Friday, December 18, 2009

ಬಣ್ಣದ ಚಿಟ್ಟೆಯ ರಂಗಿನ ಬದುಕಲ್ಲ ಈ ‘ಪ್ಯಾಪಿಲಾನ್’.


‘ಪ್ಯಾಪಿಲಾನ್’ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆಯವರ ಸಂಗ್ರಹಾನುವಾದದ ಕಾದಂಬರಿ. ಈ ಬೃಹತ್ ಕಾದಂಬರಿಯ ಮೂಲ ಲೇಖಕ ಹೆನ್ರಿ ಛಾರೇರೆ. ಈ ಕಾದಂಬರಿ ಎರಡು ಭಾಗಗಳಲ್ಲಿ ಪ್ರಕಟಗೊಂಡಿದೆ. ಇದೊಂದು ಸಾಹಸದ ಕಥೆಯಾದರೂ ಖೈದಿಯೊಬ್ಬನ ಪಲಾಯ್ನ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರೆಂಚ್ ಸರಕಾರದ ದುರವಸ್ಥೆ, ನ್ಯಾಯಾಂಗ ಮತ್ತು ನ್ಯಾಯಾಂಗ ವಿತರಣೆಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ.

ಇಲ್ಲಿ ಭೂಗತ ಜಗತ್ತಿನ ಅನಾವರಣವಿದ್ದರೂ ಅಪರಾಧಿಯಲ್ಲದ ಮನುಷ್ಯನೊಬ್ಬ ಸ್ವತಂತ್ರನಾಗಲು ಹೋರಾಡುವ ಮೈ ರೋಮಾಂಚನಗೊಳಿಸುವ ಸಾಹಸದ ಕಥೆಯೂ ಅಹುದು."

‘ಪ್ಯಾಪಿಲಾನ್’ ಅಂದರೆ ‘ಚಿಟ್ಟೆ’ (ತೆಳು ನೀಲಿ ರೆಕ್ಕೆಗಳ ಮೇಲೆ ಪುಟ್ಟ ಗೆರೆಗಳಿರುವ ಚಿಟ್ಟೆ) ಎಂಬ ಅರ್ಥವಿದ್ದರೂ ಇಲ್ಲಿಯ ನಿರಪರಾಧಿ ಖೈದಿ ಪ್ಯಾಪಿಯ ಬದುಕು ಚಿಟ್ಟೆಯಷ್ಟು ಸುಂದರ ಮತ್ತು ಸ್ವೇಚ್ಛೆಯಿಂದ ಕೂಡಿಲ್ಲ. ಹಲವು ಬಾರಿ ಬಂಧಿಖಾನೆಯಿಂದ ತಪ್ಪಿಸಿಕೊಂಡರೂ ಮತ್ತೆ ಮತ್ತೆ ಅಂತಹುದೇ ಕಾರಾಗೃಹಗಳಲ್ಲಿ ಕರಾಳ ದಿನಗಳನ್ನು ಕಳೆಯಬೇಕಾಗುತ್ತದೆ. ಯಾವುದೇ ಅಪರಾಧವೆಸಗದ ವ್ಯಕ್ತಿಯನ್ನು ಪೊಲೀಸರು, ಲಾಯರುಗಳು ಸೇರಿ ನಿಷ್ಕಾರುಣವಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತೆ ಮಾಡಿ ಅವನನ್ನು ಕತ್ತಲ ಕಾರಾಗೃಹವಿರುವ ದ್ವೀಪಕ್ಕೆ ಗಡಿಪಾರು ಮಾಡುತ್ತಾರೆ. ಭೂಮಿಯ ಮೇಲಿನ ನರಕವಾಗಿರುವ ಆ ದ್ವೀಪದಲ್ಲಿ ಎಲ್ಲರೂ ಅಧಿಕಾರಿಗಳೇ. ಯಾವ ಜನ್ಮದ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಅಲ್ಲಿ ಅಧಿಕಾರಿಗಳಾಗಿ ನಿಯುಕ್ತಿಯಾಗಿದ್ದಾರೋ, ಅಂತಹವರ ಕೈಯಲ್ಲಿ ಸಿಲುಕಿ ಬದುಕೇ ಮುಗಿಯಿತೇನೋ ಅನ್ನುವ ಹೊತ್ತಿಗೆ ಹೊಸ ಹೊಸ ಸಾಹಸಗಳನ್ನು ಮಾಡಲು ಮುಂದಾಗುತ್ತಾನೆ ಪ್ಯಾಪಿ. ಸಮಾನತೆ, ನ್ಯಾಯ, ಸ್ವಾತಂತ್ರ್ಯಕ್ಕೆ ಹೆಸರಾದ ಪ್ರೆಂಚ್ ಸರಕಾರದಲ್ಲಿಯೇ ಈ ರೀತಿಯ ಅವ್ಯವಸ್ಥೆಯನ್ನು ಕಣ್ಣ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ ಈ ಕಾದಂಬರಿ.

ಪ್ಯಾಪಿ ಕಾರಾಗೃಹ ಸೇರಿದ ಬಳಿಕ ಅಲ್ಲಿಯ ಖೈದಿಗಳ ಜೊತೆಗೆ ಸೇರಿ ಹಲವು ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ ಕ್ರೂರ ಕಾನೂನು ವ್ಯವಸ್ಥೆ ಮತ್ತು ಪೊಲೀಸರ ಎದುರು ತನ್ನ ಸಾಹಸಗಳೆಲ್ಲಾ ನಿರರ್ಥಕವಾಗುತ್ತದೆ. ಆದರೆ ಸೇಡು ತೀರಿಸಿಕೊಳ್ಳಲು ಕಾದಿರುವ ಪ್ಯಾಪಿ ಅಲ್ಲಿಯ ಅಧಿಕಾರಿಗಳ ಮನಗೆದ್ದು ಅಲ್ಪಾವಧಿಯ ಶಿಕ್ಷೆಯನ್ನು ಮುಗಿಸಿ ಬಿಡುಗಡೆಯಾಗುವ ಸಂದರ್ಭಗಳಿದ್ದರೂ ಅವೆಲ್ಲವನ್ನೂ ದಿಕ್ಕರಿಸಿ ಎಲ್ಲಾ ಕಡೆಯಲ್ಲೂ ಸೋಲುಣ್ಣುತ್ತಾನೆ. ಅವನ ಮನದಲ್ಲಿ ಕುದಿಯುತ್ತಿರುವ ಸೇಡು ಅವನನ್ನು ಮಹಾಪರಾಧಿಯೊಬ್ಬ ಅನುಭವಿಸಬೇಕಾದ ಎಲ್ಲಾ ಶಿಕ್ಷೆಗಳಿಗೂ ಗುರಿಯಾಗಿಸುತ್ತದೆ. ಸೇಡು ತೀರಿಸಿಕೊಳ್ಳುವ ಆತುರ ಅವನಲ್ಲಿ ಅಷ್ಟೊಂದು ಮಡುಗಟ್ಟಿರುತ್ತದೆ.

ಗಯಾನ ದ್ವೀಪದ ಜೈಲುಗಳಿಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳುವುದು ಸುಲಭವೆಂದು ತಿಳಿದ ಪ್ಯಾಪಿಗೆ ಆತನ ಸಹಖೈದಿ ಅಲ್ಲಿಯ ನರಕಸದೃಶ ಜೈಲುಗಳು, ಮಾರಕ ರೋಗಗಳಿಗೆ ತುತ್ತಾಗಿ ಸಾಯುವ ಖೈದಿಗಳ ಅವಸ್ಥೆಯನ್ನು ತಿಳಿಸುತ್ತಾನೆ. ಹಠ ಬಿಡದ ಪ್ಯಾಪಿ ಗಯಾನ ಜೈಲು ಸೇರಿ ಅಲ್ಲಿಂದ ತಪ್ಪಿಸಿಕೊಂಡು ಅಲ್ಲಿಯ ಜನರ ಜೊತೆಗೆ ಸೇರಿ ಸಂಸಾರವೆನ್ನುವ ಕೂಪದಲ್ಲಿ ಬೀಳುತ್ತಾನೆ. ಲಾಲಿ ಮತ್ತು ಅವಳ ಸಹೋದರಿ ಲೋರಿಯಾ ಎಂಬ ಕನ್ಯೆಯರನ್ನು ಮದುವೆಯಾಗಿ ಸುಖಮಯವಾದ ಸಂಸಾರ ನಡೆಸಬಹುದಾಗಿದ್ದರೂ ಅವನೊಳಗಿದ್ದ ಸೇಡು ಭುಗಿಲೆದ್ದು ತನ್ನ ಸಾಹಸ ಯಾತ್ರೆಯನ್ನು ಮುಂದುವರಿಸುವಂತೆ ಪ್ರೇರೇಪಿಸುತ್ತದೆ.

ಜೈಲಿನಲ್ಲಿರುವ ಖೈದಿಗಳು ದ್ವೀಪದಲ್ಲಿಯೂ ಅಪರಾಧವೆಸಗಿದರೆ ಅಥವಾ ಪಲಾಯನಕ್ಕೆ ಪ್ರಯತ್ನಿಸಿದರೆ ಅಂತಹವರನ್ನು ಏಕಾಂತ ಶಿಕ್ಷೆ ವಿಧಿಸಿ ಅವರನ್ನು ಒಳ್ಳೆಯವರಾಗಲು ಅವಕಾಶ ಕೊಡದೆ, ನಿಷ್ಪ್ರಯೋಜಕರನ್ನಾಗಿಸಿ ಅಲ್ಲಿಯೇ ಸಾಯುವಂತೆ ಮಾಡುವುದೇ ಕ್ರೂರ ಶಿಕ್ಷೆ. ಕತ್ತಲೆಯ ಬಂಧಿಖಾನೆಯಲ್ಲಿ ಕೈ ತೂರುವುದಕ್ಕೆ ಮಾತ್ರ ಇರುವ ಕಿಂಡಿಯ ಬೆಳಕಿನಲ್ಲಿ ಅರೆ ಜೀವವಾಗಿ, ಉಸಿರಾಟಕ್ಕೂ ಹಪಹಪಿಸುವ ಆ ರೌದ್ರ, ಭೀಕರ ಬದುಕಿನಲ್ಲೂ ಪ್ಯಾಪಿಗೆ ಉಳಿದಿರುವುದು ತನ್ನನ್ನು ಅನಗತ್ಯ ಅಪರಾಧಿಯನ್ನಾಗಿಸಿದವರ ಮೇಲಿನ ದ್ವೇಷವೊಂದೇ. ಅಂತಹ ಕೂಪದಲ್ಲಿ ಖೈದಿ ಬದುಕುಳಿಯುವುದೇ ಆಶ್ಚರ್ಯ. ಆದರೂ ಪ್ಯಾಪಿ ಛಲಗಾರ ಅಲ್ಲಿಂದಲೂ ತಪ್ಪಿಸಿಕೊಳ್ಳುತ್ತಾನೆ.

ಸಲಿಂಗಕಾಮ, ಜೈಲರ್ಗಳ ಮನಗೆಲ್ಲಲು ಹಣವನ್ನು ಸಣ್ಣ ಟಾರ್ಚುಗಳಲ್ಲಿರಿಸಿ ಗುದದೊಳಗೆ ಅದನ್ನು ಇಟ್ಟುಕೊಳ್ಳುವುದು, ಸಿಗರೇಟು, ಕುಡಿತಕ್ಕಾಗಿ ಹಪಹಪಿಸುವುದು, ಜೈಲಿನಲ್ಲಿ ನೀಡುವ ಕೆಲಸಗಳನ್ನು ಮಾಡಲು ನಿಶಕ್ತರಾಗಿ ಕ್ರೂರ ಶಿಕ್ಷೆಗೆ ಗುರಿಯಾಗುವುದು ಮನುಷ್ಯ ಜಾತಿಗೆ ಬೇಡವಾದ ಕಷ್ಟ ಕೋಟಲೆಗಳು. ಆದರೆ ಧೈರ್ಯಗೆಡದೆ ಪ್ಯಾಪಿ ತಾನು ಸೇಡು ತೀರಿಸಿಯೇ ಕೊಳ್ಳುತ್ತೇನೆ ಅನ್ನುತ್ತಾ ಹದಿಮೂರು ವರ್ಷಗಳನ್ನು ಜೈಲಿನಲ್ಲಿಯೇ ಕಳೆಯುತ್ತಾನೆ.

ಒಬ್ಬ ಸಹಖೈದಿಯ ಕೊಲೆಯಾದಾಗ ಖೈದಿಗಳ ಬದುಕು ನಾಯಿಪಾಡಿಗಿಂತಲೂ ಕಡೆಯೇ? ಸರಕಾರಕ್ಕೆ ಅದನ್ನು ಸರಿಮಾಡಲು ಸಾಧ್ಯವಿಲ್ಲವೇ? ಅನ್ನುವ ಪ್ರಶ್ನೆಯೊಂದಿಗೆ ‘ಪ್ಯಾಪಿಲಾನ್’ನ ಮೊದಲ ಭಾಗ ಮುಗಿಯುತ್ತದೆ. ಇಲ್ಲಿ ಖೈದಿಯೊಬ್ಬನ ಸಾಹಸಯಾತ್ರೆ ಮಾತ್ರವಲ್ಲ, ರೋಮಾಂಚನಗೊಳಿಸಬಲ್ಲ ಸಾವು- ಬದುಕು- ಹೋರಾಟ-ಸೇಡಿನ ಜ್ವಾಲೆಯೂ

Read more!

Sunday, December 6, 2009

ಋಣ


ಆಕಾಶವೇ ತೂತಾದಂತೆ ಒಂದೆ ಸಮನೆ ಸುರಿಯುತ್ತಿದ್ದ ಕುಂಭದ್ರೋಣ ಮಳೆಗೆ, ಚಳಿಯೆನ್ನದೆ ಬೇಗನೆ ಎದ್ದ ಸಾವಿತ್ರಿಗೆ ದಳಿಯ ಬಾಗಿಲು ತೆರೆದು ಹೊರಗಿನ ದೀಪ ಹಾಕುವಾಗ, ಅಂಗಳದಲ್ಲಿ ನಿಂತಿದ್ದ ನೀರನ್ನು ಕಂಡು ಹೆದರಿಕೆಯಾಯಿತು.
“ಓ ದೇವರೆ! ಇದೆಂತ ಹೀಗೆ, ಅಂಗಳದಲ್ಲಿ ಈ ನಮುನೆ ನೀರು ನಿಂತಿದೆ?” ತನ್ನಷ್ಟಕ್ಕೆ ಹೇಳಿಕೊಂಡಳಾದರೂ, ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿಕೊಂಡು ಬಂದ ಸುಬ್ರಾಯ ಭಟ್ಟರಿಗೆ ಮಾತ್ರ ಆಶ್ಚರ್ಯವಾದಂತೆ ಇರಲಿಲ್ಲ. ಅವರು ಮಡದಿಯ ಬಳಿ ನಿಂತು ಹೊರಗೆ ನೋಡಿದರು.

“ಮೂರು ದಿವಸದಿಂದ ಹೀಗೆ ಮಳೆ ಸುರಿಯುತ್ತಿದ್ದರೆ ಅಂಗಳದಲ್ಲಿಯಲ್ಲ ಮನೆಯ ಒಳಗೂ ನೀರು ಬರುವುದು ಖಂಡಿತ” ಹಾಗಂದ ಗಂಡನತ್ತ ತಿರುಗಿದ ಸಾವಿತ್ರಿ, “ನೀವು ಎಂತದು ಹೇಳುವುದು? ನಾವು ಮನೆ ಕಟ್ಟಿ ನಾಲಕ್ಕು ವರ್ಷವಾಯಿತಲ್ಲ. ಇಷ್ಟರವರೆಗೆ ಹೀಗಾದದ್ದಿಲ್ಲ. ಅಥವಾ ಹೀಗೆ ಮಳೆ ಬಂದಿಲ್ಲವ ಹೇಗೆ?” ಆತಂಕದಿಂದ ನುಡಿದಾಗ ಸುಬ್ರಾಯ ಹಿಂದಕ್ಕೆ ಸರಿದು, “ಮಳೆ ಬಂದಿಲ್ಲವಾ? ಇದಕ್ಕಿಂತಲೂ ಹೆಚ್ಚೇ ಮಳೆ ಸುರಿದಿತ್ತು. ಆದರೆ ಈ ತರ ನೀರು ಅಂಗಳದಲ್ಲಿ ನಿಂತದ್ದಿಲ್ಲ” ಅಂದ.

“ನಾನೂ ಅದನ್ನೇ ಹೇಳಿದ್ದು. ಹೀಗೆ ಮಳೆಯ ನೀರು ನಿಂತರೆ ತೆಂಗಿನ ಗಿಡಗಳು, ಅಡಿಕೆ ಗಿಡಗಳು ಏನಾಗಬೇಡ? ಇಷ್ಟು ನೀರು ಎಲ್ಲಿಂದ ಬರುವುದಪ್ಪಾ ಇದು? ನಮ್ಮನ್ನು ಲಗಾಡಿ ತೆಗೆಯುವುದಕ್ಕೆ ಬರುವುದಾ?” ಗಂಡನಿಗೆ ಹೇಳುತ್ತಾ ಸೀರೆಯ ತುದಿಯನ್ನು ಸೊಂಟಕ್ಕೆ ಸೇರಿಸಿ, ಅಂಗಳಕ್ಕೆ ಇಳಿದಳು.

ಸರಿಯಾಗಿ ಮೊಣಗಂಟಿನವರೆಗೂ ನೀರಿತ್ತು. ಹೆದರಿ ಹಿಂದಕ್ಕೆ ಬಂದ ಅವಳು ಗಂಡನನ್ನು ಕರೆದು, “ಅಲ್ಲೇ ಮಂಚದ ಪಕ್ಕದಲ್ಲಿ ಕೊರಂಬು ಇದೆ; ಕೊಡಿ” ಅಂದಳು. ಸುಬ್ರಾಯ ಕೊರಂಬನ್ನು ತೆಗೆದು ಮೆಟ್ಟಿಲಿನ ಬಳಿ ಇಟ್ಟ. ಅವಳು ಅದನ್ನು ತಲೆಗೆ ಇಟ್ಟುಕೊಂಡು ಬಚ್ಚಲಿನ ಒಲೆಗೆ ಬೆಂಕಿ ಹಾಕಲು ಬಂದಳು. ಅವಳ ಆತಂಕವೊಂದೇ, ನಾಲ್ಕು ವರ್ಷದ ತೆಂಗಿನ ಗಿಡಗಳು ನೀರು ನಿಂತು ಹಾಳಾದರೆ ಏನು ಮಾಡುವುದು? ಅವುಗಳನ್ನು ನೆಡಲು ಅಷ್ಟು ಖರ್ಚು ಮಾಡಿಯೂ ಏನೂ ಉಪಯೋಗವಾಗುವುದಿಲ್ಲವಲ್ಲಾ ಅನ್ನುವ ನೋವು. "

ಒಂದು ಕಡೆಗೆ ಮನೆಯ ಗೋಡೆ ಏರುತ್ತಿದ್ದಂತೆ ಗಂಡನಿಗೆ ಹೇಳಿ, ಅವರಿವರ ಬಳಿ ಇಪ್ಪತ್ತು ತೆಂಗಿನ ಗಿಡ, ಹದಿನಾಲ್ಕು ಕಂಗಿನ ಗಿಡಗಳನ್ನು ತಂದು ನೆಟ್ಟಿದ್ದು ಸುಮ್ಮನೆಯಲ್ಲ. ದೂರಾಲೋಚನೆಯಿರುವ ಕಷ್ಟ ಸಹಿಷ್ಣು ಜೀವಿ ಅವಳು. ಆಗ ಬಾವಿಯೂ ಇರಲಿಲ್ಲ. ಹಾಗಂತ ಸುಮ್ಮನಿದ್ದರೆ ನೆಟ್ಟ ಗಿಡಗಳು ಏನಾಗಬೇಡ? ಅನ್ನುತ್ತಾ ಎರಡು ಗದ್ದೆ ಇಳಿದು, ಮೂರು ಪುಣಿಯನ್ನು ದಾಟಿ, ಮಲ್ಲ ಸೋಜಾರ ಹಳ್ಳದಿಂದ ನೀರು ಹೊತ್ತು ಹಾಕಿದ್ದೆ ಅವುಗಳು ತಲೆಯೆತ್ತುವುದಕ್ಕೆ ಕಾರಣವಾಗಿದ್ದು. ಇದು ನಾಲ್ಕು ವರ್ಷಗಳ ಕೆಳಗಿನ ಮಾತು. ಇನ್ನೆರಡು ವರ್ಷ ಕಳೆದರೆ ಒಂದೆರಡು ತೆಂಗಿನ ಮರಗಳಲ್ಲಿಯೂ ಫಲ ಶುರುವಾಗಬಹುದು. ಈಗ ಈ ರೀತಿ ನೀರು ನಿಂತರೆ, ಕಾಂಡ ಕೊಳೆತು ಹೋದರೆ; ಎಲ್ಲಾ ಗೋವಿಂದಾ.

ಒಲೆಗೆ ಬೆಂಕಿ ಹಿಡಿದಾಗ ಒಂದೆರಡು ಕೊತ್ತಳಿಗೆಯನ್ನು ತುರುಕಿ, ಹೊರಗೆ ಬರುವಾಗ ಮಳೆಯಿಂದಾಗಿ ಸರಿ ಬೆಳಕಾಗದಿದ್ದರೂ, ಅತ್ತಿತ್ತ ಹೋಗುವುದಕ್ಕೆ ಏನೂ ತೊಂದರೆಯಿರಲಿಲ್ಲ. ಅಲ್ಲೇ ಪಕ್ಕದಲ್ಲಿಟ್ಟಿದ್ದ ಕೊರಂಬನ್ನು ತಲೆಗೇರಿಸಿ ಅಂಗಳಕ್ಕೆ ಇಳಿದ ಸಾವಿತ್ರಿ, ಗದ್ದೆಯ ಪುಣಿಯನ್ನು ಹಿಡಿದು ಹೊರಟಳು.

ಹಿಂದಕ್ಕೆ ಮೂರು ಕೊಯ್ಲು, ಮನೆಯ ಮುಂದೆ ನಾಲ್ಕು ಕೊಯ್ಲು ಗದ್ದೆ. ಎಡಕ್ಕೆ ತೆಂಗಿನ ತೋಟ, ಬಲಕ್ಕೆ ಬಾಳೆ ಮತ್ತು ಕಂಗಿನ ತೋಟ, ಮನೆಯ ಎದುರಿಗೆ ಬಾವಿ. ಆದ್ದರಿಂದ ಒಂದು ಗದ್ದೆಯ ಪುಣಿಯನ್ನು ಹಿಡಿದು ಹೊರಟರೆ ಅದು ಮತ್ತೆ ಬಂದು ಸೇರುವುದು ಬಾವಿಕಟ್ಟೆಯ ಬಳಿಗೆ.

ತೆಂಗಿನ ತೋಟದಿಂದ ಕೆಳಗೆ ದೊಡ್ಡ ಜರೆ. ಅದರ ಕೆಳಗಿರುವುದು ಸಾಂತಕ್ಕನ ಮಜಲು ಗದ್ದೆ. ತೋಟದಲ್ಲಿ ನೀರು ತುಂಬಿ ಜರೆಯಿಂದ ನೀರು ಜಲಪಾತದಂತೆ ದುಮುಕುತ್ತಿತ್ತು.

‘ಇದೆಂತ, ಬೆಟ್ಟುಗದ್ದೆಗಳಲ್ಲಿ ಈ ತರ ನೀರು? ನೆರೆ ಬಂದರೆ ಬೈಲು ಗದ್ದೆಗಳಿಗೆ ನೆರೆ ಬರುವುದಿತ್ತೇ ಹೊರತು ಹೀಗೆ ಬೆಟ್ಟು ಗದ್ದೆಗಳಿಗಲ್ಲ. ಈ ತರ ನೀರು ಜರೆಯಲ್ಲಿ ಇಳಿದರೆ ಪುಣಿ ಕಡಿದು, ಜರೆ ಜರಿದು ಹೋಗುವುದಿಲ್ಲವೆ?’ ಎಂದು ಚಿಂತಿಸುತ್ತಾ ನೀರು ಹೋಗುವುದಕ್ಕೆ ಬೇರೆ ದಾರಿಯಿದೆಯೇ ಎಂದು ನೋಡುತ್ತಾ ನಡೆಯುತ್ತಿದ್ದಳು.

ಅವಳು ಹಿಂಬದಿಯ ಗದ್ದೆಯತ್ತ ಬರುವಾಗ ಕಾಡಿನ ಒಡ್ಡದ ನೀರು ಗುದ್ದಳಿಸಿ ಬರುತ್ತಿರುವುದು ಕಾಣಿಸಿತು. ಊರಿಗೆ ಬಂದು ನಾಲ್ಕು ವರ್ಷವಾದರೂ ಆ ತರಹ ನೀರು ಹರಿಯುವುದನ್ನು ಇಲ್ಲಿಯವರೆಗೆ ನೋಡಿಯೇ ಇರಲಿಲ್ಲ. ಆಗ, ಆಸ್ತಿ ತೆಗೆದುಕೊಂಡ ನಂತರ ಬೆಟ್ಟು ಗದ್ದೆಯಲ್ಲಿಯೇ ಮನೆ ಮಾಡಿ ನಿಂತದ್ದು ದೊಡ್ಡ ಸಾಹಸ. ಅಕ್ಕ ಪಕ್ಕದ ಮನೆಯವರೆಲ್ಲಾ ಏನೋ ಹೇಳಿ ಹೆದರಿಸಿದ್ದಿದೆ. ಕಾಡಿನ ಪಕ್ಕದಲ್ಲಿಯೇ ಇರುವ ಆ ಬೆಟ್ಟು ಗದ್ದೆಯಲ್ಲಿ ಹುಲಿ ಕೂಡ ತಿರುಗಾಡುತ್ತದೆಯಂತೆ. ಆದರೆ ಈಗ ಹುಲಿ ಎಲ್ಲಿ? ಅನ್ನುವ ಧೈರ್ಯದಿಂದ ಅಲ್ಲಿಯೇ ಮನೆ ಕಟ್ಟಿದ್ದಾಯಿತು. ಅದಲ್ಲದೆ ಆ ಗದ್ದೆಯ ಪಕ್ಕದಲ್ಲಿಯೇ ಬೈಕಾಡ್ತಿ ಭೂತದ ಬನವಿರುವುದರಿಂದ ದೈವ ಏನೂ ಮಾಡಲಿಕ್ಕಿಲ್ಲ ಅನ್ನುವ ನಂಬಿಕೆಯೂ ಇತ್ತು.

ಆದರೆ ಈಗ ಅದೇ ನೇರಕ್ಕೆ ಹಿಂದೆ ಪುರುಷರ ಮನೆ, ಮುಂದಕ್ಕೆ ನೀಲಕ್ಕನ ಮನೆ ಎದ್ದಿದೆ. ಹಾಗಾಗಿ ಕಾಡಿನ ನೀರು ಇಳಿಯುತ್ತಿದ್ದ ತೋಡಿಗೆ ಅಲ್ಲಲ್ಲಿ ಅಡೆತಡೆಯಿರಬೇಕು ಅಂದುಕೊಂಡು ತೋಡಿನ ಬದಿಗೆ ನಡೆದು ಹೋದಳು.

ಕಾಡಿನ ಒಡ್ಡ ನೀರಿಗಾಗಿ ಒಂದು ಕಾಲದಲ್ಲಿ ಜಗಳವಾಗುತ್ತಿತ್ತಂತೆ. ಸುಗ್ಗಿಯ ಬೆಳೆಗೆ ಒಡ್ಡ ನೀರು ಇಲ್ಲದಿದ್ದರೆ ಗದ್ದೆಗಳೆಲ್ಲಾ ಒಣಗಬೇಕಾಗುತ್ತಿತ್ತು. ಒಡ್ಡ ನೀರಿನ ತೋಡು ಅವರಿಗೆ ಇವರಿಗೆ ಎಂದು ಅಲ್ಲಲ್ಲಿ ಬಾಯಿ ತೆರೆದು ಗದ್ದೆಗಳಿಗೆ ನೀರು ಹೋಗುವಂತಾಗಿತ್ತು. ಈಗ, ಮಳೆಗಾಲಕ್ಕೆ ಆ ನೀರು ಯಾರಿಗೂ ಬೇಡ. ಎಲ್ಲರೂ ಅವರವರು ತೆಗೆದ ಕಡಿಯನ್ನು ಮುಚ್ಚಿದ್ದೆ ನೀರೆಲ್ಲಾ ಹೀಗೆ ಬೆಟ್ಟುಗದ್ದೆಗಳಿಗೆ ಇಳಿದು ಅಂಗಳ, ತೋಟವೆಲ್ಲಾ ನೀರಲ್ಲಿ ಮುಳುಗಿರುವುದು.

ಸಾವಿತ್ರಿ ಮನೆಗೆ ಬಂದವಳೇ, ಗಂಡನಿಗೆ ಹೇಳಿ, ಕೊಟ್ರೆ(ಹಾರೆ) ತೆಗೆದುಕೊಂಡು ಹೋಗಿ ಒಡ್ಡ ನೀರಿನ ತಡೆಗಳನ್ನು ತೆರೆದು ಸಾಂತಕ್ಕನ ಗದ್ದೆಗೂ, ಹಿಂದೆ ಪುರುಷರ ಗದ್ದೆಗೂ ನೀರು ಬಿಟ್ಟು ಬಂದಳು.

ಮಳೆ ಸುರಿಯುತ್ತಿದ್ದರೂ ಸುಮಾರು ಮಧ್ಯಾಹ್ನದ ಹೊತ್ತಿಗೆ ಅಂಗಳದ ನೀರು ಇಳಿದು ಹೋಯಿತು. ಸುಬ್ರಾಯರು ಹೊರಗೆ ಬಂದಾಗ ಆಶ್ಚರ್ಯವಾಯಿತು.

“ನೋಡೆ, ನೀರೆಲ್ಲಾ ಇಳಿದು ಹೋಗಿದೆ” ಮಡದಿಯನ್ನು ಕರೆದು ಅಂದರು.

“ಒಡ್ಡ ನೀರು ಎಲ್ಲಾ ಕಡೆಗೂ ಸರಿಯಾಗಿ ಹೋಗುವ ಹಾಗೆ ಮಾಡಿದೆ. ಅವರಿಗೆ ಇನ್ನೊಬ್ಬರ ಮೇಲೆ ಕನಿಕರ ಊಂಟಾ? ಸುಮ್ಮನ್ನೆ ನಮ್ಮನ್ನು ಹಾಳಾಗಬೇಕೂಂತ ಮಾಡುವುದಲ್ಲವಾ? ನೋಡುವಾ, ನಮಗೆ ದೇವರಿದ್ದಾನೆ” ಅಂದು ನೆರೆಕರೆಯವರ ಬಗ್ಗೆ ಅಸಮಾಧಾನದಿಂದ ನುಡಿದರು.

ನೆರೆಕರೆಯವರೆಲ್ಲಾ ಏನಾದರೂ ಬೇಕಾದರೆ ಸಹಾಯ ಕೇಳಿಕೊಂಡು ಸಾವಿತ್ರಿಯ ಬಳಿ ಬರುತ್ತಿದ್ದರು. ತನ್ನ ಬಳಿ ಸಾಕಷ್ಟು ಇಲ್ಲದಿದ್ದರೂ ಕೈಯೆತ್ತಿ ಕೊಡುವ ಅನ್ನಪೂರ್ಣೆ ಅವಳು. ಗಂಡ ಆ ವಿಷಯದಲ್ಲಿ ಅಸಮಾಧಾನ ತೋರಿಸಿದರೆ, “ಎಂತದು ನೀವು. ಪಾಪ ಅವರಿಗೆ ಸರಿಯಾಗಿ ಮೂರು ಹೊತ್ತು ತಿನ್ನುವುದಕ್ಕೆ ಉಂಟೋ, ಇಲ್ಲವೋ? ಸಣ್ಣ ಸಣ್ಣ ಮಕ್ಕಳಿರುವ ಹೆಂಗಸಲ್ಲವಾ? ಹೊಟ್ಟೆ ತುಂಬಾ ತಿನ್ನಲಿ” ಎಂದು ಅವನನ್ನು ಸಾಂತ್ವನಿಸುತ್ತಿದ್ದಳು.

ಇದೇ ಈ ಸಾಂತಕ್ಕನಿಗೆ ಸೌಖ್ಯವಿಲ್ಲದಾಗ ಹಾಲು, ಮೊಸರು, ಮಜ್ಜಿಗೆಂತ ಅವಳ ಮಗ ಈಸ್ವರ ಬಂದು ಕೇಳುವಾಗ ಕೊಟ್ಟಿದ್ದಳು. ಆದರೆ ಈಗ ಒಡ್ದ ನೀರಿಗೆ ತಡೆ ಹಾಕಿ, ಎಲ್ಲಾ ನೀರು ತನ್ನ ಮನೆಯತ್ತ ಹರಿಯಬಿಟ್ಟಿದು ಮಾತ್ರ ನ್ಯಾಯವಲ್ಲ ಅಂದುಕೊಂಡಳು.

ಮರುದಿನ ಎದ್ದಾಗ ಮತ್ತೆ ಅಂಗಳದಲ್ಲಿ ನೀರು ಮೊಣಗಂಟಿನವರೆಗೂ ನಿಂತಿತ್ತು.

“ಇಲ್ಲ, ಅವರು ನಮ್ಮನ್ನು ಬದುಕುವುದಕ್ಕೆ ಬಿಡುವುದಿಲ್ಲ. ಗದ್ದೆಯ ಕೆಸರೆಲ್ಲಾ ಸಾಂತಕ್ಕನ ಗದ್ದೆಗೆ ಹೋಗಿಯಾಯಿತು. ಇನ್ನು ನೇಜಿ ಕೂಡ ಎದ್ದು ಹೋದರೆ ಈ ವರ್ಷ ಅಂಗಡಿಯಿಂದಲೇ ಐದು ಮುಡಿ ಅಕ್ಕಿ ತೆಗೆದುಕೊಳ್ಳಬೇಕು” ಎಂದು ತನ್ನ ಮನಸ್ಸಿನಲ್ಲಿದ್ದ ನೋವನ್ನು ಗಂಡನಿಗೆ ಹೇಳುವಾಗ ಅವಳ ಕಣ್ಣಿನಲ್ಲಿ ನೀರು ಇಳಿಯಿತು.

“ನೀನೆಂತ ಮಾರಾಯ್ತಿ, ಹೀಗೆ ಬೆಳಿಗೆದ್ದು ಕಣ್ಣೀರು ಹಾಕುವುದು? ಅವರು ಮತ್ತೆ ಕಟ್ಟ ಹಾಕಿ ಬಂದರೂಂತ ಕಾಣ್ತದೆ. ಇರಲಿ ಮಾಡಿಕೊಳ್ಳಲಿ. ನೀನೆ ಹೇಳಿದ್ದಲ್ಲವಾ; ದೇವರಿದ್ದಾನೆ ನಮಗೆ” ಎಂದು ಮಡದಿಯನ್ನು ಸಮಾಧಾನಿಸಿದರಾದರೂ ಅವರಿಗೂ ನೆರೆಕರೆಯವರ ಮೇಲೆ ಬೇಸರವಾಯಿತು.

“ಹೌದು, ನೀವು ಎಷ್ಟು ಸುಲಭದಲ್ಲಿ ಹೇಳುತ್ತೀರಿ. ನಾವು ಅದಕ್ಕೆ ಪಟ್ಟ ಶ್ರಮ ಗೊತ್ತುಂಟಲ್ಲಾ? ಈಗಿನ ಕಾಲದಲ್ಲಿ ಗದ್ದೆಗಳನ್ನು ಇನ್ನೊಬ್ಬರಿಂದ ಉಳುಸುವುದು, ಆಳುಗಳನ್ನು ಹುಡುಕುವುದು ಎಷ್ಟು ಕಷ್ಟಾಂತ ಗೊತ್ತಿಲ್ಲವ ನಿಮಗೆ? ಅವರೆಲ್ಲಾ ಹೀಗೆ ಹೊಟ್ಟೆ ಉರಿಸಿದ್ರೆ ನಾವೆಂತ ಮಾಡುವುದು ಹೇಳಿ?” ಅವಳು ಸೀರೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡು, “ಯಾವುದಕ್ಕೂ ನಾನು ಸಾಂತಕ್ಕನನ್ನು ಮಾತನಾಡಿಸಿಯೇ ಬರುತ್ತೇನೆ” ಎಂದು ಅಂಗಳಕ್ಕೆ ಇಳಿದಳು.

ಹೊರಗೆ ಸುರಿಯುವ ಮಳೆಗೆ ಮನೆಯ ಹೆಬ್ಬಾಗಿಲಿನಲ್ಲಿಯೇ ನಿಂತು ಮೂಗಿನ ಸಿಂಬಳವನ್ನು ತೆಗೆದು ಕೈಯನ್ನು ಒದರಿದ ಸಾಂತಕ್ಕನಿಗೆ ಸಾವಿತ್ರಿ ಬಂದಿದ್ದು ತಿಳಿಯಲಿಲ್ಲ. ಅವಳ ಕೈಯಿಂದ ಹಾರಿದ ಸಿಂಬಳ ಸಾವಿತ್ರಿಯ ಕೊರಂಬಿನ ಮೇಲೆ ಬಿದ್ದು ಕೆಳಗೆ ಇಳಿಯಿತು. ಸಾವಿತ್ರಿಯನ್ನು ಕಂಡೊಡನೆ ಸಾಂತಕ್ಕ ಕೈಯನ್ನು ಒರೆಸುತ್ತಾ ಒಳಗೆ ನಡೆದಳು. ಸಾವಿತ್ರಿ ಕೊರಂಬನ್ನು ತೆಗೆದು ಕೆಳಗಿಟ್ಟು, “ಸಾಂತಕ್ಕ” ಎಂದು ಕರೆದಳು. ಸಾಂತಕ್ಕ ಅವಳನ್ನು ಕಂಡೇ ಇಲ್ಲವೆನ್ನುವಂತೆ ಹೊರಗೆ ಬರುತ್ತಾ, “ಏನು ಅಮ್ಮೋರೆ, ಈ ಮಳೆಗೆ ಹೀಗೆ ಬಂದಿರಲ್ಲಾ?” ಎಂದು ಆಶ್ಚರ್ಯ ತೋರಿಸುತ್ತಾ ಪಕ್ಕದಲ್ಲಿದ್ದ, ಪಸೆಗೆ ಬೂಸ್ಟ್ ಬಂದಿದ್ದ ಮರದ ಕುರ್ಚಿಯನ್ನು ಒರೆಸುತ್ತಾ ಅವಳ ಕಡೆಗೆ ಇಟ್ಟು, “ಬನ್ನಿ ಒಳಗೆ” ಎಂದು ಆಹ್ವಾನಿಸಿದಳು.

ಸಾವಿತ್ರಿ ಹೊರಗೆ ನಿಂತು, “ಸಾಂತಕ್ಕ, ಇದು ಎಂತ ನೀವು? ನಮ್ಮನ್ನು ಬದುಕಲು ಬಿಡುವುದಿಲ್ಲವಾ, ಹೇಗೆ?” ಎಂದು ಕೇಳಲು, ಸಾಂತಕ್ಕ, “ಯಾಕೆ ಹಾಗನ್ನುತ್ತೀರಿ? ನಾನೇನು ಮಾಡಿದೆ?” ಎಂದು ಬೆರಗಿನಿಂದ ಕೇಳಿದಳು. ಸಾವಿತ್ರಿ ಒದ್ದೆ ಕಾಲುಗಳನ್ನು ಕಾಲು ಒರೆಸಲು ಹಾಕಿದ ಗೋಣಿಯ ಚೀಲಕ್ಕೆ ತಿಕ್ಕುತ್ತಾ ಒಳಗೆ ಬಂದು, “ನೋಡಿ, ಆ ಕಾಡಿನ ಒಡ್ಡ ನೀರು ಎಲ್ಲಾ ನಮ್ಮ ತೋಟಕ್ಕೆ ಬಂದು, ತೋಟದಲ್ಲಿ ಮಾತ್ರ ಅಲ್ಲ, ಇಡೀ ಅಂಗಳ, ಗದ್ದೆಯಲ್ಲೆಲ್ಲಾ ಬೊಳ್ಳ ಬಂದ ಹಾಗೆ ಆಗಿದೆ. ಹೀಗೆ ನೀರು ನಿಂತ್ರೆ ತೆಂಗಿನ ಗಿಡಗಳೆಲ್ಲಾ ಏನಾಗಬೇಡ? ಆ ನಿಮ್ಮ ಗದ್ದೆಯ ಪಕ್ಕದ ಪುಣಿಯ ಬರೆಯುಂಟಲ್ಲಾ ಅದು ಜರಿದು ಬಿದ್ರೆ ಏನು ಮಾಡುವುದು?” ಎಂದು ಹೇಳುತ್ತಾ ಕಣ್ಣೀರನ್ನು ಒರೆಸಿಕೊಂಡಳು. ಸಾಂತಕ್ಕನಿಗೆ ಏನನಿಸಿತೋ ಅವಳು, “ಅಲ್ಲಾ, ಅಲ್ಲಿ ಹಿಂದೆ ಪುರುಷರ ಮನೆಯವರು ಅವರ ಗದ್ದೆಗೆ ನೀರು ಬರದ ಹಾಗೆ ಕಟ್ಟ ಹಾಕಿದ್ದಾರೆ. ಕಾಡಿನಿಂದ ಗುದ್ದಳಿಸಿ ಬರುವ ನೀರು ನಮ್ಮ ಗದ್ದೆಗಲ್ಲವಾ ಬರುವುದು? ಆ ನಮನಿ ನೀರು ಬಂದ್ರೆ ಮೊನ್ನೆ ನೆಟ್ಟ ನೇಜಿಯೆಲ್ಲಾ ಹಾಳಾಗುವುದಿಲ್ಲವಾ?”

ಅವರ ಮಾತು ಕೇಳಿ ಸಾವಿತ್ರಿಗೆ ಕೋಪವೂ ಬಂತು. ಅವಳು, “ಹಾಗಾದ್ರೆ ನಿಮ್ಮ ಗದ್ದೆಯ ನೇಜು ಹಾಳಾಗುತ್ತದೆಯಲ್ಲವಾ? ನಮ್ಮ ಗದ್ದೆ, ತೋಟ ಹಾಳಾದ್ರೂ ಪರವಾಗಿಲ್ಲ, ನಿಮ್ಮದು ಏನೂ ಆಗಬಾರದಲ್ಲಾ. ಇರಲಿ, ದೇವರು ನೋಡಿಕೊಳ್ಳಲಿ. ನಾನು ಇನ್ನು ಮಾತನಾಡುವುದಕ್ಕೆ ಬರುವುದಿಲ್ಲ” ಎಂದು ಹೊರಗೆ ಬಂದವಳೇ ಕೊರಂಬು ಹಿಡಿದು ಆ ಮಳೆಯಲ್ಲಿಯೂ ಬಿರಬಿರನೆ ನಡೆದು ಮನೆಗೆ ಬಂದಳು. ಅವಳ ಗಂಡ ಹೊರಗೆ ಮಳೆಯ ನೀರನ್ನೇ ನೋಡುತ್ತಾ ನಿಂತಿದ್ದ.

“ಏನಂತೆ, ಅವರು ಕಟ್ಟ ಹಾಕಿದ್ದಾರಂತೆಯ?” ಆತ ಕೇಳುವಾಗ ಸಾವಿತ್ರಿ, “ಅವರವರದ್ದು ಆದ್ರೆ ಮುಗಿಯಿತು. ಉಳಿದವರ ಚಿಂತೆ ಅವರಿಗೆಂತದು. ಅವರ ಗದ್ದೆಯ ಪೈರು ಹಾಳಾಗುತ್ತದೆಯಂತೆ. ಅವರ ಹಾಗೆ ನಾವೂ ಕಷ್ಟದಿಂದ ನೆಟ್ಟದ್ದಲ್ವಾ? ಯಾಕೆ ಹೀಗೆ ಮಾಡ್ತಾರಾ?” ಎಂದು ನಿಟ್ಟುಸಿರು ಚೆಲ್ಲಿದವಳೇ ಕೊರಂಬನ್ನು ಮೆಟ್ಟಿಲಿನ ಮೇಲೆ ಇಟ್ಟು ಒಳಗೆ ಬಂದಳು.


ಹೀಗೆ ಆವತ್ತು ಕೂಡ ಕುಂಭದ್ರೋಣ ಮಳೆ ಸುರಿದ ನೆನಪು. ಸುಬ್ರಾಯನ ಅಣ್ಣ ದೇವರಾಯ ಭಟ್ಟ ಕಡಾಖಂಡಿತವಾಗಿ ಮಾತು ತೆಗೆಯದೆ ಇರುತ್ತಿದ್ದರೆ ಇನ್ನೂ ಆ ಹಿರಿಯರ ಮನೆಯಲ್ಲಿ ಜೀತದಾಳಿನಂತೆ ದುಡಿಯುವ ಕರ್ಮ ಸುಬ್ರಾಯನಿಗೂ, ಅವನ ಹೆಂಡತಿ ಸಾವಿತ್ರಿಗೂ ತಪ್ಪುತ್ತಿರಲಿಲ್ಲ.

“ಅವರು ಹೇಳಿದರಲ್ಲ, ಇನ್ನು ನಾವು ಇಲ್ಲಿ ನಿಂತರೆ ಮರ್ಯಾದೆ ಉಂಟಾ? ಹೋಗುವ ಎಲ್ಲಿಯಾದರೂ ಬೇಡಿಯಾದರೂ ತಿನ್ನುವ” ಸಾವಿತ್ರಿಯ ಮಾತಿಗೆ ಸುಬ್ರಾಯನಿಗೆ ರೇಗಿತಾದರೂ ಅವಳು ಹೇಳುವುದರಲ್ಲಿ ಸುಳ್ಳಿಲ್ಲವಾದ್ದರಿಂದ, “ನೀನು ಹೀಗೆ ಅವಸರ ಮಾಡಿದರೆ ಹೇಗೆ? ಅಣ್ಣ ಏನೋ ಕೋಪದಿಂದ ಒಂದು ಮಾತು ಅಂದ. ಅದಕ್ಕೆ ಬಾವಿಗೆ ಹಾರಿದರೆ ಆದೀತಾ? ಸ್ವಲ್ಪ ಸಮಯ ಹೋಗಲಿ, ನಾವು ಬೇರೆ ಮನೆ ಮಾಡೋಣ” ಅಂದ ಅವನ ಮಾತು ಸಾವಿತ್ರಿಗೆ ರುಚಿಸಲಿಲ್ಲ. ದಿನಾ ಬೆಳಗಾದರೆ ದನದ ಸೆಗಣಿ ತೆಗೆಯುವುದರಿಂದ ಹಿಡಿದು, ಅವುಗಳ ಹಾಲು ಕರೆದು, ಕಷಾಯ ಮಾಡಿ ತುಂಬಿದ ಮನೆಯಲ್ಲಿರುವ ಎಲ್ಲರಿಗೂ ರುಚಿ ರುಚಿಯಾಗಿ ಮಾಡಿ ಹಾಕುವವರೆಗೆ ಎಲ್ಲಾ ಕೆಲಸಗಳ ಹೊರೆ ಅವಳ ಮೇಲಿತ್ತು. ಕೆಲಸದ ಹೊರೆಯಿಂದಾಗಿ ಕೈಯ ಉಗುರುಗಳ ನಡುವೆ ತುಂಬಿರುವ ಕೊಳಕನ್ನೂ ಶುಚಿಗೊಳಿಸುವಷ್ಟು ಪುರುಸೊತ್ತು ಸಾವಿತ್ರಿಗಿರುತ್ತಿರಲಿಲ್ಲ. ಜೊತೆಗೆ ಅವಳ ಓರಗಿತ್ತಿ ರೋಹಿಣಿಯದ್ದು ಒಂದೇ ಹುಕುಂಗಳು. ‘ಆ ಕೆಲಸ ಆಗ್ಲಿಲ್ಲ, ಈ ಕೆಲಸ ಆಗಿಲ್ಲ; ಅದೆಲ್ಲಾ ಮಾಡೋದು ಯಾರು?’

“ಹೌದು, ಅವರು ಬಾಯಿಗೆ ಬಂದ ಹಾಗೆ ಮಾತನಾಡಲಿ, ನಾವು ಅದನ್ನು ಕೇಳಿಕೊಂಡು ಸುಮ್ಮನಿರುವುದಾ? ಅವರೀಗ ಏನದಂರು, ನಿಮ್ಮ ಕೈಯಲ್ಲಿ ಆಗುವುದಿಲ್ಲವೆಂದದ್ದಲ್ವಾ? ಅವರು ನಿಮ್ಮನ್ನು ಅಷ್ಟೊಂದು ತುಚ್ಛವಾಗಿ ಮಾತನಾಡಿದ್ರೆ ನಾನು ಸುಮ್ಮನಿರುತ್ತೇನಾ? ಇನ್ನು ಮುಂದೆ ನಾನು ಈ ಮನೆಯಲ್ಲಿ ಕೆಲಸ ಮಾಡುವುದಿಲ್ಲ. ಅವರಿಗೆ ಎಲ್ಲಾ ಗೊತ್ತಾಗಲಿ. ನೀವು ಮೊದಲು ಎಲ್ಲಾದರೂ ಸ್ವಲ್ಪ ಜಾಗ ತೆಗೆದು ಹಾಕಿ. ಜೋಪಡಿಯಾದರೂ ಆದೀತು ಕಟ್ಟಿ ಕುಳಿತುಕೊಳ್ಳುವ. ಆದರೆ ಈ ರೀತಿ ಅವರ ಮಾತುಗಳನ್ನು ಕೇಳುವುದು ಬೇಡ” ಎಂದು ಸಾವಿತ್ರಿ ಗಂಡನನ್ನು ಕೇಳಿದಳಾದರೂ, ಮನೆಯನ್ನು ಬಿಟ್ಟು ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸ್ವತ: ಸುಬ್ರಾಯನ ತಾಯಿಯೇ ಬೊಳ್ಳದಲ್ಲಿ ಕೊಚ್ಚಿ ಹೋಗುವ ಮೊದಲ ದಿವಸ ಅವನನ್ನು ಕರೆದು, “ನಿನ್ನ ಅತ್ತಿಗೆ ರೋಹಿಣಿ ಸಾಮಾನ್ಯದ ಹೆಣ್ಣಲ್ಲ. ನೋಡು ನೀನು ಹೀಗೆ ಮೂಕ ಪಶುವಿನ ಹಾಗೆ ಸುಮ್ಮನಿದ್ದರೆ ನಿನ್ನ ಹೆಂಡತಿಯನ್ನು ದುಡಿಸಿಯೇ ತಿನ್ನುತ್ತಾಳೆ. ನಿನಗೂ ಸಂತಾನಾಂತ ನಾಲಕ್ಕು ಮಕ್ಕಳಿದ್ದಾರಲ್ಲಾ? ಅವರನ್ನು ನೀನು ಸಾಕುವುದು ಬೇಡವಾ? ಇಲ್ಲೇ ಗುಡ್ಡದಲ್ಲಿ ಮನೆ ಕಟ್ಟಿ ಕುಳಿತು ಬಿಡು. ಎಲ್ಲಾ ನಾನಿರುವಾಗಲೇ ಆಗಲಿ. ಮತ್ತೆ ದೇವರಾಯ ಕೂಡ ನಿನ್ನ ಮೂಸುವುದಿಲ್ಲ. ಅವನು ದಿಲ್ದಾರ್ ಮನುಷ್ಯ” ಹೇಳಿದ್ದೇ ಮರುದಿವಸ ಎಲ್ಲಿಂದ ಬಂದಿತ್ತೋ ಮಳೆ. ತೋಡಿನಲ್ಲಿ ಹೋಗುತ್ತಿದ್ದ ತೆಂಗಿನ ಕಾಯಿ ಹಿಡಿಯುವುದಕ್ಕೆ ಗದ್ದೆಯ ಬುಡಕ್ಕೆ ಇಳಿದ ಹೆಳೆ, ಅವನ ತಾಯಿಯನ್ನೇ ನೆರೆ ಎಳೆದುಕೊಂಡು ಹೋಗಿತ್ತು. ಅಂದಿಗೆ ಆ ಮನೆಯಲ್ಲಿ ಸುಬ್ರಾಯನ ಸಂಸಾರವನ್ನು ವಹಿಸಿ ಮಾತನಾಡುವವರೆ ಇಲ್ಲವಾಯಿತು. ಸಣ್ಣ ಮಕ್ಕಳನ್ನು ಹಿಡಿದುಕೊಂಡು ಎಲ್ಲಿಗೆ ಹೋಗುವುದು? ಎಂದುಕೊಂಡು ಅವನು ಅಣ್ಣನ ಬೈಗುಳ, ಅತ್ತಿಗೆಯ ಕೊಂಕು ಮಾತುಗಳನ್ನು ಸಹಿಸಿಕೊಂಡು ಕಾಲ ಕಳೆಯುತ್ತಿದ್ದ.

ಆದರೆ ಈಗ ಅದು ಸಾಧ್ಯವಿಲ್ಲವೆನಿಸಿತು. ಸಾವಿತ್ರಿಯದ್ದೂ ಮೊಂಡು ಹಠ. ಎಲ್ಲಿಗೆ ಹೋಗುವುದು? ಯಾರನ್ನು ಕೇಳುವುದು? ಕೈಯಲ್ಲಿ ಅಲ್ಪಸ್ವಲ್ಪ ದುಡ್ಡು ಬಿಟ್ಟರೆ, ಮನೆ ಕಟ್ಟಿ ಕುಳಿತುಕೊಳ್ಳುವಷ್ಟು ಇಲ್ಲ.

“ಸಾವಿತ್ರಿ, ನಾವು ಈ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಜೋಪಡಿಯಲ್ಲಿ ಬದುಕುವುದಕ್ಕೆ ಸಾಧ್ಯ ಉಂಟಾ? ಅವುಗಳಿಗೊಂದು ಸರಿಯಾದ ಬಟ್ಟೆ, ಬರೆ ಉಂಟಾ? ಈಗಲಾದರೆ ಏನೋ ಅಣ್ಣಯ್ಯ, ಅತ್ತಿಗೆ ಅಲ್ಪಸ್ವಲ್ಪ ಕೊಡ್ತಾರೆ. ಇನ್ನು ಮುಂದೆ ಅದನ್ನೆಲ್ಲಾ ನಾವೇ ಮಾಡಿಕೊಂಡು ಹೋಗಬೇಡ್ವಾ?” ತನ್ನ ಸಂಕಟವನ್ನು ತೆರೆದಿಟ್ಟ ಸುಬ್ರಾಯ ಸಣ್ಣ ಮಕ್ಕಳಂತೆ ಅತ್ತೇ ಬಿಟ್ಟ. ಸಾವಿತ್ರಿಗೆ ಅದನ್ನು ಸಹಿಸಲಿಕ್ಕೆ ಆಗಲಿಲ್ಲ.
“ನೀವೆಂತ ಸಣ್ಣ ಮಕ್ಕಳ ಹಾಗೆ ಅಳುವುದು? ನಮ್ಮ ಅಸಹಾಯಕತೆಗೆ ನಾನು ಅಳಬೇಕು. ಅಳಬೇಕಾದವಳೇ ಧೈರ್ಯದಿಂದ ಇದ್ದೇನೆ. ನೀವು ಅಳುವುದು ಸಲ್ಲ. ಸಾಧ್ಯವುಂಟಾ? ನೀವು ಶಾನುಭೋಗರ ಮನೆಗೆ ಹೋಗಿ ಬನ್ನಿ. ಅವರದ್ದು ಕೆಲವು ಗದ್ದೆಗಳನ್ನು ಮಾರುವುದಕ್ಕೆ ಉಂಟಂತ್ತಲ್ವಾ? ಹಾಗಂತ ಉಳುವುದಕ್ಕೆ ಬರುತ್ತಾನಲ್ಲ ಜಯರಾಮ, ಅವನೇ ಅಂದಿದ್ದ” ಎಂದು ಗಂಡನನ್ನು ಸಮಾಧಾನ ಪಡಿಸಿದ ಸಾವಿತ್ರಿ ಮಾಡಲಾರೆನೆಂದ ಮನೆ ಕೆಲಸಗಳನ್ನು ಮಾಡುವುದಕ್ಕೆ ಹೊರಟಳು.
ರಾತ್ರಿ ಹೊತ್ತು ಚಿಮಣಿ ದೀಪದಲ್ಲಿ ಕುಳಿತು ಹೂಬತ್ತಿ ಹೆಣೆಯುತ್ತಿದ್ದ ಸಾವಿತ್ರಿಯ ಬಳಿ ಬಂದ ಸುಬ್ರಾಯ, “ನೀನು ಹೇಳುವುದು ಸರಿ, ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ನಮ್ಮತ್ರ ಎಲ್ಲಿದೆ? ಸುಮ್ಮನೆ ದಾರಿಯಲ್ಲಿ ಬಿದ್ದು ಸಾಯುವುದಾ?” ಅಂದ ಅವನನ್ನು ನೋಡಿ, ತನ್ನ ಓರಗಿತ್ತಿ ಮತ್ತು ಭಾವನ ಕಿವಿಗೆ ಬೀಳದಂತೆ ಅತ್ತಿತ್ತ ನೋಡಿ ಮೆಲು ದನಿಯಲ್ಲಿ, “ನಿಮ್ಮತ್ರ ಸ್ವಲ್ಪ ಉಂಟಲ್ಲಾ? ನನ್ನತ್ರ ಸ್ವಲ್ಪ ಡಬ್ಬಿಯಲ್ಲಿ ಹಾಕಿಟ್ಟದ್ದು ಉಂಟು. ಉಳಿದದ್ದನ್ನ ತಿಂಗಳಿಗೆ ಇಂತಿಷ್ಟೂಂತ ಕೊಡುವ ಆಗಲಿಕ್ಕಿಲ್ಲವಾ?” ಎಂದು ಗಂಡನಿಗೆ ಹೇಳಿ ಅವನಲ್ಲಿ ಧೈರ್ಯ ತುಂಬಿಸಿದಳು.

ಒಂದು ಒಳ್ಳೆಯ ದಿನ ನೋಡಿ ಸುಬ್ರಾಯ, ಶಾನುಭೋಗರ ಮನೆಗೆ ಬಂದ. ಶಾನುಭೋಗರು ಉದ್ದನೆಯ ಆರಾಮ ಕುರ್ಚಿಯಲ್ಲಿ ಕುಳಿತು ಯಾವುದೋ ಹಳೇಯ ಕಾದಂಬರಿಯನ್ನು ಓದುತ್ತಿದ್ದರು. ಸುಬ್ರಾಯ ಅಳುಕುತ್ತಲೇ ಅವರ ಅಂಗಳಕ್ಕೆ ಕಾಲಿಡುವಾಗ ಅವರ ಮಗ ಸತ್ಯವಂತ ಹೊರಗೆ ಬಂದ. ಸುಬ್ರಾಯನನ್ನು ಕಾಣುತ್ತಲೇ, “ಬನ್ನಿ, ಹೀಗೆ ಬಂದಿರೇನು?” ಎಂದು ಕೇಳಿದ.

“ಹೌದು, ಶಾನುಭೋಗರಲ್ಲಿ ಮಾತನಾಡುವುದಿದೆ. ಅವರು ಇದ್ದಾರೇನು?” ಅವರು ಒಳಗಿರುವುದನ್ನು ಗಮನಿಸಿದವನು ಕೇಳುವಾಗ, ಸತ್ಯವಂತ, “ಹೌದು, ಬನ್ನಿ” ಎಂದು ಅವನನ್ನು ಕರೆದು ಜಗುಲಿಯತ್ತ ಕೈ ತೋರಿಸಿದ.
ಬಿಳಿಯ ದೋತರದಲ್ಲಿ ಕಚ್ಚೆ ಬಿಗಿದು, ಕರಿಯ ಕೋಟನ್ನು ಹಾಕಿಕೊಂಡು ಓದುತ್ತಿದ್ದ ಶಾನುಭೋಗರು ಎಲ್ಲಿಗೋ ಹೊರಟಿರುವಂತೆ ಕಂಡರು. ಸುಬ್ರಾಯನನ್ನು ನೋಡುತ್ತಲೇ ಕೈಯಲ್ಲಿದ್ದ ಪುಸ್ತಕಕ್ಕೆ ಒಂದು ಗುರುತು ಇಟ್ಟು, ಅದನ್ನು ಮೇಜಿನ ಮೇಲೆ ಎಸೆದರು.

“ಯಾರು ಇದು?” ಅಂದು, ಮಗ ಸತ್ಯವಂತನನ್ನು ಕರೆದು, “ಸತ್ಯಾ, ಬಂದವರಿಗೆ ನೀರು ಕೇಳಿದಿಯಾ?” ಅಂದರು. ಸುಬ್ರಾಯ ಅಳುಕುತ್ತಲೇ ನಿಂತಿರುವಾಗ ಸತ್ಯವಂತ, “ನೀರು ತರುತ್ತೇನೆ” ಎಂದು ಒಳಗೆ ಹೋದಾಗ ಅವರು ಸುಬ್ರಾಯನತ್ತ ತಿರುಗಿ, “ಹೇಳಿ, ತಾವು ಯಾರು?” ಅಂದರು.

ಸುಬ್ರಾಯ ತನ್ನ ಪರಿಚಯ ಹೇಳಿಕೊಂಡ ಬಳಿಕ, “ಹೋ... ಹೋ... ಗೊತ್ತಾಯಿತು ಬಿಡಿ. ನೀವು ನಮ್ಮ ದೇವರಾಯನ ತಮ್ಮನಲ್ಲವೆ? ಸಾವಿತ್ರಿ ನಿಮ್ಮ ಮಡದಿಯಲ್ಲವೆ? ಹೇಗಿದ್ದಾಳೆ ಅವಳು?” ಎಂದು ಅವರು ತನ್ನ ಮಡದಿಯನ್ನು ಕುರಿತು ಕೇಳುವಾಗ ಸುಬ್ರಾಯನಿಗೆ ಎದೆ ಧಸಕ್ಕೆಂದಿತು.

ಶಾನುಭೋಗರ ವಿಷಯ ತಿಳಿಯದವನೇನಲ್ಲ. ಮೈಯಲ್ಲಿ ಸುಕ್ಕುಗಳು ಮೂಡಿದ್ದರೂ ತನಗಿನ್ನೂ ಮೂವತ್ತಾರು ಅನ್ನುವ ವ್ಯಕ್ತಿ. ಊರಿನ ಎಲ್ಲಾ ಮನೆಯ ಹೆಂಗಸರ ಹೆಸರು ಅವರ ನಾಲಿಗೆಯ ತುದಿಯಲ್ಲಿತ್ತು. ಎಲ್ಲೇ ಸಮಾರಂಭಗಳಾಗಲಿ ಅವರಿಗೆ ಕಾಣುತ್ತಿದ್ದುದು, ಪಟ್ಟೆ ಸೀರೆಯುಟ್ಟು ಅತ್ತಿತ್ತ ಹೋಗುವ ಹೆಂಗಸರು. ಅವರನ್ನು ಕೈಯಲ್ಲಿ ಹಿಡಿದು ನಿಲ್ಲಿಸಿ ಮಾತನಾಡುವುದು ಅವರ ಜಾಯಮಾನ. ಕೆಲವರಿಗೆ ಅದು ಆಗದಿದ್ದರೂ ಹಿರಿಯರು ಅನ್ನುವ ಗೌರವದಿಂದ ನಿಂತು ಮಾತನಾಡುತ್ತಿದ್ದರು. ಯಾರಾದರೂ ಸ್ವಲ್ಪ ಹೆಚ್ಚಿಗೆ ನಡೆದುಕೊಂಡರೆ, “ಇವತ್ತು ಮನೆಯ ಕಡೆಗೆ ಬರುತ್ತೇನೆ” ಅನ್ನುವ ಅಸಾಮಿ. ಅಂತವರ ಬಾಯಿಯಿಂದ ಈ ರೀತಿಯ ಮಾತು ಬಂದಾಗ ಅವನಿಗೆ ಹೆದರಿಕೆಯಾಯಿತು. ಅವನು ಮೆಲ್ಲನೆ, “ತಾವು ಗದ್ದೆಗಳನ್ನು ಮಾರುವುದು ಇದೆಯಂತೆ” ಅಂದು ಅವರ ಮುಖವನ್ನು ನೋಡಿದ. ಅವರ ಮುಖ ಬದಲಾಯಿತು.

“ಹಾಗಂತ ಯಾರಂದರು ನಿನಗೆ?” ದರ್ಪದಿಂದ ಅವರು ಕೇಳುವಾಗ ಸುಬ್ರಾಯ ಉಚ್ಚೆ ಹೊಯ್ಯುವುದೊಂದೇ ಬಾಕಿಯಾಗಿತ್ತು. ಅದಲ್ಲದೆ ಸಾವಿತ್ರಿಯ ಮೇಲೆ ಕೋಪವೂ ಬಂತು.

“ಅದು... ಅದು... ಸಾವಿತ್ರಿನೇ ಹೇಳಿದ್ದು” ಎಂದು ಅವನು ಅಳುಕುತ್ತಲೇ ಹೇಳುವಾಗ ಆರಾಮ ಕುರ್ಚಿಯಿಂದ ಎದ್ದು ಅವನಿಗೆ ಎದುರಾಗಿ ಮರದ ಕುರ್ಚಿಯಲ್ಲಿ ಕುಳಿತವರೇ ಸೊಗಸಾಗಿ ನಕ್ಕರು.

“ಸಾವಿತ್ರಿಗೆ ಎಲ್ಲಾ ವಿಷಯ ಗೊತ್ತಾಗುತ್ತದೆ ಅನ್ನು. ಅವಳು ಹೇಳಿದ್ದು ಸರಿ. ನೀನು ಅವಳ ಕೂಡಿಕೊಂಡೇ ಬರಬಹುದಿತ್ತಲ್ಲಾ? ಒಬ್ಬನೆ ಬಂದದ್ದು ಯಾಕೆ?” ಎಂದು ಅವರು ಹೇಳುವಾಗ ಸುಬ್ರಾಯನಿಗೆ ಉಗುಳು ನುಂಗುವಂತಾಯಿತು. ‘ಛೆ, ಇಂತಹ ಕಚ್ಚೆ ಹರುಕ ವ್ಯಕ್ತಿಯ ಬಳಿ ಕ್ರಯವಿಕ್ರಯದ ಮಾತನಾಡುವುದಕ್ಕೆ ಬಂದ್ದದ್ದು ತಪ್ಪಾಯಿತು’ ಅಂದುಕೊಂಡ.

“ಸರಿ, ನಿನ್ನತ್ರ ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ಉಂಟಾ ಮಾರಾಯಾ? ಅಲ್ಲ, ನಿನ್ನ ಅಣ್ಣ ದೇವರಾಯ ನಿನಗೆ ಪಾಲು ಕೊಡುವುದಿಲ್ಲಾಂತ ಹೇಳಿದ್ದಾನಾ, ಹೇಗೆ?” ಎಂದು ಅವರು ಪ್ರಶ್ನಿಸಲು ಸುಬ್ರಾಯನಿಗೆ ಏನು ಹೇಳುವುದೆಂದು ತೋಚಲಿಲ್ಲ. ಅವನು ತಲೆ ತಗ್ಗಿಸಿಕೊಂಡು, “ಅಣ್ಣಯ್ಯನೇ ಮನೆ ಬಿಟ್ಟು ಹೋಗು ಅಂದ. ಆಸ್ತಿ ಕೇಳಿದರೆ ಇಲ್ಲ ಅನ್ನುತ್ತಾನೆ. ಅದಕ್ಕೆ ಏನಾದರೂ ಮಾಡಿ ಸ್ವಲ್ಪ ಜಾಗ ತೆಗೆದುಕೊಳ್ಳುವುದೆಂದು ಬಂದೆ” ಅಂದಾಗ ಅವರು ಗಹಗಹಿಸಿ ನಕ್ಕರು.

“ಅಂತೂ ಒಂದು ನಿರ್ಧಾರಕ್ಕೆ ಬಂದೇ ಇಲ್ಲಿಗೆ ಬಂದಿದ್ದೀಯಾ ಅನ್ನು. ಸರಿ” ಎಂದು ಅವನತ್ತ ಬಾಗಿ ಮೆಲ್ಲನೆ ಗುಟ್ಟಿನಲ್ಲಿ, “ಎಷ್ಟು ಹಣ ಉಂಟನಾ ನಿನ್ನತ್ರ? ಹೇಗೆ ಹಣ ಹೊಂದಿಸ್ತೀಯಾ? ಸಾವಿತ್ರಿ ಏನಾದರೂ...” ಅಂದವರೇ ಮೈ ಕುಲುಕಿಸಿ ನಕ್ಕರು. ಸುಬ್ರಾಯನ ಮೈ ಉರಿದು ಹೋಯಿತು. ‘ಎಂತದು, ಇವರು ಈ ರೀತಿ ಮಾತನಾಡುವುದು. ಸಾವಿತ್ರಿ ಹೇಳಿದ ಹಾಗೆ ನಾನು ಪಾಪದವನೂಂತ ಈ ರೀತಿ ಮಾತನಾಡುತ್ತಾರಾ ಹೇಗೆ?’ ಎಂದು ಯೋಚಿಸಿದ ಸುಬ್ರಾಯ, “ಶಾನುಭೋಗರೆ, ಕೈಯಲ್ಲಿ ಹಣ ಇರುವುದರಿಂದಲೇ ಇಲ್ಲಿಗೆ ಬಂದಿದ್ದೇನೆ. ತಾವು ದಯವಿಟ್ಟು ದೊಡ್ಡ ಮನಸ್ಸು ಮಾಡಿ ಒಂದೆರಡು ಗದ್ದೆಗಳನ್ನು ಕೊಟ್ಟರೆ ಉಪಕಾರವಾದೀತು” ಎಂದು ಧೈರ್ಯ ತಂದುಕೊಂಡು ನುಡಿದ. ಶಾನುಭೋಗರ ಮುಖ ವಿವರ್ಣವಾಯಿತು. ಏನೋ ಆಲೋಚಿಸಿದವರು ಒಮ್ಮೆಲೆ ಗಂಭೀರವಾಗಿ ಕುಳಿತರು.

“ನೋಡು, ಸಾವಿತ್ರಿ ಹೇಳಿದ್ದಾಳೆಂದ ಮೇಲೆ ಮುಗಿಯಿತು. ಎರಡು ಗದ್ದೆ ನಾನು ಮಾರುತ್ತೇನೆ. ಹಣದ ಜೊತೆಗೆ ಬಂದರೆ ಎಲ್ಲಾ ಇತ್ಯರ್ಥ ಮಾಡಿ ಬಿಡುವ. ಈಗ ಹೋಗು. ಸತ್ಯಾ, ನೀರು ಎಲ್ಲಿಟ್ಟೆ? ನೋಡು ಅವನು ಹೊರಡುತ್ತಾನೆ. ನೀರು ಕೊಡು” ಅಂದಾಗ ಸತ್ಯವಂತ ಕಂಚಿನ ತಂಬಿಗೆಯಲ್ಲಿ ನೀರು ತಂದು ಅವನ ಕೈಯಲ್ಲಿಟ್ಟ. ಸುಬ್ರಾಯ ನೀರು ಕುಡಿದು ಜಾಗ ಖಾಲಿ ಮಾಡಿದ.

ಸುಬ್ರಾಯ ಮನೆಗೆ ಬಂದವನೇ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ಸಾವಿತ್ರಿಯ ಮುಂದೆ ಹೇಳಿದ. ಅವಳಿಗಾದರು ಶಾನುಭೋಗರು ಒಪ್ಪಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿತ್ತು.

ಅವಳು ಒಂದು ದಿನ ತನ್ನ ಬಳಿಯಿದ್ದ ಸ್ವಲ್ಪ ಹಣ, ಗಂಡನ ಬಳಿಯಿದ್ದ ಹಣವನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ಸುಬ್ರಾಯನ ಜೊತೆಗೆ ಶಾನುಭೋಗರ ಮನೆಗೆ ಬರುವಾಗ ಅವರು ಕುರ್ಚಿಯಿಂದ ಎದ್ದು ಬಂದು ಅವರನ್ನು ಸ್ವಾಗತಿಸಿದರು. ಮನೆಯಲ್ಲಿ ಮಗ ಇಲ್ಲದಿರುವುದು ಅವರಿಗೆ ಅನುಕೂಲವೇ ಆಗಿತ್ತು.

“ಬಾ ಸಾವಿತ್ರಿ ಬಾ... ತುಂಬಾ ಸೊರಗಿ ಹೋಗಿರೋ ಹಾಗಿದೆ. ನಿನ್ನ ಓರಗಿತ್ತಿಯ ಕಾಟ ಅತಿಯಾಯಿತು ಅಂತ ಕಾಣುತ್ತದೆ. ಇರಲಿ ಬಿಡು, ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದೀಯಾ. ನಿನಗೆ ಎಂತಹ ಗದ್ದೆ ಬೇಕು ಹೇಳು? ನಿನಗೆ ಬಡಗು ಮನೆ ಗೊತ್ತಲ್ಲಾ? ಅವರ ಮನೆಯ ಹತ್ತಿರ ಎರಡು ಒಳ್ಳೆಯ ಗದ್ದೆಗಳಿವೆ. ಅದನ್ನು ಕೊಡುತ್ತೇನೆ. ಅದೂ ನಿನಗೆ ಕಡಿಮೆಯ ಬೆಲೆಯಲ್ಲಿಯೇ ಕೊಡುತ್ತೇನೆ” ಅಂದವರು ಇಬ್ಬರಿಗೂ ಕುಳಿತುಕೊಳ್ಳಲು ಸೂಚಿಸಿದರು. ಅವರಿಬ್ಬರೂ ಮರದ ಬೆಂಚಿನಲ್ಲಿ ಕುಳಿತು ಸುಧಾರಿಸುವಾಗ ಮನೆ ಕೆಲಸದ ಹೆಂಗಸು ಉದ್ದನೆಯ ಲೋಟದಲ್ಲಿ ಶರಬತ್ತು ತಂದು ಅವರಿಬ್ಬರ ಕೈಯಲ್ಲಿಟ್ಟರು.

ಶರಬತ್ತು ಕುಡಿದ ಬಳಿಕ ಶಾನುಭೋಗರು ಹೊರಟು ಬಂದವರೇ, “ಬನ್ನಿ, ಆ ಜಾಗ ತೋರಿಸುತ್ತೇನೆ” ಎಂದು ಅವರನ್ನು ಕರೆದುಕೊಂಡು ಬಡಗು ಮನೆಯತ್ತ ಬಂದರು. ಎರಡು ಗದ್ದೆಗಳನ್ನು ತೋರಿಸಿ, “ಒಟ್ಟು ಹತ್ತು ಕೊಯ್ಲು ಗದ್ದೆಗಳಿವು” ಎಂದು ತಮ್ಮ ಗದ್ದೆಯನ್ನು ತೋರಿಸಿದರು. ಸುತ್ತಮುತ್ತಲು ಮನೆಗಳಿಲ್ಲದಿದ್ದರೂ ಸಾವಿತ್ರಿಗೆ ಗದ್ದೆಗಳು ಹಿಡಿಸಿದವು. ಪಕ್ಕದಲ್ಲಿ ಕಾಡು, ಗದ್ದೆಯ ಬದಿಗೆ ಭೂತದ ಬನವು ಇತ್ತು. ಜೊತೆಗೆ ಎತ್ತರ ಎತ್ತರದ ತೇಗದ ಮರಗಳು ಇದ್ದವು. ಮನೆ ಕಟ್ಟಿಸುವುದಿದ್ದರೆ ಬೇಕಾದ ಮರಗಳು ಇರುವುದರಿಂದ ಕಣ್ಣು ಮುಚ್ಚಿಯೇ ಸಾವಿತ್ರಿ ಒಪ್ಪಿಕೊಂಡಳು.

“ಹೇಗಿದೆ ಜಾಗ? ಹಿಡಿಸಿತಾ...?” ಶಾನುಭೋಗರು ಸಾವಿತ್ರಿಯನ್ನು ಕೇಳುವಾಗ ಅವಳು, “ತುಂಬಾ ಚೆನ್ನಾಗಿದೆ. ನಮಗಂತೂ ಹಿಡಿಸಿದೆ” ಎಂದು ಆ ವಿಷಯವನ್ನು ಮುಗಿಸುವಂತೆ ಹೇಳಿದಳು.

ಅಂತೂ ಕೈಯಲ್ಲಿದ್ದ ಹಣವನ್ನು ಕೊಟ್ಟು, ಉಳಿದ ಹಣವನ್ನು ಹೊಂದಿಸಿ, ಒಂದೆರಡು ವಾರದಲ್ಲಿ ಹತ್ತು ಕೊಯ್ಲಿನ ಎರಡು ಗದ್ದೆಗಳು ಸುಬ್ರಾಯ ಹೆಸರಿಗೆ ಮಾಡಿಯಾಗಿತ್ತು.

ಸ್ವತ: ಶಾನುಭೋಗರೇ ಅವರನ್ನು ಕರೆದುಕೊಂಡು ಗದ್ದೆಯನ್ನು ಅದಕ್ಕೆ ಸಂಬಂಧಪಟ್ಟ ಕ್ರಯಪತ್ರಗಳನ್ನು ಅವರ ಕೈಯಲ್ಲಿಟ್ಟು, “ಉತ್ತರೋತ್ತರ ಅಭಿವೃದ್ಧಿಯಾಗಲಿ. ಈ ಜಾಗದ ದೈವ ಕೂಡ ನಿಮಗೆ ಒಳ್ಳೆಯದನ್ನು ಮಾಡಲಿ” ಎಂದವರೆ ತಮ್ಮ ಕರಿಯ ಕೋಟನ್ನು ಅಗಲಕ್ಕೆ ಬಿಡಿಸಿ, ಮರದ ಬೊಡ್ಡೆಯ ಬಳಿ ಕುಳಿತರು.

ಸಾವಿತ್ರಿಗೆ ಆಶ್ಚರ್ಯವಾಯಿತು. ಅವರು ಕುಳಿತಿದ್ದಕ್ಕೆ ಅಲ್ಲ. ಬದಲಾಗಿ ಅವಳು ಮನೆ ಕಟ್ಟಲು ಮರಗಳನ್ನು ಯಾವಾಗ ನೋಡಿದ್ದಳೋ ಆ ತೇಗದ ಮರಗಳು ಒಂದು ವಾರದಲ್ಲಿ ಮಾಯವಾಗಿದ್ದವು!

“ಅಲ್ಲಾ, ಇಲ್ಲಿದ್ದ ಅಷ್ಟು ದೊಡ್ಡ ತೇಗದ ಮರಗಳು ಏನಾದವು?” ಎಂದು ಅವಳು ಶಾನುಭೋಗರನ್ನು ಕೇಳುವಾಗ ಅವರು ಕುಳಿತಲ್ಲಿಂದಲೇ, “ಎಲ್ಲಿ... ಎಲ್ಲಿ...? ಇಲ್ಲಿ ಮರಗಳೇ ಇರಲಿಲ್ಲವಲ್ಲ” ಎಂದು ಮರದ ಬೊಡ್ಡೆ ಕಾಣದಂತೆ ಮತ್ತೊಮ್ಮೆ ತಮ್ಮ ಕೋಟನ್ನು ಸರಿಪಡಿಸಿಕೊಂಡು ಕುಳಿತರು. ಹೀಗೆ ಕಣ್ಣೆದುರೇ ಮಾಯವಾದ ಮರಗಳನ್ನು ನೆನೆದು ಅವಳಿಗೆ ಸಂಕಟವಾಯಿತು. ಏನಿಲ್ಲವೆಂದರೂ ಎರಡು ಮನೆ ಕಟ್ಟುವಷ್ಟು ಮರಗಳಿದ್ದವು. ಕತ್ತಲೆಯವರೆಗೂ ಅಲ್ಲೇ ಕುಳಿತಿದ್ದ ಅವರು ಹೊರಟ ಬಳಿಕ ಸಾವಿತ್ರಿ ಗಂಡನಿಗೆ, “ಆಯ್ತಲ್ಲಾ ಇನ್ನು ಮುಂದೆ ಗುಡಿಸಲೋ, ಅರಮನೆಯೋ ಇಲ್ಲೇ ಇರೋಣ” ಅಂದಳು.

ಕೂಡಲೇ ಸಾಲ ಸೋಲ ಮಾಡಿ ಮನೆಯನ್ನು ಕಟ್ಟಿ ಮುಗಿಸುವುದೆಂದು ನಿರ್ಧರಿಸಿ ಆಗಿತ್ತು.

ದೇವರಾಯ ಮನೆಗೆ ಬಂದವನೇ ತಮ್ಮನನ್ನು ಕರೆದು, “ಏನು, ನೀನು ಶಾನುಭೋಗರ ಮನೆಗೆ ಹೋಗಿದ್ದೀಯಂತೆ. ನ್ಯಾಯ ಕೇಳುವುದಕ್ಕಾ? ನಿನಗೆ ನಾನು ಆಸ್ತಿ ಕೊಡುವುದಿಲ್ಲವೆಂದು ಹೋದದ್ದಾ? ನಿನಗೆ ಊರಿನವರೆ ಮುಖ್ಯವಾದರೆ ನಾನು ಆಸ್ತಿ ಕೊಡುವುದೇ ಇಲ್ಲ. ಶಾನುಭೋಗರಲ್ಲ, ಪಟೇಲರಾದರೂ ಬರಲಿ” ಎಂದು ಸಿಟ್ಟು ಕಾರಿಕೊಂಡಾಗ ಸಾವಿತ್ರಿ ಕೆಲಸ ನಿಲ್ಲಿಸಿ ಹೊರಗೆ ಬಂದವಳೇ, “ನಾವು ಹೋಗಿದ್ದು ನ್ಯಾಯ ಕೇಳುವುದಕ್ಕಲ್ಲ. ಬಡಗು ಮನೆಯ ಹತ್ತಿರದ ಗದ್ದೆಗಳನ್ನು ಮಾರುತ್ತಾರೆಂತ ಹೇಳಿದ್ರು. ಅದನ್ನು ತೆಗೆದುಕೊಳ್ಳುವುದಕ್ಕೆ ಹೋಗಿದ್ದೆವು” ಅನ್ನುವಾಗ ದೇವರಾಯ ಸಾವಿತ್ರಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ.

“ಅಂದ್ರೆ, ಮನೆ ಬಿಟ್ಟು ಹೋಗುವ ನಿರ್ಧಾರವಾ? ಇಲ್ಲಿ ಉಣ್ಣುವುದಕ್ಕೆ, ತಿನ್ನುವುದಕ್ಕೆ ಏನು ಕಡಿಮೆಯಿತ್ತು? ಹೋಗಿ, ಹಾಳಾಗಿ ಹೋಗಿ. ನಿಮಗೆ ಬುದ್ಧಿ ಬರಲಿ” ಎಂದು ಕಾಲು ಜಾಡಿಸಿ ಎದ್ದ ದೇವರಾಯ, ತಮ್ಮನ ಕಡೆಗೆ ಕೆಂಡದಂತ ನೋಟ ಬೀರಿದ. ಸುಬ್ರಾಯನ ಕೈ, ಕಾಲುಗಳು ನಡುಗಿದವು. ಅವನು ಸಾವಿತ್ರಿಯತ್ತ ನೋಡುವಾಗ ರೋಹಿಣಿ ಹೊರಗೆ ಬಂದವಳೇ, “ಅಂತು ನೀನು ಗಟ್ಟಿಗತ್ತಿಂತ ತೋರಿಸಿದಿ. ಅಲ್ಲಿ ಹೋಗಿ ದುಡಿಯುವಾಗ ನಿನಗೆ ತಿಳಿಯುತ್ತದೆ” ಎಂದು ಹೂಂಕರಿಸಿ ಹೋದಾಗ ಸಾವಿತ್ರಿಗೂ ನಡುಕ ಶುರುವಾಯಿತು. ‘ಅವರೆಲ್ಲ ಹೆದರಿಸುತ್ತಿದ್ದಾರಾ? ಅಥವಾ ಬೇರೆ ಹೋಗಿ ಸಂಸಾರ ಮಾಡುವುದಕ್ಕೆ ಆಗುವುದಿಲ್ಲವೆಂದು ಬುದ್ಧಿ ಹೇಳುತ್ತಿದ್ದಾರ?’ ಎಂದು ತಿಳಿಯಲಿಲ್ಲ.

ಕೊನೆಗೂ ಧೈರ್ಯದಿಂದ ಗದ್ದೆಯ ನಡುವೆ ಮಾಡು ಬಗ್ಗಿಸಿ ಕುಳಿತಿದ್ದಾಯಿತು. ಪಕ್ಕಕ್ಕೆ ತೋಟಗಳು, ಹಿಂದೆ ಮುಂದೆ ಭತ್ತದ ಗದ್ದೆಗಳನ್ನು ಬಿಟ್ಟು, ಮನೆಯ ಎದುರಿಗೆ ಒಂದು ಬಾವಿ ತೋಡಿ, ಸಂಸಾರ ಹೂಡಿದ್ದಾಯಿತು. ಕೈಲಾಗದ ಕೆಲಸವೆಂದು ಸುಮ್ಮನೆ ಕುಳಿತಿರದೆ, ಅವರಿವರ ಮನೆಯ ನಾಟಿ, ಕೊಯ್ಲು ಕೆಲಸಕ್ಕೂ ಹೋಗಿ ಬರುತ್ತಿದ್ದ ಸಾವಿತ್ರಿ ಮತ್ತು ಸುಬ್ರಾಯರ ಬದುಕು ಅಂತು ಒಂದು ಅರ್ಥ ಪಡೆದುಕೊಂಡು ನೆಮ್ಮದಿಯಿಂದ ಇರುವಂತಾಗಿತ್ತು.

ಆದರೆ ಈಗ ಎಂದೂ ಇಲ್ಲದ ಹೊಸ ಸಮಸ್ಯೆಯೊಂದು ಉದ್ಭವಿಸಿದ್ದು ಆತಂಕಕ್ಕೆ ಕಾರಣವಾಗಿತ್ತು. ಗದ್ದೆಯ ನಡುವಿನ ಮನೆ ಬೇರೆ. ಮಳೆ ನೀರು ನಿಂತರೆ ಕೇಳುವುದಕ್ಕೆ ಉಂಟಾ? ಪಂಚಾಂಗದೊಳಗೆ ನೀರು ಹೋದರೆ ಹೇಗೆ? ರಾತ್ರಿ ಹಗಲು ನಿದ್ದೆಯಿಲ್ಲದೆ ತೊಳಲಾಡುವಂತಾಯಿತು. ಮಳೆ ಬೇರೆ ನಿಲ್ಲುವ ಸೂಚನೆಯಿಲ್ಲ.ಆಕಾಶವೇ ತೂತಾಗಿದೆಯೋ ಏನೋ? ಹೀಗೆ ದಿನಗಳು ಕಳೆಯುತ್ತಿದ್ದವು.

ಸಾವಿತ್ರಿ ಅಕ್ಕಿ ಆರಿಸಿ, ಕುದಿಯುವ ನೀರಿಗೆ ಹಾಕಿ ಹೊರಗೆ ಬರುವಷ್ಟರಲ್ಲಿ ಸಾಂತಕ್ಕ ಓಡಿಕೊಂಡು ಬರುತ್ತಿರುವುದು ಕಾಣಿಸಿತು. ಅವಳು ಹೊರಕ್ಕೆ ಇಣುಕುವಾಗ ಸುಬ್ರಾಯ ಅವಸರವಸರವಾಗಿ ಒಳಗೆ ಬಂದು, “ಇಕ್ಕಳೆ, ನಿಂಗೆ ವಿಷಯ ಗೊತ್ತುಂಟಾ? ಅವ ಸಾಂತಕ್ಕನ ಮಗ ಈಸ್ವರ ನೆರೆಯಲ್ಲಿ ಮೀನು ಹಿಡಿಯುವುದಕ್ಕೆ ಹೋಗಿದ್ದಂತೆ. ಅವನು ಬೊಳ್ಳದಲ್ಲಿ ಬಿದ್ದಿದ್ದಾನೆಂತ ಹೇಳ್ತಿದ್ದಾರೆ” ಅನ್ನುವಾಗ ಸಾವಿತ್ರಿಗೆ ಜೀವವೇ ಕೈಯಲ್ಲಿ ಬಂದಂತಾಯಿತು. ಎಷ್ಟೆಂದರೂ ಕಷ್ಟಕ್ಕಾಗುವವಳು ಅವಳು. ಗಂಡನಿಗೆ ಒಲೆಯನ್ನು ನೋಡಿಕೊಳ್ಳಲು ಹೇಳಿ ಹಿರಿಯ ಮಗನನ್ನು ಕರೆದುಕೊಂಡು ನೆರೆಯ ಕಡೆಗೆ ಧಾವಿಸಿದಳು. ಆಗಲೆ ರಾಮ, ಗೋವಿಂದ, ಚೀಂಕ್ರ ಎಲ್ಲಾ ಸೇರಿದ್ದರೂ ಸುಳಿಯಿರುವ ಬೊಳ್ಳಕ್ಕೆ ಇಳಿಯುವ ಸಾಹಸ ಯಾರೂ ಮಾಡಿರಲಿಲ್ಲ. ಸಾವಿತ್ರಿ ಅತ್ತಿತ್ತ ನೋಡಿ ಮೆಲ್ಲನೆ ಗದ್ದೆಯ ನೀರಿನಲ್ಲಿ ಇಳಿದು ಈಜುತ್ತಾ ಸಾಗುವಾಗ ಈಸ್ವರ ಕೇದಗೆಯ ಬನದಲ್ಲಿ ಸಿಕ್ಕಿ ಬಿದ್ದಿರುವುದು ಕಾಣಿಸಿತು. ಅವಳು ಈಸ್ವರನನ್ನು ಹಿಡಿದು ಮೇಲಕ್ಕೆ ಎಳೆದುಕೊಂಡು ಬರುವಾಗ ನಿಂತಿದ್ದ ಗಂಡಸರ ಮುಖ ನಾಚಿಕೆಯಿಂದ ತಗ್ಗಿತು.

“ಅಮ್ಮೋರೆ, ನನ್ನ ಮಗನ ಪ್ರಾಣ ಉಳಿಸಿದಿರಿ. ನಿಮ್ಮ ಋಣ ಹೇಗೆ ತೀರಿಸುವುದು?” ಅನ್ನುತ್ತಾ ಸಾಂತಕ್ಕ ಅವಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಳು. “ಸಾಂತಕ್ಕ , ಇದೆಲ್ಲಾ ಎಂತ? ನೆರೆ ಕರೆಯೆಂದರೆ ಇಷ್ಟು ಮಾಡದಿದ್ದರೆ ಹೇಗೆ?” ಅಂದು ಜನರಿಂದ ಬಿಡಿಸಿಕೊಂಡು ಮನೆಗೆ ಬರುವಾಗ ಹಿಂದಿನ ಮನೆಯವರು ನಿಂತಿದ್ದರು. ಅವರು ಸಾವಿತ್ರಿಗೆ ಕೈ ಮುಗಿದು, “ತಾಯಿ, ನಮ್ಮಿಂದ ದೊಡ್ಡ ತಪ್ಪಾಗಿದೆ. ದಯವಿಟ್ಟು ಮನ್ನಿಸಬೇಕು” ಅಂದಾಗ ಅವನ ಮಾತು ಅರ್ಥವಾಗಲಿಲ್ಲ. ಅವಳು ಅವರನ್ನೇ ನೋಡುತ್ತಿರಬೇಕಾದರೆ ಅವನು, “ಕಾಡಿನ ಒಡ್ಡ ನೀರಿಗೆ ಕಟ್ಟ ಹಾಕಿದ್ದೇ ಈಗ ನಮ್ಮ ದೊಡ್ಡ ಬರೆ ಜರಿದು ಬಿತ್ತು. ಇದ್ದ ಬೆಳೆಯೆಲ್ಲಾ ಮಣ್ಣು ಬಿದ್ದು ಹಾಳಾಯಿತು” ಅನ್ನುವಾಗ ಅವಳು, “ನೋಡಿ, ನಮ್ಮ ಸಂಕಟ ಯಾರ ಹತ್ತಿರ ಹೇಳುವುದು? ಮನೆಯ ಪಂಚಾಂಗಕ್ಕೂ ನೀರು ಹೋಗಿ ಮನೆಯೇ ಕುಸಿಯುವ ಪರಿಸ್ಥಿತಿಯಾಗಿದೆ. ಕಂಗು, ತೆಂಗೆಲ್ಲಾ ಹಾಳಾದ ಹಾಗೆ. ನೀವು ಅರ್ಥ ಮಾಡಿಕೊಳ್ಳಲಿಲ್ಲ. ಸಾಂತಕ್ಕನಿಗೂ ಅರ್ಥವಾಗಲಿಲ್ಲ. ಇರಲಿ ದೇವರುಂಟು” ಅಂದು ನಿಟ್ಟುಸಿರಿಟ್ಟಾಗ ಏನೋ ಭಾರೀ ಸದ್ದಾಯಿತು. ಅವಳು ಹೊರಗೆ ಧಾವಿಸಿ ಬರುವಷ್ಟರಲ್ಲಿ ಮನೆಯ ಒಂದು ಗೋಡೆ ಕುಸಿದು ಬಿತ್ತು. ಸುಬ್ರಾಯ ತಲೆ ಚಚ್ಚಿಕೊಂಡು ಅತ್ತರೆ ಅವಳು, “ಎಂತ ಇದು ನೀವು? ಮನೆ ಬಿದ್ದಿಲ್ಲವಲ್ಲಾ, ಅದಕ್ಕೆ ಸಮಾಧಾನ ಪಡಬೇಕು” ಎಂದು ಮಕ್ಕಳನ್ನು ಕರೆದು ಅತ್ತ ಹೋಗದಂತೆ ಹೇಳಿದಳು.

ಅಲ್ಲೇ ನಿಂತಿದ್ದ ಹಿಂದಿನ ಮನೆಯ ಗಂಡಸು, “ಅಮ್ಮೋರೆ, ನಿಮ್ಮ ಮನೆಯನ್ನು ಸರಿಮಾಡಿಕೊಡುವ ಕೆಲಸ ನಾನು ಮಾಡುತೇನೆ. ನೀವು ನಮಗೆ ಮನೆ ಕಟ್ಟುವುದಕ್ಕೆ ಜಾಗ ಬಿಟ್ಟುಕೊಟ್ಟಿದ್ದೀರಿ. ನಿಮ್ಮ ಋಣವನ್ನು ತಿರಿಸಿದ ಹಾಗಾಗುತ್ತದೆ” ಅಂದಾಗ ಸಾವಿತ್ರಿಗೆ ಆಶ್ಚರ್ಯವಾಯಿತು. ಆಗ ಆ ಗಂಡಸೆ, “ನಾವು ಮನೆ ಕಟ್ಟಿ ಕುಳಿತಿರುವ ಜಾಗ ಉಂಟಲ್ಲಾ ಅದು ನಿಮ್ಮದಂತೆ. ನಾವು ಪಂಚಾಯತಿಯಲ್ಲಿ ವಿಚಾರಿಸಿದಾಗ ಗೊತ್ತಾಯಿತು. ನಿಮ್ಮ ಹತ್ತು ಕೊಯ್ಲು ಜಾಗದ್ದೇ ಒಂದು ಭಾಗ ಅದು” ಅಂದಾಗ ಅವಳಿಗೆ ಏನು ಹೇಳಬೇಂದೇ ತಿಳಿಯದಾಯಿತು. ಶ್ಯಾನುಬೋಗರು ಕೂಡ ಅದನ್ನು ಹೇಳದಿರುವುದು ಅವಳಿಗೆ ಆಶ್ಚರ್ಯವಾಗಿತ್ತು.

“ಆಗಲಿ, ಯಾರೂ ಯಾರ ಋಣದಲ್ಲಿ ಬೀಳುವುದು ಬೇಡ” ಅಂದವಳೆ ಅವರನ್ನು ಕಳುಹಿಸಿ ಮಕ್ಕಳಿಗೆ ಊಟಕ್ಕೆ ತಯಾರಿ ಮಾಡಿದಳು.

Read more!

Tuesday, December 1, 2009

‘ಇಂಗ್ಲಿಷ್ ಮಂಗ’ ಸುಲಲಿತ ಕಥೆಗಳ ಸಂಕಲನ


ಸಲೀಸಾಗಿ ಓದಿಸಿಕೊಂಡು ಹೋಗುವುದು ಕಥೆಯ ಮುಖ್ಯ ಲಕ್ಷಣ. ಶಾಂತರಾಮ ಸೋಮಯಾಜಿ ಅವರ ‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿರುವ ಕಥೆಗಳಿಗೆ ಅಂತಹ ಲಕ್ಷಣವಿರುವುದರಿಂದ ಓದುಗನಿಗೆ ಅವುಗಳು ಆಪ್ತವೆನಿಸುತ್ತವೆ. ಬಹಳ ಸರಳವಾದ ಶೈಲಿ, ಭಾಷೆಯ ಮಿತವಾದ ಬಳಕೆಯಿಂದಾಗಿ ಇಲ್ಲಿನ ಕಥೆಗಳು ಇಷ್ಟವಾಗುತ್ತವೆ. ಎಲ್ಲಾ ಕಥೆಗಳಲ್ಲಿಯೂ ದಕ್ಷಿಣ ಕನ್ನಡ ಮತ್ತು ಉಡುಪಿಯ ಪರಿಸರದಲ್ಲಿರುವ ಸನ್ನಿವೇಶ, ಆಡು ಭಾಷೆಯ ಬಳಕೆ ಸುಂದರವಾಗಿ ಚಿತ್ರಿತವಾಗಿದೆ.
‘ಕಥಾ ಸೃಷ್ಟಿ ನನಗೆ ಅತ್ಯಂತ ಆನಂದ ಕೊಡುವ ಚಟ. ನನ್ನ ಪಾಲಿಗೆ ಅದೊಂದು ಅಡ್ವೆಂಚರ್. ಚಾಲೆಂಜ್ನೊಟ್ಟಿಗೆ ಅಗಾಧ ಸಂತೋಷ ತೃಪ್ತಿ ತಂದುಕೊಡುವ ಗೀಳು’ ಇದು ಲೇಖಕರ ಮಾತು. ಈ ಮಾತಿನಲ್ಲಿ ಅತಿಶೋಯಕ್ತಿ ಇರಲಾರದು. ಇಲ್ಲಿನ ಎಲ್ಲಾ ಕಥೆಗಳಲ್ಲಿಯೂ ವಿಭಿನ್ನ ಶೈಲಿಯನ್ನು ಬಳಸಿಕೊಂಡಿರುವುದು ಲೇಖಕನ ಜಾಣ್ಮೆಯನ್ನು ಮತ್ತು ಕಥೆ ಬರೆಯುವಲ್ಲಿರುವ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ.
‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿ ಒಟ್ಟು 21 ಕಥೆಗಳಿದ್ದು ಪ್ರತಿಯೊಂದು ಕಥೆಯೂ ಸರಳ, ಸುಂದರವಾಗಿ ಮೂಡಿ ಬಂದಿದೆ. ಗುಜ್ಜೆಗಟ್ಟಿ, ಮನಸ್ಸಿನ ಧರ್ಮ, ಅದೃಷ್ಟದ ಅನ್ನ, ಸ್ವಲ್ಪ ಸ್ವಲ್ಪ, ಇಂಗ್ಲಿಷ್ ಮಂಗ, ಮಠದ ತೋಡು, ಸೀರೆಯ ಜಾತಿ ಕಥೆಗಳು ಹೆಚ್ಚು ಆಪ್ತವೆನಿಸುತ್ತವೆ. ಎಲ್ಲಾ ಕಥೆಗಳು ತಿಳಿ ಹಾಸ್ಯದೊಡೆ ಇದ್ದರೂ, ಕೆಲವೊಂದು ಕಡೆ ಗಂಭೀರ ಸಮಸ್ಯೆಯನ್ನು ಎದುರಿಸುತ್ತಾ, ಕಥೆಗೆ ತಿರುವನ್ನು ನೀಡುತ್ತಾ, ಮತ್ತದೆ ಸುಲಲಿತವಾದ ಉತ್ತರವನ್ನು ಹೇಳುತ್ತಾ ಮುಂದೆ ಸಾಗುತ್ತದೆ."
‘ಗುಜ್ಜೆಗಟ್ಟಿ’ಯಲ್ಲಿ ಸಾವಿನ ಬಗ್ಗೆಗಿರುವ ಮತ್ತು ಸತ್ತ ನಂತರದ ಸ್ವಗತ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಯಾವತ್ತೊ ಒಮ್ಮೆ ಕಂಡ ರುಚಿಯನ್ನು ಮೆಲುಕು ಹಾಕುತ್ತಾ ಆ ವಸ್ತುವಿಗಾಗಿ ಪರದಾಡಿ, ಕೊನೆಗೂ ಅದರಿಂದ ತೃಪ್ತಿ ಪಡುವುದು ಮನುಷ್ಯನ ಸಹಜ ಗುಣ. ಅದರಂತೆ ಇಲ್ಲಿಯ ಕಥಾನಾಯಕ ದೇವಣ್ಣ ಪೆಲ್ಯರು ಒಂದು ಹಲಸಿನ (ಗುಜ್ಜೆ) ಹಣ್ಣಿಗಾಗಿ ಊರೂರು ಅಲೆಯ ಬೇಕಾಗುವ ಪ್ರಸಂಗ ಎದುರಾಗುತ್ತದೆ.
ಧರ್ಮ ಮತ್ತು ಮನುಷ್ಯನ ಮನಸಿನ ಕುರಿತು ಬರೆದಿರುವ ಕಥೆ ‘ಮನಸ್ಸಿನ ಧರ್ಮ’. ಜಾತೀಯತೆಯ ಪ್ರಶ್ನೆ ಎದುರಾದಾಗ ಅದಕ್ಕೆ ಬಹಳ ಜಾಣ್ಮೆಯಿಂದ ಉತ್ತರ ನೀಡುತ್ತಾ ಸಾಗುವ ಈ ಕಥೆಯು “ಅವನಿಗೆ ಹೇಳಿದೆ, ನೋಡಪ್ಪ ನಾನು ಯುನಿವರ್ಸಿಟಿಯಲ್ಲಿ 36 ವರ್ಷ ಪಾಠ ಮಾಡಿದವನು. ಯಾವುದೇ ಜಾತಿ, ಧರ್ಮ, ಗಂಡು ಹೆಣ್ಣು ಭೇಧ ಭಾವ ಇಲ್ದೆ ಕಲಿಸಿದ್ದೇನೆ. ವಿಧ್ಯಾರ್ಥಿ ಹಿಂದೂ ಆಗಿರ್ಲಿ ಮುಸ್ಲಿಂ ಆಗಿರ್ಲಿ ಕ್ರಿಶ್ಚಿಯನ್ ಆಗಿರ್ಲಿ ಯಾರೇ ಆಗರ್ಲಿ ಎಲ್ರಿಗೂ ಒಂದೇ ಪಾಠ ಮಾಡ್ತಾ ಇದ್ದವ್ನು ಹಾಗಿದ್ದೇರೆ ಅನ್ಯಧರ್ಮಿಯರ ಮೇಲೆ ನನ್ನಲ್ಲಿ ದ್ವೇಷ ಹೇಗೆ ಸಾಧ್ಯ?” ಮನುಷ್ಯನ ಒಳ್ಳೆಯತನವನ್ನು ಗುರುತಿಸಿಕೊಳ್ಳುವುದಕ್ಕೆ ಇದಕ್ಕಿಂತ ಮಿಗಿಲಾದ ಮಾತುಗಳು ಬೇಕಾಗಿಲ್ಲ.
ಶ್ರೀಮಂತಿಕೆಯ ವೈಭವವನು ನವಿರಾಗಿ ಚಿತ್ರಿಸುತ್ತಾ ಅಲ್ಲೂ ಇರುವ ನೋವನ್ನು ಹತಾಶೆಗಳನ್ನು ತೆರೆದಿಡುವ ಕಥೆ ‘ಅದೃಷ್ಟದ ಅನ್ನ’ ಹೆಣ್ಣಿನ ನೋವು ತನಗೆ ತೆಗೆದುಕೊಳ್ಳಲು ಇರುವ ‘ಚಾಯ್ಸ್’ ನಲ್ಲಿ ಗೊಂದಲಗಳನ್ನು ಹೇಳುತ್ತಾ ಸುಖಾಂತ್ಯದಲ್ಲಿ ಕೊನೆಗೊಳ್ಳುವ ಕಥೆ ‘ಒಳ್ಳೆಯವಳು’
ಮನುಷ್ಯನ ಚಹರೆ ಮತ್ತು ಹವ್ಯಾಸಗಳ ಬಗ್ಗೆ ಹೇಳುತ್ತಾ ಸಾಗುವ ಕಥೆ ‘ಸ್ವಲ್ಪ ಸ್ವಲ್ಪ’ ಉಳಿದ ಎಲ್ಲಾ ಕಥೆಗಳಿಗಿಂತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಓದುಗನನ್ನು ಬಾಲ್ಯಕ್ಕೆ ಕರೆದುಕೊಂಡು ಹೋಗಿ ಹಿಂದಿನ ದಿನಗಳನ್ನು ಕೆದಕಿಬಿಡುತ್ತದೆ. ವಾಸ್ತವಿಕತೆಯಿಂದ ಪ್ಯಾಂಟಿಸಿಯತ್ತ ಜಾರುವ ಕಥೆ ‘ಇಂಗ್ಲಿಷ್ ಮಂಗ’. ಈಗಿನ ಪೀಳಿಗೆಯಾಂತ್ರಿಕ ಬದುಕು ಮತ್ತು ಹೊರಗಿನ ಆಕರ್ಷಣೆಗೆ ತಪ್ಪು ಹೆಜ್ಜೆಗಳನ್ನು ಇಡುವುದನ್ನು ಇಲ್ಲಿ ನವಿರಾಗಿ ನಿರೂಪಿಸಿದ್ದಾರೆ. ಅದೇ ಕೊನೆಗೆ ಆಪ್ತವೆನಿಸಬಹುದಾದ ಸಂದಿಗ್ದತೆ. ಇವೆಲ್ಲಾವನ್ನೂ ‘ಇಂಗ್ಲಿಷ್ ಮಂಗ’ ದ ಜೊತೆಗೆ ಸೇರಿಸಿ ಬರೆದಿರುವ ಉತ್ತಮ ಕಥೆ.
‘ಮಠದ ತೋಡು’ ಕಥೆಯಲ್ಲಿ ಜಾಗ ತೆಗೆದುಕೊಂಡು ಮನೆ ಕಟ್ಟಿಸಿಯೂ ವಾಸವಾಗಲಾರದೆ ಪರವೂರಿಗೆ ಹಿಂತಿರುಗುವ ಸಂಸಾರದ ಕಥೆಯಾದರೆ, ಅಲ್ಲಿ ನಡೆಯುವ ಕುಟಿಲತೆ, ಮೋಸ, ಕೊಲೆಗೆ ಹೇತುವಾಗುವ ವಿಷಯಗಳು ಮಠದ ತೋಡಿನ ಹಾಗೇ ಕೊಳಕಾಗಿ ಹರಿಯುತ್ತಿರುತ್ತದೆ. ಜಾತೀಯತೆಯೆನ್ನುವ ನೀರೀಗ ‘ಹಂದಿಯ ಮೈಯಂತೆ ಕಪ್ಪಾಗಿದೆ.... ಕೊಳೆತ ಮೀನಿನಂತೆ ನಾರುತ್ತಿದೆ. ಒಂದಲ್ಲ ನೂರು ಹೆಣ್ಣು ಮಕ್ಕಳನ್ನು ಮುಳುಗಿಸಿ ಕೊಂದರೂ ಆ ಹೆಣಗಳು, ಮನುಷ್ಯರ ಕಣ್ಣಿಗೆ ಕಾಣಿಸದಷ್ಟು ಕೊಳಕಾಗಿದೆ ಆ ತೊಡಿನ ನೀರು’ ಅನ್ನುವ ಕಥೆಯ ಕೊನೆಯ ವಾಕ್ಯಗಳು ಅಸ್ವಸ್ಥ್ಯ ಸಮಾಜದ ಚಿತ್ರಣವನ್ನು ತೆರೆದಿಡುತ್ತದೆ’
‘ಸೀರೆಯ ಜಾತಿ’ ಮಕ್ಕಳ ಮುಗ್ಧತೆ ಮತ್ತು ಹಿರಿಯಲ್ಲಿರುವ ಜನಾಂಗೀಯಾ ತಾರತಮ್ಯಗಳ ತುಲನೆಯ ಒಂದು ಒಳ್ಳೆಯ ಕಥೆ. ಮಕ್ಕಳಾಗಿರುವಾಗ ಜಾತಿ, ದ್ವೇಷಗಳ ಪ್ರಶ್ನೆಯೇ ಇರುವುದಿಲ್ಲ. ಅದನ್ನು ಕ್ರಮೇಣ ಹಿರಿಯರಿಂದಾಗಿ ಕಲಿತುಕೊಳ್ಳುವ ಮಕ್ಕಳ ಮುಗ್ಧತೆಯನ್ನು ತೆರೆದಿಡುತ್ತದೆ ಈ ಕಥೆ.
ಫ್ಯಾಂಟಸಿಯಂತೆ ಮೂಡಿ ಬಂದಿರುವ ಈಜುವಿದ್ಯೆ; ಪರೀಕ್ಷೆಯ ಆತಂಕ ಸೋಲಿನ ನಡುವೆ ಸಾಕುಪ್ರಾಣಿಯ ಕಡೆಗಿರುವ ಕಾಳಜಿ, ಸ್ನೇಹದ ಕಥೆ ‘ಪರೀಕ್ಷೆ’
‘ಇನಿಯನಿಗೊಂದು ಪತ್ರ’ ವಿರಹಿಯೊಬ್ಬಳ ಅಂತರಂಗದ ತುಮುಲಗಳನ್ನು ಬಿಚ್ಚಿಟ್ಟು ಪರಿಧಿಯಳೊಗೆ ಬೇಯುತ್ತಾ ಬದುಕುವ ಹೆಣ್ಣಿನ ಚಿತ್ರಣ.
‘ಚೇರಂಟೆ’ ಇಂದಿನ ದಿನಗಳಲ್ಲಿ ನಡೆಯುವ ಮೋಸ ವಂಚನೆಯ ಬಗ್ಗೆಯಿದ್ದು ನಾವು ಯಾರನ್ನು ನಂಬಿ ಬಿಡುತ್ತೇವೊ ಅವರಿಂದಲೆ ಮೋಸ ಹೋಗುವ ಸ್ಥಿತಿ ಎದುರಾಗುವ ಕಥೆ.
‘ಗೊಂಬೆಯಾಟ’ ಪ್ರೀತಿ, ಸ್ನೇಹ, ಗೌರವವಿರದ ಬದುಕಿಗೆ ರೋಸಿ ಹೋದ ಅಸಹಾಯಕ ಹೆಣ್ಣಿನ ದನಿಯಾದರೆ, ಪವಾಡ ಸ್ವಾಮೀಜಿಯ ಕಥೆ ‘ಪವಾಡಪುರುಷರು’, ‘ಅಜ್ಜಿ ಮತ್ತು ಬೆಕ್ಕು’, ‘ಚಿಕ್ಕಪ್ಪ’, ‘ಅಕ್ಷರಾಭ್ಯಾಸ’, ‘ಮೀನಾಳ ಗುಟ್ಟು’, ‘ಮಹಾಬಾಲಯ’, ‘ಗುಪ್ತ ಪ್ರತಿಭೆ’ ಮತ್ತು ‘ಪ್ರೀತಿಯಿಂದ’ ಓದಿಸಿಕೊಂಡು ಹೋಗುವ ಇತರ ಕಥೆಗಳು.
ಇತ್ತೀಚಿಗೆ ಪುಟಗಳ ಮಿತಿಗೆ ಇಳಿದಿರುವ ಕಥೆಗಳ ಅವಸ್ಥೆಯಿಂದ ಹೊರಗೆ ಬಂದು ಹುಡುಕಾಡಿದರೆ ‘ಇಂಗ್ಲಿಷ್ ಮಂಗ’ ದಂತಹ ಒಳ್ಳೆಯ ಕಥಾಸಂಕಲನಗಳು ದೊರೆಕಬಹುದು. ಈ ಕೃತಿಯನ್ನು ಹೊರತಂದವರು ಹೇಮಂತ ಸಾಹಿತ್ಯ, ಬೆಂಗಳೂರು ಇವರು.

Read more!

Friday, November 27, 2009

ಶಾಪ


3 ದಿನಗಳಿಂದಲೂ ಒಂದೇ ತೆರನಾಗಿ ಬೀಳುವ ಮಳೆಯನ್ನೂ ಲೆಕ್ಕಿಸದೆ ಜಾನಕಿ ಕೊರಂಬು ತಲೆಗೇರಿಸಿ, ಮೊಣಗಂಟಿನವರೆಗೂ ಸೀರೆಯನ್ನು ಮೇಲಕ್ಕೆತ್ತಿ, ಲೋಟ ಹಿಡಿದ ಕೈಗಳನ್ನು ಚಳಿಗೆ ಎದೆಯ ಒಳಗಿರಿಸಿಕೊಂಡು ವೆಂಕಟ ಭಟ್ಟರ ಜಾರುವ ಅಂಗಳಕ್ಕೆ ಕಾಲಿಟ್ಟಾಗ ಮುಸ್ಸಂಜೆಯ ಹೊತ್ತು ಹಲಸಿನ ಹಪ್ಪಳ ಮೆಲ್ಲುತ್ತಿದ್ದ ಭಟ್ಟರಿಗೆ ಆಶ್ಚರ್ಯವಾಯಿತು. ತಮ್ಮ ಪಕ್ಕದಲ್ಲಿಯೆ ಕುಳಿತು ಕರಿದ ತೆಳುವಾದ ಹಪ್ಪಳಗಳನ್ನು ಆರಿಸುತ್ತಿದ್ದ ಮಗನಿಗೆ ಹೇಳಿದರು.
"ಮಾಣಿ, ಹೋಗು ಆ ಕೆಳಗಿನ ಮನೆಯ ಹೆಂಗಸು ಬಂದಿದೆ. ಚಳಿಗೆ ನಡುಗುತ್ತಾ ನಿಂತಿದೆ. ಅದಕ್ಕೆ ಕೇಳಿ ತೆಗೆದುಕೊಳ್ಳುವುದಕ್ಕೆ ಹೊತ್ತು ಗೊತ್ತು ಇಲ್ಲ. ಬಾಗಿಲು ತೆಗಿ" ಭಟ್ಟರ ಮಗ ರಮಣ ಆರಿಸಿದ ಹಪ್ಪಳವನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಮಳೆಗೆ ಗಚ್ಚನೆ ಮುಚ್ಚಿದ ಬಾಗಿಲಿನ ಚಿಲಕ ತೆಗೆದು ಎಳೆದ.


ಚಳಿಗೆ ನಡುಗುತ್ತಿದ್ದ ಹೆಂಗಸು, " ಮಾಣಿ, ಅಮ್ಮ ಮನೆಯಲ್ಲಿ ಇಲ್ವಾ?" ಅಂದಾಗ ರಮಣ, "ಇದ್ದಾರೆ" ಅನ್ನುತ್ತಾ ಇಡೀ ಹಪ್ಪಳಕ್ಕೆ ಬಾಯಿ ಹಚ್ಚಿದ.
ಒಳಗೆ ಬಂದು ಗೋಡೆಗೆ ಒರೆಸಿಕೊಂಡಂತೆ ಕುಕ್ಕರುಗಾಲಿನಲ್ಲಿ ಕುಳಿತ ಹೆಂಗಸು, ಹಪ್ಪಳ ಕರಿದ ತೆಂಗಿನೆಣ್ಣೆಯ ಪರಿಮಳ ಮೂಗಿಗೆ ನಾಟುತ್ತಲೇ, ಅಡುಗೆ ಮನೆಯತ್ತ ಮುಖ ಹೊರಳಿಸಿತು.
"ಏನು ಜಾನಕಮ್ಮ, ಈ ಹೊತ್ತಿನಲ್ಲಿ? ಮಳೆಗೆ ತಲೆ ಹೊರಗೆ ಹಾಕುವುದು ಬೇಡ ಅನ್ನುವಷ್ಟು ಬೇಜಾರು. ಮೈ, ಕೈಯೆಲ್ಲಾ ಒದ್ದೆ ಮಾಡಿಕೊಂಡು ಬಂದಿದ್ದೀರಲ್ಲಾ, ಏನು ಕಥೆ?" ಹಪ್ಪಳದ ತಟ್ಟೆಯನ್ನು ಮಗನ ಕಡೆಗೆ ನೂಕಿ ಕುಳಿತಿದ್ದ ಹೆಂಗಸನ್ನು ಕೇಳಿದರು ಭಟ್ಟರು.
"ಭಟ್ರೆ, ಒಲೆ ಉರಿಸೋದೆ ಕಷ್ಟ ಆಗಿದೆ. ಒಟ್ಟು ಮಾಡಿಟ್ಟ ಕಟ್ಟಿಗೆಗೆ ಪಸೆ ಬಂದಿದೆ. ಗಂಜಿಯೇನೋ ಬೇಯಿಸಿ ಬಂದೆ. ಪದಾರ್ಥ ಮಾಡೋದಿಕ್ಕೆ ಸಾಧ್ಯವಿಲ್ಲ. ಸ್ವಲ್ಪ ಮಜ್ಜಿಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು"
ಭಟ್ಟರಿಗೂ ಹೆಂಗಸಿನ ಮೇಲೆ ಕನಿಕರ ಬಂತು. ತಮ್ಮ ಮಡದಿ ವನಜಾಕ್ಷಿಯನ್ನು ಕರೆದರು."
"ಇಕಳ್ಳೇ... ಅವರಿಗೆ ಮಜ್ಜಿಗೆ ಬೇಕಂತೆ, ಕೊಡು"
ಅಡುಗೆ ಮನೆಯಲ್ಲಿ ಎಣ್ಣೆಯ ಬಾಣಲೆಯನ್ನು ಒಲೆಯಿಂದ ಕೆಳಗಿರಿಸಿ, ತೂಗು ಬಲೆಯಿಂದ ಮಜ್ಜಿಗೆಯ ಪಾತ್ರೆ ತೆಗೆದು, ಲೋಟಕ್ಕೆ ಸುರುವಿ, ಒಂದು ಹಸಿ ಮೆಣಸಿನ ಕಾಯಿಯನ್ನು ಅದಕ್ಕೆ ಹಾಕಿ ಹೊರಗೆ ಬಂದ ವನಜಾಕ್ಷಿ, ಜೊತೆಗೆ ಒಂದು ಕರಿದ ಹಪ್ಪಳವನ್ನು ಜಾನಕಿಯ ಕೈಯಲ್ಲಿಟ್ಟು ಅವರ ಲೋಟಕ್ಕೆ ಮಜ್ಜಿಗೆಯನ್ನು ಸುರಿದರು. ಹಪ್ಪಳವನ್ನು ಮುರಿದ ಹೆಂಗಸು, "ಅಕ್ಕೋರೆ, ಏನಾದರೂ ವಿಶೇಷ ಉಂಟಾ?" ಅಂದಾಗ ವನಜಾಕ್ಷಿಗೆ ನಗು ಬಂತು.
"ಮಳೆಗಾಲದಲ್ಲಿ ಏನು ವಿಶೇಷ ಜಾನಕಮ್ಮ?"
"ಅಲ್ಲ, ನಾನು ಅದು ಕೇಳಿದಲ್ಲ"
"ಮತ್ತೆಂತ ವಿಶೇಷ? ಮದುವೆಯಾಗಿ ಹತ್ತು ವರ್ಷವಾಯಿತು. ಮಗನಿಗೆ ಎಂಟು ವರ್ಷವಾಯಿತು. ಇನ್ನೆಂತಹ ವಿಶೇಷ?" ನಕ್ಕು ನುಡಿದ ವನಜಾಕ್ಷಿ0ು ಮಾತಿನಲ್ಲಿ ನೋವಿನ ಎಳೆಯಿರುವುದನ್ನು ಗುರುತಿಸಿದ ಹೆಂಗಸು, "ಏನೇ ಹೇಳಿ... ನಾಲ್ಕೈದು ಹೆಣ್ಣು ಮಕ್ಕಳು ಓಡಾಡಿಕೊಂಡಿದ್ದ ಮನೆ ಇದು. ನಿಮಗೂ ಒಂದು ಹೆಣ್ಣು ಸಂತಾನ ಇದ್ದಿದ್ರೆ ಚೆನ್ನಾಗಿರ್ತಿತ್ತು" ಅಂದಾಗ ಅವರ ಮುಖ ಸಂಪೂರ್ಣ ಬಾಡಿದಂತಾಯಿತು.
ವೆಂಕಟ ಭಟ್ಟರಿಗೆ ಹೆಂಗಸಿನ ಮಾತು ಕೇಳಿ, " ಈ ಹೆಂಗಸಿನ ಬುದ್ಧಿಯೆ ಇಷ್ಟಾ?" ಅಂದುಕೊಂಡರು.
ವನಜಾಕ್ಷಿಯ ನೋವಿಗೆ ಒಂದಷ್ಟು ತುಪ್ಪ ಸುರಿದು, ಕೊರಂಬು ಹಿಡಿದು ನಡು ಬಾಗಿಸುತ್ತಾ ಅಂಗಳಕ್ಕೆ ಕಾಲಿಟ್ಟಿತು ಹೆಂಗಸು. ವನಜಾಕ್ಷಿ ಬಾಗಿಲು ಸರಿಸಿ, ಚಿಲಕ ಸೇರಿಸಿ ಹಿಂತಿರುಗಿದರು.
"ಅಲ್ವೇ, ಆ ಹೆಂಗಸಿಗೆಂತ ಅಧಿಕ ಪ್ರಸಂಗ? ನಮ್ಮ ಮನೆಯ ವಿಚಾರಕ್ಕೆ ಮೂಗು ತೂರಿಸೋದಕ್ಕೆ ಅದಕ್ಕೇನಿದೆ ಹಕ್ಕು?"
ವೆಂಕಟ ಭಟ್ಟರ ಮಾತು ವನಜಾಕ್ಷಿಗೆ ಸರಿ ಕಾಣಲಿಲ್ಲ.
"ಅವರು ಹೇಳಿದ್ರಲ್ಲಿ ತಪ್ಪೇನಿದೆ? ಈ ಮನೆಯಲ್ಲಿ ನಿಮ್ಮ ಅಕ್ಕಂದಿರು, ತಂಗೀಂತ ನಾಲ್ಕೈದು ಜನ ಇರ್ಲಿಲ್ವಾ? ನಮಗೂ ಒಂದು ಹೆಣ್ಣು ಮಗು ಆಗ್ಲೀಂತ ಆಸೆಯಿಂದ ಹೇಳಿತು. ಅದಕ್ಕೇನಂತೆ?"
"ನಿನಗೆ ಗೊತ್ತೇ ಇದೆ ಇವಳೆ... ನಮ್ಮ ಮನೆ ಹೆಣ್ಣು ಮಕ್ಕಳು ಯಾರು ಸುಖದಲ್ಲಿದ್ದಾರೆ ಹೇಳು? ಎಲ್ಲರೂ ಹೊಕ್ಕ ಮನೆಯಲ್ಲಿ ಕಷ್ಟ ಕಷ್ಟ ಕಷ್ಟವೆ. ಒಂದು ಸೀರೆ ಬೇಕಿದ್ರೂ ಅವು ನಮ್ಮತ್ರ ಬಂದು ಸಂಕೋಚದಿಂದ ಕೇಳ್ತಾವೆ"
"ಅದಕ್ಕೆ ಏನಂತೆ? ನಾವು ಈಗ ನೆಮ್ಮದಿಯಿಂದ ಇಲ್ವಾ? ನಮಗೊಂದು ಹೆಣ್ಣು ಮಗುವಾದ್ರೆ ಅದನ್ನು ಸಾಕುವಷ್ಟು ನಮ್ಮಲ್ಲಿ ಇಲ್ವಾ?"
"ನಮತ್ರ ಈಗ ಬೇಕಾದಷ್ಟು ಇದೆ. ಇಲ್ಲಾಂತ ನಾನು ಹೇಳೋದಿಲ್ಲ. ಆದರೆ ನಮ್ಮ ಸಂತಾನಕ್ಕೆ ಶಾಪ ಇದೇಂತ ನನ್ನ ಅನಿಸಿಕೆ"
"ಏನು ಶಾಪರೀ? ಇದ್ದ ಬದ್ದ ಉಳುಮೆಯ ಗದ್ದೆಯನ್ನೆಲ್ಲಾ ನಿಮ್ಮಪ್ಪ ಒಕ್ಕಲಿಗನಿಗೆ ಮಾಡಿದ್ರು. ಅವನು ಖುಷಿಯಲ್ಲಿಯೆ ಇದ್ದಾನೆ. ಒಂದು ಚೂರು ಯಾರ ಆಸ್ತಿಗೂ, ವಸ್ತುವಿಗೂ ಅತ್ತೆ, ಮಾವ ಆಸೆ ಪಟ್ಟವರಲ್ಲ. ಇದ್ದಷ್ಟು ಕೈಯೆತ್ತಿ ಕೊಟ್ಟಿದ್ದಾರೆ. ಹಾಗಿರುವಾಗ ನಮಗೆ ಶಾಪ ಯಾರ್ದೂಂತ?"
"ನೋಡು, ನಿನಗೆ ಅರ್ಥವಾಗ್ತದ ಇಲ್ವಾಂತ ನನಗೆ ಗೊತ್ತಿಲ್ಲ. ನನ್ನ ಅಣ್ಣಂದಿರಿಗಾಗಲಿ, ತಮ್ಮನಿಗಾಗಲಿ ಹೆಣ್ಣು ಸಂತಾನ ಉಂಟಾ? ನನ್ನ ಅಪ್ಪ, ಅಮ್ಮನಿಗೆ ತಮ್ಮ ಹೆಣ್ಣು ಮಕ್ಕಳ ಕಣ್ಣೀರು ನೋಡಿ, ಮುಂದಿನ ಸಂತಾನಕ್ಕೆ ಹೆಣ್ಣು ಆಗೋದೇ ಬೇಡಾಂತ ಅಂದುಕೊಂಡಿರಬಹುದಲ್ವಾ?"
"ಹಾಗೆ ನೋಡಿದ್ರೆ ನಿಮ್ಮ ಅಕ್ಕಂದಿರಿಗೆ, ತಂಗಿಗೆ ಹೆಣ್ಣು ಸಂತಾನವಿಲ್ವಾ? ನೀವ್ಯಾಕೆ ಹಿರಿಯರ ಶಾಪವಿದೇಂತ ಹೇಳ್ತೀರಾ?"
"ಅವರು ಕೊಟ್ಟು ಹೋದವರು. ಗಂಡು ಮಕ್ಕಳಿಗೆ ಮಾತ್ರ ಹೆಣ್ಣು ಸಂತಾನ ಬೇಡಾಂತ ಅವರ ಮನಸ್ಸಿನಲ್ಲಿದ್ದಿರಬಹುದು"
ಗಂಡನ ಮಾತು ವನಜಾಕ್ಷಿಗೆ ಹಿಡಿಸಲಿಲ್ಲ. ತಮ್ಮ ಸ್ವಂತ ಮಕ್ಕಳಿಗೆ ಯಾರಾದರೂ ಶಾಪ ಕೊಡುತ್ತಾರೆಯೆ? ಅನ್ನುವುದು ಅವಳಿಗೆ ರುಚಿಸದ ಮಾತಾಗಿತ್ತು.
ವೆಂಕಟ ಭಟ್ಟರಿಗೆ ಮಾತ್ರ ತಲೆಯಲ್ಲಿ ಅದು ಅಡರಿ ಹೋಗಿತ್ತು. ಹೆಂಡತಿಯ ಹಾಗೆ ಆತನಿಗೂ ಹೆಣ್ಣು ಮಗು ಬೇಕೆನ್ನುವ ಆಸೆಯಿದ್ದರೂ ಮನಸ್ಸಿನಲ್ಲಿ ಅದೇ ವಿಷಯ ಗಟ್ಟಿಯಾಗಿ ಕುಳಿತಿತ್ತು. ಇಲ್ಲವಾದರೆ ಮಡದಿ, ರಮಣ ಹುಟ್ಟಿದ ನಂತರ 3 ಬಾರಿ ಗರ್ಭಿಣಿಯಾದರೂ, ಎರಡು ಸಲ ಗಂಡು ಮಗು ಬೇಡವೆಂದು ಗರ್ಭ ತೆಗೆಸಿದ್ದಾಯಿತು. ಮೂರನೆ ಬಾರಿ ಗರ್ಭ ಹೋದಾಗ ಅದೆಷ್ಟು ಬೇಸರವಾಗಿತ್ತು. ನಂತರ ಗರ್ಭ ನಿಂತೇ ಇಲ್ಲವೇಕೆ?
"ನೀನು ಏನೆ ಹೇಳು ಆ ಹೆಂಗಸು ಸರಿಯಿಲ್ಲ. ನಮ್ಮ ಮನೆಯ ವಿಷಯಗಳನ್ನೆಲ್ಲಾ ಇನ್ನೊಂದು ಮನೆಗೆ ಹೇಳಿ ಹಿಂದಿನಿಂದ ನಗಾಡುತ್ತೆ ಅಷ್ಟೆ. ಇಲ್ಲಾಂದ್ರೆ ಎದುರು ಮನೆಯ ಶಾಂತಕ್ಕ ನಮ್ಮ ಜೊತೆಗೆ ಜಗಳ ಕಾಯೋಕಿತ್ತಾ? ಮೂರು ಹೊತ್ತು ಗದ್ದೆ ಕೆಲಸ ಮಾಡಿಕೊಂಡು ನಾವು ಕೊಡ್ತಿದ್ದ ಊಟ ತಿಂದುಕೊಂಡು ಒಳ್ಳೆಯ ರೀತಿಯಲ್ಲಿ ಇರಲಿಲ್ವಾ?"
"ಅದಕ್ಕೆಂತ ಮಾಡೋದು? ಅವರ ಮಗ ಬೊಂಬಾಯಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ತಾಯಿಯನ್ನು ಕೆಲಸಕ್ಕೆ ಹೋಗುವುದು ಬೇಡ ಅಂದಿದ್ದಾನೆ. ಅವರು ಕೆಲಸ ನಿಲ್ಲಿಸಿದ್ದಾರೆ. ಆ ಹೆಂಗಸು ಬರ್ಲಿಲ್ಲಾಂತ ನಮ್ಮ ಮನೆ ಕೆಲಸ ನಿಂತಿದಾ? ನಾವು ಮಾಡಿಕೊಂಡು ಹೋಗ್ತಾ ಇಲ್ವಾ?"
"ನೀನು ಗದ್ದೆಗೆ ಇಳಿಯುವ ಹಾಗಾಗಿದ್ದು ಅದೇ ಹೆಂಗಸಿನಿಂದ ಅಲ್ವಾ? ಈ ಜಾನಕಮ್ಮ ಆ ಹೆಂಗಸಿಗೆ ಏನೋ ಕಿವಿಯೂದಿದೆ. ಅದಕ್ಕೆ ಆ ಹೆಂಗಸು ಇದ್ದಕ್ಕಿದ್ದಂತೆ ಜಗಳ ಮಾಡ್ಕೊಂಡು ಕೆಲಸ ಬಿಡ್ತು ನೋಡು"
"ನಾನು ನಿಮಗೆ ಹೇಳ್ತಾ ಇಲ್ವಾ... ಈ ಜಾಗ ಮಾರಿ ಎಲ್ಲಾದ್ರೂ ಪಟ್ಟಣದ ಕಡೆಗೆ ಹೋಗೋಣಾಂತ. ನೀವು ಕೇಳ್ತಾ ಇಲ್ಲ. ನಮ್ಮ ಮಣ್ಣಿನ ಋಣ ಇಲ್ಲೆ ಇದೆ. ಇದ್ದದನ್ನು ನಾವೆ ಮಾಡ್ಕೊಂಡು ಹೋಗುವುದು ಚೆಂದ ಅಲ್ವಾ?"
"ಈ ಜಾಗನ ಬಿಟ್ಟು ಹೋಗುವುದು ಕಷ್ಟಾಂತ ನಿನಗೆ ಗೊತ್ತಿಲ್ವಾ? ನನ್ನ ಅಪ್ಪಯ್ಯ ಎಷ್ಟು ಕಷ್ಟ ಪಟ್ಟು ಈ ಜಾಗಾನ ತೆಗೆದುಕೊಂಡಿದ್ದಾರೇಂತ ನಿನಗೆ ಗೊತ್ತಿಲ್ವಾ? ಅಂತದ್ರಲ್ಲಿ ಮಾರುವ ಮಾತುಂಟಾ ಅಥವಾ ನಾವು ಅದನ್ನು ಯೋಚಿಸುವುದೂ ತಪ್ಪಲ್ವಾ?"
ಮಾತು ಮುಂದುವರಿಸಲು ಇಚ್ಛಿಸದೆ ವನಜಾಕ್ಷಿ ತಟ್ಟೆ, ಲೋಟಗಳನ್ನು ಎತ್ತಿಕೊಂಡು ಅಡುಗೆ ಕೋಣೆಯೊಳಗೆ ನಡೆದರು.

***
ಎಪ್ಪತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿಯಾದಾಗ ಶ್ರೀನಿವಾಸರಿಗೆ ತಾವು ಮಧುರೈ0ುಲ್ಲಿ ನಡೆಸುತ್ತಿದ್ದ ಹೊಟೇಲು ಹೆಚ್ಚು ಸಮಯ ಮುಂದುವರಿಯಲಾರದೆನಿಸಿತು. ತಮ್ಮನ್ನೇ ನಂಬಿರುವ ತಮ್ಮಂದಿರಾದ ಗಿರೀಶ ಮತ್ತು ಜಗನ್ನಾಥರನ್ನು ಕರೆದು ತಮ್ಮ ಸಮಸ್ಯೆಯನ್ನು ಮುಂದಿಟ್ಟರು.

"ಇನ್ನು ಈ ಪುಢಾರಿಗಳ ಉಪಟಳದಿಂದ ಹೊಟೇಲು ಮುಂದುವರಿಸಿಕೊಂಡು ಹೋಗುವುದು ತುಂಬಾ ಕಷ್ಟ. ಅವರುಗಳು ದಿನಕ್ಕೊಂದು ತಗಾದೆ ತೆಗೆದು, ಹಫ್ತಾ ವಸೂಲಿಗೂ ಮುಂದಾಗುತ್ತಿದ್ದಾರೆ. ನಾವು ಮರ್ಯಾದೆಯಿಂದ ಬಾಳುವುದು ಕಷ್ಟವೇ. ಇನ್ನು ಮುಂದೆ ಏನು ಮಾಡುವುದು? ನೀವೂ ಯೋಚಿಸಿ... ಒಂದು ನಿರ್ಧಾರಕ್ಕೆ ಬರೋಣ"
ಶ್ರೀನಿವಾಸರ ಹಾಗೇ ಗಿರೀಶ ಹಾಗೂ ಜಗನ್ನಾಥರಿಗೂ ಎಂಟು ಹತ್ತು ಮಕ್ಕಳು. ಇದ್ದಕ್ಕಿದಂತೆ ಹೊಟೇಲು ಮುಚ್ಚಿ, ಸಂಸಾರವನ್ನು ನಡು ಬೀದಿಯಲ್ಲಿ ನಿಲ್ಲಿಸುವ ಪರಿಸ್ಥಿತಿ ಎದುರಾದರೆ? ಎಂಬ ಆತಂಕ ತಮ್ಮಂದಿರಿಬ್ಬರಲ್ಲು ಮೂಡಿತು. ಅವರೊಂದು ನಿರ್ಧಾರಕ್ಕೆ ಬಂದು, "ಅಣ್ಣಾ, ಕಷ್ಟನೋ ಸುಖನೋ ನಮ್ಮ ಜೀವನ ಇಲ್ಲೇ ಸಾಗಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಾಗ, ಶ್ರೀನಿವಾಸರಿಗೆ ನಿಜವಾಗಿಯೂ ಇರುಸು ಮುರಿಸಿನ ಪರಿಸ್ಥಿತಿಯಾಯಿತು. ಎಲ್ಲಾ ಜವಾಬ್ದಾರಿಯನ್ನು ತಾವೇ ಹೊತ್ತು ಕೊಂಡು ಹೇಗೋ ಹೊಟೇಲನ್ನು ನಡೆಸಿಕೊಂಡು ಹೋಗಿದ್ದರು. ಅವರಿಗಂತೂ ಮುಂದುವರಿಸುವ ಯೋಚನೆಯಿಲ್ಲ. ತಮ್ಮಂದಿರಿಬ್ಬರಿಗೆ ಜವಾಬ್ದಾರಿಯನ್ನು ಬಿಟ್ಟು ಹೊಗುವ ನಿರ್ಧಾರ ಕೈಗೊಂಡರು.
"ನಾನು ನಿರ್ಧಾರ ತೆಗೆದುಕೊಂಡಾಯಿತು. ಇನ್ನು ಕಷ್ಟನೋ ಸುಖನೋ ನಾನು ಊರಿಗೆ ಹೋಗಿ ಸೆಟಲ್ ಆಗಿ ಬಿಡ್ತೀನಿ. ಹೊಟೇಲನ್ನು ನೀವು ನಿಭಾಯಿಸಿಕೊಂಡು ಹೋಗ್ತೀರೀಂತ ನನಗೆ ಧೈರ್ಯ ಇದೆ"
ಶ್ರೀನಿವಾಸನ ಮಾತುಗಳನ್ನು ಕೇಳಿ ತಮ್ಮಂದಿರೇನು ಹೌಹಾರಲಿಲ್ಲ. ಸಂತೋಷದಿಂದ ಒಪ್ಪಿಕೊಂಡರು.
"ನನ್ನ ಪಾಲಿನ ಹಣವನ್ನು ನಾನು ಹಿಂತೆಗೆ0ುಬಹುದಲ್ಲಾ?" ಶ್ರೀನಿವಾಸರು ಸಂಕೋಚದಿಂದ ಕೇಳುವಾಗ ತಮ್ಮಂದಿರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
"ಎಲ್ಲ ಹಣ ನೀನು ತೆಗೆದುಕೊಂಡು ಹೋದರೆ ನಮಗೆ ನಿಭಾಯಿಸಲು ಕಷ್ಟವಾಗುತ್ತದೆ. ಹೇಗೂ ನೀನು ಇಲ್ಲಿಗೆ ನಮ್ಮನ್ನು ನೋಡೋದಿಕ್ಕೆ ಬರುತ್ತಿಯಲ್ಲಾ. ಆಗ ಸ್ವಲ್ಪ ಸ್ವಲ್ಪವೇ ಹಣ ಹೊಂದಿಸಿ ಕೊಡುತ್ತೇವೆ" ಎಂದು ಹೇಳುವಾಗ ಒಪ್ಪಿಕೊಳ್ಳವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.
ಅಂತೂ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಜೊತೆಗೆ ಕೈ ಹಿಡಿದವಳನ್ನು ಕರೆದುಕೊಂಡು ಮೂರು ದಿನ ರೈಲಿನ ಪ್ರಯಾಣ ಜೊತೆಗೆ ಒಂದು ದಿನ ಬಸ್ಸಿನಲ್ಲಿ ಪ್ರಯಾಣ ಮುಗಿಸಿ, ಊರಿಗೆ ಬರುವಾಗ ಅಣ್ಣ ಅನಂತರಾಮ ಬಹಳ ಸಂತೋಷದಿಂದಲೇ ಸ್ವಾಗತಿಸಿದ್ದ. ಅನಂತರಾಮನಿಗೂ ಹತ್ತು ಜನ ಮಕ್ಕಳು. ಜೊತೆಗೆ ಶ್ರೀನಿವಾಸನ ಎಂಟು ಮಕ್ಕಳು ಮನೆಯಲ್ಲಿ ನಿತ್ಯ ಗಲಾಟೆಯೆ. ಶ್ರೀನಿವಾಸನ ಮಕ್ಕಳಿಗೆ ಕನ್ನಡ, ತುಳು ಭಾಷೆ ಅಷ್ಟಾಗಿ ಬರುತ್ತಿರಲಿಲ್ಲವಾದುದರಿಂದ ಅವುಗಳು ತಮಿಳಿನಲ್ಲಿಯೆ ಏನೇನೋ ಅಂದುಕೊಂಡು ಸುಮ್ಮನಾಗುತ್ತಿದ್ದವು.

ಒಂದು ದಿನ ರಾತ್ರಿ ಒಂದು ಸಣ್ಣ ವಿಷಯದ ಕಿಡಿ ದೊಡ್ಡ ಜ್ವಾಲೆಯಾಗಿ ಹೋಯಿತು. ಶ್ರೀನಿವಾಸನ ದೊಡ್ಡ ಮಗ ತನ್ನ ದೊಡ್ಡಪ್ಪ ಅನಂತರಾಮನ ಎದುರಿಗೆ ಕುರ್ಚಿಯ ಮೇಲೆ, `ಕಾಲಿನ ಮೇಲೆ ಕಾಲು ಹಾಕಿ ಕುಳಿತ' ಅನ್ನುವುದು ಅನಂತರಾಮನಿಗೆ ಆ ಹುಡುಗ `ಮರ್ಯಾದೆ' ಕೊಡಲಿಲ್ಲ ಅನ್ನುವ ಮಟ್ಟಿಗೆ ಬಂದು ನಿಂತಿತು. ರಾತ್ರಿ ಅಂಗಡಿ ಮುಗಿಸಿ ಬಂದ ಶ್ರೀನಿವಾಸನನ್ನು ಊಟ ಮಾಡಲು ಬಿಡದೆ ಜಗಳ ಕಾಯ್ದರು ಅನಂತರಾಮ.
"ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಯಾವುದನ್ನೂ ಹೇಳಿಕೊಡಲಿಲ್ಲ. ದೊಡ್ಡವರು ಅನ್ನುವ ಗೌರವವೇ ನಿನ್ನ ಮಕ್ಕಳಿಗೆ ಇಲ್ಲ"
ಶ್ರೀನಿವಾಸನಿಗೆ ಹಸಿದ ಹೊಟ್ಟೆ ಒಂದು ಕಡೆಯಾದರೆ, ಇನ್ನೊಂದು ಕಡೆ ಅಣ್ಣ ಹೇಳಿದ ಮಾತುಗಳು, ತನ್ನ ಹಿರಿಯ ಮಗನ ಮೇಲೆ ಕೋಪ ಉಕ್ಕಿ ಬರುವಂತೆ ಮಾಡಿತು. ಮಗನನ್ನು ಕರೆದು ಕೆನ್ನೆಗೆ ನಾಲಕ್ಕು ಬಾರಿಸಿ, ಅಗ್ರಜನ ಕಾಲು ಹಿಡಿಸಿದ.
ಶ್ರೀನಿವಾಸನ ಹೆಂಡತಿ ನಳಿನಾಕ್ಷಿಗೆ ಈ ರೀತಿ ತನ್ನ ಹಿರಿಯ ಮಗ ಸುಮ್ಮನೆ ಪೆಟ್ಟು ತಿಂದದ್ದು ಅವಳ ಕಣ್ಣುಗಳಲ್ಲಿ ನೀರು ತರಿಸಿತು.
ರಾತ್ರಿ ಗಂಡ ಹತ್ತಿರ ಬಂದಾಗ, "ರೀ, ಎಷ್ಟು ದಿನಾಂತ ಈ ಮನೆಯಲ್ಲಿ ಜೀವ ತೇಯೋದು? ನಮ್ಮ ಮಕ್ಕಳಿಗಂತೂ ಉಸಿರು ಕಟ್ಟೋ ಹಾಗಾಗಿದೆ. ಕೂತರೆ ತಪ್ಪು, ನಿಂತರೆ ತಪ್ಪು. ನಿಮ್ಮ ಅಣ್ಣನ ಮಕ್ಕಳು ಉಂಡಾಡಿ ಗುಂಡರ ತರಹ ಅಲೆದಾಡಿಕೊಂಡು ಬರ್ತಾರೆ. ನಮ್ಮ ಮಕ್ಕಳು ಅಡುಗೆ ಕೆಲಸದಿಂದ ಹಿಡಿದು ಗದ್ದೆ ಕೆಲಸ ಮಾಡುವವರೆಗೂ ಸಹಾಯ ಮಾಡ್ಬೇಕು. ನಮ್ಮ ಮಕ್ಕಳು ಬೆಳೆದಿರುವುದೆಲ್ಲಾ ಪಟ್ಟಣದಲ್ಲಿ. ಈ ಹಳ್ಳಿಯ ರೀತಿ, ರೀವಾಜು ಅವುಗಳಿಗೆಲ್ಲಾ ಹೇಗೆ ಗೊತ್ತಾಬೇಕು, ಹೇಳಿ? ಇವತ್ತು ಇಷ್ಟು ಸಣ್ಣ ವಿಷಯಕ್ಕೆ ಹೇಗೆ ಹಾರಾಡಿದ್ರು ನೋಡಿದ್ರಾ?" ಅಂದಾಗ
ಹೆಂಡತಿಯ ಮಾತಿಗೆ ತೆಪ್ಪಗೆ ಮುಸುಕೆಳೆದು ಮಲಗಿದ ಶ್ರೀನಿವಾಸನಿಗೆ ಮುಸುಕಿನ ಒಳಗಿಂದಲೇ ಚಿಂತೆ ಕಾಡಿತು. ಇದೇ ರೀತಿ ಮುಂದುವರಿದರೆ, ಒಂದಲ್ಲ ಒಂದು ದಿನ ಅಗ್ರಜ `ಮನೆ ಬಿಟ್ಟು ಹೋಗು' ಅಂದರೆ ಇಷ್ಟು ದೊಡ್ಡ ಸಂಸಾರವನ್ನು ಹಿಡಿದುಕೊಂಡು ಹೋಗುವುದು ಎಲ್ಲಿಗೆ?
ಕೊನೆಗೆ ಹೊರಳಾಡಿ ಹೊರಳಾಡಿ ಒಂದು ನಿರ್ಧಾರಕ್ಕೆ ಬಂದ. ಹೇಗೂ ತನ್ನ ಪಾಲಿನ ಹಣ ತಮ್ಮಂದಿರಿಂದ ಬರುವುದಿದೆ. ಮಧುರೈಗೆ ಹೋಗಿ ಆ ಹಣ ಹಿಡಿದುಕೊಂಡು ಬಂದು ಊರಿನಲ್ಲಿಯೆ ಸ್ವಲ್ಪ ಆಸ್ತಿಯನ್ನು ತೆಗೆದುಕೊಂಡು ಸಣ್ಣ ಮನೆ ಕಟ್ಟಿಕೊಂಡು ಸಂಸಾರ ಹೂಡುವುದು. ನಳಿನಾಕ್ಷಿಗೆ ತನ್ನ ನಿರ್ಧಾರವನ್ನು ತಿಳಿಸಿದ. ಆಕೆಗೆ ಸುತಾರಾಂ ಇಷ್ಟವಿಲ್ಲ.
"ನಮ್ಮ ಮಕ್ಕಳು ಸಿಟಿಯಲ್ಲಿ ಬೆಳೆದವರು. ಪಟ್ಟಣದಲ್ಲಿಯೆ ಒಂದು ಸಣ್ಣ ಮನೆಯನ್ನು ನೋಡಿ. ನೀವೂ ಅಲ್ಲಿ ಸಣ್ಣ ಮಟ್ಟದಲ್ಲಿ ಹೊಟೇಲೋ, ಅಂಗಡಿಯೋ ಇಟ್ಟುಕೊಂಡರೆ ಮನೆ ಖರ್ಚು ನಡೆಯುತ್ತದಲ್ಲಾ?"
"ಪಟ್ಟಣದ ಬದುಕು ಅಷ್ಟು ಸುಲಭ ಅಲ್ಲ. ಪಟ್ಟಣ ಬೆಳೆದ ಹಾಗೇ ನಮ್ಮ ಆದಾಯನೂ ಬೆಳೆಯುವ ಹಾಗಿದ್ದರೆ ಸರಿ, ಇಲ್ಲದಿದ್ದರೆ ಈ ಮಕ್ಕಳನ್ನು ಕಟ್ಟಿಕೊಂಡು ಸಂಸಾರ ನಡೆಸುವುದು ಹೇಗೆ? ಮೊದಲು ಅಣ್ಣನ ಬಳಿ ಮಾತನಾಡುತ್ತೇನೆ. ಅವನು ಏನು ಹೇಳುತ್ತಾನೋ ಹಾಗೆ ಮಾಡೋಣ" ಅಂದಾಗ ನಳಿನಾಕ್ಷಿಗೆ ಮಾತನಾಡುವಂತೆ ಇರಲಿಲ್ಲ. ಅಣ್ಣನ ಮಾತೇ ವೇದವಾಕ್ಯ ಎಂದು ತಿಳಿದ ಶ್ರೀನಿವಾಸನಿಗೆ ಅಣ್ಣನಿಂದಲೇ ಮಾತು ಬಂದಾಗ ಅಧೀರನಾದ.
"ಶ್ರೀನಿವಾಸ, ನಮ್ಮ ಸಂಸಾರಗಳು ದೊಡ್ಡ ಸಂಸಾರಗಳು. ಹಿರಿಯರ ಮನೇಂತ ಇಷ್ಟು ದಿನ ನಿನ್ನನ್ನು ಇಲ್ಲಿ ಇರೂಂತ ಹೇಳಿದೆ. ನನಗೂ ಬೇಸಾಯದಿಂದ ಏನೂ ಸಿಗ್ತಾ ಇಲ್ಲ. ನೀನು ಖರ್ಚಿಗೆ ಕೊಡುವುದು ಕೂಡ ಏನೂ ಸಾಲುವುದಿಲ್ಲ. ಹಿರಿಯರ ಆಸ್ತಿ ಬೇಡಾಂತ ಹೇಳಿ ನೀವುಗಳು ನನ್ನ ಹೆಸರಿಗೆ ಬರೆದು ಕೊಟ್ಟಿದ್ದೀರಿ. ಆದರಿಂದ ನೀನು ಇಲ್ಲೇ ಎಲ್ಲಾದರೂ ಆಸ್ತಿ ಖರೀದಿಸುವುದು ಒಳ್ಳೆಯದು. ಸುಮ್ಮನೆ ನಾವು ನಾವು ಜಗಳ ಮಾಡಿಕೊಂಡು ನಿಷ್ಠುರ ಆಗುವುದಕ್ಕಿಂತ ಮೊದಲೇ ನೀನು ಬೇರೆ ವ್ಯವಸ್ಥೆ ಮಾಡಿಕೋ"
ಅಗ್ರಜನ ಮಾತು ಕೇಳಿದ ನಂತರ ಆ ಮನೆಯಲ್ಲಿ ನಿಂತರೆ ಮರ್ಯಾದೆಯಿಲ್ಲವೆನಿಸಿತು. ಸ್ವಂತ ಅಣ್ಣನ ಮಕ್ಕಳೇ ಹೀಯಾಳಿಸುವಾಗ ಶ್ರೀನಿವಾಸನಿಗೆ ದು:ಖವೇ ಬರುತ್ತಿತ್ತು.
"ಅಣ್ಣಯ್ಯ , ಒಂದೆರಡು ತಿಂಗಳು ಅವಕಾಶ ಕೊಡು. ಎಲ್ಲಾದರೂ ಇದೇ ಊರಿನಲ್ಲಿ ಆಸ್ತಿ ತೆಗೆದುಕೊಂಡು ಸಣ್ಣ ಮನೆ ಕಟ್ಟಿ ಕುಳಿತುಕೊಳ್ಳುತ್ತೇನೆ. ಅಲ್ಲಿಯವರೆಗೆ..."
ಮುಂದೆ ಮಾತನಾಡಲಾರದೆ ಗಂಟಲುಬ್ಬಿ ಬಂತು.
"ಸರಿ, ನಮ್ಮ ಶ್ಯಾನುಭೋಗರದ್ದೆ ಜಾಗ ಮಾರಾಟಕ್ಕಿದೆ. ನೀನು ದುಡ್ಡಿನ ವ್ಯವಸ್ಥೆಯನ್ನು ಮಾಡು. ಮುಂದೆ ನೋಡೋಣ" ಅನ್ನುವಾಗಲಷ್ಟೆ ಶ್ರೀನಿವಾಸನ ಮನಸ್ಸಿಗೆ ನೆಮ್ಮದಿಯೆನಿಸಿದ್ದು.
ಅಂಗಡಿಗೆ ಒಂದು ವಾರ ಬಾಗಿಲು ಹಾಕಿ ಮಧುರೈಗೆ ಹೊರಟ ಶ್ರೀನಿವಾಸ. ತಮ್ಮಂದಿರು ಆಪ್ಯಾಯತೆಯಿಂದ ಬರ ಮಾಡಿಕೊಳ್ಳುತ್ತಾರೆನ್ನುವ ನಿರೀಕ್ಷೆ ಹುಸಿಯಾಯಿತು. ಅಣ್ಣ ಬಂದಿರುವ ವಿಷಯ ಅವರಿಗೆ ಸ್ಪಷ್ಟವಾಗಿತ್ತು. ಅದಕ್ಕಾಗಿಯೇ ಇಬ್ಬರೂ ಮುಖ ಗಂಟಿಕ್ಕಿದಂತೆ ಇದ್ದರು. ಶ್ರೀನಿವಾಸ ಕೇಳಿಯೇ ಬಿಟ್ಟ.
"ನಾನೀಗ ತಾಪತ್ರಯದಲ್ಲಿದ್ದೇನೆ. ನನ್ನ ಪಾಲಿನ ಹಣ ನೀವು ಈಗ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬೀಳುವ ಸ್ಥಿತಿ" ಪೀಠಿಕೆ ಹಾಕುವಾಗ ಹಿರಿಯ ತಮ್ಮ ಗಿರೀಶ ಒಮ್ಮೆಗೆ ಬಿ.ಪಿ. ಏರಿಸಿಕೊಂಡವರಂತೆ ಶ್ರೀನಿವಾಸನ ಎದುರು ಬಂದು ನಿಂತ.
"ಯಾವುದು ನಿನ್ನ ಹಣ? ನಾವು ಯಾಕೆ ಕೊಡಬೇಕು? ನಮಗೆ ಸಂಸಾರ ಇಲ್ವಾ? ನೀನು ಬಿಟ್ಟು ಹೋದ ನಂತರ ವ್ಯಾಪಾರ ಅಷ್ಟಕಷ್ಟೆ. ನಮಗೂ ಇಲ್ಲಿ ನೆಮ್ಮದಿಯಿಲ್ಲ. ನಾವು ಬಿಟ್ಟು ಬಿಡ್ತಾ ಇದ್ದೇವೆ"
ಗಿರೀಶನ ಮಾತುಗಳನ್ನು ಕೇಳಿ ಶ್ರೀನಿವಾಸನಿಗೆ ಆಕಾಶ ತಲೆಯೆ ಮೇಲೆ ಬಿದ್ದ ಹಾಗಾಯಿತು. ಅದರೂ ಎದೆಗುಂದದೆ ಹೇಳಿದ.
"ನೀವು, ಕೊಟ್ಟ ಮಾತಿಗೆ ತಪ್ತಾ ಇದ್ದೀರಿ. ನಾನು ಹೇಳಿದ್ನಲ್ಲಾ ನೀವುಗಳು ಹಣ ಕೊಡದಿದ್ದರೆ ನನ್ನ ಸಂಸಾರ ಬೀದಿಗೆ ಬರುತ್ತದೆ. ದಯವಿಟ್ಟು ಇಲ್ಲ ಅನ್ಬೇಡಿ" ತಮ್ಮಂದಿರಿಗೆ ಕೈ ಮುಗಿದು ಕೇಳುವ ಸ್ಥಿತಿ ಬಂದಾಗ ಮನಸಿನಲ್ಲಿ ನೋವು ಮಡುಗಟ್ಟಿತು.
ಜಗನ್ನಾಥ ಒಳಗೆ ಹೋದವನೇ ಸಿಹಿತಿಂಡಿ ಕತ್ತರಿಸುವ ಚೂರಿಯನ್ನು ತಂದು ಶ್ರೀನಿವಾಸನ ಮುಂದೆ ನಿಂತ.
"ಏನು ನಿನ್ನ ಹಣ ಬಾಕಿಯಿರೋದು? ಏನೂ ಮಾತನಾಡದೆ ಬಂದ ಹಾಗೆ ಹಿಂದೆ ಹೋಗು. ಇಲ್ಲಾಂದ್ರೆ ನೀನು ಇಲ್ಲಿಗೆ ಬಂದೇ ಇಲ್ಲಾಂತ ಮಾಡ್ತೀನಿ"
ಕಿರಿಯ ತಮ್ಮನೂ ಮಿತಿಮೀರಿ ವರ್ತಿಸಿದಾಗ ಶ್ರೀನಿವಾಸ ಭೂಮಿಗಿಳಿದು ಹೋದ. ಹಣವಿಲ್ಲದೆ ಬರಿಗೈಯಲ್ಲಿ ಹೋದರೆ ಆಗುವ ಹೋಗುವ ವಿಚಾರವಲ್ಲವೆಂದು ತಿಳಿಯಿತು.
ತಾನೇ ಮುಂದೆ ತಂದ ತಮ್ಮಂದಿರು ತಿರುಗಿ ನಿಂತಾಗ ಅಸಹಾಯಕನಂತೆ ಕೈ ಚೆಲ್ಲಿ ಕುಳಿತ.
"ನಾನು ನಿಮ್ಮ ಜೊತೆಗೆ ಜಗಳ ಕಾಯುವುದಕ್ಕೆ ಬಂದಿಲ್ಲ. ನನ್ನ ಹಣ ಕೇಳೊದಿಕ್ಕೆ ಬಂದೆ. ನೀವು ಕೊಡದಿದ್ರೆ ಬೇಡ. ನೀವುಗಳು ಚೆನ್ನಾಗಿರಿ. ಆದರೆ ನಾನು ಬರಿಗೈಯಲ್ಲಿ ಊರಿಗೆ ಹೋದರೆ ಅಣ್ಣನಿಗೂ ನನ್ನ ಮೇಲೆ ಕೋಪ ಬರುತ್ತೆ. ನನಗೆ ಸಾಲದ ರೂಪದಲ್ಲಿ ಒಂದು ಐವತ್ತು ಸಾವಿರ ಹಣ ಕೊಟ್ರೆ... ನಿಮ್ಮ ಕಷ್ಟ ಕಾಲದಲ್ಲಿ ಹಿಂದಿರುಗಿಸ್ತೇನೆ" ಎಂದು ತಮ್ಮಂದಿರನ್ನು ಕೇಳುವಾಗ ಜಗನ್ನಾಥ, ಗಿರೀಶನ ಕಡೆಗೆ ಕಣ್ಣು ಮಿಟುಕಿಸಿದ.
ಗಿರೀಶ ಒಳಗೆ ಗೋದ್ರೇಜ್ನಿಂದ ಐವತ್ತು ಸಾವಿರ ಎಣಿಸಿ, "ಇದು ಜಗನ್ನಾಥನ ಹಣ. ನೀನು ವಾಪಸು ಕೊಡುವಾಗ ಅವನಿಗೆ ಕೊಟ್ಟು ಬಿಡು" ಹಣವನ್ನು ಶ್ರೀನಿವಾಸನ ಕೈಯಲ್ಲಿಟ್ಟಾಗ ಶ್ರೀನಿವಾಸನಿಗೆ ಪರ್ವತ ಸಿಕ್ಕಷ್ಟು ಸಂತಸವಾಯಿತು. ತಮ್ಮಂದಿರ ಮನೆಗೂ ಹೋಗದೆ ನೇರವಾಗಿ ರೈಲು ಹಿಡಿದು ಊರು ತಲುಪಿದ.
ಹೆಂಡತಿಯ ಮಾತು ಕೇಳದೆ ಅವಳನ್ನು ಸಮಾಧನಿಸಿದ.
"ನೋಡು, ಪಟ್ಟಣದ ಬದುಕು ನಮಗೆ ಕಷ್ಟ. ಇಲ್ಲೆ ಶ್ಯಾನುಭೋಗರ ಆಸ್ತಿ ಮಾರೋದಿದೆಯಂತೆ. ಒಳ್ಳೊಳ್ಳೆಯ ಉಳುಮೆಯ ಗದ್ದೆಗಳು. ಆಸ್ತಿ ತೆಗೆದು ಹಾಕಿದರೆ ಮುಂದೆ ಮಕ್ಕಳಿಗೆ ಅನುಕೂಲವಾಗಬಹುದು. ನಾನು ಅಣ್ಣನ ಜೊತೆಗೆ ಹೋಗಿ ನೋಡಿಕೊಂಡು ಬರುತ್ತೇನೆ"
"ಅಲ್ಲ, ಈ ಹಳ್ಳಿಯಲ್ಲಿ ಉಳುಮೆಯ ಆಸ್ತಿ ತೆಗೆದು ಹಾಕಿದ್ರೆ, ನಮ್ಮ ಮಕ್ಕಳು ಏನು ಮಾಡಬೇಕು? ಅವುಗಳಿಗೆ ಗದ್ದೆಯ ಕೆಲಸ ಮಾಡಿ ಗೊತ್ತುಂಟಾ?"
"ನಮಗೆ ಬದುಕ ಬೇಕಾದ್ರೆ ನಮ್ಮ ಮಕ್ಕಳು ಗದ್ದೆಯ ಕೆಲಸ ಅಲ್ಲ... ಯಾವ ಕೆಲಸವನ್ನಾದ್ರೂ ಕಲಿಬೇಕು. ಮತ್ತೆ ಅವರಿಗೂ ಅಭ್ಯಾಸವಾಗುತ್ತದೆ"
ಶ್ರೀನಿವಾಸ ನಳಿನಾಕ್ಷಿಯ ಬಾಯಿ ಮುಚ್ಚಿಸಿದ. ಮರುದಿನ ಅಗ್ರಜನನ್ನು ಕರೆದುಕೊಂಡು ಶ್ಯಾನುಭೋಗರ ಬಳಿ ಮಾತನಾಡಲು ಹೋದ.
ಶ್ಯಾನುಭೋಗರು ಮೊದಲೆ ತಮ್ಮ ಜಾಗ ಮಾರಾಟ ಮಾಡುವುದೆಂದು ನಿರ್ಧರಿಸಿದ್ದರಿಂದ ಉಟ್ಟ ಬಟ್ಟೆಯಲ್ಲಿಯೆ ಗದ್ದೆಗಳನ್ನು ತೋರಿಸಲು ಹೊರಟರು. ಶ್ರೀನಿವಾಸನಿಗೆ ಗದ್ದೆಗಳೆಲ್ಲ ಹಿಡಿಸಿದವು. ಐವತ್ತು ಸಾವಿರಕ್ಕೆ ಎಲ್ಲವೂ ಇತ್ಯರ್ಥವಾಗಿ ಶ್ರೀನಿವಾಸ ಆ ಆಸ್ತಿಯ ಒಡೆಯನಾದ. ಆತ ಮಾಡಿದ ದೊಡ್ಡ ತಪ್ಪೆಂದರೆ ಗೇಣಿಯನ್ನು ಮುಂದುವರಿಸಿಕೊಂಡು ಬಂದಿದ್ದು. ಮನೆ ಕಟ್ಟಿ ಸಂಸಾರವನ್ನು ನೋಡಿಕೊಳ್ಳುವ ಹೊತ್ತಿಗೆ `ಉಳುವವನೆ ಹೊಲದೊಡೆಯ' ಕಾನೂನು ಬಂದಾಗ ಕಷ್ಟದಲ್ಲಿ ತೆಗೆದುಕೊಂಡ ಆಸ್ತಿಯೂ ಕೈ ಬಿಟ್ಟು ಹೋಯಿತು. ಮದುವೆಗೆ ತಯಾರಾಗಿ ನಿಂತ ಹೆಣ್ಣು ಮಕ್ಕಳಿಗೆ ಅದು ಹೇಗೋ ನಳಿನಾಕ್ಷಿ ಮಾಡಿಟ್ಟ ಚಿನ್ನವನ್ನು ಮಾರಿ ಮದುವೆ ಮಾಡಿಸಿದ. ಆ ಹೊತ್ತಿಗೆ ಹಿರಿಯ ಮಗ ಕೆಲಸಕ್ಕೆ ಸೇರಿದ್ದರಿಂದ ಅಷ್ಟಿಷ್ಟು ಮನೆ ಖರ್ಚು ನಡೆಯುತ್ತಿತ್ತು. ಹುಡುಗಿಯರು ಮದುವೆಯಾಗಿ ಹೋದರೂ ಅವರಿಗೆ ನೆಮ್ಮದಿಯಿರಲಿಲ್ಲ. ಹಿರಿ ಮಗಳು ಉಪಾಸನ ಬಡತನದಲ್ಲಿಯೆ ಸಂಸಾರ ಹೂಡುವಂತಾದರೆ, ಎರಡನೆಯ ಮಗಳು ಆರಾಧನ ಮದುವೆಯಾಗಿ ಆರು ತಿಂಗಳಿನಲ್ಲೇ ತವರು ಸೇರುವಂತಾಯಿತು. ಮೂರನೆಯ ಮಗಳು ಅರ್ಚನಾಳ ಗಂಡ ಸ್ಫುರದ್ರೂಪಿ ಯುವಕ. ಸ್ವಲ್ಪ ಹೆಣ್ಣುಗಳ ಜೊತೆಗೆ ಮಾತುಕತೆ ನಡೆದಾಗ ಸಂಶಯ ಹೊಂದಿದ ಅರ್ಚನಾಳಿಗೆ ದಿನ ಅವನ ಜೊತೆಗೆ ಜಗಳ ಕಾಯುವುದೆ ಆಯಿತು. ನಾಲ್ಕನೆಯವಳು ಪೂಜಾ. ಅವಳ ಗಂಡನ ಕೈ ಯಾವಾಗಲೂ ತೂತೆ. ಹಾಗಾಗಿ ಹೆಣ್ಣು ಮಕ್ಕಳ ಗೋಳಿನ ಪತ್ರ ಬಂದಾಗಲೆಲ್ಲಾ ಶ್ರೀನಿವಾಸ ಹೈರಾಣಗುತ್ತಿದ್ದ. ನಳಿನಾಕ್ಷಿಗಂತೂ ಕಣ್ಣೀರು ತಪ್ಪಿದಲ್ಲ. ಕೊನೆಗೆ ಆತ ಹಾಸಿಗೆ ಹಿಡಿದ. ಹಾಸಿಗೆ ಹಿಡಿದ ಎರಡು ವಾರಗಳಲ್ಲಿಯೆ ಆತನ ಸಂಸಾರದ ಗಾಲಿ ಕಳಚಿಕೊಂಡಿತು. ಇನ್ನೆರಡು ವರ್ಷಕ್ಕೆ ನಳಿನಾಕ್ಷಿ ಕೂಡ ಗಂಡನ ಕಡೆಗೆ ನಡೆದದ್ದಾಯಿತು. ಆ ಮನೆಯಲ್ಲಿ ನೆಮ್ಮದಿ ಅಳಿಸಿತು. ಹಿರಿಯ ಮಗ ದೂರವಿದ್ದುದರಿಂದ ಎರಡನೆಯ ಮಗ ಉಳಿದ ಆಸ್ತಿಯ ಜವಾಬ್ದಾರಿಯನ್ನು ಹೊರುವಂತಾಯಿತು.
***
ಹಳೆಯ ನೆನಪುಗಳೆಲ್ಲಾ ಕೆದಕಿ ಆ ರಾತ್ರಿಯಿಡಿ ನಿದ್ದೆ, ವೆಂಕಟಭಟ್ಟನಿಂದ ದೂರವೇ ಉಳಿಯಿತು. ಅಪ್ಪ ಇಷ್ಟು ಕಷ್ಟ ಬಿಟ್ಟು ಮಾಡಿನ ಆಸ್ತಿಯನ್ನು ಮಾರುವ ಮಾತು ಮುಂದೆ ಈ ಮನೆಯಲ್ಲಿ ಬರಬಾರದೆಂಬ ನಿರ್ಧಾರವನ್ನು ತೆಗೆದುಕೊಂಡ. ವನಜಾಕ್ಷಿ ಪಕ್ಕಕ್ಕೆ ಬಂದು ಮಲಗಿದರೂ ಗೋಚರವಾಗಲಿಲ್ಲ. ತದೇಕ ದೃಷ್ಟಿಯಿಂದ ಸೂರನ್ನೇ ದಿಟ್ಟಿಸುತ್ತಾ ಮಲಗಿದ.
"ರೀ" ವನಜಾಕ್ಷಿಗೂ ನಿದ್ದೆ ಸುಳಿಯದೆ ಗಂಡನನ್ನು ಕರೆದಳು.
"ಏನಾಗ್ಬೇಕು?"
"ಅಲ್ಲ... ನೀವಂದ್ರಿ... ನಮ್ಗೆ ಹೆಣ್ಣು ಸಂತಾನ ಅಗೊದು ಬೇಡಾಂತ ನಿಮ್ಮ ತಂದೆ-ತಾಯಿಯ ಶಾಪ ಇದೇಂತ, ಇದು ಸತ್ಯಾನಾ? ಯಾರಾದ್ರೂ ತಮ್ಮ ಸ್ವಂತ ಮಕ್ಕಳಿಗೆ ಆ ರೀತಿ ಶಾಪ ಕೊಡ್ತಾರಾ?"
"ನಾನು ಆಗ್ಲೆ ಹೇಳಿದ್ನಲ್ಲಾ... ನಮ್ಮ ಮನೆ ಹೆಣ್ಣುಗಳ ಕಷ್ಟ ನೋಡಿ ಹಾಗೆ ಅಂದಿರಬಹುದೂಂತ ಹೇಳಿದೆ. ಹಾಗೇ ಇನ್ನೂ ತಿಳಿದುಕೊಳ್ಳುವ ಇಚ್ಛೆ ಇದ್ರೆ ನಾಳೆ ರಾಮ ಜೋಯಿಸರತ್ರ ಹೋಗಿ ಬರೋಣ"
ಗಂಡನ ಮಾತಿನಲ್ಲಿ ವ್ಯಂಗ್ಯವಿದ್ದುದನ್ನು ಗುರುತಿಸಿದ ವನಜಾಕ್ಷಿಗೆ ಮಾತನಾಡಲಾಗದೆ ವಿರುದ್ಧ ದಿಕ್ಕಿಗೆ ಹೊರಳಿ ಮಲಗಿದಳು. ಆದರೆ ಮನಸ್ಸು ತಡೆಯಲಾರದೆ ಮಗ್ಗುಲು ಬದಲಿಸದೆ ಕೇಳಿದಳು.
"ನಮಗೆ ಹೆಣ್ಣು ಮಗು ಆಗೋದಿಲ್ವಾ?"
"ಪದೇ ಪದೇ ಅದನ್ನು ಕೇಳಬೇಡ. ಹೆಣ್ಣು ಮಗು ಆಗದಿದ್ರೆ ದತ್ತು ತೆಗೆದುಕೊಳ್ಳೋಣ. ಈಗ ಸುಮ್ನೆ ಮಲಗು"
"ಹಾಗಂತೀರಾ? ಅದು ನಮ್ಮ ಮಗು ಆಗೊದಿಲ್ವಲ್ಲಾ?"
"ಮನಸ್ಸು ಉದಾರವಾಗಿರಲಿ. 0ಾರದ್ದಾದರೇನು, ಜವಾಬ್ದಾರಿ ನಾವು ತೆಗೆದುಕೊಂಡ ನಂತರ ಅದು ನಮ್ಮದೆ ಮಗು ತಾನೆ?"
"ಹಾಗಾ?"
ಗಂಡನ ಮಾತುಗಳನ್ನು ಮೆಲುಕು ಹಾಕಿಕೊಂಡು ವನಜಾಕ್ಷಿ ಹಾಗೆ ನಿದ್ರೆಗೆ ಜಾರಿದರೆ, ವೆಂಕಟ ಭಟ್ಟರಿಗೂ ಏನೋ ತೃಪ್ತಿಯೆನಿಸಿ ಹಾಗೆ ಕಣ್ಣು ಮುಚ್ಚಿ ನಿದ್ದೆಗೆ ಇಳಿದರು.
****

Read more!

Wednesday, November 25, 2009

ಭೂತದ ಕೋಳಿ (ಮಯೂರದಲ್ಲಿ ಪ್ರಕಟವಾದ ಕಥೆ)


ಬೆಳಿಗ್ಗೆ ಬೇಗನೆ ಎದ್ದು ಬಚ್ಚಲು ಮನೆಯ ಒಲೆಗೆ ಬೆಂಕಿ ಹಾಕಿ, ಒಂದಷ್ಟು ಕೊತ್ತಳಿಗೆಗಳನ್ನು ಒಳಗೆ ತಳ್ಳಿ ಎದ್ದ ಕೇಶವ ಭಟ್ಟರು ಬೈರಾಸನ್ನು ಹೆಗಲಿಗೆ ಸೇರಿಸಿ ಗದ್ದೆಯ ಪುಣಿಯನ್ನು ಹಿಡಿದು ಹೊರಟರು. ಭತ್ತದ ತೆನೆಗಳು ಪಾಯಕಟ್ಟಿ, ಹಸಿರಿನಿಂದ ಬಂಗಾರದ ಬಣ್ಣಕ್ಕೆ ತಿರುಗಿದ್ದವು. ಇನ್ನೊಂದೆರಡು ದಿನ ನೀರು ಹಾಕಿದರೆ ಸಾಕು. ಹೇಗೂ ಹದಿನೈದು ದಿನಗಳೊಳಗೆ ಕೊಯ್ಲು ಆರಂಭಿಸುವುದೇ ಎಂದು ನಿರ್ಧರಿಸಿದವರು, ಪಂಪಿನ ನೀರನ್ನು ಗದ್ದೆಗೆ ತಿರುಗಿಸಿ ಹೆಗಲಿನ ವಸ್ತ್ರದಿಂದ ಕೈ ಒರೆಸಿಕೊಂಡರು.


ಎಲ್ಲಿದ್ದವೋ, ಸೈನಿಕರ ಪಡೆಯಂತೆ ಓಡಿ ಬಂದ ಹತ್ತು ಹದಿನೈದು ಕೋಳಿಗಳು ಹಠಾತ್ತನೆ ದಾಳಿ ಮಾಡುವಂತೆ ಭಟ್ಟರು ನೋಡುತ್ತಿದ್ದಂತೆ ಮಾಗಿದ ತೆನೆಗಳನ್ನು ಕುಕ್ಕಿ, ನುಂಗುತ್ತಿದ್ದವು. ತುಂಬಿದ್ದ ತೆನೆಯ ಅಷ್ಟೇ ಕಾಳುಗಳು ಗದ್ದೆಯನ್ನೂ ಸೇರುತ್ತಿದ್ದವು. ಅವರು ಹೆಗಲಿನ ಬೈರಾಸು ತೆಗೆದು, `ಹೌ.. ಹೌ... ಅಂದರೂ, `ಕೊಕ್ಕೋ.. ಕ್ಕೋ ಎಂದು ಸದ್ದು ಹೊರಡಿಸಿ ತಮ್ಮವರನ್ನೆಲ್ಲ ಎಚ್ಚರಿಸಿದವೆ ಹೊರತು, ರೆಕ್ಕೆ ಬಿಚ್ಚದೆ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿದವು.

ಭಟ್ಟರು ನೇರವಾಗಿ ಮನೆಗೆ ಬಂದವರೇ, ಇಕ್ಕಳ್ಳೇ, ಅಲ್ಲಿ ಒಂದು ದೊಡ್ಡ ಸೈನ್ಯವೇ ಬಂದಿದೆ. ಪೈರೆಲ್ಲಾ ಹಾಳಾಗುತ್ತೆ. ಮಕ್ಕಳಿಗೆ ಹೇಳು ಆ ಗದ್ದೆಯತ್ರ ಕುಳಿತುಕೊಂಡು ಓದಲಿ. ಅವುಗಳನ್ನು ಕಾಯುವುದಕ್ಕೂ ಆಯ್ತು, ಓದುವುದಕ್ಕೂ ಆಯ್ತಲ್ಲ ಅಂದರು.
ಬೆಳಗ್ಗಿನ ಉಪಹಾರ ಮುಗಿಸದೆ ಮಕ್ಕಳು ಪುಸ್ತಕ ಕೈಯಲ್ಲಿ ಹಿಡಿಯುವುದಿಲ್ಲವೆಂದು ಮೀನಾಕ್ಷಮ್ಮನಿಗೆ ಗೊತ್ತು. ದೋಸೆ ಹೊಯ್ಯುತ್ತಿದ್ದವರು ಗಂಡನಿಗೆ, ನೀವು ಪೂಜೆ ಮಾಡಿ ಹೊರಡಿ. ನಾನೇ ನೋಡಿಕೊಳ್ತೇನೆ. ಅವರಿಗೆಲ್ಲಾ ನಮ್ಮ ಮೇಲೆ ಎಂತದ್ದೋ ಹಠ. ಇಲ್ಲಾಂದ್ರೆ ಇಷ್ಟು ಬೇಗನೆ ಆ ಕೋಳಿಗಳನ್ನೆಲ್ಲಾ ಬಿಡೋದಾ? ಅವುಗಳಿಗೆ ನಾಲ್ಕು ಕಾಳು ಹಾಕುವ ಗತಿಯಿಲ್ಲದವರು ಸಾಕುವುದು ಯಾಕೆ? ಆ ಸೇಸಕ್ಕನಿಗೆ ನಾನೇ ಹೇಳಿ ಬರ್ತೇನೆ. ಎಂತದು ಇದು ಇಲ್ಲಾಂದ್ರೆ? ಹೇಳಿದವರೇ ಕಟ್ಟಿಗೆಯ ಒಲೆಯ ಉರಿಯನ್ನು ಕಡಿಮೆ ಮಾಡಿ ತಮ್ಮ ಹಿರಿ ಮಗಳನ್ನು ಕರೆದರು."

ಸಾವಿತ್ರಿ, ಇಲ್ಲಿ ಬಾ. ದೋಸೆ ಕಲ್ಲು ಕಾಯ್ತು. ಒಂದೆರಡು ದೋಸೆ ಹಾಕು. ಆ ಕೋಳಿಗಳನ್ನು ಓಡಿಸಿ ಬರ್ತೇನೆ ಅಂಗಳಕ್ಕಿಳಿದು ಕೈಯಲ್ಲಿ ಒಂದೆರಡು ಮಣ್ಣಿನ ಹೆಂಟೆಗಳನ್ನು ಹಿಡಿದು ನಿಧಾನವಾಗಿ ಗದ್ದೆಯತ್ತ ನಡೆದರು. ಒಮ್ಮೆ ತಲೆಯೆತ್ತಿ ಸದ್ದು ಆಲಿಸಿದ ಕೋಳಿಗಳು, `ಕ್ಕೊಕ್ಕೋ ಅಂದವು. ಗಂಡ ಹೇಳಿದ್ದು ಸುಳ್ಳಲ್ಲ. ಒಂದು, ಎರಡಾ? ಹತ್ತು ಹದಿನೈದು ಕೋಳಿಗಳು. ಗದ್ದೆಯ ನೇರಕ್ಕೆ ನಿಂತು ಮಣ್ಣಿನ ಹೆಂಟೆಗಳನ್ನು ಒಂದರ ಹಿಂದೆ ಒಂದರಂತೆ ಬಿಸಾಡಿದರೆ ತಪ್ಪಿಸಿಕೊಂಡು ತಮಗೆ ಹಾರಲು ಗೊತ್ತಿದೆ ಎಂದು ಎತ್ತರಕ್ಕೆ ಹಾರಿ, `ಕೊಕ್ಕೊಕ್ಕೋ ಅನ್ನುವ ದೊಡ್ಡ ಗದ್ದಲವನ್ನೆಬ್ಬಿಸಿ ಕೆಳಗಿನ ಮನೆಯತ್ತ ಹಾರಿದವು.
ಕೆಳಗೆ ಸೇಸಕ್ಕ, ಗಿರಿಜಕ್ಕ, ಪದ್ರಸನ ಮನೆಗಳು. ಎಲ್ಲರ ಮನೆಯಲ್ಲಿಯೂ ಕೋಳಿಗಳು. ಗಿರಿಜಕ್ಕ ಶಿಸ್ತಿನಲ್ಲಿ ಕೋಳಿಗಳನ್ನು ಕುತ್ತರಿಯೊಳಗೆ ಹಾಕಿಟ್ಟರೆ, ಪದ್ರಸ ಒಂದು ಕೋಳಿಯೂ ಅಂಗಳ ಬಿಟ್ಟು ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದ.

ಆದರೆ ಸೇಸಕ್ಕ ಹಾಗಲ್ಲ. ಅವರ ಮನೆಯಲ್ಲಿ ಬೇಕಾದಷ್ಟಿದ್ದರೂ ಇನ್ನೊಬ್ಬರದಕ್ಕೆ ಆಸೆ ಪಡುವವರು. ಐದು ಗಂಟೆಗೆ ಎದ್ದರೇ ಮೊದಲು ಕೋಳಿಗಳನ್ನು ಬಿಡುವ ಕೆಲಸ ಅವರದ್ದು. ತಮಗೆ ಎಲ್ಲಿ ಆಹಾರ ಸಿಗುತ್ತದೆಯೆಂದು ಅವುಗಳಿಗೂ ಗೊತ್ತು. ನೇರವಾಗಿ ಬರುವುದೇ ಭಟ್ಟರ ಗದ್ದೆಗಳಿಗೆ.
ಕೋಳಿಗಳ ಆರ್ಭಟ ಕೇಳಿ ಮಡಲಿನ ತಟ್ಟಿಯಿಂದ ಹೊರಗೆ ಇಣುಕು ಹಾಕಿದ ಸೇಸಕ್ಕ, ಭಟ್ಟರ ಹೆಂಗಸು, ಮೀನಾಕ್ಷಮ್ಮನನ್ನು ನೋಡುತ್ತಲ್ಲೇ ಹೊರಗೆ ಧಾವಿಸಿ ಬಂದರು. ಎಂತದ್ದು ಇದು? ನಿಮ್ಮ ಜಾತಿಯೆಂತದ್ದು? ನೀವು ಕೋಳಿಗಳನ್ನು ಕೊಲ್ಲುತ್ತೀರಾ? ಪಾಪ... ಪಾಪ ತಟ್ಟುತ್ತದೆ ನಿಮಗೆ ಅಂದದ್ದೇ ಮೀನಾಕ್ಷಿಯವರಿಗೆ ಸಿಟ್ಟು ಬಂತು. ನೀವು ಎಂತದ್ದು ಮಾತನಾಡುವುದು? ನೀವು ಮಾಡಿದ್ದು ಸರಿಯಾ? ಬೆಳಿಗ್ಗೆದ್ದು ಕೋಳಿಗಳನ್ನು ನಮ್ಮ ಗದ್ದೆಗೆ ಮೇಯಲ್ಲಿಕ್ಕೆ ಬಿಡುವುದಾ? ನಿಮಗೆ ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲವಾ? ನಾವೇನು ಅವುಗಳನ್ನು ನಿಮ್ಮ ಗದ್ದೆಗೆ ಬಿಟ್ಟಿದೇವಾ? ಅವುಗಳಿಗೇನು ಗೊತ್ತು? ನೀವು ಹಾಗೆ ಕಲ್ಲು ಬಿಸಾಡಿದರೆ ಅವು ಸಾಯುವುದಿಲ್ಲವಾ?

ಅಷ್ಟು ನಿಮಗೆ ಕಾಳಜಿಯಿದ್ದರೆ ನಿಮ್ಮ ಕೋಳಿಗಳನ್ನು ನೀವೇ ನೋಡಿಕೊಳ್ಳಿ. ಇಲ್ಲಿಗೆ ಎಂತಕ್ಕೆ ಬಿಡುವುದು? ಎಂದು ಹೇಳುತ್ತಲೇ ಮನೆಗೆ ಬಂದರು ಮೀನಾಕ್ಷಮ್ಮ. ಸೇಸಕ್ಕ ಇನ್ನೂ ಗೊಣಗುತ್ತಿರುವುದು ಕೇಳಿಸುತ್ತಿತ್ತು.
ಮೀನಾಕ್ಷಿಯವರು ಕೈ ತೊಳೆದುಕೊಂಡು ಬಂದು ಮಗಳನ್ನು ಎಬ್ಬಿಸಿ ದೋಸೆ ಹೊಯ್ಯಲು ತಾವೇ ಕುಳಿತರು. ಅಷ್ಟರಲ್ಲಿ ಕೇಶವ ಭಟ್ಟರು ಕೂಡ ಪೂಜೆ ಮುಗಿಸಿ ಅಂಗಡಿಗೆ ಹೊರಡಲು ಅನುವಾದರು. ಆ ಹೆಂಗಸೆಂತ ಬೊಬ್ಬೆ ಹಾಕಿದ್ದು? ಬೆಳಗ್ಗೆದ್ದು ಅವುಗಳತ್ರ ಎಂತ ಮಾತಡ್ಲಿಕ್ಕೆ ಹೋಗಿದ್ದು? ಭಟ್ಟರ ಮಾತು ಕೇಳಿ ಮೀನಾಕ್ಷಿಗೆ ರೇಗಿತು.ನೀವೇ ಹೇಳಿದ್ದಲ್ಲ. ಅಲ್ಲಿ ಒಂದು ದೊಡ್ಡ ಪಡೆಯೇ ಇತ್ತು. ಕಲ್ಲು ಬಿಸಾಡಿದ್ದಕ್ಕೆ ಆ ಹೆಂಗಸು ಒದರ್ತು. ಇನ್ನು ಬರ್ಲಿ ಕೊಂದೇ ಹಾಕ್ತೇನೆ ಅಂದಾಗ ಭಟ್ಟರಿಗೆ ಹೆದರಿಕೆಯಾಯಿತು.ಎಂತದು ನೀನು ಹೇಳುವುದು? ಇನ್ನು ಅದೊಂದು ಅಪವಾದ ನಮಗೆ ಬೇಡ. ಅವತ್ತು ಆ ಪದ್ರಾಸ ಮಾಡಿದ್ದು ಗೊತ್ತುಂಟಲ್ಲಾ? ನಮ್ಮನ್ನು ಅವರು ನೆಮ್ಮದಿಯಿಂದ ಬದುಕುವುದಕ್ಕೆ ಬಿಡುವುದಿಲ್ಲ. ಆದ್ರೂ ಇಂತದಕ್ಕೆಲ್ಲಾ ಹೋಗುವುದು ಬೇಡ. ಆದಷ್ಟು ನೋಡಿಕೊಳ್ಳುವ. ಅವುಗಳ ಪಾಲು ಅವುಗಳಿಗೆ ಹೋಗ್ಲಿ ಎಂದು ಮಡದಿಯನ್ನು ಸಮಾಧಾನಿಸಲು ಪ್ರಯತ್ನಿಸಿದರು.


ಆ ಪದ್ರಾಸ ಅಷ್ಟು ಗಲಾಟೆ ಮಾಡಿದ್ರೂ ಈಗ ಸರಿಯಾಗಿಲ್ವಾ? ನೋಡುವಾ... ಈಗ ಅವನ ಕೋಳಿಗಳು ಬರ್ತಾವಾ? ನಾವು ಬ್ರಾಹ್ಮಣರೆಂದರೆ ಅವರಿಗೆಲ್ಲಾ ತಾತ್ಸಾರ. ನಾವು ಯಾರ ತಂಟೆಗೆ ಹೋಗದಿದ್ದರೂ ಸುಮ್ಮನೆ ನಮ್ಮ ಕಾಲು ಏಳಿತಾರೆ. ಇವರೆಲ್ಲಾ ಯಾಕೆ ಮಾತಾಡಿ ಮನಸ್ಸು ನೋಯಿಸ್ತಾರೋ? ಮೀನಾಕ್ಷಿಯ ಮಾತು ಕೇಳಿ ಭಟ್ಟರಿಗೂ ಬೇಸರವೆನಿಸಿತು. ಊರಿಗೆ ಬಂದಾಗಿನಿಂದ ಒಬ್ಬರಲ್ಲ ಒಬ್ಬರು ಹಠ ಹಿಡಿದು ಜಗಳ ಕಾಯುತ್ತಿದ್ದರು. ನೆರೆಕರೆಯೇ ದೊಡ್ಡ ಹೊರೆಯಂತಾಗಿತ್ತು.

ಚುಚ್ಚಿ ಮಾತನಾಡುವವರೂ ಎಲ್ಲೆಲ್ಲಿಯೂ ಇದ್ದಾರೆ. ಅದು ಅವರವರ ಸಣ್ಣತನ. ನಾಲ್ಕು ದೊಡ್ಡ ಜನರ ಸಂಪರ್ಕದಲ್ಲಿರುವ ಒಬ್ಬ ಸಾಮಾನ್ಯ ವ್ಯಕ್ತಿ ತಾನೇ ದೊಡ್ಡ ಮನುಷ್ಯ ಅಂದುಕೊಳ್ಳುತ್ತಾ, ಇತರರನ್ನು ಹಂಗಿಸುತ್ತ, ಬೆನ್ನಿಗೆ ಇರಿಯುತ್ತಲೇ ಇರುತ್ತಾನೆ. ತನಗಿಲ್ಲದ ಸುಖ, ಸಂತೋಷಗಳನ್ನು ಬೇರೆಯವರಲ್ಲಿ ಕಂಡು, ಅನಗತ್ಯವೆನಿಸಿದರೂ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಕೆಟ್ಟದಾಗಿ ನೋಡುತ್ತಾನೆ. ಒಂದಲ್ಲಾ ಒಂದು ದಿನ ಅಂತಹವರೂ ಕೆಳಗೆ ಬೀಳುತ್ತಾರೆಯೇ ಅಂದುಕೊಂಡ ಭಟ್ಟರು ಪದ್ರಾಸ ಆ ದಿನ ಮಾಡಿದ್ದನ್ನು ನೆನೆಸಿಕೊಂಡರು.


ಮನೆ ಕಟ್ಟಿದ ನಂತರ ಮೊದಲ ಬಾರಿಗೆ ಗದ್ದೆ ನೆಟ್ಟಿದ್ದು. ಆ ವರ್ಷವೇ ಪದ್ರಸನ ದೊಡ್ಡ ಹುಂಜ ಗದ್ದೆಯನ್ನು ದಾಟಿ ಭಟ್ಟರ ಅಂಗಳದವರೆಗೂ ಬಂದಿತ್ತು. ಆ ದಿನ ಸರೀ ಬಿಸಿಲು ಇದ್ದದ್ದಕ್ಕೆ ಮೀನಾಕ್ಷಮ್ಮ ರಾಗಿಯ ಸೆಂಡಿಗೆ ಹಾಕಿದ್ದರು. ಸೆಂಡಿಗೆ ಹರಡಿದ್ದ ಬಟ್ಟೆಯ ಮೇಲೆ ರಾಜಾರೋಷವಾಗಿ ಓಡಾಡಿತ್ತು ಅದು. ಕಾಗೆಗಳ ಉಪದ್ರಕ್ಕೆ ಹೆದರಿದ್ದ ಅವರಿಗೆ ಈ ರೀತಿಯಾಗಿ ಕೋಳಿ ಸೆಂಡಿಗೆಯ ಮೇಲೆ ಓಡಾಡುತ್ತದೆಯೆನ್ನುವ ಅಲೋಚನೆಯೇ ಇರಲಿಲ್ಲ. ಪಕ್ಕದಲ್ಲಿಯೇ ಕಾಡು ಇದ್ದದ್ದರಿಂದ ಅವರು ಅದು ಕಾಡು ಕೋಳಿಯೇ ಬಂದಿದೆಯೆಂದು ಮಕ್ಕಳನ್ನು ಕರೆದು ತೋರಿಸಿದರು. ಮಕ್ಕಳು ಅದನ್ನು ನೋಡುವ ಕುತೂಹಲದಿಂದ ಹೊರಗೆ ಬರುವಾಗ ಅದು ಒಂದಷ್ಟು ಕಡೆಗೆ ಇಶ್ಶಿ ಕೂಡ ಮಾಡಿತ್ತು. ಸೆಂಡಿಗೆಯ ಬಣ್ಣಕ್ಕು ಅದಕ್ಕೂ ಪರಕ್ಕೇ ಇರಲಿಲ್ಲ. ಮಕ್ಕಳು ಕರೆದು ಹೇಳುವಾಗ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದವರೇ ಅದನ್ನು ಅಟ್ಟಿಸಿಕೊಂಡು ಹೋದರು.

ಅದು ಕಾಡಿನ ಕಡೆಗೆ ಓಡುವುದು ಬಿಟ್ಟು ಕೆಳಗಿನ ಮನೆಯತ್ತ ಓಡಿತು. `ಅಯ್ಯೋ ದೇವರೇ! ಇದು ಕಾಡು ಕೋಳಿ ಅಲ್ವಾ? ಮನುಷ್ಯ ಸಾಕಿದ ಕೋಳಿ ಈ ತರ ಇನ್ನೊಬ್ಬರ ಮನೆಗೆ ಹೋಗಿ ಉಪದ್ರ ಮಾಡ್ತದ? ಅಂದವರೇ ಅದು ಯಾರ ಕೋಳಿ ಎಂದು ತಿಳಿಯುವ ಕುತೂಹಲಕ್ಕೆ ಅಲ್ಲಿಯೇ ನಿಂತಿದ್ದ ಪದ್ರಸನ ಮಗನನ್ನು ಕೇಳಿದರು. `ನಮ್ಮ ಕೋಳಿ ಅಂದ ಅವನನ್ನು ಕರೆದು ಹೇಳಿದರು. ನೋಡು, ಮನೆಯಲ್ಲಿ ಹೇಳು... ಕೋಳಿ ಸೆಂಡಿಗೆಯ ಮೇಲೆಲ್ಲ ಇಶ್ಶಿ ಮಾಡಿದೇಂತ. ಇನ್ನು ಇತ್ತ ಕಡೆ ಬಂದ್ರೆ ಕಲ್ಲು ಬಿಸಾಡ್ತೇನೆ

ಪದ್ರಸನ ಮಗ ಹಾಗೇ ಹೋಗಿ ಮನೆಯಲ್ಲಿ ಹೇಳಿರಬೇಕು. ಒಂದೆರಡು ದಿನ ಆ ಹುಂಜ ಕಾಣಿಸಲೇ ಇಲ್ಲ. ಆದರೆ ಮರು ದಿನ ದನದ ಹಟ್ಟಿಯಲ್ಲಿ ಇಟ್ಟಿದ್ದ ಅಕ್ಕಚ್ಚಿಯ ಪಾತ್ರೆಯ ಮೇಲೆ ನಿಂತು ಇಶ್ಶಿ ಮಾಡಿದನ್ನು ಕಣ್ಣಾರೆ ನೋಡಿದ ಮೀನಾಕ್ಷಿಯವರಿಗೆ ರೇಗಿತು. ಮಾತಾಡದೆ ಮೆಲ್ಲ ಬಂದವರೇ ಅದು ಎತ್ತ ಕಡೆಗೆ ಹಾರಿ ಹೋಗುತ್ತದೆಯೆಂದು ತಿಳಿದು ಅತ್ತ ಅಡ್ಡ ನಿಂತು ತೂರಿ ಒಂದು ಕಲ್ಲನ್ನು ಒಗೆದರು. ಕೋಳಿ ಕಂಗಾಲಾಗಿ `ಕೊಕ್ಕೊಕ್ಕೋ ಕೂಗುತ್ತಾ ಕಾಡಿನತ್ತ ಹಾರಿತ್ತು. ಸುಮಾರು ಸಮಯದವರೆಗೂ ಕಾಡಿನ ಮರದ ಮೇಲೆ ಕುಳಿತು ಕೂಗುತ್ತಿದ್ದುದು ಕೇಳುತ್ತಿತ್ತು. ಸಂಜೆಯ ಹೊತ್ತಿಗೆಲ್ಲ ಕೂಗು ನಿಂತಿತ್ತು. ಆದರೆ ಪದ್ರಸನ ಮನೆಯಲ್ಲಿ `ಬೋ... ಬೋ... ಎಂದು ಕೋಳಿಯನ್ನು ಕರೆಯುವ ಕೂಗು ಮಾತ್ರ ಕೇಳುತ್ತಲೇ ಇತ್ತು. ಹೊರಗೆ ಮುಸ್ಸಂಜೆಯ ಹೊತ್ತು ತುಳಸಿಕಟ್ಟೆಗೆ ದೀಪ ಇಡಲು ಬಂದಿದ್ದ ಮೀನಾಕ್ಷಿಯವರಿಗೆ ಅದನ್ನು ಕೇಳಿ ಆತಂಕವಾಯಿತು.

`ಕಾಡಿನಾಚೆ ಹೋದ ಕೋಳಿ ಮನೆಗೆ ಬರಲಿಲ್ಲವಾ? ನಾನೇ ಅದನ್ನು ಓಡಿಸಿದ್ದಲ್ವಾ? ಅಲ್ಲಿ ನರಿ ಗಿರಿಯೇನಾದರೂ ಹಿಡಿಯಿತಾ, ಹೇಗೆ? ಪದ್ರಸನ ಮನೆಯಲ್ಲಿ ನಡೆಯುತ್ತಿರುವ ಆತಂಕದ ದೃಶ್ಯ ಅವರ ಕಣ್ಣ ಮುಂದೆ ಸುಳಿಯುತ್ತಲೇ ಬೆದರಿದರು. ಮನಸ್ಸು ತಡೆಯಲಾರದೆ ಮಗನನ್ನು ಕಳುಹಿಸಿ, `ನಿಮ್ಮ ಕೋಳಿ ಕಾಡಿನ ಹತ್ತಿರ ಕೂಗ್ತಾ ಇತ್ತೂಂತ ಹೇಳು ಅಂದರು. ಮಗ ಪಟ್ಟಾಬಿ ಹಾಗೇ ಪದ್ರಸನ ಮನೆಗೆ ಬಂದು ಹೇಳುವಾಗ ಮತ್ತೂ ಒಂದು ಮಾತು ಹೇಳಿದ್ದ. `ಅಮ್ಮನೇ ಅದನ್ನು ಕಾಡಿಗೆ ಓಡಿಸಿದ್ದು ಅಂತ. ಪದ್ರಾಸ ರಾತ್ರಿಗೆ ಕುಡಿದು ಬಂದವನು ಹುಂಜ ಕಾಣದ್ದಕ್ಕೆ ಏನೇನೋ ಬಯ್ಯುತ್ತಿದ್ದದ್ದು ಕೇಳಿಸುತ್ತಿತ್ತು.
ಮರು ದಿವಸ ಕಾಡಿನ ಬದುವಿನ ಹತ್ತಿರ ಕೋಳಿ ಸತ್ತು ಬಿದ್ದಿದ್ದು ನೋಡಿ, ಪದ್ರಾಸ ಮೀನಾಕ್ಷಿಯಮ್ಮನನ್ನು ಸೇರಿ ಬೈಯ್ಯುತ್ತಿದ್ದ. ಅವರು ಮಕ್ಕಳನ್ನು ಹೊರಗೆ ಹೋಗದ ಹಾಗೇ ನೋಡಿಕೊಂಡರು. ಆದರೂ ಭಯ ಅವರಿಂದ ದೂರವಾಗಲಿಲ್ಲ. ಮಧ್ಯಾಹ್ನದ ಹೊತ್ತು ಕೇಶವ ಭಟ್ಟರು ಅಂಗಡಿಯಿಂದ ಬರುವಾಗ ಪದ್ರಾಸ ಹಡೆ ಮಾತುಗಳನ್ನು ಒದರುತ್ತಾ ಸತ್ತ ಕೋಳಿಯನ್ನು ತಂದು ಭಟ್ಟರ ಮನೆಯಂಗಳಕ್ಕೆ ಬಿಸಾಡಿದ. ಗಿರಿಜಕ್ಕನ ಮನೆಯವರು, ಸೇಸಕ್ಕನ ಮನೆಯವರೆಲ್ಲಾ ಇದನ್ನು ನಾಟಕದಂತೆ ನೋಡುತ್ತಾ ನಿಂತಿದ್ದರು.


ಕಟ್ಟದ ಕೋಳಿ ಅದು. ನಾಲ್ಕೈದು ಬಾರಿಯಾದರೂ ಗೆಲ್ಲುತ್ತಿತ್ತು. ಅದನ್ನೇ ಸಾಯಿಸಿದ್ರಲ್ಲ. ನೀವೇ ತಿನ್ನಿ ಅಂದು ಹಿಡಿ ಶಾಪ ಹಾಕಿ ಹೋದ ಪದ್ರಾಸ. ಮೀನಾಕ್ಷಿಯವರಿಗೆ ಅಳುವೇ ಬಂತು. ಗಂಡ ತಲೆ ತಗ್ಗಿಸಿಕೊಂಡೇ ಒಳಗೆ ಬರುವಾಗ ಅವರಿಗೆ ದು:ಖ ತಡೆಯಲಾಗಲಿಲ್ಲ. ಇಂತದನ್ನೆಲ್ಲಾ ಕೇಳಬೇಕಾಯಿತಲ್ಲ? ಎಂದು ವ್ಯಥೆ ಪಟ್ಟರು. ನಾನು ಹೇಳಿಲ್ವಾ ನಿನಗೆ, ನಮಗೆ ಎಂತಕ್ಕೆ ಬೇಕಿತ್ತು? ನೀನು ಕೊಂದಿಯಾ ಅದನ್ನಾ? ಭಟ್ಟರು ಶಂತವಾಗಿಯೇ ಕೇಳಿದಾಗ ಮೀನಾಕ್ಷಿಯಾವರು ಕಣ್ಣೀರನ್ನು ಒರೆಸಿಕೊಂಡು, ಅಕ್ಕಚ್ಚಿ ಪಾತ್ರೆ ಮೇಲೆ ಕುಳಿತು ಗಲೀಜು ಮಾಡಿತು. ಅದನ್ನು ಇನ್ನು ದನಗಳಿಗೆ ಇಡುವುದಕ್ಕಾಗುತ್ತಾ? ಅದಕ್ಕೆ ಕಾಡಿನತ್ತ ಓಡಿಸಿದೆ. ನಾನೇನು ಅದನ್ನು ಸಾಯಿಸ್ಲಿಲ್ಲ. ಬೇಕಾದ್ರೆ ಮಕ್ಕಳನ್ನು ಕೇಳಿ ಅಂದರು. ಭಟ್ಟರಿಗೆ ಉಭಯಸಂಕಟವಾಯಿತು. ಕೋಳಿಯನ್ನು ಸಾಯಿಸದಿದ್ದರೂ ಸಾಯಿಸಿದ ಆರೋಪ ಹೊತ್ತುಕೊಳ್ಳಬೇಕಾಯಿತಲ್ಲ ಎಂದು ವ್ಯಥೆಪಟ್ಟರು. ಇನ್ನು ಪದ್ರಾಸನನ್ನು ಸಮಾಧಾನ ಮಾಡಿ ಅದನ್ನು ತೆಗೆದುಕೊಂಡು ಹೋಗು ಅನ್ನುವಂತೆ ಇರಲಿಲ್ಲ. ಗಿರಿಜಕ್ಕನ ಮಗನನ್ನು ಕರೆದು ಅದನ್ನು ತೋಟದಲ್ಲಿ ಹುಗಿದು ಹಾಕುವಂತೆ ಹೇಳಿದರು. ಆದರೆ ಪದ್ರಾಸನಿಗೆ ಹೆದರಿದ ಗಿರಿಜಕ್ಕ ಮಗನಿಂದ ಅಂತಹ ಕೆಲಸವನ್ನು ಮಾಡದಂತೆ ತಾಕೀತು ಮಾಡಿದರು.

ಇನ್ನು ತಾನೇ ಅದನ್ನು ಇತ್ಯರ್ಥ ಮಾಡುವುದೆಂದು ಹಾರೆ ಹಿಡಿದುಕೊಂಡು ತೋಟಕ್ಕೆ ಹೊರಟಾಗ ಪದ್ರಾಸನ ಹೆಂಡತಿ ಜಲಜ ತೋಟದ ಬಳಿ ನಿಂತಿರುವುದು ಕಾಣಿಸಿತು. ಭಟ್ರೆ, ನಮ್ಮದು ತಪ್ಪಾಯಿತು. ಅವರೇನೋ ಬೇಸರದಿಂದ ಹೇಳಿದ್ರು, ಕ್ಷಮಿಸಿ ಅಂದವಳೇ ಅವರ ಅಂಗಳದಲ್ಲಿದ್ದ ಕೋಳಿಯನ್ನು ಎತ್ತಿಕೊಂಡು ಬರುವಂತೆ ಮಗನನ್ನು ಕಳುಹಿಸಿದಳು. ಭಟ್ಟರು ಮಾತಾಡದೆ ಸುಮ್ಮನೆ ತಲೆಯಲುಗಿಸಿ ಬಂದ ಹಾಗೆ ಹಿಂದಕ್ಕೆ ನಡೆದರು. ಅದೇ ದಿನ ಸಂಜೆ ಹೊತ್ತು ಸೇಸಕ್ಕನ ಕೋಳಿಯನ್ನು ನರಿಯೊಂದು ಹಿಡಿದುಕೊಂಡು ಹೋಗಿದ್ದನ್ನು ಎಲ್ಲರೂ ಕಣ್ಣಾರೆ ಕಂಡ ಬಳಿಕ ಪದ್ರಾಸನ ಕೋಳಿಯನ್ನು ಕೂಡ ನರಿಯೇ ನುಂಗಿದ್ದು ಎಂದು ತಿಳಿಯಿತು. ಬಳಿಕ ಪದ್ರಾಸನ ಕೋಳಿಗಳು ಎಂದೂ ಅವನ ಅಂಗಳವನ್ನು ದಾಟಿ ಹೋಗಿದ್ದಿಲ್ಲ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಭಟ್ಟರ ಹೆಂಡತಿಯ ಬಳಿ ಬಂದು ಕ್ಷಮಾಪಣೆ ಕೂಡ ಕೇಳಿ ಹೋಗಿದ್ದ.

ಆದರೂ ಮೀನಾಕ್ಷಿಯವರಿಗೆ ನೆರೆಕರೆಯೆಂದರೆ ಹೆದರಿಕೆಯೇ. ಈಗ ಸೇಸಕ್ಕನ ಕೋಳಿಗಳ ಉಪಟಳ. ಮತ್ತೊಮ್ಮೆ ಹಿಂದಿನದರ ಹಾಗೇ ಆದರೆ ಎಂಬ ಆತಂಕವಿದ್ದರೂ ಅವರನ್ನು ಕರೆದು ನಾಲ್ಕು ಮಾತು ಹೇಳುವುದೇ ಸರಿಯೆನಿಸಿತು. ಮೀನಾಕ್ಷಿಯವರಿಗೆ ಮೊದಲಿನ ಹೆದರಿಕೆ ಇರಲಿಲ್ಲ. ಅವರು ಒಂದೆರಡು ದಿನ ನೋಡಿದರು. ಹೇಳಿ ಕಳುಹಿಸಿದರೂ ಕೂಡ ಕೋಳಿಗಳ ಪಡೆ ಬರುವುದು ನಿಲ್ಲಲಿಲ್ಲ. ಸ್ವತ: ತಾವೇ ಸೇಸಕ್ಕನನ್ನು ಹುಡುಕಿಕೊಂಡು ಬಂದರು. ಬಸಳೆ ಗಿಡದ ಬಳಿ ಸಂಜೆಯ ಹೊತ್ತಿಗೆ ಮೀನು ಮೂರುತ್ತಿದ್ದ ಸೇಸಕ್ಕ ಬ್ರಾಹ್ಮಣರ ಹೆಂಗಸು ಬಂದದ್ದನ್ನು ನೋಡಿ ಮೀನನ್ನು ಹಾಗೆ ಬಿಟ್ಟು ಎದ್ದು ನಿಂತರು.
ಮುಸ್ಸಂಜೆ ಹೊತ್ತಿನಲ್ಲಿ ಏನು ಈ ಕಡೆ? ಎಂದು ಕೇಳುವಾಗ ಮೀನಾಕ್ಷಿಯವರು ನೇರವಾಗಿ ಮಾತಿಗೆ ಇಳಿದರು.

ಎಂತ ಸೇಸಕ್ಕ ನೀವು? ನಿಮ್ಮ ಕೋಳಿಗಳು ಬಂದು ಗದ್ದೆ ಹಾಳು ಮಾಡುವುದು ನಿಮಗೆ ಗೊತ್ತುಂಟು. ಆದರೂ ನೀವು ನಮ್ಮ ಗದ್ದೆಗೆ ಅವುಗಳನ್ನು ಅಟ್ಟುತ್ತಿದ್ದೀರಿ. ನಾವು ಎಂತದು ಮಾಡುವುದು ಹೇಳಿ. ಇರುವ ಎರಡು ಕೊಯ್ಲು ಗದ್ದೆಯಲ್ಲಿ ಆಗುವುದೇ ಮೂರು ಮುಡಿ ಅಕ್ಕಿ. ಅದೂ ಹೀಗಾದರೆ ಹೇಗೆ? ಎಂದು ಶಾಂತರಾಗಿಯೇ ನುಡಿದರಾದರೂ ಸೇಸಕ್ಕನಿಗೆ ಸರಿ ಕಾಣಲಿಲ್ಲ.
ನಾವೇನು ಮಾಡಬೇಕು. ಅವುಗಳು ಬಿಟ್ಟ ಕೂಡಲೇ ನಿಮ್ಮ ಗದ್ದೆಗೆ ಬರುತ್ತವಾ? ಇಡೀ ದಿನ ಅವುಗಳನ್ನು ಕಟ್ಟಿಹಾಕುವುದು ನಮಗೂ ಕಷ್ಟವೇ. ಇನ್ನೊಂದೆರಡು ದಿನ, ಎಲ್ಲವನ್ನು ಸಾಟೇ ಮಾಡಿಯಾಗಿದೆ ಎಂದು ಮತ್ತೆ ತಮ್ಮ ಕೆಲಸವನ್ನು ಮುಂದುವರಿಸಿದರು. ಮೀನಾಕ್ಷಿಯವರಿಗೆ ಅಲ್ಲಿ ನಿಲ್ಲಲಾಗದೆ ಹೊರಟು ಬಂದರು. ಸೇಸಿಯಕ್ಕ ಕೋಳಿಗಳ ಬಗ್ಗೆ ಗಮನ ಹರಿಸಲೇ ಇಲ್ಲ. ಅವುಗಳು ಮಾಮೂಲು ಅನ್ನುವಂತೆ ಭಟ್ಟರ ಗದ್ದೆಯನ್ನು ಅರ್ಧಕರ್ಧ ಖಾಲಿ ಮಾಡಿದ್ದವು. ಭಟ್ಟರೂ ಜಗಳಕ್ಕೆ ನಿಲ್ಲಲಿಲ್ಲ. ಅದಲ್ಲದೆ ಹೆಂಡತಿಗೂ ಅವುಗಳ ತಂಟೆಗೆ ಹೋಗದಂತೆ ತಾಕೀತುಮಾಡಿದ್ದರು.
ಎರಡು ದಿನವಲ್ಲ ಎರಡು ವಾರಗಳಾದರೂ ಕೋಳಿಗಳನ್ನು ಸಾಟೆ ಮಾಡಿದವನು ತೆಗೆದುಕೊಂಡು ಹೋಗಲು ಬರಲೇ ಇಲ್ಲ. ಇನ್ನು ಅವುಗಳ ಉಪದ್ರ ತಡೆಯುವುದು ಸಾಧ್ಯವಿಲ್ಲವೆಂದು ತಿಳಿದ ಅನಂತರ ತಮ್ಮ ದೂರದ ಸಂಬಂಧಿ ವಾದಿರಾಜ ಭಟ್ಟರ ಮುಂದೆ ಎಲ್ಲವನ್ನೂ ಹೇಳಿಕೊಂಡರು ಕೇಶವ ಭಟ್ಟರು. ವಾದಿರಾಜಣ್ಣ ಒಂದು ಉಪಾಯ ಸೂಚಿಸಿದರು. ಆದರೆ ಭಟ್ಟರಿಗೆ ಅದರಿಂದ `ಅಪರಾಧಿ ಸ್ಥಾನದಲ್ಲಿ ನಿಂತರೇ? ಅನ್ನುವ ಅನುಮಾನ ಕಾಡಿತು.
ವಾದಿರಾಜಣ್ಣ, ನೀವೇನೋ ಸುಲಭದಲ್ಲಿ ಹೇಳಿದ್ರಿ. ಆದ್ರೆ ಅವುಗಳಿಗೆ ವಿಷ ಇಟ್ಟು ಸಾಯಿಸಿ, ಅದನ್ನು ಅವರ ಮನೆಯವರು ತಿಂದು ನಾನು ಆ ಪಾಪ ಕಟ್ಟಿಕೊಳ್ಳಬೇಕಾ? ಅದು ಸಾಧ್ಯವಿಲ್ಲ... ಬೇರೆ ಏನಾದರೂ ಪರಿಹಾರವಿದ್ದರೆ ತಿಳಿಸಿ ಎಂದ ಕೇಶವ ಭಟ್ಟರ ಮಾತನ್ನು ಕೇಳಿ ವಾದಿರಾಜರು ನಕ್ಕರು.
ನೀನು ಅವರಿವರ ಬಗ್ಗೆ ಅಷ್ಟು ಆಲೋಚಿಸುವುದು ಯಾಕೆ? ಈಗ ನಿನ್ನ ಹೆಂಡ್ತಿ ಅಷ್ಟು ಚೆಂದದಲ್ಲಿ ಅವರಿಗೆ ಹೇಳಿದ್ದಲ್ವಾ? ಅವರು ಏನಾದರೂ ಅದಕ್ಕೆ ಮರ್ಯಾದೆ ಕೊಟ್ರಾ? ಮತ್ತೆ ನೀನ್ಯಾಕೆ ಯೋಚಿಸ್ತೀಯಾ? ಎಂದು ಅವರಿಗೆ ಕೇಳಿದರು. ಆದರೂ ಕೇಶವ ಭಟ್ಟರಿಗೆ ಅದೆಲ್ಲ ಸರಿಯಲ್ಲವೆನಿಸಿತು. ವಾದಿರಾಜಣ್ಣ ಕೂಡ ಆಲೋಚನೆಗೆ ಬಿದ್ದರು.


ನೋಡು, ನಮ್ಮ ಟೈಗರನ್ನೇ ತೆಗೆದುಕೊಂಡು ಹೋಗು ಎಂದ ಅವರ ಮಾತು ಕೇಳಿ ಭಟ್ಟರಿಗೆ ಅದೇ ಸರಿಯಾದ ಪರಿಹಾರವೆಂದು ತಿಳಿಯಿತು. ವಾದಿರಾಜಣ್ಣನ ಮನೆಯ ನಾಯಿಯೆಂದರೆ ಎಲ್ಲರಿಗೂ ಹೆದರಿಕೆಯೆ. ಯಾರಾದರೂ ಅಪರಿಚಿರು ಬಂದರೆ ಎದೆಯ ಮೇಲೆ ಎರಡು ಕಾಲುಗಳನ್ನು ಇಟ್ಟು ನಿಲ್ಲುತ್ತಿದ್ದ ಅದರ ಗಂಭೀರ ಮುಖ, ಎಂತಹ ಎದೆಗಾರಿಕೆಯವರನ್ನೂ ಕ್ಷಣ ಹೊತ್ತು ಅಲ್ಲೋಲ್ಲ ಕಲ್ಲೋಲ ಮಾಡುತ್ತಿತ್ತು.
ಸರಿಯಾಗಿ ಹೇಳಿದೆ ನೋಡು. ಆದರೆ ಅದನ್ನು ತೆಗೆದುಕೊಂಡು ಹೋಗುವುದು ದೊಡ್ಡ ಸಮಸ್ಯೆಯೆ

ನೀನು ಅದಕ್ಕೆ ಯೋಚಿಸುವುದು ಬೇಡ. ನನ್ನ ಸ್ಕೂಟರಿನಲ್ಲಿಯೇ ಅದನ್ನು ನಿನ್ನ ಮನೆಗೆ ತಲುಪಿಸುತ್ತೇನೆ ಅಂದವರೇ ಎರಡೇ ದಿನದಲ್ಲಿ ಅಷ್ಟು ದೊಡ್ಡ ನಾಯಿಯನ್ನು ತಾವೇ ಕೇಶವ ಭಟ್ಟರ ಮನೆಗೆ ತಂದು ಕಟ್ಟಿದರು. ಮೀನಾಕ್ಷಿಯವರಿಗೆ ಅದರ ಹತ್ತಿರ ಹೋಗುವುದಕ್ಕೂ ಹೆದರಿಕೆಯಾಗುತ್ತಿತ್ತು. ಆದರೆ ಕೇಶವ ಭಟ್ಟರನ್ನು ನೋಡಿದ ಕೂಡಲೇ ಬಾಲ ಆಲ್ಲಾಡಿಸುತ್ತಾ ಇತ್ತು. ಅವರೂ ಅರೆ ಬರೆ ಧೈರ್ಯದಿಂದ `ಟೈಗರ್ ಅನ್ನುತ್ತಾ ಅದನ್ನು ಸಮಾಧಾನಿಸಿ ಅದರ ವಿಶ್ವಾಸವನ್ನು ಗೆದ್ದರು. ತದ ನಂತರ ರಾತ್ರಿಯ ಹೊತ್ತು ಅದನ್ನು ತಿರುಗಾಡಾಲು ಬಿಡುತ್ತಿದ್ದರು. ಬೆಳಗಾಗುತ್ತಲೇ ಅದನ್ನು ಕಟ್ಟುತ್ತಿದ್ದರು. ಈ ರೀತಿಯ ಒಪ್ಪಂದಕ್ಕೆ ಅದು ಒಗ್ಗಿಕೊಂಡಿತು.
`ಟೈಗರ್ ಅಂದರೆ ಸಾಕು ತಲೆಯೆತ್ತಿ ಗುರಾಯಿಸಿ ನೋಡುತ್ತಿದ್ದ ನಾಯಿಯನ್ನು ಕಂಡರೆ ಯಾರಾದರೂ ಒಮ್ಮೆ ಹೆದರಲೇ ಬೇಕು. ಅದು ಬೊಗಳಿತೆಂದರೆ ಊರಿನ ನಾಲ್ಕು ಮನೆಗಳಿಗೂ ಕೇಳುವ ಹಾಗೆ ಇತ್ತು. ಭಟ್ಟರು ಬೆಳಿಗ್ಗೆ ಎದ್ದ ಕೂಡಲೇ ಅದನ್ನು ಕರೆದು ಕಟ್ಟುತ್ತಿದ್ದರು. ಆ ದಿನ ಅವರು ಕರೆಯುವಾಗಲೂ ಅದು ಬರಲಿಲ್ಲ. `ಎಲ್ಲಿ ಹೋದ ಇವ? ಅಂದುಕೊಂಡು ತೋಟದ ಕಡೆಗೆ ಬರುವಾಗ ತಾಳೆಯ ಮರದ ಕೆಳಗೆ ಸುಮ್ಮನೆ ಕುಳಿತಿತ್ತು. `ಎಂತಾಯ್ತು ಇವನಿಗೆ? ಯಾರಾದರೂ ವಿಷವೇನಾದರೂ ಹಾಕಿದರಾ ಹೇಗೆ? ಸುಮ್ಮನೆ ಮಲಗಿದ್ದಾನಲ್ಲ? ಅನ್ನುತ್ತಾ ಅದರ ಹತ್ತಿರ ಬಂದು `ಟೈಗರ್ ಅಂದರು. ಅವರ ಕರೆಗೆ ವಿಧೇಯತೆಯಿಂದ `ಕುಯ್ಯುಂ ಕುಯ್ಯುಂ ರಾಗ ಹೊರಡಿಸಿ ತಲೆಯನ್ನು ಮುಂದಕ್ಕೆ ಚಾಚಿ ಮಲಗಿತು. ಭಟ್ಟರಿಗೆ ಇನ್ನಷ್ಟು ಆತಂಕವಾಯಿತು. `ಎಂತದು ಇದು, ಇವನ ವರ್ತನೆ? ಅಂದುಕೊಂಡು ಹತ್ತಿರ ಹೋಗಿ `ಬಾರೋ ಮನೆಗೆ ಅಂದು ಮೆಲ್ಲನೆ ಕೋಲಿನಿಂದ ಬೆನ್ನಿನ ಮೇಲೆ ಮೆಲ್ಲನೆ ಬಾರಿಸಿದರು. ಅವರ ಪೆಟ್ಟಿಗೆ ಹೆದರಿದ ಅದು ಚಂಗನೆ ಎದ್ದು ಹತ್ತಿರದಲ್ಲಿದ್ದ ತನ್ನ ಬೇಟೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು ಮನೆಯತ್ತ ಓಡಿತು.
`ಎಲಾ! ಇವನಾ? ಇದೆಂತ ಗ್ರಾಚಾರ? ಅವನು ಬಾಯಿಯಲ್ಲಿ ಎಂತ ಹಿಡಿದುಕೊಂಡು ಹೋದದ್ದು? ಅನ್ನುತ್ತಾ ಅದರ ಹೆಸರನ್ನು ಕೂಗುತ್ತಾ ಅದರ ಹಿಂದೆ ಓಡಿದರು. ಅವರು ಕರೆಯುವಾಗ ಅದು ಅಷ್ಟೇ ವೇಗದಿಂದ ಹಿಂದಕ್ಕೆ ಬಂದು ಬಾಯಿಯಲ್ಲಿದ್ದದ್ದನ್ನು ಅವರಿಗೆ ತೋರಿಸುವಂತೆ ನಿಂತಿತು. ಭಟ್ಟರಿಗೆ ತಲೆ ಸುತ್ತು ಬಂದು ಬೀಳುವುದೊಂದೇ ಬಾಕಿ. `ಇವ ಎಂತ ಕೆಲಸ ಮಾಡಿದ ಅಂದುಕೊಂಡು ಕೋಲಿನಿಂದ ರಪ್ಪನೆ ಬಾರಿಸಿ ಅವನನ್ನು ಸರಪಣಿಯತ್ತ ಓಡಿಸಿದರು. ಬಿದ್ದ ಪೆಟ್ಟಿನ ನೋವಿಗೆ ಬಾಯಿಯಲ್ಲಿದ ಕೋಳಿಯನ್ನು ಬಿಟ್ಟು ತನ್ನ ಸ್ಥಾನದಲ್ಲಿ ಹೋಗಿ ನಿಂತಿತು. ದಡದಡನೆ ಬಂದವರು ಅದನ್ನು ಕಟ್ಟಿ ಹಾಕಿ, ಮತ್ತೆರಡು ಪೆಟ್ಟು ಬಿಗಿದರು. `ಕುಯ್ಯೋಂ ಕುಯ್ಯೋಂ ಅನ್ನುತ್ತಾ ಮುದುರಿ ಕುಳಿತಿತು.

`ಛೆ! ಎಂತ ಕೆಲಸ ಆಗೋಯ್ತು? ಅಂದುಕೊಂಡು ಮೀನಾಕ್ಷಿಯನ್ನು ಕರೆದರು. ಅವರು ಗಂಡನ ಕೂಗಿಗೆ ದಿಗಿಲುಗೊಂಡು ಹೊರಗೆ ಬರುವಾಗ ಅಂಗಳದಲ್ಲಿದ್ದ ಸತ್ತ ಕೋಳಿಯನ್ನು ಕಂಡು ಬೆದರಿದರು. ಇದೆಂತ ಕಥೆ? ಅವನನ್ನು ಬಿಟ್ಟದ್ದು ತಪ್ಪಾಯ್ತು ನಾಯಿಯ ಕೆಲಸವನ್ನು ಕಂಡು ಹಾಗೇ ಹೇಳಿದಾಗ ಭಟ್ಟರಿಗೂ ಹಾಗೇ ಅನಿಸಿತು. ಆದರೆ ಯಾವತ್ತೂ ಇಲ್ಲದ್ದು ಇವತ್ತೇ ಹೀಗಾಗಾಬೇಕೆ? ಇರಲಿ ಅಂದುಕೊಂಡು ಮಡದಿಯ ಮುಖ ನೋಡಿದರು.
ಯಾರಿಗೂ ಹೇಳೋದು ಬೇಡ. ಅದನ್ನು ಕಾಡಿನ ಹತ್ತಿರ ಹೂತು ಹಾಕಿ ಬಿಡಿ ಎಂದು ಗಂಡನಿಗೆ ಬಿಟ್ಟಿ ಸಲಹೆ ಮಾಡಿದರು. ಇನ್ನು ಇದನ್ನು ನೋಡಿ ಸೇಸಕ್ಕ ದೊಡ್ಡ ರಾದ್ಧಾಂತ ಮಾಡುವುದು ಬೇಡವೆಂದು ಮಗನನ್ನು ಕರೆದು ಹಾರೆಯಿಂದ ಅದನ್ನು ಬುಟ್ಟಿಯಲ್ಲಿ ಹಾಕಿ, ಕಾಡಿನತ್ತ ನಡೆದರು. ಅಲ್ಲಿ ಸ್ವಲ್ಪ ಮಣ್ಣು ತೆಗೆದು ಅದನ್ನು ಮುಚ್ಚಿ ಹಾಕಿದರು. ಆದರೆ ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರುವುದೆಂದು ಅವರಿಗೆ ತಿಳಿದಿತ್ತು. ಅದಕ್ಕೆ ತಕ್ಕಂತೆ ನರಿಯೋ ನಾಯಿಯೋ ಹೂತು ಹಾಕಿದ್ದ ಕೋಳಿಯನ್ನು ಮೇಲಕ್ಕೆ ಹಾಕಿದ್ದವು. ಬಿಜಕ್ರೆ ತರಲೆಂದು ಕಾಡಿಗೆ ಹೋಗಿದ್ದ ಸೇಸಕ್ಕನ ಕಣ್ಣಿಗೆ ಅದು ಬೀಳಬೇಕೆ? ಮೂರು ದಿನದಿಂದ ಕಾಣೆಯಾಗಿದ್ದ ತನ್ನ ಮೊಟ್ಟೆ ಇಟ್ಟ ಹೆಂಟೆ ಕಾಣೆಯಾಗಿದ್ದಕ್ಕೆ ನರಿಗೆ ಶಾಪ ಹಾಕಿದ್ದರು. ಮೊಟ್ಟೆಗಳೂ ಕಲ್ಲಾಗಿ ಹೋಗಿದ್ದವು. ಆದರೆ ಆ ಕೋಳಿ ಮಣ್ಣಿನಿಂದ ಮೇಲೆ ಬಂದಿರುವಾಗ ಅವರಿಗೆ ಅನುಮಾನವಾಯಿತು.

ಬಿಜಕ್ರೆಯ ತೊಟ್ಟೆಯನ್ನು ಹಾಗೆ ಅಲ್ಲೇ ಬಿಸಾಡಿ ಬಂದವರು. ಮೀನಾಕ್ಷಮ್ಮನಿಗೆ ಶಾಪ ಹಾಕುತ್ತಲೇ ಬಂದರು. ಆ ಸತ್ಯವನ್ನು ಮುಚ್ಚಿ ಹಾಕಲು ಗೊತ್ತಿಲ್ಲದ ಮೀನಾಕ್ಷಮ್ಮ ನಡೆದುದ್ದನ್ನು ಹೇಳಿಯೇ ಬಿಟ್ಟರು. ನಾಯಿಯಿಂದ ಅದನ್ನು ಹಿಡಿಸಿದ್ದು ನೀವೇ ಅನ್ನುವ ಆರೋಪದ ಜೊತೆಗೆ ಕೆಟ್ಟ ಬೈಗುಳನ್ನೂ ಕೇಳಬೇಕಾಗಿದ್ದು ಅವರ ಹಣೆಬರಹವಾಯಿತು. ಆವತ್ತು ಸಂಜೆ ಕೋಳಿ ಸಾಟೆಯ ಪುಟ್ಟನಿಗೆ ಎಂಟು ಕೋಳಿಗಳನ್ನು ಮಾರಿದಲ್ಲದೆ ಉಳಿದ ಮೂರು ಕೋಳಿಗಳನ್ನು ಭೂತಕ್ಕೆ ಬಿಟ್ಟರು. ಆ ವಿಷಯ ಗೊತ್ತಾಗಿದ್ದು ಅವರ ಮಗನಿಂದಲೇ. ಅವನು ಭಟ್ಟರ ಮಗ ಪಟ್ಟಾಬಿಯ ಜೊತೆಗೆ ಶಾಲೆಗೆ ಹೋಗುವಾಗ ಹೇಳಿದನಂತೆ.
ಇನ್ನು ನೀವು ಕೋಳಿಗಳನ್ನು ಏನೂ ಮಾಡುವ ಹಾಗಿಲ್ಲ. ಅದನ್ನೆಲ್ಲಾ ಅಮ್ಮ ಭೂತಕ್ಕೆ ಬಿಟ್ಟಿದ್ದಾರೆ

ಅದನ್ನು ಕೇಳಿದ ಭಟ್ಟರ ಮಗ ಮನೆಗೆ ಬಂದು ಹೇಳಿದ ಮೇಲೆ ಮೀನಾಕ್ಷಿಗೂ ಹೆದರಿಕೆಯಾಗಿತ್ತು. ಅವರು ಗಂಡನನ್ನು ಕರೆದು, ನೋಡಿ, ಇನ್ನು ಊರಿನ ಕೋಲ ಮುಗಿಯುವ ತನಕ ನಾಯಿಯನ್ನು ಬಿಡುವುದು ಬೇಡ. ಅವರು ಕೋಳಿಗಳನ್ನು ಭೂತಕ್ಕೆ ಬಿಟ್ಟಿದ್ದಾರಂತೆ ಎಂದು ಎಚ್ಚರಿಕೆಯ ಮಾತು ಹೇಳಿದರು. ಕೇಶವ ಭಟ್ಟರಿಗೂ ಆತಂಕವಾಗದಿರಲಿಲ್ಲ. ನಾಯಿಯನ್ನು ಕಟ್ಟಿಯೇ ಹಾಕಿದರು. ಅದು ಮಲಗಿದಲ್ಲಿಯೇ ಒಂದು... ಎರಡು... ಮಾಡುವುದನ್ನು ರೂಢಿ ಮಾಡಿಕೊಂಡಿತು. ಇದರಿಂದಾಗಿ ಅದರ ಚಾಕರಿಯೇ ಒಂದು ದೊಡ್ಡ ಹೊರೆಯಾದಾಗ ಅದನ್ನು ವಾಪಾಸು ವಾದಿರಾಜಣ್ಣನಿಗೆ ಕೊಟ್ಟು ಬರುವುದೆಂದು ನಿರ್ಧರಿಸಿದರು. ವಾದಿರಾಜಣ್ಣನ ಒಪ್ಪಿಗೆ ದೊರೆತ ನಂತರ ಒಂದು ದಿನ ರಿಕ್ಷಾದಲ್ಲಿ ಹಾಕಿಕೊಂಡು ಆದನ್ನು ಬಿಟ್ಟು ಬಂದರು.

ಕೋಳಿಗಳನ್ನು ಭೂತಕ್ಕೆ ಬಿಟ್ಟರೂ ಅವುಗಳ ಉಪದ್ರ ನಿಲ್ಲಲಿಲ್ಲ. ಗದ್ದೆಗೆ ಬರುವುದು, ತೋಟದಲ್ಲೆಲ್ಲಾ ಜಾಲಾಡಿಸುವುದು, ಮಣ್ಣನ್ನು ಕಾಲಿನಿಂದ ಎಳೆದು ಹಾಕುವುದು, ಅಂಗಳದಲ್ಲೆಲ್ಲಾ ಹಿಕ್ಕೆ ಹಾಕುವುದು, ಬೈ ಹುಲ್ಲಿನ ಮೇಲೆ ಹಾರಿ ಕುಳಿತುಕೊಳ್ಳುವುದು. ಹೀಗೆ ಉದ್ದಕ್ಕೆ ಅವುಗಳ ಉಪದ್ರ ನಡೆಯುತ್ತಲೇ ಇತ್ತು. ಸೇಸಕ್ಕನ ಮನೆಯವರಿಗಿಂತಲೂ ಅವುಗಳ ಮೇಲೆ ಭಟ್ಟರ ಮನೆಯವರಿಗೆ `ಭೂತಕ್ಕೆ ಬಿಟ್ಟ ಕೋಳಿ ಅನ್ನುವ ಗೌರವವಿತ್ತು. ಅವುಗಳ ಉಪಟಳವನ್ನು ತಡೆದುಕೊಂಡು ಸುಮ್ಮನಾದರು. ಸೇಸಕ್ಕನಿಗೂ ಆತಂಕ ತಪ್ಪಿತು. ಅವರು ಪದೇ ಪದೇ ಭಟ್ಟರ ಮಕ್ಕಳು ಸಿಕ್ಕಿದಾಗಲೆಲ್ಲಾ `ಕೋಳಿಗಳಿಗೆ ಕಲ್ಲು ಬಿಸಾಡ ಬೇಡಿ. ಭೂತಕ್ಕೆ ಬಿಟ್ಟಿದೆ ಅನ್ನೋರು.

ಹೀಗೆ ಭೂತಕ್ಕೆ ಬಿಟ್ಟ ಕೋಳಿಗಳು ಭಟ್ಟರ ಮನೆಯಲ್ಲೆಲ್ಲಾ ಓಡಾಡಿಕೊಂಡು ಸೊಕ್ಕಿ ಹೋದವು. ಭಟ್ಟರಿಗೆ ಧರ್ಮ ಸಂಕಟ. ಒಮ್ಮೆ ಅವರ ಮನೆಗೆ ಸಂಬಂಧಿಕರು ಯಾರೋ ಬಂದವರು, ಏನು, ನೀವೂ ಕೋಳಿಗಳನ್ನು ಸಾಕಿದ್ದೀರಾ? ಅಂದಾಗ ಭಟ್ಟರಿಗೆ ನಾಚಿಕೆಯಾಯಿತು. ಅವರು ಪರಿಸ್ಥಿತಿಯನ್ನು ವಿವರಿಸಿ ಹೇಳಿದ ನಂತರ ಅವರೆಲ್ಲಾ ನಕ್ಕರು. ಭಟ್ಟರು ಈ ಅವಮಾನವನ್ನು ನುಂಗಿಕೊಂಡಿದ್ದರು. ಇದ್ದಕ್ಕಿದ್ದಂತೆ ಕೋಳಿಗಳು ಬರುವುದು ನಿಂತಿತು. ಭಟ್ಟರಿಗೂ ಅವರ ಮನೆಯವರಿಗೂ ಆಶ್ಚರ್ಯ! ಊರಿನ ಕೋಲಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಭೂತಕ್ಕೆ ಬಿಟ್ಟ ಕೋಳಿಗಳೆಲ್ಲಾ ಎಲ್ಲಿ ಹೋದವು? ಸೇಸಕ್ಕನಿಗೆ ಬುದ್ಧಿ ಬಂದಿರಬೇಕು. ಅವುಗಳನ್ನು ಗೂಡಿನಲ್ಲಿ ಹಾಕಿ ಸಾಕುತ್ತಿದ್ದಾರೇನೋ? ಅಂದುಕೊಂಡು ನೆಮ್ಮದಿಯ ನಿಡುಸುಯ್ದರು.

ಆದರೆ ಹಾಗಾಗಲಿಲ್ಲ. ಎರಡು ದಿವಸ ಕಾಣಿಸದ ಕೋಳಿಗಳು ಗದ್ದೆಯ ನಡುವೆ ಓಡಾಡುತ್ತಿದ್ದದ್ದು ಕಾಣಿಸಿತು ಭಟ್ಟರಿಗೆ. `ಎಲಾ ಶಿವನೇ! ಈ ಕೋಳಿಗಳಿಗೂ ಕಳ್ಳ ಬುದ್ಧಿ ಗೊತ್ತುಂಟಾ? ಹೀಗೆ ಯಾರಿಗೂ ಗೊತ್ತಾಗದ ಹಾಗೆ ಗದ್ದೆಯ ನಡುವೆ ಬಂದು ತೆನೆಯನ್ನು ಹಾಳು ಮಾಡುವುದಾ? ಅಂದುಕೊಂಡವರೇ ಒಂದು ಕಲ್ಲನ್ನು ತೆಗೆದು ಬಿಸಾಡಿದರು. ಕಲ್ಲು ಕೋಳಿಯ ಕಾಲಿಗೆ ನಾಟಿರಬೇಕು. ಕೂಗುತ್ತಾ ಎತ್ತರಕ್ಕೆ ಹಾರಿದ ಕೋಳಿ ಗದ್ದೆಯ ಬದಿಗೆ ಬಂದು ಬಿದ್ದು ಒದ್ದಾಡಿತು. ಭಟ್ಟರ ಎದೆ ಝಲ್ಲೆಂದಿತು. `ಇನ್ನೆಂತ ಮಾಡುವುದು? ಎಂದು ತಲೆಗೆ ಕೈ ಹಚ್ಚಿದರು. ಹೊರಗೆ ಬಂದ ಮಡದಿಗೆ ನೀರು ತರುವಂತೆ ಹೇಳಿದರು. ಮೀನಾಕ್ಷಮ್ಮ ನೀರು ತಂದು ಅವರ ಕೈಯಲ್ಲಿ ಕೊಟ್ಟರು. ಕೈಗೆ ನೀರು ಆಪೋಷನ ಮಾಡಿಕೊಂಡು ಕೋಳಿಯ ಮೇಲೆ ಹಾಕಿದರು. ಕೋಳಿ ಸತ್ತೆನೋ, ಬದುಕಿದೆನೋ ಎಂದು ಓಡಿತು. ಅವರು ನಿರುಮ್ಮಳರಾದರು.

ಎಂತದು ನೀವು, ಅದು ಭೂತದ ಕೋಳಿಯಲ್ವಾ? ಅದಕ್ಕೆ ನೀವು ಕಲ್ಲು ಬಿಸಾಡಿದ್ದಾ? ಅದು ಸತ್ತಿದ್ರೆ ನಾವು ಎಂತದು ಮಾಡ್ಬೇಕಿತ್ತು? ಅನ್ನುತ್ತಾ ಭಟ್ಟರ ತಲೆ ಕೊರೆದರು. ಭಟ್ಟರು ಮಾತಾಡದೆ ನೀರಿನ ಪಾತ್ರೆಯನ್ನು ತೆಗೆದುಕೊಂಡು ಮನೆಯತ್ತ ನಡೆದರು.
ಅವರು ಮನೆಯ ಒಳಗೆ ಕಾಲಿಟ್ಟಿದ್ದರಷ್ಟೇ ಸೇಸಕ್ಕನ ಗಂಟಲು `ಟೈಂ ಟೈಂ ಅನ್ನುವುದು ಕೇಳಿಸಿತು. ಭೂತಕ್ಕೆ ಬಿಟ್ಟ ಕೋಳಿಯ ಕಾಲು ಮುರಿದದ್ದೆ ಅದಕ್ಕೆ ಕಾರಣವೆನ್ನುವುದು ತಿಳಿಯಿತು. ಮಾತಿಗೆ ಮಾತು ಬೆಳೆದರೆ ದೊಡ್ಡ ಜಗಳವೇ ಆಗುತ್ತದೆಯೆಂದು ಅವರಿಗೆ ಗೊತ್ತು.
ಕಾಲ ಹಾಗೇ ನಿಲ್ಲುತ್ತದಾ? ಭಟ್ಟರು ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬಂದಾಗ ಸುಮಾರು ಎಂಟು ಗಂಟೆಯ ಸಮಯ. ಮನೆಯ ಒಳಗೆ ಕಾಲಿಟ್ಟಿದ್ದರಷ್ಟೆ ಕೋಳಿಗಳು ಒಂದೇ ಸಮನೆ `ಕೊಕ್ಕೊಕ್ಕೋ ಎಂದು ಕೂಗುವುದು ಕೇಳಿಸಿತು. ಇಷ್ಟು ಹೊತ್ತಿಗೆ ಕಾಡು ಬೆಕ್ಕೋ, ನರಿಯೋ, ಇಲ್ಲ ಕತ್ತೆಕಿರುಬನೋ ಬಂದಿರಬೇಕೆಂದುಕೊಂಡರು. ಭೂತದ ಕೋಳಿಗಳನ್ನು ಅವು ಏನು ಮಾಡಲಾರವು ಅನ್ನುವ ಮುಗ್ಧತೆ ಭಟ್ಟರ ಮನೆಯವರಿಗೆ.
ಬೆಳಿಗ್ಗೆ ಸೇಸಕ್ಕನ ಮಗ ಸ್ಟೀಲ್ನ ಚೆಂಬು ಹಿಡಿದುಕೊಂಡು ಭಟ್ಟರ ಮನೆಗೆ ಬಂದ. ದೇವರಿಗೆ ಹೂವು ಕೊಯ್ಯುತ್ತಿದ್ದ ಭಟ್ಟರು `ಏನು? ಅಂದರು.
ಹಾಲು ಕೊಡ್ಬೇಕಂತೆ, ಬೊಂಬಾಯಿಯಿಂದ ಅಕ್ಕ, ಭಾವ ಬಂದಿದ್ದಾರೆ ಅಂದ.
ಭಟ್ಟರು ಮಡದಿಯನ್ನು ಕರೆದು ಹಾಲು ಕೊಡುವಂತೆ ಹೇಳಿದವರೆ ಹುಡುಗನ ಬಳಿ, ಅಲ್ಲನಾ, ನಿನ್ನೆ ರಾತ್ರಿ ನಿಮ್ಮ ಕೋಳಿಗಳು ಯಾಕೆ ಹಾಗೆ ಕೂಗಿಕೊಂಡದ್ದಾ? ಅಂದರು.
ಹುಡುಗ ನಗುತ್ತಾ ನಿಂತಿದ್ದ. ಅವನ ವರ್ತನೆ ವಿಚಿತ್ರವಾಗಿತ್ತು.
ನಿಮ್ಮ ಕೋಳಿಯಲ್ವಾ? ಭಟ್ಟರು ಅನುಮಾನದಿಂದ ಮತ್ತೊಮ್ಮೆ ಪ್ರಶ್ನಿಸುವಾಗ ಅವನು ನಗುತ್ತಲೇ, ಅದು ನಿನ್ನೆ ಅಕ್ಕನವರು ಬಂದಿದ್ರಲ್ಲಾ ಅದಕ್ಕೆ... ಅಂದ.
ಅಲ್ಲನಾ, ಅದು ಭೂತಕ್ಕೆ ಬಿಟ್ಟ ಕೋಳಿಯಲ್ವಾ? ಹಾಗೂ ಮಾಡ್ತಾರಾ? ಆಶ್ಚರ್ಯದಿಂದ ಭಟ್ಟರು ಕೇಳುವಾಗ ಅವನು, ಭೂತಕ್ಕೆ ನಾಳೆ ಫಾರಂನಿಂದ ಕೋಳಿಗಳನ್ನು ತರ್ತಾರೆ ಅಂದು ಮೀನಾಕ್ಷಮ್ಮ ಹಾಕಿದ ಹಾಲನ್ನು ತೆಗೆದುಕೊಂಡು ಹೊರಟ. ಮೀನಾಕ್ಷಮ್ಮನಿಗೂ ಆಶ್ಚರ್ಯ.
ಹಾಗೆ ಭೂತಕ್ಕೆ ಬಿಟ್ಟ ಕೋಳಿಯನ್ನು ತಿಂದವರನ್ನು ಸುಮ್ಮನೆ ಬಿಡ್ತದಾ ಅದು? ಮುಗ್ಧತೆಯಿಂದ ಪ್ರಶ್ನಿಸಿದವರನ್ನು ನೋಡಿ ಭಟ್ಟರು ಕೂಡ ಅಷ್ಟೆ ಮುಗ್ಧತೆಯಿಂದ `ಏನೋ, ಗೊತ್ತಿಲ್ಲ ಅನ್ನುವಂತೆ ಕೈ ತಿರುಚಿದರು.

Read more!

Tuesday, November 24, 2009

ಮರದ ಪೆಟ್ಟಿಗೆ


(ಕರ್ಮವೀರದಲ್ಲಿ ಪ್ರಕಟವಾದ ಪತ್ತೇದಾರಿ ಕಥೆ)

ಮರಳ ದಿಣ್ಣೆ ಏರಿ ಮೊಣಕಾಲ ಮೇಲೆ ಗಲ್ಲವಿಟ್ಟು ಸೂರ್ಯ ಮುಳುಗುವವರೆಗು ಕುಳಿತು ಸಮುದ್ರದ ಅಲೆಗಳನ್ನು ನೋಡುತ್ತಿದ್ದಳು ಗಾಜು ಕಣ್ಣಿನ ಚೆಲುವೆ ನಿನಾದ. ಸೂರ್ಯ ಕೆಂಪು ತಟ್ಟೆಯಾಗಿ ಮುಳುಗಿದಾಗ ಸುತ್ತಲೂ ಕತ್ತಲಾವರಿಸಿತು. ಸಮುದ್ರದ ಬೋರ್ಗರೆತದ ಸದ್ದು ಜೋರಾಗುತ್ತಿದ್ದಂತೆ ಅವಳ ಆಲೋಚನೆಗಳೆಲ್ಲಾ ಕಡಿಮೆಯಾದಂತಾಯಿತು. ಅಲೆಗಳನ್ನೇ ನೋಡುತ್ತಾ ಕುಳಿತಿದ್ದವಳನ್ನು ಎಚ್ಚರಿಸಿದ್ದು ಯಾವುದೋ ಅಪರಿಚಿತ ದನಿ!
"ಎಕ್ಸ್ ಕ್ಯೂಸ್ ಮಿ" ವ್ಯಕ್ತಿ ಧ್ವನಿಯಲ್ಲಿ ಮೃದುತ್ವ ಬೆರೆಸಿ ಕೇಳಿದ. ಅಪರಿಚಿತ ದನಿ ಕೇಳಿ ಬೆಚ್ಚಿ ತಲೆ ಎತ್ತಿದಳು ನಿನಾದ. ಅವಳನ್ನು ನೋಡಿ ಮುಗುಳ್ನಕ್ಕ. ಎದ್ದು ನಿಂತು ಸೀರೆಗೆ ಅಂಟಿಕೊಂಡಿದ್ದ ಮರಳನ್ನು ಕೊಡವಿಕೊಂಡಳು.
"ನೀವು ನನಗೆ ಸಹಾಯ ಮಾಡ ಬಲ್ಲಿರಿ?" ಬೇಡಿಕೆಯ ಸ್ವರದಲ್ಲಿ ಕೇಳಿದ ಅಪರಿಚಿತ ಯುವಕ! ಮುಖ ಅಸ್ಪಷ್ಟವಾಗಿ ಕಂಡಿತು. ಯುವಕ ಸಹಾಯ ಹಸ್ತ ಕೇಳುತ್ತಿದ್ದಾನೆ. ಅಪರಿಚಿತನನ್ನು ಅಳೆಯುವಂತೆ ನೋಡಿದಳು."
"ಇಲ್ಲೆ ಅರ್ಧ ಫರ್ಲಾಂಗ್ ದೂರದಲ್ಲಿ ನನ್ನ ಯಾಂತ್ರಿಕ ದೋಣಿ ಲಂಗರು ಹಾಕಿದೆ. ಅದರಿಂದ ವಸ್ತುವನ್ನು ಇಳಿಸಬೇಕಿದೆ. ಇಲ್ಲಿ ಸಹಾಯಕ್ಕೆ ಬೇರೆ ಯಾರು ಕಾಣಿಸ್ತಿಲ್ಲ. ನೀವು ಸಹಾಯ ಮಾಡಬಲ್ಲಿರೀಂತ ಭಾವಿಸ್ತೀನಿ" ಅವಳ ಮೌನವನ್ನು ಅರ್ಥೈಸಿಕೊಂಡಂತೆ ಹೇಳಿದ.
ಅವನು ಹೇಳುವುದು ಸರಿ. ಇಲ್ಲಿ ಬೇರಾವ ವ್ಯಕ್ತಿಯೂ ಕಾಣುತ್ತಿಲ್ಲ. ಸಹಾಯ ಮಾಡುವುದರಲ್ಲಿ ತಪ್ಪೇನಿದೆ. ಯುವಕ ಸಭ್ಯನಂತೆ ಕಾಣುತ್ತಿದ್ದಾನೆ.
"ಸರಿ" ಮರಳ ದಂಡೆಯ ಮೇಲೆ ಹೆಜ್ಜೆ ಮೂಡಿಸುತ್ತಾ ಅವನನ್ನು ಅನುಸರಿಸಿದಳು.
ಲಂಗರು ಹಾಕಿದ ದೋಣಿಯ ಪತಾಕೆ ಗಾಳಿಗೆ ತಟಪಟನೆ ಹಾರಾಡುತ್ತಿತ್ತು. ಅದೊಂದು ಯಾಂತ್ರಿಕ ದೋಣಿ. ಅವಳನ್ನು ಕೆಳಗೆ ನಿಲ್ಲುವಂತೆ ಹೇಳಿ, ಜಿಗಿದು ಯಾಂತ್ರಿಕ ದೋಣಿಯನ್ನೇರಿದ. ಉದ್ದನೆಯ ಎರಡು ಸ್ಲೈಡಿಂಗ್ ಗಳನ್ನು ಒಂದರ ಪಕ್ಕದಲ್ಲೊಂದು ಜೋಡಿಸಿ ದೋಣಿಗೆ ಓರೆಯಾಗಿ ನಿಲ್ಲಿಸಿದ. ಆರಡಿ ಉದ್ದನೆಯ ಮರದ ಪೆಟ್ಟಿಗೆಯನ್ನು ಸ್ಲೈಡಿಂಗ್ ನ ಪಕ್ಕಕ್ಕಿಟ್ಟು ಮೆಲ್ಲನೆ ಜಾರಿಸಿದ.
"ನಿಧಾನವಾಗಿ ಹಿಡಿಯಿರಿ." ಅವಳನ್ನು ಎಚ್ಚರಿಸಿದ. ಮರದ ಪೆಟ್ಟಿಗೆಯ ಇನ್ನೊಂದು ಬದಿಯ ಹಿಡಿಯನ್ನು ಹಿಡಿದು ಮರಳ ದಂಡೆಯ ಮೇಲೆ ಜಾರಿಸಿದಳು. ಆತ ದೋಣಿಯಿಂದ ಇಳಿದು ಪೆಟ್ಟಿಗೆಯನ್ನು ಎಳೆದು, ಸ್ಲೈಡಿಂಗ್ ಗಳನ್ನು ದೋಣಿಯೊಳಗೆ ತೂರಿಸಿದ.
"ಇದು ಪರ್ಸಿಯನ್ ದೋಣಿ ನನ್ನ ಗೆಳೆಯನದ್ದು. ಎರಡು ದಿವಸ ಇಲ್ಲೆ ಲಂಗರು ಹಾಕಿರುತ್ತೆ" ಅನಗತ್ಯ ವಿಚಾರವನ್ನು ಹೇಳುತ್ತಿದ್ದಾನೆ ಯುವಕ.
"ದಯವಿಟ್ಟು ನಿಲ್ಲಿ. ಇಲ್ಲೆ ದಂಡೆಯ ಅಂಚಿಗೆ ನನ್ನ ಕಾರು ನಿಂತಿದೆ. ನೀವು ಏನು ತಿಳ್ಕೊಳಾಂದ್ರೆ ಇದನ್ನು ಅಲ್ಲಿಯವರೆಗೆ ತಲುಪಿಸಲು....." ಹೆಜ್ಜೆ ಮುಂದಿಟ್ಟವಳನ್ನು ಕೇಳಿಕೊಂಡ.
"ಸರಿ"
ಉದ್ದನೆಯ ಪೆಟ್ಟಿಗೆಯ ಹಿಡಿಯನ್ನು ಹಿಡಿದಳು. ಇನ್ನೊಂದು ತುದಿಯಿಂದ ಆತ ಹಿಡಿದ. ಹೆಣ ಭಾರದ ಮರದ ಪೆಟ್ಟಿಗೆ! ಕೈಯ ಬೆರಳುಗಳು ಕಿತ್ತು ಬರುವಂತೆ ನೋಯುತ್ತಿದ್ದವು. ಕಾರಿನ ಬಳಿ ಬರುವಾಗ ಸುಸ್ತಾದಳು ಗಾಜು ಕಣ್ಣಿನ ಚೆಲುವೆ.
ಹಳೇ ಕಾಲದ ಕಾರಿನ ಡಿಕ್ಕಿಯನ್ನು ತೆರೆದು ಪೆಟ್ಟಿಗೆಯನ್ನು ಅದರಲ್ಲಿಟ್ಟ ಯುವಕ. ಕಾರಿನ ಒಳ ತೂರಿ, ದೀಪ ಬೆಳಗಿಸಿದ. ನೋಯುತ್ತಿದ್ದ ಕೈ ಬೆರಳುಗಳನ್ನು ಒರೆಸಿಕೊಂಡಳು ನಿನಾದ.
"ತುಂಬಾ ಉಪಕಾರವಾಯ್ತು. ನನ್ನಿಂದ ಸಹಾಯ ಬೇಕಿದ್ದಲ್ಲಿ ತಿಳಿಸಿ" ಕಡು ನೀಲಿ ಬಣ್ಣದ ಜೀನ್ಸು, ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ ಮುಗುಳ್ನಗುತ್ತಾ ಹೇಳಿದ. ಪರ್ಸಿನಿಂದ ವಿಸಿಟಿಂಗ್ ಕಾರ್ಡ ನೀಡಿದ. ಕೈ ಮುಗಿಯುವ ಸೌಜನ್ಯ ತೋರಿಸಿದಳು ನಿನಾದ. ಆತ ಯಂತ್ರಕ್ಕೆ ಚಾಲನೆ ನೀಡಿದ. ಕಾರು ಕಪ್ಪು ಹೊಗೆಯುಗುಳುತ್ತಾ ಮುಂದಕ್ಕೋಡಿತು. ನಿಧಾನವಾಗಿ ಹೆಜ್ಜೆಯಿಡುತ್ತಾ ರಸ್ತೆಯಂಚಿನಲ್ಲೆ ಸಾಗಿದಳು.
ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದವಳು ಏಕಾಏಕಿ ವರ್ಗವಾಗಿ ಹಳ್ಳಿಗೆ ಬಂದಿದ್ದಳು. ಅಪರಿಚಿತ ಊರು! ನಿಲ್ಲಲು ಬಾಡಿಗೆ ಮನೆ ಕೂಡ ದೊರೆತಿರಲಿಲ್ಲ. ಊರಿನ ಶ್ರೀಮಂತ ಚಿನ್ನದ ವ್ಯಾಪಾರಿ ಪನ್ನಲಾಲ್ ಮಡದಿ ಚಾಂದಿನಿ ಬಾಯಿಯ ಮಾತಿಗೆ ಒಂದು ಸಣ್ಣಗಿನ ಕೋಣೆಯನ್ನು ನೀಡಿದ್ದ. ಸ್ಟೌವ್, ಪಾತ್ರೆಗಳು, ಪುಸ್ತಕಗಳನ್ನು ಜೋಡಿಸಿದ ನಂತರ ಉಳಿದಿದ್ದು ಚಾಪೆ ಹಾಸುವಷ್ಟು ಜಾಗ ಮಾತ್ರ! ಮನಸ್ಸಿಗೆ ಬೇಸರವಾದಾಗ ಚಾಂದಿನಿ ಬಾಯಿಯ ಜೊತೆ ತಾಸು ಗಟ್ಟಲೆ ಮಾತನಾಡಿ ಸಮಯ ಕಳೆಯುತ್ತಿದ್ದಳು. ಅದರೆ ಪನ್ನಲಾಲ್ ಸಂಸಾರ ಸಮೇತ ಗುಜರಾತಿಗೆ ಹೋಗಿದ್ದ. ಮನಸ್ಸಿನ ಬೇಸರ ಕಳೆಯಲು ಸಮುದ್ರ ದಂಡೆಗೆ ಬಂದಳೆಂದರೆ ಕತ್ತಲಾವರಿಸಿದ ನಂತರವೇ ಹಿಂತಿರುಗುತ್ತಿದ್ದಳು.
ಚಂದಿರನ ಮಂದ ಬೆಳಕು ರಸ್ತೆಯಂಚಿನ ಮರಗಳ ಮರೆಯಿಂದ ತೂರಿ ರಸ್ತೆಯ ಮೇಲೆ ನೆರಳು ಬೆಳಕನ್ನು ಚಿತ್ರಿಸಿತ್ತು. ಕೈಯಲ್ಲಿದ್ದ ಪೇಪರನ್ನು ಸುತ್ತಿ ಹೆಬ್ಬೆರಳಿನಿಂದ ಟಕ್ಕನೆ ಮೇಲೆ ಹಾರಿಸಿದಳು. ಅದು ಹಾರಿ ಎಲ್ಲೋ ಬಿದ್ದಿತು. ತಟ್ಟನೆ ನೆನಪಾಯಿತು. ಅದು ಮರಳ ದಂಡೆಯಲ್ಲಿ ಯುವಕ ನೀಡಿದ್ದ ವಿಸಿಟಿಂಗ್ ಕಾರ್ಡ್. ಹೋಗಲಿ ಅದರಿಂದ ತನಗೇನು ಲಾಭ? ಯಾರೋ ಅಪರಿಚಿತ ಸಹಾಯ ಯಾಚಿಸಿದ. ಸಹಾಯ ಮಾಡಿದ್ದಾಯಿತು. ನಡಿಗೆ ವೇಗ ಹೆಚ್ಚಿಸಿ ಕೋಣೆಗೆ ಬಂದಾಗ ಏಕಾಂತ ಅವಳನ್ನು ಕಾಡಿತು. ರೇಡಿಯೋಗೆ ಚಾಲನೆ ಕೊಟ್ಟು ಕಾರ್ಯಕ್ರಮಗಳನ್ನು ಅಲಿಸುತ್ತಿದ್ದಳು. ಹಳ್ಳಿಗೆ ಕತ್ತಲಾಗುವುದು ಬೇಗ! ರಾತ್ರಿಯ ಊಟ ಮುಗಿಸಿ, ಚಾಪೆ ಹಾಸಿಕೊಂಡಳು. ಕ್ಯಾಂಡಲಿನ ಬೆಳಕಿನಲ್ಲಿ ಯಾವುದೋ ಪುಸ್ತಕವನ್ನು ಬಿಡಿಸಿ ಬೋರಲಾಗಿ ಮಲಗಿ ಓದುತ್ತಿದ್ದಳು. ನಿದ್ದೆ ದೂರವಾಗಿತ್ತು. ಪನ್ನಾಲಾಲ್ ನ ಸಂಸಾರ ಬರಲು ಇನ್ನು ಎರಡು ವಾರವಿದೆ. ಅಲ್ಲಿಯವರೆಗೆ ತಾನು ಒಬ್ಬಂಟಿ! ಮನದಲ್ಲಿ ಯಾವುದೋ ಆತಂಕ ತುಂಬಿತ್ತು.
ಕಣ್ಣು ಸೆಳೆಯುತ್ತಿದೆಯೆಂದಾಗ ಬಾಗಿಲಿನ ಚಿಲಕ ಭದ್ರ ಪಡಿಸಿ ಕ್ಯಾಂಡಲ್ ಆರಿಸಿದಳು. ಸೊಳ್ಳೆಗಳ ಕಾಟ ತಪ್ಪಿದಲ್ಲ. ಹೊರಗೆ ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಚಂದಿರನ ಬೆಳಕನ್ನು ನೋಡಿ ಬೊಗಳುತ್ತಿರಬಹುದು.
ಅಲ್ಲ! ಯಾರನ್ನೋ ಅಟ್ಟಿಸಿಕೊಂಡು ಹೋಗುವಂತೆ ಬೊಗಳುತ್ತಿವೆ! ಅಂದರೆ ಯಾರೋ ಕಳ್ಳ ಬಂದಿರಬಹುದು! ಏನೇನೋ ಆಲೋಚನೆಗಳು ಅವಳ ನಿದ್ದೆಯನ್ನು ದೂರಗೊಳಿಸಿದವು. ಎದೆ ಬಡಿತ ತೀವ್ರವಾಯಿತು. ಯಾರೋ ಅಂಗಳದಲ್ಲಿ ಓಡಾಡುವ ಸದ್ದು! ದಿಗ್ಗನೆ ಎದ್ದು ಕುಳಿತಳು. ಟಕ ಟಕ ಬೂಟುಗಾಲಿನ ಸದ್ದು! ಪನ್ನಾಲಾಲ್ ಆಗಿರಲಾರದು! ಆತನ ಸಂಸಾರ ಬರಲು ಇನ್ನೂ ಎರಡು ವಾರಗಳಿವೆ. ಅವನ ಕೆಲಸಾದಾಳುಗಳಿರಬೇಕು! ಚಿನ್ನದ ವ್ಯಾಪಾರಿಯ ಮನೆಗೆ ಕನ್ನ ಹಾಕುವಷ್ಟು ಕೀಳು ದರ್ಜೆಯ ವ್ಯಕ್ತಿಗಳಲ್ಲ. ಚಿತ್ತ ಸಮಾಧಾನಕ್ಕೆ ಎದ್ದು ಬಂದು ಕಿಟಿಕಿಯ ಬಳಿ ಮುಖ ತೂರಿಸಿದಳು. ಆಸ್ಪಷ್ಟ ಅಕೃತಿ! ಬೆಳದಿಂಗಳಿದ್ದರೂ ಸರಿಯಾಗಿ ಕಾಣಲಾರದು. ಗಿಡಗಳ ಮರೆಯಿಂದ ಅವಳ ಕೋಣೆಯ ಕಡೆ ನಡೆದು ಬರುತ್ತಿದ್ದ. ಕಳ್ಳತನದ ಹೆಜ್ಜೆಯಿಂದ ಬರುತ್ತಿಲ್ಲ! ಸರ ಸರನೆ ನಡೆದುಕೊಂಡು ಬರುತ್ತಿದ್ದಾನೆ! ಅವಳಿಗೆ ಸ್ಪಷ್ಟವಾಗಿ ಗೋಚರಿಸಿದ! ಪರದೆ ಬಿಟ್ಟು ಬಾಗಿಲಿನ ಬಳಿ ಬಂದು ಬೆದರಿಕೆಯಿಂದ ನಿಂತಳು.
ಸಂಜೆ ಮರಳ ದಂಡೆಯ ಮೇಲೆ ಕಾಣಿಸಿಕೊಂಡ ವ್ಯಕ್ತಿ! ಕಡು ನೀಲಿ ಪ್ಯಾಂಟ್ ತಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ! ಇಲ್ಲಿಗೆ ತನ್ನನ್ನು ಹುಡುಕಿಕೊಂಡು ಬಂದಿರಬಹುದು! ಇಲ್ಲ ಅಗಿರಲಾರದು. ತಾನು ಇಲ್ಲಿರುವೆನೆಂದು ಅವನಿಗೆ ತಿಳಿದಿಲ್ಲ. ಹೆಣ ಭಾರದ ಮರದ ಪೆಟ್ಟಿಗೆಯನ್ನು ದೋಣಿಯಿಂದ ಇಳಿಸಿ ಕಾರಿನಲ್ಲಿ ಇಡಲು ಸಹಕರಿಸಿದ್ದಳು. ಆತ ಕಾರನ್ನು ಚಲಾಯಿಸಿಕೊಂಡು ಹೋಗಿದ್ದ. ಮತ್ತೆ ಇಲ್ಲಿ ಹೇಗೆ ಕಾಣಿಸಿಕೊಂಡಿದ್ದಾನೆ?
ಬೂಟುಗಾಲಿನ ಸದ್ದು ನಿಂತಿತು. ಸಮಾಧಾನದ ಉಸಿರೆಳೆದುಕೊಂಡಳು. ಅಂದರೆ ಆ ವ್ಯಕ್ತಿ ಎತ್ತಲೋ ಸರಿದು ಹೋಗಿರಬೇಕು. ಬಾಗಿಲಿನ ಬಳಿಯಿಂದ ಇತ್ತ ಸರಿದವಳಿಗೆ ಕೇಳಿಸಿದ ಸದ್ದಿಗೆ ಬೆಚ್ಚಿ ಬಿದ್ದಳು!
ಬಾಗಿಲಿನ ಮೇಲೆ ನಯವಾಗಿ ಬೆರಳುಗಳಿಂದ ಕುಟ್ಟುವ ಸದ್ದು!
ಆ ವ್ಯಕ್ತಿ ತಾನೆಣಿಸಿದಂತೆ ಸರಿದು ಹೋದುದ್ದಲ್ಲ! ಬಾಗಿಲಿನ ಬಳಿ ನಿಂತು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ! ನಿಶಬ್ದವಾಗಿ ನಿಂತೇ ಇದ್ದಳು.
ಮತ್ತೊಮ್ಮೆ ಬಾಗಿಲಿನ ಮೇಲೆ ಬಡಿದ. ಬಾಗಿಲು ತೆರೆಯದಿದ್ದರೆ ಖಂಡಿತವಾಗಿಯು ಬಾಗಿಲು ಮುರಿದು ಒಳಗೆ ಬರುವ ಯೋಚನೆ ಇರಬಹುದು. ಬಾಗಿಲ ಬಳಿ ಧೈರ್ಯ ಮಾಡಿ ಬಂದಳು. ಹೇಗೂ ಆತ ಪರಿಚಿತ ವ್ಯಕ್ತಿ. ಸಂಜೆಯ ಹೊತ್ತು ಅವನಿಗೆ ಸಹಾಯ ಮಾಡಿದ್ದಾಗಿದೆ. ತನಗೇನು ಮಾಡಲಾರ. ಭಂಡ ಧೈರ್ಯದಿಂದ ಬಾಗಿಲಿನ ಚಿಲಕ ತೆಗೆಯಬೇಕೆನ್ನುವಷ್ಟರಲ್ಲಿ ಮತ್ತೆ ಜೋರಾಗಿ ಬಾಗಿಲು ಕಿತ್ತು ಬರುವಂತೆ ಬಡಿದ!
ತಟಕ್ಕನೆ ಚಿಲಕ ಜಾರಿಸಿದಳು. ಕ್ಯಾಂಡಲ್ ಉರಿಸಿ ದೀಪ ಬೆಳಗಿಸಿದಳು. ಅವಳನ್ನು ಕಂಡು ಸಣ್ಣಗೆ ಉದ್ಗಾರ ತೆಗೆದ.
"ಓಹೋ ನೀವು, ಮತ್ತೆ ನಿಮ್ಮನ್ನು ಕಾಣ್ತೀನೀಂತ ಅಂದುಕೊಂಡಿರಲಿಲ್ಲ" ಅವಳು ಬಾಗಿಲಿಗೆ ಅಡ್ಡವಾಗಿ ನಿಂತಿದ್ದಾಗ ಸರಿದು ಒಳ ಬಂದ. ಅವಳಿಗೆ ಧೈರ್ಯ ಬಂದಿತ್ತಾದರು ತಾನು ಒಬ್ಬಂಟಿಯಾಗಿರುವಾಗ ಬಂದನೆಂದರೆ! ಏನಾದರೂ ಸಂಚು ಹೂಡಿರಬಹುದು!
"ಕ್ಷಮಿಸಿ ನಿಮ್ಮ ನಿದ್ದೇನ ಹಾಳು ಮಾಡ್ದೆ. ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗಬೇಕಿದೆ" ಮತ್ತೆ ಸಹಾಯ ಹಸ್ತ ಯಾಚಿಸುತ್ತಿದ್ದಾನೆ. ಈಗಾಗಲೆ ಎರಡು ಬಾರಿ ಸಹಾಯ ಮಾಡಿದ್ದಾಯಿತು.
"ಏನದು?" ಕಣ್ಣು ಕಿರಿದುಗೊಳಿಸಿ ಕೇಳಿದಳು ಗಾಜು ಕಣ್ಣಿನ ಚೆಲುವೆ.
"ನನ್ನ ಹೆಸರು ಅನುಪ್ರೀತ್. ಗುಜರಾತಿನಿಂದ ಹುಚ್ಚು ಸಾಹಸ ಮಾಡ್ಕೊಂಡು ಇಲ್ಲಿಯವರೆಗೆ ಬಂದಿದ್ದೀನಿ. ಆದ್ರೆ ನನಗೆ ಬೇಕಾಗಿರೋ ವ್ಯಕ್ತಿ ಊರಿನಲಿಲ್ಲ. ಆತ ಎಲ್ಲೋ ದೂರದೂರಿಗೆ ಹೋಗಿದ್ದಾನಂತೆ. ಮರದ ಪೆಟ್ಟಿಗೆಯನ್ನು ಮರಳಿಸಿ ಹೋಗಲು ಬಂದಿದ್ದೀನಿ. ದಯವಿಟ್ಟು ಇಲ್ಲ ಅನ್ಬೇಡಿ. ಒಂದೆರಡು ದಿವಸದ ಮಟ್ಟಿಗೆ ಆ ಪೆಟ್ಟಿಗೆ ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಉಪಕಾರ ಮಾಡಿದ ಹಾಗೆ"
"ಇಲ್ಲ ಸಾಧ್ಯವಿಲ್ಲ ಅನುಪ್ರೀತ್. ಇಲ್ಲಿ ಸರಿಯಾಗಿ ಕೈ ಕಾಲು ಬಿಟ್ಟು ಮಲಗುವಷ್ಟು ಜಾಗವಿಲ್ಲ. ಪೆಟ್ಟಿಗೆ ಇಟ್ಟರೆ ಕಷ್ಟ. ಅದೂ ಅಲ್ದೆ ಇದು ನನ್ನ ಮನೆಯಲ್ಲ. ನಾನು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೀನಿ. ನಾನು ಬಾಡಿಗೆಗೆ ಪಡೆದಿರೋ ಅಗ್ಗದ ಕೋಣೆ ಇದು. ನಿಮ್ಮ ಪೆಟ್ಟಿಗೆಗೆ ಭದ್ರತೆ ಕೂಡ ಇರಲಾರದು" ನಯವಾಗಿ ನಿರಾಕರಿಸಿದಳು ನಿನಾದ.
"ಭದ್ರತೆಯ ಮಾತು ಬೇಕಾಗಿಲ್ಲ. ನೀವು ಹೊರಗೆ ಹೋಗುವಾಗ ಬಾಗಿಲು ಮುಚ್ಚಿ ಹೋಗುವಿರಲ್ಲವೆ? ಎರಡು ದಿನ ನಿಮ್ಮಲ್ಲಿರಲಿ. ನಾನು ಮರಳುವ ಮೊದಲು ಇಲ್ಲಿಂದ ಅದನ್ನು ಸಾಗಿಸ್ತೀನಿ" ಮತ್ತೆ ಗೋಗರೆದ.
ಯುವಕ ಸಭ್ಯನಂತೆ ಕಾಣುತ್ತಾನೆ! ಹೇಗೂ ಪನ್ನಾಲಾಲ್ ಕೂಡ ಊರಲಿಲ್ಲ. ತನ್ನ ಕೋಣೆಗೆ ಬರುವವರು ಯಾರು ಇಲ್ಲ. ಇರಲಿ ಚಾಪೆ ನೆಲದಲ್ಲಿ ಹಾಸಿ ಮಲಗುವ ಬದಲು ಪೆಟ್ಟಿಗೆ ಮೇಲೆ ಹಾಸಿ ಮಲಗಬಹುದು.
"ಸರಿ, ಅದರೆ ಎರಡು ದಿನದೊಳಗೆ ಮರಳಿ ತೆಗೆದುಕೊಂಡು ಹೋಗಬೇಕು"
ಅವಳ ಒಪ್ಪಿಗೆ ತಿಳಿದು ದಂತ ಪಂಕ್ತಿ ಕಾಣುವಂತೆ ತುಟಿಯಗಲಿಸಿದ. ಅವನ ಮುಖವನ್ನೊಮ್ಮೆ ದಿಟ್ಟಿಸಿದಳು. ತುಂಬಾ ಸುಂದರ ಯುವಕನೆನಿಸಿತು.
"ಬನ್ನಿ ಪೆಟ್ಟಿಗೆ ಇಲ್ಲೆ ಗಿಡಗಳ ಮರೆಯಲ್ಲಿದೆ. ನೀವು ಕೈ ಚಾಚಿದರೆ ಸುಲಭದಲ್ಲಿ ತರಬಹುದು"
ಅವನನ್ನು ಹಿಂಬಾಲಿಸಿ ಗಿಡಗಳ ಬಳಿ ಬಂದಳು. ಪೆಟ್ಟಿಗೆಯನ್ನು ಅವಳ ಕೋಣೆಗೆ ತಂದರು.
"ಉಪಕಾರವಾಯ್ತು ಮಿಸ್..." ಹೆಸರು ತಿಳಿಯದೆ ಮಾತು ನಿಲ್ಲಿಸಿದ.
"ನಿನಾದ"
"ನಿನಾದ... ನಿಮ್ಮ ಉಪಕಾರಾನ ಯಾವತ್ತು ಮರೆಯಲಾರೆ" ಮತ್ತೊಮ್ಮೆ ವಂದಿಸಿ ಬಿರಬಿರನೆ ನಡೆದು ಕತ್ತಲಲ್ಲಿ ಮಾಯವಾದ.
ಬಾಗಿಲು ಮುಚ್ಚಿ ಚಿಲಕ ಸಿಕ್ಕಿಸಿದಳು. ಮರದ ಪೆಟ್ಟಿಗೆಯ ಮೇಲೆ ಚಾಪೆ ಹಾಸಿ ಮಲಗಿದಳು. ನಿದ್ದೆ ಯಾವಾಗ ಅವರಿಸಿತೋ ತಿಳಿಯಲಿಲ್ಲ. ಕೈ ಸೆಳೆಯುತ್ತಿತ್ತು. ನೋವಿನಿಂದ ಹೊರಳಿ ಮಲಗಿದವಳಿಗೆ ತಟ್ಟನೆ ಎಚ್ಚರವಾಯಿತು. ಕಣ್ಣು ಬಿಟ್ಟಾಗ ಸೂರ್ಯನ ಕಿರಣ ಕಿಟಿಕಿಯ ಪರದೆಯನ್ನು ತೂರಿ ಒಳ ಬಂದಿತ್ತು. ಮುಂಜಾನೆಯ ಜಡ ಆವರಿಸಿದ್ದರೂ ಕೆಲಸ ಅನಿವಾರ್ಯ. ಮುಖ ತೊಳೆದು ಬಂದವಳಿಗೆ ಯಾವುದೋ ಕೆಟ್ಟ ವಾಸನೆ ಬಂದಂತಾಗಿ ಹೊಟ್ಟೆ ತೊಳೆಸಿದಂತಾಯಿತು. ಮೂಗಿಗೆ ಕೈ ಹಿಡಿದು ಸುತ್ತಲೂ ದೃಷ್ಟಿಸಿದಳು. ಯಾವುದೋ ಅಸಹ್ಯ ವಾಸನೆ! ಇಲಿಯೋ ಹೆಗ್ಗಣವೋ ಸತ್ತಿರಬಹುದೆಂದು ಪುಸ್ತಕದ ರಾಶಿಯನ್ನು ತೆಗೆದು ನೋಡಿದಳು.
ಇಲ್ಲ!
ತಟ್ಟನೆ ನೆನಪಾಗಿದ್ದು ಆರು ಅಡಿ ಉದ್ದದ ಮರದ ಪೆಟ್ಟಿಗೆ! ಅದರೊಳಗೆ ಕೊಳೆತು ನಾರುವ ವಸ್ತು!!?? ಕುತೂಹಲದಿಂದ ಅದರ ಬಳಿ ಬಂದವಳಿಗೆ ಬವಳಿ ಬಂದಂತಾಯಿತು. ಮೂಗಿಗೆ ಸೆರಗು ಹಿಡಿದು ನಿಂತಳು.
ಪೆಟ್ಟಿಗೆಗೆ ಚಿಲಕ ಮಾತ್ರ ಸಿಕ್ಕಿಸಿದೆ! ಬೀಗ ಜಡಿದಿರಲಿಲ್ಲ!
‘ಯಾವುದೋ ವ್ಯಕ್ತಿಗೆ ತಲುಪಿಸುವುದಿದೆ, ಆ ವ್ಯಕ್ತಿ ಊರಲ್ಲಿಲ್ಲ’ ಅನುಪ್ರೀತ್ ಹೇಳಿದ್ದ. ಯಾವುದೋ ಸಮಸ್ಯೆಯಲ್ಲಿ ತನ್ನನ್ನು ಸಿಲುಕಿಸಿದ್ದಾನೆ ಚೆಲುವ. ಚಿಲಕ ಸರಿಸಿ ಪ್ರಯಾಸದಿಂದ ಬಾಗಿಲು ತೆರೆದಳು. ಕಿಟಾರನೆ ಕಿರುಚಿ ಬಿಕ್ಕಳಿಸಿದಳು.
ಕಣ್ಣುಗಳನ್ನು ತೆರೆದು, ಬಾಯಿ ಅಗಲಿಸಿ ವಿಕಾರ ರೂಪದಲ್ಲಿ ಮಲಗಿದ್ದ ಹೆಂಗಸಿನ ದೇಹ!
ಆ ಮುಖವನ್ನು ಎಲ್ಲೋ ನೋಡಿದ ನೆನಪು!
ತನ್ನೆಣಿಕೆ ಸುಳ್ಳಲ್ಲ! ಚಾಂದಿನಿ ಬಾಯಿ!
ಪನ್ನಲಾಲ್ ನ ಮಡದಿ! ತನಗೆ ಬಾಡಿಗೆ ಮನೆಯನ್ನು ಕೊಡುವ ಸೌಜನ್ಯ ತೋರಿಸಿದೋಳು.
ಪನ್ನಲಾಲ್ ಸಂಸಾರ ಸಮೇತ ರೈಲಿನಲ್ಲಿ ಗುಜರಾತಿಗೆ ತೆರೆಳಿದ್ದಾನೆ. ಅನುಪ್ರೀತ್ ರೈಲಿನಲ್ಲಿ ಒಡವೆ ಹಣಕ್ಕಾಗಿ ಅವಳನ್ನು ಕೊಂದು ಯಾಂತ್ರಿಕ ದೋಣಿಯಲ್ಲಿ ಹೆಣವನ್ನು ಸಾಗಿಸಿದ್ದಾನೆ! ತಾನೀಗ ಸಮಸ್ಯೆಯಲ್ಲಿ ಸಿಕ್ಕಿಬಿದ್ದದಂತಾಗಿದೆ. ಏನೋ ನೆನಪಾಗಿ ರೂಮಿಗೆ ಬೀಗ ಜಡಿದು ಹಾರು ನಡಿಗೆಯಲ್ಲಿ ಸಮುದ್ರದ ದಂಡೆಯ ಬಳಿ ಬಂದಳು. ಅನುಪ್ರೀತ್ ಎಲ್ಲೂ ಹೋಗಿರಲಾರ. ಲಂಗರು ಹಾಕಿ ನಿಂತಿರೋ ದೋಣಿಯಲ್ಲಿ ತಂಗಿರಬಹುದು. ಅಲ್ಲಿ ಬಂದವಳಿಗೆ ನಿರಾಶೆ ಕಾದಿತ್ತು.
ಅಂದರೆ ಅನುಪ್ರೀತ್ ತನ್ನನ್ನು ಇಕ್ಕಟಿನಲ್ಲಿ ಸಿಲುಕಿಸಿ ಪರಾರಿಯಾಗಿದ್ದಾನೆ! ದು:ಖ ಉಮ್ಮಳಿಸಿ ಬಂತು. ಇನ್ನು ಪೋಲಿಸ್ನೋರ ವಿಚಾರಣೆ... ಕೋರ್ಟು ಕಛೇರಿ ಅಲೆದಾಟ... ಸಣ್ಣಗೆ ನಡುಕ ಅರಂಭವಾಯಿತು.
ಒಂದು ವಾರ ಕಳೆದಿರಬಹುದು......
ಪೋಲಿಸ್ ಠಾಣೆಗೆ ಅಲೆದು ಸುಸ್ತಾಗಿದ್ದಳು. ಕೇಳುವ ನೂರಾರು ಪ್ರಶ್ನೆಗಳಿಗೆ ಉತ್ತರಿಸಿ ರೋಸಿ ಹೋಗಿತ್ತು. ಇಂದು ಕೊಲೆಗಾರ ಯಾರೆಂದು ನಿರ್ಧರಿಸಲಾಗುತ್ತದೆ!!? ನಡೆದ ಘಟನೆಯನ್ನೆಲ್ಲಾ ಮುಚ್ಚು ಮರೆಯಿಲ್ಲದೆ ಎಸ್. ಐ. ಭಾರಾಧ್ವಜ್ ಗೆ ತಿಳಿಸಿದ್ದಾಳೆ. ಬಸ್ಸು ಇಳಿದು ಭಾರವಾದ ಹೆಜ್ಜೆಯಿಡುತ್ತಾ ಠಾಣೆಯ ಮೆಟ್ಟಲೇರಿ ಬಂದಳು. ನಗು ಮುಖದಲ್ಲೆ ಎಸ್. ಐ. ಸ್ವಾಗತಿಸಿದರು. ಅವಳಿಗೆ ಆತಂಕವಾಗಿತ್ತು. ಅವರು ತೋರಿಸಿದ ಬೆಂಚಲ್ಲಿ ಕುಳಿತು ಅದರ ಅಂಚನ್ನು ಗಟ್ಟಿಯಾಗಿ ಹಿಡಿದುಕೊಂಡು ಹೃದಯ ಬಡಿತದ ತೀವ್ರತೆಯನ್ನು ನಿಯಂತ್ರಿಸಲೆತ್ನಿಸುತ್ತಿದ್ದಳು.
"ಮಿಸ್ ನಿನಾದ" ಬಾರಧ್ವಜ್ ನ ಕರೆಗೆ ಬೆಚ್ಚಿ ಬಿದ್ದಳು.
"ಕೊಲೆಗಾರ ಸಿಕ್ಕಿ ಬಿದ್ದಿದ್ದಾನೆ"
ಕೊಲೆಗಾರ ಮತ್ತಾರು ಅಲ್ಲ, ಹುಚ್ಚು ಸಾಹಸ ಮಾಡಿ ಗುಜರಾತಿನಿಂದ ಬಂದ ಸುಂದರ ಯುವಕ ಅನುಪ್ರೀತ್! ಚಾಂದಿನಿ ಬಾಯಿಯನ್ನು ಕೊಲೆ ಮಾಡಿ ಒಡವೆಗಳನ್ನು ಅಪಹರಿಸಿದ್ದು ಹುಚ್ಚು ಸಾಹಸ!
ಬಾರಧ್ವಜ್ ಮುಂದುವರಿಸುತಿದ್ದರು, "...ಕೊಲೆಗಾರನಿಗೂ ಚಾಂದಿನಿ ಬಾಯಿಗೂ ಅಗಿಂದಾಗೆ ಜಗಳವಾಗ್ತಾ ಇತ್ತು"
ಅನುಪ್ರೀತ್ ಚಾಂದಿನಿ ಬಾಯಿಗೆ ಪರಿಚಿತ!
"...ಚಾಂದಿನಿ ಬಾಯಿ ಅವನಿಗೆ ಚಿನ್ನದ ವ್ಯಾಪರ ಮಾಡಲು ಪ್ರಚೋದಿಸಿದ್ಲು. ಅದಕ್ಕಾಗೆ ತನ್ನ ಅಣ್ಣನಿಂದ ಸಹಾಯ ಪಡೆದ್ಲು. ಅದ್ರೆ ಕೊಲೆಗಾರ ಅವಳಿಗೆ ದ್ರೋಹ ಮಾಡ್ದ. ಲಕ್ಷಗಟ್ಟಲೆ ಬಾಕಿ ಇರೋ ಹಣಾನ ಕೊಡಲು ನಿರಾಕರಿಸಿದ. ಚಾಂದಿನಿ ಬಾಯಿ ಮೋಸ ಮಾಡಿದಕ್ಕಾಗಿ ಅವನನ್ನು ಕಾನೂನಿನ ಕೈಗೆ ಒಪ್ಪಿಸುವುದಾಗಿ ಬೆದರಿಸಿದ್ಲು. ಕೊಲೆಗಾರ ಶಾಂತನಾದ. ಗುಜರಾತಿಗೆ ಮರಳಿದ ನಂತರ ಬಾಕಿ ಹಣವನ್ನು ಕೊಡುವುದಾಗಿ ಭರವಸೆ ನೀಡಿದ. ಇಬ್ಬರೂ ರೈಲಿನಲ್ಲಿ ಗುಜರಾತಿಗೆ ಹೊರಟರು. ಆತ ಮೊದಲೆ ನಿರ್ಧರಿಸಿದಂತೆ ಅವಳನ್ನು ರೈಲಿನಲ್ಲಿ ಮುಗಿಸ್ದ!"
ಪನ್ನಾಲಾಲ್ ಮತ್ತು ಚಾಂದಿನಿ ಬಾಯಿಯನ್ನು ಕೊಲೆಗಾರ ಅನುಸರಿಸಿ ಹೋಗಿದ್ದಾನೆ. ಪನ್ನಾಲಾಲ್ ಇಲ್ಲದ ಸಮಯ ನೋಡಿ ಚಾಂದಿನಿ ಬಾಯಿಯನ್ನು ಮುಗಿಸಿದ್ದಾನೆ!
"...ಕೊಲೆಗಾರ ಅವಳನ್ನು ಹೊಡೆದು ಸಾಯಿಸಿದ್ದಲ್ಲ. ಅವಳಿಗೆ ಕಾಫಿಯಲ್ಲಿ ವಿಷ ಬೆರೆಸಿ ನೀಡ್ದ. ಅವಳು ಹೊತ್ತಲ್ಲದ ಹೊತ್ತಲ್ಲಿ ಕಾಫಿ ಕುಡಿಯೋದಿಕ್ಕೆ ನಿರಾಕರಿಸಿದ್ಲು. ಆತ ಅವಳನ್ನು ಜಬರ್ದಸ್ತಿಯಿಂದ ಕುಡಿಯುವಂತೆ ಪ್ರಯತ್ನಿಸ್ದ. ಬೋಗಿಯಲ್ಲಿ ಆಗ ಅವರಿಬ್ಬರೆ ಇದ್ದಿದ್ದು! ಬೇರೆ ದಾರಿ ಕಾಣದೆ ಅವಳು ಕಿರುಚಿಕೊಂಡು ಓಡಿ ಬರೋದಕ್ಕೆ ಪ್ರಯತ್ನಿಸಿದ್ಲು. ಅತ ಕಾಲು ಅಡ್ಡ ಹಿಡಿದು ಅವಳನ್ನು ಬೀಳಿಸಿದ. ಅವಳ ತಲೆ ಬಲವಾಗಿ ಬೋಗಿಯ ಕಿಟಕಿಗೆ ಬಡಿಯಿತು. ಉಸಿರು ನಿಂತು ಹೋಯಿತು. ಗುಜರಾತಿನಲ್ಲಿ ರೈಲು ನಿಲ್ಲುತ್ತಲೆ ಕೆಳಗಿಳಿದ. ಅವಳ ಹೆಣವನ್ನು ಸಾಗಿಸೋದಕ್ಕೆ ಯಾರಾದರು ಸಹಾಯಕ್ಕೆ ಬರಬಹುದೆಂದುಕೊಂಡ. ಯಾರು ಕಾಣಲಿಲ್ಲ. ಇನ್ನೇನು ರೈಲು ಮುಂದೆ ಹೊರಡಬೇಕೆನ್ನುವಾಗ ಒಳಗೆ ಹಾರಿ ಬಂದ. ಚಾಂದಿನಿ ಬಾಯಿಯ ಹೆಣ ಕಾಣೆಯಾಗಿತ್ತು"
"ಕಾಣೆಯಾಗಿತ್ತು!!" ಆಶ್ಚರ್ಯ ವ್ಯಕ್ತ ಪಡಿಸಿದಳು ನಿನಾದ.
"ಹೆಣ ಕಾಣೆಯಾದುದಲ್ಲ. ಹೆಣವನ್ನು ಸಾಗಿಸ್ದೋನು ಅನುಪ್ರೀತ್"
"ಅಂದ್ರೆ... ಕೊಲೆಗಾರ ಅನುಪ್ರೀತ್...." ಅವಳ ಮಾತು ಮುಗಿಯುವ ಮೊದಲೆ ಎಸ್. ಐ. ಮುಗುಳ್ನಕ್ಕು "ಅಲ್ಲ" ಅಂದರು. ನಿನಾದಳಿಗೆ ಆಶ್ಚರ್ಯವಾಯಿತು.
"ಅನುಪ್ರೀತ್ ರೈಲ್ವೆಯಲ್ಲಿ ಠಾಣಾಧಿಕಾರಿ. ಕೊಲೆ ಮಾಡ್ದೋನು ಅನುಪ್ರೀತ್ ಅಲ್ಲ. ಪನ್ನಾಲಾಲ್"
"ಪನ್ನಾಲಾಲ್!!!" ಉದ್ಗರಿಸಿದಳು.
"ಹೌದು. ಕಂಪಾರ್ಟ್ ಮೆಂಟಿನಲ್ಲಿ ಗಲಾಟೆ ಅದಾಗ ಯಾರೋ ಅದನ್ನು ನೋಡಿ ಪೋಲಿಸರಿಗೆ ತಿಳಿಸಿದರು. ಅನುಪ್ರೀತ್ ಅಲ್ಲಿಗೆ ಬಂದಾಗ ಪನ್ನಲಾಲ್ ಕಾಣೆಯಾಗಿದ್ದ"
"ಹಾಗಾದ್ರೆ ಅನುಪ್ರೀತ್ ಹೆಣವನ್ನೇಕೆ ಇಲ್ಲಿ ತಂದಿದ್ದು?" ಅವಳ ಬಾಲಿಶವಾದ ಪ್ರಶ್ನೆಗೆ ಬಾರಧ್ವಜಿಗೆ ನಗು ಬಂತು.
"ಎರಡು ದಿನವಾದ್ರೂ ಪನ್ನಾಲಾಲ್ ನ ಪತ್ತೆಯಾಗದಾಗ ತಿಳಿದು ಬಂದ ವಿಷಯ, ಆತ ಯಾವುದೋ ಯಾಂತ್ರಿಕ ದೋಣಿ ಹಿಡಿದು ದಕ್ಷಿಣಕ್ಕೆ ಹೊರಟನೆಂದು. ಹಾಗೆ ಅನುಪ್ರೀತ್ ಹುಚ್ಚು ಸಾಹಸ ಮಾಡ್ಕೊಂಡು ಹೆಣ ಸಮೇತ ಇಲ್ಲಿಗೆ ಬಂದ. ಪನ್ನಾಲಾಲ್ ನ ಮನೆಯಲ್ಲಿ ಯಾರೋ ಇರುವ ಸುದ್ದಿ ತಿಳಿದು ಇಲ್ಲಿಗೆ ಬಂದ. ಅದ್ರೆ ಅಲ್ಲಿದ್ದಿದ್ದು ನೀನು. ನಿನಗೇನಾದರೂ ಸುಳಿವು ತಿಳಿದಿರಬಹುದೆಂದು ಅನುಪ್ರೀತ್ ನಿನ್ನಲ್ಲಿಗೆ ಬಂದ. ಅದೇ ಸಮಯಕ್ಕೆ ಪನ್ನಾಲಾಲ್ ಒಂದು ಅಗ್ಗದ ವಸತಿ ಗೃಹದಲ್ಲಿ ಸಿಕ್ಕಿ ಬಿದ್ದಿದ್ದ. ಕೊಲೆ ಮಾಡ್ದೋನು ತಾನೇಂತ ಒಪ್ಕೊಂಡ"
ಅಗಲೇ ವಾಹನವೊಂದು ಬಂದು ನಿಂತಿತು. ಕತ್ತು ಹೊರಳಿಸಿದಳು ನಿನಾದ.
ಕಡು ನೀಲಿ ಜೀನ್ಸ್, ತಿಳಿ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ಮೆಟ್ಟಲೇರಿ ಬರುತ್ತಿದ್ದ ಅನುಪ್ರೀತ್....
"ಏನೂ, ಟೀಚರ್ ಶಾಲೆಯಲ್ಲಿ ಪಾಠ ಮಾಡೋದು ಬಿಟ್ಟು ಠಾಣೆಯಲ್ಲಿ ಪಾಠ ಮಾಡಲು ಬಂದಿದ್ದಾರೆಯೆ?" ಅಣಕು ಮಾತಿನಲ್ಲಿ ಕೇಳಿದ.
"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದ್ರೆ..... ಠಾಣೆಯಲ್ಲಿರುವವರಿಗೆ ಪಾಠ ಕಲಿಸ್ಬೇಕಲ್ಲ"
ಅನುಪ್ರೀತ್, ಬಾರಧ್ವಜ್ ಇಬ್ಬರೂ ಅವಳ ಮಾತಿಗೆ ಗೊಳ್ಳನೆ ನಕ್ಕರು.
"ಕ್ಷಮಿಸಿ ನಿನಾದ..." ಅಂದು ಕೈ ಜೋಡಿಸುವ ಸೌಜನ್ಯ ತೋರಿಸಿದ ಅನುಪ್ರೀತ್.
****

Read more!

Thursday, November 12, 2009

ಕೊಲೆಗಾರ


(ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾದ ಪತ್ತೇದಾರಿ ಕಥೆ)

ಸುಮಾರು ಆರುಗಂಟೆಯ ಸಮಯ. ರಸ್ತೆಯಲ್ಲಿ ವಾಹನ ಸಂಚಾರ ಅತ್ಯಧಿಕವಾಗಿತ್ತು. ಒಮ್ಮೆ ತನ್ನ ದೃಷ್ಟಿಯನ್ನು ಕೈ ಗಡಿಯಾರದತ್ತ ಹೊರಳಿಸಿದ ಗೋಪಾಲಸ್ವಾಮಿ ತನ್ನ ಸಹಾಯಕನನ್ನು ಕರೆದು ಹೋಗುವಂತೆ ಹೇಳಿ, ಮುಖ್ಯವಾದ ಫೈಲೊಂದನ್ನು ಕೈಗೆತ್ತಿಕೊಂಡ. ಮರುದಿನದ ಕೇಸ್‍ಗಳನ್ನು ಅಧ್ಯಯನ ಮಾಡಲು ಸರಿಯಾದ ಸಮಯ ಬೇಕಾಗಿತ್ತು. ರಾತ್ರಿಯ ಹೊತ್ತು ಕ್ಲಾಯಿಂಟ್‍ಗಳು ಬಂದು ತೊಂದರೆ ಕೊಡುವುದಿಲ್ಲವೆಂದು ಗೊತ್ತು. ತದೇಕ ಚಿತ್ತದಿಂದ ಕಡತದ ಮೇಲೆ ಕಣ್ಣಾಡಿಸುತ್ತಿದ್ದ ವಕೀಲ ತನ್ನಷ್ಟಕ್ಕೆ ತಾನು ಸಾಧ್ಯ ಅಸಾಧ್ಯತೆಗಳ ಬಗ್ಗೆ ಪರಾಮರ್ಶಿಸುತ್ತಿದ್ದ. ತಟ್ಟನೆ ಬಾಗಿಲಿನ ಉದ್ದಕ್ಕೂ ಯಾರೋ ನಿಂತಂತಾಯಿತು. ತಲೆಯೆತ್ತಿದ. ಇಪ್ಪತ್ತೈದರ ಆಸುಪಾಸಿನ ಹೆಣ್ಣು ಆತಂಕದ ಮುಖದಿಂದ ವಕೀಲನ ಅನುಮತಿಗಾಗಿ ಕಾದು ನಿಂತಿತ್ತು.
"ನಾನು ಒಳಗೆ ಬರಬಹುದೆ?" ಅನುಮತಿಯ ಪ್ರಶ್ನೆ ತೂರಿದರು ಬಾಗಿಲಿನಲ್ಲಿಯೇ ನಿಂತಿರುವಷ್ಟು ತಾಳ್ಮೆ ಕಾಣಿಸಲಿಲ್ಲ. ನುಣುಪು ನೆಲದ ಮೇಲೆ ಪಾದರಕ್ಷೆಯ ಟಕಟಕ ಸದ್ದು ಆ ಹೊತ್ತು ಸಮಸ್ಯೆಯೊಂದರ ಪೀಠಿಕೆಯಂತೆ ಕಂಡಿತು. ನೋಡುತ್ತಿದ್ದ ಕಡತಕ್ಕೆ ಕಾಗದದ ಚೂರನ್ನು ತುರುಕಿಸಿ ಹಾಗೇ ಮುಚ್ಚಿಟ್ಟ ವಕೀಲ, ಬಲಗೈಯಿಂದ ಸನ್ನೆ ಮಾಡಿ ಹೆಣ್ಣನ್ನು ಕುಳಿತುಕೊಳ್ಳುವಂತೆ ಸೂಚಿಸಿದ.
ಆತುರದಲ್ಲಿದ್ದ ಹೆಣ್ಣು ಒಮ್ಮೆ ವಕೀಲನ ಕಡೆಗೆ ಮತ್ತೊಮ್ಮೆ ಎದುರಿಗಿದ್ದ ಗಡಿಯಾರದ ಕಡೆಗೆ ನೋಟ ಹರಿಸಿ ಮೆಲ್ಲಗೆ ಮಾತು ತೆಗೆಯಿತು."
"ಪೊಲೀಸರಿಂದ ಸಹಾಯ ನಿರೀಕ್ಷಿಸಿದ್ದೆ. ಆದರೆ ಈಗ ಕೊಲೆಗಾರ ತಪ್ಪಿಸಿಕೊಳ್ತಾನೇನೋ ಅನ್ನೋ ಅನುಮಾನ ಕಾಡ್ತಾ ಇದೆ. ಹಾಗಾಗ್ಬಾರ್‍ದು... ಆ ಮೈಲಾರಿನಾ ನೇಣುಗಂಭಕ್ಕೆ ಏರಿಸ್ಬೇಕು. ನಿಮ್ಮ ಸಹಾಯ ನಂಗೆ ಮುಖ್ಯ" ಮುಖದ ಮೇಲೆ ಟಿಸಿಲೊಡೆದ ಬೆವರಿನ ಬಿಂದುಗಳನ್ನು ತೆಳುವಾದ ಸಣ್ಣ ಕರವಸ್ತ್ರದಿಂದ ಒರೆಸಿಕೊಂಡು ಸಹಾಯ ಯಾಚಿಸಿತು ಹೆಣ್ಣು.
"ಪೂರ್ತಿಯಾಗಿ ಹೇಳಿ. ನೀವು ಯಾರು? ಕೊಲೆಯಾಗಿದ್ದು ಯಾರು? ಈ ಮೈಲಾರಿ ಯಾರು? ಪೊಲೀಸರೇಕೆ ಸಹಾಯ ಮಾಡುತ್ತಿಲ್ಲ?" ತಾಳ್ಮೆಯಿಂದ ಕೇಳಿದ ವಕೀಲ.
ಪ್ರಶ್ನೆಗಳ ಉದ್ದ ಸಾಲುಗಳು ಎದುರಾದಾಗ ದೀರ್ಘ ನಿಟ್ಟುಸಿರೊಂದನ್ನು ಚೆಲ್ಲಿದ ಹೆಣ್ಣು ಮೆಲ್ಲಗೆ ನಡೆದ ಘಟನೆಯನ್ನು ಹೇಳಿತು.
"ನನ್ನ ಹೆಸರು ಶಾಂತಿರಾಜು. ರಾಜು ನನ್ನ ಗಂಡ. ನಮ್ಮದೊಂದು ಸಣ್ಣ ಸಿದ್ದ ಉಡುಪುಗಳ ಉದ್ಯಮವಿದೆ. ಮೂರು ತಿಂಗಳ ಹಿಂದೆ ರಾಜುನ ಯಾರೋ ಕೊಲೆ ಮಾಡಿಬಿಟ್ರು. ಆ ಸಮಯದಲ್ಲಿ ನಾನು ಮನೆಯಲ್ಲಿರಲಿಲ್ಲ. ಸೋಫಾದಲ್ಲಿ ಕುಳಿತಂತೆ ಇತ್ತು ರಾಜುನ ದೇಹ. ಮೈ ಮೇಲೆ ಗಾಯಗಳಾಗಲಿ, ರಕ್ತದ ಕಲೆಯಾಗಲಿ ಇಲ್ಲ. ಶವ ಪರೀಕ್ಷೆ ವರದಿ ಕೂಡ ಸ್ಪಷ್ಟವಾಗಿಲ್ಲ. ರಾಜು ಅತೀಯಾಗಿ ಕುಡಿದು ಸತ್ತಿದ್ದಾನೇಂತ ಆ ವರದಿ ಹೇಳುತ್ತೆ. ಆದ್ರೆ ರಾಜು ಯಾವತ್ತು ಕುಡಿದೇ ಇಲ್ಲ. ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿ ಎಫ಼್.ಐ.ಆರ್ ಫೈಲ್ ಮಾಡಿದೆ. ನನ್ನ ಪರವಾಗಿದ್ದ ಪೊಲೀಸರೀಗ ನನಗೆ ವಿರುದ್ಧವಾಗಿದ್ದಾರೆ. ಅಂದ್ರೆ ಇದೊಂದು ಮಾಮೂಲು ಕೇಸು ಅನ್ನೋತರ ಸುಮ್ಮನಾಗಿದ್ದಾರೆ. ಈಗ ರಾಜುನ ಕೊಲೆಯ ಹಿಂದೆ ಒಂದು ಹೆಣ್ಣಿನ ಕೈವಾಡವಿದೆ ಅನ್ನುವುದು ನನ್ನ ಅನುಮಾನ. ಆದರೆ ಪೊಲೀಸರು ಆ ಹೆಣ್ಣನ್ನು ಕರೆದು ವಿಚಾರಿಸುತ್ತಿಲ್ಲ. ಅದಕ್ಕೆ... ಈ ಕೇಸು ಮುಚ್ಚಿ ಹೋಗುತ್ತೇನೋ ಅನ್ನೋ ಅನುಮಾನದಿಂದ ನಿಮ್ಮ ಸಹಾಯ ಯಾಚಿಸಿ ಬಂದಿದ್ದೇನೆ" ಕಥೆ ಹೇಳಿದ ಬಳಿಕ ಮತ್ತೊಮ್ಮೆ ದೀರ್ಘ ಶ್ವಾಸ ಎಳೆದುಕೊಂಡ ಹೆಣ್ಣು ವಕೀಲನ ಮುಖದ ಮೇಲಾಗುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿತ್ತು.
"ಸರಿಯಾದ ಸಾಕ್ಷಿ, ಪುರಾವೆಗಳಲ್ಲದೆ ಅಪರಾಧಿಯನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸುವುದು ಕಷ್ಟ ಶಾಂತಮ್ಮ" ಕೈಗಡಿಯಾರದತ್ತ ಕಣ್ಣಾಡಿಸಿ ಆಕಳಿಸಿದ ವಕೀಲ, "ಪ್ರಯತ್ನಿಸೋಣ ಶಾಂತಮ್ಮ... ನಾಳೆ ಇದೇ ಹೊತ್ತು ಬನ್ನಿ. ಸಾಧ್ಯವಾದಲ್ಲಿ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಕೂಡ ಒದಗಿಸೋ ಪ್ರಯತ್ನ ಮಾಡಿ" ಅಂದು ಮುಂದಕ್ಕೆ ಜರುಗಿ ಕುಳಿತ.
ಶಾಂತಿರಾಜುವಿನ ಮುಖದಲ್ಲಿ ನಿರಾಸೆಯ ಸೆಲೆಯೊಡೆಯಿತು. ಇಲ್ಲೂ ತನಗೆ ಸೋಲು ಅನ್ನುವ ಆತಂಕ. ಎದ್ದು ನಿಂತು ಕೈ ಮುಗಿದ ಹೆಣ್ಣು ನಾಳೆಯ ಹೊತ್ತು ಬರುವುದಾಗಿ ಹೇಳಿ ಹೊರಟಿತು.
ವಕೀಲ ಗೋಪಾಲಸ್ವಾಮಿ ಮತ್ತೆ ಮುಚ್ಚಿಟ್ಟ ಕಡತ ತೆರೆದು ಮುಳುಗಿ ಹೋದ.

***

ಆ ದಿನ ಶಾಂತಿರಾಜು ಹೇಳಿದ ವಿಷಯವನ್ನು ಮೆಲುಕು ಹಾಕಿದ ಗೋಪಾಲಸ್ವಾಮಿ ಅವಳನ್ನು ನಿರೀಕ್ಷಿಸುತ್ತಾ ಕುಳಿತಿದ್ದ. ಬಾಗಿಲ ಬಳಿಯಿಂದ ಸೌಜನ್ಯದ ಪದಗಳು ಕೇಳಿದಾಗ, "ಬನ್ನಿ, ಶಾಂತಿರಾಜು... ನಿಮ್ಮನ್ನೇ ಕಾಯ್ತಾ ಇದ್ದೆ" ತಲೆಯೆತ್ತದೆ ಹೊರಗೆ ನಿಂತಿದ್ದವಳನ್ನು ಒಳಗೆ ಕರೆದ.
"ಕ್ಷಮಿಸಿ, ನಾನು ಶಾಂತಿರಾಜುವಲ್ಲ... ಅನಘಾರಾಜು... ರಾಜುವಿನ ವಿಧವೆ ಹೆಣ್ಣು ನಾನು. ರಾಜುವನ್ನು ಯಾರೋ ಕೊಲೆ ಮಾಡಿದ್ದಾರೆ. ಸೋಫಾದಲ್ಲಿ ಕುಳಿತಂತೆ ಇತ್ತು ಅವನ ದೇಹ. ಮೈಮೇಲೆ ಗಾಯಗಳಾಗಲಿ, ಇನ್ಯಾವುದೇ ಕುರುಹುಗಳಾಗಲಿ ಇಲ್ಲ. ಆದ್ರೂ ರಾಜುನಾ ಕೊಲೆಯಾಗಿದೆ ಅನ್ನೋದು ನನ್ನ ಅನುಮಾನ. ಪೊಲೀಸರು ಮಾಮೂಲಿ ವಿಚಾರಣೆ ಮುಗಿಸಿ ಹೋಗಿದ್ದಾರೆ. ಇಲ್ಲಿಯವರೆಗೂ ಕೊಲೆಗಾರನ್ನ ಪತ್ತೆ ಹಚ್ಚೋದಕ್ಕೆ ಅವರಿಂದ ಸಾಧ್ಯವಾಗಿಲ್ಲ. ದಯವಿಟ್ಟು ತಾವು ಈ ವಿಷಯದಲ್ಲಿ ನನಗೆ ಸಹಾಯ ಮಾಡ್ಬೇಕು" ಕೈಗಳನ್ನು ಜೋಡಿಸಿದ ಹೆಣ್ಣು ಲಾಯರ್‍‍ನ ಎದುರಿಗಿದ್ದ ಕುರ್ಚಿಯನ್ನು ಏಳೆದು ಕುಳಿತಿತು.
ಗೋಪಾಲಸ್ವಾಮಿಗೆ ಆ ಹೆಣ್ಣು ಹೇಳಿದ್ದನ್ನು ಇನ್ನೂ ಅರಗಿಸಿಕೊಳ್ಳಲಾಗಲಿಲ್ಲ. ಹಿಂದಿನ ದಿನ ಶಾಂತಿರಾಜು ಕೂಡ ಇದೇ ವಿಷಯ ತಿಳಿಸಿದ್ದು! ಮಾತ್ರವಲ್ಲ, ರಾಜುವಿನ ಕೊಲೆಯ ಹಿಂದೆ ಒಂದು ಹೆಣ್ಣಿನ ಕೈವಾಡವಿದೆ ಅನ್ನುವುದನ್ನೂ ಸ್ಪಷ್ಟಪಡಿಸಿದ್ದಾಳೆ. ಆ ಹೆಣ್ಣು ಅನಘಾರಾಜು!
ರಾಜು ಇಬ್ಬರು ಹೆಂಡಿರ ಮುದ್ದಿನ ಗಂಡ!? ಆದರೆ ಎರಡು ಹೆಣ್ಣುಗಳು ಒಂದೇ ಮನೆಯಲ್ಲಿರಲು ಸಾಧ್ಯವಿಲ್ಲ. ಇಬ್ಬರ ಹೇಳಿಕೆಯೂ ಒಂದೇ ತೆರನಾಗಿದೆ. ಹಾಗಾದಲ್ಲಿ ಒಬ್ಬಳು ರಾಜುವಿನ ನಿಜವಾದ ಹೆಂಡತಿ; ಇನ್ನೊಬ್ಬಳು ರಾಜುವಿನ ಪ್ರೇಯಸಿ!!
ಚೇತರಿಸಿಕೊಂಡ ವಕೀಲ ಮೆಲ್ಲಗೆ ಮಾತಿಗಿಳಿದ.
"ಕೊಲೆಯಾದ ರಾಜು ನಿಮಗೇನಾಗ್ಬೇಕು?"
ವಕೀಲನ ಪ್ರಶ್ನೆಗೆ ಹೆಣ್ಣಿನ ಕಣ್ಣುಗಳಲ್ಲಿ ಆಶ್ಚರ್ಯ ಮೂಡಿತು. ತಟ್ಟನೆ ನುಡಿಯಿತು.
"ರಾಜು ನನ್ನ ಗಂಡ. ಐದು ವರ್ಷಗಳ ಹಿಂದೆ ಅವನನ್ನು ಪ್ರೀತಿಸಿ ಮದುವೆಯಾದೋಳು ನಾನು..."
ಹೆಣ್ಣಿನ ಕಂಠದಲ್ಲಿ ದು:ಖದ ಎಳೆಯೊಂದು ಕೇಳಿಸಿತು.
"ಅಂದ್ರೆ ರಾಜು ಸಿದ್ದ ಉಡುಪುಗಳ ವ್ಯವಹಾರ ನಡೆಸ್ತಿದ್ದ. ನೀವು ಸಂಜೆ ಮನೆಗೆ ಬರೋವಷ್ಟರಲ್ಲಿ ಸೋಫಾದ ಕುಳಿತಿದ್ದಂತೆ ಇತ್ತು ಅವನ ದೇಹ. ನೀವು ಪೊಲೀಸರ ಸಹಾಯ ಯಾಚಿಸಿದ್ರಿ. ಶವ ಪರೀಕ್ಷೆಯ ವರದಿಯಲ್ಲಿಯೂ ಕೂಡ ಇದು ಕೊಲೆಯಲ್ಲಾಂತ ಸಾಬೀತಾಯಿತು. ಪೊಲೀಸರು ಆಸಕ್ತಿ ಕಳೆದುಕೊಂಡ್ರು. ಇದು ಕೊಲೆ ಕೇಸ್ ಅಲ್ಲ; ಆತ್ಮಹತ್ಯೆ ಅನ್ನೋ ನಿರ್ಧಾರಕ್ಕೆ ಬಂದ್ರು. ನೀವು ನಿರಾಶಾರಾದ್ರಿ... ಅದಕ್ಕೆ ನನ್ನ ಸಹಾಯ ಯಾಚಿಸಿ ಬಂದ್ರಿ, ಸರಿನಾ?"
ವಕೀಲನ ಮಾತಿಗೆ ಹುಬ್ಬೇರಿಸಿತು ಹೆಣ್ಣು.
"ಇಷ್ಟೊಂದು ಮಾಹಿತಿಗಳು ನಿಮಗೆ ಹೇಗೆ ತಿಳಿಯಿತು?"
ವಕೀಲ ನಕ್ಕು ನುಡಿದ.
"ಯಾವುದೋ ಒಂದು ಪತ್ರಿಕೆಯಲ್ಲಿ ಓದಿದ ನೆನಪು" ಗೋಪಾಲಸ್ವಾಮಿಯ ಚಾಣಾಕ್ಷತನದ ಉತ್ತರ.
"ಅನಘಾರಾಜುರವರೇ, ನಿಮಗೆ ಯಾರ ಮೇಲಾದರೂ ಅನುಮಾನವಿದೆಯೆ?"
ಎದುರಿಗೆ ಕುಳಿತ ಹೆಣ್ಣು ಅಲೋಚನೆಗೊಳಗಾಗಿ ಮೆಲ್ಲಗೆ ತಲೆಯಲುಗಿಸಿತು.
"ರಾಜುಗೆ ದುಶ್ಚಟಗಳು ಯಾವುದೂ ಇರಲಿಲ್ಲ. ಆದ್ರೆ ಒಂದು ಹೆಣ್ಣಿನ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದ... ಆ ವಿಷಯ ನಂಗೆ ಗೊತ್ತಾಗಿದ್ದು ರಾಜು ಕೊಲೆಯಾದ ರಾತ್ರಿ. ರಾಜುನ ಹೆಣ ಶವ ಪರೀಕ್ಷೆಗೆ ಹೋದ ಸಮಯದಲ್ಲಿ ಅವನ ಮೊಬೈಲ್‍ಗೆ ಒಂದು ಕರೆ ಬಂದಿತ್ತು. ನಾನೆ ತೆಗೆದುಕೊಂಡೆ. ‘ರಾಜು, ಇವತ್ತು ಮನೆಗೆ ಹೋಗೋ ಮೊದ್ಲು ನನ್ನ ಭೇಟಿಯಾಗು’ ಅಂತ ಆತುರದಲ್ಲಿದ್ದ ಹೆಣ್ಣು ಹೇಳಿದ್ದು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೆ. ನಾನು ಮಾತಾಡೋದ್ರಷ್ಟ್ರಲ್ಲಿ ಕರೆ ನಿಂತ್ತಿತ್ತು"
"ಅಂದ್ರೆ... ಆ ದಿನ ರಾಜು, ಅಂದ್ರೆ ನಿಮ್ಮ ಗಂಡ ಎಂದಿಗಿಂತಲೂ ಬೇಗನೆ ಮನೆಗೆ ಬಂದಿದ್ನೆ?"
"ಹೌದು, ಆ ದಿನ ನಮ್ಮ ಮದುವೆಯಾದ ದಿನ. ಅದಕ್ಕೆ ವಿಶೇಷ ಅಡುಗೆ ಆಗ್ಬೇಕೆಂದಿದ್ದ. ನಾನು ಮಾರುಕಟ್ಟೆಗೆ ಹೋಗಿ ಬರೋವಷ್ಟರಲ್ಲಿ ರಾಜುನ ಕೊಲೆಯಾಗಿದ್ದ. ನಂಗೆ ಆ ಹೆಣ್ಣಿನ ಮೇಲೆ ಅನುಮಾನ..."
ಅನಘಾಳ ಮಾತು ನಿಂತಿತು. ತಟ್ಟನೆ ವಕೀಲ ಪ್ರಶ್ನಿಸಿದ.
"ಆ ವಿಷಯ ನೀವು ಪೋಲಿಸರಿಗೆ ತಿಳಿಸಿಲ್ವೆ?"
"ತಿಳಿಸ್ದೆ... ಅವರು ಆ ಫೋನ್ ಸಂಖ್ಯೆಯನ್ನು ಪತ್ತೆ ಮಾಡಿದ್ರು. ಆದರೆ ಆ ಸಂಖ್ಯೆ ಚಾಲ್ತಿಯಲ್ಲಿಲ್ಲಾಂತ ಉತ್ತರ ಬಂತು"
ಸ್ವಲ್ಪ ಹೊತ್ತು ಆಲೋಚಿಸಿದ ಬಳಿಕ ಕೇಳಿದ.
"ಆ ಸಂಖ್ಯೆ ನಿಮ್ಮ ಬಳಿಯಿದೆಯೆ?"
"ಇಲ್ಲ, ಅನಗತ್ಯಾಂತ ಅಳಿಸಿ ಹಾಕಿದೆ"
"ಸರಿ, ನಾಳೆ ಬೆಳಿಗ್ಗೆ ನಾನು ಕೋರ್ಟ್‍ಗೆ ಹೋಗೋ ಮೊದಲು ಬನ್ನಿ. ನಿಮಗೆ ಯಾರ ಮೇಲೆ ಅನುಮಾನವಿದೆ ಅವರ ವಿರುದ್ಧ ಕೇಸ್ ಹಾಕೋಣ"
ಕೈಚೀಲ ತಡಕಾಡಿದ ಹೆಣ್ಣು ಐದು ನೂರರ ಒಂದು ನೋಟನ್ನು ತೆಗೆದು ಗೋಪಾಲಸ್ವಾಮಿಯ ಮುಂದೆ ಹಿಡಿಯಿತು.
"ಪರ್ವಾಗಿಲ್ಲ, ಮತ್ತೆ ಕೊಡಿ" ನಿರಾಕರೆಣೆಯಿದ್ದರೂ ನೋಟನ್ನು ತೆಗೆದುಕೊಂಡ ಲಾಯರ್ ಆ ಹೆಣ್ಣನ್ನು ಬೀಳ್ಕೊಟ್ಟು ಸೀಟಿನ ಹಿಂದಕ್ಕೊರಗಿ ಕುಳಿತ. ಕೈಯಲ್ಲಿದ್ದ ನೋಟನ್ನು ದೀಪದ ಬೆಳಕಿಗೆ ಹಿಡಿದು ನೋಡಿದ. ನೋಟಿನ ಮೇಲೆ ಇಂಕ್‍ನಿಂದ ಬರೆದ ಅಕ್ಷರಗಳು ಕಾಣಿಸಿದವು.
‘ಪ್ಲೀಸ್ ಕಾಲ್’ ಜೊತೆಗೆ ಹತ್ತು ಅಂಕಿಗಳ ಒಂದು ಸಂಖ್ಯೆ!
ಗೋಪಾಲಾಸ್ವಾಮಿಯ ಮುಖದಲ್ಲಿ ಗೆಲುವಿನ ನಗುವಿತ್ತು. ಆ ಸಂಖ್ಯೆಯನ್ನು ಡಯಲಿಸಿದ. ಅತ್ತಲಿಂದ ‘ಹಲೋ’ ಅನ್ನುವ ಹೆಣ್ಣು ದನಿ ಕೇಳಿಸಿತು.
"ಹಲೋ, ಮಿಸೆಸ್ ರಾಜು ಮಾತಾಡ್ತಾ ಇದ್ದೀನಿ"
"ಎಸ್, ಶಾಂತಿರಾಜು?" ಅನುಮಾನದ ಪ್ರಶ್ನೆಯ ದನಿಯಲ್ಲಿ ನಿರಾಶೆಯೂ ಇತ್ತು.
"ಕ್ಷಮಿಸಿ, ನಾನು ಅನಘಾರಾಜು"
ಉತ್ತರ ಕೇಳಿ ತಟ್ಟನೆ ರಿಸೀವರ್ ಇಟ್ಟು ತಲೆಗೆ ಕೈ ಹಚ್ಚಿದ ಲಾಯರ್!

***

ಕೋರೆ ಕಲ್ಲಿನ ಬಂಡೆಗಳ ಮೇಲೆ ಹತ್ತಿ ಇಳಿದ ವಕೀಲ ಗೋಪಾಲಸ್ವಾಮಿಯ ಹಳೇಯ ಅಂಬಾಸಿಡರ್ ಕಾರು ದೂರಕ್ಕೆ ನೆಗೆದಂತೆ ಹಾರಿ ಒಂದು ಕಡೆಗೆ ತಟಸ್ಥವಾಯಿತು. ಕಾರಿನ ಗಾಜುಗಳವರೆಗೂ ಮುಖ ದೂಡಿ ಉದ್ಗರಿಸಿದ ಲಾಯರ್.
"ಇನ್ನು ಮುಂದಕ್ಕೆ ದಾರಿ ಕಾಣಿಸ್ತಿಲ್ಲಾ. ಇದು ಕಾರು ಓಡಾಡುವ ಮಾಮೂಲಿ ರಸ್ತೆ ಅಲ್ಲ" ಪಕ್ಕದಲ್ಲಿ ಕುಳಿತಿದ್ದ ಹೆಣ್ಣಿನತ್ತ ಅಸಹಾಯಕ ನೋಟ ಬೀರಿದ.
"ಇಲ್ಲಿಂದ ಬಂಡೆ ಇಳಿದ್ರೆ ನಾನು ಹೇಳಿರೋ ಮನೆ ಸಿಗುತ್ತೆ" ಕಾರಿನಿಂದ ಇಳಿದು ಇಳಿಜಾರಿನತ್ತ ಕೈ ತೋರಿಸಿದ ಶಾಂತಿರಾಜು ಗೋಪಾಲಸ್ವಾಮಿಯೂ ಇಳಿಯುವಂತೆ ಮಾಡಿದಳು. ಅವಳ ತೋರು ಬೆರಳುಗಳು ನಿಂತತ್ತ ದೃಷ್ಟಿ ಹಾಯಿಸಿದ. ಹಂಚು ಮಾಡಿನ ಒಂಟಿ ಮನೆ!
"ಅದು ಕೊಲೆಗಾರನ ಮನೆ ಅಂತೀರಾ?"
ವಕೀಲನ ಮಾತಿಗೆ ಹುಬ್ಬುಗಳನ್ನು ಕೂಡಿಸಿದ ಹೆಣ್ಣು ಕೈಯನ್ನು ಹಿಂದಕ್ಕೆ ಸರಿಸಿತು.
"ಹೌದು!" ಸ್ಪಷ್ಟವಾಗಿತ್ತು ಉತ್ತರ.
ಆಶ್ಚರ್ಯವಿತ್ತು ವಕೀಲನ ಮುಖದಲ್ಲಿ. ಶಾಂತಿರಾಜು ತಪ್ಪಿತಸ್ಥೆಯಂತೆ ನಾಲಗೆ ಕಚ್ಚಿಕೊಂಡು ನುಡಿದಳು.
"ಆ ವ್ಯಕ್ತೀನ ಇಲ್ಲಿ ಒಂದೆರಡು ಬಾರಿ ನೋಡಿದ್ದೆ"
ವಕೀಲ ಹೆಣ್ಣಿನತ್ತ ನೋಟ ಹರಿಸಿದ. ಅಸ್ಪಷ್ಟ ಚಿತ್ರಣವೊಂದು ಅವಳ ಮುಖದಲ್ಲಿ ಮೂಡಿ ಮರೆಯಾಗುತ್ತಿತ್ತು.
"ನಿಮಗೆ ಇಂತ ನಿರ್ಜನ ಪ್ರದೇಶದಲ್ಲಿ ಓಡಾಡೋ ಪ್ರಮೇಯವೇನಿತ್ತು?"
"ನಾನೂ ರಾಜೂ ಬೇಸರವಾದಾಗ ಈ ಕಲ್ಲಿನ ಕೋರೆಯ ಬಳಿ ಕುಳಿತು ಸಮಯ ಕಳೆಯುವುದಿತ್ತು"
ವಕೀಲನ ತಲೆಯಲ್ಲಿ ಬಿಡಿಸಲಾಗದ ಒಂದು ಸಮಸ್ಯೆಗೆ ನಿಖರವಾದ ಉತ್ತರವೊಂದು ಹೊಳೆದಂತಾಯಿತು.
"ಕ್ಷಮಿಸಿ, ನೀವು ನೆನ್ನೆ ದಿನ ಬರ್ತೀನಿಂತ ಹೇಳಿದೋರು ನಾಪತ್ತೆಯಾದ್ರಿ. ನಿಮಗೆ ಕೊಲೆಗಾರನ ಮೇಲೆ ಸಂಶಯವಿದ್ರೆ ಪೊಲೀಸ್ ಅಧಿಕಾರಿಯನ್ನು ಕಂಡು ಎಫ್.ಐ.ಆರ್‍‍ಗೆ ಜೀವ ಬರಿಸಬಹುದು" ವಿಷಯ ಬದಲಿಸಿದ ಗೋಪಾಲಾಸ್ವಾಮಿ.
ಶಾಂತಿರಾಜುವಿನ ಕಣ್ಣುಗಳಲ್ಲಿ ಹೊಳಪು ಮೂಡಿತು.
"ಕೊಲೆಗಾರನಿಗೆ ಶಿಕ್ಷೆ ನೀಡೋದಿಕ್ಕೆ ಸಾಧ್ಯಾನಾ?"
"ಅಧಿಕಾರಿ ಒಳ್ಳೆಯವನಾಗಿದ್ರೆ ಮತ್ತೊಮ್ಮೆ ತನಿಖೆ ಆರಂಭಿಸಬಹುದು. ಇಲ್ಲವಾದ್ರೆ..."
"ಇಲ್ಲಾಂದ್ರೆ ಏನು ಮಾಡೋಕಾಗುತ್ತೆ?"
"ತನಿಖೆ ಸರಿಯಾಗಿಲ್ಲಾಂತ ಹೇಳಿ, ನ್ಯಾಯಾಲಯದ ಅನುಮತಿ ಪಡೆದು ಮರು ತನಿಖೆ ನಡೆಸಿ ಕೊಲೆಗಾರನನ್ನು ಹಿಡಿಯಬಹುದು"
"ತನಿಖೆ ಮುಗಿದಿದೆ ಲಾಯರ್‍ ಸಾಹೇಬ್ರೆ. ನೀವು ಕೊಲೆಗಾರನ ಹೇಗಾದರೂ ಮಾಡಿ ಶಿಕ್ಷೆಗೆ ಗುರಿ ಪಡಿಸ್ಬೇಕು"
ಗೋಪಾಲಸ್ವಾಮಿ ಆಲೋಚನೆಗೊಳಗಾದವನು ಕಾರಿನತ್ತ ನಡೆದು ಹೇಳಿದ.
"ನೀವು ಮೊನ್ನೆ ದಿನ ಮೈಲಾರಿ ಅನ್ನೋ ವ್ಯಕ್ತಿಯ ಹೆಸರು ಹೇಳಿದ್ರಿ? ಅವನು ಯಾರು?"
ಶಾಂತಿಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.
"ಮೈಲಾರಿ ನನ್ನ ಗಂಡನನ್ನು ತಪ್ಪು ದಾರ್‍ಇಗೆ ಎಳೆಯುತ್ತಿದ್ದವನು. ನಿಯತ್ತಿನಿಂದ ದುಡಿಯುತ್ತಿದ್ದ ರಾಜುವನ್ನು ಕಂಡ್ರೆ ಅವನಿಗೆ ಹೊಟ್ಟೆಯುರಿ. ಯಾವಾಗಲೂ ರಾಜುನನ್ನು ಕೆಣಕ್ತಾ ಇದ್ದ. ಅದಕ್ಕೆ ಸರಿಯಾಗಿ ಆ ಹುಡುಗಿ ಕೂಡ ಎಲ್ಲೆ ಮೀರಿ ವರ್ತಿಸೋದಿಕ್ಕೆ ಪ್ರಯತ್ನಿಸುತ್ತಿದ್ಲು"
ವಕೀಲ ಬಾಗಿಲು ತೆರೆದು ಸೀಟಿನಲ್ಲಿದ್ದ ಬಟ್ಟೆಯನ್ನು ತೆಗೆದು ಮುಖ ಒರೆಸಿಕೊಂಡ. ಅಲ್ಲಿಯೇ ಪಕ್ಕದಲ್ಲಿಟ್ಟಿದ್ದ ನೀರಿನ ಬಾಟಲಿ ತೆಗೆದು ಕುಡಿದ. ಶಾಂತಿ ಕಾರಿನ ಇನ್ನೊಂದು ಪಾರ್ಶ್ವಕ್ಕೆ ನಡೆದಾಗ ನೀರಿನ ಬಾಟಲಿ ಇಟ್ಟು, ಕಾರಿನ ಎದುರಿನ ಚಕ್ರಕ್ಕೆ ತಡೆಯಾಗಿಟ್ಟಿದ್ದ ಕಲ್ಲನ್ನು ತೆಗೆದು ಕಾರಿನೊಳಗೆ ಕುಳಿತ. ಶಾಂತಿ ಮುಂದಿನ ಸೀಟನ್ನು ಆಕ್ರಮಿಸಿದಳು.
ಕಾರನ್ನು ಚಾಲನೆಗೆ ತರುವ ಮೊದಲು ವಕೀಲ ಪ್ರಶ್ನೆಯೊಂದನ್ನು ಎಸೆದ.
"ಶಾಂತಿ, ನೇರವಾಗಿ ಹೇಳ್ಬಿಡಿ. ರಾಜು ನಿಮಗೇನಾಬೇಕು?" ಶಾಂತಿ ಆಶ್ಚರ್ಯದಿಂದ ವಕೀಲನ ಮುಖವನ್ನು ನೋಡಿದಳು. ಅನಗತ್ಯ ಪ್ರಶ್ನೆ ಅನಿಸಿತು.
"ರಾಜು ನನ್ನ ಮದುವೆಯಾದೋನು. ನನ್ನ ಗಂಡಾಂತ ಈ ಮೊದ್ಲೇ ತಿಳಿಸಿದ್ದೆ. ಲಾಯರಪ್ನೋರೆ ನೀವು ಈ ರೀತಿ ಪ್ರಶ್ನೆ ಕೇಳೋದ್ರಲ್ಲಿ ಅರ್ಥವಿಲ್ಲ" ಅವಳ ಮಾತಿನಲ್ಲಿ ಅಸಹನೆ ತುಂಬಿತ್ತು.
ವಕೀಲನ ತುಟಿಗಳಲ್ಲಿ ಕಿರು ನಗೆಯೊಂದು ಸುಳಿಯಿತು.
"ಕ್ಷಮಿಸಿ, ಶಾಂತಿಯವರೆ... ಒಂದು ಅನುಮಾನದ ಎಳೆಯಿಂದಾಗಿ ಕೇಳಿದ ಪ್ರಶ್ನೆಯನ್ನೇ ಕೇಳಬೇಕಾಗಿದೆ. ದಯವಿಟ್ಟು ತಾಳ್ಮೆ ಕಳ್ಕೊಳ್ಬೇಡಿ" ಕಾರು ಸದ್ದು ಹೊರಟಿಸಿತು. ಸ್ವಲ್ಪ ಮುಂದಕ್ಕೆ ಹೊರಳಿ ಸವೆದ ಟಯರುಗಳ ಗಿರಗಿರ ಸದ್ದಿನೊಂದಿಗೆ ಹಿಮ್ಮುಖವಾಗಿ ಚಲಿಸಿ ಬಂಡೆಯ ಮೇಲೆ ಹರಿಯಿತು.
"ಅದೇನು ಕೇಳ್ತೀರೋ ನಂಗೊಂದೂ ಅರ್ಥವಾಗ್ತಾ ಇಲ್ಲ. ನನ್ನ ರಾಜುವನ್ನು ಕೊಂದವರನ್ನು ಸುಮ್ಮನೆ ಬಿಡಬಾರದು. ಅದಕ್ಕಾಗಿ ನಾನು ನಾಳೆ ನಿಮ್ಮಲ್ಲಿಗೆ ಬರ್‍ತೀನಿ. ಕೊಲೆಗಾರನ ವಿರುದ್ಧ ದಾವೆ ಹೂಡಬೇಕು"
"ಸರಿ, ಅದಕ್ಕಿಂತ ಮೊದಲು ನೀವು ಫೈಲ್ ಮಾಡಿರೋ ಎಫ್.ಐ.ಆರ್ ಸಂಖ್ಯೆ ನನಗೆ ಬೇಕಿದೆ. ಪೊಲೀಸ್ ಅಧಿಕಾರಿಯನ್ನು ಕಂಡು ಮಾತನಾಡಿ ಕಡತವನ್ನು ಹೊರ ತೆಗೆಯೋದಿದೆ"
ಕಾರಿನ ವೇಗದ ಚಲನೆಯನ್ನು ನಿರ್ಲಕ್ಷಿಸಿದ ಹೆಣ್ಣು ಪರ್ಸ್‍ನಿಂದ ರಶೀದಿಯನ್ನು ತೆಗೆದು ವಕೀಲನತ್ತ ಚಾಚಿತು.
ಅದನ್ನು ಪಡೆದುಕೊಂಡು ಒಮ್ಮೆ ಕಣ್ಣಾಡಿಸಿದ ಗೋಪಾಲಸ್ವಾಮಿ.
ಈ ಎಫ್.ಐ.ಆರ್. ಸಂಖ್ಯೆಗೂ ಅನಘಾರಾಜುವಿನ ಎಫ್.ಐ.ಆರ್.ಗೂ ತಾಳೆಯಾದರೆ ಕೊಲೆಗಾರ ಸುಲಭದಲ್ಲಿ ಸಿಕ್ಕಿಬೀಳುತ್ತಾನೆ. ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಂಡ ಗೋಪಾಲಸ್ವಾಮಿ ಶಾಂತಿಯನ್ನು ಮನೆಯ ಹತ್ತಿರ ಇಳಿಸಿ ಕಚೇರಿಯ ಕಡೆಗೆ ಕಾರನ್ನು ಓಡಿಸಿದ.

***

ಪೊಲೀಸ್ ಅಧಿಕಾರಿ ಸುಬ್ರಹ್ಮಣಿ, ಗೋಪಾಲಸ್ವಾಮಿಯನ್ನು ಆದರದಿಂದಲೇ ಒಳಗೆ ಕರೆದ. ದಫೇದಾರ್‍‍ನನ್ನು ಕರೆದು ಎರಡು ಲೋಟ ಚಹಾ ತರುವಂತೆ ಹೇಳಿದ.
"ಲಾಯರ್ ಸಾಹೇಬ್ರು ಬಹಳ ಅಪರೂಪವಾಗ್ಬಿಟ್ರಿ"
ಅಧಿಕಾರಿಯ ಮಾತಿಗೆ ಗೋಪಾಲಸ್ವಾಮಿ ನಕ್ಕ.
"ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದ ಮೇಲೆ ನನ್ನಂತಹ ಲಾಯರ್‍‍ಗಳಿಗೆ ಪೊಲೀಸ್ ಠಾಣೆ ಹತ್ತುವಂತ ಪ್ರಮೆಯವೇನಿರುತ್ತೆ ಸಾರ್..." ರಾಗವೆಳೆದ ವಕೀಲ ಗಹಗಹಿಸಿ ನಕ್ಕ.
"ಅಂದ್ರೆ... ಈಗ ನಾವು ಕರ್ತವ್ಯ ವಿಮುಖರಾಗಿದ್ದೇವೆ. ಯಾರೋ ನಿಮ್ಮ ಕ್ಲೈಂಟ್ ಹಾಗಂತ ಕಂಪ್ಲೆಂಟ್ ಕೊಟ್ಟಿದ್ದಾರೆ. ಅದಕ್ಕಾಗಿ ‘ಸಾರ್, ನಿಮ್ಮ ತನಿಖೆ ಸರಿಯಾಗಿಲ್ಲ. ಇನ್ನೊಮ್ಮೆ ಆ ಕಡತವನ್ನು ಪರಿಶೀಲಿಸಿ’ ಅನ್ನೋದಕ್ಕೆ ನೀವು ಬಂದಿರೋದು?" ನಗುತ್ತಲೇ ಅಧಿಕಾರಿ ಕೇಳಿದಾಗ ವಕೀಲನ ಮುಖದಲ್ಲಿ ಬದಲಾವಣೆ ಕಾಣಿಸಿತು.
"ನಿಮ್ಮ ಊಹೆ ಸರಿಯಾಗಿದೆ. ನಾನು ಬಂದಿರೋದು ರಾಜು ಕೊಲೆ ಕೇಸನ್ನು ವಿಚಾರಿಸುವುದಕ್ಕೆ. ಕೊಲೆಯಾದ ರಾಜುವಿನ ಹೆಂಡತಿ ಶಾಂತಿಗೆ ಯಾರ ಮೇಲೋ ಅನುಮಾನವಿದೆ. ಆ ಕಡತವನ್ನು ಮತ್ತೊಮ್ಮೆ ಹೊರ ತೆಗೆಯುವುದಕ್ಕೆ ಒತ್ತಾಯಿಸುತ್ತಿದ್ದಾಳೆ. ನನ್ನ ಕ್ಲೈಂಟ್‍ಗೆ ನ್ಯಾಯ ಸಿಗಬೇಕು ಮಿಸ್ಟರ್ ಸುಬ್ರಹ್ಮಣಿ"
ಅಧಿಕಾರಿಯ ಮುಖ ಸಂಪೂರ್ಣವಾಗಿ ಬದಲಾಯಿತು. ಮುಖದಲ್ಲಿ ಗಂಭೀರತೆ ತುಂಬಿಕೊಂಡಿತು.
"ಲಾಯರ್ ಸಾರ್, ನಿಮಗೆ ಬೇಕಾಗಿರೋದು ರಾಜುವಿನ ಕಡತ ತಾನೆ?"
ಬಿಸಿಬಿಸಿ ಚಹಾದ ಲೋಟವನ್ನು ಇಬ್ಬರ ಮುಂದೆಯೂ ಹಿಡಿದ ದಫೇದಾರ್‍.
"ನೋಡಿ ವೆಂಕಟ್ರಮಣ, ಮಧುಸೂದನ್‍ಗೆ ರಾಜುವಿನ ಫೈಲ್ ತರೋದಿಕ್ಕೆ ಹೇಳಿ"
ಎರಡೇ ನಿಮಿಷದಲ್ಲಿ ಸಹಾಯಕ ಅಧಿಕಾರಿ ಮಧುಸೂದನ್ ಫೈಲ್ ತಂದು ಮೇಜಿನ ಮೇಲಿರಿಸಿ ಗೋಪಾಲಸ್ವಾಮಿಯ ಕಡೆಗೆ ನೋಡಿದ.
ಫೈಲನ್ನು ಎತ್ತಿಕೊಂಡ ಅಧಿಕಾರಿ.
"ರೀ, ಮಧುಸೂದನ್... ಈ ಫೈಲ್ ಅನಘಾರಾಜುಂದು. ಇವರಿಗೆ ಬೇಕಾಗಿರೋದು ಶಾಂತಿರಾಜುವಿನ ಫೈಲ್" ಅಂದಾಗ ವಕೀಲ ಕುರ್ಚಿಯಿಂದ ಎದ್ದು ನಿಂತ.
"ಅಂದ್ರೆ, ಇಬ್ಬರು ರಾಜುಗಳ ಕೊಲೆಯಾಗಿದೆಯೇ!!?" ಉದ್ಗರಿಸಿ ಫೈಲ್‍ನತ್ತ ನೋಡಿದ.
"ಹೌದು, ಸಾರ್. ನಮ್ಗೂ ನಿಮ್ಮ ಹಾಗೇ ಆಶ್ಚರ್ಯವಾಗಿತ್ತು. ಒಂದೇ ದಿವಸ ಒಂದೇ ಹೆಸರಿನ ಇಬ್ಬರ ಕೊಲೆ. ಅದೂ ಒಂದೇ ಠಾಣಾ ವ್ಯಾಪ್ತಿಯಲ್ಲಿ"
"ಸಾರ್, ನಾನು ಇಬ್ಬರ ಫೈಲ್‍ಗಳನ್ನು ಪರಿಶೀಲಿಸಬಹುದೆ?"
ಕ್ಷಣ ಹೊತ್ತು ಆಲೋಚಿಸಿದ ಅಧಿಕಾರಿ ಕಡತವನ್ನು ಗೋಪಾಲಸ್ವಾಮಿಯ ಮುಂದೆ ಹಿಡಿದ. ಸಹಾಯಕ ಅಧಿಕಾರಿ ಇನ್ನೊಂದು ಕಡತವನ್ನು ತಂದು ಮೇಜಿನ ಮೇಲೆ ಇಟ್ಟ. ಬಳಿಕ ಎರಡು ಫೈಲುಗಳನ್ನು ಪರಿಶೀಲಿಸಿದ ವಕೀಲ ಒಂದು ನಿರ್ಧಾರಕ್ಕೆ ಬಂದ.

***

ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಒಂದೇ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದಾರೆ. ಅದೂ ಇಬ್ಬರ ಕೊಲೆಯೂ ಒಂದೆ ಮಾದರಿಯಾಗಿದೆ. ಸೋಫಾದಲ್ಲಿ ಕುಳಿತಂತೆ! ಗಾಯಗಳಿಲ್ಲದೆ!! ರಕ್ತದ ಕಲೆಗಳಿಲ್ಲದೆ!!! ಇಬ್ಬರದ್ದೂ ಕೊಲೆಯೇ ಆಗಿದ್ದರೆ ಆ ಇಬ್ಬರನ್ನು ಕೊಂದವನು ಒಬ್ಬನೇ!!!!...
ಲೇಖನಿ ಮತ್ತು ಬಿಳಿಯ ಹಾಳೆಯನ್ನು ತೆಗೆದುಕೊಂಡ ವಕೀಲ ಮುಖ್ಯವಾದ ವಿಷಯಗಳನ್ನು ಗುರುತಿಸಿಕೊಂಡ. ತನ್ನ ಬಳಿಯಿದ್ದ ಅನಘಾಳ ಸಂಖ್ಯೆಗೆ ಕರೆ ಮಾಡಿದ.
"ಹೌದು, ಸುಳಿವು ದೊರಕಿದೆ. ಇವತ್ತೇ ಬರಬೇಕು" ವಕೀಲನ ಮಾತಿನಲ್ಲಿ ಆತುರವಿರುವುದನ್ನು ಗಮನಿಸಿದ ಅನಘಾ ನಿಂತ ಮೆಟ್ಟಿಗೆ ಆಫೀಸಿಗೆ ಬಂದಾಗ ವಕೀಲ ಸ್ವಾಗತಿಸಿದ.
"ಮಿಸೆಸ್ ರಾಜುರವರೇ, ನನ್ಗೆ ನೀವು ಕೊಟ್ಟಿರೋ ಐದು ನೂರರ ನೋಟು ಎಲ್ಲಿಂದ ಸಂಪಾದಿಸಿದಿರಿ?" ಏದುಸಿರು ಬಿಡುತ್ತಿದ್ದವಳನ್ನು ಕೇಳಿದ.
ಕೊಲೆಯ ವಿಚಾರ ಮಾಡುತ್ತಾನೆಂದು ತಿಳಿದವಳಿಗೆ ತೀವ್ರ ನಿರಾಶೆಯಾಯಿತು.
"ಅದು ನಕಲಿ ನೋಟಲ್ಲಾಂತ ಭಾವಿಸ್ತೀನಿ"
"ಅದು ಅಸಲಿ ನೋಟೇ. ಆದ್ರೆ ಅದು ನಿಮ್ಮ ಕೈಗೆ ಹೇಗೆ ಬಂತು?" ಮಾರ್ಮಿಕವಾಗಿತ್ತು ಪ್ರಶ್ನೆ.
"ರಾಜು ಸತ್ತ ದಿವಸ ಅವನ ಅಂಗಿಯ ಜೇಬಿನಲ್ಲಿತ್ತು"
"ಪೊಲೀಸರು ತನಿಖೆ ನಡೆಸುವ ಮೊದಲೇ ಅದನ್ನು ತೆಗೆದುಕೊಂಡ್ರಾ?"
ಅನಘಾಳ ಮುಖದಲ್ಲಿ ಭೀತಿ ಕಾಣಿಸಿತು. ಕಣ್ಣುಗಳನ್ನು ಅಗಲಕ್ಕೆ ತೆರೆದು ತಲೆಗೆ ಕೈ ಹಚ್ಚಿಕೊಂಡು ಜ್ಞಾಪಿಸಿಕೊಂಡಳು.
"ಆ ನೋಟು ಜೇಬಿನಿಂದ ಹೊರಗೆ ಬೀಳುವಂತೆ ಇತ್ತು. ಅದಕ್ಕೆ ಅದನ್ನು ತೆಗೆದುಕೊಂಡೆ"
"ನೀವು ಅದನ್ನು ಗಮನಿಸಿದ್ರಾ?"
"ಯಾವುದನ್ನು?" ಮುಗ್ಧತೆಯಿತ್ತು ಪ್ರಶ್ನೆಯಲ್ಲಿ.
"ಆ ಐದು ನೂರರ ನೋಟನ್ನು"
ಇಲ್ಲವೆನ್ನುವಂತೆ ತಲೆಯಲುಗಿಸಿದವಳು ಅನುಮಾನದಿಂದ ವಕೀಲನ ಮುಖವನ್ನೇ ನೋಡುತ್ತಿದ್ದಳು.
"ಆ ನೋಟಿನ ಮೇಲೆ ನಿಮ್ಮ ಮೊಬೈಲ್ ಫೋನ್‍ನ ಸಂಖ್ಯೆ ಇದೆ" ಅದ್ಭುತವೆನ್ನುವಂತೆ ಹುಬ್ಬೇರಿಸಿದಳು.
"ನನ್ನ ಬಳಿ ಇರೋದು ರಾಜುನ ಮೊಬೈಲ್. ನಾನು ಆ ನೋಟನ್ನು ಅಷ್ಟಾಗಿ ಗಮನಿಸ್ಲಿಲ್ಲ"
"ಸರಿ, ಮುಚ್ಚಿ ಹೋಗಿರೋ ತನಿಖೆಯನ್ನು ಜೀವಗೊಳುಸುವುದಕ್ಕೆ ಕೋರ್ಟ್‍ಗೆ ಮನವಿ ಸಲ್ಲಿಸಿದ್ದೀನಿ. ಇನ್ನೇನು ಎರಡು ಮೂರು ದಿನಗಳೊಳಗೆ ಅನುಮತಿ ದೊರಕುತ್ತೆ. ಕೂಡಲೇ ಮರು ತನಿಖೆ ನಡೆಸೋಣ. ಈಗ ನೀವು ನನ್ನ ಜೊತೆಗೆ ಬನ್ನಿ. ಈ ಕೇಸ್‍ಗೆ ಸಂಬಂಧ ಪಟ್ಟ ಇನ್ನೊಬ್ಬ ವ್ಯಕ್ತಿಯನ್ನು ಭೇಟಿ ಮಾಡಿಸುವುದಿದೆ"
ಫೋನ್ ತಿರುವಿ ಯಾರೊಂದಿಗೊ ಮಾತನಾಡಿದ ವಕೀಲ. ಇಬ್ಬರೂ ಕೆಳಗೆ ಬರುವಾಗ ಅವನ ಅಂಬಾಸಿಡರ್ ಕಾರು ಹಲ್ಲು ಕಿರಿಯುತ್ತಾ ನಿಂತಿತ್ತು.

***

ಹಜಾರಕ್ಕೆ ಹಾಸಿದ ಕೆಂಪು ಜಮಖಾನೆಯ ಮೇಲೆ ಮೃದು ಹೆಜ್ಜೆಗಳನ್ನು ಹಾಕುತ್ತಾ ಒಳಗೆ ಬಂದವರನ್ನು ಕಂಡು ಶಾಂತಿಗೆ ಆಶ್ಚರ್ಯವಾಯಿತು. ವಕೀಲನ ಜೊತೆಗೆ ಹರೆಯದ ಹೆಣ್ಣನ್ನು ನಿರೀಕ್ಷಿಸಿರಲಿಲ್ಲ.
"ಬನ್ನಿ ಲಾಯರ್ ಸಾಹೇಬ್ರೆ, ಕುಳಿತಿರಿ. ಈಕೆ...?" ಅನಘಾಳತ್ತ ಅಪರಿಚಿತ ನೋಟ ಹರಿಸಿದಾಗ ವಕೀಲ ಚುಟುಕಾಗಿ ಪರಿಚಯಿಸಿದ.
ಅನಘಾ ಗೋಪಾಲಸ್ವಾಮಿಯ ಪಕ್ಕದಲ್ಲಿಯೇ ಕುಳಿತಳು.
ಎರಡು ಲೋಟಗಳಲ್ಲಿ ಕಿತ್ತಳೆಯ ಹಣ್ಣಿನ ರಸವನ್ನು ತಂದು ಇಬ್ಬರತ್ತಲೂ ಹಿಡಿದಳು. ಏಕಾಏಕಿ ಛಾವಣಿಯಲ್ಲಿ ತಿರುಗುತ್ತಿದ್ದ ಫ್ಯಾನ್ ನಿಂತಿತು! ಶಾಂತಿಯ ಕಣ್ಣುಗಳಲ್ಲಿ ನಿರಾಶೆ ಸುಳಿಯಿತು.
"ಕರೆಂಟ್ ಹೋಯ್ತು. ಕುಳಿತಿರಿ ಬಂದೆ..." ಆತುರಾತುರವಾಗಿ ಒಳಗೆ ನಡೆದವಳು ಧಾವಿಸುತ್ತಲೇ ಹೊರಗೆ ಬಂದು ಅನಘಾಳ ಮೇಲೆರಗಿದಳು!
ಅನಿರೀಕ್ಷಿತ ದಾಳಿಯಿಂದ ತತ್ತರಿಸಿದ ಅನಘಾ ವಕೀಲನ ಕಡೆಗೆ ವಾಲಿದಳು. ವಕೀಲ ಮಿಂಚಿನ ವೇಗದಲ್ಲಿ ಶಾಂತಿಯನ್ನು ಹಿಂದಕ್ಕೆ ತಳ್ಳಿದ! ಶಾಂತಿಯ ಕೈಯಲ್ಲಿ ಮಿರಿಮಿರಿ ಮಿಂಚುವ ಚೂರಿ ಇತ್ತು!
"ಶಾಂತಿ, ಹಾಗೆ ಇರು. ಮೇಲಕ್ಕೆದ್ರೆ ಶೂಟ್ ಮಾಡ್ತೀನಿ" ಲಾಯರ್‍‍ನ ಕೈಯಲ್ಲಿ ರಿವಾಲ್ವರ್ ಇತ್ತು.
ಶಾಂತಿ ಅಸಹಾಯಕತೆಯಿಂದ ನೆಲದ ಮೇಲೆಯೇ ಇದ್ದಳು.
"ನಿನ್ನ ಪ್ಲಾನೆಲ್ಲಾ ನಂಗೆ ಗೊತ್ತಾಗಿಯೇ ಅನಘಾನ ಇಲ್ಲಿಗೆ ಕರ್ಕೊಂಡು ಬಂದೆ. ಅನಘಾಳ ಗಂಡ ರಾಜುಗೆ ‘ಮೈಲಾರಿ’ ಅನ್ನೊ ಹೆಸರು ಕೊಟ್ಟು ಅವನನ್ನು ನಿನ್ನ ಗಂಡನನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾನೆಂತ ಸಾಯಿಸ್ದೆ"
ವಕೀಲನ ಮಾತು ಕೇಳಿ ಅನಘಾ ಆಶ್ಚರ್ಯ ತೋರಿಸಿದಳು.
"ನಿನ್ನ ಗಂಡ ರಾಜು, ಸಿದ್ದ ಉಡುಪುಗಳನ್ನು ತಯಾರಿಸೋ ಉದ್ಯಮ ಮಾಡ್ತಾ ಇದ್ದ. ಅಲ್ಲಿರೋ ಬಡ ಹುಡುಗಿಯರ ಮೇಲೆ ಸಣ್ಣತನ ತೋರಿಸ್ತಿದ್ದ. ಅಲ್ಲಿ ಕೆಲಸ ಮಾಡುತ್ತಿದ್ದ ಅನಘಾಳ ಗಂಡ ರಾಜು ಬುದ್ಧಿವಾದ ಹೇಳಿದ್ರೆ ಅವನನ್ನೇ ಕೆಟ್ಟವನನ್ನಾಗಿ ಚಿತ್ರಿಸಿದ. ಪದೇ ಪದೇ ಅನಘಾನ ಮನೆಗೆ ಹೋಗ್ತಿದ್ದ. ನಿನ್ನ ಗಂಡನ ಮೇಲೆ ಅನುಮಾನ ಬಂದು ಒಂದು ದಿವಸ ಹಿಂಬಾಲಿಸ್ದೆ ನೀನು. ಆ ದಿನ ದುರಾದೃಷ್ಟವಶಾತ್ ಅನಘಾ ಒಬ್ಳೇ ಮನೆಯಲ್ಲಿದ್ಲು. ನೀನು ಅಪಾರ್ಥ ಮಾಡ್ಕೊಂಡೆ"
"ಇಲ್ಲ, ರಾಜೂನ ಅಲ್ಲಿಂದ ಕೆಲಸ ಬಿಡಿಸ್ದೆ ನಾನು. ಆದ್ರೂ ಮಾಲೀಕ ಆಗಾಗ್ಗೆ ನಮ್ಮ ಮನೆಗೆ ಬಂದು ಬೆದರಿಕೆ ಹಾಕ್ತಿದ್ದ. ನನ್ನ ಕೆಟ್ಟದಾಗಿ ನೋಡ್ತಿದ್ದ" ಅನಘಾ ಅಲ್ಲಿಯವರೆಗೂ ಮುಚ್ಚಿಟ್ಟಿದ್ದ ವಿಷಯವನ್ನು ತೆರೆದಳು.
"ಆ ದಿನ ಕೊಲೆಗಾರನನ್ನ ಹುಡುಕಿಕೊಂಡು ನಿಮ್ಮ ಮನೆ ಹತ್ತಿರ ಬಂದಿದ್ದೆವು. ಆನಂತರ ನಾನೇ ಖುದ್ದಾಗಿ ಶಾಂತಿಯವರನ್ನು ಹುಡುಕಿಕೊಂಡು ಬಂದೆ. ಆ ಸಮಯದಲ್ಲಿ ಶಾಂತಿಯವರು ಮನೆಯಲ್ಲಿರಲಿಲ್ಲ. ಆದರೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ ಬಂದೆ. ಅವರ ಫ್ಯಾಕ್ಟರಿಯ ವಿದ್ಯುತ್ ಕೆಲಸಗಾರ ಮುರಾರಿ ಕೆಲಸ ಮಾಡ್ತಿದ್ದ. ಅವನಿಂದ ಒಂದು ಮುಖ್ಯ ಕುರುಹು ದೊರಕಿತು"
ಶಾಂತಿರಾಜು ಮೆಲ್ಲಗೆ ಎದ್ದು ಕುಳಿತಾಗ ವಕೀಲ ಎಚ್ಚರಿಸಿದ.
"ಈಗೆ ನಿನ್ನ ಗಂಡನ್ನ ತನ್ನ ಮನೆಗೆ ಆಹ್ವಾನಿಸಿದ್ಲು. ಆದರೆ ನಿನ್ನ ಗಂಡ ಇಲ್ಲಿಗೆ ಬರೋ ಮೊದ್ಲೇ ಅವಳ ಗಂಡನೇ ಮನೆಗೆ ಬಂದ. ಟೀವಿ ಹಾಕಿಕೊಂಡು ಸೋಫಾದಲ್ಲಿ ಕುಳಿತವನು ಹಾಗೇ ಕೊಲೆಯಾಗ್ಬಿಟ್ಟ. ಆ ಸಮಯದಲ್ಲಿ ಶಾಂತಿ ಮನೆಯಲ್ಲಿರಲಿಲ್ಲ. ಅವಳಿಗೆ ಫ್ಯಾಕ್ಟರಿಯಿಂದ ತುರ್ತು ಕರೆ ಬಂದಿತ್ತು"
"ಅರ್ಥವಾಗ್ಲಿಲ್ಲ" ಅನಘಾಳ ಮುಖದಲ್ಲಿ ಗೊಂದಲವಿತ್ತು.
"ಅಂದ್ರೆ, ನಾವು ಕೂತಿರೋ ಸೋಫಾಕ್ಕೊಂದು ವಿಶೇಷತೆಯಿದೆ"
ಅನಘಾಳ ದೃಷ್ಟಿ ಸೋಫಾದತ್ತ ಸರಿಯಿತು. ಶಾಂತಿ ತಲೆ ತಗ್ಗಿಸಿ ಕುಳಿತಿದ್ದಳು.
"ನಿಮಗೆ ಅದನ್ನ ಸ್ಪಷ್ಟ ಪಡಿಸ್ತೇನೆ" ಕೈಯಲ್ಲಿದ್ದ ಫ್ಯೂಸ್‍ನ ಕಟೌಟನ್ನು ಕೈಯಲ್ಲಿ ಹಿಡಿದು ತೋರಿಸಿದ ವಕೀಲ ಹೊರಗೆ ನಿಂತಿದ್ದ ಮುರಾರ್‍ಇಯನ್ನು ಕರೆದ.
"ಇವನೇ ಇಲೆಕ್ಟ್ರೀಶನ್ ಮುರಾರ್‍ಇ. ಈ ಕಬ್ಬಿಣದ ಅಂಚಿರೋ ಸೋಫಾಕ್ಕೆ ವಿದ್ಯುತ್ ಹರಿಯೋ ಹಾಗೇ ಮಾಡಿರೋನು. ಛಾವಣಿಯ ಫ್ಯಾನ್‍ಗೂ ಈ ಸೋಫಾಕ್ಕೆ ಹರಿಯೋ ವಿದ್ಯುತ್‍ಗೂ ಒಂದೇ ಸ್ವಿಚ್"
ಅನಘಾ ಗೋಡೆಯತ್ತ ದೃಷ್ಟಿ ಹಾಯಿಸಿದಾಗ ವಕೀಲ ಮುಂದುವರಿಸಿದ.
"ಆ ದಿನ ಗುಂಡಿ ಹಾಕಿ ನಿನ್ನ ಗಂಡನನ್ನ ಕರೆದು ಸೋಫಾದಲ್ಲಿ ಕುಳ್ಳಿರಿಸೋ ಪ್ಲಾನ್ ಮಾಡಿದ್ಲು ಶಾಂತಿ. ಆದ್ರೆ ಆ ಸೋಫಾದಲ್ಲಿ ಅವಳ ಗಂಡನೇ ಕುಳಿತ. ಅದರಲ್ಲಿ ಹರಿಯೋ ವಿದ್ಯುತ್‍ನ ಆಘಾತಕ್ಕೆ ಸಿಲುಕಿ ಸತ್ತ. ಈ ವಿಷಯ ಪೊಲೀಸ್ನೋರಿಗೂ ಗೊತ್ತಾಗ್ಲಿಲ್ಲ. ಶವಪರೀಕ್ಷೆ ವರದಿಯಲ್ಲಿ ವಿದ್ಯುತ್ ಆಘಾತದಿಂದ ಸಾವು ಸಂಭವಿಸಿದೆ ಅಂದ್ರೂ ಯಾರಿಗೂ ನಂಬೋಕೆ ಆಗ್ಲಿಲ್ಲ. ಪೊಲೀಸರಿಗೆ ಹಣ ಕೊಟ್ಟು ಕೇಸನ್ನು ಅಲ್ಲಿಯೇ ಮುಚ್ಚಿ ಹಾಕಿದ್ಲು ಶಾಂತಿ. ಆದ್ರೆ ಮುರಾರ್‍ಇ ಈಗ ಅವಳನ್ನೇ ಬ್ಲಾಕ್ ಮೇಲ್ ಮಾಡ್ತಿದ್ದಾನೆ. ಅದಕ್ಕೆ ಮುಚ್ಚಿ ಹೋಗಿರೋ ಕಡತವನ್ನು ತೆರೆಯೋದಿಕ್ಕೆ ನನ್ನ ಸಹಾಯ ಯಾಚಿಸಿ ಬಂದಿದ್ಲು. ಇದೆಲ್ಲಾ ಗೊತ್ತಾಗಿದ್ದು ಇಬ್ಬರ ಫೈಲ್‍ಗಳನ್ನು ಪರಿಶೀಲಿಸಿದ ನಂತರ"
"ಅಂದ್ರೆ, ನನ್ನ ಗಂಡ ಕೂಡಾ ಸತ್ತಿರೋದು...!"
"ಇಲ್ಲ ಅನಘಾರವರೆ, ನಿಮ್ಮ ಗಂಡ ಸತ್ತಿರೋದು ವಿದ್ಯುದಾಘಾತದಿಂದಲ್ಲ. ಅವರನ್ನು ಉಸಿರುಗಟ್ಟಿಸಿ ಸಾಯಿಸಿರೋದು. ಸೋಫಾದಲ್ಲಿ ಕುಳಿತಿದ್ದಂತೆ ರಾಜುನ ಪ್ರಾಣ ಹೋಗಿಲ್ಲ. ಅವನನ್ನು ಸಾಯಿಸಿ ಸೋಫಾದಲ್ಲಿ ಕುಳ್ಳಿರಿಸಿದ್ದು. ಸರಿಯಾಗಿ ಗಮನಿಸಿದ್ರೆ ನಿಮ್ಗೆ ಗೊತ್ತಾಗ್ತಿತ್ತು. ರಾಜೂನ ದೇಹ ವಾಲಿದಂತೆ ಸೋಫಾದಲ್ಲಿತ್ತು. ಕಾಲುಗಳು ಉದ್ದಕ್ಕೆ ಚಾಚಿದಂತೆ ಇತ್ತು. ಸತ್ತ ಮೇಲೆ ಸೋಫಾದಲ್ಲಿ ಅವನನ್ನು ಕುಳ್ಳಿರಿಸೋದಿಕ್ಕೆ ಶಾಂತಿ ತುಂಬಾ ಹೆಣಗಾಡಿದ್ಲು. ಈ ವಿಷಯನೂ ಫೈಲ್‍ನಲ್ಲಿ ಸ್ಪಷ್ಟವಾಗಿತ್ತು"
"ನೀವು ಹೇಳಿದ್ರಲ್ಲಾ... ಈ ಎರಡು ಕೊಲೆಯೂ ಒಂದೇ ಮಾದರಿಯಾಗಿದೇಂತ. ಪೋಲಿಸ್ ಕೂಡ ಯಾಕೆ ಈ ನಿರ್ಧಾರಕ್ಕೆ ಬಂದ್ರು?" ಅನಘಾರಾಜುವಿನ ಪ್ರಶ್ನೆಯಲ್ಲಿ ಸಂಶಯವಿತ್ತು.
"ಅಂದ್ರೆ, ಎರಡು ಕೊಲೆನೂ ಮೇಲ್ನೋಟಕ್ಕೆ ಒಂದೇ ಮಾದರಿಯಾಗಿತ್ತು. ಅದಕ್ಕಾಗಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿತ್ತು ಈ ಕೊಲೆ ಕೇಸ್‍ಗಳು"
ಮುರಾರ್‍ಇ ಕೂಡ ತಪ್ಪಿತಸ್ಥನಂತೆ ನಿಂತಿದ್ದ.
"ಮುರಾರ್‍ಇ, ನೀನೂ ಕೂಡ ಈ ಕೊಲೆ ಕೇಸ್‍ನಲ್ಲಿ ಶಾಮೀಲಾಗಿದ್ದೀಂತನೇ ಆಗುತ್ತೆ. ಅನಘಾರವರೇ ಆ ದಿನ ನೀವು ಕೊಟ್ಟ ನೋಟ್‍ನಲ್ಲಿ ಫೋನ್ ನಂಬರಿತ್ತಲ್ಲ... ಅದು ಶಾಂತಿಯವರೆ ಬರೆದಿರೋದು. ನಿಮಗೆ ಆಶ್ಚರ್ಯವಾಗುತ್ತಲ್ಲಾ? ಅದು ಹೇಗಾಯ್ತೂಂದ್ರೆ... ಆ ದಿನ ನಿಮ್ಮ ಗಂಡನಿಗೆ ಮನೆಗೆ ಫೋನ್ ಮಾಡಿ ಅವರ ಮೊಬೈಲ್ ನಂಬರು ಕೇಳಿದ್ರು. ಆ ಸಮಯದಲ್ಲಿ ತನ್ನ ಕೈಯಲ್ಲಿದ್ದ ನೋಟ್ ಮೇಲೆ ನಿಮ್ಮ ಗಂಡನ ಮೊಬೈಲ್ ನಂಬರ್ ಬರೆದು, ಸುಮಾರು ಸಂಜೆ ಆರು ಗಂಟೆ ಹೊತ್ತಿಗೆ ನೀವು ಹೊರಗೆ ಹೋದ ಸಮಯದಲ್ಲಿ ನಿಮ್ಮ ಮನೆಗೆ ಬಂದ ಶಾಂತಿ ನಿಮ್ಮ ಗಂಡನ್ನ ವಿಚಾರಿಸಿದ್ಲು. ನನ್ನ ಕೈಯಲ್ಲಿ ದುಡ್ಡಿಲ್ಲ ಅದಕ್ಕೆ ಬರ್‍ಲಿಲ್ಲಾಂತ ನಿಮ್ಮ ಗಂಡ ಸುಳ್ಳು ಸಬೂಬು ನೀಡ್ದಾಗ ತನ್ನ ಬಳಿಯಿದ್ದ ಆ ನೋಟನ್ನೇ ನಿಮ್ಮ ಗಂಡನ ಜೇಬಿಗೆ ಸೇರಿಸಿದೋಳು ಇವಳೆ. ಆಗ ನಿಮ್ಮ ಗಂಡ ರಾಜು ತಾನು ಮನೆಗ ಬರೋದಿಕ್ಕೆ ಸಾಧ್ಯವಿಲ್ಲಾಂತ ಕಡಾಖಂಡಿತವಾಗಿ ಹೇಳಿದ ಮೇಲೆ ಬೇರೆ ದಾರಿ ಕಾಣದೆ ಅವರನ್ನು ಸಾಯಿಸಿದ್ಲು"
ಅನಘಾ ಮುಖದ ಮೇಲೆ ಮೂಡಿದ ಬೆವರ ಹನಿಗಳನ್ನು ಒರೆಸಿಕೊಂಡು ಶಾಂತಿಯತ್ತ ಭಯದ ನೋಟ ಬೀರಿದಳು.
ಆ ಹೊತ್ತಿಗೆ ಹೊರಗೆ ಪೊಲೀಸ್ ಜೀಪು ಬಂದು ನಿಂತ ಸದ್ದಾಯಿತು.

Read more!

Wednesday, November 11, 2009

ಸಿಹಿ ಸಮಯ




ಕವಿ ಡಾ. ಚೆನ್ನವೀರ ಕಣವಿ ಅವರಿಂದ ‘ವೇಣುಗಾನ’ ಕಾದಂಬರಿಯ ಬಿಡುಗಡೆ. ಉಪಸ್ಥಿತಿ ಫ್ರೊ. ಎಸ್. ಪ್ರಭಾಕರ್, ಕಾರ್ಯದರ್ಶಿಗಳು, ಎಸ್.ಡಿ.ಎಂ. ಟ್ರಸ್ಟ್, ಉಜಿರೆ ಮತ್ತು ಡಾ. ಸಂಪತ್ ಕುಮಾರ್, ಮುಖ್ಯಸ್ಥ, ಕನ್ನಡ ವಿಭಾಗ, ಎಸ್.ಡಿ.ಏಂ.ಸಿ. ಉಜಿರೆ.
ಪುಸ್ತಕ ಬಿಡುಗಡೆಯಲ್ಲಿ ಕವಿ ಚೆನ್ನವೀರ ಕಣವಿ ಅವರೊಂದಿಗೆ
ಕಣವಿ ಅವರ ಜೊತೆಗೆ ಒಂದು ಕ್ಷಣ
Read more!

Monday, October 12, 2009


Read more!

Tuesday, August 4, 2009

ಮೂರನೇ ದಾರಿ (ಪತ್ತೇದಾರಿ ಕಥೆ)


ಬೆನ್ನಿನ ಮೇಲೆ ಹರಡಿದ್ದ ಕೂದಲುಗಳನ್ನು ಒಟ್ಟು ಸೇರಿಸಿ ಬಿಗಿದು, ಕೆನ್ನೆಯ ಮೇಲುರುಳಲು ಸಜ್ಜಾದ ಕಣ್ಣೀರನ್ನು ಸೆರಗಿನ ತುದಿಯಿಂದ ಒರೆಸಿಕೊಂಡಳು ಚೆಲುವೆ ಬಾಧುರಿ.
"ದಯವಿಟ್ಟು ತಪ್ಪು ತಿಳ್ಕೊಳ್ಬೇಡಿ. ನಿಮ್ಮನ್ನು ಪ್ರಶ್ನಿಸೋದು ಅನಿವಾರ್ಯವಾಗಿತ್ತು"
ಎದುರಿಗಿದ್ದವನ ಮಾತಿಗೆ ಸಮಾಧಾನವೆನಿಸಿದರೂ, ಬಾಯಿ ತೆರೆಯುವುದು ಸರಿಯೆನಿಸಿತು.
"ನನ್ನ, ನಿವೇದನ್‍ನ ಸಂಬಂಧ ಏನೂಂತ ನಿಮಗೆ ಚೆನ್ನಾಗಿ ಗೊತ್ತು. ಮತ್ತೆ ಮತ್ತೆ ಅವನ ಬಗ್ಗೆ ಕೇಳಿ ನನ್ನನ್ನು ಹಿಂಸಿಸ್ತಾ ಇದ್ದೀರಿ"
"ಕ್ಷಮಿಸಿ ಬಾಧುರಿಯಾವರೆ, ನಿವೇದನ್ ನಿಮ್ಮ ಭಾವಿ ಪತಿಯಾಗಿರಬಹುದು. ಆತ ನನ್ನ ಸ್ನೇಹಿತ ಅನ್ನೋದನ್ನು ಮರಿಬೇಡಿ. ನನ್ನ ಸ್ನೇಹಿತನಿಗೋಸ್ಕರ ನಾನು ಕೇಳೋದು ಇಷ್ಟೆ, ಅವನು ಕಾಣೆಯಾದ ದಿನ ನಿಮ್ಮ ಬಳಿ ಏನಾದ್ರೂ ಹೇಳಿದ್ನೆ?"
ದೀರ್ಘ ಉಸಿರೆಳೆದುಕೊಂಡವಳ ಕಣ್ಣುಗಳಲ್ಲಿ ಧೈರ್ಯದ ನೋಟ ಕಂಡಾಗ ಮೂಗು ಅರಳಿ ನಿಟ್ಟುಸಿರು ಹೊರ ಬಂತು.
ಎದುರಿಗಿದ್ದ ನಿವೇದನ್‍ನ ಸ್ನೇಹಿತ ಅಂದುಕೊಂಡ ವ್ಯಕ್ತಿ, ಅವಳ ನೋಟವನ್ನು ಎದುರಿಸಲಾರದೆ ಮೇಜಿನ ಮೇಲೆ ದೃಷ್ಟಿ ಹರಡಿದ. ಮೇಜಿನ ಮೇಲಿದ್ದ ಯಾವುದೋ ಕಾಗದಗಳು ಗಾಳಿಗೆ ಅಲ್ಲಾಡುತ್ತಿದ್ದವು.
"ಇಲ್ಲ, ನಿವೇದನ್ ನಂಗೇನೂ ಹೇಳ್ಲಿಲ್ಲ. ಆದ್ರೆ ಯಾಕೋ ಮಂಕಾಗಿದ್ದ"
"ಅವನಿಗೇನಾದ್ರೂ ಆ ದಿವಸ ಮುಖ್ಯವಾದ ಕೆಲಸವಿತ್ತೆ?"
"ಇಲ್ಲ"
"ಯಾರಿಂದಲಾದ್ರೂ ಕರೆ ಬಂದಿತ್ತೆ?"
ಸ್ನೇಹಿತನ ಮಾತುಗಳಿಗೆ ತಟ್ಟನೆ ಮುಖ ಹೊರಳಿಸಿದವಳು, ಅವನನ್ನು ಅಳೆಯುವಂತೆ ದೃಷ್ಟಿಸಿದಳು. ಅವಳ ಮುಖದಲ್ಲಿ ಮೂಡಿದ್ದು ಸಂಶಯ!
ಮೆಲ್ಲನೆ ಮಾತು ಹೊರಳಿಸಿದಳು.
"ಅವನಿಗೆ... ಒಂದು ... ಕರೆ ಬಂದಿತ್ತು"
ಸ್ನೇಹಿತನ ಕಿವಿಗಳು ನಿಮಿರಿ ನಿಂತವು.
"ಯಾವಾಗ? ಯಾರ ಕರೇಂತ ಹೇಳ್ಬಹುದೆ?" ಆತುರ ಪಡಿಸಿದ.
"ಕರೆ ಬಂದಿರೋದು `ರಾಕ್ ಸೈಡ್' ಪಬ್ಬ್‍ನಿಂದ... ಅದೂ ಸರಿ ರಾತ್ರಿ ಹೊತ್ತು"
"ರಾಕ್ ಸೈಡ್!!??"
"ನಿಮಗೆ ಗೊತ್ತೆ?"
ಸ್ನೇಹಿತ ದೀರ್ಘ ಆಲೋಚನೆಯಲ್ಲಿ ಮುಳುಗುತ್ತಲೆ `ಇಲ್ಲ' ವೆನ್ನುವಂತೆ ತಲೆಯಾಡಿಸಿದ.
"ಕರೆ ಬಂದಿರೋ ಸಮಯ ಸುಮಾರು...?"
"ನಿಖರವಾಗಿ ಹೇಳಲಾರೆ. ಸುಮಾರು ಮಧ್ಯರಾತ್ರಿ ಹೊತ್ತಿಗೆ. ಕರೆ ಯಾರ್ದೂಂತ ಕೇಳ್ದೆ. ಏನೋ ಬೆದರಿದವನಂತೆ ಕಾಣಿಸ್ದ. ಅವನ ಮಾತಿನಲ್ಲಿ ತೊದಲಿಕೆಯಿತ್ತು"
"ಕರೆ ಮಾಡಿರೋದು ಯಾರೂಂತ ಹೇಳಿದ್ನೆ?"
"ಅದನ್ನೇ ಕೇಳಿದೆ. `ರಾಕ್ ಸೈಡ್'ನಿಂದ ಅಂದ. ರಾತ್ರಿ ಪಬ್ಬ್‍ನಲ್ಲಿ ಹಾಡೋದಿಕ್ಕೆ ಕರೆದಿದ್ದಾರಂತೆ. ಸಂಗೀತದ ಹುಚ್ಚು ಹಚ್ಚಿಸ್ಕೊಂಡಿರೋನು ಅವಕಾಶಕ್ಕಾಗಿ ಕಾಯ್ತ ಇದ್ದ. ನಾಳೆಯಿಂದ ಅಲ್ಲಿಗೆ ಹಾಡೋದಿಕ್ಕೆ ಹೋಗ್ತೀನಿಂದ. ಅವನ ಮಾತಿಗೆ ರೇಗಿದೆ. `ಆಗೋದಿಲ್ಲಾಂತ ಹೇಳ್ಬಿಡು. ಮದುವೆಗೆ ಮುಂಚೆ ಇದೆಲ್ಲಾ ಸರಿ. ಮದುವೆಯಾದ ನಂತರವೂ ಹಾಡೋದು ಮುಂದುವರಿದ್ರೆ ಕಷ್ಟ' ಅಂತ ದಬಾಯಿಸ್ದೆ. ನನ್ನ ಸಮಾಧಾನಕ್ಕೆ `ಸರಿ' ಅಂದ...."
ಸ್ನೇಹಿತನಿಗೆ ಮತ್ತೇನೋ ಸಂಶಯ ಕಾಡಿತು. ತಟ್ಟನೆ ಮಧ್ಯೆ ಬಾಯಿ ಹಾಕ್ದ.
"ಕರೆ ಮಾಡ್ದೋನು ತನ್ನ ಹೆಸರು ಹೇಳ್ಲಿಲ್ಲಾಂತ ಕಾಣ್ಸುತ್ತೆ?"
"ಕರೆ ಮಾಡಿರೋದು ಹುಡುಗ ಅಲ್ಲ... ಹುಡುಗಿ..."
"ಹುಡುಗಿ!?"
"ಹೌದು, ನಿಖರವಾಗಿ ಹೇಳಬಲ್ಲೆ. ಆದ್ರೆ ಆತ ನನ್ನನ್ನಲ್ಲದೆ ಬೇರಾವ ಹೆಣ್ಣಿನ ಬಗ್ಗೆ ಮಾತನಾಡಿದ್ದಿಲ್ಲ. ಅವನಿಗೆ ನನ್ನ ಮೇಲೆ ಎಷ್ಟೋಂದು ಪ್ರೀತಿ ಅಂದ್ರೆ... ಅದಕ್ಕೆ ಸಾಕ್ಷಿ..." ಮೇಜಿನ ಮೇಲೆ ಹರಡಿದ್ದ ಪತ್ರಗಳನ್ನು ತಂದು ತೋರಿಸಿದಳು ಚೆಲುವೆ ಬಾಧುರಿ.
ಎತ್ತರದ ನಿಲುವಿನ ಶ್ರೀಮಂತಿಕೆ ಛಾಪು ಹೊಂದಿರೋ ಬಾಧುರಿ, ನಿವೇದನ್‍ಗೆ ಎಲ್ಲಾ ವಿಧದಲ್ಲೂ ಸರಿಯಾದ ಜೋಡಿ! ಅವಳು ನೀಡಿದ ಪತ್ರಗಳನ್ನು ಪರಿಶೀಲಿಸುವಂತೆ ನೋಡಿದ.
"ನೀವು ನಿವೇದನ್‍ನ ಎಲ್ಲಾ ಆಸ್ತಿಗೂ ಬಾಧ್ಯಸ್ಥರು"
"ಹೌದು, ಆದ್ರೆ ನಿವೇದನ್ ಯಾಕೆ ಹೀಗೆ ಮಾಡ್ದಾಂತ ಮಾತ್ರ ತಿಳಿದಿಲ್ಲ. ತಾನಾಯಿತು ತನ್ನ ಕೆಲಸವಾಯ್ತೂಂತ ಇದ್ದ. ಅವನಿಗೆ ಹೆಣ್ಣಿನಿಂದ ಕರೆ ಬಂದಿದೆಯೆಂದರೆ ನಂಬೋಕೆ ಆಗ್ತಾ ಇಲ್ಲ"
"ನೀವು ಹೇಳ್ತಾ ಇರೋದು ವಿಚಿತ್ರವಾಗಿದೆ. ರಾತ್ರಿ ಒಂದು ಹುಡುಗಿಯಿಂದ ಕರೆ ಬಂದಿತ್ತೂಂತಿರಿ, ಬೆಳಗ್ಗೆ ನೋಡಿದ್ರೆ ಆತನೆ ಕಾಣೆಯಾಗಿದ್ದಾನೆ!"
ದು:ಖದ ಒಸರು ಮತ್ತೆ ಕಣ್ಣುಗಳಲ್ಲಿ ಕಾಣಿಸಿಕೊಂಡಿತು.
"ಸಮಾಧಾನ ತಂದ್ಕೊಳ್ಳಿ ಬಾಧುರಿಯವರೆ. ನಾನು ನಿವೇದನ್‍ನನ್ನು ಭೇಟಿಯಾಗದೆ ಮೂರ್ನಾಲ್ಕು ತಿಂಗಳುಗಳೇ ಕಳೆದುಹೋದ್ವು. ಕಾಲೇಜ್ ದಿನಗಳಲ್ಲಿ ನಾವು ಹುಟ್ಟು ಹಾಕಿರೋ `ಉದಯ ನಕ್ಷತ್ರ' ಹವ್ಯಾಸಿ ಸಂಗೀತ ಸಂಸ್ಥೆಯೀಗ ಛಿಧ್ರವಾಗೋಯ್ತು. ಆದ್ರೆ... ಆತ ಮಾತ್ರ ಸಂಗೀತದ ಹುಚ್ಚಿಗೆ ಅಂಟಿಕೊಂಡ್ಬಿಟ್ಟ. ಈಗ ನೋಡಿದ್ರೆ ಅವನು ಕಾಣೆಯಾಗಿದ್ದಾನೆ!"
"ಹೌದು, ಆತನ ಸಂಗೀತದ ಹುಚ್ಚು ನಮ್ಮ ಪ್ರೇಮಕ್ಕೆ ನಾಂದಿಯಾಗಿತ್ತು. ಅದೇ ಸಂಗೀತ ಈಗ ಮುಳುವಾಯಿತು"
"ಹಾಗನ್ಬೇಡಿ ಬಾಧುರಿಯವರೆ, ನಿವೇದನ್‍ಗೆ ಏನೂ ಆಗಿರಲಾರದು. ಹೇಗೂ ಪೊಲೀಸರಿಗೆ ತಿಳಿಸಿದ್ದೀರಿ. ನಾನೂ ನಿಮ್ಮ ಸಹಾಯಕ್ಕಿದ್ದೀನಿ. ಅಗತ್ಯ ಬಿದ್ದಾಗ ಮತ್ತೆ ನಿಮ್ಮನ್ನು ಬಂದು ಕಾಣ್ತೀನಿ" ಎದ್ದು ನಿಂತು ಕೈ ಮುಗಿದ. ಕೈ ಮುಗಿದವಳು ತಟ್ಟನೆ ಏನೋ ಕೇಳಲೆಂದು ಬಾಯ್ತೆರೆದಳು. ಅದನ್ನು ಅರ್ಥೈಸಿಕೊಂಡವನು, "ಕಲಾಕಿರಣ್" ಅಂದು ಅಲ್ಲಿಂದ ಹೊರಗೆ ಬಂದ.

***

ಕಲಾಕಿರಣ್ ಖಾಲಿಯಾಗಿದ್ದ ಮೇಜಿನ ಬಳಿ ಬಂದು ಕುಳಿತು ಮಂದ ಬೆಳಕಿಗೆ ಕಣ್ಣುಗಳನ್ನು ಹೊಂದಿಸಿಕೊಂಡ. ಕಮಟುವಾಸನೆ ಮೂಗಿಗೆ ಬಡಿಯಿತು. ಕಿವಿಗಡಚಿಕ್ಕುವ ಲೈವ್ ಬ್ಯಾಂಡ್‍ನ ಸದ್ದು, ನಶೆ ಏರಿಸಿಕೊಂಡವರಿಗೆ `ಕಿಕ್' ನೀಡಿದರೆ ಆತನಿಗೆ ತಲೆ ಚಿಟ್ಟು ಹೊಡೆಯುವಂತಾಯಿತು. ಬಣ್ಣ ಬಣ್ಣದ ನಿಯಾನ್ ದೀಪಗಳಡಿಯಲ್ಲಿ ರೆಕ್ಕೆ ಕಟ್ಟಿಕೊಂಡಂತೆ ಕೃತಕ ನಗು ತರಿಸಿಕೊಂಡು, ಸಂಗೀತ ನುಡಿಸುವವರನ್ನೊಮ್ಮೆ ನೋಡಿದ. ನಿವೇದನ್ ಇಂತಹ ಸ್ಥಳದಲ್ಲಿ ಹಾಡು ಹೇಳಲು ಒಪ್ಪಿಕೊಂಡಿದ್ದಾನೆಂದ್ರೆ ಆಶ್ಚರ್ಯ!
"ಸರ್" ಬ್ಯಾರರ್ ಬಂದು ನಿಂತ.
"ಒಂದು ಚಿಲ್ಡ್ ಕೆ.ಎಫ಼್ ಸ್ಟ್ರಾಂಗ್, ತಿನ್ನೋದಿಕ್ಕೆ ಚಿಪ್ಸ್, ಪೀನಟ್"
ಎರಡು ನಿಮಿಷಗಳಲ್ಲಿ ಬೇರರ್ ಎಲ್ಲವನ್ನೂ ತಂದು ಅವನ ಇದುರಿಗೆ ಜೋಡಿಸಿದ. ಬಿಯರ್ ಬಾಟಲನ್ನು ಎತ್ತಿಕೊಂಡು, ಗ್ಲಾಸನ್ನು ಓರೆಯಾಗಿ ಹಿಡಿದು ತುಂಬಿಸಿದ. ಮೆಲ್ಲನೆ ಗ್ಲಾಸನ್ನು ಎತ್ತಿಕೊಂಡು ತುಟಿಗಿರಿಸಿದ.
"ಕೋಯಿ ಫೂಲ್ ಔರ್ ಪಂಚಿಯೋಂಕೋ ನ..." ಗಾಯಕನ ಹಾಡು ಸಂಗೀತದ ಅಬ್ಬರದ ಮಧ್ಯೆ ನುಸುಳಿದಾಗ ಕಿವಿ ನಿಮಿರಿಸಿಕೊಂಡ ಸ್ನೇಹಿತ. ಬಾಧುರಿಯ ಮಾತುಗಳು ನೆನಪಾದವು.
`... ನಿವೇದನ್ ಎಂದೂ ಹುಡುಗಿಯರ ಬಗ್ಗೆಯಾಗಲಿ, ಹೆಣ್ಣಿನ ಬಗ್ಗೆಯಾಗಲಿ ಮಾತನಾಡಿದ್ದಿಲ್ಲ'
ದೂರದಲ್ಲಿ ನಿಂತಿದ್ದ ಬ್ಯಾರರ್‍ನನ್ನು ಕರೆದ.
"ಇನ್ನೊಂದು ಸ್ಟ್ರಾಂಗ್ ತರಲೇನು?"
"ಬೇಡ" ತಲೆಯಾಡಿಸಿದ. "ನಿನ್ನಿಂದ ಒಂದು ಸಹಾಯವಾಗ್ಬೇಕಿದೆ"
"ಏನ್ ಸಾರ್?"
"ನಿವೇದನ್ ಜೊತೆಗೆ ಮಾತಾಡ್ಬೇಕಿದೆ"
"ನಿವೇದನ್?!" ಬ್ಯಾರರ್ ಆಶ್ಚರ್ಯದಿಂದ ನಶೆ ಏರಿಸಿಕೊಂಡವನನ್ನು ನೋಡಿದ.
"ಅದೇ ಅಲ್ಲಿ ಹಾಡ್ತಾ ಇದ್ದಾನಲ್ಲ ಅವನು..." ಬೆರಳು ತೋರಿಸಿದ ಕಲಾಕಿರಣ್‍ನನ್ನು ವಿಚಿತ್ರವಾಗಿ ದಿಟ್ಟಿಸಿದ.
"ಒಂದು ಬಾಟಲ್ ಬಿಯರ್‍ನಿಂದ ನಶೆ ಏರೊಲ್ಲಾಂತ ತಿಳ್ಕೊಂಡಿದ್ದೀನಿ ಅಥವಾ ನೀವು ಮೊದಲ ಬಾರಿಗೆ ಕುಡಿತ್ತಿದ್ದೀರಿ?"
ಈಗ ಆಶ್ಚರ್ಯವಾಗುವ ಸರದಿ ಕಲಾಕಿರಣ್‍ನದ್ದು!
"ನೀನು ಏನು ಹೇಳ್ತಾ ಇದ್ದಿ?"
"ಅಲ್ಲಿ ಹಾಡ್ತಿರೋನು ನಿವೇದನ್ ಅಲ್ಲ. ಈ ಪಬ್ಬ್‍ನ ಮಾಲೀಕ ಪ್ರಭಾತ್ ರಂಜನ್"
"ಪಬ್ಬ್‍ನ ಮಾಲೀಕ!"
"ಹೌದು, ಇಲ್ಲಿ ಖಾಯಂ ಆಗಿ ಹಾಡ್ತಿದ್ದ ಪ್ರೇಮ್ ಕೈಕೊಟ್ಟ. ಲೈವ್ ಬ್ಯಾಂಡ್ ಇದ್ದಕ್ಕಿದ್ದಂತೆ ನಿಂತು ಹೋಯ್ತು. ಗಿರಾಕಿಗಳು ಕಡಿಮೆಯಾದ್ರು. ಅದಕ್ಕೆ ಬದಲಿ ಜನ ಸಿಗುವವರೆಗೂ ಮಾಲೀಕನೆ ಹಾಡ್ತಾನೆ" ಅಭಿಮಾನದಿಂದ ಹೇಳಿಕೊಂಡವನನ್ನು ದೃಷ್ಟಿಸಿದ.
"ತುಂಬಾ ಚೆನ್ನಾಗಿ ಹಾಡ್ತಾರೆ. ಅವರನ್ನು ಅಭಿನಂದಿಸ್ಬೇಕು"
"ಹಾಗಾದರೆ ನೀವು ಸ್ವಲ್ಪ ಸಮಯ ಕಾದಿರಿ. ಹನ್ನೊಂದು ಗಂಟೆಗೆಲ್ಲಾ ಸಂಗೀತ ನಿಲ್ಲುತ್ತೆ. ಮತ್ತೆ ಆಫೀಸ್‍ನಲ್ಲಿ ಭೇಟಿಯಾಗಬಹುದು"
"ಹನ್ನೊಂದು ಗಂಟೆಗೆ!" ಉದ್ಗಾರ ತೆಗೆದವನಿಗೆ ಕಾಯುವುದು ಅನಿವಾರ್ಯವಾಯ್ತು. ಬಿಲ್ಲು ಪಾವತಿಸಿ ಕೌಂಟರ್ ಬಳಿ ಬಂದು ನಿಂತಾಗ ಸಂಗೀತ ನಿಂತಿತ್ತು. ನೇರವಾಗಿ ಪ್ರಭಾತ್ ರಂಜನ್‍ನ ರೂಂಗೆ ನುಗ್ಗಿದ. ಅನಿರೀಕ್ಷಿತವಾಗಿ ಬಂದ ಆಗಂತುಕನನ್ನು ಕಂಡು ದಣಿದಿದ್ದ ಗಾಯಕ ಚಕಿತನಾಗಿ ದಿಟ್ಟಿಸಿದ!
"ತಾವು ಯಾರು?"
"ನಾನು ಕಿರಣ್, ನಿಮ್ಮನ್ನು ಅಭಿನಂದಿಸೋದಿಕ್ಕೆ ಬಂದೆ. ನೀವು ತುಂಬಾ ಚೆನ್ನಾಗಿ ಹಾಡ್ತೀರಿ" ತೊದಲುತ್ತಲೆ ಹೇಳಿದ ಸ್ನೇಹಿತ.
"ಏನು ಮಾಡೋದು? ನಾನು ಹಾಡ್ಲೇ ಬೇಕಾದ ಪರಿಸ್ಥಿತಿ. ಲೈವ್ ಬ್ಯಾಂಡ್ ಇಲ್ಲಾಂದ್ರೆ ಬಿಸಿನಸ್ ಇಲ್ಲ. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು"
ವಿದೇಶಿ ಮಾಲನ್ನು ಗ್ಲಾಸಿಗೆ ಬಗ್ಗಿಸುತ್ತಾ ಹೇಳಿ ಅವನು ಹೊರಡಬಹುದೆಂಬ ದೃಷ್ಟಿಯಿಂದ ನೋಡಿದ.
ಕಲಾಕಿರಣ್ ಎದುರಿನ ಚೇರನ್ನು ಎಳೆದು ಕುಳಿತ.
"ಕೋಯಿ ಫೂಲ್ ಔರ್ ಪಂಚಿಯೋಂಕೋ.... ಹಾಡು ತುಂಬಾ ಚೆನ್ನಾಗಿತ್ತು. ನಿವೇದನ್ ಯಾವಾಗ್ಲೂ ಅದನ್ನು ಹಾಡ್ತಾ ಇದ್ದ"
ನಿವೇದನ್‍ನ ಹೆಸರು ಕೇಳುತ್ತಲೇ ಮಾಲೀಕನ ಮುಖ ಕಪ್ಪಿಟ್ಟಿತು.
"ಅವನೊಬ್ಬ ಮೋಸಗಾರ. ಕೊಟ್ಟಿರೋ ಒಳ್ಳೆ ಅವಕಾಶನ ಕಳ್ಕೊಂಡ. ಅರ್ಜೆಂಟಾಗಿ ಬಂದು ಹಾಡು ಅಂದ್ರೆ... ಕೈ ಕೊಟ್ಟ. ಇನ್ನು ಆತ ಬಂದ್ರೂ ಹಾಡೋದಿಕ್ಕೆ ಬಿಡಲಾರೆ"
ಕಲಾಕಿರಣ್‍ಗೆ ಏನೋ ಹೊಳೆಯಿತು. ಸೂಕ್ಷ್ಮವಾಗಿ ಮಾಲೀಕನನ್ನು ಗಮನಿಸುತ್ತಿದ್ದ.
"ಆತನನ್ನು ಪರಿಚಯಿಸಿಕೊಟ್ಟವಳು ನನ್ನ ಹೆಂಡತಿ. ಒಳ್ಳೆಯ ಹಾಡುಗಾರ ಆತ ಅಂದಿದ್ದಕ್ಕೆ ಅವಕಾಶ ನೀಡ್ದೆ. ಬರ್ತೀನಿ ಅಂದೋನು ಪತ್ತೆ ಇಲ್ಲ"
ನಿವೇದನ್‍ಗೆ ಮಾಲೀಕನ ಹೆಂಡತಿ ಪರಿಚಯಸ್ಥೆ!
"ಅಂದ ಹಾಗೇ ನಿವೇದನ್ ನಿಮಗೆ ಹೇಗೆ ಪರಿಚಯ?"
"ನಮ್ಮೂರಲ್ಲಿ `ಉದಯ ನಕ್ಷತ್ರ' ಅನ್ನೋ ಸಂಗೀತ ಸಂಸ್ಥೆಯನ್ನ ಹುಟ್ಟು ಹಾಕಿ ಹಾಡ್ತಿದ್ದ. ಒಳ್ಳೆ ಗಾಯಕಾಂತ ಬಲ್ಲೆ"
"ಓಹೋ, ನೀವು ಅವನ ಅಭಿಮಾನಿ? ಅವನು ಇಲ್ಲಿ ಬಂದಿರ್ಬೋದೂಂತ ನೀವು ಹುಡುಕಿಕೊಂಡು ಬಂದಿರಬೇಕು" ಹುಬ್ಬುಗಳನ್ನು ಕುಗ್ಗಿಸಿ ಕೇಳಿದ ಮಾಲೀಕ.
"ಇಲ್ಲ, ನಾನು ಇಲ್ಲಿಯ ಖಾಯಂ ಗಿರಾಕಿ. ನೀವು ಹಾಡಿದ್ದನ್ನು ಕೇಳಿಸಿಕೊಂಡು ನಿಮ್ಮನ್ನು ಅಭಿನಂದಿಸೋದಿಕ್ಕೆ ಇಲ್ ಬಂದೆ. ನಾನಿನ್ನು ಬರ್ತೀನಿ, ನಿಮ್ಮ ಅಭ್ಯಂತರವಿಲ್ಲದಿದ್ದರೆ ಮತ್ತೆ ಭೇಟಿಯಾಗ್ತೀನಿ"
ಮಾಲೀಕನಿಗೇನೋ ಸಂಶಯ ಸುಳಿದಾಡಿತು. ಅಭಿಮಾನಿ ಎಂದುಕೊಂಡವನು ಹೊರಗೆ ಹೋಗುವುದನ್ನೇ ನೋಡುತ್ತಲೇ ಗ್ಲಾಸುಗಳನ್ನು ತುಟಿಗೆ ಸೇರಿಸಿದ.

***

ಮನೆಯ ಬಾಗಿಲನ್ನು ವಿಶಾಲವಾಗಿ ತೆರೆದು, ಕಣ್ಣುಗಳನ್ನು ಅಗಲಗೊಳಿಸಿ ಎದುರಿಗೆ ನಿಂತಿದ್ದ ಅಪರಿಚಿತನನ್ನು ನೋಡುತ್ತಿದ್ದಳು ಪ್ರಿಯಲ್.
"ನಮಸ್ಕಾರ, ನಾನು ಕಿರಣ್.... ಕಲಾಕಿರಣ್. ನಿವೇದನ್‍ನ ಸ್ನೇಹಿತ"
ಅವಳು ಬಾಗಿಲ ಬಳಿ ನಿಂತಿದ್ದಂತೆ ಸವರಿಕೊಂಡು ಒಳಗೆ ಬಂದು ಸುತ್ತಲೂ ದೃಷ್ಟಿಸಿದ.
ನಿವೇದನ್‍ನ ಹೆಸರು ಕೇಳುತ್ತಲೆ ಮುಖದ ಬಿಗು ಕಡಿಮೆಗೊಳಿಸಿ ಹಿಂದಕ್ಕೆ ಸರಿದು ಅವನನ್ನು ಕುಳಿತುಕೊಳ್ಳುವಂತೆ ಹೇಳಿದಳು. ಅವಳಿಗೆ ಉಪಕಾರವೆನ್ನುತ್ತಾ ಸೋಫಾದ ಮೇಲೆ ಕುಳಿತ.
"ನಿವೇದನ್ ನಿಮಗೆ ತುಂಬಾ ಪರಿಚಿತನಿರಬೇಕಲ್ವಾ?"
ಆಗಂತುಕನ ನೇರ ಪ್ರಶ್ನೆಗೆ ಪ್ರತಿಕ್ರಿಯಿಸಲಾರದೆ, ತಡೆದು ಹೌದೆನ್ನುವಂತೆ ಗೋಣು ಆಡಿಸಿದಳು.
"ನಿಮ್ಮ ಸ್ನೇಹ ಯಾವ ತರಹದ್ದೂಂತ ಹೇಳಬಹುದೆ?" ಕೇಳುತ್ತಿದ್ದವನ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ತಿಳಿಯದೆ ಮತ್ತೊಮ್ಮೆ ತಬ್ಬಿಬ್ಬಾದಳು. ಅಪರಿಚಿತ ವ್ಯಕ್ತಿಗೆ ನಿವೇದನ್ ಹಾಗೂ ತನ್ನ ಸ್ನೇಹದ ಬಗ್ಗೆ ತಿಳಿದುಕೊಳ್ಳವ ತವಕ!
"ನೀವು ಯಾಕೆ ಈ ರೀತಿ ಕೇಳ್ತಾ ಇದ್ದೀರಿ?" ಅನುಮಾನದಿಂದ ಮರು ಪ್ರಶ್ನೆ ಎಸೆದಳು.
"ನನ್ನ ಸ್ನೇಹಿತನಿಗೆ ಸಹಾಯ ಮಾಡೊದಿಕ್ಕೆ ನಿಮ್ಮಿಂದ ಕೆಲವು ಮಾಹಿತಿಗಳು ಬೇಕು. ನೀವು ಅವರನ್ನು ಕಾಲೇಜ್‍ನಿಂದ ಬಲ್ಲವರು"
"ನಿಮಗೆ ನನ್ನ ಬಗ್ಗೆ ಎಲ್ಲಾ ಗೊತ್ತಿದೆ!?"
"ಹೌದು, ಒಮ್ಮೆ ನೀವು ನಿವೇದನ್‍ನ ತುಂಬಾ ಪ್ರೀತಿಸ್ದೋರೂಂತ ಚೆನ್ನಾಗಿ ಬಲ್ಲೆ"
"ನಿಮ್ಮ ಮಾತಿನ ಅರ್ಥ?"
"ನಿವೇದನ್ ಕಾಣೆಯಾಗಿದ್ದಾನೆ. ಒಂದು ರೀತಿಯಲ್ಲಿ ಹೇಳುವುದಾದರೆ ಆತನನ್ನು ಯಾರೋ ಕೊಲೆ ಮಾಡಿದ್ದಾರೆಂತ ಅನಿಸ್ತಿದೆ"
"ಏನು? ನಿವೇದನ್‍ನ ಕೊಲೆ!? ನನಗೆ ನಂಬೋಕೆ ಆಗ್ತಾ ಇಲ್ಲ" ಪ್ರಿಯಲ್‍ಳ ಕಣ್ಣುಗಳು ತುಂಬಿ ಬಂದವು.
"ನಂಗೂ ನಂಬಿಕೆ ಬರ್ಲಿಲ್ಲ. ಪ್ರಿಯಲ್, ನಿಜ ಹೇಳಿ ನೀವು ಯಾವುದೋ ಮಹತ್ತರವಾದ ವಸ್ತುವನ್ನು ಅವನಿಂದ ನಿರೀಕ್ಷಿಸ್ತಾ ಇದ್ರೀಂತ ಬಲ್ಲೆ"
ಅವನ ಮಾತುಗಳಿಗೆ ತತ್ತರಿಸಿದಳು. ತಾನು ಯಾವುದನ್ನು ರಹಸ್ಯವಾಗಿ ಉಳಿಸಿಕೊಳ್ಳಬೇಕೆಂದು ಕೊಂಡಿದ್ದಳೋ ಅದು ಮೂರನೆಯವನಿಗೆ ತಿಳಿದಿದೆ! ಧೈರ್ಯ ತಂದುಕೊಂಡವರಂತೆ ಕಣ್ಣುಗಳು ಹೊಳೆದವು. ದೀರ್ಘ ಉಸಿರೊಂದು ಬಾಯಿಯಿಂದ ಹೊರಬಿತ್ತು.
"ನಿಮ್ಮ ಮಾತಿನಿಂದ ನಿವೇದನ್‍ಗೆ ಎಷ್ಟು ಆತ್ಮೀಯರೂಂತ ತಿಳಿಯಬಲ್ಲೆ. ದಯವಿಟ್ಟು ನನ್ನ ನಿವೇದನ್‍ನ ಸಂಬಂಧ ಉಳಿದವರಿಗೆ ತಿಳಿಯೋದು ಬೇಡ" ಮೆತ್ತನೆಯ ಮಾತಿನಲ್ಲಿ ಹೇಳಿ ಸಹಾಯ ಯಾಚಿಸುವವರಂತೆ ಹೇಳಿದಳು.
"ಪ್ರಿಯಲ್, ನೀವು ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ನನಗೆ ತಿಳಿಸಿದರೆ, ಪೊಲೀಸರಿಂದ ನಿಮಗೆ ರಕ್ಷಣೆ ನೀಡ ಬಲ್ಲೆ. ಈಗಾಗಲೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ"
ದು:ಖಿತಳ ಬೆನ್ನ ಹುರಿಯಲ್ಲಿ ಚಳಿ ಹರಿದಂತಾಯಿತು.
"ಹೇಳ್ತೀನಿ, ಎಲ್ಲಾ ನಿಮ್ಮ ಬಳಿ ಹೇಳ್ತೀನಿ. ನಾನು ಕಾಲೇಜ್ ದಿನಗಳಿಂದ ನಿವೇದನ್‍ನ ಪ್ರೀತಿಸ್ದವಳು"
"ಅದು ನನಗೆ ಚೆನ್ನಾಗಿ ಗೊತ್ತು. ಆದ್ರೆ ಪೊಲೀಸರಿಗೆ ಈ ಕೊಲೆಯ ಹಿಂದೆ ಒಬ್ಬಳು ಹುಡುಗಿ ಇದ್ದಾಳೆಂದು ತಿಳಿದಿದೆ"
"ಇಲ್ಲ, ನಿವೇದನ್‍ನ ಪ್ರೀತಿಸ್ದೋಳು ನಾನು, ಅವನನ್ನು ಕೊಲೆ ಮಾಡುವಷ್ಟು ನೀಚಳಲ್ಲ"
"ನಿಮ್ಮ ಬಗ್ಗೆ ನಾನು ಹೇಳ್ತಾ ಇಲ್ಲ. ನಿವೇದನ್ ಕಾಣೆಯಾಗುವ ದಿನ, ಸರಿ ರಾತ್ರಿಗೆ ಒಂದು ಕರೆ ಬಂದಿತ್ತು. ಅದೂ ಹೆಣ್ಣಿನ ಕರೆ"
"ಆ ಕರೆ ಮಾಡ್ದೋಳು ನಾನೇ"
"ನೀವು!? ಅವನನ್ನು ಕರೆ ಮಾಡಿ ಯಾವುದೋ ವಿಚಾರದಲ್ಲಿ ಹೆದರಿಸಿದ್ರಿ?"
"ಇಲ್ಲ"
"ಹಾಗಂತ ಬಾಧುರಿ ಪೊಲೀಸ್‍ರಿಗೂ ತಿಳಿಸಿದ್ಲು"
"ನಾನು ನಿವೇದನ್ ಬಗ್ಗೆ ಏನೆಲ್ಲಾ ಆಸೆ ಇಟ್ಕೊಂಡಿದ್ದೆ. ಆದ್ರೆ ಆತ ನನ್ನನ್ನ ನಿರಾಕರಿಸ್ದ, ನಿರಾಶಳಾದೆ. ನಂತರ ನಾನು ಮನೆಯವರ ಒತ್ತಾಯಕ್ಕೆ ಮದುವೆಯ ಮಾಲೆಗೆ ಕೊರಳೊಡ್ಡಿದೆ. ನನ್ನ ಗಂಡನ ಮನೆಯಲ್ಲಿ ಶ್ರೀಮಂತಿಕೆಯಿದ್ದರೂ ಪ್ರೀತಿಯ ಕೊರತೆಯಿತ್ತು. ಒಮ್ಮೆ ಅಚಾನಕ್ಕಾಗಿ ನಿವೇದನ್‍ನ ಭೇಟಿಯಾದೋಳು ಅವನ ಸ್ನೇಹ ಮುಂದುವರಿಸ್ದೆ. ಒಂದೇ ಒಂದು ಬಾರಿ ಅವನನ್ನು ನೋಡ್ಬೇಕೆಂಬ ಆಸೆ ಮುಂದಿಟ್ಟೆ. ತನಗೆ ಮದುವೆ ಫಿಕ್ಸ್ ಆಗಿದೆ. ಖಂಡಿತವಾಗಿಯೂ ಮದುವೆಗೆ ಕರೆಯೋದಕ್ಕೆ ಬರುತ್ತೇನೆಂದು ತಿಳಿಸ್ದ. ಹಾಗೆ ನನಗೆ ಕರೆಯೋಲೆ ಕೊಡಲು ಬಂದಿದ್ದ. ಅವನನ್ನು ಕಳ್ಕೊಂಡ ನಾನು ಹುಚ್ಚಳಾಗಿ ಬಿಟ್ಟೆ. ಅವನ ಪ್ರೀತಿ ಇನ್ನೊಬ್ಬಳಿಗೆ ಮೀಸಲಾಗುವುದು ನನಗೆ ಬೇಡ. ಆಗ ನನ್ನಲ್ಲಿ ಒಂದು ಆಸೆ ಅಂಕುರಿಸಿತು. ನಿವೇದನ್‍ನನ್ನು ದಿನಾ ಕರೆ ಮಾಡಿ ಭೇಟಿ ಮಾಡಲಾರಂಬಿಸ್ದೆ. ನನ್ನ ಹುಚ್ಚು ಆಸೆಯೊಂದನ್ನು ಅವನ ಮುಂದೆ ಬಿಚ್ಚಿಟ್ಟೆ. ಅದನ್ನು ಕೇಳಿ ಆತ ದಿಗ್ಬ್ರಾಂತನಾದ. ಈ ರಹಸ್ಯವನ್ನು ಯಾರ ಬಳಿಯೂ ಹೇಳೊದಿಲ್ಲವೆಂದು ಭಾಷೆ ನೀಡ್ದೆ. ಆದ್ರೂ ಆತ ಹೆದರಿದ. ಈ ವಿಷಯ ನನ್ನ ಗಂಡನಿಗೆ ಗೊತ್ತಾದ್ರೆ ರದ್ಧಾಂತವಾಗುವುದೆಂದು ಹೇಳಿದ. ನಾನು ನನ್ನ ಹಠ ಬಿಡಲಿಲ್ಲ. ಅದಕ್ಕೆ ಬೇಕಿದ್ದ ಅಗತ್ಯತೆಗಳನ್ನೆಲ್ಲಾ ನಾನೇ ಮಾಡ್ದೆ. ಆದ್ರೂ ಕೊನೆಗೆ ಆತ ನನ್ನ ನಿರಾಶೆಗೊಳಿಸ್ದ"
ಸೋತ ಹೆಣ್ಣು ಕತ್ತು ಬಾಗಿಸಿದಳು.
"ನೀವು ಇಷ್ಟು ಹೇಳಿದ ಮೇಲೂ ನಿಮ್ಮ ಆಸೆ ಏನೂಂತ ಮಾತ್ರ ಹೇಳ್ಲಿಲ್ಲ"
"ನನ್ನ ನೀವು ಹುಚ್ಚಿ ಅಂದ್ಕೊಂಡ್ರೂ ಪರವಾಗಿಲ್ಲ. ಆ ವಿಷಯಾನ ನಿಮ್ಮತ್ರ ಹೇಳ್ತೀನಿ" ಎತ್ತಿದ ತಲೆಯನ್ನು ಮತ್ತೆ ತಗ್ಗಿಸಿದಳು. ಹೇಳಲೋ ಬೇಡವೋ ಅನ್ನುವ ಸಂದಿಗ್ಧತೆಯಿತ್ತು ಅವಳ ಮುಖದಲ್ಲಿ. ತುಸು ಮೌನದ ನಂತರ ಮತ್ತೆ ಮುಂದುವರಿಸಿದಳು, "...ನಿವೇದನ್‍ನಿಂದ ನನ್ನೊಡಲಲ್ಲಿ ಹುಟ್ಟೋ ಮಗೂನ ಬಯಸ್ದೆ. ಅದಕ್ಕಾಗಿ ಒಂದು ವಾರ ನಾವಿಬ್ರೂ ಊಟಿಗೆ ಹೋಗಿ, ಅಲ್ಲಿ ನಿಲ್ಲೋದೂಂತ ಹೋಟೆಲ್‍ನಲ್ಲಿ ರೂಂ ಬುಕ್ ಮಾಡ್ದೆ. ಆತ ನನ್ನನ್ನು ನಿರಾಶೆಗೊಳಿಸ್ದ. ಅವನು ಮೋಸ ಮಾಡಿದ್ದಕ್ಕಾಗಿ ಹತಾಶಳಾಗಿ ಅವನಿಗೆ ರಾತ್ರಿ ಹೊತ್ತು ಕರೆ ಮಾಡ್ದೆ" ಅವಳ ಕಥೆ ಕೇಳಿದ ಮೇಲೆ ದೀರ್ಘ ನಿಟ್ಟುಸಿರೊಂದು ಹೊರ ಬಂತು.
"ಪ್ರಿಯಲ್, ನಿಮ್ಮಿಂದ ತುಂಬಾ ಉಪಕಾರವಾಯಿತು. ಎಲ್ಲವನ್ನೂ ನನ್ನ ಮುಂದೆ ಬಿಚ್ಚಿಟ್ಟಿದ್ದಕ್ಕೆ ಧನ್ಯವಾದಗಳು. ಇನ್ನೇನಾದರೂ ಮಾಹಿತಿ ಬೇಕಿದ್ದಲ್ಲಿ ನಿಮ್ಮನ್ನು ಮತ್ತೆ ಭೇಟಿಯಾಗ್ತೀನಿ"
"ದಯವಿಟ್ಟು ಈ ರಹಸ್ಯ ಮೂರನೆಯವರಿಗೆ ತಿಳಿಸ್ಬೇಡಿ"
"ಖಂಡಿತವಾಗಿಯೂ ಅದರ ಬಗ್ಗೆ ನಿಶ್ಚಿಂತರಾಗಿ"
ಅವಳಿಗೆ ವಂದಿಸಿ ಹೊರಗೆ ಬರುವಾಗ ಪ್ರಭಾತ್ ರಂಜನ್‍ನ ಕಾರು ಬಂದು ನಿಂತಿತ್ತು!
ಕಲಾಕಿರಣ್ ಸರಕ್ಕನೆ ಸರಿದು ಮರೆಯಲ್ಲಿ ನಿಂತ!
ಪ್ರಭಾತ್ ರಂಜನ್! ಪಬ್ಬ್‍ನ ಮಾಲೀಕ ಪ್ರಿಯಲ್‍ಳ ಗಂಡ!
ತಲೆ ತಿರುಗಿದಂತಾಗಿ ಪಕ್ಕದ ಮರವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡ.

***

ಪ್ರಭಾತ್ ರಂಜನ್‍ನನ್ನು ಕಂಡು ತಲ್ಲಣಗೊಂಡಿದ್ದ ಕಲಾಕಿರಣ್‍ಗೆ ತಾತ್ಕಾಲಿಕ ಉತ್ತರ ದೊರೆತಂತಾಗಿತ್ತು!
ಪ್ರಭಾತ್ ರಂಜನ್, ಪ್ರಿಯಲ್‍ಳ ಗಂಡ! ನಿವೇದನ್ ಬಗ್ಗೆ ಹುಚ್ಚು ಹಿಡಿಸಿಕೊಂಡಿರೋ ಪ್ರಿಯಲ್, ಸಂಗೀತದ ಗೀಳು ತುಂಬಿಕೊಂಡಿರುವವನಿಗೆ ತನ್ನ ಗಂಡನಿಗೆ ದಂಬಾಲು ಬಿದ್ದು ಅವಕಾಶ ನೀಡಿದ್ದಾಳೆ! ಆದರೆ ಪ್ರಿಯಲ್‍ಳ ಉದ್ದೇಶ ಅರಿತ ಪಬ್ಬ್‍ನ ಮಾಲೀಕ, ನಿವೇದನ್‍ನನ್ನು ತನ್ನ ಪಬ್ಬ್‍ನಲ್ಲಿ ಹಾಡಲು ಬರುವಂತೆ ಹೇಳಿ ಕೊಲೆ ಮಾಡಿರಬಹುದು!!
ಅಲೋಚನೆಯ ಗುಂಗಿನಲ್ಲಿದ್ದವನು ಬಾಧುರಿಯ ಮನೆಯ ಗೇಟನ್ನು ತೆರೆಯಲಿದ್ದಾಗ, ಯಾಂತ್ರಿಕವಾಗಿ ಅವನ ದೃಷ್ಟಿ ಪಕ್ಕದ ಮನೆಯ ಕಡೆಗೆ ಹೊರಳಿತು. ಜೋಡಿ ಕಣ್ಣುಗಳು ಅವನನ್ನೇ ನೋಡುತ್ತಿದ್ದವು!
ತಟ್ಟನೆ ಆ ಕಣ್ಣುಗಳು ಕಿಟಕಿಗೆ ಹಾಕಿದ ಪರದೆಯ ಹಿಂದೆ ಸರಿದವು!
ಬಾಧುರಿ!
ಬಾಧುರಿಗೆ ಪಕ್ಕದ ಮನೆಯಲ್ಲೇನು ಕೆಲಸ? ಮೊನ್ನೆ ಮೊನ್ನೆಯಷ್ಟೆ ನಿವೇದನ್ ಕಟ್ಟಿಸಿರೋ ಮನೆ. ಅದರ ಒಡತಿಗೆ ಇಷ್ಟು ಬೇಗನೆ ಪಕ್ಕದ ಮನೆಯವರ ಸ್ನೇಹ!? ತನ್ನನ್ನೇ ತಾನು ನಂಬದವನಂತೆ ಒಂದು ಕ್ಷಣ ನಿಂತು ಬಿಟ್ಟ. ಕೂಡಲೇ ಎಚ್ಚೆತ್ತವನ ಕಾಲುಗಳು ಪಕ್ಕದ ಮನೆಯತ್ತ ಹೊರಳಿದವು.
ಕರೆಗಂಟೆ ಅದುಮುತ್ತಲೆ ಬಾಗಿಲು ತೆರೆದುಕೊಂಡಿತು. ಬಾಗಿಲು ತೆರೆದ ಸುಂದರ ಯುವತಿಯ ಮುಖಕ್ಕೆ ರಕ್ತ ನುಗ್ಗಿದಂತೆ ಕೆಂಪಾಯಿತು. ಕಲಾಕಿರಣ್ ಅವಳನ್ನೇ ನೋಡುತಲಿದ್ದ.
ಅದೇ ಕಣ್ಣುಗಳು! ಕಿಟಕಿಯ ಪರದೆಯ ಹಿಂದೆ ಸರಿದ ಜೋಡಿ ಕಣ್ಣುಗಳು!
ಅದರೂ ಸಂಶಯದಿಂದ ಕೇಳಿದ "ಬಾಧುರಿ?"
ಚೇತರಿಸಿಕೊಂಡ ಸುಂದರ ಯುವತಿ ತಲೆ ಅಡ್ಡಲಾಗಿ ಆಡಿಸಿ ಇಲ್ಲವೆಂದಳು. ತಪ್ಪಿತಸ್ಥನಂತೆ ಮುಖ ಹೊರಳಿಸಿ ಧೈರ್ಯ ತಂದುಕೊಂಡ.
"ನಾನು ಒಳ ಬರಬಹುದೆ?"
"ಬನ್ನಿ," ಸರಿದು ನಿಂತಳು ಸುಂದರ ಯುವತಿ.
"ನಾನು ಪಕ್ಕದ ಮನೆಯವರ ಬಗ್ಗೆ ತಿಳ್ಕೊಳ್ಳೊದಿಕ್ಕೆ ಬಂದಿದ್ದೀನಿ" ಅವನ ಮಾತುಗಳಿಗೆ ಸ್ಪಂದಿಸಿದವಳ ಹಣೆಯಲ್ಲಿ ಬೆವರಿನ ಮುತ್ತುಗಳು ಮೂಡಿದವು.
"ಇಲ್ಲ, ಅವರ ಬಗ್ಗೆ ನಂಗೇನೂ ಗೊತ್ತಿಲ್ಲ" ತೀರ ಬೆದರಿದವಳಂತೆ ಹೇಳಿದಳು. ಮೈ ಸಣ್ಣಗೆ ನಡುಗುತ್ತಿತ್ತು. ಆಸರೆಗಾಗಿ ಸೋಫಾದ ಅಂಚನ್ನು ಗಟ್ಟಿಯಾಗಿ ಹಿಡಿದವಳು ದೊಪ್ಪನೆ ಕುಸಿದು ಕುಳಿತಳು.
"ದಯವಿಟ್ಟು ಹೊರಟು ಹೋಗಿ. ನಂಗೆ ಅವರ ಬಗ್ಗೆ ಏನೂ ಗೊತ್ತಿಲ್ಲ"
ಯುವಕ ಎದ್ದು ನಿಂತು ಕೈ ಜೋಡಿಸಿ `ಕ್ಷಮಿಸಿ' ಅಂದ. ಬಾಗಿಲವರೆಗೆ ಹೊರಳಿದವನು ನಿಂತ. ಅದೇ ಬೆದರಿಕೆಯ ನೋಟ!
"ನೀವು ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಹೆಸರು ಹೇಳಿದ್ರೆ ಉಪಕಾರವಾಗ್ತಿತ್ತು"
"ಪ್ರಜಕ್ತಾ" ಮೆಲ್ಲನೆ ಉಸುರಿದಳು.
ಅಲ್ಲಿಂದ ಹೊರ ಬಂದವನು ಬೇರೆಲ್ಲೂ ಹೋಗಲು ಮನಸ್ಸಿಲ್ಲದೆ ನೇರವಾಗಿ ತನ್ನ ರೂಂ ಸೇರಿಕೊಂಡ ಕಲಾಕಿರಣ್.
ಮೂರು ದಾರಿಗಳಲ್ಲಿ ಹೊರಟವನಿಗೆ ಮೂರನೆ ದಾರಿ ತೆರೆದುಕೊಂಡಂತೆ ಕಂಡಿತು.!
ಆದರೆ ಎರಡನೆ ದಾರಿ ಸ್ಪಷ್ಟ ಚಿತ್ರಣ ನೀಡಿದೆ. ನಿವೇದನ್‍ನ ಕೊಲೆಯ ಹಿಂದೆ ಪ್ರಭಾತ್ ರಂಜನ್‍ನ ಕೈವಾಡವಿದೆ! ಇಲ್ಲಿ ಮೋಸವಾಗಿರೋದು ಬಾಧುರಿಯಂತಹ ಮುಗ್ಧ ಹುಡುಗಿಗೆ!
ಮೂರು ದಾರಿಗಳ ದೂರ ತಿಳಿದುಕೊಂಡವನು ಒಂದು ನಿರ್ಧಾರಕ್ಕೆ ಬಂದ.

***

ಒಂದು ವಾರದಲ್ಲಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದ. ಒಮ್ಮೆ ಸರಿ ರಾತ್ರಿಗೆ ತಟ್ಟನೆ ಎಚ್ಚರಗೊಂಡವನು ಎದ್ದು ಕುಳಿತ.
ಹೊರಗಿನಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಮುಖ ತೊಳೆದು ಆತುರಾತುರವಾಗಿ ಮಳೆಯ ನಿಲುವಂಗಿ, ಟೋಪಿ ಧರಿಸಿ ಕತ್ತಲೆಯಲ್ಲಿ ಹೆಜ್ಜೆಯಿಡುತ್ತಾ ಮನೆಯ ಬಳಿ ಬಂದು ಕರೆಗಂಟೆಯೊತ್ತಿದ.
ತಟ್ಟನೆ ಎಚ್ಚರಗೊಂಡವಳು ಗಡಿಯಾರ ನಿರುಕಿಸಿದಳು. ಎರಡು ಗಂಟೆ! ಉಸಿರು ಬಿಗಿ ಹಿಡಿದು ನಿಧಾನಕ್ಕೆ ಹೊರ ಬಂದಾಗ ಮತ್ತೊಮ್ಮೆ ಕರೆಗಂಟೆಯ ಸದ್ದಾಯಿತು. ಮೆಲ್ಲನೆ ಕಿಟಕಿಯ ಪರದೆಯನ್ನು ಸರಿಸಿ ನೋಡಿದಳು.
ಕಲಾಕಿರಣ್!
ಈ ಅಪರಾತ್ರಿಯಲ್ಲಿ ಇಲ್ಲಿಗೇಕೆ ಬಂದ? ಮತ್ತೊಮ್ಮೆ ಬಾಗಿಲು ಬಡಿದ. ದೀಪ ಬೆಳಗಿಸಿ ಬಾಗಿಲು ತೆರೆದಳು. ಹೊರಗಿನ ತಂಪು ಗಾಳಿ ಮುಖಕ್ಕೆ ನುಗ್ಗುತ್ತಲೇ ಎರಡೆರಡು ಬಾರಿ ಸೀನು ಹಾಕಿದಳು. ಆತ ದಢಾರನೆ ಬಾಗಿಲು ಮುಚ್ಚಿದ.
"ಪ್ರಜಕ್ತಾ, ನೀವು ವಿಷಯಾನ ನನ್ನಿಂದ ಮುಚ್ಚಿಟ್ಟಿದ್ದೇಕೆ?"
ಅವನ ಪ್ರಶ್ನೆಗೆ ಅವಳ ನಿದ್ದೆಯ ಮಂಪರು ಹಾರಿ ಹೋಯಿತು. ಕಣ್ಣುಗಳನ್ನು ಉಜ್ಜಿಕೊಂಡು ಚಕಿತಳಾಗಿ ಅವನನ್ನು ನೋಡುತ್ತಿದ್ದಳು.
"ಹಕ್ಕಿ ಹಾರಿ ಹೋಗೋ ಮೊದ್ಲು ಹಿಡಿಬೇಕೂಂತ ಬಂದೆ"
"ಇಲ್ಲ, ನನ್ನ ನೀವು ತಪ್ಪಾಗಿ ತಿಳ್ಕೊಂಡಿದ್ದೀರಿ" ತಟ್ಟನೆ ಅಳುಕಿನಿಂದ ಹೇಳಿ ಹಿಂದಕ್ಕೆ ಸರಿದಳು.
"ಸರಿಯಾಗಿ ಹೇಳಿದ್ರಿ. ಮೊದ್ಲು ತಪ್ಪಾಗಿ ತಿಳ್ಕೊಂಡಿದ್ದೆ. ಆದ್ರೆ ಈಗ ನಿಜ ಏನೂಂತ ತಿಳಿದಿದೆ. ಅದಕ್ಕೆ ನಿಮ್ಮನ್ನ ಕೇಳ್ತಿರೋದು ನಿಜಾನ ಯಾಕೆ ಮುಚ್ಚಿಟ್ರಿ?"
"ಹೇಳ್ತೀನಿ. ಆವತ್ತು ನಿವೇದನ್‍ನ ಯಾರೋ ಕೊಲೆ ಮಾಡೊದಿಕ್ಕೆ ಬಂದಿದ್ರು. ಮೈಯೆಲ್ಲಾ ರಕ್ತಸಿಕ್ತವಾಗಿತ್ತು. ಕಂಪೌಂಡ್ ಹಾರಿ ಹಿಂದಿನಿಂದ ಬಂದು ಬಾಗಿಲು ಬಡಿದ್ರು. ಅವರನ್ನು ಒಳ ಸೇರಿಸ್ದೆ. ಆಶ್ರಯ ಕೊಡುವಂತೆ ಕೇಳಿದ್ರು. ಅವರನ್ನು ನಾನು ಚೆನ್ನಾಗಿ ಬಲ್ಲೆನಾದ್ರಿಂದ, ಅವರಿಗೆ ಆಶ್ರಯ ನೀಡ್ದೆ. ಅವರು ನನಗೆ ಹೇಗೆ ಪರಿಚಿತರೂಂದ್ರೆ, ಇಲ್ಲಿ ಸ್ಥಳ ಖರೀದಿಸಿ ಮನೆ ಕಟ್ಟೋಕೆ ಶುರು ಮಾಡುವಾಗಲಿಂದ ನಾನು ಅವರನ್ನು ಹಚ್ಕೊಂಡು ಬಿಟ್ಟೆ. ಪ್ರತಿ ಬಾರಿ ಫೋನು ಮಾಡೊದಿಕ್ಕೆ ಮನೆಗೆ ಬರ್ತ್ತಿದ್ರು. ಅವರ ಆಕರ್ಷಕ ವ್ಯಕ್ತಿತ್ವಕ್ಕೆ ಮರುಳಾಗಿ ಪ್ರೀತಿಸೋದಿಕ್ಕೆ ಆರಂಭಿಸ್ದೆ.... ನನ್ನ ಪ್ರೀತಿ ಮೌನವಾಗಿತ್ತು. ಅದೇ ಸಮಯಕ್ಕೆ ಅವರಿಗೊಬ್ಳು ಪ್ರೇಯಸಿಯಿದ್ದಾಳೆಂತ ತಿಳಿಯಿತು. ಅವಳು ಯಾವಾಗಲೂ ಅವರ ಜೊತೆಗೆ ಬರ್ತಿದ್ಲು. ಇದರಿಂದ ನಾನು ನಿರಾಶೆ ಹೊಂದಿದೆ ನಿಜ. ಆದ್ರೆ ಅವರನ್ನು ಕೊಲೆ ಮಾಡೋಷ್ಟು ಕೆಟ್ಟ ಮನಸ್ಸಿನೋಳಲ್ಲ ನಾನು" ಗದ್ಗದಿತಳಾದಳು.
"ಸಮಾಧಾನ ಮಾಡ್ಕೊಳ್ಳಿ. ನಿವೇದನ್‍ನ ಕೊಲೆಯಾಗ್ಲಿಲ್ಲಾಂತ ಗೊತ್ತಾ?"
ತೀರಾ ಕಂಗೆಟ್ಟಿದ್ದವಳು ಆಶ್ಚರ್ಯದಿಂದ ಇಲ್ಲವೆನ್ನುವಂತೆ ಗೋಣು ಆಡಿಸಿದಳು.
"ಆವರಿಗೆ ಆಶ್ರಯ ಕೊಟ್ಟಿದ್ರೂ, ಆತ ಆ ದಿನ ನನ್ನ ಹೇಳದೆ ಕೇಳದೆ ಇಲ್ಲಿಂದ ಹೊರಟು ಹೋದ್ರು"
"ಅವನನ್ನು ಕೊಲೆ ಮಾಡಲು ಪ್ರಯತ್ನ ನಡೆದಿತ್ತು. ಅದೂ ಒಂದು ಹೆಣ್ಣಿನಿಂದ ಅದು ನಿಮಗೆ ಗೊತ್ತಿರ್ಬೇಕಲ್ಲ?"
ತುಸು ಮೌನದ ನಂತರ ಹೌದೆನ್ನುವಂತೆ ತಲೆಯಾಡಿಸಿದಳು.
"ಅವಳು ಯಾರೂಂತ ಗೊತ್ತಾ?"
"ಇಲ್ಲ. ಅವರನ್ನು ಕೊಲ್ಲೋದಿಕ್ಕೆ ಪ್ರಯತ್ನ ಪಟ್ಟಿದ್ದು ಒಬ್ಳು ಹೆಣ್ಣೂಂತ ಮಾತ್ರ ನನ್ನ ಬಳಿ ಹೇಳ್ಕೊಂಡಿದ್ರು. ಆದ್ರೆ ಅವಳ ಹೆಸರು ಹೇಳ್ಲಿಲ್ಲ"
"ಆತನನ್ನು ಪ್ರೀತಿಸ್ದೋಳು... ಅಲ್ಲಲ್ಲ ಆತನಿಂದ ಏನನ್ನೋ ಪಡೆಯೋ ಹುಚ್ಚುತನ ಮಾಡ್ದೋಳು"
"ಅಂದ್ರೆ?"
"ಅಂದ್ರೆ... ಅವನ ಜೊತೆ ಸುತ್ತಾಡ್ತಿದ್ಲಲ್ಲ, ಆ ಹುಡುಗಿ.... ಬಾಧುರಿಂತ. ಅವಳಿಗೆ ನಿವೇದನ್‍ನ ಆಸ್ತಿ ಮೇಲೆ ಕಣ್ಣು. ಅವನಿಗೆ ಮೋಸ ಮಾಡಿ ಎಲ್ಲಾ ಆಸ್ತಿಗೂ ತಾನೆ ಬಾಧ್ಯಸ್ಥೆಂತ ಮಾಡ್ಕೊಂಡಿದ್ಲು. ಆ ಆಧಾರದ ಮೇಲೆ ನಾನು ಅವಳನ್ನು ಹಿಡಿದ್ಬಿಟ್ಟೆ"
ಪ್ರಜಕ್ತಾ ಮೂಗಿನ ಮೇಲೆ ಬೆರಳಿತ್ತಳು.
"ನಿವೇದನ್‍ಗೆ ಇನ್ನು ಅಪಾಯ ಇಲ್ಲಾಂತ ಬಾವಿಸ್ತೀನಿ"
"ಖಂಡಿತವಾಗಿಯೂ, ಆತ ಕ್ಷೇಮವಾಗಿದ್ದಾನೆ. ಬಾಧುರಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ನಾನು ಅವನ ಪರವಾಗಿ ಪೊಲೀಸರಿಗೆ ತಿಳಿಸೋದಿಕ್ಕೆ ಹೋದಾಗ ಅಲ್ಲಿ ಆತ ಎಲ್ಲಾ ಕಥೆಯನ್ನು ಪೊಲೀಸರಿಗೆ ತಿಳಿಸ್ತಿದ್ದ. ನಾನು ಅವನ ಪರವಾಗಿ ಪತ್ತೆ ಕಾರ್ಯ ನಡೆಸಿದ್ದಕ್ಕೆ ನನ್ನನ್ನು ಪೊಲೀಸರ ಮುಂದೆ ಪ್ರಶಂಸಿದ. ನೀವು ಆತನಿಗೆ ನೀಡ್ದ ಆಶ್ರಯಕ್ಕಾಗಿ ನಿಮ್ಮ ಉಪಕಾರನ ಮೆಚ್ಕೊಂಡ ಮಾತ್ರವಲ್ಲ ನಿಮ್ಮನ್ನೂ..."
ಅವಳ ನೋಟ ಪ್ರಶ್ನಾರ್ಥಕವಾಗಿತ್ತು.
"ಅಂದ್ರೆ.... ಇನ್ನು ಮುಂದೆ ಆತನ ಜೀವನಕ್ಕೆ ನೀವು ಬಾಧ್ಯಸ್ಥರಂತೆ"
ಪ್ರಜಕ್ತಾಳ ಕಣ್ಣುಗಳಲ್ಲಿ ಹೊಳಪು ತುಂಬಿತು.

Read more!