Thursday, June 10, 2010

ಆಂಟನ್ ಚೆಕಾಫ್ ಕಥೆಗಳು


ಸಣ್ಣ ಕಥಾ ಪ್ರಕಾರವೆಂದಕೂಡಲೇ ನೆನಪಾಗುವುದು ಆಂಟನ್ ಚೆಕಾಫ್. ಸರಳ ಬರವಣಿಗೆಯಿಂದ ಬದುಕಿನ ಮೌಲ್ಯಗಳನ್ನು ಲೇವಡಿಯ ಮೂಲಕ ತೆರೆದಿಡುವ ಚೆಕಾಫ್‌ನ ಕಥೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಒಂದು ಸವಾಲು. ವರ್ಗ ನೀತಿಯ ತಾರತಮ್ಯವನ್ನು, ನೋವು, ಹತಾಶೆಗಳನ್ನು ಮನಮುಟ್ಟುವ ರೀತಿಯಲ್ಲಿ ಬರೆದ ಚೆಕಾಫ್‌ನನ್ನು ಓದಿಕೊಳ್ಳುವುದು ಒಂದು ಸುಂದರ ಅನುಭವವೆಂದರೆ ತಪ್ಪಲ್ಲ. ಇಂದಿನ ದಿನ ಪತ್ರಿಕೆಗಳು ಬಯಸುವ ರೀತಿಯಲ್ಲಿ ಆಗಲೇ ಚೆಕಾಫ್ ಪುಟಗಳ ಮಿತಿಯಲ್ಲಿ ಸಣ್ಣ ಕಥೆಗಳನ್ನು ಬರೆದರೂ, ಅವುಗಳ ಆಳವನ್ನು ತಿಳಿದುಕೊಳ್ಳಬೇಕಾದರೆ ಕಥೆ ಓದಿದ ಬಳಿಕ ನಮ್ಮನ್ನು ಒರೆಗೆ ಹಚ್ಚುವುದನ್ನು ತಿಳಿಯಬಹುದು. ಒಂದು ಉದಾಹರಣೆ ಕೊಡುವುದಾದರೆ ‘ಊಸರವಳ್ಳಿ’ ಕಥೆ. ಒಂದು ನಾಯಿ ಒಬ್ಬ ಕುಡುಕ ಬಡಗಿಯ ಕೈಬೆರಳನ್ನು ಕಚ್ಚಿದಾಗ ಸಿಟ್ಟಿಗೆದ್ದ ಬಡಗಿ ಆ ನಾಯಿಯನ್ನು ಒಂದು ಗತಿ ಕಾಣಿಸಬೇಕೆಂದು ಹಾತೊರೆಯುತ್ತಿರುವಾಗ ಪೊಲೀಸ್ ಅಧಿಕಾರಿ ಅಲ್ಲಿಗೆ ಬಂದು ತನಿಖೆ ನಡೆಸುತ್ತಾನೆ. ಬಡಗಿಯ ಮೇಲಿದ್ದ ಕನಿಕರ ಕ್ರಮೇಣ ಕರಗಿ ಆ ನಾಯಿಯ ಒಡೆಯನ ಮೇಲೆ ತಿರುಗಿ ಕೊನೆಗೆ ಆತ ಬಹುಗೌರವಸ್ಥ ವ್ಯಕ್ತಿಯೆಂದು ತಿಳಿದ ಮೇಲೆ ಆ ಅಭಿಪ್ರಾಯ ಮತ್ತೆ ಬಡಗಿಯತ್ತ ತಿರುಗುತ್ತದೆ. ಹೀಗೆ ಕ್ಷಣ ಕ್ಷಣವೂ ಸನ್ನಿವೇಶ ಬದಲಾಗುತ್ತಾ ಹೋಗುವುದನ್ನು ಗಾಳಿ ಬಂದ ಕಡೆಗೆ ಕೊಡೆ ಹಿಡಿಯುವ ಮಾತಿನಂತೆ ಕಾಣಿಸುತ್ತದೆ. ಅರಗಿಸಿಕೊಳ್ಳಲು ಭಾರವೆನಿಸದ ಇಲ್ಲಿಯ ಎಲ್ಲಾ ಕಥೆಗಳು ಬಹಳ ಸ್ವಾರಸ್ಯಕರ ಮತ್ತು ಜೀವನದ ಮೌಲ್ಯಗಳನ್ನು ಸೂಕ್ಷ್ಮವಾಗಿ ತೋರಿಸುತ್ತಾ ಅಸಹಾಯಕತೆಯ ದನಿಯಾಗಿ ಮಾರ್ದನಿಸುತ್ತದೆ. "

‘ಭಿಕ್ಷುಕ’ ಕಥೆಯಲ್ಲಿ ಭಿಕ್ಷುಕ ಮತ್ತು ಕುಡುಕನಾಗಿದ್ದವನೊಬ್ಬ ಸುಳ್ಳು ಹೇಳಿಕೊಂಡು ದಿನಕಳೆಯಬೇಕೆಂದುಕೊಂಡರೂ ಅವನನ್ನು ಭಿಕ್ಷೆ ಬೇಡದೆ ದುಡಿದು ತಿನ್ನುವಂತೆ ಪ್ರಚೋದಿಸುವ ವ್ಯಕ್ತಿಯೊಬ್ಬ ಅವನನ್ನು ಕರೆದುಕೊಂಡು ಬಂದು ತನ್ನ ಮನೆಯಲ್ಲಿ ಕಟ್ಟಿಗೆ ಒಡೆಯುವ ಕೆಲಸಕ್ಕೆ ನೇಮಿಸುತ್ತಾನೆ. ಅದೃಷ್ಟವಶಾತ್ ಆ ವ್ಯಕ್ತಿಯ ಮಡದಿ ಒಳ್ಳೆಯವಳಾಗಿದ್ದು ಸೋಂಬೇರಿ ಭಿಕ್ಷುಕನನ್ನು ಹಿಯಾಳಿಸುತ್ತಾ ತಾನೆ ಕಟ್ಟಿಗೆಯನ್ನು ಒಡೆಯುತ್ತಾಳೆ. ಆ ಸತ್ಯ ಕೊನೆಗೆ ಅನಾವರಣವಾಗುವ ಹೊತ್ತಿಗೆ ಅವನಿಗೆ ಬೇರೊಂದು ಕಡೆ ಒಳ್ಳೆಯ ಕೆಲಸ ದೊರಕಿಸಿಕೊಡುತ್ತಾನೆ. ಆತ ಈ ವಿಷಯ ಅವನನ್ನು ಮತ್ತೊಮ್ಮೆ ಭೇಟಿಯಾದಾಗ ತಿಳಿಸುತ್ತಾನೆ. ಅವನ ಹೆಂಡತಿಯ ಬೈಗಳಿಂದ ಮತ್ತು ಅವಳ ಒಳ್ಳೆಯತನದಿಂದ ತಾನು ಕುಡಿತವನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿರುವುದಾಗಿ ಆ ಭಿಕ್ಷುಕ ಹೇಳುತ್ತಾನೆ.

ಒಂದು ಸೀನಿನಿಂದ ಕೀಳರಿಮೆಗೆ ತುತ್ತಾಗುವ ವ್ಯಕ್ತಿ ತಾನು ಯಾರ ಮೇಲೆ ಸೀನಿದೆನೋ ಆತನನ್ನು ಕ್ಷಮಾಪಣೆಗಾಗಿ ಕೇಳಿಕೊಳ್ಳುತ್ತಾನೆ. ಆತ ಕ್ಷಮಿಸಿದೆನೆಂದರೂ ಈತ ಬೆಂಬಿಡದೆ ಅದೇ ಭಾವೋದ್ವೇಗದಲ್ಲಿ ಅವನಿಗೆ ಕಾಟವಾಗಿ ಪರಿಣಮಿಸುತ್ತಾನೆ. ಕೊನೆಗೆ ಬೇಸತ್ತ ಅವನು ಗದರಿಸಿ ಅವನನ್ನು ಆಚೆಗೆ ತಳ್ಳುತ್ತಾನೆ. ಬಹಳ ತಮಾಷೆಯಾಗಿ ಇದು ‘ಅಧಿಕೃತ ಸಾವು’ ಕಥೆಯಲ್ಲಿ ಕಂಡರೂ ಇಲ್ಲಿ ವರ್ಗಭೇದದ ಗಾಢ ಸಂಬಂಧವಿರುವುದನ್ನು ಗಮನಿಸಬಹುದು. ‘ಶಾಂಪೇನ್’ ಕಥೆಯಲ್ಲಿ ಹತಾಶ ವ್ಯಕ್ತಿಯೊಬ್ಬ ಒಂಟಿ ಜೀವನ ನಡೆಸಿ ಬೇಸತ್ತು ಒಂದು ಹನಿ ಪ್ರೀತಿಗಾಗಿ ಹಂಬಲಿಸುವ ಚಿತ್ರಣವಿದೆ.

ಮನುಷ್ಯನ ನಿರ್ಧಾರಗಳು ಊಸರವಳ್ಳಿಯಂತೆ ಸದಾ ಬಣ್ಣ ಬದಲಾಯಿಸುವುದನ್ನು ‘ಊಸರವಳ್ಳಿ’ ಕಥೆ ತೆರೆದಿಡುತ್ತದೆ. ಒಬ್ಬ ಕುಡುಕ ಬಡಗಿಯ ಕೈ ಬೆರಳಿಗೆ ನಾಯಿಯೊಂದು ಕಚ್ಚಿ ಆತ ಅದಕ್ಕಾಗಿ ಪರಿಹಾರ ಪಡೆಯಬೇಕೆಂದುಕೊಳ್ಳುತ್ತಾನೆ. ಆದರೆ ಮಧ್ಯೆ ಪ್ರವೇಶಿಸುವ ಪೊಲೀಸ್ ಅಧಿಕಾರಿ ಮೊದಲಿಗೆ ಆತನ ಮೇಲೆ ಕನಿಕರ ಮೂಡಿದರೂ ಕ್ರಮೇಣ ಅದು ಊಸರವಳ್ಳಿ ಬಣ್ಣ ಬದಲಾಯಿಸಿದಂತೆ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಕುಡುಕ ಬಡಗಿಯದೇ ತಪ್ಪು ಅನ್ನುವುದು ಸಾಬೀತುಗೊಳಿಸುತ್ತಾನೆ.

ಪಟ್ಟಣದ ಕುಡುಕನೊಬ್ಬ ಸನ್ಯಾಸಿಗಳ ಆಶ್ರಮಕ್ಕೆ ಬಂದು ಮನುಷ್ಯರಲ್ಲಿ ಸತ್ಯ ಉಳಿದಿಲ್ಲ, ಅವರೆಲ್ಲಾ ಮೋಹದಲ್ಲಿ ಮುಳುಗಿರುವುದಾಗಿಯೂ ಅವರನ್ನು ಇದರಿಂದ ಮುಕ್ತಿ ಹೊಂದುವಂತೆ ಯಾರು ಭೋದಿಸುತ್ತಾರೆಂದು ಕೇಳುವಾಗ ಆಲೋಚನೆಗೊಳಗಾದ ಸನ್ಯಾಸಿ ಗುರು ಪಟ್ಟಣಕ್ಕೆ ಹೋಗಿ ಅಲ್ಲಿಯ ಸ್ಥಿತಿಯನ್ನು ಅಧ್ಯಯನ ಮಾಡುತ್ತಾನೆ. ತನ್ನ ಕೈಯಿಂದ ಅದನ್ನು ಸರಿಪಡಿಸಲಾಗದೆ ಆತ ಆಶ್ರಮಕ್ಕೆ ಹಿಂತಿರುಗಿ ಉಳಿದ ಸನ್ಯಾಸಿಗಳಿಗೆ ಅಲ್ಲಿಯ ನಗ್ನ ಸ್ತ್ರೀಯರು, ಕುಡಿತದ ಬಗ್ಗೆ ಮತ್ತು ಅಲ್ಲಿಯ ಸ್ಥಿತಿಗತಿಗಳನ್ನು ತಿಳಿಸುತ್ತಾನೆ. ಮರುದಿನ ಆತ ಆಶ್ರಮಕ್ಕೆ ಹಿಂತಿರುಗುವಾಗ ಅಲ್ಲಿ ಒಬ್ಬನೇ ಒಬ್ಬ ಸನ್ಯಾಸಿ ಉಳಿದಿರುವುದಿಲ್ಲ. ಎಲ್ಲರೂ ಪಟ್ಟಣದ ಕಡೆಗೆ ಹೋಗಿರುತ್ತಾರೆ. ಕ್ಷಣಿಕ ಸುಖದತ್ತ ವಾಲುವ ಮನಸ್ಸನ್ನು ‘ಒಂದು ಹೆಸರಿಲ್ಲದ ಕಥೆ’ ಯಲ್ಲಿ ಕಾಣಬಹುದು.

ಅಪರಾಧಿಯಾದರೂ ತನ್ನ ಹೆಸರು ಪತ್ರಿಕೆಯಲ್ಲಿ ಬಂತೆನ್ನುವ ಖುಷಿಯನ್ನು ಹಂಚಿಕೊಳ್ಳುವ ಕಥೆ ‘ಖುಷಿ’. ವಾಸ್ತವವನ್ನು ನೆಚ್ಚಿಕೊಂಡರೂ ಕನಸುಗಳತ್ತ ವಾಲುವ ಮನುಷ್ಯ ಅದೃಷ್ಟ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹ ಲಕ್ಷಣಗಳುಳ್ಳ ಒಬ್ಬ ಚಮ್ಮಾರ ಕನಸು ಕಾಣುತ್ತಾ ವಾಸ್ತವವನ್ನು ಮರೆತು ಬಿಡುತ್ತಾನೆ. ಅವನಿಗಾಗುವ ಕನಸಿನ ಅನುಭವ ‘ಚಮ್ಮಾರ ಮತ್ತು ಭೂತ’ ಕಥೆಯಲ್ಲಿ ವ್ಯಕ್ತವಾಗಿದೆ. ಬಡ ಕುಟುಂಬವೊಂದರ ಜವಾಬ್ದಾರಿಯಿಲ್ಲದ ಕುಡುಕ ಯಜಮಾನನ ದುರಭ್ಯಾಸಗಳನ್ನು ಚಿತ್ರಿಸುವ ಕಥೆ ‘ಹಳೆಯ ಮನೆ’. ಕುಡಿತದಿಂದ ಮುಕ್ತಿ ಹೊಂದುವ ನಿರ್ಧಾರವಿದ್ದರೂ ಅವಕಾಶ ಎದುರಾದಾಗ ತನ್ನ ಚಾಳಿಯನ್ನು ಮುಂದುವರಿಸುವ ಯಜಮಾನ ಕೊನೆಗೂ ಬದಲಾಗುವುದೇ ಇಲ್ಲ.

ಈ ಸಂಕಲನದ ಉಸಿರು ಬಿಗಿ ಹಿಡಿದು ಓದಿಸಿಕೊಂಡು ಹೋಗುವ ಕಥೆ ‘ಪಣ’. ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ಇವೆರಡರಲ್ಲಿ ಯಾವುದು ಮಾನವೀಯ ಮತ್ತು ನೈತಿಕವಾದುದೆಂಬ ಪ್ರಶ್ನೆಯೊಡ್ಡುವ ಪಣ, ಪಣ ಒಡ್ಡುವವನನ್ನು ಮತ್ತು ಒಪ್ಪಿಕೊಂಡವರಿಬ್ಬರ ಕಣ್ಣನ್ನೂ ತೆರೆಸುವ ಕಥೆ. ದುಡ್ಡಿನ ಅಗತ್ಯಕ್ಕಾಗಿ ಪಂಥವನ್ನು ಸ್ವೀಕರಿಸುವ ವ್ಯಕ್ತಿ, ಷರತ್ತಿನ ಪ್ರಕಾರ ಹದಿನೈದು ವರ್ಷಗಳಷ್ಟೂ ದೀರ್ಘ ಅವಧಿಯಲ್ಲಿ ಸೆರೆವಾಸದಲ್ಲಿದ್ದು ಏಕಾಂತವಾಗಿ ಜೀವಿಸುವುದನ್ನು ಸಾಬೀತು ಮಾಡುತ್ತಾನಾದರೂ. ಏಕಾಂತದಲ್ಲಿದ್ದುಕೊಂಡೇ ಜೀವನದ ಮೌಲ್ಯಗಳನ್ನು ಕಂಡುಕೊಂಡು ಮುಂದೊಂದು ದಿನ ನಿಶ್ಶಕ್ತನಾಗಿ ಒಂದು ಚೀಟಿ ಬರೆದಿಡುತ್ತಾನೆ. ಪಣದ ಕೊನೆಯ ದಿನ ಪಂಥಕ್ಕೊಡಿದವನು ತನ್ನ ಇಪ್ಪತ್ತು ಲಕ್ಷಗಳು ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವನನ್ನು ಅಲ್ಲಿಯೇ ಮಲಗಿಸಿ ಉಸಿರುಗಟ್ಟಿಸಿ ಸಾಯಿಸುವ ಯೋಚನೆಯನ್ನು ಮಾಡುತ್ತಾನೆ. ಆದರೆ ಆತ ಬರೆದಿಟ್ಟ ಚೀಟಿಯನ್ನು ನೋಡಿ ಆಘಾತಕ್ಕೊಳಗಾಗುತ್ತಾ ಜೀವನ ಮೌಲ್ಯವನ್ನು ಮತ್ತು ದುರಾಸೆಗಳ ಮಿಥ್ಯೆಯನ್ನು ಕಂಡುಕೊಳ್ಳುತ್ತಾನೆ. ಈ ಸಂಕಲದ ಅತ್ಯುತ್ತಮ ಕಥೆಯಿದು.

ನಾಯಿಯೊಡತಿಯ ಪ್ರೀತಿಗೆ ಬೀಳುವ ವ್ಯಕ್ತಿ ಅವಳನ್ನು ಹೇಗಾದರೂ ತನ್ನವಳನ್ನಾಗಿಸಿಕೊಳ್ಳುವುದಕ್ಕೆ ಹಂಬಲಿಸುತ್ತಾನೆ. ಕೊನೆಗೂ ಪ್ರೀತಿಗೆ ಸೋಲಲೇಬೇಕಾದ ಅವರಿಬ್ಬರೂ ಬದುಕಿನ ಜಟಿಲ ಮತ್ತು ಕಷ್ಟಕರ ಬದುಕು ತಾವು ಒಂದಾದ ಮೇಲೆ ಆರಂಭವಾಗುವುದೆನ್ನುವ ಅನುಭವವಿದ್ದರೂ ಅಗಲಿರಲಾರರು. ಇದು ‘ನಾಯಿಯೊಡತಿ’ ಕಥೆ. ‘ಮನೆ’ ಕಥೆಯಲ್ಲಿ ತಪ್ಪು ದಾರಿಗಿಳಿದ ಮಗನನ್ನು ತಿದ್ದುವ ತಂದೆಯ ಒದ್ದಾಟವನ್ನು ಮಾರ್ಮಿಕವಾಗಿ ಬಿಂಬಿಸಲಾಗಿದೆ. ಯಾವ ರೀತಿಯಲ್ಲಿ ಆ ತಪ್ಪನ್ನು ಮಗನಿಗೆ ಸ್ಪಷ್ಟಪಡಿಸಬೇಕೆನ್ನುವುದು ತಿಳಿಯದ ಜವಾಬ್ದಾರಿಯುತ ತಂದೆಯೊಬ್ಬನ ಅಳಲು ಇಲ್ಲಿದೆ. ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿಯಿರುವ ಹೆಂಗಸು ಹೊಟೇಲ್‌ನಲ್ಲಿ ಉಳಿದುಕೊಂಡು ಒಬ್ಬ ಡ್ರೈವರ್‌ನ ಕೊಳಕು ಮಾತುಗಳನ್ನು ಕೇಳಬೇಕಾಗುತ್ತದೆ. ಹೊಟೇಲ್ ಮಾಲೀಕನಿಗೆ ದೂರು ಕೊಟ್ಟು ಅವನನ್ನು ಅಲ್ಲಿಂದ ಓಡಿಸುವ ತಂತ್ರ ಹೂಡಿದರೂ ಕೊನೆಗೆ ಆತ ಒಳ್ಳೆಯವನೆಂದು ತಿಳಿಯುತ್ತಲೇ ಆತ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನಾದರೂ ಮದುವೆಯಾಗಲಿ ಎಂದು ಚಡಪಡಿಸುತ್ತಾಳೆ. ಇದು ‘ಹೊಟೇಲಿನಲ್ಲಿ’ ಕಥೆಯ ಸಾರಾಂಶ.

ಹೀಗೆ ಒಟ್ಟು ಹನ್ನೆರಡು ಕಥೆಗಳಿರುವ ಈ ಸಂಕಲನವನ್ನು ಕನ್ನಡಭಿಮುಖಿಯಾಗಿಸಿದವರು ಮಹಾಬಲ ಸೀತಾಳಭಾವಿ ಅವರು. ಈ ಕೃತಿಯನ್ನು ಅಂಕಿತ ಪುಸ್ತಕ, ಬೆಂಗಳೂರು ಇವರು ಹೊರ ತಂದಿದ್ದಾರೆ.

Read more!

Sunday, June 6, 2010

ಡಾ. ಕೆ. ಎನ್. ಗಣೇಶಯ್ಯ ಅವರ ‘ಪದ್ಮಪಾಣಿ’


ತಮ್ಮ ವಿಶಿಷ್ಟ ಕಥನ ಶೈಲಿಯಿಂದ ಕನ್ನಡದ ಕಥಾಪ್ರಕಾರದಲ್ಲಿ ಗುರುತಿಸಿಕೊಂಡಿರುವ ಡಾ. ಕೆ. ಎನ್. ಗಣೇಶಯ್ಯನವರ ಇತ್ತೀಚಿನ ಕಥಾಸಂಕಲನ ‘ಪದ್ಮಪಾಣಿ’. ಎಂಟು ಕಥೆಗಳನ್ನೊಳಗೊಂಡಿರುವ ಈ ಸಂಕಲನದಲ್ಲಿ ‘ಉಗ್ರಬಂಧ’ ಮತ್ತು ‘ಮಲಬಾರ್ ೦೭’ ಕಥೆಗಳನ್ನುಳಿದು ಉಳಿದ ಆರು ಕಥೆಗಳು ಚರಿತ್ರೆ ಮತ್ತು ಚರಿತ್ರೆಯ ಚೌಕಟ್ಟಿನೊಳಗೆ ಬೆಳೆದು ಅವುಗಳಿಗೆ ಆಧಾರ ಸಹಿತ ಸಮರ್ಥಿನೆ ನೀಡುವ ರೀತಿ ಕಥಾ ಬೆಳವಣಿಗೆಯಲ್ಲಿ ಕೂತುಹಲವನ್ನು ಹುಟ್ಟಿಸುತ್ತದೆ. ಎಂದೋ ಚರಿತ್ರೆಯ ಕೆಲವು ಘಟನೆಗಳನ್ನು, ವ್ಯಕ್ತಿಗಳನ್ನು ಪಠ್ಯ ಪುಸ್ತಕದಲ್ಲಿಯೋ, ಕಥೆ ಪುಸ್ತಕಗಳಲ್ಲಿಯೋ ಅಲ್ಪ ಸ್ವಲ್ಪ ಓದಿರುವ ನಮಗೆ ಅದಕ್ಕಿಂತಲೂ ಬೇರೆಯದೇ ಆದ ಸಂಭವಗಳನ್ನು ತಮ್ಮ ಕಥೆಯ ಮೂಲಕ ತೆರೆದಿಡುತ್ತಾರೆ ಡಾ. ಗಣೇಶಯ್ಯನವರು. "

ಪದ್ಮಪಾಣಿ ಕಥಾ ಸಂಕಲನದಲ್ಲಿ ಚರಿತ್ರೆಯ ಹಿಂದಿರುವ ಕಟು ಸತ್ಯಗಳನ್ನು ಸಮರ್ಥಿಸುತ್ತಾ (ಇಲ್ಲಿ ಅವರು ಅಧ್ಯಯನ ಮಾಡಿರುವ ಆಕರ ಗ್ರಂಥಗಳ ಬಗ್ಗೆಯೂ ತಿಳಿಸಿದ್ದಾರೆ) ಕಥೆಯನ್ನು ಬಿಚ್ಚಿಡುತ್ತಾರೆ. ಅಜಂತಾದ ಗುಹೆಗಳಲ್ಲಿಯ ವೈಶಿಷ್ಟ್ಯವನ್ನು ‘ಪದ್ಮಪಾಣಿ’ ಕಥೆಯ ಮೂಲಕ ಬಹಳ ವಾಸ್ತವಿಕವಾಗಿ ಹೇಳುತ್ತಾರೆ.

‘ಕೆರಳಿದ ಕರುಳು’ ಕಥೆಯಲ್ಲಿ ದಂತಕತೆಯಾಗಿರುವ ಪಾಲುಕ್ಕಮ್ಮ ದೇವತೆಯ ಹಿನ್ನಲೆಯನ್ನಾಧರಿಸಿ, ಆಕೆಗೆ ಆಗಿರುವ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಹೆಣ್ಣೊಬ್ಬಳ ಚಿತ್ರಣವಿದೆ. ಕೇವಲ ಜಾನಪದ ಹಾಡಿನ ದಾಟಿಯನ್ನು ಹಿಡಿದು ಕಥೆಯೊಂದನ್ನು ಹೆಣೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಮೈಸೂರಿನ ಅರಸರಿಗೆ ಮಕ್ಕಳಿಲ್ಲ ಅನ್ನುವ ಕುರಿತು ಸಂಶೋಧನೆಗಿಳಿದು ಅವರಿಗಿರುವ ಶಾಪದ ಹಿನ್ನಲೆಯನ್ನು ಅರಿತು ಅದನ್ನು ವೈಜಾನಿಕವಾಗಿ ಸಮರ್ಥಿಸುವ ಕಥೆ ‘ಮರಳ ತೆರೆಯೊಳಗೆ’. ಕಥೆಗಳಿಗೆ ಪೂರಕವಾದ ಚಿತ್ರಗಳನ್ನು ಒಳಗೊಂಡಿರುವ ಈ ಸಂಕಲನದ ಇನ್ನೊಂದು ಕಥೆ ‘ಕಿತ್ತೂರ ನಿರಂಜನಿ’. ಕಿತ್ತೂರನ್ನು ಆಳಿದ ೧೪ ರಾಜ ವಂಶದ ಹೆಸರುಗಳಲ್ಲಿ ೯ನೇಯ ರಾಜನ ಹೆಸರು ಮಾಳವ ರುದ್ರ ಗೌಡ ಉರ್ಫ್ ಫಕೀರರುದ್ರಸರ್ಜ ಒಂದು ಮುಸ್ಲಿಂ ಹೆಸರಿನಂತಿದ್ದು ಅದರ ಜಾಡಿನಲ್ಲಿ ಸಾಗುವ ಕಥೆ. ಬಹಳ ಕುತೂಹಲ ಮತ್ತು ಅಷ್ಟೇ ದುರಂತವಾಗಿರುವುದು ವಿಷಾದನೀಯ.

ಬೇಲೂರಿನ ಶಿಲಾಬಾಲಿಕೆಯರಿಗೆ ಮನಸೋಲದವರು ಯಾರು ಇಲ್ಲ. ಇಲ್ಲಿಯ ಆ ಶಿಲಾಬಾಲಿಕೆಯರ ಕೆತ್ತನೆಯ ಹಿಂದೆ ಒಂದು ದೀರ್ಘ ಕಥೆಯಿರುವುದು ಸೋಜಿಗ. ಇಲ್ಲಿಯ ಶಿಲಾ ಕೆತ್ತನೆಗೆ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲೆಯೇ ರೂಪದರ್ಶಿನಿಯಾಗಿದ್ದಳೆ? ಅನ್ನುವುದು ಕೌತುಕ. ವಿಷ್ಣುವರ್ಧನ ಜೈನ ಧರ್ಮವನ್ನು ತ್ಯಜಿಸಿ ವೈಷ್ಣವ ಧರ್ಮಸ್ವೀಕಾರ ಮಾಡಿದರೂ ಶಾಂತಲೆ ಜೈನಧರ್ಮದಲ್ಲಿದ್ದುಕೊಂಡೇ ಚವಣ ಮತ್ತು ಆತನ ತಂದೆ ದಾಸೋಜರಿಂದ ತನ್ನ ಹುಟ್ಟೂರಾದ ಬಳ್ಳಿಗಾವೆಯಿಂದಲೇ ಮದನಿಕೆಯರ ಪ್ರತಿಮೆಗಳನ್ನು ಮಾಡಿ ಬೇಲೂರಿಗೆ ತರಲಾಗುತ್ತಾದರೂ ಅದರ ಹಿನ್ನಲೆಯನ್ನು ತಿಳಿದುಕೊಳ್ಳುವಲ್ಲಿ ವಿಷ್ಣುವರ್ಧನ ಆಸಕ್ತನಾಗುತ್ತಾನೆ. ಮದನಿಕೆಗಳ ಹಿಂದೆ ಶಾಂತಲೆಯದೇ ನಾಟ್ಯ ಭಂಗಿಗಳಿರುವುದು ಸ್ಪಷ್ಟವಾಗುತ್ತದೆ. ದುರಂತದಲ್ಲಿಯೇ ಕಥೆ ಮುಗಿಯುತ್ತದೆಯಾದರೂ ಬಿಚ್ಚಿಕೊಳ್ಳುವ ಕಥೆ ಅಪೂರ್ವವೆನಿಸುತ್ತದೆ.

‘ಧರ್ಮಸ್ಥಂಭ’, ಸಾಂಚಿಯಲ್ಲಿರುವ ಅರ್ಧ ಮುರಿದ ಕಂಭದ ಹಿಂದಿರುವ ದುರಂತ ಕಥೆಯೊಂದನ್ನು ಬಿಚ್ಚಿಡುತ್ತದೆ. ಬೌದ್ಧ ಧರ್ಮದ ವೈಚಾರಿಕತೆ ಮತ್ತು ತಾತ್ವಿಕ ಚಿಂತನೆಗಳನ್ನು ಸೂಕ್ಷ್ಮವಾಗಿ ವಾದಿಸುತ್ತಾ ಮಾದ್ರಿಯ ಮಾತುಗಳ ಮೂಲಕ ಸಮರ್ಥಿಸುತ್ತಾ ಸಾಗುವ ಕಥೆ ಎಂತಹವರನ್ನು ಒಮ್ಮೆ ಚಿಂತನೆಗೆ ಹಚ್ಚುತ್ತದೆ.

‘ಅತ್ತಿಯ ಮರ ಹೂಬಿಡುವುದಿಲ್ಲ, ಬಿಟ್ಟರೂ ರಾತ್ರಿಯ ಹೊತ್ತು ಅರಳುತ್ತದೆ’ ಇದು ನಾವು ಸಣ್ಣವರಿದ್ದಾಗ ಕೇಳಿದ ಮಾತುಗಳು. ಅದರ ವೈಜಾನಿಕ ಸತ್ಯ ‘ಮಲಬಾರ್ ೦೭’ ಕಥೆಯ ಮೂಲಕ ತಿಳಿಯುತ್ತದೆ. ವಿಚಿತ್ರ ಅಂದರೆ ಅತ್ತಿಯ ಕಾಯಿಯ ಒಳಗಡೆಯೇ ಹೂವಿದ್ದು ಪರಾಗ ಕ್ರಿಯೆ ನಡೆಸಲು ಒಂದು ರೀತಿಯ ಕಣಜ ಕಾಯಿಯಲ್ಲಿರುವ ತೂತಿನ ಮೂಲಕ ಒಳಹೊಕ್ಕು, ಅಲ್ಲಿಯೇ ಮೊಟ್ಟೆಗಳನ್ನಿಡುತ್ತದೆ. ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪರಿಸರ ನಾಶಗೊಳಿಸುವ ಅಮೆರಿಕದ ತಂತ್ರವನ್ನು ವಿಫಲಗೊಳಿಸುವ ಕಥೆಯಿದು. ಇದೇ ರೀತಿ ‘ಉಗ್ರಬಂಧ’ ಕಥೆಯಲ್ಲಿ ವಿಕಾಸವಾದದ ಹೊಸ ತತ್ವ ತಾಯಿ ಮಕ್ಕಳ ಕಲಹ (Parent- Offspring Conflict) ಅನ್ನು ಪ್ರತಿಪಾದಿಸಿ ಮನುಷ್ಯ ಸಂಬಂಧಗಳನ್ನು ಜಾತೀಯತೆಯ ಚೌಕಟ್ಟನ್ನು ಮೀರಿ ಪ್ರಸ್ತುತ ಪಡಿಸುತ್ತದೆ.

ಇಂತಹ ಅಪರೂಪದ ಸಾಹಿತ್ಯವನ್ನು ಕೊಡುತ್ತಿರುವ ಡಾ. ಗಣೇಶಯ್ಯ ಅವರ ಕೃತಿಗಳನ್ನು ಓದಲೆಬೇಕು ಮತ್ತು ಅವರ ಸಾಹಿತ್ಯ ಕೃಷಿಯನ್ನು ಮೆಚ್ಚಲೇಬೇಕು. ಈ ಕೃತಿಯನ್ನು ಅಂಕಿತ ಪುಸ್ತಕದವರು ಹೊರ ತಂದಿದ್ದಾರೆ. ಇದರ ಬೆಲೆ ಕೇವಲ ರು. ೧೨೦/- ಮಾತ್ರ.

Read more!

Wednesday, June 2, 2010

ರಸವಿದ್ಯೆಯ ಪಥದಲ್ಲಿ ವ್ಯಕ್ತಿ ವಿಕಾಸದ ಸೂತ್ರ - ದ ಅಲ್ಕೆಮಿಸ್ಟ್


ರಸವಿದ್ಯೆಯಿಂದ ವಸ್ತುಗಳನ್ನು ಚಿನ್ನವಾಗಿಸುವ ತಂತ್ರವನ್ನು ಕಲಿಯುವುದಕ್ಕಿಂತಲೂ ನಮ್ಮ ನಡುವೆ ಘಟಿಸುವ ಆಗು ಹೋಗುಗಳನ್ನು ಅಧ್ಯಯನ ಮಾಡುತ್ತಾ ಬಂದರೆ ಅದಕ್ಕಿಂತಲೂ ಉತ್ತಮವಾದ ಜೀವನಾನುಭವ ಬೇರೊಂದಿಲ್ಲ ಅನ್ನುವ ಸಂದೇಶವನ್ನು ಪರೋಕ್ಷವಾಗಿ ತೆರೆದಿಡುವ ಪೌಲೋ ಕೊಯೆಲ್ಹೋ ಅವರ ಕಾದಂಬರಿ ‘ದ ಅಲ್ಕೆಮಿಸ್ಟ್’

ಮನುಷ್ಯ ತನ್ನ ಆತ್ಮದ ಜೊತೆಗೆ ಸಂಭಾಷಿಸುತ್ತಾ, ಜೀವನಾನುಭವಗಳನ್ನು ಪರಾಮರ್ಶಿಸುತ್ತಾ, ತನ್ನೊಳಗೆ ಅವುಗಳೆಲ್ಲವನ್ನೂ ಮಂಥಿಸುತ್ತಾ ಮುನ್ನಡೆದರೆ ಅವನು ಎಲ್ಲರಿಗೂ ತಿಳಿಯುವ ಮತ್ತು ಎಲ್ಲರನ್ನೂ ಅರ್ಥೈಸಿಕೊಳ್ಳಬಹುದಾದ ವಿಶ್ವ ಭಾಷೆಯನ್ನು ಕಲಿಯಬಹುದೆಂದು ಸಾರುತ್ತಾನೆ ಕಾದಂಬರಿಕಾರ. ಇಲ್ಲಿ ವಿಶ್ವ ಭಾಷೆಯನ್ನು ಅರಿತರೆ ಮೂಕ ಪ್ರಾಣಿಗಳು ಮಾತ್ರವಲ್ಲ, ನಿರ್ಜೀವ ವಸ್ತುಗಳನ್ನೂ ಅರ್ಥ ಮಾಡಿಕೊಳ್ಳಬಹುದೆನ್ನುವ ಸತ್ಯದ ಅನಾವರಣವಾಗುತ್ತದೆ."

ಈ ಕಾದಂಬರಿಯಲ್ಲಿ ಪಾದ್ರಿಯಾಗಲೆಂದು ಹೊರಟ ಹುಡುಗ ಸ್ಯಾಂಟಿಯಾಗೋ ವಿಶ್ವ ಪರ್ಯಟನೆ ಮಾಡಬೇಕೆನ್ನುವ ಹಂಬಲದಿಂದ ತನ್ನ ತಂದೆಯ ಬಳಿ ವಾದ ಮಾಡಿ ಅವರಿಂದ ಚಿನ್ನದ ನಾಣ್ಯಗಳನ್ನು ಪಡೆದುಕೊಂಡು, ‘ಒಬ್ಬ ಕುರುಬನಾದರೆ ಮಾತ್ರ ದೇಶ ಸಂಚಾರ ಮಾಡಬಹುದು’ ಎನ್ನುವ ತಂದೆಯ ಮಾತಿನಂತೆ ಕುರಿಗಳನ್ನು ಕೊಂಡುಕೊಂಡು ಸಂಚಾರ ಆರಂಭಿಸುತ್ತಾನೆ. ಎಲ್ಲರಿಗೂ ಅರ್ಥವಾಗುವ ವಿಶ್ವ ಭಾಷೆ ಅಂದರೆ ತಿಳುವಳಿಕೆಯ ಜ್ಞಾನವನ್ನು ಪಡೆದುಕೊಂಡು ಬದುಕುತ್ತಿರುವ ಹೊತ್ತಿಗೆ ಕನಸೊಂದನ್ನು ಕಾಣುತ್ತಾನೆ. ಒಂದು ಮಗು ಆತನನ್ನು ಕರೆದುಕೊಂಡು ಪಿರಮಿಡ್ನ ಬಳಿ ನಿಲ್ಲಿಸಿದಂತೆ ಆ ಕನಸು. ಅದೇ ಮತ್ತೊಮ್ಮೆ ಕಾಣಿಸಿದಾಗ ಆ ಹುಡುಗ ತಾನು ಕಂಡ ಕನಸಿನ ಅರ್ಥವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಹೀಗೆ ಆ ಕನಸಿನ ಅರ್ಥ, ಪಿರಮಿಡ್ನ ಬಳಿ ಇರುವ ಗುಪ್ತ ನಿಧಿಯ ಕುರಿತಾಗಿದೆ ಅನ್ನುವ ಅಭಿಪ್ರಾಯ ತಿಳಿದ ಬಳಿಕ ಈಜಿಪ್ಟನ್ನು ಸೇರುವ ತುಡಿತದಿಂದ ಆತನ ಪ್ರಯಾಣ ಮುಂದುವರಿಯುತ್ತದೆ. ತನ್ನ ಮಾಮೂಲು ವಾಸಸ್ಥಾನವಾದ ಪಾಳು ಬಿದ್ದ ಚರ್ಚ್ನಿಂದ ಆತನ ಪ್ರಯಾಣ ಆರಂಭವಾಗುತ್ತದೆ. ತನ್ನ ಕುರಿಗಳಿಂದ ತಾನು ವಿಶ್ವ ಭಾಷೆಯನ್ನು ಕಲಿತಿರುವೆಂದು ತಿಳಿಯುವ ಹುಡುಗ, ಬಳಿಕ ತನ್ನ ಹೃದಯದ ಪಿಸುನುಡಿಗಳನ್ನು ಆಲಿಸುವ ಮೂಲಭೂತ ವಿವೇಕವನ್ನು, ಜೀವನ ಪಥದಲ್ಲಿ ಹರಡಿರುವ ಶಕುನಗಳನ್ನು ಗುರುತಿಸುವ ಮತ್ತು ತನ್ನ ಕನಸನ್ನು ಸಾಕಾರಗೊಳಿಸುವುದನ್ನೂ ಅರಿತುಕೊಳ್ಳುತ್ತಾನೆ.

ತನ್ನ ಪ್ರಯಾಣಕ್ಕೆ ಅಣಿಗೊಂಡ ಹುಡುಗ ಕುರಿಗಳನ್ನು ಮಾರಿ ಆ ಹಣವನ್ನು ಭದ್ರವಾಗಿಟ್ಟುಕೊಂಡು ಹೊರಡುತ್ತಾನಾದರೂ ಒಬ್ಬ ನಯವಂಚಕನಿಂದ ಅದನ್ನು ಕಳೆದುಕೊಳ್ಳುತ್ತಾನೆ. ಮುಂದೆ ದಾರಿ ಕಾಣದೆ ಒಬ್ಬ ಬೇಕರಿಯವನ ಬಳಿ ಕೆಲಸ ಮಾಡಿ ಆ ದಿನದ ಹೊಟ್ಟೆಯ ಹಸಿವನ್ನು ನೀಗಿಕೊಂಡು ಮುಂದುವರಿಯುವಾಗ ಅವನಿಗೆ ಕ್ರಿಸ್ಟಲ್ ವ್ಯಾಪಾರಿಯ ಪರಿಚಯವಾಗುತ್ತದೆ. ಅಲ್ಲಿ ವ್ಯಾಪಾರಿಯ ಏಕತಾನತೆಯ ಬದುಕಿಗೆ ಹೊಸ ಆಲೋಚನೆಗಳನ್ನು ಕೊಟ್ಟು ಶ್ರೀಮಂತನನ್ನಾಗಿಸುತ್ತಾನೆ. ಜೊತೆಗೆ ತಾನೂ ಹಣ ಗಳಿಸುತ್ತಾನೆ. ಆ ಯೋಚನೆಯ ಮುಖ್ಯ ಗುರಿ ಆ ದಾರಿಯಲ್ಲಿ ಮೆಕ್ಕಾದತ್ತ ಪ್ರಯಾಣ ಮಾಡುವವರಿಗೆ ಕ್ರಿಸ್ಟಲ್ನ ಲೋಟಗಳಲ್ಲಿ ಚಹಾದ ಸರಬರಾಜು. ಇದನ್ನು ವ್ಯಾಪಾರಿ ನಿರಾಕರಿಸಿದರೂ ಹುಡುಗ, ‘ಗಂಡಸರ ಮನಸನ್ನು ಆಕರ್ಷಿಸುವಲ್ಲಿ ಸೌಂದರ್ಯವನ್ನು ಬಿಟ್ಟರೆ ಮತ್ತೊಂದಿಲ್ಲ’ ಅನ್ನುವ ವಾಸ್ತವದ ಸತ್ಯವನ್ನು ತಿಳಿಸಿದ ಬಳಿಕ ಆತ ಒಪ್ಪಿಕೊಳ್ಳುತ್ತಾನೆ. ಆ ಹಣ ತನಗೆ ಮತ್ತೆ ಕುರಿ ಮಂದೆಯನ್ನು ಹೊಂದುವುದಕ್ಕಾಗಿ ಎಂದು ಯೋಚಿಸಿದರೂ, ಅವನ ಆಂತರ್ಯದಲ್ಲಿರುವುದು ಗುಪ್ತನಿಧಿಯ ಬೇಟೆಗೆ ತೊಡಗಿಕೊಳ್ಳುವುದು ಮಾತ್ರ. ಆ ಕನಸೇ ಅವನನ್ನು ಕಳೆದುಕೊಂಡಿರುವ ಹಣವನ್ನು ಮತ್ತೊಮ್ಮೆ ಗಳಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆಗಲೇ ಗಾಳಿಯ ಈರ್ಷ್ಯೆಯನ್ನು ಕಂಡು ಹುಡುಗ ತಾನೂ ಅಷ್ಟೇ ಸ್ವತಂತ್ರನಾಗುವುದಕ್ಕೆ ಬಯಸುತ್ತಾನೆ.

ತನ್ನ ಪ್ರಯಾಣದ ಆದಿಯಲ್ಲಿ ಆತ ವೃದ್ಧನೊಬ್ಬನನ್ನು ಭೇಟಿಯಾಗಿರುತ್ತಾನೆ. ಆತ ‘ಪ್ರಿನ್ಸಿಪಲ್ ಅಫ್ ಫೆವರೆಬಿಲಿಟಿ’ ಅಂದರೆ ಆರಂಭಿಕ ಅದೃಷ್ಟದ ಬಗ್ಗೆ ತಿಳಿಸುತ್ತಾನೆ. ಅದೃಷ್ಟ ನಮ್ಮ ಕಡೆಗಿರುವಾಗ ಅದರ ಲಾಭವನ್ನು ಪಡೆದುಕೊಳ್ಳಬೇಕು. ನಮಗೆ ಎಷ್ಟು ಸಾಧ್ಯವೋ ಅಷ್ಟು ಅದು ನೆರವೇರಲು ಅನುವುಮಾಡಿಕೊಡಬೇಕು. ಇದು ಆರಂಭಿಕ ಅದೃಷ್ಟದ ನಿಯಮ. ಈ ನಿಯಮವನ್ನು ತಿಳಿದುಕೊಂಡ ಹುಡುಗ ತನ್ನ ಕನಸುಗಳನ್ನು ನನಸಾಗಿಸುವಲ್ಲಿ ಮುಂದುವರಿಯುತ್ತಾನೆ. ಆದರೆ ಕ್ರಿಸ್ಟಲ್ ವ್ಯಾಪಾರಿ ಹೇಳಿದ ಮಾತು ಅವನನ್ನು ಮತ್ತೊಮ್ಮೆ ಆಲೋಚಿಸುವಂತೆ ಮಾಡುತ್ತದೆ. ಒಮ್ಮೆ ಕನಸು ನನಸಾಗಿ ಬಿಟ್ಟರೆ ಮುಂದೆ ಜೀವಿಸಲು ಬೇರೆ ದಾರಿಯಿರುವುದಿಲ್ಲವೆನ್ನುವ ಮಾತು ಅದು.

ಕೊನೆಗೂ ಮರುಭೂಮಿಯ ದಾರಿ ಹಿಡಿದ ಹುಡುಗ ಕ್ಯಾರವಾನ್ನಲ್ಲಿ ಸಾಗುತ್ತಿರುವಾಗ ಒಬ್ಬ ಇಂಗ್ಲಿಷ್ನವನ ಪರಿಚಯವಾಗುತ್ತದೆ. ಅವನಿಂದ ‘ರಸವಿದ್ಯೆ’ಯ ಬಗ್ಗೆ ತಿಳಿದುಕೊಳ್ಳುತ್ತಾನೆ. ಅವನಿಂದ ಪ್ರೇರಿತನಾಗಿ ವಿಶ್ವ ಭಾಷೆಯನ್ನೇ ಅರಿತಿರುವ ಆತ ಎಲ್ಲವನ್ನೂ ಆತ್ಮವಿಮರ್ಶೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತಾ, ‘ಈಂಟ್ಯೂಜನ್ ಅಂದರೆ ಅಂತರದೃಷ್ಟಿ ಎಂಬುವುದು ವಾಸ್ತವದಲ್ಲಿ ಸಾರ್ವತ್ರಿಕ ಜೀವನಧಾರೆಯಲ್ಲಿ ಆತ್ಮದ ಹಠಾತ್ ಮುಳುಗುವಿಕೆ’ ಎಂದು ತಿಳಿಯುತ್ತದೆ. ತಮ್ಮ ಅವಶ್ಯಕತೆಗಳನ್ನು, ಅಗತ್ಯತೆಗಳನ್ನು ಪಡೆಯುವ ಸಾಮರ್ಥ್ಯವಿದ್ದವರು ಅಜ್ಞಾತದ ಬಗ್ಗೆ ಹೆದರಬೇಕಾಗಿಲ್ಲ ಅನ್ನುವ ಸತ್ಯದ ಅರಿವಾದ ಹುಡುಗ ಮರುಭೂಮಿಯ ಭೀಕರತೆಯ ಬಗ್ಗೆ ಹೆದರದೆ ತನ್ನ ಗಮ್ಯ ತಲುಪುವುದರ ಕಡೆಗೆ ಗಮನ ಕೊಡುತ್ತಾನೆ. ಬದುಕಿನಲ್ಲಿ ಉನ್ನತಿ ಅಥವಾ ಸುಧಾರಣೆಯೆಂದರೆ ರಸವಿದ್ಯೆಯ ಭಾಷೆಯಲ್ಲಿ ಅದು ಪ್ರಪಂಚದ ಆತ್ಮ. ನಾವು ಏನನ್ನಾದರೂ ಹೃದಯಾಳದಿಂದ ಬಯಸಿದಾಗ ಪ್ರಪಂಚದ ಆತ್ಮಕ್ಕೆ ಬಹಳ ಹತ್ತಿರವಾಗಿರುತ್ತೇವೆ. ಇದು ಸಕಾರಾತ್ಮಕ ಶಕ್ತಿ. ಎಲ್ಲಾ ವಿಷಯಗಳ ಹಿಂದೆ ಇರುವುದು ಇದೇ ಸೂತ್ರ.

ಹೀಗೆ ಮರುಭೂಮಿಯ ಪ್ರಯಾಣದಲ್ಲಿ ರಸವಿದ್ಯಾ ಪ್ರವೀಣನನ್ನು ಹುಡುಕುತ್ತಿರುವಾಗ ಫಾತೀಮಾ ಅನ್ನುವ ಹುಡುಗಿಯ ಮೋಹಕ್ಕೆ ಒಳಗಾಗುತ್ತಾನೆ ಹುಡುಗ. ತನ್ನ ನಿಧಿ ಇರುವುದು ಈಜಿಪ್ಟ್ನ ಪಿರಮಿಡ್ನಲ್ಲಿ ಅಲ್ಲ, ಅದು ಈ ಫಾತೀಮಾ ಅನ್ನುವ ಹುಡುಗಿಯಲ್ಲಿ ಎಂದು ತಿಳಿಯುವ ಅವನಿಗೆ, ನಾವು ಅತೀತದಲ್ಲಾಗಲಿ ಭವಿಷ್ಯದಲ್ಲಾಗಲಿ ಜೀವಿಸುತ್ತಿಲ್ಲ. ವರ್ತಮಾನದ ಬಗ್ಗೆ ಗಮನವನ್ನು ಕೇಂದ್ರಿಕರಿಸಿದಾಗ ನಾವು ಸಂತಸದಿಂದಿರಬಹುದು ಅನ್ನುವುದು ಮನದಟ್ಟಾಗುತ್ತದೆ. ಹುಡುಗಿಯ ಗುಂಗಿನಲ್ಲಿ ತನ್ನ ನಿಧಿ ಹುಡುಕಾಟದ ಕಾರ್ಯವನ್ನೇ ಮರೆತು ಅವಳಲ್ಲಿ ಅನುರಕ್ತನಾಗುತ್ತಾನೆ.

‘ಮನುಷ್ಯನ ಬಾಯಿಯೊಳಗೆ ಏನು ಪ್ರವೇಶಿಸುತ್ತದೋ ಅದು ಕೆಟ್ಟದ್ದಲ್ಲ, ಆದರೆ ಅದರಿಂದ ಏನು ಹೊರಗೆ ಬೀಳುವುದೋ ಅದು ಕೆಟ್ಟದ್ದು’ ಎನ್ನುವ ರಸಜ್ಞನ ಮಾತನ್ನು ಮೆಚ್ಚಿಕೊಂಡ ಹುಡುಗ ಮತ್ತೆ ಪ್ರಯಾಣ ಮುಂದುವರಿಸಿ ಹೇಗೂ ಓಯಸಿಸ್ ತಲುಪುತ್ತಾನೆ. ಅಲ್ಲಿ ಅಪಾಯಕ್ಕೆ ಸಿಲುಕಿ ತನ್ನಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡು ನಿರಾಶನಾಗುತ್ತಾನೆ. ಆದರೆ ರಸಜ್ಞನ ಚಾಕಚಕ್ಯತೆಯಲ್ಲಿ ಚಿನ್ನವನ್ನು ಪಡೆದುಕೊಂಡು ಪಿರಮಿಡ್ ತಲುಪಿ ತನ್ನ ನಿಧಿಗಾಗಿ ಶೋಧನೆ ನಡೆಸುತ್ತಾನೆ. ನಿಧಿಯ ಸ್ಥಳ ನಿರ್ದಿಷ್ಟವಾದಾಗ ಅಗೆತ ಆರಂಭಿಸುತ್ತಾನೆ. ಅಲ್ಲಿಯೂ ತನ್ನ ಬಳಿಯಿದ್ದ ಚಿನ್ನವನ್ನು ಕಳೆದುಕೊಂಡು ಅಸ್ವಸ್ಥನಾಗಿ ಬಿಡುತ್ತಾನೆ. ಅವನಿಂದ ವಿಷಯ ತಿಳಿದ ದರೋಡೆಕಾರರು ಕೂಡ ಇಂತಹುದೆ ನಿಧಿ ಪಾಳು ಬಿದ್ದ ಚರ್ಚ್ನ ಬಳಿಯಿದೆಯೆಂದು ಕೇಳಿದರೂ ಅವನ ಹಾಗೆ ನಿಧಿಯನ್ನು ಹುಡುಕಿಕೊಂಡು ಹೋಗಿ ಮೂರ್ಖರಾಗದೆ ಉಳಿದ್ದಿದ್ದೇವೆ ಎಂದು ಹೇಳುವಾಗ ನಿಧಿ ಇರುವುದು ಈಜಿಪ್ಟಿನ ಪಿರಮಿಡ್ನಲ್ಲಿ ಅಲ್ಲ, ತಾನು ಕುರಿಗಳ ಜೊತೆಗೆ ಹಾಯಾಗಿದ್ದ ಪಾಳು ಚರ್ಚ್ನಲ್ಲಿಯೇ ಇದೆ ಎಂದು ಅರಿತ ಅವನು ಅಲ್ಲಿಗೆ ಬಂದು ಅದನ್ನು ಪಡೆಯುತ್ತಾನೆ.

ಸುದೀರ್ಘ ಪಯಣದಲ್ಲಿ ಹುಡುಗ ಬದುಕಿನ ಕ್ಲಿಷ್ಟತೆ, ವಿಶ್ವ ಭಾಷೆ, ಅಂತರ ದೃಷ್ಟಿಯಿಂದ ಪ್ರಪಂಚದ ಆತ್ಮದ ಜೊತೆಗೆ ಸಂವಾದ ಮಾಡುತ್ತಾನೆ. ಈ ರೀತಿ ಜೀವನವನ್ನು ಶಾಶ್ವತವಾಗಿ ಬದಲಾಯಿಸುವ ನಿಯಮಗಳನ್ನು, ಸರ್ವಕಾಲಿಕವಾಗಿ ಒಪ್ಪಿಕೊಳ್ಳುವ ಸತ್ಯ ಸಂಗತಿಗಳನ್ನು ಚೆನ್ನಾಗಿ ವಿವರಿಸುವ ಈ ಕೃತಿಯನ್ನು ಓದಲೇಬೇಕು.

ಈ ಕಾದಂಬರಿಯನ್ನು ಅನುವಾದಿಸಿರುವವರು ಕಿರಣ್ ಕುಮಾರ್ ಟಿ. ಪಿ. ಬೆಂಗಳೂರಿನ ಅನುಭವ ಪ್ರಕಾಶನದವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಇದರ ಬೆಲೆ ರೂ. ೬೦ ಮಾತ್ರ.

Read more!