Thursday, September 15, 2011

ಸ್ವಾಭಿಮಾನಿಯೊಬ್ಬನ ದಿಟ್ಟ ಪರಪಂಚ


ಅಂದಿನ ಮಲೆನಾಡಿನ ಭವ್ಯತೆಯನ್ನು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನುರು ಹೆಗ್ಗಡಿತಿ ಮತ್ತು ಇತರ ಕೃತಿಗಳಲ್ಲಿ ಯತ್ತೇಚ್ಛವಾಗಿ ಕಾಣಸಿಗುವುದಾದರೂ, ಅವರು ಕೃತಿಗಳಲ್ಲಿ ಕಟ್ಟಿಕೊಡುವ ಆ ಮಲೆನಾಡು ಈಗ ಕಾಣಸಿಗಲಾರದು. ಆದರೂ ಮಲೆನಾಡಿನ ದೃಗ್ ದಿಗಂತದ ದೃಶ್ಯ ಸಾದೃಶ ಯಾರನ್ನಾದರೂ ಸೆಳೆಯದಿರದು. ಕುವೆಂಪು ಆನಂತರದ ಬಹಳಷ್ಟು ಲೇಖಕರು ಕೂಡ `ಮೆರೆದ’ ಮಲೆನಾಡನ್ನ ಕೃತಿಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅವರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಕೃತಿಗಳಲ್ಲಿ ಬದುಕಿನ ಜೊತೆಜೊತೆಗೆನೆ ಜೀವ ಸಂಕುಲಗಳು, ಅವುಗಳ ವೈಜ್ಞಾನಿಕ ವಿಶೇಷತೆಗಳನ್ನು ಕೂಡ ನಮಗೆ ತಿಳಿಸಿಕೊಡುತ್ತಾರೆ. ಆನಂತರ ಮಲೆನಾಡಿನ ಬಗ್ಗೆ ಅದೆಷ್ಟೋ ಲೇಖಕರು ಬರೆದರೂ, ಇತ್ತೀಚೆಗೆ ಪ್ರಕಟಗೊಂಡ ಕೆಲವು ಕೃತಿಗಳಲ್ಲಿ ಗಿರಿಮನೆ ಶಾಮರಾವ್ ಅವರ `ಕಾಫಿ ನಾಡಿನ ಕಿತ್ತಳೆ’ ಮತ್ತು ಬಿಳುಮನೆ ರಾಮದಾಸ್ ಅವರ `ಮಲೆಯ ಪ್ರಬಂಧಗಳು’ ಮರೆಯಾದ ಮಲೆನಾಡಿನ ಒಳಹೊರಗನ್ನು ಪ್ರತಿಬಿಂಬಿಸಿದೆ. ಓದುಗನ ಕಣ್ಣಿನಲ್ಲಿ ಇಂದಿಗೂ ಅಂದಿನ ಮಲೆನಾಡು ಇಲ್ಲಿ ಇನ್ನೂ ಸಮೃದ್ಧವಾಗಿಯೇ ಉಳಿದಿದೆ."

ಈ ರೀತಿಯಲ್ಲಿ ಮಲೆನಾಡನ್ನು ತೊರೆದು ಬಾಲ್ಯದ ನೆನಪುಗಳನ್ನು ಜೀವಂತವಾಗಿರಿಸಿಕೊಂಡು ಆಗಿನ ಮಲೆನಾಡಿನ ಸ್ಥಿತಿಗತಿ ಮತ್ತು ಅಲ್ಲಿಯ ಬದುಕಿನ ಪುಟಗಳನ್ನು ಕಟ್ಟಿಕೊಡುವವರಲ್ಲಿ ಲಕ್ಷ್ಮಣ ಕೊಡಸೆಯವರನ್ನು ಹೆಸರಿಸಬಹುದು. `ಪಯಣ’ದಂತಹ ಕಾದಂಬರಿಯನ್ನು ಬರೆದ ಕೊಡಸೆಯವರು, `ಊರು- ಮನೆ’ಯ ಮೂಲಕ ಮಲೆನಾಡಿನ ಪರಿಸರವನ್ನು ನೆನಪಿನಲ್ಲಿ ಜಾಗೃತವಾಗಿರಿಕೊಂಡು ಲೇಖನಿಯಿಂದ ಅಕ್ಷರಕ್ಕೆ ಇಳಿಸಿದ ಪ್ರಯತ್ನ ಅವರದ್ದು. ಅವರ ಇತ್ತೀಚಿನ ಕೃತಿ `ಅಪ್ಪನ ಪರಪಂಚ’ದಲ್ಲಿಯೂ ಮಲೆನಾಡಿನ ಬದುಕು, ಜೀವಸಂಕುಲಗಳ ವೈವಿಧ್ಯ ಮತ್ತು ಆಗಿನ ಮಲೆನಾಡಿನ ಪರಿಸರವನ್ನ ಬಹಳ ಸುಂದರವಾಗಿ ಬಳಸಿಕೊಂಡಿರುವುದು ಓದುಗನಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ.

`ಅಪ್ಪನ ಪರಪಂಚ’ ಒಂದು ಕಾದಂಬರಿಯಂತೆ ಕಂಡರೂ ಅಲ್ಲಿರುವುದು ಒಂದು ವ್ಯಕ್ತಿ ಚಿತ್ರಣ ಅಥವಾ `ಜೀವನಗಾಥೆ’. ಆದರೂ, ಇದನ್ನು ಒಂದು `ನಾನ್ ಫಿಕ್ಷನ್’ ಅಂದರೆ ತಪ್ಪಾಗಲಾರದು.

ಈ ಕೃತಿಯಲ್ಲಿ ತಂದೆ ಮತ್ತು ಮಗನ ಬಾಂಧವ್ಯಕ್ಕಿಂತಲೂ, ತಂದೆ ಬದುಕಿಗಾಗಿ ಪಡುವ ಹೋರಾಟವನ್ನು `ವನ್ ಮ್ಯಾನ್ ಆರ್ಮಿ’ಯಾಗಿ ಚಿತ್ರಿಸುತ್ತಾ, ಮಗ ತಂದೆಯ `ನೆಗೆಟಿವ್’ಗಳನ್ನು ಹೇಳುವಂತೆ ಕಂಡರೂ, ಅಲ್ಲಿ ಮಗನಿಗೆ ತಂದೆಯ ಮೇಲಿರುವ ಅವ್ಯಕ್ತವಾದ ಪ್ರೀತಿಯನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಇದರ ಜೊತೆಗೆ ಆಗಿನ ಒಟ್ಟು ವ್ಯವಸ್ಥೆಯನ್ನು, ಆ ಪರಿಸರದಲ್ಲಿ ಬೆಳೆದವರ ಮುಗ್ಧತೆಯನ್ನು ಕೂಡ ಪರಪಂಚದಲ್ಲಿ ದೃಶಿಸಿರುವುದು ಕಣ್ಣಿಗೆ ಕಟ್ಟಿದ ಹಾಗೆ ಮೂಡಿ ಬಂದಿದೆ. ಅಡಿಕೆಯ ಸಿಪ್ಪೆ ಸುಲಿಯುತ್ತಲೇ ಮಕ್ಕಳ ಬಗ್ಗೆ ಅಪಾರ ಪ್ರೀತಿಯಿರುವ ತಂದೆ, ಮಕ್ಕಳ ಓದಿನ ಬಗೆಯೂ ಕಾಳಜಿವಹಿಸಿ ಬದುಕು ಬದಲಿಸಿಕೊಳ್ಳುವ ನೋವು ಮತ್ತು ಪ್ರೀತಿಯಲ್ಲಿ ಅವರ `ಭವಿಷ್ಯ’ವನ್ನು ರೂಪಿಸಿಕೊಡುವುದು ಮಕ್ಕಳ ಮೇಲಿನ ದ್ವೇಷದಿಂದಲ್ಲ, ಬರೀ ಪ್ರೀತಿಯಿಂದ ಮಾತ್ರ. ತಂದೆಯಾದವನ ಜವಾಬ್ದಾರಿ ಮತ್ತು ಅದನ್ನು ಡಿಸ್ಚಾರ್ಜ್ಗೊಳಿಸುವ ಹಾದಿ ಸುಗಮವಾದುದಲ್ಲವಾದರೂ, ಈ ಕೃತಿಯಲ್ಲಿ ಇದ್ದದ್ದರಲ್ಲೇ ಪ್ರಪಂಚವನ್ನು ಕಂಡುಕೊಳ್ಳುವ ಗಟ್ಟಿ ಮಲೆನಾಡಿಗನೊಬ್ಬನ ಹೋರಾಟವಿದೆ.

ಆಯುಷ್ಯ ಏರುತ್ತಿದ್ದಂತೆ ಹುಟ್ಟಿಕೊಳ್ಳುವ ಜೀವನ ಪ್ರೀತಿ, ಅಸಹಾಯಕತೆಯ ನಡುವೆಯೂ ಮನಸ್ಸಿಗೆ ಮೀರಿದ ಸಾಹಸದ ಕೆಲಸಗಳನ್ನು ಮಾಡಲು ಪ್ರೇರೇಪಿಸುವಂತೆ ಇಳಿವಯಸಿನಲ್ಲಿಯೂ `ನೀರಾ’ ತೆಗೆದು, ಅದನ್ನು ಗಡಿಗೆಯಲ್ಲಿ ಹೊತ್ತುಕೊಂಡು ಹೋಗುವ ಕೆಲಸ ಸಾಮಾನ್ಯವಾದುದಲ್ಲ. ಇಲ್ಲಿ ಹಠಮಾರಿತನಕ್ಕಿಂತಲೂ ಸ್ವಾಭಿಮಾನವಿದೆ. ಮಕ್ಕಳ ಮುಂದೆ ಕ್ಷುಲ್ಲಕ ವಿಷಯಕ್ಕೂ ಕೈಯೊಡ್ಡಬೇಕಾದ ಪರಿಸ್ಥಿತಿಯಲ್ಲಿ ಅದನ್ನು ನಿಬಾಯಿಸಿ ಬದುಕುವ ಹಳ್ಳಿಗನೊಬ್ಬನ ಜೀವನಗಾಥೆಯಿದೆ. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಶೆಂದಿಯನ್ನು ತೆಗೆದು, ಮಾರುವ ದೃಶ್ಯವನ್ನು ಕಾಣುತ್ತೇವೆ. ಅದೇ ದೃಶ್ಯ ಕೊಡಸೆಯವರ ಈ ಕೃತಿಯಲ್ಲಿ ಕೂಡ ಪಾತ್ರವೊಂದರ ಅವಿಭಾಜ್ಯ ಅಂಗದಂತೆ ಮೂಡಿಬಂದಿದೆ.

`ಅಪ್ಪನ ಪರಪಂಚ’ದಲ್ಲಿ, ಅಪ್ಪ ರಾಜಕೀಯವನ್ನು ಅನಿವಾರ್ಯವಾಗಿ ಪ್ರವೇಶಿಸುವುದು, ಬಿಳುಮನೆಯವರ `ಮಲೆಯ ಪ್ರಬಂಧಗಳು’ವಿನಲ್ಲಿ `ಶಾಂತವೇರಿ ಗೋಪಾಲಗೌಡರು- ನೆನಪುಗಳು’ ಪ್ರಬಂಧವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ರಾಜಕೀಯದ ನಡುವೆ ಇಳಿವಯಸ್ಸಿನಲ್ಲಿಯೂ ಸಮಾಜಸೇವೆಗೆ ಟೊಂಕಕಟ್ಟಿ ನಿಲ್ಲುವ ಉತ್ಸಾಹ ಅಪ್ಪನ ಪರಸೇವೆಯ ಪ್ರಪಂಚವಾಗಿಯು ಕಾಣಿಸುತ್ತದೆ. ಚುನಾವಣೆಯಲ್ಲಿ ಸೋತರೂ ಬತ್ತದ ಸಮಾಜಸೇವೆಯ ನಂಟು ರಿಪ್ಪನ್ ಪೇಟೆಯಲ್ಲಿರುವ ಸಮೂದಾಯ ವಿದ್ಯಾರ್ಥಿನಿಲಯದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಶಿಕ್ಷಣದ ಹಂಬಲದಲ್ಲಿರುವ ಮಕ್ಕಳ ಕಾಳಜಿಯನ್ನು ಹೊತ್ತುಕೊಂಡು ಪರಿಸ್ಥಿತಿಯನ್ನು ಎದುರಿಸುವುದು ಸುಲಭದ ಮಾತಲ್ಲವೆನ್ನುವುದು ಓದುಗನಿಗೆ ತಿಳಿಯುತ್ತದೆ.

ಇಷ್ಟೆಲ್ಲಾ ತಾಕತ್ತಿದ್ದರೂ ಮಕ್ಕಳು ಪ್ರಾಯಕ್ಕೆ ಬಂದಾಗ ಅವರಿಗೆ ಜವಾಬ್ದಾರಿಯನ್ನು ಹೊರೆಸಿ, ಬದುಕಿನ ವ್ಯಾಪ್ತಿಯನ್ನು ತೆರೆದಿಡುವ ಉದ್ದೇಶವೇ ಅವನಿಗೆ ಇದ್ದಿರಬಹುದೆಂದೆನಿಸುತ್ತದೆ. ಇಲ್ಲವಾದರೆ ಮಕ್ಕಳಿಗೆ ಆಯಾಯ ಸಂದರ್ಭದಲ್ಲಿ ಏನೇನು ಆಗಬೇಕೆಂದುಕೊಳ್ಳುತ್ತಾನೋ ಅವುಗಳ ಜೊತೆಗೆ ಅವರವರ ಜವಾಬ್ದಾರಿಯನ್ನು ಈ ಮೂಲಕ ಹೇಳುತ್ತಿರಬಹುದು. ಅಷ್ಟೇ ಅಲ್ಲದೆ, ಸರೀಕರ ಜೊತೆಗೆ `ಯಜಮಾನ’ ಅನಿಸಿಕೊಂಡವನು ಬಾಂಧವ್ಯಗಳನ್ನು ಉಳಿಸಿಕೊಂಡು ಒಬ್ಬ `ರೋಲ್ ಮಾಡೆಲ್’ ಆಗಿ ಗೋಚರಿಸಿದರೂ ಹೆಚ್ಚಲ್ಲ. ಈ ರೀತಿಯ ಗೌರವಕ್ಕೆ ಪಾತ್ರವಾಗಬೇಕಾದರೆ ಆತನ ಕಾರ್ಯವೈಖರಿ, ಆದರ್ಶಗಳು ಇತರರಿಗೆ ಮಾದರಿಯಾಗಿರಬೇಕು. ಹಾಗಿನ ವ್ಯಕ್ತಿತ್ವ ಈ ಕೃತಿಯಲ್ಲಿ ಬರುವ ಅಪ್ಪನದು. ಬೆನ್ನುಡಿಯಲ್ಲಿ ಸರ್ಜಾಶಂಕರ ಹರಳಿಮಠ ಅವರು ಹೇಳುವಂತೆ, `ಇಲ್ಲಿ ಅಪ್ಪನ ಬಗ್ಗೆ ಮಾತ್ರ ಹೇಳುತ್ತಿಲ್ಲ. ಅಪ್ಪನ ಕಾಲಘಟ್ಟವನ್ನು ನಿಷ್ಠುರವಾಗಿ ಚಿತ್ರಿಸುವ ಕೃತಿ `ಅಪ್ಪನ ಪರಪಂಚ’.

ಮಕ್ಕಳ ಮನೆಯಲ್ಲಿ ಆರಾಮವಾಗಿ ಜೀವನ ನಡೆಸಬಹುದಾದ ಅವಕಾಶಗಳಿದ್ದರೂ ಅದು ಅಸಹನೀಯವಾಗುವ ಸ್ಥಿತಿಯೇ ಒಬ್ಬನ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಅಂತಹ ಕ್ರಿಯಾಶೀಲತೆಯಿಂದಿರುವ ವ್ಯಕ್ತಿಯು ಪ್ರತೀ ಕೆಲಸದಲ್ಲಿಯೂ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾನೆ. ಹಾಗಾಗಿ ಇಲ್ಲಿಯ ಅಪ್ಪ ತನ್ನದೇ ಆದ ಒಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಾನೆ.

ಮಕ್ಕಳಿಗೆ ರೋಲ್ ಮಾಡೆಲ್ ಆಗುವ ಅಪ್ಪಂದಿರ ಬಗ್ಗೆ ಆಗಿನ ಕಾಲದಲ್ಲಿ ಏನನ್ನೂ ಗುರುತಿಸಲಾರದೆ, ಸ್ವತ: ತನಗೆ ಜವಾಬ್ದಾರಿಗಳ ಆಳದ ಅರಿವಾದಾಗ ಮಗ, ಅಪ್ಪನ ಕಾರ್ಯವೈಖರಿಯನ್ನು ಒಂದು `ಬೆರಗು’ ಅನ್ನುವಂತೆ ಇಲ್ಲಿ ಕಾಣುತ್ತಾನೆ. ಆ ಬೆರಗು ಅಸಹಾಯಕತೆಯಿಂದ ಪಾರ್ಶ್ವವಾಯು ಪೀಡಿತನಾಗಿ ಮಲಗಿದಾಗ ಕ್ರಿಯಾಶೀಲತೆಯ ಚುರುಕು ಜೀವವೊಂದನ್ನು ಆ ರೀತಿಯಲ್ಲಿ ಕಲ್ಪಿಸಿಕೊಳ್ಳುವುದಕ್ಕೂ ಬೇಸರವಾಗುತ್ತದೆ. ಮುಂದೇ ಅದು ಸಾವಿನಲ್ಲಿ ಅಂತ್ಯ ಕಂಡಾಗ ಅಪ್ಪನನ್ನು ನೋಡಲಾಗದ ಅಸಹಾಯಕತೆಯಲ್ಲಿ ಉಳಿದು ಬಿಡುವ ಮಗನ ಅಂತ:ಕರಣದ ಸೊಲ್ಲು ಮತ್ತು ಅವನ ಆಶೆಗಳೆಲ್ಲಾ ದೂರ ಮಾಡಿಕೊಂಡ ನಿರ್ಲಿಪ್ತತೆ ಯಾರ ಮನಸ್ಸನಾದರೂ ಕಲಕದಿರದು. ಇನ್ನೊಂದು ಮನಕಲಕುವ ದೃಶ್ಯ, ಮಕ್ಕಳ ಒತ್ತಾಯಕ್ಕೆ ಹಸಿರು ಬಳೆ ತೊಟ್ಟು, ಕನಕಾಂಬರ ಮುಡಿಗೇರಿಸಿ, ಹಣೆಗೆ ಕುಂಕುಮವಿಟ್ಟು ಕಾರಿನತ್ತ ಹೆಜ್ಜೆ ಹಾಕುವ ತಾಯಿಯ ಸನ್ನಿವೇಶ ಓದುಗನ ಕಣ್ಣನ್ನು ಒದ್ದೆ ಮಾಡದಿರದು.

`ಅಪ್ಪನ ಪರಪಂಚ’ ಒಬ್ಬ ಆದರ್ಶ ಪ್ರಾಯ ತಂದೆಯ ಜೀವಿತ ಮತ್ತು ಆತನ ಸ್ವಾಭಿಮಾನದ, ಶಿಸ್ತಿನ ಬದುಕು ಎಲ್ಲರಿಗೂ ಮಾದರಿಯೆಂದರೆ ಅತಿಶಯೋಕ್ತಿಯಲ್ಲ. ನಿಜವಾಗಿಯೂ ತಂದೆಯೊಬ್ಬ ಮಕ್ಕಳ ದೃಷ್ಟಿಯಲ್ಲಿ `ರಿಯಲ್ ಹೀರೋ’ ಅಂದರೂ ತಪ್ಪಲ್ಲ. ಹಾಗಾಗಿ ಲಕ್ಷ್ಮಣ ಕೊಡಸೆ ಅವರ ಈ ಕೃತಿ ಕೇವಲ ಒಂದು ಕುಟುಂಬದ ಅಥವಾ ವರ್ಗದ ಓದುಗರಿಗೆ ಮಾತ್ರ ಸೀಮಿತವಲ್ಲ. ಸಹಜ ಬದುಕಿನ ಏರಿಳಿತಗಳು ಓದುಗರಿಗೂ ಆದರ್ಶಪ್ರಾಯವೆಂದೆನಿಸಬಹುದು. ಈ ಕೃತಿಯಲ್ಲಿ ಮನೋಹರ್ ಅವರ ಮುಖಪುಟದ ಕಲೆ ಕೂಡ ಕೃತಿಯಷ್ಟೇ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

4 comments:

Anonymous said...

ಲಕ್ಷ್ಮಣ ಕೊಡಸೆಯವರ 'ಅಪ್ಪನ ಪರಪಂಚ' ಕೃತಿ ಪರಿಚಯವನ್ನು ಚೆನ್ನಾಗಿ ಮಾಡಿರುವಿರಿ. ವಿಮರ್ಶೆಯನ್ನು ಓದುತ್ತಲೇ ಪುಸ್ತಕವನ್ನು ನಾವು ಕೊಂಡು ಪಡೆಯಬೇಕೆನ್ನುವ ಆಶೆಯನ್ನು ಹುಟ್ಟಿಸುತ್ತದೆ.

Anonymous said...

ಲಕ್ಷ್ಮಣ ಕೊಡಸೆಯವರ 'ಅಪ್ಪನ ಪರಪಂಚ' ಕೃತಿ ಪರಿಚಯವನ್ನು ಚೆನ್ನಾಗಿ ಮಾಡಿರುವಿರಿ. ಮಲೆನಾಡಿನ ಒಬ್ಬ ಸ್ವಾಭಿಮಾನಿ ಅಪ್ಪನ ಹೋರಾಟದ ಬದುಕನ್ನು ಚಿತ್ರಿಸಿರುವ ಕೃತಿಯ ಲೇಖನವನ್ನು ಓದುತ್ತಲೇ ಪುಸ್ತಕವನ್ನು ನಾವು ಕೊಂಡು ಪಡೆಯಬೇಕೆನ್ನುವ ಆಶೆಯನ್ನು ಹುಟ್ಟಿಸುತ್ತದೆ.
ಪಾರ್ವತಿ ಪಿಟಗಿ

ಸಾಗರದಾಚೆಯ ಇಂಚರ said...

khandita idanna odalebeku enista ide

parichayisiddakke dhanyavaadagalu

sanjana said...

thumba chenaagidhe sir...dis s sanjana