Saturday, April 2, 2011

ಹೊತ್ತಿ ಉರಿವ ಒಡಲ ಕಾಮದ - ಕಾಡಿನ ಬೆಂಕಿ


ಕಾಡಿನ ಬೆಂಕಿ ಹೊತ್ತಿಕೊಂಡರೆ ಕಾಡು ಉಳಿಯದು; ಒಡಲಿಗೆ ಹೊತ್ತಿ ಕೊಂಡ ಕಾಮದ ಬೆಂಕಿ ಅನೂಹ್ಯವಾಗಿ ದೇಹವನ್ನು ಸುಟ್ಟು ಉಳಿಸದು.

ಖ್ಯಾತ ಕಾದಂಬರಿಕಾರ ನಾ. ಡಿಸೋಜ ಅವರ ‘ಕಾಡಿನ ಬೆಂಕಿ’ ಇದು ಎಂಬತ್ತರ ದಶಕದಲ್ಲಿ ‘ತರಂಗ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದ ಕಾದಂಬರಿ. ಮನುಷ್ಯನ ಲೈಂಗಿಕ ಸಮಸ್ಯೆಯ ಸುತ್ತಾ ಹೆಣೆದ ಕಥೆಯಾದರೂ ಇದನ್ನು ಬರೆದ ಶೈಲಿ ಬಹಳ ಸೊಗಸಾಗಿದೆ. ಕೇವಲ ಸಮಸ್ಯೆಯೊಂದರ ಮುಖಾಮುಖಿಯಾಗದೆ ನಿಧಾನವಾಗಿ ಸಮಸ್ಯೆಯನ್ನು ಬಿಚ್ಚಿಡುತ್ತಾ ಸಂಸಾರಿಕ ಮತ್ತು ಕಾಡಿನ ಶ್ರೀಮಂತಿಕೆಯನ್ನು ಕಥೆ ಹೆಣೆದುಕೊಂಡಿರುವುದು. ಇದೊಂದು ಒಂದೇ ವರ್ಗಕ್ಕೆ ಸೀಮಿತವಾದ ಕಾದಂಬರಿಯಾಗದೆ ಎಲ್ಲರೂ ಓದಬಹುದಾದ ಕೃತಿಯಾಗಿ ಮೂಡಿ ಬಂದಿರುವುದು ಹಿರಿಯ ಲೇಖಕರೊಬ್ಬರು ಇದನ್ನು ಬರೆದಿರುವುದರಿಂದ ಅನ್ನುವುದು ನನ್ನ ಅನಿಸಿಕೆ.

ಹೌದು, ನಿಜವಾಗಿಯೂ ಕಾದಂಬರಿ ಕೇವಲ ಲೈಂಗಿಕ ವಿಷಯದ ಸುತ್ತಾ ಗಿರಕಿಹೊಡೆಯದೆ, ಅರಣ್ಯ ಇಲಾಖೆಯ ಪ್ರತೀಯೊಬ್ಬ ಸಿಬ್ಬಂದಿಯ ಸಮಸ್ಯೆಗಳತ್ತ ಮತ್ತು ಅವರ ಜೀವನ ಶೈಲಿಯತ್ತ ಮುಖ ಮಾಡಿರುವುದು ಗೋಚರಿಸುತ್ತದೆ. ಕಾಡಿನ ನಡುವೆ ಬದುಕುವ ದುಸ್ತರ ಮತ್ತು ವ್ಯವಸ್ಥೆಗಳೇ ಇಲ್ಲದ ಸವಾಲಿನ ಕೆಲಸಗಳನ್ನು ಕಥೆ ವಿವರಿಸುತ್ತದೆ. ಕಾನುಮರಡಿ ಹೆಸರೇ ಸೂಚಿಸುವಂತೆ ಅರಣ್ಯ ಇಲಾಖೆಗೆ ಸೇರಿದ ಜನವಸತಿಯಿಲ್ಲದ ಪ್ರದೇಶ ಓದುಗನ ಕಣ್ಣಿನಲ್ಲಿ ಸುಂದರವಾಗಿ ಚಿತ್ರಿತವಾಗುವಂತೆ ಕಾದಂಬರಿಯನ್ನು ಬರೆಯಲಾಗಿದೆ.

ಎರಡು ಮನಸ್ಸುಗಳನ್ನು ಬೆಸೆಯುವ ಪ್ರೇಮ ಮತ್ತು ಎರಡು ದೇಹಗಳನ್ನು ಬೆಸೆಯುವ ಕಾಮ, ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಇವುಗಳಲ್ಲಿಯ ಅಸಮತೋಲನ ಸಂಸಾರದ ಮೇಲೆ ವ್ಯತಿರೀಕ್ತ ಪರಿಣಾಮ ಬೀರಬಲ್ಲದು. ಮಾತ್ರವಲ್ಲ, ಕ್ಲಿಷ್ಟಕರವಾದ ಸಮಸ್ಯೆಯನ್ನು ತಂದೊಡ್ಡಬಲ್ಲದು.

ಇಲ್ಲಿಯ ಕಥಾನಾಯಕ ರಘುರಾಮ ತುಂಬು ಸಂಸಾರದಲ್ಲಿ ಜನಿಸಿದವನು. ಅವನ ತಂದೆ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು, ದಿನನಿತ್ಯ ಮನೆಯಲ್ಲಿ ಜಗಳ, ದಬ್ಬಾಳಿಕೆ, ಬೈಗುಳಗಳು. ಇದನ್ನೆಲ್ಲಾ ಬೆರಗುಗಣ್ಣಿನಿಂದ ನೋಡುವ ಪುಟ್ಟ ಬಾಲಕ ರಘುರಾಮನಿಗೆ ಬೆಳೆದಂತೆ ಅದೇನೋ ಅಸಂಗತ ಮತ್ತು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದಕ್ಕೆ ಪೂರಕವಾಗಿ ಮನೋಹರಿ ಮಹದೇವನೆನ್ನುವವನನ್ನು ಎರಡನೆ ಮದುವೆಯಾಗಿ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಆದರೆ ಆತ ನಿಷ್ಪ್ರಯೋಕಜನೆನ್ನುವ ದೃಷ್ಟಿ ಮನೋಹರಿಯದ್ದು. ಮನೋಹರಿಯ ಮನೋಲಹರಿಯನ್ನು ಅರಿಯದ ರಘುರಾಮ ಅವಳ ಜೊತೆಗೆ ಅನೈತಿಕ ಸಂಬಂಧವನ್ನು ಬೆಳೆಸುತ್ತಾನೆ. ಇದು ಮನೋಹರಿಗೆ ವರವಾಗಿಯೂ ರಘುರಾಮನಿಗೆ ಸಮಸ್ಯೆಯೊಂದರ ಪ್ರಪಾತವಾಗಿಯೂ ತೆರೆದುಕೊಳ್ಳುತ್ತದೆ. ಇದು ರಘುರಾಮನ ಮಡದಿ ಯಶೋದೆಗೆ ತಿಳಿಯುತ್ತಲೇ ಅವಳು ಅವನಿಂದ ದೂರವಾಗುತ್ತಾಳೆ. ಆದರೆ ರಘುರಾಮ ಕೆಟ್ಟವನಲ್ಲವಾದರೂ ಅವನ ಲೈಂಗಿಕತೆಯ ಬಗ್ಗೆ ಇರುವ ಅಜ್ಞಾನ ಯಶೋದಾಳಂತಹ ಹೆಣ್ಣನ್ನು ಬಲಿತೆಗೆದುಕೊಳ್ಳುವವರೆಗೆ ಮುಂದುವರಿಯುತ್ತದೆ.

ಇಂತಹ ಮಾನಸಿಕ ವಿಕಾರಕ್ಕೆ ಸಿಲುಕಿ ನರಳುವ ಅದೆಷ್ಟೋ ಯುವಜನಾಂಗಕ್ಕೆ ಇಂದಿಗೂ ಲೈಂಗಿಕ ಅಜ್ಞಾನವಿರುವುದನ್ನು ಕಾಣುತ್ತಲೇ ಇರುತ್ತೇವೆ. ಇಂತಹ ಅಜ್ಞಾನಗಳೇ ಮುಂದೆ ವಿಪರೀತ ಸಮಸ್ಯೆಗಳನ್ನು ಸೃಷ್ಟಿಸಿ ಬದುಕು ಸಾವಾಗುವ ಪರಿಸ್ಥಿತಿ ಎದುರಾಗುವುದು ಖಚಿತ. ಪ್ರತೀಯೊಂದು ಸಮಸ್ಯೆಗೂ ಪರಿಹಾರವಿದೆ. ಹಾಗೇನೆ ಲೈಂಗಿಕ ಸಮಸ್ಯೆಗೂ ಪರಿಹಾರವಿದೆ. ಮನುಷ್ಯ ತನ್ನ ಸಂಕೋಚ ಮನೋಭಾವನೆಯನ್ನು ತೊರೆದು ಇಂತಹ ಸಮಸ್ಯೆಗಳಿಗೆ ಮನೋಚಿಕಿತ್ಸಕರ ಬಳಿ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ಮನುಷ್ಯನ ವಿಕೃತ ಕೃತ್ಯಗಳಿಗೆ ಇಂತಹ ಅಜ್ಞಾನಗಳು ಕಾರಣವಾಗಿರಬಹುದು. ‘ಲೈಫ್ ಈಸ್ ಸ್ಟ್ರೇಂಜರ್ ದ್ಯಾನ್ ಫಿಕ್ಷನ್’ ಅನ್ನುವ ಹಾಗೆ ಈ ಕೃತಿಯೂ ಕೂಡ ವಿಭಿನ್ನವಾದ ಸಮಸ್ಯೆಯೊಂದನ್ನು ಮುಂದಿಡುತ್ತದೆ. ಇದರಿಂದ ಕೆಲವರಾದರೂ ತಮ್ಮ ಸಂಕೋಚ ಮನೋಭಾವನೆಯನ್ನು ಬಿಟ್ಟು ಮುಕ್ತವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಉತ್ತಮವೆನ್ನುವುದು ಈ ಲೇಖಕರ ಉದ್ದೇಶ ಕೂಡ ಆಗಿದೆ. ಈ ಕಥೆಯತ್ತ ಗಮನಸೆಳೆದವರು ಖ್ಯಾತ ಮಾನಸಿಕ ತಜ್ಞ ದಂಪತಿಗಳಾದ ಡಾಕ್ಟರ್ ಅಶೋಕ್ ಪೈ ಮತ್ತು ಡಾಕ್ಟರ್ ರಜನಿ ಪೈಯವರು.

ಕಾಡಿನ ಬೆಂಕಿಯನ್ನು ಓದುಗರು ಮೆಚ್ಚಿಕೊಂಡಿರುವುದು ಅದರ ಶೈಲಿಗಾಗಿ. ಎಲ್ಲಿಯೂ ಸಮಸ್ಯೆಯನ್ನು ವೈಭವೀಕರಿಸದೆ ಸ್ಪುಟವಾಗಿ ಮತ್ತು ಕಲಾತ್ಮಕವಾಗಿ ಬರೆದಿರುವುದರಿಂದ ಇದು ಮುಜುಗರವಿಲ್ಲದೆ ಓದುವುದಕ್ಕೆ ಸಹಾಯವಾಗಿದೆ. ಇಂತಹ ವಿಶಿಷ್ಟ ಕಾದಂಬರಿಯನ್ನು ಕೇವಲ ಓದುವ ಖುಷಿಗಾಗಿ ಓದದೆ, ಸಮಸ್ಯೆಯತ್ತ ಮುಖ ಮಾಡಿರುವ ರಘುರಾಮನಂತಹ ವ್ಯಕ್ತಿಗಳ ಅಜ್ಞಾನವನ್ನು ತೊಡೆಯುವಂತಾದರೆ ಓದು ಸಾರ್ಥಕವಾದಿತು.

ಇಂತಹ ಕೃತಿಯನ್ನು ರಚಿಸಿದ ಲೇಖಕ ನಾ. ಡಿಸೋಜ ಅವರಿಗೆ ಮತ್ತು ಇದನ್ನು ಬರೆಯುವಂತೆ ಪ್ರೇರೇಪಿಸಿದ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ಕೃತಜ್ಞತೆಯನ್ನು ಹೇಳಬೇಕು. ಈ ಕೃತಿ ಈಗ ಎರಡನೆ ಮುದ್ರಣವಾಗಿ ಪ್ರಕಟವಾಗಿದೆ.

2 comments:

Dr.D.T.Krishna Murthy. said...

ಉತ್ತಮ ಕೃತಿಯೊಂದರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.ನನ್ನ ಬ್ಲಾಗಿಗೆ ಭೇಟಿ ನೀಡಿ,ಫಾಲೋಯರ್ ಆಗಿ,ನನ್ನ ಲೇಖನಗಳ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.ನಮಸ್ಕಾರ.

ನಕ್ಷತ್ರ ಬಳ್ಳಿ said...

ಮಾನ್ಯರೆ,
ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಿಮ್ಮ ಬ್ಲಾಗ್ ಲಿಂಕ್ ಕಳುಹಿಸಿ. ಓದುತ್ತೇನೆ.