳೆದುಕೊಳ್ಳುವ ನಿರಾಳತೆಯಾದರೆ, `ಮೊತ್ತ' ಲಘು ದಾಟಿಯಲ್ಲಿ ಸಾಗುವ ಗಂಭೀರ ವಾಸ್ತವದ ಚಿತ್ರಣವಾಗಿದೆ. ರಾಮಚಂದ್ರ ಅವರ ಕಥೆಗಳ್ಳಲ್ಲಿಯ ಪಾತ್ರಗಳೆಲ್ಲವೂ ವಾಸ್ತವದಲ್ಲಿ ಕಾಣಸಿಗುವ ಪಾತ್ರಗಳಂತೆ ಕಂಡರೂ ಇಲ್ಲಿ ಕಥೆಗಾರ ಆ ಪಾತ್ರಗಳ ಒಳಕ್ಕಿಳಿದು ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸುವಲ್ಲಿ ಸಫಲತೆಯನ್ನು ಸಾಧಿಸಿದ್ದಾರೆ. ಹಾಗಾಗಿಯೇ `ಹುತ್ತಗಟ್ಟಿತು ಚಿತ್ತ'ದ ನಾಗವೇಣಿಯಾಗಲಿ, `ಇಳೆ ನಿಮ್ಮ ಧ್ಯಾನ' ಕಥೆಯ ಇಳಾಭಟ್ ಪಾತ್ರವಾಗಲಿ ಮನೋಜ್ಞವಾಗಿ ಮೂಡಿ ಬರುವುದಕ್ಕೆ ಸಾಧ್ಯವಾಗಿದೆ. ಹೆಣ್ಣಿನ ಒಳ ಮನಸ್ಸು, ಆಕೆಯ ಅಸಹಾಯಕತೆ, ಹತಾಶೆ, ಸೇಡು, ಸೆಡವುಗಳನ್ನ ಬಹಳ ಮಾರ್ಮಿಕವಾಗಿ ಚಿತ್ರಿಸಿರುವುದರಿಂದ ಕಥೆಗಳು ಮೆಲುಕು ಹಾಕುವಂತಿದೆ.
ಕೆಲವೊಮ್ಮೆ ಸಿನಿಮಾಗಳಲ್ಲಿ ಹಾಡುಗಳು ಕಥೆಯ ಬೆಳವಣಿಗೆಗೆ ಪೂರಕವಾದಂತೆ ಈ ಸಂಕಲನದ ಕೆಲವು ಕಥೆಗಳಲ್ಲಿ ಬಳಸಿದ ಉಪಮೆಗಳು ಕಥೆಯ ಮುಂದುವರಿದ ಭಾಗದಂತೆ ಕಾಣುತ್ತವೆ. ಇದು ಕಥನ ಶೈಲಿಯ ತಂತ್ರವಾಗಿ ಬಹಳ ಪರಿಣಾಮಕಾರಿಯಾಗಿದೆ. ಉದಾಹರಣೆಗೆ `ಧೀಯೋಯೊನ' ಕಥೆಯ ಭಾರತಿ ಉಲ್ಲಾಳದಲ್ಲಿದ್ದಾಗಿನ ನೆನಪುಗಳನ್ನು ಮಾಡಿಕೊಂಡು, ಈ ಕಡಲಲ್ಲಿ ಅದೆಷ್ಟು ಉಬ್ಬರ... ಅದೆಷ್ಟು ಇಳಿತ... ನೇತ್ರಾವತಿಯಲ್ಲಿ ಅದೆಷ್ಟು ಬಾರಿ ನೆರೆ... ಧಾರಾಕಾರ ಮಳೆ... ಅನ್ನುವ ಮಾತುಗಳು ಅವಳ ಬದುಕಿನೊಂದಿಗಿನ ಹೋಲಿಕೆ. ಈ ಸಾಲುಗಳು ಅಲ್ಲಿಯ ಆಗಿನ ಖುಷಿಯನ್ನ ನಿರೂಪಿಸುತ್ತವೆ.
`ಆತನನ್ನು ಕೊಂಡಾಡಿರಿ' ಮತ್ತು `ಏನಿದೇನು ಪ್ರಭುವೇ...?' ಕಥೆಗಳು ಅಧ್ಯಾತ್ಮದತ್ತ ಹೊರಳುವ ಕಥೆಗಳಾಗಿ ಕಾಣುತ್ತವೆ. `ಏನಿದೇನು ಪ್ರಭುವೇ...?' ಕಥೆಯಲ್ಲಿ ಬದುಕು ಸುಳ್ಳು ಸತ್ಯಗಳ ಪ್ರಪಂಚವನ್ನು ಮಲ್ಲಪ್ಪನಿಗೆ ತೋರಿಸುತ್ತದೆ. ಇದೂ ವಾಸ್ತವದಲ್ಲಿ ನಡೆಯುವ ಘಟನೆಯೇ ಅನ್ನುವ ಹಾಗಿದೆ.
ಆದ್ದರಿಂದ `ಹಕ್ಕಿ ಚೆಲ್ಲಿದ ಬೀಜ' ಓದಿ ಖುಷಿಪಡಬಹುದಾದಂತಹ ಕಥೆಗಳ ಸಂಕಲನ. ಈ ಕೃತಿಗೆ ಎಸ್. ಆರ್ ವಿಜಯಶಂಕರ್ ಅವರ ಮುನ್ನುಡಿಯಿದೆ.

Read more!

Thursday, March 8, 2012

ವೇದವತಿ ನದಿಯಲ್ಲ, ನದಿಯೇ!


ಇತ್ತೀಚೆಗೆ ಬಿಡುಗಡೆಗೊಂಡ ಒಂದು ಅಪರೂಪದ ಕೃತಿ ಡಾ| ಎಚ್. ಎಸ್. ವೆಂಕಟೇಶ ಮೂರ್ತಿಯವರ `ವೇದವತಿ ನದಿಯಲ್ಲ'. ಈ ಕೃತಿ ಎರಡು ವಿಭಿನ್ನ ನೆಲೆಗಳಲ್ಲಿ ಅಪರೂಪದ ಕೃತಿಯಾಗಿ ಕಾಣಿಸುತ್ತದೆ. ಒಂದನೆ ಕಾರಣ ಇದು ಮೂವತ್ತು ವರ್ಷಗಳ ಹಿಂದೆ ಬರೆದಿರುವುದು ಮತ್ತು ಇತ್ತೀಚೆಗೆ ಯಾವ ಮಾರ್ಪಾಟಿಲ್ಲದೆ ಪ್ರಕಟವಾಗಿರುವಂತದ್ದು. ಇನ್ನೊಂದು ಕಾರಣ ಕವಿತೆಗಳಲ್ಲಿಯೇ ಎಲ್ಲವನ್ನೂ ಹೇಳಿಬಿಡುವ ಕವಿಯೊಬ್ಬನ ಕಾದಂಬರಿಯೆನ್ನುವ ಕುತೂಹಲಕ್ಕೆ. ಹಾಗಾಗಿ ಈ ಕೃತಿಯನ್ನು ಓದುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇದನ್ನು ಬರೆದ ಕಾಲಘಟ್ಟ. ಅಂದರೆ ಮೂವತ್ತು ವರ್ಷಗಳ ಹಿಂದಿನ ಜೀವನ ಶೈಲಿಯನ್ನ ಗಮನದಲ್ಲಿಟ್ಟುಕೊಂಡು ಓದಬೇಕಾಗುತ್ತದೆ. ಇದು ಮೂವತ್ತು ವರ್ಷಗಳ ಹಿಂದೆಯೆ ಬರೆದ ಕೃತಿಯೆನ್ನುವುದನ್ನು ಎಚ್.ಎಸ್.ವಿ ಅವರು `ಲೇಖಕರ ಮಾತು' ವಿನಲ್ಲಿಯೂ ಹೇಳಿಕೊಂಡಿದ್ದಾರೆ.
ನದಿ ಹರಿಯುವ ಭಾವದ ಹಂಗಿನ ಜೊತೆಗೆ ಸಾಗುವ ಕೃತಿ `ವೇದವತಿ ನದಿಯಲ್ಲ'. ವೇದವತಿ ನದಿಯೇ, ಈ ಕೃತಿಯ ನಾಯಕಿಯಾಗಿ ಕಾಣಿಸುವ ರಂಗಲಕ್ಷ್ಮೀ ನದಿಯಂತೆ ಯಾರಿಂದಲೂ ಯಾವ ಪ್ರತಿಫಲಾಭೀಷ್ಟಗಳನ್ನು ಎದುರು ನೋಡದೆ ಮತ್ತು ಎದುರಾಗುವ ಅಡೆತಡೆ, ತಿರುವುಗಳನ್ನು ದಿಟ್ಟವಾಗಿ ನುಗ್ಗಿ, ಗಮ್ಯವೆನಿಸುವ ಸಾಗರವನ್ನು ತಲುಪುವವಳು. ಇದು ಕಾದಂಬರಿಯ ಚೌಕಟ್ಟು. ಆದರೆ ಈ ಕಾದಂಬರಿಗೆ ಬಳಸಿಕೊಂಡ ಕ್ಯಾನ್‌ವಾಸ್ ಒಂದು ಮಹತ್ವದ ಕಾದಂಬರಿಯಾಗಿಸುವ ಹಾಗಿದ್ದರೂ ಪಾತ್ರ ಪೋಷಣೆ ಮತ್ತು ಸನ್ನಿವೇಶಗಳಿಗೆ ನಿರ್ಬಂಧ ಹಾಕಿಕೊಂಡಿರುವುದರಿಂದ ಕೃತಿ ಸೊರಗಿದಂತೆ ಕಾಣುತ್ತದೆ. ಹಾಗಂತ ರಂಗಪ್ಪ ಮತ್ತು ಅವನ ಮಗಳು ರಂಗಲಕ್ಷ್ಮೀಯ ಪಾತ್ರಗಳು ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಸ್ವಲ್ಪ ಮಟ್ಟಿಗಾದರೂ ಕೃತಿಗೆ ನ್ಯಾಯ ಒದಗಿಸಿಕೊಡುತ್ತವೆ.
ಇಲ್ಲಿ ಕ್ಲಿಕ್ಕಾಗುವ ಪಾತ್ರಗಳು ರಂಗಲಕ್ಷ್ಮೀ ಮತ್ತು ರಂಗಪ್ಪ. ರಂಗಪ್ಪ ಆಗಿನ ಪರಿಸ್ಥಿತಿಗೆ ಹೆಣ್ಣು ಸಂಪ್ರದಾಯವನ್ನು ಮುರಿದರೆ ಸಮಾಜದಲ್ಲಿ ಆತನ ಸ್ಥಾನಮಾನಕ್ಕೆ ಕುಂದಾಗಬಹುದೆನ್ನುವ ಧೋರಣೆಯಿಂದ ರಂಗಲಕ್ಷ್ಮೀಗೆ ಮರುಮದುವೆಯನ್ನು ನಿರಾಕರಿಸುತ್ತಾನೆ. ಆದರೆ ಆತ ಕಾಕತಾಳಿಯವೆಂಬಂತೆ ಒಬ್ಬ ಹೆಂಡತಿಯ ಕಾಲಾ ನಂತರ ಇನ್ನೊಬ್ಬಳನ್ನು ಹೀಗೆ ಮೂರು ಮದುವೆಯಾಗುತ್ತಾನೆ. ಇಲ್ಲಿ ಮಗಳ ವೈಧವ್ಯದ ಬದುಕು ಅವನಿಗೆ ಏನೂ ಅನಿಸುವುದಿಲ್ಲ. ಹಾಗಂತ ಅವನು ಕೆಟ್ಟವನಾಗಿ ಉಳಿಯುವುದು ಓದುಗನ ಮನಸ್ಸಿನಲ್ಲಿ ಮಾತ್ರ.
ಈ ಎರಡು ಪಾತ್ರಗಳು ಸತ್ವ ಕಳೆದುಕೊಳ್ಳುವಂತದ್ದು ಕಾದಂಬರಿಯ ಉತ್ತರಾರ್ಧದಲ್ಲಿ. ಇಲ್ಲಿ ಸಿನಿಮೀಯ ಬದಲಾವಣೆಯೊಂದಿಗೆ ಕಾದಂಬರಿ ಓಡುತ್ತದೆ.
ನದಿ ಸಾಗರ ಸೇರುವುದಕ್ಕೂ, ಸಾಗರದ ಉಬ್ಬರವಿಳಿತಗಳೂ ಕಾರಣವಾಗುತ್ತವೆ. ಇಲ್ಲಿ ರಂಗಲಕ್ಷ್ಮೀ ಚಿದಂಬರನನ್ನು ಸೇರಲು ಆಕೆಯ ಮಗು ಪಾರ್ವತಿಯ ಅಸೌಖ್ಯ ಒಂದು ಹೆಳೆಯಾದರೂ ಚಿದಂಬರನನ್ನು ಒಪ್ಪಿಕೊಳ್ಳುವಲ್ಲಿ ಯಾವ ತಡೆಯೂ ಎದುರಾಗುವುದಿಲ್ಲ. ಇಲ್ಲಿ ಬಹಳಷ್ಟು ಗಮನಸೆಳೆಯುವ ಸನ್ನಿವೇಶ ಮಗಳ ಆರೈಕೆಯಲ್ಲಿ ಚಿದಂಬರನ ಮನೆಯಲ್ಲಿಯೇ ಉಳಿಯುವ ರಂಗಲಕ್ಷ್ಮೀಯನ್ನು ಕರೆದುಕೊಂಡು ಹೋಗುವುದಾಗಿ ಅವಳ ತಂದೆ ರಂಗಪ್ಪ ಪತ್ರ ಬರೆಯುತ್ತಾನೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಚಿದಂಬರನಿಗೆ ಅವಕಾಶ ಕೊಡದೆ ಅವಳು ಪರೋಕ್ಷವಾಗಿ ತಾನೆ ಉತ್ತರಿಸುವುದಾಗಿ ತಿಳಿಸುತ್ತಾಳೆ. ಕಾದಂಬರಿಯ ಅಂತ್ಯದಲ್ಲಿ ಅವಳು ಚಿದಂಬರನ ಮನೆಯಲ್ಲಿ ಅಸ್ತವ್ಯಸ್ತವಾದ ಹಾಸಿಗೆಯನ್ನು ಸರಿಪಡಿಸುವ ದೃಶ್ಯ. ಕಾದಂಬರಿ ಇಲ್ಲಿಗೆ ಮುಗಿಯುತ್ತಿದ್ದರೆ ಓದುಗನ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತಿತ್ತೇನೋ. ರಂಗಲಕ್ಷ್ಮೀಯ ಈ ಅಚಲ ನಿರ್ಧಾರ ಸಾಮಾಜಿಕ ಕಟ್ಟುಪಾಡಿನಿಂದ ಹೊರಗೆ ಬರುವಂತೆ ಮೂಡಿರುವುದರಿಂದ ಕೃತಿಗೆ ಹೆಚ್ಚಿನ ತೂಕ ಬಂದಿದೆಯೆನ್ನಲಡ್ಡಿಯಿಲ್ಲ.
ಕಾದಂಬರಿಯ ಕೆಲವು ಮುಖ್ಯ ಪಾತ್ರಗಳಾದ ಶಂಕರ, ಗೌಡ, ಚಿದಂಬರ ಇವರೆಲ್ಲಾ ಹಾಗೆ ಬಂದು ಹೀಗೆ ಹೋಗುವ ನಾಟಕದ ಪಾತ್ರಗಳಾಗಿ ಗೋಚರಿಸುತ್ತಾರೆ. ಈ ಯಾವ ಪಾತ್ರಗಳು ಬೆಳವಣಿಗೆ ಕಾಣುವುದೇ ಇಲ್ಲ. ಅದರಂತೆಯೇ ಇಲ್ಲಿಯ ಇನ್ನೊಂದು ಮುಖ್ಯ ನಾಟಕೀಯ ಬೆಳವಣಿಗೆಯಾಗಿ ಪ್ರತೀ ಬಾರಿಯೂ ಮಲ್ಲಪ್ಪನ ಹೆಂಡತಿಯರು ಸಾಯುವಾಗ ಧುತ್ತನೆ ಅವನಿಗೆ ಇನ್ನೊಂದು ಸಂಬಂಧ ತಯಾರಾಗಿರುವುದು ಕಾಣುತ್ತೇವೆ. ಇವುಗಳೆಲ್ಲಾ ಪುಟ ವ್ಯಾಪ್ತಿಯಲ್ಲಿ ರಚಿಸಿದಂತೆ ಕಾಣಿಸುತ್ತದೆ.
ರಂಗಲಕ್ಷ್ಮೀ ಆಧುನಿಕ ಮಹಿಳೆಯ ಹಾಗೆ ದಿಟ್ಟ ನಿಲುವಿನ ಹೆಣ್ಣು ಅನ್ನುವುದನ್ನು ಮೂವತ್ತು ವರ್ಷಗಳ ಹಿಂದೆಯೇ ಬೆಳೆಸಿರುವುದು ಗಮನಾರ್ಹ. ಆಗಿನ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಚಿದಂಬರನನ್ನು ಒಪ್ಪಿಕೊಳ್ಳುವ ಅವಳ ಧೈರ್ಯ ಕಾದಂಬರಿಯನ್ನು ಸುಖಾಂತದಲ್ಲಿ ಮುಗಿಸುವುದಕ್ಕಿಂತಲೂ ಓದುಗನಿಗೆ ಬೆರಗನ್ನು ನೀಡುತ್ತದೆ. ಚಿದಂಬರನ ಬಗ್ಗೆ ಅವಳಿಗಿರುವ ಒಲವನ್ನು ನೇರವಾಗಿ ಎಲ್ಲೂ ಹೇಳದೆ ಅಚಾನಕ್ಕಾಗಿ ಅವನನ್ನು ಅಪ್ಪಿಕೊಳ್ಳುವ ಸಂದರ್ಭದಲ್ಲಿ ಮೌನವೇ ಓದುಗನಿಗೆ ಎಲ್ಲವನ್ನೂ ಹೇಳಿಬಿಡುವಂತೆ ತೋರುತ್ತದೆ.
ಆಧುನಿಕತೆಯ ಸೋಂಕಿಲ್ಲದ ಹಳ್ಳಿಯ ಚಿತ್ರಣ, ಬದುಕಿನ ರೀತಿ, ಹಳ್ಳಿಗರ ಸ್ವಾಭಿಮಾನ, ಮೂಲ ಸೌಕರ್ಯಗಳಿಲ್ಲದ ವ್ಯವಸ್ಥೆ, ದ್ವೇಷ ಸಾಧನೆ, ಎಲ್ಲೂ ಮಿತಿ ಮೀರದೆ ಮತ್ತು ವ್ಯತಿರೀಕ್ತಗಳೆನಿಸದೆ ಕಾದಂಬರಿಯನ್ನು ಆಸ್ವಾದಿಸುವಂತೆ ಮಾಡುತ್ತದೆ.
ಎಚ್. ಎಸ್. ವಿ ಅವರ ಕಾವ್ಯಗಳ ಮಾದುರ್ಯತೆಯ ಹಾಗೆಯೇ ಈ ಕೃತಿಯೂ ಒಂದು ಕ್ಲಾಸಿಕಲ್ ವರ್ಕ ಆಗಿ ಮೂಡಿಬಂದಿರುವುದರಿಂದ ಒಮ್ಮೆಯಾದರೂ ಓದಬೇಕೆನಿಸುತ್ತದೆ. ಈ ಕೃತಿಗೆ ಎನ್. ಎಸ್. ಶ್ರೀಧರಮೂರ್ತಿಯವರ ಮುನ್ನುಡಿ ಮತ್ತು ಜೋಗಿಯವರ ಬೆನ್ನುಡಿಯಿದೆ.

Read more!

Sunday, February 12, 2012

ಹಲವು ರಂಗಗಳ ‘ವೇಷ’


ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕೃತಿಗಳನ್ನು ರಚಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಪ್ರಭಾಕರ ನೀರ್‌ಮಾರ್ಗ ಅವರ ಹದಿನೇಳನೆಯ ಕೃತಿ ‘ವೇಷ’. ದಕ್ಷಿಣ ಕನ್ನಡದ ಸಾಂಸ್ಕೃತಿಕ, ಸಾಮಾಜಿಕ ಜನಜೀವನವನ್ನ ಬಹಳ ಮಾರ್ಮಿಕವಾಗಿ ಚಿತ್ರಿಸುವ ಇವರ ಕೃತಿಗಳಲ್ಲಿ ದಾಯಿತ್ವ, ತಿಲ್ಲಾನ, ಧೀಂಗಿಣ, ಮಂಗಳೂರು ಕ್ರಾಂತಿ, ಶಿಶಿರ, ಪ್ರತಿಶೋಧ, ಜಾತ್ರೆ ಮತ್ತು ತಂಬಿಲಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಾದೇಶಿಕ ಹಿನ್ನಲೆಯಲ್ಲಿಯೇ ಮೂಡಿಬಂದವುಗಳು. ಆದರೆ ‘ವೇಷ’ ಕಾದಂಬರಿ ಇವುಗಳ ನಡುವೆ ತುಸು ವಿಭಿನ್ನವಾಗಿ ರಚಿಸಿದ ಕಾದಂಬರಿಯಂತೆ ಕಂಡರೂ, ಇಲ್ಲಿಯ ಪಾತ್ರಗಳಿಗೆ ಯಾವುದೇ ಪ್ರಾಮುಖ್ಯತೆಯಿಲ್ಲದೆ ಕೇವಲ ಬಣ್ಣದ ‘ವೇಷ’ ಮತ್ತು ಬದುಕಿನ ವೇಷದ ಸುತ್ತಾ ಕಥೆ ಹೆಣೆದುಕೊಂಡಿದೆಯೇನೋ ಅನಿಸುತ್ತದೆ.

ಕಥೆಯ ಆರಂಭದಲ್ಲಿ ನವರಾತ್ರಿಯ ಸಮಯದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ವೇಷದ ಬಗ್ಗೆ ‘ಎಪಿಲೋಗ್’ನ ಹಾಗೆ ಪ್ರಸ್ತಾಪಿಸುತ್ತಾ ದಕ್ಷಿಣ ಕನ್ನಡದಲ್ಲಿ ನವರಾತ್ರಿಯಲ್ಲಿ ಕಾಣಿಸುವ ವೇಷಗಳ ಬಗ್ಗೆ ವಿವರಗಳನ್ನು ನೀಡುತ್ತಾ ಕೃತಿಕಾರರು ಕಥೆಯೊಳಗೆ ಇಳಿಯುತ್ತಾರೆ. ಇಲ್ಲಿ ಆ ಬಣ್ಣದ ವೇಷಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವ ಓದುಗನ ನಿರೀಕ್ಷೆಯನ್ನು ಹುಸಿಯಾಗಿಸುತ್ತಾ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಉಳಿದ ಬಣ್ಣದ ಲೋಕಗಳಾದ ಯಕ್ಷಗಾನ, ನಾಟಕರಂಗಗಳಿಗೂ ಪಾತ್ರಗಳ ಮೂಲಕ ಇಳಿಯುತ್ತಾ ಹೊಸದೇನೋ ಹೇಳುತ್ತಾ ಕಥೆ ಸಾಗುತ್ತದೆ. ಇಲ್ಲಿ ಮಾರ್ನಮಿಯ ಹುಲಿವೇಷದ ವಿವರಣೆಗಳನ್ನು ಬಿಟ್ಟರೆ ಮತ್ತೆಲ್ಲವೂ ನಾಟಕ ಮತ್ತು ಯಕ್ಷಗಾನದ ಬಗೆಯೇ ಹೆಚ್ಚು ಒತ್ತುಕೊಟ್ಟು ಬರೆದಂತೆ ಕಾಣಿಸುತ್ತದೆ. ‘ಧೀಂಗಿಣ’ ಯಕ್ಷಗಾನದ ಒಳಹೊರಗನ್ನು ತಿಳಿಸುವ ಸಮಾಜಮುಖಿಯಾದ ಕಾದಂಬರಿಯಾದರೂ ಅಲ್ಲಿ ನೀರ್‌ಮಾರ್ಗ ಅವರ ‘ಪೇಪರ್ ವರ್ಕ್’ ಎದ್ದು ಕಾಣಿಸುತ್ತದೆ. ‘ತಿಲ್ಲಾನ’ ಕಾದಂಬರಿಯಲ್ಲಿ ಭೂತದಕೋಲದ ವಿವರಗಳಿರುವಂತೆ ‘ವೇಷ’ದಲ್ಲಿಯೂ ಅಂತಹುದೊಂದನ್ನು ಹುಡುಕಿದರೆ ಸಿಗಲಾರದೆನ್ನುವುದು ನನ್ನ ಅನಿಸಿಕೆ. ಹಾಗಂತ ಕಾದಂಬರಿ ಏನನ್ನೂ ಹೇಳದೆ ಸುಮ್ಮನಿರುವುದಿಲ್ಲ.

‘ವೇಷ’ ಕಾದಂಬರಿಯ ಪ್ಲಸ್ ಪಾಯಿಂಟ್ ಇಲ್ಲಿ ಚಿತ್ರಿತವಾಗಿರುವ ನಾಲ್ವರು ಯುವಕರ ಚಿತ್ರಣ. ಸೆಲೂನಿನ ವೆಂಕಣ್ಣ, ಹೊಟೇಲ್‌ನ ಕೆಲಸ ಮಾಡಿಕೊಂಡಿರುವ ಗಿರಿಯಪ್ಪ, ಟೈಲರ್ ವೃತ್ತಿಯ ರಮೇಶ, ವೆಂಕಪ್ಪನಿಗೆ ಪ್ರತಿಸ್ಪರ್ಧಿಯಂತಿದ್ದ ಶಾಮಣ್ಣ ಇವರೆಲ್ಲ ಯೌವನ ಸಹಜವಾದ ಕನಸುಗಳನ್ನು ಕಾಣುತ್ತಾ ತಂದೆ, ತಾಯಿ, ಹಿರಿಯರನ್ನು ಮೀರಿ ತಮ್ಮ ತಮ್ಮ ಅಭಿಲಾಷೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತವರು. ಇವರೆಲ್ಲರ ಗುರಿಯೂ ಸಂಸ್ಕೃತಿಯತ್ತ ಚಾಚಿರುವುದು, ಕಳಚಬಹುದಾದ ಒಂದು ಕೊಂಡಿಯನ್ನು ಮತ್ತೆ ಬೆಸೆಯುವಲ್ಲಿ ಅಥವಾ ಅದನ್ನು ಮುಂದುವರಿಸಿಕೊಂಡು ಹೋಗಬಹುದಾದ ಪಾತ್ರಗಳಾಗಿ ಬಹು ಮುಖ್ಯವೆನಿಸುತ್ತವೆ. ಇಂದಿನ ರಾಕೇಟ್ ಯುಗದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ದೂರೀಕರಿಸುತ್ತಾ ಹೊಸ ಸಂಸ್ಕೃತಿಯ ಹುಡುಕಾಟದಲ್ಲಿ ಕಳೆದು ಹೋಗುತ್ತಿರುವ ವೆಂಕಣ್ಣ, ಗಿರಿಯಪ್ಪ, ಶಾಮ ಮತ್ತು ರಮೇಶರು ಅಳಿಯುತ್ತಿರುವ ಸಂಸ್ಕೃತಿಯ ಅವಿಭಾಜ್ಯ ಅಂಗದಂತಿರುವ ಯಕ್ಷಗಾನ, ನಾಟಕಗತ್ತ ಹೊರಳುತ್ತಾ, ಆ ಸಾಂಸ್ಕೃತಿಯ ಮುಂದಿನ ಪೀಳಿಗೆಯವರಂತೆ ಕಾಣುತ್ತಾರೆಂದರೆ ಅತಿಶಯವಲ್ಲ. ‘ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು’ ಅನ್ನುವಂತೆ ಹಳೆಯದನ್ನು ಬಿಡದೆ ಹೊಸ ಪೀಳಿಗೆ ಅಂತಹ ಸಂಸ್ಕೃತಿಯನ್ನು ಮುಂದುವರೆಸಿಕೊಂಡರೆ ಆ ಸಂಸ್ಕೃತಿಯನ್ನು ಸಂಗ್ರಹಾಲದಲ್ಲಿಯ ವಸ್ತುಗಳಂತೆ ನೋಡಬೇಕಾಗಿಲ್ಲ ಅಥವಾ ದಾಖಲೆಗಳಿಂದ ನೋಡಿ ತಿಳಿದುಕೊಳ್ಳುವ ಅನಿವಾರ್ಯತೆಯೂ ಬರಲಾರದು.

ಆದರೆ ಈ ಕೃತಿಯಲ್ಲಿ ಹಿರಿಯರು ಯಾರೂ ಯುವಕರ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಎಲ್ಲರೂ ಅವರ ಆಸೆ, ಆಕಾಂಕ್ಷೆಗಳಿಗೆ ಅಡ್ಡಿಯಾಗುವವರೆ. ಮಕ್ಕಳು ಹೊಸ ದಾರಿ ಹಿಡಿದರೆ ಸಂಸ್ಕೃತಿಯ ನಾಶವಾಗುವುದು ಹೌದಾದರೂ ಅಲ್ಲಿ ಹೊಸ ಸಂಸ್ಕೃತಿಯೊಂದು ಯಾಕೆ ಹುಟ್ಟಿಕೊಳ್ಳಬಾರದು? ಸಮಾಜಮುಖಿಯಾದರೆ ಎಲ್ಲರೂ ಕೆಟ್ಟು ಹೋಗುತ್ತಾರೆನ್ನುವ ಆತಂಕ ಪೋಷಕರಲ್ಲಿದ್ದರೂ, ತಾವು ಬಣ್ಣದ ಬದುಕನ್ನು ಕಂಡು ಆನಂದ ಪಡುವವರೆ. ಇಲ್ಲಿ ಮನೆಯವರ ವಿರೋಧವಿದ್ದರೂ ಯುವಕರೇನೂ ಸುಮ್ಮನಿರುವುದಿಲ್ಲ, ತಮ್ಮ ಸದಭಿರುಚಿಗೆ ತಕ್ಕಂತೆ ಅವರು ಬಣ್ಣದ ಬದುಕಿನತ್ತ ಮುಖ ಮಾಡುತ್ತಾರೆ. ಆದರೆ ಬಣ್ಣದ ಬದುಕು ಅವರನ್ನು ನಿರಾಕರಿಸುವುದಿಲ್ಲ. ಆದರೆ ಈ ಕೃತಿಯಲ್ಲಿ ಈ ನಾಲ್ಕು ಪಾತ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸೊರಗುತ್ತವೆ. ಸಮಾಜಮುಖಿಯಾದ ಯಾವ ಕಳಕಳಿಯೂ ಇಲ್ಲಿರದಿದ್ದರೂ ಸಾಂಸ್ಕೃತಿಕ ತಲ್ಲಣ ಮಾತ್ರ ಲೇಖಕನಲ್ಲಿ ಜಾಗೃತವಾಗಿರುವುದನ್ನು ಕಾಣುತ್ತೇವೆ. ಇದೇ ಜಾಗೃತಿ ಪಾತ್ರಗಳಲ್ಲಿಯೇ ಮೂಡಿ ಬರುತ್ತಿದ್ದರೆ ‘ವೇಷ’ ಇನ್ನಷ್ಟು ವಿಜೃಂಭಣೆಯಿಂದ ಕೂಡಿರುತ್ತಿತ್ತು.

ಸ್ತ್ರೀ ಪಾತ್ರಗಳಿಗೆ ಇಲ್ಲಿ ಪ್ರಾಮುಖ್ಯತೆ ಇಲ್ಲವೆನಿಸಿದರೂ ಇಲ್ಲಿ ಬರುವ ಶೈಲಶ್ರೀಯ ಪಾತ್ರ ಮಾತ್ರಾ ಮೆಚ್ಚುವಂತೆ ಇದೆ. ಸಿನಿಮಾದಂತಹ ಬಣ್ಣದ ಲೋಕಕ್ಕೆ ಇಳಿದರೂ ತನ್ನನ್ನು ತಾನು ಎಕ್ಸ್‌ಪೋಸ್ ಮಾಡಿಕೊಳ್ಳುವಲ್ಲಿ ಅವಳದ್ದು ಗಟ್ಟಿ ನಿರ್ಧಾರ. ಆ ಬಣ್ಣದಲೋಕದಲ್ಲಿದ್ದರೂ ರಂಗಭೂಮಿ ಕೈ ಬೀಸಿ ಕರೆದಾಗ ನಾಟಕದಲ್ಲಿ ಪಾತ್ರ ಮಾಡಲು ಒಪ್ಪಿಕೊಳ್ಳುವ ಅವಳ ಪಾತ್ರ ಒಂದು ನೈಜ್ಯ ಕಲಾವಿದೆಯೊಬ್ಬಳಿಗಿರುವ ಕಾಳಜಿಯನ್ನು ತೋರಿಸುತ್ತದೆ. ಇದು ಇಂದಿನ ಯುವ ಪೀಳಿಗೆಯ ನಟಿಯರಿಗೆ ರೋಲ್ ಮಾಡೆಲ್ ಆಗಿರುವುದು ಮೆಚ್ಚತಕ್ಕದ್ದು. ಇನ್ನುಳಿದಂತೆ ಇಲ್ಲಿ ಬರುವ ರಾಜೀವಿಯಾಗಲಿ, ಶ್ರೀಜಾಳಾಗಲಿ, ಕಾಮಿನಿಯಾಗಲಿ ಗಟ್ಟಿ ಪಾತ್ರಗಳಾಗಿ ಉಳಿಯುವುದಿಲ್ಲ. ವೆಂಕಣ್ಣನಂತಹ ಯುವಕ ಹೀರೋನೆನಿಸಿಕೊಂಡರೂ ಎರಡು ಪ್ರೇಮ ಪ್ರಕರಣಗಳಲ್ಲಿಯೂ ಸೋಲುಣ್ಣುವವನು. ಆದರೂ ಕೊನೆಯಲ್ಲಿ ಆದರ್ಶತೆಯನ್ನು ತೋರಿಸುವ ಅವನು ವಿವಾಹಬಂಧನಕ್ಕೆ ಸಿಲುಕುವುದು ‘ವೇಷ’ದ ನಾಟಕೀಯ ತಿರುವು ಆಗಿಬಿಡುತ್ತದೆ.

ಈ ಕಾದಂಬರಿಯಲ್ಲಿ ಗಮನಿಸಬಹುದಾದ ಮತ್ತೊಂದು ಮುಖ್ಯ ಅಂಶವೆಂದರೆ ಈ ಯುವಕರು ಪ್ರೀತಿಯಲ್ಲಿ ಬಿದ್ದರೂ ಯಾರೊಬ್ಬನೂ ಅದರಲ್ಲಿ ಗೆಲುವು ಕಾಣದಿರುವುದು ಕಾದಂಬರಿ ನಾಟಕೀಯತೆಯಿಂದ ಹೊರಗೆ ಬಂದಂತೆ ಕಾಣಿಸುತ್ತದೆ. ಇದು ಸಮಾಜದಲ್ಲಿ ಸಾಮಾನ್ಯವಾಗಿ ನಡೆಯುವ ಘಟನೆಗಳೆ. ಪ್ರೀತಿಸಿದ ಮೇಲೆ ಪರ‍್ಯವಸಾನ ಮದುವೆಯಲ್ಲೇ ಮುಗಿಯಬೇಕೆಂದೇನಿಲ್ಲವಲ್ಲ! ಗಿರಿಯಪ್ಪನನ್ನು ಹೊರತು ಪಡಿಸಿ ಮತ್ತೆಲ್ಲವೂ ಸೋಲುವ ಪ್ರೀತಿಗಳೆ ಇಲ್ಲಿ ಕಾಣಿಸುತ್ತವೆ.

ಕಾದಂಬರಿ ಮೊದಲಿನಿಂದ ಕೊನೆಯ ತನಕವೂ ಲವಲವಿಕೆಯಿಂದ ಓದಿಸಿಕೊಂಡು ಹೋಗುವುದಲ್ಲದೆ ಪ್ರಾದೇಶಿಕ ಭಾಷೆಯಿಂದಾಗಿ ಆಪ್ತವೆನಿಸುತ್ತದೆ. ಇಲ್ಲಿ ಪ್ರಯೋಗಿಸಿದ ಪ್ರಾದೇಶಿಕ ಪದಗಳ ಅನಿವಾರ್ಯತೆ ಕಥೆಗಿಲ್ಲವಾದರೂ ಕನ್ನಡಕ್ಕೆ ಅವುಗಳನ್ನು ಪರಿಚಯಿಸಿಕೊಟ್ಟಿರುವುದು ಶ್ಲಾಘನೀಯ. ಇಲ್ಲಿಯ ಕಥಾಹಂದರವು ಮೂರು ವಿಭಿನ್ನ ಕೋನಗಳಲ್ಲಿ ಹೊರಟು ಒಂದಕ್ಕೊಂದು ಕೊಂಡಿಯಿಲ್ಲದಂತಾಗಿ ಮೂರು ಭಾಗಗಳಲ್ಲಿ ಕಥೆಯನ್ನು ಓದಿದ ಅನುಭವವಾಗುತ್ತದೆ. ಎಲ್ಲಾ ಪಾತ್ರಗಳೂ ಕಥಾವಸ್ತುವಿನ ಜೊತೆಗೆ ಬೆಸೆದ್ದಿದ್ದರೆ ಕೃತಿ ಇನ್ನೂ ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೇನೋ.

ಪ್ರಭಾಕರ ನೀರ್‌ಮಾರ್ಗ ಅವರ ಕಾದಂಬರಿಗಳ ವಸ್ತು ವೈವಿಧ್ಯತೆಯಿಂದ ಸಂಗ್ರಹಯೋಗ್ಯ ಮತ್ತು ಉಲ್ಲೇಖ ಪುಸ್ತಕವಾಗಿಯೂ ಉಪಯೋಗವಾಗಿರುವುದರಿಂದ ಒಮ್ಮೆಯಾದರೂ ಇವರ ಕೃತಿಗಳನ್ನು ಓದಲೇಬೇಕು.

Read more!