Monday, November 29, 2010

ನಾಗತಿಹಳ್ಳಿ ಚಂದ್ರಶೇಖರ ಅವರ ‘ವಲಸೆ...’


ಮೇಷ್ಟ್ರ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಓದುವುದೆ ಒಂದು ಚೇತೋಹಾರಿ ಅನುಭವ. ಅವರ ‘ಬಾ ನಲ್ಲೆ ಮಧುಚಂದ್ರಕ್ಕೆ’ ಕಾದಂಬರಿ, ಅಮೆರಿಕಾ! ಅಮೆರಿಕಾ!! ಪ್ರವಾಸಕಥನ ಮತ್ತು ನನ್ನ ಪ್ರೀತಿಯ ಹುಡುಗಿಗೆ ಕಥಾಸಂಕಲನ ಯುವ ಮನಸುಗಳನ್ನು ಸಾಹಿತ್ಯದತ್ತ ಆಕರ್ಷಿಸಿದೆಯೆಂದರೆ ಹೆಚ್ಚಲ್ಲ. ಸದಾ ವಸ್ತುಸ್ಥಿತಿಯ ನಿಚ್ಚಳವಾದ ಅನಾವರಣ, ತಿಳಿ ಹಾಸ್ಯದ ಶೈಲಿಯ ಮಾತುಗಳು, ಒಂದಷ್ಟು ಮುದನೀಡುವ ಸನ್ನಿವೇಶಗಳು ಅವರ ಸಾಹಿತ್ಯದ ಕೃಷಿಯಲ್ಲಿ ಎದ್ದು ಕಾಣುವ ಸಂಗತಿಗಳು.

‘ವಲಸೆ ಹಕ್ಕಿಯ ಹಾಡು’ ಅವರ ಹೊಸ ಕೃತಿಯೇನಲ್ಲ. ಅದು ಅವರು ಎಂಬತ್ತರ ದಶಕದಲ್ಲಿ ಬರೆದ ಕಾದಂಬರಿ. ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಜೀವನವನ್ನ ಕಟ್ಟಿಕೊಡುವ ಶೈಲಿ ತುಂಬಾ ಆಪ್ತವೆನಿಸುತ್ತದೆ. ತಿಳಿ ಹಾಸ್ಯದೊಂದಿಗೆ ಆರಂಭವಾಗುವ ಕಾದಂಬರಿಯಲ್ಲಿ ಚಿಕ್ಕಮಾಳಿಗೆ ಕೊಪ್ಪಲು (ಸಿ.ಎಂ.ಕೊಪ್ಪಲು) ಅನ್ನುವ ಹಳ್ಳಿಯ ಚಿತ್ರಣವನ್ನು, ಅಲ್ಲಿಯ ಜನಜೀವನವನ್ನೂ ತೆರೆಯುತ್ತಾ ಕಾದಂಬರಿ ಓದುಗನನ್ನು ಸೆಳೆದುಕೊಳ್ಳುತ್ತದೆ. ಪಂಡ್ರಿಯೆನ್ನುವ ಮುಗ್ಧ ಹುಡುಗ, ಹುಟ್ಟು ಹೋರಾಟಗಾರನಲ್ಲದಿದ್ದರೂ ಪ್ರಾಮಾಣಿಕವಾಗಿ ಆ ಹಳ್ಳಿಯ ಬಗ್ಗೆ ಕಾಳಜಿವಹಿಸುವ ಕೆಂಚೇಗೌಡರು, ಪ್ರೀತಿ ತೋರಿದರೂ ಪರಿಸ್ಥಿತಿಯೊಂದಿಗೆ ರಾಜಿ ಮಡಿಕೊಳ್ಳದ ಸಿಡುಕು ಸ್ವಭಾವದ ಗೌಡರ ಮಡದಿ ಹೊಂಬಾಳಮ್ಮ, ಸ್ವತಂತ್ರವಾಗಿ ತಿರುಗಾಡಿಕೊಂಡು ಪಡ್ಡೆಯೆಂದು ಗುರುತಿಸಿಕೊಳ್ಳುವ ಗೌಡರ ಮಗ ಸ್ವತಂತ್ರ ಹೀಗೆ ನಾನಾ ಬಗೆಯ ಪಾತ್ರಗಳು ಈ ಕಾದಂಬರಿಯ ಬೆಳವಣಿಗೆಗೆಯಲ್ಲಿ ಜೀವ ಪಡೆದುಕೊಳ್ಳುತ್ತವೆ."

ಡ್ರಿಲ್ ಮಾಸ್ಟ್ರು ಯಲ್ಲಯ್ಯ ಪಂಡ್ರಿಗೆ ಸ್ವಾತಂತ್ರ್ಯ ದಿನಾಚರಣೆಯ ವಂದನಾರ್ಪಣೆಯ ಜವಾಬ್ದಾರಿಯನ್ನು ಕೊಟ್ಟ ಮೇಲೆ ಹೃಸ್ವ ಮತ್ತು ದೀರ್ಘಗಳ ವ್ಯತ್ಯಾಸ ತಿಳಿಯದ ಅವನು ಅದನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಉರು ಹೊಡೆದು ರಾತ್ರಿ ನಿದ್ದೆಯಲ್ಲಿಯೂ ಮಗ ಕನಸಿನಲ್ಲಿ ವಂದನಾರ್ಪಣೆಯೆನ್ನುವುದನ್ನು ಕನವರಿಸುವಾಗ ಅವನ ತಾಯಿ ಭವಾನಿ ಇದು ‘ಒಂದ’ಕ್ಕೆ ಸಂಬಂಧಿಸಿರಬಹುದೆಂದು ಊಹಿಸಿ, “ಎದ್ದು ಹೋಗಿ ಒಂದ ಮಾಡಿ ಬಂದು ಬಿದ್ಕೊ” ಎಂದು ಗದರಿಸಿವ ಸನ್ನಿವೇಶವಂತು ನಗೆಗಡಲಲ್ಲಿ ಮುಳುಗಿಸುತ್ತದೆ. ಇಂತಹ ಮುಗ್ಧತೆಯಿರುವ ಹಳ್ಳಿಯಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಪ್ರಚುರಪಡಿಸುವ ಗೌಡರಿಗೆ ಮಾತ್ರ ಮಗ ಸ್ವತಂತ್ರನಿಂದ ನೆಮ್ಮದಿಯಿರುವುದಿಲ್ಲ. ಸದಾ ಕುಡಿದು, ಗಲಾಟೆ ಮಾಡಿಕೊಂಡು ಬಂದು ಮನೆಯಲ್ಲಿ ತಾಯಿಯ ಮಾತಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು; ಮಾತ್ರವಲ್ಲ, ಗೌಡರ ನೆಮ್ಮದಿಯನ್ನು ಕದಿಯುತ್ತಾನೆ. ಅವನೊಂದು ದೊಡ್ಡ ಹೊರೆಯಾಗಿ ಸದಾ ಅವರನ್ನು ಕಾಡುತ್ತಲೇ ಇರುತ್ತಾನೆ.

ಇಷ್ಟಾದರೂ ಗೌಡರ ಸ್ವಾತಂತ್ರ್ಯ ಸೇವೆ ನಿಲ್ಲುವುದಿಲ್ಲ. ಅವರು ಶಾಲೆಯ, ಊರಿನ ಅಭಿವೃದ್ಧಿಗೆ ತೊಡಗುತ್ತಾರೆ. ಮನೆಯಲ್ಲಿ ಸದಾ ಹಾಲುಹೊಳೆಯೆ ಹರಿಯುತ್ತಿರುತ್ತದೆ. ಅವರ ಉದಾರಗುಣ ಹೊಂಬಾಳಮ್ಮನಿಗೆ ಸರಿಕಾಣದು. ಸದಾ ದುಮುಗುಟ್ಟುತ್ತಾ ಮೌನದ ತೆಕ್ಕೆಗೆ ಜಾರುವ ಅವರು ಒಮ್ಮೆಯೂ ಗೌಡರ ಬಳಿ ಪ್ರೀತಿಯಿಂದ ಮಾತನಾಡಿದಿಲ್ಲ. ಆದರೂ ಗೌಡರ ಮನೆಯೆ ನ್ಯಾಯದ ಕಟ್ಟೆಯಾಗಿರುವುದರಿಂದ ಅವರು ಹೇಳಿದ್ದೆ ನ್ಯಾಯವಾಗಿ ಊರವರಿಗೆಲ್ಲಾ ಅವರ ಮೇಲೆ ಗೌರವ, ಪ್ರೀತಿ ಎಲ್ಲವೂ.

ಇಂತಿರುವ ಗೌಡರು ದೇಶದಲ್ಲೆಲ್ಲಾ ಸ್ವಾತಂತ್ರ್ಯದ ಬಿರುಗಾಳಿ ಬೀಸುತ್ತಿರುವಾಗ ದೇಶಸೇವೆಗಾಗಿ ಅಲ್ಲದಿದ್ದರೂ ಗೆಳೆಯನೊಬ್ಬನನ್ನು ಹುಡುಕುತ್ತಾ ದೇಶ ಸುತ್ತಾಡುವುದಕ್ಕೆ ಹೋಗಿ ವಿಭಜನೆಯಾಗದ ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಕ್ಕಿಕೊಂಡು, ಅಲ್ಲಿ ತಾವು ಗಳಿಸಿಕೊಂಡ ಗೆಳೆಯನ ಮೂಲಕ ತಾನು ಹುಡುಕುತ್ತಿರುವ ವ್ಯಕ್ತಿಯ ಮಗನೆ ಆತನೆಂದು ತಿಳಿದು ಸಂತೋಷಪಡುತ್ತಾರೆ. ಆದರೆ ಗೌಡರ ತಂದೆಯಂತೆಯೆ ಆ ವ್ಯಕ್ತಿಯೂ ಎಲ್ಲಿ ಹೋದ? ಏನಾದನೆನ್ನುವುದು ಮಗನಿಗೂ ಗೊತ್ತಿರುವುದಿಲ್ಲ. ಹೀಗೆ ಅವರ ಹಿನ್ನಲೆಯನ್ನು ಕೆದಕುವ ಕಾದಂಬರಿ ಮತ್ತೆ ಓಟ ಪಡೆಯುವುದು ಕೆಂಚೇಗೌಡರ ಮಗನ ಮರು ಪ್ರವೇಶದಿಂದ. ಅವನು ತಂದೆಯ ಆಸ್ತಿಯನ್ನು ತನಗೆ ಕೊಡಬೇಕೆಂದು ಗಲಾಟೆಯೆಬ್ಬಿಸಿ ಮನೆಯನ್ನು ರಣರಂಗ ಮಾಡುತ್ತಾನೆ. ಗೌಡರಿಗಾದರೂ ಅವನಿಗೆ ಆಸ್ತಿ ಬರೆದುಕೊಟ್ಟರೆ ತಮಗೆ ಉಳಿಯುವುದು ಚಿಪ್ಪು ಮಾತ್ರವೆಂದು ತಿಳಿದಿರುವುದರಿಂದ ಆ ವಿಷಯವನ್ನು ಮುಂದಕ್ಕೆ ದೂಡುತ್ತಾರೆ. ಆದರೆ ಬಂದಾಗಲೆಲ್ಲ ಅವನು ಗಲಾಟೆಯೆಬ್ಬಿಸುತ್ತಲೇ ಇರುತ್ತಾನೆ.

ಒಮ್ಮೆ ಆ ಊರಿಗೆ ಪ್ರಪಂಚ ಅಲೆದಾಟಕ್ಕೆ ಬಂದಿರುವ ಪ್ರೆಂಚ್ ಮಹಿಳೆ ವುಲ್ಫ್ಗಂಗ್ಳು ಭೇಟಿಕೊಟ್ಟು ಗೌಡರ ಮನೆಯಲ್ಲಿಯೆ ಉಳಿಯುತ್ತಾಳೆ. ಅವಳಿಗೆ ಸಿ.ಎಂ.ಕೊಪ್ಪಲು ಹಳ್ಳಿ ತುಂಬಾ ಇಷ್ಟವಾಗಿರುತ್ತದೆ. ಅಲ್ಲಿಯ ಸಂಸ್ಕೃತಿ, ಜನರ ನಡೆ ನುಡಿಗಳನ್ನು ಮೆಚ್ಚಿ, ಅವಳನ್ನು ಬೆರಗಿನಿಂದ ನೋಡುವ ಹಳ್ಳಿಯ ಜನರ ಪ್ರೀತಿಪಾತ್ರಳಾಗುತ್ತಾಳೆ. ಗೌಡರಿಗೆ ತಮ್ಮ ಮನಸ್ಸಿನಲ್ಲಿರುವ ಖಿನ್ನತೆಯನ್ನು ಬಿಚ್ಚಿಕೊಳ್ಳುವ ಸಂದರ್ಭ ಬಂದಾಗ ಅವರು ತಮ್ಮ ಮಗನಿಂದಾದ ನೋವನ್ನೆಲ್ಲಾ ಹೇಳಿಕೊಂಡು ಹಗುರಾಗುತ್ತಾರೆ. ಅವಳ ಸಾಂತ್ವನದಲ್ಲಿ ಒಬ್ಬ ತಾಯಿ, ಒಬ್ಬ ಸ್ನೇಹಿತೆಯ ಆದರ್ಶವನ್ನು ಕಾಣುತ್ತಾರೆ. ಅವಳ ಮಾತಿನಂತೆ ತಮ್ಮ ಎಲ್ಲಾ ಆಸ್ತಿಯನ್ನು ಮಗನಿಗೆ ಬರೆದು ತಾವು ಮಡದಿಯ ಜೊತೆಗೆ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಉಳಿಯುತ್ತಾರೆ.

ಸ್ವತಂತ್ರ ತನ್ನ ದುಷ್ಟ ಗುಣಗಳನ್ನೆ ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಶಾಸಕನಾಗುತ್ತಾನೆ. ಅವನು ಕಾಟಾಚಾರಕ್ಕಾದರೂ ತಂದೆ-ತಾಯಿಯನ್ನು ತಂದಿರಿಸಿಕೊಳ್ಳಬೇಕೆಂದುಕೊಂಡರೂ ಸ್ವಾಭಿಮಾನಿಯಾದ ಕೆಂಚೇಗೌಡರು ಒಲ್ಲೆನೆನ್ನುತ್ತಾರೆ. ಏತನ್ಮಧ್ಯೆ ಹೊಂಬಾಳಮ್ಮ ಜಗದ ಋಣ ತೀರಿಸಿಕೊಂಡಿರುತ್ತಾಳೆ. ಈ ಆಘಾತ ಗೌಡರನ್ನು ಭೀಕರವಾದ ಪರಿಸ್ಥಿತಿಗೆ ತಳ್ಳುತ್ತದೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ತಾತ್ವರ ಪಡುತ್ತಾರೆ. ಆಗ ಅವರ ಸಹಾಯಕ್ಕೆ ಬರುವುದು ಅವರ ಇಂಗ್ಲಿಷ್ ಮಾತ್ರ. ಹಾಗಾಗಿ ಅವರು ಭದ್ರಾವತಿಯಂತಹ ಊರನ್ನು ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ತಾನೇ ಸಲಹಿ ಸಾಕಿದ ಹುಡುಗ ಪಂಡ್ರಿಯ ಮಾತುಗಳಿಂದ ಭೂಮಿಗೆ ಇಳಿದ ಅವರಿಗೆ, ತನ್ನ ಬೆನ್ನ ಹಿಂದೆ ಕರಾಳ ವಾಸ್ತವ ಲೋಕವೊಂದಿದೆ. ಅದು ಸಾವಿಗಿಂತ ಭೀಕರ ಮತ್ತು ನಿರ್ಧಯಿ. ಪ್ರತಿ ಮನುಷ್ಯ ಇಂಥದ್ದೊಂದು ಭೀಕರ ಅವಸ್ಥೆಯನ್ನು ಬೆನ್ನ ಹಿಂದೆ ಹೊತ್ತು ತಿರುಗುತ್ತಾನೆ. ಅದರ ಅರಿವಿದ್ದೂ ನಿರ್ಲಕ್ಷ್ಯದಿಂದ ನಡೆಯುವವ ಜಾಣನೆನ್ನುವ ಅರಿವಾಗುತ್ತದೆ. ಅವರು ಆರಿಸಿಕೊಂಡ ದಾರಿಯೇನು ಸುಗಮವಾಗಿರುವುದಿಲ್ಲ. ಬಹದ್ದೂರು ಷಾನ ಗಜಲುಗಳಲ್ಲಿಯ ಸತ್ಯವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ. ಕೊನೆಗೆ ಅಲ್ಲಿಯೂ ಅವರಿಗೆ ಸೋಲು ಎದುರಾಗುತ್ತದೆ.

ರೋಗಗ್ರಸ್ತನಾಗಿ ಅವರು ಮರಳಿ ಸಿ.ಎಂ.ಕೊಪ್ಪಲು ಹಳ್ಳಿಗೆ ಬರುತ್ತಾರೆ. ಅಲ್ಲಿ ಒಂದು ರೀತಿಯ ಮತಿಭ್ರಾಂತಿಗೆ ಒಳಗಾಗಿ ಹೇಗೇಗೋ ನಡೆದುಕೊಳ್ಳುತ್ತಾರೆ. ಇದನ್ನು ಕಂಡ ಮಗ ಸ್ವತಂತ್ರ ತನ್ನ ಮರ್ಯಾದೆಯ ಪ್ರಶ್ನೆಯೆಂದು ತಿಳಿದು ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾನೆ. ಅಲ್ಲಿಂದ ಹಿಂತಿರುಗಿದ ಅವರು ಏನೂ ಅಲ್ಲದ, ಯಾರಿಗೂ ಬೇಡವಾದ ಒಂದು ಮೌನಿಯಾಗಿ ಮಾತ್ರ ಪರಿಚಯವಾಗುತ್ತಾರೆ. ಹೀಗೆ ಕಾದಂಬರಿ ಅಂತ್ಯವಾಗುತ್ತದೆ. ಮೊದಲೆ ಹೇಳಿದಂತೆ ಮೇಷ್ಟ್ರ ಕಾದಂಬರಿ ನಮ್ಮನ್ನು ಕಾಡುತ್ತಲೆ ಇರುತ್ತದೆ. ಕೆಂಚೇಗೌಡರ ಪಾತ್ರವಂತು ಆದರ್ಶಪ್ರಾಯವಾಗಿ ಮೂಡಿಬಂದಿದೆಯೆಂದರೆ ಅಚರಿಯೇನಿಲ್ಲ.

ಈ ಕೃತಿಯನ್ನು ‘ಅಭಿವ್ಯಕ್ತಿ’ ಒಂದು ಸಾಂಸ್ಕೃತಿಕ ವೇದಿಕೆ, ನಂ. 166, 28ನೇ ಅಡ್ಡ ರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070, ಫೋನ್ : 080-26715235 ಇವರು ಪ್ರಕಟಿಸಿದ್ದಾರೆ.

Read more!

Friday, November 26, 2010

ಉತ್ಕೃಷ್ಟ ರಚನೆಯ ‘ಜಾಲ’


ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅವ್ಯವಸ್ಥೆಯ ವಿಡಂಬನಾತ್ಮಕ ರಚನೆಯ ‘ಜಾಲ’ ಕಾದಂಬರಿ ಇಂಗ್ಲಿಷ್ ಕಾದಂಬರಿಯನ್ನು ಓದುತ್ತಿರುವಂತೆ ಭಾಸವಾದರೆ ಸುಳ್ಳಲ್ಲ. ಈ ರೀತಿಯ ರಚನೆ ಒಬ್ಬ ಸಾಮಾನ್ಯ ಲೇಖಕನಿಗೆ ಅಸಾಧ್ಯ. ಎಷ್ಟೊಂದು ವಿಷಯಗಳನ್ನು ಸೂಕ್ಷ್ಮವಾಗಿ, ಬಹಳ ನಾಜೂಕಾಗಿ, ವಿಡಂಬನೆಯ ಶೈಲಿಯಲ್ಲಿ ಕಾದಂಬರಿಕಾರ ನಾರಾಯಣ ಮಾಳ್ಕೋಡ್ ಕಟ್ಟಿಕೊಡುತ್ತಾರೆ. ಕಾದಂಬರಿಯಲ್ಲಿ ಬರುವ ರಾಜಕೀಯ ಅವ್ಯವಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಕಾಣಸಿಗದಿದ್ದರೂ ಅದು ಎಲ್ಲೋ ಒಂದು ಕಡೆ ನಡೆಯುತ್ತಿರುವಂತೆ ನಮಗೆ ಅನಿಸುತ್ತದೆ.

ಇಲ್ಲಿಯ ಪಾತ್ರಗಳೆಲ್ಲವೂ ಮೆಚ್ಯೂರ್ಡ್ ಪಾತ್ರಗಳು. ಏನನ್ನೋ ಹೇಳುತ್ತಾ ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಬಹಳ ಚೆನ್ನಾಗಿ ಅರಗಿಸಿಕೊಂಡಿರುವಂತೆ ಮಾತುಗಳ ಮೂಲಕ ವಸ್ತು ಸ್ಥಿತಿಯನ್ನು ಬಿಚ್ಚಿಡುತ್ತಾ ಹೋಗುತ್ತವೆ ಇಲ್ಲಿಯ ಪಾತ್ರಗಳೆಲ್ಲ. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲ; ಅವಳು ರಾಜಕೀಯದ ಏರು ಪೇರುಗಳನ್ನು ಅರಿತವಳು ಅನ್ನುವಂತೆ ಇಲ್ಲಿಯ ಸಣ್ಣ ಪುಟ್ಟ ಪಾತ್ರಗಳು ಕೂಡ ಬಹಳ ಸೊಗಸಾಗಿ ಮಾತನಾಡುತ್ತವೆ. ಒಂದಕ್ಕಿಂತ ಒಂದು ಪಾತ್ರಗಳ ಮಾತುಗಳು ಅಸಂಗತವೆನಿಸಿದರೂ ಅವುಗಳ ಒಳಗಿರುವ ನಿಗೂಢತೆ ಬಹಳ ಸುಲಭವಾಗಿ ಓದುಗನನ್ನು ತಲುಪುತ್ತದೆ. ಈ ರೀತಿಯ ಅಸಂಗತ ಮಾತುಗಳನ್ನೇ ಪೋಣಿಸಿ ಸಾಮಾಜಿಕ, ರಾಜಕೀಯದ ಅಭದ್ರತೆಯನ್ನು ಜಾಲಾಡಿಸುವ ರಚನೆ ಇಷ್ಟವಾಗುತ್ತದೆ. ಇಲ್ಲಿ ಒಂದು ಸನ್ನಿವೇಶಕ್ಕೆ ಇನ್ನೊಂದನ್ನು ಬೆಸೆಯುವ ಮಾತಿನ ಮಂಟಪ ಕಾದಂಬರಿಕಾರನ ಕೈಯಲ್ಲಿ ಲೀಲಾಜಾಲವಾಗಿ ಮೂಡಿಬಂದಿದೆ."

ವ್ಯಕ್ತಿ ಮತ್ತು ಪರಿಸ್ಥಿತಿಯ ಸಂಬಂಧಗಳು, ರಾಜಕೀಯ ಬಿಕ್ಕಟ್ಟುಗಳು, ವಿದ್ರೋಹಗಳು, ವಿಕಲ್ಪಗಳು ಇವೆಲ್ಲವೂ ಈ ಕಾದಂಬರಿಯಲ್ಲಿ ಆಟವಾಡುತ್ತಾ ಪಾತ್ರಗಳೆಲ್ಲವೂ ಒಂದನ್ನು ಇನ್ನೊಂದು ಮುಷ್ಟಿಯಲ್ಲಿ ಹಿಡಿದುಕೊಂಡಿರುವಂತೆ ಭಾಸವಾದರೂ ಇಲ್ಲಿ ವಾಸ್ತವದ ಕರಿ ನೆರಳು ಕಾಣಿಸುತ್ತದೆ. ದಿನಬೆಳಗಾದರೆ ನಡೆಯುವ ವಿದ್ಯಮಾನಗಳು ಇಲ್ಲಿ ಈಗಲೆ ನಡೆಯುತ್ತಿರುವಂತೆ ಬಿಂಬಿತವಾಗಿವೆ.

ಮಾದರಿ ಪಟ್ಟಣವಾಗಿ ರೂಪುಗೊಂಡಿರುವ ಹೊಸಪಟ್ಟಣದ ರಚನೆ ಮತ್ತು ಕಲ್ಪನೆಯೆ ವಿಚಿತ್ರವಾದ್ದುದು. ಒಂದು ವೃತ್ತಾಕಾರದಲ್ಲಿರುವ ಪಟ್ಟಣದಲ್ಲಿ ಅರವಿಂದ ಹೆಗಡೆಯೆನ್ನುವ ಪೂಜಾರಿ, ದಾಸಪ್ಪನೆನ್ನುವ ಏಕಸಾಮ್ಯವಿಚಾರಧಾರೆಯ ರಾಜಕೀಯ ವ್ಯಕ್ತಿ; ಹೊರನೋಟಕ್ಕೆ ಇಬ್ಬರೂ ಬೇರೆಬೇರೆಯದಾಗಿ ಕಂಡರೂ ಇಬ್ಬರಲ್ಲು ಒಂದು ರೀತಿಯ ಸಾಮ್ಯತೆ ಇದೆ. ಜನರನ್ನ ತನ್ನತ್ತ ಒಲಿಸಿಕೊಳ್ಳುವ ಸಾಫ್ಟ್ ಕಾರ್ನರ್ ಅರವಿಂದನದ್ದಾದರೆ, ಜನರನ್ನು ತನ್ನ ಶಕ್ತಿ, ವಾಕ್ಚಾತುರ್ಯ, ಬೆದರಿಕೆಯ ಮೂಲಕ ಆಕ್ರಮಿಸಿಕೊಳ್ಳುವ ವ್ಯಕ್ತಿ ದಾಸಪ್ಪ. ಹಿಟ್ಲರಿಜಂ ಕೂಡ ಇಲ್ಲಿ ಎದ್ದು ಕಾಣುತ್ತದೆ.

ಕಥೆ ಆರಂಭವಾಗುವುದು ಶಹನಾಯಿ ವಾದಕ ವೆಂಕಪ್ಪ ಭಂಡಾರಿಯ ಕೊಲೆಯಿಂದ. ಇಲ್ಲಿ ಕೊಲೆ ಮಾಡಿದವರು ಯಾರು? ಪಶುವಿನಷ್ಟು ಸಾಧುವಾದ ವೆಂಕಪ್ಪನನ್ನು ಯಾಕೆ ಕೊಲೆ ಮಾಡಿದರು? ಇವೆಲ್ಲಾ ಕ್ಷುಲ್ಲಕವಾಗಿ ಕೇವಲ ಆ ಕೊಲೆಯಿಂದ ಉದ್ಭವಿಸಿದ ಬಿಕ್ಕಟ್ಟುಗಳನ್ನು ಮಾತ್ರ ಜಾಲಾಡುತ್ತಾ ಸಾಗುತ್ತದೆ ಕಥೆ. ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುವ ರಚನೆಯಲ್ಲವಾದರೂ ಸಮಾಜದಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ತುಡಿತ ಓದುಗನನ್ನು ಬಿಟ್ಟುಕೊಡುವುದಿಲ್ಲ. ಇಲ್ಲಿಯ ಸಂಭಾಷಣೆಗಳೆಲ್ಲವೂ ಹಲವಾರು ವಿಷಯಗಳನ್ನು ಪ್ರಸ್ತುತಪಡಿಸುತ್ತವೆ.

ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಒಬ್ಬ ತಾಯಿಯ ಮಾತು ಹೇಗಿದೆಯೆಂದರೆ - ‘ಸದ್ಯದಲ್ಲೇ ಎದುರಾಗಲಿರುವ ಚುನಾವಣೆಯಲ್ಲಿ ನಾನು ಮತ ಚಲಾಯಿಸಬಹುದು ಎನಿಸುತ್ತದೆ’ ಈ ಮಾತುಗಳು ಇಲ್ಲಿ ರಾಜಕೀಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಆರೋಗ್ಯ ಸುಧಾರಿಸಿದೆ. ಎದ್ದು ಓಡಾಡಬಲ್ಲೆ ಅನ್ನುತ್ತಿದ್ದಳೆನೋ... ಇದು ಲೇಖಕನ ಪ್ರಬುದ್ಧತೆಯ ಲಕ್ಷಣವೂ ಹೌದು ಅನಿಸಿದರೆ ತಪ್ಪಲ್ಲ.

ಸುಬ್ಬಯ್ಯನ ಕ್ಷೌರದ ಅಂಗಡಿ ರಾಜಕೀಯದ ವಿಶ್ಲೇಷಣೆಯ ಅಡ್ಡೆಯಿದ್ದಂತೆ. ಅಲ್ಲಿ ನಡೆಯುವ ಮಾತುಕತೆಗಳು ಇನ್ನೆಲ್ಲಿಯೂ ಕೇಳಿಸಲಾರವು. ಇವತ್ತಿನ ರಾಜಕೀಯದ ಬಿಕ್ಕಟ್ಟನ್ನು ಪ್ರಸ್ತುತಪಡಿಸುವ, ‘ಆಡಳಿತ ಬದಲಾಗುತ್ತದೆ, ಸರ್ಕಾರ ಬದಲಾಗುತ್ತದೆ. ಆದರೆ ಜನರ ಸ್ಥಿತಿ ಮಾತ್ರ ಒಂದೇ ರೀತಿಯಲ್ಲಿರುತ್ತದೆ’ ಅನ್ನುವ ಮಾತು ಅಕ್ಷರಶ: ಸತ್ಯವಾದದ್ದು. ಕಾದಂಬರಿಯ ಉದ್ದಕ್ಕೂ ಇಂತಹ ವಿವೇಚನೆಯುಳ್ಳ ಮಾತುಗಳು ಬರುತ್ತಿರುತ್ತವೆ.

ಇಲ್ಲಿ ಬರುವ ಸ್ತ್ರೀ ಪಾತ್ರಗಳು ಕೂಡ ಬಹಳ ದೃಢವಾದ ಹಂಬಲವುಳ್ಳ ಪಾತ್ರಗಳು. ಗಾಯತ್ರಿ, ಸೀತಾ, ಮಾಧವಿ, ಭಾಗ್ಯ, ಸರಸ್ವತಿ, ಮೀನಾ, ಮಾಲಿನಿ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾದರೂ ಅದರಲ್ಲಿಯೆ ಕೊರಗುವುದಿಲ್ಲ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವಂತಹವುಗಳು. ಈ ಪಾತ್ರಗಳನ್ನು ಕೀಳಾಗಿ ಬಿಂಬಿಸಲು ಗೋಡೆಗೆ ಅಂಟುವ ಪೋಸ್ಟರ್ಗಳ ಬಗ್ಗೆ ಹೆದರಿಕೆಯಿದ್ದರೂ ಅದನ್ನು ವಿಚಾರಿಸುವಷ್ಟು ಮತ್ತು ಅಪವಾದವನ್ನು ಹತ್ತಿರಕ್ಕೆ ಎಳೆದುಕೊಳ್ಳುವಲ್ಲಿ ತಡೆಯುವ ಗಟ್ಟಿಗಿತ್ತಿಯರು ಇಲ್ಲಿಯ ಸ್ತ್ರೀಯರು.

ಕೆಲವೊಂದು ಕಟು ವಾಸ್ತವಿಕ ಸತ್ಯಗಳು ಕೂಡ ಇಲ್ಲಿ ಅನಾವರಣಗೊಂಡಿದೆ. ಉದಾಹರಣೆಗೆ ‘ಎಲ್ಲರೂ ತಮಗೆ ತಾವೇ ದೊಡ್ಡವರೆಂದುಕೊಂಡು ಬಿಡುತ್ತಾರೆ. ಒಂದು ಕೆಲಸ ಹೋದರೆ ಮತ್ತೊಂದು ಕೆಲಸ ಸಿಗುತ್ತದೆ ಎಂಬ ಧೋರಣೆ ಅವರದು. ಆದರೆ ಈ ಧೋರಣೆ ಇರುವವರು ಎಲ್ಲಿಯೂ ನೆಲೆ ಕಂಡುಕೊಳ್ಳುವುದಿಲ್ಲ. ಕೋತಿಗಳಂತೆ ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಜಿಗಿಯುತ್ತಲೇ ಇರುತ್ತಾರೆ. ಜೀವನದಲ್ಲಿ ಸೆಟಲ್ ಎಂಬ ಪ್ರಶ್ನೆಯೇ ಬರುವುದಿಲ್ಲ’ ಇದು ವಾಸ್ತವಿಕವಾಗಿ ಒಪ್ಪಿಕೊಳ್ಳಬೇಕಾದ ಮಾತು. ಈ ಮಾತುಗಳನ್ನು ಓದುವಾಗ ಶ್ರೀಕೃಷ್ಣ ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರ’ ನೆನಪಾಗದಿರದು.

ರಾಜಕಾರಣಿ, ಪೂಜಾರಿ, ಡಾಕ್ಟರ್, ನ್ಯಾಯಮೂರ್ತಿ ಹೀಗೆ ಒಂದೊಂದು ರೀತಿಯ ಪಾತ್ರಗಳ ಮೂಲಕ ವಾಸ್ತವತೆಯ ಅವಲಕ್ಷಣಗಳನ್ನು ಕಟುವಾಗಿ ಟೀಕಿಸುವಂತಹ ಸ್ಥಿತಿ ಇಲ್ಲಿ ಚಿತ್ರಿತವಾಗಿದೆ. ಇಂತಹ ಗಂಭೀರ ಚಿಂತನೆಗೆ ಒಳಪಡಿಸುವ ಕಾದಂಬರಿಯನ್ನು ಓದಲೇಬೇಕು. ಈ ಕೃತಿಯನ್ನು ಸುಮುಖ ಪ್ರಕಾಶನ, ಮಾಗಡಿ ರಸ್ತೆ, ಟೋಲ್ಗೇಟ್, ವಿದ್ಯಾರಣ್ಯನಗರ, ಬೆಂಗಳೂರು - 23, ದೂರವಾಣಿ ಸಂಖ್ಯೆ ೦೮೦- 23118585 ಇವರು ಪ್ರಕಟಿಸಿದ್ದಾರೆ.

Read more!

Tuesday, November 16, 2010

ಬಾಳಾಸಾಹೇಬ ಲೋಕಾಪುರ ಅವರ ಕಥೆ ‘ಕಂಗಳು ತುಂಬಿದ ಬಳಿಕ’


ಕೃಷ್ಣೆ ಒಡಲ ತುಂಬ ಸಂಕಲನದ ಇನ್ನೊಂದು ಕಥೆ ‘ಕಂಗಳು ತುಂಬಿದ ಬಳಿಕ’. ಡಾ. ಬಾಳಾಸಾಹೇಬ ಲೋಕಾಪುರ ಅವರಿಂದ ಮೂಡಿಬಂದ ಮನೋಜ್ಞವಾದ ಕಥೆ ಇದು. ಪಕ್ವವಾದ ಎರಡು ಮನಸುಗಳ ಪರಿವರ್ತನಾ ಭಾವವು ಗಾಢವಾದ ಮೌನದೊಳಗೆ ತಬ್ಬಿಕೊಳ್ಳುವ ಸ್ಥಿತಿಯಾಗಿ ಏರ್ಪಡುವುದು ಇಲ್ಲಿಯ ವಿಶೇಷತೆ.

ಈ ಕಥೆಯ ಕೆ.ಟಿ.ಕೆ. ಸ್ವಪ್ರಯತ್ನದಿಂದ ಉನ್ನತ ಹುದ್ದೆಯನ್ನು ಗಳಿಸಿಕೊಂಡು ಎಂದೋ ತನ್ನ ಬಾಲ್ಯದಲ್ಲಿ ಬೆರಗಿನ ಭಾವನೆಗಳಿಗೆ ಲಗ್ಗೆಯಿಟ್ಟ ಬಾಲ್ಯಸಖಿಯೊಬ್ಬಳ ಅನಿರೀಕ್ಷಿತ ಮುಖಾಮುಖಿಯಲ್ಲಿ ವಿಷಾದದ ಸ್ಥಾಯಿಗಿಳಿಯುವ ಕಥೆಯಿದು. ಅನುಕಂಪ, ನಿರೀಕ್ಷೆ, ಆಸೆಗಳ ನಡುವೆ ಸಾಧಾರಣವಾಗಿ ಹುದುಗಿಹೋದ ಬದುಕನ್ನು ಕಂಡು ಒಳಗೊಳಗೆ ಕೊರಗುವ, ನಿಜ ಬದುಕಿನ ಸ್ಥಿತಿ ಮತ್ತು ಲಯವನ್ನು ಆವರಿಸಿಕೊಳ್ಳುತ್ತಾ ಪಟ್ಟಣದಲ್ಲಿ ಕಳೆದು ಹೋಗುವ ಅಸ್ತಿತ್ವವನ್ನು ವಿಮರ್ಶಿಸುತ್ತಾ ಹಾಗೂ ಕಳೆದುಕೊಂಡಿರುವುದನ್ನು ಜ್ಞಾಪಿಸಿಕೊಳ್ಳುವ ಮನೋಸ್ಥಿತಿ ಅಸಿಸ್ಟೆಂಟ್ ಕಮಿಷನರ್ ಕೆ.ಟಿ.ಕೆ.ಯದ್ದು."

ವೇಶ್ಯೆಯೊಬ್ಬಳನ್ನು ಲಾಕಪ್ಪಿಗೆ ಹಾಕಿ, ಆಕೆ ತನಗೆ ಎ.ಸಿ ಸಾಹೇಬ್ರು ಪರಿಚಯವೆಂದು ಹೇಳಿಕೊಂಡಾಗ ಬೆರಗಾಗುವ ಪೊಲೀಸ್ ವೃಂದ ಕೆ.ಟಿ.ಕೆ.ಗೆ ವಿಷಯ ತಿಳಿಸುವಲ್ಲಿಂದ ಕಥೆ ಆರಂಭವಾಗುತ್ತದೆ. ಅವಳ ಹೆಸರೇನೆಂದು ಗುಮಾನಿಯಿಂದ ಕೇಳುವ ಕಮಿಷನರ್ಗೆ, “ಅವರಿಗೆ ಹೆಸರ ಎಲ್ಲೀದು ಸರ್- ಎಷ್ಟೋ ಸಲ ನಮಗ ಸಿಗತಾರೊ ಅಷ್ಟ ಹೆಸರ ಹೇಳತಾರ” ಎಂದು ಹೇಳುವ ಪೊಲೀಸ್ನ ಮಾತುಗಳು ಸತ್ಯವಾದರೂ, ಅಲ್ಲಿ ಕುಹಕವಿದೆ.

ಅವಳ ಹೆಸರು ತಿಳಿದುಕೊಳ್ಳುವಾಗ ಸಿಟ್ಟಿನ ಬೀಜಗಳು ಒಳಗೇ ಒಡೆದು ಅನಂತ ಮೂಲಗಳಿಂದ ಸಾಹೇಬರನ್ನು ಆಕ್ರಮಿಸಿಕೊಳ್ಳುತ್ತವೆ. ಅವಳ ಹೆಸರು ರೇಖಾ ಎಂದು ಬರೆಸಿದರೂ; ರೇಣುಕಾ ಇರಬೇಕೆನ್ನುವ ಮಾತಿನಲ್ಲಿ ಬಾಲ್ಯದ ನೆನಪುಗಳತ್ತಾ ಕೊಂಡೊಯ್ದು ಒಂದು ರೀತಿಯ ಪುಳಕ ಅವರನ್ನು ಆವರಿಸುತ್ತದೆ.

ಬಾಲ್ಯದಲ್ಲಿ ಅಜ್ಜಿ ಒಂದು ಕಥೆ ಹೇಳು ಎಂದು ಪೀಡಿಸಿ ಕಥೆ ಕೇಳುತ್ತಲೇ ನಿದ್ದೆ ಹೋಗುವ ಮಕ್ಕಳು ಜಗತ್ತಿನಲ್ಲಿವೆ ಎಂಬುದು ಕೆ.ಟಿ.ಕೆ.ಗೆ ಬೆರಗಿನ ಸಂಗತಿ. ನಿದ್ದೆ ಯಾವಾಗ ಬರುತ್ತಿತ್ತೆನ್ನುವುದೇ ಅವನಿಗೆ ತಿಳಿಯುತ್ತಿರಲಿಲ್ಲ. ನಿದ್ದೆ ಬಂದದ್ದೆಂದರೆ ಆತ ಎದ್ದಾಗಿನ ಸ್ಥಿತಿ. ಬಡತನದಲ್ಲಿಯೆ ಬೆಳೆದ ಅವನಿಗೆ ಒಡೆದರೆ ನೂರು ಸುಟ್ಟರೆ ಸಾವಿರವಾಗುವ ತಗಣೆಗಳು ಕಚ್ಚಿದರೂ ತಿಳಿಯುವುದಿಲ್ಲ. ಅಂತಹ ಕೆ.ಟಿ,ಕೆ.ಯನ್ನು ಪ್ರೀತಿಯಿಂದ ‘ಕಲ್ಲಪ್ಪಾ’ ಎಂದು ಕರೆಯುವಷ್ಟು ಆತ್ಮೀಯಳಾಗಿರುವವಳು ಆತನ ಬಾಲ್ಯದ ಗೆಳತಿ ರೇಣುಕಾ.

ಜೋರಾಗಿ ಮಾತಾಡಿದರೆ ಅಸಂಸ್ಕೃತಿಯೆಂದು ಬದುಕುವ ಈಗಿನ ದಿನಗಳಲ್ಲಿ ಬಾಲ್ಯದ ವಿಚಿತ್ರ ನೆನಪುಗಳು ಅವನನ್ನು ಪುಳಕಗೊಳಿಸುತ್ತಿದ್ದವು. ಒಂದು ದಿನ ಕಣ್ಣಾಮುಚ್ಚಾಲೆ ಆಡುತ್ತಾ ಹೊಟ್ಟಿನ ಬಣವಿಯಲ್ಲಿ ಅಡಗಿ ಕುಳಿತಾಗ ರೇಣುಕಾ ಎಂಬ ಹರಾಮಿ ಹುಡುಗಿ ಅವನ ಕೈಯನ್ನು ತೆಗೆದುಕೊಂಡು ತನ್ನ ಲಂಗದಲ್ಲಿ ತೂರಿಸಿಕೊಂಡಿದ್ದಳು. ಕೈಗೆ ಹತ್ತಿದ ತಂಬಲಕ್ಕೆ ಹೇಸಿದವನಿಗೆ... ಹೀಗೆ ಅವಳ ಚಾರಿತ್ರ್ಯವನ್ನು ನೆನಪಿಸುತ್ತಾ ಅವಳು ಸೂಳೆಯಾದಳೆನ್ನುವ ನೋವು ಅವನನ್ನು ನೋಯಿಸುತ್ತಾ, ಪರಿಸ್ಥಿತಿಯನ್ನು ಕೈ ಹಿಡಿದ ಶ್ರೀಮಂತೆ ಗೀತಾಳ ಜೊತೆಗೆ ತುಲನೆ ಮಾಡಿಕೊಳ್ಳುತ್ತದೆ.

ಮಂತ್ರಿಗಳ ಮನೆತನದ ಹುಡುಗಿ ಗೀತಾ ಮದುವೆಯಾಗಿಯೂ ಗಂಡನ ಮನೆಗೆ ಬಾರದೆ ಅವನ ಅವ್ವ, ಅಪ್ಪ, ಅಕ್ಕರನ್ನು ದಿಕ್ಕರಿಸುವ ಒಬ್ಬ ಹೆಂಡತಿಯಾಗಿ ಮಾತ್ರ ದಕ್ಕುತ್ತಾಳೆ. ಅವಳಿಗೆ ಸ್ನಿಗ್ಧ ಸೌಂದರ್ಯವಿತ್ತು, ಈಗಲೂ ಇದೆ. ಆ ಸೌಂದರ್ಯ ಮೈ, ಮುಖಗಳಲ್ಲಿರುವುದು ಕೇವಲ ಭ್ರಮೆ. ಮೈಮಾಟದಲ್ಲಿ ಸುಖದ ಕೊಬ್ಬು ಸೇರಿ ಮತ್ತಷ್ಟು ಆಕರ್ಷಣೆ ಅವಳಿಗೆ. ಯಾಕೆ ಅವಳನ್ನು ಕಂಡರೆ ಧುಮುಧುಮಿಕೆಯೆನ್ನುವುದು ಕೆ.ಟಿ.ಕೆ.ಗೆ ಅರ್ಥವಾಗುವುದಿಲ್ಲ.

ಹೆಂಡತಿಯ ಬಗ್ಗೆ ತಾತ್ಸಾರ ಹುಟ್ಟುತ್ತಾ, ಚಾರ್ಜ್ಶೀಟ್ ಹಾಕದೆ ರೇಣುಕಾಳನ್ನು ಬಿಡುಗಡೆಗೊಳಿಸಿ ತನ್ನ ಅವಳ ನಡುವೆ ಒಂದಿಷ್ಟು ಎಲ್ಲೋ ಇದ್ದಿರಬಹುದಾದ ಮನದ ಎಳೆಗಳನ್ನು ಬಿಚ್ಚಿ ಇಡಬಲ್ಲಳು ಎಂಬ ಭ್ರಮೆಗೆ ಅವಳನ್ನು ತನ್ನ ಮನೆಗೆ ಕರೆತರುತ್ತಾನೆ. ಅವಳು ಬಂಗ್ಲೆಯ ಪ್ರತೀ ಇಂಚು ನೆಲವನ್ನು ಅನುಭವಿಸುತ್ತಾ ಹಠಮಾರಿಯಂತೆ, ಅಮೂಲಾಗ್ರವಾಗಿ ನೋಡುತ್ತಾ ಅವನ ಮಲಗುವ ಕೋಣೆಯಲ್ಲಿ ಬೆತ್ತಲಾಗುತ್ತಾ ಆಹ್ವಾನಿಸುವಾಗ ಕೆ.ಟಿ.ಕೆ ವಿಚಲಿತನಾಗುತ್ತಾನೆ. ಆಗ ಅವನಲ್ಲಿ ಪ್ರಚೋದನೆಯಿರದೆ ಅವಳ ದೇಹವನ್ನು ಕಂಡು ಕಣ್ಣು ತುಂಬಿ, ವಿರಾಗದ ಭಾವ ಹುಟ್ಟಿ, ಬಾಲ್ಯದ ನವಿರು ನೆನಪುಗಳನ್ನೆಲ್ಲಾ ಬೆತ್ತಲೆಯ ವಿರೂಪ ಸ್ಥಿತಿ ಅಳಿಸಿಹಾಕಿ, ಅವಳನ್ನು ನಿರಾಕರಿಸುತ್ತಾ ಮೌನಿಯಾಗುತ್ತಾನೆ.

ಆ ನಿರಾಕರೆಣೆಗೆ ಅವಳಲ್ಲಿದ್ದ ಅನುರಮ್ಯ ಭಾವನೆಗಳಿಗೆ ಜ್ಞಾನೋದಯದ ಬೆಳಕು ಬಿದ್ದು ಅವಳು ಮೈ ಮುಚ್ಚಿಕೊಳ್ಳುತ್ತಾಳೆ. ಶಿಸ್ತಿನ ಬಗ್ಗೆ ಸಿಟ್ಟುಗೊಂಡವನ ಹಾಗೆ ಅವಳಿಂದ ಮನೆಯೆಲ್ಲಾ ಅಸ್ತವ್ಯಸ್ತಗೊಳ್ಳುತ್ತಿರುವ ಪರಿಯನ್ನು ಆನಂದಿಸುತ್ತಾನೆ. ಅವಳೊಂದು ಅಸಂಗತ ನಾಟಕದ ಪಾತ್ರಧಾರಿಯಂತೆ ಕುಳಿತು ಮಾತನಾಡುವಾಗ ಅರಗಿಸಿಕೊಳ್ಳಲಾರದೆ ಮನಸ್ಸ್ಸು ಮುದುಡಿಕೊಳ್ಳುತ್ತದೆ. ಅವಳು ತಿರಸ್ಕೃತಳಾದರೂ ಅವನನ್ನು ಮುತ್ತಿಟ್ಟು ಹೊರಟಾಗ ಅವನಿಗೆ ಅಸಹ್ಯವೆನಿಸಿ ಎಲ್ಲವನ್ನೂ ಕಾರಿಕೊಳ್ಳುತ್ತಾನೆ. ಆದರೂ ಬಾಲ್ಯದ ಅವಳ ಒಡಾನಾಟದಲ್ಲಿದ್ದವನು ಅವಳು ಎಲ್ಲೋ ಯಾರದೋ ಒಂದು ಕತ್ತಲು ಕೋಣೆಯ ಚಾಪೆ ಮೇಲೆ... ನೆನೆಯುತ್ತಲೆ ಅಳು ಬರುತ್ತದೆ. ಅವಳ ಆ ಸ್ಥಿತಿಯನ್ನು ಕಂಡು ಸಹಾಯಕನಾಗುವ ಅವನಲ್ಲಿಯ ವೇದನೆಗೆ ಕಂಗಳು ತುಂಬಿ ಬರುತ್ತವೆ. ಅಷ್ಟರಲ್ಲಿಯೆ ಹಿಂದಿರುಗಿ ಬರುವ ಅವನ ಮಡದಿ ಗೀತಾ ಕುಶಲವನ್ನು ವಿಚಾರಿಸುವಾಗ, ‘ತನ್ನ ಮನಸ್ಸು ಒಂದು ಹುಸಿ ನಂಬಿಕೆಯಲ್ಲಿ ಲೀನವಾಯಿತೆ?’ ಎನ್ನುವ ಗೊಂದಲಕ್ಕೆ ಬೀಳುತ್ತಾನೆ.

ಹೀಗೆ ಬಾಲ್ಯದ ನೆನಪುಗಳಲ್ಲಿ ಕಳೆದು ಹೋಗುವ ಸ್ಥಿತಿಯನ್ನು ನೆನಪಿಸುತ್ತಾ ವಾಸ್ತವದೊಂದಿಗೆ ಹೋಲಿಸುತ್ತಾ ಕಥೆ ಭ್ರಮಾಲೋಕಕ್ಕೆ ಕರೆದೊಯ್ಯುತ್ತದೆ.

ಚಿತ್ರ ಕೃಪೆ: ಎಸ್.ವಿ.ಹೂಗಾರ್

Read more!

Thursday, November 11, 2010

ಶಿವರಾಮ ಕಾರಂತರ ‘ಬೆಟ್ಟದ ಜೀವ’


‘ಬೆಟ್ಟದ ಜೀವ’ ಕಾದಂಬರಿ ಮೇಲ್ನೋಟಕ್ಕೆ ವ್ಯಕ್ತಿ ಚಿತ್ರಣದಂತೆ ಕಂಡರೂ, ಇಲ್ಲಿ ಶ್ರಮಜೀವಿಯೊಬ್ಬನ ಬದುಕು ಮತ್ತು ಬದುಕಿನಲ್ಲಿ ತಮ್ಮ ಕರುಳ ಬಳ್ಳಿಗಳನ್ನು ಕಳೆದುಕೊಂಡಿರುವ ಜೀವಿಗಳ ಸೂಕ್ಷ್ಮ ಸಂವೇದನೆಯಿದೆ. ಆ ಸಂವೇದನೆಯಲ್ಲೂ ಬತ್ತದ ಉತ್ಸಾಹದ ಜೊತೆಗೆ ಪರೋಪಕಾರದ ಉದಾತ್ತ ಗುಣವನ್ನು ಬೆಳೆಸಿಕೊಂಡು ಬದುಕುವ ವ್ಯಕ್ತಿಯ ಬದುಕಿನ ಸ್ತರಗಳನ್ನು ಈ ಕಾದಂಬರಿಯು ಚಿತ್ರಿಸುತ್ತದೆ. ಏಕವ್ಯಕ್ತಿ ಕೇಂದ್ರಿಕೃತ ಮತ್ತು ಒಂದೇ ಕೋನದಲ್ಲಿ ಕಥೆ ಸಾಗುತ್ತಾದರು, ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾದ ಮಗ ಮನೆಯಿಂದ ದೂರವಿದ್ದು ಮತ್ತೆ ಹಿಂತಿರುಗುವನೊ, ಇಲ್ಲವೊ? ಅನ್ನುವ ಕುತೂಹಲ ಹುಟ್ಟಿಸುತ್ತಾ ಮುಂದುವರಿಯುವುದು ಕೂಡ ಈ ಕಾದಂಬರಿಯ ಕೇಂದ್ರವಾಗಿದೆ. ಗೋಪಾಲಯ್ಯ, ಶಂಕರಿ, ಶಿವರಾಮ, ದೇರಣ್ಣಗೌಡ, ನಾರಾಯಣ, ಲಕ್ಷ್ಮೀ, ಬಟ್ಯಗಳಂತಹ ಕೆಲವೇ ಪಾತ್ರಗಳ ಮೂಲಕ ನೇರಮಾತುಗಳಿಂದ ಅರ್ಥಪೂರ್ಣವಾದ ಜೀವನಾನುಭವಳನ್ನು ಮಂಡಿಸುವುದು ಈ ಕಾದಂಬರಿಯ ಪ್ರಮುಖ ಲಕ್ಷಣ."

ಕಥೆಯ ಮುಖ್ಯವಾಹಿನಿ ಬದುಕಿದ್ದೂ ಹೆತ್ತವರಿಂದ ದೂರವಿರುವ ಮಗ ಶಹರಿನ ವ್ಯಾಮೋಹಕ್ಕೆ ಬಲಿಯಾಗಿ, ಮನೆಗೆ ಹಿಂದಿರುಗದೆ ಇರುವುದಾದರೂ, ಇಲ್ಲಿ ಬೆಟ್ಟದ ಮೇಲೆ ನಿರೀಕ್ಷೆಗಳನ್ನು ಹೊತ್ತು ನಿಂತ ಮಹಾತ್ವಕಾಂಕ್ಷಿಯೊಬ್ಬನ ಕಷ್ಟ ಕಾರ್ಪಣ್ಯಗಳನ್ನು, ತಲ್ಲಣಗಳನ್ನು ಗೋಪಾಲಯ್ಯನ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಮಗನನ್ನು ಕಳೆದುಕೊಳ್ಳುವ ಆತಂಕ, ಭಯವಿದ್ದರೂ ಅದನ್ನು ತೋರಿಸಿಕೊಳ್ಳದೆ ನಿರಂತರವಾಗಿ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಅವರು ಮಾತ್ರ ಕೈ ಹಿಡಿದ ಶಂಕರಿಯಲ್ಲಿ ಮಗನ ಬಗೆಗಿರುವ ಅದಮ್ಯ ಆಸೆಗಳನ್ನು ಉಪೇಕ್ಷಿಸಲಾರದೆ ಒಳಗೊಳಗೆ ಬೇಯುವುದು, ಬದುಕಿನ ಕೊನೆ ಘಳಿಗೆಯ ಹೆದರಿಕೆಯಿಂದಲ್ಲ. ಬದಲಾಗಿ ಅಲ್ಲಿ ಆತ್ಮೀಯತೆ, ಹೊಂದಾಣಿಕೆ, ಭರವಸೆಗಳ ಮಹಾಪೂರವೆ ತುಂಬಿದೆ; ಅವರನ್ನು ಸಾಂತ್ವನಿಸುವ ಹಿರಿಮೆಯಿದೆ.

‘ಲಕ್ಷ್ಮೀ ದನವನ್ನು ಹುಲಿ ಹಿಡಿದ ಹಾಗೆ ಯಾವುದೋ ಹೆಣ್ಣು ಹುಲಿ ಮಗನನ್ನು ಹಿಡಿದಿದೆ’ ಯೆನ್ನುವ ಉಪಮೆಯು ಮಗ ಶಂಭುವಿನಿಂದ ದೂರವಿದ್ದರೂ ಅವನ ಬಗ್ಗೆ ನಡೆದಿರಬಹುದಾದ್ದನ್ನು ಅವರು ಊಹಿಸುವಂತೆ ಮಾಡುತ್ತದೆ. ಅದಲ್ಲದೆ ನಾರಾಯಣನ ಮಡದಿ ಶಿವರಾಮನ ಜೊತೆಗೆ ಶಂಭು ಅವಳ ಜೊತೆಗೆ ನಡೆದುಕೊಂಡ ರೀತಿಯಿಂದ ಅವನು ನಿಗೂಢವಾಗಿರುವುದಕ್ಕೆ ಮತ್ತು ಅವನ ಗುಣಗಳನ್ನು ತಿಳಿಸುವುದಕ್ಕೆ ಸರಿಯಾದ ಸಾಕ್ಷಿಯಾಗಿ ನಿಲ್ಲುತ್ತದೆ. ಲಕ್ಷ್ಮೀಗೆ ಅವನು ದೂರವಿರುವುದಕ್ಕೆ ಒಂದು ರೀತಿಯಲ್ಲಿ ತಾನು ಕಾರಣಳೆನ್ನುವ ಅಗಾಧ ಅಪರಾದಿ ಭಾವನೆಯಿದ್ದರೂ ಅದು ಅವಳ ಪರಿಸ್ಥಿತಿಯನ್ನು ಮೀರಿರುವಂತದ್ದು.

ಬೆಟ್ಟದ ಮೇಲೆಯೆ ತನ್ನ ಹಿರಿಯರ ಆಸ್ತಿಯನ್ನು ಅನುಭೋಗಿಸುತ್ತಾ, ಕಾಟುಮೂಲೆ ಮತ್ತು ನೀರ್ಕಟ್ಟೆಯಂತಹ ಪ್ರಯೋಜನಕ್ಕೆ ಬಾರದ ಬಂಡೆ ಕಲ್ಲುಗಳ ನೀರಿನ ಸೆಲೆಯಿರುವ ಪ್ರದೇಶಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸುವ ಗೋಪಾಲಯ್ಯನ ಛಲಗಳೇನಿದ್ದರೂ ಕೊನೆಗೂ ಉಳಿಯುವುದು ಅತೃಪ್ತಿ ಮತ್ತು ಶಂಭುನಿಲ್ಲದ ನೋವು. ಶಂಕರಿಯವರು ಕೂಡ ಎಷ್ಟೇ ಲವಲವಿಕೆಯಿಂದಿದ್ದರೂ ಅವರನ್ನು ಹೈರಾಣಾಗಿಸುವುದು ತಮ್ಮ ತೊಡೆಗಳಲ್ಲಿಯೆ ತಲೆಯಿಟ್ಟು ಇಹಲೋಕ ತ್ಯಜಿಸಿದ ಮಗಳು ವಾಗ್ದೇವಿಯ ದಾರುಣ ಸಾವು ಮತ್ತು ಇದ್ದು ಇಲ್ಲದಂತೆ ದೂರವಿರುವ ಮಗ ಶಂಭುವಿನ ಚಿಂತೆ.

ಮಗನಿಲ್ಲದ ಚಿಂತೆ ಮನವನ್ನು ಸುಡುತ್ತಿದ್ದರೂ ಅನಾಥನಾಗಿರುವ ನಾರಾಯಣನನ್ನು ಕರೆಸಿ ಕಾಟುಮೂಲೆಯನ್ನು ಅವನ ಭೋಗ್ಯಕ್ಕೆ ಬಿಟ್ಟು ಸ್ವತ: ತನ್ನ ಮಗ ಶಂಭುವಿಗಿಂತಲೂ ಹೆಚ್ಚಾಗಿ ಅವನನ್ನು ನೋಡುವುದು ಗೋಪಾಲಯ್ಯನವರ ಉದಾರತೆಗೆ ಕನ್ನಡಿ ಹಿಡಿಯುತ್ತದೆ. ಮಗ ಬರಲಾರನೆನ್ನುವ ದೃಢವಾದ ನೋವು, ‘ನಮ್ಮ ಸರ್ವ ಭವಿಷ್ಯಕ್ಕೂ - ನಮ್ಮ ಹೆಣ ಹೊರಲಿಕ್ಕೆ ಆಗಲಿ, ಪಿಂಡ ಹಾಕಲಿಕ್ಕೇ ಆಗಲಿ - ನಾರಾಯಣನೇ ಗತಿ; ಅವನು ಅಷ್ಟನ್ನು ಮಾಡಿಯಾನು; ಮಾಡಿದರೆ ನಮ್ಮ ಪ್ರೇತಕ್ಕೂ ತೃಪ್ತಿಯಾದೀತು. ಬದಲು ವಂಶದ ಮಗನು ಬಂದು ಶ್ರಾದ್ಧ ಮಾಡಿದರೂ ನನಗೆ ಬೇಕಿಲ್ಲ” ಈ ಮಾತುಗಳ ಮೂಲಕ ಅವರಿಗೆ ಮಗನು ಬಂದೇ ಬರುವನೆನ್ನುವ ಭರವಸೆಯ ಜೊತೆಗೆ ನಾರಾಯಣನಲ್ಲಿಟ್ಟಿರುವ ಅವರ ಭರವಸೆಯನ್ನೂ ಎತ್ತಿ ಹಿಡಿಯುತ್ತದೆ.

ನಾರಾಯಣನಿಗಾದರೂ ಮುಂದೆ ಶಂಭುವು ಬಂದರೆ ತಾನು ಉಟ್ಟ ಬಟ್ಟೆಯಲ್ಲಿಯೇ ಇಲ್ಲಿಂದ ಹೊರಟು ಎಲ್ಲಿಗೆ ಹೋಗಬೇಕೆನ್ನುವ ದೂರದರ್ಶಿತ್ವ, ನಿರ್ಗತಿಕತೆ, ನಿರಾಶೆ ಆವರಿಸುವಾಗ ಅಲ್ಲೇ ಎಲ್ಲಾದರೂ ಜಾಗೆ ಖರೀದಿಸಿ ಕಾಟುಮೂಲೆಯನ್ನು ಬಿಟ್ಟು ಹೋಗುವ ನಿರ್ಧಾರವಿದ್ದರೂ ಮುಂದೆ ಗೋಪಾಲಯ್ಯನವರಿಂದಲೆ ಭರವಸೆಯ ಮಾತುಗಳು ಬಂದಾಗ ಅವನು ಮೌನಿ.

ಇಲ್ಲಿ ಬೆಟ್ಟವೆಂದರೆ ಬರೀಯ ಕಣ್ಣಿಗೆ ಹಬ್ಬ ತರುವ ಹಸಿರು ಬೆಟ್ಟವಲ್ಲ; ಬದಲಾಗಿ ಹುಲಿ, ಕಪ್ಪು ಚಿತರೆ, ಶಾರ್ದೂಲ, ಕಾಟಿ, ಆನೆ, ಪಾರಂಬೆಕ್ಕು(ಹಾರುವ ಅಳಿಲು)ಗಳಂತಹ ಅಪೂರ್ವದ ಪ್ರಾಣಿಗಳು ಮತ್ತು ಅವುಗಳ ಕ್ರೂರತನದ ಅನಾವರಣಗಳನ್ನು ತಿಳಿಸುತ್ತದೆ. ಅವುಗಳ ನಡುವೆಯೂ ಮನುಷ್ಯ ಬದುಕುವ ಮತ್ತು ಭದ್ರತೆಯನ್ನು ನಿರ್ಮಿಸುವ ಹೋರಾಟವನ್ನು ಕೂಡ ಇಲ್ಲಿ ದಾಖಲಿಸಲಾಗಿದೆ. ಅಲ್ಲದೆ ಸಸ್ಯಪ್ರಬೇಧಗಳು, ಮರಗಿಡಗಳಿರುವಲ್ಲಿ ಕಂಗು, ಮರಗೆಣಸುಗಳಂತಹ ವ್ಯವಹಾರಿಕ ಬೆಳೆಗಳನ್ನು ಬೆಳೆಸಿ ಬದುಕುವ ಛಲ ಮಾದರಿಯಾಗಿಯೂ ಕಾಣುತ್ತದೆ.

ಬೆಟ್ಟದ ಜೀವ ಕಾದಂಬರಿಯಲ್ಲಿ ಗಂಭೀರವಾದ ಸಮಸ್ಯೆಗಳು, ವಿಷಯಗಳು ಕಂಡರೂ ಪಾತ್ರಗಳು ಮಾತ್ರ ನಿರಾಳ. ಗೋಪಾಲಯ್ಯನಂತಹ ಪಾತ್ರವೇ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಾ ಬಟ್ಯ, ನಾರಾಯಣ, ದೇರಣ್ಣಗೌಡ ಪಾತ್ರಗಳ ಮೂಲಕ ಹಾಸ್ಯವನ್ನು ಮಾಡುತ್ತಾ ಲವಲವಿಕೆಯಿಂದ ಇರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಶಿವರಾಮನನ್ನು ತಹಶೀಲ್ದಾರನೆಂದು ಪರಿಚಯಿಸುವುದು. ಸ್ವತ: ನಾರಾಯಣನಿಗೂ ಶಿವರಾಮ ತಹಶೀಲ್ದಾರನೇನೋ ಅನ್ನುವ ಅನುಮಾನವಾಗುವವರೆಗೂ. ಇದಲ್ಲದೆ ಹುಲಿಗಾಗಿ ಕರ್ಫು ಇಡುವ ಸಂದರ್ಭದಲ್ಲಿ ಹುಲಿಯ ಆಕರ್ಷಣೆಗಾಗಿ ನಾಯಿಯನ್ನು ಒಳಗಿಟ್ಟು ಅದನ್ನು ವಿವರಿಸುವ ಸನ್ನಿವೇಶವಂತು ನಗೆಯುಕ್ಕಿಸುತ್ತದೆ.

ಬೆಟ್ಟದ ಮೇಲಿನ ಬದುಕು ಎಷ್ಟು ದುಸ್ತರವೆನ್ನುವುದನ್ನು, ‘ನಮ್ಮಲ್ಲಿ ಸಾಯುವುದು ಸುಲಭ; ಹೆಣಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಸ್ವಲ್ಪ ಕಷ್ಟ ನೋಡಿ’ ಈ ವಾಕ್ಯಗಳು ಸಾಬೀತುಪಡಿಸುತ್ತವೆ. ಆದರೂ ಇಂತಹ ಬದುಕನ್ನು ತ್ಯಜಿಸಿ, ಪೇಟೆಯಲ್ಲಿ ಬದುಕುವ ಉತ್ಸಾಹ ಗೋಪಾಲಯ್ಯನವರಿಗಾಗಲಿ, ಶಂಕರಿಯವರಿಗಾಗಲಿ ಇಲ್ಲ. ತಾವು ವಾಸಿಸುತ್ತಿರುವುದು ತಮ್ಮ ಹಿರಿಯರ ಆಸ್ತಿಯನ್ನು. ಅದನ್ನು ಉಪಭೋಗಿಸುತ್ತಾ ಬದುಕುವುದರಲ್ಲಿಯೂ ಖುಷಿಯನ್ನು ಕಂಡವರು ಅವರು. ಆ ಆಸ್ತಿಯನ್ನು ಮಾರಾಟ ಮಾಡದೆ ತಮ್ಮ ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸುವ ಆಶಯವೂ ಅವರಿಗಿದೆ.

ಇಲ್ಲಿ ಇನ್ನೊಂದು ಬಹು ಮುಖ್ಯ ಅಂಶವೆಂದರೆ ಗೋಪಾಲಯ್ಯ ಎಂತಹ ಧೀಮಂತ ವ್ಯಕ್ತಿಯೆಂದರೆ ಅವರಿಗೆ ಜಾತಿ, ವರ್ಗ, ಲಿಂಗಗಳ ಅಂತರವಿಲ್ಲದೆ ಬಟ್ಯ, ದೇರಣ್ಣನಂತಹವರ ಜೊತೆಗೆ ಒಳ್ಳೆಯ ಸಂಬಂಧವಿರಿಸಿಕೊಂಡವರು. ತಮ್ಮ ಸ್ವಾರ್ಥವಿದ್ದರೂ ಅವರಿಗೆ ಬದುಕಿಗೊಂದು ದಾರಿಯನ್ನೂ ಮಾಡಿಕೊಡುತ್ತಾರೆ. ಹಾಗಾಗಿ ಬಟ್ಯ, ನಾರಾಯಣ, ಲಕ್ಷ್ಮೀ, ದೇರಣ್ಣ ಗೌಡರಂತಹ ಪಾತ್ರಗಳಿಗೆ ಅಸಾಧಾರಣ ವ್ಯಕ್ತಿಯಾಗಿ ಮತ್ತು ದೇವರಂತಹ ಮನುಷ್ಯನಾಗಿ ಗೋಚರಿಸುತ್ತಾರೆ.

ಇಡೀ ಕಾದಂಬರಿ ಬೆಟ್ಟದಂತಹ ಪರಿಸರದಲ್ಲಿ ನಡೆಯುವುದಲ್ಲದೆ ಅಲ್ಲಿಯ ಕಷ್ಟಕರ ಬದುಕು, ನಗರದಿಂದ ದೂರವೇ ಉಳಿಯುವ ಅಭಾಗ್ಯ, ಕಾಡುಮೃಗಗಳನ್ನು ಎದುರಿಸುವ ಸಮಸ್ಯೆಯ ಜೊತೆಗೆ ಹೊಂದಾಣಿಕೆ ನಡೆಸುವುದು ಇವೆಲ್ಲಾ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿಕೊಂಡಂತೆ ಕಾಡುತ್ತದೆ. ದನವನ್ನು ಹಿಡಿದು ತಿನ್ನುವ ಹುಲಿಯ ಶಿಕಾರಿಯಂತು ಕಾದಂಬರಿಯ ಒಂದು ಮುಖ್ಯ ಭಾಗವಾಗಿ ಮೂಡಿಬಂದಿದೆ. ಕೊನೆಗೂ ಹುಲಿಯನ್ನು ಸಾಯಿಸುವಲ್ಲಿ ಯಶಸ್ವಿಯಾಗುವ ಗೋಪಾಲಯ್ಯ ಮಗ ಶಂಭುವನ್ನು ಹುಡುಕಿಕೊಂಡು ಬರುವಲ್ಲಿಯೂ ಯಶಸ್ಸು ಸಾಧಿಸುತ್ತಾರೆನ್ನುವ ಆಶಯದಂತೆ ಕಾದಂಬರಿ ಮುಕ್ತಾಯವನ್ನು ಪಡೆಯುತ್ತದೆ.

ಶಂಭುವಿನ ವಿಚಾರವನ್ನು ಕಾಕತಾಳೀಯವೆಂಬಂತೆ ಹೇಳುವ ಶಿವರಾಮ ಕೊನೆಗೂ ಆತ ಪುಣೆಯಲ್ಲಿ ಕಂಡ ವ್ಯಕ್ತಿಯೆ ಶಂಭುವೆನ್ನುವ ಸತ್ಯ ಸಿನಿಮೀಯವಾಗಿ ಕಂಡರೂ ಕಾದಂಬರಿಯ ಅಂತ್ಯವನ್ನು ಓದುಗನ ಊಹನೆಗೆ ಬಿಟ್ಟಿರುವುದು ಇಡೀ ಕಾದಂಬರಿಯ ಕುತೂಹಲದ ಘಟ್ಟಕ್ಕೆ ನಾಂದಿಯಾದಿತೇ ಹೊರತು ಅದೇ ಅಂತ್ಯವೂ ಆಗಬೇಕಾಗಿಲ್ಲ. ಇಲ್ಲಿ ಗೋಪಾಲಯ್ಯನವರು ಗಾಡಿ ಕಟ್ಟಿಕೊಂಡು ಹೊರಡುವ ಆತುರ ಎಷ್ಟಿದೆಯೆಂದರೆ ‘ಆಗಲೆ ಭಟ್ಟರು ಪುಣೆಯ ತನಕವೂ ಹೋಗಲು ಕಾಲು ಕಿತ್ತಂತೆಯೇ’ ಎನ್ನುವ ಆಶಯದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಈ ಆಶಯವೇ ಶಿವರಾಮ ಹೇಳುವ ಪುಣೆಯ ವ್ಯಕ್ತಿಯೆ ಶಂಭುವೆನ್ನುವುದು ನಿಟ್ಟುಸಿರಿಡುವಂತೆ ಮಾಡುತ್ತದೆ.

ಪ್ರಸ್ತುತ ಡಾ|| ಕೆ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಶ್ರೀ ಪಿ. ಶೇಷಾದ್ರಿಯವರ ನಿರ್ದೇಶನದಲ್ಲಿ ದತ್ತಣ್ಣ, ಲಕ್ಷ್ಮೀ ಹೆಗಡೆಯಂತಹ ಪ್ರತಿಭೆಗಳಿಂದ ಜೀವ ತುಂಬುತ್ತಿರುವುದು ಚಿತ್ರ ಬಿಡುಗಡೆಯಾಗುವವರೆಗೂ ಕುತೂಹಲ ಮೂಡಿಸಿದೆ. ಇಂತಹ ಅಪೂರ್ವ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ತರುತ್ತಿರುವ ಶ್ರೀ ಪಿ. ಶೇಷಾದ್ರಿಯವರಿಗೆ ಅಭಿನಂದನೆಗಳು.

Read more!

Wednesday, November 3, 2010

ಬಾಲ


ಬಾಳಾಸಾಹೇಬ ಲೋಕಾಪುರ ಅವರ ‘ಕೃಷ್ಣೆ ಒಡಲ ತುಂಬ’ ಇದುವರೆಗಿನ ಕಥೆಗಳು ಪುಸ್ತಕದ ಮೊದಲ ಕಥೆ ‘ಬಾಲ’ ಮನುಷ್ಯನ ಬೆಳವಣಿಗೆಯ ಪರೋಕ್ಷವಾದ ಐರನಿಯಾಗಿರುವುದಲ್ಲದೆ, ಇದು ತಾರ್ಕಿಕ ಮತ್ತು ದಾರ್ಶನಿಕಗಳ ನಡುವಿನ ಸಂಘರ್ಷವಾಗಿ ಬೆಳೆಯುತ್ತಾ ಅವು ಗುರು ಶಿಷ್ಯರ ನಡುವಿನ ಮಾತುಗಳಲ್ಲಿ ಬದುಕಿನ ಸ್ತರಗಳನ್ನು ಬಿಂಬಿಸುವ ಮತ್ತು ಕಾಲ ಬದಲಾದಂತೆ ಮತ್ತೊಂದು ತಲೆಮಾರಿನ ಪ್ರಗತಿಯನ್ನು ಗುರುತಿಸುತ್ತದೆ."

ಎಂ.ಆರ್. ಕೆ ಪ್ರೊಫೆಸರ್‌ರವರ ವ್ಯಕ್ತಿ ಚಿತ್ರಣದೊಂದಿಗೆ ಆರಂಭವಾಗುವ ಕಥೆ ಅವರು ಬಾಹ್ಯ ಘಟನೆಗಳತ್ತ ವಿಮುಖರಾಗುತ್ತಾ ತಮ್ಮದೇ ಲೋಕವನ್ನು ಸೃಷ್ಟಿಸಿಕೊಂಡು ತಾವು ಅನುಭವಿಸಿದ ಓದು ಬರೆಹಗಳನ್ನು ಮೆಲುಕು ಹಾಕುತ್ತಾ ವಯೋ ಸಹಜವಾದ ಭ್ರಮೆಗಳನ್ನು ಹುಟ್ಟಿಸಿಕೊಂಡು ಪುಳಕಿತರಾಗುತ್ತಾರೆ.

ಅವರ ಗ್ರಂಥಾಲಯವೆಂದರೆ ಬರೀಯ ಅಚ್ಚು ಹಾಕಿ ಬೆಚ್ಚಗೆ ಕುಳಿತ ಪುಸ್ತಕದ ರಾಶಿಯಲ್ಲ; ಸ್ವತ: ಲೇಖಕರುಗಳೆ ಜೀವಂತವಾಗಿ ಗ್ರಂಥಾಲಯದಲ್ಲಿರುವ ಪುಳಕ ಅವರಿಗೆ. ಇದು ಕಥೆಗಾರನಿಗೆ ಪುಸ್ತಕಗಳ ಮೇಲಿರುವ ಅಪಾರ ಪ್ರೀತಿಯನ್ನು ಧ್ವನಿಸುತ್ತದೆ.

ರಕ್ತಿ ಹೀರಿ ತನು ಅಲ್ಲಾಡಿಸಿ ಇಡೀ ರಾತ್ರಿ ನಿದ್ದೆಗೆಡಿಸಿಕೊಂಡು ಹೆಂಡಿರು ಮಕ್ಕಳು ಸಂಸಾರವೆನ್ನುವ ಮೋಹದಿಂದ ಪ್ರೊಫೆಸರರನ್ನು ದೂರಗೊಳಿಸಿ, ಅವುಗಳೆಲ್ಲಗಳಿಂದ ವಿಮುಖವಾಗುವ ಆತ್ಮದ ತುಂಡುಗಳು ಅವರ ಬರಹಗಳು. ಇಲ್ಲಿ ಲೇಖಕರ ಬರಹಗಳೆಂದರೆ ಅವರ ಗಾಢವಾದ ಅನುಭವವಗಳು, ಎಕ್ಸ್‌ಪೋಷರ್‍ಸ್‌ಗಳು ಮಾತ್ರವಲ್ಲ ಇಮೇಜಿನೇಷನ್ಸ್‌ಗಳು. ಅವು ಆತ್ಮದ ತುಂಡುಗಳಾಗಿ ಜೀವಂತಿಕೆ ಪಡೆದುಕೊಂಡು ಪುಸ್ತಕ ರೂಪದಲ್ಲಿ ಹೊರ ಹೊಮ್ಮಿರುವಂತಹವುಗಳು. ಇದು ಲೇಖಕನ ಸೃಜನಶೀಲತೆಯ ಮತ್ತು ಮಹಾತ್ವಾಕಾಂಕ್ಷೆಯ ತಲ್ಲಣಗಳಾಗಿ ಓದುಗನನ್ನು ಕಾಡುವುದು. ಮನುಷ್ಯನಾದವನಿಗೆ ಅನುಭವಗಳನ್ನು ಪಡೆಯಬೇಕಾದರೆ ಆತ ತನ್ನ ಸುತ್ತಮುತ್ತ ಘಟಿಸುವ ಸಂಗತಿಗಳನ್ನು ಒಟ್ಟಾಗಿ ಗ್ರಹಿಸಿ ತನ್ನ ಕಲ್ಪನೆಯಲ್ಲಿ ಹೊಸೆದುಕೊಡುವುದು ಅನುಭವ ಮತ್ತು ಅನುಭಾವದಿಂದ ಸಾಧ್ಯ. ‘ಎಲ್ಲೋ ಹುಡಿಕಿದೆ ಇಲ್ಲದ ದೇವರ’ ಅನ್ನುವ ಕವಿ ಸಾಲಿನಂತೆ ಹೊರಗೆಲ್ಲಾ ಹುಡುಕುತ್ತಾ ಅಂಡಲೆಯುವುದು, ವ್ಯರ್ಥ ಕಾಲಹರಣ ಮಾಡುವುದು ಒಂದು ವರ್ಗದ ಜನರಿಗೆ ಬದುಕು ಹೊರಗಡೆಯೆ ಅನಂತ ಪ್ರಮಾಣದಲ್ಲಿ ಸಿಗುತ್ತಿರಬೇಕು ಅನ್ನುವುದು ಊಹನೆಯಾಗಿ ಉಳಿದರೂ ವಾಸ್ತವದಲ್ಲಿ ಓದುವ, ಬರೆಯುವ ಹವ್ಯಾಸ ಹೇಗೆ ದೂರವಾಗುತ್ತಿದೆಯೆನ್ನುವುದನ್ನೂ ಪ್ರತಿಬಿಂಬಿಸುತ್ತದೆ.

ಹೊರಗಡೆಯ ಅಲೆದಾಟ ಇಲ್ಲಿ ಲೌಕಿಕವಾದ ಮತ್ತು ಎಲ್ಲರೂ ಒಪ್ಪಿಕೊಳ್ಳುವ ಬದುಕಿನ ಪರಿಯಾದರೆ, ಅಲ್ಲಿ ಅನುಭವಗಳ ಮೂಟೆಯಿರಬಹುದು ಅದೇ ಮುಂದೆ ತನ್ನನ್ನೇ ತಾನು ಸುತ್ತಿಕೊಳ್ಳುವ ಕಕೂನ್ಸ್ ತರಹ ಅನುಭವಗಳತ್ತ ವಾಲುತ್ತಾ ಎಂದಾದರೊಮ್ಮೆ ಪ್ರೊಫೆಸರ್‌ರಂತೆ ರೂಮಿನ ಒಳಗೆ, ರ್‍ಯಾಕಿನಲ್ಲಿ ಜೀವಂತವಾಗಿರುವ ಪುಸ್ತಕಗಳಂತೆ ಮತ್ತು ತಮ್ಮ ಅನುಭವದ ಆತ್ಮದ ತುಂಡುಗಳಂತೆ ಕಾಣಬಹುದು. ಇದು ಹೊರಗಡೆಯ ಬದುಕಿಗಿಂತ ಭಿನ್ನವಾದ ಒಂದು ಅನುಭವವನ್ನು ಕೊಡುವ ಸತ್ಯದಂತೆ ಗೋಚರವಾಗುತ್ತದೆ.

ಪ್ರೊಫೆಸರರಿಗೆ ಕಿವಿ ಕೇಳಿಸದಿದ್ದರೂ ಧ್ವನಿ ಹೊರಡಿಸುವುದು ತಿಳಿಯುತ್ತದೆ. ಅವರು ಬೆರಗಿನಿಂದ, ‘ನೀವು ಯಾವಾಗ ಮಾತನಾಡಲು ಕಲಿತಿರಿ?’ ಎಂದು ಪುಸ್ತಕಗಳನ್ನು ಕೇಳುತ್ತಾರೆ. ಅವು ತಮ್ಮ ಆತ್ಮದ ತುಂಡುಗಳಂತಹ ಪುಸ್ತಕಗಳು ಮಾತ್ರವಲ್ಲ ತಮ್ಮ ಅನುಭವಗಳನ್ನು ಧಾರೆಯೆರೆದು ಕೊಟ್ಟ ಹಲವು ಶಿಷ್ಯ ವೃಂದಗಳಲ್ಲಿ ಒಬ್ಬ ಶಿಷ್ಯನ ದನಿಯಾಗಿರುವುದು ತಿಳಿಯುತ್ತದೆ. ಅಷ್ಟೊಂದು ತಮ್ಮ ಗ್ರಂಥಾಲಯದಂತಹ ಪ್ರಪಂಚವನ್ನು ನೆಚ್ಚಿಕೊಂಡಿರುವ ಅವರಿಗೆ ಪುಸ್ತಕಗಳೆ ಮಾತನಾಡಿದಂತೆ ಕಂಡರೂ ಇಲ್ಲಿ ಶಿಷ್ಯಂದಿರು ತನ್ನನ್ನು ಮೀರಿ ಹೋಗಲಾರರೆನ್ನುವ ಪರೋಕ್ಷವಾದ ಅವರ ಬಾಹ್ಯದಲ್ಲಿ ತೋರಿಸಿಕೊಳ್ಳಲಾಗದ ‘ಅಹಂ’ ಅನ್ನು ಕೂಡ ತಿಳಿಸುತ್ತದೆ.

ಇಲ್ಲಿ ಕಥೆಗಾರ, ಗ್ರಂಥಾಲಯದಲ್ಲಿ ಕುರ್ಚಿ ಇರಬಾರದು; ನಾವು ನೆಲಕ್ಕೆ ಕುಂತು ಓದಬೇಕು. ಬುದ್ಧಿ ಆಕಾಶಕ್ಕೆ ಜಿಗಿದಾಗ ನೆಲ ನಮ್ಮ ಇರುವಿಕೆಯನ್ನು ನೆನಪಿಸಿಕೊಡುತ್ತದೆ. ಕುರ್ಚಿಗೆ ಆ ಶಕ್ತಿ ಇರುವುದಿಲ್ಲ. ಈ ವಾಕ್ಯಗಳು ಮನುಷ್ಯನ ಬುದ್ಧಿಮಟ್ಟ ಹೆಚ್ಚಾದಂತೆ ಅವನು ತಾನು ನಿಂತ ನೆಲವನ್ನೇ ಮರೆಯುತ್ತಾನಲ್ಲದೆ, ಓತಪ್ರೋತವಾಗಿ ತನ್ನ ಮನಸ್ಸನ್ನು ಹರಿಯಬಿಡುತ್ತಾನೆ, ಅವನನ್ನು ಎಚ್ಚರಿಸುವುದು ಭೂಮಿಯೆನ್ನುವ ಸತ್ಯವನ್ನು ತಿಳಿಸುತ್ತಾರೆ. ಈ ವಾಕ್ಯಗಳಲ್ಲಿ ಮನುಷ್ಯನ ಕಾಮನೆಗಳು, ಅಹಂ ಮತ್ತು ಅನುಭವದ ಕೊರತೆ ಇವುಗಳನ್ನು ಹದ್ದು ಬಸ್ತಿನಲ್ಲಿಡದಿದ್ದರೆ ತನ್ನನ್ನು ತಾನು ಮರೆತು ಬಿಡುವ ಕಲ್ಪನೆಯಿದೆ. ನಿಜವಾಗಿಯೂ ಇದೊಂದು ಅದ್ಭುತ ಅನುಭವದ ಮಾತು! ಹಾಗಾಗಿಯೆ ಈ ಕಥೆ ಶಿಷ್ಯ ಮತ್ತು ಗುರುವಿನ ಸಂಬಂಧವನ್ನು ತಿಳಿಸುವುದಕ್ಕಿಂತಲೂ ಅನುಭವಗಳನ್ನು ಹಂಚಿಕೊಡುವಲ್ಲಿ ಒಂದು ಯಶಸ್ವಿ ದನಿಯಾಗಿ ನಿಲ್ಲುತ್ತದೆ.

ಇಂಡಿಯಾ ಅಮೆರಿಕಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಶಿಷ್ಟಾಚಾರದ ಹೋಲಿಕೆಯನ್ನು ಮಾಡುತ್ತಾ ತನ್ನ ಗುರುವನ್ನು ಮೀರಿಸುವ ಮಾತುಗಳನ್ನು ಆಡುತ್ತಾನೆ ಶಿಷ್ಯ ಬಗರಿ. ವ್ಯಕ್ತಿ ಸ್ವಾತಂತ್ರ್ಯವೆಂದರೆ ಇನ್ನೊಬ್ಬನನ್ನು ಹೊಡೆಯೋದು ಬಡಿಯೋದು ಅಲ್ಲ. ಅದಕ್ಕಿಂತಲೂ ವಿಭಿನ್ನವಾಗಿರುವಂತಹುದು. ಒಂದು ಕಪ್ ಚಹಾ ಮಾಡಿಕೊಡುವ ಭಾರತೀಯ ಶಿಷ್ಟಾಚಾರದಲ್ಲಿಯೂ ವ್ಯಕ್ತಿಗತವಾದ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಶಿಷ್ಯನ ಪರಿ ದ್ವೈತ ಅದ್ವೈತಗಳ ನಡುವೆ ಹೋಲಿಸಿದಾಗ ಶಿಷ್ಯ ಸೋಲಿನೊಡನೆ ಜಾರುತ್ತಾ ಗೆಲುವಿನ ಹಾದಿ ಏರುತ್ತಾ ಒಂದೊಮ್ಮೆ ಎಷ್ಟೊಂದು ಶಿಸ್ತಿನ ಸಿಟ್ಟಿನ ಪ್ರಖರ ವೈಚಾರಿಕತೆಯ ಮನುಷ್ಯನಾಗಿದ್ದರು ಈ ಪ್ರೊಫೆಸರು ಎಂದು ಅಚ್ಚರಿಪಡುತ್ತಾನೆ.

ಶಿಷ್ಯನಿಗೆ, ಬದುಕಿನ ದಾರಿ ಅಂಚು ಪಟ್ಟಿಯಿಂದ ಗೆರೆ ಎಳೆಯುವಂತೆ ಅಲ್ಲ; ಕಾಡಿನ ಕಾಲು ಹಾದಿಯಂತೆ ಒಮ್ಮೊಮ್ಮೆ ನಾವೇ ಹೊಸದಾರಿಯನ್ನು ತುಳಿಯುವುದು ಅನಿವಾರ್ಯ ಅಂದುಕೊಳ್ಳುತ್ತಾ, ಇಂಡಿಯಾದಲ್ಲಿ ಅದು ಸಾಧ್ಯವಿಲ್ಲವೆನಿಸುತ್ತದೆ. ಯಾವಾಗಲೂ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರು ಶಿಷ್ಯನ ಮುಂದೆ ಸೋಲು ಒಪ್ಪಿಕೊಳ್ಳಲಾರರು. ಮುಂದೆ ಕ್ರಾಂತಿಯ ವಿಷಯವನ್ನು ಮಾತನಾಡುತ್ತಾ,

ಕ್ರಾಂತಿಯೆಂದರೆ ಬದಲಾವಣೆ, ಪ್ರಗತಿ, ನಿಂತ ನೆಲದ ವಿಸ್ತಾರದಲ್ಲಿ ಕ್ರಾಂತಿ ಅಂದರೆ ಕ್ರಿಯೆಯ ಎಲ್ಲಾ ಅಯಾಮಗಳನ್ನು ಮೂಲಭೂತವಾಗಿ ಅರ್ಥ ಮಾಡಿಕೊಳ್ಳುವುದು. ಅರ್ಥ ಮಾಡಿಕೊಳ್ಳುವ ಕ್ರಿಯೆ ಮೌನವಾಗಿ ನಡೆಯುವಂತದ್ದು. ಕ್ರಾಂತಿ ಮೌನದ ವಿರೋಧಿ. ಅದು ಪ್ರತಿಕ್ರಿಯೆಯಲ್ಲ. ಪ್ರತಿಕ್ರಿಯೆ ಯಾವತ್ತೂ ಸಂತೋಷವನ್ನು ಹುಟ್ಟು ಹಾಕುತ್ತದೆ. ವಿರೋಧ ಯಾವತ್ತೂ ಕ್ರಿಯಾಶೀಲವಲ್ಲ - ಪ್ರೊಫೆಸರರು ವಾದಿಸುತ್ತಾರೆ.

ಶಿಷ್ಯ ಬಗರಿಗೆ - ಕ್ರಾಂತಿಯೆಂದರೆ ಆದರ್ಶರಹಿತವಾಗಿರಬೇಕು. ಕ್ರಾಂತಿ ಅಂದ್ರೆ ದೇಶದ ಪ್ರಗತಿ, ಇದರಿಂದ ಬಲಿದಾನಗಳಾದರೂ ತಪ್ಪಿಲ್ಲ. ಅದನ್ನೇ ವಿರೋಧಿ ಅನ್ನುವುದಾದರೆ ಆ ವಿರೋಧದಲ್ಲಿಯೇ ಆನಂದ ಇದೆ. ಜಗತ್ತಿನ ಎಲ್ಲರೂ ಚಿಂತನೆ ಮತ್ತು ವಿಚಾರಣೆಗಳಿಗೆ ಒಗ್ಗಿದ ಮೇಲೆ ಎಲ್ಲಾ ಕಡೆ ತಾತ್ವಿಕವಾದ ಸಮಾನತೆ ಮೂಡುತ್ತದೆ. ಇದು ಬದುಕಿನ ಎಲ್ಲಾ ಸ್ತರದಲ್ಲಿಯೂ ಅಸಮಾಧಾನ ತರುವುದು ವಾಸ್ತವ ಸತ್ಯ. ಈ ಸತ್ಯ ಕ್ರಾಂತಿಯ ಮೂಲ.

ಇಲ್ಲಿ ಶಿಷ್ಯನ ತರ್ಕ ಮೇಲುಗೈಸಾಧಿಸಿ ಗುರುವಿನ ಸೋಲಿಗೆ ನಾಂದಿಹಾಡುತ್ತಾನೆ. ಸಮಾನತೆಯೆಂದರೆ ಕಲ್ಪನೆ ಮಾತ್ರ. ಅದು ಭ್ರಮೆ. ವಿಚಾರಗಳು ಸ್ವಂತವಾದ ಮೇಲೆ ಈ ಸಮಾನತೆ ಮೂಡುತ್ತದೆ. ಆಗ ಪ್ರೀತಿ ಹುಟ್ಟುತ್ತದೆ. ಅದೇ ನಿಜವಾದ ಕ್ರಾಂತಿ. ಪ್ರೀತಿಯನ್ನು ಬೆಳೆಸಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೇ ಕ್ರಾಂತಿಯನ್ನೂ ಅನ್ನುತ್ತಾರೆ ಪ್ರೊಫೆಸರ್. ಗುರುವಿನ ತರ್ಕವನ್ನು ಒಪ್ಪಿಕೊಳ್ಳದ ಶಿಷ್ಯ ಬರೀ ಪ್ರೀತಿಯಿಂದ ಊಟ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲವೆನ್ನುತ್ತಾನೆ. ಸ್ಥಾವರ ಅಳಿದ ಮೇಲೆ ಜಂಗಮಕ್ಕೆ ಬೆಲೆಯೆನ್ನುವ ತರ್ಕವನ್ನು ಮುಂದಿಡುತ್ತಾನೆ. ಶಿಷ್ಯನ ಈ ರೀತಿಯ ಬೆಳವಣಿಗೆ ಕಂಡು ಪ್ರೊಫೆಸರ್ ಅಧೀರರಾಗುತ್ತಾರೆ.

ಆಗ ಶಿಷ್ಯ ಗುರುವನ್ನು ಸೋಲಿಸಿದೆನೆನ್ನುವ ಭ್ರಮೆಗೆ ಇಳಿಯುತ್ತಾನೆ. ಆ ‘ಅಹಂ’ ಅವನ ತಲೆಯ ಕೋಡುಗಳಾಗಿ, ಬಗಲಲ್ಲಿನ ರೆಕ್ಕೆಗಳಾಗಿ ಕಾಣಿಸುತ್ತದೆ. ತನ್ನ ಮುಂದಿನ ಪೀಳಿಗೆಗೆ ಉತ್ತರ ಹುಡುಕುವ ಶಿಷ್ಯನ ತವಕ ಇತಿಹಾಸವಾಗಿ ಅದು ಅಗತ್ಯವಾಗಿರುವುದೆ ಸಂದೇಹಗಳ ಪರಿಹಾರವೆನ್ನುತ್ತಾ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಅವನ ಬೆಳವಣಿಗೆಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಶಿಷ್ಯ ಬಗರಿ ಎದ್ದು ಹೊರಗೆ ಹೊರಡುತ್ತಾನೆ. ಸದಾ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರರಿಗೆ ಅವನ ಬಾಲ ಮಾತ್ರ ಬಾಗಿಲ ಬಳಿಯೆ ಸಿಕ್ಕಿಕೊಂಡು ಬಾಗಿಲು ಮುಚ್ಚುವುದೂ ಕಷ್ಟವಾಗುತ್ತದೆ. ಒಂದು ಮುಗಿದ ಅಧ್ಯಾಯದ ಕೊಂಡಿಯಂತೆ ‘ಬಾಲ’ ಕಂಡರೂ ಅದು ಇತಿಹಾಸದ ಜೀವಂತಿಕೆಯಿರುವ ಇನ್ನೊಂದು ಅಧ್ಯಾಯದ ಪ್ರಗತಿಯಾಗಿ ಗೋಚರಿಸುವುದು ಈ ಕಥೆಯ ವಿಶೇಷತೆ.
ಚಿತ್ರ ಕೃಪೆ: ಎಸ್.ವಿ. ಹೂಗಾರ್

Read more!