Friday, December 18, 2009

ಬಣ್ಣದ ಚಿಟ್ಟೆಯ ರಂಗಿನ ಬದುಕಲ್ಲ ಈ ‘ಪ್ಯಾಪಿಲಾನ್’.


‘ಪ್ಯಾಪಿಲಾನ್’ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆಯವರ ಸಂಗ್ರಹಾನುವಾದದ ಕಾದಂಬರಿ. ಈ ಬೃಹತ್ ಕಾದಂಬರಿಯ ಮೂಲ ಲೇಖಕ ಹೆನ್ರಿ ಛಾರೇರೆ. ಈ ಕಾದಂಬರಿ ಎರಡು ಭಾಗಗಳಲ್ಲಿ ಪ್ರಕಟಗೊಂಡಿದೆ. ಇದೊಂದು ಸಾಹಸದ ಕಥೆಯಾದರೂ ಖೈದಿಯೊಬ್ಬನ ಪಲಾಯ್ನ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರೆಂಚ್ ಸರಕಾರದ ದುರವಸ್ಥೆ, ನ್ಯಾಯಾಂಗ ಮತ್ತು ನ್ಯಾಯಾಂಗ ವಿತರಣೆಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ.

ಇಲ್ಲಿ ಭೂಗತ ಜಗತ್ತಿನ ಅನಾವರಣವಿದ್ದರೂ ಅಪರಾಧಿಯಲ್ಲದ ಮನುಷ್ಯನೊಬ್ಬ ಸ್ವತಂತ್ರನಾಗಲು ಹೋರಾಡುವ ಮೈ ರೋಮಾಂಚನಗೊಳಿಸುವ ಸಾಹಸದ ಕಥೆಯೂ ಅಹುದು."

‘ಪ್ಯಾಪಿಲಾನ್’ ಅಂದರೆ ‘ಚಿಟ್ಟೆ’ (ತೆಳು ನೀಲಿ ರೆಕ್ಕೆಗಳ ಮೇಲೆ ಪುಟ್ಟ ಗೆರೆಗಳಿರುವ ಚಿಟ್ಟೆ) ಎಂಬ ಅರ್ಥವಿದ್ದರೂ ಇಲ್ಲಿಯ ನಿರಪರಾಧಿ ಖೈದಿ ಪ್ಯಾಪಿಯ ಬದುಕು ಚಿಟ್ಟೆಯಷ್ಟು ಸುಂದರ ಮತ್ತು ಸ್ವೇಚ್ಛೆಯಿಂದ ಕೂಡಿಲ್ಲ. ಹಲವು ಬಾರಿ ಬಂಧಿಖಾನೆಯಿಂದ ತಪ್ಪಿಸಿಕೊಂಡರೂ ಮತ್ತೆ ಮತ್ತೆ ಅಂತಹುದೇ ಕಾರಾಗೃಹಗಳಲ್ಲಿ ಕರಾಳ ದಿನಗಳನ್ನು ಕಳೆಯಬೇಕಾಗುತ್ತದೆ. ಯಾವುದೇ ಅಪರಾಧವೆಸಗದ ವ್ಯಕ್ತಿಯನ್ನು ಪೊಲೀಸರು, ಲಾಯರುಗಳು ಸೇರಿ ನಿಷ್ಕಾರುಣವಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತೆ ಮಾಡಿ ಅವನನ್ನು ಕತ್ತಲ ಕಾರಾಗೃಹವಿರುವ ದ್ವೀಪಕ್ಕೆ ಗಡಿಪಾರು ಮಾಡುತ್ತಾರೆ. ಭೂಮಿಯ ಮೇಲಿನ ನರಕವಾಗಿರುವ ಆ ದ್ವೀಪದಲ್ಲಿ ಎಲ್ಲರೂ ಅಧಿಕಾರಿಗಳೇ. ಯಾವ ಜನ್ಮದ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಅಲ್ಲಿ ಅಧಿಕಾರಿಗಳಾಗಿ ನಿಯುಕ್ತಿಯಾಗಿದ್ದಾರೋ, ಅಂತಹವರ ಕೈಯಲ್ಲಿ ಸಿಲುಕಿ ಬದುಕೇ ಮುಗಿಯಿತೇನೋ ಅನ್ನುವ ಹೊತ್ತಿಗೆ ಹೊಸ ಹೊಸ ಸಾಹಸಗಳನ್ನು ಮಾಡಲು ಮುಂದಾಗುತ್ತಾನೆ ಪ್ಯಾಪಿ. ಸಮಾನತೆ, ನ್ಯಾಯ, ಸ್ವಾತಂತ್ರ್ಯಕ್ಕೆ ಹೆಸರಾದ ಪ್ರೆಂಚ್ ಸರಕಾರದಲ್ಲಿಯೇ ಈ ರೀತಿಯ ಅವ್ಯವಸ್ಥೆಯನ್ನು ಕಣ್ಣ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ ಈ ಕಾದಂಬರಿ.

ಪ್ಯಾಪಿ ಕಾರಾಗೃಹ ಸೇರಿದ ಬಳಿಕ ಅಲ್ಲಿಯ ಖೈದಿಗಳ ಜೊತೆಗೆ ಸೇರಿ ಹಲವು ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ ಕ್ರೂರ ಕಾನೂನು ವ್ಯವಸ್ಥೆ ಮತ್ತು ಪೊಲೀಸರ ಎದುರು ತನ್ನ ಸಾಹಸಗಳೆಲ್ಲಾ ನಿರರ್ಥಕವಾಗುತ್ತದೆ. ಆದರೆ ಸೇಡು ತೀರಿಸಿಕೊಳ್ಳಲು ಕಾದಿರುವ ಪ್ಯಾಪಿ ಅಲ್ಲಿಯ ಅಧಿಕಾರಿಗಳ ಮನಗೆದ್ದು ಅಲ್ಪಾವಧಿಯ ಶಿಕ್ಷೆಯನ್ನು ಮುಗಿಸಿ ಬಿಡುಗಡೆಯಾಗುವ ಸಂದರ್ಭಗಳಿದ್ದರೂ ಅವೆಲ್ಲವನ್ನೂ ದಿಕ್ಕರಿಸಿ ಎಲ್ಲಾ ಕಡೆಯಲ್ಲೂ ಸೋಲುಣ್ಣುತ್ತಾನೆ. ಅವನ ಮನದಲ್ಲಿ ಕುದಿಯುತ್ತಿರುವ ಸೇಡು ಅವನನ್ನು ಮಹಾಪರಾಧಿಯೊಬ್ಬ ಅನುಭವಿಸಬೇಕಾದ ಎಲ್ಲಾ ಶಿಕ್ಷೆಗಳಿಗೂ ಗುರಿಯಾಗಿಸುತ್ತದೆ. ಸೇಡು ತೀರಿಸಿಕೊಳ್ಳುವ ಆತುರ ಅವನಲ್ಲಿ ಅಷ್ಟೊಂದು ಮಡುಗಟ್ಟಿರುತ್ತದೆ.

ಗಯಾನ ದ್ವೀಪದ ಜೈಲುಗಳಿಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳುವುದು ಸುಲಭವೆಂದು ತಿಳಿದ ಪ್ಯಾಪಿಗೆ ಆತನ ಸಹಖೈದಿ ಅಲ್ಲಿಯ ನರಕಸದೃಶ ಜೈಲುಗಳು, ಮಾರಕ ರೋಗಗಳಿಗೆ ತುತ್ತಾಗಿ ಸಾಯುವ ಖೈದಿಗಳ ಅವಸ್ಥೆಯನ್ನು ತಿಳಿಸುತ್ತಾನೆ. ಹಠ ಬಿಡದ ಪ್ಯಾಪಿ ಗಯಾನ ಜೈಲು ಸೇರಿ ಅಲ್ಲಿಂದ ತಪ್ಪಿಸಿಕೊಂಡು ಅಲ್ಲಿಯ ಜನರ ಜೊತೆಗೆ ಸೇರಿ ಸಂಸಾರವೆನ್ನುವ ಕೂಪದಲ್ಲಿ ಬೀಳುತ್ತಾನೆ. ಲಾಲಿ ಮತ್ತು ಅವಳ ಸಹೋದರಿ ಲೋರಿಯಾ ಎಂಬ ಕನ್ಯೆಯರನ್ನು ಮದುವೆಯಾಗಿ ಸುಖಮಯವಾದ ಸಂಸಾರ ನಡೆಸಬಹುದಾಗಿದ್ದರೂ ಅವನೊಳಗಿದ್ದ ಸೇಡು ಭುಗಿಲೆದ್ದು ತನ್ನ ಸಾಹಸ ಯಾತ್ರೆಯನ್ನು ಮುಂದುವರಿಸುವಂತೆ ಪ್ರೇರೇಪಿಸುತ್ತದೆ.

ಜೈಲಿನಲ್ಲಿರುವ ಖೈದಿಗಳು ದ್ವೀಪದಲ್ಲಿಯೂ ಅಪರಾಧವೆಸಗಿದರೆ ಅಥವಾ ಪಲಾಯನಕ್ಕೆ ಪ್ರಯತ್ನಿಸಿದರೆ ಅಂತಹವರನ್ನು ಏಕಾಂತ ಶಿಕ್ಷೆ ವಿಧಿಸಿ ಅವರನ್ನು ಒಳ್ಳೆಯವರಾಗಲು ಅವಕಾಶ ಕೊಡದೆ, ನಿಷ್ಪ್ರಯೋಜಕರನ್ನಾಗಿಸಿ ಅಲ್ಲಿಯೇ ಸಾಯುವಂತೆ ಮಾಡುವುದೇ ಕ್ರೂರ ಶಿಕ್ಷೆ. ಕತ್ತಲೆಯ ಬಂಧಿಖಾನೆಯಲ್ಲಿ ಕೈ ತೂರುವುದಕ್ಕೆ ಮಾತ್ರ ಇರುವ ಕಿಂಡಿಯ ಬೆಳಕಿನಲ್ಲಿ ಅರೆ ಜೀವವಾಗಿ, ಉಸಿರಾಟಕ್ಕೂ ಹಪಹಪಿಸುವ ಆ ರೌದ್ರ, ಭೀಕರ ಬದುಕಿನಲ್ಲೂ ಪ್ಯಾಪಿಗೆ ಉಳಿದಿರುವುದು ತನ್ನನ್ನು ಅನಗತ್ಯ ಅಪರಾಧಿಯನ್ನಾಗಿಸಿದವರ ಮೇಲಿನ ದ್ವೇಷವೊಂದೇ. ಅಂತಹ ಕೂಪದಲ್ಲಿ ಖೈದಿ ಬದುಕುಳಿಯುವುದೇ ಆಶ್ಚರ್ಯ. ಆದರೂ ಪ್ಯಾಪಿ ಛಲಗಾರ ಅಲ್ಲಿಂದಲೂ ತಪ್ಪಿಸಿಕೊಳ್ಳುತ್ತಾನೆ.

ಸಲಿಂಗಕಾಮ, ಜೈಲರ್ಗಳ ಮನಗೆಲ್ಲಲು ಹಣವನ್ನು ಸಣ್ಣ ಟಾರ್ಚುಗಳಲ್ಲಿರಿಸಿ ಗುದದೊಳಗೆ ಅದನ್ನು ಇಟ್ಟುಕೊಳ್ಳುವುದು, ಸಿಗರೇಟು, ಕುಡಿತಕ್ಕಾಗಿ ಹಪಹಪಿಸುವುದು, ಜೈಲಿನಲ್ಲಿ ನೀಡುವ ಕೆಲಸಗಳನ್ನು ಮಾಡಲು ನಿಶಕ್ತರಾಗಿ ಕ್ರೂರ ಶಿಕ್ಷೆಗೆ ಗುರಿಯಾಗುವುದು ಮನುಷ್ಯ ಜಾತಿಗೆ ಬೇಡವಾದ ಕಷ್ಟ ಕೋಟಲೆಗಳು. ಆದರೆ ಧೈರ್ಯಗೆಡದೆ ಪ್ಯಾಪಿ ತಾನು ಸೇಡು ತೀರಿಸಿಯೇ ಕೊಳ್ಳುತ್ತೇನೆ ಅನ್ನುತ್ತಾ ಹದಿಮೂರು ವರ್ಷಗಳನ್ನು ಜೈಲಿನಲ್ಲಿಯೇ ಕಳೆಯುತ್ತಾನೆ.

ಒಬ್ಬ ಸಹಖೈದಿಯ ಕೊಲೆಯಾದಾಗ ಖೈದಿಗಳ ಬದುಕು ನಾಯಿಪಾಡಿಗಿಂತಲೂ ಕಡೆಯೇ? ಸರಕಾರಕ್ಕೆ ಅದನ್ನು ಸರಿಮಾಡಲು ಸಾಧ್ಯವಿಲ್ಲವೇ? ಅನ್ನುವ ಪ್ರಶ್ನೆಯೊಂದಿಗೆ ‘ಪ್ಯಾಪಿಲಾನ್’ನ ಮೊದಲ ಭಾಗ ಮುಗಿಯುತ್ತದೆ. ಇಲ್ಲಿ ಖೈದಿಯೊಬ್ಬನ ಸಾಹಸಯಾತ್ರೆ ಮಾತ್ರವಲ್ಲ, ರೋಮಾಂಚನಗೊಳಿಸಬಲ್ಲ ಸಾವು- ಬದುಕು- ಹೋರಾಟ-ಸೇಡಿನ ಜ್ವಾಲೆಯೂ

No comments: